ದಿನದ ಸುದ್ದಿ
ಸತ್ತವರಲ್ಲಿ ನಮ್ಮವರು ಯಾರು ?
“ಎಲ್ಲಿ ನೋಡಿದರಲ್ಲಿ ಚಿಂದಿಯಾದ ಶವಗಳು. ಕಾಲಿಟ್ಟಲೆಲ್ಲ ರಕ್ತವೋ ರಕ್ತ. ಲೆಕ್ಕವಿಲ್ಲದಷ್ಟು ಮೃತದೇಹಗಳ ಅವಶೇಷಗಳು. ಮುಂಡವಿಲ್ಲದ ರುಂಡಗಳು, ರುಂಡವಿಲ್ಲದ ಮುಂಡಗಳು. ಕೈ ಕಾಲುಗಳಿಲ್ಲದ ದೇಹಗಳು. ಗಾಯಗೊಂಡು ಒದ್ದಾಡುತ್ತಿದ್ದ ಹಲವರ ದೇಹಗಳಲ್ಲಿ ಚೂಪಾದ ಗಾಜಿನ ಚೂರುಗಳು ಹೊಕ್ಕಿದ್ದವು. ತಮ್ಮವರ ಪತ್ತೆಗಾಗಿ ಸಾವಿರಾರು ಮಂದಿ ಅಲ್ಲಿ ಸೇರಿದ್ದರು. ಶವಗಳನ್ನು ಗುರುತಿಸಲಾಗದೆ ಅವರು ರೋಧಿಸುತ್ತಿದ್ದರು. ಅವರ ಆಕ್ರಂದನ ಮುಗಿಲು ಮುಟ್ಟಿತ್ತು.” ಇದು ಈಸ್ಟರ್ ಭಾನುವಾರ ದ್ವೀಪರಾಷ್ಟ್ರ ಶ್ರೀಲಂಕಾದ ಕೊಲೊಂಬೋ ನಗರದಲ್ಲಿನ 3 ಚರ್ಚ್ಗಳಲ್ಲಿ ಮತ್ತು 3 ಪಂಚತಾರಾ ಹೊಟೇಲುಗಳಲ್ಲಿ ಸಂಭವಿಸಿದ ಭೀಕರ ಸರಣಿ ಬಾಂಬ್ ಸ್ಟೋಟದ ನಂತರ ಕಂಡುಬಂದ ಮನಕಲಕುವ ದೃಶ್ಯ.
ಚರ್ಚ್ಗಳಲ್ಲಿ ಪ್ರಾರ್ಥನೆಯಲ್ಲಿ ನಿರತರಾಗಿದ್ದವರ ಮೇಲೆ ಮತ್ತು ವಿಲಾಸಿ ಹೊಟೇಲುಗಳಲ್ಲಿ ತಂಗಿದ್ದ ವಿದೇಶಿ ಪ್ರವಾಶಿಗರನ್ನು ಗುರಿಯಾಗಿಸಿಕೊಂಡು ನಡೆದ ಎರಡು ಆತ್ಮಹತ್ಯಾ ದಾಳಿ ಮತ್ತು ಬಾಂಬ್ ಸ್ಪೋಟಗಳಿಂದಾಗಿ 300 ಕ್ಕೂ ಅಧಿಕ ಮಂದಿ ಅಮಾಯಕರು ಅಸುನೀಗಿ, 500 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭಾರತ, ಪಾಕಿಸ್ತಾನ, ಅಮೇರಿಕ, ಡೆನ್ಮಾರ್ಕ್, ಬ್ರಿಟನ್, ಟರ್ಕಿ, ಪೋರ್ಚುಗಲ್, ಚೀನಾ ಮೊದಲಾದ ದೇಶಗಳ 35 ಪ್ರಜೆಗಳು ಮೃತಪಟ್ಟಿದ್ದಾರೆ. ಶ್ರೀಲಂಕಾದ ಇತಿಹಾಸದಲ್ಲೇ ಅತ್ಯಂತ ಬೀಭತ್ಸವಾದ ಈ ದಾಳಿಯನ್ನು ಭಾರತವೂ ಸೇರಿದಂತೆ ವಿಶ್ವದ ಅನೇಕ ದೇಶಗಳ ಗಣ್ಯರು ಬಲವಾಗಿ ಖಂಡಿಸಿದ್ದಾರೆ.
ಅಲ್ಲಿ ಮಕ್ಕಳನ್ನು ಕಳೆದುಕೊಂಡ ಹೆತ್ತವರು, ಅಪ್ಪ-ಅಮ್ಮನನ್ನು ಕಳೆದುಕೊಂಡ ಮಕ್ಕಳು, ಪತಿಯನ್ನು ಕಳೆದುಕೊಂಡ ಮಹಿಳೆಯರು, ಪತ್ನಿಯನ್ನು ಕಳೆದುಕೊಂಡ ಪುರುಷರು ತಮ್ಮವರನ್ನು ಹುಡುಕುತ್ತಿದ್ದರು. ಛಿಧ್ರ, ಛಿಧ್ರವಾದ ಮಾನವ ದೇಹದ ತುಂಡುಗಳಲ್ಲಿ ತಮ್ಮವರನ್ನು ಗುರುತಿಸುವುದು ಹೇಗೆ? ಸತ್ತವರಲ್ಲಿ ನಮ್ಮವರು ಯಾರು?
ಅದೇ ರಕ್ತ! ಅದೇ ಅಂಗಾಂಗಗಳು! ಇವರು ನಮ್ಮವರಾ? ಅವರು ನಮ್ಮವರಾ? ಒಂದರ ಮೇಲೊಂದು ಎಂಬಂತೆ ಬಿದ್ದಿರುವ ಮೃತದೇಹಗಳಲ್ಲಿ ನಮ್ಮವರು ಯಾರು ಎಂದು ಗುರುತಿಸುವುದು ಹೇಗೆ? ಇಂತಹ ಪ್ರಕರಣಗಳಲ್ಲಿ ಮೃತದೇಹಗಳನ್ನು ಗುರುತಿಸಲಾಗದೆ. ತಮಗೆ ಸಂಬಂಧವಿಲ್ಲದ ಮೃತ ದೇಹವನ್ನು ಹಸ್ತಾಂತರಿಸಿಕೊಂಡು ಅಂತ್ಯಸಂಸ್ಕಾರ ಮಾಡಿದ ಉದಾರಣೆಗಳಿವೆ. ಶ್ರೀಲಂಕಾ ಸ್ಪೋಟದಲ್ಲಿ ಮಡಿದ 7 ಜನ ಕನ್ನಡಿಗರು ಸೇರಿದಂತೆ 10 ಜನ ಭಾರತೀಯರು ನಮ್ಮವರೇ. ಮೃತಪಟ್ಟ ಇನ್ನುಳಿದವರೆಲ್ಲರೂ ನಮ್ಮವರೇ. “ಇವ ನಮ್ಮವ, ಇವ ನಮ್ಮವ” ಎನ್ನುವವನಿಗೆ ತಮ್ಮವರು ಸಿಗುತ್ತಾರೆ.ಆತನಿಗೆ ಎಲ್ಲರೂ ತನ್ನವರೇ ಆಗಿರುತ್ತಾರೆ. ಆತ ಮಾನವ ರಕ್ತದಲ್ಲಿ ಬೇಧ ಕಾಣುವುದಿಲ್ಲ.
ಹುಟ್ಟಿನಿಂದಲೇ ಕೆಲವರು ಕೀಳು ಜಾತಿಯವರಾಗಿರುತ್ತಾರೆ ಎಂಬುವುದನ್ನು ಆತ ಒಪ್ಪುವುದಿಲ್ಲ. ಮತ ಧರ್ಮಗಳ ಖಾಸಗಿ ನಂಬಿಕೆಗಳನ್ನು ಆತ ವಿವಾದಾಸ್ಪದಗೊಳಿಸುವುದಿಲ್ಲ. ಪುಲ್ವಾಮಾ ದಾಳಿಯಲ್ಲಿ ಸಾವನ್ನಪ್ಪಿದ ಯೋಧರನ್ನು ಆತ ‘ತನ್ನವರು’ ಎಂದು ದುಃಖಿಸುತ್ತಾನೆ. ಕಳೆದ ಮಾರ್ಚ್ 15 ರಂದು ನ್ಯೂಜಿಲ್ಯಾಂಡ್ನ ಮಸೀದಿಯಲ್ಲಿ ನಡೆದ ಶೂಟೌಟ್ಗೆ ಬಲಿಯಾದ 50 ಮಂದಿ ಪ್ರಾರ್ಥನಾ ನಿರತರನ್ನು ಆತ ‘ತನ್ನವರು’ ಎಂದು ಗುರುತಿಸುತ್ತಾನೆ. ಈಗ ಶ್ರೀಲಂಕಾದ ಚರ್ಚುಗಳಲ್ಲಿ ಬಾಂಬ್ ಸ್ಪೋಟಿಸಿ ಸಾಯಿಸಿದ ನೂರಾರು ಮಂದಿ ಭಕ್ತರನ್ನು ಆತ ‘ತನ್ನವರು’ ಎಂದು ಕಣ್ಣೀರು ಹಾಕುತ್ತಾನೆ. ಆತನಿಗೆ ‘ತನ್ನವರು’ ಸಿಕ್ಕೇ ಸಿಗುತ್ತಾರೆ.
‘ತನ್ನವರು’ ಚೆನ್ನಾಗಿರಬೇಕು. ತನ್ನವರು ನೆಮ್ಮದಿಯಿಂದ ಇರಬೇಕು. ಅವರಿಗೆ ಕಷ್ಟಗಳು ಬರಬಾರದು. ಹೀಗೆ ‘ಇವ ನಮ್ಮವ ಇವ ನಮ್ಮವ’ ಎನ್ನುವವನಿಗೆ ಎಲ್ಲರೂ ಚೆನ್ನಾಗಿರಬೇಕೆಂಬ ಮಹದಾಸೆ! ಆತನಿಗೆ ಯುದ್ಧ ಬೇಡ, ಶಾಂತಿ ಬೇಕು. ಆತನಿಗೆ ಪ್ರೀತಿ ಬೇಕು, ಹಿಂಸೆ ಬೇಡ, ಆತ ಹಂಚಿಕೊಂಡು ಬದುಕು ಬಯಸುತ್ತಾನೆ. ಎಲ್ಲರನ್ನೂ ಒಳಗೊಳ್ಳಲು ಶ್ರಮಿಸುತ್ತಾನೆ. ಆತ ವೈವಿಧ್ಯತೆಯಲ್ಲಿ ಏಕತೆ ಕಾಣುತ್ತಾನೆ. ಆತ ಗಡಿಗಳಿಲ್ಲದ, ಗಡಿ ಘರ್ಷಣೆಗಳಿಲ್ಲದ ವಿಶ್ವದ ಕನಸು ಕಾಣುತ್ತಾನೆ. ಆತ ವಿಶ್ವಮಾನವ. ಸರ್ವಜನಾಂಗ ಪ್ರೇಮಿ, ವಿಶ್ವದ ಕರಿಯರಲ್ಲಿ, ಬಿಳಿಯರಲ್ಲಿ ಆತ ಭೇಧ ಕಾಣುವುದಿಲ್ಲ. ಆಫ್ರಿಕಾದವರು, ಅಮೆರಿಕದವರು ಆತನಿಗೆ ಬೇರೆ ಬೇರೆ ಅಲ್ಲ. ಅವರ ಭಾಷೆ ಯಾವುದೇ ಇರಲಿ. ಅವರ ಆಹಾರ ವಿಹಾರ ಹೇಗೂ ಇರಲಿ, ಆತನಿಗೆ ಅವರೆಲ್ಲರೂ ‘ತನ್ನವರು’.
ಎಲ್ಲಾದರೂ ಸರಿಯೇ, ಭೂಕಂಪದಂತಹ, ಪ್ರವಾಹದಂತಹ, ಬರಗಾಲದಂತಹ ನೈಸರ್ಗಿಕ ವಿಕೋಪ ಸಂಭವಿಸಿ ಸಾವು ನೋವುಗಳಾದಾಗ ಆತ ಮರಗುತ್ತಾನೆ. ತನ್ನ ಕೈಲಾದಷ್ಟು ನೆರವು ನೀಡುತ್ತಾನೆ. ಆತನಿಗೆ ಪಾಕಿಸ್ತಾನ, ಹಿಂದುಸ್ಥಾನ ಎಂಬ ಭೇದವಿಲ್ಲ. ಹಿಂದು-ಮುಸ್ಲಿಂ ಎಂಬ ದ್ವೇಷವಿಲ್ಲ. ಅವನು ಚರ್ಚ್ಗಳನ್ನು ಧ್ವಂಸ ಮಾಡುವುದಿಲ್ಲ. ಮಸೀದಿಯನ್ನು ಕೆಡವಿ ಹೆಮ್ಮೆ ಪಟ್ಟುಕೊಳ್ಳುವುದಿಲ್ಲ. ಆತ ತನ್ನ ನಂಬಿಕೆಗಳನ್ನು ಇತರರ ಮೇಲೆ ಹೇರುವುದಿಲ್ಲ. ದಲಿತರನ್ನು ಆತ ನಿಂದಿಸುವುದಿಲ್ಲ.
ಮಹಿಳೆಯರ ದೇವಸ್ಥಾನ ಪ್ರವೇಶವನ್ನು ಆತ ವಿರೋಧಿಸುವುದಿಲ್ಲ. ಎಲ್ಲರ ಸ್ವಾತಂತ್ರ್ಯವನ್ನು ಆತ ಗೌರವಿಸುತ್ತಾನೆ. ಎಲ್ಲೆಲ್ಲ್ಲೂ ತನ್ನವರಿದ್ದಾರೆ. ಎಲ್ಲಾ ದೇಶಗಳಲ್ಲಿದ್ದಾರೆ. ಎಲ್ಲಾ ಭಾಷೆಗಳನ್ನಾಡುವವರಲ್ಲಿದ್ದಾರೆ. ಎಲ್ಲಾ ಮತಧರ್ಮಗಳ ಅನುಯಾಯಿಗಳಲ್ಲಿದ್ದಾರೆ. ಯಾವುದೇ ಮತವನ್ನು ಪ್ರತಿಪಾದಿಸದಿರುವವರ ನಡುವೆಯೂ ಇದ್ದಾರೆ. ಎಲ್ಲಾ ತರಹದ ಆಹಾರ ಸೇವಿಸುವವರ, ವಿಭಿನ್ನ ಉಡುಪುಗಳನ್ನು ತೊಡುವವರ, ಎಲ್ಲರ ನಡುವೆಯೂ ಆ ವಿಶ್ವ ಮಾನವನಿಗೆ ‘ತನ್ನವರು’ ಇದ್ದಾರೆ.
( ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.
ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.
ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.
ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು.”
- ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
- ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ
ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ ಶಿವಕುಮಾರ್ ಅವರು ಇಮ್ಮಡಿ ಪುಲ್ಲಕೇಶಿ ಸಾಮ್ರಾಟ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಂತರ ಜಿಲ್ಲಾಧ್ಯಕ್ಷರಾದ ಶಿವರತನ್ ಮಾತನಾಡಿ ,ನಾಡಿನ ಇತಿಹಾಸ ಪುಟಗಳಲ್ಲಿ ಕಣ್ಮರೆಯಾಗಿರುವ ಕನ್ನಡದ ಶ್ರೇಷ್ಠ ಸಾಮ್ರಾಟರಲ್ಲಿ ಇಮ್ಮಡಿ ಪುಲಿಕೇಶಿ ಅಗ್ರ ಸ್ಥಾನ ಪಡೆದಿದ್ದಾರೆ. ಇಂತಹ ಮಹಾನ್ ಸಾಮ್ರಾಟರನ್ನ ನೆನಪಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರು.
ಭಾರತೀಯ ನೌಕಾಪಡೆಯ ಪಿತಾಮಹ ಎಂದೇ ಕರೆಯಲಾಗುವ ಇಮ್ಮಡಿ ಪುಲಿಕೇಶಿ ಸಾಮ್ರಾಟರ ಜನ್ಮದಿನದ ಪ್ರಯುಕ್ತ ಭಾರತೀಯ ನೌಕಾಪಡೆ ದಿನಾಚರಣೆಯೆoದು ಆಚರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.
ಬೇರೆಲ್ಲ ಜಯಂತಿಗಳನ್ನು ಆಚರಿಸುವ ಸರ್ಕಾರಗಳು ಇಮ್ಮಡಿ ಪುಲಿಕೇಶಿ ಜಯಂತಿಯನ್ನು ಕಡ್ಡಾಯವಾಗಿ ಎಲ್ಲೆಡೆ ಆಚರಿಸಲು ಆಡಳಿತಾತ್ಮಕವಾಗಿ ಜಾರಿಗೊಳಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಅಧ್ಯಕ್ಷೆ ಶುಭಮಂಗಳ ಅವರು ಸಿಹಿ ವಿತರಿಸಿದರು. ಕನ್ನಡ ಚಳವಳಿಯ ಹಿರಿಯ ಹೋರಾಟಗಾರರು , ಕನ್ನಡ ಚಳವಳಿಯ ಮಾಜಿ ಅಧ್ಯಕ್ಷರಾದ ಬಂಕಾಪುರ ಚನ್ನಬಸಪ್ಪ, ದಾ.ಹ. ಶಿವಕುಮಾರ್. ಈಶ್ವರ್. ಪ್ರಕಾಶ್. ವಾರ್ತಾ ಇಲಾಖೆ ನಿವೃತ್ತ ಬಿ.ಎಸ್. ಬಸವರಾಜ್ ಹಾಗೂ ಹಲವಾರು ಕನ್ನಡಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೆರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಯನ್ನು ಉಪನಿರ್ದೇಶಕರು ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 24 ರೊಳಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಕಟ್ಟಡ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂ.ಸಿ.ಸಿ, ‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ:08192-264056 ಸಲ್ಲಿಸಬೇಕೆಂದು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ
-
ದಿನದ ಸುದ್ದಿ5 days agoಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು
-
ದಿನದ ಸುದ್ದಿ5 days agoಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
-
ದಿನದ ಸುದ್ದಿ5 days agoಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ1 day agoಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
-
ದಿನದ ಸುದ್ದಿ3 days agoದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

