ಭಾವ ಭೈರಾಗಿ
ಬಾಳು ಕೊಟ್ಟೆ ಎಂದವನು ಪರಮಪಾಪಿಯಂತೆ ಕಾಣುತ್ತಾನೆ

ಇನ್ನು ಚೆಂದ ಅಂದ್ರೆ ನಿನ್ನ ಹೇಗ್ ನೋಡ್ಕೊಳೋದು, ಯಾವತ್ತಾದರೂ ನಾನು ಗಂಡ ಅನ್ನೋ ಅಧಿಕಾರ ಚಲಾಯಿಸಿದ್ದೇನಾ? ಇಲ್ಲ, ಪಕ್ಕದ ಮನೆಯವನಂತೆ ದಿನಾ ಕುಡಿದು ಬಂದು ಬಡಿಯುತ್ತೇನಾ? ಸಿಗರೇಟಿನಿಂದ ಸುಟ್ಟಿದ್ದೇನಾ? ಮನೇಲಿ ಕೂಡಿಹಾಕಿ ಹಿಂಸೆಕೊಟ್ಟಿದ್ದೇನಾ? ಹೋಗಲಿ ಯಾವತ್ತಾದರೂ ವರದಕ್ಷಿಣೆ ಅಂತ ಮಾತಾಡಿದ್ದೇನಾ? ಯಾವುದೂ ಇಲ್ಲ. ಆದರೂ ನೀನು ಯಾಕ್ ಹೀಗಾಡ್ತಿದಿಯೋ ಅರ್ಥವಾಗ್ತಿಲ್ಲ. ಇನ್ನು ಹೇಗೆ ನೋಡ್ಕೋಬೇಕು ನಿನ್ನ?
ಹೀಗೆ ಕೇಳುವ ಗಂಡ ಅದೆಷ್ಟು ಒಳ್ಳೆಯವನು ಅಂತ ನಿಮಗನ್ನಿಸುತ್ತಾ.. ನನಗಂತೂ ಖಂಡಿತಾ ಅನಿಸಲ್ಲ. ಬದಲಿಗೆ ಅವನ ಬುದ್ದಿಮಟ್ಟ ಇಷ್ಟೇನಾ ಅಂತ ಅನುಮಾನ ಕಾಡಲಾರಂಭಿಸುತ್ತೆ. ಯಾಕಂದ್ರೆ ಇಲ್ಲಿ ನೀವು ಸೂಕ್ಷ್ಮವಾಗಿ ಗಮನಿಸಿನೋಡಿದರೆ ಆತ ಮಾಡಿರುವ ಅಥವಾ ಮಾಡಬೇಕಿರುವ ಯಾವುದೇ ಒಳ್ಳೆಯ ಕೆಲಸದ ಬಗ್ಗೆ ಮಾತಾಡ್ತಿಲ್ಲ, ಬದಲಾಗಿ ತಾನು ಮಾಡಬಹುದಾಗಿರುವ ಕೆಟ್ಟತನಗಳನ್ನು ಮಾಡಿಲ್ಲ ಹೀಗಾಗಿ ತಾನೊಬ್ಬ ಸಭ್ಯಸ್ಥ ಎಂದು ಸರ್ಟಿಫಿಕೇಟು ಕೊಟ್ಟುಕೊಳ್ತಿದಾನೆ. ಅಂದರೆ ಅವೆಲ್ಲ ಕೆಲಸಗಳನ್ನೂ ಮಾಡುವ ಅವಕಾಶ ನನಗಿದೆ ಮನಸು ಮಾಡಿದರೆ ನಾನು ಅವೆಲ್ಲವನ್ನೂ ಮಾಡಬಹುದಿತ್ತು ಆದರೆ ಅವನ್ನು ಮಾಡದೇ ಇರುವ ಕಾರಣಕ್ಕಾಗಿ ನೀನು ನನಗೆ ಕೃತಜ್ಞಳಾಗಿರಬೇಕು ಎಂಬುದು ಆತನ ಮಾತಿನ ಅರ್ಥ ಅಲ್ವಾ?
ಅಂಗವಿಕಲೆಯೊಬ್ಬಳನ್ನು ಪ್ರೀತಿಸಿ ಮದುವೆಯಾದಾತ ಕೊನೆಗೊಂದು ದಿನ ‘ನಾನು ಅಂಗವಿಕಲೆಯೊಬ್ಬಳಿಗೆ ಬಾಳು ಕೊಟ್ಟೆ ಎಂದು ಹೇಳಿ ಮೈಲೇಜ್ ತೆಗೆದುಕೊಂಡದ್ದೇ ಆದರೆ ಆತನ ಇಡೀ ಪ್ರೀತಿ ಮಣ್ಣುಪಾಲಾದಂತೆ. ಮತ್ತೊಬ್ಬರು ಈತನನ್ನು ಹಾಗೆ ಹೊಗಳುವಾಗ ಮಿಣಮಿಣ ಕಣ್ಣುಬಿಡುತ್ತಾ ತ್ಯಾಗಮಯಿಯಂತೆ ಪೋಸ್ ಕೊಟ್ಟರೂ ಆತನೊಳಗೆ ಅಂಥ ಒಂದು ಆಲೋಚನೆಯಿದೆ ಎಂದೇ ನಾನು ಭಾವಿಸುತ್ತೇನೆ. ಅಸಲಿಗೆ ಆತ ಇದನ್ನು ತ್ಯಾಗ ಅಥವಾ ಉಪಕಾರ ಎಂದು ಭಾವಿಸುವುದಾದರೆ ಆಕೆಯನ್ನು ಮದುವೆಯಾಗದೇ ಸುಮ್ಮನಿರುವುದೇ ಲೇಸು. ಮದುವೆಯಾದ ನಂತರ ಹೀಗೆ ಮಾತನಾಡಿ ಆಕೆಗೆ ಭಯಂಕರ ಗಿಲ್ಟ್ ಬರುವಂತೆಯೋ ಅಥವಾ ಜೀವನವಿಡೀ ಕೃತಜ್ಞಳಾಗಿರುವಂತೆಯೋ ಮಾಡಿಬಿಟ್ಟರೆ ನನ್ನ ಕಣ್ಣಿಗವನು ಪರಮಪಾಪಿಯಂತೆ ಕಾಣುತ್ತಾನೆ.
ಹೀಗೆ ಮಾತನಾಡುವ ಬಹಳಷ್ಟು ಜನರನ್ನ ನಾನು ನೀವು ಆಗಾಗ ಭೇಟಿಯಾಗಿರ್ತೇವೆ. ಕೆಲಸ ಮಾಡಿಸಿಕೊಂಡ ಬಾಸು ‘ನಿಮಗೆ ತಿಂಗಳಿಗೆ ಸರಿಯಾಗಿ ಸಂಬಳ ಕೊಡ್ತೇನೆ ಆ ಕೃತಜ್ಞತೆ ನಿಮಗಿರಲಿ’ ಅಂದಾಗ ಇದೇ ಮಾತು ಮತ್ತೆ ನೆನಪಾಗುತ್ತೆ. ಕೆಲಸ ಮಾಡಿಸಿಕೊಂಡವನು ಸಂಬಳ ಕೊಡಲೇಬೇಕಾದುದು ಕರ್ತವ್ಯ ಅಲ್ವಾ, ಅದನ್ನೇ ತಾನು ಮಾಡುತ್ತಿರುವ ಮಹದುಪಕಾರ ಅಂತ ಹೇಳಿದರೆ ಹೇಗಿರುತ್ತೆ? ಯಾವುದೇ ಸಾಧನೆಯಿಲ್ಲದ, ಉತ್ತಮ ಕೆಲಸವೊಂದನ್ನೂ ಮಾಡದ, ಯಾರಿಗೂ ಉಪಕಾರಿಯಲ್ಲದ ಒಬ್ಬ ವ್ಯಕ್ತಿಯನ್ನು ಕರೆತಂದು ಈತ ಯಾರಿಗೂ ಮೋಸ ಮಾಡಿಲ್ಲ ಅಂತ ಸನ್ಮಾನ ಮಾಡಲಾದೀತೆ, ಇದೂ ಹಾಗೆ ಅಲ್ಲವಾ?
ಹೆಂಡತಿಗೆ ನಾನು ಬಡಿಯುವುದಿಲ್ಲ ಎಂಬುದೊಂದು ಹೆಗ್ಗಳಿಕೆಯಾ? ಅಸಲಿಗೆ ಬಡಿಯುವಂಥ ಕ್ರೂರ ಮೃಗ ನೀನಾಗಲು ಸಾಧ್ಯವಾ, ವರದಕ್ಷಿಣೆಗಾಗಿ ಹೆಂಡತಿಯನ್ನು ಪೀಡಿಸುವ ಮನುಷ್ಯ ಎಷ್ಟು ಮೂರ್ಖನೋ, ವರದಕ್ಷಿಣೆ ಕೇಳಿಲ್ಲದ್ದಕ್ಕೆ ಬಡಾಯಿ ಕೊಚ್ಚಿಕೊಳ್ಳುವವನೂ ಅಷ್ಟೇ ಮೂರ್ಖನಾಗಿರುತ್ತಾನೆ. ಹೆಂಡತಿಯನ್ನು ಹಿಡಿದು ಬಡಿಯುವವನಂತೆಯೇ, ತಾನು ಬಡಿಯುವುದಿಲ್ಲವೆಂದು ಹೇಳಿಕೊಳ್ಳುವವನೂ ಸಣ್ಣವನಾಗುತ್ತಾನೆ. ನಮ್ಮನ್ನು ನಾವು ಯಾರೊಂದಿಗೆ ಹೋಲಿಸಿಕೊಳ್ಳುತ್ತೇವೆ ಎಂಬುದೂ ಬಹಳಷ್ಟು ಬಾರಿ ನಮ್ಮ ಯೋಗ್ಯತೆಗಳನ್ನು ನಿರ್ಧರಿಸುತ್ತವೆ.
(-ದರ್ಶನ್ ಆರಾಧ್ಯ, ಪತ್ರಕರ್ತರು, ಬೆಂಗಳೂರು)

ಭಾವ ಭೈರಾಗಿ
ಕವಿತೆ | ಬುದ್ಧ ನಗುತ್ತಾನೆ..!

- ರಶ್ಮಿಪ್ರಸಾದ್ (ರಾಶಿ)
ಬೋಧಿವೃಕ್ಷದಡಿಯಲಿ ಕುಳಿತು
ಬೋಧನೆಯ ನೆಲೆಯಲಿ ನಿಂತರಷ್ಟೇ
ನಿನ್ನಂತಾಗುವೆವೆಂಬ ಮೌಢ್ಯವ ಕಂಡು
ಬುದ್ಧ ಇನ್ನೂ ನಗುತ್ತಲೇ ಇದ್ದಾನೆ…
ನಮ್ಮೊಳಗೆಂದೂ ನೀನಿಲ್ಲ ಬುದ್ಧ.!
ಸಕಲವೈಭೋಗಗಳನೂ ತ್ಯಜಿಸಿ
ಮೋಹದಾ ಸೆಲೆಯನು ತೊರೆದರಷ್ಟೇ
ನಿನ್ನಂತಾಗುವೆವೆಂಬ ಭ್ರಮೆಯ ಕಂಡು
ಬುದ್ಧ ಇನ್ನೂ ನಗುತ್ತಲೇ ಇದ್ದಾನೆ…
ನಮ್ಮೊಳಗೆಂದೂ ನೀನಿಲ್ಲ ಬುದ್ಧ.!
ಭೋಗ,ರಾಗದ ತತ್ವವಷ್ಟೇ ಅರಿತು
ತ್ಯಾಗ,ವಿರಾಗದ ಮಹತ್ವವನ್ನೇ ಮರೆತು
ನಿನ್ನಂತೆ ನಗುವುದಿಲ್ಲವೆಂಬ ಸತ್ಯವ ಕಂಡು
ಬುದ್ಧ ಇನ್ನೂ ಮುಗುಳ್ನಗುತ್ತಲೇ ಇದ್ದಾನೆ…
ನಿಜಕ್ಕೂ ನಮ್ಮೊಳಗೆಂದೂ ನೀನಿಲ್ಲ ಬುದ್ಧ.!
ನಿನ್ನ ಹೆಸರಷ್ಟೇ ಉಚ್ಛರಿಸುವೆವು ನಾವು
ನಿನ್ನ ತತ್ವಗಳ ಪಾಲಿಸಲೇ ಇಲ್ಲ ನಾವು
ನಿನ್ನ ಉಪದೇಶವ ಪಠಿಸಲಿಲ್ಲ ನಾವು
ನಿನ್ನ ವೇದಾಂತವೆಂದೂ ಅನುಸರಿಸಲಿಲ್ಲ ನಾವು
ನಿನ್ನಂತೆ ಎಂದಿಗೂ ಆಗಲೇ ಇಲ್ಲ ನಾವು.!
ಮತ್ತೇ ನೀನೇ ಹುಟ್ಟಿಬರಬೇಕು ಬುದ್ಧ
ನಮ್ಮೊಳಗೆ ಜ್ಞಾನೋದಯದ ಬೆಳಕು ಚೆಲ್ಲಲು
ನಮ್ಮೊಳಗೆ ಬೌದ್ಧತ್ವದ ಠಾವು ಮೂಡಲು
ನಮ್ಮೊಳಗೆ ಶಾಂತಿ ಮಂತ್ರದ ತಪನೆಯಾಗಲು
ನಮ್ಮೊಳಗೆ ನಮ್ಮನ್ನೇ ಕಂಡುಕೊಳ್ಳಲು.!
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ನಿನ್ನ ಮಗನ ಕೊಂದರು…

- ಮೂಲ : ಬ್ರೆಕ್ಟ್, ಅನುವಾದ : ಸಿದ್ಧಲಿಂಗಯ್ಯ
“ಓ ಗೆಳತಿ ವ್ಲಾಸೋವ ನಿನ್ನ ಮಗನ ಕೊಂದರು
ಹೋರಾಟದ ಜೀವಿ ಒಡನಾಡಿ ಬಂಧುವನ್ನು
ನಿನ್ನ ಮಗನ ಕೊಂದರು.
ಅವನಂಥ ಮೈಕೈಗಳು ಕಟ್ಟಿದಂಥ ಗ್ವಾಡೆ ತಾವು
ಬಿಸಿಲೇರದ ಬೆಳಗಿನಲ್ಲಿ ನಿನ್ನ ಮಗನ ಕೊಂದರು
ಬೆವರ ಬಸಿದ ಅವನ ಎದೆಗೆ ಗುರಿಯಿಟ್ಟರು
ಗುಂಡಿಕ್ಕಿದರು.
ಗುಂಡೊಂದು ಕಾಣಲಿಲ್ಲ ಕೊಲೆಗಡುಕರ ಕೆಲಸವೆಲ್ಲ
ಸತ್ತ ಮಗನ ಕಣ್ಣಿನಲ್ಲಿ ಮಿಂಚಿಮಾಯವಾಯಿತು
ಹೊರಗಿನವರು ಕೊಲ್ಲಲಿಲ್ಲ ಎಲ್ಲ ಇವನ ಬಂಧುಬಳಗ
ನೆರೆಹೊರೆಯವರು
ಸುತ್ತಿದಂಥ ಸರಪಳಿಯಲಿ ಧರಧರಧರ ಎಳೆಯುವಾಗ
ಕ್ರಾಂತಿವೀರರೆಲ್ಲ ಬಂದು ಮುತ್ತಿಕೊಂಡರು.
ಗಿಟುಕಾಸಿದ ಗಿರಣಿಗಳು ಚಿಮಣಿ ಹೊತ್ತು ನಿಂತಿದ್ದೊ
ಅವನ ಕಾಲ ಮಿಂಚಿತ್ತು ಹೊಳೆಯಿತೇನೊ ಮನಸಿಗೆ
ಶೂನ್ಯವಾದ ಗಿರಣಿಗಳಲಿ ದಿನದಿನಕ್ಕೂ ಬೆಳೆಯುವಂಥ
ಬೆಟ್ಟದಂಥ ಶಕ್ತಿಯೊಂದು ಕಂಡಿತವನ ಕಣ್ಣಿಗೆ
ತೊಟ್ಟಿಕ್ಕಿತು ಕಣ್ಣೀರು ಹೋದನವನು ಮಣ್ಣಿಗೆ
ಓ ಗೆಳತಿ ವ್ಲಾಸೋವ ನಿನ್ನ ಮಗನ ಕೊಂದರು
ಹೋರಾಟದ ಜೀವಿಯನ್ನು ಒಡನಾಡಿ ಬಂಧುವನ್ನು
ನಿನ್ನ ಮಗನ ಕೊಂದರು.”
ಸುದ್ದಿದಿನ|ವಾಟ್ಸಾಪ್|9980346243

ಭಾವ ಭೈರಾಗಿ
ಕತೆ | ಮತ್ತೆ ಮಳೆ

- ಜಿ. ಹರೀಶ್ ಬೇದ್ರೆ
ಒಂದು ಊಟ ತಂದುಕೊಡೊಕೆ ಎರಡು ಗುಂಟೆ ಬೇಕಾ?
ಸರ್, ಜೋರಾಗಿ ಮಳೆ ಬರುತ್ತಿದೆ.,. ಹಾಗಾಗಿ…
ಅದಕ್ಕಂತ ಎಕ್ಸ್ಟ್ರಾ ದುಡ್ಡು ತೆಗೆದುಕೊಂಡಿಲ್ವಾ, ತಗೊಂಡ ಮೇಲೆ ಸರಿಯಾದ ಟೈಮಿಗೆ ಬರಬೇಕು.
ಸರಿಯಾಗಿ ಕೆಲಸ ಮಾಡೊ ಯೋಗ್ಯತೆ ಇಲ್ಲದ ಮೇಲೆ ಇಂತ ಕೆಲಸಕ್ಕೆ ಬರಬಾರದು. ಆ ಪಾರ್ಸೆಲ್ ಕೊಡು ಎಂದು ಡೆಲಿವರಿ ಬಾಯ್ ಕೊಡುವ ಮುನ್ನವೇ ಅವನ ಕೈಯಿಂದ ಪಾರ್ಸೆಲ್ ಕಿತ್ತುಕೊಂಡು, ಕೆಟ್ಟದಾಗಿ ಬೈಯುತ್ತಾ ಆ ವ್ಯಕ್ತಿ ಮನೆಯೊಳಗೆ ಹೋದ.
ಗಿರೀಶ್ ಸ್ವಿಗ್ಗಿಯಲ್ಲಿ ಡೆಲಿವರಿ ಬಾಯಾಗಿ ಕೆಲಸಕ್ಕೆ ಸೇರಿಕೊಂಡು ಒಂದು ವರ್ಷದ ಮೇಲಾಗಿದೆ. ಎಲ್ಲೋ ಅಪರೂಪಕ್ಕೆ ಒಮ್ಮೆ ತಡವಾದಾಗ ಯಾಕಪ್ಪಾ ಲೇಟ್ ಎಂದು ಮಾಮೂಲಿಯಂತೆ ಕೇಳಿದ್ದಿದೆ. ಯಾರೂ ಇಂದಿನಂತೆ ಬೈದಿರಲಿಲ್ಲ. ಇದು ಗಿರೀಶನ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತಾದರೂ . ಪಾಪ ತುಂಬಾ ಹಸಿದಿದ್ದರೇನೊ ಅದಕ್ಕೆ ಹಾಗೆ ಮಾತನಾಡಿರಬೇಕು ಹೋಗಲಿ ಬಿಡು ಎಂದುಕೊಂಡರೂ ಮನಸ್ಸು ಸಮಾಧಾನವಾಗಲಿಲ್ಲ.
ಶಿವಮೊಗ್ಗದಲ್ಲಿ ಆಷಾಢ ಆರಂಭವಾದ ಮೊದಲನೇ ದಿನದಿಂದಲೇ ಆರಂಭವಾದ ಮಳೆ ಹದಿನೈದು ದಿನಗಳಾದರೂ ಬಿಡದೆ ಸುರಿಯುತ್ತಿತ್ತು. ಈ ದಿನವಂತೂ ವರುಣದೇವ, ಭೂತಾಯಿಯ ಮೇಲೆ ಇನ್ನಿಲ್ಲದಂತೆ ದೌರ್ಜನ್ಯ ನಡೆಸುತ್ತಿರುವ ಮನುಷ್ಯರಿಗೆ ಸರಿಯಾದ ಪಾಠ ಕಲಿಸಲೇಬೇಕೆಂಬ ಹಠಕ್ಕೆ ಬಿದ್ದವನಂತೆ ರುದ್ರರೂಪ ತಾಳಿದ್ದ. ಜೋರಾದ ಮಳೆಯ ಜೊತೆಗೆ ಗುಡುಗು ಸಿಡಿಲಿನ ಆರ್ಭಟವೂ ಜಾಸ್ತಿಯಾಗಿತ್ತು. ಬರಿಯ ಮಳೆಯಾಗಿದ್ದರೆ ಗಿರೀಶನಿಗೆ ನಿಗಧಿತ ವೇಳೆಯಲ್ಲಿ ಆರ್ಡರ್ ತಲುಪಿಸಲು ಯಾವ ತೊಂದರೆಯೂ ಇರಲಿಲ್ಲ.
ಆದರೆ ವಿಚಿತ್ರ ಗುಡುಗು ಸಿಡಿಲುಗಳ ಅಬ್ಬರ ಇದ್ದಿದ್ದರಿಂದ ಎರೆಡೆರಡು ಕಡೆ ನಿಂತು ಬರಬೇಕಾಯಿತು. ಊಟದ ಆರ್ಡರ್ ಕೊಟ್ಟ ವ್ಯಕ್ತಿಯ ಮನೆಗೂ ಹೊಟೇಲಿಗೂ ಆರು ಕಿಲೋಮೀಟರ್ ಅಂತರವಿತ್ತು. ಮನೆ ಇದ್ದದ್ದು ಹೊಸ ಬಡಾವಣೆಯಲ್ಲಿ, ಅಲ್ಲಿ ಮನೆಗಳು ವಿರಳ ಹಾಗೂ ನಿಲ್ಲಲು ಎಲ್ಲೂ ಜಾಗ ಇರದ ಕಾರಣ ಒಂದು ಕಡೆ ಸ್ವಲ್ಪ ಜಾಸ್ತಿ ಹೊತ್ತೆ ನಿಂತು ಮಳೆಯ ಆರ್ಭಟ ಕಡಿಮೆಯಾಗಲಿ ಎಂದು ಕಾದಿದ್ದ. ಅದೇ ತಪ್ಪಾಗಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಳ್ಳುವಂತಾಯಿತು.
ಇದೇ ಯೋಚನೆಯಲ್ಲಿ ನಿಧಾನವಾಗಿ ಬೈಕ್ ಚಲಿಸುತ್ತಾ ಬರುವಾಗ ಮಳೆ ಜೋರಾಗಿ ಪಕ್ಕದಲ್ಲೇ ಸಿಡಿಲು ಬಡಿದ ಅನುಭವವಾಗಿ ಇಹಲೋಕಕ್ಕೆ ಬಂದು ಹತ್ತಿರದಲ್ಲಿ ಎಲ್ಲಾದರೂ ನಿಲ್ಲಲು ಜಾಗ ಇದೇಯೆ ಎಂದು ನೋಡುತ್ತಾ ಬರುವಾಗ ಚಿಕ್ಕದೊಂದು ಮನೆಯಲ್ಲೇ ಅಂಗಡಿ ಮಾಡಿಕೊಂಡಿರುವುದು ಕಣ್ಣಿಗೆ ಬಿತ್ತು. ಸೀದಾ ಅಲ್ಲಿಗೆ ಬಂದು ನಿಂತ. ಅಂಗಡಿಯ ಮುಂಭಾಗದಲ್ಲಿ ಮಳೆ ಬಿಸಿಲಿಗೆ ಅಡ್ಡವಾಗಿ ಏನೂ ಹಾಕಿರದ ಕಾರಣ ನೆನೆಯುವುದು ತಪ್ಪಲಿಲ್ಲ. ಆದರೂ ಅಲ್ಲೇ ನಿಂತಿದ್ದ, ಅಂಗಡಿಯೊಳಗೆ ಇರಚಲು ಬಡಿಯುತ್ತಿದ್ದರಿಂದ ಹೇಳೋಣವೆಂದು ಬಗ್ಗಿ ನೋಡಿದರೆ ಒಳಗಡೆ ಹೆಂಗಸೊಬ್ಬಳು ಕಂಡಳು. ಇವನು ಇರಚಲು ಬಡಿಯುತ್ತಿದೆ ಎಂದು ಕೂಗಿದನ್ನು ಕೇಳಿ ಹೆಂಗಸು ಯಾರೋ ಏನೋ ಕೊಳ್ಳಲು ಬಂದಿರಬೇಕೆಂದು ಬಂದು ಏನು ಬೇಕು ಎಂದು ಕೇಳಿದಳು. ಇವನು ನನಗೇನು ಬೇಡ, ಮಳೆ ಅಂಗಡಿ ಒಳಗೂ ಬಿದ್ದು ಸಾಮಾನುಗಳು ಹಾಳಾಗುತ್ತಿವೆ ಎಂದು ಹೇಳಲು ಕರೆದೆ ಎಂದ.
ಆಗ ಗಮನಿಸಿದ ಹೆಂಗಸು ಹೌದಲ್ಲವೆ ಎಂದು ಬಾಗಿಲು ಮುಂದೆ ಎಳೆದಳು. ಇವನು ಅಲ್ಲಿಯೇ ನಿಂತಿದ್ದನ್ನು ನೋಡಿ, ಒಳಗೆ ಬನ್ನಿ ಎಂದು ಪಕ್ಷದ ಬಾಗಿಲು ತೆರೆದಳು. ಇವನು ಪರವಾಗಿಲ್ಲ ಎಂದು ಹೇಳಲು ಹೊರಟ ಕ್ಷಣದಲ್ಲೇ ಮತ್ತೊಂದು ಸಿಡಿಲು ಬಡಿಯಿತು. ಆಗ ಏನನ್ನು ಹೇಳದೆ ಒಳಹೋಗಿ ಬಾಗಿಲ ಬಳಿಯೇ ನಿಂತು ಮಳೆಯ ನೋಡತೊಡಗಿದ. ಕಣ್ಣು ಮಳೆ ನೋಡುತ್ತಿದ್ದರೆ, ಮನಸು ಬೈದ ವ್ಯಕ್ತಿಯ ಬಗ್ಗೆ ಯೋಚಿಸುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಆ ಅಂಗಡಿಯಾಕೆ ತಿನ್ನಲು ಕಾರಮಂಡಕ್ಕಿ ಕೊಟ್ಟು ಕುಡಿಯಲು ಬಿಸಿಯಾದ ಕಾಫಿ ಕೊಟ್ಟಳು. ಇವನು ಬೇಡ ಎನ್ನದೆ ತಿಂದು, ಕುಡಿದ. ಅಷ್ಟು ಹೊತ್ತಿಗೆ ಮಳೆಯ ರಭಸ ಕಡಿಮೆಯಾದ್ದರಿಂದ ಬರುತ್ತೇನೆ ಎಂದು ಹೇಳಿ ಹೊರಟ.
ಒಂದು ವಾರದ ನಂತರ ಮತ್ತೆ ಅದೇ ಬಡಾವಣೆಗೆ ಹೋಗುವ ಅವಕಾಶ ಸಿಕ್ಕಿತು. ಅಲ್ಲಿಗೆ ಹೋಗುವಾಗ, ತಕ್ಷಣ ಆ ದಿನ ಒಳಕರೆದು ಉಪಚರಿಸಿದ ಹೆಂಗಸಿನ ನೆನಪಾಗಿ, ಬರುವಾಗ ಅವಳನ್ನು ಮಾತನಾಡಿಸಿಯೇ ಬರುವುದೆಂದು ತೀರ್ಮಾನಿಸಿದ. ದಾರಿಯುದ್ದಕ್ಕೂ ಹೋಗುವಾಗ ಅವಳ ಬಗ್ಗೆ ನೆನಪಿಸಿಕೊಂಡರೆ ಏನೂ ನೆನಪಾಗಲಿಲ್ಲ. ಅವಳು ಹೇಗಿದ್ದಾಳೆ, ಮುಖ ಹೇಗಿದೆ, ತಾನು ತಿಂದಿದ್ದು ಏನು ಏನೊಂದೂ ನೆನಪಾಗಲಿಲ್ಲ. ಆಗ ಆ ಕ್ಷಣದಲ್ಲಿ ಅವನ ಮನಸ್ಸು ಪೂರ್ತಿ ಬೈದ ವ್ಯಕ್ತಿಯ ಬಗ್ಗೆಯೆ ಗಿರಕಿ ಹೊಡೆಯುತ್ತಿದ್ದರಿಂರ ಬೇರೆ ಕಡೆ ಗಮನ ಹೋಗಿರಲಿಲ್ಲ.
ಇಂದು ಬಂದಾಗ ನೋಡಿದರೆ ಅದೊಂದು ಪುಟ್ಟ ಅಂಗಡಿ. ಅಲ್ಲಿ ಬೀಡಿ ಸಿಗರೇಟು ತಂಬಾಕು, ಎಲೆ ಅಡಿಕೆ, ಸ್ವಲ್ಪ ಕುರುಕಲು ತಿಂಡಿಗಳ ಜೊತೆಗೆ ಕಾರಮಂಡಕ್ಕಿ, ಮಿರ್ಚಿ ಮಾತ್ರ ಸಿಗುತ್ತಿತ್ತು. ಮೂವತ್ತರ ಆಸುಪಾಸಿನ ಮಹಿಳೆ ಅದನ್ನು ನಡೆಸುತ್ತಿದ್ದಳು. ಇವನನ್ನು ನೋಡಿದ ಆ ಮಹಿಳೆ ಹಿಂದಿನ ಗುರುತು ಹಿಡಿಯದೆ ಏನು ಬೇಕು ಎಂದು ಕೇಳಿದಳು. ಅದಕ್ಕೆ ಗಿರೀಶ್ ಅಂದಿನ ಘಟನೆ ವಿವರಿಸಿ, ನೀವೇ ಅಲ್ಲವೇ ಇದ್ದಿದ್ದು ಎಂದ. ಹೌದು, ಆದರೆ ಅವತ್ತು ನೀವು ರೈನ್ ಕೋಟ್, ಹೆಲ್ಮೆಟ್ ಹಾಕಿದ್ದರಿಂದ ಗೊತ್ತಾಗಲಿಲ್ಲ ಎಂದಳು.
ಅವಳ ಹಾಗೂ ಅಂಗಡಿಯ ಪರಿಸ್ಥಿತಿ ನೋಡಿದಾಗ, ಅಂದು ತಾನು ದುಡ್ಡು ಕೊಡದೆ ಹೋಗಿದ್ದು ತಪ್ಪಾಯಿತು ಎನಿಸಿ, ಅವತ್ತು ಯಾವುದೋ ಮೂಡಲ್ಲಿ ಹಣ ಕೊಡಲಿಲ್ಲ, ಎಷ್ಟಾಗಿತ್ತು ಎಂದ. ಅದಕ್ಕವಳು ಬೇಡ ಎಂದು ಹಣ ಪಡೆಯಲಿಲ್ಲ. ಅಂದಿನಿಂದ ಗಿರೀಶ್ ಆ ಕಡೆ ಹೋದಾಗಲೆಲ್ಲಾ ತಪ್ಪದೇ ಈ ಅಂಗಡಿಗೆ ಬಂದು ಹಣ ಕೊಟ್ಟು ಕಾಫಿ ಕುಡಿದು ನಾಲ್ಕು ಮಾತನಾಡಿ ಹೋಗುತ್ತಿದ್ದ. ಯಾವಾಗ ಬಂದರೂ ಅಲ್ಲಿ ಆ ಹೆಂಗಸು ಮತ್ತು ಎರಡು ಮೂರು ವರ್ಷದ ಮಗು ಮಾತ್ರ ಇರುವುದನ್ನು ಗಮನಿಸಿ, ಕುತೂಹಲ ತಡೆಯಲಾರದೆ, ಮನೆಯಲ್ಲಿ ಮತ್ತೆ ಯಾರಿದ್ದಾರೆ ಎಂದು ಕೇಳಿದ. ಅದಕ್ಕವಳು ನಾನು ನನ್ನ ಮಗಳು ಇಬ್ಬರೇ ಎಂದಳು. ಏಕೆ ಎಂದಾಗ, ವರ್ಷದ ಹಿಂದೆ ನನ್ನ ಯಜಮಾನರು ಕೊವಿಡ್ ನಿಂದ ಹೋದರು ಹಾಗಾಗಿ ಎಂದಳು. ಇವನು ಮತ್ತೆ ಏನನ್ನು ಕೇಳಲಿಲ್ಲ.. ನಂತರ ತಿಳಿದಿದ್ದೆಂದರೆ, ಗಂಡ ಇರುವವರೆಗೂ ಅವನ ಕುಟುಂಬದವರೊಂದಿಗೆ ಬದುಕು ಚೆನ್ನಾಗಿಯೇ ಇತ್ತು. ಆತ ಹೋದನಂತರ ಆಸ್ತಿಯ ಸಲುವಾಗಿ, ಇವಳಿಗೆ ಈ ಪುಟ್ಟ ಮನೆ, ನಾಲ್ಕು ಬಿಡಿಗಾಸು ಕೊಟ್ಟು ಹೊರಹಾಕಿದ್ದಾರೆಂದು.
ಇವಳು ತನ್ನ ಮನೆಯವರಿಗೆ ಹೊರೆಯಾಗಬಾರದೆಂದು ಇಲ್ಲಿಗೆ ಮಗಳೊಂದಿಗೆ ಬಂದು ಬದುಕು ಕಟ್ಟೀಕೊಂಡಿದ್ದಾಳೆ ಎಂದು.
ಅದೊಂದು ದಿನ ಗಿರೀಶನಿಗೆ, ಆತನ ತಂದೆಗೆ ಹುಷಾರಿಲ್ಲ ಎಂದು ಕರೆ ಬಂದು ಊರಿಗೆ ಹೋದ. ಅಲ್ಲಿಗೆ ಹೋದ ಎರಡನೆ ದಿನ ತಾಯಿ, ಗಿರೀಶನನ್ನು ಕೂರಿಸಿಕೊಂಡು, ಆದದ್ದು ಆಗಿ ಹೋಯಿತು. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ನೀನೂ ಕೊರಗುತ್ತಾ ನಮಗೂ ಕೊರಗುವಂತೆ ಏಕೆ ಮಾಡ್ತಿಯಾ? ನಿನ್ನ ತಂದೆ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಹೀಗಾಗಿರುವುದು ಎಂದು ಹೇಳುವಾಗಲೇ ಗಿರೀಶನ ಗೆಳೆಯನು ಬಂದ.
ಅವನು ಗಿರೀಶನನ್ನು ಹೊರಗೆ ಕರೆದುಕೊಂಡು ಹೋಗಿ, ನೋಡು ನಿನಗೇನು ಮಹಾ ವಯಸ್ಸಾಗಿಲ್ಲ, ಮೊದಲನೇ ಸಂಬಂಧ ಅಲ್ಲದಿದ್ದರೂ ಎರಡನೇ ಸಂಬಂಧವಾದರೂ ನೋಡು. ಅವರಿಗೂ ಒಂದು ಬದುಕು ಸಿಗುತ್ತದೆ, ನಿನ್ನ ಬದುಕಿಗೂ ಆಧಾರ ಸಿಕ್ಕಂತೆ ಆಗುತ್ತದೆ. ಜೊತೆಗೆ ನಿನ್ನ ತಂದೆ ತಾಯಿಗೆ ನೆಮ್ಮದಿ ಸಿಗುತ್ತದೆ ಯೋಚಿಸು ಎಂದ.
ಗಿರೀಶನಿಗೆ ಈಗ ಮೂವತ್ತೈದು ವರ್ಷ, ಅವನಿಗೆ ಮದುವೆಯಾಗಿ ಆರು ವರ್ಷವಾದರೂ ಮಕ್ಕಳಾಗಿರಲಿಲ್ಲ. ಅದಕ್ಕಾಗಿ ಹರಕೆ ಹೊತ್ತು ತೀರಿಸಲು ತನ್ನ ಊರಿಂದ ಹದಿನೈದು ಕಿಲೋಮೀಟರ್ ದೂರದಲ್ಲಿ ಇರುವ ಮನೆದೇವರಿಗೆ ಬೈಕಿನಲ್ಲಿ ಹೆಂಡತಿಯೊಂದಿಗೆ ಹೋಗುವಾಗ, ಎದುರಿನಿಂದ ವೇಗವಾಗಿ ಬಂದ ವಾಹನದಿಂದ ತಪ್ಪಿಸಿಕೊಳ್ಳಲು ಹೋಗಿ, ಬೈಕ್ ಸಮೇತ ಕೆರೆಯಲ್ಲಿ ಬಿದ್ದಿದ್ದರು.
ಅಲ್ಪಸ್ವಲ್ಪ ಈಜು ಬರುತ್ತಿದ್ದ ಗಿರೀಶ್ ಕಷ್ಟಪಟ್ಟು ದಡ ಸೇರಿದ. ಆದರೆ ಆತನ ಹೆಂಡತಿ ಬದುಕಿ ಉಳಿಯಲಿಲ್ಲ. ಊರಲ್ಲೇ ಇದ್ದರೆ ಹೆಂಡತಿಯ ನೆನಪು ಬಹಳ ಕಾಡುತ್ತದೆ, ಅವಳ ಸಾವಿಗೆ ತಾನೇ ಕಾರಣ ಎಂದು ಕೊರಗುವಂತೆ ಆಗುತ್ತದೆ ಎನ್ನುವ ಕಾರಣಕ್ಕೆ ತನ್ನ ಊರು ಬಿಟ್ಟು ಶಿವಮೊಗ್ಗ ಸೇರಿದ್ದ. ಇಷ್ಟು ದಿನ ಯಾರು ಏನೇ ಹೇಳಿದ್ದರೂ ಮರುಮದುವೆಯ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಈಗ, ತಂದೆಯ ಅನಾರೋಗ್ಯ, ತಾಯಿಯ ಮಾತು, ಜೊತೆಗೆ ಗೆಳೆಯ, ವಿಧವೆ, ವಿಚ್ಜೇದಿತೆ, ಕೈಲಾಗದವರಿಗೆ ಮದುವೆಯಾಗಿ ಹೊಸ ಬದುಕು ಕೊಡಬಾರದೇಕೆ ಎನ್ನುವ ಮಾತು ಮತ್ತೊಂದು ದಿಕ್ಕಿನಲ್ಲಿ ಯೋಚಿಸುವಂತೆ ಮಾಡಿತು.
ಅದಕ್ಕಾಗಿಯೆ ಗಿರೀಶ್, ಅಪ್ಪ ನನಗೆ ಯೋಚಿಸಲು ಸ್ವಲ್ಪ ದಿನ ಅವಕಾಶ ಕೊಡು ಹೇಳುತ್ತೇನೆ ಎಂದು ಶಿವಮೊಗ್ಗಕ್ಕೆ ಬಂದ. ಅದೇ ದಿನ ಹೊಸ ಬಡಾವಣೆಯ ಆರ್ಡರ್ ಸಿಕ್ಕಿತು. ವಾಡಿಕೆಯಂತೆ ಡೆಲಿವರಿ ಕೊಟ್ಟು ಕಾಫಿ ಕುಡಿಯಲು ಬಂದ. ಅದೇನೋ ಗೊತ್ತಿಲ್ಲ, ಆಂದು ಆ ಅಂಗಡಿಯ ಮಹಿಳೆ ಬಹಳ ವಿಶೇಷವಾಗಿ ಕಂಡಳು. ಸಂಜೆ ಮನೆಗೆ ಬಂದವನು ಏನೋ ಯೋಚಸಿ ಗೆಳೆಯನಿಗೆ ಕರೆ ಮಾಡಿ, ಅಂಗಡಿಯ ಮಹಿಳೆಯ ವಿಷಯವನ್ನು ಅವನಿಗೆ ತಿಳಿಸಿ, ಅವಳು ಒಪ್ಪಿದರೆ ಅವಳಿಗೆ ಮದುವೆಯಾಗಿ, ಅವಳ ಮಗುವಿಗೆ ತಂದೆಯಾಗಲು ಬಯಸಿರುವೆ. ಇದಕ್ಕೆ ಅಪ್ಪ ಅಮ್ಮನ ಒಪ್ಪಿಗೆ ಇದೇಯಾ ನೀನೇ ಕೇಳಿ ತಿಳಿಸು. ಆಮೇಲೆ ನಾನು ಅವಳ ಬಳಿ ಮಾತನಾಡುವೆ ಎಂದ ಗಿರೀಶ್. ಸಮಯ ನೋಡಿ ನಿನ್ನ ತಂದೆ ತಾಯಿಯರ ಜೊತೆ ಮಾತನಾಡಿ ತಿಳಿಸುವೆ ಎಂದ ಗೆಳೆಯ. ಗಿರೀಶ್, ಗೆಳೆಯನಿಂದ ಬರುವ ಕರೆಗೆ ಕಾಯುತ್ತಿದ್ದಾನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಇಲ್ಲಿದೆ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕಂಪ್ಲೀಟ್ ಡೀಟೆಲ್ಸ್
-
ದಿನದ ಸುದ್ದಿ6 days ago
ಐದು ಗ್ಯಾರಂಟಿ | ಫಲಾನುಭವಿಗಳ ಆಯ್ಕೆ ಮಾನದಂಡ
-
ಲೈಫ್ ಸ್ಟೈಲ್4 days ago
ರಣ ಬೇಟೆಗಾರ ‘ಕೆನ್ನಾಯಿ’ ವಿನಾಶವಾದ ಕತೆ..!
-
ದಿನದ ಸುದ್ದಿ6 days ago
ಈ ವರ್ಷವೇ ಚಿತ್ರದುರ್ಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಚಿಂತನೆ : ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
-
ದಿನದ ಸುದ್ದಿ6 days ago
ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಬಿತ್ತನೆ ಬೀಜ ಕೊರತೆಯಾಗದಂತೆ ರಾಜ್ಯಾದ್ಯಂತ ಕ್ರಮ
-
ದಿನದ ಸುದ್ದಿ6 days ago
ಡಿ.ಇ.ಎಲ್.ಇ.ಡಿ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ನಾಳೆ ದಾವಣಗೆರೆಗೆ ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ6 days ago
ದಾವಣಗೆರೆ | ಶತಮಾನದ ಕೆ.ಆರ್.ಪೇಟೆ ಸರ್ಕಾರಿ ಶಾಲೆಗೆ ಡಿಸಿ ಶಿವಾನಂದ ಕಾಪಶಿ ಭೇಟಿ ; ಕಟ್ಟಡದ ಗುಣಮಟ್ಟದ ವರದಿ ನೀಡಲು ಇಂಜಿನಿಯರ್ಗೆ ಸೂಚನೆ