ದಿನದ ಸುದ್ದಿ
ಕಿಮ್ ಕಿ ಡುಕ್; ಎಣ್ಣೆ ತೀರಿದ ಏಷಿಯಾದ ವಿಕ್ಷಿಪ್ತ ಹಣತೆ
- ಡಾ.ನೆಲ್ಲುಕುಂಟೆ ವೆಂಕಟೇಶ್
ಕಳೆದ ದಕ್ಷಿಣ ಕೊರಿಯಾದ ನಿರ್ದೇಶಕ ಕಿಮ್ ಕಿ ಡುಕ್ ಲಾಟ್ವಿಯಾದ ಆಸ್ಪತ್ರೆಯೊಂದರಲ್ಲಿ ಮರಣ ಹೊಂದಿದ. ಕೊರೋನ ವೈರಸ್ಸು ಈತನನ್ನು ತಿಂದು ಹಾಕಿದೆ. ಕಿಮ್ ಸಾವು ಜಗತ್ತಿನ ಗಂಭೀರ ಸಿನಿಮಾಸಕ್ತರನ್ನು ಕಾಡಿದಂತೆ ನಮ್ಮನ್ನು ಕಾಡಲಿಲ್ಲ. ಕಡೇ ಪಕ್ಷ ಕೇರಳವನ್ನು ಕಾಡಿದಷ್ಟೂ ಕಾಡಲಿಲ್ಲ. ಕೇರಳ ಮನೆ ಮಗನನ್ನು ಕಳೆದುಕೊಂಡ ಹಾಗೆ ಸ್ಪಂದಿಸಿದೆ. [ಮಲಯಾಳಂಗೆ ಆತನ ಬಹುಪಾಲು ಸಿನಿಮಾಗಳು ಡಬ್ ಆಗಿವೆ. ಅಲ್ಲಿ ಅವನ ಸಿನಿಮಾ ಉತ್ಸವಗಳೂ ನಡೆದಿವೆ}.
ಅವನ ಸಾವಿನ ಕುರಿತು ಕನ್ನಡದ ಸೋಷಿಯಲ್ ಮೀಡಿಯಾದಲ್ಲಿ ತುಸು ಸದ್ದು ಮಾಡಿದ್ದು ಬಿಟ್ಟರೆ ಹೆಚ್ಚೇನೂ ಚರ್ಚೆಯಾಗಲಿಲ್ಲ. ಎಂದಿನಂತೆ ಕರ್ನಾಟಕದ ಸಿನಿಮಾ ಜನ ತಣ್ಣಗೆ ಪ್ರತಿಕ್ರಿಯಿಸಿದರು. ಬಹಳ ಜನ ಕನ್ನಡ ಸಿನಿಮಾದವರಿಗೆ ಈತ ಗೊತ್ತಿದ್ದನೋ ಇಲ್ಲವೋ ತಿಳಿಯದು. ಕನ್ನಡ ಬಾಲಿವುಡ್ಡನ್ನು ಮಾದರಿಯಾಗಿಟ್ಟುಕೊಂಡು ಸಿನಿಮಾ ಮಾಡಲು ಪ್ರಯತ್ನಿಸುತ್ತಿದೆ. ಮಲೆಯಾಳಂಗೆ ಇರುವ ಡಯಸ್ಪೋರಾ ಗುಣದಿಂದಾಗಿ ಅವರನ್ನು ಜಗದ ಜತೆ ಸಂವಾದ ಮಾಡುವ ಮಾಂತ್ರಿಕರನ್ನಾಗಿಸಿದೆ.
ಮಲೆಯಾಳಿಗರು ಮನುಷ್ಯನ ಆಳದ ಇಂಪಲ್ಸಿವ್ ಗುಣಗಳನ್ನು ಹಿಡಿದು ಯೂನಿವರ್ಸಲ್ ಆಗಬಹುದಾದ ಸಿನಿಮಾಗಳನ್ನು ಕಟ್ಟುತ್ತಿದ್ದಾರೆ. ಕನ್ನಡಕ್ಕೆ ಇದು ಯಾಕೊ ಸಾಧ್ಯವಾಗಿಲ್ಲ. ನಮ್ಮಲ್ಲಿ ಯೂನಿಫಾರ್ಮಿಟಿಯ ಫ್ರೇಮಿನಲ್ಲಿಟ್ಟ ಪ್ರೇಮ, ಜೋಕುಗಳು, ಅಂತರಂಗವೇ ಇಲ್ಲದಂತೆ ಕಾಣುವ ಇಟ್ಟಿಗೆ, ಜಲ್ಲಿಯಂಥ ವಿಲನ್ಗಳು, ಅವರ ರಕ್ತಪಾತಗಳು ಇವುಗಳನ್ನು ಪದೇ ಪದೇ ತಿರುಗಿಸಿ ಸೂಕ್ಷ್ಮತೆಯುಳ್ಳವರನ್ನು ಸಿನಿಮಾಗಳತ್ತ ನೋಡದ ಹಾಗೆ ಮಾಡಲಾಗಿದೆ.
ಹಿಂಸೆಯಲ್ಲಿ ರಣ ಹಿಂಸೆ ತೋರಿಸುವ ಸಿನಿಮಾ ದುಡ್ಡು ಮಾಡುತ್ತದೆ ಎಂಬ ಸೂತ್ರವೇನೋ ಇವರಿಗೆ ಸಿಕ್ಕಿಬಿಟ್ಟಂತಿದೆ. ಇದು ನೋಡುಗರ ಸಮಸ್ಯೆಯೋ ಇಲ್ಲ ಸಿನಿಮಾ ಮಾಡುವವರ ಸಮಸ್ಯೆಯೋ ತಿಳಿಯದು. ಇಬ್ಬರೂ ಒಬ್ಬರತ್ತ ಒಬ್ಬರು ಮಾತ್ರ ಕೈ ತೋರಿಸಿಕೊಂಡು ಕೂತಿದ್ದಾರೆ. ಇದೆಲ್ಲದರ ನಡುವೆ ಕನ್ನಡ ತೆಳುವಾಗುತ್ತಿದೆ. ಆಧುನಿಕ ಸಂದರ್ಭದಲ್ಲಿ ಆಹಾರ ಸಂಸ್ಕೃತಿ, ಸಿನಿಮಾ, ಸಂಗೀತ ಸಂಸ್ಕøತಿಗಳು ಭಾಷೆಯನ್ನು ಮತ್ತು ಸಂಸ್ಕೃತಿಯನ್ನು ವಿಸ್ತರಿಸಲು ಕಾರಣವಾಗುತ್ತಿವೆ. ನಾವು ಇದನ್ನು ಮರೆತಂತೆ ವರ್ತಿಸುತ್ತಿದ್ದೇವೆ.
ಕನ್ನಡದ ಕಲಾತ್ಮಕ ಸಿನಿಮಾಗಳೂ ಸಹ ನನ್ನನ್ನು ಕಾಡಿದ್ದಿಲ್ಲ. ಅವು ಡಾಕ್ಯುಮೆಂಟರಿ ಲೆವೆಲ್ಲಿನಿಂದ ಮೇಲೆದ್ದ ಹಾಗೆ ಕಂಡೇ ಇಲ್ಲ. ಇಷ್ಟಕ್ಕೂ ಸಿನಿಮಾವನ್ನು ಕಲಾತ್ಮಕ, ಕಮರ್ಷಿಯಲ್ ಎಂದು ವಿಂಗಡಿಸುವುದೇ ತಪ್ಪಲ್ಲವೇ? ಕಲಾತ್ಮಕ ಸಿನಿಮಾ ಒಂದನ್ನು ಜನ ನೋಡದಿದ್ದರೆ, ತಿಂದ ಬಂಡವಾಳವನ್ನು ಅದು ವಾಪಸ್ಸು ನೀಡದಿದ್ದರೆ ಅಂಥ ಸಿನಿಮಾವನ್ನು ಯಾಕೆ ಮಾಡಬೇಕು? ಕಮರ್ಷಿಯಲ್ ಚಿತ್ರಕ್ಕೆ ಕಲೆಯ ಸ್ಪರ್ಶವೇ ಇಲ್ಲದಿದ್ದರೆ ಅದೂ ಸಹ ಹುಸಿಯಾದ ರಚನೆಯೇ ಅಲ್ಲವೇ?
ಒಳ್ಳೆಯತನ ಮತ್ತು ಕೆಟ್ಟತನಗಳನ್ನು ಸರಳ ರೇಖೆಗಳಲ್ಲಿ ಇರಿಸಿ ನೋಡುವ ಚಾಳಿಯೊಂದು ಕನ್ನಡವನ್ನು ಆವರಿಸಿಕೊಂಡು ಕೂತಿದೆ. ನಾಯಕನಾದವನು ಹೀಗೆ ಇರಬೇಕು ಎಂಬ ಫಾರ್ಮುಲಾವನ್ನು ಅಚ್ಚು ಕಟ್ಟಾಗಿ ಪಾಲಿಸಲಾಗುತ್ತದೆ. ರಾಮನೊಳಗೂ, ಕೃಷ್ಣನೊಳಗೂ ಅಸಂಖ್ಯಾತ ಓರೆ ಕೋರೆಗಳಿದ್ದವು ಎಂದು ವ್ಯಾಸ, ವಾಲ್ಮೀಕಿಯರು ತೋರಿಸುತ್ತಾರೆ. ಮನುಷ್ಯನಾಗುವುದೆಂದರೆ ಮೃಗೀಯತೆಯಿಂದ ಬಿಡುಗಡೆ ಪಡೆಯುವುದೆಂದು ಅರ್ಥ.
ತಂದೆ ಆ ಮೃಗತ್ವದಿಂದ ಬಿಡುಗಡೆ ಪಡೆದಿದ್ದ ಎಂದರೆ ಮಗನಿಗೆ ಮನುಷ್ಯತ್ವ ಬಂದು ಬಿಡುತ್ತದೆ ಎಂದಲ್ಲ. ಮಗನೂ ಸಂಘರ್ಷ ಮಾಡಿಯೇ ಬದುಕಬೇಕು. ಈ ತಾಕಲಾಟಗಳೇ ಮನಶ್ಯಾಸ್ತ್ರದ ಮೂಲ ತಾಕುಗಳು. ಬುಡಕಟ್ಟು, ನಾಗರಿಕತೆ, ರಾಷ್ಟ್ರಗಳಿಗೂ ಇಂಪಲ್ಸಿವ್ ಕ್ಯಾರೆಕ್ಟರ್ ಇರುತ್ತದೆ. ಪ್ರೇಮ, ಕಾಮ, ಧರ್ಮದ ಸ್ಥಗಿತ ಮೌಲ್ಯಗಳು, ಜಾತಿ, ವರ್ಗಗಳ ದಮನಕಾರಿ ಗುಣಗಳು ರಾಷ್ಟ್ರದ ಶ್ರೇಷ್ಠತೆಯ ಸಮಸ್ಯೆಗಳು. ಹಿಂಸೆ, ಶಾಂತಿ ಕುರಿತಾದ ಹಂಬಲ, ಪ್ರೀತಿ ಕುರಿತ ದಾಹ ಇವೆಲ್ಲ ಮನುಷ್ಯರನ್ನು ನಿರಂತರ ಕಾಡುತ್ತಲೇ ಇವೆ. ಕಂಗೆಡಿಸುತ್ತಲೇ ಇವೆ. ನಾಯಕನೊಳಗೊಳಗೊಬ್ಬ ಖಳ. ಖಳನೊಳಗೊಬ್ಬ ಮನುಷ್ಯನಿರಲು ಸಾಧ್ಯ ಎಂದು ಪಂಪ ರನ್ನರ ಕಾಲದಲ್ಲೇ ಕನ್ನಡವು ಚಿಂತಿಸಿದೆ.
ಕನ್ನಡದ ಸಿನಿಮಾಗಳು ನಡುಗಿಸುವಂತಹ, ಮುಟ್ಟಿ ನೋಡಿಕೊಳ್ಳುವಂತಹ, ಕಾಡುವಂತಹ ಇಂಪಲ್ಸಿವ್ ಕ್ಯಾರೆಕ್ಟರ್ಗಳನ್ನು ಸೃಷ್ಟಿಸಿದೆಯೇ? ಎಂಬುದನ್ನು ಕೇಳಿಕೊಳ್ಳಲು ಸಕಾಲ ಇದು. ಪಕ್ಕದ ಮಲಯಾಳಂ ಸಿನಿಮಾಗಳ ಮೂಲಕ ವಿಶ್ವಸ್ಥ ವ್ಯಾಕರಣವನ್ನು ಹಿಡಿದು, ಸ್ಥಳೀಯ ರಂಗು ಬಳಿದುಕೊಂಡು ನರ್ತಿಸುತ್ತಿದೆ. ತಮಿಳಿನಲ್ಲೂ ಪ್ರಧಾನ ಧಾರೆಯ ದೃಷ್ಟಿಕೋನವನ್ನು ಭಂಗಿಸುವ ಸಿನಿಮಾಗಳು ಆಗಾಗ ಬರುತ್ತಿವೆ.
ಕನ್ನಡ ಸಿನಿಮಾಗಳ ಪ್ರಗತಿಪರತೆ ಜಾತಿ, ಧರ್ಮ ಮೀರಿ ಪ್ರೀತಿ ಮಾಡುವುದು, ಪಾಠ ಮಾಡುವ ಮೇಷ್ಟ್ರುಗಳನ್ನು ಜೋಕರುಗಳಾಗಿ ಚಿತ್ರಿಸುವುದು, ಆಡಳಿತಶಾಹಿಯನ್ನು ಕೆಟ್ಟದಾಗಿ ಬಯ್ಯುವುದು, ಬಡವನೊಬ್ಬ ವೇಗವಾಗಿ ಶ್ರೀಮಂತನಾಗುವುದು, ರೌಡಿಯಾದರೂ ಒಳ್ಳೆಯ ಕಾರಣಕ್ಕೆ ಇತರರನ್ನು ಕೊಲ್ಲುವುದು ಮುಂತಾದ ಕತೆಗಳಾಚೆಗೆ ಹೋಗಿದ್ದು ಬಹಳ ಕಡಿಮೆ. ವಾಸ್ತವವಲ್ಲದ ಹುಸಿಯ ಬಣ್ಣವನ್ನು ಜನರ ಮೆದುಳ ಮೇಲೆ ತೇಲಿಸಲಾಗುತ್ತಿದೆ.
ಕಿಮ್ ಕಿ ಡುಕ್ ಸಾವು ಇದನ್ನೆಲ್ಲ ನೆನಪಿಸಿತು. ಕಿಮ್ ವಿಪರೀತ ವಿಕ್ಷಿಪ್ತ ಮನಸ್ಸಿನ ಮನುಷ್ಯ. ದಕ್ಷಿಣ ಕೊರಿಯಾದ ಗ್ಯೊಂಗ್ ಸ್ಯಾಂಗ್ ಪ್ರದೇಶದಲ್ಲಿ ಹುಟ್ಟಿ ಸಿಯೋಲ್ನ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿ ದುಡಿದ. ಅಲ್ಲಿಂದ ಪ್ಯಾರಿಸ್ಸಿಗೆ ಹೋಗಿ ಬೀದಿಗಳಲ್ಲಿ ಪೈಂಟಿಂಗ್ ಮಾಡುತ್ತಾ ಅಲ್ಲಿನ ಕಲೆಯ ಅಭಿವ್ಯಕ್ತಿ ವಿಧಾನಗಳನ್ನು ಆಳವಾಗಿ ಗಮನಿಸತೊಡಗಿದ.
ನಿಧಾನಕ್ಕೆ ಸಿನಿಮಾ ಕಡೆಗೆ ನಡೆದ. 1996 ರಲ್ಲಿ ಕ್ರೊಕೋಡೈಲ್ ಸಿನಿಮಾ ಮಾಡಿದ. ಬುದ್ಧಿಸ್ಟ್ ದೇಶವಾದ ದಕ್ಷಿಣ ಕೊರಿಯಾದಲ್ಲಿ ಈತನ ಸಿನಿಮಾಗಳ ಬೆಚ್ಚಿ ಬೀಳಿಸುವ ಗುಣ, ಅತಿ ಎನ್ನಿಸುವ ಒರಟುತನ, ಹಸಿ ಹಸಿಯಾದ ಮನುಷ್ಯರ ವಾಂಛೆಗಳು ಮೀಡಿಯಾಗಳ, ಪಂಡಿತರ ಗಮನ ಸೆಳೆಯಲಿಲ್ಲ. ಸಿಟ್ಟಿಗೆದ್ದ ಕಿಮ್ ತನ್ನ ದೇಶದಲ್ಲಿ ಸಿನಿಮಾ ಬಿಡುಗಡೆ ಮಾಡುವುದಿಲ್ಲವೆಂದು ಹಠ ಮಾಡಿದ.
ಕಿಮ್ನ ಸಿನಿಮಾ ‘ ದ ನೆಟ್’ ಅನ್ನು ನಾನು 2017 ರಲ್ಲಿ ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ನೋಡಿದೆ. ಆ ಸಿನಿಮಾ ವಿಶ್ವಾತ್ಮಕವಾದವನ್ನು ಪ್ರತಿಪಾದಿಸುತ್ತಿದ್ದ ಜಗತ್ತಿನ ಅನೇಕ ಚಿಂತಕರನ್ನು ನೆನಪಿಸಿತು. ಮನುಷ್ಯನ ಒಳ್ಳೆಯದಕ್ಕೆಂದು ನಿರ್ಮಾಣವಾದ ರಾಷ್ಟ್ರವೆಂಬ ಆಧುನಿಕ ರಾಜಕೀಯ ಸಂರಚನೆಯು ಭೀತಿಕಾರಕ ಮತ್ತು ಹಿಂಸ್ರಕವೆಂದು ಆ ಸಿನಿಮಾ ವಿವರಿಸುತ್ತದೆ.
ನೆಟ್ ಸಿನಿಮಾ ನೋಡಿದ ನಂತರ ಅವನ ಉಳಿದ ಸಿನಿಮಾಗಳನ್ನು ಹುಡುಕಿ ಹುಡುಕಿ ನೋಡತೋಡಗಿದೆ. ಕೆಲವು ಸಿನಿಮಾಗಳು ವಿಕ್ಷಿಪ್ತ ಅನ್ನಿಸಿದರೆ ಕೆಲವು ಮನುಷ್ಯನ ನಾಭಿಯಾಳದ ಸಂಕಟದಿಂದ ಎದ್ದು ಬರುತ್ತಿವೆ ಅನ್ನಿಸಿದವು. ನನ್ನನ್ನು ಬಹಳ ಕಾಡಿದ ಸಿನಿಮಾಗಳು ಮೂರು; ದ ನೆಟ್, 3 ಐರನ್ ಮತ್ತು ಸ್ಪ್ರಿಂಗ್, ಸಮ್ಮರ್, ಫಾಲ್ ವಿಂಟರ್ ಅಂಡ್ ಸ್ಪ್ರಿಂಗ್. ಸಿನಿಮಾ ನೋಡಿ ಬಹಳ ಕಾಲವಾದರೂ ಅದರ ಗುಂಗಿನಿಂದ ಹೊರಬರಲಾಗದಂತೆ ಈ ಸಿನಿಮಾಗಳು ಕಾಡುತ್ತಿವೆ.
ಅತ್ಯುತ್ತಮ ಕಲಾಕೃತಿಯೊಂದು ಸದಾ ತನ್ನನ್ನು ಬಂಧಿಸುವ ಫಾರ್ಮ್ ಅನ್ನು ಮುರಿಯಲು ಪ್ರಯತ್ನಿಸುತ್ತಿರುತ್ತದೆ. ಸಿನಿಮಾ, ಪೈಂಟಿಂಗ್, ಕತೆ, ಪದ್ಯ, ಕಾದಂಬರಿ, ನಾಟಕ ಎಲ್ಲವೂ ಹಾಗೆಯೇ. ಫಾರ್ಮಿನ ಬಂಧನದಿಂದ ಬಿಡಿಸಿಕೊಳ್ಳದೆ ಇದ್ದರೆ ಅಂತಹ ಕಲಾಕೃತಿ ಕೃತಕ ಅನ್ನಿಸಲಾರಂಭಿಸುತ್ತದೆ. ಕಾಲ, ದೇಶಗಳ ಹಂಗು ಮೀರಿ ಕತೆ, ಕಲಾಕೃತಿಯು ಮನುಷ್ಯರೆಲ್ಲರ ಸಂಕಟ, ತೊಳಲಾಟ ಅನ್ನಿಸತೊಡಗಿದರೆ ಮಾತ್ರ ಬದುಕಿನ ಕತೆಯಾಗುತ್ತದೆ. ಕಿಮ್ ನ ಸಿನಿಮಾಗಳು ಅಂತಹ ದಿಗಂತದ ಕಡೆಗೆ ಏರಲು ಯತ್ನಿಸುತ್ತವೆ.
ಕುರಸೋವಾನ ನಂತರ ಪಶ್ಚಿಮದ ಜಗತ್ತು ಏಷ್ಯಾದ ಕಡೆಗೆ ತಿರುಗಿ ನೋಡಿದ್ದು ಒಂದರ್ಥದಲ್ಲಿ ಕಿಮ್ ಕಿ ಡುಕ್ ಕಾರಣದಿಂದಾಗಿ. (ಭಾರತದಲ್ಲಿ ಸತ್ಯಜಿತ್ ರೇ ಮತ್ತು ಅಮೀರ್ ಖಾನ್ ಒಂದಿಷ್ಟು ಸೆಳೆವ ಕೆಲಸ ಮಾಡಿದ್ದಾರೆ).ಇರಾನಿನ ಮಜೀದ್ ಮಜೀದಿಯೂ ಈ ಕ್ಷೇತ್ರದಲ್ಲಿ ಗಮನಾರ್ಹ ಕೆಲಸ ಮಾಡಿದ್ದಾನೆ. ಕಿಮ್ ಗಿಂತ ಒಂದು ವರ್ಷ ದೊಡ್ಡನಾದ ಮಜೀದಿ ಮಕ್ಕಳ ಮೂಲಕ ಮನುಷ್ಯರ ಸಂಕಟಗಳನ್ನು ಹೇಳಲು ಪ್ರಯತ್ನಿಸುತ್ತಾನೆ.
ಮಜೀದಿಯ ‘ಚಿಲ್ಡ್ರನ್ ಆಫ್ ಹೆವನ್’, ‘ದ ಕಲರ್ ಆಫ್ ಪ್ಯಾರಡೈಸ್’ ಗಮನಾರ್ಹ ಕಲಾಕೃತಿಗಳು. ಸಿನಿಮಾಗಳ ಮೂಲಕ ವiಜೀದಿ ಇರಾನಿನ ಗ್ರಾಮೀಣ ಕೃಷಿ ಕುಟುಂಬಗಳ ಕಣ್ಣೀರು, ಸಂಕಟ, ಪ್ರೇಮ ಮತ್ತು ಮನುಷ್ಯರ ನವಿರುತನಗಳನ್ನು ಹೆಕ್ಕಿ ತರಲು ಪ್ರಯತ್ನಿಸುತ್ತಾನೆ. ಮಕ್ಕಳನ್ನು ದೇವರ ಪ್ರತಿನಿಧಿಗಳೆಂದು ಗ್ರಹಿಸುತ್ತಾನೆ.
ಕಿಮ್ ಮಜೀದಿಯ ಹಾಗೆ ಬೇಗ ಆರ್ದ್ರಗೊಳ್ಳುವ ಮನುಷ್ಯನಲ್ಲ. ಆತ ಒಂದರ್ಥದಲ್ಲಿ ದೇವರ ವಿರುದ್ಧವೇ ದಂಗೆ ಏಳುವ ಮನುಷ್ಯ. ಅವನ ಸ್ಪ್ರಿಂಗ್ ಸಮ್ಮರ್… ಸಿನಿಮಾ ಒಂದರ್ಥದಲ್ಲಿ ಬುದ್ಧನ ವಿರುದ್ಧ ದಂಗೆ ಏಳುವ ಸಿನಿಮಾ. ಮಹಾಯಾನಿ ಬೌದ್ಧಗುರು ಮತ್ತು ಶಿಷ್ಯನ ನಡುವೆ ನಡೆವ ಈ ಕತೆ ಚಕ್ರಗತಿ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ. ಮುಖ್ಯವಾಗಿ ಅದು ಎರಡು ತತ್ವಗಳನ್ನು ಪ್ರತಿಪಾದಿಸುತ್ತದೆ.
ಒಂದು, “ಕಾಮವು ತನ್ನ ತೀರದ ದಾಹದಿಂದ ಇನ್ನೊಂದು ಜೀವದ ಮೇಲೆ ಪೊಸೆಸಿವ್ ಆಗುತ್ತದೆ, ಕಡೆಗೆ ಕೊಲೆ ಮಾಡಲು ಉತ್ತೇಜಿಸುತ್ತದೆ”. ಗುರು, ಶಿಷ್ಯರು ಪ್ರಕೃತಿಯ ಏರಿಳಿತಗಳನ್ನು ನೋಡುತ್ತಾ ಸರೋವರದ ಮಧ್ಯದ ಕುಟೀರದಲ್ಲಿ ಬದುಕಿದ್ದ ನೆಲೆಗೆ ಖಿನ್ನ ಮನಸ್ಸಿನ ಕಾಯಿಲೆ ಅಂಟಿದ್ದ ಹುಡುಗಿಯೊಬ್ಬಳು ಬರುತ್ತಾಳೆ. ಶಿಷ್ಯ ಅವಳ ಮೋಹಕ್ಕೆ ಬಿದ್ದು ಅವಳೊಂದಿಗೆ ಮಲಗುತ್ತಾನೆ. ಗುರುವಿಗೆ ಗೊತ್ತಾಗುತ್ತದೆ.
ಇದು ಪುನರಾವರ್ತನೆಯಾಗುತ್ತದೆ. ಆಗ ಗುರು ಮೇಲಿನ ಮಾತನ್ನು ಶಿಷ್ಯನಿಗೆ ಹೇಳುತ್ತಾನೆ. ಗಂಡಿನ ಸ್ಪರ್ಶದಿಂದ ಹುಡುಗಿ ಗುಣಮುಖಳಾಗುತ್ತಾಳೆ. ದೈಹಿಕ ಸಂಪರ್ಕದಿಂದ ಕಾಯಿಲೆ ವಾಸಿಯಾಗುವುದಾರೆ ಅದು ಒಮ್ಮೆ ಸಾಕು ಎನ್ನುವಷ್ಟು ಪ್ರಾಕ್ಟಿಕಲ್ ಆಗಿ ಗುರು ಯೋಚಿಸುತ್ತಾನೆ.
ಆದರೆ ಅದೇ ಕಾಯಿಲೆಯಾಗಿಟ್ಟರೆ ನಾಶ ಖಂಡಿತ ಎನ್ನುವುದು ಆತನ ನಿಲುವು. ಹುಡುಗಿಯನ್ನು ಹೊರಡುವಂತೆ ಹೇಳುತ್ತಾನೆ. ಅವಳು ಹೋದ ಕೂಡಲೇ ಶಿಷ್ಯ ಭೋರೆಂದು ಗೋಳಾಡಿ ಅವಳ ಹಿಂದೆ ಹೋಗುತ್ತಾನೆ. ಕಡೆಗೊಂದು ದಿನ ವಾಪಸ್ಸು ಬರುತ್ತಾನೆ. ಪಶ್ಚಾತ್ತಾಪ, ಸಿಟ್ಟಿನಲ್ಲಿ ಭುಗಿಲೆದ್ದು ಹೇಳುತ್ತಾನೆ. ‘ ಅವಳಿಂದ ಬಯಸಿದ್ದು ಪ್ರೇಮವನ್ನು ಮಾತ್ರ. ಅವಳು ಬೇರೊಬ್ಬನೊಂದಿಗೆ ಹೊರಟು ಹೋದಳು. ಕಡೆಗೆ, ಅವಳನ್ನು ಕೊಂದು ಬಂದೆ’ ಎಂದು ನೆತ್ತರು ಒಣಗದ ಚಾಕು ತೋರಿಸುತ್ತಾನೆ.
ಎರಡು, ‘ನೀನು ಪ್ರಾಣಿಗಳಿಗೆ ಕಲ್ಲು ಕಟ್ಟಿ ಬಂದೆಯಲ್ಲ ಅವನ್ನು ಬಿಡಿಸು ಹೋಗು. ಬದುಕಿದ್ದರೆ ಬಚಾವಾದೆ, ಸತ್ತು ಹೋಗಿದ್ದಾರೆ ನಿನ್ನ ಜೀವನ ಪರ್ಯಂತ ಆ ಕಲ್ಲಗಳನ್ನು ಎದೆಯೊಳಗೆ ಹೊತ್ತುಕೊಂಡು ಓಡಾಡಬೇಕು’ ಎನ್ನುತ್ತಾನೆ. ಶಿಷ್ಯ ಆಶ್ರಮಕ್ಕೆ ಹೇಗೆ ಬಂದ ಗೊತ್ತಿಲ್ಲ. ಬಂದವನು ಆಡುತ್ತಾ ಆಡುತ್ತಾ ನೀರಿನಲ್ಲಿದ್ದ ಕಪ್ಪೆಗೆ, ಮೀನಿಗೆ, ನೀರ ಹೊರಗಿದ್ದ ಹಾವಿಗೆ ಕಲ್ಲು ಕಟ್ಟಿ ಬಿಟ್ಟು ಬರುತ್ತಾನೆ. ನೋಡಿದ ಗುರು ಮಲಗಿದ್ದ ಶಿಷ್ಯನಿಗೆ ಕಲ್ಲು ಕಟ್ಟುತ್ತಾನೆ.
ಎದ್ದು ಓಡಾಡಲಾಗದೆ ಕಲ್ಲು ಬಿಚ್ಚು ಎಂದು ಗೋಳಾಡುವ ಶಿಷ್ಯನಿಗೆ ಗುರು ಮೇಲಿನ ಮಾತುಗಳನ್ನು ಹೇಳುತ್ತಾನೆ. ನೋಡಿದರೆ ಹಾವು ಮೀನುಗಳೆರಡೂ ಸತ್ತು ಹೋಗಿರುತ್ತವೆ. ಕಪ್ಪೆ ಬದುಕಿರುತ್ತದೆ. ಮಗು ಕಣ್ಣೀರಿಟ್ಟು ದುಃಖಿಸುತ್ತದೆ. ದೊಡ್ಡವನಾದ ಹುಡುಗ ಕೊಲೆಗಡುಕನಾಗುತ್ತಾನೆ. ಅವನಿಗೆ ಮಹಾಯಾನದ ಪ್ರಜ್ಞಾಪಾರಮಿತ ಸೂತ್ರವನ್ನು ಕೈಯಾರೆ ಕಲಿಯುವಂತೆ ಮಾಡುತ್ತಾನೆ. ಬೌದ್ಧರ ಯಶಸ್ಸು ಇರುವುದು ಶಿಕ್ಷಣವನ್ನು ಕೈಗಳ ಮೂಲಕ ಕಲಿಸುವುದರಲ್ಲಿ ಇರಬೇಕು.
ಅನುಭವದಿಂದ ಕಲಿಯುವ ವಿದ್ಯೆಗೆ ತಾಳಿಕೆ ಗುಣ ಹೆಚ್ಚು. ಕಲಿಸುವ ಬೌದ್ಧ ಗುರುಗಳು ಕರುಣೆಯನ್ನೂ ತುಂಬಲು ನೋಡುತ್ತಾರೆ. ಅದು ಎಲ್ಲ ಸಾರಿ ಫಲ ನೀಡದು. ಕೊಲೆಗಾರ ಶಿಷ್ಯನನ್ನು ಪೊಲೀಸರು ಎಳೆದೊಯ್ಯಲು ಬರುತ್ತಾರೆ. ಪ್ರಜ್ಞಾಪಾರಮಿತ ಸೂತ್ರವನ್ನು ಬೆಕ್ಕಿನ ಬಾಲದಲ್ಲಿ ಅದ್ದಿ ಗುರು ಬರೆಯುತ್ತಾ ಹೋಗುತ್ತಾನೆ. ಶಿಷ್ಯ ಕೊಲೆಗೆ ಬಳಸಿದ ಚಾಕು ಹಿಡಿದು ಮರದ ಹಲಗೆಯ ಮೇಲಿನ ಅಕ್ಷರಗಳನ್ನು ಕೆತ್ತುತ್ತ ಹೋಗುತ್ತಾನೆ.
ಪೊಲೀಸನೊಬ್ಬ ಮೇಣದ ಬತ್ತಿ ಹಿಡಿದು ಕೆತ್ತಲು ಸಹಾಯ ಮಾಡುತ್ತಾನೆ. ಕೆತ್ತುತ್ತಲೇ ನಿದ್ದೆ ಹೋದ ಆರೋಪಿಗೆ ತನ್ನ ಕೋಟು ಬಿಚ್ಚಿ ಹೊದಿಸುತ್ತಾನೆ. ಅಕ್ಷರ ಕೆತ್ತಿದ್ದು ಮುಗಿದ ನಂತರ ಬೆಳಿಗ್ಗೆ ಶಿಷ್ಯನನ್ನು ಬೇಡಿ ತೊಡಿಸದೆ ಕರೆದೊಯ್ಯುತ್ತಾರೆ. ಶಿಷ್ಯನ ಜೊತೆಯಲ್ಲಿ ಬೆಕ್ಕೂ ಸಹ ಗುರುವನ್ನು ಬಿಟ್ಟು ಹೋಗುತ್ತದೆ. ಶಿಷ್ಯನನ್ನು ಎಳೆದೊಯದ್ದ ನಂತರ ಗುರು ದೋಣಿಯೊಳಗೆ ಬೆಂಕಿ ಹಚ್ಚಿಕೊಂಡು ದೇಹತ್ಯಾಗ ಮಾಡುತ್ತಾನೆ. ಬಿಡುಗಡೆಯಾದ ಶಿಷ್ಯ ಮರಳಿ ಬರುತ್ತಾನೆ. ತಾನು ಬಾಲ್ಯದಲ್ಲಿ ಕೊಂದಂತದೇ ಹಾವು ಕುಟೀರ ಸೇರಿರುತ್ತದೆ. ಸಂತನಾಗುವಿಕೆ ಅಲ್ಲಿಂದ ಶುರುವಾಗುತ್ತದೆ.
ಹೆಪ್ಪುಗಟ್ಟಿದ ಸರೋವರ. ಎಲೆ ಉದುರಿದ ಕಾಡು. ಮೌನವಾದ ಸೃಷ್ಟಿಯ ಒಂದು ಜಾವ ಅಳುವ ಹಸುಗೂಸನ್ನು ಹೊತ್ತ ಮುಖ ಮುಚ್ಚಿಕೊಂಡ ಹೆಣ್ಣೊಬ್ಬಳು ಆಶ್ರಮಕ್ಕೆ ಬರುತ್ತಾಳೆ. ಮಗುವನ್ನು ಆಶ್ರಮದಲ್ಲಿ ಬಿಟ್ಟು ನಡೆಯತೊಡಗುತ್ತಾಳೆ. ಮಂಜು ಗಡ್ಡೆ ಕರಗಿದ್ದ ಒಂದು ನೀರ ಕಂದರಕ್ಕೆ ಬಿದ್ದು ಸಾಯುತ್ತಾಳೆ. ಸಂತನಾಗುವವ ಹೋಗಿ ನೋಡಿದರೆ ಹೆಂಗಸಿನ ಬದಲು ಬುದ್ಧನ ವಿಗ್ರಹ ಸಿಗುತ್ತದೆ. ಮಗು ಚಟುವಟಿಕೆಯಿಂದ ಓಡಾಡತೊಡಗುತ್ತದೆ.
ಅದೂ ಕೂಡ, ಮೀನು, ಹಾವು ಮತ್ತು ಕಪ್ಪೆಯ ಬಾಯಿಗೆ ಕಲ್ಲು ತುರುಕಿ ಗಹಗಹಸಿ ನಗುತ್ತದೆ. ಇದು ಸಿನಿಮಾ. ಮಜೀದಿಯ ಮಕ್ಕಳು ದೇವದೂತರು.ವಿಶ್ವ ಮಾನವರು. ಕಿಮ್ ತೋರಿಸುವ ಮಕ್ಕಳೊಳಗೆ ನಿಸರ್ಗದ ಚಲನೆಯನ್ನು ಕಟ್ಟಿ ಹಾಕುವ, ಕೊಂದು ಖುಷಿಪಡುವವರು. ಮಜೀದಿ ದೊಡ್ಡವರ ಸಣ್ಣತನ ಮಕ್ಕಳಾಗುವ ಪ್ರಕ್ರಿಯೆಯಲ್ಲಿ ಅಳಿದು ಹೋಗುತ್ತದೆ ಎನ್ನುತ್ತಾನೆ.
ಕಿಮ್ ಮಕ್ಕಳು ಬದುಕನ್ನು ಸ್ಪರ್ಶಿಸಿ ದಾರ್ಶನಿಕರಾಗಬೇಕು, ಜ್ಞಾನ ಎಂಬುದು ಸುಖಾಸುಮ್ಮನೆ ದಕ್ಕುವುದಿಲ್ಲ ಎನ್ನುತ್ತಾನೆ. ಜ್ಞಾನವಿಲ್ಲದ ಮಗುತನ ಉಪಯೋಗವಿಲ್ಲದ್ದು. ಅದು ಮಾಡುವ ಕ್ರೌರ್ಯದ ಭಾರ ಹಗುರವಾದದ್ದೇನೂ ಅಲ್ಲ ಎಂಬುದು ಕಿಮ್ ನಿಲುವು.
ಕಿಮ್ ಇದಿಷ್ಟನ್ನೂ ಋತುಗಳ ಪಲ್ಲಟಗಳ ರೂಪಕದ ಮೂಲಕ ವಿವರಿಸುತ್ತಾನೆ. ಮೋಕ್ಷ ಎನ್ನುವುದು ಸ್ವಂತ ಅನುಭವವಿಲ್ಲದೆ ಉಪದೇಶಗಳಿಂದ ಬರಲಾರದು ಎನ್ನಿಸುತ್ತದೆ. ಬುದ್ಧನೂ ಅನುಭವಗಳ ಮೂಲಕವೇ ಲೋಕ ಸಂಗತಿಗಳನ್ನು ವಿವರಿಸಿದ. ಜತೆಗೆ ಪತಿತನಾಗದೆ ಮನುಷ್ಯ ಪಾವನನಾಗಲಾರನೆ? ಎಂಬೊಂದು ಪ್ರಶ್ನೆಯನ್ನು ಸಿನಿಮಾ ತಣ್ಣಗೆ ಕೇಳುತ್ತದೆ. ಮನುಷ್ಯನಾಳದ ಹಿಂಸೆ ಭೀಕರ ತಾರಕ ಮುಟ್ಟದೆ ಸಾಕ್ಷಾತ್ಕಾರ ಸಾಧ್ಯವಿಲ್ಲವೇ? ಎಂಬ ಪ್ರಶ್ನೆ ಹುಟ್ಟುತ್ತದೆ. ಬುದ್ಧ ಗುರುವೇ ಉತ್ತರ ಹೇಳಬೇಕು.
‘ದ ನೆಟ್’ ಸಿನಿಮಾದ ವಸ್ತು ಯುರೋಪಿಗೆ ಹೊಸತಲ್ಲ. ರಾಷ್ಟ್ರವಾದದ ಗಾಯಗಳು ಯುರೋಪನ್ನು ಮಾಗಿಸಿವೆ. ಆದರೆ ಒಂದೇ ತಾಯ ಮಕ್ಕಳಾದ ಉತ್ತರ, ದಕ್ಷಿಣ ಕೊರಿಯಾದಂತಹ ಪ್ರಾಚೀನ ಬೌದ್ಧ ರಾಷ್ಟ್ರಗಳು ಇದನ್ನು ಹೇಗೆ ನಿಭಾಯಿಸಬೇಕೆಂದು ತೋಚದೆ ಒದ್ದಾಡುತ್ತಿವೆ.
ಉಭಯ ರಾಷ್ಟ್ರಗಳ ಸೈದ್ಧಾಂತಿಕ ಕಲಹಗಳು, ನಿಷ್ಠೆಗಳು ಮನುಷ್ಯನನ್ನು ಹುಳುವಿನಂತೆ ಹೊಸಕಿ ಹಾಕುವುದರ ಕುರಿತು ಸಿನಿಮಾ ಮಾತನಾಡುತ್ತದೆ. ಅತ್ಯಂತ ದಾರಿದ್ರ್ಯದಲ್ಲಿರುವ ಕಮ್ಯುನಿಸಂನ ಹೆಸರಿನಲ್ಲಿ ಸರ್ವಾಧಿಕಾರಿ ಆಳುತ್ತಿರುವ ಉತ್ತರ ಕೊರಿಯಾದ ಮೀನುಗಾನೊಬ್ಬನ ದೋಣಿ ಗಾಳಿಗೆ ಸಿಲುಕಿ ದಕ್ಷಿಣ ಕೊರಿಯಾ ಭಾಗಕ್ಕೆ ಹರಿದು ಬಿಡುತ್ತದೆ.
ಒಂದು ಜುಜುಬಿ ಕೆರೆಯೂ ರಾಷ್ಟ್ರ ರಾಷ್ಟ್ರಗಳ ನಡುವೆ ಹರಿದು ಹೋಗಿರುತ್ತದೆ. ಮೀನುಗಾರನನ್ನು ದಕ್ಷಿಣದ ಸೈನಿಕರು ಬಂಧಿಸುತ್ತಾರೆ. ಭೀಕರ ಹಿಂಸೆ ನೀಡುತ್ತಾರೆ. ಕಡೆಗೆ, ಉತ್ತರ ಕೊರಿಯಾ ಕುಟುಂಬ ಮೂಲದ ದಕ್ಷಿಣ ಕೊರಿಯಾದ ತರುಣ ಸೈನಿಕನೊಬ್ಬ ಮೀನುಗಾರನ ನೆರವಿಗೆ ಬರುತ್ತಾನೆ. ಹಾಗಾಗಿ ಮೀನುಗಾರ ಸಾಯದೆ ಉಳಿದುಕೊಳ್ಳುತ್ತಾನೆ. ಹೊರಗಿನವರನ್ನು ಗೂಢಾಚಾರರೆಂದು ವಿಚಾರಿಸುವ ವೇಳೆ ನೀಡುವ ಭೀಕರ ಹಿಂಸೆ ಎದೆ ನಡುಗಿಸುತ್ತದೆ. ಅನೇಕರು ನಾಲಿಗೆಯನ್ನು ತಿರುಗಿಸಿ ನರ ಕಡಿದುಕೊಂಡು ಸತ್ತು ಬೀಳುತ್ತಾರೆ ಹಿಂಸೆ ತಾಳದೆ.
ಮೀನುಗಾರ ಅಮಾಯಕನೆಂದು ದಕ್ಷಿಣದವರಿಗೆ ಅರ್ಥವಾಗುತ್ತದೆ. ಅದಾದ ನಂತರ ಆತನಿಗೆ ದಕ್ಷಿಣ ರಾಷ್ಟ್ರದ ವೈಭವೋಪೇತ ನಗರ ತೋರಿಸಬೇಕೆಂಬ ತಂತ್ರ ಹೊಳೆಯುತ್ತದೆ. ಶತ್ರು ದೇಶದ ಮನುಷ್ಯನಿಗೆ ತನ್ನ ಸಾಹುಕಾರಿಕೆ ತೋರಿಸಬೇಕೆಂಬುದು ಯುದ್ಧ ತಂತ್ರ ಹಾಗೂ ಕ್ರೌರ್ಯದ ಇನ್ನೊಂದು ಮುಖ. ನೋಡಲು ಮೀನುಗಾರ ನಿರಾಕರಿಸುತ್ತಾನೆ. ನಗರದ ಝಗಮಗಿಸುವ ವೈಭವ ನೋಡಲಾರೆನೆಂದು ಮುಖ ಮುಚ್ಚಿಕೊಳ್ಳುತ್ತಾನೆ.
ದಕ್ಷಿಣದವರು ಹೆಣ್ಣು ಮಕ್ಕಳನ್ನು ಮಾರಿ, ತಲೆ ಹಿಡಿದು ನಗರಗಳನ್ನು ಕೊಬ್ಬಿಸಿದ್ದಾರೆ ಎಂಬುದು ಆತನ[ ಉತ್ತರದವರ] ಅಭಿಪ್ರಾಯ. ಇದು ಬಂಡವಾಳಿಗ ದೇಶಗಳ ಕುರಿತಾದ ಕಠೋರ ವಿಮರ್ಶೆ. ಅನ್ನವಿಲ್ಲದೆ ಬಡತನದಲ್ಲಿ ಜನರು ಸಾಯುವ ಚಿತ್ರಣ ಕಮ್ಯುನಿಸ್ಟ್ ಉತ್ತರ ಕೊರಿಯಾದ ಕುರಿತ ವಿಮರ್ಶೆ. ಮೀನುಗಾರನನ್ನು ನಡು ಬೀದಿಯಲ್ಲಿ ಬಿಟ್ಟು ಸೈನಿಕರು ಹಿಂಬಾಲಿಸ ತೊಡಗುತ್ತಾರೆ. ಆತ ಕಣ್ಣು ಮುಚ್ಚಿಕೊಂಡು ಓಡತೊಡಗುತ್ತಾನೆ.
ದಕ್ಷಿಣದವರ ಶ್ರೀಮಂತಿಕೆ ಸೆಳೆದುಬಿಟ್ಟರೆ ಎಂಬ ಭಯ ಅವನದು. ಕಡೆಗೆ ದಿಕ್ಕುಗಾಣದೆ ಬೀದಿ ಬೀದಿಯಲ್ಲಿ ಅಲೆಯುತ್ತಾನೆ. ಹಂದಿಯ ಸೂಪನ್ನು ಜೀವನದಲ್ಲಿ ನೋಡಿಯೇ ಇಲ್ಲವೇನೋ ಎಂಬಂತೆ ಕುಡಿಯುತ್ತಾನೆ. ನಗರದ ವೈಭವ ನೋಡಿ ಬೆರಗಾಗುತ್ತಾನೆ. ಕಡೆಗೆ ತರುಣ ಸೈನಿಕನ ಉಸ್ತುವಾರಿಯೊಳಗೆ ಆತ ದಕ್ಷಿಣದವರ ಕುರಿತು ತುಸು ಉದಾರಿಯಾಗುತ್ತಾನೆ. ತರುಣ ಹೊಸ ಬಟ್ಟೆಯನ್ನು, ಒಂದಿಷ್ಟು ಹಣವನ್ನು ಕೊಡುತ್ತಾನೆ. ಕಡೆಗೊಂದು ದಿನ ಉತ್ತರದ ಗಡಿಯೊಳಗೆ ಆತನನ್ನು ಬಿಟ್ಟು ಬಿಡುತ್ತಾರೆ.
ಈಗ ಉತ್ತರದ ಸೈನಿಕರ ಗೂಢಾಚಾರಿಕೆ ಶುರುವಾಗುತ್ತದೆ. ತರುಣ ಸೈನಿಕ ನೀಡಿದ್ದ ಹಣವನ್ನು ಮೀನುಗಾರ ತನ್ನ ಗುದದ್ವಾರದೊಳಗೆ ಬಚ್ಚಿಟ್ಟುಕೊಳ್ಳುತ್ತಾನೆ. ಉತ್ತರದವರಿಗೆ ಈತ ಗೂಢಾಚಾರನಾಗಿ ಬದಲಾಗಿರಬಹುದೇ ಎಂಬ ಅನುಮಾನ. ಜೊತೆಗೆ ಆತ ತಂದಿರಬಹುದಾದ ಹಣದ ಬಗ್ಗೆ ಆಸೆ. ಅಲ್ಲಿನ ಸೈನ್ಯದ ಸ್ಥಳೀಯ ಮುಖಂಡ ಮೀನುಗಾಗರನನ್ನು ಹಿಂಬಾಲಿಸುತ್ತಾನೆ. ಕಡೆಗೆ ಆತ ಮಲ ವಿಸರ್ಜನೆ ಮಾಡಿದ ನಂತರ ಮಲ ಕೆದಕಿ ಹಣವನ್ನು ತೆಗೆದುಕೊಳ್ಳುತ್ತಾನೆ.
ಇದು ಉತ್ತರ ಕೊರಿಯಾದ ಸೈನಿಕರ ಭ್ರಷ್ಟತೆ. ಅವನಿಗೆ ಮೀನು ಹಿಡಿಯಲೂ ಬಿಡದೆ ಕಿರುಕುಳ ನೀಡುತ್ತಾರೆ. ಇತ್ತ ಹೊಟ್ಟೆಗೂ ಇಲ್ಲ. ಸೈನಿಕರ ಕಿರುಕುಳ ಬೇರೆ. ಮೀನುಗಾರ ಪ್ರತಿಭಟಿಸುತ್ತಾನೆ. ಕಡೆಗೆ ತಲ್ಲಣಗೊಳಿಸುವ ಹಸಿವು ಸೈನ್ಯದ ಆಜ್ಞೆ ಧಿಕ್ಕರಿಸುವಂತೆ ಮಾಡುತ್ತದೆ. ದೋಣಿ ತೆಗೆದುಕೊಂಡು ನೀರಿಗಿಳಿಯುತ್ತಾನೆ. ಸೈನಿಕರು ಗುಂಡು ಹೊಡೆದು ಅವನನ್ನು ಕೊಲ್ಲುತ್ತಾರೆ. ಎಲ್ಲ ಸರ್ವಾಧಿಕಾರಿ ಪ್ರಭುತ್ವಗಳೂ ಮನುಷ್ಯನನ್ನು ನಿಕೃಷ್ಟವಾಗಿ ನೋಡುತ್ತವೆ. ಅದಕ್ಕೆ ರಾಷ್ಟ್ರ ಸಂರಚನೆ ಎಂಬುದು ನೆಪದ ಆಯುಧವಾಗಿರುತ್ತದೆ. ಸದಾ ಕೀಳರಿಮೆಯಲ್ಲಿ ಬದುಕುವ ಅದು ದ್ವೇಷ ಮತ್ತು ಗುಮಾನಿಗಳನ್ನು ತನ್ನ ಒಡಲೊಳಗಿಟ್ಟುಕೊಂಡು ಏಗುತ್ತಿರುತ್ತದೆ.
ಎರಡೂ ಸಿನಿಮಾಗಳು ವಿಭಿನ್ನ ದಿಕ್ಕುಗಳನ್ನು ವಿವರಿಸುವ ಕಲಾಕೃತಿಗಳು. ಒಂದು ರಾಷ್ಟ್ರಗಳ ನಡುವಿನ ಕ್ರೌರ್ಯವನ್ನು, ಗಡಿಗಳ ನೆಪದಲ್ಲಿ ನಡೆಯುವ ದಮನವನ್ನು ಕುರಿತು ಗೇಲಿ ಮಾಡುತ್ತದೆ. ಕಮ್ಯುನಿಸ್ಟ್ ದೇಶದ ಬಡತನ, ಭ್ರಷ್ಟ ಮತ್ತು ದುಷ್ಟ ಸರ್ವಾಧಿಕಾರಿ ಮಿಲಿಟರಿ ಆಡಳಿತದಂತೆಯೇ ದಕ್ಷಿಣ ಕೊರಿಯಾ ಪ್ರಜಾಪ್ರಭುತ್ವದ ಹೆಸರಲ್ಲಿ, ನಡೆಸುವ ಕ್ರೌರ್ಯ ಕೂಡ ಅತ್ಯಂತ ಭೀಕರ.
ಮನುಷ್ಯನ ಮನಸ್ಸನ್ನು ಪಲ್ಲಟಗೊಳಿಸುವ ಸಂಪತ್ತಿನ ಧಿಮಾಕು ಅಮಾನವೀಯ. ರಾಷ್ಟ್ರವಾದದ ಕ್ರೌರ್ಯ 21 ನೇ ಶತಮಾನದ ಏಷ್ಯಾದ, ಆಫ್ರಿಕಾಗಳ ನೆಲದಲ್ಲಿ ಮುಂದುವರೆಯುತ್ತಿದೆ. ಎರಡೂ ರಾಷ್ಟ್ರಗಳೂ ಅಮಾನವೀಯವೇ. ಕ್ರೂರ ಸ್ವಭಾವದವೆ. ಬೌದ್ಧ ಮಾರ್ಗವೆಂಬುದು ಅತ್ಯಂತ ಕೃತಕ ಇಲ್ಲಿ. ಇದು ರಾಜಕೀಯ ಕಥನ.
‘ಸ್ಪ್ರಿಂಗ್, ಸಮ್ಮರ್..’ ಆಧ್ಯಾತ್ಮದ ನಡುವಿನ ವಾಂಛೆಗಳ ರಾಜಕೀಯ ಕಥನ ಪಂಪನ ಆದಿ ಪುರಾಣದಂತೆ. ‘ದ ನೆಟ್’ ಸಿನಿಮಾ ರಾಜಕೀಯಕ್ಕೆ ಆಧ್ಯಾತ್ಮಿಕ ಸ್ಪರ್ಶ ಬೇಕು ಎಂದು ಬಯಸುವ ವಿಕ್ರಮಾರ್ಜುನ ವಿಜಯ. ಒಟ್ಟಾರೆ, ನೆಲದ ಬಯಕೆಯ ಕುರುಕ್ಷೇತ್ರದಲ್ಲಿ ಬಡವರ ಭಿನ್ನಪವ ಕೇಳಿದವರಿಲ್ಲ.
ಕಡೆಯದಲ್ಲದ ಮುಖ್ಯ ಮಾತು; ಇಂಥ ಸಿನಿಮಾಗಳನ್ನು ನೀಡಿದ ಕಿಮ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಮೂವರು ಹೆಣ್ಣು ಮಕ್ಕಳು ಮೀಟೂ ಚಳುವಳಿಯಲ್ಲಿ ಭಾಗವಹಿಸಿ ಕೋರ್ಟಿಗೆ ಹೋಗಿದ್ದರು. ಕೋರ್ಟು ಆತನಿಗೆ ದಂಡ ಹಾಕಿ ಖುಲಾಸೆ ಮಾಡಿತು. ದಿಕ್ಕೆಡಿಸುವ ಸಿನಿಮಾ ಮಾಡಿದ ಕಿಮ್ ಸ್ವತಃ ಗಂಡಿನ ಠೇಂಕಾರದ ಮೂಟೆಯಾಗಿದ್ದನೇ ಎಂಬೊಂದು ಪ್ರಶ್ನೆಯನ್ನೂ ಉಳಿಸಿ ಹೋಗಿದ್ದಾನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಹಳೆ ಪಿಂಚಣಿ ಪದ್ಧತಿ ಮರುಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ನಿರ್ಣಯ
ಸುದ್ದಿದಿನಡೆಸ್ಕ್:ಹಳೆ ಪಿಂಚಣಿ ಪದ್ಧತಿ ಮರು ಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ವಿವಿಧ ಹಂತಗಳಲ್ಲಿ ಹೋರಾಟ ಸೇರಿದಂತೆ ಇನ್ನಿತರೆ ನಿರ್ಣಯಗಳಿಗೆ ಬೆಂಬಲ ಸೂಚಿಸಲು ದಾವಣಗೆರೆಯಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆ ನಿರ್ಧರಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗದು ರಹಿತ ಚಿಕಿತ್ಸೆ ಯೋಜನೆಯ ತ್ವರಿತ ಜಾರಿಗೆ ಒತ್ತಾಯಿಸುವುದು, 2026ಕ್ಕೆ ಕೇಂದ್ರ ಸರ್ಕಾರದ ಮಾದರಿ ವೇತನಕ್ಕಾಗಿ ಹೋರಾಟ ರೂಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಿ ಆಂಡ್ ಆರ್ ನಿಯಮಕ್ಕೆ ತಿದ್ದುಪಡಿ ತರುವಂತೆ ಆಗ್ರಹಿಸಿ, ನಡೆಸಲಾಗುವ ಹೋರಾಟವನ್ನು ಬೆಂಬಲಿಸುವುದು, ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್ಗಳಿಗೆ ಶೀಘ್ರವೇ ಹಣ ಬಿಡುಗಡೆ ಮಾಡಿಸುವ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ಸಿ.ಎಸ್.ಷಡಕ್ಷರಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಬೈಲಹೊಂಗಲದಲ್ಲಿ ಚಾಲನೆ
ಸುದ್ದಿದಿನಡೆಸ್ಕ್:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2025ಕ್ಕೆ ಇಂದು ಮುಂಜಾನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ರಾಯಣ್ಣನ ಜನ್ಮಸ್ಥಳ ಸಂಗೊಳ್ಳಿಯಲ್ಲಿ ಅದ್ದೂರಿ ಚಾಲನೆ ನೀಡಲಾಯಿತು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿರುವ ಉತ್ಸವವು ಪ್ರತಿವರ್ಷದಂತೆ ಸಾಂಪ್ರದಾಯಿಕವಾಗಿ ಆರಂಭಗೊಂಡಿದೆ. ಸಂಗೊಳ್ಳಿಯ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪ್ರಾತಃಕಾಲದ ಪೂಜೆ ಸಲ್ಲಿಸಲಾಯಿತು.
ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಜ್ಯೋತಿಯನ್ನು ಸ್ವಾಗತಿಸಿದರು. ಉಪ ವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ, ಸಂಗೊಳ್ಳಿ ರಾಯಣ್ಣ ಸ್ಮಾರಕ ಭವನದ ಆವರಣದಲ್ಲಿ ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು. ಬಳಿಕ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, ಜಾನಪದ ಕಲಾವಾಹಿನಿಗೆ ಚಾಲನೆ ನೀಡಿದರು.
ಪೂರ್ಣ ಕುಂಭ ಹೊತ್ತ ಮಹಿಳೆಯರು, ಪೂಜಾ ಕುಣಿತ, ನಂದಿಕೋಲು, ವೀರಗಾಸೆ, ಡೊಳ್ಳು, ಬೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಉತ್ಸವಕ್ಕೆ ಮೆರುಗು ತಂದಿತು. ಸಂಗೊಳ್ಳಿ ರಾಯಣ್ಣ ಸ್ಮಾರಕದ ಬಳಿಯಿಂದ ಆರಂಭಗೊಂಡ ಕಲಾವಾಹಿನಿಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಇಂದು ಸಂಜೆ 8 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉತ್ಸವದ ಅಧಿಕೃತ ಉದ್ಘಾಟನೆ ನೆರವೇರಿಸಲಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ನಾಳೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ವೀರರ ಸ್ಮರಣಾರ್ಥ ದೀಪೋತ್ಸವ, ರಾಯಣ್ಣನ ಕುರಿತಾದ ವಿಚಾರ ಸಂಕಿರಣ, ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಸೇರಿದಂತೆ ಇತರೆ ಸ್ಪರ್ಧೆಗಳು ನಡೆಯಲಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ನಾಳೆಯಿಂದ ಜಗಳೂರಿನಲ್ಲಿ ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನ
ಸುದ್ದಿದಿನ,ದಾವಣಗೆರೆ:ಜಗಳೂರು ಪಟ್ಟಣದಲ್ಲಿ ಜನವರಿ 11 ಮತ್ತು 12 ರಂದು ಜಗಳೂರು ಪಟ್ಟಣದ ಬಯಲು ರಂಗಮಂದಿರದಲ್ಲಿ ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಜನವರಿ 11 ರಂದು ಬೆಳಿಗ್ಗೆ 8 ಗಂಟೆಗೆ ಅಪರ ಜಿಲ್ಲಾಧಿಕಾರಿ ಪಿ ಎನ್ ಲೋಕೇಶ್ ರಾಷ್ಟ್ರ ಧ್ವಜಾರೋಹಣ ನೆರೆವೇರಿಸುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ವಾಮದೇವಪ್ಪ ಪರಿಷತ್ತಿನ ಧ್ವಜಾರೋಹಣ ನೆರೆವೇರಿಸುವರು.ಜಗಳೂರು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ನಾಡ ಧ್ವಜಾರೋಹಣ ನೆರೆವೇರಿಸುವರು. ನವಚೇತನ ಶಾಲೆಯ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ, ನಾಡಗೀತೆ ಹಾಡುವರು.
ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ತಾಯಿ ಭುವನೇಶ್ವರಿ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡುವರು.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷರಾದ ಲೋಕಮ್ಮ ಜೆ ಸಿ ಓಬಣ್ಣ, ಡಿ.ಡಿ.ಪಿ.ಯು ಕರಿಸಿದ್ದಪ್ಪ ಎಸ್.ಜಿ, ಡಿ.ಡಿ.ಪಿ.ಐ ಕೋಟ್ರೇಶ್.ಜಿ, ಜಗಳೂರು ವೃತ್ತ ನಿರೀಕ್ಷಕರು ಶ್ರೀನಿವಾಸರಾವ್, ತಾಲ್ಲೂಕು ಪಂಚಾಯಿತಿ, ಸಿ.ಇ.ಓ ಕೆಂಚಪ್ಪ, ಜಗಳೂರು ಬಿ.ಇ.ಓ ಹಾಲಮೂರ್ತಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಬೀರೇಂದ್ರ ಕುಮಾರ್ ಭಾಗವಹಿಸುವರು. ಮೆರವಣಿಗೆ ತಾಲೂಕು ಕಚೇರಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಬಯಲು ರಂಗಮಂದಿರವರೆಗೆ ತಾಯಿ ಭುವನೇಶ್ವರಿ ಮೆರವಣಿಗೆ ನಡೆಯುತ್ತದೆ.
ಡೊಳ್ಳು ಕುಣಿತ,ಹಗಲುವೇಷ, ಬೊಂಬೆ ಮೇಳ, ಉರುಮೆ, ತಪ್ಪಡಿ, ಕಹಳೆ, ವೀರಗಾಸೆ, ಕರಡಿ ಮಜಲು, ನಂದಿಧ್ವಜ, ಭಜನೆ, ಕೋಲಾಟ, ಎತ್ತಿನಗಾಡಿಗಳ ಮೆರವಣಿಗೆ, ಮಹಿಳೆಯರಿಂದ ಪೂರ್ಣಕುಂಭ, ಇಲಾಖೆಗಳ ಸ್ತಬ್ಧ ಚಿತ್ರಗಳು ಇತ್ಯಾದಿ.
ಬೆಳಿಗ್ಗೆ 11 ಗಂಟೆಗೆ ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸಾಹಿತಿಗಳಾದ ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸುವರು. ಜಗಳೂರು ಶಾಸಕರಾದ ಬಿ.ದೇವೆಂದ್ರಪ್ಪ ಅಧ್ಯಕ್ಷತೆ ವಹಿಸುವರು.
ಸಂಸ್ಕøತಿ ಚಿಂತಕರು ಸಾಹಿತಿಗಳಾದ ಡಾ.ಎ.ಬಿ.ರಾಮಚಂದ್ರಪ್ಪ ಸಮ್ಮೇಳನಾಧ್ಯಕ್ಷರಾಗಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ವಾಮದೇವಪ್ಪ ಆಶಯ ನುಡಿಗಳಾನ್ನಾಡುವರು. ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಮಹಲಿಂಗರಂಗ ವೇದಿಕೆಯನ್ನು ಉದ್ಘಾಟಿಸುವರು. ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಚಿನ್ನಹಗರಿಯ ನುಡಿ ತೇರು ಸ್ಮರಣ ಸಂಚಿಕೆಯ ಲೋಕಾರ್ಪಣೆ ಮಾಡುವರು. ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಜೆ.ಎಂ ಇಮಾಮ್ ಮಹಾದ್ವಾರವನ್ನು ಉದ್ಘಾಟಿಸುವರು.
ಕ.ಸಾ.ಪ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರು ವಿದ್ಯಾರತ್ನ ಡಾ.ಟಿ.ತಿಪ್ಪೇಸ್ವಾಮಿ ಸಭಾಂಗಣವನ್ನು ಉದ್ಘಾಟಿಸುವರು. ನಿಕಟ ಪೂರ್ವ ಸಮ್ಮೇಳಧ್ಯಕ್ಷರಾದ ಪ್ರೊ.ಸಿ.ವಿ ಪಾಟೀಲ್ ಕನ್ನಡ ಧ್ವಜ ಹಸ್ತಾಂತರ ಮಾಡುವರು. ಜಗಳೂರು ಕ್ಷೇತ್ರದ ಮಾಜಿ ಶಾಸಕರಾದ ಟಿ.ಗುರುಸಿದ್ದನಗೌಡ, ಎಸ್.ವಿ ರಾಮಚಂದ್ರಪ್ಫ, ಹೆಚ್.ಪಿ.ರಾಜೇಶ್ ಕೃತಿಗಳ ಲೋಕಾರ್ಪಣೆ ಮಾಡುವರು.
ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಪ್ರೊ.ಎಸ್.ಬಿ ರಂಗನಾಥ್ ಪುಸ್ತಕ ಮಳಿಗೆ ಉದ್ಘಾಟಿಸುವರು. ಜಗಳೂರು ಪಟ್ಟಣದ ಅಧ್ಯಕ್ಷರಾದ ಕೆ.ಎಸ್ ನವೀನ್ ಕುಮಾರ್ ಡಾ.ಎಂ.ಜಿ.ಈಶ್ವರಪ್ಪ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಹೊನ್ನಾಳಿ ಶಾಸಕರಾದ ಡಿ.ಜಿ.ಶಾಂತನಗೌಡ, ಹರಿಹರ ಶಾಸಕರಾಧ ಬಿ.ಪಿ ಹರೀಶ್, ಚನ್ನಗಿರಿ ಶಾಸಕರಾದ ಬಸವರಾಜ ವಿ. ಶಿವಗಂಗ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಅಸಗೋಡು ಜಯಸಿಂಹ, ತಾಂಡ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎನ್ ಜಯದೇವ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್ ನವೀನ್, ನಾ.ರವಿಕುಮಾರ, ಡಿ.ಟಿ.ಶ್ರೀನಿವಾಸ್, ಡಾ.ಚಿದಾನಂದ ಎಂ.ಗೌಡ, ಜಿ.ಸ.ನೌ ಸಂಘದ ಅಧ್ಯಕ್ಷರಾದ ವೀರೇಶ್ ಎಸ್ ಒಡೇನಪುರ, ಜಿಲ್ಲಾ ವರದಿಗಾರರ ಕೂಟ ನಾಗರಾಜ್.ಎಸ್ ಬಡದಾಳ್, ಯುವ ಮುಖಂಡರಾದ ಕೆ.ಪಿ ಪಾಲಯ್ಯ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಮಂಜುನಾಥ ಕುರ್ಕಿ, ತಾ.ಸ.ನೌ ಸಂಘದ ಎ.ಎಲ್ ತಿಪ್ಪೇಸ್ವಾಮಿ, ಕಾರ್ಯಕಾರಿ ಸಮಿಯಿಯ ಅಧ್ಯಕ್ಷರಾದ ಜಿ.ರುದ್ರಯ್ಯ, ಪ್ರಗತಿಪರ ಕೃಷಿಕರು ಕಲ್ಲೇರುದ್ರೇಶ್ ಪಾಲ್ಗೋಳ್ಳುವರು.
ಮಧ್ಯಾಹ್ನ 2 ಗಂಟೆಗೆ ಗೋಷ್ಠಿ-1ರಲ್ಲಿ. ಸಾಹಿತ್ಯ ಮತ್ತು ಸಾಮಾಜಿಕ ನೆಲೆಗಳು, ಮಧ್ಯಾಹ್ನ 3:45 ಕ್ಕೆ ಗೋಷ್ಠಿ -2ರಲ್ಲಿ ಸೌಹಾರ್ದತೆ- ಸಮಾನತೆ-ಸಾಮಾಜಿಕ ನ್ಯಾಯ, ಗೋಷ್ಠಿ-3ರಲ್ಲಿ ಸಂಜೆ 5.30ಕ್ಕೆ ದಾವಣಗೆರೆ ಜಿಲ್ಲೆಯ ಐತಿಹಾಸಿಕ ನೆಲೆಗಳು, ಗೋಷ್ಠಿಗಳು ನಡೆಸಲಾಗುವುದು.
ಸಂಜೆ 6:15 ಗಂಟೆಗೆ ಜಗಳೂರು ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ ಕಾರ್ಯಕ್ರಮ ಇರುತ್ತದೆ. ನಂತರ ಡಾ. ಶುಭಾ ಮರವಂತೆ, ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ಹಾಸ್ಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ವಿಜಯನಗರ | ನಿಲ್ಲದ ಅಕ್ರಮ ಕಲ್ಲು ಗಣಿಗಾರಿಕೆ ; ಕಣ್ಣುಮುಚ್ಚಿಕುಳಿತ ಅಧಿಕಾರಿಗಳು
-
ದಿನದ ಸುದ್ದಿ5 days ago
ಸಂತೇಬೆನ್ನೂರು | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ವಿಶ್ವಮಾನವ ದಿನಾಚರಣೆ’
-
ದಿನದ ಸುದ್ದಿ2 days ago
ನಾಳೆಯಿಂದ ಜಗಳೂರಿನಲ್ಲಿ ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನ
-
ದಿನದ ಸುದ್ದಿ6 hours ago
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಬೈಲಹೊಂಗಲದಲ್ಲಿ ಚಾಲನೆ
-
ದಿನದ ಸುದ್ದಿ6 hours ago
ಹಳೆ ಪಿಂಚಣಿ ಪದ್ಧತಿ ಮರುಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ನಿರ್ಣಯ