Connect with us

ದಿನದ ಸುದ್ದಿ

ಮೋದಿ ಸರ್ಕಾರದ ಮೂರು ರೈತ ವಿರೋಧಿ ಮರಣಶಾಸನಗಳು

Published

on

  • ಶಿವಸುಂದರ್

ಭಾರತದ ರೈತಾಪಿಯನ್ನು ಕಳೆದ 70 ವರ್ಷಗಳಿಂದ ಬಂಧನದಲ್ಲಿಟ್ಟಿದ್ದ ಎಲ್ಲಾ ಸಂಕೋಲೆಗಳಿಂದ ಬಿಡುಗಡೆ ಮಾಡಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದ ಮುಸುಕನ್ನು ಹೊದ್ದಿದ್ದ, ಆದರೆ ಆದರೆ ರೈತ ಬದುಕನ್ನು ಬಾಣಲೆಯಿಂದ ಬೆಂಕಿಗೆ ತಳ್ಳುವಂತ ಮೂರು ರೈತ ವಿರೋಧಿ ಸುಗ್ರೀವಾಜ್ನೆಗಳಿಗೆ ಕಳೆದ ವಾರ ಮೋದಿ ಸರ್ಕಾರ ಅತ್ಯಂತ ಅಪ್ರಜಾತಾಂತ್ರಿಕವಾಗಿ ಸದನದ ಎರಡೂ ಮನೆಗಳಲ್ಲಿ ಅನುಮೋದನೆ ದಕ್ಕಿಸಿಕೊಂಡಿದೆ. ಲೋಕಸಭೆಯಲ್ಲಿ ಸಾಮ, ದಾನ, ಬೇಧದ ಉಪಾಯಗಳನ್ನು ಬಳಸಿದರೆ ರಾಜ್ಯಸಭೆಯಲ್ಲಂತೂ ದಂಡೋಪಾಯವನ್ನೂ ಬಳಸಿದೆ.

ಇನ್ನು ನಮ್ಮ ರಾಷ್ಟ್ರಪತಿಯವರಂತೂ ಹೇಗೂ ಮೋದಿ ಸರ್ಕಾರದ ನೀತಿಗಳಿಗೆ ಮಧ್ಯರಾತ್ರಿಯಲ್ಲೂ ನಿದ್ದೆಗಣ್ಣಿನಲ್ಲಿ ಸಹಿಹಾಕಲು ಸಿದ್ದರಿದ್ದೇ ಇರುತ್ತಾರೆ. ಆದ್ದರಿಂದ ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯಂತ ಕರಾಳ ರೈತ ವಿರೋಧಿ ಕಾಯಿದೆಗಳನ್ನು ಜಾರಿ ಮಾಡಿದ ಕೀರ್ತಿಯೂ ಸಹ ಮೋದಿ ಸರ್ಕಾರಕ್ಕೆ ದಕ್ಕಲಿದೆ.

ಹಾಗೆ ನೋಡಿದರೆ ಸರ್ಕಾರ ಹೇಳುವ ಪ್ರಕಾರ ಈ ಮಸೂದೆಗಳು ರೈತ ಪರವಾಗಿದ್ದಲ್ಲಿ ಎರಡೂ ಸದನಗಳಲ್ಲಿ ಚರ್ಚೆ ಮಾಡಿ ವಿರೋಧ ಪಕ್ಷಗಳನ್ನು ಬಯಲುಗೊಳಿಸಿ ಇಡೀ ರಾಷ್ಟ್ರಕ್ಕೆ ತಮ್ಮ ಸದಿಂಗಿತವನ್ನು ಸಾಬೀತುಪಡಿಸಬಹುದಾಗಿತ್ತು, ಸರ್ಕಾರ ಅಂತಹ ಯಾವುದೇ ಪ್ರಜಾತಾಂತ್ರಿಕ ಪ್ರಕ್ರಿಯೆಗಳಿಗೂ ಮುಂದಾಗದೆ ಕೋವಿಡ್ ಸಂದರ್ಭವನ್ನು ಬಳಸಿಕೊಂಡು ಪ್ರಜಾತಂತ್ರಕ್ಕೆ ಮಾಸ್ಕ್ ತೊಡಿಸಿ ಈ ಮರಣಶಾಸನಗಳನ್ನು ಜಾರಿ ಮಾಡಿರುವುದು ಸರ್ಕಾರದ ದುಷ್ಟ ಉದ್ದೇಶಗಳಿಗೆ ಒಂದು ಮಹತ್ವದ ಪುರಾವೆಯೇ ಆಗಿದೆ.

ಈ ಮೂರೂ ಶಾಸನಗಳ ಮೇಲ್ನೋಟದ ಓದು ಅನುಮಾನವನ್ನು ಹುಟ್ಟಿಸಿದರೆ ಮಸೂದೆಯ ಪೂರ್ಣ ವಿವರಗಳು ಆತಂಕವನ್ನೇ ಹುಟ್ಟಿಸುತ್ತದೆ. ಮೋದಿ ಸರ್ಕಾರದ ರಾಜಕೀಯಕ್ಕೆ ತಕ್ಕನಾಗಿ ಈ ಮಸೂದೆಗಳ ಒಳತಿರುಳಿಗೆ ತದ್ವಿರುದ್ಧವಾದ ಅರ್ಥವನ್ನು ಸ್ಪುರಿಸುವ ಹೆಸರುಗಳನ್ನು ಈ ಮೂರೂ ಮಸೂದೆಗಳಿಗೆ ಇಡಲಾಗಿದೆ.

ಸರಳವಾಗಿ ಆ ಮೂರು ಮಸೂದೆಗಳನ್ನುAPMC ಯನ್ನು ಬದಿಗೆ ಸರಿಸುವ ಕಾಯಿದೆ .ಕಾಂಟ್ರಾಕ್ಟ್ ಫಾರ್ಮಿಂಗ್ ಜಾರಿ ಮಾಡುವ ಕಾಯಿದೆ.ಬೃಹತ್ ಕೃಷಿ ಕಂಪನಿಗಳಿಗೆ ನಮ್ಮ ದೇಶದ ಆಹಾರ ಸರಕುಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಲು ಅವಕಾಶ ಕೊಡುವ ಕಾಯಿದೆ ಎಂದು ಹೇಳಬಹುದು.

01. APMC ಯನ್ನು ಮೂಲೆಗುಂಪು ಮಾಡುವ ಮಸೂದೆ

ಸರ್ಕಾರದ ಪರಿಭಾಷೆಯಲ್ಲಿ ಈ ಮಸೂದೆಗೆ Farmers Produce Trade and Commerce (Promotion And Facilitation) Bill 2020 ಎಂದು ಕರೆಯಲಾಗುತ್ತದೆ. ಅಂದರೆ ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯಗಳಿಗೆ ಉತ್ತೇಜನ ಮತ್ತು ಸೌಕರ್ಯ ಕಲ್ಪಿಸಿ ಕೊಡುವ ಮಸೂದೆ ಎಂದರ್ಥ.

ಮೇಲ್ನೋಟಕ್ಕೆ ರೈತಪರ ಧ್ವನಿಯಲ್ಲಿರುವ ಈ ಮಸೂದೆಯು ನಿಜಕ್ಕೂ ರೈತರ ಉತ್ಪನ್ನಗಳ ವಾಣಿಜ್ಯದಲ್ಲಿ ರೈತರಿಗೆ ಸೌಕರ್ಯವನ್ನೂ ಉತ್ತೇಜನವನ್ನೂ ನೀಡಲಿದೆಯೇ?

ರೈತರು ತಮ್ಮ ಉತ್ಪನ್ನಗಳನ್ನು ಮಾರಾಟಮಾಡಲು ಹಾಗೂ ಖಚಿತವಾದ ಆದಾಯವನ್ನು ಖಾತರಿ ಮಾಡುವ ಸಲುವಾಗಿಯೇ ರೈತರು, ಮಧ್ಯವರ್ತಿ ದಲ್ಲಾಳಿಗಳೂ ಹಾಗೂ ವ್ಯಾಪಾರಿಗಳನ್ನು ಒಳಗೊಂಡ APMC- ಕೃಷಿ ಉತ್ಪನ್ನ ಮಾರಾಟ ಸಮಿತಿಗಳು ರೂಪುಗೊಂಡವು. ಸರ್ಕಾರವು ಈ APMC ಹಾಗೂ ಮಂಡಿಗಳ ಮೂಲಕ ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು (MSP)ಯನ್ನು ಕೊಟ್ಟು ಅವರ ಸರಕುಗಳನ್ನು ಖರೀದಿಸುತ್ತಿತ್ತು.

ಹಾಗೆ ರೈತರಿಂದ ಖರೀದಿಸಿದ ಧಾನ್ಯಗಳ ಮೂಲಕವೇ ದೇಶಾದ್ಯಂತ ಬಡಜನರಿಗೆ ರಿಯಾಯತಿ ದರದಲ್ಲಿ ಆಹಾರ ಧಾನ್ಯಗಳನ್ಜು ಸರಬರಾಜು ಮಾಡಿ ಈ ದೇಶದ ಜನರ ಆಹಾರ ಭದ್ರತೆಯನ್ನು ಖಾತರಿಗೊಳಿಸುತ್ತಿತ್ತು. 2013ರಲ್ಲಿ ಜಾರಿಗೆ ಬಂದ ಆಹಾರ ಭದ್ರತಾ ಕಾಯಿದೆಯ ನಂತರ ಈ ದೇಶದ 80 ಕೋಟಿಗೂ ಹೆಚ್ಚು ಜನರಿಗೆ ರಿಯಾಯತಿ ದರದಲ್ಲಿ ಆಹಾರ ಧಾನ್ಯಗಳು ಸಿಗುತ್ತಿರುವುದಕ್ಕೆ ಈ ವ್ಯವಸ್ಥೆಯೇ ಕಾರಣ. APMC ಹಾಗೂ MSP ವ್ಯವಸ್ಥೆಯ ಕಾರಣದಿಂದಾಗಿಯೇ ಈ ದೇಶದ ಕೋಟ್ಯಾಂತರ ರೈತರ ಆದಾಯ ಸುನಿಶ್ಚಿತವಾಗಿತ್ತು. ಆದರೆ ಈ ವ್ಯವಸ್ಥೆಯಲ್ಲಿ ರೈತರಿಗೆ ಹಲವಾರು ತೊಂದರೆಗಳಿರುವುದು ನಿಜ.

APMC ಯಲ್ಲಿ ರೈತರಿಗಿಂತ ವ್ಯಾಪಾರಿಗಳು ಮತ್ತು ದಲಾಳಿಗಳು ಸಶಕ್ತರಾಗಿದ್ದಾರೆ. ಅವರುಗಳಿಂದ ರೈತರಿಗೆ ತೂಕದಲ್ಲಿ, ಪ್ರಮಾಣದಲ್ಲಿ ಹಾಗೂ ಬೆಲೆಯ ಪಾವತಿಯಲ್ಲಿ ಹಲವಾರು ಬಾರಿ ಮೋಸವಾಗುತ್ತಿದೆ. ಹಾಗೆಯೇ MSP ವ್ಯವಸ್ಥೆಯು ಪಂಜಾಬ್, ಹರ್ಯಾಣ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಒರಿಸ್ಸಾ ದಂತ ರಾಜ್ಯಗಳನ್ನು ಬಿಟ್ಟರೆ ಎಲಾ ರಾಜ್ಯಗಳ ರೈತರಿಗೂ ಸರಿಸಮನಾಗಿಯೂ ಒದಗುತ್ತಿಲ್ಲ ಹಾಗೂ ಅಕ್ಕಿ, ಗೋಧಿ ಹಾಗೂ ಇನ್ನಿತರ ಇಪ್ಪತ್ತು ರೈತೋತ್ಪನ್ನಗಳನ್ನು ಬಿಟ್ಟರೆ ಬಿಟ್ಟರೆ ರೈತ ಬೆಳೆಯುವ ಎಲ್ಲಾ ಬೆಳೆಗಳು MSP ಅಡಿ ಬರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ MSP ಲೆಕ್ಕಾಚಾರದಲ್ಲೇ ರೈತರ ಎಲ್ಲಾ ವೆಚ್ಚಗಳನ್ನೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ದೇಶದ ರೈತರೆಲ್ಲಾ ಸ್ವಾಮಿನಾಥನ್ ಸಮಿತಿ ವರದಿಯನ್ನು ಜಾರಿ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ.

ಹೀಗೆ ಈಗಿರುವ APMC ಹಾಗೂ MSP ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಹೀಗಾಗಿ ಈವ್ಯವಸ್ಥೆಯಲ್ಲಿ ರೈತಪರ ಸುಧಾರಣೆಗಳ ಅಗತ್ಯವಿದ್ದದ್ದು ನಿಜ. ಹಾಗಿದ್ದಲ್ಲಿ ಮೋದಿ ಸರ್ಕಾರ ತಂದಿರುವ ಈ ಹೊಸ ಮಸೂದೆ/ಕಾಯಿದೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕೊಡುತ್ತದೆಯೇ?

-ಮೋದಿ ಸರ್ಕಾರದ ಈ ಕಾಯಿದೆ APMC ಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವ ಬದಲು ಅದನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಿ ಅದರ ಜಾಗದಲ್ಲಿ ರೈತರಿಗೆ ಯಾವ ಪಾತ್ರವೂ ಇಲ್ಲದ ದೊಡ್ದದೊಡ್ಡ ಬಂಡವಾಳಶಾಹಿಗಳ ಒಡೆತನ ಮತ್ತು ನಿಯಂತ್ರಣದಲ್ಲಿರುವ ಖಾಸಗಿ ಮಂಡಿಗಳು ಮತ್ತು ಖಾಸಗಿ APMC ಗಳ ಸ್ಥಾಪನಗೆ ಅವಕಾಶ ಮಾಡಿಕೊಡುತ್ತದೆ.

-ಹಾಲಿ ಇರುವ APMC ಯಲ್ಲಿ ನಡೆಯುವ ವ್ಯವಹಾರಗಳ ಮೇಲೆ ಕೊಳ್ಳುವವರ ಹಾಗೂ ಮಾರುವವರ ಮೇಲೆ ಸರ್ಕಾರ ತೆರಿಗೆಯನ್ನು ಮತ್ತು ಶುಲ್ಕವನ್ನು ವಿಧಿಸುತ್ತಿತ್ತು. ಆದರೆ ಈ ಹೊಸ ಕಾಯಿದೆಯು ಖಾಸಗಿ ಮಂಡಿಗಳಲ್ಲಿ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸುತ್ತದೆ. ಆ ಮೂಲಕ ಖಾಸಗಿ ಮಂಡಿಗಳಿಗೆ ಉತ್ತೇಜನ ಕೊಡುತ್ತಾ ಹಾಲಿ ಇರುವ APMC ಯಿಂದಲೂ ವ್ಯಾಪಾರಿಗಳು ಹಾಗೂ ಮಾರಾಟಗಾರು ಖಾಸಗಿ ಮಂಡಿಯತ್ತ ಆಕರ್ಷಿತರಾಗಿ ಹಳೆಯ APMCನಿಧಾನವಾಗಿ ಸಾವನ್ನಪ್ಪುವಂತೆ ಮಾಡುತ್ತವೆ.

-ಎಲ್ಲಕ್ಕಿಂತ ಮುಖ್ಯವಾದ ವಿಷಯವೇನೆಂದರೆ APMC ಇಲ್ಲವಾದರೆ ರೈತರಿಗೆ MSP ದರಗಳು ದಕ್ಕುತ್ತವೆಯೇ ಎಂಬುದು. ವಾಸ್ತವವಾಗಿ ಪ್ರಧಾನಿಗಳು ಪದೇ ಪದೇ MSP ರದ್ದು ಮಾಡುವುದಿಲ್ಲ ಎಂದು ಹೇಳುತ್ತಿರುವುದರಲ್ಲಿ ಅರ್ಧ ಸತ್ಯ ಮಾತ್ರ ಇದೆ. ಹಾಲಿ ಅಸ್ಥಿತ್ವದಲ್ಲಿರುವ APMC ಗಳಲ್ಲಿ MSP ರದ್ದು ಮಾಡಲಾಗುವುದು ಎಂಬ ನಿಯಮವೇನೂ ಕಾಯಿದೆಯಲ್ಲಿಲ್ಲ ಎಂಬುದು ನಿಜ.

ಆದರೆ ಹೊಸದಾಗಿ ಅಸ್ಥಿತ್ವಕ್ಕೆ ಬರಲಿರುವ ಖಾಸಗಿ ಮಂಡಿಗಳಲ್ಲಿ MSP ಯನ್ನು ಖಾತರಿಪಡಿಸುವ ನಿಯಮವೂ ಕಾಯಿದೆಯಲ್ಲಿಲ್ಲ ಎಂಬುದನ್ನು ಪ್ರಧಾನಿಯವರು ರೈತರಿಂದ ಮುಚ್ಚಿಡುತ್ತಿದ್ದಾರೆ.

ಹಾಗೂ ಈ ಹೊಸ ಕಾಯಿದೆಯಿಂದಾಗಿ ಹಳೆಯ APMC ಗಳು ನಿಧಾನವಾಗಿ ರದ್ದಾಗಿ ಕೆಲವು ವರ್ಷಗಳ ನಂತರ ಬಹುಪಾಲು ಖಾಸಗಿ ಮಂಡಿಗಳ ಕಾರ್ಟೆಲ್‌ಗಳೇ ಉಳಿದುಕೊಳ್ಳುವುದರಿಂದ ಸರ್ಕಾರವ ಕಾಲಕ್ರಮೇಣ MSP ಹೊಣೆಗಾರಿಕೆಯಿಂದ ಮುಕ್ತವಾಗಲಿದೆ ಎಮ್ಬುದರಲ್ಲಿ ಯಾವುದೇ ಸಂದೇಹವಿಲ್ಲ.

-ಪ್ರಾರಂಭದಲ್ಲಿ ದೊಡ್ಡ ಕೃಷಿ ಉದ್ದಿಮೆದಾರರು ನಡೆಸುವ ಮಂಡಿಗಳಲ್ಲಿ ರೈತರಿಗೆ ಸ್ವಲ್ಪ ಹೆಚ್ಚಿನ ದರ ದೊರೆತರೂ ಎಲ್ಲಾ ಉದ್ದಿಮೆಗಳಲ್ಲಿ ನಡೆಯುವಂತೆ ಈ ಕ್ಷೇತ್ರದಲ್ಲೂ ಬೃಹತ್ ಕಾರ್ಪೊರೇಟು ಉದ್ದಿಮೆಗಳೇ ಬಹಳ ಬೇಗ ಏಕಸ್ವಾಮ್ಯ ಸಾಧಿಸುತ್ತಾರೆ.

ಈ ವ್ಯವಹಾರಕ್ಕೆ ಈಗಾಗಲೇ ಅಂಬಾನಿ. ಆದಾನಿ ಹಾಗೂ ವಿಶ್ವದ ಅತಿದೊಡ್ಡ ಬಹುರಾಷ್ಟ್ರೀಯ ಕಂಪನಿಗಳೂ ದಾಳಿ ಇಡಲು ಸಿದ್ಧವಾಗುತ್ತಿವೆ. ಇಂಥಾ ದೊಡ್ಡ ಉದ್ದಿಮೆಗಳ ಮುಂದೆ ಸಣ್ಣಪುಟ್ಟವರ ಮಂಡಿಗಳು ಉಳಿಯಲು ಸಾಧ್ಯವೇ ಇಲ್ಲ. ಅಂಬಾನಿಯ ಜಿಯೋ ಮೊಬೈಲ್ ಕ್ಷೇತ್ರದಲ್ಲಿ ಏಕಸ್ವಾಮ್ಯ ಸಾಧಿಸಿದ ನಂತರ ಟೆಲಿಕಾಂ ಕ್ಷೇತ್ರದಲ್ಲಿ ನಡೆಯುತ್ತಿರುವುದನ್ನು ನೆನಪಿಸಿಕೊಳ್ಳೋಣ.

ದೊಡ್ಡ ಬಂಡವಾಳಿಗರು ತಮ್ಮ ನಡುವೆ ಕಾರ್ಟೆಲ್ಲುಗಳನ್ನು ಮಾಡಿಕೊಂಡು ದರದ ಯಾವ ಲಾಭವೂ ರೈತರಿಗೆ ಸಿಗದಂತೆ ಮಾಡುತ್ತಾರೆ. ಆಗ ರೈತರು ಬೇರೆ ಯಾವುದೇ ಆಯ್ಕೆ ಇಲ್ಲದೆ ಇದೇ ಕಾರ್ಟೆಲ್ಲುಗಳಿಗೆ ಅವರು ವಿಧಿಸುವ ಬೆಲೆಗೆ ಮಾರಿಕೊಳ್ಳಬೇಕಾಗುತ್ತದೆ.

ಬಿಹಾರದಲ್ಲಿ 2006ರಲ್ಲೇ APMC ಗಳು ರದ್ದಾಗಿದ್ದು ಅಲ್ಲಿ ಯಾವುದೇ ಖಾಸಗಿ ಮಂಡಿಗಳು ರೈತರಿಗೆ ಸ್ಪರ್ಧಾತ್ಮ ದರಗಳನ್ನು ನೀಡುತ್ತಿಲ್ಲ. ವಾಸ್ತವದಲ್ಲಿ ಅಲ್ಲಿನ ರೈತರಿಗೆ ಬಹಳಷ್ಟು ಬಾರಿ ಇತರ ರಾಜ್ಯಗಳ ರೈತರಿಗೆ ಸಿಗುತ್ತಿರುವ MSP ಯ ಮುಕ್ಕಾಲು ಪಾಲೂ ಸಿಗುತ್ತಿಲ್ಲ.

– APMC ಗಳೇ ಇಲ್ಲದಿರುವ ಸಂದರ್ಭದಲ್ಲಿ ಸರ್ಕಾರವು ಪಡಿತರ ವ್ಯವಸ್ಥೆಗಾಗಿ ಆಹಾರ ಖರೀದಿಯನ್ನು ನಿಲ್ಲಿಸುತ್ತದೆ.

ವಾಸ್ತವದಲ್ಲಿ 2015 ರಿಂದಲೂ ಮೋದಿ ಸರ್ಕಾರವು ಪಡಿತರ ಬಿಲ್ಲನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ತೊಡಗಿದೆ. 2016ರಲ್ಲಿ ಶಾಂತಕುಮಾರ ಸಮಿತಿಯೂ ಸಹ ಸರ್ಕಾರಕ್ಕೆ ಆಹಾರ ಪಡಿತರ ಸಬ್ಸೀಡಿಯನ್ನು ಶೇ. 50ರಷ್ಟು ಕಡಿತಗೊಳಿಸಬೇಕೆಂದು ಶಿಫಾರಸ್ಸು ಮಾಡಿತ್ತು. 2018 ಮತ್ತು 2020 ರಲ್ಲಿ ಸರ್ಕಾರದ ಕಾರ್ಯದರ್ಶಿಗಳ ಸಮಿತಿಯು ಪಡಿತರ ಸೌಲಭ್ಯವನ್ನು 80 ಕೋಟಿ ಜನರಿಂದ 20 ಕೋಟಿ ಜನರಿಗೆ ಇಳಿಸುವಂತೆ ಮತ್ತು ಪಡಿತರ ದರವನ್ನು ಎರಡು ಪಟ್ಟು ಹೆಚ್ಚಿಸುವಂತೆ ಶಿಫಾರಸ್ಸು ಮಾಡಿದೆ.

ಈ APMC ಮೂಲೆಗುಂಪು ಕಾಯಿದೆಯು ಸರ್ಕಾರದ ಈ ಉದ್ದೆಶವನ್ನು ಸುಲಭವಾಗಿ ಈಡೇರುವಂತೆ ಮಾಡಿ ದೇಶದ ಕೋಟ್ಯಾಂತರ ಬಡವರ ಬದುಕನ್ನು ಮತ್ತಷ್ಟು ದುರ್ಭರಗೊಳಿಸಲಿದೆ.

ಹೀಗೆ APMC ವ್ಯವಸ್ಥೆಯಲ್ಲಿರುವ ಲೋಪಗಳನ್ನು ಬಳಸಿಕೊಂಡು ಮೋದಿ ಸರ್ಕಾರ ಇಡೀ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆಯನ್ನು ಕಾರ್ಪೊರೇಟ್ ಧಣಿಗಳಿಗೆ ವಹಿಸಿ ರೈತರನ್ನು ಅವರ ಗುಲಾಮಗಿರಿಗೆ ದೂಡಲಿದೆ. ಇಂಥಾ ಕಾಯಿದೆಯನ್ನು ಬೆಂಬಲಿಸಲು ಸಾಧ್ಯವೇ?

2. ಕಾಂಟ್ರಾಕ್ಟ್ ಫಾರ್ಮಿಂಗ್ ಮಸೂದೆ

ರೈತ ಹಿಡುವಳಿಗಳು ಸಣ್ಣದಾಗುತ್ತಿರುವಂತೆ ಕೃಷಿ ಲಾಭದಾಯಕವಾಗುವುದಿಲ್ಲ ಮತ್ತು ಮಾರುಕಟ್ಟೆಯ ಏರುಪೇರುಗಳನ್ನು ಸಣ್ಣ ರೈತರು ತಡೆದುಕೊಳ್ಳಲು ಸಾಧ್ಯವಿಲ್ಲ ಎಂಬುದು ಈ ಕಾಯಿದೆ ತರಲು ಸರ್ಕಾರ ಮುಂದಿಡುತ್ತಿರುವ ಕಾರಣ. ಆದರೆ ಕಾಂಟ್ರಾಕ್ಟ್ ಫಾರ್ಮಿಂಗ್ ಈ ಸಮಸ್ಯೆಗೆ ಪರಿಹಾರವೇ?

ಮೋದಿ ಸರ್ಕಾರ ತರುತ್ತಿರುವ ಎರಡನೇ ಮರಣ ಶಾಸನವಾದ ಕಾಂಟ್ರಾಕ್ಟ್ ಫಾರ್ಮಿಂಗ್ ಶಾಸನದ ಮೂಲಕ ಸರ್ಕಾರವು ರೈತರ ಹಿಡುವಳಿಗಳನ್ನು ಬೃಹತ್ ಬಹುರಾಷ್ಟ್ರೀಯ ಕಂಪನಿಗಳಿಗೆ ಒಪ್ಪಂದದ ಆಧಾರದಲ್ಲಿ ಗುತ್ತಿಗೆಗೆ ಕೊಡಲು ಅನುವು ಮಾಡಿಕೊಡುತ್ತದೆ. ಮಸೂದೆಯ ನಿಜವಾದ ಅರ್ಥವನ್ನು ಬಚ್ಚಿಡಲು ಅದಕ್ಕೆ Farmers (Empowerment And Protection) Price Assurance And Farm Services ಎಂಬ ಉದ್ದನೆಯ ಮತ್ತು ತಪ್ಪು ಅರ್ಥವನ್ನು ಕೊಡುವ ಹೆಸರನ್ನು ಮೋದಿ ಸರ್ಕಾರ ಇಟ್ಟಿದೆ.

ಈ ಮಸೂದೆಯ ಪ್ರಕಾರ ರೈತಾಪಿ ಹಾಗು ದೊಡ್ಡ ಕಾರ್ಪೊರೇಟ್ ಕಂಪನಿಗಳು (ಸರ್ಕಾರದ ಭಾಷೆಯಲ್ಲಿ ಹೇಳುವುದಾದರೆ -Sponsores- ಪ್ರಾಯೋಜಕರು ) ಬೆಲೆ, ಗುಣಮಟ್ಟ ( Grade, Quality and Standards ) ಹಾಗು ಬೆಳೆಗಳ ಬಗ್ಗೆ ಪೂರ್ವಭಾವಿ ಒಪ್ಪಂದಕ್ಕೆ ಬರಬಹುದು.

ಹಾಗೂ ಆ ಒಪ್ಪಂದಗಳಿಗೆ ಸರ್ಕಾರ ರೂಪಿಸಿರುವ ಚೌಕಟ್ಟು ರೈತರ ಪರವಾಗಿದೆ ಮತ್ತು ಅವರನ್ನು ಸಬಲೀಕರಿಸುವುದಕ್ಕೆ ಪೂರಕವಾಗಿದೆ ಎಂದು ಸರ್ಕಾರದ ವಾದ.ಆದರೆ ಸರ್ಕಾರದ ಈ ಭರವಸೆ ಎಷ್ಟು ಸುಳ್ಳು ಎಂಬುದನ್ನು ಆ ಮಸೂದೆಯ ಕೆಳಗಿನ ಮೂರು ಅಂಶಗಳನ್ನು ಮಾತ್ರ ನೋಡಿದರೂ ಅರ್ಥವಾಗುತ್ತದೆ.

  • ಮಸೂದೆಯ 4ನೇ ಸೆಕ್ಷನ್ನಿನ 2ನೇ ಸಬ್ ಕ್ಲಾಸಿನ ಪ್ರಕಾರ :

ರೈತಾಪಿ ಹಾಗು ಪ್ರಾಯೋಜಕರು ಬೆಳೆಯ ಗುಣಮಟ್ಟದ ಬಗ್ಗೆ ಮಾಡಿಕೊಳ್ಳುವ ಒಪ್ಪಂದವು ಸರ್ಕಾರ ಅಥವಾ ಸರ್ಕಾರದಿಂದ ಗುರುತಿಸಲ್ಪಟ್ಟ “ಸ್ವತಂತ್ರ” ಏಜೆನ್ನಿಯು ನಿಗದಿ ಮಾಡುವ ಗುಣಮಟ್ಟವನ್ನು ಅಳವಡಿಸಿಕೊಳ್ಳಬೇಕು. ಮತ್ತು ಅದಕ್ಕೆ ಬದ್ಧವಾಗಿರಬೇಕು

  • ಎಲ್ಲಕ್ಕಿಂತ ಮುಖ್ಯವಾಗಿ ಮಸೂದೆಯ ಸೆಕ್ಷನ್ 6ರ ಸಬ್ ಕ್ಲಾಸ್ 2ರ ಪ್ರಕಾರ

ಪ್ರಾಯೋಜಕರು ರೈತರಿಂದ ಸರಕನ್ನು ಸ್ವೀಕರಿಸುವ ಮುನ್ನ ಸರಕಿನ ಗುಣಮಟ್ಟವು ಒಪ್ಪಂದದಲ್ಲಿ ಮಾಡಿಕೊಂಡ ಗುಣಮಟ್ಟಕ್ಕೆ ತಕ್ಕ ಹಾಗಿದೆಯೇ ಎಂದು ಪರಿಶೀಲಿಸಬೇಕು..ಒಂದು ವೇಳೆ ಪರಿಶೀಲಿಸದೆ ಒಪ್ಪಿಕೊಂಡರೆ ಆ ನಂತರ ಸರಕನ್ನು ತಿರಸ್ಕರಿಸುವಂತಿಲ್ಲ ಎಂದರ್ಥ.

ಕೊನೆಯ ಸಾಲಿನಲ್ಲಿ ರೈತಪರ ಧ್ವನಿ ಕಂಡುಬಂದರೂ ಒಟ್ಟಾರೆ ತಾತ್ಪರ್ಯವೇನು ?

ಒಂದು ವೇಳೆ ಸರಕು ಸ್ವೀಕರಿಸುವ ಮುನ್ನ ಗುಣಮಟ್ಟ ಪರಿಶೀಲಿಸಿದಾಗ ಒಪ್ಪಂದದ ಗುಣಮಟ್ಟಕ್ಕೆ ತಕ್ಕ ಹಾಗೆ ಸರಕಿಲ್ಲ ಎಂದರೆ ಡೆಲಿವರಿಯನ್ನು ತಿರಸ್ಕರಿಸಬಹುದು ಎನ್ನುವುದೇ ಈ ಸಬ್ ಕ್ಲಾಸಿನ ನಿಜವಾದ ತಾತ್ಪರ್ಯ.

ಆಗ ರೈತನಿಗೆ ಇರುವ ದಾರಿಗಳೇನು?

– ಮಸೂದೆಯ 13 ಮತ್ತು 14 ನೇ ಸೆಕ್ಷನ್ನಿನ ಪ್ರಕಾರ ಆಗ ರೈತ ತಾನು ಒಪ್ಪಂದ ಮಾಡಿಕೊಂಡ ಪ್ರಾಯೋಜಕ ದೈತ್ಯ ಕಂಪನಿಯ ಬಗ್ಗೆ ಆ ಪ್ರದೇಶದ ತಹಶೀಲ್ದಾರರಿಗೆ ದೂರು ಸಲ್ಲಿಸಬಹುದು .

ಆಗ ತಹಶೀಲ್ದಾರ್ ಪ್ರಾಯೋಜಕ, ರೈತ ಹಾಗು ಮೂರನೇ ವ್ಯಕ್ತಿಗಳು ಇರುವ ಒಂದು ಸಂಧಾನ ಸಮಿತಿ ಮಾಡುತ್ತಾರೆ. ಅದು 30 ದಿನಗಳೊಳಗೆ ಸಂಧಾನ ಕ್ಕೆ ಬರಬೇಕು.

ಅದು ಆಗದಿದ್ದಲ್ಲಿ ತಹಶೀಲ್ದಾರ್ ಮುಂದಿನ 30 ದಿನಗಳೊಳಗೆ ವ್ಯಾಜ್ಯ ಬಗೆಹರಿಸಬೇಕು. ಈ ತೀರ್ಮಾನವು ಸರಿ ಬರಲಿಲ್ಲವೆಂದರೆ ಡಿಸಿ ನೇತೃತ್ವದ ಮೇಲ್ಮನವಿ ಸಮಿತಿಗೆ ದೂರು ಸಲ್ಲಿಸಬಹುದು .ಅದು ಮುಂದಿನ 30 ದಿನಗಳಲ್ಲಿ ಏನು ತೀರ್ಮಾನ ಕೊಡುತ್ತದೋ ಅದು ಅಖೈರು.

ಎಲ್ಲಾ ಸರ್ಕಾರಗಳೂ ಮತ್ತು ಪಕ್ಷಗಳು ಬಹಿರಂಗವಾಗಿ ಮತ್ತು ಸ್ಪರ್ಧಾತ್ಮಕ ವಾಗಿ ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿ ಗೆ ಪರವಾದ ನೀತಿಗಳನ್ನು ಘೋಷಿಸುತ್ತಿರುವಾಗ, ಅವರಡಿ ಕೆಲಸ ಮಾಡುವ ಅಧಿಕಾರಿಗಳ ಕೋರ್ಟುಗಳು ಕಂಪನಿಗಳ ವಿರುದ್ಧ ಸೊಲ್ಲೆತ್ತಬಲ್ಲವೇ?

ಜೊತೆಗೆ, ಈ ಇಡೀ ವ್ಯಾಜ್ಯದ ಅವಧಿಯಲ್ಲಿ ರೈತ ತನ್ನ ಸರಕನ್ನು ಬೇರೆಡೆ ಮಾರುವ ಹಾಗು ಇಲ್ಲ. ಸಂಗ್ರಹಿಸಿಟ್ಟುಕೊಳ್ಳಲು ಸಣ್ಣಪುಟ್ಟ ರೈತರಿಗೆ ಯಾವುದೇ ಸೌಕರ್ಯವೂ ಇರುವುದಿಲ್ಲ.

ನೂರು ದಿನಗಳ ಕಾಲ ಬೆಳೆದ ಬೆಳೆಗೆ ಹಣ ದಕ್ಕಲಿಲ್ಲವೆಂದರೆ ರೈತರಿಗೆ ನೇಣು ಹಾಕಿಕೊಳ್ಳುವುದು ಬಿಟ್ಟು ಬೇರೆ ಪರ್ಯಾಯವು ಇರುವುದಿಲ್ಲ.

ಮತ್ತೊಂದೆಡೆ ಲಕ್ಷ ಕೋಟಿ ವ್ಯವಹಾರ ನಡೆಸುವ ಕಂಪನಿಗಳಿಗೆ ಈ ವ್ಯಾಜ್ಯಗಳಿಂದ ಯಾವ ತೊಂದರೆಯೂ ಆಗುವುದಿಲ್ಲ.

ವಾಸ್ತವದಲ್ಲಿ ಸಣ್ಣ ಹಿಡುವಳಿಗಳ ಸಮಸ್ಯೆಗೆ ಸಹಕಾರಿ ಕೃಷಿ ಅಥವಾ ಅಂಬೇಡ್ಕರ್ ಹೇಳಿದಂತೆ ಕೃಷಿಯ ರಾಷ್ಟ್ರಿಕರಣ ನಿಜವಾದ ಪರಿಹಾರ. ಕೃಷಿಯ ಕಾರ್ಪೊರೇಟೀಕರಣವಲ್ಲ.

3.ಬೃಹತ್ ಕೃಷಿ ಕಂಪನಿಗಳಿಗೆ ನಮ್ಮ ದೇಶದ ಆಹಾರ ಸರಕುಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಲು ಅವಕಾಶ ಕೊಡುವ ಕಾಯಿದೆ ಅರ್ಥಾತ್ ಅಗತ್ಯ ಸರಕುಗಳ ತಿದ್ದುಪಡಿ ಕಾಯಿದೆ. (Essential Commodities (Amendment) Act):

1955ರಲ್ಲಿ ಈ ಕಾಯಿದೆಯನ್ನು ಜಾರಿಗೆ ತಂದಾಗ ಅದರ ಹಿಂದಿದ್ದ ಉದ್ದೆಶ ಆಹಾರ ಧಾನ್ಯಗಳು ಹಾಗೂ ದೇಶವನ್ನು ಕಟ್ಟಲು ಅತ್ಯಗತ್ಯವಾಗಿರುವ ಕಲ್ಲಿದ್ದಲು, ಕಬ್ಬಿಣ ಇನ್ನಿತ್ಯಾದಿ ಸರಕುಗಳನ್ನು ದೊಡ್ದದೊಡ್ದ ವ್ಯಾಪಾರಿಗಳು ದುರುದ್ದೇಶಪೂರ್ವಕವಾಗಿ ಸಂಗ್ರಹಿಸಿಟ್ಟುಕೊಂಡು, ಕಾಳಸಂತೆ ಹಾಗೂ ಕಳ್ಳದಂಧೆಯನ್ನು ಮಾಡುತಾ ದೇಶದ ಆರ್ಥಿಕತೆಯನ್ನು ಹಳ್ಳ ಹಿಡಿಸಬಾರದೆಂಬುದಾಗಿತ್ತು.

ಸರ್ಕಾರದ ಪ್ರಕಾರ ಕೃಷಿಯ ಉತ್ಪಾದನೆ, ಮಾರಾಟ, ಸಾಗಾಟ, ಸಂಗ್ರಹ ಹಾಗೂ ಬೆಲೆ ನಿಗದಿ ಪ್ರಕ್ರಿಯೆಗಳಲ್ಲಿ ಸರ್ಕಾರದ ಮಧ್ಯಪ್ರವೆಶದಿಂದಾಗಿ ಈ ಬಾಬತ್ತುಗಳಲ್ಲಿ ವಿದೇಶಿ ಮತ್ತು ಖಾಸಗಿ ಬಂಡವಾಳ ಬರುತ್ತಿಲ್ಲ. ಆದ್ದರಿಂದ ಸರ್ಕಾರ ಈ ತಿದ್ದುಪಡಿ ಮಸೂದೆಯ ಮೂಲಕ ಆಹಾರ ಸರಕುಗಳ ಸಾಗಾಟ, ಸಂಗ್ರಹ ಇತ್ಯಾದಿಗಳಿಗಿದ್ದ ಮಿತಿಯನ್ನು ತೆಗೆದುಹಾಕುತ್ತದೆ. ಮತ್ತು ಆಹಾರ ಸಂಸ್ಕರಣೆ ಉದ್ಯಮಗಳಿಗಾಗಿ ಮತ್ತು ರಫ್ತುಗಳಿಗಾಗಿ ದೊಡ್ಡದೊಡ್ಡ ಅಗ್ರಿ ಬಿಸಿನೆಸ್ ಕಂಪನಿಗಳು ಎಷ್ಟು ಬೇಕಾದರೂ ಆಹಾರ ಸಂಗ್ರಹ ಮಾಡಿಟ್ಟುಕೊಳ್ಳಲು ಈ ಕಾಯಿದೆ ಅವಕಾಶ ಕಲ್ಪಿಸಿಕೊಡುತ್ತದೆ.

ಹಾಗಿದ್ದಲ್ಲಿ ದೊಡ್ಡ ದೊಡ್ಡ ಅಗ್ರಿ ಬಿಸಿನೆಸ್ ಕಂಪನಿಗಳು ಅಪಾರ ಆಹಾರ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಿ ಬೆಲೆ ಹೆಚ್ಚಳವಾಗುವಂತೆ ಮಾಡುವುದಿಲ್ಲವೇ?

ಈ ಕಾಯಿದೆಯ ಪ್ರಕಾರ ಬೆಲೆಗಳಲ್ಲಿ ದುಪ್ಪಟ್ಟು ಹೆಚ್ಚಳ ಆದರೆ ಮಾತ್ರ ಹಾಗೂ ಯುದ್ಧ, ಬರ ಇನ್ನಿತ್ಯಾದಿ ವಿಶೇಷ ಸಂದರ್ಭಗಳಲ್ಲಿ ಮಾತ್ರ ಸರ್ಕಾರ ಮಧ್ಯಪ್ರವೇಶ ಮಾಡುತ್ತದಂತೆ!!

ಅಷ್ಟು ಮಾತ್ರವಲ್ಲ.. ಯುದ್ಧ, ಕ್ಷಾಮ ಬಂದಾಗಲೂ ಕೂಡ ಖಾಸಗಿ ಕಂಪನಿಗಳು ರಫ್ತಿಗಾಗಿ ಹಾಗೂ ಕೈಗಾರಿಕೋತ್ಪಾದನೆಗಾಗಿ ಮಾಡಿಕೊಂಡ ಸಂಗ್ರಹವನ್ನು ಮುಟ್ಟುವುದಿಲ್ಲ ಎಂಬ ಭರವಸೆಯನ್ನು ಈ ಕಾಯಿದೆ ಖುಲ್ಲಂಖುಲ್ಲಾ ನೀಡುತ್ತದೆ.

ಹೀಗೆ ಸಾರಾಂಶದಲ್ಲಿ ಈ ಮೂರೂ ಮಸೂದೆಗಳೂ ದೇಶದ ಹಿತಾಸಕ್ತಿಗಿಂತ ಜನರ ಕಲ್ಯಾಣಕ್ಕಿಂತ ಅಗ್ರಿ ಬಿಸಿನೆಸ್ ಕಂಪನಿಗಳಿಗೆ ಅವಕಾಶ ಮಾಡಿಕೊಡುವ ದೇಶದ್ರೋಹಿ ಮಸೂದೆಗಳೇ ಆಗಿವೆ. ಹೊಟ್ಟೆಗೆ ಅನ್ನ ತಿನ್ನುವ ಯಾರೇ ಆದರೂ ಈ ಮಸೂದೆಯನ್ನು ಬೆಂಬಲಿಸಲು ಸಾಧ್ಯವೇ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending