Connect with us

ರಾಜಕೀಯ

ರಕ್ಷಣಾ ಅಗತ್ಯಗಳನ್ನು ಪೂರೈಸಲು ರಕ್ಷಣಾ ಇಲಾಖೆಯ ಭೂಮಿಗಳ ಮೆಗಾ ಸೇಲ್..!

Published

on

 

  • ಅರ್ಜುನ್ ಬಿ.
    ಕನ್ನಡಕ್ಕೆ: ಕೆ.ಎಂ.ನಾಗರಾಜ್

ತಾನೊಬ್ಬ ಜನ ಬೆಂಬಲದಿಂದ ಪ್ರವರ್ಧಮಾನಕ್ಕೆ ಬರುತ್ತಿರುವ ಜಾಗತಿಕ ಬಲಪಂಥದ ಅಗ್ರಮಾನ್ಯ ನಾಯಕ ಎಂದು ಮೋದಿಯವರು ಭಾವಿಸಿರಬಹುದು. ಆದರೆ, ಅವರು ತಾನು ಸಾಮ್ರಾಜ್ಯಶಾಹಿಯ ಸುಳಿಯಲ್ಲಿ ಸಿಕ್ಕಿಕೊಂಡಿದ್ದೇನೆ ಮತ್ತು ವಿಶ್ವದಲ್ಲಿ ಅಮೇರಿಕಾದ ಯಜಮಾನಿಕೆಯನ್ನು ಬಲಪಡಿಸುವುದೇ ತನಗಿಗಿರುವ ಏಕೈಕ ಆಯ್ಕೆ ಎಂಬುದನ್ನು ಅರ್ಥಮಾಡಿಕೊಂಡಿಲ್ಲ. ಫಲಿತಾಂಶವೆಂದರೆ, ಭಾರತವನ್ನು ಒಂದು ಮಹಾನ್ ಶಕ್ತಿಶಾಲಿ ದೇಶವನ್ನಾಗಿ ಮಾರ್ಪಡಿಸುವ ಕನಸನ್ನು ಆರು ವರ್ಷಗಳ ಹಿಂದೆ ಭಾರತದ ಜನತೆಗೆ ಕಾಣಿಸಿದ್ದ ಅವರ ಆಳ್ವಿಕೆಯಲ್ಲಿ ಈಗ ದೇಶ ತನ್ನ ಚರಿತ್ರೆಯಲ್ಲಿ, ರಕ್ಷಣಾ ಮಂತ್ರಾಲಯವು ತನ್ನ ಖರ್ಚು ವೆಚ್ಚಗಳಿಗೆ ತನ್ನ ಆಸ್ತಿಗಳನ್ನು ಮಾರಿಕೊಂಡು ಕಾಲ ಸಾಗಿಸುವ ಹಂತವನ್ನು ನಾವೀಗ ತಲುಪಿದ್ದೇವೆ.

___________________________________________

ರು ವರ್ಷಗಳ ಹಿಂದೆ, ಪ್ರಧಾನ ಮಂತ್ರಿ ಮೋದಿಯವರು ಭಾರತವನ್ನು ಒಂದು ಮಹಾನ್ ಶಕ್ತಿಶಾಲಿ ದೇಶವನ್ನಾಗಿ ಮಾರ್ಪಡಿಸುವ ಕನಸನ್ನು ಭಾರತದ ಜನತೆಗೆ ಕಾಣಿಸಿದ್ದರು. ಭಾರತದ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಹಾರಿಸುವುದಾಗಿ ಅವರು 2014ರಲ್ಲಿ ಘೋಷಿಸಿದ್ದರು. ದೇಶದ ರಕ್ಷಣೆ ಮಾಡಿಕೊಳ್ಳುವುದರ ಜೊತೆಗೆ ಜಾಗತಿಕ ವ್ಯವಹಾರ-ವಿದ್ಯಮಾನಗಳಲ್ಲೂ ಭಾರತವು ಪ್ರಧಾನ ಭೂಮಿಕೆ ನಿರ್ವಹಿಸುತ್ತದೆ ಎಂದು ಮೋದಿ ಭಾವಿಸಿದ್ದರು. ಎರಡನೆಯ ಅವಧಿಗೆ ಅಧಿಕಾರಕ್ಕೆ ಬಂದ ನಂತರವಂತೂ ಮೋದಿಯವರ ವರ್ಚಸ್ಸಿನಿಂದ ಭಾರತದ ಮತದಾರರು ಮಾತ್ರವಲ್ಲ ಅಂತಾರಾಷ್ಟ್ರೀಯ ಸಮುದಾಯವೇ ನಿಬ್ಬೆರಗಾಗಿದೆ ಎಂದೇ ಮೋದಿ ಭಕ್ತರು ಭಾವಿಸಿದ್ದಾರೆ. ಹಾಗಾಗಿ, ಕಾಶ್ಮೀರದ ವಿಶೇಷ ಸ್ಥಾನ-ಮಾನ ಕಲ್ಪಿಸುವ 370ನೇ ವಿಧಿಯನ್ನು ಸರಿಯಾದ ಸಮಯದಲ್ಲಿ ಮೋದಿ ರದ್ದುಗೊಳಿಸಿದ್ದಾರೆ, ಏಕೆಂದರೆ, ಭಾರತದ ಪರವಾಗಿ ಅಂತಾರಾಷ್ಟ್ರೀಯ ಅಭಿಪ್ರಾಯವನ್ನು ಅವರು ಪ್ರಭಾವಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದಾಗಿ ಆರ್‌ಎಸ್‌
ಸ್‌ನ ಸಹಚರರು ನಂಬಿದ್ದಾರೆ.

ದೇಶದ ಜನಸಂಖ್ಯೆಯ ಬೃಹತ್ ಗಾತ್ರ, ಅದರ ಭೌಗೋಳಿಕ ನೆಲೆ ಮತ್ತು ಅದರ ಆರ್ಥಿಕ ವಹಿವಾಟುಗಳ ಸ್ವರೂಪ ಮತ್ತು ಗಾತ್ರಗಳಿಂದಾಗಿ, ಜಾಗತಿಕ ವಾಣಿಜ್ಯ-ವ್ಯವಹಾರ ವಹಿವಾಟುಗಳಲ್ಲಿ ಭಾರತವು ಸ್ವಾಭಾವಿಕವಾಗಿಯೇ ಒಂದು ಪ್ರಮುಖ ಜಾಗತಿಕ ಪೈಪೋಟಿದಾರ ಎಂಬುದು ಭಾರತದ ಬಲಪಂಥದ ನಂಬಿಕೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಸಂಜಾತರನ್ನು ಸಂಮೋಹಗೊಳಿಸುವ ಯಶಸ್ವಿ ಕಲೆಯೇ ದೇಶದ ಶಕ್ತಿ-ಸಾಮರ್ಥ್ಯವೆಂಬ ಗುಂಗಿನಲ್ಲಿರುವ ಮೋದಿಯವರು ಅಮೇರಿಕಾದ ಅಧ್ಯಕ್ಷರನ್ನೂ ತನ್ನ ತಾಳಕ್ಕೆ ತಕ್ಕಂತೆ ಕುಣಿಸಬಹುದು ಎಂದು ಭಾವಿಸಿದ್ದಾರೆ.

ಇಂತಹ ದೊಡ್ಡಸ್ತಿಕೆಯ ಭ್ರಮೆಗಳ ಪ್ರಚಾರದ ಮೂಲಕ ವಾಸ್ತವವನ್ನು ಮುಚ್ಚಿಡಲಾಗದು. ಕಟು ವಾಸ್ತವ ಏನೆಂದರೆ, ಕೈಗಾರಿಕೆಗಳ ಅಶಕ್ತ ತಳಹದಿ, ಉನ್ನತವಲ್ಲದ ಮಟ್ಟದ ತಂತ್ರಜ್ಞಾನ, ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಸಂಖ್ಯೆಯ ಜ್ಞಾನ ಬೋಧನೆಯ ಉತ್ಕೃಷ್ಟ ಕೇಂದ್ರಗಳನ್ನು ಹೊಂದಿರುವ ಭಾರತವು ಜಾಗತಿಕ ಗಣ್ಯರನ್ನು ಪ್ರಭಾವಿಸಲಾಗುವುದಿಲ್ಲ.

ಆದಾಗ್ಯೂ, ಮೋದಿ ಸರ್ಕಾರ ಮತ್ತು ಅವರ ಬೆಂಬಲಿಗರು ವಾಸ್ತವ ಜಗತ್ತಿನಿಂದ ದೂರ ಸರಿದು ತಮ್ಮ ಕಲ್ಪನೆಯ ಲೋಕದಲ್ಲಿ ವಿಹರಿಸುತ್ತಲೇ ಇದ್ದಾರೆ. ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ ನಡೆದ ಪ್ರಾದೇಶಿಕ ಸಮಗ್ರ ಆರ್ಥಿಕ ಒಪ್ಪಂದ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದರು: ಭಾರತದಲ್ಲಿ ಉದ್ಯಮ ಸ್ಥಾಪಿಸಲು ಇದು ಅತ್ಯತ್ತಮ ಸಮಯ. ಅನೇಕ ಸಂಗತಿಗಳಲ್ಲಿ ಏರಿಕೆ-ಇಳಿಕೆಗಳಾಗುತ್ತಿವೆ. ದೇಶದಲ್ಲಿ ವ್ಯವಹಾರ ನಡೆಸುವುದು ಸುಗಮವಾಗಿದೆ. ಬದುಕು ಸುಗಮವಾಗಿದೆ. ವಿದೇಶಿ ನೇರ ಹೂಡಿಕೆ, ಮೈದುಂಬಿದ ಅರಣ್ಯಗಳು, ಪೇಟೆಂಟ್ಸ್ (ಸ್ವಾಮ್ಯ), ಉತ್ಪಾದಕತೆ ಮತ್ತು ಮೂಲಸೌಕರ್ಯಗಳು ಹೆಚ್ಚುತ್ತಿವೆ. ಅದೇ ಸಮಯದಲ್ಲಿ ತೆರಿಗೆಗಳು, ತೆರಿಗೆ ದರಗಳು, ಕಛೇರಿಗಳಲ್ಲಿ ವಿಧಾನ-ವಿಳಂಬಗಳು, ಲಂಚಗುಳಿತನಗಳು ಮತ್ತು ಚಮಚಾಗಿರಿ ಇಳಿಯುತ್ತಿವೆ.

ಆದರೆ, ಅಹಿತವಾದ ವಾಸ್ತವ ಏನೆಂದರೆ, ಭಾರತವು ಈಗ ಆರ್ಥಿಕ ಮಂದಗತಿಯಲ್ಲಿ ಒದ್ದಾಡುತ್ತಿದೆ. ನೆರೆಯ ಬಾಂಗ್ಲಾದೇಶವು, ಭಾರತಕ್ಕಿಂತಲೂ ವೇಗವಾಗಿ, 8.1% ಆರ್ಥಿಕ ಬೆಳವಣಿಗೆ ಸಾಧಿಸುತ್ತಿದೆ. ನೇಪಾಳವೂ ಸಹ 2019ರಲ್ಲಿ ಭಾರತಕ್ಕಿಂತಲೂ ವೇಗವಾಗಿ ಬೆಳೆಯುತ್ತದೆ ಎಂದು ಅಂದಾಜು ಮಾಡಲಾಗಿದೆ. ವಿಶ್ವ ಬ್ಯಾಂಕಿನ ಪ್ರಕಾರ, ಆರ್ಥಿಕ ರಂಗದಲ್ಲಷ್ಟೇ ಅಲ್ಲ, ಹಲವು ಸಾಮಾಜಿಕ ಸೂಚಿಗಳಲ್ಲೂ ಬಾಂಗ್ಲಾದೇಶವು ಭಾರತಕ್ಕಿಂತ ಮುಂದಿದೆ. ಬಾಂಗ್ಲಾದೇಶದ ಸರಾಸರಿ ಮಾನವ ಜೀವಿತಾವಧಿ 72 ವರ್ಷಗಳಿದ್ದರೆ, ಭಾರತದಲ್ಲಿ ಅದು 69.1 ವರ್ಷಗಳು. ಬಾಂಗ್ಲಾದೇಶದ ಶಿಶು ಮರಣ ಸಂಖ್ಯೆ 25.1 ಇದ್ದರೆ, ಭಾರತದಲ್ಲಿ ಅದು 31.5 ಇದೆ.

ಕೇಂದ್ರ ಸರ್ಕಾರದ ಹಣಕಾಸಿನ ಪರಿಸ್ಥಿತಿ ಅದೆಷ್ಟು ಹದಗೆಟ್ಟಿದೆ ಎಂದರೆ, ಅದು ತನ್ನ ಮಾಮೂಲಿ ಖರ್ಚು-ವೆಚ್ಚಗಳಿಗೂ ಹಣ ಹೊಂದಿಸಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಹಾಗಾಗಿ, ತನ್ನ ಉದ್ದಿಮೆಗಳನ್ನೇ ಮಾರುತ್ತಿದೆ. ಈ ಬಗ್ಗೆ ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ ಹೀಗೆ ಟ್ವೀಟ್ ಮಾಡಿದ್ದರು: ಮೋದಿ ಸರ್ಕಾರ ಪಾಪರಾಗಿದೆಯೇ? ತನ್ನ ದುಂದುಗಾರಿಕೆಯ ಖರ್ಚುಗಳಿಗೆ ಮತ್ತು ಕಟ್ಟು ಕತೆ ಹಾಗೂ ಅಸತ್ಯಗಳಿಂದ ಕೂಡಿದ ಪ್ರಚಾರಗಳಿಗೆ ಹಣ ಹೊಂದಿಸಿಕೊಳ್ಳಲು ಜನತೆಗೆ ಸೇರಿದ ಸಂಪತ್ತನ್ನು ಮಾರುವುದೇ?

ಕೇಂದ್ರ ಸರ್ಕಾರದ ಆದಾಯವು ಕಳೆದ ಎರಡು ವರ್ಷಗಳಿಂದಲೂ ಸತತವಾಗಿ ಇಳಿಯುತ್ತಿದೆ. ಹಾಗಾಗಿ, ಅದರ ವಿತ್ತೀಯ ಕೊರತೆ ಹೆಚ್ಚುತ್ತಿದೆ. ಈ ಕೊರತೆಯನ್ನು ಸರಿದೂಗಿಸಿಕೊಳ್ಳುವ ಸಲುವಾಗಿಯೇ, ರಿಸರ್ವ್ ಬ್ಯಾಂಕ್ ಹೊಂದಿದ್ದ ಮೀಸಲು ನಿಧಿಯಿಂದ 1.76 ಲಕ್ಷ ಕೋಟಿ ರೂಗಳನ್ನು ಇತ್ತೀಚೆಗಷ್ಟೇ ಕಸಿದುಕೊಂಡಿತ್ತು. ಆದಾಗ್ಯೂ, ಕೇಂದ್ರ ಸರ್ಕಾರವು ರಿಸರ್ವ್ ಬ್ಯಾಂಕ್ ಮೀಸಲು ಇಟ್ಟುಕೊಂಡಿರುವ ಚಿನ್ನವನ್ನೂ ಸಹ ಹರಾಜು ಹಾಕುವ ಸನ್ನಾಹದಲ್ಲಿದೆ ಎಂಬ ವರದಿ ಪ್ರಕಟವಾಗಿದೆ.

ಅಷ್ಟಾಗಿಯೂ, ಖಜಾನೆಯಲ್ಲಿ ಸಾಕಷ್ಟು ಹಣವಿಲ್ಲದಿರುವ ಪರಿಸ್ಥಿತಿಯಲ್ಲಿ, ಆದಾಯದ ಕೊರತೆಯನ್ನು ಸರಿದೂಗಿಸಿಕೊಳ್ಳಲು ಸರ್ಕಾರವು ಜನತೆಗೆ ಸೇರಿದ ಸಾರ್ವಜನಿಕ ಉದ್ದಿಮೆಗಳ ಸ್ವತ್ತುಗಳನ್ನು ಮಾರುತ್ತಿದೆ.
ಮಹಾರತ್ನ ಕಂಪೆನಿ ಎಂಬ ಅಭಿದಾನಕ್ಕೆ ಪಾತ್ರವಾಗಿದ್ದ ಮತ್ತು ಇಲ್ಲಿಯವರೆಗೆ 17,246 ಕೋಟಿ ರೂಗಳ ಲಾಭಾಂಶವನ್ನು ಕೇಂದ್ರ ಸರ್ಕಾರಕ್ಕೆ ನೀಡಿರುವ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ನಿನ 53.29% ಷೇರುಗಳನ್ನು; ಹಿಂದಿನ ವರ್ಷದಲ್ಲಿ 171% ಲಾಭಾಂಶ ಕೊಟ್ಟಿರುವ ಮತ್ತು ನವರತ್ನ ಕಂಪೆನಿಗಳಲ್ಲಿ ಒಂದಾದ ಕಂಟೈನರ್ ಕಾರ್ಪೊರೇಷನ್ನಿನ 63.75%; ಷಿಪ್ಪಿಂಗ್ ಕಾರ್ಪೊರೇಷನ್ನಿನ 63.75%; ತೆಹ್ರಿ ಹೈಡ್ರೊ ಡೆವೆಲ್ಪಮೆಂಟ್ ಕಾರ್ಪೊರೇಷನ್ನಿನ 75%; ನಾರ್ತ್ ಈಸ್ಟ್ ಇಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ನಿನ 100% ಷೇರುಗಳನ್ನು ಮಾರುವ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟವು ಕೈಗೊಂಡಿದೆ. ಮಾರಾಟದ ಪಟ್ಟಿಯಲ್ಲಿ, ಹಿಂದಿನ ವರ್ಷ ಒಂದರಲ್ಲೇ 7,218 ಕೋಟಿ ರೂ ಗಳ ಲಾಭ ಗಳಿಸಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ನಿನ 100% ಷೇರುಗಳ ಮಾರಾಟವನ್ನು ಕೊನೆ ಗಳಿಗೆಯಲ್ಲಿ ಸೇರಿಸಲಾಗಿದೆ ಎಂದು ವರದಿಯಾಗಿದೆ.

ಸರ್ಕಾರದ ಆರ್ಥಿಕ ಪರಿಸ್ಥಿತಿ ಅದೆಷ್ಟು ಬಿಗಡಾಯಿಸಿದೆ ಎಂದರೆ, ಕಾಯಂ ಸೇನೆಯನ್ನು ಪರಿಣಾಮಕಾರಿಯಾಗಿ ನಿಯುಕ್ತಿಗೊಳಿಸಲು ಮತ್ತು ಅದನ್ನು ನವೀನವಾಗಿ ಸಜ್ಜುಗೊಳಿಸಲು ಸಾಕಾಗುವಷ್ಟು ಹಣ ಸರ್ಕಾರದ ಬಳಿ ಇಲ್ಲ. ವಿತ್ತೀಯ ಮುಂಜಾಗರೂಕತೆಯ ಹೆಸರಿನಲ್ಲಿ, ಮಾಜಿ ಯೋಧರಿಗೆ ಸಲ್ಲಬೇಕಿದ್ದ ಮತ್ತು ವಾಗ್ದಾನ ಮಾಡಿದ್ದ ಒಂದು ಶ್ರೇಣಿ-ಒಂದು ನಿವೃತ್ತಿ ವೇತನವನ್ನು ನಿರಾಕರಿಸಲಾಗಿದೆ.

ಇದು ಒಂದು ಸ್ವಯಂ ನಿರ್ಮಿತ ಸಮಸ್ಯೆ. ಮೂಗು ಹೊರಲಾರದಷ್ಟು ದೊಡ್ಡದಾದ ಮೂಗುತಿ ಎನ್ನುವ ರೀತಿಯ ವಿದೇಶ ನೀತಿಯ ಅನುಸರಣೆ ಮತ್ತು ಚಾಣಕ್ಯತೆ ಮತ್ತು ಮಹತ್ವಾಕಾಂಕ್ಷೆಗಳಿಂದ ಕೂಡಿದ ಮನೋಭಾವದ ಕಾರಣಗಳಿಂದಾಗಿ ಈ ಸಮಸ್ಯೆ ಉದ್ಭವವಾಗಿದೆ. ಶಕ್ತಿಶಾಲಿ ದೇಶಗಳ ಮಿಲಿಟರಿ ಮೈತ್ರಿ ಕೂಟಗಳಿಗೆ ಸೇರಿಕೊಳ್ಳುವ ನೀತಿಗೆ ಬಲು ದುಬಾರಿ ಬೆಲೆಯನ್ನೇ ತೆರಬೇಕಾಗುತ್ತದೆ. ಮಿಲಿಟರಿ ಮೈತ್ರಿ ಕೂಟದ ಪಾಲುದಾರ ದೇಶಗಳು ಹೊಂದಿರುವ ಅತ್ಯಾಧುನಿಕ ಶಸ್ತ್ರ ಸಜ್ಜಿತ ಯುದ್ಧ ವಿಮಾನ, ಜಲಾಂತರ್ಗಾಮಿ ನೌಕೆ ಮತ್ತು ಟ್ಯಾಂಕರ್ ಇತ್ಯಾದಿಗಳಿಗೆ ಹೊಂದಿಕೊಳ್ಳುವ ಮಾದರಿಯ ಉಪಕರಣಗಳನ್ನೇ ಭಾರತ ಕೊಳ್ಳಬೇಕಾಗುತ್ತದೆ. ಅವುಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ದಂಡಿಯಾಗಿ ಹಣ ಖರ್ಚುಮಾಡಬೇಕಾಗುತ್ತದೆ.

ಇಂತಹ ಖರ್ಚುಗಳಿಂದಾಗಿ ಉಂಟಾಗಿರುವ ಆರ್ಥಿಕ ಒತ್ತಡವನ್ನು ನಿಭಾಯಿಸುವ ಸಲುವಾಗಿ, ಅಂದರೆ, ದೇಶದ ರಕ್ಷಣೆ ಮತ್ತು ಆಂತರಿಕ ಭದ್ರತೆಯ ವೆಚ್ಚಗಳಿಗೆ ಖಜಾನೆಯ ಹೊರಗಿನ ಮೂಲಗಳಿಂದ ಹಣ ಹೊಂದಿಸಿಕೊಳ್ಳುವ ಉದ್ದೇಶದಿಂದ, ಹದಿನೈದನೆಯ ಹಣಕಾಸು ಆಯೋಗದ ಪರಾಮರ್ಶೆಯ ವಿಷಯ ವ್ಯಾಪ್ತಿಯನ್ನು ತಿದ್ದುಪಡಿ ಮಾಡಲು ಸರ್ಕಾರವು ಹವಣಿಸುತ್ತಿದೆ. ಇಂತಹ ಒಂದು ಪ್ರಸ್ತಾಪದ ಸಮರ್ಥನೆಯಾಗಿ ಸರ್ಕಾರ ಕೊಡುವ ಕಾರಣವೆಂದರೆ, ಖರ್ಚುಗಳ ಬಗ್ಗೆ ರಕ್ಷಣಾ ಮಂತ್ರಾಲಯದ ಮುನ್ನಂದಾಜಿಗೂ ಮತ್ತು ವಿತ್ತ ಮಂತ್ರಾಲಯವು ಹಂಚುವ ಹಣದಲ್ಲಿ ಸತತವಾಗಿ ಶೇ.೨೫ರಷ್ಟು ಕೊರತೆಯಾಗುತ್ತಿದೆ.

ಹದಿನೈದನೆಯ ಹಣಕಾಸು ಆಯೋಗದ ಪರಾಮರ್ಶೆಯ ವಿಷಯ ವ್ಯಾಪ್ತಿಯ ತಿದ್ದುಪಡಿಯ ಮೂಲಕ ರಕ್ಷಣಾ ಇಲಾಖೆಯ ಭೂಮಿಯನ್ನು ಹರಾಜಿಗಿಡುವ ಪ್ರಕ್ರಿಯೆ ಆರಂಭವಾಗುತ್ತದೆ. ಈಗಾಗಲೇ ಭೂಮಿಯ ಹರಾಜಿನ ವಾಸನೆ ಹಿಡಿದಿರುವ ಭೂಗಳ್ಳರು ಮತ್ತು ಖಾಸಗಿ ವಲಯದ ರಣ ಹದ್ದುಗಳು ಅದನ್ನು ಕಬಳಿಸಲು ಹೊಂಚುಹಾಕುತ್ತಾ ಕುಳಿತಿವೆ. ರಕ್ಷಣಾ ಇಲಾಖೆಯು ಹೊಂದಿರುವ 17.5 ಲಕ್ಷ ಎಕರೆಗಳಷ್ಟು ಭೂಮಿಯಲ್ಲಿ, ಎಲ್ಲೆಲ್ಲಿ ಎಷ್ಟೆಷ್ಟು ಭೂಮಿ ಒತ್ತುವರಿಯಾಗಿದೆ ಮತ್ತು ನಾಗರಿಕ ಉದ್ದೇಶಗಳಿಗಾಗಿ ಅಗತ್ಯವಿರುವ ಸೇನೆಯ ಭೂಮಿ ಎಷ್ಟು ಎಂಬುದರ ಬೇಡಿಕೆಯನ್ನು ಗುರುತಿಸುವ ಕೆಲಸ ನಡೆಯುತ್ತಿದೆ.

ತಹ ಹರಾಜಿನ ಮೂಲಕ ರಕ್ಷಣಾ ಮಂತ್ರಾಲಯವು ಕನಿಷ್ಠ 25,000 ಕೋಟಿ ರೂಗಳನ್ನು ಪಡೆಯಬಹುದು ಎಂಬುದು ತಜ್ಞರ ಅಂದಾಜು. ಈ ಹಣವನ್ನು ಮೂಲ ಧನವಾಗಿ ಇಟ್ಟುಕೊಂಡು ಅದರಿಂದ ಬರುವ ಬಡ್ಡಿಯನ್ನು ಸೇನೆಯ ವಿಶೇಷ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು ಎಂಬುದು ತಜ್ಞರ ಸಲಹೆ.

ಈ ಸಂಬಂಧವಾಗಿ ಸಾರ್ವಜನಿಕ ಅಭಿಪ್ರಾಯ gಪಿಸುವ ಉದ್ದೇಶದಿಂದ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗುವಂತೆ ನೋಡಿಕೊಳ್ಳುವ ಕೆಲಸ ರಭಸದಿಂದ ನಡೆಯುತ್ತಿದೆ. ಸಾರ್ವಜನಿಕರಲ್ಲಿ ಅನುಕಂಪ ಹುಟ್ಟಿಸುವ ಉದ್ದೇಶದಿಂದ ದೇಶದ ಉದ್ದಗಲಕ್ಕೂ ಈಗಾಗಲೇ 9600 ಎಕರೆಗೂ ಮೇಲ್ಪಟ್ಟ ಭೂಮಿಯ ಒತ್ತುವರಿಯಾಗಿದೆ. ಈ ಸಂಬಂಧವಾಗಿ, ಹಲವಾರು ರಾಜ್ಯಗಳು ಮತ್ತು ನಗರ ಸಭೆಗಳ ವಿರುದ್ಧ ರಕ್ಷಣಾ ಮಂತ್ರಾಲಯ ದಾವೆ ಹೂಡಿದೆ ಎಂಬ ಕತೆಗಳನ್ನು ಹೆಣೆಯಲಾಗುತ್ತಿದೆ.

ಈ ಎಲ್ಲ ವಿದ್ಯಮಾನಗಳು ಸೂಚಿಸುವ ಸಾರಾಂಶ ಏನೆಂದರೆ, ದೇಶದ ಚರಿತ್ರೆಯಲ್ಲಿ, ರಕ್ಷಣಾ ಮಂತ್ರಾಲಯವು ಸೇನೆಯ ಖರ್ಚು ವೆಚ್ಚಗಳ ನಿರ್ವಹಣೆಗಾಗಿ ಸೇನೆಯ ಆಸ್ತಿ ಮಾರಾಟದಿಂದ ಬರುವ ಬಡ್ಡಿಯನ್ನು ಅವಲಂಬಿಸಿ ಕಾಲ ಸಾಗಿಸುವ ಹಂತವನ್ನು ನಾವೀಗ ತಲುಪಿದ್ದೇವೆ.

ಮಹಾನ್ ದೇಶಗಳು ತಮ್ಮ ಸೇನೆಯ ಖರ್ಚು ವೆಚ್ಚಗಳಿಗೆ ಕಂಡ ಕಂಡ ಸಂದಿ ಮೂಲೆಗಳನ್ನೂ ತಡಕಾಡಿ ತಮ್ಮ ಖಜಾನೆ ತುಂಬಿಸಿಕೊಳ್ಳುವುದಿಲ್ಲ. ಒಂದು ಹುರುಪಿನ ಕಾಯಂ ಸೇನೆಯನ್ನು ಪೋಷಿಸಿ ಅದನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಹೆಣಗಾಡುವ ಯಾವುದೇ ದೇಶದ ಖಜಾನೆಯು ತನ್ನ ಸರ್ಕಾರಕ್ಕೆ ನೆಲದ ಮೇಲೆ ನಿಲ್ಲುವಂತೆ ಮತ್ತು ಅದರ ಮಹತ್ವಾಕಾಂಕ್ಷೆಯನ್ನು ತಾನು ಹೊರುವಷ್ಟು ಮಟ್ಟಕ್ಕೆ ಇಳಿಸಿಕೊಳ್ಳುವಂತೆ ಹೇಳಬೇಕು.

ನಮ್ಮ ಕೊರತೆಗಳನ್ನು ಲೆಕ್ಕಿಸದೆ ಹಿಂದೂ ಮಹಾಸಾಗರದಲ್ಲಿ ನಾವು ಚೀನಾದೊಂದಿಗೆ ಪೈಪೋಟಿಗೆ ಇಳಿಯಲಾಗದು. ಅಪಾರ ಖರ್ಚು ವೆಚ್ಚಗಳು ತಗಲುವಂತಹ ಇಂದ್ರಜಾಲಗಳೋ ಎಂಬಂತಹ ಮಿಲಿಟರಿ ರಕ್ಷಣಾ ದೃಶ್ಯಾವಳಿಗಳನ್ನು ಆಗು ಮಾಡಿಕೊಳ್ಳಲಾಗದು. ನಮ್ಮ ವಿದೇಶ ನೀತಿಯನ್ನು ಮಾರ್ಪಡಿಸಿದ ನಂತರ, ನಮ್ಮ ರಾಜತಾಂತ್ರಿಕತೆ ಯಶಸ್ವಿಯಾಗುತ್ತದೆಂದು ಊಹಿಸಿಕೊಳ್ಳಲಾಗದು.

ಮೋದಿಯವರ ವಿದೇಶ ನೀತಿಯು ಸುಕ್ಕುಗಟ್ಟಿದೆ ಮತ್ತು ಅತಿ ಆಡಂಬರದಿಂದ ಕೂಡಿದೆ. ಅದು ಸೌಮ್ಯವಾಗಿರಬೇಕು ಮತ್ತು ತಾಳ್ಮೆಯಿಂದ ಕೂಡಿರಬೇಕು. ಬೇರೆ ಬೇರೆ ದೇಶಗಳಲ್ಲಿ ಅದ್ದೂರಿಯ ಸಭೆ ಸಮಾರಂಭಗಳನ್ನು ಏರ್ಪಡಿಸಲು ಮೋದಿ ಸರ್ಕಾರವು ಸಾವಿರಾರು ಕೋಟಿ ರೂ ಗಳನ್ನು ಖರ್ಚುಮಾಡುತ್ತಿದೆ. ಇವೆಲ್ಲ ಹಿಂದೆಂದೂ ಆಚರಿಸದ, ಕಂಡರಿಯದ ಕೇಳರಿಯದ ಕ್ರಮಗಳು. ಮೂರು ಟ್ರಿಲಿಯನ್ ಗಾತ್ರದ ಒಂದು ಅರ್ಥವ್ಯವಸ್ಥೆಯು ತನ್ನ ಇತಿ ಮಿತಿಗಳನ್ನು ಅರ್ಥಮಾಡಿಕೊಳ್ಳುವುದನ್ನು ಕಲಿಯಬೇಕು. ಅಂಧ ಶ್ರದ್ಧೆ ಮತ್ತು ನಂಬಿಕೆಗಳಷ್ಟೇ ಒಂದು ಪರಿಪಕ್ವ ಕಾರ್ಯನೀತಿಗೆ ಆಧಾರವಾಗಲಾರವು. ಮೋದಿಯವರ ವಿದೇಶ ನೀತಿಯ ಸಮಸ್ಯೆಯೆಂದರೆ, ಅದು, ದೇಶೀಯವಾಗಿ ಕಡಿಮೆ ಸಾಮರ್ಥ್ಯದ ಆಯುಧ ಮತ್ತು ಮದ್ದುಗುಂಡುಗಳನ್ನು ತಯಾರಿಸುವ ಮದ್ಯಮ ಬಲದ ದೇಶವೊಂದಕ್ಕೆ ಹೊರಲಾರದಷ್ಟು ಭವ್ಯ ಪ್ರಮಾಣದ್ದು.

ಬಲಪಂಥದ ಸಮಸ್ಯೆಯೆಂದರೆ, ಅದು ಬಲ ಪ್ರಯೋಗ ಮಾಡುವ ಇಚ್ಛಾಶಕ್ತಿಯನ್ನು ರಾಷ್ಟ್ರ ಗೌರವದೊಂದಿಗೆ ತಳುಕುಹಾಕುತ್ತದೆ. ದೇಶದ ಸಾರ್ವಭೌಮತೆಯ ಹಿರಿಮೆಯು ಅದು ಹೊಂದಿರುವ ಮಿಲಿಟರಿ ಶಕ್ತಿ ಮತ್ತು ಅದರ ಬಲ ಪ್ರದರ್ಶನಗಳಿಗೆ ನೇರವಾಗಿ ಅನುಗುಣವಾಗಿರುತ್ತದೆ ಎಂದು ಬಲಪಂಥ ಭಾವಿಸುತ್ತದೆ. ಆದರೆ, ಇದೇನೂ ಸಾರ್ವತ್ರಿಕವಾಗಿ ಅನ್ವಯವಾಗುವ ನಿಯಮವಲ್ಲ ಎಂಬುದು ಅದರ ಜಾಣ ಮರೆವು.

ತನ್ನ ಶಸ್ತ್ರಾಸ್ತ್ರಗಳ ಅಗತ್ಯವನ್ನು ಮತ್ತು ಸಂಪರ್ಕ-ಸಾಧನಗಳನ್ನು ಹೊರ ದೇಶಗಳಿಂದ ಪೂರೈಸಿಕೊಳ್ಳುವ ಮಧ್ಯಮ ಬಲದ ದೇಶ ತಾನೊಂದು ಗಟ್ಟಿ ಶಕ್ತಿಯೆಂದು ತೋರಿಸುವ ಅದರ ಆಕಾಂಕ್ಷೆ ಹೆಚ್ಚಿದಷ್ಟು ಅದರ ಸಾರ್ವಭೌಮತ್ವ ಕುಗ್ಗುತ್ತದೆ. ರಾಷ್ಟ್ರ ಹಿತವನ್ನು ಕಾಪಾಡುವ ಪ್ರಯತ್ನಗಳು ಅವಾಸ್ತವಿಕವಾಗಿದ್ದರೆ, ದೇಶವು ಹೆಚ್ಚು ಪರಾಧೀನವೂ ಮತ್ತೂ ಬೇಧ್ಯವೂ ಆಗುತ್ತದೆ.

ತಾನೊಬ್ಬ ಜನ ಬೆಂಬಲದಿಂದ ಪ್ರವರ್ಧಮಾನಕ್ಕೆ ಬರುತ್ತಿರುವ ಜಾಗತಿಕ ಬಲಪಂಥದ ಅಗ್ರಮಾನ್ಯ ನಾಯಕ ಎಂದು ಮೋದಿಯವರು ಭಾವಿಸಿರಬಹುದು. ಆದರೆ, ಅವರು ತಾನು ಸಾಮ್ರಾಜ್ಯಶಾಹಿಯ ಸುಳಿಯಲ್ಲಿ ಸಿಕ್ಕಿಕೊಂಡಿದ್ದೇನೆ ಮತ್ತು ವಿಶ್ವದಲ್ಲಿ ಅಮೇರಿಕಾದ ಯಜಮಾನಿಕೆಯನ್ನು ಬಲಪಡಿಸುವುದೇ ತನಗಿರುವ ಏಕೈಕ ಆಯ್ಕೆ ಎಂಬುದನ್ನು ಅರ್ಥಮಾಡಿಕೊಂಡಿಲ್ಲ.

(ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

‘ಮತದಾರ ದೇವರು’ ಎಂದ‌ ಸಿದ್ದರಾಮಯ್ಯ

Published

on

ಸುದ್ದಿದಿನಡೆಸ್ಕ್:ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಘನತೆವೆತ್ತ ರಾಜ್ಯಪಾಲರಿಗೆ ನೀಡಿ ಬಂದಿದ್ದೇನೆ. ಸಾಂವಿಧಾನಿಕ ವಿಧಿ-ವಿಧಾನಗಳ ಮೂಲಕ ರಾಜ್ಯಪಾಲರು ಕ್ರಮಕೈಗೊಳ್ಳುತ್ತಾರೆ. ಶೀಘ್ರದಲ್ಲಿಯೇ ನೂತನ ಮುಖ್ಯಮಂತ್ರಿಯನ್ನು ರಾಜ್ಯದ ಜನತೆ ಕಾಣಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ಇಂದಿನ ವರೆಗೂ ನನಗೆ ನಿರೀಕ್ಷೆಗೂ ಮೀರಿ ಪ್ರೀತಿ ನೀಡಿದ, ಅಭಿಮಾನಿಸಿದ, ಕೈಹಿಡಿದು ನಡೆಸಿದ ರಾಜ್ಯದ ಜನತೆಯನ್ನು ಉದ್ದೇಶಿಸಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮೇರು ನಟ ಡಾ.ರಾಜ್‌ಕುಮಾರ್ ಅವರು ಅಭಿಮಾನಿಗಳನ್ನು ‘’ಅಭಿಮಾನಿ ದೇವರು’’ ಎಂದು ಕರೆಯುತ್ತಿದ್ದರು, ನಾನೊಬ್ಬ ಸಂವಿಧಾನವನ್ನೇ ಧರ್ಮ ಎಂದು ತಿಳಿದುಕೊಂಡಿರುವ ರಾಜಕಾರಣಿ. ನನ್ನ ಪಾಲಿಗೆ ಮತದಾರರು ‘’ಮತದಾರ ದೇವರು”. ಆ ದೇವರುಗಳ ಮುಂದೆ ನನ್ನ ಮನದಾಳದ ಕೆಲವು ಮಾತುಗಳನ್ನು ಹಂಚಿಕೊಳ್ಳಬೇಕೆಂದು ಬಯಸಿದ್ದೇನೆ ಎಂದರು.

ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿರುವ ನನ್ನ ಬಗ್ಗೆ ರಾಜ್ಯದ ಜನತೆಗೆ ತಿಳಿದಿದೆ. ನಾನು ಪ್ರೀತಿ-ವಿಶ್ವಾಸಗಳಿಗೆ ತಲೆಬಾಗುವವನೇ ಹೊರತು ಒತ್ತಡ-ಪ್ರಭಾವಗಳಿಗೆ ಒಳಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಜಾಯಮಾನದವನಲ್ಲ. ಈ ರಾಜೀನಾಮೆ ಪತ್ರವನ್ನು ಕೂಡಾ ಅತ್ಯಂತ ಸಂತೋಷದಿಂದ ಮನಪೂರ್ವಕವಾಗಿ ನೀಡಿದ್ದೇನೆ.

ಹಳ್ಳಿಗಾಡಿನ ರೈತಾಪಿ ಕುಟುಂಬದಿಂದ ಬಂದ ನಾನು ರಾಜಕಾರಣಕ್ಕೆ ಪ್ರವೇಶ ಮಾಡುವಾಗ ಮುಂದೊಂದು ದಿನ ಶಾಸಕನಾಗುತ್ತೇನೆ, ಸಚಿವನಾಗುತ್ತೇನೆ, ನಾಡಿನ ಮುಖ್ಯಮಂತ್ರಿಯಾಗುತ್ತೇನೆ ಎಂದು ಕನಸನ್ನೂ ಕಂಡವನಲ್ಲ. ಇಂತಹದ್ದೊಂದು ದುಬಾರಿ ಕನಸನ್ನು ನನಸು ಮಾಡಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ. ಈ ಸಂವಿಧಾನದ ಬಲ ಇಲ್ಲದೆ ಹೋಗಿದ್ದರೆ ನಾನು ಎಲ್ಲೋ ಕುರಿ ಮೇಯಿಸಿಕೊಂಡೋ, ಇನ್ನೇನೋ ಆಗಿ ಇರುತ್ತಿದ್ದೆ. ಈ ಕಾರಣಕ್ಕಾಗಿ ಮೊದಲಿಗೆ ನಮ್ಮ ಸಂವಿಧಾನ ಮತ್ತು ಸಂವಿಧಾನದ ಶಿಲ್ಪಿಯಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಈ ಸಂದರ್ಭದಲ್ಲಿ ತಲೆಬಾಗಿ ನಮಿಸುತ್ತೇನೆ.

ಎರಡನೆಯದಾಗಿ ರಾಜ್ಯದ ಜನತೆ. ಹೆಚ್ಚುಕಡಿಮೆ ನಾಲ್ಕುವರೆ ದಶಕಗಳ ಸುದೀರ್ಘ ರಾಜಕಾರಣದ ಪಯಣದಲ್ಲಿ ಜನ ನನ್ನನ್ನು ಶಾಸಕ, ಸಚಿವ, ಕೊನೆಗೆ ಎರಡುಬಾರಿ ಮುಖ್ಯಮಂತ್ರಿ ಸ್ಥಾನದ ಕಿರೀಟವನ್ನು ನನ್ನ ತಲೆ ಮೇಲೆ ಇಟ್ಟು ಹರಸಿ ಅವರ ಸೇವೆ ಮಾಡುವ ಭಾಗ್ಯವನ್ನು ನನಗೆ ಕರುಣಿಸಿದ್ದಾರೆ. ಆ ಮತದಾರ ದೇವರುಗಳಿಗೆ ನಾನು ಆಭಾರಿಯಾಗಿದ್ದೇನೆ.

ಮೂರನೆಯದಾಗಿ, ನನ್ನ ಸೈದ್ಧಾಂತಿಕ ಬದ್ಧತೆ ಮತ್ತು ರಾಜಕೀಯ ಹೋರಾಟಕ್ಕೆ ಮನ್ನಣೆ ನೀಡಿದ ಕಾಂಗ್ರೆಸ್‌ ಪಕ್ಷವು ನನ್ನ ಮೇಲೆ ವಿಶ್ವಾಸ ಇರಿಸಿ ನನ್ನನ್ನು ಬರಮಾಡಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಅವಕಾಶ ನೀಡಿದೆ. ಎರಡು ಬಾರಿ ಮುಖ್ಯಮಂತ್ರಿ ಮಾಡಿದೆ, ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಲು ಅವಕಾಶ ನೀಡಿದೆ. ಆ ಮೂಲಕ ಈ ನಾಡಿನ ಜನತೆಗೆ ನಾನು ನಂಬಿರುವ ತತ್ವಾದರ್ಶಗಳ ಅನುಸಾರ ಸೇವೆ ಸಲ್ಲಿಸಲು ಅವಕಾಶ ನೀಡಿದೆ. ಈ ಕಾರಣಕ್ಕಾಗಿ ಶ್ರೀಮತಿ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಸದಾ ಆಭಾರಿಯಾಗಿರುತ್ತೇನೆ.

ನಾನೆಂದೂ ರಾಜಕಾರಣವನ್ನು ಅಧಿಕಾರದ ದಂಡ ಎಂದಾಗಲಿ, ವ್ಯಾಪಾರದ ಗಲ್ಲಾ ಪೆಟ್ಟಿಗೆ ಎಂದಾಗಲಿ ತಿಳಿದುಕೊಂಡವನಲ್ಲ, ಅದು ಬಡವರಿಗೆ, ಶೋಷಿತರಿಗೆ, ನೊಂದವರಿಗೆ ನೆರವಾಗುವ ಒಂದು ಅವಕಾಶ ಎಂದು ತಿಳಿದುಕೊಂಡವನು. ಈ ಸಮುದಾಯಗಳಿಗೆ ನೆರವಾಗುವ ಉದ್ದೇಶದಿಂದಲೇ ವಕೀಲನಾಗಿ ಸೇವೆ ಮಾಡುತ್ತಿದ್ದ ನಾನು ರಾಜಕಾರಣವನ್ನು ಪ್ರವೇಶ ಮಾಡಿದವನು.

ನನ್ನ 77 ವರ್ಷಗಳ ಜೀವನ ಪಯಣದಲ್ಲಿ ಹಲವಾರು ವ್ಯಕ್ತಿಗಳು ಪ್ರೀತಿ-ವಿಶ್ವಾಸದಿಂದ ಕೈಹಿಡಿದು ಮುನ್ನಡೆಸಿದ್ದಾರೆ. ನನ್ನ ಬದುಕು ಒಂದು ತೆರೆದ ಪುಸ್ತಕ. ಈ ಪುಸ್ತಕದಲ್ಲಿ ಮೊದಲ ಬರವಣಿಗೆ ಮಾಡಿದ್ದು ವೀರ ಕುಣಿತವನ್ನು ಕಲಿಯುತ್ತಾ ಸಮಯ ಸಿಕ್ಕಾಗ ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡುತ್ತಿದ್ದ ನನ್ನನ್ನು ಶಾಲೆಗೆ ಕರೆದೊಯ್ದು ವಿದ್ಯೆ ಕಲಿಯುವ ಅವಕಾಶ ನೀಡಿದವರು ರಾಜಪ್ಪ ಮಾಸ್ತರ್.

ವಕೀಲನಾಗಿದ್ದ ನನ್ನಲ್ಲಿನ ಸೇವಾಕಾಂಕ್ಷೆಯನ್ನು ಗುರುತಿಸಿ ಸಮಾಜವಾದದ ಪಾಠ ಮಾಡಿ, ರಾಜಕಾರಣಿಗಳಿಗೆ ಇರಬೇಕಾದ ಸೈದ್ಧಾಂತಿಕ ಬದ್ಧತೆ, ಜನಪರ ಕಾಳಜಿ ಮತ್ತು ಹೋರಾಟದ ಗುಣವನ್ನು ಕಲಿಸಿದವರು ರೈತನಾಯಕ ಎಂ.ಡಿ.ನಂಜುಂಡಸ್ವಾಮಿ

ಮೊದಲ ಬಾರಿ 1983ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ನನ್ನನ್ನು ಗುರುತಿಸಿ ಕನ್ನಡ ಕಾವಲು ಸಮಿತಿ ಅಧ್ಯಕ್ಷನನ್ನಾಗಿ ಮಾಡಿದ್ದಲ್ಲದೆ ಎರಡನೇ ಬಾರಿ ಶಾಸಕನಾದ ನನ್ನನ್ನು ಸಚಿವನನ್ನಾಗಿ ಮಾಡಿದವರು ದಿವಂಗತ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ.

ಇವರೆಲ್ಲರ ನೆರವು, ಕಾಳಜಿ ಮತ್ತು ಮಾರ್ಗದರ್ಶನಗಳು ಇಲ್ಲದೆ ಹೋಗಿದ್ದರೆ ನಾನು ಇಷ್ಟು ದೂರ ಸಾಗಿ ಬರುತ್ತಿರಲಿಲ್ಲ ಮತ್ತು ಇಷ್ಟು ಎತ್ತರಕ್ಕೆ ಏರಲು ಕೂಡಾ ಆಗುತ್ತಿರಲಿಲ್ಲ ಎನ್ನುವುದನ್ನು ವಿನಮ್ರವಾಗಿ ನಿವೇದಿಸಬಯಸುತ್ತೇನೆ.

ನಾನು ದುಡ್ಡು, ಆಸ್ತಿಪಾಸ್ತಿ ಮಾಡಲು ರಾಜಕಾರಣಿ ಆದವನಲ್ಲ. ಮತದಾರ ದೇವರುಗಳು ಅಧಿಕಾರದ ಮೂಲಕ ಅವಕಾಶ ನೀಡಿದಾಗೆಲ್ಲ ಅವರ ಕಲ್ಯಾಣಕ್ಕಾಗಿ ಶ್ರಮಿಸಿದ್ದೇನೆ. ಈ ಸಂದರ್ಭದಲ್ಲಿ ನನ್ನ ಸಾಧನೆಗಳ ದಾಖಲೆಗಳನ್ನು ನಾನು ನಿಮ್ಮ ಮುಂದೆ ಇಟ್ಟ ನನ್ನನ್ನು ಸಾಬೀತುಪಡಿಸುವ ವ್ಯರ್ಥಪ್ರಯತ್ನವನ್ನು ನಾನು ಮಾಡುವುದಿಲ್ಲ. ಅವೆಲ್ಲವೂ ತೆರೆದ ಪುಸ್ತಕದ ರೀತಿಯಲ್ಲಿ ರಾಜ್ಯದ ಜನತೆಯ ಕಣ್ಣಮುಂದಿದೆ.

ಜಾತಿ, ದುಡ್ಡು ಮತ್ತು ತೋಳ್ಬಲಗಳ ನೆರವಿಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಹೆಜ್ಜೆ ಇಡಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಇಂದು ಜನಜನಿತವಾಗಿದೆ. ಇದು ಈ ಕಾಲದ ಸತ್ಯವೂ ಹೌದು. ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ನ್ಯಾಯ, ಜಾತ್ಯತೀತತೆ, ಭಾತೃತ್ವದಂತಹ ಸಂವಿಧಾನದ ಆಶಯಗಳಿಗೆ ಬದ್ದರಾಗಿ ರಾಜಕಾರಣ ಮಾಡುವುದು ಎಷ್ಟೊಂದು ಕಷ್ಟದ ಕೆಲಸ ಎನ್ನುವ ಅನುಭವ ನಾಲ್ಕುವರೆ ದಶಕಗಳ ರಾಜಕೀಯ ಪಯಣದಲ್ಲಿ ನನಗಾಗಿದೆ.

ನನ್ನ ರಾಜಕೀಯ ವಿರೋಧಿಗಳು ರಾಜಕಾರಣಕ್ಕಿಂತ ಬಹುದೂರ ಇದ್ದುಕೊಂಡು ಕುಟುಂಬದ ಪಾಲನೆ-ಪೋಷಣೆಗಷ್ಟೇ ತನ್ನನ್ನು ಸೀಮಿತಗೊಳಿಸಿಕೊಂಡ ನನ್ನ ಪತ್ನಿಯ ವಿರುದ್ದವೂ ಸುಳ್ಳು ಆರೋಪಗಳನ್ನು ಮಾಡಿ ಮಾನಸಿಕ ಹಿಂಸೆ ನೀಡಿದ್ದರು. ಆದರೆ ಶತ್ರುಗಳ ದಾಳಿಗೆ ಹೆದರಿ ಪಲಾಯನವಾದಿಯಾಗ ಬೇಡ, ಜನಸೇವೆಯ ಪಥದಿಂದ ಹಿಂದಡಿ ಇಡಬೇಡ ಎಂದು ನನ್ನ ಅಂತಾರಾತ್ಮ ಎಚ್ಚರಿಸಿತು. ಅನ್ಯಾಯದ ವಿರುದ್ಧ ನ್ಯಾಯದ ಹೋರಾಟವನ್ನು ಮುಂದುವರಿಸಿ ಆರೋಪಿತ ಕಳಂಕವನ್ನು ನಿವಾರಿಸಿಕೊಂಡು ನಿರಾಳನಾದೆ.

ಈ ಸಂಘರ್ಷದ ಹಾದಿಯಲ್ಲಿ ನಾನೆಂದೂ ನಂಬಿದ ಮೌಲ್ಯಗಳ ಜೊತೆ ರಾಜಿಮಾಡಿಕೊಂಡಿಲ್ಲ. ನಂಬಿದ ಜನತೆಗೆ ದ್ರೋಹ ಬಗೆದಿಲ್ಲ, ನನ್ನ ಆತ್ಮಸಾಕ್ಷಿಗೆ ವಂಚನೆ ಮಾಡಿಕೊಂಡಿಲ್ಲ. ಹೋರಾಟವನ್ನೇ ಬದುಕಾಗಿಸಿ ಸ್ವೀಕರಿಸಿ ಇಷ್ಟು ದೂರ ಬಂದಿದ್ದೇನೆ.

ಇಂದಿನ ವರ್ತಮಾನ ನನ್ನನ್ನು ಎಷ್ಟು ಅರ್ಥಮಾಡಿಕೊಂಡಿದೆಯೋ ಗೊತ್ತಿಲ್ಲ, ಸಾಮಾನ್ಯವಾಗಿ ಸಾಮಾಜಿಕ ಪರಿವರ್ತನೆಯ ಹರಿಕಾರರನ್ನು ವರ್ತಮಾನ ಕ್ರೂರವಾಗಿ ನಡೆಸಿಕೊಳ್ಳುತ್ತದೆ. ಆದರೆ ಇತಿಹಾಸ ಮಾತ್ರ ಅವರನ್ನು ನೆನಪಲ್ಲಿಟ್ಟುಕೊಂಡು ಸ್ಮರಿಸುತ್ತದೆ. ಹನ್ನೆರಡನೇ ಶತಮಾನದ ಬಸವಣ್ಣನವರಿಂದ ಹಿಡಿದು ಬಾಬಾ ಸಾಹೇಬ್ ಅಂಬೇಡ್ಕರ್ ವರೆಗೆ ಎಲ್ಲರ ಪಾಲಿನ ಸತ್ಯ ಇದು. ಈ ಭರವಸೆಯ ಆಸರೆಯೊಂದಿಗೆ ನನ್ನ ರಾಜಕೀಯ ಹೋರಾಟವನ್ನು ಮುಂದುವರಿಸಿಕೊಂಡು ಬಂದಿದ್ದೇನೆ, ಅಧಿಕಾರ ಇರಲಿ, ಇಲ್ಲದೆ ಇರಲಿ ಈ ಹೋರಾಟ ಮುಂದುವರಿಯಲಿದೆ.

ನಾನು ರಾಜಕಾರಣಕ್ಕೆ ಪ್ರವೇಶ ಮಾಡಿದಾಗ ನುಡಿದಂತೆ ನಡೆಯಬೇಕು, ಜನತೆ ಇಟ್ಟಿರುವ ವಿಶ್ವಾಸಕ್ಕೆ ಭಂಗ ಉಂಟು ಮಾಡಬಾರದೆಂಬ ಪ್ರಮಾಣವನ್ನು ಮನಸ್ಸಿನೊಳಗೆ ಮಾಡಿದ್ದೆ. ಜನರಿಗೆ ನೀಡಿದ ವಚನಪಾಲನೆಯೇ ನಿಜವಾದ ರಾಜಧರ್ಮ ಎಂದು ನಂಬಿದವನು ನಾನು. ಅದನ್ನು ತ್ರಿಕರಣಪೂರ್ವಕವಾಗಿ ಪಾಲಿಸಿದ್ದೇನೆ ಎಂಬ ವಿಶ್ವಾಸ ನನಗಿದೆ. ನುಡಿದಂತೆಯೇ ನಡೆದಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ.

ರಾಜ್ಯದ ಕಟ್ಟಕಡೆಯ ಮನುಷ್ಯನಿಗೂ ಬದುಕಿನ ಪ್ರಾಥಮಿಕ ಅವಶ್ಯಕತೆಗಳಾದ ಅನ್ನ, ಆರೋಗ್ಯ, ಶಿಕ್ಷಣ, ವಸತಿ ಮತ್ತು ಉದ್ಯೋಗದ ಭಾಗ್ಯ ಲಭಿಸಬೇಕು. ಬಡವ-ಬಲ್ಲಿದನೆಂಬ ಭೇದ ಇಲ್ಲದೆ ಎಲ್ಲರೂ ನಿರ್ಭಯವಾಗಿ ಘನತೆ ಮತ್ತು ಗೌರವರಿಂದ ಬದುಕುವ ವಾತಾವರಣವನ್ನು ನಿರ್ಮಾಣ ಮಾಡಬೇಕು. ಕೃಷಿ ಸಂಪತ್ತು ಬೆಳೆಯಬೇಕು. ಉದ್ಯಮ ಕ್ಷೇತ್ರದಲ್ಲಿ ಪ್ರಗತಿಯಾಗಬೇಕು. ದುಡಿಯುವ ಕೈಗಳಿಗೆ ಉದ್ಯೋಗ ಸಿಗಬೇಕು. ಮೂಲಸೌಲಭ್ಯಗಳು ವೃದ್ಧಿಯಾಗಬೇಕು. ನೆಮ್ಮದಿಯಿಂದ ಬದುಕುವಷ್ಟು ಆದಾಯ ಪ್ರತಿ ಕುಟುಂಬದ ಪಾಲಿಗಿರಬೇಕು. ಸಂಪತ್ತು, ಅಧಿಕಾರ ಮತ್ತು ಅವಕಾಶ ಸಮಾನವಾಗಿ ಎಲ್ಲರಿಗೂ ಹಂಚಿಕೆಯಾಗಬೇಕು- ಇದು ರಾಜಕೀಯ ಕ್ಷೇತ್ರಕ್ಕೆ ಕಾಲಿಡುವಾಗ ನಾನು ಕಂಡ ಕನಸು.

ಆ ಕನಸು ನನಸಾಗುವ ದಾರಿಯಲ್ಲಿ ಕರ್ನಾಟಕ ಭರದಿಂದ ಮುನ್ನಡೆದಿದೆ. ಇಂದು ಕರ್ನಾಟಕವು ದೇಶದಲ್ಲಿಯೇ ತಲಾದಾಯದಲ್ಲಿ ಮೊದಲನೆಯ ಸ್ಥಾನದಲ್ಲಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ನಾವು ಮೇಲಕ್ಕೇರುತ್ತಿದ್ದೇವೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಜನತೆಗೆ ಸಾಮಾಜಿಕ ಭದ್ರತೆಯನ್ನು ಒದಗಿಸಿದ್ದೇವೆ. ಹಸಿವುಮುಕ್ತ ಕರ್ನಾಟಕ ನಿರ್ಮಾಣಗೊಳ್ಳುತ್ತಿದೆ, ಅಪೌಷ್ಠಿಕತೆಯಿಂದ ನರಳುತ್ತಿರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿದಿದೆ, ಆರೋಗ್ಯ ಸೇವೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಅತಿವೃಷ್ಟಿ-ಅನಾವೃಷ್ಟಿಗಳು ಎದುರಾದರೂ ಸಮರ್ಥವಾಗಿ ಎದುರಿಸಿದ್ದೇವೆ, ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನ ಮತ್ತು ಬೆಳೆದ ಬೆಳೆಗೆ ವೈಜ್ಞಾನಿಕವಾದ ಬೆಲೆ ನಿಗದಿಯಿಂದಾಗಿ ಸರ್ಕಾರದ ಬಗ್ಗೆ ರೈತರಲ್ಲಿ ಭರವಸೆ ಮೂಡಿದೆ. ನೀರಿನ ಹಕ್ಕಿನ ರಕ್ಷಣೆಗಾಗಿ ಸರ್ಕಾರ ನಡೆಸುತ್ತಿರುವ ಪ್ರಯತ್ನ ಅವರಿಗೆ ಸಮಾಧಾನ ತಂದಿದೆ. ನೆಲ-ಜಲ-ಭಾಷೆಯ ರಕ್ಷಣೆಯ ವಿಚಾರದಲ್ಲಿ ರಾಜಿ ಇಲ್ಲದ ನಮ್ಮ ನಿಲುವು ಕನ್ನಡಿಗರ ಮನ ಗೆದ್ದಿದೆ.

ನಾಡಿನ ಇತಿಹಾಸದಲ್ಲಿಯೇ ಅತಿಹೆಚ್ಚು ಬಜೆಟ್‌ಗಳನ್ನು ಮಂಡಿಸುವ ಅವಕಾಶ ಲಭ್ಯವಾಗಿದ್ದರ ಬಗ್ಗೆ ನನಗೆ ತೃಪ್ತಿ ಇದೆ. ನಾನು ಮಂಡಿಸಿದ ಹದಿನೇಳು ಬಜೆಟ್‌ಗಳಲ್ಲಿಯೂ ಸಾಮಾಜಿಕ ನ್ಯಾಯ ಹಾಗೂ ಅಭಿವೃದ್ಧಿಪರವಾದ ಯೋಜನೆಗಳಿಗೆ ಸಮಾನ ಪ್ರಾಶಸ್ತ್ಯವನ್ನು ನೀಡಿದ್ದೇನೆ.

ನಾಡು ಕಂಡ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂದು ಇತಿಹಾಸದಲ್ಲಿ ದಾಖಲಾಗುವುದಕ್ಕಿಂತ ಹೆಚ್ಚಾಗಿ ನಾಡಿನ ಅಭಿವೃದ್ಧಿಗೆ, ನಾಡಿನ ಜನತೆಯ ಏಳಿಗೆಗೆ ಕಾರಣವಾಗುವಂತಹ ಮಹತ್ವದ ಯೋಜನೆಗಳನ್ನು ನೀಡಿದ ಮುಖ್ಯಮಂತ್ರಿ ನಾನಾಗಬೇಕು ಎನ್ನುವ ಹಂಬಲದಿಂದ ಇಲ್ಲಿಯವರೆಗೆ ಶ್ರದ್ಧೆಯಿಂದ ಕೆಲಸ ಮಾಡಿದ್ದೇನೆ.

ಕರ್ನಾಟಕದ ಜನತೆ, ವಿಶೇಷವಾಗಿ ನಾಡಿನ ಮೂಲೆಮೂಲೆಗಳಲ್ಲಿರುವ ದೀನದಲಿತರು, ದಮನಿತರು, ದನಿಯಿಲ್ಲದವರು, ಅಶಕ್ತರು, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರು ನನ್ನನ್ನು ತಮ್ಮ ದನಿಯಾಗಿಸಿಕೊಂಡಿದ್ದಕ್ಕೆ ನಾನು ಚಿರಋಣಿಯಾಗಿರುತ್ತೇನೆ. ಅವರು ನನ್ನಲ್ಲಿ ತುಂಬಿದ ಶಕ್ತಿಯಿಂದಾಗಿಯೇ ನಾನು ನಾಡಿನ ಜನತೆಯ ಸೇವೆಯನ್ನು ಇಷ್ಟು ದೀರ್ಘಕಾಲ ಮಾಡಲು ಸಾಧ್ಯವಾಗಿದೆ.

ನನ್ನನ್ನು ನಾಯಕನನ್ನಾಗಿ ಸ್ವೀಕರಿಸಿ ಬೆಂಬಲ ನೀಡಿದ ನನ್ನ ಎಲ್ಲ ಶಾಸಕ ಮಿತ್ರರಿಗೆ, ಸರ್ಕಾರದ ಯಂತ್ರವನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಸಹಕಾರ ನೀಡಿದ ಅಧಿಕಾರಿವರ್ಗಕ್ಕೆ ನಾನು ವಿಶೇಷವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ರಾಜಕಾರಣಿಗಳಿಗೆ ನಿವೃತ್ತಿ ಇಲ್ಲ, ನಾನು ಚುನಾವಣಾ ರಾಜಕಾರಣದಿಂದ ದೂರ ಸರಿಯಬಹುದು, ಆದರೆ ರಾಜಕೀಯ ಕ್ಷೇತ್ರದಲ್ಲಿರುತ್ತೇನೆ. ಮುಂಬರುವ ದಿನಗಳಲ್ಲಿ ರಾಜ್ಯದ ಜನತೆ ಇಲ್ಲವೆ ಪಕ್ಷ ನೀಡುವ ಕರೆಗೆ ಓಗೊಟ್ಟು ಸಹಕಾರ ನೀಡುತ್ತೇನೆ.. ಮತ್ತೊಮ್ಮೆ ಎಲ್ಲರಿಗೂ ನನ್ನ ಕೃತಜ್ಞತೆಗಳು ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಫಸಲ್ ಭೀಮಾ ಯೋಜನೆಯಲ್ಲಿ ಅಕ್ರಮ | ಗ್ರಾಮ ಆಡಳಿತಾಧಿಕಾರಿ ಕೆ.ಸುರೇಶ ಸೇರಿ 8 ಅಧಿಕಾರಿಗಳ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ:ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಹಾರಕನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹು ಗ್ರಾಮಗಳಲ್ಲಿ ಪ್ರಧಾನಮತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ನಡೆದಿರುವ ಬಹುಕೋಟಿ ಹಗರಣವನ್ನು ತನಿಖೆಗೆ ಒಳಪಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಗ್ರಾಮ ಆಡಳಿತಾಧಿಕಾರಿ ಕೋಸಗಿ ಸುರೇಶ ಸೇರಿ 8 ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಹಾರಕನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹುಲಿಕಟ್ಟೆ ಸರ್ಕಲ್ ವ್ಯಾಪ್ತಿಯ ಹಾರಕನಾಳು, ಹುಲಿಕಟ್ಟೆ, ಚನ್ನಳ್ಳಿ ತಾಂಡ, ಈಶಾಪುರ, ಹಾರಕನಾಳು ಸಣ್ಣತಾಂಡ, ಹಾರಕನಾಳು ದೊಡ್ಡತಾಂಡ, ಕನ್ನಾಯಕನಹಳ್ಳಿ ಸೇರಿ ಒಟ್ಟು 07 ಗ್ರಾಮಗಳ ಗ್ರಾಮ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕೋಸಗಿ ಸುರೇಶ ಎಂಬುವವರು ರೈತರೊಂದಿಗೆ ಒಪ್ಪಂದ ಮಾಡಿಕೊಂಡು, ಪ್ರತಿ ವರ್ಷ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಬೆಳೆಗಳಿಗೆ ತಾವೇ ಎಲ್ಲಾ ರೈತರ ಜಮೀನಿಗೆ ಬೆಳೆ ವಿಮೆ ಹಣ ಪಾವತಿಸುವ ಮೂಲಕ ನಿರಂತರವಾಗಿ 3 ವರ್ಷಗಳಿಂದ ಸರ್ಕಾರಕ್ಕೆ ನೂರಾರು ಕೋಟಿ ರೂಪಾಯಿಗಳನ್ನು ವಂಚಿಸುತ್ತ ಬಂದಿರುವ ಮಾಹಿತಿಯು ಸಾಕಷ್ಟು ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗಿರುತ್ತದೆ. ಈ ಬಗ್ಗೆ ರೈತರು ಸಾಕಷ್ಟು ಪ್ರತಿಭಟನೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳಿಗೂ ದೂರು ನೀಡಿರುತ್ತಾರೆ.

ಪ್ರಧಾನಮತ್ರಿ ಫಸಲ್ ಭೀಮಾ ಯೋಜನೆಯಲ್ಲಿನ ಭ್ರಷ್ಟಚಾರದ ಪ್ರಮುಖ ರೂವಾರಿಯಾದ ಕೋಸಗಿ ಸುರೇಶ ಎಂಬುವವರು ತಾವು ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಗುಂಡಗತ್ತಿ ಸರ್ಕಲ್ ವ್ಯಾಪ್ತಿಯ ಬಹು ಗ್ರಾಮಗಳಲ್ಲಿಯೂ ಫಸಲ್ ಭೀಮಾ ಯೋಜನೆಯಲ್ಲಿ (ಕರ್ನಾಟಕ ರೈತ ಸುರಕ್ಷಾ ಫಸಲ್ ಭೀಮಾ ಯೋಜನೆ) ಸಾಕಷ್ಟು ಅವ್ಯವಹಾರ ನಡೆಸುತ್ತ ಬಂದಿರುತ್ತಾರೆ ಎಂಬ ಅಧಿಕೃತ ಮಾಹಿತಿ ಇರುತ್ತದೆ. ಇವರು ತಾವು ಕೆಲಸ ಮಾಡಿದ ಎಲ್ಲಾ ಸ್ಥಳಗಳಲ್ಲಿಯೂ ಸಾಕಷ್ಟು ಅವ್ಯವಹಾರದಲ್ಲಿ ಭಾಗಿಯಾಗಿದ್ದು, ಸಾಕಷ್ಟು ರೈತರಿಗೆ ಸರ್ಕಾರಿ ಯೋಜನೆಗಳನ್ನು ಮಾಡಿಸಿಕೊಡುವುದಾಗಿ ಕೋಟ್ಯಾಂತರ ರೂಪಾಯಿ ಲಂಚ ಪಡೆದಿರುತ್ತಾರೆ. ಹಾಗೆಯೇ ಬಡವರು, ಅಸಹಾಯಕರ ಜಮೀನುಗಳನ್ನು ಪ್ರಬಲರ ಹೆಸರಿಗೆ ವರ್ಗಾಹಿಸುವ ನೀಚ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಬಂದಿರುತ್ತಾರೆ.

ಬಡವರ ಜಮೀನುಗಳನ್ನು ಪ್ರಬಲರ ಹೆಸರಿಗೆ ಮಾಡಿದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದು ನಂತರ ಮೂಲ ಖಾತೆದಾರರಿಗೆ ವರ್ಗಾವಣೆಯಾಗಿರುವ ಸಾಕಷ್ಟು ನಿದರ್ಶನಗಳಿಗೆ. ಆದರೆ ಯಾವುದೇ ಒಂದು ಪ್ರಕರಣದಲ್ಲಿಯೂ ಈ ಅಧಿಕಾರಿಗೆ ಶಿಕ್ಷೆಯಾಗದಂತೆ ಹಿರಿಯ ಅಧಿಕಾರಿಗಳರಿವರನ್ನು ಕಾಪಾಡಿಕೊಂಡು ಬಂದಿರುತ್ತಾರೆ. ಈ ಕಾರಣಕ್ಕಾಗಿಯೇ ಫಸಲ್ ಭೀಮಾ ಯೋಜನೆಯಂತಹ ದೊಡ್ಡ ಮಟ್ಟದ ಹಗರಣಕ್ಕೂ ಮುಂದಾಗಿರುತ್ತಾರೆ.

ಕವಿತಾ ಮನ್ನಿಕೇರಿ, ಜಿಲ್ಲಾಧಿಕಾರಿ, ವಿಜಯನಗರ

ಈ ಎಲ್ಲಾ ಪ್ರಕರಣಗಳನ್ನು ಆಧಾರವಾಗಿಟ್ಟುಕೊಂಡು ಫಸಲ್ ಭೀಮಾ ಯೋಜನೆಯ ಅವ್ಯವಹಾರದಲ್ಲಿ ಭಾಗಿಯಾಗಿರುವ ಹಾರಕನಾಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಎಂ.ಶಿವಣ್ಣ, ಕಂದಾಯ ನಿರೀಕ್ಷಕ ಶ್ರೀ ರಾಘವೇಂದ್ರ, ಹರಪನಹಳ್ಳಿ ತಾಲ್ಲೂಕು ಉಪ ತಹಶೀಲ್ದಾರರಾದ ಶ್ರೀಮತಿ ಕವಿತಾ, ತಹಶೀಲ್ದಾರರಾದ ಶ್ರೀ ಬಿ.ವಿ. ಗಿರೀಶ್‌ಬಾಬು, ಉಪವಿಭಾಗಾಧಿಕಾರಿಯಾದ ಶ್ರೀ ಸುರೇಶ್‌ಕುಮಾರ್ ಟಿ, ಹರಪನಹಳ್ಳಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀ ವೈ.ಹೆಚ್. ಚಂದ್ರಶೇಖರ್, ವಿಜಯನಗರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಕವಿತಾ ಮನ್ನಿಕೇರಿ ಇವರುಗಳ ವಿರುದ್ಧ ದೂರು ದಾಖಲಿಸಿ, ಈ ಎಲ್ಲಾ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿ, ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಎಂಬುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನ ಭವ್ಯ ‘ವಜ್ರ ಮಹೋತ್ಸವ’ ಆಚರಣೆ; ಉಪರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿಗಳ ಆಗಮನ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆಯ ಪ್ರತಿಷ್ಠಿತ ವಿಶ್ವವಿದ್ಯಾಲಯ ಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜು ತನ್ನ 75 ವರ್ಷಗಳ ಅತ್ಯುತ್ತಮ ಶೈಕ್ಷಣಿಕ ಸೇವೆಯ ನೆನಪಿಗಾಗಿ (1951-2026) ಹಮ್ಮಿಕೊಂಡಿರುವ ಭವ್ಯ “ವಜ್ರ ಮಹೋತ್ಸವ ಕಾರ್ಯಕ್ರಮವು ಮೇ 29 ಮತ್ತು 30 ರಂದು ಕಾಲೇಜಿನ ಆವರಣದಲ್ಲಿ ಜರುಗಲಿದೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಅಂಗಸಂಸ್ಥೆಯಾಗಿರುವ ಈ ಕಾಲೇಜಿನ ಉದ್ಘಾಟನಾ ಸಮಾರಂಭವು ಮೇ 29 ರ ಶುಕ್ರವಾರ ಮಧ್ಯಾಹ್ನ 12:00 ಗಂಟೆಗೆ ಆರಂಭವಾಗಲಿದ್ದು, ದೇಶ ಹಾಗೂ ರಾಜ್ಯದ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಸಿ. ಪಿ. ರಾಧಾಕೃಷ್ಣನ್, ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಹಾಗೂ ವಿ.ಟಿ.ಯು. ಕುಲಾಧಿಪತಿಗಳಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಮತ್ತು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆ.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್, ಗಣಿ ಮತ್ತು ಭೂ ವಿಜ್ಞಾನ , ತೋಟಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್, ಉನ್ನತ ಶಿಕ್ಷಣ ಸಚಿವರಾದ ಡಾ. ಎಂ. ಸಿ. ಸುಧಾಕರ್, ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಮೈಸೂರು-ಕೊಡಗು ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಮಂಡಳಿ (FTE&M) ಅಧ್ಯಕ್ಷರಾದ ಪ್ರೊ. ಟಿ. ಜಿ. ಸಿತಾರಾಮ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.

ವಿ.ಟಿ.ಯು ಕುಲಪತಿಗಳಾದ ಡಾ. ಎಸ್. ವಿದ್ಯಾಶಂಕರ್, ರಿಜಿಸ್ಟ್ರಾರ್‌ ಡಾ. ಪ್ರಸಾದ್‌ ಬಿ ರಾಂಪುರೆ , ರಿಜಿಸ್ಟ್ರಾರ್‌ (ಮೌಲ್ಯಮಾಪನ) ಡಾ.ಉಜ್ವಲ್‌ ಯು.ಜೆ , ಹಣಕಾಸು ಅಧಿಕಾರಿ ಡಾ. ಪ್ರಶಾಂತ್‌ ನಾಯಕ್‌ , ಯು.ಬಿ.ಡಿ.ಟಿ.ಇ ಪ್ರಾಂಶುಪಾಲರಾದ ಡಾ. ಡಿ. ಪಿ. ನಾಗರಾಜಪ್ಪ ಮತ್ತು ವಿವಿ ಪದಾಧಿಕಾರಿಗಳು ಕಾರ್ಯಕ್ರಮದ ಆತಿಥ್ಯ ವಹಿಸಲಿದ್ದಾರೆ.

ವಿಶೇಷ ಅತಿಥಿಗಳಾಗಿ ಶಾಸಕರುಗಳಾದ ಶಾಂತನಗೌಡ ಡಿ.ಜಿ., ಬಿ. ದೇವೇಂದ್ರಪ್ಪ, ಬಿ. ಪಿ. ಹರೀಶ್, ಶ್ರೀ ಬಸವರಾಜು ವಿ. ಶಿವಗಂಗಾ, ಕೆ. ಎಸ್. ಬಸವಂತಪ್ಪ, ಸಮರ್ಥ್ ಶಾಮನೂರು, ವಿಧಾನಪರಿಷತ್ ಸದಸ್ಯರುಗಳಾದ ಎಸ್.ಎಲ್. ಭೋಜೆಗೌಡ, ಡಿ.ಎಸ್.ಅರುಣ್‌, ಡಾ. ಧನಂಜಯ್‌ ಸರ್ಜಿ, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್‌, ಡಿ.ಟಿ.ಶ್ರೀನಿವಾಸ್‌ ಹಾಗೂ ಚಳ್ಳಕೆರೆ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಕಾಲೇಜಿನ ಹಳೆಯ ವಿದ್ಯಾರ್ಥಿ ಟಿ. ರಘುಮೂರ್ತಿ , ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದರು ಕಾಲೇಜಿನ ಹಳೆಯ ವಿದ್ಯಾರ್ಥಿ ಜನಾರ್ಧನ ಸ್ವಾ̧ಮಿ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending