Connect with us

ಲೈಫ್ ಸ್ಟೈಲ್

ಮೂಲಿಕೆ ಮದ್ದುಗಳಿಗೂ ಬೇಕು ಸುರಕ್ಷತೆಯ ಅಗ್ನಿಪರೀಕ್ಷೆ..!

Published

on

  • ಡಾ.ಎನ್.ಬಿ.ಶ್ರೀಧರ

ಇಂಗ್ಲಿಷ್ ಔಷಧಿಗಳಿಗೆಲ್ಲಾ ಸೈಡ್ ಇಫೆಕ್ಟ್ ಜಾಸ್ತಿ. ನಾನು ತಗೋಳ್ತಾ ಇರೋದು ಗಿಡಮೂಲಿಕೆ ಔಷಧಿ. ನಮ್ಮನೇ ದನಗಳಿಗೂ ನಾನು ನಾಟಿ ಔಷಧೀನೇ ಮಾಡಿಸೋದು” ಇದು ಕೆಲವು ರೈತರ ಅಭಿಪ್ರಾಯ. ಔಷಧಿ ಅಂದರೆ ಪರಿಣಾಮವಿರುವ ಔಷಧಿಗೆ ಅಡ್ಡಪರಿಣಾಮ ಇದ್ದೇ ಇರುತ್ತದೆ. ಅಡ್ಡಪರಿಣಾಮಗಳಿಲ್ಲ ಅಂದರೆ ಅದಕ್ಕೆ ಪರಿಣಾಮವೂ ಇಲ್ಲ.

ಇದು ಔಷಧಿಗಳಿಗೆಲ್ಲ ಇರುವ ಮಾತೃ ವೇದವಾಕ್ಯ!!. “ಔಷಧಿ ಎರಡೂ ಕರೆ ಕುಯ್ಯುವ ಗರಗಸ ಇದ್ದ ಹಾಗೇ. ಅದು ರೋಗವನ್ನು ವಾಸಿ ಮಾಡಬಲ್ಲದು. ಹಾಗೆಯೇ ಮನುಜನ ಶರೀರಕ್ಕೆ ಹಾನಿಯನ್ನೂ ಉಂಟು ಮಾಡಬಲ್ಲದು” ಎಂದು ಆಂಗ್ಲ ಗಾದೆಯಲ್ಲಿ ಹೇಳಲಾಗಿದೆ. ಹಾಗಿದ್ದರೆ ಈ ಗಿಡಮೂಲಿಕೆಗಳ ಸಾಧಕ ಬಾಧಕಗಳೇನು ಎಂಬುದು ಮುಖ್ಯವಲ್ಲವೇ? ತಿಳಿದುಕೊಳ್ಳೋಣ.

ಭಾರತವು ಪುರಾತನ ಪರಂಪರೆಯಿಂದ ಗಿಡಮೂಲಿಕೆ ಔಷಧಿಗಳನ್ನು ಉಪಯೋಗಿಸುತ್ತಾ ಬಂದಿದೆ. ಪ್ರಪಂಚದಾದ್ಯಂತದ ಜನರು ಪ್ರತಿ ವರ್ಷ ಸಾವಿರಾರು ವಿವಿಧ ಗಿಡಮೂಲಿಕೆ ಔಷಧಿಗಳನ್ನು ಬಳಸುತ್ತಾರೆ. ಇದರ ಫಲವಾಗಿ ಈ ಗಿಡಮೂಲಿಕೆ ಔಷಧಿಗಳ ಉದ್ಯಮವು ಎಷ್ಟು “ಲಾಭದಾಯಕ” ವೆನಿಸಿದೆಯೆಂದರೆ, ವಿಶ್ವದಾದ್ಯಂತ ಈ ಉದ್ಯಮದ ಮೌಲ್ಯವು 7000ರೂ ಕೋಟಿಗೂ ಹೆಚ್ಚಿದೆ. ಮೊದಲು ಮನೆ ಮದ್ದು ಎಂದು ಉಪಯೋಗಿಸಲ್ಪಡುತ್ತಿದ್ದ ಈ ಉತ್ಪನ್ನಗಳು ಇಂದು ಉದ್ಯಮಗಳ ಕಣ್ಮಣಿಯಾಗಿವೆ ಎಂದರೆ ಉತ್ಪ್ರೇಕ್ಷೆ ಅಲ್ಲ.

ಹೌದು! ಉಧ್ಯಮಗಳು ಲಾಭ ಮಾಡಲೆಂದೇ ಇರುವುದು. ಆದರೆ ಅತಂಕದ ವಿಷಯವೆಂದರೆ ಈ ಗಿಡ ಮೂಲಿಕೆ ಔಷಧಿಗಳ ತಯಾರಿಕೆ, ಮಾರಾಟ ಮತ್ತು ಮಾರಾಟೋತ್ತರ ನಡುವಳಿಕೆಗಳ ಬಗ್ಗೆ ಸಾಕಷ್ಟು ಕಾನೂನುಗಳಿದ್ದರೂ ಅವುಗಳ ಪಾಲನೆಯ ಬಗ್ಗೆ ಬಗ್ಗೆ ಕಟ್ಟು ನಿಟ್ಟಾದ ನಿಯಂತ್ರಣ ಇಲ್ಲದೇ ಇಲ್ಲದಿರುವುದು. ಇದರಿಂದಲೇ ಈ ಗಿಡಮೂಲಿಕೆ ಔಷಧಿಗಳ ಹೆಸರಿನಲ್ಲಿ ನಾಯಿ ಕೊಡೆಗಳಂತೆ ತಲೆಯೆತ್ತುತ್ತಿರುವ ಹೊಸ ಹೊಸ ಕಂಪನಿಗಳು !!.

ಈ ಉದ್ಯಮದ ವ್ಯಾಪಕತೆಯು ಕಣ್ಣಿಗೆ ಕಾಣದಂತೇನೂ ಇಲ್ಲ; ಇವುಗಳ ಜಾಹಿರಾತುಗಳಂತೂ ದಿನಬೆಳಗಾದರೆ ಪತ್ರಿಕೆಗಳು, ನಿಯತಕಾಲಿಕೆಗಳು,ಹಲವಾರು ದೃಶ್ಯ ಮಾಧ್ಯಮಗಳಲ್ಲಿ ಕಂಡು ಬರುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಈ ಮಾರುಕಟ್ಟೆಯು ಗಣನೀಯ ವೇಗವನ್ನು ಗಳಿಸಿದೆ. ಇದರ ಜೊತೆಗಿರುವ ಪ್ರಮುಖ ಅಪಾಯವೆಂದರೆ, ಗ್ರಾಹಕರು ತಮಗರಿವಿಲ್ಲದೇ ಪರಿಶೀಲಿಸದ ಅಥವಾ ಅಧಿಕೃತವಲ್ಲದ ಪೂರಕ ಆಹಾರ ಪದಾರ್ಥಗಳು ಮತ್ತು ಔಷಧಿಗಳನ್ನು ಸೇವಿಸುವ ಸಾಧ್ಯತೆ ಹೆಚ್ಚಾಗಿದೆ.ಮೂಲಿಕೆ ಮದ್ದುಗಳೆಲ್ಲಾ ಸುರಕ್ಷಿತ ಎಂಬ ಭ್ರಮೆ ಬೇಡವೇ ಬೇಡ. ಪರಿಣಾಮವಿರುವ ಯಾವುದೇ ಔಷಧಿಗೆ ಯಾವುದಾದರೊಂದು ಅಡ್ಡಪರಿಣಾಮ ಇದ್ದೇ ಇರುತ್ತದೆ ಎನ್ನುವುದು ಕಟು ಸತ್ಯ.

ಆಧುನಿಕ ವಿಜ್ಞಾನದಿಂದ ತುಲನಾತ್ಮಕವಾಗಿ ದೂರವಿರುವ ಗಿಡ ಮೂಲಿಕೆ ಮತ್ತು ಸಾಂಪ್ರದಾಯಿಕ ಔಷಧಿಗಳ ವಿಚಾರದಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದ್ದು, ಅವು ಮಾರುಕಟ್ಟೆ ಪ್ರವೇಶಿಸುವ ಮೊದಲು ಕಠಿಣ ತಪಾಸಣೆಗೆ ಒಳಪಡುವುದಿಲ್ಲ ಎಂಬುದು ಬೆಚ್ಚಿಬೀಳಿಸುವ ಸತ್ಯ. ಕೇವಲ “ಇವು ಪಾರಂಪರಿಕ ಔಷಧಗಳು, ಪುರಾತನ ಕಾಲದಿಂದ ಬಳಕೆಯಲ್ಲಿವೆ; ಇವುಗಳಿಗೆ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂಬದು ಒಂದು ಸುಳ್ಳಿನ ಕಂತೆ. ಕೇವಲ ಇವು ಸುರಕ್ಷಿತ ಎಂಬ ನಂಬಿಕೆಯ ಮೇಲೆ ನಡೆಯುತ್ತಿರುವುದು ಮತ್ತು ಮಾರಾಟವಾಗುತ್ತಿರುವುದು ಅಪ್ರಿಯವಾದ ಸತ್ಯ.

ಹಾಗಿದ್ದರೆ ಹೇಗೆ ಈ ಗಿಡಮೂಲಿಕೆಗಳ ಉತ್ಪನ್ನಗಳು ರಹದಾರಿ ಪಡೆಯುತ್ತವೆ ಎಂಬುದನ್ನು ನೋಡೋಣ. ಭಾರತದಲ್ಲಿ ಶೇ 80 ರಷ್ಟು ಹಳ್ಳಿಯ ಜನ ಗಿಡಮೂಲಿಕಾ ಔಷಧಿಗಳನ್ನು ಅವರ ವಿವಿಧ ಕಾಯಿಲೆಗಳ ಪ್ರಾಥಮಿಕ ಚಿಕಿತ್ಸೆಗೆ ಬಳಸುತ್ತಾರಂತೆ. ಆಯುಶ್ ಇಲಾಖೆಯ ಪ್ರಕಾರ ಸಧ್ಯ ಭಾರತದಲ್ಲಿ 10088 ಗಿಡಮೂಲಿಕೆ ಔಷಧಿ ತಯಾರಿಸುವ ರಹದಾರಿ ಪಡೆದಿರುವ ಕಂಪನಿಗಳಿದ್ದರೆ ಇವುಗಳಲ್ಲಿ ಉತ್ತಮ ತಯಾರಿಕಾ ವಿಧಾನ (ಜಿಎಮ್ ಪಿ) ದ ಬಗ್ಗೆ ಅನುಮತಿ ಪಡೆದಿರುವವರು5402 ಮಾತ್ರ.

ಈ ಔಷಧಿಗಳ ತಯಾರಿಕೆಗೆ ರಹದಾರಿ ಪಡೆಯಲು ಮೂರು ಕೊಠಡಿಗಳಿರುವ1200 ಚದರ ಅಡಿ ಕಟ್ಟಡ ಸಾಕು. ಇದರಲ್ಲಿ ಒಂದು ತಯಾರಿಕಾ ಕೊಠಡಿ, ಒಂದು ಸಂಗ್ರಹ ಕೊಠಡಿ ಮತ್ತು ಒಂದು ಕ್ವಾರಂಟೈನ್ ಕೊಠಡಿ ಇರಬೇಕು. ಒಂದು ಔಷಧಿ ತಯಾರಿಕೆಗೆ ಆಯುಶ್ ಮಂತ್ರಾಲಯದವರು ಸೂಚಿಸಿದ ಉಪಕರಣಗಳು, ಕೊಠಡಿಗಳು, ಸಂಬಂಧ ಪಟ್ಟ ವಿವಿಧ ದಾಖಲೆಗಳ ಸಮೇತ ಆಯಾ ರಾಜ್ಯದ ಆಯುಶ್ ಇಲಾಖೆಗೆ ಅರ್ಜಿ ಸಲ್ಲಿಸಿದ ನಂತರ ಅಲ್ಲಿನ ಪರೀಕ್ಷಕರ ವರದಿಯಾದ ನಂತರ ರಹದಾರಿ ದೊರೆಯುತ್ತದೆ. ಉತ್ತಮ ತಯಾರಿಕಾ ವಿಧಾನ (ಜಿಎಮ್ ಪಿ) ದ ಬಗ್ಗೆ ಮತ್ತೊಂದು ಅರ್ಜಿ ಸಲ್ಲಿಸಿ ಪ್ರಮಾಣ ಪತ್ರ ಪಡೆಯಬೇಕು. ಎಲ್ಲ ಕಡೆ ಇರುವಂತೆ ಇಲ್ಲಿಯೂ ಸಹ ಕೆಂಪು ಪಟ್ಟಿ ಅಧಿಕಾರಶಾಹಿ ಇತ್ಯಾದಿ ಅಡೆ ತಡೆ ಇದ್ದೇ ಇರುತ್ತದೆ.

ಉತ್ಪನ್ನ ತಯಾರಿಸುವ ಮೊದಲು ಅದರ ಬಗ್ಗೆ ಪುಸ್ತಕದಲ್ಲಿ ಪರಿಣಾಮದ ಬಗ್ಗೆ ಉಲ್ಲೇಖವಿರಬೇಕು. ಕಂಪನಿಯ ಏಕಮೇವ ಉತ್ಪನ್ನವಾಗಿದ್ದರೆ ಸರ್ಕಾರಿ ಆಸ್ಪತ್ರೆಗಳು ಅಥವಾ ಮಹಾವಿದ್ಯಾಲಯದಿಂದ ಆ ಉತ್ಪನ್ನದ ಬಗ್ಗೆ ಸಂಶೋಧನಾ ಲೇಖನಗಳು ಬೇಕು. ಆಗ ಈ ಔಷಧಿಯನ್ನು ಭಾರತಲ್ಲಿ ಮಾರಾಟ ಮಾಡಲು ತೊಂದರೆ ಇಲ್ಲ.

ಅಮೇರಿಕಾ ಮತ್ತಿತರ ದೇಶಗಳಲ್ಲಿ ಇದನ್ನು “ಅಹಾರ ಪೂರಕ” (ಡಯಟರಿ ಸಪ್ಲಿಮೆಂಟ್) ಎಂದು ಮಾರಾಟ ಮಾಡಬಹುದು. ಇದಕ್ಕೆ ಆ ದೇಶದ 1974 ರ ನಿಯಮದಡಿ ಅವಕಾಶ ನೀಡಲಾಗಿದೆ. ಇದಕ್ಕೆ ಉತ್ಪನ್ನದ ಪರಿಣಾಮ ಮತ್ತು ಅಡ್ಡ ಪರಿಣಾಮದ ಬಗ್ಗೆ ಮಾಹಿತಿ ನೀಡುವ ಅವಶ್ಯಕತೆ ಇಲ್ಲ. ಆದರೆ ಅದನ್ನು ಔಷಧಿ ಎಂದು ಯಾವ ಕಾರಣಕ್ಕೂ ಹೇಳುವ ಹಾಗಿಲ್ಲ. “ಔಷಧಿ” ಎಂದರೆ ಅಹಾರ ಮತ್ತು ಔಷಧ ನಿಯಂತ್ರಣ ಆಡಳಿತ ( ಎಫ಼್ ಡಿ ಏ) ದ ವ್ಯಾಪ್ತಿಯಲ್ಲಿ ಬಂದು ಅತ್ಯಂತ ಕಠಿಣ ನಿಯಮದಡಿ ಬರುತ್ತದೆ.

ಕಾರಣ ಅಮೇರಿಕಾಕ್ಕೆ ಬಹಳ ಗಿಡ ಮೂಲಿಕಾ ಉತ್ಪನ್ನಗಳು ರಪ್ತಾಗುತ್ತವೆ. ಚ್ಯವನ ಪ್ರಾಶದಂತ ಕೆಲವು ಉತ್ಪನ್ನಗಳು ಕೆನಡಾದಂತ ದೇಶದಲ್ಲಿ ಬ್ಯಾನಾಗಿದ್ದು ಅದರಲ್ಲಿ ಸತುವಿನಂತ ಹೆಚ್ಚಿನ ಭಾರ ಲೋಹಗಳಿವೆ ಎಂಬ ಅಂಶಗಳಿಗಾಗಿ. ಆದರೆ ಇದರ ಪರಿಸ್ಥಿತಿ ಯರೋಪ್ ಖಂಡದ ದೇಶದಲ್ಲಿ ಸ್ವಲ್ಪ ಭಿನ್ನವಾಗಿದೆ. ಭಾರತದ ಪಾರಂಪರಿಕ ಗಿಡಮೂಲಿಕಾ ಉತ್ಪನ್ನಗಳನ್ನು ಅಲ್ಲಿ ಅಮೇರಿಕಾದ ಹಾಗೇ ಸುಲಭದಲ್ಲಿ ಮಾರುವ ಹಾಗಿಲ್ಲ. ಇವುಗಳ ಪರಿಣಾಮ ಮತ್ತು ಅಡ್ಡಪರಿಣಾಮ ಇವೆಲ್ಲವುಗಳಿಗೆ ಪೂರಕವಾಗಿ ಹಲವಾರು ಸಂಶೋಧನಾ ಲೇಖನಗಳು ಇನ್ನಿತರ ದಾಖಲೆಗಳನ್ನು ನೀಡಬೇಕು.

ಅಲ್ಲದೇ ಉತ್ಪನ್ನದೊಳಗಿರುವ ಪ್ರತಿಯೊಂದು ಗಿಡಮೂಲಿಕಾ ಪದಾರ್ಥವು ಪ್ರಮಾಣೀಕರಣಗೊಂಡಿರಬೇಕು ಮತ್ತು ಯಾವ ಕಾಲದಲ್ಲಿಯಾದರೂ ಯಾವ ಮಾದರಿಯನ್ನಾದರೂ ತೆಗೆದುಕೊಂಡು ತಾಳೆಹಾಕಿದಾಗ ಅದು ಹೊಂದಾಣಿಕೆಯಾಗಲೇಬೇಕು. ಆ ದೇಶಗಳ ಕಾನೂನಿನಂತೆ ಹರ್ಬಲ್ ಮೆಡಿಸಿನಲ್ ಪ್ರೊಡಕ್ಟ್ ಡೈರೆಕ್ಟಿವ್2004 ರ ನಿಯಮಾನುಸಾರ ಉತ್ಪನ್ನಕ್ಕೆ ಅದರ ಉಪಯೋಗ, ಪ್ರಮಾಣ, ಅಡ್ಡ ಪರಿಣಾಮ, ನೀಡುವ ವಿಧಾನ ಈ ಎಲ್ಲವಕ್ಕೂ ದಾಖಲೆಗಳಿರಬೇಕು. ಅಲ್ಲದೇ ಯರೋಪ್ ದೇಶಗಳಲ್ಲ್ ಮ್ರು ರುಕಟ್ಟೆ ಮಾಡಬೇಕಾದರೆ15ವರ್ಷಗಳ ಮಾರುಕಟ್ಟೆ ಅನುಭವ ಇರಬೇಕು. ಇಷ್ಟೆಲ್ಲ ಕಟ್ಟಳೆಗಳಿರಬೇಕಾದರೆ ಅಲ್ಲಿ ಈ ಗಿಡಮೂಲಿಕಾ ಉತ್ಪನ್ನಗಳನ್ನು ಮಾರುವುದು ಅತ್ಯಂತ ಕಷ್ಠಕರ.

ಇನ್ನು ಆಫ್ರಿಕಾದಂತ ಹಿಂದುಳಿದ ದೇಶದಲ್ಲಿ ಮಾರುಕಟ್ಟೆ ಇದ್ದರೂ ಸಹ ಅಲ್ಲಿನ ನಿಯಮಗಳೇ ಬೇರೆ. ಹೀಗೆ ದೇಶದಿಂದ ದೇಶಕ್ಕೆ ಬದಲಾಗುವ ನಿಯಮಗಳು ಮಾರಾಟಗಾರರನ್ನು ಹೈರಾಣ ಮಾಡಿತು ಅಂದರೆ ತಪ್ಪಿಲ್ಲ. ಗಿಡ ಮೂಲಿಕೆ ಔಷಧಿಗಳಿಗೆ ಭಾರತದಲ್ಲಿ ಸದ್ಯಕ್ಕೆ ರಹದಾರಿ ಪಡೆಯುವುದರಿಂದ ಹಿಡಿದು ಗುಣಮಟ್ಟ ಕಾಪಾಡುವವರೆಗೆ ಹೆಚ್ಚಿನ ಕಟ್ಟು ಪಾಡುಗಳಿಲ್ಲ. ಭಾರತ ಸರ್ಕಾರದ ಅಧೀನದ ಆಯುಶ್ (ಆಯುರ್ವೇದ, ಸಿದ್ಧ, ಯುನಾನಿ, ಹೋಮಿಯೋಪತಿ ಇಲಾಖೆ) ಸಹ ಈ ಗಿಡಮೂಲಿಕೆ ಉತ್ಪನ್ನಗಳ ಬಗ್ಗೆ ಅವು ನಮ್ಮದೇ ದೇಶದ ಪರಂಪರೆಯಿಂದ ಬಂದ ಪದ್ಧತಿ ಎಂದು ಮೃದುದೋರಣೆ ತಳದಿರಬಹುದು.

ಅಲ್ಲದೇ ವನಸ್ಪತಿ ಉತ್ಪನ್ನಗಳ ತಯಾರಿಕೆಗೆ ಬೇಕಾಗುವ ಮೂಲ ಗಿಡಮೂಲಿಕೆಗಳ ಭಾಗ, ಯಾವ ಋತುವಿನಲ್ಲಿ ಇವುಗಳ ಕಟಾವಣೆ ಮಾಡಬೇಕು, ಅರಣ್ಯದ ಅವಲಂಭನೆ, ಇವುಗಳ ಕೃಷಿ ಪದ್ಧತಿ, ಬೆಲೆ ನಿಗದಿ ಮಾಡುವಿಕೆ, ಇವುಗಳ ಗುಣಮಟ್ಟ ಕಾಪಾಡಿಕೊಳ್ಳುವಿಕೆ, ಇವುಗಳಲ್ಲಿ ಕೀಟನಾಶಗಳು ಮತ್ತು ಭಾರಲೋಹದ ಮಟ್ಟ ಕಡಿಮೆ ಮಾಡುವುದು, ಮೂಲ ವಸ್ತುವಿನ ಗುರುತು ಮಾಡುವುದು ಇವುಗಳ ಬಗ್ಗೆ ಗೊಂದಲದ ಗೂಡೇ ಇದ್ದು ಇದು ಸದ್ಯಕ್ಕಂತೂ ಬಗೆಹರಿಯುವ ಲಕ್ಷಣಗಳಿಲ್ಲ. ಆಯುಶ್ ಇಲಾಖೆ ಅನೇಕ ಮಾನದಂಡಗಳನ್ನು ನಿಗದಿ ಮಾಡಿದರೂ ಅನೇಕ ತಯಾರಿಕರಿಗೆ ಲೈಸನ್ಸ್ ಪಡೆಯುವುದು ಮತ್ತು ಅದರ ನವೀಕರಣ ಹೊರತು ಪಡಿಸಿದರೆ ಉಳಿದ ಸಮಯದಲ್ಲಿ ಅದನ್ನು ಸಂಪರ್ಕಿಸುವ ಅವಶ್ಯಕತೆ ಕಂಡು ಬಂದಿಲ್ಲ.

ಆಯುಶ್ ಇಲಾಖೆಯ ಪ್ರಕಾರ 600 ವಿವಿಧ ಗಿಡಮೂಲಿಕೆಗಳು, 52 ಖನಿಜಗಳು, 50 ಪ್ರಾಣಿ ಉಪಪದಾರ್ಥಗಳು ಈ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲ್ಪಡುತ್ತವೆ. ಕಾರಣ ಯಾರು ಬೇಕಾದರೂ ಸುಲಭವಾಗಿ ರಹದಾರಿ ಪಡೆದು ಈ ಉತ್ಪನ್ನಗಳನ್ನು ತಯಾರಿಸಬಹುದು. ಅನೇಕ ಸಲ ಲೇಬಲ್ಲಿನ ಮೇಲೆ ಬರೆದ ಗಿಡ ಮೂಲಿಕೆ ಹಾಕಿರುವರೋ ಇಲ್ಲವೋ ಎಂಬುದೂ ಖಚಿತ ಪಡಿಸಿಕೊಳ್ಳಲು ಸಾಧ್ಯವಿಲ್ಲ.

ಅಲೋಪತಿ ಔಷಧಗಳ ತಯಾರಿಕೆ ವಿಷಯದಂತೆ ಉತ್ತಮ ತಯಾರಿಕಾ ವಿಧಾನ (ಜಿಎಮ್ ಪಿ)ದಲ್ಲಿ ಉತ್ಪನ್ನಗಳ ತಯಾರಿಕೆ ಕಡ್ಡಾಯವಲ್ಲ. ಉತ್ಪನ್ನ ಕಳಪೆಯೆಂದಾದರೆ ದೂರು ನೀಡಬಹುದಾದರೂ ಸಹ ಅನೇಕ ಪದಾರ್ಥಗಳು ಒಂದು ಉತ್ಪನ್ನದಲ್ಲಿ ಇರುವುದರಿಂದ ಮತ್ತು ಇವೆಲ್ಲವು ಅದರಲ್ಲಿ ಇದೆಯೇ ಎಂಬುದನ್ನು ಅಳೆಯಲು ಯಾವುದೇ ಪ್ರಮಾಣೀಕೃತ ಪ್ರಯೋಗ ಪದ್ದತಿಗಳಿಲ್ಲ. ಇದರಿಂದ ಬಹುತೇಕ ತಯಾರಿಕೆದಾರರಲ್ಲಿ ಈ ಕಾನೂನಲ್ಲಿರುವ ಈ ಎಲ್ಲ ಕಂದಕ ಗಮನಿಸಿ ಮೋಸ ಮಾಡಲು ದಾರಿ ಮಾಡಿಕೊಟ್ಟಿದೆ ಎಂದರೆ ತಪ್ಪಾಗಲಾರದು.

ಇತ್ತೀಚಿನ ದಿನಗಳಲ್ಲಿ ಅತ್ಯಂತ ಚರ್ಚೆಗೊಳಗಾದ ವಿಷಯವೆಂದರೆ ಈ ಗಿಡಮೂಲಿಕೆ ಉತ್ಪನ್ನಗಳನ್ನು ಔಷಧಿಯೆಂದು ಪರಿಗಣಿಸಬೇಕೆ ? ಅಥವಾ ಪರಂಪರಾಗತವಾಗಿ ಬಂದವೆಂಬ ಕಾರಣದಿಂದ ಅವುಗಳ ವಿಷಗುಣದ ಬಗ್ಗೆ ಪರೀಕ್ಷೆ ನಡೆಸುವುದು ಬೇಡವೇ? ಎಂಬ ಬಗ್ಗೆ. ಇದರ ಕುರಿತು ಚೈನ ಗಿಡಮೂಲಿಕೆ ಉತ್ಪನ್ನಗಳನ್ನು ಜಾಸ್ತಿ ಬಳಸುವ ಚೈನಾದ ವಿಜ್ಞಾನಿಗಳದ್ದು ಈ ನಿಟ್ಟಿನಲ್ಲಿ ಪ್ರತ್ಯೇಕ ಹೇಳಿಕೆ ನಮ್ಮ ಗಮನ ಸೆಳೆಯುತ್ತದೆ. ಅವರು “ ನಮ್ಮ ಗಿಡಮೂಲಿಕೆ ಉತ್ಪನ್ನಗಳನ್ನು ಔಷಧಿ ಎಂದುಕೊಂಡರೆ ಅವುಗಳನ್ನು ಪಾಶ್ಚಿಮಾತ್ಯ ಪದ್ದತಿಗಳ ಪ್ರಕಾರವೇ ಕಠಿಣ ಪರೀಕ್ಷೆಗೊಳಪಡಿಸಬೇಕು” ಎನ್ನುತ್ತಾರೆ.

ಇವುಗಳು ಸುರಕ್ಷಿತ ಎನ್ನುವುದು ಉತ್ಪ್ರೇಕ್ಷೆಯಿಂದ ಹೇಳುವ ಹೇಳಿಕೆ. ಗಿಡಮೂಲಿಕೆ ಉತ್ಪನ್ನಗಳು ಉತ್ಪನ್ನಗಳು ಎನ್ನುವುದಾದರೆ ಓಇಸಿಡಿ ನಿಯಮಗಳ ಪ್ರಕಾರವೇ ಅವುಗಳ ಪರೀಕ್ಷೆ ನಡೆಯುವುದರಲ್ಲಿ ತಪ್ಪೇನಿದೆ?” ಎಂಬುದು.ಎಲ್ಲಾ ಔಷಧಿಗಳೂ ಅವುಗಳದೇ ಆದ ಅಡ್ಡಪರಿಣಾಮ ಹೊಂದಿವೆ. “ಔಷಧಿ ಎರಡೂ ಕರೆ ಕುಯ್ಯುವ ಗರಗಸ ಇದ್ದ ಹಾಗೇ. ಅದು ರೋಗವನ್ನು ವಾಸಿ ಮಾಡಬಲ್ಲದು. ಹಾಗೆಯೇ ಮನುಜನ ಶರೀರಕ್ಕೆ ಹಾನಿಯನ್ನೂ ಉಂಟು ಮಾಡಬಲ್ಲದು” ಎಂದು ಆಂಗ್ಲ ಗಾದೆಯಲ್ಲಿ ಹೇಳಲಾಗಿದೆ.

ಆದರೆ ಭಾರತೀಯರಲ್ಲಿ ಇದಕ್ಕೆ ಭಿನ್ನಾಭಿಪ್ರಾಯವಿದೆ. “ನಮ್ಮ ಪದ್ಧತಿ ಬಹಳ ಪುರಾತನವಾದದ್ದು. ಇದಕ್ಕೆ 5000 ವರ್ಷಗಳ ಇತಿಹಾಸವಿದೆ. ಇದನ್ನು ಅಲೋಪತಿ ಪದ್ಧತಿಯಲ್ಲಿ ಪರೀಕ್ಷೆಗೆ ಒಳಪಡಿಸುವುದು ಸರಿಯಲ್ಲ” ಎಂಬುದು. ಇದಕ್ಕೆ ತದ್ವಿರುದ್ಧವಾಗಿ ಒಂದಷ್ಟು ಜನ. ನಮ್ಮದು ಪುರಾತನ ಪದ್ಧತಿ ಎನ್ನುವುದು ಸರಿ. ಆದರೆ ಪುರಾತನ ಪದ್ಧತಿಯಾಗಿ ಇದು ಈಗ ಉಳಿದಿಲ್ಲ. ಬಹುತೇಕ ವಾಣಿಜ್ಯೀಕರಣವಾಗಿದೆ. ಲಾಭಕ್ಕಾಗಿಯೇ ಕೆಲವು ಕಂಪನಿಗಳು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಅವುಗಳಿಗೆ ಕಠಿಣ ಪರೀಕ್ಷೆಗಳ ಕಡಿವಾಣ ಹಾಕಲೇಬೇಕು” ಎನ್ನುತ್ತಾರೆ ಅನೇಕರು.

ಇದಕ್ಕೆ ಅನೇಕ ಉದಾಹರಣೆಗಳನ್ನು ಅವರು ನೀಡುತ್ತಾರೆ. ಗಿಡಮೂಲಿಕೆಗಳನ್ನು ಹೊಂದಿದೆ ಎನ್ನಲಾಗುವ ಸೋಪುಗಳು, ಮುಲಾಮುಗಳು ಮೈಗೆ ಹಚ್ಚಿದ ಕೂಡಿದ ಕೂಡಲೇ ಅಲರ್ಜಿಯನ್ನುಂಟು ಮಾಡುವುದು, ಕೆಲವೊಂದು ಗಿಡಮೂಲಿಕೆಗಳ ಪ್ರಮಾಣ ಜಾಸ್ತಿಯಾದರೆ ಅದು ವಿಷಕಾರಿಯಾಗಬಲ್ಲದು ಎನ್ನುತ್ತಾರೆ. ಇವುಗಳಲ್ಲಿ ತಲೆನೋವು, ತಲೆ ತಿರುಗುವಿಕೆ, ಚರ್ಮದ ಮೇಲೇಳುವ ಸಣ್ಣ ಸಣ್ಣ ಕೆಂಪು ಗುಳ್ಳೆಗಳು ಸೇರಿರುತ್ತವೆ.

ಉದಾಹರಣೆಗೆ ಅಮೇರಿಕಾದ ಎಫ್ ಡಿ ಎ ಇದು2004 ರಲ್ಲಿ ಚೀನಾ ಮತ್ತು ಭಾರತದಿಂದ ಆಮದಾಗುವ ದೇಹತೂಕವನ್ನು ಕಡಿಮೆ ಮಾಡಲು ಬಳಸುವ ಎಫಿಡ್ರಾ ಗಿಡಮೂಲಿಕೆಯನ್ನು ಹೊಂದಿದ ಎಲ್ಲಾ ಉತ್ಪನ್ನಗಳನ್ನು ಬ್ಯಾನ್ ಮಾಡಿತು. ಕಾರಣ ಇಷ್ಟೇ. ಈ ಎಫಿಡ್ರಾ ಸಿನಿಕಾ ಎಂಬ ಗಿಡದ ಬಹುತೇಕ ಭಾಗಗಳಲ್ಲಿ ಎಫಿಡ್ರಿನ್ ಮತ್ತು ಅಂಫೆಟಮೈನ್ ಎಂಬ ಔಷಧಿ ಇದ್ದು ಇದು ನರಮಂಡಲದ ಉದ್ರೇಕಿಸಿ ವಿಷವನ್ನುಂಟು ಮಾಡಿ ಸುಮಾರು 155 ಜನರನ್ನು ಮುಗಿಸಿತು ಎಂದು ಎಫ್ ಡಿ ಏ ವಾದ.

ಒಂದು ಗಿಡಮೂಲಿಕೆ ಮೂಲದ ಉತ್ಪನ್ನಗಳು ಸುರಕ್ಷಿತವೆಂದು ಎಲ್ಲರಿಂದ ಪರಿಗಣಿಸಲ್ಪಡುವುದಾದರೂ, ಮುಂಜಾಗ್ರತೆಯು ಅಗತ್ಯವಾಗಿದೆ. ಒಂದು ವಸ್ತುವಿನ ಲೇಬಲ್‌ನಲ್ಲಿ “ನೈಸರ್ಗಿಕ” ಎಂದು ಬರೆಯಲ್ಪಟ್ಟಿದ್ದ ಮಾತ್ರಕ್ಕೆ ಮುಂಜಾಗ್ರತೆ ವಹಿಸುವುದನ್ನು ಅಲಕ್ಷಿಸಬಾರದು. “ಸುರಕ್ಷಿತ” ಎಂಬುದು ಈ ಉತ್ಪನ್ನಗಳ ವಿಷಯದಲ್ಲಿ ಒಂದು ನಂಬಿಕೆ ಅಷ್ಟೇ. ಯಾವುದೂ ವೈಜ್ಞಾನಿಕ ಪದ್ಧತಿಯಲ್ಲಿ ಸಿದ್ಧವಾಗಿಲ್ಲ. ಇದರಲ್ಲಿ ವನಸ್ಪತಿಗಳ ಪ್ರಮಾಣ ಬಹಳ ಕಡಿಮೆ ಇರುವುದರಿಂದ ಇವುಗಳು ತುಂಬಾ ಸುರಕ್ಷಿತ ಎಂಬುದು ಹಲವರ ನಂಬಿಕೆ.

ಕೆಲವು ಗಿಡಮೂಲಿಕೆಗಳ ಉತ್ಪನ್ನಗಳ ವಿಷಯದಲ್ಲಿ ಇದು ನಿಜ ಕೂಡಾ. ಆದರೆ ಜೀವನದಲ್ಲಿ ನಂಬಿಕೆ ಹೊರತು ನಂಬಿಕೆಯೇ ಜೀವನವಾಗಬಾರದು. ಈ ಗಿಡಮೂಲಕ ಉತ್ಪನ್ನಗಳನ್ನು ಪ್ರಿಕ್ಲಿನಿಕಲ್ ಅಡ್ಡಪರಿಣಾಮಗಳ ಪರೀಕ್ಷೆಗೆ ಒಡ್ಡಲೇಬೇಕೆನ್ನುವುದು ನಿಜ.

ಒಂದು ವಿಚಾರ. ಇಷ್ಟೆಲ್ಲಾ ಇದ್ದರೂ ಈ ಗಿಡಮೂಲಿಕೆ ಔಷಧಿಗಳ ದರ ಸಾಮಾನ್ಯ ಜನರ ಕೈಗೆಟಕುವ ಹಾಗೆ ಇವೆಯೇ? ಖಂಡಿತಾ ಇಲ್ಲ. ಬಹುತೇಕ ಕಂಪನಿಗಳು ತಯಾರಿಸುವ “ನೈಸರ್ಗಿಕ” ಉತ್ಪನ್ನಗಳ ಬೆಲೆ ಸಾಮಾನ್ಯರಿಗೆ ಗಗನ ಕುಸುಮ. ಅಲ್ಪ ಸ್ವಲ್ಪ ಸಂಶೋಧನೆಗಾಗಿ ಮತ್ತು ಧಾರಾಳವಾಗಿ ಜಾಹಿರಾತಿಗಾಗಿ ಹಣ ಖರ್ಚು ಮಾಡುವ ಪ್ರತೀಷ್ಠಿತ ಗಿಡಮೂಲಿಕಾ ಉತ್ಪನ್ನಗಳ ತಯಾರಿಕಾ ಕಂಪನಿಗಳ ಉತ್ಪನ್ನಗಳ ಬೆಲೆಯಂತೂ ಸಾಮಾನ್ಯರ ಪಾಲಿಗೆ ಮುಗಿಲ ಮಲ್ಲಿಗೆ. ಹಾಗಿದ್ದರೆ ಯಾವ ರೀತಿಯಲ್ಲಿ ಈ ಉತ್ಪನ್ನಗಳು ಒಳ್ಳೆಯವು? ಉಪಯೋಗಿಸುವವರೇ ಈ ಕುರಿತು ವಿಚಾರ ಮಾಡಬೇಕು.

ಒಂದು ದೇಶಕ್ಕೆ ಸೀಮಿತವಾಗಿರದೇ ಜಗತ್ತಿನ ಸುಮಾರು 56 ದೇಶಗಳಲ್ಲಿ ಜನರ ದೈನಂದಿನ ಬದುಕಿನಲ್ಲಿ ಉಪಯೋಗುತ್ತಿರುವ ವನಸ್ಪತಿ ಗಿಡಮೂಲಿಕೆಗಳ ಉತ್ಪನಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಈ ಉತ್ಪನ್ನಗಳ ಬಗ್ಗೆ ವಿಶ್ವ ಮಟ್ಟದ ಮಾನದಂಡ, ಸಮಯೋಚಿತ ಉಪಯೋಗ, ಗುಣಮಟ್ಟ ಕಾಯ್ದುಕೊಳ್ಳುವಿಕೆ, ವನಸ್ಪತಿಗಳ ಉತ್ತಮ ತಳಿ ಬೀಜಗಳ ಲಭ್ಯತೆ, ಇವುಗಳ ಉತ್ತಮ ಕೃಷಿ ಪದ್ದತಿ, ಕಟಾವಣೆ ಪದ್ಧತಿ, ಶೇಖರಣಾ ಪದ್ಧತಿ, ಸಂಸ್ಕರಣೆ, ಕಚ್ಚಾ ವಸ್ತು ಮತ್ತು ವಾಣಿಜ್ಯ ಉತ್ಪನ್ನಗಳ ಕನಿಷ್ಠ ದರ ನಿಗದಿ ಮಾಡುವಿಕೆ, ವಾಣಿಜ್ಯ ಉತ್ಪಾದನೆ ಇವುಗಳ ಬಗ್ಗೆ ಗಮನ ಹರಿಸಿ ಜಾಗತಿಕ ಮಾನದಂಡ ರೂಪಿಸಬೇಕಾದ ಅವಶ್ಯಕತೆಯಿದೆ. “ವಿಶ್ವಗುರು” ಎಂದು ಕರೆಸಿಕೊಳ್ಳಲು ಉತ್ಸುಕವಾದ ಭಾರತವೇ ಈ ನಿಟ್ಟಿನಲ್ಲಿ ನಾಯಕತ್ವವಹಿಸಿ ಮೂಲಿಕೆ ಮದ್ದುಗಳನ್ನು ಮಾರಾಟಮಾಡಲು ಕಠಿಣ ನಿಯಮ ತಂದು ಅಗ್ನಿಪರೀಕ್ಷೆಗೆ ಒಡ್ಡಿ ಪುಟವಿಟ್ಟ ಬಂಗಾರದಂತೆ ಹೊರಬಂದು ಜನರ ಆರೋಗ್ಯದ ರಕ್ಷಣೆ ಮಾಡಲಿ ಎಂಬುದೇ ಈ ಲೇಖನದ ಉದ್ದೇಶ.

ಆಕರ ವೈಜ್ಞಾನಿಕ ಲೇಖನಗಳು

1. BENT, S. 2008. Herbal medicine in the United States: Review of efficacy, safety, and regulation: Grand rounds at University of California, San Francisco Medical Center. Journal of General Internal Medicine, 23(6):854-859.

2. JUNHUA ZHANG, IGHO J. ONAKPOYA, PAUL POSADZKI and MOHAMED EDDOUKS.2015. The Safety of Herbal Medicine: From Prejudice to Evidence. Evidence-Based Complementary and Alternative Medicine, 15 (2): 231-234.

3. LEE, M. K. , CHENG, B. W. H. , CHE, C. T. AND HSIEH, D. P. H. 2006. Cytotoxicity assessment of Ma-Huang (Ephedra) under different conditions of preparation. Toxicological Sciences, 56(2): 424-430

4. NIHARIKA SAHOO and PADMAVATI MANCHIKANTI, 2013. Herbal Drug Regulation and Commercialization. An Indian Industry Perspective. The Journal of Alternative and Complementary Medicine, 19(12):957-963

5. Ramawat, K.G. and Goyal, S.2008. The Indian Herbal Drugs Scenario in Global Perspectives. Bioactive Molecules and Medicinal Plants. 5(1):1-25

6. The Drugs and Cosmetics Act, 1940 and Drugs and Cosmetics (Amendments) Act, 2019. Ministry of Health and Family Welfare. Department of Health. Government of India. Updated till 30th April, 2019. pp 452-545.

7. World Health Organization. 1998. Regulatory Situation of Herbal Medicines A Worldwide Review. https://apps.who.int/medicinedocs/pdf/whozip57e/whozip57e.pdf

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ತಂತ್ರಜ್ಞಾನ ಮೋಡಿ : ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

Published

on

  • ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ

90ರ ದಶಕದಿಂದೀಚೆಗೆ, ಎಲ್ಲೆಡೆ ಸದ್ದಿಲ್ಲದೇ ಕ್ರಮೇಣ ಒಕ್ಕರಿಸತೊಡಗಿದೆ ಆಧುನಿಕ ಯಾಂತ್ರಿಕೃತ ಬದುಕು.

ಜನಸಾಮಾನ್ಯರ ಅರಿವಿನ-ಪರಿಧಿ ತಿಳಿಗೊಳ್ಳುವುದರ ಮೊದಲೇ ಊಹಿಸಲಾರದಷ್ಟು ಮಟ್ಟಿಗೆ ಇಂದು, ಸ್ವಚ್ಛಂದ ಹಳ್ಳಿ-ಸೊಬಗಿನ ಕೂಡು-ಕುಟುಂಬದ, ಮೈ-ಮನಸ್ಸು ತುಂಬಿದ, ಪರಿಶುದ್ಧ ಜೀವನ ಪ್ರೀತಿ, ಉತ್ಸಾಹ, ಮಮತೆಯನ್ನು ಇನ್ನಿಲ್ಲವಾಗಿಸಿದೆ ಎನಿಸುತ್ತದೆಯಲ್ಲವೆ?

ಹೇಗೆಂದರೆ, ಕಲ್ಪಿಸಿಕೊಂಡರೂ ಕಣ್ಣೆದುರಿಗೆ ತೆರೆದಿಡುವ ಅಮೂಲ್ಯ ಬದುಕು, ಅದೆಷ್ಟು ಬೇಗ ದಿಕ್ಕು-ದೆಸೆಯಿಲ್ಲದೆ ಕಣ್ಣು-ಕಟ್ಟಿದ ಸ್ಪರ್ಧೆಗಿಳಿದ ಕುದುರೆಯಂತೆ ಅಲೆಯುವಂತಾಗಿದೆ! ಅರೆಕ್ಷಣ, ಮೈಮನ ಕಸಿವಿಸಿಗೊಳ್ಳುತ್ತೆ! ಜೀವ ಮರುಗುತ್ತೆ. ಮತ್ತೆ ಮತ್ತೆ ಆ ಬಾಲ್ಯ, ಹಳ್ಳಿ ಬದುಕನ್ನ ಅರಸಿ ಬಯಸುತ್ತೆ! ಜನತೆ, ಹಳ್ಳಿಯಲ್ಲಿನ ಗಿಡ-ಮರ, ಪಶು-ಪಕ್ಷಿ, ಹಳ್ಳ-ಕೊಳ್ಳ, ಬೆಟ್ಟ-ಗುಡ್ಡ ಮುಂತಾದ ಪರಿಸರದ ಸಕಲ ಜೀವಿಗಳೊಂದಿಗೆ ಒಂದಾಗಿ ನಲ್ಮೆಯಿಂದ ಪರಿಶುದ್ಧ ಮನದಿ, ಭೂ ತಾಯಿ, ತಿಳಿ-ನೀಲಿ ಆಗಸ, ಮಳೆ, ಗಾಳಿ, ಬೆಳಕನ್ನ ಇನ್ನಿಲ್ಲದೆ ಅಪ್ಪಿ, ಅತ್ಯಂತ ಸಂತಸ-ಖುಷಿಯಿಂದ, ಇರುವ ಪರಿಸ್ಥಿತಿಗೆ ಒಗ್ಗಿ , ಬದುಕು ರೂಪಿಸಿಕೊಂಡು ಜೀವನೋತ್ಸಾಹ ತಳೆಯುತ್ತಿದ್ದರು.

ನಿಜ ಹೇಳಬೇಕೆಂದರೆ, ಪರಿಸರವೇ ಪಾಠ; ಭೂ ತಾಯಿಯೇ ಹಾಸಿಗೆ; ಆಗಸವೇ ಹೊದಿಕೆಯಾಗಿ, ದುಡಿದ, ದಣಿವರಿದ ಮನದಿ, ಕಣ್ತುಂಬಿ ನೆಮ್ಮದಿಯ ನಿಟ್ಟುಸಿರುಗೈವ ಕ್ಷಣಗಳು ಅದಾಗಿತ್ತು!

ಹಳ್ಳಿಯಲ್ಲಿನ ಆಟೋಟಗಳು, ತಮಾಷೆಯ ಕ್ಷಣಗಳು, ಆಟಿಕೆಗಳು, ಸಾಮಾನುಗಳು, ಹಬ್ಬ-ಹರಿದಿನಗಳು, ಜಾತ್ರೆ-ಸಂತೆಗಳು, ಒಕ್ಕಲು ಸಮಯದ ಸುಗ್ಗಿಯ ಮಧುರ ಕ್ಷಣಗಳು ಇತ್ಯಾದಿ ಜನತೆಯ ಮುಗ್ಧ -ಮನಸ್ಸು ಮತ್ತು ಹೊಳೆವ ಮುಖದಲ್ಲಿ, ನಿಷ್ಕಲ್ಮಶ ಮಂದಹಾಸ ಮೂಡಿಸಿ, ಬೆಲೆ ಕಟ್ಟಲಾಗದ ಖುಷಿಯ ಕ್ಷಣಗಳನ್ನು ಸದಾ ಅವರಲ್ಲಿ ಕಂಗೊಳಿಸುತ್ತಿದ್ದವು.

ಎಲ್ಲರೂ ದುಡಿವವರು; ಎಲ್ಲರೂ ಭಾಗಿಯಾಗುವವರು; ಎಲ್ಲರೊಳಗೊಂದಾಗಿ ಬಾಳುವವರು; ಎಲ್ಲರಲ್ಲೂ ಧನ್ಯತಾ ಭಾವ; ಆದರಣೀಯತೆ, ಪೂಜ್ಯತಾ-ಭಾವ ತುಂಬಿತ್ತು! ಅಂತಃಕರಣೆ, ಕರುಣೆ, ಪ್ರೀತಿ-ವಿಶ್ವಾಸ, ತಕ್ಕಮಟ್ಟಿಗೆ ಮಾನವೀಯತೆ ಬದುಕ-ಪ್ರೀತಿ ಹೆಚ್ಚಿಸಿತ್ತು!

ಈಗಾಗಲೇ, ನಾವು ಯಾವ ಸ್ಥಿತಿ ತಲುಪಿದ್ದೇವೆಂದರೆ: ಶಾಲಾ ರಜೆಯ ದಿನಗಳಲ್ಲಿ, ಈಗಿನ ಮಕ್ಕಳಿಗೆ ಆ ಕಾಲದ ಹಳ್ಳಿಗಳ ಜೀವನ ಪರಿಚಯಿಸಲು ಗೊಟಗೋಡಿಯ ರಾಕ್ ಗಾರ್ಡನ್ – ಹಾವೇರಿ, ಹೆರಿಟೇಜ್ ವಿಲೇಜ್ – ಮಣಿಪಾಲ, ಅಲ್ಲಲ್ಲಿ ಸಾರ್ವಜನಿಕ ಉದ್ಯಾನವನ, ಹಾಗೂ ಇತರೆ ಕೆಲವು ಮ್ಯೂಸಿಯಮ್ ಗಳತ್ತ ಮುಖ ಮಾಡಿಬೇಕೆ ಹೊರತು ನೈಜ ಚಿತ್ರಣ ಪ್ರಸ್ತುತ ಹಳ್ಳಿಗಾಡಿನಲ್ಲೂ ಕಾಣಸಿಗದು! ಸ್ವತಃ ಹಳ್ಳಿಗರೇ ಪರಿತಪಿಸುವ ಸ್ಥಿತಿ.

ಕಾರಣ ಇಷ್ಟೆ: ತಂತ್ರಜ್ಞಾನದ ಆವಿಷ್ಕಾರ ಮತ್ತು ಎಲ್ಲ ಕ್ಷೇತ್ರಗಳಲ್ಲೂ ಹೊಕ್ಕಿರುವ ಅದರ ಗಾಢವಾದ ಛಾಯೆ. ಇಡೀ ‘ಪ್ರಪಂಚವೇ ಒಂದು ಹಳ್ಳಿ’ (Global Village) ಯಾಗಿ ಮಾರ್ಪಟ್ಟಿರುವ ಭಾವನೆ. ವಿಶೇಷವಾಗಿ, ದೂರವಾಣಿ, ಇಂಟರ್ನೆಟ್, ಯುಟ್ಯೂಬ್, ನೇರ ಮೆದುಳಿಗೆ ಕೈ ಹಾಕಿರುವ ಸಾಮಾಜಿಕ ಜಾಲತಾಣಗಳ ಡ್ರಗ್ಸ್ ರೀತಿಯ ಮಾನಸಿಕ ಮೋಹ ಬೆಂಬಿಡದೆ ಇಂದಿನ ಆಧುನಿಕ ಜನತೆಯ ಚಿಂತನಾರ್ಹ ಯೋಚನಾ ಶಕ್ತಿ, ಆರೋಗ್ಯ , ಕೌಟುಂಬಿಕ ಮೌಲ್ಯಗಳು, ಮಾನವೀಯ ಗುಣಗಳು ಹಾಗೂ ಒಟ್ಟಾರೆ ಜೀವನ ಶೈಲಿಯನ್ನೇ ಅಕ್ಷರಸಃ ನುಂಗಿಹಾಕಿವೆ! ಅಲ್ಲದೆ, ಇದು ಇಂದಿನ ಅನಿವಾರ್ಯವೆಂಬಂತೆ ಕಠೋರ ಸನ್ನಿವೇಶ ಹುಟ್ಟುಹಾಕಿವೆ.

ಒಂದೆಡೆ, ‘ಅತೀಯಾದ ಅಮೃತವೂ ವಿಷ’ವೆನ್ನುವಂತೆ, ಹಾಗೂ ಊಟದಲ್ಲಿ ‘ರುಚಿಗೆ ತಕ್ಕಷ್ಟು ಉಪ್ಪಿ’ರುವಂತೆ ಹಲವು ಒಳಿತು-ಕೆಡುಕಗಳ ನಡುವೆ ಎಲ್ಲವೂ ಹಿತಮಿತವಾಗಿ ಬಳಕೆಯಲ್ಲಿದ್ದರೆ ಚೆನ್ನ. ಅಲ್ವೇ? ಮೈ ಮನ ಆರೋಗ್ಯಕರವಾಗಿರುತ್ತೆ; ಜೀವನ ಉತ್ಸಾಹದಿಂದ ಕೂಡಿರುತ್ತೆ.
ಜೊತೆಗೆ, ಇತ್ತೀಚೆಗೆ ಜಗತ್ತಿನೆಲ್ಲೆಡೆ ಭಾರೀ ಸಂಚಲನ ಸೃಷ್ಟಿಸಿರುವ ‘ಕೃತಕ ಬುದ್ಧಿಮತ್ತೆ’ (Artificial Intelligence – AI) ಹಾಗೂ ‘ಬಯೋಚಿಪ್’ ತಂತ್ರಜ್ಞಾನಗಳು. ಈ ಎರಡೂ ತಂತ್ರಜ್ಞಾನಗಳು ಬಹುತೇಕ ಮನುಷ್ಯನನ್ನ ಸಹ ಒಂದು ಸರಕಾಗಿ ನೋಡುವ ದೂರದೃಷ್ಟಿ ಹೊಂದಿವೆ ಎಂದರೆ ತಪ್ಪಾಗಲಿಕ್ಕಿಲ್ಲ! ತೀರ ಇತ್ತೀಚೆಗೆ, ತಂತ್ರಜ್ಞಾನ ಜಗತ್ತಿನ ಹೆಸರಾಂತ ಉದ್ಯಮಿ: ಎಲಾನ್ ಮಸ್ಕ್ ತಮ್ಮ ‘ನ್ಯೂರಾಲಿಂಕ್’ (Neuralink) ಸಂಸ್ಥೆಯ ಮೂಲಕ ಪ್ರಪಂಚದ ಮೊಟ್ಟ ಮೊದಲ ಪ್ರಯತ್ನವಾಗಿ ಆರೋಗ್ಯವಂತ ವ್ಯಕ್ತಿಯೊಬ್ಬರ ಮೆದುಳಿನಲ್ಲಿ ಪ್ರಾಯೋಗಿಕ – ‘ಮೊದಲ ಬಯೋಚಿಪ್’ ಅಳವಡಿಸಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ! ಇದುವರೆಗೂ, ಮೊಬೈಲ್ ನಲ್ಲಿ ಕೇವಲ ‘ಮೆಮೊರಿ ಕಾರ್ಡ್’ ಬಳಸಿ, ಅದರಲ್ಲಿ ಸಂಗ್ರಹಿಸಿದ ಮಾಹಿತಿ ಬೇಕೆಂದಾಗ ಆಲಿಸುವ, ನೋಡುವ ಪರಿಪಾಠದ ಪರಿಚಯವಿದ್ದ ನಮಗೆ, AI ಹಾಗೂ Biochip ತಂತ್ರಜ್ಞಾನಗಳ ಅವತಾರಗಳು ಊಹೆಗೂ ಮೀರಿದ್ದು ಅನ್ಸುತ್ತೆ ಕೂಡ.

ಆಗ, ಜಗತ್ತು ಹೇಗಿರಬೇಡ? ತಂತ್ರಜ್ಞಾನ ತೊರೆದು ಮನುಷ್ಯ, ಜೀವನ ಕಲ್ಪಿಸಿಕೊಳ್ಳಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಅದು, ಕೇವಲ ಮನುಷ್ಯನ ಅವಶ್ಯಕತೆಗಳಿಗೆ ಪೂರಕವಾಗಿರಬೇಕೆ ಹೊರತು; ಆತನನ್ನ ಆಳುವ ಸ್ಥಿತಿ ತಲುಪಬಾರದು! ಮುಂದಿನ ದಿನಗಳಲ್ಲಿ, ಮನುಷ್ಯ ಎದುರಿಸಬಹುದಾದ ಭಯಾನಕ ತಂತ್ರಜ್ಞಾನ ಸಂಕೋಲೆಗಳನ್ನು ಕುರಿತು ಚರ್ಚಿಸುವ ಅಗತ್ಯ ಇಂದಿನ ತುರ್ತು ಅನಿವಾರ್ಯ. ಆದರೆ, ಎಲ್ಲವೂ ಸಲೀಸಾಗಿ ಕೈಗೆಟುಕುವ ಇಂದಿನ ದಿನಗಳಲಿ, ಅತಿಯಾಗಿ ಮಿತಿಮೀರಿರುವ ಅನುಕೂಲಗಳು ಅಮೂಲ್ಯ ಖುಷಿಯ ಕ್ಷಣಗಳನ್ನು ಎಂದಿಗೂ ನೀಡಲಾರವು.

ಬದಲಿಗೆ, ಪ್ರತಿಷ್ಠೆಯ ಹೆಮ್ಮರಗಳಾಗಿ, ಜನತೆ ನಾಲ್ಕು ದಿನದ ಈ ಬಾಳಲಿ ಏನೋ ಬಹುದೊಡ್ಡ ಸಾಧನೆಗೈದವರಂತೆ, ಯಂತ್ರಮಾನವರಂತೆ ಬೀಗುವವರೆ!!? ಮೂಲಭೂತವಾಗಿ, ಮಾನವ ಸಹಿತ ಸಕಲ ಜೀವ-ಸಂಕುಲವೂ ವಾಸಯೋಗ್ಯ ಸ್ವಚ್ಛಂದ ಭೂಮಿ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಭೂಮಿಯಲ್ಲಿ, ಮಣ್ಣಿನ ಫಲವತ್ತತೆ ಹಾಗೂ ನೀರು ಸಂರಕ್ಷಿಸದೆ; ಗಿಡ-ಮರ ಬೆಳೆಸದೆ; ಹಸಿರು ಹೆಚ್ಚಿಸದೆ, ಮತ್ತು ಪರಿಸರ ಸಮತೋಲನ ಕಾಪಾಡದೆ; ಕೇವಲ ತಂತ್ರಜ್ಞಾನ ತಲೆಯಲಿ ಹೊತ್ತು, ಮನುಷ್ಯ ಉತ್ತಮ ಆಹಾರ, ಆರೋಗ್ಯ ಮತ್ತು ಜೀವನ ಕಟ್ಟಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ. ಸಮರೋಪಾದಿಯಲ್ಲಿ, ಜನತೆ ಸ್ವ ಇಚ್ಛೆಯಿಂದ ಹಳ್ಳಿ-ಹಳ್ಳಿಗಳಿಂದ, ನಗರಗಳು, ಬೆಟ್ಟ-ಗುಡ್ಡಗಳಲ್ಲೆಡೆ ಬೃಹತ್ ಸಂಖ್ಯೆಯಲ್ಲಿ ಸಸಿಗಳನ್ನ ನೆಟ್ಟು, ಪಾಲನೆ-ಪೋಷಣೆಗೈಯ್ಯುವ ಚಳುವಳಿ ರೂಪದ ಆಂದೋಲನ ದೇಶಾದ್ಯಂತ ಅತ್ಯಂತ ತ್ವರಿತವಾಗಿ ಕೈಗೂಡಬೇಕು. ಈ ನಿಟ್ಟಿನಲ್ಲಿ, ಎಲ್ಲರೂ ಕೈಜೋಡಿಸಬೇಕು.

(ಲೇಖಕರು : ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ನಿಷೇಧ : ಸಚಿವ ದಿನೇಶ್ ಗುಂಡೂರಾವ್

Published

on

ಸುದ್ದಿದಿನ, ಬೆಂಗಳೂರು : ಕೃತಕ ಬಣ್ಣ ಬಳಸಿದ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ನಿಷೇಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಆದಾಗ್ಯೂ, ಬಣ್ಣ ಹಾಗೂ ರಾಸಾಯನಿಕ ಹಾಕದೇ ಇರುವ ಈ ತಿನಿಸುಗಳ ಮಾರಾಟಕ್ಕೆ ನಿರ್ಬಂಧ ಇಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರಿಗೂ ಅಚ್ಚುಮೆಚ್ಚಾದ ಈ ಎರಡು ತಿನಿಸುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ಬಳಸುವ ಕೃತಕ ಬಣ್ಣಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಇರುವುದು ಪರೀಕ್ಷೆಗಳಿಂದ ದೃಢಪಟ್ಟಿದೆ ಎಂದರು. ರಾಜ್ಯದ ಹಲವೆಡೆ ಬೀದಿಬದಿಯ ಗಾಡಿಗಳು, ಹೋಟೆಲ್‌ಗಳಲ್ಲಿ ತಯಾರಿಸಿದ ಗೋಬಿ ಮಂಚೂರಿ ತಿನಿಸಿನ 171ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 107ಮಾದರಿಗಳಲ್ಲಿ ಅಸುರಕ್ಷಿತ ರಾಸಾಯನಿಕಗಳು ಪತ್ತೆಯಾಗಿರುವುದು ಆತಂಕಕಾರಿಯಾಗಿದೆ ಎಂದರು.

ಕೃತಕ ಬಣ್ಣಗಳಲ್ಲಿರುವ ರೋಡೊಮೈನ್-ಬಿ ಮತ್ತು ಟಾಟ್ರಝೀನ್ ರಾಸಾಯನಿಕಗಳು ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು ಎನ್ನುವ ಅಂಶ ತಿಳಿದುಬಂದಿದೆ. ಬಣ್ಣ ಹಾಕಿದ ಗೋಬಿಮಂಚೂರಿ ಮತ್ತು ಕಾಟನ್‌ಕ್ಯಾಂಡಿಗಳನ್ನು ಮಾರಾಟ ಮಾಡುವವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಏಳು ವರ್ಷದರೆಗೆ ಜೈಲು ಶಿಕ್ಷೆ, 10 ಲಕ್ಷ ರೂಪಾಯಿವರೆಗೆ ದಂಡ ಅಥವಾ ಜೀವಾವಧಿ ಶಿಕ್ಷೆಗೂ ಅವಕಾಶವಿದೆ ಎಂದು ಸಚಿವರು ಎಚ್ಚರಿಕೆ ನೀಡಿದರು.

ಹೇಳಿಕೆ


  • ಬಣ್ಣ ಹಾಕಿರುವ ಈ ಎರಡು ತಿನಿಸುಗಳನ್ನು ಸೇವಿಸಬಾರದು ಎಂದು ಸಾರ್ವಜನಿಕರಿಗೂ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಲ್ಲದೇ, ಕಬಾಬ್, ಪಾನಿಪೂರಿ ಮೊದಲಾದ ತಿನಿಸುಗಳಲ್ಲೂ ಕೃತಕ ಬಣ್ಣಗಳ ಬಳಕೆ ಆಗುತ್ತಿದೆಯೇ ಎಂದು ಪರಿಶೀಲಿಸಲಾಗುತ್ತಿದೆ.

            | ಸಚಿವ ದಿನೇಶ್ ಗುಂಡೂರಾವ್


ಟ್ವೀಟ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ನೀಲಿ ಪರ್ವತಗಳ ನಾಡಿನಲ್ಲಿ ಕೀಚಕರ ಹಾವಳಿ

Published

on

Unidentified miscreants torch two houses belonging to a particular community to retaliate the killing of nine civilians by Kukis in Manipur. (Photo: PTI)
  • ಡಾ. ಸಿದ್ದಯ್ಯ ರೆಡ್ಡಿಹಳ್ಳಿ

ಗತ್ತಿನ ಪ್ರತಿ ಜನಾಂಗವು ತನ್ನ ಪೂರ್ವಜರ ಪ್ರತಿಭೆ ಹಾಗೂ ಹಿರಿಮೆಯನ್ನು ಹೇಳಿಕೊಳ್ಳಲು ಕಾತರಿಸುತ್ತದೆ. ಅದರಂತೆಯೇ ನಮ್ಮ ಭರತ ಖಂಡದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ವಾಸಿಸುವ ಮಣಿಪುರಿ ಜನರು ಕ್ರಿಸ್ತಪೂರ್ವದಲ್ಲಿಯೇ ಅತ್ಯಾಧುನಿಕ ಸಾಮ್ರಾಜ್ಯವನ್ನು ಕಟ್ಟಿದ್ದರಂತೆ ಎಂದು ಹೇಳಿಕೊಳ್ಳುತ್ತಾರೆ.

ನಿಜ ಮಣಿಪುರಿಗಳು ಬೆಟ್ಟಗಳ ನಡುವೆ ಬೆಚ್ಚನೆಯ ಜೀವನವನ್ನು ಸಾಗಿಸಿದವರು. ಆದರೆ ಅಲ್ಲಿ ಕೊಳ್ಳಿ ಇಡುವ ಕೆಲಸಗಳು ಬಹಳ ಹಿಂದಿನಿಂದಲೇ ಪ್ರಾರಂಭವಾಗಿರುವುದು ತಿಳಿದುಬರುತ್ತದೆ. ವಾಸ್ತವದಲ್ಲಿ ಹಲವು ಬುಡಕಟ್ಟುಗಳ ಸಂಮಿಶ್ರಣವೇ ಮಣಿಪುರವಾಗಿದೆ. ಆದರೆ ಮಣಿಪುರಿಗಳು ಮಾತ್ರ ಈ ನೆಲದ ಮೂಲ ನಿವಾಸಿಗಳು, ಅವರಿಗೆ ಮಾತ್ರ ಸಕಲ ಸೌಕರ್ಯಗಳು ಸಿಗಬೇಕು, ಉಳಿದವರು ರಾಜ್ಯ ಬಿಡಬೇಕು ಎಂದು ಉಯಿಲ್ಲೆಬ್ಬಿಸುತ್ತಿರುವವರು ಯಾರು? ಪ್ರತಿಯೊಂದು ಬುಡಕಟ್ಟು ಜನಾಂಗಕ್ಕೆ ಇರುವಂತೆ ಹೇರಳವಾದ ಜಾನಪದ ಕಥೆ, ಪುರಾಣ ಮತ್ತು ದಂತಕಥೆಗಳ ಸಂಪತ್ತು ಇಲ್ಲಿನ ಬುಡಕಟ್ಟು ಜನಾಂಗಗಳಿಗೂ ಇದೆ.

ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ವಾಸಿಸುತ್ತಿದ್ದ ಜನರನ್ನು ಮಿತೇಯಿ ಅಥವಾ ಮೈತೇಯಿ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಮಣಿಪುರವು ಬಾಂಗ್ಲಾದ ಗುಡ್ಡುಗಾಡು ಜಿಲ್ಲೆಗಳಲ್ಲಿ ಒಂದಾಗಿತ್ತು. ಭಾರತ ಸ್ವಾತಂತ್ರ್ಯಗೊಂಡು ಎರಡು ವರ್ಷ ಎರಡು ತಿಂಗಳು ಕಳೆದ ನಂತರ ಅಂದರೆ ಅಕ್ಟೋಬರ್ 15, 1949ರಂದು ಭಾರತದೊಂದಿಗೆ ಏಕೀಕೃತವಾಯಿತು.

ಮಣಿಪುರದಲ್ಲಿ ಅಂತರ-ಜನಾಂಗೀಯ ಹಿಂಸಾಚಾರವು ಇದೇ ಮೊದಲೇನಲ್ಲ, ಇದಕ್ಕೆ ಸುದೀರ್ಘವಾದ ಇತಿಹಾಸವಿದೆ. ಮಣಿಪುರಿಗಳ ಅತಿರೇಕ ಎಲ್ಲಿಯವರೆಗೆ ಹೋಗಿತ್ತು ಎಂದರೆ 1964ರಲ್ಲಿ ಭಾರತದಿಂದ ಬಿಡುಗಡೆ ಹೊಂದಿ, ಹೊಸ ದೇಶವನ್ನು ಸೃಷ್ಟಿಸಿಕೊಳ್ಳಬೇಕು ಎಂದು ದಂಗೆಯನ್ನು ಎಬ್ಬಿಸಲಾಗಿತ್ತು. ಇದರಲ್ಲಿ ಹಲವಾರು ಗುಂಪುಗಳು ಕೂಡಿಕೊಂಡಿದ್ದವು. ಅವರಿಗೆ ಅವರದೇ ಆದ ಗುರಿಗಳು ಇದ್ದುದರಿಂದ ಈ ದಂಗೆ ವಿಫಲವಾಯಿತು.

ಚೀನಾ ದೇಶದ ಕುಮ್ಮಕ್ಕಿನಿಂದಾಗಿ ‘ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್’ ಮತ್ತು ‘ಪೀಪಲ್ಸ್ ಲಿಬರೇಶನ್ ಆರ್ಮಿಗಳು’ ಹುಟ್ಟಿಕೊಂಡವು. ಇವರು ಶಸ್ತ್ರಾಸ್ತ್ರ ತರಬೇತಿಯನ್ನು ಹೊಂದಿ, ಬ್ಯಾಂಕ್ ದರೋಡೆಗಳನ್ನು ಮಾಡುವುದು, ಪೊಲೀಸ್ ಅಧಿಕಾರಿಗಳ ಮೇಲೆ ಮತ್ತು ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡುವುದು ಇಂತಹ ಕೃತ್ಯಗಳನ್ನು ಮಾಡತೊಡಗಿದರು. 1980 ರಿಂದ 2004ರವರೆಗೂ ಭಾರತ ಸರ್ಕಾರ ಮಣಿಪುರವನ್ನು ಪ್ರಕ್ಷÄಬ್ದ ಪ್ರದೇಶ ಎಂದು ಉಲ್ಲೇಖಿಸಿತ್ತು.

ಈ ಸಂದರ್ಭದಲ್ಲಿ ‘ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ’ಯನ್ನು ಜಾರಿಗೆ ತರಲಾಯಿತು. ಈ ಕಾಯಿದೆಯ ಪ್ರಕಾರ ಖಾಸಗಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕೆಟ್ಟವರ್ತನೆಗಳನ್ನು ಮಾಡುತ್ತಿದ್ದರೆ, ಯಾವುದೇ ವಾರಂಟ್‌ಗಳಿಲ್ಲದೆ ಬಂಧಿಸಬಹುದಾಗಿತ್ತು. ಕಾನೂನುಗಳನ್ನು ಉಲ್ಲಂಘಿಸುವ, ಶಸ್ತ್ರಾಸ್ತ್ರಗಳನ್ನು ಹೊಂದಿರುವವರನ್ನು ಅಥವಾ ದೊಡ್ಡ ದೊಡ್ಡ ಗುಂಪುಗಳಲ್ಲಿ ಸೇರಿದ್ದವರನ್ನು ಗುಂಡಿಕ್ಕಿ ಕೊಲ್ಲುವ ಅವಕಾಶವನ್ನು ಮಿಲಿಟರಿಗೆ ಕೊಡಲಾಗಿತ್ತು. ಮಿಲಿಟರಿಯ ಪರವಾಗಿರುವ ಈ ಕಾನೂನು ಅನಿಯಂತ್ರಿತ ಹತ್ಯೆಗಳು, ಚಿತ್ರಹಿಂಸೆ, ಕ್ರೂರ ಅಮಾನವೀಯತೆ, ಅಪಹರಣದಂತಹ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಯಿತು.

ಈ ಮಾನವ ವಿರೋದಿ ಮಿಲಿಟರಿ ಕಾನೂನಿನ ವಿರುದ್ಧ ಹಲವಾರು ಪ್ರತಿಭಟನೆಗಳು, ಹೋರಾಟಗಳು ಜರುಗಿದವು. ಇರೋಮ್ ಶರ್ಮಿಳಾ ಚಾನು ಎಂಬ ದಿಟ್ಟ ಮಹಿಳೆ ದೀರ್ಘಾವಧಿಯ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದಳು. ಆದರೂ 2004ರಲ್ಲಿ ಸ್ಥಳೀಯ ಮಹಿಳೆಯರ ಮೇಲೆ ಹಿಂಸಾತ್ಮಕ ದಾಳಿಯನ್ನು ನಡೆಸಲಾಯಿತು. ಇದಕ್ಕೆ ಪ್ರತಿರೋಧವಾಗಿ ಪ್ರತಿಭಟನೆಗಳು ತೀವ್ರಮಟ್ಟಕ್ಕೆ ತಲುಪಿದಾಗ ಸರ್ಕಾರವು ಮಣಿಪುರದಲ್ಲಿದ್ದ ಗೊಂದಲದ ಸ್ಥಿತಿಯನ್ನು ತೆಗೆದುಹಾಕಿತು.

ಮಣಿಪುರವು ನೀಲಿ ಪರ್ವತಗಳಿಂದ ಸುತ್ತುವರೆದಿರುವ ನಾಡಾಗಿದೆ. ಈ ಪರ್ವತ ಶ್ರೇಣಿಗಳು ತಣ್ಣನೆಯ ಗಾಳಿಯನ್ನು ಮಣಿಪುರಿಗಳಿಗೆ ತಲುಪದಂತೆ ತಡೆಯುತ್ತವೆ. ಆದರೆ ಮಣಿಪುರಿಗಳಲ್ಲಿಯೇ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ಅವುಗಳಿಗೆ ಸಾಧ್ಯವೇ!? ಅವುಗಳು ಚಂಡಮಾರುತದ ಬಿರುಗಾಳಿಗಳನ್ನು ತಡೆಯಬಹುದು, ಆದರೆ ಅವರಲ್ಲಿರುವ ಮೌಢ್ಯವನ್ನು ತೊಡೆದುಹಾಕಲು ಸಾಧ್ಯವೇ?!
ಮಣಿಪುರ ರಾಜ್ಯವು ಉತ್ತರಕ್ಕೆ ನಾಗಾಲ್ಯಾಂಡ್, ದಕ್ಷಿಣಕ್ಕೆ ಮಿಜೋರಾಂ, ಪಶ್ಚಿಮಕ್ಕೆ ಅಸ್ಸಾಂ ಮತ್ತು ಪೂರ್ವಕ್ಕೆ ಮಯನ್ಮಾರ್ ದೇಶದ ಗಡಿಯನ್ನು ಹೊಂದಿದೆ.

ಮಣಿಪುರದಲ್ಲಿ ಮಳೆಗೆ, ನೀರಿಗೆ ಕೊರತೆಯಿಲ್ಲ. ಇದರ ಪಶ್ಚಿಮಕ್ಕೆ ಬರಾಕ್ ನದಿಯ ಜಲಾನಯನ ಪ್ರದೇಶ, ಪೂರ್ವದಲ್ಲಿ ಯು ನದಿಯ ಜಲಾನಯನ ಪ್ರದೇಶ, ಉತ್ತರದಲ್ಲಿ ಲಾನ್ಯೆ ನದಿಯ ಜಲಾನಯನ ಪ್ರದೇಶ, ಮಧ್ಯದಲ್ಲಿ ಮಣಿಪುರ ನದಿಯ ಜಲಾನಯನ ಪ್ರದೇಶವನ್ನು ಹೊಂದಿ ಸಮೃದ್ಧವಾಗಿರುವಂತೆ, ಅಲ್ಲಿನ ಮಹಿಳೆಯರು ಧಾರಾಕಾರವಾಗಿ ಕಣ್ಣೀರನ್ನು ಸುರಿಸುತ್ತಿದ್ದಾರೆ. ಇಲ್ಲಿನ ಮಹಿಳೆಯರ ಕಣ್ಣೀರಿಗೆ ಮೊದಲನ್ನು ಗುರುತಿಸುವುದಕ್ಕೆ, ಕೊನೆಯನ್ನು ಗ್ರಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.

ಮಣಿಪುರದ ಅತಿದೊಡ್ಡ ನದಿ ಬರಾಕ್. ಇದು ಇರಾಂಗ್, ಮಕು ಮತ್ತು ತುವೈ ಉಪನದಿಗಳನ್ನು ಹೊಂದಿ ಅಸ್ಸಾಂ ರಾಜ್ಯವನ್ನು ಪ್ರವೇಶಿಸುತ್ತದೆ. ಮಣಿಪುರ ನದಿಯ ಜಲಾನಯನ ಪ್ರದೇಶವು ಮಣಿಪುರ, ಇಂಫಾಲ್, ಇರಿಲ್, ನಂಬುಲ್, ಸೆಕ್ಮೆಂ, ಚಕ್ಪಿ, ತೌಬಲ್ ಮತ್ತು ಖುಗಾ ಎಂಬಂತಹ ಎಂಟು ನದಿಗಳನ್ನು ಹೊಂದಿದೆ. ಈ ಎಲ್ಲಾ ನದಿಗಳು ಸುತ್ತಮುತ್ತಲಿನ ಬೆಟ್ಟಗಳಿಂದಲೇ ಹುಟ್ಟಿಕೊಂಡಿವೆ. ಈ ನದಿಗಳ ಒಳಹರಿವಿನ ಮರ್ಮ ನಮ್ಮ ರಾಜಕಾರಣಿಗಳ ಮರ್ಮದಂತೆ ಯಾರಿಗೂ ತಿಳಿಯದಂತಹ ಕಗ್ಗಂಟಾಗಿದೆ. ನದಿಯು ತಣ್ಣಗಿದ್ದು, ಒಂದೇ ಭಾರಿ ಬೋರ್ಗರೆದು ತಣ್ಣಗಾಗುವಂತೆ ನಮ್ಮ ಪ್ರಧಾನಮಂತ್ರಿಗಳು ಮೂರು ತಿಂಗಳ ಕಾಲ ದಿವ್ಯ ಮೌನವಾಗಿದ್ದು, ಜನರ ನಿತ್ಯ ಜೀವನವು ಅಲ್ಲೋಲ-ಕಲ್ಲೋಲ ಆದಮೇಲೆ ತಣ್ಣಗೆ ಮಾತನಾಡಿದ್ದಾರೆ.

ಆದರೆ ಅಲ್ಲಿಗೆ ಹೋಗುವ ಧೈರ್ಯವನ್ನು ಮಾಡಿಲ್ಲ. ಚುನಾವಣೆ ಇದ್ದರೆ ಹತ್ತು-ಹದಿನೈದು ಬಾರಿ ರೋಡ್-ಶೋ ಮಾಡುವ ಇವರು ಕಷ್ಟದ ಕಾಲದಲ್ಲಿ ಆ ಕಡೆ ತಿರುಗಿಯು ನೋಡದೇ ಇರುವುದು ಭಾರತೀಯರು ಪಶ್ಚಾತ್ತಾಪಪಡುವಂತೆ ಮಾಡಿದೆ.
ಮಣಿಪುರವನ್ನು ಭೌತಿಕ ಲಕ್ಷಣಗಳಲ್ಲಿ ವಿಭಿನ್ನವಾಗಿರುವ ಎರಡು ವಿಭಿನ್ನ ಭೌತಿಕ ಪ್ರದೇಶಗಳಾಗಿ ನಿರೂಪಿಸಬಹುದು. ಒಂದು ಒರಟಾದ ಬೆಟ್ಟಗಳು, ಕಿರಿದಾದ ಕಣಿವೆಗಳ ಹೊರ ಪ್ರದೇಶ ಮತ್ತೊಂದು ಸಮತಟ್ಟಾದ ಬಯಲಿನ ಒಳ ಪ್ರದೇಶ. ಇಲ್ಲಿನ ಕಣಿವೆ ಪ್ರದೇಶವು ಸಮತಟ್ಟಾದ ಮೇಲ್ಮೈ ಮೇಲೆ ಏರುತ್ತಿರುವ ಬೆಟ್ಟಗಳು ಮತ್ತು ದಿಬ್ಬಗಳಿಂದ ಕೂಡಿದೆ.

ಇಲ್ಲಿನ ಲೋಕ್ಟಾಕ್ ಸರೋವರವು ಕೇಂದ್ರ ಬಯಲಿನಿಂದ ನಾಗಾಲ್ಯಾಂಡ್‌ನ ಗಡಿಯವರೆಗೂ ತನ್ನ ವಿಸ್ತಾರವನ್ನು ಹರಡಿಕೊಂಡಿದೆ. ಇಲ್ಲಿನ ಮಣ್ಣಿನ ಹೊದಿಕೆಗೂ ಗಂಡು-ಹೆಣ್ಣಿನ ಸಂಬಂಧಕ್ಕೂ ನಿಕಟವಾದ ಹೋಲಿಕೆ ಇರುವಂತೆ ಕಂಡುಬರುತ್ತದೆ. ಬೆಟ್ಟದ ಪ್ರದೇಶದಲ್ಲಿ ಕೆಂಪು ಫೆರುಜಿನಸ್ ಮಣ್ಣು ಮತ್ತು ಕಣಿವೆಯಲ್ಲಿ ಮೆಕ್ಕಲು ಮಣ್ಣು ಇದೆ. ಕಣಿವೆಯ ಮಣ್ಣು ಇಲ್ಲಿನ ಗಂಡಿನ ರೀತಿಯಲ್ಲಿ ಕಠಿಣವಾಗಿದ್ದರೆ, ಕಡಿದಾದ ಇಳಿಜಾರುಗಳಲ್ಲಿರುವ ಮಣ್ಣು ಹೆಣ್ಣಿನಂತೆ ಹೆಚ್ಚಿನ ಸವೆತಕ್ಕೆ ಒಳಗಾಗಿದೆ, ಒಳಗಾಗುತ್ತಿದೆ. ಇದರ ಪರಿಣಾಮವಾಗಿ ಬಂಜರು ಬಂಡೆಗಳ ಇಳಿಜಾರುಗಳು ಸೃಷ್ಟಿಯಾಗುವಂತೆ ಅಲ್ಲಿನ ಪುರುಷರ ಮನಸ್ಸುಗಳು ಬಂಡೆಯಂತೆ ಆಗುತ್ತಿರುವುದು ಖೇದಕರವಾದ ಸಂಗತಿಯಾಗಿದೆ.

ಬೆಟ್ಟದ ತಪ್ಪಲಿನಲ್ಲಿ ರತ್ನಗಂಬಳಿಯನ್ನು ಹಾಸಿಹೊದಿಸಿರುವಂತೆ ಕಾಣುವ ಫ್ಲೋರಾ ಹೂವುಗಳು ಅಲ್ಲಿನ ಬುಡಕಟ್ಟು ಮಹಿಳೆಯರ ಸೌಂದರ್ಯವನ್ನು ಬಿತ್ತರಿಸಿದರೆ, ಬೆಟ್ಟಗಳು ಪುರುಷಾಂಕಾರದಂತೆ ಕಾಣುತ್ತವೆ. ಇಲ್ಲಿ ಏನಿಲ್ಲ ಹೇಳಿ, ನೈಸರ್ಗಿಕವಾದ ಸಸ್ಯವರ್ಗವಿದೆ. ನಾಲ್ಕು ರೀತಿಯ ವಿಶಾಲವಾಗಿ ಹರಡಿರುವ ಉಷ್ಣವಲಯದ ಅರೆ-ನಿತ್ಯಹರಿದ್ವರ್ಣ, ಒಣ ಸಮಶೀತೋಷ್ಣ ಅರಣ್ಯ, ಉಪ-ಉಷ್ಣವಲಯದ ಪೈನ್ ಕಾಡುಗಳು ಮತ್ತು ಉಷ್ಣವಲಯದ ತೇವಾಂಶವುಳ್ಳ ಅರಣ್ಯಗಳಿವೆ. ತೇಗ, ಪೈನ್, ಓಕ್, ಯುನಿಂಗ್ದೌ, ಲಿಹಾವೊ, ಬಿದಿರಿನ ಮರಗಳಿವೆ. ತಮ್ಮ ಕಷ್ಟಗಳ ನಡುವೆಯೂ ರಬ್ಬರ್, ಟೀ, ಕಾಫಿ, ಕಿತ್ತಳೆ, ಏಲಕ್ಕಿ ಬೆಳೆಯುತ್ತಾರೆ. ಆದರೆ ಅವರು ಹೆಚ್ಚು ಬೆಳೆಯುವ ಮತ್ತು ಇಷ್ಟಪಡುವ ಅಕ್ಕಿಯಂತೆ ಅಲ್ಲಿನ ಪುರುಷರ ಮನಸ್ಸುಗಳು ಬೇಗನೇ ಹಾಳಾಗುತ್ತಿರುವುದು ಜಾತಿ, ಧರ್ಮಗಳೆಂಬ ಕೀಟಗಳಿಂದ ಎಂಬುದನ್ನು ಅವರು ತಿಳಿಯದಿರುವುದು ದುರದೃಷ್ಟಕರ.

ಮಣಿಪುರ ಮತ್ತು ನಾಗಾಲ್ಯಾಂಡ್‌ಗಳ ಗಡಿಗಳ ನಡುವೆ ಇರುವ ಝುಕೊ ಎಂಬ ಕಣಿವೆಯು ಸಮಶೀತೋಷ್ಣ ಹವಾಮಾನವನ್ನು ಹೊಂದಿರುವಂತೆ, ಅಲ್ಲಿನ ಜನರಿಗೆ ಸಮಚಿತ್ತತೆಯನ್ನು ನೀಡಿದ್ದರೆ ಚೆನ್ನಾಗಿರುತ್ತಿತ್ತು. ಭಾರತದ ಈಶಾನ್ಯ ಮೂಲೆಯು ಸಾಮಾನ್ಯವಾಗಿ ಸೌಹಾರ್ದಯುತವಾದ ಹವಾಮಾನವನ್ನು ಹೊಂದಿದೆ. ಆದರೆ ಅಲ್ಲಿನ ಜನರು ಸೌಹಾರ್ದಯುತವಾದ ಮನೋಭಾವನೆಯನ್ನು ಹೊಂದಿಲ್ಲ. ಅಲ್ಲಿನ ವಾತಾವರಣದಂತೆ ಚಳಿಗಾಲದಲ್ಲಿ ಚಳಿ ಹೆಚ್ಚಾಗಿರುವಂತೆ, ಬೇಸಿಗೆಯಲ್ಲಿ ಬಿಸಿಲು ಗರಿಷ್ಠ ಮಟ್ಟಕ್ಕೆ ಹೋಗುವಂತೆ ಅಲ್ಲಿನ ಜನರು ಆವೇಶಕ್ಕೊಳಗಾಗುತ್ತಾರೆ.
ಇಂಫಾಲದ ಮೈತೇಯಿ ಜನರು ವಾರ್ಷಿಕ ಸರಾಸರಿ 933 ಮಿಲಿಮೀಟರ್ ಮಳೆಯನ್ನು ಪಡೆಯುತ್ತಾರೆ. ಆದರೂ ಕೂಡ ತಮ್ಮದೇ ನೆಲದಲ್ಲಿರುವ ಕುಕಿ ಜನಾಂಗದ ಮಹಿಳೆಯರು ಕಣ್ಣೀರು ಸುರಿಸುವಂತೆ ನಡೆದುಕೊಳ್ಳುತ್ತಾರೆ.

ನೈರುತ್ಯ ಮಾನ್ಸೂನ್ ಮಾರುತಗಳು ಬಂಗಾಳಕೊಲ್ಲಿಯಿAದ ತೇವಾಂಶವನ್ನು ಎತ್ತಿಕೊಂಡು ಪೂರ್ವ ಹಿಮಾಲಯ ಶ್ರೇಣಿಗಳ ಕಡೆಗೆ ಹೋಗುವಾಗ ಈ ಪ್ರದೇಶದಲ್ಲಿ ಮಳೆಯಾಗುವಂತೆ ಪ್ರಕೃತಿಯೇ ನೋಡಿಕೊಂಡರೂ ಮಹಿಳೆಯರ ಕಣ್ಣೀರು ಮಾತ್ರ ಧಾರಾಕಾರವಾಗಿ ಹರಿಯುವಂತೆ ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣಿಗಳು ನೋಡಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಮಣಿಪುರದಲ್ಲಿ ಹವಾಮಾನದಲ್ಲಿ ಬದಲಾವಣೆ ಹೆಚ್ಚಾಗುತ್ತಿದೆ. ಉದಾಹರಣೆಗೆ ಮಳೆ ಮತ್ತು ತಾಪಮಾನದಲ್ಲಿ ತೀವ್ರ ಬದಲಾವಣೆಗಳು ಹೆಚ್ಚಾಗುತ್ತಿವೆ. ಆದರೆ ಅಲ್ಲಿನ ಜನಾಂಗಗಳ ನಡುವಿನ ಬಾಂಧವ್ಯದ ಬದ್ಧತೆಗಳು ಏರುಪೇರಾಗುತ್ತಿರುವುದು ಸಾಕಷ್ಟು ಹಿಂದಿನಿAದಲೇ ನಡೆಯುತ್ತಿರುವುದು ಮನುಷ್ಯ ಸಂಬಂಧಗಳ ನಡುವೆ ಬಿರುಕು ಮೂಡಿರುವುದರ ದ್ಯೋತಕವಾಗಿದೆ. ಕಣಿವೆ ಅಥವಾ ಬಯಲು ಪ್ರದೇಶಗಳಲ್ಲಿ ಮೈತೇಯಿ ಮಾತನಾಡುವ ಅಂದರೆ ಮಣಿಪುರಿ ಭಾಷಿಕರು ನೆಲೆಸಿದ್ದಾರೆ. ಬೆಟ್ಟಗಳಲ್ಲಿ ನಾಗಾಗಳು, ಕುಕಿಗಳು ಮೊದಲಾದ ಸಣ್ಣ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಇವರು ಬೆಟ್ಟಗಳ ಮೇಲ್ಮೈ ಮಣ್ಣಿನಂತೆ ಮೈತೇಯಿ ಜನರ ಹಾವಳಿಗೆ ಕೊಚ್ಚಿ ಹೋಗುತ್ತಿದ್ದಾರೆ. ಅಲ್ಲಿ ಮೈತೇಯಿ ಭಾಷೆಯು ಮಣಿಪುರಿ ಭಾಷೆಗೆ ಸಮಾನಾರ್ಥಕವಾಗಿ ಬಳಕೆಯಾಗುತ್ತಿರುವುದರಿಂದ ಇಲ್ಲಿನ ಬಹುಪಾಲು ಜನಸಂಖ್ಯೆ ಮೈತೇಯಿಯರೇ ಎಂದು ಕರೆಸಿಕೊಂಡಿದ್ದಾರೆ.

ಇವರು ಮಣಿಪುರದ ಮುಖ್ಯ ಜನಾಂಗ ಎಂಬುದೇನೋ ಸರಿ. ಆದರೆ ನಾಗಾ ಮತ್ತು ಕುಕಿ ಬುಡಕಟ್ಟು ಜನಾಂಗಗಳನ್ನು ಹಲವಾರು ಬುಡಕಟ್ಟು ಜನಾಂಗಗಳಾಗಿ ವಿಂಗಡಿಸಲಾಗಿದೆ. ಇವರೆಲ್ಲರೂ ಒಗ್ಗಟ್ಟಾಗಿದ್ದರೆ ನಮ್ಮ ಬೇಳೆ ಬೇಯ್ಯುವುದಿಲ್ಲ ಎಂಬ ಸಾಂಸ್ಕೃತಿಕ ರಾಜಕಾರಣವು ವ್ಯವಸ್ಥಿತವಾಗಿ ಬಹಳ ಹಿಂದಿನಿAದಲೇ ಇವರನ್ನು ಹೊಡೆದು ಹೊಡೆದು ಹಾಳುತ್ತಿದೆ.
ಮಣಿಪುರದಲ್ಲಿ ಮೇ 4ರಂದು ಜರುಗಿದ ಇಬ್ಬರು ಮಹಿಳೆಯರ ಸಾಮೂಹಿಕ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆಯು ಜುಲೈ 20ರಂದು ಹೊರ ಜಗತ್ತಿಗೆ ತಿಳಿಯಿತು. ಈ ಘಟನೆಯು ಪ್ರಪಂಚದ ಜನರನ್ನು ತಲ್ಲಣಗೊಳಿಸಿತು.

ಇಡೀ ಜಗತ್ತೇ ಈ ಕೃತ್ಯವನ್ನು ವಿರೋಧಿಸಿದರೂ ಕೂಡ, ಒಟ್ಟು ದೇಶವನ್ನೇ ತನ್ನ ಕುಟುಂಬ ಎಂದು ಕರೆದುಕೊಳ್ಳುವ ನಮ್ಮ ಪ್ರಧಾನಿಗಳು ಬೆಂಕಿ ಹೊತ್ತಿಕೊಂಡ ಮೂರು ತಿಂಗಳು ದಿವ್ಯ ಮೌನದಿಂದ ಇದ್ದರು ಎಂಬುದನ್ನು ಜಗತ್ತು ಮರೆಯುತ್ತದೆಯೇ? 140 ಕೋಟಿ ಜನರು ನನ್ನ ಕುಟುಂಬಸ್ಥರೇ ಎಂದು ಹೇಳಿಕೊಳ್ಳುವ ಪ್ರಧಾನಿಗಳು ಅದರಲ್ಲಿ ಮಹಿಳೆಯರೂ ಇದ್ದಾರೆ ಎಂಬುದನ್ನು ಮರೆತಿದ್ದಾರೆಯೇ!? ಒಟ್ಟಾರೆ ನಮ್ಮ ಪ್ರಧಾನಿಗಳ ಮೌನ, ಮೈತೇಯಿ ಮತಾಂಧರ ಆರ್ಭಟ ಕುಕಿ ಜನಾಂಗದ ಮಹಿಳೆಯರ ಬದುಕನ್ನು ಮೂರಾಬಟ್ಟೆ ಮಾಡಿರುವುದಂತೂ ಖಚಿತ.

(ಡಾ. ಸಿದ್ದಯ್ಯ ರೆಡ್ಡಿಹಳ್ಳಿ, 9449899520)

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending