ದಿನದ ಸುದ್ದಿ
ಕಿಮ್ ಕಿ ಡುಕ್; ಎಣ್ಣೆ ತೀರಿದ ಏಷಿಯಾದ ವಿಕ್ಷಿಪ್ತ ಹಣತೆ
- ಡಾ.ನೆಲ್ಲುಕುಂಟೆ ವೆಂಕಟೇಶ್
ಕಳೆದ ದಕ್ಷಿಣ ಕೊರಿಯಾದ ನಿರ್ದೇಶಕ ಕಿಮ್ ಕಿ ಡುಕ್ ಲಾಟ್ವಿಯಾದ ಆಸ್ಪತ್ರೆಯೊಂದರಲ್ಲಿ ಮರಣ ಹೊಂದಿದ. ಕೊರೋನ ವೈರಸ್ಸು ಈತನನ್ನು ತಿಂದು ಹಾಕಿದೆ. ಕಿಮ್ ಸಾವು ಜಗತ್ತಿನ ಗಂಭೀರ ಸಿನಿಮಾಸಕ್ತರನ್ನು ಕಾಡಿದಂತೆ ನಮ್ಮನ್ನು ಕಾಡಲಿಲ್ಲ. ಕಡೇ ಪಕ್ಷ ಕೇರಳವನ್ನು ಕಾಡಿದಷ್ಟೂ ಕಾಡಲಿಲ್ಲ. ಕೇರಳ ಮನೆ ಮಗನನ್ನು ಕಳೆದುಕೊಂಡ ಹಾಗೆ ಸ್ಪಂದಿಸಿದೆ. [ಮಲಯಾಳಂಗೆ ಆತನ ಬಹುಪಾಲು ಸಿನಿಮಾಗಳು ಡಬ್ ಆಗಿವೆ. ಅಲ್ಲಿ ಅವನ ಸಿನಿಮಾ ಉತ್ಸವಗಳೂ ನಡೆದಿವೆ}.
ಅವನ ಸಾವಿನ ಕುರಿತು ಕನ್ನಡದ ಸೋಷಿಯಲ್ ಮೀಡಿಯಾದಲ್ಲಿ ತುಸು ಸದ್ದು ಮಾಡಿದ್ದು ಬಿಟ್ಟರೆ ಹೆಚ್ಚೇನೂ ಚರ್ಚೆಯಾಗಲಿಲ್ಲ. ಎಂದಿನಂತೆ ಕರ್ನಾಟಕದ ಸಿನಿಮಾ ಜನ ತಣ್ಣಗೆ ಪ್ರತಿಕ್ರಿಯಿಸಿದರು. ಬಹಳ ಜನ ಕನ್ನಡ ಸಿನಿಮಾದವರಿಗೆ ಈತ ಗೊತ್ತಿದ್ದನೋ ಇಲ್ಲವೋ ತಿಳಿಯದು. ಕನ್ನಡ ಬಾಲಿವುಡ್ಡನ್ನು ಮಾದರಿಯಾಗಿಟ್ಟುಕೊಂಡು ಸಿನಿಮಾ ಮಾಡಲು ಪ್ರಯತ್ನಿಸುತ್ತಿದೆ. ಮಲೆಯಾಳಂಗೆ ಇರುವ ಡಯಸ್ಪೋರಾ ಗುಣದಿಂದಾಗಿ ಅವರನ್ನು ಜಗದ ಜತೆ ಸಂವಾದ ಮಾಡುವ ಮಾಂತ್ರಿಕರನ್ನಾಗಿಸಿದೆ.
ಮಲೆಯಾಳಿಗರು ಮನುಷ್ಯನ ಆಳದ ಇಂಪಲ್ಸಿವ್ ಗುಣಗಳನ್ನು ಹಿಡಿದು ಯೂನಿವರ್ಸಲ್ ಆಗಬಹುದಾದ ಸಿನಿಮಾಗಳನ್ನು ಕಟ್ಟುತ್ತಿದ್ದಾರೆ. ಕನ್ನಡಕ್ಕೆ ಇದು ಯಾಕೊ ಸಾಧ್ಯವಾಗಿಲ್ಲ. ನಮ್ಮಲ್ಲಿ ಯೂನಿಫಾರ್ಮಿಟಿಯ ಫ್ರೇಮಿನಲ್ಲಿಟ್ಟ ಪ್ರೇಮ, ಜೋಕುಗಳು, ಅಂತರಂಗವೇ ಇಲ್ಲದಂತೆ ಕಾಣುವ ಇಟ್ಟಿಗೆ, ಜಲ್ಲಿಯಂಥ ವಿಲನ್ಗಳು, ಅವರ ರಕ್ತಪಾತಗಳು ಇವುಗಳನ್ನು ಪದೇ ಪದೇ ತಿರುಗಿಸಿ ಸೂಕ್ಷ್ಮತೆಯುಳ್ಳವರನ್ನು ಸಿನಿಮಾಗಳತ್ತ ನೋಡದ ಹಾಗೆ ಮಾಡಲಾಗಿದೆ.
ಹಿಂಸೆಯಲ್ಲಿ ರಣ ಹಿಂಸೆ ತೋರಿಸುವ ಸಿನಿಮಾ ದುಡ್ಡು ಮಾಡುತ್ತದೆ ಎಂಬ ಸೂತ್ರವೇನೋ ಇವರಿಗೆ ಸಿಕ್ಕಿಬಿಟ್ಟಂತಿದೆ. ಇದು ನೋಡುಗರ ಸಮಸ್ಯೆಯೋ ಇಲ್ಲ ಸಿನಿಮಾ ಮಾಡುವವರ ಸಮಸ್ಯೆಯೋ ತಿಳಿಯದು. ಇಬ್ಬರೂ ಒಬ್ಬರತ್ತ ಒಬ್ಬರು ಮಾತ್ರ ಕೈ ತೋರಿಸಿಕೊಂಡು ಕೂತಿದ್ದಾರೆ. ಇದೆಲ್ಲದರ ನಡುವೆ ಕನ್ನಡ ತೆಳುವಾಗುತ್ತಿದೆ. ಆಧುನಿಕ ಸಂದರ್ಭದಲ್ಲಿ ಆಹಾರ ಸಂಸ್ಕೃತಿ, ಸಿನಿಮಾ, ಸಂಗೀತ ಸಂಸ್ಕøತಿಗಳು ಭಾಷೆಯನ್ನು ಮತ್ತು ಸಂಸ್ಕೃತಿಯನ್ನು ವಿಸ್ತರಿಸಲು ಕಾರಣವಾಗುತ್ತಿವೆ. ನಾವು ಇದನ್ನು ಮರೆತಂತೆ ವರ್ತಿಸುತ್ತಿದ್ದೇವೆ.
ಕನ್ನಡದ ಕಲಾತ್ಮಕ ಸಿನಿಮಾಗಳೂ ಸಹ ನನ್ನನ್ನು ಕಾಡಿದ್ದಿಲ್ಲ. ಅವು ಡಾಕ್ಯುಮೆಂಟರಿ ಲೆವೆಲ್ಲಿನಿಂದ ಮೇಲೆದ್ದ ಹಾಗೆ ಕಂಡೇ ಇಲ್ಲ. ಇಷ್ಟಕ್ಕೂ ಸಿನಿಮಾವನ್ನು ಕಲಾತ್ಮಕ, ಕಮರ್ಷಿಯಲ್ ಎಂದು ವಿಂಗಡಿಸುವುದೇ ತಪ್ಪಲ್ಲವೇ? ಕಲಾತ್ಮಕ ಸಿನಿಮಾ ಒಂದನ್ನು ಜನ ನೋಡದಿದ್ದರೆ, ತಿಂದ ಬಂಡವಾಳವನ್ನು ಅದು ವಾಪಸ್ಸು ನೀಡದಿದ್ದರೆ ಅಂಥ ಸಿನಿಮಾವನ್ನು ಯಾಕೆ ಮಾಡಬೇಕು? ಕಮರ್ಷಿಯಲ್ ಚಿತ್ರಕ್ಕೆ ಕಲೆಯ ಸ್ಪರ್ಶವೇ ಇಲ್ಲದಿದ್ದರೆ ಅದೂ ಸಹ ಹುಸಿಯಾದ ರಚನೆಯೇ ಅಲ್ಲವೇ?
ಒಳ್ಳೆಯತನ ಮತ್ತು ಕೆಟ್ಟತನಗಳನ್ನು ಸರಳ ರೇಖೆಗಳಲ್ಲಿ ಇರಿಸಿ ನೋಡುವ ಚಾಳಿಯೊಂದು ಕನ್ನಡವನ್ನು ಆವರಿಸಿಕೊಂಡು ಕೂತಿದೆ. ನಾಯಕನಾದವನು ಹೀಗೆ ಇರಬೇಕು ಎಂಬ ಫಾರ್ಮುಲಾವನ್ನು ಅಚ್ಚು ಕಟ್ಟಾಗಿ ಪಾಲಿಸಲಾಗುತ್ತದೆ. ರಾಮನೊಳಗೂ, ಕೃಷ್ಣನೊಳಗೂ ಅಸಂಖ್ಯಾತ ಓರೆ ಕೋರೆಗಳಿದ್ದವು ಎಂದು ವ್ಯಾಸ, ವಾಲ್ಮೀಕಿಯರು ತೋರಿಸುತ್ತಾರೆ. ಮನುಷ್ಯನಾಗುವುದೆಂದರೆ ಮೃಗೀಯತೆಯಿಂದ ಬಿಡುಗಡೆ ಪಡೆಯುವುದೆಂದು ಅರ್ಥ.
ತಂದೆ ಆ ಮೃಗತ್ವದಿಂದ ಬಿಡುಗಡೆ ಪಡೆದಿದ್ದ ಎಂದರೆ ಮಗನಿಗೆ ಮನುಷ್ಯತ್ವ ಬಂದು ಬಿಡುತ್ತದೆ ಎಂದಲ್ಲ. ಮಗನೂ ಸಂಘರ್ಷ ಮಾಡಿಯೇ ಬದುಕಬೇಕು. ಈ ತಾಕಲಾಟಗಳೇ ಮನಶ್ಯಾಸ್ತ್ರದ ಮೂಲ ತಾಕುಗಳು. ಬುಡಕಟ್ಟು, ನಾಗರಿಕತೆ, ರಾಷ್ಟ್ರಗಳಿಗೂ ಇಂಪಲ್ಸಿವ್ ಕ್ಯಾರೆಕ್ಟರ್ ಇರುತ್ತದೆ. ಪ್ರೇಮ, ಕಾಮ, ಧರ್ಮದ ಸ್ಥಗಿತ ಮೌಲ್ಯಗಳು, ಜಾತಿ, ವರ್ಗಗಳ ದಮನಕಾರಿ ಗುಣಗಳು ರಾಷ್ಟ್ರದ ಶ್ರೇಷ್ಠತೆಯ ಸಮಸ್ಯೆಗಳು. ಹಿಂಸೆ, ಶಾಂತಿ ಕುರಿತಾದ ಹಂಬಲ, ಪ್ರೀತಿ ಕುರಿತ ದಾಹ ಇವೆಲ್ಲ ಮನುಷ್ಯರನ್ನು ನಿರಂತರ ಕಾಡುತ್ತಲೇ ಇವೆ. ಕಂಗೆಡಿಸುತ್ತಲೇ ಇವೆ. ನಾಯಕನೊಳಗೊಳಗೊಬ್ಬ ಖಳ. ಖಳನೊಳಗೊಬ್ಬ ಮನುಷ್ಯನಿರಲು ಸಾಧ್ಯ ಎಂದು ಪಂಪ ರನ್ನರ ಕಾಲದಲ್ಲೇ ಕನ್ನಡವು ಚಿಂತಿಸಿದೆ.
ಕನ್ನಡದ ಸಿನಿಮಾಗಳು ನಡುಗಿಸುವಂತಹ, ಮುಟ್ಟಿ ನೋಡಿಕೊಳ್ಳುವಂತಹ, ಕಾಡುವಂತಹ ಇಂಪಲ್ಸಿವ್ ಕ್ಯಾರೆಕ್ಟರ್ಗಳನ್ನು ಸೃಷ್ಟಿಸಿದೆಯೇ? ಎಂಬುದನ್ನು ಕೇಳಿಕೊಳ್ಳಲು ಸಕಾಲ ಇದು. ಪಕ್ಕದ ಮಲಯಾಳಂ ಸಿನಿಮಾಗಳ ಮೂಲಕ ವಿಶ್ವಸ್ಥ ವ್ಯಾಕರಣವನ್ನು ಹಿಡಿದು, ಸ್ಥಳೀಯ ರಂಗು ಬಳಿದುಕೊಂಡು ನರ್ತಿಸುತ್ತಿದೆ. ತಮಿಳಿನಲ್ಲೂ ಪ್ರಧಾನ ಧಾರೆಯ ದೃಷ್ಟಿಕೋನವನ್ನು ಭಂಗಿಸುವ ಸಿನಿಮಾಗಳು ಆಗಾಗ ಬರುತ್ತಿವೆ.
ಕನ್ನಡ ಸಿನಿಮಾಗಳ ಪ್ರಗತಿಪರತೆ ಜಾತಿ, ಧರ್ಮ ಮೀರಿ ಪ್ರೀತಿ ಮಾಡುವುದು, ಪಾಠ ಮಾಡುವ ಮೇಷ್ಟ್ರುಗಳನ್ನು ಜೋಕರುಗಳಾಗಿ ಚಿತ್ರಿಸುವುದು, ಆಡಳಿತಶಾಹಿಯನ್ನು ಕೆಟ್ಟದಾಗಿ ಬಯ್ಯುವುದು, ಬಡವನೊಬ್ಬ ವೇಗವಾಗಿ ಶ್ರೀಮಂತನಾಗುವುದು, ರೌಡಿಯಾದರೂ ಒಳ್ಳೆಯ ಕಾರಣಕ್ಕೆ ಇತರರನ್ನು ಕೊಲ್ಲುವುದು ಮುಂತಾದ ಕತೆಗಳಾಚೆಗೆ ಹೋಗಿದ್ದು ಬಹಳ ಕಡಿಮೆ. ವಾಸ್ತವವಲ್ಲದ ಹುಸಿಯ ಬಣ್ಣವನ್ನು ಜನರ ಮೆದುಳ ಮೇಲೆ ತೇಲಿಸಲಾಗುತ್ತಿದೆ.
ಕಿಮ್ ಕಿ ಡುಕ್ ಸಾವು ಇದನ್ನೆಲ್ಲ ನೆನಪಿಸಿತು. ಕಿಮ್ ವಿಪರೀತ ವಿಕ್ಷಿಪ್ತ ಮನಸ್ಸಿನ ಮನುಷ್ಯ. ದಕ್ಷಿಣ ಕೊರಿಯಾದ ಗ್ಯೊಂಗ್ ಸ್ಯಾಂಗ್ ಪ್ರದೇಶದಲ್ಲಿ ಹುಟ್ಟಿ ಸಿಯೋಲ್ನ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿ ದುಡಿದ. ಅಲ್ಲಿಂದ ಪ್ಯಾರಿಸ್ಸಿಗೆ ಹೋಗಿ ಬೀದಿಗಳಲ್ಲಿ ಪೈಂಟಿಂಗ್ ಮಾಡುತ್ತಾ ಅಲ್ಲಿನ ಕಲೆಯ ಅಭಿವ್ಯಕ್ತಿ ವಿಧಾನಗಳನ್ನು ಆಳವಾಗಿ ಗಮನಿಸತೊಡಗಿದ.
ನಿಧಾನಕ್ಕೆ ಸಿನಿಮಾ ಕಡೆಗೆ ನಡೆದ. 1996 ರಲ್ಲಿ ಕ್ರೊಕೋಡೈಲ್ ಸಿನಿಮಾ ಮಾಡಿದ. ಬುದ್ಧಿಸ್ಟ್ ದೇಶವಾದ ದಕ್ಷಿಣ ಕೊರಿಯಾದಲ್ಲಿ ಈತನ ಸಿನಿಮಾಗಳ ಬೆಚ್ಚಿ ಬೀಳಿಸುವ ಗುಣ, ಅತಿ ಎನ್ನಿಸುವ ಒರಟುತನ, ಹಸಿ ಹಸಿಯಾದ ಮನುಷ್ಯರ ವಾಂಛೆಗಳು ಮೀಡಿಯಾಗಳ, ಪಂಡಿತರ ಗಮನ ಸೆಳೆಯಲಿಲ್ಲ. ಸಿಟ್ಟಿಗೆದ್ದ ಕಿಮ್ ತನ್ನ ದೇಶದಲ್ಲಿ ಸಿನಿಮಾ ಬಿಡುಗಡೆ ಮಾಡುವುದಿಲ್ಲವೆಂದು ಹಠ ಮಾಡಿದ.
ಕಿಮ್ನ ಸಿನಿಮಾ ‘ ದ ನೆಟ್’ ಅನ್ನು ನಾನು 2017 ರಲ್ಲಿ ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ನೋಡಿದೆ. ಆ ಸಿನಿಮಾ ವಿಶ್ವಾತ್ಮಕವಾದವನ್ನು ಪ್ರತಿಪಾದಿಸುತ್ತಿದ್ದ ಜಗತ್ತಿನ ಅನೇಕ ಚಿಂತಕರನ್ನು ನೆನಪಿಸಿತು. ಮನುಷ್ಯನ ಒಳ್ಳೆಯದಕ್ಕೆಂದು ನಿರ್ಮಾಣವಾದ ರಾಷ್ಟ್ರವೆಂಬ ಆಧುನಿಕ ರಾಜಕೀಯ ಸಂರಚನೆಯು ಭೀತಿಕಾರಕ ಮತ್ತು ಹಿಂಸ್ರಕವೆಂದು ಆ ಸಿನಿಮಾ ವಿವರಿಸುತ್ತದೆ.
ನೆಟ್ ಸಿನಿಮಾ ನೋಡಿದ ನಂತರ ಅವನ ಉಳಿದ ಸಿನಿಮಾಗಳನ್ನು ಹುಡುಕಿ ಹುಡುಕಿ ನೋಡತೋಡಗಿದೆ. ಕೆಲವು ಸಿನಿಮಾಗಳು ವಿಕ್ಷಿಪ್ತ ಅನ್ನಿಸಿದರೆ ಕೆಲವು ಮನುಷ್ಯನ ನಾಭಿಯಾಳದ ಸಂಕಟದಿಂದ ಎದ್ದು ಬರುತ್ತಿವೆ ಅನ್ನಿಸಿದವು. ನನ್ನನ್ನು ಬಹಳ ಕಾಡಿದ ಸಿನಿಮಾಗಳು ಮೂರು; ದ ನೆಟ್, 3 ಐರನ್ ಮತ್ತು ಸ್ಪ್ರಿಂಗ್, ಸಮ್ಮರ್, ಫಾಲ್ ವಿಂಟರ್ ಅಂಡ್ ಸ್ಪ್ರಿಂಗ್. ಸಿನಿಮಾ ನೋಡಿ ಬಹಳ ಕಾಲವಾದರೂ ಅದರ ಗುಂಗಿನಿಂದ ಹೊರಬರಲಾಗದಂತೆ ಈ ಸಿನಿಮಾಗಳು ಕಾಡುತ್ತಿವೆ.
ಅತ್ಯುತ್ತಮ ಕಲಾಕೃತಿಯೊಂದು ಸದಾ ತನ್ನನ್ನು ಬಂಧಿಸುವ ಫಾರ್ಮ್ ಅನ್ನು ಮುರಿಯಲು ಪ್ರಯತ್ನಿಸುತ್ತಿರುತ್ತದೆ. ಸಿನಿಮಾ, ಪೈಂಟಿಂಗ್, ಕತೆ, ಪದ್ಯ, ಕಾದಂಬರಿ, ನಾಟಕ ಎಲ್ಲವೂ ಹಾಗೆಯೇ. ಫಾರ್ಮಿನ ಬಂಧನದಿಂದ ಬಿಡಿಸಿಕೊಳ್ಳದೆ ಇದ್ದರೆ ಅಂತಹ ಕಲಾಕೃತಿ ಕೃತಕ ಅನ್ನಿಸಲಾರಂಭಿಸುತ್ತದೆ. ಕಾಲ, ದೇಶಗಳ ಹಂಗು ಮೀರಿ ಕತೆ, ಕಲಾಕೃತಿಯು ಮನುಷ್ಯರೆಲ್ಲರ ಸಂಕಟ, ತೊಳಲಾಟ ಅನ್ನಿಸತೊಡಗಿದರೆ ಮಾತ್ರ ಬದುಕಿನ ಕತೆಯಾಗುತ್ತದೆ. ಕಿಮ್ ನ ಸಿನಿಮಾಗಳು ಅಂತಹ ದಿಗಂತದ ಕಡೆಗೆ ಏರಲು ಯತ್ನಿಸುತ್ತವೆ.
ಕುರಸೋವಾನ ನಂತರ ಪಶ್ಚಿಮದ ಜಗತ್ತು ಏಷ್ಯಾದ ಕಡೆಗೆ ತಿರುಗಿ ನೋಡಿದ್ದು ಒಂದರ್ಥದಲ್ಲಿ ಕಿಮ್ ಕಿ ಡುಕ್ ಕಾರಣದಿಂದಾಗಿ. (ಭಾರತದಲ್ಲಿ ಸತ್ಯಜಿತ್ ರೇ ಮತ್ತು ಅಮೀರ್ ಖಾನ್ ಒಂದಿಷ್ಟು ಸೆಳೆವ ಕೆಲಸ ಮಾಡಿದ್ದಾರೆ).ಇರಾನಿನ ಮಜೀದ್ ಮಜೀದಿಯೂ ಈ ಕ್ಷೇತ್ರದಲ್ಲಿ ಗಮನಾರ್ಹ ಕೆಲಸ ಮಾಡಿದ್ದಾನೆ. ಕಿಮ್ ಗಿಂತ ಒಂದು ವರ್ಷ ದೊಡ್ಡನಾದ ಮಜೀದಿ ಮಕ್ಕಳ ಮೂಲಕ ಮನುಷ್ಯರ ಸಂಕಟಗಳನ್ನು ಹೇಳಲು ಪ್ರಯತ್ನಿಸುತ್ತಾನೆ.
ಮಜೀದಿಯ ‘ಚಿಲ್ಡ್ರನ್ ಆಫ್ ಹೆವನ್’, ‘ದ ಕಲರ್ ಆಫ್ ಪ್ಯಾರಡೈಸ್’ ಗಮನಾರ್ಹ ಕಲಾಕೃತಿಗಳು. ಸಿನಿಮಾಗಳ ಮೂಲಕ ವiಜೀದಿ ಇರಾನಿನ ಗ್ರಾಮೀಣ ಕೃಷಿ ಕುಟುಂಬಗಳ ಕಣ್ಣೀರು, ಸಂಕಟ, ಪ್ರೇಮ ಮತ್ತು ಮನುಷ್ಯರ ನವಿರುತನಗಳನ್ನು ಹೆಕ್ಕಿ ತರಲು ಪ್ರಯತ್ನಿಸುತ್ತಾನೆ. ಮಕ್ಕಳನ್ನು ದೇವರ ಪ್ರತಿನಿಧಿಗಳೆಂದು ಗ್ರಹಿಸುತ್ತಾನೆ.
ಕಿಮ್ ಮಜೀದಿಯ ಹಾಗೆ ಬೇಗ ಆರ್ದ್ರಗೊಳ್ಳುವ ಮನುಷ್ಯನಲ್ಲ. ಆತ ಒಂದರ್ಥದಲ್ಲಿ ದೇವರ ವಿರುದ್ಧವೇ ದಂಗೆ ಏಳುವ ಮನುಷ್ಯ. ಅವನ ಸ್ಪ್ರಿಂಗ್ ಸಮ್ಮರ್… ಸಿನಿಮಾ ಒಂದರ್ಥದಲ್ಲಿ ಬುದ್ಧನ ವಿರುದ್ಧ ದಂಗೆ ಏಳುವ ಸಿನಿಮಾ. ಮಹಾಯಾನಿ ಬೌದ್ಧಗುರು ಮತ್ತು ಶಿಷ್ಯನ ನಡುವೆ ನಡೆವ ಈ ಕತೆ ಚಕ್ರಗತಿ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ. ಮುಖ್ಯವಾಗಿ ಅದು ಎರಡು ತತ್ವಗಳನ್ನು ಪ್ರತಿಪಾದಿಸುತ್ತದೆ.
ಒಂದು, “ಕಾಮವು ತನ್ನ ತೀರದ ದಾಹದಿಂದ ಇನ್ನೊಂದು ಜೀವದ ಮೇಲೆ ಪೊಸೆಸಿವ್ ಆಗುತ್ತದೆ, ಕಡೆಗೆ ಕೊಲೆ ಮಾಡಲು ಉತ್ತೇಜಿಸುತ್ತದೆ”. ಗುರು, ಶಿಷ್ಯರು ಪ್ರಕೃತಿಯ ಏರಿಳಿತಗಳನ್ನು ನೋಡುತ್ತಾ ಸರೋವರದ ಮಧ್ಯದ ಕುಟೀರದಲ್ಲಿ ಬದುಕಿದ್ದ ನೆಲೆಗೆ ಖಿನ್ನ ಮನಸ್ಸಿನ ಕಾಯಿಲೆ ಅಂಟಿದ್ದ ಹುಡುಗಿಯೊಬ್ಬಳು ಬರುತ್ತಾಳೆ. ಶಿಷ್ಯ ಅವಳ ಮೋಹಕ್ಕೆ ಬಿದ್ದು ಅವಳೊಂದಿಗೆ ಮಲಗುತ್ತಾನೆ. ಗುರುವಿಗೆ ಗೊತ್ತಾಗುತ್ತದೆ.
ಇದು ಪುನರಾವರ್ತನೆಯಾಗುತ್ತದೆ. ಆಗ ಗುರು ಮೇಲಿನ ಮಾತನ್ನು ಶಿಷ್ಯನಿಗೆ ಹೇಳುತ್ತಾನೆ. ಗಂಡಿನ ಸ್ಪರ್ಶದಿಂದ ಹುಡುಗಿ ಗುಣಮುಖಳಾಗುತ್ತಾಳೆ. ದೈಹಿಕ ಸಂಪರ್ಕದಿಂದ ಕಾಯಿಲೆ ವಾಸಿಯಾಗುವುದಾರೆ ಅದು ಒಮ್ಮೆ ಸಾಕು ಎನ್ನುವಷ್ಟು ಪ್ರಾಕ್ಟಿಕಲ್ ಆಗಿ ಗುರು ಯೋಚಿಸುತ್ತಾನೆ.
ಆದರೆ ಅದೇ ಕಾಯಿಲೆಯಾಗಿಟ್ಟರೆ ನಾಶ ಖಂಡಿತ ಎನ್ನುವುದು ಆತನ ನಿಲುವು. ಹುಡುಗಿಯನ್ನು ಹೊರಡುವಂತೆ ಹೇಳುತ್ತಾನೆ. ಅವಳು ಹೋದ ಕೂಡಲೇ ಶಿಷ್ಯ ಭೋರೆಂದು ಗೋಳಾಡಿ ಅವಳ ಹಿಂದೆ ಹೋಗುತ್ತಾನೆ. ಕಡೆಗೊಂದು ದಿನ ವಾಪಸ್ಸು ಬರುತ್ತಾನೆ. ಪಶ್ಚಾತ್ತಾಪ, ಸಿಟ್ಟಿನಲ್ಲಿ ಭುಗಿಲೆದ್ದು ಹೇಳುತ್ತಾನೆ. ‘ ಅವಳಿಂದ ಬಯಸಿದ್ದು ಪ್ರೇಮವನ್ನು ಮಾತ್ರ. ಅವಳು ಬೇರೊಬ್ಬನೊಂದಿಗೆ ಹೊರಟು ಹೋದಳು. ಕಡೆಗೆ, ಅವಳನ್ನು ಕೊಂದು ಬಂದೆ’ ಎಂದು ನೆತ್ತರು ಒಣಗದ ಚಾಕು ತೋರಿಸುತ್ತಾನೆ.
ಎರಡು, ‘ನೀನು ಪ್ರಾಣಿಗಳಿಗೆ ಕಲ್ಲು ಕಟ್ಟಿ ಬಂದೆಯಲ್ಲ ಅವನ್ನು ಬಿಡಿಸು ಹೋಗು. ಬದುಕಿದ್ದರೆ ಬಚಾವಾದೆ, ಸತ್ತು ಹೋಗಿದ್ದಾರೆ ನಿನ್ನ ಜೀವನ ಪರ್ಯಂತ ಆ ಕಲ್ಲಗಳನ್ನು ಎದೆಯೊಳಗೆ ಹೊತ್ತುಕೊಂಡು ಓಡಾಡಬೇಕು’ ಎನ್ನುತ್ತಾನೆ. ಶಿಷ್ಯ ಆಶ್ರಮಕ್ಕೆ ಹೇಗೆ ಬಂದ ಗೊತ್ತಿಲ್ಲ. ಬಂದವನು ಆಡುತ್ತಾ ಆಡುತ್ತಾ ನೀರಿನಲ್ಲಿದ್ದ ಕಪ್ಪೆಗೆ, ಮೀನಿಗೆ, ನೀರ ಹೊರಗಿದ್ದ ಹಾವಿಗೆ ಕಲ್ಲು ಕಟ್ಟಿ ಬಿಟ್ಟು ಬರುತ್ತಾನೆ. ನೋಡಿದ ಗುರು ಮಲಗಿದ್ದ ಶಿಷ್ಯನಿಗೆ ಕಲ್ಲು ಕಟ್ಟುತ್ತಾನೆ.
ಎದ್ದು ಓಡಾಡಲಾಗದೆ ಕಲ್ಲು ಬಿಚ್ಚು ಎಂದು ಗೋಳಾಡುವ ಶಿಷ್ಯನಿಗೆ ಗುರು ಮೇಲಿನ ಮಾತುಗಳನ್ನು ಹೇಳುತ್ತಾನೆ. ನೋಡಿದರೆ ಹಾವು ಮೀನುಗಳೆರಡೂ ಸತ್ತು ಹೋಗಿರುತ್ತವೆ. ಕಪ್ಪೆ ಬದುಕಿರುತ್ತದೆ. ಮಗು ಕಣ್ಣೀರಿಟ್ಟು ದುಃಖಿಸುತ್ತದೆ. ದೊಡ್ಡವನಾದ ಹುಡುಗ ಕೊಲೆಗಡುಕನಾಗುತ್ತಾನೆ. ಅವನಿಗೆ ಮಹಾಯಾನದ ಪ್ರಜ್ಞಾಪಾರಮಿತ ಸೂತ್ರವನ್ನು ಕೈಯಾರೆ ಕಲಿಯುವಂತೆ ಮಾಡುತ್ತಾನೆ. ಬೌದ್ಧರ ಯಶಸ್ಸು ಇರುವುದು ಶಿಕ್ಷಣವನ್ನು ಕೈಗಳ ಮೂಲಕ ಕಲಿಸುವುದರಲ್ಲಿ ಇರಬೇಕು.
ಅನುಭವದಿಂದ ಕಲಿಯುವ ವಿದ್ಯೆಗೆ ತಾಳಿಕೆ ಗುಣ ಹೆಚ್ಚು. ಕಲಿಸುವ ಬೌದ್ಧ ಗುರುಗಳು ಕರುಣೆಯನ್ನೂ ತುಂಬಲು ನೋಡುತ್ತಾರೆ. ಅದು ಎಲ್ಲ ಸಾರಿ ಫಲ ನೀಡದು. ಕೊಲೆಗಾರ ಶಿಷ್ಯನನ್ನು ಪೊಲೀಸರು ಎಳೆದೊಯ್ಯಲು ಬರುತ್ತಾರೆ. ಪ್ರಜ್ಞಾಪಾರಮಿತ ಸೂತ್ರವನ್ನು ಬೆಕ್ಕಿನ ಬಾಲದಲ್ಲಿ ಅದ್ದಿ ಗುರು ಬರೆಯುತ್ತಾ ಹೋಗುತ್ತಾನೆ. ಶಿಷ್ಯ ಕೊಲೆಗೆ ಬಳಸಿದ ಚಾಕು ಹಿಡಿದು ಮರದ ಹಲಗೆಯ ಮೇಲಿನ ಅಕ್ಷರಗಳನ್ನು ಕೆತ್ತುತ್ತ ಹೋಗುತ್ತಾನೆ.
ಪೊಲೀಸನೊಬ್ಬ ಮೇಣದ ಬತ್ತಿ ಹಿಡಿದು ಕೆತ್ತಲು ಸಹಾಯ ಮಾಡುತ್ತಾನೆ. ಕೆತ್ತುತ್ತಲೇ ನಿದ್ದೆ ಹೋದ ಆರೋಪಿಗೆ ತನ್ನ ಕೋಟು ಬಿಚ್ಚಿ ಹೊದಿಸುತ್ತಾನೆ. ಅಕ್ಷರ ಕೆತ್ತಿದ್ದು ಮುಗಿದ ನಂತರ ಬೆಳಿಗ್ಗೆ ಶಿಷ್ಯನನ್ನು ಬೇಡಿ ತೊಡಿಸದೆ ಕರೆದೊಯ್ಯುತ್ತಾರೆ. ಶಿಷ್ಯನ ಜೊತೆಯಲ್ಲಿ ಬೆಕ್ಕೂ ಸಹ ಗುರುವನ್ನು ಬಿಟ್ಟು ಹೋಗುತ್ತದೆ. ಶಿಷ್ಯನನ್ನು ಎಳೆದೊಯದ್ದ ನಂತರ ಗುರು ದೋಣಿಯೊಳಗೆ ಬೆಂಕಿ ಹಚ್ಚಿಕೊಂಡು ದೇಹತ್ಯಾಗ ಮಾಡುತ್ತಾನೆ. ಬಿಡುಗಡೆಯಾದ ಶಿಷ್ಯ ಮರಳಿ ಬರುತ್ತಾನೆ. ತಾನು ಬಾಲ್ಯದಲ್ಲಿ ಕೊಂದಂತದೇ ಹಾವು ಕುಟೀರ ಸೇರಿರುತ್ತದೆ. ಸಂತನಾಗುವಿಕೆ ಅಲ್ಲಿಂದ ಶುರುವಾಗುತ್ತದೆ.
ಹೆಪ್ಪುಗಟ್ಟಿದ ಸರೋವರ. ಎಲೆ ಉದುರಿದ ಕಾಡು. ಮೌನವಾದ ಸೃಷ್ಟಿಯ ಒಂದು ಜಾವ ಅಳುವ ಹಸುಗೂಸನ್ನು ಹೊತ್ತ ಮುಖ ಮುಚ್ಚಿಕೊಂಡ ಹೆಣ್ಣೊಬ್ಬಳು ಆಶ್ರಮಕ್ಕೆ ಬರುತ್ತಾಳೆ. ಮಗುವನ್ನು ಆಶ್ರಮದಲ್ಲಿ ಬಿಟ್ಟು ನಡೆಯತೊಡಗುತ್ತಾಳೆ. ಮಂಜು ಗಡ್ಡೆ ಕರಗಿದ್ದ ಒಂದು ನೀರ ಕಂದರಕ್ಕೆ ಬಿದ್ದು ಸಾಯುತ್ತಾಳೆ. ಸಂತನಾಗುವವ ಹೋಗಿ ನೋಡಿದರೆ ಹೆಂಗಸಿನ ಬದಲು ಬುದ್ಧನ ವಿಗ್ರಹ ಸಿಗುತ್ತದೆ. ಮಗು ಚಟುವಟಿಕೆಯಿಂದ ಓಡಾಡತೊಡಗುತ್ತದೆ.
ಅದೂ ಕೂಡ, ಮೀನು, ಹಾವು ಮತ್ತು ಕಪ್ಪೆಯ ಬಾಯಿಗೆ ಕಲ್ಲು ತುರುಕಿ ಗಹಗಹಸಿ ನಗುತ್ತದೆ. ಇದು ಸಿನಿಮಾ. ಮಜೀದಿಯ ಮಕ್ಕಳು ದೇವದೂತರು.ವಿಶ್ವ ಮಾನವರು. ಕಿಮ್ ತೋರಿಸುವ ಮಕ್ಕಳೊಳಗೆ ನಿಸರ್ಗದ ಚಲನೆಯನ್ನು ಕಟ್ಟಿ ಹಾಕುವ, ಕೊಂದು ಖುಷಿಪಡುವವರು. ಮಜೀದಿ ದೊಡ್ಡವರ ಸಣ್ಣತನ ಮಕ್ಕಳಾಗುವ ಪ್ರಕ್ರಿಯೆಯಲ್ಲಿ ಅಳಿದು ಹೋಗುತ್ತದೆ ಎನ್ನುತ್ತಾನೆ.
ಕಿಮ್ ಮಕ್ಕಳು ಬದುಕನ್ನು ಸ್ಪರ್ಶಿಸಿ ದಾರ್ಶನಿಕರಾಗಬೇಕು, ಜ್ಞಾನ ಎಂಬುದು ಸುಖಾಸುಮ್ಮನೆ ದಕ್ಕುವುದಿಲ್ಲ ಎನ್ನುತ್ತಾನೆ. ಜ್ಞಾನವಿಲ್ಲದ ಮಗುತನ ಉಪಯೋಗವಿಲ್ಲದ್ದು. ಅದು ಮಾಡುವ ಕ್ರೌರ್ಯದ ಭಾರ ಹಗುರವಾದದ್ದೇನೂ ಅಲ್ಲ ಎಂಬುದು ಕಿಮ್ ನಿಲುವು.
ಕಿಮ್ ಇದಿಷ್ಟನ್ನೂ ಋತುಗಳ ಪಲ್ಲಟಗಳ ರೂಪಕದ ಮೂಲಕ ವಿವರಿಸುತ್ತಾನೆ. ಮೋಕ್ಷ ಎನ್ನುವುದು ಸ್ವಂತ ಅನುಭವವಿಲ್ಲದೆ ಉಪದೇಶಗಳಿಂದ ಬರಲಾರದು ಎನ್ನಿಸುತ್ತದೆ. ಬುದ್ಧನೂ ಅನುಭವಗಳ ಮೂಲಕವೇ ಲೋಕ ಸಂಗತಿಗಳನ್ನು ವಿವರಿಸಿದ. ಜತೆಗೆ ಪತಿತನಾಗದೆ ಮನುಷ್ಯ ಪಾವನನಾಗಲಾರನೆ? ಎಂಬೊಂದು ಪ್ರಶ್ನೆಯನ್ನು ಸಿನಿಮಾ ತಣ್ಣಗೆ ಕೇಳುತ್ತದೆ. ಮನುಷ್ಯನಾಳದ ಹಿಂಸೆ ಭೀಕರ ತಾರಕ ಮುಟ್ಟದೆ ಸಾಕ್ಷಾತ್ಕಾರ ಸಾಧ್ಯವಿಲ್ಲವೇ? ಎಂಬ ಪ್ರಶ್ನೆ ಹುಟ್ಟುತ್ತದೆ. ಬುದ್ಧ ಗುರುವೇ ಉತ್ತರ ಹೇಳಬೇಕು.
‘ದ ನೆಟ್’ ಸಿನಿಮಾದ ವಸ್ತು ಯುರೋಪಿಗೆ ಹೊಸತಲ್ಲ. ರಾಷ್ಟ್ರವಾದದ ಗಾಯಗಳು ಯುರೋಪನ್ನು ಮಾಗಿಸಿವೆ. ಆದರೆ ಒಂದೇ ತಾಯ ಮಕ್ಕಳಾದ ಉತ್ತರ, ದಕ್ಷಿಣ ಕೊರಿಯಾದಂತಹ ಪ್ರಾಚೀನ ಬೌದ್ಧ ರಾಷ್ಟ್ರಗಳು ಇದನ್ನು ಹೇಗೆ ನಿಭಾಯಿಸಬೇಕೆಂದು ತೋಚದೆ ಒದ್ದಾಡುತ್ತಿವೆ.
ಉಭಯ ರಾಷ್ಟ್ರಗಳ ಸೈದ್ಧಾಂತಿಕ ಕಲಹಗಳು, ನಿಷ್ಠೆಗಳು ಮನುಷ್ಯನನ್ನು ಹುಳುವಿನಂತೆ ಹೊಸಕಿ ಹಾಕುವುದರ ಕುರಿತು ಸಿನಿಮಾ ಮಾತನಾಡುತ್ತದೆ. ಅತ್ಯಂತ ದಾರಿದ್ರ್ಯದಲ್ಲಿರುವ ಕಮ್ಯುನಿಸಂನ ಹೆಸರಿನಲ್ಲಿ ಸರ್ವಾಧಿಕಾರಿ ಆಳುತ್ತಿರುವ ಉತ್ತರ ಕೊರಿಯಾದ ಮೀನುಗಾನೊಬ್ಬನ ದೋಣಿ ಗಾಳಿಗೆ ಸಿಲುಕಿ ದಕ್ಷಿಣ ಕೊರಿಯಾ ಭಾಗಕ್ಕೆ ಹರಿದು ಬಿಡುತ್ತದೆ.
ಒಂದು ಜುಜುಬಿ ಕೆರೆಯೂ ರಾಷ್ಟ್ರ ರಾಷ್ಟ್ರಗಳ ನಡುವೆ ಹರಿದು ಹೋಗಿರುತ್ತದೆ. ಮೀನುಗಾರನನ್ನು ದಕ್ಷಿಣದ ಸೈನಿಕರು ಬಂಧಿಸುತ್ತಾರೆ. ಭೀಕರ ಹಿಂಸೆ ನೀಡುತ್ತಾರೆ. ಕಡೆಗೆ, ಉತ್ತರ ಕೊರಿಯಾ ಕುಟುಂಬ ಮೂಲದ ದಕ್ಷಿಣ ಕೊರಿಯಾದ ತರುಣ ಸೈನಿಕನೊಬ್ಬ ಮೀನುಗಾರನ ನೆರವಿಗೆ ಬರುತ್ತಾನೆ. ಹಾಗಾಗಿ ಮೀನುಗಾರ ಸಾಯದೆ ಉಳಿದುಕೊಳ್ಳುತ್ತಾನೆ. ಹೊರಗಿನವರನ್ನು ಗೂಢಾಚಾರರೆಂದು ವಿಚಾರಿಸುವ ವೇಳೆ ನೀಡುವ ಭೀಕರ ಹಿಂಸೆ ಎದೆ ನಡುಗಿಸುತ್ತದೆ. ಅನೇಕರು ನಾಲಿಗೆಯನ್ನು ತಿರುಗಿಸಿ ನರ ಕಡಿದುಕೊಂಡು ಸತ್ತು ಬೀಳುತ್ತಾರೆ ಹಿಂಸೆ ತಾಳದೆ.
ಮೀನುಗಾರ ಅಮಾಯಕನೆಂದು ದಕ್ಷಿಣದವರಿಗೆ ಅರ್ಥವಾಗುತ್ತದೆ. ಅದಾದ ನಂತರ ಆತನಿಗೆ ದಕ್ಷಿಣ ರಾಷ್ಟ್ರದ ವೈಭವೋಪೇತ ನಗರ ತೋರಿಸಬೇಕೆಂಬ ತಂತ್ರ ಹೊಳೆಯುತ್ತದೆ. ಶತ್ರು ದೇಶದ ಮನುಷ್ಯನಿಗೆ ತನ್ನ ಸಾಹುಕಾರಿಕೆ ತೋರಿಸಬೇಕೆಂಬುದು ಯುದ್ಧ ತಂತ್ರ ಹಾಗೂ ಕ್ರೌರ್ಯದ ಇನ್ನೊಂದು ಮುಖ. ನೋಡಲು ಮೀನುಗಾರ ನಿರಾಕರಿಸುತ್ತಾನೆ. ನಗರದ ಝಗಮಗಿಸುವ ವೈಭವ ನೋಡಲಾರೆನೆಂದು ಮುಖ ಮುಚ್ಚಿಕೊಳ್ಳುತ್ತಾನೆ.
ದಕ್ಷಿಣದವರು ಹೆಣ್ಣು ಮಕ್ಕಳನ್ನು ಮಾರಿ, ತಲೆ ಹಿಡಿದು ನಗರಗಳನ್ನು ಕೊಬ್ಬಿಸಿದ್ದಾರೆ ಎಂಬುದು ಆತನ[ ಉತ್ತರದವರ] ಅಭಿಪ್ರಾಯ. ಇದು ಬಂಡವಾಳಿಗ ದೇಶಗಳ ಕುರಿತಾದ ಕಠೋರ ವಿಮರ್ಶೆ. ಅನ್ನವಿಲ್ಲದೆ ಬಡತನದಲ್ಲಿ ಜನರು ಸಾಯುವ ಚಿತ್ರಣ ಕಮ್ಯುನಿಸ್ಟ್ ಉತ್ತರ ಕೊರಿಯಾದ ಕುರಿತ ವಿಮರ್ಶೆ. ಮೀನುಗಾರನನ್ನು ನಡು ಬೀದಿಯಲ್ಲಿ ಬಿಟ್ಟು ಸೈನಿಕರು ಹಿಂಬಾಲಿಸ ತೊಡಗುತ್ತಾರೆ. ಆತ ಕಣ್ಣು ಮುಚ್ಚಿಕೊಂಡು ಓಡತೊಡಗುತ್ತಾನೆ.
ದಕ್ಷಿಣದವರ ಶ್ರೀಮಂತಿಕೆ ಸೆಳೆದುಬಿಟ್ಟರೆ ಎಂಬ ಭಯ ಅವನದು. ಕಡೆಗೆ ದಿಕ್ಕುಗಾಣದೆ ಬೀದಿ ಬೀದಿಯಲ್ಲಿ ಅಲೆಯುತ್ತಾನೆ. ಹಂದಿಯ ಸೂಪನ್ನು ಜೀವನದಲ್ಲಿ ನೋಡಿಯೇ ಇಲ್ಲವೇನೋ ಎಂಬಂತೆ ಕುಡಿಯುತ್ತಾನೆ. ನಗರದ ವೈಭವ ನೋಡಿ ಬೆರಗಾಗುತ್ತಾನೆ. ಕಡೆಗೆ ತರುಣ ಸೈನಿಕನ ಉಸ್ತುವಾರಿಯೊಳಗೆ ಆತ ದಕ್ಷಿಣದವರ ಕುರಿತು ತುಸು ಉದಾರಿಯಾಗುತ್ತಾನೆ. ತರುಣ ಹೊಸ ಬಟ್ಟೆಯನ್ನು, ಒಂದಿಷ್ಟು ಹಣವನ್ನು ಕೊಡುತ್ತಾನೆ. ಕಡೆಗೊಂದು ದಿನ ಉತ್ತರದ ಗಡಿಯೊಳಗೆ ಆತನನ್ನು ಬಿಟ್ಟು ಬಿಡುತ್ತಾರೆ.
ಈಗ ಉತ್ತರದ ಸೈನಿಕರ ಗೂಢಾಚಾರಿಕೆ ಶುರುವಾಗುತ್ತದೆ. ತರುಣ ಸೈನಿಕ ನೀಡಿದ್ದ ಹಣವನ್ನು ಮೀನುಗಾರ ತನ್ನ ಗುದದ್ವಾರದೊಳಗೆ ಬಚ್ಚಿಟ್ಟುಕೊಳ್ಳುತ್ತಾನೆ. ಉತ್ತರದವರಿಗೆ ಈತ ಗೂಢಾಚಾರನಾಗಿ ಬದಲಾಗಿರಬಹುದೇ ಎಂಬ ಅನುಮಾನ. ಜೊತೆಗೆ ಆತ ತಂದಿರಬಹುದಾದ ಹಣದ ಬಗ್ಗೆ ಆಸೆ. ಅಲ್ಲಿನ ಸೈನ್ಯದ ಸ್ಥಳೀಯ ಮುಖಂಡ ಮೀನುಗಾಗರನನ್ನು ಹಿಂಬಾಲಿಸುತ್ತಾನೆ. ಕಡೆಗೆ ಆತ ಮಲ ವಿಸರ್ಜನೆ ಮಾಡಿದ ನಂತರ ಮಲ ಕೆದಕಿ ಹಣವನ್ನು ತೆಗೆದುಕೊಳ್ಳುತ್ತಾನೆ.
ಇದು ಉತ್ತರ ಕೊರಿಯಾದ ಸೈನಿಕರ ಭ್ರಷ್ಟತೆ. ಅವನಿಗೆ ಮೀನು ಹಿಡಿಯಲೂ ಬಿಡದೆ ಕಿರುಕುಳ ನೀಡುತ್ತಾರೆ. ಇತ್ತ ಹೊಟ್ಟೆಗೂ ಇಲ್ಲ. ಸೈನಿಕರ ಕಿರುಕುಳ ಬೇರೆ. ಮೀನುಗಾರ ಪ್ರತಿಭಟಿಸುತ್ತಾನೆ. ಕಡೆಗೆ ತಲ್ಲಣಗೊಳಿಸುವ ಹಸಿವು ಸೈನ್ಯದ ಆಜ್ಞೆ ಧಿಕ್ಕರಿಸುವಂತೆ ಮಾಡುತ್ತದೆ. ದೋಣಿ ತೆಗೆದುಕೊಂಡು ನೀರಿಗಿಳಿಯುತ್ತಾನೆ. ಸೈನಿಕರು ಗುಂಡು ಹೊಡೆದು ಅವನನ್ನು ಕೊಲ್ಲುತ್ತಾರೆ. ಎಲ್ಲ ಸರ್ವಾಧಿಕಾರಿ ಪ್ರಭುತ್ವಗಳೂ ಮನುಷ್ಯನನ್ನು ನಿಕೃಷ್ಟವಾಗಿ ನೋಡುತ್ತವೆ. ಅದಕ್ಕೆ ರಾಷ್ಟ್ರ ಸಂರಚನೆ ಎಂಬುದು ನೆಪದ ಆಯುಧವಾಗಿರುತ್ತದೆ. ಸದಾ ಕೀಳರಿಮೆಯಲ್ಲಿ ಬದುಕುವ ಅದು ದ್ವೇಷ ಮತ್ತು ಗುಮಾನಿಗಳನ್ನು ತನ್ನ ಒಡಲೊಳಗಿಟ್ಟುಕೊಂಡು ಏಗುತ್ತಿರುತ್ತದೆ.
ಎರಡೂ ಸಿನಿಮಾಗಳು ವಿಭಿನ್ನ ದಿಕ್ಕುಗಳನ್ನು ವಿವರಿಸುವ ಕಲಾಕೃತಿಗಳು. ಒಂದು ರಾಷ್ಟ್ರಗಳ ನಡುವಿನ ಕ್ರೌರ್ಯವನ್ನು, ಗಡಿಗಳ ನೆಪದಲ್ಲಿ ನಡೆಯುವ ದಮನವನ್ನು ಕುರಿತು ಗೇಲಿ ಮಾಡುತ್ತದೆ. ಕಮ್ಯುನಿಸ್ಟ್ ದೇಶದ ಬಡತನ, ಭ್ರಷ್ಟ ಮತ್ತು ದುಷ್ಟ ಸರ್ವಾಧಿಕಾರಿ ಮಿಲಿಟರಿ ಆಡಳಿತದಂತೆಯೇ ದಕ್ಷಿಣ ಕೊರಿಯಾ ಪ್ರಜಾಪ್ರಭುತ್ವದ ಹೆಸರಲ್ಲಿ, ನಡೆಸುವ ಕ್ರೌರ್ಯ ಕೂಡ ಅತ್ಯಂತ ಭೀಕರ.
ಮನುಷ್ಯನ ಮನಸ್ಸನ್ನು ಪಲ್ಲಟಗೊಳಿಸುವ ಸಂಪತ್ತಿನ ಧಿಮಾಕು ಅಮಾನವೀಯ. ರಾಷ್ಟ್ರವಾದದ ಕ್ರೌರ್ಯ 21 ನೇ ಶತಮಾನದ ಏಷ್ಯಾದ, ಆಫ್ರಿಕಾಗಳ ನೆಲದಲ್ಲಿ ಮುಂದುವರೆಯುತ್ತಿದೆ. ಎರಡೂ ರಾಷ್ಟ್ರಗಳೂ ಅಮಾನವೀಯವೇ. ಕ್ರೂರ ಸ್ವಭಾವದವೆ. ಬೌದ್ಧ ಮಾರ್ಗವೆಂಬುದು ಅತ್ಯಂತ ಕೃತಕ ಇಲ್ಲಿ. ಇದು ರಾಜಕೀಯ ಕಥನ.
‘ಸ್ಪ್ರಿಂಗ್, ಸಮ್ಮರ್..’ ಆಧ್ಯಾತ್ಮದ ನಡುವಿನ ವಾಂಛೆಗಳ ರಾಜಕೀಯ ಕಥನ ಪಂಪನ ಆದಿ ಪುರಾಣದಂತೆ. ‘ದ ನೆಟ್’ ಸಿನಿಮಾ ರಾಜಕೀಯಕ್ಕೆ ಆಧ್ಯಾತ್ಮಿಕ ಸ್ಪರ್ಶ ಬೇಕು ಎಂದು ಬಯಸುವ ವಿಕ್ರಮಾರ್ಜುನ ವಿಜಯ. ಒಟ್ಟಾರೆ, ನೆಲದ ಬಯಕೆಯ ಕುರುಕ್ಷೇತ್ರದಲ್ಲಿ ಬಡವರ ಭಿನ್ನಪವ ಕೇಳಿದವರಿಲ್ಲ.
ಕಡೆಯದಲ್ಲದ ಮುಖ್ಯ ಮಾತು; ಇಂಥ ಸಿನಿಮಾಗಳನ್ನು ನೀಡಿದ ಕಿಮ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಮೂವರು ಹೆಣ್ಣು ಮಕ್ಕಳು ಮೀಟೂ ಚಳುವಳಿಯಲ್ಲಿ ಭಾಗವಹಿಸಿ ಕೋರ್ಟಿಗೆ ಹೋಗಿದ್ದರು. ಕೋರ್ಟು ಆತನಿಗೆ ದಂಡ ಹಾಕಿ ಖುಲಾಸೆ ಮಾಡಿತು. ದಿಕ್ಕೆಡಿಸುವ ಸಿನಿಮಾ ಮಾಡಿದ ಕಿಮ್ ಸ್ವತಃ ಗಂಡಿನ ಠೇಂಕಾರದ ಮೂಟೆಯಾಗಿದ್ದನೇ ಎಂಬೊಂದು ಪ್ರಶ್ನೆಯನ್ನೂ ಉಳಿಸಿ ಹೋಗಿದ್ದಾನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.
ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಜನಧ್ವನಿ-2 ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ.
ಸಂವಿಧಾನಕ್ಕೆ ಅಪಾಯ ಎಂದರೆ ದೇಶದ ಮಹಿಳೆಯರು, ಬಡವರು, ಮಧ್ಯಮ ವರ್ಗದವರು, ಶೂದ್ರರು, ಶ್ರಮಿಕರ ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ.
ಭಾರತದಲ್ಲಿ ಪ್ರಜಾತಂತ್ರ ಅಪಾಯದಲ್ಲಿದೆ. ಇದನ್ನು ಉಳಿಸುವ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ. ಈ ಲೋಕಸಭಾ ಚುನಾವಣೆ ನಮಗೊಂದು… pic.twitter.com/UapeRxBcZP
— Siddaramaiah (@siddaramaiah) April 14, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ
ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.
ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.
ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.
ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.
ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್ಗೆ ರೂ.10 ಪಡೆದ ಶಾಪಿಂಗ್ ಮಾಲ್ಗೆ ದಂಡ
ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್ಗೆ ಪಡೆಯಲಾಯಿತು.
ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.
ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243