ಬಹಿರಂಗ
HapPy BiRtHdAy | ಬಹುಜನ ಸಮಾಜದ ‘ಯುಗಪುರುಷ ಕಾನ್ಷಿರಾಮ್’ ಬಗ್ಗೆ ನಿಮಗೆಷ್ಟು ಗೊತ್ತು..!?
“ಈ ದೇಶದ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗೆ ಜಾತಿವ್ಯವಸ್ಥೆಯ ಅಸ್ತಿತ್ವವೇ ಕಾರಣ.ಈ ಜಾತಿ ಅಸಮಾನತೆಗೆ ಅಧಿಕಾರ ಹೀನತೆಯೇ ಮೂಲ ಕಾರಣ. ಜಾತಿ ವ್ಯವಸ್ಥೆಯಿಂದಾಗಿ ಬಹುಜನರು ಅಪಮಾನದಿಂದ ಬದುಕುತ್ತಿದ್ದಾರೆ. ಅಧಿಕಾರ ಹೀನತೆಯಿಂದಾಗಿ ಬಡತನದಿಂದ ಬಳಲುತ್ತಿದ್ದಾರೆ. ಭಾರತೀಯರ ಬದುಕಿನಲ್ಲಿ ಭದ್ರವಾಗಿ ಬೆಸೆದುಕೊಂಡಿರುವ ಬ್ರಾಹ್ಮಣವಾದದ ಬೇರುಗಳನ್ನು ಬುಡ ಸಹಿತ ನಾಶಗೊಳಿಸಿ, ಬಹುಜನ ಸಮಾಜವನ್ನು ಆಳುವ ಸಮಾಜವನ್ನಾಗಿಸುವುದು ನನ್ನ ಗುರಿ. ಶೋಷಿತ ಸಮಾಜವು ಆಳುವ ಸಮಾಜವಾಗುವುದರಿಂದ ಮಾತ್ರ ಜಾತಿರಹಿತ ಸಮಾಜವನ್ನು ಸೃಷ್ಟಿ ಮಾಡಬಹುದು.
ಇಂತಹ ಯೋಗ್ಯವಾದ ಗುರಿಯನ್ನು ಸಾಕಾರಗೊಳಿಸುವ ಭಾಗ್ಯ ನನ್ನದಾದರೆ ನನ್ನ ಹುಟ್ಟು ಧನ್ಯ! ಇನ್ನು ಮುಂದೆ ನಾನು ಬದುಕುವುದಾದರೆ ಈ ಧ್ಯೇಯಕ್ಕಾಗಿಯೇ ಬದುಕುತ್ತೇನೆ. ಒಂದು ವೇಳೆ ಸಾಯುವುದಾದರೆ ನಾನು ಈ ಧ್ಯೇಯ ಸಾಧನೆಗಾಗಿಯೇ ಸಾಯುತ್ತೇನೆ. ಬಾಬಾಸಾಹೇಬ್ ಅಂಬೇಡ್ಕರರ ಕನಸನ್ನು ನನಸು ಮಾಡುವ ತನಕ ನಾನು ಮದುವೆ ಮಾಡಿಕೊಳ್ಳುವುದಿಲ್ಲ. ನನ್ನ ರಕ್ತ ಸಂಬಂಧಿಗಳೊಂದಿಗೆ ನಾನು ಯಾವುದೇ ಭಾವನಾತ್ಮಕ ಸಂಬಂಧಗಳನ್ನು ಇಟ್ಟುಕೊಳ್ಳುವುದಿಲ್ಲ. ನಾನು ಹುಟ್ಟಿ ಬೆಳೆದ ಊರಿಗೆ ಕಾಲಿಡುವುದಿಲ್ಲ. ವೈಯಕ್ತಿಕವಾಗಿ ನಾನು ಯಾವುದೇ ಆಸ್ತಿ-ಪಾಸ್ತಿಯನ್ನು ಹೊಂದುವುದಿಲ್ಲ. ಬಹುಜನ ಸಮಾಜವೇ ನನ್ನ ಕುಟುಂಬ. ಈ ಸಮಾಜದ ಏಳಿಗೆಗಾಗಿ ನಾನು ನನ್ನ ಜೀವನವನ್ನೇ ಮುಡಿಪಾಗಿಡುತ್ತೇನೆ. ನನ್ನ ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ಕೊಡುತ್ತೇನೆ. ಗುಲಾಮ ಸಮಾಜವನ್ನು ಆಳುವ ಸಮಾಜವನ್ನಾಗಿ ರೂಪಿಸಿಯೇ ತೀರುತ್ತೇನೆ. ಅದಕ್ಕಾಗಿ ಇಂದಿನಿಂದ ನಿಮ್ಮೆಲ್ಲರ ಪಾಲಿಗೆ ನಾನು ಸತ್ತು ಹೋಗಿದ್ದೇನೆ”.
ಅಂಬೇಡ್ಕರ್ ವಾದದ ಅನುಷ್ಠಾನಕ್ಕಾಗಿ ತನ್ನ ಬದುಕನ್ನೇ ಸಮರ್ಪಿಸಿಕೊಂಡ ಸಂತನೊಬ್ಬ ತನ್ನ ಹೆತ್ತ ತಾಯಿಗೆ ಬರೆದ ಸುದೀರ್ಘ 24 ಪುಟಗಳ ಪತ್ರದ ಆಯ್ದ ಸಾರಾಂಶವಿದು..!
ನುಡಿದಂತೆ ನಡೆದು, ಅಸಾಧ್ಯವಾದುದನ್ನು ಸಾಧಿಸಿ, ರಾಜಕೀಯ ಜಗತ್ತೇ ನಿಬ್ಬೆರಗಾಗಿ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಆ ಅಸಾಧಾರಣ ಸಾಹಸಿಯೇ “ದಾದಾಸಾಹೇಬ್ ಕಾನ್ಷಿರಾಮ್”.
ಅಂಬೇಡ್ಕರ್ ಎಂಬ ಅದ್ವಿತೀಯ ಜ್ಞಾನಿಯ ಮಾತು, ಕೃತಿ, ಚಿಂತನೆಗಳನ್ನು ಆಳವಾಗಿ ಗ್ರಹಿಸಿ, ಮೆದುಳಿಗಿಳಿಸಿಕೊಂಡು ಅದಕ್ಕೆ ರಾಜಕೀಯ ರೂಪ ಕೊಟ್ಟ ಕಾನ್ಷಿರಾಮ್ ರವರದು ಭಾರತದ ರಾಜಕೀಯದಲ್ಲಿ ಮದ್ದಾನೆಯ ಹಾದಿ. ಏಕಾಂಗಿ ಹೋರಾಟ. “ಸಾವಿರಾರು ವರ್ಷಗಳಿಂದ ಶೋಷಿತರಾಗಿರುವ ಎಸ್.ಸಿ, ಎಸ್.ಟಿ, ಒಬಿಸಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ರಾಜಕೀಯ ಮುಖ್ಯವಾಹಿನಿಗೆ ತರಬೇಕು. ಅವರನ್ನು ಆಳುವ ದೊರೆಗಳನ್ನಾಗಿ ಮಾಡಬೇಕು”ಎಂದು ಪಣ ತೊಟ್ಟಿದ್ದ ಕಾನ್ಷಿರಾಮ್ ರವರು ಕಾಲಗರ್ಭದಲ್ಲಿ ಅಮೂಲ್ಯ ನಿಧಿಯಾಗಿ ಹುದುಗಿ ಹೋಗಿದ್ದ ಫುಲೆ-ಪೆರಿಯಾರ್-ಶಾಹು-ನಾಲ್ವಡಿ-ನಾರಾಯಣಗುರು ಎಂಬ ಮಾನವಕುಲ ಮರೆಯಬಾರದ ಮಹಾಗುರುಗಳನ್ನು ಇತಿಹಾಸದ ಪುಟಗಳಿಂದ ಹೆಕ್ಕಿ ಹೊರತೆಗೆದು ಬಹುಜನ ಸಮಾಜಕ್ಕೆ ಪರಿಚಯಿಸಿದರು.
ಸರಳತೆ ಮತ್ತು ಸಜ್ಜನಿಕೆಗೆ ಹೆಸರಾಗಿದ್ದ ಕಾನ್ಷಿರಾಮರು ಪಕ್ಷದ ಪ್ರಚಾರ ಸಾಮಗ್ರಿಗಳನ್ನು ಸ್ವತಃ ತಾವೇ ಸ್ವತಃ ಹೊತ್ತು ಲಾರಿಗೆ ಹಾಕುತ್ತಿದ್ದರು. ಅದನ್ನು ದೇಶದ ಮೂಲೆ-ಮೂಲೆಗೂ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದರು. ಕಾರ್ಯಕ್ರಮವಿದ್ದಾಗ ಗೋಡೆಗಳಿಗೆ ಪ್ರಚಾರ ಪತ್ರಗಳನ್ನು ಅಂಟಿಸುತ್ತಿದ್ದರು. ಹಾರೆ-ಗುದ್ದಲಿಗಳನ್ನು ಹಿಡಿದು ವೇದಿಕೆಯನ್ನು ತಯಾರಿಸುತ್ತಿದ್ದರು. ಹೆಗಲಿಗೆ ಮೈಕು ಕಟ್ಟಿಕೊಂಡು ಹೆಸರಾಂತ ನಾಯಕರೊಬ್ಬರು ಸಭೆಗೆ ಬರುತ್ತಿದ್ದಾರೆಂದು ಎಲ್ಲೆಂದರಲ್ಲಿ ಪ್ರಚಾರ ಮಾಡುತ್ತಿದ್ದರು. ಸಮಾರಂಭದ ದಿನ ತಾವೇ ಮುಖ್ಯ ಅತಿಥಿಗಳಾಗಿ ಬಂದು ಅಚ್ಚರಿ ಮೂಡಿಸುತ್ತಿದ್ದರು. ಭಾಷಣದ ಮೂಲಕ ಸಭಿಕರನ್ನು ನಗೆಯ ಅಲೆಯಲ್ಲಿ ತೇಲಿಸುತ್ತಿದ್ದರು.
” ಏ ಕಾನ್ಷಿರಾಮ್.. ನೀನೊಬ್ಬ ಹುಚ್ಚ.. ರಾಜಕಾರಣದಲ್ಲಿ ನೀನಿನ್ನೂ ಬಚ್ಛಾ.. ನಿನಗೆ ರಾಜಕಾರಣದ ಮರ್ಮ ತಿಳಿದಿಲ್ಲ. ಬದುಕಿರುವಾಗಲೇ ಅಂಬೇಡ್ಕರ್ ಗೆದ್ದಿಲ್ಲ… ಇನ್ನೂ ಅಂಬೇಡ್ಕರ್ ಹೆಸರೇಳಿಕೊಂಡು, ಈ ಗುಲಾಮರನ್ನು ಕಟ್ಟಿಕೊಂಡು ನೀನು ಏನನ್ನು ಸಾಧಿಸಲು ಸಾಧ್ಯವಿಲ್ಲ.. ಹೋಗಿ ಏನಾದರೂ ಬೇರೆ ಕೆಲಸ ನೋಡಿಕೋ..” ಎನ್ನುವ ಅವಕಾಶವಾದಿ ಅಂಬೇಡ್ಕರ್ ವಾದಿಗಳ ಟೀಕೆ-ಮೂದಲಿಕೆಗಳನ್ನು ಕ್ರೀಡಾಸ್ಫೂರ್ತಿಯಿಂದ ಸವಾಲಾಗಿ ಸ್ವೀಕರಿಸಿ, ಬಾಡಿಗೆ ಸೈಕಲ್ ಗಳಲ್ಲಿ ದಿನವಿಡೀ ಸುತ್ತಾಡುತ್ತಾ, ದ್ವಿತೀಯ ದರ್ಜೆಯ ರೈಲು ಭೋಗಿಗಳಲ್ಲಿ ಗಂಟೆಗಟ್ಟಲೆ ನಿಂತು ಪ್ರಯಾಣ ಮಾಡುತ್ತಾ, ಹಸಿವು, ನಿದ್ರೆ, ನೀರಾಡಿಕೆಗಳನ್ನು ಲೆಕ್ಕಿಸದೆ, ಭಾರತದ ಮೂಲೆ-ಮೂಲೆಗಳಿಗೆ ಸಂಚರಿಸಿ, ಶೋಷಿತ ಸಮುದಾಯಗಳನ್ನು ರಾಜಕೀಯವಾಗಿ ಸಂಘಟಿಸಿ, ಸಮಾಜದ ಕಟ್ಟ ಕಡೆಯ ವ್ಯಕ್ತಿ ಕೂಡ ಅತ್ಯಂತ ಸಮರ್ಥವಾಗಿ ಅಧಿಕಾರ ಚಲಾಯಿಸಬಲ್ಲ ಎಂಬ ಸತ್ಯವನ್ನು ಮಾನವ ಜಗತ್ತಿಗೆ ಮನವರಿಕೆ ಮಾಡಿಕೊಟ್ಟ ಮಾನ್ಯಾವಾರ್ ಕಾನ್ಷಿರಾಮ್ ಆಧುನಿಕ ಭಾರತ ಕಂಡ ಪ್ರಜಾಪ್ರಭುತ್ವದ ಪವಾಡ ಪುರುಷ!
“ಭಾರತದಲ್ಲಿ ಒಂದು ಗ್ರಾಮಪಂಚಾಯ್ತಿಯನ್ನೂ ಗೆಲ್ಲದಷ್ಟು ಅಲ್ಪಮತವುಳ್ಳವರಾಗಿರುವ ಬ್ರಾಹ್ಮಣರು, ತಮ್ಮ ಪರಂಪರಾನುಗತ ಹಿತಾಸಕ್ತಿಗಳನ್ನೂ ಕಾಯ್ದುಕೊಳ್ಳುವ ಸಲುವಾಗಿ ನೂರಾರು ತಂತ್ರ-ಕುತಂತ್ರಗಳ ಮೂಲಕ ತಮ್ಮ ರಾಜಕೀಯ ನಡಿಗೆಗಳನ್ನು ಸರಾಗಗೊಳಿಸಿಕೊಂಡಿದ್ದಾರೆ. ಬ್ರಾಹ್ಮನೇತರರಲ್ಲಿ ಸ್ವತಂತ್ರ ರಾಜಕೀಯ ಚಿಂತನೆಗಳು ಮೊಳಕೆಯೊಡೆಯದಂತೆ ಅವರಿಗೆ ಹಣ-ಅಧಿಕಾರದ ಆಮಿಷ ತೋರಿಸಿ ತಮ್ಮ ನಾಯಕತ್ವದ ರಾಜಕೀಯ ಪಕ್ಷಗಳಲ್ಲೇ ಕಾಲಾಳುಗಳಾಗಿಸಿಕೊಂಡಿದ್ದಾರೆ. ದೇಶದ ಜನಸಂಖ್ಯೆಯಲ್ಲಿ ಶೇ.15 ಭಾಗವಿರುವ ಬ್ರಾಹ್ಮಣ, ಬನಿಯಾಗಳು ಶೇ. 85 ರಷ್ಟು ದೇಶದ ಆಸ್ತಿ, ಸಂಪತ್ತು ಮತ್ತು ಅಧಿಕಾರವನ್ನು ಹಿಡಿದುಕೊಂಡಿದ್ದಾರೆ. ಬ್ರಾಹ್ಮಣ, ಬನಿಯಾಗಳ ಹಿತಾಸಕ್ತಿಗೆ ಬಲಿಯಾಗಿ ಆರು ಸಾವಿರಕ್ಕಿಂತಲೂ ಅಧಿಕ ಜಾತಿ-ಉಪಜಾತಿಗಳಲ್ಲಿ ಹರಿದು ಹಂಚಿ ಹೋಗಿರುವ ಶೇ. 85 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಬಹುಜನರು ಕೇವಲ ಶೇ.15 ರಷ್ಟು ಆಸ್ತಿ, ಸಂಪತ್ತು, ಅಧಿಕಾರವನ್ನು ಹೊಂದಿದ್ದಾರೆ. ಈ ಕಾರಣದಿಂದಾಗಿಯೇ ಅವರು ಬಡವರಾಗಿ, ಕಡುಬಡವರಾಗಿ ಬಾಳಿ ಬದುಕುತ್ತಿದ್ದಾರೆ. ಬಹುಜನ ಸಮಾಜವನ್ನು ಒಡೆಯುವ ಮೂಲಕ ಬ್ರಾಹ್ಮಣ, ಬನಿಯಾಗಳು ಭಾರತದಲ್ಲಿ ಆಳುವ ಜನರಾಗಿದ್ದಾರೆ. ಒಡೆಯುವುದು ಅವರ ಕೆಲಸ.. ಕೂಡಿಸುವುದು ನನ್ನ ಕೆಲಸ. ಒಡೆದು-ಹಂಚಿ ಹೋಗಿರುವ ಬಹುಜನ ಸಮಾಜವನ್ನು ಕೂಡಿಸಿ, ಪ್ರೀತಿ, ವಿಶ್ವಾಸ ನಂಬಿಕೆಗಳಲ್ಲಿ ಬಂಧಿಸಿ ಬಹುಜನ ಸಮಾಜವನ್ನು ಆಳುವ ಸಮಾಜವನ್ನಾಗಿ ಮಾಡುತ್ತೇನೆ”! ಎಂದು ಪ್ರತಿಜ್ಞೆಗೈದ ದಾದಾಸಾಹೇಬ್ ಕಾನ್ಷಿರಾಮ್ ರವರು ಉತ್ತರಪ್ರದೇಶವನ್ನು ತಮ್ಮ ರಾಜಕೀಯ ಪ್ರಯೋಗ ಭೂಮಿಯನ್ನಾಗಿ ಆರಿಸಿಕೊಂಡರು.
ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷಕ್ಕೆ ಅನುಕೂಲಕರ ವಾತಾವರಣವೇನೂ ಇರಲಿಲ್ಲ. ಯಾಕೆಂದರೆ ಉತ್ತರಪ್ರದೇಶಕ್ಕೆ ಬಹುಜನ ಸಮಾಜ ಪಕ್ಪ ಕಾಲಿರಿಸಿದಾಗ ಕಾಂಗ್ರೆಸ್ ಪಕ್ಷ ದೈತ್ಯಾಕಾರವಾಗಿ ಬೆಳೆದು ನಿಂತಿತ್ತು. ಶೇ.24 ರಷ್ಟು ಪರಿಶಿಷ್ಟ ಮತಗಳಿಂದ, ಶೇ. 15 ರಷ್ಟು ಮುಸ್ಲಿಮರ ಮತಗಳಿಂದ ಹಾಗೂ ಶೇ.10 ರಷ್ಟು ಒಬಿಸಿ ಮತಗಳಿಂದ ಕಾಂಗ್ರೆಸ್ ಉಕ್ಕಿನ ಕೋಟೆಯನ್ನು ಕಟ್ಟಿಕೊಂಡಿತ್ತು. ಇದು ಒಂದು ಕಡೆಗಾದರೆ, ಇನ್ನೊಂದು ಕಡೆಗೆ “ರಾಷ್ಟ್ರೀಯ ಸ್ವಯಂ ಸೇವಕ ಸಂಘ” (RSS) ತನ್ನ ರಾಜಕೀಯ ಕದಂಬ ಬಾಹುವನ್ನು ಅದಾಗಲೇ ವಿಸ್ತರಿಸುತ್ತಿತ್ತು. ಇಂತಹ ಅನಾನುಕೂಲಕರ ಕ್ಲಿಷ್ಟ ರಾಜಕೀಯ ಪರಿಸ್ಥಿತಿಗಳನ್ನು ತಮ್ಮ ಅಸಾಧಾರಣ ಪ್ರತಿಭೆ ಮತ್ತು ಅಪಾರ ಪರಿಶ್ರಮದ ಮೂಲಕ ಜನಾಂದೋಲನ ರೂಪಿಸಿ ಅನುಕೂಲಕರ ವಾತಾವರಣನ್ನಾಗಿಸಿಕೊಂಡು ಉತ್ತರಪ್ರದೇಶದಂತಹ ಬ್ರಾಹ್ಮಣರ ರಾಮಭೂಮಿಯಲ್ಲಿ ಭೀಮರಾಜ್ಯವನ್ನು ಸ್ಥಾಪಿಸಿದ ಹೆಗ್ಗಳಿಕೆ ಯುಗಪುರುಷ ದಾದಾಸಾಹೇಬ್ ಕಾನ್ಷಿರಾಮ್ ರವರಿಗೆ ಸಲ್ಲುತ್ತದೆ.
ಬಹುಜನ ಸಮಾಜ ಪಕ್ಷದ ತೀವ್ರಗತಿಯ ಬೆಳವಣಿಗೆಯಿಂದ 1985 ರಲ್ಲಿ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಾಗ ಅಂದು ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರು ಕಾನ್ಷಿರಾಮ್ ರನ್ನು ಹುಡುಕಿಕೊಂಡು ಬಂದು “ನೀವು ಬಿಎಸ್ಪಿಯನ್ನು ಕಾಂಗ್ರೆಸ್ ನಲ್ಲಿ ವಿಲೀನಗೊಳಿಸಿ.. ನಾವು ನಿಮ್ಮನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿ ಮಾಡುತ್ತೇವೆ” ಎಂದು ಹೇಳಿದಾಗ “ನನ್ನ ಗುರು ಬಾಬಾಸಾಹೇಬರಿಗೆ ಮೋಸ ಮಾಡಿದ ಕಾಂಗ್ರೆಸ್ಸನ್ನು ಸಂಪೂರ್ಣವಾಗಿ ನಾಶ ಮಾಡುವುದೇ ನನ್ನ ಗುರಿ” ಎಂದು ದಿಟ್ಟತನದಿಂದ ಹೇಳಿದರು.
“ಬಿಎಸ್ಪಿ ಎಂದೂ ಗೆಲ್ಲುವ ಪಕ್ಷವಾಗುವುದಿಲ್ಲ. ಮತ ವಿಭಜನೆ ಮಾಡಿ ಕೋಮುವಾದಿಗಳಿಗೆ ಸಹಕರಿಸುತ್ತದೆ. ಬಿಎಸ್ಪಿಯಿಂದ ಯಾವ ಕಾಲಕ್ಕೂ ಎಂ.ಎಲ್.ಎ ಗಳಾಗಲೀ, ಎಂ.ಪಿ. ಗಳಾಗಲೀ ಆರಿಸಿ ಬರುವುದಿಲ್ಲ. ಬರೀ ಸೋಲಿಸುವುದಷ್ಟೇ ಅದರ ಪಾತ್ರ” ಎಂದು ಕಂಡ-ಕಂಡಲ್ಲಿ ಅಪಪ್ರಚಾರ ಮಾಡಿಕೊಂಡು ತಿರುಗುತ್ತಿದ್ದ ಕಾಂಗ್ರೆಸ್ ನಾಯಕರೇ ತಲೆ ತಿರುಗಿ ಬೀಳುವಂತೆ ಪಕ್ಷವನ್ನು ಬೆಳೆಸಿ ತೋರಿಸಿದ ಕಾನ್ಷಿರಾಮ್ ರವರು ತಮ್ಮ ಬದುಕಿನವಧಿಯಲ್ಲಿ ಮೂರು ಬಾರಿ ಬಿಎಸ್ಪಿಯನ್ನು ಅಧಿಕಾರಕ್ಕೆ ತಂದರು. ಯಾವ ಕಾಂಗ್ರೆಸ್ಸಿಗರು ತಮ್ಮ ಕುತಂತ್ರಗಳ ಮೂಲಕ ಅಂಬೇಡ್ಕರರನ್ನು ರಾಜಕೀಯವಾಗಿ ಸೋಲಿಸಿ ಮೋಸದ ನಗೆ ಬೀರಿದ್ದರೋ ಅದೇ ಕಾಂಗ್ರೆಸ್ಸನ್ನು ಉತ್ತರ ಪ್ರದೇಶದಲ್ಲಿ ಹೇಳ-ಹೆಸರಿಲ್ಲದೆ ಅಳಿಸಿಹಾಕಿ ಸ್ವಾಭಿಮಾನದ ಮುಗುಳ್ನಗೆ ನಕ್ಕಿದರು.
ಇಂತಹ ಅಸಾಧಾರಣ ಕಾರ್ಯಗಳ ಮೂಲಕ ಕಾನ್ಷಿರಾಮ್ ರವರು ಬಿಎಸ್ಪಿಯನ್ನು ಮೂರನೇ ಅತಿದೊಡ್ಡ ರಾಷ್ಟ್ರೀಯ ಪಕ್ಷವಾಗಿಸಿದರು. ತಮಗೆ ಒಲಿದುಬಂದ ರಾಷ್ಟ್ರಪತಿ ಹುದ್ದೆಯನ್ನು, ಉಪಪ್ರಧಾನಿ ಹುದ್ದೆಯನ್ನು ಮತ್ತು ತಾವೇ ಮುಖ್ಯಮಂತ್ರಿಯಾಗಬಹುದಾದ ಸಾವಕಾಶವನ್ನು ತಳ್ಳಿಹಾಕಿ, ಮಾಯಾವತಿಯಂತಹ ಮಹಾನ್ ನಾಯಕಿಯನ್ನು ಸೃಷ್ಟಿಸಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮೊಟ್ಟ ಮೊದಲ ವ್ಯಕ್ತಿಯನ್ನಾಗಿಸಿದರು. ಕೋಟ್ಯಂತರ ಮಾರಾಟವಾಗದ ಮತದಾರರನ್ನು ಸೃಷ್ಟಿಸಿದರು. ಲಕ್ಷಾಂತರ ಸ್ವಾಭಿಮಾನಿ ಅಂಬೇಡ್ಕರ್ ವಾದಿಗಳನ್ನು ಹುಟ್ಟು ಹಾಕಿದರು. ಇದು ನಾಯಕನೊಬ್ಬನ ನಿಜವಾದ ಲಕ್ಷಣ. ಮಾರ್ಗದಾತನೊಬ್ಬನ ಗುಣ ಲಕ್ಷಣ. ಇಂದು ಈ ಮಹಾನಾಯಕನ ಜನ್ಮದಿನ. ಈ ಅದ್ಬುತ ವಿಮೋಚಕನ ಬದುಕು-ಬರಹ ಮತ್ತು ಹೋರಾಟದ ಹೆಜ್ಜೆ ಗುರುತುಗಳು ದೇಶವಾಳಲು ಸನ್ನದ್ದವಾಗುತ್ತಿರುವ ಬಹುಜನ ಸಮಾಜಕ್ಕೆ ದಾರಿ ದೀಪವಾಗಲಿ. ಇದುವೇ ನಾವು ಆ ಮಹಾಚೇತನಕ್ಕೆ ಸಲ್ಲಿಸಬೇಕಾದ ನಿಜವಾದ ಗೌರವ.
– ಮಹೇಶ್ ಕುಮಾರ್ ಸರಗೂರು
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್ಮೆಂಟ್ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್ನ ಎಸ್ಎನ್ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್ಎನ್ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್ಎಸ್ಆರ್ ಲೇಔಟ್ನಲ್ಲಿರುವ ತನ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್ಎನ್ಎನ್ ಅಪಾರ್ಟ್ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

ದಿನದ ಸುದ್ದಿ
ಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.
ಹೈಲೈಟ್ಸ್ |
|
http://Visit : www.suddidina.com
ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್
ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ
ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.
ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ
ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿ ಹೆಚ್ಚಿದ ಕಣ್ಗಾವಲು
ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.
ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

ದಿನದ ಸುದ್ದಿ
ಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ
- ಜುಲೈ 25ರ ಭರವಸೆ ಜಾರಿಗೆ ವಿಳಂಬ: CJP ತೀವ್ರ ಆಕ್ರೋಶ
- ಇಂಡಿಯಾ ಗೇಟ್ನಿಂದ ಪೊಲೀಸ್ ಕೇಂದ್ರ ಕಚೇರಿವರೆಗೆ ಮೆರವಣಿಗೆ
- NEET ಅಭ್ಯರ್ಥಿಗಳ ಕುಟುಂಬಸ್ಥರು, ಪೊಲೀಸ್ ದೌರ್ಜನ್ಯ ಸಂತ್ರಸ್ತರು ಮುಂಚೂಣಿಯಲ್ಲಿ
- “ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ” ಎಂದ CJP
ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ
ಸುದ್ದಿದಿನ,ನವದೆಹಲಿ: ದೇಶದ ಯುವಜನರಿಗೆ ನೀಡಿರುವ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಸೆಪ್ಟೆಂಬರ್ 5ರಂದು ನವದೆಹಲಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿದೆ. ಜುಲೈ 25ರಂದು ಸಾರ್ವಜನಿಕವಾಗಿ ನೀಡಲಾಗಿದ್ದ ಭರವಸೆಗಳಿಗೆ ಒಂದು ತಿಂಗಳು ಕಳೆದರೂ ಅವುಗಳ ಅನುಷ್ಠಾನಕ್ಕೆ ಸ್ಪಷ್ಟ ಕ್ರಮಗಳು ಗೋಚರಿಸುತ್ತಿಲ್ಲ ಎಂಬುದು CJPಯ ಪ್ರಮುಖ ಆರೋಪವಾಗಿದೆ.
CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದ್ದು, ಸರ್ಕಾರ ಹಾಗೂ ಬಿಜೆಪಿ-ಎನ್ಡಿಎ ಆಡಳಿತದ ರಾಜ್ಯಗಳು ಯುವಜನರಿಗೆ ನೀಡಿದ್ದ ಭರವಸೆಗಳ ಅನುಷ್ಠಾನವನ್ನು ಪರಿಶೀಲಿಸಿದ ಬಳಿಕ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ಪಕ್ಷ ತಿಳಿಸಿದೆ.
http://Visit : www.suddidina.com
ಇಂಡಿಯಾ ಗೇಟ್ನಿಂದ ಮೆರವಣಿಗೆ
ಸೆಪ್ಟೆಂಬರ್ 5ರಂದು ಇಂಡಿಯಾ ಗೇಟ್ನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ನವದೆಹಲಿ ಪೊಲೀಸ್ ಕೇಂದ್ರ ಕಚೇರಿಯತ್ತ ಸಾಗಲಿದೆ. ಮೃತ NEET ಅಭ್ಯರ್ಥಿಗಳ ಕುಟುಂಬಸ್ಥರು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಲಿದ್ದಾರೆ ಎಂದು CJP ಹೇಳಿದೆ.
ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಯುವ ಸಂಘಟನೆಗಳ ಪ್ರತಿನಿಧಿಗಳು ಮತ್ತು ಯುವಜನರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸರ್ಕಾರ ನೀಡಿದ್ದ ಭರವಸೆಗಳನ್ನು ಜಾರಿಗೆ ತರಬೇಕು ಎಂಬ ಒಂದೇ ಪ್ರಮುಖ ಬೇಡಿಕೆಯೊಂದಿಗೆ ಯುವಜನರು ಶಾಂತಿಯುತವಾಗಿ ಧ್ವನಿ ಎತ್ತಲಿದ್ದಾರೆ ಎಂದು ಪಕ್ಷ ಹೇಳಿದೆ.
‘ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ’
ಜುಲೈ 25ರಂದು ನೀಡಿದ ಭರವಸೆಗಳನ್ನು ನಂಬಿ ದೇಶಾದ್ಯಂತ ನಡೆದಿದ್ದ ಪ್ರತಿಭಟನೆಗಳನ್ನು ಯುವಜನರು ಉತ್ತಮ ನಂಬಿಕೆಯಿಂದ ಹಿಂಪಡೆದಿದ್ದರು. ಆದರೆ, ಭರವಸೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದು ಯುವಜನರಲ್ಲಿ ಮತ್ತೆ ಅಸಮಾಧಾನ ಮೂಡಿಸಿದೆ ಎಂದು CJP ಆರೋಪಿಸಿದೆ.
“ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ. ನಮ್ಮ ಸದುದ್ದೇಶವನ್ನು ಸರ್ಕಾರ ಯುವಜನರಿಗೆ ದ್ರೋಹ ಮಾಡುವ ಅವಕಾಶವಾಗಿ ಬಳಸಿಕೊಳ್ಳಬಾರದು” ಎಂದು CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಎಚ್ಚರಿಕೆ ನೀಡಿದೆ.
“ಭರವಸೆಗಳನ್ನು ಜಾರಿಗೆ ತರುವ ಬದಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ”
|
ಮಾತಿನಿಂದ ಹಿಂದೆ ಸರಿಯಲು ಸಾಧ್ಯವಿಲ್ಲ
ಜುಲೈ 25ರಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕವಾಗಿ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಬೇಕು ಎಂಬುದು CJPಯ ಆಗ್ರಹ. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರ ನೋವಿನ ನಡುವೆ ನಡೆಯಲಿರುವ ಈ ಮೆರವಣಿಗೆ, ಯುವಜನರ ವಿಶ್ವಾಸ ಮತ್ತು ಸರ್ಕಾರದ ಹೊಣೆಗಾರಿಕೆಯ ಪ್ರಶ್ನೆಯನ್ನು ಮುನ್ನೆಲೆಗೆ ತರುವ ಪ್ರಯತ್ನವಾಗಿದೆ.
ಕೇಂದ್ರ ಸರ್ಕಾರ ಭರವಸೆಗಳನ್ನು ಜಾರಿಗೆ ತರುವ ಬದಲು ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ ಎಂದು CJP ಆರೋಪಿಸಿದೆ.
ಸೆಪ್ಟೆಂಬರ್ 5ರಂದು ಹೆಚ್ಚಿನ ಸಂಖ್ಯೆಯಲ್ಲಿ ಇಂಡಿಯಾ ಗೇಟ್ನಲ್ಲಿ ಸೇರಿ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಯುವಜನರು, ವಿದ್ಯಾರ್ಥಿಗಳು ಹಾಗೂ ಯುವ ಸಂಘಟನೆಗಳಿಗೆ CJP ಮನವಿ ಮಾಡಿದೆ. ಪ್ರತಿಭಟನೆ ಸಂಪೂರ್ಣವಾಗಿ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯಲಿದೆ ಎಂದು ಅದು ಪುನರುಚ್ಚರಿಸಿದೆ.

-
ಅಂತರಂಗ6 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ4 days agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ4 days agoKPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
ದಿನದ ಸುದ್ದಿ4 days agoಇಂಗ್ಲಿಷ್ ಕಲಿಯಲು ಬಂದ ಜಪಾನ್ ಯುವಕ ಜೈಲು ಸೇರಿದ ; 75000 ಪರಿಹಾರ ಪಡೆದ
-
ದಿನದ ಸುದ್ದಿ4 days agoಸರ್ವರ್ ಡೌನ್, ಅಧಿಕಾರಿಗಳ ವಿಳಂಬ: ‘ಎ-ಖಾತೆ’ಗಾಗಿ ಕಾದು ಕುಳಿತ 60 ಸಾವಿರಕ್ಕೂ ಹೆಚ್ಚು ಅರ್ಜಿದಾರರು!
-
ದಿನದ ಸುದ್ದಿ4 days ago₹25 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶಕ್ಕೆ: ರಾಜಾಜಿನಗರ ಬಡಾವಣೆಯಲ್ಲಿ ಅನಧಿಕೃತ ನಿರ್ಮಾಣಕ್ಕೆ ಬಿತ್ತು ಬೀಗ
-
ದಿನದ ಸುದ್ದಿ5 days agoಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ



