ದಿನದ ಸುದ್ದಿ
ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಹೋರಾಟಗಾರರಿಗೆ ಕೊಲೆ ಬೆದರಿಕೆ ; ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ವಿರುದ್ಧ ದೂರು
ಸುದ್ದಿದಿನ,ಬಳ್ಳಾರಿ : ನಾಯಕ ಪಂಗಡದ ಮ್ಯಾಸಬೇಡ ಬುಡಕಟ್ಟು ಜನರ ಸಂವಿಧಾನ ಬದ್ದ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವವರ ಮೇಲೆ ಕಿರುಕುಳ ಮತ್ತು ಮಾನಸಿಕ ಹಿಂಸೆ ದೌರ್ಜನ್ಯ ಮಾಡಿ ಕೊಲೆ ಬೆದರಿಕೆಯ ಸುಪಾರಿಯನ್ನು ನೀಡಲಾಗಿದ್ದು, ಮೂಲ ಬುಡಕಟ್ಟು ಸಮುದಾಯದ ಮ್ಯಾಸ ಬೇಡರಿಗೆ ಮೋಸ ಮಾಡಿರುವ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಮತ್ತು ಸ್ವಾಮೀಜಿಯ ಸಹಚರರನ್ನು ಕೊಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಕೋರಿ ದೂರು ಮತ್ತು ಮ್ಯಾಸ ಬೇಡ ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರರಿಗೆ ರಕ್ಷಣೆ ಕೊಡಲುಕೋರಿ ಮ್ಯಾಸ ಬೇಡ (ಮ್ಯಾಸ ನಾಯಕ) ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯು ಸೋಮವಾರ ನಗರದ ಐಜಿಪಿ ಎಂ.ನಂಜುಂಡಸ್ವಾಮಿ ಅವರಿಗೆ ದೂರು ಸಲ್ಲಿಸಿತು.
ದೂರಿನಲ್ಲೇನಿದೆ..!
ನಾವು ನಾಯಕ ವಾಲ್ಮೀಕಿ ಪಂಗಡದ ಮ್ಯಾಸ ನಾಯಕ ಬುಡಕಟ್ಟು ಜನಾಂಗಕ್ಕೆ ಸೇರಿರುತ್ತೇವೆ. ಮ್ಯಾಸ ಬೇಡ (ಮ್ಯಾಸ ನಾಯಕ) ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ(ರಿ)ಯಿಂದ ತಮಗೆ ಸಲ್ಲಿಸುತ್ತಿರುವ ದೂರು ಏನಂದರೆ, ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣೆ ಮತ್ತು ಬುಡಕಟ್ಟು ಜನರ ಸಂವಿಧಾನ ಬದ್ಧ ಹಕ್ಕುಗಳ ರಕ್ಷಣೆಗಾಗಿ ನಮ್ಮ ಸಮುದಾಯದ ಹಿರಿಯರು ಸಂಘಟನೆಯನ್ನು ಕಟ್ಟಿರುತ್ತಾರೆ.
ಈ ಸಂಘಟನೆಯಲ್ಲಿ ದೊಡ್ಡಮನಿ ಪ್ರಸಾದ್, ಕಾರ್ಯದರ್ಶಿ ಇರುತ್ತಾರೆ. ಮ್ಯಾಸ ಬೇಡರಿಗೆ ಆಗಿರುವ ಅನ್ಯಾಯದ ವಿರುದ್ಧ ಮತ್ತು ಮ್ಯಾಸ ಬೇಡರ ಸಂವಿಧಾನ ಬದ್ಧ ಹಕ್ಕುಗಳಿಗಾಗಿ ನಮ್ಮ ಸಮಿತಿಯ ವತಿಯಿಂದ ಕಾನೂನು ಚೌಕಟ್ಟಿನ ಅಡಿಯಲ್ಲಿ ಹೋರಾಟಗಳನ್ನು ಮಾಡುತ್ತಿರುವ ನಮ್ಮ ಸಮಿತಿಯ ಸದಸ್ಯರ ಮೇಲೆ ವಾಲ್ಮೀಕಿ ಎಂದು ಹೇಳಿಕೊಳ್ಳುವ ಹರಿಹರ ತಾಲ್ಲೂಕು, ರಾಜನಹಳ್ಳಿ, ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಯು ತನ್ನ ಸಮುದಾಯದ ಸಹಚರರಿಗೆ ಕುಮ್ಮಕ್ಕು ನೀಡಿ ಮ್ಯಾಸ ಬೇಡರ ಹಕ್ಕುಗಳನ್ನು ಹರಣ ಮಾಡುವ ದುರುದ್ದೇಶದಿಂದ ನಮ್ಮ ಮುಖಂಡರ ಮೇಲೆ ಸುಳ್ಳು ದೂರುಗಳನ್ನು ನೀಡುವುದರ ಮೂಲಕ ಬೆದರಿಸಿ ಮಾನಸಿಕ ಮತ್ತು ದೈಹಿಕವಾಗಿ ನಿರಂತರವಾಗಿ ಹಿಂಸೆ ನೀಡುತ್ತಾ ಬಂದಿರುತ್ತಾರೆ.
ನಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಈಗಾಗಲೇ ನಾವು ಸರ್ಕಾರಕ್ಕೂ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ದೂರನ್ನು ನೀಡಿರುತ್ತೇವೆ. ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಪಣಿಯಾಪುರ ಲಿಂಗರಾಜ, ಬಾಲೆನಹಳ್ಳಿ ಕೆಂಚನಗೌಡ, ದಾವಣಗೆರೆಯ ಆಂಜನೇಯ ಗುರುಜೀ, ಗುಮ್ಮನೂರು ಮಲ್ಲಿಕಾರ್ಜುನ, ಇನ್ನೂ ಇತರರು ನಮ್ಮ ಸಮಿತಿಯ ಮುಖಂಡರಿಗೆ ಮಾನಸಿಕ ಹಿಂಸೆಯನ್ನು ನೀಡಿ ದೊಡ್ಡಮನಿ ಪ್ರಸಾದ್ ರವರನ್ನು ಕೊಲೆ ಮಾಡಲು ಸುಫಾರಿ ಕೊಟ್ಟಿರುವ ಗುಮಾನಿಗಳು ಇರುತ್ತವೆ.
ಹಾಗಾಗಿ ಇವರನ್ನು ಕೂಡಲೇ ಬಂಧಿಸಿ ತನಿಖೆಗೆ ಒಳಪಡಿಸಬೇಕು. ಒಂದು ವೇಳೆ ಮ್ಯಾಸ ಬೇಡ ಬುಡಕಟ್ಟು ಸಮುದಾಯದ ಹೋರಾಟಗಾರರಿಗೆ ಜೀವಕ್ಕೆ ಹಾನಿ ಆದಲ್ಲಿಇವರೆ ಕಾರಣರಾಗಿರುತ್ತಾರೆ. ನಾಯ್ಕಡ ಸಮಾನಾರ್ಥಕ ನಾಯಕ ಬೇಡ ವಾಲ್ಮೀಕಿ ಪಂಗಡದ ಹೆಸರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ಮೂಲತ: ಮ್ಯಾಸ ಬ್ಯಾಡ್ರ ಅಥವಾ ಮ್ಯಾಸ ಬೇಡ ಅಥವಾ ಮ್ಯಾಸ ನಾಯಕರು ಅಥವಾ ಮ್ಯಾಸರನ್ನು ಮಾತ್ರ. ‘ನಾಯಕ’ ಎಂಬ ಪದದ ಮೂಲಕ ಕೆಲವು ಜಾತಿಯ ಜನರು ತಮ್ಮನ್ನು ತಳವಾರ, ಊರುನಾಯಕ, ಪರಿವಾರ, ಬಾರ್ಕಿ ಮುಂತಾದ ಹೆಸರುಗಳಿಂದ ಕರೆಯಿಸಿಕೊಳ್ಳುತ್ತಿದ್ದರೂ ಇವರು ಮೂಲತ: ಗಂಗಾಮತ ಅಥವಾ ಅಂಬಿಗ ಅಥವಾ ಬೆಸ್ತ ಜಾತಿಯವರು.
ಇವರಿಗೂ ನಾಯಕ, ಬೇಡ, ವಾಲ್ಮೀಕಿ ಎಂದು ಕರೆಯಿಸಿಕೊಳ್ಳುತ್ತಿರುವ ಮ್ಯಾಸ ನಾಯಕ/ಮ್ಯಾಸ ಬೇಡ/ಮ್ಯಾಸ ಬ್ಯಾಡ್ರು ಪಂಗಡಕ್ಕೂ ಯಾವುದೇ ಸಂಬಂಧವಿಲ್ಲ.D.O. Letter No.8/1/93-SS(Gen) ದಿನಾಂಕ: 29.1.1993 ರಂದು ರಿಜಿಸ್ಟ್ರರ್ ಜನರಲ್ ಆಫ್ ಇಂಡಿಯಾ ವರದಿಯ ಪ್ರಕಾರ ಈ ‘ನಾಯಕ’ ಪಂಗಡದವರು ಮಧ್ಯ ಪ್ರದೇಶದ (ಗೋಂಡವಾನ) ‘ಬಿಲ್’ ಜನಾಂಗವನ್ನು ಹೋಲುತ್ತದೆ ಅವರನ್ನು ಈಗಾಗಲೇ ಎಸ್ ಟಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ ಎಂದು ಹೇಳಿದ್ದಾರೆ. ಮತ್ತು ಕರ್ನಾಟಕದಲ್ಲಿ ನಾಯಕ ಪಂಗಡ, ಮತ್ತು ನಾಯಕ ಜಾತಿ ಎಂದು ಎರಡು ವಿಧವಾದ ನಾಯಕ ಜನಾಂಗಗಳಿವೆ ಎಂದು ಹೇಳಿರುವುದು ಸತ್ಯದ ಸಂಗತಿ.
ಮ್ಯಾಸ ನಾಯಕರು ಇರುವ ಪ್ರದೇಶಗಳಲ್ಲಿ ತಳವಾರರು ತಮ್ಮನ್ನು ಊರುನಾಯಕರು ಎಂದು ಕರೆಯಿಸಿಕೊಳ್ಳುತ್ತಾರೆ. ಆದರೆ ಊರುನಾಯಕ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ ಇವರ ಮೂಲ ತಳವಾರ ಎಂದು ಇರುತ್ತದೆ. ಇದಕ್ಕೆ ಪೂರಕವಾಗಿ ತಳವಾರ ಮತ್ತು ಮ್ಯಾಸ ನಾಯಕರು ಇರುವ ಊರುಗಳ ಬ್ರಿಟಿಷ್ ಲ್ಯಾಂಡ್ ಸೇಟಲ್ ಮೆಂಟ್ ರಿಜಿಸ್ಟ್ರರ್ 1926 ರಲ್ಲಿ ಸ್ಪಷ್ಟವಾಗಿ ತಳವಾರರು ಮತ್ತು ಮ್ಯಾಸ ಬ್ಯಾಡರ ,ಮ್ಯಾಸರು ಎಂದು ಮತ್ತು ಮ್ಯಾಸ ಬ್ಯಾಡ್ರ ಇಲ್ಲದ ಊರುಗಳಲ್ಲಿ ತಳವಾರರು, ತಲಾರಿ ಎಂದು ಸ್ಪಷ್ಟವಾಗಿ ನಮೂದಾಗಿದೆ. ನಂತರ ಬಳ್ಳಾರಿ ಜಿಲ್ಲೆಯಲ್ಲಿ 1950ರಿಂದ 1963ನೇ ಸಾಲಿನಲ್ಲಿ ಶಾಲಾ ದಾಖಲಾತಿಗಳಲ್ಲಿ ತಳವಾರರು ಮತ್ತು ಮ್ಯಾಸ ನಾಯ್ಕರು ಎಂದು ನಮೂದು ಇರುತ್ತವೆ.
ವಾಲ್ಮೀಕಿ ಎಂದು ಬರೆಯುಸುವಂತೆ ಹೇಳಿರುವುದರ ಕುತಂತ್ರದ ಸಲಹೆ ಮೇರೆಗೆ ಮ್ಯಾಸ ನಾಯ್ಕರು ತಮ್ಮ ಜಾತಿ ಕಾಲಂನಲ್ಲಿ ವಾಲ್ಮೀಕಿ ಎಂದು ನಮೂದಿಸಲು ಪ್ರಾರಂಭಿಸಿದರು. ಮ್ಯಾಸ ನಾಯಕರ ರೀತಿಯಲ್ಲಿ ತಳವಾರರು ಸಹ ತಮ್ಮ ಜಾತಿ ಕಾಲಂನಲ್ಲಿ ತಳವಾರ ಬದಲಾಗಿ ವಾಲ್ಮೀಕಿ ಎಂದು ಬರೆಯಿಸುತ್ತಾರೆ. ಮತ್ತು ಮೂಲ ದಾಖಲಾತಿಯಲ್ಲಿ ತಳವಾರ ಎಂದು ಇರುವುದನ್ನು ತಿದ್ದಿ ವಾಲ್ಮೀಕಿ ಎಂದು ಬರೆಸುತ್ತಾರೆ. ಈ ರೀತಿ ದ್ವಂದ್ವ ಮತ್ತು ಗೊಂದಲವನ್ನು ಸೃಷ್ಟಿ ಮಾಡಿರುತ್ತಾರೆ.
1993 ರಿಜಿಸ್ಟ್ರರ್ ಜನರಲ್ ಆಫ್ ಇಂಡಿಯಾ ಯವರ ವರದಿಯಲ್ಲಿ ಪರಿವಾರದವರು ಮೈಸೂರು ಮಹಾರಾಜರ ಕಾಲದಲ್ಲಿ ಸೇವಕಾರಾಗಿದ್ದರು ಮತ್ತು ಇದೊಂದು ಜಾತಿಯಾಗಿರಲಿಲ್ಲ ಕಸುಬು ಆಗಿರುತ್ತದೆ. ತಳವಾರರ ಬಗ್ಗೆಯೂ ಸಹ ತಳವಾರರು ನಾಯಕ ಜನಾಂಗದ ಗುಣಲಕ್ಷಣಗಳನ್ನು ಹೊಂದಿರುವುದಿಲ್ಲ ಇವರು ಗ್ರಾಮದಲ್ಲಿ ಕಾವಲುಗಾರರಾಗಿದ್ದರು ಇವರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಲು ಅರ್ಹವಿರುವ ಯಾವುದೇ ಬುಡಕಟ್ಟು ಲಕ್ಷಣಗಳು ಇರುವುದಿಲ್ಲ ಎಂದು ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು 2004 ರಲ್ಲಿ ಹಿಂದಿರುಗಿಸಿರುತ್ತಾರೆ.
ನಂತರ ರಾಜಕೀಯ ಅಧೀಕಾರವನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ವರದಿಯ ಆಧಾರದ ಮೇಲೆ 2020ರಲ್ಲಿ ಪರಿವಾರ, ತಳವಾರ ಜಾತಿಗಳನ್ನು ನಾಯಕ ಸಮಾನಾರ್ಥಕ ಪದಗಳೆಂದು ಎಸ್ ಟಿ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಅಂದರೆ ಇದರ ಅರ್ಥ ನಾಯಕ ಪಂಗಡದವರಿಗೆ ತಳವಾರ ಮತ್ತು ಪರಿವಾರ ಎಂದು ಕರೆಯುತ್ತಾರೆ ಅಷ್ಟೇ. ಇದು ಮೂಲ ತಳವಾರ ಮತ್ತು ಪರಿವಾರ ಜಾತಿಯವರು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆಂದು ಪರಿಗಣಿಸಲು ಆಗುವುದಿಲ್ಲ.
ಇದು ಹೊಸದಾಗಿ ಒಂದು ಜಾತಿಯವರನ್ನು ಎಸ್.ಟಿ. ಪಟ್ಟಿಯಲ್ಲಿ ಸೇರಿಸಿದಂತೆ ಆಗುವುದಿಲ್ಲ. ಇದು ಮೂಲ ತಳವಾರ ಪರಿವಾರ ಜಾತಿಯವರಿಗೆʼ ನಾಯಕ ಬುಡಕಟ್ಟಿನವರೆಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯಲು ಅನುಕೂಲವಾಗುತ್ತದೆ ಅಷ್ಟೇ. ಈಗಾಗಲೇ ಪರಿಶಿಷ್ಟ ಪಂಗಡದ ನಾಯಕರಿಗೆ ತಳವಾರ ಪರಿವಾರದವರೆಂದು ಕರೆಯುತ್ತಾರೆ ಎಂದು ಶಾಸನ ಮಾಡಿದರೆ ಈ ಹೆಸರುಗಳು ಮಾತ್ರ ಎಸ್ ಟಿ ಪಟ್ಟಿಯಲ್ಲಿರುತ್ತವೆ ಆದರೆ ಈ ಜಾತಿಯವರಲ್ಲ.
ಉದಾಹರಣೆ:- ತಿಮ್ಮಪ್ಪ ಎಂಬ ಧನಿಕನಿಗೆ ಮೂರು ಜನ ಮಕ್ಕಳಿರುತ್ತಾರೆ. ಕಲ್ಲಪ್ಪ ಎಂಬಇನ್ನೊಬ್ಬನಿಗೂ ಮೂರು ಜನ ಮಕ್ಕಳಿರುತ್ತಾರೆ. ತಿಮ್ಮಪ್ಪನಿಗೆ ಕಲ್ಲಪ್ಪ ಎಂದೂ ಕರೆಯುತ್ತಾರೆ ಎಂದರೆ, ತಿಮ್ಮಪ್ಜನ ಆಸ್ತಿಯಲ್ಲಿ ಕಲ್ಲಪ್ಪನ ಮಕ್ಕಳಿಗೆ ಪಾಲುಸಿಗುತ್ತದೆಯೇ? ಇದು ತಳವಾರ ಪರಿವಾರ ಜಾತಿಯವರ ಪರಿಸ್ಥಿತಿ. ಆದ್ದರಿಂದ ಮೂಲ ತಳವಾರ ಪರಿವಾರ ಜಾತಿ ಜನಾಂಗವು ಎಸ್ಟಿ ಪಟ್ಟಿಯಲ್ಲಿ ಇಲ್ಲ. ತಳವಾರ ಪರಿವಾರ ಜಾತಿಯವರು ಬುಡಕಟ್ಟು ಜನರೇ ಅಲ್ಲ.
ಕನ್ನಡ ವಿಶ್ವ ವಿದ್ಯಾಲಯದಲ್ಲಿರುವ ತಳವಾರ ಅಥಾವ ತಲಾರಿ ಜಾತಿಯ ಪ್ರಧ್ಯಾಪಕ ಮಂಜುನಾಥ ಬೇವಿನಕಟ್ಟಿ ಮ್ಯಾಸ ನಾಯಕರನ್ನು ಅವಹೇಳನ ಮಾಡುವ ಪುಸ್ತಕಗಳನ್ನು ಬರೆಯಿಸುತ್ತಾರೆ. ಎಂ.ಪಿ.ವೀಣಾ ಎಂಬುವರು ಮನೆ ಸಮಾಜ ಸಂಸ್ಕೃತಿ ಮ್ಯಾಸ ನಾಯಕರು ಹಾಗೂ ಊರುನಾಯಕರು ಅಧ್ಯಾಯನ ಎಂಬ ತಮ್ಮ ಎಂಪಿಲ್ ಪ್ರಬಂಧದಲ್ಲಿ ಈ ರೀತಿ ಬರೆದಿರುತ್ತಾರೆ:-ವಾಲ್ಮೀಕಿಯು ಒಮ್ಮೆ ಬೇಟೆಗೆ ಹೋಗಿದ್ದಾಗ ಕಾಡಿನಲ್ಲಿ ಸುಂದರವಾದ ಬೇಡತಿಯನ್ನು ಮೋಹಿಸಿದನಂತೆ. ಈ ಬೇಡತಿಗೆ ಅಡವಿಯಲ್ಲಿ ಹುಟ್ಟಿದ ಮಕ್ಕಳು ಮ್ಯಾಸರಂತೆ.
ಊರಿನಲ್ಲಿ ವಾಲ್ಮೀಕಿ ಹೆಂಡತಿಗೆ ಹುಟ್ಟಿದ ಮಕ್ಕಳು ಊರುನಾಯಕರಂತೆ“ (ಒಂದೆ ತಂದೆಗೆ ಹೆಂಡತಿಯಲ್ಲಿ ಹುಟ್ಟಿದವರು ಊರ ಬೇಡರು, ಸೂಳೆಗೆ ಹುಟ್ಟಿದವರು ಮ್ಯಾಸ ಬೇಡರು) ಎಂದು ಅವಹೇಳನ ಮಾಡಿ ನಮ್ಮ ಮ್ಯಾಸ ಬೇಡ ಬುಡಕಟ್ಟು ಜನಾಂಗವನ್ನು ಶೋಷಣೆ ಮಾಡಿರುತ್ತಾರೆ. ಅವಹೇಳನ ಮಾಡಿರುವದರ ವಿರುದ್ದವಾಗಿ ಸರ್ಕಾರಕ್ಕೆ ಮತ್ತು ಕನ್ನಡ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದು ಕ್ರಮಕೈಗೊಳ್ಳುವಂತೆ ಕೋರಿರುತ್ತೇವೆ. ಕನ್ನಡ ವಿಶ್ವವಿದ್ಯಾಲಯವು ಇವರ ಮೇಲೆ ಕ್ರಮಕೈಗೊಂಡಿರುತ್ತದೆ.
ನಂತರ ಮೂಲ ಲೇಖಕರು ಮ್ಯಾಸ ಬೇಡ ಸಮುದಾಯಕ್ಕೆ ವಿಷಾದವನ್ನು ವ್ಯಕ್ತಪಡಿಸಿ ಕನ್ನಡ ವಿವಿಗೆ ಪತ್ರ ಬರೆದಿರುತ್ತಾರೆ. ಮೂಲ ಬುಡಕಟ್ಟು ಹಿನ್ನೆಲೆಯನ್ನು ಹೊಂದಿರುವ ಮ್ಯಾಸ ಬೇಡರನ್ನು ಒಗ್ಗೂಡದಂತೆ ಮಾಡಲು ಮತ್ತು ಅವರನ್ನು ತಳವಾರ ಪರಿವಾರದ ಜೊತೆ ಹೊಂದಾಣಿಕೆ ಮಾಡಲು ಮತ್ತು ಮ್ಯಾಸ ಬೇಡರ ಅನಾದಿಕಾಲದಿಂದ ಉಳಿಸಿಕೊಂಡು ಬಂದಿರುವ ಬುಡಕಟ್ಟು ಸಂಸ್ಕೃತಿಯನ್ನು ನಾಶ ಮಾಡಲು ಹಾಗೂ ಮ್ಯಾಸ ಬೇಡರ ಹಕ್ಕುಗಳನ್ನು ಕದಿಯುವ ವಂಚಿಸುವ ಉದ್ದೇಶದಿಂದ ತಳವಾರರು 1998 ರಲ್ಲಿ ರಾಜನಹಳ್ಳಿಯಲ್ಲಿ ಶ್ರೀ ಮಹರ್ಷ ವಾಲ್ಮೀಕಿ ಮಠವನ್ನು ಮ್ಯಾಸ ನಾಯಕರ ಹಿರಿಯರಾದ ಮಾಜಿ ಮಂತ್ರಿಗಳು ದಿ.ಶ್ರೀತಿಪ್ಪೇಸ್ವಾಮಿ, ಚಳ್ಳಕೆರೆ ಮತ್ತು ಮಾಜಿ ಶಾಸಕರುಗಳಾದ ಎನ.ಟಿ.ಬೊಮ್ಮಣ್ಣ, ಎಂ.ಬಸಪ್ಪರವರು ನೇತೃತ್ವದಲ್ಲಿ ಸ್ಥಾಪಿಸಿಕೊಂಡು ಮಠ ಅಭಿವೃದ್ದಿಯಾಗುವವರೆಗೂ ಮ್ಯಾಸ ಬೇಡ ಮುಖಂಡರ ನಿಯಂತ್ರಣದಲ್ಲಿ ಇದ್ದ ವಾಲ್ಮೀಕಿ ಮಠ ಈಗ ಮಠದ ಸಂಪೂರ್ಣ ಆಡಳಿತ ತಳವಾರ ಪರಿವಾರದವರ ನಿಯಂತ್ರಣದಲ್ಲಿರುತ್ತದೆ.
ಈ ರಾಜನಹಳ್ಳಿ ವಾಲ್ಮೀಕಿ ಮಠ ಮ್ಯಾಸ ಬೇಡರ ಹಕ್ಕುಗಳನ್ನು ಕದಿಯಲು ಹಾಕಿರುವ ಬಲೆಯಾಗಿದೆ. ದಿನಾಂಕ:-28-04-2016ರಂದು ಶ್ರೀಪ್ರಸನ್ನಾನಂದಪುರಿಸ್ವಾಮೀಜಿ ಹೊಂಬಳಗಟ್ಟಿಗ್ರಾಮಕ್ಕೆ ಬಂದಾಗ ಬೇವಿನಕಟ್ಟಿಯವರು ಮ್ಯಾಸಬೇಡರ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದಾರೆ ಅದರ ಬಗ್ಗೆ ನೀವು ಏನು ಕ್ರಮ ಕೈಗೊಂಡಿರುವಿರಿ ಎಂದು ನಮ್ಮ ಮ್ಯಾಸ ಬೇಡರು ಕೇಳಿರುತ್ತಾರೆ. ಆಗ ಸ್ವಾಮೀಜಿ ಇದು ನನಗೆ ಗೊತ್ತಿಲ್ಲ, ಇದರ ಬಗ್ಗೆ ಯಾರು ನನಗೆ ಹೇಳಿಲ್ಲ ಎಂದು ಹಾರಿಕೆಯ ಉತ್ತರವನ್ನು ನೀಡಿದ್ದು ಇರುತ್ತದೆ.
ನಂತರ ಮ್ಯಾಸ ನಾಯಕರ ಐತಿಹಾಸಿಕ ಹಿನ್ನೇಲೆಯನ್ನು ಹೇಳುವುದರ ಮೂಲಕ “ಏ ಇಲ್ಲಿ ಕೇಳ್ರೊ ಇವತ್ತು ಎಸ್ ಟಿ ಗೆ ಸೇರಿದ್ದು ಯಾರಿಂದ ಊರುನಾಯಕರಿಂದ ಅಲ್ಲ, ಮ್ಯಾಸ ನಾಯಕರನ್ನ ಹಿಡುಕೊಂಡು ಊರುನಾಯಕರು ಎಸ್ ಟಿ ಸೇರಿದ್ದುʼ ಎಂದು ಹೇಳಿದ್ದಾರೆ. ಹಾಗಾದರೆ ನಾಯಕ ಪಂಗಡದ ಮೂಲ ಬುಡಕಟ್ಟು ಜನಾಂಗದ ಸಮನಾರ್ಥಕ ಪದವನ್ನುಕೇಂದ್ರ ಸರ್ಕಾರದ ಜಾತಿಪಟ್ಟಿಯಲ್ಲಿ 2011ರ ವರೆಗೂ ಇಲ್ಲದ ಮ್ಯಾಸ ನಾಯಕ ಪದವನ್ನು ದಿನಾಂಕ:16-06-2011ರಂದು ಕೇಂದ್ರದ ಹಿಂದುಳಿದ ಜಾತಿಪಟ್ಟಿಗೆ ಸೇರ್ಪಡೆ ಮಾಡಿ ನಮ್ಮ ಬುಡಕಟ್ಟು ಜನಾಂಗಕ್ಕೆ ಕಾನೂನಿನ ತೊಡಕು ಉಂಟುಮಾಡಿದ್ದು ಈ ರಾಜನಹಳ್ಳಿ ವಾಲ್ಮೀಕಿ ಮಠವೇ.
ಮ್ಯಾಸ ನಾಯಕ ಬುಡಕಟ್ಟಿನ ಕೆಲವು ರಾಜಕಾರಣಿಗಳಿಗೆ ಮತ್ತು ಮುಖಂಡರಿಗೆ ಆಮಿಷ ತೋರಿಸಿ ತಮ್ಮ ಕಡೆ ಸೆಳೆದುಕೊಂಡು ನಮ್ಮಆದಿವಾಸಿಗಳ ಒಗ್ಗಟ್ಟನ್ನು ಹಾಳುಮಾಡಿದ್ದಾರೆ. ಎಲ್ಲಾ ಒಂದೆ ಎಂದು ಸುಳ್ಳು ಹೇಳಿ ನಮಗೆ ಮೋಸ ಮಾಡಿರುತ್ತಾರೆ. 2013ನೇ ಇಸವಿಯ ಕರ್ನಾಟಕ ಬುಡಕಟ್ಟು ಸಚಿತ್ರ ಕೋಶದಲ್ಲಿ ಪರಿವಾರ ತಳವಾರ 1991ರಲ್ಲಿ ಎಸ್ ಟಿ ಸೇರ್ಪಡೆಯಾಗಿದೆ ಎಂದು ಸುಳ್ಳು ಬರೆಸುತ್ತಾರೆ. ವಾಲ್ಮೀಕಿ ಸ್ವಾಮೀಜಿ ಮತ್ತು ಸ್ವಾಮೀಜಿಯ ಸಹಚರರು ಮ್ಯಾಸ ಬೇಡ ಬುಡಕಟ್ಟು ಜನಾಂಗಕ್ಕೆ ಸಂಬಂಧವಿಲ್ಲದವರು.
ಇವರು ರಾಜಕೀಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಸಂವಿಧಾನದ ನಿಯಮಗಳನ್ನು ಮಣ್ಣು ಪಾಲು ಮಾಡಿ ನಮ್ಮ ಬುಡಕಟ್ಟು ಜನಾಂಗದ ಹಣ, ಆಸ್ತಿ ಮತ್ತು ಹೆಸರನ್ನು ಅಕ್ರಮವಾಗಿ ಕಬಳಿಸಿ ವಂಚಿಸಿರುತ್ತಾರೆ.
ನಮಗೆ ಬೆದರಿಸಿ ಎಲ್ಲಾ ಒಂದೆ ಎನ್ನುವುದರ ಮೂಲಕ ಈ ಹಿಂದಿನಿಂದಲೂ ಸುಳ್ಳು ಎಸ್ ಟಿ ಪ್ರಮಾಣ ಪತ್ರಪಡೆದು ಸರ್ಕಾರಕ್ಕೆ ಸಾವಿರಾರು ಕೋಟಿ ವಂಚಿಸಿ ಲಪಾಟಯಿಸಿದ್ದಲ್ಲದೆ, ಅಧಿಕಾರ ದುರ್ಬಳಕೆ ಮಾಡಿಕೊಂಡು ಮೋಸಮಾಡಿ ನಮ್ಮ ಮೇಲೆ ಗುಂಡಾಗಿರಿ ಮತ್ತು ದಬ್ಬಾಳಿಕೆಯನ್ನು ಮತ್ತು ಕೋಲೆಯಂತಹ ಸಂಚುಗಳನ್ನು ರೂಪಿಸಿ ಸುಪಾರಿ ನೀಡುವುದರ ಮೂಲಕ ಕಿರುಕುಳ ಮತ್ತು ಮಾನಸಿಕ ಹಿಂಸೆಯನ್ನು ನೀಡುವ ಇವರ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ಸೂಕ್ತ ಕಾನೂನು ಕ್ರಮಕೈಗೊಂಡು ಮ್ಯಾಸ ಬೇಡ ಮುಖಂಡರಾದ ದೊಡ್ಡಮನಿ ಪ್ರಸಾದ್ ಮತ್ತು ಸಮಿತಿಯ ಸದಸ್ಯರ ಪ್ರಾಣ ರಕ್ಷಣೆ ಮಾಡಬೇಕೆಂದು ಈ ಮೂಲಕ ತಮಗೆ ಈ ದೂರನ್ನು ಸಲ್ಲಿಸುತ್ತಿದ್ದೇವೆ.
ನಮ್ಮ ಸಂವಿಧಾನ ಬದ್ಧ ಹಕ್ಕನ್ನು ನಮ್ಮ ಬುಡಕಟ್ಟು ಸಮುದಾಯದ ಜನರಿಂದ ವಂಚಿಸಿ ನಮ್ಮ ನಾಯಕ ಪಂಗಡದ ಸಮಾನಾರ್ಥಕ ಮ್ಯಾಸ ನಾಯಕ ಪದವನ್ನು ಓಬಿಸಿ ಪಟ್ಟಿಗೆ ಸೇರ್ಪಡೆ ಮಾಡಿ ನಾವೆ ಪರಿಶಿಷ್ಟ ಪಂಗಡದವರೆಂದು ಜಾತಿ ಪ್ರಮಾಣ ಪತ್ರಪಡೆಯುತ್ತಿರುವ ಇವರು ಸಂವಿಧಾನಕ್ಕೆ ವಂಚನೆ ಮಾಡಿದ್ದಾರೆ. ಶೋಷಣೆಯ ಮತ್ತು ಅನ್ಯಾಯದ ವಿರುದ್ಧ ಪ್ರತಿಭಟಿಸುವ ನಮ್ಮ ಸಂವಿಧಾನದ ವಿಧಿ-23, 24 ಮತ್ತು 32 ಪ್ರಕಾರ ನಮಗಿರುವ ಹಕ್ಕುಗಳನ್ನು ಸುಳ್ಳು ದೂರುಗಳನ್ನು ನೀಡಿ ಬೆದರಿಸಿ ಧಮನ ಮಾಡಲು ಪೋಲೀಸ್ ಇಲಾಖೆಯನ್ನು ಮತ್ತು ರಾಜಕೀಯ ಪ್ರಾಭಲ್ಯವನ್ನು ಬಳಸಿಕೊಳ್ಳಲು ಪ್ರಯತ್ನಿಸಿರುತ್ತಾರೆ.
ಆದ್ದರಿಂದ ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮಿ, ಹರಪನಹಳ್ಳಿಯ ಫಣಿಯಾಪುರ ಲಿಂಗರಾಜ, ಬಾಲೆನಹಳ್ಳಿ ಕೆಂಚನಗೌಡ, ದಾವಣಗೆರೆಯ ಆಂಜನೇಯ ಗುರುಜೀ, ಗುಮ್ಮನೂರು ಮಲ್ಲಿಕಾರ್ಜುನ, ಇವರುಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿಸುತ್ತೇವೆ.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಡಾ.ಗೆರೆಗಲ್ಪಾಪಯ್ಯ, ಉಪಾಧ್ಯಕ್ಷರಾದ ಎಂ.ಕೆ.ಬೋಸಪ್ಪ, ಡಾ.ಓಬಳೇಶ್ ಹಾಗೂ ಸಮಿತಿಯ ಸದಸ್ಯರು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ
ಸುದ್ದಿದಿನ,ಚಿತ್ರದುರ್ಗ:ಮಾಜಿ ರಾಜ್ಯಸಭಾ ಸದಸ್ಯರು ಹೆಚ್ ಹನುಮಂತಪ್ಪನವರು (95ವರ್ಷ) ವಯೋಸಹಜ ಅನಾರೋಗ್ಯದಿಂದ ದೈವಧೀನರಾಗಿದ್ದಾರೆ ಎಂದು ಪುತ್ರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೆಚ್ ಮೋಹನ್ ಅವರು ತಿಳಿಸಿದ್ದಾರೆ.
ಅಂತ್ಯಕ್ರಿಯೆಯನ್ನು ನಾಳೆ (ಸೋಮವಾರ) ಮಧ್ಯಾಹ್ನ 4:00 ಗಂಟೆಗೆ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆ ಮುಕ್ತಿದಾಮದಲ್ಲಿ ನೆರವೇರಿಸಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ
ಸುದ್ದಿದಿನ,ಚಿತ್ರದುರ್ಗ: ಹರಳಯ್ಯ ಮಠದ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆಯನ್ನು ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಮಠಾಧೀಶರ ಮೇಲೆ ಇಂತಹ ದುಷ್ಕೃತ್ಯ ಹೆಚ್ಚಾಗಬಹುದು ಎಂದು ಮಾಜಿ ಸಚಿವ ಎಚ್.ಆಂಜನೇಯ ಆತಂಕ ವ್ಯಕ್ತಪಡಿಸಿದ್ದಾರೆ.
ಎಸಿ, ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳು, ಗ್ರಾಮದ ಮುಖಂಡರೊಂದಿಗೆ ಐಮಂಗಲ ಸಮೀಪದ ಹರಳಯ್ಯ ಮಠಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿ, ಚಿತ್ರದುರ್ಗ ಜಿಲ್ಲಾಸ್ಪತ್ರೆ ಬಳಿಕ ಮಠಕ್ಕೆ ಶ್ರೀಗಳು ಬಂದಿದ್ದಾರೆಂದು ಭಾವಿಸಿ ಧೈರ್ಯ ಹೇಳಲು ಬಂದಿದ್ದೇನೆ. ಆದರೆ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದು ಅವರ ಆರೋಗ್ಯ ಸ್ಥಿತಿ ಕುರಿತು ಕಳವಳ ವ್ಯಕ್ತವಾಗಿದೆ ಎಂದರು.
ಮುರುಘ ಮಠದ ಡಾ. ಶ್ರೀ ಶಿವಮೂರ್ತಿ ಮುರುಘ ಶರಣರು ಎಲ್ಲ ಶೋಷಿತ, ದಲಿತ, ಹಿಂದುಳಿದ ವರ್ಗಗಳಿಗೆ ಧಾರ್ಮಿಕ ಸ್ಥಾನ ನೀಡಲು ಹಲವರಿಗೆ ದೀಕ್ಷೆ ನೀಡಿ, ಜಮೀನು ಸೇರಿ ಅಗತ್ಯ
ಸಹಕಾರ ನೀಡಿದ್ದು ಸ್ಮರಣೀಯ. ಆ ಸಂದರ್ಭದಲ್ಲಿ ಹರಳಯ್ಯ ಮಠ ಸ್ಥಾಪನೆಗಾಗಿ ಜಮೀನು ಖರೀದಿಸಲು ಹಣ ಕೊಟ್ಟಿದ್ದರು. ಆ ಹಣದಲ್ಲಿ ಭೂಮಿ ಖರೀದಿಸಿ ಮಠ, ಶಾಲೆ ನಿರ್ಮಿಸಲು ಬಸವ ಹರಳಯ್ಯ ಸ್ವಾಮೀಜಿ ಶ್ರಮಿಸಿ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.
ಮಠ-ಮಾನ್ಯಗಳು ಮಾಡಬೇಕಾದ ಕಾರ್ಯವನ್ನು ಅತ್ಯಂತ ಶ್ರದ್ಧೆ, ಸವಾಲುಗಳ ಮಧ್ಯೆ, ಹಗಲು-ರಾತ್ರಿ ಶ್ರಮಪಟ್ಟು ಹರಳಯ್ಯ ಸ್ವಾಮೀಜಿ ಮಾಡಿದ್ದಾರೆ. ಸಮಾಜ ಕಲ್ಯಾಣ
ಸಚಿವನಾಗಿದ್ದ ವೇಳೆ 1 ಕೋಟಿ ರೂ. ಅನುದಾನ ಕೊಡಿದ್ದೇ. ಬಳಿಕ ಅಸ್ಥಿತ್ವಕ್ಕೆ ಬಂದ ಸರ್ಕಾರ ಹಾಗೂ ಭಕ್ತರು, ಜನರಿಗೆ ದೇಣಿಗೆ ಸಂಗ್ರಹಿಸಿ ಭವ್ಯವಾದ ಮಠ ನಿರ್ಮಿಸಿದ್ದಾರೆ.
ಸುತ್ತಮುತ್ತಲ ಬಡ ಮಕ್ಕಳಿಗಾಗಿ ಶಾಲೆ, ಸತ್ ಚಿಂತನೆ ಮೂಡಿಸಲು ಧಾರ್ಮಿಕ ಕಾರ್ಯಕ್ಕಾಗಿ ಸಭಾಂಗಣ ನಿರ್ಮಿಸಿದ್ದಾರೆ ಎಂದರು.
ಈ ಸಂದರ್ಭ ತಗ್ಗುಗುಂಡಿ ಆಗಿದ್ದ ಅನುಪಯುಕ್ತ ಎರಡು ಗುಂಟೆ ಜಮೀನು ಗೊಂದಲದಿಂದ ಒತ್ತುವರಿ ಆಗಿದೆ. ಈ ವಿಷಯಕ್ಕಾಗಿ ಹಲವು ಬಾರಿ ವ್ಯಕ್ತಿಯೊರ್ವ ಗಲಾಟೆ ಮಾಡಿದ್ದಾನೆ. ಗೊತ್ತಿಲ್ಲದೆ ಎರಡು ಗುಂಟೆ ಜಾಗ ಒತ್ತುವರಿ ಆಗಿದ್ದು, ತಪ್ಪು ನನ್ನಿಂದಲೇ ಆಗಿದೆಯೆಂದು ಶ್ರೀಗಳು ಒಪ್ಪಿಕೊಂಡಿದ್ದಾರೆ. ಜತೆಗೆ ಆ ಜಾಗಕ್ಕೆ ಈಗಿನ ಮಾರುಕಟ್ಟೆ ಮೌಲ್ಯದಷ್ಟು ಹಣ ಕೊಡುತ್ತೇನೆ ಎಂದು ತಿಳಿಸಿದ್ದಾರೆ. ವ್ಯಕ್ತಿ ನಿರಾಕರಿಸಿದಾಗ ಒತ್ತುವರಿ ಜಾಗದಲ್ಲಿ ಕಟ್ಟಿದ್ದ ಕಾಂಪೌಂಡನ್ನು ಸ್ವಾಮೀಜಿ ಕೆಡವಿಸಿದ್ದಾರೆ. ಆದರೂ ಆ ವ್ಯಕ್ತಿ ದ್ವೇಷ ಮುಂದುವರಿಸಿದ್ದು ಏಕಾಏಕಿ ಮಠಕ್ಕೆ ನುಗ್ಗಿ ಸ್ವಾಮೀಜಿ ಮೇಲೆ
ಮಾರಾಣಾಂತಿಕ ಹಲ್ಲೆ ನಡೆಸಿದ್ದು, ದೂರು ಕೊಡಲು ಠಾಣೆಗೆ ತೆರಳಿರುವ ವಿಷಯ ತಿಳಿದು ಅಲ್ಲಿಗೆ ತೆರಳಿ ಕಾಲಿನಿಂದ ಸ್ವಾಮೀಜಿ ಎದೆಗೆ ಒದ್ದಿದ್ದಾನೆ ಎಂದರು.
ಧಾರ್ಮಿಕ ನೇತಾರರನ್ನು ಗೌರವಿಸುವ ನಾಡು ಭಾರತ. ಇಂತಹ ಸಂದರ್ಭ ಖಾವಿಧಾರಿಯೊಬ್ಬರ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ, ಅವ್ಯಾಚ್ಯ ಶಬ್ದಗಳಿಂದ ನಿಂಧಿಸಿರುವುದು ಎಚ್ಚರಿಕೆ
ಗಂಟೆಯಾಗಿದೆ. ಈ ದುಷ್ಕೃತ್ಯವನ್ನು ನಾಡಿನ ಎಲ್ಲ ಮಠಾಧೀಶರು ಖಂಡಿಸಬೇಕು, ಸ್ವಾಮೀಜಿಗೆ ನೈತಿಕವಾಗಿ ಬೆಂಬಲಿಸಬೇಕು. ಇಲ್ಲದಿದ್ದರೇ ಇಂತಹ ಕೃತ್ಯಗಳು ಹೆಚ್ಚಾಗುವ ಸಾಧ್ಯತೆ ಎಂದು ಆತಂಕ ವ್ಯಕ್ತಪಡಿಸಿದರು.
ಹಲ್ಲೆ ನಡೆಸಿದ ಮೂವರನ್ನು ಮಟ್ಟಹಾಕುವ ಶಕ್ತಿ ನಮ್ಮಲ್ಲೂ ಇದೆ. ಆದರೆ, ನಾವು ವಾಮಮಾರ್ಗದಲ್ಲಿ ಸಾಗುವವರಲ್ಲ, ಕಾನೂನು ಪರಿಪಾಲಕರು. ನಮ್ಮ ಹಕ್ಕೋತ್ತಾಯ ಬಸವ
ತತ್ವದಡಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆ ಭೀತಿ ಹುಟ್ಟಿಸುವಂತದ್ದಾಗಿದೆ. ಈ ಕುರಿತು ತಕ್ಷಣವೇ ಎಲ್ಲ ಮಠಾಧೀಶರು, ಧರ್ಮಗಳ ಪ್ರತಿಪಾದಕರು ಖಂಡಿಸಬೇಕು ಎಂದು ಕೋರಿದರು.
ಈಗ ಯಾವುದೇ ಕಾರಣಕ್ಕೂ ಸಂಧಾನ-ಚರ್ಚೆ ಅಗತ್ಯವಿಲ್ಲ. ಮಠದ ಸಾಮಾಜಿಕ ಕಾರ್ಯಕ್ಕಾಗಿ ಸರ್ಕಾರ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು. ಅದಕ್ಕೆ ತಗಲುವ ವೆಚ್ಚವನ್ನು ನಾನೇ ಸ್ವಂತವಾಗಿ ಭರಿಸುತ್ತೇನೆ. ತಕ್ಷಣ ಅಧಿಕಾರಿಗಳು ಈ ಸಂಬಂಧ ಕಾರ್ಯಪ್ರವೃತ್ತರಾಗಬೇಕೆಂದು ಆಂಜನೇಯ ಆಗ್ರಹಿಸಿದರಲ್ಲದೇ ಒಂದು ವೇಳೆ ಭೂಮಿ ಯಾರದ್ದಾಗಿದ್ದರೇ ಅವರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಪರಿಹಾರ ನೀಡಬಹುದು. ಈ ನಿಟ್ಟಿನಲ್ಲಿ ನಾನು ತಗಲುವ ಸಂಪೂರ್ಣ ವೆಚ್ಚ ಭರಿಸುವೆ ಎಂದು ತಿಳಿಸಿದರು.
ಐಮಂಗಲ ಸುತ್ತಮುತ್ತಲ ಗ್ರಾಮಗಳ ಬಡ ಮಕ್ಕಳಿಗೆ ಶಿಕ್ಷಣ ನೀಡುವುದು, ಅನಾಥಾಲಯ ಸ್ಥಾಪನೆಯ ಸದುದ್ದೇಶ ಹೊಂದಿರುವ ಶ್ರೀಗಳ ಮೇಲೆ ಹಲ್ಲೆ ಇಡೀ ಧಾರ್ಮಿಕ ಮುಖಂಡರಿಗೆ ಮಾಡಿರುವ ಅಪಮಾನ ಮತ್ತು ಅವರಲ್ಲಿ ಭೀತಿ ಸೃಷ್ಠಿಸುವಂತದ್ದಾಗಿದೆ. ಆದ್ದರಿಂದ ಮಾರಾಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ತಕ್ಷಣವೇ ರಾಜ್ಯದಿಂದಲೇ ಗಡಿಪಾರು ಮಾಡಬೇಕು. ಜೊತೆಗೆ ಕಠಿಣ ಶಿಕ್ಷೆ ಆಗುವ ರೀತಿ ಕಾನೂನು ಪ್ರಕ್ರಿಯೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಸಿ ಕಾಂತರಾಜ್, ಡಿವೈಎಸ್ಪಿ ಶಿವಕುಮಾರ್, ಸಿಪಿಐ ಗುಡ್ಡಪ್ಪ ಹಾಗೂ ಗ್ರಾಮದ ಹಿರಿಯರು
ಉಪಸ್ಥಿತರಿದ್ದರು.
*ಪೋಟೊ ಕ್ಯಾಪ್ಷನ್* ಐಮಂಗಲದ ಹರಳಯ್ಯ ಗುರುಪೀಠಕ್ಕೆ ಶುಕ್ರವಾರ ಸಂಜೆ ಮಾಜಿಸಚಿವ ಎಚ್.ಆಂಜನೇಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

-
ದಿನದ ಸುದ್ದಿ5 days agoದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು
-
ದಿನದ ಸುದ್ದಿ7 days ago
ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ
-
ದಿನದ ಸುದ್ದಿ3 days agoಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ
-
ಅಂಕಣ2 days agoಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
-
ದಿನದ ಸುದ್ದಿ1 day agoಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ


