ದಿನದ ಸುದ್ದಿ
ಅರ್ಥವ್ಯವಸ್ಥೆಯ ದುರಸ್ತಿಯೂ ಭವಿಷ್ಯದ ದುರವಸ್ಥೆಯೂ–ಕೊರೋನಾ ಸಂಕಟ
- ನಾ ದಿವಾಕರ
“ಕೊನೆಗೂ ಭಾರತದ ಪ್ರಜೆಗಳು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ ”. ಹೀಗೇನಾದರೂ ಭಾವಿಸಿದರೆ ನಾವು ಯಾವುದೋ ಲೋಕದಲ್ಲಿದ್ದೇವೆ ಎಂದೇ ಅರ್ಥ. ಅಥವಾ ನಮ್ಮ ಸುದ್ದಿಮನೆಗಳಲ್ಲಿ ಕುಳಿತಿರುವ ಅನರ್ಥಶಾಸ್ತ್ರಜ್ಞರ ಮೋಡಿ(ದಿ)ಗೆ ಬಲಿಯಾಗಿದ್ದೇವೆ ಎಂದರ್ಥ. ಯಾವುದೇ ಸರ್ಕಾರ ವಿಪತ್ತಿನ ಸಂದರ್ಭದಲ್ಲಿ ಘೋಷಿಸುವ ಆರ್ಥಿಕ ಪ್ಯಾಕೇಜಿಗೆ ವಿಭಿನ್ನ ಮಜಲುಗಳು, ಆಯಾಮಗಳು, ಮಾರ್ಗಗಳು ಇರುತ್ತವೆ.
ಕಬ್ಬಿಣದ ತಿಜೋರಿಯಲ್ಲಿದ್ದ ಹಣವನ್ನೆತ್ತಿ ಎಲ್ಲರಿಗೂ ಹಂಚುವ ವಿಧಾನ ಇದಲ್ಲ. 20 ಲಕ್ಷ ಕೋಟಿಯನ್ನು 130ರಿಂದ ಭಾಗಿಸಿ ತಲಾ 15 ಸಾವಿರ ರೂ ಸಿಗುತ್ತದೆ ಎಂದು ಮೆರೆಯುವ ಸುದ್ದಿಮನೆಗಳು, ರೋಚಕತೆಗಾಗಿಯೇ ಹೀಗೆ ಮಾಡಿದ್ದರೂ ಇದು ಮುಠ್ಠಾಳ ಕೆಲಸ ಎನ್ನಲು ಅಡ್ಡಿಯಿಲ್ಲ.ಜನಪ್ರತಿನಿಧಿಗಳಲ್ಲೇ ಅರ್ಥಶಾಸ್ತ್ರದ ಅರಿವಿನ ಕೊರತೆ ಇರುವ ದೇಶದಲ್ಲಿ ಇದೇನೂ ಅಚ್ಚರಿ ಮೂಡಿಸುವ ವಿಚಾರವಲ್ಲ
ಕೊರೋನಾ ಪೂರ್ವದಲ್ಲಿದ್ದ ಭಾರತಕ್ಕೂ , ವರ್ತಮಾನದ ಸಂದರ್ಭಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಸಮಸ್ಯೆ ಉಲ್ಬಣಿಸಿದೆ ಅಷ್ಟೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ದೇಶದ ಉತ್ಪಾದನೆ ಕುಸಿದಿದೆ, ಜನಸಾಮಾನ್ಯರ ಖರೀದಿ ಸಾಮರ್ಥ್ಯ ಕ್ಷೀಣಿಸಿದೆ, ಮಾರುಕಟ್ಟೆಯಲ್ಲಿ ನಗದು ಚಲಾವಣೆ ಕಡಿಮೆಯಾಗುತ್ತಿದೆ, ಕೃಷಿ ಕ್ಷೇತ್ರ ಮಾರುಕಟ್ಟೆಯ ನೆರವು ಇಲ್ಲದೆ ಬರಡಾಗುತ್ತಿದೆ, ಗ್ರಾಮೀಣ ಆರ್ಥಿಕತೆ ಹಳ್ಳ ಹಿಡಿದಿದೆ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕೆಳ ಮಧ್ಯಮವರ್ಗಗಳು ಮತ್ತು ಸಣ್ಣ-ಸೂಕ್ಷ್ಮ ವ್ಯಾಪಾರಿ ವರ್ಗ ಅಸ್ಥಿರತೆಯನ್ನು ಎದುರಿಸುತ್ತಿದೆ ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ಈ ಎಲ್ಲ ಪ್ರಕ್ರಿಯೆಗಳಲ್ಲಿ ಪ್ರಧಾನ ಪಾತ್ರವಹಿಸುವ ದೇಶದ ದುಡಿಯುವ ವರ್ಗಗಳ ಜೇಬುಗಳು ಖಾಲಿಯಾಗಿವೆ.
ದುಡಿಮೆಯೂ ಇಲ್ಲದೆ, ಕೂಲಿಯೂ ಇಲ್ಲದೆ ತಮ್ಮ ತವರಿನ ಸೂರು ಅರಸಿ “ ಸತ್ತರೆ ನಮ್ಮ ತಾಯ್ನಾಡಿನಲ್ಲೇ ಸಾಯೋಣ ” ಎನ್ನುವ ಧೋರಣೆಯೊಂದಿಗೆ ಗುಳೆ ಹೊರಟಿರುವ ಕೋಟ್ಯಂತರ ಕಾರ್ಮಿಕರ “ ನಾಳೆಗಳು ” ಅನಿಶ್ಚಿತವಾಗಿವೆ.
ಅರ್ಥವ್ಯವಸ್ಥೆಗೂ ಈ ಸಮಸ್ಯೆಗಳಿಗೂ ಸಂಬಂಧ ಇರುವುದನ್ನು ಗುರುತಿಸದೆ ಹೋದರೆ, ನಮ್ಮ ಅನರ್ಥಶಾಸ್ತ್ರ ತರಕಾರಿ ಹರಾಜು ಮಾರುಕಟ್ಟೆಯಂತಾಗಿಬಿಡುತ್ತದೆ. 20 ಲಕ್ಷ ಕೋಟಿ ಎಂದ ಕೂಡಲೇ ನಮ್ಮ ಅಂಗಳದಲ್ಲಿ ಹಣದ ಮಳೆ ಸುರಿದಿದೆ ಎಂದು ಪಿಳಿಪಿಳಿ ನೋಡುವ ಅವಶ್ಯಕತೆ ಇಲ್ಲ. ಈ ಮೊತ್ತ ಎಲ್ಲಿಗೆ ತಲುಪುತ್ತದೆ, ಯಾವ ಮಾರ್ಗಗಳಲ್ಲಿ ಸಂಚರಿಸುತ್ತದೆ, ಯಾರನ್ನು ಮೇಲಕ್ಕೆತ್ತುತ್ತದೆ, ಯಾರನ್ನು ತುಳಿಯುತ್ತದೆ, ಸಂಚರಿಸುವ ಮಾರ್ಗಗಳಲ್ಲಿ ಎತ್ತೆತ್ತ ಉಪನಾಲೆಗಳನ್ನು ನಿರ್ಮಿಸಲಾಗುತ್ತದೆ ಈ ಎಲ್ಲ ಅಂಶಗಳನ್ನೂ ಪರಾಮರ್ಶೆ ಮಾಡಬೇಕು.
ಇನ್ನೂ ಮುಖ್ಯ ಸಂಗತಿ ಎಂದರೆ ಇದು ಎಲ್ಲಿಂದ ಸಂಗ್ರಹವಾಗುತ್ತದೆ ಎನ್ನುವ ಪ್ರಶ್ನೆ. ಏಕೆಂದರೆ ಇದನ್ನು ಸರಿದೂಗಿಸುವ ಹೊಣೆಯೂ ಈ ದೇಶದ ಜನಸಾಮಾನ್ಯರ ಮೇಲೆಯೇ ಇರುತ್ತದೆ. ಅರ್ಥಶಾಸ್ತ್ರದ ವಿದ್ವತ್ ಕೋಣೆಗಳಿಂದ ಹೊರನಿಂತು ನೋಡಿದರೂ ಈ ವಾಸ್ತವಗಳಿಗೆ ನಾವು ಉತ್ತರ ಹುಡುಕಬೇಕಾಗುತ್ತದೆ.
ಕೊರೋನಾ ಸಂದರ್ಭದಲ್ಲಿ ಭಾರತದ ಅರ್ಥವ್ಯವಸ್ಥೆಯನ್ನು ಕಾಡಿದ ಹಲವು ಸಮಸ್ಯೆಗಳಿಗೆ ವೈರಾಣು ಕಾರಣವಲ್ಲ. ಉತ್ಪಾದನಾ ವಲಯ, ಕೃಷಿ ಉತ್ಪಾದನೆ ಮತ್ತು ಎಂಎಸ್ಎಂಇ ಉದ್ಯಮಗಳು ಬಂಡವಾಳದ ಕೊರತೆ ಮತ್ತು ಮೂಲ ಸೌಕರ್ಯಗಳ ಕೊರತೆಯಿಂದ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಾಗದೆ ಬಸವಳಿದಿದ್ದನ್ನು ಆರು ತಿಂಗಳ ಹಿಂದೆಯೇ ಅನೇಕ ಅರ್ಥಶಾಸ್ತ್ರಜ್ಞರು ಉಲ್ಲೇಖಿಸಿದ್ದಾರೆ.
ಮೇಕ್ ಇನ್ ಇಂಡಿಯ ಎನ್ನುವ ಮಹತ್ವಾಕಾಂಕ್ಷಿ ಯೋಜನೆ ತಳಮಟ್ಟದ ಉತ್ಪಾದನಾ ವಲಯಗಳಿಗೆ ಯಾವುದೇ ಉತ್ತೇಜನ ನೀಡದಿದ್ದುದನ್ನೂ ಕಳೆದ ಆರು ವರ್ಷಗಳಲ್ಲಿ ಗಮನಿಸಿದ್ದೇವೆ. ಇದು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳ ಸೃಷ್ಟಿಸಿರುವ ಸನ್ನಿವೇಶ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ 2020-21ರ ಬಜೆಟ್ನಲ್ಲಿ ಘೋಷಿಸಿದ ಯೋಜನೆಗಳು ಜಾರಿಯಾಗುವ ಮುನ್ನವೇ ಕೊರೋನಾ ಅಪ್ಪಳಿಸಿದ್ದು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆಯಷ್ಟೆ.
ಈಗ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂಗಳ ಬೃಹತ್ ಪ್ಯಾಕೇಜ್ ನೀಡಿದೆ. ಇದನ್ನು ಅನ್ಯ ದೇಶಗಳಿಗೆ ಹೋಲಿಸಿ ನೋಡುವ ಅನಗತ್ಯ ಪೈಪೋಟಿಯನ್ನು ಸುದ್ದಿಮನೆಗಳಲ್ಲೇ ಬಿಟ್ಟು ಈ ಪ್ಯಾಕೇಜಿನ ಮೂಲ ಉದ್ದೇಶಗಳೇನು ಎನ್ನುವುದನ್ನು ಯೋಚಿಸಬೇಕಿದೆ. 3 ಲಕ್ಷ ಕೋಟಿ ರೂಗಳನ್ನು ಎಂಎಸ್ಎಂಇ ವಲಯದ ಪುನಶ್ಚೇತನಕ್ಕಾಗಿ ನೀಡಲಾಗಿದ್ದು ಬ್ಯಾಂಕುಗಳು ಖಾತರಿರಹಿತ ಸಾಲ ಒದಗಿಸುವಂತೆ ಆದೇಶಿಸಲಾಗಿದೆ.
ಸರ್ಕಾರವೇ ಖಾತರಿ ನೀಡುವುದರ ಮೂಲಕ ಸಣ್ಣ ಉದ್ದಿಮೆಗಳಿಗೆ ನೆರವಾಗುತ್ತದೆ. ಇದರ ಯಶಸ್ಸು ಬ್ಯಾಂಕುಗಳನ್ನು ಅವಲಂಬಿಸಿರುತ್ತದೆ. ಹಿಂದಿನ ಅನುಭವಗಳನ್ನು ನೋಡಿದರೆ ಆಶಾದಾಯಕವಾಗಿ ಕಾಣುವುದಿಲ್ಲ. ಆದರೂ ಭರವಸೆಯೊಂದಿಗೆ ಮುನ್ನಡೆಯಬಹುದು. ಸಾಲ ನೀಡುವ ಮೂಲಕ ಒಂದು ಉತ್ಪಾದನಾ ವಲಯದ ಆದಾಯ ಹೆಚ್ಚಿಸುವ ನೀತಿಯನ್ನು ಈ ಶತಮಾನದ ಆರಂಭದಲ್ಲೂ ಅನುಸರಿಸಲಾಗಿತ್ತು. ಇದು ಬ್ಯಾಂಕಿಂಗ್ ವ್ಯವಸ್ಥೆಯ ದುರವಸ್ಥೆಗೆ ಕಾರಣವಾಗಿದ್ದು ಹೌದು.
ಕೇಂದ್ರ ಸರ್ಕಾರದ ಮುಖ್ಯ ಗುರಿ ತಳಮಟ್ಟದ ಆರ್ಥಿಕತೆಯನ್ನು ಸದೃಢಗೊಳಿಸುವುದು ಆಗಬೇಕಿತ್ತು. ಸರಬರಾಜು ಸರಪಳಿಯನ್ನು ಬಲಪಡಿಸುವುದು ಸರ್ಕಾರದ ಮತ್ತು ಮಾರುಕಟ್ಟೆ ಶಕ್ತಿಗಳ ಉದ್ದೇಶವೇ ಆದರೂ, ದುಡಿಯುವ ವರ್ಗಗಳ ಖರೀದಿ ಸಾಮರ್ಥ್ಯ ಕುಸಿದಿರುವುದನ್ನೂ ಗಮನಿಸಬೇಕಲ್ಲವೇ ? ಇದನ್ನು ಹೆಚ್ಚಿಸಬೇಕೆಂದರೆ ದುಡಿಮೆಯ ಆದಾಯ ಹೆಚ್ಚಾಗಬೇಕು. ಆಗಲೇ ಸರಬರಾಜು ಸರಪಣಿಗೆ ಪೂರಕವಾಗಿ ನಗದು ಹರಿದಾಡುತ್ತದೆ. ಮಾರುಕಟ್ಟೆ ಚೇತರಿಸಿಕೊಳ್ಳುತ್ತದೆ. ಖರೀದಿ ಸಾಮರ್ಥ್ಯ ಹೆಚ್ಚಿಸಲು ತಾತ್ಕಾಲಿಕ ಶಮನದ ಕ್ರಮಗಳು ನೆರವಾಗುವುದಿಲ್ಲ.
ಕಾರ್ಮಿಕರ ವೇತನದಲ್ಲಿ ಏರಿಕೆಯಾಗಬೇಕು. ದುರಂತ ಎಂದರೆ ಕಾರ್ಮಿಕರ ದುಡಿಮೆಯ ಅವಧಿ ಹೆಚ್ಚಾಗುತ್ತಿದೆ, ಆದಾಯ ಕುಸಿಯುತ್ತಿದೆ. ಹೆಚ್ಚಿನ ಕೂಲಿ/ವೇತನ ನೀಡಲು ಎಂದೂ ಮುಂದಾಗದ ಎಂಎಸ್ಎಂಇ ಉದ್ಯಮಿಗಳು ಇನ್ನೆಷ್ಟೇ ಬಂಡವಾಳ ವೃದ್ಧಿಯನ್ನು ಕಂಡರೂ ವೇತನ ಹೆಚ್ಚಿಸುವುದಿಲ್ಲ. ಏಕೆಂದರೆ ಅವರ ಲಾಭಗಳಿಕೆಯೇ ಪ್ರಧಾನವಾಗಿರುತ್ತದೆ. ಮಾರುಕಟ್ಟೆ ವ್ಯವಸ್ಥೆ ಇದಕ್ಕೆ ಅವಕಾಶವನ್ನೇ ನೀಡುವುದಿಲ್ಲ.
ಕಾರ್ಪೋರೇಟ್ ಕೇಂದ್ರಿತ ಎಂಎಸ್ಎಂಇ ಉದ್ಯಮಿಗಳಿಗೆ ಇಲ್ಲಿ ನೆರವಾಗುತ್ತಿರುವುದು ಇದೇ ಸರ್ಕಾರಗಳೇ ಅಲ್ಲವೇ ? ಈಗಾಗಲೇ ಬಿಜೆಪಿ ಆಡಳಿತದ ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ಸರ್ಕಾರಗಳು ಮೂರು ತಿಂಗಳ ಅವಧಿಗೆ ಎಲ್ಲ ಕಾರ್ಮಿಕ ಕಾನೂನುಗಳನ್ನೂ ರದ್ದುಪಡಿಸಿದ್ದು, ದುಡಿಮೆಗಾರರ ಹಕ್ಕುಗಳ ತಾತ್ಕಾಲಿಕ ಸಮಾಧಿ ನಿರ್ಮಿಸಿಬಿಟ್ಟಿವೆ. ಕರ್ನಾಟಕ ಸರ್ಕಾರ ಇದೇ ಹಾದಿಯಲ್ಲಿ ನಡೆದಿದೆ. ತಮ್ಮ ಹಕ್ಕುಗಳನ್ನು ಕಳೆದುಕೊಂಡೇ ಕಾರ್ಮಿಕರು ದಿನಕ್ಕೆ ನಾಲ್ಕು ಗಂಟೆ ಹೆಚ್ಚು ದುಡಿಯುವ ಅನಿವಾರ್ಯತೆ ಎದುರಾಗಿದೆ.
ಈಗಾಗಲೇ ತಮ್ಮ ಸ್ವಗ್ರಾಮಗಳಿಗೆ ತೆರಳಿರುವ ವಲಸೆ ಕಾರ್ಮಿಕರು ಮರಳಿ ಬಾರದೆ ಹೋದರೆ ನಗರಗಳಲ್ಲಿನ ಎಂಎಸ್ಎಂಇ ಉದ್ದಿಮೆಗಳಲ್ಲಿ ನೌಕರರ ಕೊರತೆ ಉಂಟಾಗುತ್ತದೆ. ಅಥವಾ ಸ್ಥಳೀಯರಿಗೆ ಉದ್ಯೋಗ ದೊರೆತರೂ ಅವರ ಬದುಕು ಸುಂದರವಾಗೇನೂ ಇರುವುದಿಲ್ಲ. ಕಡಿಮೆ ಕೂಲಿಯಲ್ಲಿ ಹೆಚ್ಚಿನ ದುಡಿಮೆಗೆ ಶರಣಾಗಬೇಕಾಗುತ್ತದೆ. ಬಂಡವಾಳ ವ್ಯವಸ್ಥೆಯ ಈ ಕ್ರೌರ್ಯವನ್ನು “ ಪುನಶ್ಚೇತನ ” ಎಂದು ಬಣ್ಣಿಸುವುದು ಎಷ್ಟುಸರಿ ? ಇಲ್ಲಿ ನಮಗೆ ಜೀತ ಪದ್ಧತಿಯ ಪುನರ್ಜನ್ಮ ಕಾಣದೆ ಹೋದರೆ ಹೇಗೆ ? ವಿವೇಚನೆಗೆ ಬಿಟ್ಟ ವಿಚಾರ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಸ್ಥ ಉದ್ದಿಮೆಗಳ ವ್ಯಾಖ್ಯಾನವನ್ನು ಬದಲಿಸಲಾಗಿದ್ದು ಹೆಚ್ಚಿನ ಬಂಡವಾಳ ಹೂಡಿರುವ ಉದ್ದಿಮೆಗಳು, ಕೈಗಾರಿಕೆಗಳು ಈಗ ಎಂಎಸ್ಎಂಇ ಕ್ಷೇತ್ರಕ್ಕೆ ಒಳಪಡುತ್ತವೆ. ಕೊರೋನಾ ಸಂದರ್ಭದಲ್ಲಿ ಮತ್ತು ಇದಕ್ಕೂ ಮುಂಚಿನಿಂದಲೇ ತೀವ್ರ ಆರ್ಥಿಕ ಮುಗ್ಗಟ್ಟು, ಬಂಡವಾಳದ ಕೊರತೆ, ಕಚ್ಚಾವಸ್ತುಗಳ ಪೂರೈಕೆಯ ಕೊರತೆ, ಬೇಡಿಕೆ ಮತ್ತು ಸರಬರಾಜಿನಲ್ಲಿನ ವ್ಯತ್ಯಯ ಇವೆಲ್ಲ ಸಮಸ್ಯೆಗಳನ್ನು ಹೊತ್ತುಕೊಂಡು ಕುಂಟುತ್ತಿದ್ದ ಈ ಉದ್ದಿಮೆಗಳಲ್ಲಿ ಈಗ ಕಾರ್ಮಿಕ ರಕ್ಷಣಾ ಕಾನೂನುಗಳನ್ನು ರದ್ದುಪಡಿಸುವ ಮೂಲಕ, ಆಡಳಿತ ನಿರ್ವಹಣೆಗೆ ಸುಗಮ ಮಾರ್ಗವನ್ನು ಸೃಷ್ಟಿಸಲಾಗುತ್ತದೆ.
ಈ ವಲಯದ ಉದ್ದಿಮೆಗಳು ತೀವ್ರ ಸಂಕಷ್ಟದಲ್ಲಿರುವುದರಿಂದ, ಕಾರ್ಮಿಕರು ಕೆಲ ಕಾಲ ತ್ಯಾಗ ಮಾಡಿದರೆ ತಪ್ಪೇನಿಲ್ಲ ಎನ್ನುವ ಸಾರ್ವಜನಿಕ ಅಭಿಪ್ರಾಯವನ್ನು ತಯಾರಿಸಲು ಸುದ್ದಿಮನೆಗಳು ಈಗಾಗಲೇ ತಯಾರಾಗಿವೆ. ಬಡ್ಡಿ ರಹಿತ ಅಥವಾ ಕಡಿಮೆ ಬಡ್ಡಿಯ ಸಾಲ ಪಡೆದರೂ ಉದ್ದಿಮೆಗಳು ಆ ಸಾಲದ ಹೊರೆಯನ್ನು ಕಾರ್ಮಿಕರ ದುಡಿಮೆಯಿಂದಲೇ ವಸೂಲಿ ಮಾಡುತ್ತವೆ ಎನ್ನುವುದನ್ನು ಅರ್ಥಶಾಸ್ತ್ರ ಬಲ್ಲವರಿಗೆ ಹೇಳಬೇಕಿಲ್ಲ.
ಕೊರೋನಾ ಸಂಕಟದ ಕಾಲದಲ್ಲಿ ಪುನಶ್ಚೇತನ ಬೇಕಿರುವುದು ಈ ದುಡಿಮೆಯ ಕೈಗಳಿಗೆ. ಈ ಕೈಗಳನ್ನು ನಂಬಿ ಬದುಕುವ ಕುಟುಂಬಗಳಿಗೆ. ತಮ್ಮ ಸ್ವಂತ ಸೂರು ತೊರೆದು ಮತ್ತೊಂದು ಊರು ಕಟ್ಟಲು ಹೋಗುವ ಶ್ರಮಜೀವಿಗಳಿಗೆ. ಇನ್ನೆರಡು ತಿಂಗಳಿಗೆ ಇವರ ಬದುಕು ನಡೆಯುವಷ್ಟು ದವಸ ಧಾನ್ಯ ನೀಡಿ ಕೈಗಿಷ್ಟು ಹಣ ನೀಡುವುದು ಸ್ವಾಗತಾರ್ಹವೇ. ಆದರೆ ಇವರ ಭವಿಷ್ಯದ ಬದುಕು ಸುಭದ್ರವಾಗಿರುವಂತಹ ಬುನಾದಿ ಹಾಕುವುದೂ ಅಷ್ಟೇ ಅವಶ್ಯಕ ಅಲ್ಲವೇ ? ಹಠಾತ್ತನೆ ಸ್ವದೇಶಿ ಮಂತ್ರ ಬಳಸುವ ಮುನ್ನ ಭಾರತದ ಪ್ರಭುತ್ವ ಯೋಚಿಸಬೇಕಾದ್ದು, ಇನ್ನು ಮುಂದಿನ ದಿನಗಳಲ್ಲಿ ಭಾರತದ ದುಡಿಮೆಯ ಕೈಗಳು ಯಾರಬಳಿ ಜೀತಕ್ಕಿರುತ್ತವೆ ಎನ್ನುವುದನ್ನು.
ಭಾರತದಲ್ಲೇ ತಯಾರಿಸಿ ಎನ್ನುವುದಕ್ಕೂ , ಭಾರತದವರಿಂದಲೇ ತಯಾರಿಸಿ ಎನ್ನುವುದಕ್ಕೂ ವ್ಯತ್ಯಾಸ ಇದೆಯಲ್ಲವೇ ? ಹೊರದೇಶಗಳಿಂದ ತಮ್ಮ ಅನುಕೂಲಕ್ಕೆ ತಕ್ಕಂತೆ ಒಡಂಬಡಿಕೆಗಳಿಗೆ ಸಹಿ ಮಾಡಿ, ವಿದೇಶಿ ಕಂಪನಿಗಳು ನಮ್ಮ ನೆಲದಲ್ಲಿ ಉತ್ಪಾದಿಸುವ ಸರಕುಗಳನ್ನು ಸ್ವದೇಶಿ ಎಂದು ಚಪ್ಪರಿಸುವುದಾದರೆ ಅಡ್ಡಿಯಿಲ್ಲ.
ಈ ಔದ್ಯಮಿಕ ಲೋಕದ ಲಾಭ ಎತ್ತ ಹರಿಯುತ್ತದೆ, ಯಾರ ಭಂಡಾರವನ್ನು ತುಂಬಿಸುತ್ತದೆ ಎಂದು ಯೋಚಿಸದೆ ಹೋದರೆ ನಾವು ಹಣಕಾಸು ಬಂಡವಾಳ ವ್ಯವಸ್ಥೆಯ ಕ್ರೌರ್ಯವನ್ನು ಸ್ವದೇಶಿ ಚೌಕಟ್ಟಿನಲ್ಲೇ ಆಸ್ವಾದಿಸುವುದನ್ನು ಕಲಿತುಬಿಡುತ್ತೇವೆ. ಕೊರೋನಾ ಹೊರಗಿಟ್ಟು ನೋಡಿದರೂ ಭಾರತಕ್ಕೆ ಇಂದು ಅತ್ಯವಶ್ಯವಾಗಿ ಬೇಕಿರುವುದು ಸಾರ್ವಜನಿಕ ಬಂಡವಾಳ ಹೂಡಿಕೆ, ಕೃಷಿ ಬಂಡವಾಳ ಹೂಡಿಕೆ ಮತ್ತು ಸ್ಥಳೀಯ ಬಂಡವಾಳ ವೃದ್ಧಿಗೆ ಅಗತ್ಯವಾದ ಮೂಲ ಸೌಕರ್ಯಗಳು. ಈ ವಲಯಗಳಿಗೆ ಎಂದೋ ತರ್ಪಣ ಬಿಟ್ಟಿರುವ ನವ ಉದಾರವಾದದ ಪ್ರವರ್ತಕರು ಸರಬರಾಜು ಕೇಂದ್ರಿತ ಆರ್ಥಿಕತೆಯನ್ನೇ ಪೋಷಿಸುತ್ತಿದ್ದಾರೆ.
ಇತ್ತ ಬೇಡಿಕೆಯನ್ನು ಹೆಚ್ಚಿಸಲು ಬೇಕಾದ ಕ್ರಮಗಳ ಬಗ್ಗೆ ಚಿಂತಿಸುತ್ತಲೂ ಇಲ್ಲ. ಕೊರೋನಾ ಸಂದರ್ಭದಲ್ಲೂ, 20 ಲಕ್ಷ ಕೋಟಿ ಪ್ಯಾಕೇಜಿನಲ್ಲೂ ಇದನ್ನೇ ಕಾಣುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕಾರ್ಮಿಕರು ತಮ್ಮ ಹಕ್ಕುಗಳನ್ನು ಮಾತ್ರ ಕಳೆದುಕೊಳ್ಳುತ್ತಿಲ್ಲ, ತುಟ್ಟಿಭತ್ಯೆಯನ್ನೂ ಕಳೆದುಕೊಳ್ಳಲಿದ್ದಾರೆ. ವೇತನ ಪರಿಷ್ಕರಣೆ ಬಹುಶಃ ಇನ್ನು ಕನಸಿನ ಮಾತಾಗುತ್ತದೆ. ವೇತನ ಪಡೆಯುವ ನೌಕರರ ಪಾಡು ಇದಾದರೆ ಕೂಲಿ ಮಾಡಿ ಬದುಕುವವರು ಹೇಗೆ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸಲು ಸಾಧ್ಯ ?
ಅಂದರೆ ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ಪ್ಯಾಕೇಜ್ ಔದ್ಯಮಿಕ ವಲಯದ ಚೇತರಿಕೆಗೆ ಇಂಧನ ಒದಗಿಸುತ್ತದೆ. ಆದರೆ ಜನಸಾಮಾನ್ಯರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುವುದಿಲ್ಲ. ಉತ್ಪಾದನೆಗೆ ಹೆಚ್ಚಿನ ಬಂಡವಾಳ ಹರಿದುಬರುತ್ತದೆ. ದುಡಿಮೆ ಅಗ್ಗವಾಗುತ್ತಾ ಹೋಗುತ್ತದೆ. ಅಗ್ಗದ ಕೂಲಿಯಲ್ಲೇ ಜೀವನ ಸವೆಸಬೇಕಾದ ಕೋಟ್ಯಂತರ ಕಾರ್ಮಿಕರು ಕ್ರಮೇಣ ಬಂಡವಾಳದ ದಾಸ್ಯದ ಸಂಕೋಲೆಗಳಲ್ಲಿ ಬಂದಿಗಳಾಗುತ್ತಾರೆ.
ಮತ್ತೊಂದೆಡೆ ಸಣ್ಣ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು ಸರ್ಕಾರ ತನ್ನ ಪ್ಯಾಕೇಜ್ ಮೂಲಕ ನೀಡುತ್ತಿರುವ ಸಾಲದ ಹೊರೆಯಲ್ಲೇ ಬದುಕು ಸವೆಸಬೇಕಾಗುತ್ತದೆ. ನೆರವಿಗೆ ಧಾವಿಸಿ ಸಾಲ ನೀಡುವುದು ಊಳಿಗಮಾನ್ಯ ಹಣಕಾಸು ವ್ಯವಸ್ಥೆಯ ಲಕ್ಷಣವಲ್ಲವೇ? ಬಂಡವಾಳ ವ್ಯವಸ್ಥೆಯೂ ಭಿನ್ನವಾಗಿರುವುದಿಲ್ಲ ಎಂದು ಮೋದಿ ಸರ್ಕಾರ ನಿರೂಪಿಸಿದೆ.
ಕಳೆದ ಆರು ವರ್ಷಗಳಿಂದಲೂ ಸರಬರಾಜು ಕೇಂದ್ರಿತ ಆರ್ಥಿಕ ನೀತಿಗಳನ್ನೇ ಅನುಸರಿಸುತ್ತಿರುವ ಕೇಂದ್ರ ಸರ್ಕಾರ ಕೊರೋನಾ ಸೃಷ್ಟಿಸಿರುವ ಸಂಕಷ್ಟದ ಸಮಯದಲ್ಲಿ ಬೇಡಿಕೆಯನ್ನು ಹೆಚ್ಚಿಸಲು ಯೋಚಿಸಬೇಕಿತ್ತಲ್ಲವೇ ? ಔದ್ಯಮಿಕ ವಲಯದ ಸರಕು ಮತ್ತು ಸೇವೆಯ ಉತ್ಪಾದನೆಯನ್ನು ಮತ್ತು ಸರಬರಾಜು ಸರಪಣಿಯನ್ನು ನಿರ್ಧರಿಸುವ ಮಾರುಕಟ್ಟೆ ಶಕ್ತಿಗಳೇ ಬೇಡಿಕೆಯನ್ನೂ ನಿಯಂತ್ರಿಸುತ್ತಿರುವುದನ್ನು ಕಾಣುತ್ತಿದ್ದೇವೆ.
ಇಲ್ಲಿ ಗ್ರಾಹಕರ ಬೇಡಿಕೆಗಳು ಮತ್ತು ಆಯ್ಕೆಗಳನ್ನೂ ಸಹ ಮಾರುಕಟ್ಟೆಯೇ ನಿರ್ಧರಿಸುತ್ತದೆ. ಇದರ ಒಂದು ಪ್ರಾತ್ಯಕ್ಷಿಕೆಯನ್ನು ಸೂಪರ್ ಮಾರುಕಟ್ಟೆಗಳಲ್ಲಿ, ಮಾಲ್ಗಳಲ್ಲಿ ಕಾಣಬಹುದು. ಅಲ್ಲಿ ನಾವು ಖರೀದಿಸುವುದು ನಮ್ಮ ಆಯ್ಕೆಯ ವಸ್ತುಗಳನ್ನಲ್ಲ, ಅವರು ಒಂದಕ್ಕೊಂದು ಉಚಿತ ನೀಡುವ ಉತ್ಪನ್ನಗಳನ್ನು. ಪದಾರ್ಥಗಳ ಅವಶ್ಯಕತೆ ಮತ್ತು ಗುಣಮಟ್ಟ ಮೌನವಾಗಿ ನೇಪಥ್ಯಕ್ಕೆ ಸರಿಯುತ್ತದೆ. ನಾವು ಹಣ ಕಳೆದುಕೊಂಡು ಬಂದರೂ ಲಾಭ ಗಳಿಸಿದ ಹಿರಿಮೆಯಲ್ಲಿ ಹೊರಬರುತ್ತೇವೆ.
ಕಳೆದ ಐದಾರು ವರ್ಷಗಳಿಂದಲೇ ಸಾರ್ವಜನಿಕ ಬಂಡವಾಳ ಹೂಡಿಕೆ ಇಲ್ಲದೆ ಸೊರಗಿಹೋಗಿರುವ ಭಾರತದ ಕೃಷಿ ಕ್ಷೇತ್ರ ಕೊರೋನಾ ಸಂದರ್ಭದಲ್ಲಿ ಮತ್ತಷ್ಟು ಬಿಕ್ಕಟ್ಟಿಗೆ ಸಿಲುಕಿದೆ. ಕೃಷಿ ಕ್ಷೇತ್ರದ ಪುನಶ್ಚೇತನ ಸರ್ಕಾರದ ಆದ್ಯತೆಯಾಗಲಾರದು. ಏಕೆಂದರೆ ನವ ಉದಾರವಾದದ ಅರ್ಥವ್ಯವಸ್ಥೆಯಲ್ಲಿ ಕೃಷಿ ಪ್ರಧಾನವಾಗಿ ಕಾಣುವುದಿಲ್ಲ. ಕೃಷಿ ಕ್ಷೇತ್ರವನ್ನು ಕಾರ್ಪೋರೇಟೀಕರಣಗೊಳಿಸುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ದೊರೆತಿರುವುದು ಕಳೆದ ಬಜೆಟ್ ಸಂದರ್ಭದಲ್ಲೇ ಸ್ಪಷ್ಟವಾಗಿದೆ. ಈ ಎರಡು ತಿಂಗಳ ಲಾಕ್ ಡೌನ್ ಅವಧಿಯಲ್ಲಿ ಮತ್ತು ಇನ್ನು ಮುಂದಿನ ಕೊರೋನಾ ದಿನಗಳಲ್ಲಿ ಕೃಷಿಕರ ಬದುಕಿಗೆ ಯಾವ ರೀತಿ ಸಾಂತ್ವನ ನಿರೀಕ್ಷಿಸಲು ಸಾಧ್ಯ. ಇದನ್ನು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುತ್ತಿರುವ ಕರ್ನಾಟಕ ಸರ್ಕಾರದ ಕ್ರಮದಲ್ಲಿ ಕಾಣಬಹುದು.
ಈಗಿರುವ 1966ರ ಎಪಿಎಂಸಿ ಕಾಯ್ದೆಯನ್ನು 1986ರಲ್ಲಿ ಮತ್ತಷ್ಟು ಬಲಪಡಿಸಿ, ಕೃಷಿ ಉತ್ಪನ್ನಗಳ ಖರೀದಿದಾರರು, ರೈತರು ಎಪಿಎಂಸಿಗೆ ಸಲ್ಲಿಸುವ ಉತ್ಪನ್ಮಗಳನ್ನು ನೋಂದಣಿ ಮಾಡಿಸಿದ ನಂತರವೇ ಖರೀದಿಸುವ ನಿಯಮ ಜಾರಿಯಲ್ಲಿತ್ತು. ಈ ಕಾಯ್ದೆಯಡಿ ಕಾರ್ಪೋರೇಟ್ ಉದ್ದಿಮೆಗಳು ರೈತರಿಂದ ನೇರವಾಗಿ ಖರೀದಿಸಲು ಸಾಧ್ಯವಿರಲಿಲ್ಲ. ತಮ್ಮದೇ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಹೊಂದಿರುವ ಕಾರ್ಪೋರೇಟ್ ಉದ್ದಿಮೆಗಳೂ ಎಪಿಎಂಸಿಯೊಡನೆ ಒಡಂಬಡಿಕೆ ಮಾಡಿಕೊಳ್ಳುವುದು ಕಡ್ಡಾಯವಾಗಿತ್ತು.
ಈ ಕಾಯ್ದೆಯನ್ನು ತಿದ್ದುಪಡಿ ಮಾಡಿರುವ ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲು ಮುಂದಾಗಿದೆ. ಈ ತಿದ್ದುಪಡಿ ಜಾರಿಯಾದರೆ ಎಪಿಎಂಸಿ ಆವರಣದಲ್ಲೇ ರೈತರಿಂದ ನೇರವಾಗಿ ಖರೀದಿಸಲು ಬೃಹತ್ ಕಾರ್ಪೋರೇಟ್ ಉದ್ದಿಮೆಗಳಿಗೆ ಅವಕಾಶ ದೊರೆಯುತ್ತದೆ. ಇದು ರೈತರನ್ನು ಕಾರ್ಪೋರೇಟ್ ಗುಲಾಮಗಿರಿಗೆ ಒಳಪಡಿಸುವ ಮಾರುಕಟ್ಟೆ ತಂತ್ರ ಎನ್ನುವುದು ಸ್ಪಷ್ಟ. ಈಗಾಗಲೇ ಆರ್ಥಿಕ ಮುಗ್ಗಟ್ಟು, ಕುಸಿದ ಉತ್ಪನ್ನ, ಹೆಚ್ಚಿರುವ ಗೊಬ್ಬರ ಮತ್ತು ಬೀಜದ ಬೆಲೆ, ಅಗ್ಗದ ಬೆಂಬಲ ಬೆಲೆ ಇಂತಹ ಹತ್ತು ಹಲವು ಸಮಸ್ಯೆಗಳಿಂದ ಬಸವಳಿದಿರುವ ರೈತ ಸಮುದಾಯ ಬೀದಿಪಾಲಾಗಲು ಸಜ್ಜಾಗಬೇಕಿದೆ.
ತಮ್ಮ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಹೇಳಿದ ಒಂದು ಅಂಶವನ್ನು ಗಮನಿಸಬೇಕು. ಈ ಪ್ಯಾಕೇಜ್ ಮೂಲತಃ ದುಸ್ಥಿತಿಯಲ್ಲಿರುವ ಆರ್ಥಿಕತೆಯ ಪುನಶ್ಚೇತನಕ್ಕೆ ಭೂಮಿ, ಶ್ರಮ ಮತ್ತು ಹಣಕಾಸು ದ್ರವೀಕರಣ(ಲಿಕ್ವಿಡಿಟಿ) ಒದಗಿಸುವ ಉದ್ದೇಶ ಹೊಂದಿದೆ ಎಂದು ಪ್ರಧಾನಿ ಹೇಳಿದ್ದಾರೆ. ಇಡೀ ಪ್ಯಾಕೇಜಿನ ಅಂತರಾತ್ಮ ಈ ಮೂರು ಸ್ತಂಭಗಳಲ್ಲಿ ಅಡಗಿದೆ.
ಹೊರದೇಶಗಳಿಂದ ಮೇಕ್ ಇನ್ ಇಂಡಿಯ ಯೋಜನೆಯಡಿ ಔದ್ಯಮಿಕ ಸಾಮ್ರಾಜ್ಯ ಸ್ಥಾಪಿಸಲು ಬರುವ ಕಾರ್ಪೋರೇಟ್ ಉದ್ಯಮಿಗಳಿಗೆ ಭೂ ಸ್ವಾಧೀನ ಪ್ರಕ್ರಿಯೆ ಸುಲಭವಾಗುವಂತೆ ಶಾಸನ ಜಾರಿಮಾಡಲಾಗುತ್ತದೆ. ಅಗ್ಗದ ಶ್ರಮ ಲಭ್ಯವಾಗುವಂತೆ ಶ್ರಮಿಕರನ್ನು ಕಟ್ಟಿಹಾಕಲು ಈಗಾಗಲೇ ಕಾರ್ಮಿಕ ಕಾನೂನುಗಳನ್ನು ನೆಲಸಮ ಮಾಡಲಾಗುತ್ತಿದೆ. ಇನ್ನು ಸರಬರಾಜು ಕೇಂದ್ರಿತ ಆರ್ಥಿಕತೆಗೆ ಪುಷ್ಟಿ ನೀಡುವ ನಿಟ್ಟಿನಲ್ಲಿ ದ್ರವೀಕರಣ ಸಹಜವಾಗಿಯೇ ನಡೆಯುತ್ತದೆ. ಸಾರ್ವಜನಿಕ ಹಣಕಾಸು ವಲಯದ ಸಾಂಸ್ಥಿಕ ನೆಲೆಗಳನ್ನು ಇಲ್ಲಿ ಬಳಸಿಕೊಳ್ಳಲಾಗುತ್ತದೆ.
ಬಂಡವಾಳ ವ್ಯವಸ್ಥೆ ಮತ್ತು ಹಣಕಾಸು ಬಂಡವಾಳದ ನವ ಉದಾರವಾದಿ ಮಾರುಕಟ್ಟೆಯ ಕ್ರೌರ್ಯದ ನಡುವೆಯೇ ಭಾರತದ ಶ್ರಮಿಕ ವರ್ಗ, ಕೃಷಿಕ ವರ್ಗ, ವಲಸೆ ಕಾರ್ಮಿಕರ ವರ್ಗ ಮತ್ತು ಕೆಳ ಮಧ್ಯಮ ವರ್ಗಗಳು ಕೊರೋನಾ ವಿರುದ್ಧ ಸೆಣಸಾಡಬೇಕಾಗುತ್ತದೆ. ದುರಂತ ಎಂದರೆ ದೇಶಾದ್ಯಂತ ಸಾವಿರಾರು ಜನರನ್ನು ಒಂದು ವೈರಾಣು ಸಾವು ಬದುಕಿನ ಸಂಘರ್ಷದಲ್ಲಿ ತೊಡಗಿಸಿರುವಾಗ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಶ್ರಮಿಕ ವರ್ಗಗಳ, ಉತ್ಪಾದಕೀಯ ಶಕ್ತಿಗಳ ಕತ್ತು ಹಿಸುಕುವ ಪ್ರಯತ್ನಗಳು ನಡೆಯುತ್ತಿದೆ.
ಅಭಿವೃದ್ಧಿಯ ಪರಿಭಾಷೆ ಮತ್ತು ಪ್ರಗತಿಯ ಪರಿಕಲ್ಪನೆ ಎರಡನ್ನೂ ನಿಷ್ಕರ್ಷೆಗೊಳಪಡಿಸಿ ಹೊಸ ಜಗತ್ತನ್ನು ನಿರ್ಮಿಸುವ ಹೊಣೆ ಬಹುಶಃ ದುಡಿಯುವ ವರ್ಗಗಳ ಮೇಲೆಯೇ ಇದೆ. ವರ್ಗ ಸಂಘರ್ಷ ಇದರ ಒಂದು ಮಾರ್ಗ. ಇದು ಸಾಕಾರಗೊಳ್ಳುವುದೋ ಇಲ್ಲವೋ, ಸಾರ್ಥಕ ಮಾರ್ಗವೋ ಅಲ್ಲವೋ ಎನ್ನುವುದಕ್ಕಿಂತಲೂ ಇದು ಅನಿವಾರ್ಯವೋ ಅಲ್ಲವೋ ಎಂದು ಯೋಚಿಸುವುದು ಇಂದಿನ ತುರ್ತು.
ಕೊರೋನಾ ಶ್ರಮಜೀವಿಗಳ ಪಾಲಿಗೆ ಒಂದು ರೀತಿಯಲ್ಲಿ ಮಾರಣಾಂತಿಕವಾಗಿದ್ದರೂ ಮತ್ತೊಂದು ರೀತಿಯಲ್ಲಿ ಪ್ರಭುತ್ವದ ನೈಜ ಮುಖವನ್ನು ಅರ್ಥಮಾಡಿಕೊಳ್ಳಲು ಅವಕಾಶವನ್ನೂ ನೀಡಿದೆ. ಈ ಅವಕಾಶವನ್ನು ಬಳಸಿಕೊಂಡು ಹೊಸ ಬದುಕು ಮತ್ತು ಹೊಸ ನಾಡು ಕಟ್ಟುವುದು ನಮ್ಮ ಹೊಣೆ. ಕೊರೋನಾ ನಂತರ ಈ ಹೊಣೆ ಇನ್ನೂ ಹೆಚ್ಚಾಗುತ್ತದೆ. ಈ ಸಂಘರ್ಷದ ನಿರೀಕ್ಷೆಯೊಂದಿಗೇ ಮುನ್ನಡೆಯೋಣ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭದ್ರಾ ಜಲಾಶಯ: ಮಲೆನಾಡಿನ ಮಳೆಯಿಂದ ಬಯಲುಸೀಮೆಯ ಹಸಿರಿನವರೆಗೆ… ಲಕ್ಷಾಂತರ ಜನರ ಬದುಕಿನ ಜಲನಾಡಿ!
ಸುದ್ದಿದಿನ,ಶಿವಮೊಗ್ಗ: ಭದ್ರಾ ಜಲಾಶಯ ಎಂದರೆ ಕೇವಲ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಅಣೆಕಟ್ಟಲ್ಲ. ಪಶ್ಚಿಮಘಟ್ಟದ ಮಳೆಯನ್ನು ಮಧ್ಯ ಕರ್ನಾಟಕದ ಬರಡು ಭೂಮಿಗೆ ಕೊಂಡೊಯ್ಯುವ ಜೀವನಾಡಿ. ಮಲೆನಾಡಿನ ನದಿಯಿಂದ ಆರಂಭವಾಗುವ ಭದ್ರೆಯ ಪಯಣವು ರೈತರ ಕೃಷಿ, ಜನರ ಕುಡಿಯುವ ನೀರು, ಸ್ಥಳೀಯ ಆರ್ಥಿಕತೆ, ವಿದ್ಯುತ್ ಉತ್ಪಾದನೆ ಹಾಗೂ ಪರಿಸರದೊಂದಿಗೆ ನೇರ ಸಂಬಂಧ ಹೊಂದಿದೆ. ಜಲಾಶಯ ತುಂಬಿದರೆ ಹಲವು ಜಿಲ್ಲೆಗಳ ರೈತರ ಮುಖದಲ್ಲಿ ಮಂದಹಾಸ ಮೂಡಿದರೆ, ನೀರಿನ ಕೊರತೆ ಎದುರಾದಾಗ ಇದೇ ಪ್ರದೇಶಗಳಲ್ಲಿ ಆತಂಕ ಹೆಚ್ಚುತ್ತದೆ.
http://Visit : www.suddidina.com
ಪಶ್ಚಿಮಘಟ್ಟದಿಂದ ಬಯಲುಸೀಮೆಯವರೆಗೆ ಭದ್ರೆಯ ಪಯಣ
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ–ವರಾಹ ಪರ್ವತ ಶ್ರೇಣಿಗಳ ಗಂಗಾಮೂಲದಲ್ಲಿ ಹುಟ್ಟುವ ಭದ್ರಾ ನದಿ ಕಳಸ, ಕೊಪ್ಪ, ನರಸಿಂಹರಾಜಪುರ, ತರೀಕೆರೆ ಹಾಗೂ ಭದ್ರಾವತಿ ತಾಲೂಕುಗಳಲ್ಲಿ ಹರಿದು ಕೂಡಲಿ ಬಳಿ ತುಂಗಾ ನದಿಯನ್ನು ಸೇರುತ್ತದೆ. ಬಳಿಕ ತುಂಗಾಭದ್ರೆಯಾಗಿ ಮುಂದುವರಿದು ಕೃಷ್ಣಾ ನದಿಯನ್ನು ಸೇರುತ್ತದೆ.
ತರೀಕೆರೆ ತಾಲೂಕಿನ ಲಕ್ಕವಳ್ಳಿ ಬಳಿ ನಿರ್ಮಿಸಲಾಗಿರುವ ಭದ್ರಾ ಜಲಾಶಯ 1,708 ಮೀಟರ್ ಉದ್ದ ಹಾಗೂ 59.14 ಮೀಟರ್ ಎತ್ತರ ಹೊಂದಿದೆ. ಇದರ ಒಟ್ಟು ಸಂಗ್ರಹ ಸಾಮರ್ಥ್ಯ 71.50 ಟಿಎಂಸಿ. 1,968.40 ಚದರ ಕಿಲೋಮೀಟರ್ ಜಲಾನಯನ ಪ್ರದೇಶ ಹೊಂದಿರುವ ಈ ಯೋಜನೆಗೆ ಸ್ವಾತಂತ್ರ್ಯಾನಂತರ 1947ರಲ್ಲಿ ಚಾಲನೆ ದೊರೆತಿದ್ದು, ಅಣೆಕಟ್ಟು ಕಾಮಗಾರಿ 1959ರಲ್ಲಿ ಹಾಗೂ ನಾಲೆಗಳ ಕಾಮಗಾರಿ 1966ರಲ್ಲಿ ಪೂರ್ಣಗೊಂಡಿತು.
ಒಣಭೂಮಿಗೆ ಹಸಿರು ಹೊದಿಸಿದ ನೀರು
ಭದ್ರಾ ನೀರಾವರಿ ಯೋಜನೆಯು ಮಧ್ಯ ಕರ್ನಾಟಕದ ಕೃಷಿಯ ಚಿತ್ರಣವನ್ನೇ ಬದಲಿಸಿದೆ. ಎಡದಂಡೆ ನಾಲೆ 77.24 ಕಿ.ಮೀ. ಹರಿದು ಸುಮಾರು 8,300 ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಿದರೆ, ಬಲದಂಡೆ ನಾಲೆ 366.90 ಕಿ.ಮೀ. ಉದ್ದಕ್ಕೆ ಹರಿದು ಸುಮಾರು ಒಂದು ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತದೆ.
ಒಂದು ಕಾಲದಲ್ಲಿ ಭತ್ತ ಮತ್ತು ಕಬ್ಬು ಪ್ರಧಾನವಾಗಿದ್ದ ಪ್ರದೇಶಗಳಲ್ಲಿ ಇದೀಗ ಅಡಕೆ ಸೇರಿದಂತೆ ವಿವಿಧ ವಾಣಿಜ್ಯ ಬೆಳೆಗಳ ವಿಸ್ತರಣೆ ಕಂಡುಬಂದಿದೆ. ಹೀಗಾಗಿ ಭದ್ರಾ ನೀರು ಕೃಷಿ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದೆ.
ಕುಡಿಯುವ ನೀರಿಗೂ ಭದ್ರೆಯೇ ಆಸರೆ
ಮಧ್ಯ ಕರ್ನಾಟಕದ ಹಲವು ನಗರಗಳು, ಪಟ್ಟಣಗಳು ಹಾಗೂ ಸಾವಿರಾರು ಹಳ್ಳಿಗಳ ಕುಡಿಯುವ ನೀರಿನ ವ್ಯವಸ್ಥೆಯಲ್ಲೂ ಭದ್ರಾ ಜಲಾಶಯ ಪ್ರಮುಖ ಪಾತ್ರ ವಹಿಸುತ್ತದೆ. ಜಲಾಶಯದಲ್ಲಿ ಕುಡಿಯುವ ನೀರಿಗಾಗಿ 8.50 ಟಿಎಂಸಿ ನೀರನ್ನು ಮೀಸಲಿಡಲಾಗಿದೆ. ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ, ವಿಜಯನಗರ, ಬಳ್ಳಾರಿ ಸೇರಿದಂತೆ ಹಲವು ಪ್ರದೇಶಗಳ ಜನಜೀವನಕ್ಕೆ ಈ ನೀರು ಆಸರೆಯಾಗಿದೆ.
ಹೂಳು, ಮೇಲ್ದಂಡೆ ಯೋಜನೆ: ಭವಿಷ್ಯದ ಸವಾಲು
ಜಲಾಶಯದ ಸಂಗ್ರಹ ಸಾಮರ್ಥ್ಯದ ಮೇಲೆ ಹೂಳು ಕೂಡ ಪರಿಣಾಮ ಬೀರುತ್ತಿದೆ. ಮೂಲ ಸಂಗ್ರಹಕ್ಕೆ ಹೋಲಿಸಿದರೆ ಸುಮಾರು 95.74 ಮಿಲಿಯನ್ ಘನ ಮೀಟರ್ ಹೂಳು ಸೇರಿಕೊಂಡಿದೆ ಎನ್ನಲಾಗುತ್ತದೆ. ಸದ್ಯ ಡೆಡ್ ಸ್ಟೋರೇಜ್ ಇರುವುದರಿಂದ ತಕ್ಷಣದ ಬಳಕೆಗೆ ದೊಡ್ಡ ತೊಂದರೆ ಇಲ್ಲವಾದರೂ, ಭವಿಷ್ಯದ ಜಲಭದ್ರತೆ ದೃಷ್ಟಿಯಿಂದ ಹೂಳು ನಿರ್ವಹಣೆ ಮಹತ್ವದ್ದಾಗಿದೆ.
ಇದರ ನಡುವೆ ಭದ್ರಾ ಮೇಲ್ದಂಡೆ ಯೋಜನೆ ಬರಪೀಡಿತ ಪ್ರದೇಶಗಳಿಗೆ ನೀರೊದಗಿಸುವ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಸೂಕ್ಷ್ಮ ನೀರಾವರಿ ಹಾಗೂ ಕೆರೆಗಳ ಭರ್ತಿಗೆ ಯೋಜನೆ ರೂಪಿಸಲಾಗಿದೆ. ಜತೆಗೆ ನಾಲೆಗಳ ಮೂಲಕ 37.2 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯೂ ನಡೆಯುತ್ತಿದೆ. ಮೀನು ಮರಿ ಸಾಕಣೆ ಕೇಂದ್ರವೂ ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡುತ್ತಿದೆ.
ಭದ್ರೆಯ ಅಂಕಿ-ಅಂಶಗಳು
- ಜಲಾನಯನ ಪ್ರದೇಶ: 1,968.40 ಚ.ಕಿ.ಮೀ.
- ಅಣೆಕಟ್ಟು ಎತ್ತರ: 59.14 ಮೀಟರ್
- ಅಣೆಕಟ್ಟು ಉದ್ದ: 1,708 ಮೀಟರ್
- ನೀರು ಸಂಗ್ರಹ ಸಾಮರ್ಥ್ಯ: 71.50 ಟಿಎಂಸಿ
- ಅಚ್ಚುಕಟ್ಟು ಪ್ರದೇಶ: 1,05,570 ಹೆಕ್ಟೇರ್
- ನಾಲೆಗಳ ಒಟ್ಟು ಉದ್ದ: 444.14 ಕಿ.ಮೀ.

ದಿನದ ಸುದ್ದಿ
ಸಾಮಾಜಿಕ ಬದಲಾವಣೆಗೆ ಮಾದರಿಯಾಗಬೇಕಿದ್ದ ಯೋಜನೆಗೆ ದಾಖಲೆ, ಅನುದಾನ ಕೊರತೆ ಅಡ್ಡಿ; ಸಾವಿರಾರು ಅರ್ಜಿಗಳು ಬಾಕಿ
ಸುದ್ದಿದಿನ,ಶಿವಮೊಗ್ಗ: ಜಾತಿ-ಧರ್ಮದ ಕಟ್ಟುಪಾಡುಗಳನ್ನು ಮೀರಿ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಮದುವೆಯಾಗುವ ದಂಪತಿಗಳಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆಯೇ ಇದೀಗ ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿದೆ. ಸಮಾಜದ ವಿರೋಧವನ್ನು ಎದುರಿಸಿ ಹೊಸ ಬದುಕು ಕಟ್ಟಿಕೊಳ್ಳುವ ದಂಪತಿಗಳಿಗೆ ನೆರವಾಗಬೇಕಿದ್ದ ಯೋಜನೆಯಲ್ಲಿ ಹಣ ಬಿಡುಗಡೆ ವಿಳಂಬವಾಗುತ್ತಿದ್ದು, ಅರ್ಹ ಫಲಾನುಭವಿಗಳು ಸರ್ಕಾರದ ನೆರವಿಗಾಗಿ ಕಾಯುವಂತಾಗಿದೆ.
| ಹೈಲೈಟ್ಸ್: |
|
http://Visit : www.suddidina.com
ಅಂತರ್ಜಾತಿ ವಿವಾಹಕ್ಕೆ ಎಷ್ಟು ಪ್ರೋತ್ಸಾಹಧನ?
ಅಸ್ಪೃಶ್ಯತೆ ನಿವಾರಣೆ ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಪುರುಷ ಬೇರೆ ಜಾತಿಯ ಮಹಿಳೆಯನ್ನು ವಿವಾಹವಾದರೆ ₹2.50 ಲಕ್ಷ ಹಾಗೂ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಮಹಿಳೆ ಬೇರೆ ಜಾತಿಯ ಪುರುಷನನ್ನು ವಿವಾಹವಾದರೆ ₹3 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ.
ಆದರೆ, ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಿದವರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಹಣ ಪಾವತಿ ಮಾತ್ರ ಅದೇ ವೇಗದಲ್ಲಿ ನಡೆಯುತ್ತಿಲ್ಲ. 2025-26ನೇ ಸಾಲಿನಲ್ಲಿ 5,612 ಅರ್ಜಿಗಳು ಸಲ್ಲಿಕೆಯಾಗಿದ್ದು, 1,615 ಅರ್ಜಿಗಳಿಗೆ ಮೊದಲ ಹಂತದ ಪ್ರೋತ್ಸಾಹಧನಕ್ಕೆ ಅನುಮೋದನೆ ದೊರೆತಿದೆ. ಆದರೆ ಕೇವಲ 39 ಫಲಾನುಭವಿಗಳಿಗೆ ಮಾತ್ರ ಹಣ ಪಾವತಿಯಾಗಿದ್ದು, 3,997 ಅರ್ಜಿಗಳು ಇನ್ನೂ ಬಾಕಿ ಉಳಿದಿವೆ. 909 ಅರ್ಜಿಗಳು ಅಪೂರ್ಣ ದಾಖಲೆಗಳ ಕಾರಣದಿಂದ ಬಾಕಿಯಾಗಿವೆ.
ಹೊಸ ಸಾಲಿನಲ್ಲೂ ಅದೇ ಕಥೆ
2026-27ನೇ ಸಾಲಿನಲ್ಲಿ ಇದುವರೆಗೆ 2,194 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 61 ಅರ್ಜಿಗಳಿಗೆ ಅನುಮೋದನೆ ದೊರೆತಿದ್ದರೂ, ಮೊದಲ ಕಂತಿನ ಹಣ ಯಾರಿಗೂ ಪಾವತಿಯಾಗಿಲ್ಲ. 392 ಅರ್ಜಿಗಳು ಅಪೂರ್ಣ ದಾಖಲೆಗಳ ಕಾರಣದಿಂದ ಬಾಕಿ ಉಳಿದಿವೆ.
ಅನುದಾನ ಹೆಚ್ಚಳವಾಗದಿರುವುದು ದೊಡ್ಡ ಸಮಸ್ಯೆ
ಅಂತರ್ಜಾತಿ ವಿವಾಹಗಳ ಸಾಮಾಜಿಕ ಸ್ವೀಕಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಏರಿಕೆಯಾಗಿದೆ. ಆದರೆ, ಅರ್ಜಿಗಳ ಸಂಖ್ಯೆಗೆ ಅನುಗುಣವಾಗಿ ಯೋಜನೆಯ ಅನುದಾನ ಹೆಚ್ಚಳವಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿ ಹಿಂದಿನ ವರ್ಷದ ಅರ್ಜಿಗಳೇ ಬಾಕಿ ಉಳಿಯುತ್ತಿರುವಾಗ ಹೊಸ ಅರ್ಜಿಗಳ ವಿಲೇವಾರಿಯೂ ವಿಳಂಬವಾಗುತ್ತಿದೆ.
2018-19ರಲ್ಲಿ ₹64.27 ಕೋಟಿ, 2019-20ರಲ್ಲಿ ₹90.42 ಕೋಟಿ, 2020-21ರಲ್ಲಿ ₹99.9 ಕೋಟಿ, 2021-22ರಲ್ಲಿ ₹171.84 ಕೋಟಿ ಹಾಗೂ 2022-23ರಲ್ಲಿ ₹94.62 ಕೋಟಿ ಅನುದಾನ ಮೀಸಲಿಡಲಾಗಿತ್ತು. ಆದರೆ ವಾರ್ಷಿಕವಾಗಿ ಬರುತ್ತಿರುವ ಅರ್ಜಿಗಳನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲು ಈ ಮೊತ್ತ ಸಾಕಾಗುತ್ತಿಲ್ಲ ಎಂಬ ಪ್ರಶ್ನೆ ಎದುರಾಗಿದೆ.
2026-27ನೇ ಸಾಲಿನ ಈವರೆಗಿನ ಅಂತರ್ಜಾತಿ ಪ್ರೋತ್ಸಾಹಧನ ಯೋಜನೆಯ ವಿವರ
- 2026-27ನೇ ಸಾಲಿನಲ್ಲಿ ಸಲ್ಲಿಕೆಯಾದ ಅರ್ಜಿಗಳು: 2,194
- ಮೊದಲ ಕಂತಿಗೆ ಅನುಮೋದನೆ: 61
- ಪ್ರೋತ್ಸಾಹ ಧನ ಪಾವತಿ: 00
- ಅಪೂರ್ಣ ಅರ್ಜಿಗಳು: 392
- ತಿರಸ್ಕಾರಗೊಂಡ ಅರ್ಜಿಗಳು: 02
ಸಾಮಾಜಿಕ ಧೈರ್ಯಕ್ಕೆ ಆರ್ಥಿಕ ಬೆಂಬಲ ಬೇಕಿದೆ
ಅಂತರ್ಜಾತಿ ವಿವಾಹದ ನಿರ್ಧಾರ ಕೈಗೊಳ್ಳುವ ಜೋಡಿಗಳು ಕೆಲವೊಮ್ಮೆ ಕುಟುಂಬದ ವಿರೋಧ, ಸಾಮಾಜಿಕ ಒತ್ತಡ, ಬಹಿಷ್ಕಾರ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಪ್ರೋತ್ಸಾಹಧನ ಕೇವಲ ಹಣಕಾಸಿನ ನೆರವಲ್ಲ; ಅದು ಹೊಸ ದಂಪತಿಗಳ ನಿರ್ಧಾರಕ್ಕೆ ಸಾಮಾಜಿಕ ಬೆಂಬಲದ ಸಂಕೇತವೂ ಹೌದು.
ಆದರೆ ಅರ್ಜಿ ಸಲ್ಲಿಸಿ ಅನುಮೋದನೆಗಾಗಿ, ನಂತರ ಹಣಕ್ಕಾಗಿ ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಉಂಟಾದರೆ ಯೋಜನೆಯ ಮೂಲ ಉದ್ದೇಶವೇ ದುರ್ಬಲವಾಗುತ್ತದೆ. ಹೀಗಾಗಿ ಬಾಕಿ ಅರ್ಜಿಗಳ ತ್ವರಿತ ವಿಲೇವಾರಿ, ದಾಖಲೆ ಪ್ರಕ್ರಿಯೆ ಸರಳೀಕರಣ ಹಾಗೂ ಅಗತ್ಯ ಅನುದಾನ ಹೆಚ್ಚಳಕ್ಕೆ ಸರ್ಕಾರ ಗಮನಹರಿಸಬೇಕಿದೆ.

ದಿನದ ಸುದ್ದಿ
ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಸಿಹಿಸುದ್ದಿ: 4,744 ತಾಂತ್ರಿಕೇತರ ಹಾಗೂ ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಸಿದ್ಧತೆ
ಸುದ್ದಿದಿನ,ಬೆಂಗಳೂರು: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಪದವಿ ಹಾಗೂ ಪಿಯುಸಿ-ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಅವಕಾಶ ಕಲ್ಪಿಸಲು ಸಜ್ಜಾಗಿದೆ. ವಿವಿಧ ಇಲಾಖೆಗಳಲ್ಲಿನ ಒಟ್ಟು 4,744 ತಾಂತ್ರಿಕೇತರ ಹಾಗೂ ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಈ ತಿಂಗಳಲ್ಲೇ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆದಿದೆ. ನೇಮಕಾತಿ ಪ್ರಕ್ರಿಯೆಯ ಭಾಗವಾಗಿ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಲಿಖಿತ ಪರೀಕ್ಷೆ ನಡೆಸುವ ಸಾಧ್ಯತೆಯೂ ಇದ್ದು, ಅಭ್ಯರ್ಥಿಗಳು ಈಗಿನಿಂದಲೇ ಅಧ್ಯಯನ ಆರಂಭಿಸುವುದು ಸೂಕ್ತವಾಗಿದೆ.
| ಹೈಲೈಟ್ಸ್: 4,744 ಹುದ್ದೆಗಳಿಗೆ ನೇಮಕಾತಿ |
|
http://Visit : www.suddidina.com
ಪದವಿ ಮಟ್ಟದಲ್ಲಿ 2,421 ಹುದ್ದೆಗಳು
ಈ ಬೃಹತ್ ನೇಮಕಾತಿಯಲ್ಲಿ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ. ಪದವಿ ಮಟ್ಟದ ತಾಂತ್ರಿಕೇತರ ಹುದ್ದೆಗಳು 2,421 ಇದ್ದು, ವಿವಿಧ ಸರಕಾರಿ ಇಲಾಖೆಗಳ ವ್ಯಾಪ್ತಿಯಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಪದವಿ ಪೂರ್ಣಗೊಳಿಸಿರುವ ಉದ್ಯೋಗಾಕಾಂಕ್ಷಿಗಳು ಯಾವ ಇಲಾಖೆಯಲ್ಲಿ ಯಾವ ಹುದ್ದೆಗಳು ಲಭ್ಯವಿರಲಿವೆ, ಹುದ್ದೆವಾರು ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ವಿಧಾನ ಸೇರಿದಂತೆ ಅಧಿಸೂಚನೆಯಲ್ಲಿ ಪ್ರಕಟವಾಗುವ ಸಂಪೂರ್ಣ ವಿವರಗಳನ್ನು ಗಮನಿಸಬೇಕು.
ಪಿಯುಸಿ ಅಭ್ಯರ್ಥಿಗಳಿಗೂ ಅವಕಾಶ
ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರಿಗೂ ಈ ನೇಮಕಾತಿಯಲ್ಲಿ ಉತ್ತಮ ಅವಕಾಶವಿದೆ. ಪಿಯುಸಿ ಮಟ್ಟದ ತಾಂತ್ರಿಕೇತರ ಹುದ್ದೆಗಳು 2,062 ಇವೆ. ಹೀಗಾಗಿ ಪದವಿ ಮಾತ್ರವಲ್ಲದೆ ಪಿಯುಸಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳೂ ಈ ನೇಮಕಾತಿಯ ಮೇಲೆ ಕಣ್ಣಿಟ್ಟಿದ್ದಾರೆ.
ಪಿಯುಸಿ ಹಂತದ ಹುದ್ದೆಗಳಿಗೆ ಅರ್ಹರಾಗಿರುವವರು ಅಧಿಸೂಚನೆ ಪ್ರಕಟವಾದ ನಂತರ ತಮ್ಮ ವಿದ್ಯಾರ್ಹತೆಗೆ ಹೊಂದುವ ಹುದ್ದೆಗಳನ್ನು ಗುರುತಿಸಿ ಅರ್ಜಿ ಸಲ್ಲಿಸಬಹುದು.
ತಾಂತ್ರಿಕ ವಿಭಾಗದಲ್ಲಿಯೂ 261 ಹುದ್ದೆಗಳನ್ನು ಭರ್ತಿ ಮಾಡಲು ಸಿದ್ಧತೆ ನಡೆದಿದೆ. ತಾಂತ್ರಿಕ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ತಮ್ಮ ಅರ್ಹತೆಗೆ ಅನುಗುಣವಾಗಿ ಹುದ್ದೆಗಳನ್ನು ಪರಿಶೀಲಿಸಬೇಕಾಗಿದೆ.
ಒಟ್ಟು 4,744 ಹುದ್ದೆಗಳ ಪೈಕಿ 2,421 ಪದವಿ ಮಟ್ಟದ ತಾಂತ್ರಿಕೇತರ, 2,062 ಪಿಯುಸಿ ಮಟ್ಟದ ತಾಂತ್ರಿಕೇತರ ಹಾಗೂ 261 ತಾಂತ್ರಿಕ ಹುದ್ದೆಗಳು ಸೇರಿವೆ. ಈ ಮೂಲಕ ವಿವಿಧ ವಿದ್ಯಾರ್ಹತೆ ಹೊಂದಿರುವ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ ಸಿಗಲಿದೆ.
ಇನ್ನಷ್ಟು ಹುದ್ದೆಗಳು ಸೇರುವ ಸಾಧ್ಯತೆ
ಪ್ರಸ್ತುತ ಪ್ರಕಟಿಸಿರುವ ಹುದ್ದೆಗಳ ಸಂಖ್ಯೆಯೇ ಅಂತಿಮವಾಗಿಲ್ಲ ಎಂಬುದು ಗಮನಾರ್ಹ. ನಂತರದ ದಿನಗಳಲ್ಲಿ ಇನ್ನಷ್ಟು ಹೊಸ ಇಲಾಖೆಗಳು ಮತ್ತು ಹುದ್ದೆಗಳು ನೇಮಕಾತಿ ಪಟ್ಟಿಗೆ ಸೇರುವ ಸಾಧ್ಯತೆ ಇದೆ. ಹೀಗಾಗಿ ಅಭ್ಯರ್ಥಿಗಳು ಕೇವಲ ಈಗಿರುವ ಹುದ್ದೆಗಳನ್ನಷ್ಟೇ ಗಮನಿಸದೆ, ಅಧಿಕೃತ ಅಧಿಸೂಚನೆ ಹೊರಬರುವವರೆಗೆ KEA ಪ್ರಕಟಣೆಗಳನ್ನು ನಿರಂತರವಾಗಿ ಪರಿಶೀಲಿಸಬೇಕು.
ಪರೀಕ್ಷೆಗೆ ಈಗಿನಿಂದಲೇ ತಯಾರಿ
ನವೆಂಬರ್ ಹಾಗೂ ಡಿಸೆಂಬರ್ನಲ್ಲಿ ಲಿಖಿತ ಪರೀಕ್ಷೆ ನಡೆಸಲು ಸಿದ್ಧತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಗೆ ತಯಾರಿಗೆ ಸಮಯ ಸೀಮಿತವಾಗಿರಲಿದೆ. ನೇಮಕಾತಿಯ ಪಠ್ಯಕ್ರಮದ ವಿವರಗಳನ್ನೂ ಮುಂಚಿತವಾಗಿ ಪರಿಶೀಲಿಸಿ, ವಿಷಯವಾರು ಅಧ್ಯಯನ ಆರಂಭಿಸುವುದು ಉತ್ತಮ.
ಅಂತಿಮವಾಗಿ, ಹುದ್ದೆಗಳ ಸಂಖ್ಯೆ, ಇಲಾಖೆಗಳ ವಿವರ, ವಿದ್ಯಾರ್ಹತೆ, ಪರೀಕ್ಷಾ ವಿಧಾನ, ಪಠ್ಯಕ್ರಮ, ವಯೋಮಿತಿ ಹಾಗೂ ಅರ್ಜಿ ಸಲ್ಲಿಕೆಯ ದಿನಾಂಕ ಸೇರಿದಂತೆ ಪೂರ್ಣ ಹಾಗೂ ಅಧಿಕೃತ ಮಾಹಿತಿಯನ್ನು ಅಧಿಸೂಚನೆ ಪ್ರಕಟವಾದ ಬಳಿಕವೇ ಖಚಿತಪಡಿಸಿಕೊಳ್ಳಬೇಕು. ಅಭ್ಯರ್ಥಿಗಳು ಪ್ರಕಟಣೆಯ ಲಿಂಕ್ ಪರಿಶೀಲಿಸಿ, ತಮ್ಮ ಅರ್ಹತೆಗೆ ಹೊಂದುವ ಹುದ್ದೆಗಳ ವಿವರಗಳನ್ನು ತಿಳಿದುಕೊಂಡು ಸಿದ್ಧತೆ ಆರಂಭಿಸಬಹುದು.

-
ದಿನದ ಸುದ್ದಿ7 days agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ6 days agoಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿ: ಪ್ರತಿ ತಿಂಗಳು ಎರಡು ದಿನ ಪ್ರವಾಸ
-
ದಿನದ ಸುದ್ದಿ6 days agoಶ್ರೀಮಂತಿಕೆಯ ನಡುವೆ ಸರಳ ಬದುಕು: 50 ರೂ. ಹೇರ್ಕಟ್ ಹೇಳಿದ ಡಿಕೆಶಿ
-
ದಿನದ ಸುದ್ದಿ4 days agoಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್ಮೆಂಟ್ಗೆ ‘ಡೆಮಾಲಿಷನ್’ ಶುರು!
-
ದಿನದ ಸುದ್ದಿ4 days agoಕಲಬುರಗಿ ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್ ಮೇಲುಗೈ: ಮೇಯರ್-ಉಪ ಮೇಯರ್ ಸ್ಥಾನವೂ ‘ಕೈ’ ತೆಕ್ಕೆಗೆ!
-
ದಿನದ ಸುದ್ದಿ4 days agoವಾಲ್ಮೀಕಿ ಹಗರಣದ ಕಿಡಿ ಮತ್ತೆ ಬಳ್ಳಾರಿಯಲ್ಲಿ: ನಾಗೇಂದ್ರ ವಿರುದ್ಧ ಜನಾರ್ಧನ ರೆಡ್ಡಿ ವಾಗ್ದಾಳಿ, ಕಾಂಗ್ರೆಸ್ಗೆ ರಾಜೀನಾಮೆ ಸವಾಲು!
-
ದಿನದ ಸುದ್ದಿ4 days agoವೈದ್ಯಕೀಯ ಕಾಲೇಜುಗಳ ಹಾಸ್ಟೆಲ್ ಕ್ಯಾಂಟೀನ್ಗಳಿಗೆ ಅಧಿಕಾರಿಗಳ ಶಾಕ್! 34 ಕ್ಯಾಂಟೀನ್ ಪರಿಶೀಲನೆ, 5ಕ್ಕೆ ನೋಟಿಸ್
-
ದಿನದ ಸುದ್ದಿ4 days agoTrump Oil Deal: ವೆನೆಜುವೆಲಾದ 65 ಬಿಲಿಯನ್ ಬ್ಯಾರೆಲ್ ತೈಲದ ಮೇಲೆ ಅಮೆರಿಕದ ಕಣ್ಣು; ಇದು ವಿಶ್ವದ ಅತಿದೊಡ್ಡ ಡೀಲ್ನಾ?



