ದಿನದ ಸುದ್ದಿ
ಆರ್ಥಿಕ ಹಿಂಜರಿತದ ಬಿರು ಮೋಡಗಳು ದಟ್ಟೈಸುತ್ತಿವೆ
- ನವ ಉದಾರವಾದವೇ ಅವಸಾನದ ಅಂಚಿನಲ್ಲಿದೆ. ಅದರ ಹಿಡಿತಕ್ಕೆ ಒಳಪಟ್ಟಿರುವ ಭಾರತದ ಅರ್ಥವ್ಯವಸ್ಥೆಯಲ್ಲಿ ಹಾಲಿ ಪರಿಸ್ಥಿತಿಯನ್ನು ಬದಲಿಸುವಂತಹ ಆಂತರಿಕ ಮಾರುಕಟ್ಟೆ ಆಧರಿತ ಯಾವ ಬದಲಿ ಆರ್ಥಿಕ ಆಳ್ವಿಕೆವೂ ಮುಂದೆ ಬರುತ್ತಿಲ್ಲ. ಹಾಗಾಗಿ, ಭಾರತದ ಅರ್ಥವ್ಯವಸ್ಥೆಯು ಒಂದು ತ್ರಿಶಂಕು ಸ್ಥಿತಿಯಲ್ಲಿದೆ. ಆದರೆ, ನವ ಉದಾರವಾದವು ತನ್ನ ಅಂತ್ಯವನ್ನು ತಲುಪಿದೆ ಎಂಬ ಅರಿವು ಮೋದಿ ಸರ್ಕಾರಕ್ಕೆ ಇದ್ದಂತಿಲ್ಲ. ನವ ಉದಾರವಾದಕ್ಕೆ ಮುಂದಕ್ಕೆ ಸಾಗಲು ದಾರಿ ಕಾಣದಾಗಿರುವಾಗ ಮೋದಿ ಸರ್ಕಾರಕ್ಕೆ ಅದನ್ನು ಧಿಕ್ಕರಿಸುವ ನೀತಿಗಳನ್ನು ಅನುಸರಿಸುವ ಧೈರ್ಯವಿಲ್ಲ. ಆದ್ದರಿಂದ, ಕೈಗಾರಿಕಾ ಹಿಂಜರಿತವು ಉಲ್ಬಣಗೊಳ್ಳುವ ಸಂಭವವಿದೆ.
ಜೂನ್ 2013 ರ ನಂತರ, ಕೈಗಾರಿಕಾ ಉತ್ಪಾದನೆಯ ಸೂಚ್ಯಂಕದಲ್ಲಿ ಮೊದಲ ಬಾರಿಗೆ 2019ರ ಮಾರ್ಚ್ನಲ್ಲಿ ಅದರ ಹಿಂದಿನ ಮಾರ್ಚ್ಗೆ ಹೋಲಿಸಿದರೆ 0.1% ಇಳಿಕೆಯಾಗಿದೆ. ಹಿಂದಿನ ನವೆಂಬರ್, ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಕಂಡ ತುಸು ಏರಿಕೆಯ ನಂತರ ಸೂಚ್ಯಂಕದಲ್ಲಿ ಇಳಿಕೆಯಾಗಿದೆ. ಇತ್ತೀಚಿನ ಅವಧಿಯಲ್ಲಿ ಕೈಗಾರಿಕಾ ಬೆಳವಣಿಗೆ ಮಂದವಾಗುತ್ತಿದೆ ಎಂಬ ಅಂಶವನ್ನು ಈ ಅಂಕಿಗಳು ಗಟ್ಟಿಯಾಗಿಯೇ ದೃಢಪಡಿಸುತ್ತವೆ.
ಈ ಸೂಚ್ಯಂಕದಲ್ಲಿ, 77.6 ಗಣನೆ ಹೊಂದಿರುವ ತಯಾರಿಕಾ ವಲಯದ ಬೆಳವಣಿಗೆಯು 2019ರ ಮಾರ್ಚ್ನಲ್ಲಿ ಅದರ ಹಿಂದಿನ ಮಾರ್ಚ್ಗೆ ಹೋಲಿಸಿದರೆ 0.4% ಇಳಿದಿದೆ. ತಯಾರಿಕಾ ವಲಯದ ಉಪ ವಿಭಾಗಗಳಾದ ಮೂಲ ವಸ್ತುಗಳ ಉತ್ಪಾದನೆಯಲ್ಲಿ 8.7%ಗೃಹ ಬಳಕೆ ವಸ್ತುಗಳ ಉತ್ಪಾದನೆಯಲ್ಲಿ 5.1%,ಮಧ್ಯವರ್ತಿ ವಸ್ತುಗಳ ಉತ್ಪಾದನೆಯಲ್ಲಿ 2.5%ಇಳಿಕೆಯಾಗಿದೆ ಮತ್ತು ಗೃಹ ಬಳಕೆಯೇತರ ವಸ್ತುಗಳ ಉತ್ಪಾದನೆಯಲ್ಲಿ 0.3% ಏರಿಕೆಯಾಗಿದೆ. ಇಡೀ 2018-19 ವರ್ಷದಲ್ಲಿ ಒಟ್ಟಾರೆ ಆಗಿರುವ 3.6% ಕೈಗಾರಿಕಾ ಉತ್ಪಾದನೆಯ ಬೆಳವಣಿಗೆಯು ಅದರ ಹಿಂದಿನ 2017-18 ವರ್ಷದಲ್ಲಿದ್ದ 4.4% ಬೆಳವಣಿಗೆಗಿಂತಲೂ ಕಡಿಮೆ ಇದೆ. ಹಾಗಾಗಿ, 2018-19 ವರ್ಷದ ಕೊನೆಯ ತಿಂಗಳುಗಳಲ್ಲಿ ಆರ್ಥಿಕ ಹಿಂಜರಿತ ಬಲಿಯಲಾರಂಭಿಸಿತು.
ಒಂದು ರೀತಿಯಲ್ಲಿ ಈ ಹಿಂಜರಿತವು ಅನಿವಾರ್ಯವೇ. ಏಕೆಂದರೆ, ಭಾರತದ ಅರ್ಥವ್ಯವಸ್ಥೆಯು, ವಿಶ್ವದ ಇತರ ಅರ್ಥವ್ಯವಸ್ಥೆಗಳಂತಲ್ಲದೆ, ತ್ರಿಶಂಕು ಸ್ಥಿತಿಗೊಳಗಾಗಿದೆ. ಇದು, ರೋಗ ತಟ್ಟಿದೆ ಎಂಬುದರ ಒಂದು ಸೂಚನೆ. ನವ ಉದಾರವಾದವೇ ಅವಸಾನದ ಅಂಚಿನಲ್ಲಿದೆ. ಅದರ ಹಿಡಿತಕ್ಕೆ ಒಳಪಟ್ಟಿರುವ ಭಾರತದ ಅರ್ಥವ್ಯವಸ್ಥೆಯಲ್ಲಿ ಹಾಲಿ ಪರಿಸ್ಥಿತಿಯನ್ನು ಬದಲಿಸುವಂತಹ ಆಂತರಿಕ ಮಾರುಕಟ್ಟೆ ಆಧರಿತ ಯಾವ ಬದಲಿ ಆರ್ಥಿಕ ಆಳ್ವಿಕೆವೂ ಮುಂದೆ ಬರುತ್ತಿಲ್ಲ. ಹಾಗಾಗಿ, ಭಾರತದ ಅರ್ಥವ್ಯವಸ್ಥೆಯು ಒಂದು ತ್ರಿಶಂಕು ಸ್ಥಿತಿಯಲ್ಲಿದೆ.
ಜಾಗತಿಕ ಅರ್ಥವ್ಯವಸ್ಥೆಯ ಮಂದಗತಿಯ ಪರಿಣಾಮವಾಗಿ ಭಾರತ ಮತ್ತು ಚೀನಾದಂತಹ ಅರ್ಥವ್ಯವಸ್ಥೆಗಳು ಈಗ ನಲುಗುತ್ತಿವೆ. ಈ ದೇಶಗಳ ರಫ್ತು ದರಗಳು ಇಳಿಮುಖವಾಗುತ್ತಿವೆ. ರಫ್ತುಗಳ ಈ ಇಳಿಕೆಯನ್ನು ಸರಿದೂಗಿಸಿಕೊಳ್ಳಲು ಬೇಕಾಗುವ ಮಟ್ಟದಲ್ಲಿ ಆಂತರಿಕ ಮಾರುಕಟ್ಟೆಗಳನ್ನು ಬೆಳೆಸುವ ಕ್ರಮಗಳನ್ನೇ ದೇಶದಲ್ಲಿ ಕೈಗೊಂಡಿಲ್ಲ. ಹಾಗಾಗಿ, ದೇಶದ ಆಂತರಿಕ ಮಾರುಕಟ್ಟೆಯೂ ಕುಗ್ಗುತ್ತಿದೆ.
ಗ್ರಾಮೀಣ ಪರಿಸ್ಥಿತಿಯ ಯಾತನಾಮಯ ಕಾರಣದಿಂದಾಗಿ ಮತ್ತು ರಫ್ತು ದರ ಇಳಿಕೆಯ ಅಡ್ಡ ಪರಿಣಾಮಗಳ ಕಾರಣಗಳಿಂದಾಗಿ ಕೈಗಾರಿಕಾ ಬೆಳವಣಿಗೆ ಕುಂಠಿತವಾಗಿದೆ. ಜೊತೆಗೆ, ವಸೂಲಾಗದ ಸಾಲಗಳು ಹೆಚ್ಚಿದ ಕಾರಣದಿಂದಾಗಿ ಹೊಸ ಸಾಲಗಳು ದುರ್ಲಭವಾಗುತ್ತಿವೆ. ಇದರಿಂದಾಗಿ ಕೈಗಾರಿಕಾ ಬೆಳವಣಿಗೆಗೆ ಹೆಚ್ಚಿನ ಖರ್ಚು ಮಾಡುವುದು ಸಾಧ್ಯವಾಗುತ್ತಿಲ್ಲ. ಅಂದರೆ, ರಫ್ತುಗಳ ಇಳಿಕೆಯು, ಅದನ್ನು ಸರಿದೂಗಿಸಿಕೊಳ್ಳುವ ಮಾತು ಒತ್ತಟ್ಟಿಗಿರಲಿ, ದೇಶದ ಆಂತರಿಕ ಮಾರುಕಟ್ಟೆಯ ಕುಗ್ಗುವಿಕೆಗೂ ಕಾರಣವಾಗಿದೆ.
ಗೃಹ ಬಳಕೆ ವಸ್ತುಗಳ ತಯಾರಿಕೆ ಕುಗ್ಗುತ್ತಿರುವ ಅಂಶವು ದೇಶದ ಆಂತರಿಕ ಮಾರುಕಟ್ಟೆ ಕುಗ್ಗಿರುವ ಅಂಶವನ್ನು ಸ್ಪಷ್ಟಪಡಿಸುತ್ತದೆ. ಮತ್ತು, ಗೃಹ ಬಳಕೆಯೇತರ ವಸ್ತುಗಳ ಉತ್ಪಾದನಾ ವಲಯವು ಎಪ್ರಿಲ್ನಲ್ಲಿ ಅದರ ಹಿಂದಿನ ಎಪ್ರಿಲ್ಗೆ ಹೋಲಿಸಿದರೆ ಸ್ಥಗಿತವಾಗಿತ್ತು. ಅರ್ಥವ್ಯವಸ್ಥೆಯಲ್ಲಿ ಹೂಡಿಕೆ ಇಳಿಯುತ್ತಿದೆ ಎಂಬುದನ್ನು ಅದಾಗಲೇ ಫೆಬ್ರವರಿಯಲ್ಲಿಯೇ ಮೂಲ ಸರಕು ಉತ್ಪಾದನಾ ವಲಯವು ಸ್ಥಗಿತಗೊಂಡಿದ್ದ ಪರಿಸ್ಥಿತಿಯೇ ಸೂಚಿಸುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ ಎರಡು ಬಾರಿ, ಪ್ರತಿ ಸಲವೂ 25 ಮೂಲಾಂಶದಷ್ಟು (ಅಂದರೆ, ಒಟ್ಟು 0.5%) ಬಡ್ಡಿ ದರ ಇಳಿಸಿದೆ. ಈ ಕ್ರಮದಿಂದಾಗಿ ಪರಿಸ್ಥಿತಿ ಹೆಚ್ಚು ಸುಧಾರಿಸುವ ಸಂಭವವಿಲ್ಲ. ಏಕೆಂದರೆ, ಸಾಲದ ಮೇಲಿನ ಬಡ್ಡಿ ದರ ಎಷ್ಟು ಎಂಬುದಕ್ಕಿಂತಲೂ ಸಾಲ ಕೊಡಲು ಬ್ಯಾಂಕ್ಗಳ ಬಳಿ ಎಷ್ಟು ಹಣ ಲಭ್ಯವಿದೆ ಎಂಬುದೇ ಸಾಲ ಕೊಡುವಿಕೆಯನ್ನು ತಡೆ ಹಿಡಿದಿರುವ ಅಂಶ.
ಹಿಂದಿನ ಸಾಲಗಳು ವಸೂಲಾಗದೇ ಉಳಿದ ಕಾರಣದಿಂದಾಗಿ ಬ್ಯಾಂಕ್ಗಳ ಬಳಿ ಹೊಸ ಸಾಲ ಕೊಡಲು ಹಣ ಲಭ್ಯವಿಲ್ಲ. ಒಂದು ವೇಳೆ ಹೊಸ ಸಾಲಗಳು ಲಭ್ಯವಿದ್ದರೂ ಅದರಿಂದ ಪರಿಸ್ಥಿತಿ ಎಷ್ಟರಮಟ್ಟಿಗೆ ಸುಧಾರಿಸುತ್ತಿತ್ತು ಎಂಬುದು ಸ್ಪಷ್ಟವಿಲ್ಲ. ಅದೇನಿದ್ದರೂ, ಸಾಲ ಲಭ್ಯತೆಯೇ ಬಿಗಿತಗೊಂಡಿರುವ ಪರಿಸ್ಥಿತಿಯಲ್ಲಿ ಬಡ್ಡಿ ದರ ಇಳಿಸುವುದರಿಂದಾಗಿ ಸಾಲ ಲಭ್ಯತೆ ಗಣನೀಯ ಎನ್ನುವಷ್ಟು ಹೆಚ್ಚುವುದಿಲ್ಲ.
ಈ ಪರಿಸ್ಥಿತಿಯಲ್ಲಿ ಅಗತ್ಯವಿರುವುದು ಏನೆಂದರೆ, ವಿತ್ತೀಯ ವಿಸ್ತರಣೆ. ಇಡೀ ಈ ವಿಷಯದ ಸಾರಾಂಶ ಇರುವುದು ಇಲ್ಲೇ. ಚುನಾವಣೆಗಳ ಈ ಕಾಲದಲ್ಲಿ, ಗ್ರಾಮೀಣ ಬಡವರಿಗೆ ದೊಡ್ಡ ಮೊತ್ತದ ಹಣವನ್ನು ಅವರ ಖಾತೆಗೆ ನೇರವಾಗಿ ವರ್ಗಾಯಿಸುವ ಭರವಸೆಯನ್ನು ಬೇರೆ ಬೇರೆ ರಾಜಕೀಯ ಪಕ್ಷಗಳು ಕೊಟ್ಟಿವೆ. ಈ ಕಾರ್ಯಕ್ರಮವು ಖಂಡಿತವಾಗಿಯೂ ದೇಶದ ಆಂತರಿಕ ಮಾರುಕಟ್ಟೆಯನ್ನು ವಿಸ್ತರಿಸುತ್ತದೆ ಮತ್ತು ಸೊರಗುತ್ತಿರುವ ಕೈಗಾರಿಕೆಗಳ ಉತ್ಪಾದನೆಗೆ ಚೈತನ್ಯ ತುಂಬುತ್ತದೆ. ಮೋದಿ ಸರ್ಕಾರವು ತನ್ನ ಕೊನೆಯ ಬಜೆಟ್ನಲ್ಲಿ, ಬಡ ಕುಟುಂಬಗಳಿಗೆ ಸೇರಿದ 12 ಕೋಟಿ ವ್ಯಕ್ತಿಗಳಿಗೆ ತಲಾ ವಾರ್ಷಿಕ 6,000 ರೂಗಳನ್ನು ಕೊಡುವುದಾಗಿ ಭರವಸೆ ಕೊಟ್ಟಿತ್ತು. ಕಾಂಗ್ರೆಸ್ ಅದಕ್ಕಿಂತಲೂ ಮುಂದೆ ಹೋಗಿ, ತನ್ನ ನ್ಯಾಯ ಯೋಜನೆಯಡಿಯಲ್ಲಿ, ಐದು ಕೋಟಿ ಬಡ ಕುಟುಂಬಗಳಿಗೆ ತಿಂಗಳಿಗೆ 6,000 ರೂಗಳಂತೆ ವರ್ಷಕ್ಕೆ 72,000 ರೂಗಳನ್ನು ಕೊಡುವುದಾಗಿ ಭರವಸೆ ಕೊಟ್ಟಿತ್ತು.
ಇಂತಹ ಯೋಜನೆಗಳು, ಅದರಲ್ಲೂ ವಿಶೇಷವಾಗಿ ಭಾರೀ ಮಹತ್ವಾಕಾಂಕ್ಷೆಯ ನ್ಯಾಯ ಯೋಜನೆಯು ದೇಶದ ಆಂತರಿಕ ಮಾರುಕಟ್ಟೆಯನ್ನು ಹಿಗ್ಗಿಸುವಲ್ಲಿ ಸಹಾಯವಾಗುತ್ತಿತ್ತು. ಆದರೆ, ಇಂತಹ ಯೋಜನೆಗೆ ಹಣ ಎಲ್ಲಿದೆ ಎಂಬ ಪ್ರಶ್ನೆ ಏಳುತ್ತದೆ. ಶ್ರೀಮಂತರಿಗೆ ತೆರಿಗೆ ವಿಧಿಸುವ ಮೂಲಕ, ಅಂದರೆ ಅವರ ಸಂಪತ್ತಿನ ಮೇಲೆ ತೆರಿಗೆ ಹಾಕುವ ಮೂಲಕ ಈ ಯೋಜನೆಗೆ ಬೇಕಾಗುವಷ್ಟು ಹಣವನ್ನು ಹೊಂದಿಸಿಕೊಳ್ಳಬಹುದು. ಈ ದೇಶದಲ್ಲಿ ಸಂಪತ್ತಿನ ಮೇಲೆ ತೆರಿಗೆಯೇ ಇಲ್ಲ. ಹಿಂದೆ ಇದ್ದ ಇಂತಹ ಒಂದು ಕಾನೂನನ್ನು ಕಿತ್ತುಹಾಕಿ ವರ್ಷಗಳೇ ಕಳೆದಿವೆ.
ಸಂಪತ್ತು ತೆರಿಗೆಯಂತಹ ಒಂದು ಕಾನೂನನ್ನು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವು ಶತಾಯು ಗತಾಯು ವಿರೋಧಿಸುತ್ತದೆ. ನ್ಯಾಯ ಯೋಜನೆಯ ಘೋಷಣೆ ಮಾಡುವಾಗ, ಅದಕ್ಕೆ ಬೇಕಾಗುವ ಹಣ ಹೊಂದಿಸಿಕೊಳ್ಳುವುದು ಕಷ್ಟವಾಗಲಾರದು ಎಂಬ ಬಹಳ ಚಾತುರ್ಯದ ಉತ್ತರ ಕೊಟ್ಟಿದ್ದರು ಮನಮೋಹನ ಸಿಂಗ್. ಆದರೆ, ನವ ಉದಾರ ಆರ್ಥಿಕ ಆಳ್ವಿಕೆಯಲ್ಲಿ ಇಂತಹ ಯೋಜನೆಗೆ ಹಣ ಹೊಂದಿಸಿಕೊಳ್ಳುವುದು ಅತ್ಯಂತ ಕಷ್ಟಕರವಾದ ಕೆಲಸವೇ.
ಅದೇ ರೀತಿಯಲ್ಲಿ ಇಂತಹ ಯೋಜನೆಗೆ ಸರ್ಕಾರವು ವಿತ್ತೀಯ ಕೊರತೆಯ ಮೂಲಕ ಭಾಗಶಃ ಹಣ ಒದಗಿಸಿದರೂ ಅದು ವಿತ್ತೀಯ ಕೊರತೆಯನ್ನು ಹೆಚ್ಚಿಸಿ ಜೊತೆಗೆ, ಈ ಕೊರತೆಯ ಮೇಲೆ ವಿಧಿಸಿರುವ ಮಿತಿಯನ್ನು (ಜಿಡಿಪಿಯ 3.4%) ತಪ್ಪದೇ ಮೀರುತ್ತದೆ. ಆಗ, ಭಾರತದ ಕ್ರೆಡಿಟ್ ರೇಟಿಂಗ್ಅನ್ನು ಕೆಳ ದರ್ಜೆಗೆ ಇಳಿಸುವ ಸಂಭವವಿದೆ. ಅಂತಹ ಸಂದರ್ಭದಲ್ಲಿ, ವಿದೇಶ ವ್ಯಾಪಾರದಿಂದ ಉಂಟಾದ ಕೊರತೆಯನ್ನು ತೀರಿಸುವ ಸಲುವಾಗಿ ಚಾಲ್ತಿ ಖಾತೆಯ(ವಿದೇಶಿ ವಿನಿಮಯ) ಕೊರತೆ ತುಂಬಿಸಿಕೊಳ್ಳುವುದು ಭಾರೀ ಕಷ್ಟದ ಕೆಲಸವಾಗುತ್ತದೆ.
ಚಾಲ್ತಿ ಖಾತೆ ಕೊರತೆ ಸಮಸ್ಯೆಯು ಅಮೇರಿಕಾದ ಒತ್ತಾಯಕ್ಕೆ ಕಟ್ಟುಬಿದ್ದು ಮಾರುಕಟ್ಟೆಯ ದೈನಿಕ ದರದಲ್ಲಿ ತೈಲ ಕೊಂಡಾಗಲೂ ಉಂಟಾಗುತ್ತದೆ. ಈಗ ದೇಶವು ಇರಾನಿನಿಂದ ಅಗ್ಗದ ದರದಲ್ಲಿ ತೈಲ ಕೊಳ್ಳುತ್ತಿದೆ, ಬೇರೊಂದು ಕಾರಣದ ಮೇಲೆ, ಇರಾನಿನಿಂದ ತೈಲ ಕೊಳ್ಳಕೂಡದು ಎಂದು ಅಮೇರಿಕಾ ಒತ್ತಾಯಿಸುತ್ತಿದೆ. ಅಮೇರಿಕಾದ ಒತ್ತಡಕ್ಕೆ ಮೋದಿ ಸರ್ಕಾರವು ಈಗಾಗಲೇ ತಲೆಬಾಗಿದೆ. ಅಧಿಕಾರಕ್ಕೆ ಮರಳಿದ ನಂತರವೂ ಇದೇ ನಿಲುವಿಗೆ ಆತುಕೊಳ್ಳುತ್ತದೆ.
ಈಗಾಗಲೇ ಖಚಿತ ಏರು ಮುಖಿಯಾಗಿರುವ ತೈಲ ಬೆಲೆಗಳಿಂದಾಗಿ ಚಾಲ್ತಿ ಖಾತೆಯಲ್ಲಿ ಕೊರತೆ ಹೆಚ್ಚಲಿದೆ. ಇರಾನಿನ ಮೇಲೆ ಅಮೇರಿಕಾ ಹೇರಿರುವ ನಿರ್ಬಂಧಗಳು ಜಾರಿಯಾದಾಗ ಚಾಲ್ತಿ ಖಾತೆಯಲ್ಲಿ ಕೊರತೆ ಮತ್ತಷ್ಟು ಹೆಚ್ಚಲಿದೆ. ಅದರ ಜೊತೆಗೆ ವಿತ್ತೀಯ ಕೊರತೆಯು ಗರಿಷ್ಠ ಮಿತಿಗಿಂತಲೂ ಹೆಚ್ಚಿಗೆ ಇದ್ದರೆ, ಕ್ರೆಡಿಟ್ ರೇಟಿಂಗ್ ಕೆಳ ದರ್ಜೆಗೆ ಇಳಿಯುತ್ತದೆ. ಅದರ ಪರಿಣಾಮವಾಗಿ ಬಂಡವಾಳದ ಒಳಹರಿವೂ ಬತ್ತುತ್ತದೆ. ಆಗ, ಚಾಲ್ತಿ ಖಾತೆ (ವಿದೇಶಿ ವಿನಿಮಯ) ಕೊರತೆ ನಿಭಾಯಿಸುವುದು ವಾಡಿಕೆಯ ಪ್ರಕಾರ ಸಾಧ್ಯವಾಗುವುದಿಲ್ಲ.
ನಾವೀಗ ಒಂದು ವಿಲಕ್ಷಣ ಪರಿಸ್ಥಿತಿಯಲ್ಲಿದ್ದೇವೆ. ಬಲಿಯುತ್ತಿರುವ ಹಿಂಜರಿತವನ್ನು ತಡೆಯಲು ಒಂದು ಕಡೆ ಪ್ರಯತ್ನಿಸಿದರೆ ಚಾಲ್ತಿ ಖಾತೆ ಕೊರತೆ ನಿಭಾಯಿಸುವುದು ಕಷ್ಟವಾಗುತ್ತದೆ. ಇನ್ನೊಂದು ಕಡೆ ಹಿಂಜರಿತವನ್ನು ತಡೆಯುವ ಯಾವ ಪ್ರಯತ್ನವನ್ನೂ ಮಾಡದಿದ್ದರೆ, ಈಗಾಗಲೇ ಭೀಕರವಾಗಿರುವ ನಿರುದ್ಯೋಗವು ಇನ್ನಷ್ಟು ಭೀಕರವಾಗಗುತ್ತದೆ.
ನಿರುದ್ಯೋಗದ ಭೀಕರತೆ ಸಾರ್ವಜನಿಕರ ಗಮನಕ್ಕೆ ಬರದಿರಲಿ ಎಂಬ ದುರುದ್ದೇಶದಿಂದ ಸರ್ಕಾರವು ನಿರುದ್ಯೋಗ ಪರಿಸ್ಥಿತಿಯ ಬಗ್ಗೆ ಯಾವ ಅಂಕಿ ಅಂಶಗಳನ್ನು ಅಧಿಕೃತವಾಗಿ ಪ್ರಕಟಿಸಲು ಎರಡು ವರ್ಷಗಳಿಂದಲೂ ನಿರಾಕರಿಸಿದೆ. ಆದರೆ, ಸರ್ಕಾರದ ಅಂಕಿ ಸಂಖ್ಯೆಗಳ ಸಂಸ್ಥೆಯು ಬಚ್ಚಿಟ್ಟಿದ್ದ ಒಂದು ವರದಿಯು ಸೋರಿಕೆಯಾಗಿದೆ. ಈ ವರದಿಯ ಪ್ರಕಾರ, 6.1%ನಿರುದ್ಯೋಗ ದರ ಏರಿಕೆ ಕಳೆದ 45ವರ್ಷಗಳಲ್ಲೇ ಅತಿ ಹೆಚ್ಚಿನದು.
ಭಾರತದ ಅರ್ಥವ್ಯವಸ್ಥೆಯ ಬೆಳವಣಿಗೆಗಳನ್ನು ಗಮನಿಸುತ್ತಿರುವ ಸಿಎಂಐಇ ಸಂಸ್ಥೆಯ ಪ್ರಕಾರ 2019ರ ಎಪ್ರಿಲ್ನಲ್ಲಿ ನಿರುದ್ಯೋಗ ದರ 7.6% ಇತ್ತು. ನಿರುದ್ಯೋಗ ದರವು ನಿರುದ್ಯೋಗದ ಏರಿಕೆ ಅಥವಾ ಇಳಿಕೆಯ ದಿಕ್ಕನ್ನು ಸೂಚಿಸುತ್ತದೆಯಲ್ಲದೆ ಅದರ ಅಗಾಧತೆಯನ್ನು ತೋರಿಸುವುದಿಲ್ಲ. ಏಕೆಂದರೆ, ಉದ್ಯೋಗಗಳ ಹರವು ಏಕ ರೂಪದಲ್ಲಿಲ್ಲ. ಎಲ್ಲೋ ಕೆಲವರು ಪೂರ್ಣಾವಧಿ ಉದ್ಯೋಗದಲ್ಲಿದ್ದರೆ, ಹೆಚ್ಚಿನ ಮಂದಿ ಅರೆ ಕಾಲಿಕ ಉದ್ಯೋಗದಲ್ಲಿದ್ದಾರೆ, ಉಳಿದವರು ಪೂರಾ ನಿರುದ್ಯೋಗಿಗಳು.
ಆದ್ದರಿಂದ, ಸರ್ಕಾರವು ನಿರುದ್ಯೋಗ ಪರಿಸ್ಥಿತಿಯನ್ನು ತಕ್ಕಮಟ್ಟಿಗಾದರೂ ಸುಧಾರಿಸುವ ಕೆಲಸ ಮಾಡಬೇಕು. ಆದರೆ, ಈ ನಿಟ್ಟಿನಲ್ಲಿ ಏನು ಮಾಡಲು ಹೊರಟರೂ, ನವ ಉದಾರ ಮಾದರಿಯ ಆರ್ಥಿಕ ಆಳ್ವಿಕೆಯ ಸಂದರ್ಭದಲ್ಲಿ, ಅದು ವಿದೇಶ ವ್ಯಾಪಾರದ ಬಾಕಿ ಚುಕ್ತಾ (ಪಾವತಿ ಶೇಷ) ಪರಿಸ್ಥಿತಿಯನ್ನು ಅಸ್ಥಿರಗೊಳಿಸುತ್ತದೆ. ಮಾಡಿದ್ದುಣ್ಣೋ ಮಹರಾಯ ಎಂಬಂತಾಗಿದೆ ನವ ಉದಾರ ಆರ್ಥಿಕ ಮಾದರಿಯ ಪರಿಸ್ಥಿತಿ.
ನವ ಉದಾರವಾದವೇ ತನ್ನ ಅಂತ್ಯವನ್ನು ತಲುಪಿರುವ ಪರಿಸ್ಥಿತಿಯಲ್ಲಿ ಅದರ ಹಿಡಿತದಿಂದ ಕಳಚಿಕೊಳ್ಳುವ ಒಂದು ಅವಕಾಶವಿದೆ. ವಿದೇಶ ವ್ಯಾಪಾರ ಮತ್ತು ಬಂಡವಾಳದ ಹರಿವಿನ ಮೇಲೆ ನಿಯಂತ್ರಣ ಹೇರುವ ಮೂಲಕ ನವ ಉದಾರವಾದದ ಹಿಡಿತದಿಂದ ಕಳಚಿಕೊಳ್ಳುವ ಅವಕಾಶವನ್ನು ಸದುಪಯೋಗಿಸಿ ಕೊಳ್ಳಬಹುದು. ಅಮೇರಿಕಾ ಈಗಾಗಲೇ ವಿದೇಶ ವ್ಯಾಪಾರದ ಮೇಲೆ ನಿಯಂತ್ರಣ ಹೇರಿದೆ.
ಭಾರತವೂ ಅದನ್ನು ಅನುಸರಿಸಬಹುದಿತ್ತು. ಅಂತಹ ಒಂದು ತೀರ್ಮಾನ ಕೈಗೊಂಡಾಗ, ಸಂಪತ್ತು ತೆರಿಗೆ ಮತ್ತು ಅನುವಂಶಿಕ ಆಸ್ತಿ ತೆರಿಗೆ ವಿಧಿಸುವುದು ಸಾಧ್ಯವಾಗುತ್ತಿತ್ತು. ಅಂತಹ ಪರಿಸ್ಥಿತಿಯಲ್ಲಿ, ಚುನಾವಣೆಗಳ ಸಮಯದಲ್ಲಿ ಗ್ರಾಮೀಣ ಬಡವರಿಗೆ ದೊಡ್ಡ ಮೊತ್ತದ ಹಣವನ್ನು ಅವರ ಖಾತೆಗೆ ನೇರವಾಗಿ ವರ್ಗಾಯಿಸುವುದಾಗಿ ಕೊಟ್ಟಿದ್ದ ಭರವಸೆಯನ್ನು ಈಡೇರಿಸುವುದು ಸಾಧ್ಯವಿತ್ತು. ವರ್ಗಾವಣೆಯ ಈ ಕಾರ್ಯಕ್ರಮವು ಖಂಡಿತವಾಗಿಯೂ ದೇಶದ ಆಂತರಿಕ ಮಾರುಕಟ್ಟೆಯನ್ನು ವಿಸ್ತರಿಸುತ್ತಿತ್ತು. ತರುವಾಯ ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಿಸುವ ಕ್ರಮ ಕೈಗೊಳ್ಳಬಹುದಿತ್ತು.
ಈ ರೀತಿಯಲ್ಲಿ ನೀತಿಗಳನ್ನು ಬದಲಾಯಿಸಿಕೊಂಡಿದ್ದರೆ, ಬಂಡವಾಳದ ಒಳ ಹರಿವು ಬತ್ತಿದರೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ, ವಿದೇಶ ವ್ಯಾಪಾರದ ಮೇಲೆ ನಿಯಂತ್ರಣ ಹೇರಿದಾಗ ಚಾಲ್ತಿ ಖಾತೆಯ ಕೊರತೆಯೂ ಹದ್ದುಬಸ್ತಿನಲ್ಲಿರುತ್ತದೆ. ಹಾಗಾಗಿ, ವಿದೇಶ ವ್ಯಾಪಾರದ ಬಾಕಿ ಚುಕ್ತಾ ಮಾಡುವುದೂ ಸಮಸ್ಯೆಯಾಗುವುದಿಲ್ಲ.
ಆದರೆ, ನವ ಉದಾರವಾದವು ತನ್ನ ಅಂತ್ಯವನ್ನು ತಲುಪಿದೆ ಎಂಬ ಅರಿವು ಮೋದಿ ಸರ್ಕಾರಕ್ಕೆ ಇದ್ದಂತಿಲ್ಲ. ನವ ಉದಾರವಾದೀ ಸುಧಾರಣೆಗಳ ವಿನ್ಯಾಸಕಾರನಾದ ಕಾಂಗ್ರೆಸ್ ಪಕ್ಷಕ್ಕೆ, ನ್ಯಾಯ ಯೋಜನೆಯ ಬಗ್ಗೆ ಕೊಟ್ಟ ಭರವಸೆಯ ಹೊರತಾಗಿಯೂ, ನವ ಉದಾರವಾದಕ್ಕೆ ಮುಂದಕ್ಕೆ ಸಾಗಲು ದಾರಿ ಕಾಣದಾಗಿರುವಾಗ ಅದನ್ನು ಧಿಕ್ಕರಿಸುವ ನೀತಿಗಳನ್ನು ಅನುಸರಿಸುವ ಧೈರ್ಯವಿಲ್ಲ. ಆದ್ದರಿಂದ, ಕೈಗಾರಿಕಾ ಹಿಂಜರಿತವು ಉಲ್ಬಣಗೊಳ್ಳುವ ಸಂಭವವಿದೆ.
–ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

ದಿನದ ಸುದ್ದಿ
ನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
ಸುದ್ದಿದಿನ,ದಾವಣಗೆರೆ: “ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಾವು ಮುಖ್ಯಮಂತ್ರಿಯಂತೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.
ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು, ನಾನು ಡಿ.ಕೆ ಶಿವಕುಮಾರ್ ಅವರ ಮನೆಮಗ, ಶಿವನ ಮುಂದೆ ಇರುವ ಬಸವ ನಾನು. ನಾನೇ ಮುಖ್ಯಮಂತ್ರಿ ಇದ್ದಂತೆ, ಮನೆ ಮಗನಿಗೆ ಯಾವಾಗಲೂ ಅವರ ಆಶೀರ್ವಾದ ಇದ್ದೇ ಇರುತ್ತದೆ ಎಂದಿದ್ದಾರೆ.
ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
“ನಾನು ಮುಖ್ಯಮಂತ್ರಿ ಅಲ್ಲ. ಆದರೆ ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದಾಗ ಮುಖ್ಯಮಂತ್ರಿಯಂತೆ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದೇನೆ. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ನನ್ನ ಮೊದಲ ಕರ್ತವ್ಯವಾಗಿದೆ. ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ,” ಎಂದು ಅವರು ಹೇಳಿದರು.
ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಇನ್ನೂ ಅನೇಕ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ ಅವರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತಿದೆ ಎಂದರು.
“ಜನಪ್ರತಿನಿಧಿಯಾಗಿ ಚುನಾಯಿತರಾದ ಬಳಿಕ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ಅನುದಾನ ತರುವ ಪ್ರಯತ್ನ ಮಾಡಲಾಗಿದೆ. ಕುಡಿಯುವ ನೀರಿನ ಯೋಜನೆಗಳು, ರಸ್ತೆ ಅಭಿವೃದ್ಧಿ, ಶಾಲೆಗಳ ಮೂಲಸೌಕರ್ಯ ಸುಧಾರಣೆ ಸೇರಿದಂತೆ ಹಲವು ಕಾಮಗಾರಿಗಳಿಗೆ ವೇಗ ನೀಡಲಾಗಿದೆ,” ಎಂದು ಹೇಳಿದರು.
ಕ್ಷೇತ್ರದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ. ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ನೀರಾವರಿ ಹಾಗೂ ರೈತರಿಗೆ ಅನುಕೂಲಕರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಸರ್ಕಾರದ ಅಭಿವೃದ್ಧಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಅರ್ಹ ವ್ಯಕ್ತಿ ಯೋಜನೆಯಿಂದ ವಂಚಿತರಾಗಬಾರದು ಎಂಬುದು ತಮ್ಮ ಉದ್ದೇಶವಾಗಿದೆ ಎಂದು ಶಾಸಕರು ತಿಳಿಸಿದರು.
ವಿರೋಧ ಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಟೀಕೆಗಳು ಪ್ರಜಾಪ್ರಭುತ್ವದ ಭಾಗ. ಆದರೆ ಅಭಿವೃದ್ಧಿಯೇ ನಮ್ಮ ಉತ್ತರ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಹಾಗೂ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದೇ ನಮ್ಮ ಗುರಿಯಾಗಿದೆ,” ಎಂದರು.
ಕ್ಷೇತ್ರದ ಜನರು ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಸಂಪರ್ಕಿಸಬಹುದು. ಜನಸೇವೆಗಾಗಿ ತಮ್ಮ ಕಚೇರಿ ಸದಾ ತೆರೆದಿರುತ್ತದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ
ಸುದ್ದಿದಿನ,ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿಯ ನೂತನ ವಿಜ್ಞಾನ ಸಭಾಂಗಣದಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ಸ್ (ಎಮ್.ಸಿ.ಎ) ಹಾಗೂ ಕಂಪ್ಯೂಟರ್ ಸೈನ್ಸ್ (ಎಮ್.ಎಸ್ಸಿ) ವಿಭಾಗಗಳ ಸಂಯುಕ್ತಾಶ್ರಯದಲ್ಲಿ “ಸಂಶೋಧನಾ ಸಮಸ್ಯೆಯನ್ನು ಗುರುತಿಸುವ ವಿವಿಧ ವಿಧಾನಗಳು, ಹೊಸ ಸಂಶೋಧನಾ ಕಲ್ಪನೆಗಳ ಸೃಷ್ಟಿ ಹಾಗೂ ಟೈಯರ್-1 ಸಂಶೋಧನಾ ಲೇಖನಗಳ ಬರಹದ ಪ್ರಮುಖ ಅಂಶಗಳು” ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ, ಗುಣಮಟ್ಟದ ಸಂಶೋಧನೆಯೇ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಪ್ರಗತಿ ಮತ್ತು ಜಾಗತಿಕ ಮಾನ್ಯತೆಯ ಮೂಲಾಧಾರವಾಗಿದೆ ಎಂದು ಹೇಳಿದರು.
ಸಂಶೋಧನೆ ಕೇವಲ ಪದವಿ ಪಡೆಯುವ ಪ್ರಕ್ರಿಯೆಯಾಗಬಾರದು, ಅದು ಸಮಾಜದ ಸಮಸ್ಯೆಗಳಿಗೆ ಪರಿಹಾರ ನೀಡುವ ದಿಕ್ಕಿನಲ್ಲಿ ಸಾಗಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಪ್ರಕಟಣೆಗಳು ವಿಶ್ವವಿದ್ಯಾಲಯದ ಸಂಶೋಧನಾ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಯು ಕೆ ಮಾಂಚೆಸ್ಟರ್ನ ‘ಯೂನಿವರ್ಸಿಟಿ ಆಫ್ ಸ್ಯಾಲ್ಫೋರ್ಡ್’ನ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕ ಡಾ. ಶಿವಕುಮಾರ ಪಿ. ಮಾತನಾಡಿ, ಸಂಶೋಧನಾ ಸಮಸ್ಯೆ ಗುರುತಿಸುವಿಕೆ, ಸಂಶೋಧನಾ ಅಂತರ (Research Gap) ಪತ್ತೆ, ಸಾಹಿತ್ಯ ಸಮೀಕ್ಷೆ, ಪ್ರಯೋಗಾತ್ಮಕ ವಿನ್ಯಾಸ (Experimental Design), ಟೈಯರ್-1 ಜರ್ನಲ್ ಲೇಖನ ಬರಹ, ಪ್ರಕಟಣಾ ನೈತಿಕತೆ ಹಾಗೂ ವಿಮರ್ಶಕರ ಅಭಿಪ್ರಾಯಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
“ಒಂದು ಉತ್ತಮ ಸಂಶೋಧನಾ ಲೇಖನದ ಯಶಸ್ಸು ಅದರ ಹೊಸತನ, ವೈಜ್ಞಾನಿಕ ವಿಧಾನ ಮತ್ತು ಸ್ಪಷ್ಟವಾದ ಪ್ರಸ್ತುತೀಕರಣದಲ್ಲಿ ಅಡಗಿದೆ. ಸಂಶೋಧಕರು ಗುಣಮಟ್ಟದ ಸಮಸ್ಯೆಗಳನ್ನು ಆಯ್ಕೆ ಮಾಡಿಕೊಂಡು ಅಂತರರಾಷ್ಟ್ರೀಯ ಮಟ್ಟದ ಪ್ರಕಟಣೆಗೆ ಸಿದ್ಧರಾಗಬೇಕು,” ಎಂದು ಅವರು ಕರೆ ನೀಡಿದರು.
ಕಾರ್ಯಾಗಾರದಲ್ಲಿ 250ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ವಿವಿಧ ವಿಭಾಗಗಳ ಅಧ್ಯಾಪಕರು ಭಾಗವಹಿಸಿದ್ದರು. ಪೋಸ್ಟರ್ ಪ್ರಸೆಂಟೇಷನ್ಗಳು, ಸಂವಾದಾತ್ಮಕ ಚರ್ಚೆಗಳು ಮತ್ತು ಸಂಶೋಧನಾ ಲೇಖನ ಬರಹದ ಪ್ರಾಯೋಗಿಕ ಮಾರ್ಗದರ್ಶನ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಭವಿಷ್ಯದಲ್ಲೂ ಇಂತಹ ಕಾರ್ಯಾಗಾರಗಳ ಸರಣಿಯನ್ನು ಆಯೋಜಿಸಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕುಲಸಚಿವ ಶ್ರೀ ಎಸ್. ಬಿ. ಗಂಟಿ, ಪರೀಕ್ಷಾಂಗ ಕುಲಸಚಿವ ಡಾ. ಸಿ. ಕೆ. ರಮೇಶ್, ಡಾ. ಬಸವಣ್ಣ ಎಮ್. ಅಧ್ಯಕ್ಷರು, ಎಮ್.ಸಿ.ಎ ವಿಭಾಗ, ಡಾ. ಚಂದ್ರಕಾಂತ ಎನ್. ಅಧ್ಯಕ್ಷರು, ಕಂಪ್ಯೂಟರ್ ಸೈನ್ಸ್ ವಿಭಾಗ, ಹಣಕಾಸು ಅಧಿಕಾರಿ ಡಾ. ಆರ್. ಶಶಿಧರ್ ಹಾಗೂ ವಿವಿಧ ವಿಭಾಗಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ
-
ಅಂತರಂಗ2 days agoಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
-
ದಿನದ ಸುದ್ದಿ3 days agoನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
-
ದಿನದ ಸುದ್ದಿ4 days agoದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ

