ದಿನದ ಸುದ್ದಿ
ಟ್ರೋಲ್ ಹೆಸರಲ್ಲಿ ಎಲ್ಲವೂ “ತಮಾಷಾ” ಆಗಿ ಮುಗಿಯಬಾರದು..!
- ರಾಜಾರಾಂ ತಲ್ಲೂರು
ಉಡುಪಿಯಲ್ಲಿ ಪ್ರವಾಸೋದ್ಯಮ ಪ್ರೋತ್ಸಾಹಕ್ಕಾಗಿ ರಚಿಸಲಾಗಿರುವ ಖಾಸಗಿ ತೇಲು ಮಂಚವೊಂದು (ಅದು ಬ್ರಿಜ್ ಅಲ್ಲ; ಎಲ್ಲಿಗೂ ಸಂಪರ್ಕ ಕಲ್ಪಿಸುವುದಿಲ್ಲ!!) ಕಳಚಿಕೊಂಡಿದೆ ಮತ್ತು ಈಗ ನಡೆದಿರುವ 40% ಕಮಿಷನ್ ಹೆಸರಲ್ಲಿ ಎರ್ರಾಬಿರ್ರಿ ಟ್ರೋಲ್ ಆಗುತ್ತಿದೆ.
ನಾನು ಅರ್ಥ ಮಾಡಿಕೊಂಡಿರುವಂತೆ ಇದೊಂದು ಖಾಸಗಿ ಪ್ರಯತ್ನವಾಗಿದ್ದು, ಅಲ್ಲಿ ಆ ಚಟುವಟಿಕೆಗೆ ಅವಕಾಶವನ್ನು ಲೀಸ್ ಪಡೆದು ನಿರ್ಮಿಸಲಾಗಿರುವ ತೇಲುಮಂಚ. ಕರ್ನಾಟಕದ ಕರಾವಳಿಯ ಮಟ್ಟಿಗೆ ಅದು ಹೊಸಬಗೆಯ ಪ್ರಯತ್ನ ಆಗಿರುವುದರಿಂದ ಅದು ಅಲ್ಲಿ ಬರಲು ಕಾರಣರಾದವರೆಲ್ಲ ಅದರ ಉದ್ಘಾಟನೆಯ ವೇಳೆ ಕ್ರೆಡಿಟ್ ತೆಗೆದುಕೊಂಡದ್ದು ಸತ್ಯ. ಇದರಲ್ಲಿ ಸ್ಥಳೀಯ ಬೀಚ್ ಅಭಿವೃದ್ಧಿ ಸಮಿತಿ, ಜಿಲ್ಲಾಡಳಿತ, ಜನಪ್ರತಿನಿಧಿಗಳು, ಮಾಧ್ಯಮ ಎಲ್ಲರದೂ ಪಾಲಿದೆ. ಇದರಲ್ಲಿ ತಪ್ಪೇನಿಲ್ಲ.
ಈಗ ಆ ತೇಲುಮಂಚ ಎಲ್ಲೋ ದೂರದಲ್ಲಿ ಬೀಸುತ್ತಿರುವ ತೂಪಾನಿನ ಪ್ರಭಾವದಿಂದಾಗಿ ಎದ್ದ ಅಲೆಗಳಿಗೆ ಬಲಿಯಾಗಿದೆ ಅಥವಾ ಅದರ ಲೀಸ್ ಹೋಲ್ಡರ್ ಮಾಧ್ಯಮಗಳಿಗೆ ತಿಳಿಸಿರುವಂತೆ ಅದನ್ನು ಡಿಸ್ಮ್ಯಾಂಟಲ್ ಮಾಡಲಾಗಿದೆ.
ಅದೇನೇ ಇರಲಿ. ಈ ಸಂಗತಿಯನ್ನು ರಾಜಕೀಯವಾಗಿ ಟ್ರೋಲ್ ಮಾಡಲು ಹೊರಟಾಗ, ಸಹಜವಾಗಿಯೇ ಪಕ್ಷರಾಜಕೀಯ, ಟ್ರೋಲ್ ಸೇನೆ, ಭಕ್ತಸೇನೆಗಳೆಲ್ಲ ಜಮಾಯಿಸಿ, ಕೇಳಲೇ ಬೇಕಾದ ಮೂಲ ಸಂಗತಿಗಳು ಅಡಿ ಬೀಳುತ್ತವೆ. ನಮ್ಮ ಮಾಧ್ಯಮಗಳು ಕೂಡ ತಳಕ್ಕಿಳಿದು ನೋಡುವ ಬದಲು ಟ್ರೋಲ್ಗಳನ್ನಾಧರಿಸಿ ಸುದ್ದಿ ಮಾಡುತ್ತಿರುವುದರಿಂದಾಗಿ ಈ “ಪ್ರಕರಣ”ದ ಮಹತ್ವವೇ ಮುಕ್ಕಾದಂತಾಗಿದೆ. ಈ ಪ್ರಕರಣದಲ್ಲಿ ಕೇಳಬೇಕಾಗಿರುವ ಪ್ರಶ್ನೆಗಳಿವು. ಜಿಲ್ಲಾಡಳಿತ, ಬೀಚ್ ಸಮಿತಿ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಇದಕ್ಕೆ ಉತ್ತರ ನೀಡಲು ಬಾಧ್ಯಸ್ಥರು.
- ಈ ತೇಲುಮಂಚವನ್ನು ಸಾರ್ವಜನಿಕರಿಗೆ ಬಳಕೆಗೆ ತೆರೆಯುವ ಮುನ್ನ ಎಷ್ಟು ಸಮಯ ಪ್ರಾಯೋಗಿಕವಾಗಿ ಬಳಸಿ, ಅದರ ಅಪಾಯ ಸಾಧ್ಯತೆಗಳನ್ನು ಪರೀಕ್ಷಿಸಲಾಗಿದೆ?
- ತೇಲುಮಂಚ ಉದ್ಘಾಟನೆಯ ವೇಳೆಯಲ್ಲಿ, ಅಲ್ಲಿ ಹತ್ತಾರು ಮಂದಿ ಜೀವರಕ್ಷಕರಿರುತ್ತಾ, ಸ್ಥಳೀಯ ಶಾಸಕರು ಅಕಸ್ಮಾತ್ ಉರುಳಿಬಿದ್ದ ವೀಡಿಯೊ ಒಂದು ವೈರಲ್ ಆಗಿತ್ತು. ಈ ಘಟನೆ ಆದ ಬಳಿಕವೂ ಸೂಕ್ತ ಮುಂಜಾಗ್ರತೆಗಳಿಲ್ಲದೆ ಆ ತೇಲುಮಂಚವನ್ನು ಯಾಕೆ ಸಾರ್ವಜನಿಕರಿಗೆ ತೆರೆಯಲಾಯಿತು?
- ಈ ತೇಲುಮಂಚ ನಿರ್ಮಾಣಕ್ಕೆ ಮಾಡಿಕೊಳ್ಳಲಾಗಿರುವ ಲೀಸ್ ಒಪ್ಪಂದದಲ್ಲಿ ಅಪಾಯ ಸಂಭಾವ್ಯತೆಗಳ ಬಗ್ಗೆ ಏನು ಷರತ್ತುಗಳಿವೆ?
- ಸ್ಥಳೀಯ ಸಮುದ್ರದ ಗುಣ, ಹವಾಮಾನಗಳನ್ನಾಧರಿಸಿ ಇಲ್ಲಿ ಆ ರೀತಿಯ ತೇಲುಮಂಚ ನಿರ್ಮಾಣ ಸಾಧುವೇ? ಎಂಬ ಬಗ್ಗೆ ಅಧ್ಯಯನವೇನಾದರೂ ನಡೆದಿದೆಯೆ? ಅದರ ವಿವರಗಳಿದ್ದರೆ ಕೊಡಿ.
- ಹಣ ತೆತ್ತು ತೇಲುಮಂಚಕ್ಕೆ ತೆರಳುವ ಪ್ರವಾಸಿಗರಿಗೆ ಸುರಕ್ಷಾ ಕವಚಗಳಿವೆಯೆ (ಕೆಲವು ವೀಡೀಯೊಗಳಲ್ಲಿ ಕವಚಗಳಿಲ್ಲದ ಪ್ರವಾಸಿಗರನ್ನು ಕಂಡಿದ್ದೇನೆ)? ವಿಮೆ ಅಥವಾ ಬೇರೆ ರಕ್ಷಣೆಗಳಿವೆಯೆ?
- ಈ ರೀತಿಯ ಪ್ರವಾಸೋದ್ಯಮ ಸಂಬಂಧಿ ಚಟುವಟಿಕೆಗಳಿಗೆ ಅಲ್ಲಿ ಯಾರು ಕೂಡಾ ಲೀಸ್ ಪಡೆಯಬಹುದೆ? ಅದಕ್ಕೆ ಮಾನದಂಡಗಳೇನು? ಅರ್ಹತೆಗಳೇನು? ಅವರ ಜವಾಬ್ದಾರಿಗಳೇನು? ಲೀಸ್ ಕೊಡುವವರು ಯಾರು? ಇಲ್ಲಿ ಜಿಲ್ಲಾಡಳಿತದ ಹೊಣೆ ಏನು?
ಸಂಬಂಧಿತರು ಸಾರ್ವಜನಿಕರಿಗೆ ಉತ್ತರ ನೀಡುತ್ತಾರೆಂದು ಭಾವಿಸೋಣವೆ?
(ರಾಜಾರಾಂ ತಲ್ಲೂರು ಅವರ ಫೇಸ್ಬುಕ್ ಬರಹ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ
ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಇದು ಮೊದಲ ಡಿಜಿಟಲ್ ಜನಗಣತಿಯಾಗಲಿದೆ. 2027 ರ ಜನಗಣತಿಯು ಒಟ್ಟಾರೆ 16ನೇ ಮತ್ತು ಸ್ವಾತಂತ್ರ್ಯದ ನಂತರದ 8 ನೇ ಜನಗಣತಿಯಾಗಲಿದೆ. ಭಾರತದ ಜನಗಣತಿಯನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕ್ರಮವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.
ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19 ರ ಕೇಂದ್ರ ಬಜೆಟ್ನಲ್ಲಿ ಎಲ್ಲಾ ಕಡ್ಡಾಯ ಬೆಳೆಗಳ ಎಂಎಸ್ಪಿ ಅನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು. ಮಿಲ್ಲಿಂಗ್ ಕೊಬ್ಬರಿಗೆ ಎಂಎಸ್ಪಿಯನ್ನು ಕ್ವಿಂಟಲ್ಗೆ 445 ರೂಪಾಯಿಗಳಿಂದ 12 ಸಾವಿರದ 27 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಅದೇ ಅವಧಿಗೆ ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 2026ರ ಹಂಗಾಮಿಗೆ ಕ್ವಿಂಟಲ್ಗೆ 400 ರೂಪಾಯಿಗಳಿಂದ 12 ಸಾವಿರದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೋಲ್ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ ಪ್ರವೇಶ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ನಿನ್ನೆ ತಡೆರಹಿತ, ದಕ್ಷ ಮತ್ತು ಪಾರದರ್ಶಕ ಬಳಕೆಗಾಗಿ ಕಲ್ಲಿದ್ದಲು ಸಂಪರ್ಕದ ಹರಾಜು ನೀತಿಗೆ ಅನುಮೋದನೆ ನೀಡಿತು.
ನವದೆಹಲಿಯಲ್ಲಿ ನಿನ್ನೆ ಸಂಜೆ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 2016ರ ಎನ್ಆರ್ಎಸ್ ನಿಯಂತ್ರಿತವಲ್ಲದ ವಲಯದ ಸಂಪರ್ಕ ಹರಾಜು ನೀತಿಯಲ್ಲಿ ’ಕೋಲ್ಸೇತು’ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತಿಗೆ ದೀರ್ಘಾವಧಿಯವರೆಗೆ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಸಂಪರ್ಕಗಳ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ ಎಂದು ಹೇಳಿದರು.
ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಅಂತಿಮ ಬಳಕೆಯನ್ನು ಲೆಕ್ಕಿಸದೆ ಸಂಪರ್ಕ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
ಸುದ್ದಿದಿನ,ದಾವಣಗೆರೆ: ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ ವಸತಿ ಯೋಜನೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು 15 ಜನವರಿ 2026 ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಯಮ ಸ್ವರೂಪಿ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ ; ಇವಿಷ್ಟನ್ನು ಪಾಲಿಸಿ ಅಪಾಯ ತಡೆಗಟ್ಟಿ
-
ದಿನದ ಸುದ್ದಿ4 days agoಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ
-
ದಿನದ ಸುದ್ದಿ4 days agoಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ
-
ದಿನದ ಸುದ್ದಿ2 days agoಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
-
ದಿನದ ಸುದ್ದಿ1 day agoಕೋಲ್ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
-
ದಿನದ ಸುದ್ದಿ1 day ago2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ

