ಬಹಿರಂಗ
ಕೋವಿದನ ನಡುವೆ – ಸುಳ್ಳು ಸುದ್ದಿಯ ವ್ಯಸನವೂ ಮಾಧ್ಯಮವೆಂಬೋ ವ್ಯಾಧಿಯೂ
- ನಾ ದಿವಾಕರ
ಸುದ್ದಿ ಎನ್ನುವುದೇ ಸತ್ಯ-ಮಿಥ್ಯೆಯ ಸಂಗಮ. ಏಕೆಂದರೆ ಅದು ಮನುಷ್ಯನನ್ನು ತಲುಪುವುದು ಬೇರೊಂದು ಮೂಲದಿಂದ. ಎಲ್ಲೋ ನಡೆದ ಒಂದು ವಿದ್ಯಮಾನ ಯಾವುದೋ ಒಂದು ಮೂಲದಿಂದ ನಮ್ಮ ಗಮನಕ್ಕೆ ಬಂದಾಗ ನಾವು ಅದನ್ನು ಸುದ್ದಿ, ವಾರ್ತೆ, ಸಮಾಚಾರ ಮುಂತಾದ ಹೆಸರುಗಳಿಂದ ಗುರುತಿಸುತ್ತೇವೆ. ಸುದ್ದಿಯ ಮೂಲ ಯಾವುದೆಂದು ತಿಳಿಯುವ ಗೋಜಿಗೆ ನಾವು ಹೋಗುವುದಿಲ್ಲ. ನಮಗೆ ತಲುಪಿದ ವಿಷಯ ಸತ್ಯವೋ ಮಿಥ್ಯೆಯೋ ಎಂದು ತಿಳಿಯಲೂ ಆಸಕ್ತಿ ತೋರುವುದಿಲ್ಲ. ನಮ್ಮ ಮನಸ್ಥಿತಿಗೆ ತಕ್ಕಂತೆ, ನಮ್ಮ ಆಲೋಚನೆಗೆ ಪೂರಕವಾಗಿ ನಮ್ಮ ಕಿವಿಗೆ ಬಿದ್ದ ಸಮಾಚಾರವನ್ನು ನಂಬುವುದು ಬಿಡುವುದು ಮಾಡುತ್ತೇವೆ.
ಸಂಪರ್ಕ ಮಾಧ್ಯಮಗಳೇ ಇಲ್ಲದ ಕಾಲದಲ್ಲಿ ಮಾನವ ಸಮಾಜ ಹೇಗೆ ನಿರ್ವಹಿಸಿರಬಹುದು ಎಂದು ಒಮ್ಮೆ ಯೋಚಿಸೋಣ. ಆಗ ಸುದ್ದಿ ಸಮಾಚಾರ ವಾರ್ತೆ ಇದಾವುದೂ ಇರಲಿಕ್ಕಿಲ್ಲ ಅಲ್ಲವೇ. ತಾವು ಕಣ್ಣಾರೆ ನೋಡಿದ್ದನ್ನು ಜನರು ತಮ್ಮನ್ನು ನೇರವಾಗಿ ಸಂಪರ್ಕಿಸುವವರೊಡನೆ ಹಂಚಿಕೊಳ್ಳುತ್ತಿದ್ದರು. ಅಲ್ಲಿ ವಿಷಯದ ವಿನಿಮಯ ಮಾತ್ರವೇ ಇತ್ತು, ವಿತರಣೆ, ಪ್ರಸರಣ ಇರುತ್ತಿರಲಿಲ್ಲ. ಮಾನವ ಸಮಾಜ ಹೆಚ್ಚು ವಿಸ್ತರಣೆಯಾಗದಿದ್ದ ಕಾಲದಲ್ಲಿ ಈ ವಿನಿಮಯವೂ ಸಹ ಸೀಮಿತ ಚೌಕಟ್ಟಿನಲ್ಲಿ ಮಾತ್ರವೇ ಇರುತ್ತಿತ್ತು. ಇದನ್ನು ಸಂದೇಶ ಎನ್ನಲಾಗುತ್ತಿತ್ತು ಸುದ್ದಿ ಎನ್ನುತ್ತಿರಲಿಲ್ಲ. ಏಕೆಂದರೆ ಇಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಮಾತ್ರವೇ ವಿಷಯ ಹರಿದಾಡುತ್ತಿತ್ತು. ಈ ಸಂದೇಶಕ್ಕೆ ಒಂದು ವ್ಯಾಪ್ತಿ ದೊರೆತಿದ್ದು ಅಕ್ಷರ ಮತ್ತು ಬರಹ ಒಂದಾದ ಸಂದರ್ಭದಲ್ಲಿ.
ಪಾರಿವಾಳಗಳ ಮೂಲಕ ತಮ್ಮ ಸಂದೇಶವನ್ನು ದೂರದಲ್ಲಿರುವ ತಮ್ಮ ನಿಕಟವರ್ತಿಗಳಿಗೆ ರವಾನಿಸುವ ಪರಂಪರೆಯ ಸಂದರ್ಭದಲ್ಲೂ ವಿನಿಮಯವಾಗುತ್ತಿದ್ದುದು ಪರಸ್ಪರ ಸಂಬಂಧಿತ ವಿಚಾರಗಳು ಮಾತ್ರ. ಇದನ್ನೂ ಸುದ್ದಿ ಎನ್ನಲಾಗುವುದಿಲ್ಲ. ಈ ಸುದ್ದಿ ಅಥವಾ ಸಮಾಚಾರ ಎಂಬ ವಿದ್ಯಮಾನಕ್ಕೆ ಪುಷ್ಟಿ ದೊರೆತದ್ದು ಬಹುಶಃ ರಾಜಪರಂಪರೆಯಲ್ಲಿ ಇದ್ದಿರಬಹುದು. ಅನ್ಯ ರಾಜ್ಯಗಳಲ್ಲಿ ಅಥವಾ ತಮ್ಮದೇ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ತಿಳಿದುಕೊಳ್ಳಲು ಸಾಮ್ರಾಟರು ತಮ್ಮ ಬೇಹುಗಾರರನ್ನು ವಿವಿಧ ಪ್ರಾಂತ್ಯಗಳಿಗೆ ಕಳುಹಿಸುವ ಪರಂಪರೆ ಸುದ್ದಿ-ಸಮಾಚಾರದ ಉಗಮಕ್ಕೆ ಕಾರಣವಾಯಿತೇನೋ ! ಇಲ್ಲಿ ಸುದ್ದಿಯ ಸತ್ಯಾಸತ್ಯತೆಯ ನಿಷ್ಕರ್ಷೆಗೆ ಸುದ್ದಿ ತರುವ ಬೇಹುಗಾರನ ನಿಷ್ಠೆ ಮತ್ತು ಬದ್ಧತೆಯೇ ಮೂಲ. ಅವನ ಪ್ರಾಮಾಣಿಕತೆಯೇ ಆಧಾರ.
ತನ್ನ ದೊರೆಗೆ ನಿಷ್ಠಾವಂತನಾದ ಬೇಹುಗಾರರಲ್ಲಿ ಎರಡು ವಿಧ. ಮೊದಲನೆಯದು ತನ್ನ ರಾಜನಿಷ್ಠೆಯನ್ನು ಪ್ರದರ್ಶಿಸಲು, ರಾಜನಿಗೆ ಇಷ್ಟವಾಗುವಂತೆ ಸುದ್ದಿಯನ್ನು ಅರುಹುವುದು. ತನ್ನ ದೊರೆಗೆ ಇಷ್ಟವಾಗದ ವಿಚಾರಗಳನ್ನು ಮರೆಮಾಚುವುದು, ಪ್ರಿಯವಾದುದನ್ನು ರಂಜನೀಯವಾಗಿ ಅರುಹುವುದು, ದೊರೆಯ ಆಕ್ರೋಶಕ್ಕೆ ಕಾರಣವಾಗುವ ವಿಚಾರವನ್ನು ಜಾಣ್ಮೆಯಿಂದ ಹೇಳುವುದು, ಇಲ್ಲವೇ ಹೇಳದೆಯೇ ಇರುವುದು, ಹೀಗೆ. ಈ ರೀತಿಯ ಸುದ್ದಿ ತರುವವರು ಸಾಮಾನ್ಯವಾಗಿ ರಾಜನಿಗೆ ಶತ್ರುಗಳನ್ನು ಸೃಷ್ಟಿಸುತ್ತಿದ್ದುದೇ ಹೆಚ್ಚು. ವ್ಯಕ್ತಿಗತವಾಗಿ ತಮಗೆ ಇಷ್ಟವಾಗದವರ ವಿರುದ್ಧ ರಾಜನ ಬಳಿ ಇಲ್ಲದ ವಿಷಯಗಳನ್ನು ಹೇಳುವ ಮೂಲಕ ಆಗಾಗ್ಗೆ ಸಣ್ಣಪುಟ್ಟ ಶತ್ರುಪಾಳಯಗಳನ್ನು ಸೃಷ್ಟಿಸುವ ಪರಂಪರೆಗೆ ದೀರ್ಘ ಇತಿಹಾಸವೇ ಇದೆ ಅಲ್ಲವೇ ?
ಎರಡನೆಯ ವಿಧ ಎಂದರೆ ತಮ್ಮ ಅಸ್ತಿತ್ವ, ಸ್ಥಾನಮಾನ ಉಳಿಸಿಕೊಳ್ಳಲು, ತಮ್ಮ ಸ್ವಂತ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಸುದ್ದಿಯನ್ನು ತಿರುಚಿ ಹೇಳುವುದು ಇಲ್ಲವೇ ಇಲ್ಲದ ಸುದ್ದಿಯನ್ನು ಸೃಷ್ಟಿಸಿ ಹೇಳುವುದು.
ಇಂಥವರಿಗೆ ರಾಜನಿಷ್ಠೆ ಇರುತ್ತಿತ್ತು ಆದರೆ ರಾಜನಿಗೆ ಇವರ ಮೇಲಿರುತ್ತಿದ್ದ ವಿಶ್ವಾಸವೇ ಇವರ ಬಂಡವಾಳವಾಗುತ್ತಿತ್ತು. ದೊರೆ ತಾನು ಹೇಳಿದ್ದನ್ನು ನಂಬುತ್ತಾನೆ ಎನ್ನುವ ವಿಶ್ವಾಸವೇ ಇವರ ಸುದ್ದಿಮನೆಯ ಕುಲುಮೆಗೆ ಶಾಖ ನೀಡುತ್ತಿತ್ತು. ಇವರ ಭಟ್ಟಂಗಿತನ, ವಂದಿಮಾಗಧ ನಡೆ ರಾಜನ ದೃಷ್ಟಿಯಲ್ಲಿ ಪ್ರಾಮಾಣಿಕತೆ ಎನಿಸಿದರೂ, ಅದು ಅಪಾಯಕಾರಿಯಾಗಿ ಪರಿಣಮಿಸುತ್ತಿತ್ತು. ಆದರೆ ಇವರು ಮುಟ್ಟಿಸುತ್ತಿದ್ದ ಸುದ್ದಿ ರಾಜನನ್ನೂ ಸಂಪ್ರೀತಗೊಳಿಸುತ್ತಿತ್ತು. ಹಾಗಾಗಿ ಇವರ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿರಲಿಲ್ಲ.
ದೊರೆಗೆ ಈ ಎರಡೂ ರೀತಿಯ ಸುದ್ದಿ ವಾಹಕರು ಪ್ರಿಯವಾಗಿಯೇ ಕಾಣುತ್ತಿದ್ದರು. ಏಕೆಂದರೆ ತನ್ನ ಸಾಮ್ರಾಜ್ಯದ ರಕ್ಷಣೆಗೆ ಇದು ಅತ್ಯವಶ್ಯವಾಗುತ್ತಿತ್ತು.
ರಾಜಪ್ರಭುತ್ವದ ಕಾಲದಲ್ಲೇ ಬಹುಶಃ ಸುಳ್ಳುಸುದ್ದಿಯ ವ್ಯಸನ ಉಗಮಿಸಿರಬೇಕು. ಹೊರ ರಾಜ್ಯದಿಂದ ಅಥವಾ ಶತ್ರು ಪಾಳಯದಿಂದ ಸತ್ಯವೋ ಸುಳ್ಳೋ ಯಾವುದೋ ಒಂದು ಸುದ್ದಿ ತರದಿದ್ದರೆ ಸುದ್ದಿವಾಹಕರು ದೊರೆಯ ಕೆಂಗಣ್ಣಿಗೆ ಗುರಿಯಾಗಬೇಕಿತ್ತು. ಬಹುಶಃ ಈ ಕಾಲಘಟ್ಟದಿಂದಲೇ ಸುದ್ದಿಮನೆಯ ಒಂದು ನಿರ್ದಿಷ್ಟ ಪರಿಕಲ್ಪನೆ ಮೂಡಿರಬೇಕು. ಈ ಪರಿಕಲ್ಪನೆಯ ಚೌಕಟ್ಟಿನಲ್ಲೇ ಸುಳ್ಳು ಸುದ್ದಿಯ ವ್ಯಸನವೂ ನೆಲೆ ಕಂಡಿರಬೇಕು.
ದೊರೆಗೆ ಏನಾದರೂ ಸುದ್ದಿ ಮುಟ್ಟಿಸಬೇಕು ಎನ್ನುವುದೇ ಸುದ್ದಿವಾಹಕರ ಆದ್ಯತೆಯಾಗಿರಲಿಕ್ಕೂ ಸಾಕು.
(ಇವಿಷ್ಟೂ ಇತಿಹಾಸದ ಆಕರಗಳನ್ನು ಆಧರಿಸಿ ಮಂಡಿಸಿದ ವಿಚಾರ ಅಲ್ಲ. ಹೀಗಿದ್ದಿರಬಹುದು ಎನ್ನುವ ಕಲ್ಪನೆ. ಇರಲೂಬಹುದಲ್ಲವೇ, ಇತಿಹಾಸದ ಅಧ್ಯಯನದಲ್ಲಿ ಗಮನಿಸಿರುವುದೇ ಆಗಿದೆ)
ಈಗ 21ನೆಯ ಶತಮಾನದ 3ನೆಯ ದಶಮಾನಕ್ಕೆ ಬರೋಣ. ಇಂದು ನಮಗೆ ಸುದ್ದಿ ಎನ್ನುವುದು ಮನೆಯ ಮಾತಿನಂತಾಗಿಬಿಟ್ಟಿದೆ. ಯಾವುದು ಸುದ್ದಿ, ಯಾವುದು ಸಂದೇಶ ಎಂಬ ವ್ಯತ್ಯಾಸವನ್ನೇ ಗ್ರಹಿಸಲಾರದಷ್ಟು ಮಟ್ಟಿಗೆ ಸಂಪರ್ಕ ಮತ್ತು ಸಂವಹನ ಮಾರ್ಗಗಳು ನಮ್ಮನ್ನು ಆವರಿಸಿಕೊಂಡುಬಿಟ್ಟಿವೆ. “ಆಕಾಶವಾಣಿ ವಾರ್ತೆಗಳು ಓದುತ್ತಿರುವವರು ಕೆ.ಎಸ್. ಪುರುಷೋತ್ತಮ್” ಅಥವಾ “ ಆಕಾಶವಾಣಿ ಪ್ರದೇಶ ಸಮಾಚಾರ ಓದುತ್ತಿರುವವರು ನಾಗಮಣಿ ಎಸ್ ರಾವ್ ” ಈ ದನಿಗಳನ್ನೊಮ್ಮೆ ನೆನಪಿಸಿಕೊಳ್ಳೋಣ. ಸುದ್ದಿ ಮತ್ತು ಸಂದೇಶದ ನಡುವಿನ ವ್ಯತ್ಯಾಸವನ್ನು ಅವರ ದನಿಗಳಲ್ಲಿ ಕಾಣಬಹುದಿತ್ತು. ಇಂದು ನಾವು ಆಕಾಶದಲ್ಲೇ ವಿಹರಿಸುತ್ತಿದ್ದೇವೆ ಆದರೆ ವಾಣಿ ಕಡಲ ಪಾಲಾಗಿದೆ.
ಹಾಗಾಗಿ ಸುದ್ದಿಮನೆಗಳೇ ಅನಿವಾರ್ಯ ಎನಿಸಿಬಿಟ್ಟಿದೆ. ಸುದ್ದಿಯ ವ್ಯಾಪ್ತಿ ಹೆಚ್ಚಾಗಿದೆ. ಆದರೆ ಮೂಲ ಸ್ವರೂಪ ಬದಲಾಗಿಲ್ಲ. ಆದರೆ ಸುದ್ದಿ ಮತ್ತು ಸಮಾಚಾರದ ಬಗ್ಗೆ ನಮ್ಮ ಗ್ರಹಿಕೆ ಕೊಂಚ ಬದಲಾದಂತಿದೆ. ನಾಲ್ಕೈದು ದಶಕಗಳ ಹಿಂದೆ ಪರಿಚಯಸ್ಥರು ಎದುರಾಗಿ ಏನ್ಸಮಾಚಾರ ಅಂದ್ರೆ ಏನಿಲ್ಲ ಎನ್ನುತ್ತಿದ್ದೆವು ಇಲ್ಲವಾದರೆ ನಮ್ಮನ್ನೇ ಕುರಿತು ಒಂದೆರಡು ಮಾತುಗಳನ್ನಾಡಿ ನಡೆಯುತ್ತಿದ್ದೆವು. ಈಗ ಏನ್ಸಮಾಚಾರ ಅಂದ್ರೆ ಸಾಕು ನೆಹರೂ ಅವರಿಂದ ಮೋದಿಯವರೆಗೆ, ಮೊಘಲರಿಂದ ಒಡೆಯರ್ ವರೆಗೆ ಮಾತಿನ ಲಹರಿ ಬೆಳೆಯುತ್ತದೆ. ಇತಿಹಾಸ, ವಿಜ್ಞಾನ, ಸುಜ್ಞಾನ, ಅಜ್ಞಾನ ಎಲ್ಲವನ್ನೂ ಮಾತನಾಡಿ ಕೊನೆಗೆ ಕೈ ಕುಲುಕಲೂ ಆಗದಷ್ಟು ಮನಸು ಭಾರ ಮಾಡಿಕೊಂಡು ಎರಡು ಧೃವಗಳತ್ತ ಮುಖ ಮಾಡಿ ಹೊರಟುಬಿಡುತ್ತೇವೆ. ಇದು ಸಾರ್ವತ್ರಿಕ ಸತ್ಯ ಅಲ್ಲ, ಆದರೆ ನಿರಾಕರಿಸುವ ವಿದ್ಯಮಾನವೂ ಅಲ್ಲ.
ಏಕೆ ಹೀಗೆ ? ಏಕೆಂದರೆ ಇಂದು ನಮಗೆ ಸುದ್ದಿ ಎಂದರೆ ನಮಗೆ ನೀಡಲಾಗುವ ಅಥವಾ ಒದಗಿಸಲಾಗುವ ಮಾಹಿತಿಯೇ ಹೊರತು, ನಾವು ಪ್ರತ್ಯಕ್ಷವಾಗಿ ನೋಡಿ ಪ್ರಮಾಣಿಸಿದ ಮಾಹಿತಿ ಅಲ್ಲ. ಹಾಗೊಮ್ಮೆ ನಾವು ನೋಡಿದ್ದುದೇ ಆದರೂ, ನಮ್ಮ ಕಣ್ಣೋಟವೇ ಸರಿಯಿಲ್ಲವೇನೋ ಎನ್ನುವ ಮಟ್ಟಿಗೆ ಸುದ್ದಿಮನೆಗಳು ಒಂದು ಘಟನೆಯನ್ನು ರುಬ್ಬಿ ರುಬ್ಬಿ ಚಟ್ನಿ ಮಸಾಲೆ ಮಾಡಿಬಿಟ್ಟಿರುತ್ತವೆ. ಸುದ್ದಿ ಮತ್ತು ಸಮಾಚಾರಗಳನ್ನು ಜನತೆಗೆ ತಲುಪಿಸುವ ಮುದ್ರಣ ಮಾಧ್ಯಮ ಯುಗದ ಕನಿಷ್ಟ ಪ್ರಜ್ಞಾವಂತಿಕೆಯನ್ನೂ ವಿದ್ಯುನ್ಮಾನ ಮಾಧ್ಯಮದ ಯುಗದಲ್ಲಿ ಕಾಣಲಾಗುತ್ತಿಲ್ಲ. ಏಕೆಂದರೆ ಬೆರಳ ತುದಿಯಲ್ಲಿ ಲಭಿಸುವ ಸುದ್ದಿಯನ್ನು ಕ್ಷಣಮಾತ್ರದಲ್ಲಿ ತಮ್ಮ ಪರದೆಯ ಮೇಲೆ ಬಿಂಬಿಸದೆ ಹೋದರೆ ಸುದ್ದಿಮನೆಯ ಅಸ್ತಿತ್ವಕ್ಕೆ ಕುಂದುಬರುತ್ತದೆ. ಮಾರುಕಟ್ಟೆಯಲ್ಲಿ ಮೌಲ್ಯ ಕುಸಿಯುತ್ತದೆ.
ಮತ್ತೊಮ್ಮೆ ಆಕಾಶವಾಣಿಯತ್ತ ನೋಡೋಣ. ಆಗಿನ ವಾರ್ತೆಗಳನ್ನು ಓದುತ್ತಿರುವವರ ಧ್ವನಿಯನ್ನು ಕೇಳಿಯೇ ದೇಶದಲ್ಲಿ ಏನೋ ಆಘಾತಕಾರಿ ಘಟನೆ ಸಂಭವಿಸಿದೆ, ಯಾರೋ ಮಹನೀಯರು ಮೃತಪಟ್ಟಿದ್ದಾರೆ ಎಂದು ಹೇಳಬಹುದಿತ್ತು. ಏಕೆಂದರೆ ಇಂತಹ ವಿಷಾದದ ಸುದ್ದಿಯನ್ನು ಓದುವಾಗ ಅವರ ಮೆಲುದನಿಯಲ್ಲಿ ವಿಷಾದದ ಎಳೆ ಕಂಡುಬರುತ್ತಿತ್ತು. ಇದನ್ನು ಈಗಿನ ಸುದ್ದಿಮನೆಗಳಲ್ಲಿ ಊಹಿಸಲು ಸಾಧ್ಯವೇ ? “ ಕೋರೋನಾದಿಂದ ಸತ್ತವರ ಸಂಖ್ಯೆ ಒಂದು ಲಕ್ಷ ದಾಟಿದೆ ” ಎಂದು ಏರುದನಿಯಲ್ಲಿ ಹೇಳುವ ನಿರೂಪಕಿಯ ಮುಖಭಾವವನ್ನು ನೋಡಿದರೆ, ಏನೋ ಸಂಭ್ರಮ ಮನೆಮಾಡಿದಂತೆ ಕಾಣುತ್ತದೆ.
ಇಲ್ಲಿ ಸಂಯಮ ಮತ್ತು ಸಂವೇದನೆಯ ಕೊರತೆ ಎದ್ದು ಕಾಣುತ್ತದೆ. ಇದರ ನೇರ ಪರಿಣಾಮವೇ ಈ ಸುದ್ದಿಮನೆಗಳನ್ನು ಆವರಿಸಿರುವ ಸುಳ್ಳು ಸುದ್ದಿಯ ವ್ಯಸನ. ಇಲ್ಲಿ ಪುನಃ ರಾಜಪ್ರಭುತ್ವಕ್ಕೆ ಮರಳೋಣ. ಇಂದಿನ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಗೂ, ಅಂದಿನ ರಾಜಪ್ರಭುತ್ವಕ್ಕೂ ವ್ಯತ್ಯಾಸವೇನಾದರೂ ಇದ್ದರೆ ಅದು ಆಯ್ಕೆ ಪ್ರಕ್ರಿಯೆಯಲ್ಲಿ ಮಾತ್ರ ಎನ್ನುವುದನ್ನು ತಾತ್ವಿಕವಾಗಿಯಾದರೂ ಒಪ್ಪಲೇಬೇಕು. ಏಕೆಂದರೆ ಎಷ್ಟೇ ಪ್ರಜಾಸತ್ತಾತ್ಮಕ ಧೋರಣೆಯನ್ನು ಅನುಸರಿಸಿದರೂ ಆಡಳಿತಾರೂಢ ಸರ್ಕಾರಗಳು ಗತಕಾಲದ ಸಾಮ್ರಾಟರನ್ನೇ ಹೋಲುವಂತೆ ವರ್ತಿಸುತ್ತಿರುವುದನ್ನು ಭಾರತದಲ್ಲಂತೂ ಕಾಣುತ್ತಲೇ ಬಂದಿದ್ದೇವೆ. ದೊರೆ ಬದಲಾಗುತ್ತಾನೆ, ರಾಜಗೃಹದ ಲಕ್ಷಣಗಳು ಬದಲಾಗುವುದಿಲ್ಲ. ಪ್ರಭುತ್ವದ ಲಕ್ಷಣಗಳೂ ಬದಲಾಗುವುದಿಲ್ಲ.
ಇಲ್ಲಿ ರಾಜಪ್ರಭುತ್ವ ಕಾಲದ ಸುದ್ದಿವಾಹಕರತ್ತ ನೋಡೋಣ. ಎರಡೂ ವಿಧದ ಸುದ್ದಿವಾಹಕರು ಇಂದಿಗೂ ಇದ್ದಾರೆ ಅಲ್ಲವೇ ? ಆಗ ದೊರೆಗೆ ಸುದ್ದಿ ತಲುಪಿಸುತ್ತಿದ್ದರು. ಈಗ ದೊರೆಗೆ ಬೇಕಾದಂತೆ ಜನತೆಗೆ ಸುದ್ದಿ ತಲುಪಿಸುತ್ತಾರೆ. ದೊರೆಯ ಸಂತೃಪ್ತಿಯೇ ತಮ್ಮ ಆತ್ಮತೃಪ್ತಿ ಎಂದು ಭಾವಿಸುವ ಒಂದು ಪಡೆ, ತಮ್ಮ ಅಸ್ತಿತ್ವ ರಕ್ಷಣೆಗಾಗಿ ದೊರೆಯನ್ನು ಹೇಗಾದರೂ ತೃಪ್ತಿಪಡಿಸುವ ಮತ್ತೊಂದು ಪಡೆ ಎರಡೂ ಆಯಾಮಗಳಲ್ಲಿ ನಾವಿಂದು ಅತ್ಯಾಧುನಿಕ ಸುದ್ದಿಮನೆಗಳನ್ನು ನೋಡುತ್ತಿದ್ದೇವೆ. ಇದರಿಂದ ಹೊರತಾದ ಮತ್ತೊಂದು ಆಯಾಮವೂ ಇದ್ದರೂ, ಅದು ಆಡಳಿತಾರೂಢ ಪಕ್ಷವನ್ನು ಅವಲಂಬಿಸುತ್ತದೆ. ಅಂದರೆ ವ್ಯವಸ್ಥೆಯ ವಿರುದ್ಧ, ಪ್ರಭುತ್ವದ ವಿರುದ್ಧ ಮಾತನಾಡುವ ಸುದ್ದಿಮನೆ ಇರುವುದು ಊಹಿಸಲಸಾಧ್ಯ .
ರಾಜಪ್ರಭುತ್ವದ ಲಕ್ಷಣಗಳನ್ನು ರಾಜಭವನಗಳಲ್ಲಿ ಕಾಣಲಾಗದಿದ್ದರೂ ಈ ಸುದ್ದಿಮನೆಗಳ ಮೂಲಕ ಕಾಣಬಹುದು.
ಇಂದಿನ ವಿದ್ಯುನ್ಮಾನ ಮಾಧ್ಯಮ ಮತ್ತು ಕೊಂಚಮಟ್ಟಿಗೆ ಮುದ್ರಣ ಮಾಧ್ಯಮಗಳ ಸುಳ್ಳುಸುದ್ದಿಯ ವ್ಯಸನಕ್ಕೆ ಇದೇ ಮೂಲ ಕಾರಣ. ಸುದ್ದಿಮನೆಗಳು ಸುದ್ದಿ ಸಮಾಚಾರವನ್ನು ಸತ್ಯಸಂಧರಂತೆ ಜನತೆಗೆ ಮುಟ್ಟಿಸಲು ಸ್ಥಾಪನೆಯಾಗುತ್ತಿಲ್ಲ. ಆಳುವ ವರ್ಗಗಳಿಗೆ ಅಥವಾ ಆಡಳಿತಾರೂಢ ಪಕ್ಷಗಳಿಗೆ ಅನುಕೂಲವಾಗುವಂತೆ ಸುದ್ದಿಯನ್ನು ಜನರ ಬಳಿ ಕೊಂಡೊಯ್ಯಲು ಸ್ಥಾಪನೆಯಾಗುತ್ತಿವೆ. ಹಾಗಾಗಿ ಜನರಿಗೆ ಏನು ಬೇಕು ಎನ್ನುವುದು ಇಲ್ಲಿ ಪ್ರಸ್ತುತ ಎನಿಸುವುದೇ ಇಲ್ಲ. ನಾವು ಕೊಟ್ಟಿದ್ದನ್ನು ಜನರು ಸ್ವೀಕರಿಸುತ್ತಾರೆ ಎನ್ನುವ ಊಳಿಗಮಾನ್ಯ ಧೋರಣೆಯೇ ಪ್ರಧಾನವಾಗುತ್ತದೆ. ಇದು ಸಮಾಚಾರಗಳಿಂದ ಧಾರಾವಾಹಿಯವರೆಗೂ ಸತ್ಯ. ನಿಮ್ಮ ಮೆಚ್ಚಿನ ಚಿತ್ರಗೀತೆ ಕಾರ್ಯಕ್ರಮವನ್ನು ಆಕಾಶವಾಣಿಯಲ್ಲಿ ಕೇಳುತ್ತಿದ್ದೆವು, ಇದು ಇಲ್ಲಿ ಸಾಧ್ಯವೇ ? ಇಲ್ಲ ಅಲ್ವಾ.
ರಾಜಪ್ರಭುತ್ವದ ಕಾಲದಲ್ಲಿ ಸುದ್ದಿವಾಹಕನ ಸುದ್ದಿ ಕೇಳಿ ರಾಜ ಸಂಪ್ರೀತನಾದರೆ ಮಡಿಲಿಗೆ ವರಹಗಳನ್ನು ಸುರಿಯತ್ತಿದ್ದ. ಈಗ ಜಾಹೀರಾತು ಅಥವಾ ಇನ್ನಿತರ ಮಾರುಕಟ್ಟೆ ರೂಪದ ವರಹಗಳನ್ನು ಸುರಿಯಲಾಗುತ್ತದೆ. ಈ ದಕ್ಷಿಣೆಗೆ ಪ್ರತಿಯಾಗಿ ಸುದ್ದಿಮನೆಗಳು ಏನು ಮಾಡಬೇಕು. ಸುಳ್ಳನ್ನೂ ಸತ್ಯ ಎಂದು ಜನರು ನಂಬುವ ಹಾಗೆ ಸುದ್ದಿಯನ್ನು ಸಿದ್ಧಪಡಿಸಬೇಕು. ಅದಕ್ಕಾಗಿಯೇ ಆ ಏರುದನಿಯ ನಿರೂಪಕರನ್ನೂ ತಯಾರಿಸಲಾಗುತ್ತದೆ. ಸತ್ಯವನ್ನು ಸುಳ್ಳು ಎಂದು ಬಿಂಬಿಸುವುದು, ಸುಳ್ಳನ್ನು ಸತ್ಯ ಎಂದು ಬಿಂಬಿಸುವುದು ಎರಡೂ ಪ್ರಕ್ರಿಯೆಗಳು ಒಟ್ಟೊಟ್ಟಿಗೇ ಸಾಗಲು ಆಧುನಿಕ ತಂತ್ರಜ್ಞಾನದ ಸಂವಹನ ಮಾಧ್ಯಮಗಳು ನೆರವಾಗುತ್ತವೆ. ಬೆರಳತುದಿಯಲ್ಲಿರುವ ಸುದ್ದಿಯನ್ನು ಕೂಡಲೇ ಬಿತ್ತರಿಸಿ, ನಾವೇ ಮೊದಲು ಎಂದು ಘೋಷಿಸಿದ ಕೂಡಲೇ ನೋಡುಗರಲ್ಲಿ ವಿಶ್ವಾಸ ಮೂಡುವುದು ಸಹಜ.
ಈ ಸುದ್ದಿಮನೆಗಳನ್ನು ನೋಡಿ ಸುದ್ದಿಯನ್ನು ನಂಬುವ ಜನರ ಮುಂದೆ ಬೇರೆ ಆಯ್ಕೆ ಇದೆಯೇ ? ಖಂಡಿತವಾಗಿಯೂ ಇದೆ. ಮುದ್ರಣ ಮಾಧ್ಯಮಗಳು ಸ್ವಲ್ಪಮಟ್ಟಿಗೆ ವಾಸಿ. ದೂರದರ್ಶನ ವಾರ್ತೆಗಳೂ ಇವೆ. ಆದರೆ ಆಧುನಿಕ ಸಮಾಜ, ವಿಶೇಷವಾಗಿ ಮಧ್ಯಮ ವರ್ಗಗಳು ಮತ್ತು ಶ್ರೀಮಂತ ವರ್ಗಗಳಿಗೆ ಭೋಗದ ವ್ಯಸನ ಹೆಚ್ಚಾಗಿದೆ. ಹಿಂಬದಿಯ ಪರದೆ, ಒಂದು ಮೇಜು, ತಾಲ್ಲೂಕು ಕಚೇರಿಯಲ್ಲಿರುವಂತಹ ವಾತಾವರಣದಲ್ಲಿ ಸುದ್ದಿವಾಹಕರು ಕುಳಿತು ಸುದ್ದಿ ಓದಿದರೆ ಈ ವರ್ಗಗಳಿಗೆ ರುಚಿಸುವುದಿಲ್ಲ. ರಂಜನೀಯವಾಗಿರಬೇಕು, ಪ್ರತಿ ವಾಕ್ಯದ ಹಿನ್ನೆಲೆಯಲ್ಲಿ ವಾದ್ಯಗಳ ಅಬ್ಬರ ಬೇಕು, ಗ್ರಾಫಿಕ್ಸ್ ಇರಬೇಕು, ಒಂದೇ ಪರದೆಯಲ್ಲಿ ಹತ್ತಾರು ಸುದ್ದಿಗಳು ಚಿಂದಿ ಚಿಂದಿಯಾಗಿ ಕಾಣಬೇಕು. ಹೀಗೆ ಸಮಾಜದ ಈ ಅವಲಕ್ಷಣಗಳಿಗೆ ಸುದ್ದಿಮನೆಗಳು ಸ್ಪಂದಿಸಲು ಸದಾ ಸಿದ್ಧವಾಗಿರುತ್ತವೆ.
ಈ ಬೌದ್ಧಿಕ ದಾರಿದ್ರ್ಯದ ನೆಲೆಯಲ್ಲೇ ಭಾರತದ ಸುದ್ದಿಮನೆಗಳನ್ನು ಸುಳ್ಳುಸುದ್ದಿಯ ವ್ಯಸನ ಕಾಡುತ್ತಿದೆ. ಸಮಾಜಮುಖಿ ಪ್ರಾಮಾಣಿಕ ವರದಿಗಾರರಿಗೆ ಜಾಗವೇ ಇಲ್ಲದಂತಹ ವಾತಾವರಣ ಮುದ್ರಣ ಮಾಧ್ಯಮಗಳಲ್ಲೂ ಸೃಷ್ಟಿಯಾಗುತ್ತಿದೆ. ಇಲ್ಲಿ ಪ್ರಗತಿಪರತೆ, ಪ್ರತಿಗಾಮಿತನ ಎನ್ನುವುದಕ್ಕಿಂತಲೂ ಮಾಧ್ಯಮಗಳ ಸಮಾಜೋ ರಾಜಕೀಯ ಹೊಣೆಗಾರಿಕೆ ಮುಖ್ಯವಾಗುತ್ತದೆ. ಪಕ್ಷ ರಾಜಕಾರಣವನ್ನು ಹೊರಗಿಟ್ಟು ನೋಡಿದಾಗ ಇದು ಅರ್ಥವಾಗುತ್ತದೆ. ಮಾಧ್ಯಮಗಳು ಯಾವುದೇ ರಾಜಕೀಯ ಸಿದ್ಧಾಂತ ಅಥವಾ ಮತಧಾರ್ಮಿಕ ತತ್ವಗಳಿಗೆ ಬದ್ಧವಾಗಿರಬೇಕಿಲ್ಲ. ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಸ್ತಂಭ ಎನಿಸಿಕೊಂಡಿರುವ ಈ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸ ಇದೆ ಎನ್ನುವ ಸಾಮಾನ್ಯ ಪ್ರಜ್ಞೆ ಇದ್ದರೆ ಸಾಕು. ತುರ್ತುಪರಿಸ್ಥಿತಿಯ ಸಂದರ್ಭವನ್ನು ಒಮ್ಮೆ ತಿರುಗಿ ನೋಡಿದರೂ ಸಾಕು.
ಆದರೆ ಹಣಕಾಸು ಬಂಡವಾಳದ ಮಾರುಕಟ್ಟೆ ವ್ಯವಸ್ಥೆಯಲ್ಲಿ ಪ್ರಪಂಚದ ಯಾವುದೇ ವಿದ್ಯಮಾನವೂ ಈ ವ್ಯೂಹದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮಾಧ್ಯಮ ಕ್ಷೇತ್ರವೇ ಮಾರುಕಟ್ಟೆಗೆ ಶರಣಾಗಿಬಿಟ್ಟಿದೆ. ಆಡಳಿತ ಯಂತ್ರವನ್ನು ನಿಯಂತ್ರಿಸುವ ಕಾರ್ಪೋರೇಟ್ ಕೈಗಳೇ ಮಾಧ್ಯಮಗಳನ್ನೂ ನಿಯಂತ್ರಿಸುತ್ತವೆ. ಒಂದು ಸುದ್ದಿ ಪತ್ರಿಕೆ ಇಂದು ಬದುಕುಳಿಯಬೇಕಾದರೆ, ಆಳುವ ವರ್ಗಗಳ ಕೃಪಾಕಟಾಕ್ಷಕ್ಕಾಗಿ ಕೈಚಾಚಬೇಕಾದ ಪರಿಸ್ಥಿತಿ ಎದುರಾಗಿದೆ. ಮಾಧ್ಯಮ ಲೋಕದ ಸ್ವಾಯತ್ತತೆ ಮತ್ತು ಸ್ವಂತಿಕೆಯ ಬಗ್ಗೆ ಚರ್ಚೆ ನಡೆಸುವ ಕಲ್ಪನೆ ಈಗಾಗಲೇ ಇತಿಹಾಸದ ಕಸದಬುಟ್ಟಿ ಸೇರಿದೆ. ದುರಂತ ಎಂದರೆ ಭಾರತದ ವಿದ್ಯುನ್ಮಾನ ಮಾಧ್ಯಮಗಳು ತಮ್ಮ ಮಾನ ಹರಾಜು ಹಾಕಿಕೊಳ್ಳಲು ಕೊರೋನಾ ಸಂದರ್ಭವನ್ನು ಬಳಸಿಕೊಂಡಿವೆ.
ಕೊರೋನಾ-ಕೋವಿದ್ 19 ಸುದ್ದಿಮನೆಗಳ ಜವಾಬ್ದಾರಿ ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸಬೇಕಿತ್ತು. ಇಡೀ ದೇಶವೇ ಆತಂಕಕ್ಕೊಳಗಾಗಿರುವ ಸಂದರ್ಭದಲ್ಲಿ ಸುದ್ದಿಮನೆಗಳಲ್ಲಿ ತಯಾರಾಗುವ ಪ್ರತಿಯೊಂದು ಸುದ್ದಿಯೂ ಜನಮಾನಸದಲ್ಲಿನ ಆತಂಕಗಳನ್ನು ದೂರ ಮಾಡಿ, ಸಮಾಜದಲ್ಲಿನ ಅಂತರಗಳನ್ನು ಕಡಿಮೆ ಮಾಡಿ, ಸಮಸ್ತ ಭಾರತೀಯ ಪ್ರಜೆಗಳ ಐಕಮತ್ಯ ಸಾಧಿಸುವಂತಿರಬೇಕಿತ್ತು. ಆದರೆ ಇದಕ್ಕೆ ತದ್ವಿರುದ್ಧವಾದುದನ್ನು ನಾವಿಂದು ಕಾಣುತ್ತಿದ್ದೇವೆ. ದೈಹಿಕ ಅಂತರ ಕಾಪಾಡಿಕೊಳ್ಳುತ್ತಿರುವ ಜನರ ನಡುವೆ ಸಾಮುದಾಯಿಕ ಅಂತರವನ್ನು ಹೆಚ್ಚಿಸಿರುವುದು ಮಾಧ್ಯಮಗಳ ಹೆಗ್ಗಳಿಕೆ.
ಈ ಕ್ಷಣದ ಮಾರುಕಟ್ಟೆ ಮೌಲ್ಯ ವೃದ್ಧಿಗೆ ಸುಳ್ಳು ಸುದ್ದಿಗಳು ನೆರವಾಗುತ್ತಿವೆ. ಇತ್ತ ದೊರೆಗಳೂ ಸಂಪ್ರೀತರಾಗುತ್ತಾರೆ. ಸೂಕ್ತ ದಕ್ಷಿಣೆಯೂ ದೊರೆಯುತ್ತದೆ. ನಾಳೆ ಕ್ಷಮೆ ಕೋರಿದರೂ, ಬಾಚಿಕೊಂಡ ಲಾಭ ಭಂಡಾರ ಸೇರಿರುತ್ತದೆ. ಅರ್ನಾಬ್ ಗೋಸ್ವಾಮಿ ಮತ್ತು ಇವರ ಶಿಷ್ಯ ವೃಂದಕ್ಕೆ ಈ ತಂತ್ರ ಚೆನ್ನಾಗಿಯೇ ತಿಳಿದಿದೆ.
ಕೋವಿದ್ 19 ಭಾರತವನ್ನು ಎಲ್ಲ ರೀತಿಯಲ್ಲೂ ಬೆತ್ತಲೆ ಮಾಡಿದೆ. ಮಾಧ್ಯಮ ಮತ್ತು ಸುದ್ದಿಮನೆಗಳು ಅಪವಾದವಾಗಬೇಕಿಲ್ಲ. ಸುದ್ದಿಮನೆಗಳ ಸುಳ್ಳು ಸುದ್ದಿಯ ವ್ಯಸನ ಸಮಾಜದಲ್ಲಿ ಸೃಷ್ಟಿಯಾಗಿದ್ದ, ಸೃಷ್ಟಿಯಾಗಬಹುದಿದ್ದ ಸೌಹಾರ್ದತೆಯನ್ನೂ ಹಾಳುಗೆಡಹಿವೆ. ಭೋ ಪರಾಕ್ ಹೇಳುವ ವಂದಿಮಾಗಧ ಸಂಸ್ಕøತಿಯಿಂದ ಭಾರತ ಬಹುದೂರ ಸಾಗಿ ಬಂದಿದೆ.
ಆದರೆ ಸುದ್ದಿಮನೆಗಳಲ್ಲಿ ಈ ಸಂಸ್ಕೃತಿ ನಿರಂತರವಾಗಿ ನಡೆದುಬಂದಿದೆ. ಏಕೆಂದರೆ ರಾಜಪ್ರಭುತ್ವದ ಪಳೆಯುಳಿಕೆಗಳನ್ನು ನಾಶಪಡಿಸಲು ನಮ್ಮಿಂದ ಸಾಧ್ಯವಾಗಿಲ್ಲ, ಸಾಧ್ಯವಾಗುತ್ತಿಲ್ಲ. ಆದರೆ ಸಾಧ್ಯವಿದೆ ಎನ್ನುವ ಭರವಸೆಯನ್ನು ಕೊರೋನಾ ಮೂಡಿಸಿದೆ.
ಪ್ರಭುತ್ವ ಮತ್ತು ಪ್ರಭುತ್ವವನ್ನು ಪೋಷಿಸುವ ಎಲ್ಲ ಸಾಂಸ್ಥಿಕ ನೆಲೆಗಳೂ ಬೆತ್ತಲಾಗುತ್ತಿರುವ ಈ ಸಂದರ್ಭದಲ್ಲಿ ಸುಳ್ಳುಸುದ್ದಿಯ ವ್ಯಸನಕ್ಕೆ ಒಳಗಾದ ಮಾಧ್ಯಮಗಳು ಸರ್ವವ್ಯಾಪಿ ಕೊರೋನಾಗಿಂತಲೂ ಭೀಕರ ವ್ಯಾಧಿಯಂತೆ ಕಂಡುಬಂದರೆ ಅಚ್ಚರಿಯೇನಿಲ್ಲ.
ಈ ವ್ಯಾಧಿಯನ್ನು ಹೋಗಲಾಡಿಸಲು ಬೇಕಿರುವುದು ಸಾಮಾಜಿಕ ಪ್ರಜ್ಞೆ ಮತ್ತು ನಾಗರಿಕ ಸಂವೇದನೆ. ನಮ್ಮ ಸಮಾಜದಲ್ಲಿ ಇದು ಇನ್ನೂ ಉಳಿದಿದೆ ಎನ್ನುವುದೊಂದೇ ಆಶಾದಾಯಕ ಸಂಗತಿ. ಈ ಸಂವೇದನೆಯ ಕೊಂಡಿಗಳನ್ನು ಬೆಸೆಯುವ ಮೂಲಕ ನಾವು ಮತ್ತೊಂದು ಹೊಸ ಲೋಕವನ್ನು ಸೃಷ್ಟಿಸಬಹುದಲ್ಲವೇ ? ಸುಳ್ಳು ಸುದ್ದಿಯ ವ್ಯಸನಕ್ಕೆ ಮದ್ದು ಇದೆಯೇ ? ಕೊರೋನಾ ನೆರವಾಗುವುದಿಲ್ಲ. ಕೊರೋನಾ ನಂತರದ ದಿನಗಳಲ್ಲಿ ಇದು ಸಾಧ್ಯ. ನಮ್ಮ ನಡುವಿನ ಮಾಧ್ಯಮ ಎನ್ನುವ ವ್ಯಾಧಿಯನ್ನು ಕೊನೆಗೊಳಿಸಲು ಕೊರೋನಾ ಇರಲಿ ಎಂದು ಬಯಸುವುದು ಬೇಡ. ಕೊರೋನಾ ಹೋಗಲಿ, ನಾವು ಇರುತ್ತೇವೆ ಅಲ್ಲವೇ ?
(ವಿಸೂ : ಇಲ್ಲಿ ಮಾಧ್ಯಮ ಎಂದರೆ ಮುಖ್ಯವಾಹಿನಿಯ ಮಾಧ್ಯಮಗಳು ಮಾತ್ರ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಭಾರತದ ಜನಸಂಖ್ಯೆ ವರವೋ..? ಶಾಪವೋ..?
- ಅಂಬಿಕಾ. ಕೆ
ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಬೆಂಗಳೂರು ವಿಶ್ವವಿದ್ಯಾಲಯ
ವಿಶ್ವ ಸಂಸ್ಥೆಯು ಪಾಪುಲೇಷನ್ ಫಂಡ್ ಮಾಡಿರುವ ಅಂದಾಜಿನ ಪ್ರಕಾರ ಭಾರತವು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎನಿಸಿಕೊಂಡಿದೆ.
ದೇಶದ ಒಟ್ಟು ಜನಸಂಖ್ಯೆಯು 142.86 ಕೋಟಿಗೆ ಏರಿಕೆಯಾಗಿದ್ದು, ಚೀನಾ ಎರಡನೇ ಸ್ಥಾನಕ್ಕೆ ಇಳಿದಿದೆ, ಇಂತಹದೊಂದು ಹಿರಿಮೆಗೆ ಭಾರತವು ಪಾತ್ರವಾಗಲಿದೆ ಎಂಬುದರ ಅರಿವು ಹಿಂದೆಯೇ ಇತ್ತು. ಹೊಸ ಭಾರತದ ಜನಸಂಖ್ಯೆಯ ಸ್ವರೂಪವೇನು ಮತ್ತು ಯಾವ ವಯೋ ಮಾನದವರು ಎಷ್ಟಿದ್ದಾರೆ. ಆದಾಯ ಮಟ್ಟ ಹೇಗಿದೆ, ಆದಾಯ ಹಂಚಿಕೆ ಹೇಗಿದೆ ಎಂಬುದರ ಕುರಿತು ಕೂಡ ಚರ್ಚೆಗಳು ನಡೆಯುತ್ತಿವೆ. ಒಟ್ಟು ಜನಸಂಖ್ಯೆಯ ಜತೆಗೆ ಈ ಎಲ್ಲಾ ಅಂಶಗಳು ಕೂಡ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮ ರೂಪಿಸುವಿಕೆ ಮೇಲೆ ಪ್ರಭಾವ ಬೀರುತ್ತವೆ. ರಾಜಕೀಯ ಪಕ್ಷಗಳು ಮತ್ತು ಗುಂಪುಗಳು ರಾಜಕೀಯ ಹಾಗೂ ಸಾಮಾಜಿಕ ಸ್ಥಾನಗಳನ್ನು ನಿರ್ಧರಿಸುವಲ್ಲಿಯೂ ಈ ಅಂಶಗಳು ಪಾತ್ರವಹಿಸುತ್ತವೆ ಭಾರತದಲ್ಲಿ ಗರಿಷ್ಠ ಸಂಖ್ಯೆಯು ಯುವ ಜನರಿದ್ದಾರೆ.
ಹಾಗೆಯೇ ಮುಂದುವರೆಯಲಿದೆ 15 ರಿಂದ 24 ವರ್ಷದೊಳಗಿನವರ ಸಂಖ್ಯೆಯು 25.4 ಕೋಟಿ ಎಂದು ಅಂದಾಜಿಸಲಾಗಿದೆ ಇನ್ನು ದೀರ್ಘಕಾಲ ಭಾರತವು ಈ ಸ್ಥಿತಿ ಕಾಯ್ದುಕೊಳ್ಳಲಿದೆ ಎಂಬುದರಲ್ಲಿಯೂ ಅನುಮಾನ ಇಲ್ಲ ಜನಸಂಖ್ಯೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನಕ್ಕೆ ಏರುವುದು, ಗೌರವ ಏನು ಅಲ್ಲ ಬದಲಿಗೆ ಇದು ದೇಶಕ್ಕೆ ಹಲವು ಸವಾಲುಗಳನ್ನು ಹುಟ್ಟುತ್ತದೆ ಜತೆಗೆ ಅವಕಾಶಗಳ ಬಾಗಿಗಳನ್ನು ತೆರೆಯುತ್ತದೆ ಆದರೆ, ಜನರನ್ನು ಸಕಾಲಿಕವಾಗಿ ಮತ್ತು ಪರಿಣಾಮಕಾರಿಯಾಗಿ ಬಲಿಸಿಕೊಳ್ಳದೆ ಇದ್ದರೆ ಜನಸಂಖ್ಯೆಯೇ ಶಾಪವಾಗಿ ದೊಡ್ಡ ಸವಾಲಾಗಿ ಪರಿಣಮಿಸಬಹುದು. ದೇಶ ಪ್ರತಿ ವರ್ಷವೂ ಹೆಚ್ಚು ಹೆಚ್ಚು ಜನರಿಗೆ ಆಹಾರ ಬಟ್ಟೆ ಶಿಕ್ಷಣ ಆರೋಗ್ಯ ಸೇವೆ ಉದ್ಯೋಗಾವಕಾಶಗಳನ್ನು ಒದಗಿಸಬೇಕಾಗುತ್ತದೆ.
ಹೀಗೆ ಮುಂದುವರೆದರೆ ಉದ್ಯೋಗಾವಕಾಶಗಳು ದೊರೆಯದೆ ಜನರ ಜೀವನ ಮಟ್ಟ ಸುಧಾರಿಸಿಕೊಳ್ಳುವುದು ಕಷ್ಟವೇ ಸರಿ ಕೆಲಸ ಮಾಡುವ ವಯೋಮಾನದ ಜನರನ್ನು ಸಮಂಜಸವಾಗಿ ಬಳಸಿಕೊಂಡರೇ ಮಾತ್ರ ಜನಸಂಖ್ಯೆಯು ದೇಶದ ಅಭಿವೃದ್ಧಿಗೆ ಪೂರಕವಾಗಿ ಪರಿಣಮಿಸುತ್ತದೆ. ದೇಶದಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಈಗಲೂ ಮೂಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಆದ್ದರಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯತಂತ್ರ ಗಳಿಗೆ ಸಂಬಂಧಿಸಿದ ಪ್ರಯತ್ನಗಳನ್ನು ನಡೆಸದೇ ಇದ್ದರೆ ಜನಸಂಖ್ಯೆ ಹೆಚ್ಚಳದ ಲಾಭವು ದೊರೆಯದೆ ಹೋಗಬಹುದು ಇದರ ಪರಿಣಾಮವಾಗಿ ಲಾಭದ ಹೆಸರಿನಲ್ಲಿ ನಷ್ಟವೇ ಹೆಚ್ಚು ಅದುವೇ ಒಂದು ಹೊರೆಯುವಾಗಬಹುದು.
ಯುವ ಜನರಿಗೆ ಸೌಲಭ್ಯಗಳು ಮತ್ತು ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಹೆಚ್ಚುತ್ತಲೇ ಇರುವ ಹಿರಿಯ ನಾಗರಿಕರ ಹಾರೈಕೆಯು ವ್ಯವಸ್ಥೆ ಮಾಡಬೇಕಿದೆ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದು ಮತ್ತು ಸವಾಲುಗಳನ್ನು ಎದುರಿಸುವುದು ಭಾರತೀಯರ ಹೊರೆಗಾರಿಕೆ ದೇಶದ ಜನರ ಅಗತ್ಯಗಳನ್ನು ಪೂರೈಸಲು ವಿಫಲವಾದರೆ, ಸಾಮಾಜಿಕ ಸಂಘರ್ಷ ಮತ್ತು ರಾಜಕೀಯ ದೃಷ್ಟಿ ಉಂಟಾಗಿ ಅದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಮುಂದೆ ಜನಸಂಖ್ಯಾ ಸ್ಫೋಟವಾದರೂ ಆಶ್ಚರ್ಯ ಪಡಬೇಕಾಗಿಲ್ಲ ಈಗಿನ ಸನ್ನಿವೇಶದಲ್ಲಿ ದೊರಕುತ್ತಿರುವ ಸಂಪನ್ಮೂಲಗಳ ಗರಿಷ್ಠ ಬಳಕೆ ಮತ್ತು ಪರಿಣಾಮಕಾರಿ ಬಳಕೆ ಬಹಳ ಮಹತ್ವವಾಗಿದೆ.
ಮೀಸಲಾತಿ, ವಲಸೆ , ರಾಜಕೀಯ ಪ್ರಾತಿನಿಧ್ಯ ಸಂಪನ್ಮೂಲಗಳ ಹಂಚಿಕೆ ಮತ್ತು ಇದರ ವಿಚಾರಗಳು ಚರ್ಚೆಗೆ ಒಳಗಾಗುವ ಸಾಧ್ಯತೆ ಇದೆ ಸಮಾಜದ ಎಲ್ಲಾ ವರ್ಗಗಳನ್ನು ಸಮಾನವಾಗಿ ಒಳಗೊಳ್ಳುವ ಆರ್ಥಿಕ ಪ್ರಗತಿಯು ಸಾಧ್ಯವಾದರೆ ಜನಸಂಖ್ಯೆ ಏರಿಕೆ ಸವಾಲಾಗಿ ಪರಿಣಮಿಸಬಹುದು ಮಾನವ ಅಭಿವೃದ್ಧಿಯೇ ಅತ್ಯುತ್ತಮ ಕುಟುಂಬ ಕಲ್ಯಾಣ ಯೋಜನೆ ಇದರಿಂದ ಜನಸಂಖ್ಯೆಯ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಜನಸಂಖ್ಯೆ ಹೆಚ್ಚಳ ಯಾವುದೋ ಒಂದು ಸಮುದಾಯ ಕಾರಣ ಎಂದು ದೂಷಿಸುವ ಪ್ರವೃತ್ತಿಗೆ ಜ್ಞಾನದಾದ ಆಧಾರ ಇಲ್ಲದ ಪೂರ್ವಗ್ರಹ ಕಾರಣದಿಂದ ಮತ್ತು ಇದು ತಪ್ಪು ನಡವಳಿಕೆಯ ಜನಸಂಖ್ಯೆಗೆ ಸಂಬಂಧಿಸಿದ ಸವಾಲುಗಳನ್ನು ಉತ್ತಮವಾಗಿ ಮತ್ತು ಜಾಣ್ಮೆಯಿಂದ ನಿರ್ವಹಿಸಿದರೆ ಈ ಶತಮಾನವನ್ನು ಭಾರತದ ಶತಮಾನವನ್ನಾಗಿ ಪರಿವರ್ತಿಸುವ ಅವಕಾಶ ನಮ್ಮ ಮುಂದೆ ಇದೆ ಜನರೇ ನಮ್ಮ ದೇಶದ ಸಂಪನ್ಮೂಲವನ್ನಾಗಿ ಮಾರ್ಪಾಡು ಮಾಡಿಕೊಳ್ಳುವ ಅವಕಾಶ ನಮ್ಮ ನಿಮ್ಮೆಲ್ಲರ ಮೇಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಾಬಾ ಸಾಹೇಬ ಅಂಬೇಡ್ಕರರ ‘ಧ್ಯಾನ’ ಗಾಯನ ; ವಿನೂತನ
- ವೆನ್ನೆಲಾ ಕೆ.
ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ,
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
ಬೆಂಗಳೂರು ವಿಶ್ವವಿದ್ಯಾಲಯ,ಬೆಂಗಳೂರು
ಇತ್ತೀಚೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದ 132ನೇ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಜನುಮ ನಿಮಿತ್ತವಾಗಿ “ಧಾನ್ಯ” ‘ಗಾಯನವು’ ವಿನೂತನವಾದ ಈ ಕಾರ್ಯಕ್ರಮವು 5 ಘಂಟೆ, 1ನಿಮಿಷ, 14 ಸೆಕೆಂಡ್ ಗೆ ಆರಂಭವಾಗಿದ್ದು ಅವಿಸ್ಮರಣೀಯವಾದ ದಿನ, ಇದೊಂದು ಭಾರತ ಇತಿಹಾಸದ ಪುಟದ ಚರಿತ್ರೆಯಲ್ಲೇ ಹೊಸ ದಾಖಲೆಯೂ ಅಂತ ಹೇಳಬಹುದು.
ಈ ಕಾರ್ಯಕ್ರಮವನ್ನು ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ವು ಇಡೀ ಭಾರತದಲ್ಲೇ ಯಾರು ಮಾಡಿರದ ಈ ವಿನೂತವಾದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಬೆಂಗಳೂರು ನಗರದಲ್ಲಿರುವ ಗಾಂಧಿ ಭವನದ ಆವರಣದಲ್ಲಿ ‘ಅನನ್ಯ ಸಂಸ್ಥೆ’ ವತಿಯಿಂದ 132 ನೇ ‘ವಿಶ್ವದ ವೀರ ವಿದ್ಯಾರ್ಥಿ ಹುಟ್ಟಿದ ದಿನ’ ಹಾಗೂ ‘ರಾಷ್ಟ್ರದ ಸ್ಫೂರ್ತಿಯ ದಿನ’ ‘ಸರ್ವ ಸಮುದಾಯದ ಶಕ್ತಿಯ ದಿನ’ ಇದೊಂದು ನಮ್ಮೆಲ್ಲರ ಹಬ್ಬದ ದಿನ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಇಂತಹ ಮೇರು ಶಿಖರ ಟ್ಯಾಗ್ ಲೈನ್ ಗಳಿಂದ ಅದ್ಭುತವಾಗಿ
ಆಯೋಜಿಸಿದ ಕಾರ್ಯಕ್ರಮಕ್ಕೆ ರಾಜ್ಯ ಕಂಡ ಪ್ರಸಿದ್ಧ ಐಪಿಎಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಸಿನಿಮಾ ಸೆಲೆಬ್ರಿಟಿಗಳು, ಸಮಸ್ತ ವಿದ್ಯಾರ್ಥಿ ಸಮೂಹ, ಸಾಮಾಜಿಕ ನ್ಯಾಯದ ವಿಚಾರಶೀಲರು, ಬರಹಗಾರರು, ಪತ್ರಕರ್ತರು ಇನ್ನೂ ಅನೇಕ ಮುಂತಾದವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇದಕ್ಕೆ ಮುಖ್ಯ ಕಾರಣಕರ್ತರಾದ ಅನನ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಂಪುರ ರಾಜೇಶ್ ರವರ ನಿರ್ದೇಶನದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಹೆಮ್ಮೆಯ ವಿಷಯ.
ಇದರ ಹಿನ್ನೆಲೆ: ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ದಲ್ಲಿ ಅತ್ಯುತ್ತಮ ಹಾಗೂ ಅತ್ಯಂತ ತುಂಬಾ ಮನಸ್ಸಿನಿಂದಲ್ಲೇ ವಿಶೇಷವಾದ ಆಸಕ್ತಿಯನ್ನು ಅಂಬೇಡ್ಕರ್ ರವರು ಸಂಗೀತ ಪ್ರಿಯರು ಹಾಗೂ ಅಂಬೇಡ್ಕರ್ ರವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು. ಹಾಗೇಯೆ ಇವರಿಗೆ ಚಿತ್ರಕಲೆಯೂ ಸಹ ಒಲಿದಿತ್ತು ಎಂಬುದು ಗಮನಾರ್ಹ ಸಂಗತಿ. ಇಂತಹ ವಿಷಯವನ್ನು ಯಾರು ಸಹ ಬೆಳಕು ಚೆಲ್ಲುವ ಸಾಹಸಕ್ಕೆ ಕೈ ಹಾಕಿ ಇರಲಿಲ್ಲ. ಇದೊಂದು ಅನನ್ಯ ಸಂಸ್ಥೆ ವತಿಯಿಂದ ಇಂತಹ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಐತಿಹಾಸಿಕ ಚರಿತ್ರೆಗೆ ಮುನ್ನುಡಿವಾಗಿದೆ.
ಅಂಬೇಡ್ಕರ್ ರವರಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಅದ್ಭುತವಾದ ಒಬ್ಬ ಸಂಗೀತ ಪ್ರಿಯರಾಗಿದ್ದರು. ಇವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು ಹಾಗೂ ವಿಶೇಷವಾಗಿ ಚಿತ್ರಕಲೆ ಸಹ ಸರಳವಾಗಿ ಮಾಡುವ ಮೂಲಕ ತಮ್ಮ ಮನದಲ್ಲಿ ಆಸಕ್ತಿ ಹೊಂದಿದ್ದರು. ಇನ್ನು ಹಲವಾರು ವಿಷಯದಲ್ಲಿ ಅಂದರೆ ಅಂಬೇಡ್ಕರ್ ರವರಿಗೆ ವಿಶೇಷವಾದ ಇವುಗಳಲ್ಲಿ ಆಸಕ್ತಿ ಮತ್ತು ಅಭಿರುಚಿಯನ್ನು ಹೊಂದಿದ್ದರು ಎಂಬುದನ್ನು ಮನಗಂಡ ಅನನ್ಯ ಸಂಸ್ಥೆಯ ವತಿಯಿಂದ ಆಯೋಜಿಸಿದ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಅತ್ಯುತ್ತಮವಾಗಿ ಮೂಡಿಬಂದಿದೆ.
ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಚಿತ್ರ ಸಾಹಿತ್ಯಗಳು, ಅಂಬೇಡ್ಕರ್ ವಾದಿಗಳು ಮತ್ತು ಚಿತ್ರರಂಗದ ಬಹುಮುಖ ಪ್ರತಿಭೆ, ಮಹಾಗುರುಗಳಾದ ಡಾ. ಹಂಸಲೇಖ ರವರು ಹೊಸದಾಗಿ ಹಾಡನ್ನು ಬರೆದದ್ದು ತುಂಬಾ ಅವಿಸ್ಮರಣೀಯ ಅಂತ ಹೇಳಬಹುದು. ಇವರು ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರೊತ್ಸಾಹ ನೀಡಿದ್ದು, ಸರ್ವ ಸಮುದಾಯದಕ್ಕೆ ಹೊಸ ಶಕ್ತಿ ತುಂಬಿದ್ದು ಮೇರು ವ್ಯಕ್ತಿಯಾಗಿದ್ದಾರೆ.
ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ಮುಖ್ಯವಾದ ಅಂಶವೆಂದರೆ ಇದರಲ್ಲಿ ಒಟ್ಟು ನಾಲ್ಕು ಭಗವಾನ್ ಬುದ್ಧ, ಅಂಬೇಡ್ಕರ್, ಬಸವೇಶ್ವರ ಮುಂತಾದರವರನ್ನು ವಿಷಯಗಳನ್ನು ಪರಿಗಣಿಸಿ ಅಂಬೇಡ್ಕರ್ ಧ್ಯಾನ ಹಾಡುಗಳ ರಚಿಸಿವುದರಲ್ಲಿ ಪ್ರಮುಖವಾಗಿ ರಾಜ್ಯದ ಹೆಸರಾಂತ ಸಾಹಿತಿ, ಪ್ರಗತಿಪರ ಚಿಂತಕರು ಹಾಗೂ ಮಾಜಿ ಅಧ್ಯಕ್ಷರಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರ
‘ಧೀ ಶಕ್ತಿಯೇ … ಜ್ಞಾನ ಪರ್ವತದ … ಧೀಮಂತ ಧೀಶಕ್ತಿಯೇ …
ಇಂತಹ ಸಾಲುಗಳನ್ನು, ಡಾ. ಕೈ.ವೈ.ನಾರಾಯಣಸ್ವಾಮಿರವರ ದೀಪಾ …. ಎಲ್ಲರೆದೆಯಲಿ … ಹಚ್ಚಿದ ದೀಪಾ .. ಭೂಪಾ … ಭೂಪಾ … ಭೀಮಾ ಭೂಪಾ .. ಬಾಬಾ .. ಸಾಹೇಬ್.. ಜೀವಸ್ವರವೇ … ಬಾಬಾ.. ಹಾಗೂ ರವಿ ಮರಿಯಪ್ಪರವರ ಹತ್ತು ಸಾವಿರ ವಯಲಿನನ್ನು … ವೀಣೆಗಳು ನೂರೆಂಟು … ಕೋಟಿ ಕೋಟಿ ಎದೆ ಸದ್ದಿನ ಡೊಳ್ಳು … ಸಂಯೋಜಿಸಿದರೇ .. ಸಂವಿಧಾನಾ … ಮತ್ತು ಚಿತ್ರ ಸಾಹಿತಿ, ಹೆಸರಾಂತ ಸಂಗೀತ ನಿರ್ದೇಶಕರು ಡಾ. ಹಂಸಲೇಖ ರವರು ನಿನ್ನ ಮೌನಾ … ದೀನ ಗಾನಾ… ನಿನ್ನ ಧ್ಯಾನಾ .. ಸಂವಿಧಾನಾ … ಈ ನಾಲ್ಕು ಅಂಬೇಡ್ಕರ್ ಧ್ಯಾನ ರಚನೆಗೆ ಇವರುಗಳ ಬರೆದಿರುವ ಅದ್ಭುತವಾದ ಅಂಬೇಡ್ಕರ್ ರವರ ಧ್ಯಾನ ಹಾಡುಗಳನ್ನು ನಮ್ಮ ಹಿಂದುಸ್ತಾನಿ ಸಂಗೀತ ಹಾಡುಗಳ ಮೂಲಕ ಕನ್ವರ್ಟ್ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತು.
ಹಾಗೆಯೇ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಬಹಳಷ್ಟು ಯಶಸ್ವಿಯಾಗಬೇಕಾದರೆ ಈ ಮೊದಲು ಪುಟ್ಟರಾಜ ಗವಾಯಿಗಳ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ಶ್ರೀ ಡಿ. ಕುಮಾರ್ ದಾಸ್ ಅವರ ವಿದ್ವತ್ ಶರೀರದಲ್ಲಿ ‘ಧ್ಯಾನ ಗಾಯನ’ ಹಾಗೂ ಇವರ ತಂಡದ ವತಿಯಿಂದ ನಡೆಸಿಕೊಟ್ಟ ಅದ್ಭತವಾದ ಅಂಬೇಡ್ಕರ್ ರವರ ಧ್ಯಾನವು ಹಿಂದುಸ್ತಾನಿ ಸಂಗೀತದ ಕನ್ವರ್ಟ್ ಮಾಡುವ ಮುಖಾಂತರ ಈ ಹಾಡುಗಳನ್ನು ಬಹಳ ಸೊಗಸಾಗಿ ಮೂಡಿಬಂದಿದ್ದು ಹೊಸ ದಾಖಲೆಗೆ ಸೇರ್ಪಡೆಯಾಗಿದೆ.
ಇನ್ನು ಮುಂಬರುವ ದಿನಗಳಲ್ಲಿ ಅದಷ್ಟು ಹಲವಾರು ವಿನೂತನವಾದ ಭಗವಾನ್ ಬುದ್ಧರ, ಬಸವೇಶ್ವರರ ಹಾಗೂ ವಿಶ್ವದ ವೀರ ವಿದ್ಯಾರ್ಥಿಯಾದ ಮೇರು ರಾಷ್ಟ್ರದ
ನಾಯಕರಾದ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ರವರ ಹಲವಾರು ಹಾಡುಗಳನ್ನು
ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದರೆ ಇನ್ನುಷ್ಟು ಭಾರತದ ಇತಿಹಾಸದ ಪುಟಗಳಲ್ಲಿ ಮರೆತು ಹೋಗಿರುವ ಹಲವು ಬಗ್ಗೆ ದಾಖಲೆ ಇಲ್ಲದ ನೈಜ ಸಂಗತಿಗಳನ್ನು ಪುನಃ ಹೊಸ ದಾಖಲೆಗೆ ಉಪಯುಕ್ತವಾದ ವಿಶಿಷ್ಟವಾದ ಮೇರು ನಾಯಕನ
ಅಂಬೇಡ್ಕರ್ ರವರ ವಿಚಾರ ಧಾರೆಗಳು ತಾವು ಅನುಭವಿಸಿದ ನೋವು, ನಲಿವು, ಭಾರತದ ರಾಜ್ಯಾಂಗದ ಶಿಲ್ಪಿಯನ್ನು ಮುಂಬರುವ ದಿನಗಳಲ್ಲಿ ಹೊಸ ಪೀಳಿಗೆಯ ಪರಿಚಯಿಸುವ ಕೀರ್ತಿದಾಯಿಕವಾಗಲಿ ಮತ್ತು ಅದಷ್ಟು ಮುಂಬರುವ ದಿನಗಳಲ್ಲಿ ಅಂಬೇಡ್ಕರ್ ರವರ ಆಸಕ್ತಿದಾಯಕ ವಿಚಾರಗಳು ಹಾಗೂ ಸಂಗೀತದ ಬಗ್ಗೆ ಹಲವಾರು ಮಾಹಿತಿಗಳು ಸಮಸಮಸಮಾಜಕ್ಕೆ ತಲುಪುವ ವ್ಯವಸ್ಥೆಗೆ ಸಾಕ್ಷಿಯಾಗಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಬಹಿರಂಗ
ರಷ್ಯಾದಲ್ಲಿ ಓಂ – ಭರತಾಸ್- ರಾಮ – ರಾವಣ ಲಂಕೇಶ – ಮಾರೀಚ – ಸೀತ ನದಿಗಳು..!
- ಲಕ್ಷ್ಮೀಪತಿ ಕೋಲಾರ, ಸಂಶೋಧಕರು, ಸಂಸ್ಕೃತಿ ಚಿಂತಕರು, ಬೆಂಗಳೂರು
ಸ್ಲಾವ್ ಸಮುದಾಯದ ಲಿತುವೇನಿಯ, ಲಾತ್ವಿಯ, ಬೆಲಾರಸ್,ಉಕ್ರೇನ್ ಮತ್ತು ರಷಿಯಾದಂತಹ ದೇಶಗಳ ನದಿ,ನಗರಗಳು ಸಂಸ್ಕೃತ ಮೂಲದ ಹೆಸರುಗಳನ್ನೆ ಇಂದಿಗು ಉಳಿಸಿಕೊಂಡಿರುವುದು ಆ ಭಾಷೆ ಮತ್ತು ಸಂಬಂಧಿತ ಸಂಸ್ಕೃತಿಯೊಂದಿಗೆ ಅವು ಹಿಂದೊಮ್ಮೆ ಹೊಂದಿದ್ದ ಬಲವಾದ ನಂಟಿಗೆ ಸಾಕ್ಷಿಯಾಗಬಲ್ಲವು.
ಇದರೊಂದಿಗೆ ಉತ್ತರ ಭಾರತದ ಆರ್ಯ ವೈದಿಕರ ಭಾಷೆ ಸಂಸ್ಕೃತಿಯೊಂದಿಗೆ ಸ್ಲಾವ್ ಸಮುದಾಯಕ್ಕೆ ಎಷ್ಟು ನಿಕಟ ಸಂಬಂಧವಿತ್ತೆಂಬುದನ್ನು ಮತ್ತು ನಾಲ್ಕೈದು ಸಾವಿರ ವರ್ಷಗಳ ಹಿಂದೆ ಈ ಎಲ್ಲ ಆರ್ಯ ಸಮುದಾಯಗಳು ಒಟ್ಟಿಗೆ ಒಂದೆಡೆಯೇ ಕಳ್ಳುಬಳ್ಳಿಗಳಾಗಿ ಜೀವಿಸಿದ್ದರೆಂಬುದನ್ನ ಈ ಹಿನ್ನೆಲೆಯಲ್ಲಿ ನಾವು ಗ್ರಹಿಸಬಹುದಾಗಿದೆ.
ಅದರಲ್ಲು ವಿಶೇಷವಾಗಿ ಲಿತುವೇನಿಯ ಮತ್ತು ರಷಿಯಾದ ನದಿಗಳ ಹೆಸರುಗಳು ಎಷ್ಟು ಸಂಸ್ಕೃತಮಯವು (ಇಂಡೋ – ಯುರೋಪಿಯನ್ ಭಾಷಾಮೂಲದ) ಮತ್ತು ವೈದಿಕರ ಪುರಾಣ ಮೂಲದವು ಆಗಿವೆ ಎಂದರೆ, ನಂಬಲಿಕ್ಕು ಅಸಾಧ್ಯ ಎಂಬಂತಿವೆ. ಇದರರ್ಥ ಸ್ಲಾವ್ ಜನರು ವೈದಿಕರ ಪುರಾಣಗಳಿಂದ ಪ್ರೇರಿತಗೊಂಡಿದ್ದಾರೆ ಎಂಬುದಲ್ಲ.
ಬದಲಿಗೆ ವೈದಿಕರ ಇಂದಿನ ಪುರಾಣ – ಸಂಸ್ಕೃತಿ – ಭಾಷೆಗಳು ವೈದಿಕರಿಗೆ ಎಷ್ಟು ಸಂಬಂಧಿಸಿದ್ದೋ ಅದಕ್ಕು ಹೆಚ್ಚಿನದಾಗಿ ಸ್ಲಾವ್ ಸಮುದಾಯಕ್ಕೂ ಸಂಬಂಧಿಸಿದ್ದಾಗಿದ್ದವು. ಹಾಗೆ ನೋಡಿದರೆ ಬ್ರಹ್ಮ – ವೇದ ಮೂಲವು ಕೂಡ ಸ್ಲಾವ್ ಸಮುದಾಯದ ಉತ್ತರ ಧ್ರುವ ಪ್ರದೇಶಕ್ಕೆ ಹೋಗಿ ನಿಲ್ಲುತ್ತದೆ ಎಂಬುದು ಸೋಜಿಗವಾದರು ನಿರ್ವಿವಾದವಾಗಿ ಚಾರಿತ್ರಿಕ ಸತ್ಯವಾಗಿದೆ. 12 – 13 ನೇ ಶತಮಾನಗಳಲ್ಲಿ ಸ್ಲಾವ್ ಜನರು ಕ್ರೈಸ್ತರಾಗಿ ಪರಿವರ್ತಿತರಾಗುವವರೆಗು ಅವರು ಶತಾಂಶ ಮತ್ತು ಥೇಟ್ ಶ್ರೇಷ್ಟ ಆರ್ಯ ವೈದಿಕರೆ ಆಗಿದ್ದರು.
ರಷ್ಯ ಮತ್ತು ಲಿತುವೇನಿಯಾಗಳಲ್ಲಿ ಭರತಾಸ್, ಓಂ, ರಾಮ, ಸೀತ, ಲಂಕೇಶ, ರಾವಣ, ಮಾರೀಚ, ನೆಮುನ (ಯಮುನ), ಕಾಮ, ಯಂತ್ರ, ಶ್ವೇತೆ, ದ್ರವ, ಮೋಕ್ಷ, ಋಗ್ವೇದದ ದಾನವ ಮಾತೆ ದನು ನೆನಪಿನ ದನುಬೆ ಮುಂತಾದ ನದಿಗಳು ಮತ್ತು ನಾರದ (ಈಗ ನರೋದ್ನಯ ಎಂದಿದ್ದರು ಸ್ಥಳೀಯರು ನಾರದ ಬೆಟ್ಟ ಎಂದೇ ಕರೆಯುತ್ತಾರೆ) ಹೆಸರಿನ ಬೆಟ್ಟವು ಇವೆ ಎಂದರೆ ಯಾರೂ ಅಚ್ಚರಿಪಡುವಂತದ್ದೆ.
ಯಾರಿಗಾದರು ಈ ಸಂಗತಿಗಳಲ್ಲಿ ಅನುಮಾನ ಹುಟ್ಟುವುದು ಸಹಜವೆ. ಯಾಕೆಂದರೆ ಸ್ಲಾವ್ – ವೈದಿಕ ಆರ್ಯರ ಮೂಲ ಪ್ರದೇಶವೆ ಉತ್ತರ ದ್ರುವ ಪ್ರದೇಶವಾಗಿತ್ತು ಎಂಬ ಚರಿತ್ರೆಯನ್ನೇ ನಮ್ಮಿಂದ ಮರೆಮಾಚಲಾಗಿತ್ತು ಮತ್ತು ಅದು ಬಹುದೊಡ್ಡ ಸಾಂಸ್ಕೃತಿಕ ರಾಜಕಾರಣವೂ ಆಗಿತ್ತು. ಆದರೆ ತಿಲಕರು ತಮ್ಮ “Arctic Home In the Vedas” ಎಂಬ ಪುಸ್ತಕದಲ್ಲಿ ಉತ್ತರ ಭಾರತದ ವೈದಿಕ ಆರ್ಯರ ತವರು ನೆಲ ಉತ್ತರ ದ್ರುವ ಪ್ರದೇಶವೆ, ಅಂದರೆ ಇಂದಿನ ಲಿತುವೇನಿಯ, ಲಾತ್ವಿಯ, ಬೆಲಾರಸ್ ಪ್ರದೇಶಗಳೇ ಆಗಿದ್ದವು ಎಂದು ಸಮರ್ಥ ಸಾಕ್ಷಾಧಾರಗಳೊಂದಿಗೆ ನಿರೂಪಿಸಿದ್ದಾರೆ.
ರಷ್ಯಾದಲ್ಲಿ ಸಂಸ್ಕೃತ ಭಾಷಾಮೂಲದ ನೂರಾರು ನದಿಗಳಿವೆ. ಭಾರತದಲ್ಲಿ ಕೆಲವು ನದಿಗಳನ್ನ ಹೊರತುಪಡಿಸಿದರೆ ಆ ಪ್ರಮಾಣದ ವೈದಿಕ ಪುರಾಣ ಮೂಲದ ನದಿ ಹೆಸರುಗಳು ಈ ನೆಲದಲ್ಲಿ ಇಲ್ಲವೆಂಬುದು ಪ್ರಾಚೀನ ಕಾಲದಿಂದಲು ಆರ್ಯ ವೈದಿಕರು ಇಲ್ಲಿರಲಿಲ್ಲವೆಂಬುದನ್ನೇ ಸೂಚಿಸುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ7 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಕವಿತೆ | ನೆನಪು