ನೆಲದನಿ
ಚಮ್ಮಾರ ವೃತ್ತಿಯಲ್ಲಿ ಬೆಳೆದ ‘ಅಬ್ರಾಹಂ ಲಿಂಕನ್’..!
- ಸಿದ್ದು.ಮಾದರ
ಆತ್ಮೀಯ ಬಂಧುಗಳೇ,
ನಾವುಗಳು ಮಾದಿಗರು,ಚಮ್ಮಾರರು,ಸಮಗಾರರು ತುಂಬ ಕಷ್ಟ ಜೀವನದಿಂದ ಬಂದವರು. ಚರ್ಮ ವೃತ್ತಿಯನ್ನು ಮಾಡಿ ಸಂಪಾದಿಸಿದ ಹಣದಿಂದ ಹಲವಾರು ಜನರು ಶಿಕ್ಷಣ ಕ್ಷೇತ್ರದಲ್ಲಿ ಪದವಿಯನ್ನು ಪಡದಿದ್ದಾರೆ ಹಾಗೇ ಸರಕಾರಿ ಹುದ್ದೆ ಸಹ ಪಡೆದಿರುತ್ತಾರೆ. ಮುಂದೆ ಸರ್ಕಾರಿ ಸೇವೆಯಲ್ಲಿ ದೊಡ್ಡ ಹುದ್ದೆಯಲ್ಲಿದರೂ ನಮಗೆ ಜೀವನವನ್ನು ಕಟ್ಟಿಕೊಟ್ಟ ಚರ್ಮ ಉದ್ಯೋಗವನ್ನು ಮರೆಯುವಂತಿಲ್ಲ.
ಜೊತೆ ಜೊತೆ ಕೊಲ್ಲಾಪುರಿ ಚಪ್ಪಲಿ ಹಾಗೂ ವಿಶೇಷ ವಿನ್ಯಾಸದ ಬಂಟು ಬೂಟ್ ವಿಶ್ವ ಪ್ರಸದ್ದಿಯನ್ನು ಪಡೆದಿದೆ. ನಮ್ಮ ಕೆಲಸವನ್ನು ಗುರುತಿಸಿದ ಬೇರೆ ಬೇರೆ ರಾಷ್ಟ್ರ, ಅಂತರಾಷ್ಟ್ರೀಯ ಸಂಸ್ಥೆಗಳು ಗೌರವಿಸಿವೆ ತವರು ಜಿಲ್ಲೆಯ ಸಂಸ್ಥೆಯಾದ ಲೆದರ್ ಆರ್ಟಿಜನ್ಸ್ ಅಸೋಸಿಯೇಶನ್ಸ ಆಪ್ ಕರ್ನಾಟಕ ದವರು ನೀಡುತ್ತಿರುವ “ಚರ್ಮಶ್ರೀ‘ ಪ್ರಶಸ್ತಿ ನಮ್ಮ ಗೆ ತುಂಬ ಸಂತೋಷವನ್ನುಂಟು ಮಾಡಿದೆ ಎಂದು ಈ ಬರವಣಿಗೆಯ ಮೂಲಕ ತಿಳಿಸುತ್ತೇನೆ.
ವಿಶ್ವಖ್ಯಾತಿ ಪಡೆದರುವ ನೆಪೋಲಿಯನ್ ಬೋನಾಪಾರ್ಟ, ಅಡಾಲ್ಫ್ ಹಿಟ್ಲರ್, ಲೂಯಿಸ ಪಾಶ್ಚರ್, ಜೊಸೇಫ್ ಸ್ಟಾಲಿನ್ ಅಲ್ಲದೇ ಅಮೇರಿಕದ 16 ನೇ ಅಧ್ಯಕ್ಷರಾದ ಅಬ್ರಹಾಂ ಲಿಂಕನ್ ಮುಂತಾದವರು ನಮ್ಮ ಸಮಾಜದಿಂದ ಬಂದವರೆಂಬುದು ಹೆಮ್ಮೆಯ ಸಂಗತಿ.
ಲಿಂಕನ್ನ ಹೆಸರನ್ನು ನೀವು ಕೇಳಿರಬೇಕು, ಕೆಲಸವನ್ನು ಕಳೆದುಕೊಂಡ, ವಿಧಾನ ಸಭೆಯ ಚುನಾವಣೆಯಲ್ಲಿ ಸೋತ, ವ್ಯಾಪಾರಪ್ರಾರಂಭಿಸಿ ಅದರಲ್ಲಿ ನಷ್ಟ ಹೊಂದಿದ, ಪತ್ನಿ ಖಾಯಿಲೆ ಬಿದ್ದು ಸತ್ತಳು, ನರಗಳ ದೌರ್ಬಲ್ಯವನ್ನು ಅನುಭವಿಸಿದ, ಸ್ಪೀಕರ್ ಹುದ್ದೆಯಚುನಾವಣೆಗೆ ನಿಂತು ಸೋತ.
ಒಂದು ರಾಜಕೀಯ ಪಕ್ಷದ ಮೂಲಕ ಚುನಾವಣೆಗೆ ಸ್ಪರ್ಧಿಸಿ ಸೋತ, ಲ್ಯಾಂಡ್ ಆಫಿಸರ್ ಹುದ್ದೆಗೆ ಅರ್ಜಿಸಲ್ಲಿಸಿ ಸೋತ, `ಸೆನೆಟ್’ ಶಾಸನ ಸಭೆಗೆ ಚುನಾವಣೆಯಲ್ಲಿ ಸೋತ, `ಉಪರಾಷ್ಟ್ರಪತಿ’ ಪದವಿಗೆ ಸ್ಪರ್ಧಿಸಿ ಸೋತ, ಮತ್ತೆ `ಸೆನೆಟ್’ಗೆಸ್ಪರ್ಧಿಸಿ ಸೋತ.
ಆತನೊಬ್ಬ ಚಮ್ಮಾರನ ಮಗ, ಲಿಂಕನ್ ಅಮೆರಿಕದ ರಾಷ್ಟ್ರಾಧ್ಯಕ್ಷನಾದಾಗ ಕೆಲವರಿಗೆ ಸಹಿಸಿಕೊಳ್ಳಲಾಗಲಿಲ್ಲ. ಮೊದಲ ದಿನದ ಸೆನೆಟ್ನಲ್ಲಿ ಆತ ಮಾತನಾಡಲು ಆರಂಭಿಸಿದಾಗ ಸಹಿಸಿಕೊಳ್ಳಲಾಗದವ ಒಬ್ಬ ಎದ್ದುನಿಂತ.
ಅಲ್ಲಿದ್ದವರಾರಿಗೂ ಲಿಂಕನ್ ಅಧ್ಯಕ್ಷನಾಗಿರುವುದು ಸಹಿಸಿಕೊಳ್ಳಲಾರದ ವಿಚಾರವೇ ಆಗಿತ್ತು, ಆದರೂ ಶಿಷ್ಟಾಚಾರದಿಂದ ಎಲ್ಲರೂ ಸುಮ್ಮನೆ ಕುಳಿತಿದ್ದರು. ಅವರೊಲ್ಲಬ್ಬನಿಗೆ ಮಾತ್ರ ಸಹಿಸಲಾಗದೆ ಎದ್ದು ನಿಂತು ಹೇಳಿದ. ಅಧ್ಯಕ್ಷರೇ ನೀವು ಹೆಮ್ಮೆಯಿಂದ ಮಾತನಾಡಬೇಡಿ. ನೆನಪಿರಲಿ, ನೀವೊಬ್ಬ ಚಮ್ಮಾರನ ಮಗ ಎಂಬುದು..!
ಆತನ ಮಾತಿಗೆ ಲಿಂಕನ್ ನೀಡಿದ ಉತ್ತರ ಹೀಗಿತ್ತು. ಅವರು ಹೇಳಿದರು, ಮಹಾಶಯರೇ, ನೀವು ಬಲು ಒಳ್ಳೆಯ ಸಂದರ್ಭದಲ್ಲಿ ನನ್ನ ತಂದೆಯವರನ್ನು ನೆನಪಿಗೆ ತಂದಿರಿ. ನನಗೆ ತಿಳಿದ ಮಟ್ಟಿಗೆ ಹೇಳಬೇಕೆಂದರೆ, ನನ್ನ ತಂದೆ ಬಲು ಸುಂದರವಾದ, ಉತ್ತಮವಾದ ಚಪ್ಪಲಿಗಳನ್ನೇ ತಯಾರಿಸುತ್ತಿದ್ದರು.
ಅವರೆಂದಿಗೂ ಕಳಪೆ ಚಪ್ಪಲಿಗಳನ್ನು ತಯಾರಿಸಲಿಲ್ಲ. ಆ ಚಪ್ಪಲಿಗಳಲ್ಲಿ ಕಿಂಚಿತ್ತೂ ಕೊರತೆ ಇರುತ್ತಿರಲಿಲ್ಲ, ಅವರು ಅತ್ಯಂತ ಸಂತೋಷದಿಂದ ಅವುಗಳನ್ನು ತಯಾರಿಸುತ್ತಿದ್ದರು. ಅವರಂತಹ ಉತ್ಕೃಷ್ಟ ಚಮ್ಮಾರನನ್ನು ನಾನು ಕಂಡಿಲ್ಲ. ಅವರಿಂದ ಯಾರು ಚಪ್ಪಲಿಗಳನ್ನು ಕೊಳ್ಳುತ್ತಿದ್ದರೋ ಅವರೆಲ್ಲರೂ ಸಂತಸದಿಂದ ಅವುಗಳನ್ನು ತೊಡುತ್ತಿದ್ದರು.
ನಿಮಗೂ ಅವರು ಚಪ್ಪಲಿ ತಯಾರಿಸಿ ಕೊಟ್ಟಿರುವುದು ನನ್ನ ನೆನಪಿಗೆ ಬರುತ್ತಿದೆ. ಅದರಲ್ಲಿ ಏನಾದರೂ ಕುಂದು ತೋರಿಸಲು ನಿಮಗಾಗಿತ್ತೇನು? ಅವುಗಳ ಬಾಳಿಕೆ ಹೇಗಿತ್ತು? ಅವರೇನಾದರೂ ಮೋಸ ಮಾಡಿರುವರೇನು? ನನ್ನ ತಂದೆಯವರು ಎಷ್ಟು ಉತ್ಕೃಷ್ಟ ಚಮ್ಮಾರರಾಗಿದ್ದರೋ ಅಷ್ಟು ಉತ್ಕೃಷ್ಟ ಅಧ್ಯಕ್ಷನಾಗುವುದು ಬಲು ಕಷ್ಟದ ವಿಚಾರ ಎಂದು ಹೇಳಲು ನಾನು ಇಚ್ಛಿಸುತ್ತೇನೆ ಎಂದರು.
ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷನಾಗಿದ್ದ ಅಬ್ರಹಾಂ ಲಿಂಕನ್ ತನ್ನ ಮಗ ಓದುತ್ತಿದ್ದ ಶಾಲೆಯ ಶಿಕ್ಷಕರಿಗೊಂದು ಪತ್ರ ಬರೆದ. ಆ ಪತ್ರ ಹಾಗೂ ಅದರ ಸಾರಾಂಶ ಇಂದಿನ ಶಿಕ್ಷಕ ಸಮುದಾಯಕ್ಕೆ ಮತ್ತು ತಂದೆ-ತಾಯಿಯರಿಗೆ ದಾರಿದೀಪ ಆಗಬಲ್ಲದು.
ಲಿಂಕನ್ ಪತ್ರ ಹೀಗೆ ಸಾಗುತ್ತದೆ…
ಕಲಿಯಬೇಕು – ಎಲ್ಲರೂ ಸಾಚಾಗಳಲ್ಲ ಒಳ್ಳೆಯವರೂ ಅಲ್ಲ. ಆದರೆ ಒಬ್ಬ ತಲೆಹೋಕ ಇರುವಂತೆ ಇನ್ನೊಬ್ಬ ಹೀರೋ ಕೂಡ ಇರುತ್ತಾನೆ ಎಂಬುದನ್ನು.
ಒಬ್ಬ ಸ್ವಾರ್ಥ ರಾಜಕಾರಣಿ ಇರುವಂತೆ ಇನ್ನೊಬ್ಬ ಅರ್ಪಣಾ ಮನೋಭಾವದ ರಾಜಕಾರಣಿಯೂ ಸಹ ಇರುತ್ತಾನೆ ಎಂಬುದನ್ನು. ಪ್ರತಿ ಶತ್ರುವಿಗೂ ಒಬ್ಬ ಸ್ನೇಹಿತ ಇರುತ್ತಾನೆ. ಇವೆಲ್ಲವನ್ನೂ ನನ್ನ ಮಗನಿಗೆ ಕಲಿಸಬೇಕು. ನನಗೆ ಗೊತ್ತು. ಇಂಥ ಸಂಗತಿಗಳನ್ನು ಕಲಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಆದರೂ ನಾನು ಕಲಿಸುತ್ತೇನೆ. ಸಂಪಾದಿಸಿದ ಒಂದು ಡಾಲರ್, ಸಿಗುವ ಮೂರು ಡಾಲರ್ಗಳಿಗಿಂತ ಬೆಲೆಯುಳ್ಳದ್ದು ಅಂತ.
ಸೋಲುವುದು ತಪ್ಪೇನಲ್ಲ, ಆದರೆ ಗೆಲುವನ್ನು ಚಪ್ಪರಿಸಬೇಕು. ಹೊಟ್ಟೆಕಿಚ್ಚು ಒಳ್ಳೆಯದಲ್ಲ, ಮೌನವಾಗಿ ನಗುವುದರ ಸುಖ ಎಂಥದು ಅಂತಲೂ ಅವನಿಗೆ ಸಾಧ್ಯವಾದರೆ ನೀವು ಕಲಿಸಬೇಕು ಎಂಬುದು ನನ್ನ ಬಯಕೆ. ಪುಸ್ತಕದ ಪ್ರಪಂಚ ಎಷ್ಟು ದೊಡ್ಡದು ಎಂಬುದು ಅವನಿಗೆ ಮನವರಿಕೆಯಾಗಬೇಕು.
ಜತೆಗೆ ಆಕಾಶದಲ್ಲಿ ಹಾರುವ ಹಕ್ಕಿಗಳನ್ನು ನೋಡಲು, ಸೂರ್ಯನ ಕಿರಣಗಳಿಗೆ ಮೆತ್ತಿಕೊಂಡ ಕೀಟಗಳನ್ನು ಕಾಣಲು, ಹಸಿರು ಬೆಟ್ಟದ ಮೇಲೆ ಅರಳಿದ ಹೂಗಳನ್ನು ಆಸ್ವಾದಿಸಲು ಅವನಿಗೆ ಪುರುಸೊತ್ತು ನೀಡಬೇಕು. ಶಾಲೆಯಲ್ಲಿ ಅವನು ಮೋಸದಿಂದ ಪಾಸಾಗುವುದಕ್ಕಿಂತ ಫೇಲಾಗುವುದೇ ವಾಸಿ ಅನ್ನೋದನ್ನ ಅರಿಯುವಂತಾಗಬೇಕು. ತಪ್ಪಾದರೂ ಪರವಾಗಿಲ್ಲ, ಸ್ವಂತವಾಗಿ ಯೋಚಿಸುವಂತೆ ಮನದಟ್ಟು ಮಾಡಿಸಬೇಕು.
`ಮಗು ಒಳ್ಳೆಯವರಿಗೆ ಒಳ್ಳೆಯವನಾಗು ಕೆಟ್ಟವರಿಗೆ ಕೆಟ್ಟವನಾಗು’ ಅಂತ ನೀವು ತಿಳಿಹೇಳಬೇಕು. ಗುಂಪಿನಲ್ಲಿ ಎಲ್ಲರೂ ಅನಗತ್ಯವಾಗಿ ಹರಟುವ ಕಡೆ ಹೋಗಿ ನಿಲ್ಲಬೇಡ ಅಂತ ಯಾರಾದರೂ ನನ್ನ ಮಗನಿಗೆ ಬುದ್ಧಿ ಹೇಳಬೇಕು. ಎಲ್ಲರ ಮಾತುಗಳನ್ನು ಕೇಳಿಸಿಕೊಳ್ಳುತ್ತಾ, ಒಳಿತನ್ನು ಮಾತ್ರ ಮನಸ್ಸಿಗೆ ತುಂಬಿಕೊಳ್ಳುವಂತೆ ಸಲಹೆಯನ್ನೂ ನೀಡಬೇಕು. ಅಳುವುದು ಅವಮಾನವಲ್ಲ ಎಂಬುದು ಅವನಿಗೆ ಗೊತ್ತಾಗಲಿ. ದುಃಖದಲ್ಲೂ ನಗುವ ಶಕ್ತಿ ಸಿಗಲಿ.
ಅತಿಯಾದ ಸಿಹಿ ಹಾಗೂ ಸಿನಿಕರ ಸಂಘ ಎರಡೂ ಒಳ್ಳೆಯದಲ್ಲ ಮಗು. ನಿನ್ನ ಬುದ್ಧಿ ಹಾಗೂ ಬಲವನ್ನು ಬೇಕಾದರೆ ಮಾರಿಕೋ. ಆದರೆ ಹೃದಯ ಮತ್ತು ಆತ್ಮದ ಮೇಲೆ ಬೆಲೆ ಪಟ್ಟಿಯನ್ನು ಯಾವತ್ತೂ ಅಂಟಿಸಿಕೊಳ್ಳಬೇಡ. ಹೋರಾಡುವ ಶಕ್ತಿ ದಕ್ಕಿಸಿಕೊಳ್ಳುವುದು ಹೀಗೆ ಇವನ್ನೆಲ್ಲಾ ಅವನಿಗೆ ಮನದಟ್ಟು ಮಾಡಿಸುವವರು ಬೇಕು.
ಉಗುರು ತೋರಿಸಿದರೆ ಸಾಕು, ಅವನು ಹಸ್ತ ನುಂಗಬೇಕು. ಬೆಂಕಿ ಸೋಕಿ ಉಕ್ಕು ಗಟ್ಟಿಗೊಳ್ಳುತ್ತದಲ್ಲ ಹಾಗೆ. ಧೈರ್ಯ ಇರಲಿ. ಜಾಣತನದೊಟ್ಟಿಗೆ ಸಹನೆಯೂ ಬೆರೆತಿರಲಿ. ತನ್ನ ಬಗ್ಗೆ ಅವನಿಗೆ ನಂಬಿಕೆ ಇರಲಿ. ಆಗ ಸಹಜವಾಗಿಯೇ ಮನುಷ್ಯಕುಲವನ್ನೇ ಅವನು ನಂಬುತ್ತಾನೆ. ಇದು ದೊಡ್ಡ ಆದೇಶ ಎನ್ನಿಸಬಹುದು. ನೋಡಿ ನಿಮ್ಮ ಕೈಲಿ ಏನೇನು ಕಲಿಸುವುದು ಸಾಧ್ಯ ಅಂತ. ಅವನಿನ್ನೂ ಪುಟ್ಟ ಹುಡುಗ. ಒಳ್ಳೆಯ ಮಗು.
ನನ್ನ ಮಗ ತರಗತಿಯಲ್ಲಿ ಚೆನ್ನಾಗಿ ಕಲಿಯಲಿ. ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸದಿದ್ದರೂ ಪರವಾಗಿಲ್ಲ. ಆದರೆ ಕಾಪಿ ಮಾಡಬಾರದು. ಸ್ವಂತ ಆಲೋಚನೆಗಳಿಗೆ, ನಿರ್ಧಾರಗಳಿಗೆ ಬೆಲೆ ಕೊಡಲು ಅವನಿಗೆ ಹೇಳಿ. ಅವನ ಅನಿಸಿಕೆಗಳನ್ನು ಬೇರೆಯವರು ಲೇವಡಿ ಮಾಡಿದರೂ ಲೆಕ್ಕಿಸದಿರಲಿ.
ಸೌಮ್ಯ ಸ್ವಭಾವದವರೊಂದಿಗೆ ಮೃದುವಾಗಿಯೂ, ದುಷ್ಟರೊಂದಿಗೆ ದಿಟ್ಟವಾಗಿಯೂ ವರ್ತಿಸಲು ಕಲಿಸಿ. ಗುಂಪಿನಲ್ಲಿ ಒಂದಾಗಿರಲು ಬರಬೇಕು; ಆದರೆ ಸ್ವಂತ ಬುದ್ಧಿಯನ್ನು ಮರೆತಿರಬಾರದು. ಎಲ್ಲ ಹೇಳಿಕೆಯನ್ನೂ ಕೇಳಿಸಿಕೊಳ್ಳಲಿ. ಆದರೆ ಯಾವುದನ್ನು ನಂಬಬೇಕು, ಎಷ್ಟು ಬೆಲೆ ಕೊಡಬೇಕು ಎಂಬುದನ್ನು ಸ್ವಂತ ಬುದ್ಧಿಯಿಂದ ಕಲಿಯಬೇಕು ಎಂಬುದನ್ನು ಒತ್ತಿ ಹೇಳಿ.
ದುಃಖ ಎದುರಾದಾಗಲೂ, ಕುಗ್ಗದೆ ನಗುತ್ತಿರುವುದ್ನು ಅಭ್ಯಾಸ ಮಾಡಲು ಹೇಳಿ. ನಯವಂಚಕರನ್ನು ಗುರ್ತಿಸಲಿ, ಮರುಳ ಮಾತಿನವರನ್ನು ದೂರವಿರಿಸಲಿ. ಅನುಕಂಪ ತೋರಿಸಲಿ, ಜಾಣತನವನ್ನು ಪ್ರದರ್ಶಿಸಲಿ; ಆದರೆ ಹಣಕ್ಕಾಗಿ ಭಾವನೆಗಳನ್ನು ಮಾರಿಕೊಳ್ಳದಿರಲಿ. ಗುಂಪಿನ ಗಲಾಟೆಗೆ ಕಿವಿಮುಚ್ಚಿ ತನ್ನ ಹೇಳಿಕೆಯನ್ನು ಗಟ್ಟಿಯಾಗಿ ಕೂಗಿ ಹೇಳುವಂತೆ ಉತ್ತೇಜಿಸಿ.
ಎಲ್ಲಾ ಮನುಷ್ಯರೂ ನ್ಯಾಯನಿಷ್ಠರಲ್ಲ ಎಲ್ಲಾ ಮನುಷ್ಯರು ಸತ್ಯಸಂಧರಲ್ಲ. ಆದರೆ ಒಬ್ಬ ಕುತಂತ್ರಿ, ಕಿಡಿಗೇಡಿ ಇದ್ದ ಕಡೆಯಲ್ಲೇ, ಒಬ್ಬ ನಾಯಕ ಇರುತ್ತಾನೆ. ಒಬ್ಬ ಭ್ರಷ್ಠ ರಾಜಕಾರಣಿ ಇದ್ದರೆ. ಅಲ್ಲಿಯೇ ಒಬ್ಬ ಪ್ರಜಾನಾಯಕ ಇರುತ್ತಾನೆ ಎನ್ನುವುದನ್ನು ತಿಳಿಸಿ. ಒಬ್ಬ ಶತ್ರು ಇದ್ದರೆ ಒಬ್ಬ ಮಿತ್ರ ಇರುತ್ತಾನೆ. ಇವೆಲ್ಲವನ್ನೂ ಒಂದೇ ಸಾರಿ ತಿಳಿಸಬೇಕಾಗಿಲ್ಲ, ಆದರೆ ನಿಧಾನವಾಗಿಯಾದರೂ ತಿಳಿಸಿ.
ದುಡಿಯದೆ ಬಿಟ್ಟಿ ಸಿಕ್ಕಿದ ಐದು ಡಾಲರ್ಗಳಿಗಿಂತ, ಬೆವರು ಸುರಿಸಿ ದುಡಿದು ಗಳಿಸಿದ ಒಂದು ಡಾಲರ್ಗೆ ಹೆಚ್ಚು ಬೆಲೆ ಎಂದು ತಿಳಿಸಿ. ಗೆದ್ದಾಗ ಸಂತೋಷಪಡಲಿ, ಆದರೆ ಸೋಲನ್ನು ಸಮಾಧಾನವಾಗಿ ತೆಗೆದುಕೊಳ್ಳುವುದನ್ನು ಹೇಳಿಕೊಡಿ. ಹೊಟ್ಟೆಕಿಚ್ಚುಪಡುವವರಿಂದ ದೂರವಿರಲಿ; ಚುಡಾಯಿಸುವವರನ್ನು ಎದುರಿಸುವುದನ್ನು ಹೇಳಿಕೊಡಿ. ಪ್ರಕೃತಿಯ ಸೌಂದರ್ಯಗಳನ್ನು ನೋಡಿ ಅನುಭವಿಸಿ ಕಾಪಾಡುವುದರ ಪ್ರಾಮುಖ್ಯತೆಯನ್ನು ತಿಳಿಸಿ.
ಪ್ರತಿಯೊಂದು ಮಗುವೂ ಒಂದು ವಿಶಿಷ್ಟ ವ್ಯಕ್ತಿ. ಎಲ್ಲಾ ಗುಣಗಳೂ ಎಲ್ಲರಲ್ಲೂ ಬೆಳೆಯಲೂ ಸಾಧ್ಯವಿಲ್ಲ. ಶಿಕ್ಷಕರಾದ ನೀವು ಸಹನೆಯಿಂದ ಕಲಿಸಲು ಪ್ರಯತ್ನಿಸಿ.
ಅವನು ಅಸಹನೆಯನ್ನು ಪ್ರದರ್ಶಿಸಲು ಬಿಡಿ. ಆಗ ಧೈರ್ಯದಿಂದ ಎದುರಿಸಬೇಕಾದ ಗುಣವನ್ನು ಕಲಿಯಲು ಅವಕಾಶ ಮಾಡಿ. ಇವೆಲ್ಲಾ ನನ್ನ ಆಜ್ಞೆಗಳು ಅಂದುಕೊಳ್ಳಬೇಡಿ. ನನ್ನ ಮಗನು ಬೇರೆಯವರಂತೆಯೇ ಇರದೆ, ಸ್ವಂತಿಕೆಯನ್ನು ತೋರಿಸುವಂತೆ ತಿಳಿಸಿಹೇಳಿ.
(ಸಿದ್ದು.ಮಾದರ(ಮಮದಾಪೂರ)
ಮೊಬೈಲ್ ನಂಬರ್:9901941065,
9742541822)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ನೆನಪು
- ರುದ್ರಪ್ಪ ಹನಗವಾಡಿ
ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ
ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು
ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು
ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?
( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ
- ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ
ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.
ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.
ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು
ಬದುಕಿಸುವುದು ಇತ್ಯಾದಿ..
ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.
ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.
ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;
“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”
ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.
ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.
ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;
“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”
ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;
“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”
ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;
“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”
ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;
“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”
ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ
ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.
ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.
ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.
ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.
ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.
ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.
ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.
ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.
ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.
ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.
ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.
ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.
ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ್ಮಿಕ ಜಗತ್ತಿನಲ್ಲಿ ಸರ್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ