ರಾಜಕೀಯ
ರಾಜಕೀಯ ಪ್ರಜ್ಞೆ : ಭಾರತೀಯ ವಾಸ್ತವಿಕತೆ
ಪ್ರಾಥಮಿಕ ಹಂತದಲ್ಲಿ ಓದುತ್ತಿರುವ ಮಕ್ಕಳನ್ನು ಆಕರ್ಷಿಸುವವರು ಸಿನಿಮಾ ನಟ-ನಟಿಯರು. ಸ್ಟಾರ್ ನಟರುಗಳ ಫೈಟ್ಗಳನ್ನೇ ನೋಡಿ ಬಣಗಳನ್ನು ಕಟ್ಟಿಕೊಂಡು ‘ನಮ್ಮ ಹೀರೋ ಹೀಗೆ, ಹಾಗೆ’ ಅಂತೆಲ್ಲಾ ಅವರು ಮಾತನಾಡಿಕೊಳ್ಳುತ್ತಾರೆ. ಹಿಂದಿನ ದಿನ ಸಿನಿಮಾ ನೋಡಿದ ನಂತರ ಮರುದಿನ ಆ ಬಗ್ಗೆ ಹೇಳಿಕೊಳ್ಳುವುದೆಂದರೆ ಅವರಿಗೆ ಪ್ರತಿಷ್ಠೆ. ಕಥೆಗಿಂತ ಫೈಟ್ಗಳ ವರ್ಣನೆಗೇ ಉತ್ಸಾಹ ಮೀಸಲು. ಒಬ್ಬ ಹೀರೋ ಫೈಟ್ ಬಗ್ಗೆ ಹೇಳಿಕೊಳ್ಳುವಾಗಲೇ ಇನ್ನೊಬ್ಬ ಹೀರೋನ ಅಭಿಮಾನಿ ಸ್ನೇಹಿತ ತಕರಾರು ಎತ್ತಿ ‘ನಮ್ಮ ಹೀರೋ ಮುಂದೆ ನಿಮ್ಮ ಹೀರೋ ಜೀರೋ’ ಎಂದ ಕೂಡಲೇ ಜಗಳ ತಾರಕಕ್ಕೇರುತ್ತದೆ. ಮಾತು ಬಿಡುವುದು, ಎಷ್ಟೋ ದಿವಸಗಳ ನಂತರ ಮತ್ತೆ ಮಾತನಾಡುವುದು, ಒಂದಷ್ಟು ಮುನಿಸು, ದ್ವೇಷ, ಸ್ನೇಹಗಳ ಮೂಲಗಳಾಗಿ ಆ ದಿನಗಳು ಕಳೆದುಹೋಗುತ್ತವೆ. ಅವರೊಳಗಿನ ಮುಗ್ಧತೆಯ ಕಾರಣಕ್ಕಾಗಿಯೇ ಅವರು ಮತ್ತೆ ಮಾತನಾಡಿಕೊಳ್ಳುತ್ತಾರೆ. ಸ್ನೇಹವನ್ನು ಉಳಿಸಿಕೊಳ್ಳುತ್ತಾರೆ. ಆ ಮುಗ್ಧತೆಯೊಂದಿಗೇ ಬೆಳವಣಿಗೆಯ ವಿವಿಧ ಹಂತಗಳು ದಾಟಿಕೊಂಡರೆ ಅವರು ಸರಿಯಾಗಿ ಆಲೋಚಿಸುವುದರ ಕಡೆಗೆ ವಾಲಿಕೊಳ್ಳುತ್ತಾರೆ. ಹಾಗಿದ್ದಾಗಲೇ ಪ್ರಶ್ನಿಸುವ ಸಹಜ ಪ್ರವೃತ್ತಿ ಜೀವಂತವಾಗಿರುತ್ತದೆ. ಮುಕ್ತಚಿಂತನೆಯ ಕಡೆಗಿನ ಹಾದಿ ತೆರೆದುಕೊಳ್ಳುತ್ತದೆ. ಆದರೆ, ಸಿನಿಮಾದೊಂದಿಗಿನ ಭಾವುಕ ನಂಟು ಕ್ರಮೇಣ ಅವರೊಳಗೆ ಅಂಧಾಭಿಮಾನ ಸೃಷ್ಟಿಸಿಬಿಡುತ್ತದೆ.
ಕಟೌಟ್, ಅದರ ಮೇಲೆ ಕ್ಷೀರಧಾರೆ ಎರೆಯುವ ಆರಾಧನಾ ಮನಸ್ಥಿತಿಯೂ ಹೀಗೆಯೇ ರೂಪುಗೊಳ್ಳುತ್ತದೆ. ಸಿನಿಮಾಭಿಮಾನ ಮತ್ತು ಸ್ಟಾರ್ ನಟರುಗಳನ್ನು ಆರಾಧಿಸುವ ಅಂಧಾಭಿಮಾನದ ಈ ಬಗೆಯ ಅತಿರೇಕದ ಮನೋಭಾವವನ್ನೇ ಜನಸಮೂಹದ ಆದ್ಯಗುಣಲಕ್ಷಣವಾಗಿಸಿಬಿಡುವ ಚಾಣಾಕ್ಷ ತಂತ್ರಗಾರಿಕೆಯನ್ನು ಭಾರತದ ರಾಜಕಾರಣ ಅತ್ಯಂತ ಚಾಣಾಕ್ಷಯುತವಾಗಿ ಪ್ರಯೋಗಿಸುತ್ತಿದೆ. ಮುಗ್ಧತೆ ಮತ್ತು ಸ್ನೇಹದ ವೈಶಾಲ್ಯತೆಯನ್ನು ಮೊಟಕುಗೊಳಿಸಿ ದೊಡ್ಡವರನ್ನು ಸಂಕುಚಿತರನ್ನಾಗಿಸುವ ರಾಜಕೀಯ ಸನ್ನಿವೇಶವನ್ನು ಅದು ಉದ್ದೇಶಪೂರ್ವಕವಾಗಿ ಸೃಷ್ಟಿಸುತ್ತಿದೆ. ಸರಿಯಾದ ರಾಜಕೀಯ ಪ್ರಜ್ಞೆಯನ್ನು ಆವಾಹಿಸಿಕೊಳ್ಳುವ ತುಡಿತವನ್ನೇ ಇಲ್ಲವಾಗಿಸಿಬಿಡುತ್ತಿದೆ. ತಮ್ಮ ಪ್ರಭಾವದ ಭರಾಟೆಯ ಅಲೆಯೊಂದಿಗೆ ಇಡೀ ಸಮಾಜದೊಳಗಿನ ಜನರ ಮನೋಶಿಲ್ಪವನ್ನು ಸಡಿಲಗೊಳಿಸಿ ದುರ್ಬಲಗೊಳಿಸುತ್ತಿರುವ ಮೂರು ಜನಪ್ರಿಯ ಕ್ಷೇತ್ರಗಳೆಂದರೆ ಸಿನಿಮಾ, ರಾಜಕಾರಣ ಮತ್ತು ಕ್ರಿಕೆಟ್. ಜನಪ್ರಿಯ ಸಿನಿಮಾಗಳು ಮತ್ತು ಕ್ರಿಕೆಟ್ ಉದ್ಯಮ ಇವೆರಡೂ ಉಂಟುಮಾಡುವ ಪ್ರಭಾವದ ಆವರಣದ ನಡುವೆಯೇ ರಾಜಕಾರಣ ತನ್ನನ್ನು ಪ್ರತಿಷ್ಠಾಪಿಸಿಕೊಳ್ಳುವ ತಂತ್ರಗಳನ್ನು ಹೆಣೆದುಕೊಳ್ಳುತ್ತದೆ. ಆ ತಂತ್ರಗಳು ಯಶಸ್ವಿಯಾಗಲೇಬೇಕು ಎಂಬ ಹಠದೊಂದಿಗೇ ಹೆಜ್ಜೆಯಿರಿಸುತ್ತದೆ. ಎದುರುಗೊಳ್ಳುವವರನ್ನು ಹಣಿಯುವ ನಿಗೂಢ ಕಾರ್ಯಸೂಚಿಗಳನ್ನು ಸಂದರ್ಭಕ್ಕೆ ಅನುಗುಣವಾಗಿ ರೂಪಿಸಿಕೊಂಡುಬಿಡುತ್ತದೆ. ಪರ್ಯಾಯ ನಾಯಕತ್ವದ ಉದಾತ್ತ ಅವಕಾಶಗಳನ್ನು ಹೊಸಕಿಹಾಕಿ ಜನರಿಂದ ಆಯ್ಕೆಯ ಐಚ್ಛಿಕತೆಯನ್ನೇ ಕಿತ್ತುಕೊಂಡುಬಿಡುತ್ತದೆ. ‘ಇವರಿಲ್ಲದಿದ್ದರೆ ಮತ್ತಿನ್ಯಾರು ಆಳುವವರು’ ಎಂಬ ಅವಲಂಬನಾ ದೃಷ್ಟಿಕೋನವನ್ನು ಅದೇ ಜನವಲಯದಲ್ಲಿಯೇ ನೆಲೆಗೊಳಿಸಿಬಿಡುತ್ತದೆ. ನಾಯಕರಲ್ಲದ ನಾಯಕರೆನ್ನಿಸಿಕೊಂಡವರನ್ನು ಆರಾಧಿಸುವವರ ಸಂಖ್ಯಾಬಾಹುಳ್ಯ ಹೆಚ್ಚಿಸಿಕೊಳ್ಳುತ್ತಲೇ ತನ್ನ ಪ್ರಭಾವವನ್ನು ವಿಸ್ತರಿಸಿಕೊಳ್ಳುತ್ತಿರುತ್ತದೆ. ಆಗಲೇ ಜನರು ಮುಗ್ಧವಾಗಿ ನಂಬುತ್ತಲೇ ತಮ್ಮ ಯೋಚನೆಯ ಶಕ್ತಿಯನ್ನೇ ತ್ಯಜಿಸಿಬಿಡುತ್ತಾರೆ.
ತಾರ್ಕಿಕವೆನ್ನಿಸುವ ಪ್ರಜಾಸತ್ತಾತ್ಮಕ ವೈಚಾರಿಕ ಎಚ್ಚರದಲ್ಲಿ ರಾಜಕಾರಣವನ್ನು ಗ್ರಹಿಸುವ ಬದಲು ಹೊಗಳಿಕೆಗಳ ಅಭಿಪ್ರಾಯಗಳನ್ನು ಹೇಳಿಕೊಳ್ಳುವುದಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಾರೆ.
ಉನ್ನತ ಹುದ್ದೆಯಲ್ಲಿರುವ ಇಬ್ಬರು ಸ್ನೇಹಿತರ ನಡುವೆ ರಾಜಕಾರಣದ ಬಗ್ಗೆ ಚರ್ಚೆ ಶುರುವಾಗುತ್ತದೆ. ಒಬ್ಬರು ಸರ್ಕಾರವನ್ನು ಆರಾಧಿಸಿ ಮಾತನಾಡಿದರೆ ಮತ್ತೊಬ್ಬರು ಪ್ರಶ್ನೆಗಳನ್ನೆತ್ತಿ ಪ್ರತಿರೋಧದ ಮಾತುಗಳನ್ನಾಡುತ್ತಾರೆ.ಪ್ರತಿರೋಧವನ್ನೊಡ್ಡಿದವರು ಯಾರೇ ಅಧಿಕಾರಕ್ಕೆ ಬರಲಿ, ಅವರನ್ನು ಪ್ರಶ್ನಿಸುವ ಹಕ್ಕನ್ನು ನಾವೆಲ್ಲರೂ ಉಳಿಸಿಕೊಳ್ಳಲೇಬೇಕು ಎಂಬ ಅನಿವಾರ್ಯತೆಯನ್ನು ಮನಗಾಣಿಸಲು ಪ್ರಯತ್ನಿಸುತ್ತಾರೆ. ಆದರೆ, ಸರ್ಕಾರದ ಬಗ್ಗೆ ಆರಾಧನಾ ಮನೋಭಾವವಿರುವ ಸ್ನೇಹಿತ ಮಾತನಾಡುತ್ತಾ ಆಡುತ್ತಾ ಭಾವುಕ ವ್ಯಗ್ರತೆಯನ್ನು ಪ್ರದರ್ಶಿಸಲಾರಂಭಿಸುತ್ತಾನೆ. ಪ್ರತಿರೋಧಧ ವಿಚಾರಗಳನ್ನು ಪ್ರಸ್ತಾಪಿಸಿದ ಮಿತ್ರನ ಸಂಯಮದ ಸಂವಾದಕ್ಕೆ ಪ್ರತಿಯಾಗಿ ವಿತಂಡವಾದ ಮುಂದಿಡಲಾರಂಭಿಸುತ್ತಾನೆ. ತಾರ್ಕಿಕ ಪ್ರಶ್ನೆಗಳಿಗೆ ಉತ್ತರಿಸಲಾಗದೇ ವ್ಯಕ್ತಿಗತ ಆರೋಪಗಳನ್ನು ಹೊರಿಸುವ ತಂತ್ರ ಅನುಸರಿಸುತ್ತಾನೆ. ಆ ಮೂಲಕ ತಾರ್ಕಿಕ ವೈಚಾರಿಕತೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಾನೆ. ಆ ಹೊತ್ತಿಗೆ ಇಬ್ಬರ ನಡುವೆ ಸೃಷ್ಟಿಯಾದ ಭಿನ್ನಾಭಿಪ್ರಾಯ ದ್ವೇಷಕ್ಕೆ ತಿರುಗುತ್ತದೆ. ಆ ದ್ವೇಷವು ಮುಂದುವರೆದು ಸ್ನೇಹ ಕೊನೆಗೊಳ್ಳುತ್ತದೆ. ರಾಜಕೀಯ ಪಕ್ಷಗಳು ತಮ್ಮೊಳಗಿನ ಅಧಿಕಾರದ ಹಸಿವನ್ನು ನೀಗಿಸಿಕೊಳ್ಳಲು ಇಂಥದ್ದೇ ಆದ ಮನೋವೈಕಲ್ಯವನ್ನು ನಿರೀಕ್ಷಿಸುತ್ತವೆ. ಇದನ್ನು ಸಾಮೂಹಿಕ ಗುಣಲಕ್ಷಣವಾಗಿಸಿ ತಮ್ಮ ಅಧಿಕಾರದ ಫಸಲು ತೆಗೆಯುವ ಉದ್ದೇಶ ಈಡೇರಿಸಿಕೊಳ್ಳುತ್ತವೆ. ನಿಜವಾದ ರಾಜಕೀಯ ಪ್ರಜ್ಞೆಯನ್ನು ಕೊಲೆಗೈದು ತಮ್ಮನ್ನು ವಿಜೃಂಭಿಸಿಕೊಳ್ಳುತ್ತವೆ.
ಪ್ರಸಕ್ತ ರಾಜಕೀಯ ವ್ಯವಸ್ಥೆಯ ಎಲ್ಲ ಮಿತಿಗಳನ್ನು ರಂಜನೀಯ ನೆಲೆಯಲ್ಲಿ ಸ್ವೀಕರಿಸುವ ವಿಚಿತ್ರವಾದ ಸಮೂಹಕೇಂದ್ರಿತ ಊನ ( Mass Syndrome)ಈಗಾಗಲೇ ವ್ಯಾಪಕವಾಗಿಬಿಟ್ಟಿದೆ. ನಮ್ಮಲ್ಲಿ ಅಧಿಕಾರ ರಾಜಕಾರಣದ ಕುರಿತಾದ ಚರ್ಚೆಗಳು ಇದರ ಸಂಕುಚಿತ ಜಾಲದ ಪರಿಧಿಯನ್ನು ದಾಟಿಕೊಳ್ಳುವುದೇ ಇಲ್ಲ. ಹಾಗೆ ದಾಟಿಕೊಳ್ಳದ ಹಾಗೆ ವಿತಂಡವಾದಿ ದೃಷ್ಟಿಕೋನಗಳು ಕಡಿವಾಣ ಬಿಗಿದುಬಿಡುತ್ತವೆ. ರಾಜಕಾರಣದೊಳಗಿನ ಊನಗಳೊಂದಿಗಿನ ಸಾಂಪ್ರದಾಯಿಕತೆಯನ್ನೇ ಮೌಲ್ಯವಾಗಿ ಸ್ವೀಕರಿಸುವ ಮನಸ್ಥಿತಿಯನ್ನು ಬೇರೂರಿಸಿಬಿಡುತ್ತವೆ. ದೇಶವೊಂದರೊಳಗೆ ಸಾಮಾಜಿಕ ವ್ಯವಸ್ಥೆಯೊಂದಿರುತ್ತದೆ. ಆಡಳಿತಾರೂಢ ಸರ್ಕಾರವು ಜಪಿಸುವ ಅಭಿವೃದ್ಧಿಯ ಮಂತ್ರದೊಂದಿಗೆ ತಳುಕು ಹಾಕಿಕೊಂಡ ಆರ್ಥಿಕತೆಯು ಈ ಸಾಮಾಜಿಕ ವ್ಯವಸ್ಥೆಯ ರೂಪು-ರೇಷೆಗಳಿಗೆ ಅನುಗುಣವಾಗಿರಬೇಕು ಎಂಬ ಕನಿಷ್ಠ ಪ್ರಜ್ಞೆಯನ್ನು ಆಧರಿಸಿಯೇ ಇರುವುದಿಲ್ಲ. ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರವನ್ನು ಹೆಚ್ಚಿಸುವಂತೆಯೇ ಆ ಆರ್ಥಿಕ ವ್ಯವಸ್ಥೆ ಬಲಿಷ್ಠವಾಗುತ್ತ ಸಾಗುತ್ತದೆ.
ಉಳ್ಳವರ ಪರವಾದ ಅರ್ಥವ್ಯವಸ್ಥೆಯ ಪ್ರಾಬಲ್ಯವನ್ನು ಮತ್ತಷ್ಟು ಹೆಚ್ಚಿಸುವುದರ ಕಡೆಗೆ ರಾಜಕಾರಣ ತನ್ನ ಗಮನವನ್ನು ಕೇಂದ್ರೀಕರಿಸುತ್ತದೆ. ಇಲ್ಲಿ ವ್ಯಕ್ತಿಗತ ಮಾನವ ಸಂಪನ್ಮೂಲದ ಸಮಗ್ರ ಅನ್ವಯಿಸುವಿಕೆಯ ಪರಿಕಲ್ಪನೆಗಳಿಗೆ ಆದ್ಯತೆ ಇರುವುದೇ ಇಲ್ಲ. ಸಾಮಾಜಿಕ ವ್ಯವಸ್ಥೆಯೊಳಗಿನ ಧಾರ್ಮಿಕತೆ ಮತ್ತು ಅದಕ್ಕನುಗುಣವಾಗಿಯೇ ಬೇರೂರಿಬಿಟ್ಟಿರುವ ಜಾತಿ-ಪಂಗಡಗಳ ಸಂಕೀರ್ಣ ಆವೃತ್ತಿಗಳು ಸಾಮಾಜಿಕ ಉದ್ಯಮಗಳಾಗಿಯೇ ಬೆಳೆಯುತ್ತಿರುತ್ತವೆ. ಅವುಗಳ ಸಮಾಜೋ-ಧಾರ್ಮಿಕ ಔದ್ಯಮಿಕತೆಯು ಮಠೀಯತೆ, ಮಠಾಧೀಶ ಮುಂದಾಳತ್ವ, ನಮ್ಮ ಜಾತಿಯವರಿಷ್ಟಿದ್ದೇವೆ ಎಂದು ತೋರಿಸಿಕೊಳ್ಳುವ ಬೃಹತ್ ಸಮಾವೇಶಗಳು, ಅವುಗಳಲ್ಲಿ ಭಾಗವಹಿಸಿ ತಮ್ಮ ಟೊಳ್ಳು ಮುಖಂಡತ್ವವನ್ನು ಮತ್ತೊಮ್ಮೆ ನವೀಕರಿಸಿಕೊಳ್ಳುವವರ ಉತ್ಸಾಹ ಮತ್ತು ಅಧಿಕಾರದಲ್ಲಿರಲಿ, ಇಲ್ಲದೇ ಇರಲಿ ಸದಾ ನಿಮ್ಮ ಬೆಂಬಲಕ್ಕಿದ್ದೇವೆ ಎಂದು ಘೋಷಿಸುವ ಜನಪ್ರಿಯ ವಾಂಛೆಗಳ ಮೂಲಕ ದೃಢಪಡುತ್ತದೆ. ಆ ಮೂಲಕ ಧಾರ್ಮಿಕ ಜಡತ್ವ ಮತ್ತು ಜಾತಿ ವ್ಯವಸ್ಥೆ ಮತ್ತಷ್ಟು ನಿಚ್ಛಳವಾಗುತ್ತದೆ. ದಾರ್ಶನಿಕರ ವೈಚಾರಿಕ ಆಂದೋಲನಗಳು ಹರಡಿದ ಮನುಷ್ಯತ್ವದ ಪ್ರಭೆಯನ್ನು ತಡೆದು ವಿಚಿತ್ರ ಹಠದೊಂದಿಗೆ ರಾಜಕಾರಣವು ಕತ್ತಲನ್ನೇ ಶಾಶ್ವತವಾಗಿ ಪಸರಿಸಿಬಿಡುತ್ತದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಅಂಶ ಸ್ಪಷ್ಟವಾಗಿಬಿಡುತ್ತದೆ. ಆದರೆ ಹೀಗೆ ಸ್ಪಷ್ಟಪಡಿಸಿಕೊಳ್ಳುವ ಸಾಮೂಹಿಕ ಸಂಯಮ ಈಗ ಕಾಣೆಯಾಗಿದೆ.
ಆ ಸಾಮೂಹಿಕ ಸಂಯಮವಿಲ್ಲದಿದ್ದರೆ ಪ್ರಜೆಗಳೆನ್ನಿಸಿಕೊಂಡವರು ಬೆಲೆ ತೆರಲೇಬೇಕಾಗುತ್ತದೆ. ಸಮಸ್ಯೆಗಳನ್ನು ಸಹಿಸಿಕೊಳ್ಳುವುದಷ್ಟೇ ಅಲ್ಲದೇ ಅವುಗಳ ವರ್ತುಲದೊಳಗೆ ಸಿಲುಕಿಕೊಳ್ಳುವ ಅನಿವಾರ್ಯತೆಯ ಅಸಹಾಯಕತೆಯನ್ನೇ ಸಹಜಗುಣವಾಗಿಸಿಕೊಳ್ಳುವ ಉಮೇದಿನೊಂದಿಗೆ ಗುರುತಿಸಿಕೊಳ್ಳುವ ಒತ್ತಡವೂ ಸೃಷ್ಟಿಯಾಗುತ್ತದೆ. ಈ ಅಸಹಾಯಕತೆ ಎಷ್ಟು ಅಂತಸ್ಥವಾಗುತ್ತದೆ ಎಂದರೆ ಹೊಸದಾದ ಯಾವ ಚಿಂತನೆಯೂ ಒಪ್ಪಿತವೆನ್ನಿಸುವುದಿಲ್ಲ. ದೇಶೋದ್ಧಾರದ ಸಮಗ್ರ ಹೊಣೆಗಾರಿಕೆ ನಿಭಾಯಿಸಬೇಕಾದ ರಾಜಕೀಯ ಪಕ್ಷಗಳು ಜನರನ್ನು ಮತ್ತೆ ಅಸಹಾಯಕತೆಯ ಸಂಕುಚಿತ ಬಾವಿಯೊಳಗೆ ಬಂಧಿಸಿಡುವ ನಡೆಗಳೊಂದಿಗೆ ಇದ್ದುಬಿಡುವುದರ ಕಡೆಗೇ ಒಲವು ತೋರುತ್ತವೆ. ಈ ಕುರಿತ ಸುಳಿವುಗಳನ್ನು ಪಕ್ಷಗಳ ಮುಖಂಡರ ಹೇಳಿಕೆಗಳು, ಪ್ರತಿಹೇಳಿಕೆಗಳು, ಚುನಾವಣಾ ರಣತಂತ್ರಗಳನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ಗೊತ್ತುಮಾಡಿಕೊಳ್ಳಬಹುದು.
ಮುಂಬರುವ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಡಳಿತಾರೂಢ ಪಕ್ಷ ತಂತ್ರ ಹೆಣೆಯುವುದರ ಕಡೆಗೆ ಆದ್ಯತೆ ನೀಡುತ್ತಿರುವ ವಿವರಗಳು ಗಮನಕ್ಕೆ ಬರುತ್ತಲೇ ಇವೆ. ರಾಷ್ಟ್ರಾದ್ಯಂತ ಪ್ರತಿರೋಧದ ಅಲೆಯನ್ನು ಎಬ್ಬಿಸಬೇಕು ಎಂಬ ಉದ್ದೇಶದೊಂದಿಗೆ ಅಖಾಡಕ್ಕಿಳಿದಿರುವ ವಿರೋಧ ಪಕ್ಷ ಅಸ್ಪಷ್ಟ, ದ್ವಂದ್ವ ನಿಲುವುಗಳೊಂದಿಗೇ ಹೆಜ್ಜೆಯಿರಿಸುತ್ತಿರುವ ಸಂಗತಿಯೂ ಗೊತ್ತಾಗುತ್ತಿದೆ. ವಿರೋಧ ಪಕ್ಷದ ಯುವನೇತಾರನಿಗೆ ಸಂಬಂಧಿಸಿದಂತಹ ವಾಟ್ಸ್ಯಾಪ್ ವೀಡಿಯೋವೊಂದು ಹಲವರಿಗೆ ರಂಜನೆ ನೀಡುತ್ತಿದೆ. ಆ ನೇತಾರನ ಬಿಂಬವು ರೈತನೊಬ್ಬನೊಂದಿಗೆ ಸಂಭಾಷಿಸುತ್ತದೆ. ಗದ್ದೆಯಲ್ಲೆಲ್ಲ ಕೆಸರು ಎಂಬ ರೈತನುಡಿಗೆ ಪ್ರತಿಯಾಗಿ ಆ ನೇತಾರಬಿಂಬವು ‘ನಾವು ಅಧಿಕಾರಕ್ಕೆ ಬಂದರೆ ಗದ್ದೆಯಲ್ಲಿ ಟೈಲ್ಸ್ ಹಾಕಿಸುತ್ತೇವೆ’ ಎನ್ನುತ್ತದೆ. ತಮಾಷೆಯೆನ್ನಿಸಿ ಆ ಕ್ಷಣಕ್ಕೆ ಖುಷಿ ಪಡಬಹುದಾದ ಈ ತರಹದ ವಿಡಿಯೋಗಳ ವೀಕ್ಷಿಸುವಿಕೆ ಮತ್ತು ಇನ್ನೊಬ್ಬರಿಗೆ ರವಾನಿಸುವಿಕೆಯ ಕಾರ್ಯಗಳಲ್ಲಿಯೇ ಜನರು ನಿರತರಾಗಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದರೆ ಅಧಿಕಾರದಲ್ಲಿರುವವರು ಮತ್ತು ಅಧಿಕಾರದಲ್ಲಿರದೇ ಇರುವವರು ಪರಸ್ಪರರನ್ನು ಹೀಗೆ ರಂಜನೀಯವಾಗಿ ಕಾಲೆಳೆಯುತ್ತಾ ಜನರಿಗೆ ಖುಷಿ ನೀಡುತ್ತಾ ಈ ದೇಶದ ಬೆಳವಣಿಗೆಗೆ ಅಗತ್ಯವಾಗಿ ಆಗಬೇಕಾಗಿರುವುದು ಏನು ಎಂಬುದರ ಕುರಿತಾದ ತಾತ್ವಿಕ ಚರ್ಚೆಗಳ ಸಾಧ್ಯತೆಯನ್ನು ಉದ್ದೇಶಪೂರ್ವಕವಾಗಿ ತಡೆದುಬಿಡುತ್ತಿದ್ದಾರೆ. ಹೊಸ ಮಾಧ್ಯಮಗಳ ಪ್ರಭಾವ ಅವರ ಈ ಉದ್ದೇಶವನ್ನು ಈಡೇರಿಸಿಬಿಡುತ್ತಿದೆ. ಈ ಹಂತದಲ್ಲಿಯೇ ‘ನೀವ್ಯಾರ ಪರ’ ಎಂಬ ಪ್ರಶ್ನೆ ತಾರ್ಕಿಕತೆಯನ್ನು ಮುನ್ನೆಲೆಗೆ ತರುವ ಬದಲು ಆರಾಧನಾರೂಪದ ನಿಷ್ಠೆಯನ್ನು ನಿರೀಕ್ಷಿಸುತ್ತಿದೆ. ಆಡಳಿತಾರೂಢರ ಪರ ಎಂದರೆ ಸೇಫ್. ಇಲ್ಲದಿದ್ದರೆ ಗುಮಾನಿಗಳೇಳುತ್ತವೆ. ಮುಕ್ತವಾಗಿ ಸಮಸ್ಯೆ ಹೇಳಿಕೊಂಡಾಗಲೂ ಇಂಥವೇ ಗುಮಾನಿಗಳ ದಾಳಿಗೊಳಗಾಗುವ ಅಸಹಾಯಕತೆಗೆ ಪಕ್ಕಾಗಬೇಕಾಗುತ್ತದೆ. ಸಂವಿಧಾನದೊಳಗಿನ ಅಕ್ಷರಗಳು ಮತ್ತು ಅವುಗಳು ದಾಟಿಸುವ ಉದಾತ್ತ ಆಶಯಗಳು ಉಸಿರುಗಟ್ಟಿಸಿಕೊಳ್ಳುತ್ತವೆ. ಶಾಲಾ-ಕಾಲೇಜು ಹಂತಗಳಲ್ಲಿನ ಅಭಿಮಾನಿ ಮನೋಧರ್ಮ ದೊಡ್ಡವರಾದಾಗಲೂ ಉಳಿದುಕೊಂಡು ದೇಶವನ್ನೂ ಮತ್ತೆ ಮತ್ತೆ ಉಸಿರುಗಟ್ಟಿಸುತ್ತಿರುತ್ತದೆ.
(ಡಾ.ಎನ್.ಕೆ.ಪದ್ಮನಾಭ
ಸಹಾಯಕ ಪ್ರಾಧ್ಯಾಪಕರು
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ
ಉಜಿರೆ
ಇ-ಮೇಲ್ ವಿಳಾಸ:
nkpadmanabh@gmail.com)

ದಿನದ ಸುದ್ದಿ
ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.
ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.
ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.
ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು.”
- ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
- ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:2023-24ನೇ ಸಾಲಿನಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿ ಬರುವ ಸಮಸ್ಯಾತ್ಮಕ ಗ್ರಾಮಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಒಳಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿ 5 ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್, ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳೇಶ್ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇಲ್ಲಿಗೆ 2023-24ನೇ ಸಾಲಿನಲ್ಲಿ ಉಂಟಾದ ಮಳೆಯ ಅಭಾವ ಮತ್ತು ಬರದ ಕಾರಣದಿಂದ ಕೋಟ್ಯಾಂತರ ರೂಪಾಯಿಗಳನ್ನು ಕುಡಿಯುವ ನೀರಿಗಾಗಿ ಸರ್ಕಾರ ಬಿಡುಗಡೆ ಮಾಡಿರುತ್ತದೆ. ಆದರೆ ಕೆಲವು ಅಧಿಕಾರಿಗಳು ತುರ್ತು ಕುಡಿಯುವ ನೀರಿನ ಅನುದಾನವನ್ನು ದುರುಪಯೋಗಪಡಿಸಿಕೊಂಡ ಮಾಹಿತಿ ತಿಳಿದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಉಪ ವಿಭಾಗ, ಚನ್ನಗಿರಿ ಇವರಿಂದ ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಪಡೆಯಲಾಗಿದೆ.
ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಸಾಕಷ್ಟು ಅವ್ಯವಹಾರ ನಡೆದಿರುವುದು ಕಂಡುಬಂದ ಕಾರಣ ಸೂಕ್ತ ದಾಖಲೆಗಳೊಂದಿಗೆ ದಿನಾಂಕ: 05-07-2025 ರಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ, ದಾವಣಗೆರೆ ಇವರಿಗೆ ದೂರು ನೀಡಿ, ತನಿಖೆಗೆ ಒಳಪಡಿಸುವಂತೆ ಕೋರಿದ್ದರು. ದೂರು ನೀಡಿ 3 ತಿಂಗಳು ಕಳೆದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ತನಿಖೆಯನ್ನು ಕೈಗೊಂಡ ಬಗ್ಗೆ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ದಿನಾಂಕ: 29-10-2025 ರಂದು ಜ್ಞಾಪನವನ್ನು ಸಹ ನೀಡಲಾಗಿತ್ತು.
ಆದರೆ ನಾವು ಜ್ಞಾಪನ ನೀಡಿ ಒಂದು ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳೇಶ್ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
ಸುದ್ದಿದಿನ,ದಾವಣಗೆರೆ: ದಾವಣಗೆರೆಯಲ್ಲಿ ಸರ್ಕಾರಿ ನಿವೇಶನಗಳು ಖಾಲಿ ಇದ್ದರೆ ಅವುಗಳನ್ನು ಕೂಡಲೇ ಸರ್ಕಾರಿ ಕಚೇರಿಗಳ ಉಪಯೋಗಕ್ಕೆ ನೀಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚಿಸಿದರು.
ಮಂಗಳವಾರ(ಡಿ.2) ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕೊರತೆಯಾಗಬಾರದು. 100 ವಿದ್ಯಾರ್ಥಿಗಳು ವಾಸಿಸುವ ಕಟ್ಟಡಕ್ಕೆ ಬದಲಾಗಿ 400 ವಿದ್ಯಾರ್ಥಿಗಳು ವಾಸ ಮಾಡುವ ಕಟ್ಟಡವನ್ನು ನಿರ್ಮಿಸಬೇಕು ಎಂದರು. ಖಬರಸ್ಥಾನಕ್ಕೆ ಮತ್ತು ಸ್ಮಶಾನಕ್ಕೆ ಜಾಗದ ಅವಶ್ಯಕತೆ ಇದ್ದರೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಅಂಗನವಾಡಿ ಕೇಂದ್ರಗಳನ್ನು ಅಲ್ಪಸಂಖ್ಯಾತರ ಸಮುದಾಯದ ಜನರು ಅಧಿಕವಾಗಿ ವಾಸಿಸುತ್ತಿರುವ ತಾಲ್ಲೂಕುಗಳು ಮತ್ತು ಗ್ರಾಮಗಳಲ್ಲಿ ತೆರೆಯುವುದು, ಇದರಿಂದಾಗಿ ಯೋಜನೆಯ ಪ್ರಯೋಜನೆಗಳು ಅವರುಗಳಿಗೆ ನೇರವಾಗಿ ಸಿಗುತ್ತವೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಶಾಲೆ, ಕಾಲೇಜು ಹಾಗೂ ಅಂಗನವಾಡಿಗಳಿಗೆ ವಕ್ಫ್ ಬೋರ್ಡ್ ಅಥವಾ ಯಾವುದೇ ಇಲಾಖೆಯ ಅಧೀನದಲ್ಲಿನ ನಿವೇಶನವಿದ್ದರೂ ಗುರುತಿಸಿ ಶಾಲೆ, ಕಾಲೇಜುಗಳ ಕಟ್ಟಡ ನಿರ್ಮಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಇಲಾಖೆಗಳಲ್ಲಿನ ಯೋಜನೆಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು.
ವಿವಿಧ ಇಲಾಖೆಯ ಅನುಪಾಲನಾ ವರದಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಭಕ್ತಮಾರ್ಕಡೇಶ್ವರ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದರು.
ಸಮಾಜದ ಧಾರ್ಮಿಕ ಮುಖಂಡರು ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ವಸತಿ ಶಾಲೆಗೆ ಸೇರಿಸುವಂತಾಗಲು ಪ್ರೇರೇಪಿಸಬೇಕು. ವಸತಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದರ ಜೊತೆಗೆ ಅಗತ್ಯ ಸೌಲಭ್ಯ ಇರುವ ಬಗ್ಗೆ ತಿಳಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಮತ ಹೊಸಗೌಡ್ರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ, ಡಿಡಿಪಿಐ ಕೊಟ್ರೇಶ್, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿರುವರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days agoದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ
-
ದಿನದ ಸುದ್ದಿ4 days agoಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು
-
ದಿನದ ಸುದ್ದಿ4 days agoಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
-
ದಿನದ ಸುದ್ದಿ5 days agoಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ18 hours agoಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
-
ದಿನದ ಸುದ್ದಿ19 hours agoದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ


