ದಿನದ ಸುದ್ದಿ
ಪರಿಶಿಷ್ಟ ಪಂಗಡದ ಪಟ್ಟಿಯಿಂದ ‘ನಾಯಕ’ ಪದ ಕೈಬಿಟ್ಟಿರುವುದನ್ನು ಖಂಡಿಸಿ ಚಿಗಟೇರಿಯಲ್ಲಿ ಪ್ರತಿಭಟನೆ
ಸುದ್ದಿದಿನ, ಹರಪನಹಳ್ಳಿ : ಪರಿಶಿಷ್ಟ ಪಂಗಡದ ಪಟ್ಟಿಯಿಂದ “ನಾಯಕ” ಪದ ಕೈಬಿಟ್ಟಿರುವುದನ್ನು ಕೂಡಲೇ ನಾಡ ಕಛೇರಿ (ಅಟಲ್ ಜೀ ಜನಸ್ನೇಹಿ) ಕೇಂದ್ರದ ಅಂತರ್ಜಾಲದಲ್ಲಿ ಸೇರಿಸಿ “ನಾಯಕ” (ಪರಿಶಿಷ್ಟ ಪಂಗಡ) ಪ್ರಮಾಣ ಪತ್ರ ನೀಡಲು ಒತ್ತಾಯಿಸಿ ಇಂದು ಹರಪನಹಳ್ಳಿ ತಾಲ್ಲೂಕಿನ,ಚಿಗಟೇರಿ ನಾಡ ಕಛೇರಿಯ ಉಪ-ತಹಶೀಲ್ದಾರರಿಗೆ ಪ್ರತಿಭಟನೆ ಮೂಲಕ ಸಲ್ಲಿಸುತ್ತಿರುವ ಮನವಿ ಸಲ್ಲಿಸಲಾಯಿತು.
ಕರ್ನಾಟಕದ ಬಳ್ಳಾರಿ, ವಿಜಯನಗರ, ಹಾಗೂ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ನಾಯ್ಕಡ ಬುಡಕಟ್ಟಿಗೆ ಸೇರಿದ ನಾಯಕ ಅಥವಾ ನಾಯ್ಕ ಪಂಗಡದವರಾದ ಮ್ಯಾಸ ನಾಯಕ ಅಥವಾ ಮ್ಯಾಸ ಬೇಡರಿಗೆ 1976 ಮತ್ತು 1991 ನೇ ಸಾಲಿನಿಂದ 2021ನೇ ಸಾಲಿನವರೆಗೂ ಪರಿಶಿಷ್ಟ ಪಂಗಡದ “ನಾಯಕ” ಪ್ರಮಾಣ ಪತ್ರ ಕೋರಿ ಅರ್ಜಿ ಸಲ್ಲಿಸಿದರೆ ಪರಿಶಿಷ್ಟ ಪಂಗಡದ “ನಾಯಕ” ಪ್ರಮಾಣ ಪತ್ರವನ್ನು ನೀಡಲಾಗುತ್ತಿತ್ತು. ಆದರೆ ಈಗ್ಗೆ ಸುಮಾರು 5-6 ತಿಂಗಳಿಂದ ನಾಡ ಕಛೇರಿ (ಅಟಲ್ ಜಿ ಜನಸ್ನೇಹಿ) ಕೇಂದ್ರದ ಅಂತರ್ಜಾಲದಲ್ಲಿ ಪರಿಶಿಷ್ಟ ಪಂಗಡದ “ನಾಯಕ “ ಎಂಬ ಪದವನ್ನು ಕೈ ಬಿಡಲಾಗಿದೆ ಮತ್ತು ನಾಯಕ ಎಂದು ಎಸ್ ಟಿ ಪ್ರಮಾಣ ಪತ್ರವನ್ನು ನೀಡುತ್ತಿಲ್ಲ.
ನಾಯಕ Nayaka ಬದಲಾಗಿ (Nayaka (Including Parivara and Talawara)) (ನಾಯಕ(ಪರಿವಾರ ತಳವಾರ ಸೇರಿದಂತೆ)) ಅಥವಾ ನಾಯಕ(ಪರಿವಾರ) ಅಥವಾ ನಾಯಕ(ತಳವಾರ) ಎಂದು ನೀಡಲಾಗುತ್ತಿದೆ. ಸರ್ಕಾರದ ಈ ಸಂವಿಧಾನ ವಿರೋಧಿ ಕ್ರಮವು ನಿಜವಾದ ನಾಯ್ಕಡ-ನಾಯಕ ಪಂಗಡದವರಿಗೆ ಕಾನೂನಿನ ಹಾನಿಯುಂಟು ಮಾಡಿದೆ. 1976ನೇ ಸಾಲಿನಿಂದಲೂ ನಾಯ್ಕಡ,ನಾಯಕ ಎಂಬುದು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಇರುತ್ತದೆ.
2020 ರಲ್ಲಿ ಭಾರತೀಯ ಸಂಸತ್ ಸೇರ್ಪಡೆ ಮಾಡಿರುವುದು ನಾಯಕ ಜೊತೆಯಲ್ಲಿ ಪರಿವಾರ ಮತ್ತು ತಳವಾರ ಸೇರಿರುತ್ತಾರೆ ಎಂದು ತಿದ್ದುಪಡಿ ಕಾಯ್ದೆ ಮಾಡಿರುತ್ತದೆ. ತಿದ್ದುಪಡಿ ಆದೇಶದ ಪ್ರಕಾರ ಸರ್ಕಾರ ಪರಿವಾರ ಮತ್ತು ತಳವಾರ ಎಂದು ನೀಡಬೇಕು. ನಾಯ್ಕಡ ನಾಯಕ ಪಂಗಡದ ಹೆಸರನ್ನು ಬದಲಾಯಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ. 1991 ರಲ್ಲಿ ಭಾರತೀಯ ಸಂಸತ್ Naikda, Nayaka ಸಮಾನಾರ್ಥಕ ಪದಗಳಾಗಿ “Naik, Nayak, Beda, Bedar and Valmiki ಎಂಬ ಪದಗಳನ್ನು ಸೇರಿಸಿ ತಿದ್ದುಪಡಿ ಕಾಯ್ದೆಯನ್ನು ಮಾಡಿರುತ್ತದೆ. ಆ ಕಾಯ್ದೆ ಪ್ರಕಾರ ಮೂಲ ನಾಯ್ಕಡ,ನಾಯಕ ಎಂಬುದನ್ನು ಬದಲಾಯಿಸಿರುವುದಿಲ್ಲ.
ಆದರೆ ರಾಜ್ಯ ಸರ್ಕಾರವು ಕಾನೂನನ್ನು ತಪ್ಪಾಗಿ ಅರ್ಥೈಸಿ ತಳವಾರ ಮತ್ತು ಪರಿವಾರ ಜಾತಿಯವರಿಗೆ ನಾಯಕ ಎಂದು ಪ್ರಮಾಣ ಪತ್ರ ಕೊಡುತ್ತಿದ್ದಿರಿ ಇದು ಸಂವಿಧಾನ ಬಾಹಿರವಾಗಿರುತ್ತದೆ. ಮೂಲ ನಾಯಕ ಪಂಗಡದವರಾದ ನಮಗೆ ನಾಯಕ ಪ್ರಮಾಣ ಪತ್ರವನ್ನು ಕೊಡದೇ ಹೊಸ ಜಾತಿಯನ್ನು ಬರೆದುಕೊಳ್ಳುವಂತೆ ಮಾಡಿರುವುದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದರು.
ಕೂಡಲೇ ಸರ್ಕಾರ ನಾಯಕ (ಪರಿಶಿಷ್ಟ ಪಂಗಡ) ಎಂದು ಪ್ರಮಾಣ ಪತ್ರವನ್ನು ನೀಡುವಂತೆ ಕೋರುತ್ತೇವೆ. 1976 ರಿಂದ ಮ್ಯಾಸ ನಾಯಕರ ಬುಡಕಟ್ಟು ಲಕ್ಷಣಗಳನ್ನು ಆಧಾರಿಸಿ ಪರಿಶಿಷ್ಟ ಪಂಗಡಕ್ಕೆ ಸೇರಿದವರೆಂದು ಮ್ಯಾಸ ನಾಯಕರಿಗೆ “ನಾಯಕ” ಎಂದೇ ಎಸ್ ಟಿ ಪ್ರಮಾಣ ಪತ್ರ ಕೊಡಲಾಗುತ್ತಿತ್ತು. ಆದರೆ ನಮಗೆ ನಮ್ಮ ಪಂಗಡದ ಹೆಸರನ್ನೆ ಬದಲಾವಣೆ ಮಾಡಿ ನಾಯಕ (ಪರಿವಾರ ಮತ್ತು ತಳವಾರ) ಎಂದು ನಮೂದಿಸಿ ನಮ್ಮ ಬುಡಕಟ್ಟಿನ ಮೂಲ ಹೆಸರನ್ನೆ ಇಲ್ಲದಂತೆ ಮಾಡಿರುತ್ತೀರಿ ಎಂದು ಆರೋಪಿಸಿದರು.
ನಮಗೂ ಪರಿವಾರ ಮತ್ತು ತಳವಾರ ಜಾತಿಯವರಿಗೂ ಯಾವುದೇ ಸಂಬಂಧವಿರುವುದಿಲ್ಲ. ದುರುದ್ದೇಶದಿಂದ ಈ ರೀತಿ ಕಾನೂನನ್ನು ಮಾಡಿ ಮೂಲ ಬುಡಕಟ್ಟು ಜನರಿಗೆ ಕಾನೂನು ತೊಡಕನ್ನು ಉಂಟು ಮಾಡುತ್ತಿರುವುದಲ್ಲದೆ ನಮ್ಮ ಮೂಲ ಪಂಗಡದ ಹೆಸರನ್ನೆ ನಿರ್ನಾಮ ಮಾಡಲು ಹೊರಟಿರುತ್ತಿರಿ ಎಂದು ಕಿಡಿಕಾರಿದರು.
ಆದ್ದರಿಂದ ಮ್ಯಾಸ ನಾಯಕರಿಗೆ “ನಾಯಕ” ಎಂದೇ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರವನ್ನು ಮಾತ್ರ ನೀಡಲು ಒತ್ತಾಯಪೂರ್ವಕವಾಗಿ ವಿನಂತಿಸುತ್ತಿದ್ದೇವೆ. ನಮ್ಮ ಪರಿಶಿಷ್ಟ ಪಂಗಡದ “ನಾಯಕ” ಪ್ರಮಾಣ ಪತ್ರಗಳಲ್ಲಿ ತಳವಾರ ಮತ್ತು ಪರಿವಾರ ಎಂಬ ಹೆಸರಗಳನ್ನು ನಮೂದಿಸುವಂತಿಲ್ಲ. ಇತ್ತೀಚೇಗೆ ಸಂಸತ್ ನಲ್ಲಿ ಮಾಡಿರುವ The Counstitution (Scheduled Tribes) Order (Amendment) Act,2020ರ ಪ್ರಕಾರ ನಮ್ಮ ಮೂಲ ನಾಯ್ಕಡ,ನಾಯಕ ಪಂಗಡದ ಹೆಸರನ್ನು ಬದಲಾವಣೆ ಮಾಡುವ ಬಗ್ಗೆ ಯಾವುದೇ ಕಾನೂನನ್ನು ಮಾಡಿರುವುದಿಲ್ಲ.
ಆದರೂ ಸಹ ತಪ್ಪು ತಪ್ಪಾಗಿ ಕಾನೂನನ್ನು ಅರ್ಥೈಸಿ ಬುಡಕಟ್ಟು ಜನರ ಅಸ್ತಿತ್ವವನ್ನು ನಿರ್ನಾಮ ಮಾಡುತ್ತಾ ಹಕ್ಕುಗಳನ್ನು ಅಪಹರಿಸಲು ಸಂಚನ್ನು ಮಾಡಲಾಗುತ್ತಿದೆ. ಆದ್ದರಿಂದ ಎಲ್ಲಾ ರೀತಿಯಿಂದ ರಾಜ್ಯ ಸರ್ಕಾರದ ಈ ನಡೆಯನ್ನು ಪರಿವಾರ ಮತ್ತು ತಳವಾರ ಜಾತಿಯವರ ಕುಯಿಕ್ತಿಯಂತೆ ಮಾಡುತ್ತಿರುವುದು ನಮ್ಮ ಮ್ಯಾಸ ನಾಯಕರಿಗೆ ಬಾರಿ ಅನ್ಯಾವಾಗುತ್ತಿದೆ. ಆದ್ದರಿಂದ ಈ ಕೂಡಲೇ ಮೊದಲಿನ ರೀತಿಯಲ್ಲಿ ನಾಯಕ (ಪರಿಶಿಷ್ಟ ಪಂಗಡ) ಎಂದು ಮಾತ್ರ ಪ್ರಮಾಣ ಪತ್ರ ನೀಡಬೇಕು ಎಂದು ಪ್ರತಿಭಟನೆಯ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸುತ್ತಿದ್ದೇವೆ ಎಂದರು.
ಬೇಡಿಕೆಗಳು
- ನಾಡ ಕಛೇರಿ ಅಂತರ್ಜಾಲದಲ್ಲಿ ಕೈಬಿಟ್ಟಿರುವ “ನಾಯಕ: ಪದವನ್ನು ಸೇರಿಸಿ ಈ ಕೂಡಲೇ ಮೊದಲಿನ ರೀತಿಯಲ್ಲಿ ನಾಯಕ (ಪರಿಶಿಷ್ಟ ಪಂಗಡ) ಎಂದು ಮಾತ್ರ ಪ್ರಮಾಣ ಪತ್ರ ನೀಡಬೇಕು.
- ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ “ನಾಯ್ಕಡ” “ನಾಯಕ” ಸಮಾನಾರ್ಥಕ ಪದಗಳಾಗಿ “ಮ್ಯಾಸ ನಾಯ್ಕ”, “ಮ್ಯಾಸ ನಾಯಕ”, “ಮ್ಯಾಸ ಬೇಡ”, “ಮ್ಯಾಸ ಬ್ಯಾಡ್ರು”, “ಮ್ಯಾಸ ಬೇಡರ”, “ಮ್ಯಾಸರು” ಎಂಬ ಪದಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಈ ಕೂಡಲೇ ಕ್ರಮ ಕೈಗೊಳ್ಳಬೇಕು.
- “ನಾಯಕ” ಪಂಗಡದ ನಿಜವಾದ ಸಮಾನಾರ್ಥಕ “ಮ್ಯಾಸ ನಾಯಕ” ಪದವನ್ನು ಸಂವಿಧಾನ ಬಾಹಿರವಾಗಿ ಓಬಿಸಿಪಟ್ಟಿಗೆ ಸೇರ್ಪಡೆ ಮಾಡಿರುವುದನ್ನು ಈ ಕೂಡಲೇ ತೆಗೆದುಹಾಕಿ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು.
- 1976 ನೇ ಸಾಲಿನಿಂದಲೂ “ನಾಯಕ” ಎಂಬುದು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಇರುತ್ತದೆ. ಭಾರತೀಯ ಸಂಸತ್ ಸೇರ್ಪಡೆ ಮಾಡಿರುವುದು ನಾಯಕ ಜೊತೆಯಲ್ಲಿ ಪರಿವಾರ ಮತ್ತು ತಳವಾರ ಸೇರಿರುತ್ತಾರೆ ಎಂದು ತಿದ್ದುಪಡಿ ಕಾಯ್ದೆ ಮಾಡಿರುತ್ತದೆ. ತಿದ್ದುಪಡಿ ಆದೇಶದ ಪ್ರಕಾರ ರಾಜ್ಯ ಸರ್ಕಾರ ಪರಿವಾರ ಮತ್ತು ತಳವಾರ ಎಂದು ನೀಡಬೇಕು.
ನಾಯ್ಕಡ ನಾಯಕ ಪಂಗಡದ ಹೆಸರನ್ನು ಬದಲಾಯಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ. ಆದರೆ ರಾಜ್ಯ ಸರ್ಕಾರವು ಕಾನೂನನ್ನು ತಪ್ಪಾಗಿ ಅರ್ಥೈಸಿ ತಳವಾರ ಮತ್ತು ಪರಿವಾರದವರಿಗೆ ನಾಯಕ ಎಂದು ಪ್ರಮಾಣ ಪತ್ರ ಕೊಡುತ್ತಿದ್ದಿರಿ ಇದು ಸಂವಿಧಾನ ಬಾಹಿರವಾಗಿರುತ್ತದೆ.
ಈ ಸಂದರ್ಭದಲ್ಲಿ ಮ್ಯಾಸ ನಾಯಕ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ(ರಿ)ಯ ಸಂಚಾಲಕರುಗಳಾದ ಜಿ ನಾಗರಾಜ, ಗಾಮ ಪಂಚಾಯಿತಿ ಉಪಾಧ್ಯಕ್ಷರು, ಕೋಟೆ ನಾಗರಾಜ, ಎಂ ದ್ವಾರಕೇಶ,ವಕೀಲರಾದ ಬಿ.ಕರಿಯಪ್ಪ, ಡಿ.ನಾಗರಾಜ್ ಚಿಗಟೇರಿ ಗ್ರಾಮದ ಮುಖಂಡರುಗಳಾದ ಎಂ.ರಾಜಪ್ಪ, ಎಂ.ತಿಪ್ಪೇಸ್ವಾಮಿ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಗ್ರಾಮ ಪಂಚಾಯತಿ ಸದಸ್ಯರುಗಳಾದ ಎ.ಬಸವರಾಜ್, ಎಂ.ದುರುಗಪ್ಪ, ಜಿ. ಅಡವಿಪ್ಪ, ಬಿ. ನಾಗರಾಜ, ಎಸ್ ನಾಗೇಂದ್ರಪ್ಪ, ಜಿ.ಬಸಪ್ಪ, ಶೇಖರಪ್ಪ, ಎಂ ಹಾಲಪ್ಪ, ದುರುಗಪ್ಪ,ಮಂಜುನಾಥ್, ಎಸ್ ದಿವಾಕರ, ಎಂ.ಹೇಮಪ್ಪ, ಎಂ.ಮಾರಪ್ಪ, ಸುಖವಪ್ಪ, ಎಂ.ಬಸವರಾಜ, ಬಿ. ಮನ್ನೇಪ್ಪ, ಎ.ದಾಸಪ್ಪ, ಭೀಮಪ್ಪ ನಿವೃತ್ತ ಶಿಕ್ಷಕರು, ಹೆಚ್.ಕಂಪಾಲೆಪ್ಪ, ಎಂ.ಹಳ್ಳೆಪ್ಪ, ಎಂ ಸೂರಪ್ಪ, ಎಸ್.ಬೊಮ್ಮಪ್ಪ, ಎಂ.ಡಿ.ನಾಗರಾಜಪ್ಪ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.
ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.
ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.
ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು.”
- ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
- ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ
ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ ಶಿವಕುಮಾರ್ ಅವರು ಇಮ್ಮಡಿ ಪುಲ್ಲಕೇಶಿ ಸಾಮ್ರಾಟ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಂತರ ಜಿಲ್ಲಾಧ್ಯಕ್ಷರಾದ ಶಿವರತನ್ ಮಾತನಾಡಿ ,ನಾಡಿನ ಇತಿಹಾಸ ಪುಟಗಳಲ್ಲಿ ಕಣ್ಮರೆಯಾಗಿರುವ ಕನ್ನಡದ ಶ್ರೇಷ್ಠ ಸಾಮ್ರಾಟರಲ್ಲಿ ಇಮ್ಮಡಿ ಪುಲಿಕೇಶಿ ಅಗ್ರ ಸ್ಥಾನ ಪಡೆದಿದ್ದಾರೆ. ಇಂತಹ ಮಹಾನ್ ಸಾಮ್ರಾಟರನ್ನ ನೆನಪಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರು.
ಭಾರತೀಯ ನೌಕಾಪಡೆಯ ಪಿತಾಮಹ ಎಂದೇ ಕರೆಯಲಾಗುವ ಇಮ್ಮಡಿ ಪುಲಿಕೇಶಿ ಸಾಮ್ರಾಟರ ಜನ್ಮದಿನದ ಪ್ರಯುಕ್ತ ಭಾರತೀಯ ನೌಕಾಪಡೆ ದಿನಾಚರಣೆಯೆoದು ಆಚರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.
ಬೇರೆಲ್ಲ ಜಯಂತಿಗಳನ್ನು ಆಚರಿಸುವ ಸರ್ಕಾರಗಳು ಇಮ್ಮಡಿ ಪುಲಿಕೇಶಿ ಜಯಂತಿಯನ್ನು ಕಡ್ಡಾಯವಾಗಿ ಎಲ್ಲೆಡೆ ಆಚರಿಸಲು ಆಡಳಿತಾತ್ಮಕವಾಗಿ ಜಾರಿಗೊಳಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಅಧ್ಯಕ್ಷೆ ಶುಭಮಂಗಳ ಅವರು ಸಿಹಿ ವಿತರಿಸಿದರು. ಕನ್ನಡ ಚಳವಳಿಯ ಹಿರಿಯ ಹೋರಾಟಗಾರರು , ಕನ್ನಡ ಚಳವಳಿಯ ಮಾಜಿ ಅಧ್ಯಕ್ಷರಾದ ಬಂಕಾಪುರ ಚನ್ನಬಸಪ್ಪ, ದಾ.ಹ. ಶಿವಕುಮಾರ್. ಈಶ್ವರ್. ಪ್ರಕಾಶ್. ವಾರ್ತಾ ಇಲಾಖೆ ನಿವೃತ್ತ ಬಿ.ಎಸ್. ಬಸವರಾಜ್ ಹಾಗೂ ಹಲವಾರು ಕನ್ನಡಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೆರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಯನ್ನು ಉಪನಿರ್ದೇಶಕರು ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 24 ರೊಳಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಕಟ್ಟಡ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂ.ಸಿ.ಸಿ, ‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ:08192-264056 ಸಲ್ಲಿಸಬೇಕೆಂದು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ6 days agoದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ
-
ದಿನದ ಸುದ್ದಿ5 days agoಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು
-
ದಿನದ ಸುದ್ದಿ5 days agoಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
-
ದಿನದ ಸುದ್ದಿ6 days agoಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
-
ದಿನದ ಸುದ್ದಿ3 days agoದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

