Connect with us

ರಾಜಕೀಯ

ರಕ್ಷಣಾ ಅಗತ್ಯಗಳನ್ನು ಪೂರೈಸಲು ರಕ್ಷಣಾ ಇಲಾಖೆಯ ಭೂಮಿಗಳ ಮೆಗಾ ಸೇಲ್..!

Published

on

 

  • ಅರ್ಜುನ್ ಬಿ.
    ಕನ್ನಡಕ್ಕೆ: ಕೆ.ಎಂ.ನಾಗರಾಜ್

ತಾನೊಬ್ಬ ಜನ ಬೆಂಬಲದಿಂದ ಪ್ರವರ್ಧಮಾನಕ್ಕೆ ಬರುತ್ತಿರುವ ಜಾಗತಿಕ ಬಲಪಂಥದ ಅಗ್ರಮಾನ್ಯ ನಾಯಕ ಎಂದು ಮೋದಿಯವರು ಭಾವಿಸಿರಬಹುದು. ಆದರೆ, ಅವರು ತಾನು ಸಾಮ್ರಾಜ್ಯಶಾಹಿಯ ಸುಳಿಯಲ್ಲಿ ಸಿಕ್ಕಿಕೊಂಡಿದ್ದೇನೆ ಮತ್ತು ವಿಶ್ವದಲ್ಲಿ ಅಮೇರಿಕಾದ ಯಜಮಾನಿಕೆಯನ್ನು ಬಲಪಡಿಸುವುದೇ ತನಗಿಗಿರುವ ಏಕೈಕ ಆಯ್ಕೆ ಎಂಬುದನ್ನು ಅರ್ಥಮಾಡಿಕೊಂಡಿಲ್ಲ. ಫಲಿತಾಂಶವೆಂದರೆ, ಭಾರತವನ್ನು ಒಂದು ಮಹಾನ್ ಶಕ್ತಿಶಾಲಿ ದೇಶವನ್ನಾಗಿ ಮಾರ್ಪಡಿಸುವ ಕನಸನ್ನು ಆರು ವರ್ಷಗಳ ಹಿಂದೆ ಭಾರತದ ಜನತೆಗೆ ಕಾಣಿಸಿದ್ದ ಅವರ ಆಳ್ವಿಕೆಯಲ್ಲಿ ಈಗ ದೇಶ ತನ್ನ ಚರಿತ್ರೆಯಲ್ಲಿ, ರಕ್ಷಣಾ ಮಂತ್ರಾಲಯವು ತನ್ನ ಖರ್ಚು ವೆಚ್ಚಗಳಿಗೆ ತನ್ನ ಆಸ್ತಿಗಳನ್ನು ಮಾರಿಕೊಂಡು ಕಾಲ ಸಾಗಿಸುವ ಹಂತವನ್ನು ನಾವೀಗ ತಲುಪಿದ್ದೇವೆ.

___________________________________________

ರು ವರ್ಷಗಳ ಹಿಂದೆ, ಪ್ರಧಾನ ಮಂತ್ರಿ ಮೋದಿಯವರು ಭಾರತವನ್ನು ಒಂದು ಮಹಾನ್ ಶಕ್ತಿಶಾಲಿ ದೇಶವನ್ನಾಗಿ ಮಾರ್ಪಡಿಸುವ ಕನಸನ್ನು ಭಾರತದ ಜನತೆಗೆ ಕಾಣಿಸಿದ್ದರು. ಭಾರತದ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಹಾರಿಸುವುದಾಗಿ ಅವರು 2014ರಲ್ಲಿ ಘೋಷಿಸಿದ್ದರು. ದೇಶದ ರಕ್ಷಣೆ ಮಾಡಿಕೊಳ್ಳುವುದರ ಜೊತೆಗೆ ಜಾಗತಿಕ ವ್ಯವಹಾರ-ವಿದ್ಯಮಾನಗಳಲ್ಲೂ ಭಾರತವು ಪ್ರಧಾನ ಭೂಮಿಕೆ ನಿರ್ವಹಿಸುತ್ತದೆ ಎಂದು ಮೋದಿ ಭಾವಿಸಿದ್ದರು. ಎರಡನೆಯ ಅವಧಿಗೆ ಅಧಿಕಾರಕ್ಕೆ ಬಂದ ನಂತರವಂತೂ ಮೋದಿಯವರ ವರ್ಚಸ್ಸಿನಿಂದ ಭಾರತದ ಮತದಾರರು ಮಾತ್ರವಲ್ಲ ಅಂತಾರಾಷ್ಟ್ರೀಯ ಸಮುದಾಯವೇ ನಿಬ್ಬೆರಗಾಗಿದೆ ಎಂದೇ ಮೋದಿ ಭಕ್ತರು ಭಾವಿಸಿದ್ದಾರೆ. ಹಾಗಾಗಿ, ಕಾಶ್ಮೀರದ ವಿಶೇಷ ಸ್ಥಾನ-ಮಾನ ಕಲ್ಪಿಸುವ 370ನೇ ವಿಧಿಯನ್ನು ಸರಿಯಾದ ಸಮಯದಲ್ಲಿ ಮೋದಿ ರದ್ದುಗೊಳಿಸಿದ್ದಾರೆ, ಏಕೆಂದರೆ, ಭಾರತದ ಪರವಾಗಿ ಅಂತಾರಾಷ್ಟ್ರೀಯ ಅಭಿಪ್ರಾಯವನ್ನು ಅವರು ಪ್ರಭಾವಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದಾಗಿ ಆರ್‌ಎಸ್‌
ಸ್‌ನ ಸಹಚರರು ನಂಬಿದ್ದಾರೆ.

ದೇಶದ ಜನಸಂಖ್ಯೆಯ ಬೃಹತ್ ಗಾತ್ರ, ಅದರ ಭೌಗೋಳಿಕ ನೆಲೆ ಮತ್ತು ಅದರ ಆರ್ಥಿಕ ವಹಿವಾಟುಗಳ ಸ್ವರೂಪ ಮತ್ತು ಗಾತ್ರಗಳಿಂದಾಗಿ, ಜಾಗತಿಕ ವಾಣಿಜ್ಯ-ವ್ಯವಹಾರ ವಹಿವಾಟುಗಳಲ್ಲಿ ಭಾರತವು ಸ್ವಾಭಾವಿಕವಾಗಿಯೇ ಒಂದು ಪ್ರಮುಖ ಜಾಗತಿಕ ಪೈಪೋಟಿದಾರ ಎಂಬುದು ಭಾರತದ ಬಲಪಂಥದ ನಂಬಿಕೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಸಂಜಾತರನ್ನು ಸಂಮೋಹಗೊಳಿಸುವ ಯಶಸ್ವಿ ಕಲೆಯೇ ದೇಶದ ಶಕ್ತಿ-ಸಾಮರ್ಥ್ಯವೆಂಬ ಗುಂಗಿನಲ್ಲಿರುವ ಮೋದಿಯವರು ಅಮೇರಿಕಾದ ಅಧ್ಯಕ್ಷರನ್ನೂ ತನ್ನ ತಾಳಕ್ಕೆ ತಕ್ಕಂತೆ ಕುಣಿಸಬಹುದು ಎಂದು ಭಾವಿಸಿದ್ದಾರೆ.

ಇಂತಹ ದೊಡ್ಡಸ್ತಿಕೆಯ ಭ್ರಮೆಗಳ ಪ್ರಚಾರದ ಮೂಲಕ ವಾಸ್ತವವನ್ನು ಮುಚ್ಚಿಡಲಾಗದು. ಕಟು ವಾಸ್ತವ ಏನೆಂದರೆ, ಕೈಗಾರಿಕೆಗಳ ಅಶಕ್ತ ತಳಹದಿ, ಉನ್ನತವಲ್ಲದ ಮಟ್ಟದ ತಂತ್ರಜ್ಞಾನ, ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಸಂಖ್ಯೆಯ ಜ್ಞಾನ ಬೋಧನೆಯ ಉತ್ಕೃಷ್ಟ ಕೇಂದ್ರಗಳನ್ನು ಹೊಂದಿರುವ ಭಾರತವು ಜಾಗತಿಕ ಗಣ್ಯರನ್ನು ಪ್ರಭಾವಿಸಲಾಗುವುದಿಲ್ಲ.

ಆದಾಗ್ಯೂ, ಮೋದಿ ಸರ್ಕಾರ ಮತ್ತು ಅವರ ಬೆಂಬಲಿಗರು ವಾಸ್ತವ ಜಗತ್ತಿನಿಂದ ದೂರ ಸರಿದು ತಮ್ಮ ಕಲ್ಪನೆಯ ಲೋಕದಲ್ಲಿ ವಿಹರಿಸುತ್ತಲೇ ಇದ್ದಾರೆ. ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ ನಡೆದ ಪ್ರಾದೇಶಿಕ ಸಮಗ್ರ ಆರ್ಥಿಕ ಒಪ್ಪಂದ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದರು: ಭಾರತದಲ್ಲಿ ಉದ್ಯಮ ಸ್ಥಾಪಿಸಲು ಇದು ಅತ್ಯತ್ತಮ ಸಮಯ. ಅನೇಕ ಸಂಗತಿಗಳಲ್ಲಿ ಏರಿಕೆ-ಇಳಿಕೆಗಳಾಗುತ್ತಿವೆ. ದೇಶದಲ್ಲಿ ವ್ಯವಹಾರ ನಡೆಸುವುದು ಸುಗಮವಾಗಿದೆ. ಬದುಕು ಸುಗಮವಾಗಿದೆ. ವಿದೇಶಿ ನೇರ ಹೂಡಿಕೆ, ಮೈದುಂಬಿದ ಅರಣ್ಯಗಳು, ಪೇಟೆಂಟ್ಸ್ (ಸ್ವಾಮ್ಯ), ಉತ್ಪಾದಕತೆ ಮತ್ತು ಮೂಲಸೌಕರ್ಯಗಳು ಹೆಚ್ಚುತ್ತಿವೆ. ಅದೇ ಸಮಯದಲ್ಲಿ ತೆರಿಗೆಗಳು, ತೆರಿಗೆ ದರಗಳು, ಕಛೇರಿಗಳಲ್ಲಿ ವಿಧಾನ-ವಿಳಂಬಗಳು, ಲಂಚಗುಳಿತನಗಳು ಮತ್ತು ಚಮಚಾಗಿರಿ ಇಳಿಯುತ್ತಿವೆ.

ಆದರೆ, ಅಹಿತವಾದ ವಾಸ್ತವ ಏನೆಂದರೆ, ಭಾರತವು ಈಗ ಆರ್ಥಿಕ ಮಂದಗತಿಯಲ್ಲಿ ಒದ್ದಾಡುತ್ತಿದೆ. ನೆರೆಯ ಬಾಂಗ್ಲಾದೇಶವು, ಭಾರತಕ್ಕಿಂತಲೂ ವೇಗವಾಗಿ, 8.1% ಆರ್ಥಿಕ ಬೆಳವಣಿಗೆ ಸಾಧಿಸುತ್ತಿದೆ. ನೇಪಾಳವೂ ಸಹ 2019ರಲ್ಲಿ ಭಾರತಕ್ಕಿಂತಲೂ ವೇಗವಾಗಿ ಬೆಳೆಯುತ್ತದೆ ಎಂದು ಅಂದಾಜು ಮಾಡಲಾಗಿದೆ. ವಿಶ್ವ ಬ್ಯಾಂಕಿನ ಪ್ರಕಾರ, ಆರ್ಥಿಕ ರಂಗದಲ್ಲಷ್ಟೇ ಅಲ್ಲ, ಹಲವು ಸಾಮಾಜಿಕ ಸೂಚಿಗಳಲ್ಲೂ ಬಾಂಗ್ಲಾದೇಶವು ಭಾರತಕ್ಕಿಂತ ಮುಂದಿದೆ. ಬಾಂಗ್ಲಾದೇಶದ ಸರಾಸರಿ ಮಾನವ ಜೀವಿತಾವಧಿ 72 ವರ್ಷಗಳಿದ್ದರೆ, ಭಾರತದಲ್ಲಿ ಅದು 69.1 ವರ್ಷಗಳು. ಬಾಂಗ್ಲಾದೇಶದ ಶಿಶು ಮರಣ ಸಂಖ್ಯೆ 25.1 ಇದ್ದರೆ, ಭಾರತದಲ್ಲಿ ಅದು 31.5 ಇದೆ.

ಕೇಂದ್ರ ಸರ್ಕಾರದ ಹಣಕಾಸಿನ ಪರಿಸ್ಥಿತಿ ಅದೆಷ್ಟು ಹದಗೆಟ್ಟಿದೆ ಎಂದರೆ, ಅದು ತನ್ನ ಮಾಮೂಲಿ ಖರ್ಚು-ವೆಚ್ಚಗಳಿಗೂ ಹಣ ಹೊಂದಿಸಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಹಾಗಾಗಿ, ತನ್ನ ಉದ್ದಿಮೆಗಳನ್ನೇ ಮಾರುತ್ತಿದೆ. ಈ ಬಗ್ಗೆ ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ ಹೀಗೆ ಟ್ವೀಟ್ ಮಾಡಿದ್ದರು: ಮೋದಿ ಸರ್ಕಾರ ಪಾಪರಾಗಿದೆಯೇ? ತನ್ನ ದುಂದುಗಾರಿಕೆಯ ಖರ್ಚುಗಳಿಗೆ ಮತ್ತು ಕಟ್ಟು ಕತೆ ಹಾಗೂ ಅಸತ್ಯಗಳಿಂದ ಕೂಡಿದ ಪ್ರಚಾರಗಳಿಗೆ ಹಣ ಹೊಂದಿಸಿಕೊಳ್ಳಲು ಜನತೆಗೆ ಸೇರಿದ ಸಂಪತ್ತನ್ನು ಮಾರುವುದೇ?

ಕೇಂದ್ರ ಸರ್ಕಾರದ ಆದಾಯವು ಕಳೆದ ಎರಡು ವರ್ಷಗಳಿಂದಲೂ ಸತತವಾಗಿ ಇಳಿಯುತ್ತಿದೆ. ಹಾಗಾಗಿ, ಅದರ ವಿತ್ತೀಯ ಕೊರತೆ ಹೆಚ್ಚುತ್ತಿದೆ. ಈ ಕೊರತೆಯನ್ನು ಸರಿದೂಗಿಸಿಕೊಳ್ಳುವ ಸಲುವಾಗಿಯೇ, ರಿಸರ್ವ್ ಬ್ಯಾಂಕ್ ಹೊಂದಿದ್ದ ಮೀಸಲು ನಿಧಿಯಿಂದ 1.76 ಲಕ್ಷ ಕೋಟಿ ರೂಗಳನ್ನು ಇತ್ತೀಚೆಗಷ್ಟೇ ಕಸಿದುಕೊಂಡಿತ್ತು. ಆದಾಗ್ಯೂ, ಕೇಂದ್ರ ಸರ್ಕಾರವು ರಿಸರ್ವ್ ಬ್ಯಾಂಕ್ ಮೀಸಲು ಇಟ್ಟುಕೊಂಡಿರುವ ಚಿನ್ನವನ್ನೂ ಸಹ ಹರಾಜು ಹಾಕುವ ಸನ್ನಾಹದಲ್ಲಿದೆ ಎಂಬ ವರದಿ ಪ್ರಕಟವಾಗಿದೆ.

ಅಷ್ಟಾಗಿಯೂ, ಖಜಾನೆಯಲ್ಲಿ ಸಾಕಷ್ಟು ಹಣವಿಲ್ಲದಿರುವ ಪರಿಸ್ಥಿತಿಯಲ್ಲಿ, ಆದಾಯದ ಕೊರತೆಯನ್ನು ಸರಿದೂಗಿಸಿಕೊಳ್ಳಲು ಸರ್ಕಾರವು ಜನತೆಗೆ ಸೇರಿದ ಸಾರ್ವಜನಿಕ ಉದ್ದಿಮೆಗಳ ಸ್ವತ್ತುಗಳನ್ನು ಮಾರುತ್ತಿದೆ.
ಮಹಾರತ್ನ ಕಂಪೆನಿ ಎಂಬ ಅಭಿದಾನಕ್ಕೆ ಪಾತ್ರವಾಗಿದ್ದ ಮತ್ತು ಇಲ್ಲಿಯವರೆಗೆ 17,246 ಕೋಟಿ ರೂಗಳ ಲಾಭಾಂಶವನ್ನು ಕೇಂದ್ರ ಸರ್ಕಾರಕ್ಕೆ ನೀಡಿರುವ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ನಿನ 53.29% ಷೇರುಗಳನ್ನು; ಹಿಂದಿನ ವರ್ಷದಲ್ಲಿ 171% ಲಾಭಾಂಶ ಕೊಟ್ಟಿರುವ ಮತ್ತು ನವರತ್ನ ಕಂಪೆನಿಗಳಲ್ಲಿ ಒಂದಾದ ಕಂಟೈನರ್ ಕಾರ್ಪೊರೇಷನ್ನಿನ 63.75%; ಷಿಪ್ಪಿಂಗ್ ಕಾರ್ಪೊರೇಷನ್ನಿನ 63.75%; ತೆಹ್ರಿ ಹೈಡ್ರೊ ಡೆವೆಲ್ಪಮೆಂಟ್ ಕಾರ್ಪೊರೇಷನ್ನಿನ 75%; ನಾರ್ತ್ ಈಸ್ಟ್ ಇಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ನಿನ 100% ಷೇರುಗಳನ್ನು ಮಾರುವ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟವು ಕೈಗೊಂಡಿದೆ. ಮಾರಾಟದ ಪಟ್ಟಿಯಲ್ಲಿ, ಹಿಂದಿನ ವರ್ಷ ಒಂದರಲ್ಲೇ 7,218 ಕೋಟಿ ರೂ ಗಳ ಲಾಭ ಗಳಿಸಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ನಿನ 100% ಷೇರುಗಳ ಮಾರಾಟವನ್ನು ಕೊನೆ ಗಳಿಗೆಯಲ್ಲಿ ಸೇರಿಸಲಾಗಿದೆ ಎಂದು ವರದಿಯಾಗಿದೆ.

ಸರ್ಕಾರದ ಆರ್ಥಿಕ ಪರಿಸ್ಥಿತಿ ಅದೆಷ್ಟು ಬಿಗಡಾಯಿಸಿದೆ ಎಂದರೆ, ಕಾಯಂ ಸೇನೆಯನ್ನು ಪರಿಣಾಮಕಾರಿಯಾಗಿ ನಿಯುಕ್ತಿಗೊಳಿಸಲು ಮತ್ತು ಅದನ್ನು ನವೀನವಾಗಿ ಸಜ್ಜುಗೊಳಿಸಲು ಸಾಕಾಗುವಷ್ಟು ಹಣ ಸರ್ಕಾರದ ಬಳಿ ಇಲ್ಲ. ವಿತ್ತೀಯ ಮುಂಜಾಗರೂಕತೆಯ ಹೆಸರಿನಲ್ಲಿ, ಮಾಜಿ ಯೋಧರಿಗೆ ಸಲ್ಲಬೇಕಿದ್ದ ಮತ್ತು ವಾಗ್ದಾನ ಮಾಡಿದ್ದ ಒಂದು ಶ್ರೇಣಿ-ಒಂದು ನಿವೃತ್ತಿ ವೇತನವನ್ನು ನಿರಾಕರಿಸಲಾಗಿದೆ.

ಇದು ಒಂದು ಸ್ವಯಂ ನಿರ್ಮಿತ ಸಮಸ್ಯೆ. ಮೂಗು ಹೊರಲಾರದಷ್ಟು ದೊಡ್ಡದಾದ ಮೂಗುತಿ ಎನ್ನುವ ರೀತಿಯ ವಿದೇಶ ನೀತಿಯ ಅನುಸರಣೆ ಮತ್ತು ಚಾಣಕ್ಯತೆ ಮತ್ತು ಮಹತ್ವಾಕಾಂಕ್ಷೆಗಳಿಂದ ಕೂಡಿದ ಮನೋಭಾವದ ಕಾರಣಗಳಿಂದಾಗಿ ಈ ಸಮಸ್ಯೆ ಉದ್ಭವವಾಗಿದೆ. ಶಕ್ತಿಶಾಲಿ ದೇಶಗಳ ಮಿಲಿಟರಿ ಮೈತ್ರಿ ಕೂಟಗಳಿಗೆ ಸೇರಿಕೊಳ್ಳುವ ನೀತಿಗೆ ಬಲು ದುಬಾರಿ ಬೆಲೆಯನ್ನೇ ತೆರಬೇಕಾಗುತ್ತದೆ. ಮಿಲಿಟರಿ ಮೈತ್ರಿ ಕೂಟದ ಪಾಲುದಾರ ದೇಶಗಳು ಹೊಂದಿರುವ ಅತ್ಯಾಧುನಿಕ ಶಸ್ತ್ರ ಸಜ್ಜಿತ ಯುದ್ಧ ವಿಮಾನ, ಜಲಾಂತರ್ಗಾಮಿ ನೌಕೆ ಮತ್ತು ಟ್ಯಾಂಕರ್ ಇತ್ಯಾದಿಗಳಿಗೆ ಹೊಂದಿಕೊಳ್ಳುವ ಮಾದರಿಯ ಉಪಕರಣಗಳನ್ನೇ ಭಾರತ ಕೊಳ್ಳಬೇಕಾಗುತ್ತದೆ. ಅವುಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ದಂಡಿಯಾಗಿ ಹಣ ಖರ್ಚುಮಾಡಬೇಕಾಗುತ್ತದೆ.

ಇಂತಹ ಖರ್ಚುಗಳಿಂದಾಗಿ ಉಂಟಾಗಿರುವ ಆರ್ಥಿಕ ಒತ್ತಡವನ್ನು ನಿಭಾಯಿಸುವ ಸಲುವಾಗಿ, ಅಂದರೆ, ದೇಶದ ರಕ್ಷಣೆ ಮತ್ತು ಆಂತರಿಕ ಭದ್ರತೆಯ ವೆಚ್ಚಗಳಿಗೆ ಖಜಾನೆಯ ಹೊರಗಿನ ಮೂಲಗಳಿಂದ ಹಣ ಹೊಂದಿಸಿಕೊಳ್ಳುವ ಉದ್ದೇಶದಿಂದ, ಹದಿನೈದನೆಯ ಹಣಕಾಸು ಆಯೋಗದ ಪರಾಮರ್ಶೆಯ ವಿಷಯ ವ್ಯಾಪ್ತಿಯನ್ನು ತಿದ್ದುಪಡಿ ಮಾಡಲು ಸರ್ಕಾರವು ಹವಣಿಸುತ್ತಿದೆ. ಇಂತಹ ಒಂದು ಪ್ರಸ್ತಾಪದ ಸಮರ್ಥನೆಯಾಗಿ ಸರ್ಕಾರ ಕೊಡುವ ಕಾರಣವೆಂದರೆ, ಖರ್ಚುಗಳ ಬಗ್ಗೆ ರಕ್ಷಣಾ ಮಂತ್ರಾಲಯದ ಮುನ್ನಂದಾಜಿಗೂ ಮತ್ತು ವಿತ್ತ ಮಂತ್ರಾಲಯವು ಹಂಚುವ ಹಣದಲ್ಲಿ ಸತತವಾಗಿ ಶೇ.೨೫ರಷ್ಟು ಕೊರತೆಯಾಗುತ್ತಿದೆ.

ಹದಿನೈದನೆಯ ಹಣಕಾಸು ಆಯೋಗದ ಪರಾಮರ್ಶೆಯ ವಿಷಯ ವ್ಯಾಪ್ತಿಯ ತಿದ್ದುಪಡಿಯ ಮೂಲಕ ರಕ್ಷಣಾ ಇಲಾಖೆಯ ಭೂಮಿಯನ್ನು ಹರಾಜಿಗಿಡುವ ಪ್ರಕ್ರಿಯೆ ಆರಂಭವಾಗುತ್ತದೆ. ಈಗಾಗಲೇ ಭೂಮಿಯ ಹರಾಜಿನ ವಾಸನೆ ಹಿಡಿದಿರುವ ಭೂಗಳ್ಳರು ಮತ್ತು ಖಾಸಗಿ ವಲಯದ ರಣ ಹದ್ದುಗಳು ಅದನ್ನು ಕಬಳಿಸಲು ಹೊಂಚುಹಾಕುತ್ತಾ ಕುಳಿತಿವೆ. ರಕ್ಷಣಾ ಇಲಾಖೆಯು ಹೊಂದಿರುವ 17.5 ಲಕ್ಷ ಎಕರೆಗಳಷ್ಟು ಭೂಮಿಯಲ್ಲಿ, ಎಲ್ಲೆಲ್ಲಿ ಎಷ್ಟೆಷ್ಟು ಭೂಮಿ ಒತ್ತುವರಿಯಾಗಿದೆ ಮತ್ತು ನಾಗರಿಕ ಉದ್ದೇಶಗಳಿಗಾಗಿ ಅಗತ್ಯವಿರುವ ಸೇನೆಯ ಭೂಮಿ ಎಷ್ಟು ಎಂಬುದರ ಬೇಡಿಕೆಯನ್ನು ಗುರುತಿಸುವ ಕೆಲಸ ನಡೆಯುತ್ತಿದೆ.

ತಹ ಹರಾಜಿನ ಮೂಲಕ ರಕ್ಷಣಾ ಮಂತ್ರಾಲಯವು ಕನಿಷ್ಠ 25,000 ಕೋಟಿ ರೂಗಳನ್ನು ಪಡೆಯಬಹುದು ಎಂಬುದು ತಜ್ಞರ ಅಂದಾಜು. ಈ ಹಣವನ್ನು ಮೂಲ ಧನವಾಗಿ ಇಟ್ಟುಕೊಂಡು ಅದರಿಂದ ಬರುವ ಬಡ್ಡಿಯನ್ನು ಸೇನೆಯ ವಿಶೇಷ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು ಎಂಬುದು ತಜ್ಞರ ಸಲಹೆ.

ಈ ಸಂಬಂಧವಾಗಿ ಸಾರ್ವಜನಿಕ ಅಭಿಪ್ರಾಯ gಪಿಸುವ ಉದ್ದೇಶದಿಂದ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗುವಂತೆ ನೋಡಿಕೊಳ್ಳುವ ಕೆಲಸ ರಭಸದಿಂದ ನಡೆಯುತ್ತಿದೆ. ಸಾರ್ವಜನಿಕರಲ್ಲಿ ಅನುಕಂಪ ಹುಟ್ಟಿಸುವ ಉದ್ದೇಶದಿಂದ ದೇಶದ ಉದ್ದಗಲಕ್ಕೂ ಈಗಾಗಲೇ 9600 ಎಕರೆಗೂ ಮೇಲ್ಪಟ್ಟ ಭೂಮಿಯ ಒತ್ತುವರಿಯಾಗಿದೆ. ಈ ಸಂಬಂಧವಾಗಿ, ಹಲವಾರು ರಾಜ್ಯಗಳು ಮತ್ತು ನಗರ ಸಭೆಗಳ ವಿರುದ್ಧ ರಕ್ಷಣಾ ಮಂತ್ರಾಲಯ ದಾವೆ ಹೂಡಿದೆ ಎಂಬ ಕತೆಗಳನ್ನು ಹೆಣೆಯಲಾಗುತ್ತಿದೆ.

ಈ ಎಲ್ಲ ವಿದ್ಯಮಾನಗಳು ಸೂಚಿಸುವ ಸಾರಾಂಶ ಏನೆಂದರೆ, ದೇಶದ ಚರಿತ್ರೆಯಲ್ಲಿ, ರಕ್ಷಣಾ ಮಂತ್ರಾಲಯವು ಸೇನೆಯ ಖರ್ಚು ವೆಚ್ಚಗಳ ನಿರ್ವಹಣೆಗಾಗಿ ಸೇನೆಯ ಆಸ್ತಿ ಮಾರಾಟದಿಂದ ಬರುವ ಬಡ್ಡಿಯನ್ನು ಅವಲಂಬಿಸಿ ಕಾಲ ಸಾಗಿಸುವ ಹಂತವನ್ನು ನಾವೀಗ ತಲುಪಿದ್ದೇವೆ.

ಮಹಾನ್ ದೇಶಗಳು ತಮ್ಮ ಸೇನೆಯ ಖರ್ಚು ವೆಚ್ಚಗಳಿಗೆ ಕಂಡ ಕಂಡ ಸಂದಿ ಮೂಲೆಗಳನ್ನೂ ತಡಕಾಡಿ ತಮ್ಮ ಖಜಾನೆ ತುಂಬಿಸಿಕೊಳ್ಳುವುದಿಲ್ಲ. ಒಂದು ಹುರುಪಿನ ಕಾಯಂ ಸೇನೆಯನ್ನು ಪೋಷಿಸಿ ಅದನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಹೆಣಗಾಡುವ ಯಾವುದೇ ದೇಶದ ಖಜಾನೆಯು ತನ್ನ ಸರ್ಕಾರಕ್ಕೆ ನೆಲದ ಮೇಲೆ ನಿಲ್ಲುವಂತೆ ಮತ್ತು ಅದರ ಮಹತ್ವಾಕಾಂಕ್ಷೆಯನ್ನು ತಾನು ಹೊರುವಷ್ಟು ಮಟ್ಟಕ್ಕೆ ಇಳಿಸಿಕೊಳ್ಳುವಂತೆ ಹೇಳಬೇಕು.

ನಮ್ಮ ಕೊರತೆಗಳನ್ನು ಲೆಕ್ಕಿಸದೆ ಹಿಂದೂ ಮಹಾಸಾಗರದಲ್ಲಿ ನಾವು ಚೀನಾದೊಂದಿಗೆ ಪೈಪೋಟಿಗೆ ಇಳಿಯಲಾಗದು. ಅಪಾರ ಖರ್ಚು ವೆಚ್ಚಗಳು ತಗಲುವಂತಹ ಇಂದ್ರಜಾಲಗಳೋ ಎಂಬಂತಹ ಮಿಲಿಟರಿ ರಕ್ಷಣಾ ದೃಶ್ಯಾವಳಿಗಳನ್ನು ಆಗು ಮಾಡಿಕೊಳ್ಳಲಾಗದು. ನಮ್ಮ ವಿದೇಶ ನೀತಿಯನ್ನು ಮಾರ್ಪಡಿಸಿದ ನಂತರ, ನಮ್ಮ ರಾಜತಾಂತ್ರಿಕತೆ ಯಶಸ್ವಿಯಾಗುತ್ತದೆಂದು ಊಹಿಸಿಕೊಳ್ಳಲಾಗದು.

ಮೋದಿಯವರ ವಿದೇಶ ನೀತಿಯು ಸುಕ್ಕುಗಟ್ಟಿದೆ ಮತ್ತು ಅತಿ ಆಡಂಬರದಿಂದ ಕೂಡಿದೆ. ಅದು ಸೌಮ್ಯವಾಗಿರಬೇಕು ಮತ್ತು ತಾಳ್ಮೆಯಿಂದ ಕೂಡಿರಬೇಕು. ಬೇರೆ ಬೇರೆ ದೇಶಗಳಲ್ಲಿ ಅದ್ದೂರಿಯ ಸಭೆ ಸಮಾರಂಭಗಳನ್ನು ಏರ್ಪಡಿಸಲು ಮೋದಿ ಸರ್ಕಾರವು ಸಾವಿರಾರು ಕೋಟಿ ರೂ ಗಳನ್ನು ಖರ್ಚುಮಾಡುತ್ತಿದೆ. ಇವೆಲ್ಲ ಹಿಂದೆಂದೂ ಆಚರಿಸದ, ಕಂಡರಿಯದ ಕೇಳರಿಯದ ಕ್ರಮಗಳು. ಮೂರು ಟ್ರಿಲಿಯನ್ ಗಾತ್ರದ ಒಂದು ಅರ್ಥವ್ಯವಸ್ಥೆಯು ತನ್ನ ಇತಿ ಮಿತಿಗಳನ್ನು ಅರ್ಥಮಾಡಿಕೊಳ್ಳುವುದನ್ನು ಕಲಿಯಬೇಕು. ಅಂಧ ಶ್ರದ್ಧೆ ಮತ್ತು ನಂಬಿಕೆಗಳಷ್ಟೇ ಒಂದು ಪರಿಪಕ್ವ ಕಾರ್ಯನೀತಿಗೆ ಆಧಾರವಾಗಲಾರವು. ಮೋದಿಯವರ ವಿದೇಶ ನೀತಿಯ ಸಮಸ್ಯೆಯೆಂದರೆ, ಅದು, ದೇಶೀಯವಾಗಿ ಕಡಿಮೆ ಸಾಮರ್ಥ್ಯದ ಆಯುಧ ಮತ್ತು ಮದ್ದುಗುಂಡುಗಳನ್ನು ತಯಾರಿಸುವ ಮದ್ಯಮ ಬಲದ ದೇಶವೊಂದಕ್ಕೆ ಹೊರಲಾರದಷ್ಟು ಭವ್ಯ ಪ್ರಮಾಣದ್ದು.

ಬಲಪಂಥದ ಸಮಸ್ಯೆಯೆಂದರೆ, ಅದು ಬಲ ಪ್ರಯೋಗ ಮಾಡುವ ಇಚ್ಛಾಶಕ್ತಿಯನ್ನು ರಾಷ್ಟ್ರ ಗೌರವದೊಂದಿಗೆ ತಳುಕುಹಾಕುತ್ತದೆ. ದೇಶದ ಸಾರ್ವಭೌಮತೆಯ ಹಿರಿಮೆಯು ಅದು ಹೊಂದಿರುವ ಮಿಲಿಟರಿ ಶಕ್ತಿ ಮತ್ತು ಅದರ ಬಲ ಪ್ರದರ್ಶನಗಳಿಗೆ ನೇರವಾಗಿ ಅನುಗುಣವಾಗಿರುತ್ತದೆ ಎಂದು ಬಲಪಂಥ ಭಾವಿಸುತ್ತದೆ. ಆದರೆ, ಇದೇನೂ ಸಾರ್ವತ್ರಿಕವಾಗಿ ಅನ್ವಯವಾಗುವ ನಿಯಮವಲ್ಲ ಎಂಬುದು ಅದರ ಜಾಣ ಮರೆವು.

ತನ್ನ ಶಸ್ತ್ರಾಸ್ತ್ರಗಳ ಅಗತ್ಯವನ್ನು ಮತ್ತು ಸಂಪರ್ಕ-ಸಾಧನಗಳನ್ನು ಹೊರ ದೇಶಗಳಿಂದ ಪೂರೈಸಿಕೊಳ್ಳುವ ಮಧ್ಯಮ ಬಲದ ದೇಶ ತಾನೊಂದು ಗಟ್ಟಿ ಶಕ್ತಿಯೆಂದು ತೋರಿಸುವ ಅದರ ಆಕಾಂಕ್ಷೆ ಹೆಚ್ಚಿದಷ್ಟು ಅದರ ಸಾರ್ವಭೌಮತ್ವ ಕುಗ್ಗುತ್ತದೆ. ರಾಷ್ಟ್ರ ಹಿತವನ್ನು ಕಾಪಾಡುವ ಪ್ರಯತ್ನಗಳು ಅವಾಸ್ತವಿಕವಾಗಿದ್ದರೆ, ದೇಶವು ಹೆಚ್ಚು ಪರಾಧೀನವೂ ಮತ್ತೂ ಬೇಧ್ಯವೂ ಆಗುತ್ತದೆ.

ತಾನೊಬ್ಬ ಜನ ಬೆಂಬಲದಿಂದ ಪ್ರವರ್ಧಮಾನಕ್ಕೆ ಬರುತ್ತಿರುವ ಜಾಗತಿಕ ಬಲಪಂಥದ ಅಗ್ರಮಾನ್ಯ ನಾಯಕ ಎಂದು ಮೋದಿಯವರು ಭಾವಿಸಿರಬಹುದು. ಆದರೆ, ಅವರು ತಾನು ಸಾಮ್ರಾಜ್ಯಶಾಹಿಯ ಸುಳಿಯಲ್ಲಿ ಸಿಕ್ಕಿಕೊಂಡಿದ್ದೇನೆ ಮತ್ತು ವಿಶ್ವದಲ್ಲಿ ಅಮೇರಿಕಾದ ಯಜಮಾನಿಕೆಯನ್ನು ಬಲಪಡಿಸುವುದೇ ತನಗಿರುವ ಏಕೈಕ ಆಯ್ಕೆ ಎಂಬುದನ್ನು ಅರ್ಥಮಾಡಿಕೊಂಡಿಲ್ಲ.

(ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಶೇ. 56 ರಷ್ಟು ಗಣತಿ ನಮೂನೆಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಸ್.ಐ.ಆರ್.ಕುರಿತು ಮಾಹಿತಿ ನೀಡಲು ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಜಿಲ್ಲೆಯ ಎಲ್ಲಾ ಬಿಎಲ್‌ಒಗಳು ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಅರ್ಜಿಗಳನ್ನು ವಿತರಿಸಿ, ಸ್ವೀಕರಿಸುತ್ತಿದ್ದಾರೆ. ಶೇ. 91 ರಷ್ಟು ಜನರಿಗೆ ಫಾರಂ ಭರ್ತಿ ಮಾಡಲು ತಿಳಿಯದ ಕಾರಣ ಬಿಎಲ್‌ಒಗಳೇ ಸಾರ್ವಜನಿಕರಿಗೆ ಸಹಾಯ ಮಾಡುತ್ತಿದ್ದಾರೆ ಎಂದರು.

ಸಾರ್ವಜನಿಕರ ಅನುಕೂಲಕ್ಕಾಗಿ ದಾವಣಗೆರೆ ನಗರದಲ್ಲಿ 45 ಕೇಂದ್ರಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ತಾಲೂಕು ಕಚೇರಿಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಯಾವುದೇ ಅನುಮಾನಗಳಿದ್ದಲ್ಲಿ ಸಾರ್ವಜನಿಕರು ಬಿಎಲ್‌ಒಗಳನ್ನು ಅಥವಾ ಚುನಾವಣಾ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ನೋಡಲ್ ಅಧಿಕಾರಿಗಳು ಮತ್ತು ಸೂಪರ್‌ವೈಸರ್‌ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಸದ್ಯಕ್ಕೆ ಸಾರ್ವಜನಿಕರಿಂದ ಯಾವುದೇ ದಾಖಲೆಗಳನ್ನು ಸಂಗ್ರಹಿಸುತ್ತಿಲ್ಲ. ಆಗಸ್ಟ್ 7 ರ ನಂತರ ಯಾರು ಯಾವ ದಾಖಲೆಗಳನ್ನು ನೀಡಬೇಕು ಎಂಬುದನ್ನು ಸ್ಪಷ್ಟಪಡಿಸಲಾಗುವುದು. ಅಲ್ಲಿಯವರೆಗೆ ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದರು.

ವಿವಿಧ ತಾಂತ್ರಿಕ ಹಾಗೂ ನೈಜ ಕಾರಣಗಳಿಂದಾಗಿ ಒಟ್ಟು 17,499 ಮತದಾರರ ಗಣತಿ ನಮೂನೆಗಳು ವಾಪಸ್ ಬಂದಿಲ್ಲ. ಇದರಲ್ಲಿ ಪ್ರಮುಖವಾಗಿ 7,487 ಮರಣ ಪ್ರಕರಣಗಳು , 263 ವಿಳಾಸ ಪತ್ತೆಯಾಗದವರು , 6,677 ಶಾಶ್ವತವಾಗಿ ಸ್ಥಳಾಂತರಗೊಂಡವರು , 2,994 ದ್ವಿಪ್ರತಿ ದಾಖಲಾತಿ (Double Entry) ಹಾಗೂ 78 ಇತರೆ ಕಾರಣ ಎಂದು ತಿಳಿಸಿದರು.

1,200 ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ಗುರುತಿಸಿ, ಅಲ್ಲಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮತದಾರರ ಪರಿಷ್ಕರಣೆಯ ಕಾರ್ಯವಿಧಾನದ ಕುರಿತು ವಿವಿಧ ರಾಜಕೀಯ ಪಕ್ಷಗಳೊಂದಿಗೆ ನಡೆದ ಸಭೆ ಯಲ್ಲಿ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸುವ ಕುರಿತು ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಜುಲೈ 29ರ ವರೆಗೆ ಮಾತ್ರ ಕಾಲಾವಕಾಶ ಇರುವುದರಿಂದ ಬಿಎಲ್‌ಒಗಳು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರು ಅವರೊಂದಿಗೆ ಶಾಂತಿಯುತವಾಗಿ ವರ್ತಿಸಿ, ಸೂಕ್ತ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಒಂದು ವೇಳೆ ದ್ವಿಪ್ರತಿ (Double Entry) ಸೇರಿದಂತೆ ಯಾವುದೇ ತಪ್ಪು ಮಾಹಿತಿಗಳನ್ನು ಉದ್ದೇಶಪೂರ್ವಕವಾಗಿ ನೀಡಿದಲ್ಲಿ, ಅಂತವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್‌, ಮಹಾನಗರ ಪಾಲಿಕೆ ಆಯುಕ್ತ ಡಾ.ಮಹಾಂತೇಶ್‌ ಚುನಾವಣಾ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ಗೌಡ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ: ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ, ವಿಭಾಗ-2ರ ವ್ಯಾಪ್ತಿಗೆ 2023-24 ರಿಂದ 2025-26 ರವರೆಗೆ ಸ್ಥಳೀಯ ಶಾಸಕರ ಅನುದಾನದ ಅಡಿಯಲ್ಲಿ ಬಿಡುಗಡೆಯಾದ ಅನುದಾನಗಳ ಖರ್ಚು-ವೆಚ್ಚವನ್ನು ಇಲಾಖಾ ತನಿಖೆ ನಡೆಸುವಂತೆ ದೂರು ನೀಡಿ 5 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷö್ಯ ತೋರಿದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್) ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್ ಗೌಡ ಎಂ.ಬಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಯುಕ್ತಾಗೆ ದೂರು ಸಲ್ಲಿಸಿದ್ದಾರೆ.

ದಾವಣಗೆರೆ ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್) ವಿಭಾಗ-2 ರ ವ್ಯಾಪ್ತಿಗೆ ಒಳಪಡುವ ಮಾಯಕೊಂಡ, ಹೊನ್ನಾಳಿ, ಚನ್ನಗಿರಿ ಉಪ ವಿಭಾಗಗಳು ಹಾಗೂ ವಿಭಾಗ-2ರ ಕಛೇರಿಯ ವ್ಯಾಪ್ತಿಗೆ 2023-24 ರಿಂದ 2025-26ನೇ ಸಾಲಿನ ಅವಧಿಯಲ್ಲಿ ಬಿಡುಗಡೆಯಾಗಿರುವ ಸ್ಥಳೀಯ ಶಾಸಕರ ಅನುದಾನದಲ್ಲಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಹಣವನ್ನು ಇಲಾಖೆಯ ವಾಹನಗಳ ಇಂಧನ ವೆಚ್ಚಕ್ಕೆಂದು ನಿಯಮಬಾಹಿರವಾಗಿ ದುರ್ಬಳಕೆ ಮಾಡಿಕೊಂಡಿರುವುದು ಮಾತ್ರವಲ್ಲದೆ, ಬಹುತೇಕ ಕಡೆಗಳಲ್ಲಿ ಯಾವುದೇ ಕಾಮಗಾರಿ ನಡೆಸದೆ ನಕಲಿ ಕಡತ ಸೃಷ್ಟಿಸಿ ಸ್ಥಳೀಯ ಶಾಸಕರ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ವಿಷಯವು ಅಧಿಕೃತ ಮೂಲಗಳಿಂದ ತಿಳಿದು ಬಂದ ಕಾರಣ ಮಾಹಿತಿಹಕ್ಕು ಅಡಿಯಲ್ಲಿ ಹಲವಾರು ಭಾರಿ ಅರ್ಜಿ ಸಲ್ಲಿಸಿ, ಮಾಹಿತಿ ಕೋರಿದಾಗಲೂ ನಿಯಮಬಾಹಿರವಾಗಿ ಹಿಂಬರಹ ನೀಡುತ್ತ ಬಂದಿರುತ್ತಾರೆ.

ಆದ ಕಾರಣ ದಾವಣಗೆರೆ ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ, ವಿಭಾಗ-2ರ ವ್ಯಾಪ್ತಿಗೆ 2023-24 ರಿಂದ 2025-26 ರವರೆಗೆ ಸ್ಥಳೀಯ ಶಾಸಕರ ಅನುದಾನದ ಅಡಿಯಲ್ಲಿ ಬಿಡುಗಡೆಯಾದ ಅನುದಾನಗಳ ಖರ್ಚು-ವೆಚ್ಚವನ್ನು ಇಲಾಖಾ ತನಿಖೆಗೆ ಒಳಪಡಿಸಿ, ಕೈಗೊಂಡ ಕ್ರಮದ ವರದಿಯನ್ನು ನೀಡುವಂತೆ ವ್ಯವಸ್ಥಾಪಕ ನಿರ್ದೇಶಕರು, ಕೆ.ಆರ್.ಐ.ಡಿ.ಎಲ್, ಬೆಂಗಳೂರು ಇವರಿಗೆ ದಿನಾಂಕ: 06-02-2026 ರಂದು ದೂರು ನೀಡಲಾಗಿತ್ತು. ಆದರೆ ದೂರು ನೀಡಿ 2 ತಿಂಗಳು ಕಳೆದರೂ ಯಾವುದೇ ತನಿಖಾ ವರದಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ಕಾರಣ ದಿನಾಂಕ: 21-04-2026 ರಂದು ಜ್ಞಾಪನ ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ 2 ತಿಂಗಳು ಕಳೆದರೂ ಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್‌ಗೌಡ ಎಂ.ಬಿ ಇವರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.

ಆದ ಕಾರಣ ನಿರ್ಲಕ್ಷö್ಯ ತೋರಿದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್‌ಗೌಡ ಎಂ.ಬಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತ ಕಾಯ್ದೆಯ ಅನುಸಾರ ಪ್ರಕರಣ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರು ಸಲ್ಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ

Published

on

ಸುದ್ದಿದಿನ,ಚಿತ್ರದುರ್ಗ:ಮಾಜಿ ರಾಜ್ಯಸಭಾ ಸದಸ್ಯರು ಹೆಚ್ ಹನುಮಂತಪ್ಪನವರು (95ವರ್ಷ) ವಯೋಸಹಜ ಅನಾರೋಗ್ಯದಿಂದ ದೈವಧೀನರಾಗಿದ್ದಾರೆ ಎಂದು ಪುತ್ರ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹೆಚ್ ಮೋಹನ್ ಅವರು  ತಿಳಿಸಿದ್ದಾರೆ.

ಅಂತ್ಯಕ್ರಿಯೆಯನ್ನು ನಾಳೆ (ಸೋಮವಾರ) ಮಧ್ಯಾಹ್ನ 4:00 ಗಂಟೆಗೆ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆ ಮುಕ್ತಿದಾಮದಲ್ಲಿ ನೆರವೇರಿಸಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ‌.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending