Connect with us

ಲೈಫ್ ಸ್ಟೈಲ್

ನವರಂಗಿ ನವರಾತ್ರಿಗೆ  ಟಾಪ್ 9 ಫ್ಯಾಷನ್ ಟಿಪ್ಸ್..!

Published

on

  • ಚಿತ್ರಶ್ರೀ ಹರ್ಷ

ಕರೋನ ಕಾಟದ ನಡುವೆಯೇ , ಹಬ್ಬಗಳ ಸಾಲು ಹೊಸ್ತಿಲಲ್ಲಿ ನಿಂತಿರುವ ಬೆನ್ನಲ್ಲೇ, ಗಣೇಶನಿಗೆ ಟಾಟಾ ಹೇಳಿ, ಮಹಾ ಕಾಳಿಯ ಆರಾಧನೆಗೆ ಸಜ್ಜಾಗುತ್ತಿದೆ ಮಹಿಳಾ ಪಡೆ.

ಮಾಸ್ಕ್ , ಸ್ಯಾನಿಟೈಸರ್,  ಸಾಮಾಜಿಕ ಅಂತರದ ಜೊತೆ ಜೊತೆಯಲ್ಲೇ   ಸಾಂಪ್ರದಾಯಿಕ ಸಮ್ಮಿಶ್ರನ ವಾಗಿರುವ ಒಂಭತ್ತು ದಿನಗಳ ನವರಾತ್ರಿ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ  ಸಾಂಪ್ರದಾಯಿಕ ಗಾಗ್ರ ಚೋಲಿ ಹಾಗೂ ಚನಿಯಾ ಚೋಲಿ ಯಿಂದ , ಇಂಡೋ-ವೆಸ್ಟರ್ನ್ ಮಿಕ್ಸ್ -ಮ್ಯಾಚ್ ಫ್ಯಾಷನ್ವರೆಗೂ ನೂತನ ಟ್ರೆಂಡ್ ಸೃಷ್ಟಿ ಆಡುತ್ತಲೇ ಇದೆ.

ಕರೋನ ಭೀತಿಯ ನಡುವೆಯೂ ನವರಾತ್ರಿಯ ದಾಂಡಿಯಾ ರಾಸ್ ರಸಸಂಜೆಗೆಂದೇ ಪಾರ್ಟಿ ಪ್ರಿಯರು ಸಜ್ಜಾಗುತ್ತಿದ್ದು,  ಡಾಂಡಿಯಾ ಪಾರ್ಟಿ ಗೆ ಇದೋ ಇಲ್ಲಿದೆ ನೋಡಿ ಕೆಲವು ಫ್ಯಾಷನ್ ಟಿಪ್ಸ್.

ನವರಂಗಿ ನವರಾತ್ರಿ ಗೆ  ಟಾಪ್ 9 ಫ್ಯಾಷನ್ ಟಿಪ್ಸ್

1. ಪೋಟ್ಲೀ ಬ್ಯಾಗ್-ಮ್ಯಾಚಿಂಗ್ ಮಾಸ್ಕ್

ಭಾರತದೆಲ್ಲೆಡೆ ಒಂಭತ್ತು ದಿನಗಳ ಸುದೀರ್ಘ  ನವರಾತ್ರಿ ಉತ್ಸವಕ್ಕೆ ಸಜ್ಜಾಗುತ್ತಿದೆ ಮಹಿಳಾ ಪಡೆ. ಆಕರ್ಷಕ ಕಸೂತಿ ಹೊಂದಿರುವ ಪುಟ್ಟ ಪೋಟಲೀ ಬ್ಯಾಗ್ ಗಳು ಹಬ್ಬಕ್ಕೆ ಮತ್ತಷ್ಟು ಕಳೆ ಕಟ್ಟುತ್ತದೆ. ಗೋಲ್ಡನ್ ಗ್ಲಿಟರ್ ಫ್ಯಾಬ್ರಿಕ್ ಹಾಗೂ ದೇಸೀ ಬಣ್ಣಗಳ ಕಾಂಬಿನೇಷನ್ ನಲ್ಲಿ ಕುಂದನ್,ಹರಳು ಗಳನ್ನು ಬಳಸಿ ಮಾಡಲಾಗಿರುವ ಈ ಪೋಟ್ಲೀ ಬ್ಯಾಗ್ ಗಳು ಗುಜರಾತಿ ಗರ್ಭಾ ಗಳಲ್ಲಿ ಮಹಿಳೆಯರ ಸಾಂಪ್ರದಾಯಿಕ ಉಡುಪಿಗೆ ಒಪ್ಪುವಂತಿದೆ.

  • ನವರಾತ್ರಿಯ  ಮ್ಯಾಚಿಂಗ್  ಮಾಸ್ಕ್

ವೈರಸ್-ಬ್ಯಾಕ್ಟೀರಿಯಾ ಗಳಿಗೆ ಹೆದರಿ ಪಾರ್ಟಿ ಮಾಡುವುದನ್ನು ನಿಲ್ಲಿಸಿದ್ದ ಪಾರ್ಟಿ ಪ್ರಿಯರು , ಈಗ ಮಾರುಕಟ್ಟೆ ಗೆ ಲಗ್ಗೆ ಇಟ್ಟಿರುವ ಬಾಂದಿನಿ , ರಾಜಸ್ಥಾನಿ ಕಸೂತಿಯ  ಫೇಸ್ ಮಾಸ್ಕ್ ಧರಿಸಿ ಪಾರ್ಟಿ ಫೀವರ್ ನ ಟೆಂಪರೇಚರ್ ಹೆಚ್ಚಿಸುತ್ತಿವೆ ಈ ಮ್ಯಾಚಿಂಗ್  ಸೀಕ್ವೀನ್ ಫೇಸ್ ಮಾಸ್ಕ್ ಫ್ಯಾಷನ್! ನವರಾತ್ರಿಯ ಒಂಭತ್ತು ದಿನಗಳ, ನವ ವರ್ಣದ ಉತ್ಸವಕ್ಕೆ ಒಂಭತ್ತು ವಿವಿಧ ವಿನ್ಯಾಸದ ಮಾಸ್ಕ್ ಮಾರುಕಟ್ಟೆ ಗೆ ಲಗ್ಗೆ ಇಟ್ಟಿದೆ.

2. ಮಾತಾ ಪಟ್ಟಿ/ ಮಾಂಗ್ ಟೀಕಾ

ಆಧುನಿಕ ಫ್ಯಾಷನ್ ಯುಗದಲ್ಲಿ, ಹಳೆಯ ಕಾಲದ ಸಾಂಪ್ರದಾಯಿಕ ಗುಂಡು ಯಾಂಗ್ ಟೀಕಾ ಬದಲಿಗೆ ಆಕರ್ಷಕ ಆಕ್ಸಿಡೈಸ್ಡ್ ಕಪ್ಪು ಲೋಹದ ಆಭರಣಗಳು ಟ್ರೆಂಡ್ ಆಗುತ್ತಿದೆ. ನವರಾತ್ರಿ ಆಚರಣೆ ಯು ದಾಂಡಿಯಾ ಶೃಂಗಾರಕ್ಕೆ ಮತ್ತಷ್ಟು ರಂಗು ತುಂಬಲು ರಂಗಿನ ಮಾತಾ ಪಟ್ಟಿ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದೆ. ಮಾವಿನ ಕಾಯಿ, ಪಕ್ಷಿ, ಎಲೆ, ಬುಗುರಿ, ಮತ್ತು ಟ್ರೈಬಲ್ ಡಿಸೈನರ್ ಮಾತಾ ಪಟ್ಟಿ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಗಿಟ್ಟಿಸಿಕೊಂಡಿದೆ.

3.ಪಗಡಿ

ಇತ್ತೀಚಿನ ದಿನಗಳಲ್ಲಿ ಆಧುನಿಕ ಡಿಸ್ಕೋ ಡಾಂಡಿಯಾ ಪಾರ್ಟಿ ರಂಗೇರುತ್ತಿದ್ದು,. ಯುವಪೀಳಿಗೆಯನ್ನು ಕೈ ಬೀಸಿ ಕರೆಯುತ್ತಿದೆ.  ಪಗಡಿ , ಫ್ಯೂಜನ್  ಫ್ಯಾಷನ್ ನಾ ಬಹು ಮುಖ್ಯ ಅಂಗವಾಗಿದ್ದು, ಆಧುನಿಕ ಮಹಿಳೆಯರ ಅಭಿರುಚಿಗೆ ತಕ್ಕಂತೆ ಕಲರ್ಫುಲ್ ಪಗಡಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಮಲ್ಟಿಕಲರ್ ಕುರ್ತಾ-ಧೋತಿ ಸ್ಟೈಲ್ ಪೈಜಾಮ ನೊಂದಿಗೆ ಇವು ಹೆಚ್ಚು ಸ್ಟೈಲಿಶ್ ಲುಕ್ ನೀಡುತ್ತದೆ.

4.ಪಾಂಪಾಂ ಟ್ರೆಂಡ್

ಪಾಂಪಾಂ ಟ್ರೆಂಡ್ ಮಾಡಿಸಿತು ಎನ್ನುವಷ್ಟರಲ್ಲೇ.. ಗುಜರಾತಿ ಗರ್ಭಾ ಗಳಲ್ಲಿ ಮಹಿಳೆಯರ ಸಾಂಪ್ರದಾಯಿಕ ಲೆಹೆಂಗಾ, ಘಾಗ್ರಚೋಲಿ, ಪಾದರಕ್ಷೆ, ಆಭರಣಗಳಲ್ಲಿ ಈ ಕಲರ್ಫುಲ್ ವುಲ್ಲನ್ ಗೋಲಿಗಳು ತಮ್ಮ ಕಮಾಲ್ ತೋರುತ್ತದೆ.ಆಕ್ಸಿಡೈಸ್ಡ್ ಕಪ್ಪು ಲೋಹದ ಆಭರಣಗಳು. ಪಾಂಪಾಂ ಫ್ಯುಜನ್ ಫ್ಯಾಷನ್ ನಾ ಅಗ್ರಸ್ಥಾನದಲ್ಲಿದೆ.

5.ಗುಜರಾತಿ ಪ್ರಿಂಟ್ ಜಾಕೆಟ್

ಕರಕುಶಲ ವಸ್ತುಗಳ ಪ್ರಮುಖ ತಾಣ ವಾಗಿರುವ ಗುಜರಾತಿನ ಕೋಚ್ ಎಂಬ್ರಾಯ್ಡರಿ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.ಈ ಧರ್ಮೀಯ ಕೋಚ್ ವರ್ಕ್ ನ ಗುಜರಾತಿ ಕರಕುಶಲ ಜಾಕೆಟ್ ಗಳು ಮಾರುಕಟ್ಟೆಗೆ ಧಾವಿಸಿದ್ದು, ಹಬ್ಬಕ್ಕೆ ಮತ್ತಷ್ಟು ಕಲರ್ಫುಲ್ ಎಫೆಕ್ಟ್ ನೀಡುತ್ತಿದೆ.

6.ಖೇದಿಯಾ-ಧೋತಿ

ಟಿಪಿಕಲ್‌ ಆಗಿದ್ದ ಧೋತಿಗೆ ಹೊಸ ರೂಪ ಸಿಕ್ಕಿದೆ. ಕ್ರಾಪ್‌ ಟಾಪ್‌ ಹಾಗೂ ಇಂಡೋ ವೆಸ್ಟರ್ನ್‌ ಶೈಲಿಯಲ್ಲಿ ಮಿಕ್ಸ್‌ ಮ್ಯಾಚ್‌ ಟಾಪ್‌ಗೆ ಧರಿಸುವ ಹೊಸ ಫ್ಯಾಷನ್‌ ರಾರ‍ಯಂಪ್‌ನಲ್ಲಿ ಹಂಗಾಮ ಎಬ್ಬಿಸಿದೆ.ಧೋತಿಗೆ ಕಮೀಝ್‌ ಹಾಗೂ ಕುರ್ತಾ ಧರಿಸುವ ಹಳೆ ಫ್ಯಾಷನ್‌ ಸೈಡಿಗೆ ಸರಿದಿದೆ. ಅದರ ಬದಲು ಕ್ರಾಪ್‌ ಟಾಪ್‌, ಕೋಲ್ಡ್‌ ಶೋಲ್ಡರ್‌ ಟಾಪ್‌, ಕೇಪ್‌ ಸ್ಟೈಲ್‌, ಶಾರ್ಟ್‌ ಬ್ಲೌಸ್‌, ಸೆಮಿ ಎಥ್ನಿಕ್‌ ಟೀ ಶರ್ಟ್‌ ಹೀಗೆ ಒಂದಿಷ್ಟು ವಿನೂತನ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ನಾಂದಿ ಹಾಡುವ ಫ್ಯಾಷನ್‌ ಇಂದು ಟ್ರೆಂಡಿಯಾಗಿದೆ. ಈ ಸ್ಟೈಲ್‌ಗೆ ಪೂರಕ ಎಂಬಂತೆ ಧೋತಿಯ ಪಕ್ಕಾ ಟ್ರಡಿಷನಲ್‌ ಸ್ಟಿಚ್ಚಿಂಗ್‌ ಸ್ಟೈಲ್‌ ಕೂಡ ಬದಲಾಗಿದೆ. ನೋಡಲು ಧೋತಿಯಂತೆ ಕಂಡರೂ ಇದರ ಫ್ಲೀಟ್ಸ್‌ ಅಂದರೆ ನೆರಿಗೆಗಳು ಬದಲಾಗಿವೆ. ಬಿಗ್‌ ಫ್ಲೀಟ್ಸ್‌ ಬದಲು ಮೈಕ್ರೋ ಫ್ಲೀಟ್ಸ್‌ ಸ್ಥಾನ ಪಡೆದಿವೆ.

7. ಇ- ಡಾಂಡಿಯಾ ಕೋಲುಗಳು

ಸಾಮಾನ್ಯ ವಾಗಿ ಮಾರುಕಟ್ಟೆಯಲ್ಲಿ ಸಿಗುವ ಕೋಲಾಟದ ಕಡ್ಡಿಗಳೂ ಈಗ ಮಿರ ಮಿರ ಮಿರುಗುಯತ್ತಿವೆ. ಡಿಸ್ಕೋ ಡಾಂಡಿಯಾ ಗೆಂದೇ, ಎಲ್.ಇ.ಡಿ ದಾಂಡಿಯಾ ಕೋಲುಗಳು ಮೋರುಕಟ್ಟೆಗೆ ಬಂದಿದ್ದು, ಡಿಸ್ಕೋ ಡಾಂಡಿಯಾ ಪಾರ್ಟಿ ಪ್ರಿಯರು ನಿಯಾನ್ ಕಲರ್ಸ್ ಇ-ಡಾಂಡಿಯಾ ಕೋಲುಗಳಿಗೆ  ಮುಗಿ ಬೀಳುತ್ತಿದ್ದಾರೆ.

8. ಆಕ್ಸಿಡೈಸ್ಡ್ ಆಭರಣಗಳು

ದೊಡ್ಡ ಗಾತ್ರದ ಝುಮುಕಿ, ಬಳೆ,ಮೇಲು ಕುತ್ತಿಗೆ  ಸರ-ಹಾರ ಗಳ ಅಬ್ಬರ ಆಭರಣ ಲೋಕದಲ್ಲಿ ಸದ್ಯ ಸಕ್ಕತ್ ವೈರಲ್. ನವರಾತ್ರಿ ಯ ಸಾಂಪ್ರದಾಯಿಕ ಉಡುಪುಗಳೊಂದಿಗೆ ಈ ಕಪ್ಪು ಲೋಹದ ಒಡವೆಗಳು ಸಕ್ಕತ್ ಆಗಿ ಮ್ಯಾಚ್ ಆಗುತ್ತದೆ. ಹೊಚ್ಚ ಹೊಸಾ ವಿನ್ಯಾಸದ ಕಪ್ಪು ಲೋಹದ ಆಭರಣಗಳ ಭರಾಟೆ ಮಾರುಕಟ್ಟೆಯಲ್ಲಿ ಜೋರಾಗಿದೆ. ಹಾಗಾದ್ರೆ ಈ ಬಾರಿಯ ದಸರಾ ಡಾಂಡಿಯಾ ಡ್ರೆಸ್ ನೊಂದಿಗೆ ಕಪ್ಪು ಲೋಹದ ಆಭರಣಗಳ ಧರಿಸುವುದು ಮರೆಯದಿರಿ

9.ಬಾಡಿ ಟ್ಯಾಟೂ

ನವರಾತ್ರಿಯ ಹೆಂಗಳೆಯರ ಶೃಂಗಾರಕ್ಕೆ ಮತ್ತಷ್ಟು ಗ್ಲಾಮರಸ್ ಲುಕ್ ನೀಡುತ್ತದೆ ನವರಾತ್ರಿ ಬಾಡಿ ಟ್ಯಾಟೂ..ಡೀಪ್ ಬ್ಯಾಕ್ ಬ್ಲೌಸ್ ಧರಿಸಿ, ಬೆನ್ನು ಮೇಲೆ ನವರಾತ್ರಿ ಸಿರಿಯಾ ಟ್ಯಾಟೂ ಯುವಪೀಳಿಗೆ ಯಲ್ಲಿ ಭಾರೀ ಕ್ರೇಜ್ ಹುಟ್ಟುಹಾಕಿದೆ. ಕಿತ್ತು, ಕೈ ತೋಳು, ಬೆನ್ನಿನ ಮೇಲೆ ನವರಾತ್ರಿ ಬಾಡಿ ಟ್ಯಾಟೂ ಕ್ರೇಜ್ ವೈರಲ್ ಆಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಹೆಸರಲ್ಲೇ ಕಲೆ ಬೆರತಿರುವವಳು ನಾನು ಚಿತ್ರಶ್ರೀ ಹರ್ಷ. ವೃತ್ತಿಯಲ್ಲಿ ಉಪನ್ಯಾಸಕಿ. ಹುಟ್ಟಿದ್ದು ಬೆಳೆದದ್ದು ಬೆಂಗಳೂರಿನಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದ ದ M.A Economics ಪದವೀಧರೆ. M.phil ಕೂಡ ಮುಗಿದಿದ್ದು ಬಿ.ಬಿ.ಎಂ.ಪಿ ಕಾಲೇಜಿನಲ್ಲಿ ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಫ್ಯಾಷನ್ ಸೆಳೆತ ಚಿಕ್ಕಂದಿನಿಂದಲೂ ಇದ್ದೇ ಇತ್ತು. ಅದಕ್ಕೆ ತಕ್ಕಂತೆ ಫ್ಯಾಷನ್ ಲೋಕವೂ ಕೈ ಬೀಸಿ ಕರೆಯುತ್ತಿತ್ತು. ಬಾಲ್ಯದ ಆಸೆ ಈಗ ಈಡೇರಿದೆ. ಫ್ಯಾಷನ್ ಲೋಕದಲ್ಲಿ "ನೈಲ್ ಆರ್ಟ್ ಸ್ಪೆಷಲಿಸ್ಟ" ಎಂಬ ಬಿರದು ನನ್ನದಾಗಿದೆ. ಹಲವಾರು ಖಾಸಗಿ ವಾಹಿನಿಗಳಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದು, ಸಂಯುಕ್ತ ಕರ್ನಾಟಕ ಹಾಗೂ ಕರ್ಮವೀರ ಪತ್ರಿಕೆ ಗಳಿಗೆ ಫ್ಯಾಷನ್ ಲೇಖನ ಬರೆಯುತ್ತಿದ್ದೇನೆ. ಬ್ಯೂಟಿ ಟ್ರೆಂಡ್ ಹಾಗೂ ನೈಲ್ ಆರ್ಟ್ ನಲ್ಲಿ ವಿನೂತನ ಹಾಗೂ ಟ್ರೆಂಡೀ ಲುಕ್ ಸೃಷ್ಟಿಸುವುದು ನನ್ನ ಹವ್ಯಾಸ. ಹಲವಾರು ಕವನಗಳನ್ನು ಬರೆದಿದ್ದು, ಪ್ರತಿಷ್ಠಿತ ದಿನಪತ್ರಿಕೆ ಗಳಲ್ಲಿ ಪ್ರಕಟವಾಗಿದೆ.

ಅಂತರಂಗ

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

Published

on

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.

ಖರ್ಗೋನ್‌ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.

ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Continue Reading

ಅಂಕಣ

Indian birthwort: ಪರಮಾತ್ಮನ ಹೆಸರಲ್ಲೇ ಇರುವ ದಿವ್ಯೌಷದ ಈಶ್ವರ ಬಳ್ಳಿ ಬಗ್ಗೆ ಗೊತ್ತೇ?

Published

on

indian birthwort, Aristolochia tagala

‘ಈಶ್ವರ’ ಎಂದ ಕೂಡಲೇ ಪರಮಾತ್ಮನನ್ನೆ ನೆನಪಿಸಿಕೊಳ್ಳೋ ನಮಗೆ ಅದೇ ಹೆಸರಿನಲ್ಲಿ ದಿವ್ಯೌಷಧಿ ಇದೆ ಎಂಬುದು ಎಷ್ಟು ಜನರಿಗೆ ತಿಳಿದೀತು? ಹೌದು! ಪರಮಾತ್ಮನ ಹೆಸರಿನಲ್ಲೇ ಒಂದು ಗಿಡಮೂಲಿಕೆ ಇದೆ (Indian birthwort). ಇದರ ವಿಶೇಷತೆ ಏನು? ಅದರಿಂದಾಗುವ ಪ್ರಯೋಜನಗಳೇನು? ಆರೋಗ್ಯದ ಮೇಲೆ ಬೀರುವ ಪ್ರಬಾವಗಳೇನು? ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ಈ ಬಳ್ಳಿಯನ್ನು ಹೆಚ್ಚಾಗಿ ಭಾರತ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಬಹುದಾಗಿದೆ. ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ. ಸಾಮಾನ್ಯವಾಗಿ ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿಯಾಗಿದ್ದು, ಇದರ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇನ್ನೂ ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ ಹಾಗು ಇದರ ಬೇರುಗಳಲ್ಲಿ ಸುಗಂಧ ತೈಲವಿರುತ್ತದೆ.

ಈಶ್ವರ ಬಳ್ಳಿ (Indian birthwort)ಯ ಪೌರಾಣಿಕ ಹಿನ್ನೆಲೆ:

ನಮ್ಮೆಲ್ಲರಿಗೂ ತಿಳಿದಂತೆ ಶಿವ ಸಮುದ್ರ ಮಂಥನ ಮಾಡುವಾಗ ಹಾಲಾಹಲ (ವಿಷ) ಉತ್ಪತ್ತಿಯಾಯಿತು. ಆ ವಿಷ ಯಾರಿಗೂ ತೊಂದರೆಯಾಗಬಾರದೆಂದು ತಾನೇ ಅದನ್ನು ಕುಡಿದ. ಇದನ್ನು ನೋಡಿದ ಪಾರ್ವತಿ ದೇವಿ ಆ ವಿಷ ತನ್ನ ಪತಿಯ ಹೊಟ್ಟೆ ಸೇರಬಾರದೆಂದು ಆತನ ಕುತ್ತಿಗೆಯನ್ನು ಒತ್ತಿ ಹಿಡಿದಳು. ವಿಷ ಒಳ ಹೋಗಲಿಲ್ಲ. ವಿಷದ ಪ್ರಭಾವದಿಂದ ಕುತ್ತಿಗೆ ನೀಲ ವರ್ಣವಾಯಿತು. ಶಿವ ನೀಲಕಂಠನಾದ. ಶಿವ ವಿಷ ಕುಡಿದರೂ ಶಿವನಿಗೆ ಏನೂ ಆಗಲಿಲ್ಲ. ವಿಷವನ್ನು ನಿರ್ವಿಷ ಮಾಡುವ ಗುಣ ಶಿವನಿಗಿದ್ದಂತೆ ಈ ಗಿಡಕ್ಕೂ ಇರುವ ಕಾರಣ ‘ಈಶ್ವರ’ ಎಂಬ ಹೆಸರು ಈ ವನಸ್ಪತಿಗೆ ಇಟ್ಟಿದ್ದಾರೆ.

ಇದನ್ನೂ ಓದಿ: ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ

‘ಈಶ್ವರ’ ಬಳ್ಳಿ ಮತ್ತು ಅದರ ಫಲ ನೋಡಲು ಹೇಗಿರುತ್ತದೆ?

ಕೆಲ ‘ಈಶ್ವರ’ ಬಳ್ಳಿಯು ಮರದಂತೆ ಉದ್ದಕ್ಕೆ ಏರುತ್ತದೆ. ಮತ್ತಷ್ಟು ಬಳ್ಳಿಯು ಪೊದೆಯಾಗಿ ಆವರಿಸಿಕೊಳ್ಳುತ್ತದೆ. ಸ್ವಲ್ಪ ಉದ್ದ ಆಯತಾಕಾರದ ಎಲೆಗಳು. ಎಲೆಗಳು ಅಲ್ಲಾಡಿದರೆ ಪರಿಮಳ ಸೂಸುತ್ತದೆ. ಎಲೆಯನ್ನು ಕಿವಿಚಿದರೂ ಪರಿಮಳ ಬರುತ್ತದೆ. ಹೂಗಳು ಬಾಯಿ ತೆರೆದ ಹಕ್ಕಿಗಳಂತೆ ಕಂಡುಬರುತ್ತದೆ. ಫಲಗಳು ಉದ್ದ ಹಾಗೂ ಸ್ವಲ್ಪ ದುಂಡಾಗಿ ಇರುತ್ತದೆ. ಫಲ ಬೆಳೆದು ಒಡೆದಾಗ ತಲೆ ಕೆಳಗಾಗಿ ಬಿಡಿಸಿದ ಪ್ಯಾರಾಚೂಟ್‌ನಂತೆ ಕಾಣುತ್ತದೆ. ಅದರೊಳಗೆ ತೆಳುವಾದ ತ್ರಿಕೋಣಾಕಾರದ ಬೀಜಗಳು ಇರುತ್ತದೆ.

‘ಈಶ್ವರ’ ಬಳ್ಳಿ (Indian birthwort)ಯಿಂದ ಆಗುವ ಪ್ರಯೋಜನಗಳೇನು?

ಭಾರತದ ಎಲ್ಲಾ ಕಡೆ ಕಂಡು ಬರುವ ಈಶ್ವರ ಬಳ್ಳಿಯ ಬೇರು, ಎಲೆಗಳು ಔಷಧಿಗಾಗಿ ಉಪಯೋಗಿಸಲ್ಪಡುತ್ತದೆ. ಕ್ರಿಮಿ ಬಾಧೆ, ಕಫ ಬಾಧೆ, ಸ್ತ್ರೀಯರ ಕೆಲವು ತೊಂದರೆಗಳಲ್ಲಿ, ವಿಷ ಚಿಕಿತ್ಸೆಯಲ್ಲಿ ವಿಶೇಷವಾಗಿ ಇದನ್ನು ಉಪಯೋಗಿಸಲ್ಪಡುತ್ತದೆ.

ಜೇಡ, ಚೇಳು, ಇಲಿ ಕಚ್ಚಿದರೆ: ಇದರ 3ಗ್ರಾಂ ಬೇರನ್ನು ಅಕ್ಕಿ ತೊಳೆದ ನೀರಲ್ಲಿ ಕಲಸಿ ಕುಡಿಸಬೇಕು ಹಾಗೂ ಅದರ ಎಲೆಯನ್ನು ನೀರಲ್ಲಿ ಅರೆದು ಕಚ್ಚಿದಲ್ಲಿಗೆ ಲೇಪಿಸಬೇಕು.
ತಲೆ ನೋವಿಗೆ ರಾಮಬಾಣ: ಈಶ್ವರ ಬಳ್ಳಿಯ ಎಲೆಯಲ್ಲಿ 10 ಗ್ರಾಂ ರಸ ತೆಗೆದು, 3ಗ್ರಾಂ ಅರಿಶಿನ ಪುಡಿ ಸೇರಿಸಿ ಕುಡಿಯುವುದರಿಂದ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
ಗಂಟುನೋವು, ಬಿಳಿ ಮಚ್ಚೆಗಳು: ಈ ಎಲೆಯನ್ನು ನೀರಲ್ಲಿ ಅರೆದು ಗಂಟುನೋವು ಅಥವಾ ಬಿಳಿ ಮಚ್ಚೆಗಳ ಮೇಲೆ ಹಚ್ಚುತ್ತ ಬಂದರೆ ಕ್ರಮೇಣ ವಾಸಿಯಾಗುತ್ತದೆ.
ಕೆಮ್ಮು ಕಫಕ್ಕೆ ಔಷಧಿ: ಇದರ ಎಲೆಯ ಜ್ಯೂಸ್ ತೆಗೆದು 15 ಎಂಎಲ್ ನಷ್ಟು ಕುಡಿಸುವುದರಿಂದ ಕಡಿಮೆಯಾಗುವುದು. ಕೆಲವೊಮ್ಮೆ ಈ ಎಲೆಯ ಜ್ಯೂಸ್ ಕುಡಿದ ಸ್ವಲ್ಪ ಹೊತ್ತಿನಲ್ಲಿ ಕಫ ವಾಂತಿಯಾಗಿ ಕರಗಿ ಹೋಗುತ್ತದೆ. ಕಫ ಜಾಸ್ತಿ ಇರುವಾಗ ಸಾಮಾನ್ಯವಾಗಿ ಅಮೃತಾಂಜನ, ವಿಕ್ಸ್ ಎದೆಗೆ ಹಚ್ಚುತ್ತಾರೆ. ಅದೇ ರೀತಿ ಎಲೆಯನ್ನು ಅರೆದು ಎದೆಗೆ ಹಚ್ಚಬಹುದು.
ಮುಟ್ಟಿನ ದೋಷ ನಿವಾರಣೆ: ಹೆಣ್ಣುಮಕ್ಕಳ ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ 10ಗ್ರಾಂ ಈಶ್ವರ ಬೇರಿನ ಕಷಾಯ ಮಾಡಿ (30 ರಿಂದ 40 ಎಂ.ಎಲ್) ಕುಡಿಸಬೇಕು.
ಹೊಟ್ಟೆ ಕ್ರಿಮಿ ಬಾಧೆ: 5-10 ಮಿಲಿ ಎಲೆರಸವನ್ನು 3 ದಿನ ಕುಡಿಯುವುದರಿಂದ ಕಡಿಮೆಯಾಗುವುದು.
ಜ್ವರಕ್ಕೆ ದಿವ್ಯೌಷಧಿ: 5 ಗ್ರಾಂ ಈಶ್ವರ ಬೇರನ್ನು ಕಷಾಯ ಮಾಡಿ ಅದಕ್ಕೆ 1/2 ಚಮಚ ಕಾಳು ಮೆಣಸು ಪುಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು. ಶರೀರ ಬಿಸಿ ಆಗಿ ಚಳಿಯಿಂದ ಕೂಡಿದ ಜ್ವರವಿದ್ದರೆ ಈಶ್ವರ ಬೇರಿನ ಕಷಾಯದೊಂದಿಗೆ ಈಶ್ವರ ಬೇರಿನ ಎಲೆ ರಸಕ್ಕೆ ಹಿಪ್ಪಿಯನ್ನು ಪುಡಿಮಾಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು.
ಸರ್ಪ ಸುತ್ತಿಗೆ ರಾಮಬಾಣ: ಇತ್ತೀಚೆಗೆ ಸರ್ಪ ಸುತ್ತಿಗೆ ಅನೇಕ ಔಷಧಿಗಳಿದ್ದರು ಈಶ್ವರ ಬೇರು ಮತ್ತು ನೀಲಿ ಸೊಪ್ಪನ್ನು ಸೇರಿಸಿ ಅರೆದು ಹಚ್ಚುವುದರಿಂದ ಉರಿ ನೋವು ಕಡಿಮೆಯಾಗುವುದು.
ದೃಷ್ಟಿ ದೋಷ ನಿವಾರಣೆ: ಇದರ ಬೇರನ್ನು ನಯವಾಗಿ ಚೂರ್ಣಮಾಡಿ ಅದಕ್ಕೆ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.
ಮಲಬದ್ಧತೆ ಮತ್ತು ಮೂಲವ್ಯಾಧಿ ನಿವಾರಣೆ: ಈಶ್ವರಿಬೇರು, ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಇವುಗಳೆಲ್ಲವನ್ನು ಸಮತೂಕದಲ್ಲಿ ನಯವಾಗಿ ಚೂರ್ಣಿಸಬೇಕು. ನಂತರ 2 ರಿಂದ 2.5 ಗ್ರಾಂ ಚೂರ್ಣವನ್ನು ಸೇವಿಸಿ ಬಿಸಿನೀರು ಕುಡಿದರೆ ಮಲಬದ್ಧತೆ ಮತ್ತು ಮೂಲವ್ಯಾದಿ ನಿವಾರಣೆಯಾಗುತ್ತದೆ.

ಹೀಗೆ ಈಶ್ವರ ಬೇರು (Indian birthwort) ಮತ್ತು ಅದರ ಎಲೆಯಲ್ಲಿ ಅಡಗಿರುವ ದಿವ್ಯೌಷಧಿ ಅಪಾರ. ಅದರಲ್ಲಿ ತೀಕ್ಷ ಗುಣಗಳುಳ್ಳ ಮದ್ದಾಗಿದ್ದು, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಯಾವುದೇ ಔಷಧಿಯಾದರು ಉಪಯೋಗಿಸು ಮುನ್ನ ಒಮ್ಮೆ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ.

Continue Reading

ದಿನದ ಸುದ್ದಿ

ಗೃಹಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯಲ್ಲಿ ಬದಲಾವಣೆ ಇಲ್ಲ

Published

on

ಸುದ್ದಿದಿನಡೆಸ್ಕ್:ಗೃಹಬಳಕೆಯ ಎಲ್‌ಪಿಜಿ ಸಿಲೆಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.

ಗೃಹ ಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯನ್ನು 111 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿರುವ ಸಚಿವಾಲಯ, ವಾಣಿಜ್ಯ ಸಿಲೆಂಡರ್ ಬೆಲೆಯು ಅಂತಾರಾಷ್ಟ್ರೀಯ ಕಚ್ಚಾ ಅನಿಲ ಮತ್ತು ಸಂಬAಧಿತ ದರಗಳ ಮೇಲೆ ಅವಲಂಬಿತವಾಗಿದ್ದು, ಆಗಾಗ್ಗೆ ಮಾರುಕಟ್ಟೆಯ ದರಗಳು ಬದಲಾಗುತ್ತವೆ. ಆದರೆ, ಗೃಹ ಬಳಕೆಯ ಸಿಲೆಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಸಿದೆ.

ದೆಹಲಿಯಲ್ಲಿ 14.2 ಕೆಜಿ ಗೃಹ ಬಳಕೆ ಅಡುಗೆ ಅನಿಲ ಸಿಲೆಂಡರ್ ಬೆಲೆ 950 ರೂಪಾಯಿಯಾಗಿದ್ದು, ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇದು 553 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಇದು ಆಗಸ್ಟ್ 2023 ರಿಂದ ನವೆಂಬರ್ 2025ರವರೆಗೆ ಹೋಲಿಸಿದರೆ, ಶೇಕಡಾ 39 ರಷ್ಟು ದರ ಕಡಿತವನ್ನು ಸೂಚಿಸುತ್ತದೆ. ಜನರಿಗೆ ಸುಸ್ಥಿರ ಇಂಧನ ಪೂರೈಕೆಗೆ ಒತ್ತು ನೀಡಲಾಗಿದ್ದು, ದರ ಬದಲಾವಣೆ ಇಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending