ಬಹಿರಂಗ
ಡಾನಿಷ್ ಸಿದ್ದಿಖಿ- ಅಸಹಿಷ್ಣುತೆಗೆ ಮತ್ತೊಂದು ಬಲಿ
- ನಾ ದಿವಾಕರ
ಆಫ್ಘಾನಿಸ್ತಾನದ ಬಂಡುಕೋರರ ದಾಳಿಗೆ ಬಲಿಯಾದ ಭಾರತದ ಪತ್ರಿಕಾ ಛಾಯಾಗ್ರಾಹಕ ಡಾನಿಷ್ ಸಿದ್ದಿಖಿ ( 1983-2021 ) ಬಹುಶಃ ಜಗತ್ತಿನಾದ್ಯಂತ ಹೆಚ್ಚಾಗುತ್ತಿರುವ ಬಲಪಂಥೀಯ ಮತಾಂಧತೆ, ಅಸಹಿಷ್ಣುತೆ ಮತ್ತು ಉಲ್ಬಣಿಸುತ್ತಿರುವ ಹಿಂಸಾತ್ಮಕ ರಾಜಕಾರಣಕ್ಕೆ ಸಾಕ್ಷಿಯಾಗಿ, ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ.
ರಾಯ್ಟರ್ಸ್ ಸುದ್ದಿ ಸಂಸ್ಥೆಯ ಮುಖ್ಯ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ 38 ವರ್ಷದ ಡಾನಿಷ್ ಸಿದ್ದಿಖಿ ಆಫ್ಘಾನಿಸ್ತಾನದಲ್ಲಿ ನಡೆಯುತ್ತಿದ್ದ ಸೇನೆ ಮತ್ತು ತಾಲಿಬಾನ್ ಉಗ್ರರ ನಡುವಿನ ಕಾಳಗವನ್ನು ಸೆರೆಹಿಡಿಯುತ್ತಿದ್ದ ವೇಳೆ, ತಾಲಿಬಾನ್ ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಕಳೆದ ಹತ್ತು ವರ್ಷದಿಂದಲೂ ಈ ಸುದ್ದಿ ಸಂಸ್ಥೆಯೊಡನೆ ಕಾರ್ಯ ನಿರ್ವಹಿಸುತ್ತಿದ್ದ ಡಾನಿಷ್ 2018ರಲ್ಲಿ ಪುಲಿಟ್ಜರ್ ಪ್ರಶಸ್ತಿಗೆ ಭಾಜನರಾಗಿದ್ದರು.
ಇತ್ತೀಚೆಗೆ ಕೋವಿದ್ 2ನೆಯ ಅಲೆಯ ಸಂದರ್ಭದಲ್ಲಿ ಭಾರತದಲ್ಲಿ ಸಾವಿರಾರು ಅನಾಥ ಶವಗಳಿಗೆ ಸಾಮೂಹಿಕ ಶವಸಂಸ್ಕಾರ ಮಾಡಿದ ಚಿತ್ರಗಳನ್ನೂ ಸೆರೆಹಿಡಿದಿದ್ದ ಡಾನಿಷ್, ಕಳೆದ ವರ್ಷದ ದೆಹಲಿ ಗಲಭೆಗಳ ಸಂದರ್ಭದಲ್ಲೂ ತಮ್ಮ ಮನಮುಟ್ಟುವ ಛಾಯಾಚಿತ್ರಗಳ ಮೂಲಕ ವಾಸ್ತವಗಳನ್ನು ಜನರ ಮುಂದಿಟ್ಟಿದ್ದರು.
“ವಾಣಿಜ್ಯ, ವ್ಯಾಪಾರ ಮತ್ತು ರಾಜಕೀಯ ಚಟುವಟಿಕೆಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವುದಕ್ಕಿಂತಲೂ, ಸ್ಫೋಟಕ ಸುದ್ದಿಗಳ ಹಿಂದಿನ ಮಾನವೀಯ ಮುಖವನ್ನು ತಮ್ಮ ಕ್ಯಾಮರಾ ಕಣ್ಣಿನ ಮೂಲಕ ಸೆರೆಹಿಡಿದು ಜನರಿಗೆ ಮುಟ್ಟಿಸುವುದರಲ್ಲಿ ನನಗೆ ಹೆಚ್ಚಿನ ಖುಷಿ ಇದೆ ”ಏಂದು ಹೇಳುತ್ತಿದ್ದ ಡಾನಿಷ್ ಇಂತಹುದೇ ಚಿತ್ರೀಕರಣದ ಸಂದರ್ಭದಲ್ಲಿ ಅಮಾನುಷ ಶಕ್ತಿಗಳ ದಾಳಿಗೆ ಬಲಿಯಾಗಿರುವುದು ವಿಡಂಬನೆ ಎನಿಸುತ್ತದೆ.
ಜಗತ್ತಿನ ರಾಜಕಾರಣದಲ್ಲಿ ಸಾಮಾನ್ಯ ಜನರನ್ನು ಕಾಡುತ್ತಿರುವ ಹಿಂಸೆಗೆ ನಾನಾ ರೂಪಗಳು. ಪ್ರಭುತ್ವಗಳ ವಿರುದ್ಧ ಹೋರಾಡುವ ವಿಚ್ಚಿದ್ರಕಾರಿ ಶಕ್ತಿಗಳ ಹಿಂಸೆ ಒಂದೆಡೆಯಾದರೆ, ಪ್ರಜಾ ವಿಮೋಚನೆಯ ಹೆಸರಿನಲ್ಲಿ ದಂಗೆಯೆದ್ದು, ಪ್ರಭುತ್ವದ ಶಕ್ತಿಗೆ ಸರಿಸಮನಾಗಿ ಹೋರಾಡುತ್ತಾ ಸಮಾಜದಲ್ಲಿ ಹಿಂಸೆ, ಕ್ಷೋಭೆಯನ್ನು ಹರಡುವ ಉಗ್ರಗಾಮಿಗಳ ಹಿಂಸೆ ಮತ್ತೊಂದೆಡೆ.
ಸಾಮಾನ್ಯ ಜನರ ದೃಷ್ಟಿಯಿಂದ ನೋಡಿದಾಗ ಹಿಂಸೆ ಅಥವಾ ಹಿಂಸಾತ್ಮಕ ಕೃತ್ಯಗಳನ್ನು ನಿರ್ದಿಷ್ಟ ಚೌಕಟ್ಟಿನಲ್ಲಿ ಬಂಧಿಸಿಡಲು ಸಾಧ್ಯವೇ ಇಲ್ಲ. ತಾಲಿಬಾನ್ ಉಗ್ರರು ಆಫ್ಘಾನಿಸ್ತಾನದಲ್ಲಿ ನಡೆಸುತ್ತಿರುವ ಪೈಶಾಚಿಕ ಕೃತ್ಯಗಳು ಪಾಕಿಸ್ತಾನದ ಪೇಷಾವರದಲ್ಲೂ ಸಂಭವಿಸಿವೆ, ಭಾರತದ ಗುಜರಾತ್ನಲ್ಲೂ ಸಂಭವಿಸಿವೆ, ಮುಂಬಯಿಯಲ್ಲೂ ಘಟಿಸಿವೆ. 2020ರಲ್ಲಿ ಭಾರತದ ರಾಜಧಾನಿ ದೆಹಲಿಯಲ್ಲೂ ಸಂಭವಿಸಿದೆ.
ಈ ಹಿಂಸಾಕೃತ್ಯಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಉಗ್ರವಾದ, ಉಗ್ರಗಾಮಿ ಚಟುವಟಿಕೆ, ಭಯೋತ್ಪಾದನೆ, ಜಿಹಾದ್ ಎಂದು ವರ್ಗೀಕರಿಸುವ ಜಗತ್ತಿನ ಪ್ರಭುತ್ವಗಳು ಜನಸಾಮಾನ್ಯರ ಪ್ರತಿರೋಧದ ಧ್ವನಿಯನ್ನು ಅಡಗಿಸಲು ಇನ್ನೂ ಹೆಚ್ಚಿನ ಹಿಂಸಾತ್ಮಕ ಮಾರ್ಗಗಳನ್ನು ಅನುಸರಿಸುತ್ತಿವೆ. ನಾಗರಿಕ ಸಮಾಜ ಇದನ್ನು ಗಮನಿಸುತ್ತಲೂ ಇದೆ. ಹತ್ಯೆಯಲ್ಲಿ ಪರ್ಯಾವಸಾನಗೊಳ್ಳುವ ಹಿಂಸೆ ಪ್ರಧಾನವಾಗಿ ಕಾಣುತ್ತದೆ. ಆದರೆ ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಹೋರಾಡುವ ಸಾರ್ವಭೌಮ ಪ್ರಜೆಗಳನ್ನು ಚಿತ್ರಹಿಂಸೆಗೊಳಪಡಿಸುವ ಪ್ರಭುತ್ವದ ಹಿಂಸಾತ್ಮಕ ಮಾರ್ಗಗಳು ಸಾರ್ವಜನಿಕ ಮಾನ್ಯತೆ ಪಡೆದುಬಿಡುತ್ತವೆ.
ಆಫ್ಘಾನಿಸ್ತಾನದಲ್ಲಿ ಇದು ಇನ್ನೂ ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತದೆ. ಇಂದು ಡಾನಿಷ್ ಸಿದ್ದಿಖಿ ಸಾವಿಗೆ ಸಂತಾಪ ಸೂಚಿಸುವ ಅಮೆರಿಕದ ಅಧ್ಯಕ್ಷರಾಗಲೀ, ಇತರ ಸಾಮ್ರಾಜ್ಯಶಾಹಿ ರಾಷ್ಟ್ರಗಳ ನಾಯಕರಾಗಲೀ ತಮ್ಮ ಬೆನ್ನ ಹಿಂದಿನ ಚರಿತ್ರೆ ಮತ್ತು ಸಮಕಾಲೀನ ಘಟನೆಗಳತ್ತ ಒಮ್ಮೆ ನೋಡಿದರೆ, ಈ ಸಮರವೀರರ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಗೆ ಬಲಿಯಾದ ಸಾವಿರಾರು, ಲಕ್ಷಾಂತರ ಜನರ ಶವಗಳ ಮೆರವಣಿಗೆಯೇ ಕಾಣುತ್ತದೆ.
ಇಂದು ಡಾನಿಷ್ ಕೊಲೆಗೆ ಕಾರಣರಾದ ತಾಲಿಬಾನ್ ಪಡೆಯೇ ಸಾಮ್ರಾಜ್ಯಶಾಹಿಯ , ಒಂದು ಕಾಲದ ಮುದ್ದಿನ, ಕೂಸು ಎನ್ನುವುದು ಚಾರಿತ್ರಿಕ ಸತ್ಯ. ಈ ತಾಲಿಬಾನ್ ಉಗ್ರರು ಇಸ್ಲಾಂ ಹೆಸರಿನಲ್ಲಿ ನಡೆಸುವ ನರಮೇಧಗಳಿಗೆ ಬಳಸಲಾಗುವ ಶಸ್ತ್ರಾಸ್ತ್ರಗಳ ಮೂಲವೇ ಅಮೆರಿಕದ ಪೆಂಟಗನ್. ಸಿರಿಯಾ, ಲೆಬನಾನ್, ಇರಾಕ್, ಯಮನ್ ಮತ್ತಿತರ ರಾಷ್ಟ್ರಗಳಲ್ಲಿ ಸಾಮ್ರಾಜ್ಯಗಳ ಡ್ರೋನ್ ದಾಳಿಗಳಿಗೆ ಬಲಿಯಾದ ಲಕ್ಷಾಂತರ ಅಮಾಯಕರ ಸಾಲಿಗೆ ತಾಲಿಬಾನ್ ತನ್ನದೂ ಒಂದಿಷ್ಟಿರಲಿ ಎಂದು ಶವಗಳನ್ನು ಸೇರಿಸುತ್ತಲೇ ಇರುತ್ತದೆ. ಡಾನಿಷ್ ಈ ಸಾವಿನ ಸರದಾರರ ಹರಕೆಯ ಕುರಿಯಂತೆ ಕಾಣುತ್ತಾರೆ.
ವಿಶ್ವದ ಎಲ್ಲ ಪ್ರಮುಖ ನಾಯಕರೂ ಡಾನಿಷ್ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಕೊನೆಗೆ ತಾಲಿಬಾನ್ ಮುಖ್ಯಸ್ತರೂ ಸಹ ಸಂತಾಪ ವ್ಯಕ್ತಪಡಿಸುವ ಮೂಲಕ ಪಾಪಪ್ರಜ್ಞೆಯನ್ನು ತೊಳೆದುಕೊಂಡಿದ್ದಾಗಿದೆ. ಆದರೆ ಭಾರತದ ಪ್ರಜೆಯೊಬ್ಬ, ವಿದೇಶಿ ನೆಲದಲ್ಲಿ ತನ್ನ ವೃತ್ತಿಯಲ್ಲಿ ತೊಡಗಿರುವಾಗ ಉಗ್ರವಾದಿಗಳ ಧಾಳಿಗೆ ಬಲಿಯಾಗಿದ್ದರೂ ಭಾರತದ ಪ್ರಧಾನಿ, ವಿದೇಶಾಂಗ ಮಂತ್ರಿ ಅಥವಾ ಆಡಳಿತಾರೂಢ ಪಕ್ಷದ ನಾಯಕರು ವಿಷಾದವನ್ನೂ ವ್ಯಕ್ತಪಡಿಸದೆ ಇರುವುದನ್ನು ನೋಡಿದರೆ, ಡಾನಿಷ್ ಸಿದ್ದಿಖಿ #ಆತ್ಮನಿರ್ಭರ ಭಾರತದ ದೃಷ್ಟಿಯಲ್ಲಿ ಸಾವಿಗೆ/ಹತ್ಯೆಗೆ ಅರ್ಹನಾಗಿದ್ದ ವ್ಯಕ್ತಿ ಎನಿಸುತ್ತದೆ.
ಫಾದರ್ ಸ್ಟ್ಯಾನ್ ಸ್ವಾಮಿ ಅವರಂತೆ ಡಾನಿಷ್ ಸಿದ್ದಿಖಿಯೂ ಸಹ ಸಾವಿನ ಕದ ತಟ್ಟುತ್ತಿದ್ದ ಒಬ್ಬ ಸಂವೇದನಾಶೀಲ ಪ್ರಜೆ ಆಗಿದ್ದಿರಬಹುದು. ಹತ್ಯೆಯ ಹಿಂದಿನ ಹಿಂಸೆಗಿಂತಲೂ, ಹತ್ಯೆಯನ್ನು ಸಂಭ್ರಮಿಸುವ ಮನಸ್ಥಿತಿ ಮತ್ತು ಹತ್ಯೆಯ ಬಗ್ಗೆ ಮೌನ ವಹಿಸುವ ಮನಸ್ಥಿತಿ ಇನ್ನೂ ಹಿಂಸಾತ್ಮಕ ಅಲ್ಲವೇ ?
ಭಾರತಕ್ಕೆ ಇದೇನೂ ಹೊಸತಲ್ಲ. ಸಾವಿರಾರು ಸಿದ್ದಿಖಿಗಳು, ಸ್ವಾಮಿಗಳು, ನಿಯೋಗಿಗಳು, ಸಫ್ದಾರ್ ಹಷ್ಮಿಗಳು ಈ ದೇಶದ ಮಣ್ಣಲ್ಲಿ ಅನಾಥರಂತೆ ಮಣ್ಣಾಗಿ ಹೋಗಿದ್ದಾರೆ. ಕಳೆದ ವರ್ಷದ ಲಾಕ್ಡೌನ್ ವೇಳೆಯಲ್ಲಿ ಸಾವು ಬದುಕಿನೊಡನೆ ಸೆಣಸಾಡಿದ ವಲಸೆ ಕಾರ್ಮಿಕರು, ತಮ್ಮ ಮೂಲ ನೆಲೆಯಿಂದಲೇ ಉಚ್ಚಾಟಿಸಲ್ಪಟ್ಟು ನಿರಾಶ್ರಿತರಾದ ರೋಹಿಂಗ್ಯಾಗಳು, ವಾರಸುದಾರರಿಲ್ಲದೆ ಸಾಮೂಹಿಕವಾಗಿ ದಹಿಸಲ್ಪಟ್ಟ ಅಸಂಖ್ಯಾತ ಕೋವಿದ್ ಪೀಡಿತ ಶವಗಳು, ಗಂಗೆಯಲ್ಲಿ ತೇಲಿಬಂದ ಶವಗಳು, ಇವೆಲ್ಲವನ್ನೂ ತಮ್ಮ ಮಸೂರದಲ್ಲಿ ಬಂಧಿಸಿ ಸಾರ್ವಜನಿಕರ ಮುಂದಿಟ್ಟಿದ್ದ ಡಾನಿಷ್, ದೆಹಲಿ ಗಲಭೆಯ ಸಂದರ್ಭದಲ್ಲಿ ಸಾರ್ವಜನಿಕವಾಗಿ, ಕೈಕಟ್ಟಿ ನಿಂತಿದ್ದ ಪೊಲೀಸರ ಎದುರೇ ಪ್ರತಿಭಟನಕಾರರಿಗೆ ಪಿಸ್ತೂಲು ತೋರಿಸಿ ಹೆದರಿಸಿದ್ದ ಬಿಜೆಪಿ ನಾಯಕನ ಚಿತ್ರವನ್ನೂ ಸೆರೆಹಿಡಿದಿದ್ದರು. ಬಹುಶಃ ಸಾಯುವ ಅರ್ಹತೆ ಪಡೆಯಲು ಇಷ್ಟು ಸಾಕಾಗಿತ್ತು ಎನಿಸುತ್ತದೆ. ಡಾನಿಷ್ ಸಹ ಮತ್ತೊಂದು ಅನಾಥ ಶವವಾಗಿ ಅಂತ್ಯ ಕಂಡಿದ್ದಾರೆ.
ಹಥ್ರಾಸ್ನಲ್ಲಿ ನಡುರಾತ್ರಿಯಲ್ಲಿ ದಹಿಸಲ್ಪಟ್ಟ ಅತ್ಯಾಚಾರಕ್ಕೀಡಾದ ಯುವತಿಗೂ, ಜಾಮೀನು ದೊರೆಯದೆ ಸೆರೆವಾಸದಲ್ಲೇ ಅಂತ್ಯ ಕಂಡ ರೋಗಪೀಡಿತ ಸ್ಟ್ಯಾನ್ ಸ್ವಾಮಿಗೂ, ದನದ ಮಾಂಸದ ತುಂಡನ್ನು ಮನೆಯಲ್ಲಿಟ್ಟ ತಪ್ಪಿಗಾಗಿ ಹತ್ಯೆಗೀಡಾದ ಅಖ್ಲಾಕ್ಗೂ, ತಾಲಿಬಾನ್ ಉಗ್ರರ ಧಾಳಿಗೆ ಬಲಿಯಾದ ಡಾನಿಷ್ಗೂ ವ್ಯತ್ಯಾಸವೇನಿದೆ ? ಸಾವನ್ನು ಸಾಪೇಕ್ಷಗೊಳಿಸುವ ವಿಕೃತ ಪರಂಪರೆಯೊಂದನ್ನು ನಾವು, ಭಾರತೀಯರು ಪೋಷಿಸಿಕೊಂಡೇ ಬಂದಿದ್ದೇವೆ.
ಹಾಗೆಯೇ ನಮಗೆ ಚಾಮರಾಜನಗರದಲ್ಲಿ ಆಮ್ಲಜನಕ ಇಲ್ಲದೆ ಸತ್ತ 24 ಅಮಾಯಕರೂ ನಗಣ್ಯ ಎನಿಸಿಬಿಡುತ್ತಾರೆ. ಹಸಿವಿನಿಂದ ಕಂಗೆಟ್ಟು ನಡುಬೀದಿಯಲ್ಲೇ ಸತ್ತ ವಲಸೆ ಕಾರ್ಮಿಕರೂ ನಿಕೃಷ್ಟರಾಗಿಬಿಡುತ್ತಾರೆ. ಆತ್ಮಹತ್ಯೆಗೆ ಶರಣಾಗುವ ಲಕ್ಷಾಂತರ ರೈತರೂ ನಿರ್ಲಕ್ಷಿತರಾಗಿಬಿಡುತ್ತಾರೆ.
ನವ ಉದಾರವಾದ, ಬಲಪಂಥೀಯ ರಾಜಕಾರಣ, ಜಾತಿ ದ್ವೇಷ, ಮತಾಂಧತೆ, ದ್ವೇಷ ರಾಜಕಾರಣ ಮತ್ತು ಇವೆಲ್ಲವನ್ನೂ ಕಾಪಾಡಲು ಅಗತ್ಯವಾದ ಹಿಂಸಾತ್ಮಕ ಮನಸ್ಥಿತಿ ಇಂದು ವಿಭಿನ್ನ ಧಾರೆಗಳಲ್ಲಿ ನಮ್ಮ ನಡುವೆ ಪ್ರವಹಿಸುತ್ತಿದೆ. ದೇಶಾದ್ಯಂತ ಕೋವಿದ್ ಮೊದಲನೆ ಅಲೆಯ ಸಂದರ್ಭದಲ್ಲಿ ನೂರಾರು ವಲಸೆ ಕಾರ್ಮಿಕರು ಕೂಳಿಲ್ಲದೆ ಅನಾಥರಂತೆ ಸಾವನ್ನಪ್ಪಿದ್ದರು, ಎರಡನೆ ಅಲೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ, ಆಮ್ಲಜನಕದ ಕೊರತೆಯಿಂದ ಸಾವಿರಾರು ಜನರು ಸಾವನ್ನಪ್ಪಿದ್ದಾರೆ.
ಆದರೆ ಈ ಸಾವುಗಳ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಸಂಸತ್ತಿನಲ್ಲಿ ಹೇಳುವ ಮೂಲಕ ಕೇಂದ್ರ ಸರ್ಕಾರ ಕೈತೊಳೆದುಕೊಳ್ಳುತ್ತದೆ. ತಾಲಿಬಾನ್ ಕ್ರೌರ್ಯಕ್ಕೂ ಈ ಬೌದ್ಧಿಕ ಕ್ರೌರ್ಯಕ್ಕೂ ವ್ಯತ್ಯಾಸವೇನಾದರೂ ಕಾಣಲು ಸಾಧ್ಯವೇ ? ಒಟ್ಟಿನಲ್ಲಿ ಸಾಮಾನ್ಯ ಜನರ ಸಾವು ಸ್ವೀಕೃತವಾದ ಒಂದು ವಿದ್ಯಮಾನ, ಕೆಲವೊಮ್ಮೆ ಸ್ವೀಕಾರಾರ್ಹ, ಕೆಲವೊಮ್ಮೆ ಅಪೇಕ್ಷಿತ, ಕೆಲವೊಮ್ಮೆ ನಿರೀಕ್ಷಿತ ಇನ್ನು ಕೆಲವೊಮ್ಮೆ ನಿಗದಿತ. ಹೌದಲ್ಲವೇ ?
ಹಾಗಾಗಿಯೇ ಡಾನಿಷ್ ಸಿದ್ದಿಖಿ ಒಬ್ಬ ಹುತಾತ್ಮನಾಗಲಿಲ್ಲ. ವಿದೇಶಿ ಉಗ್ರವಾದಿಗಳ ಗುಂಡೇಟಿಗೆ, ವಿದೇಶಿ ನೆಲದಲ್ಲೇ ಬಲಿಯಾದ ಭಾರತದ ಪತ್ರಿಕಾ ಛಾಯಾಗ್ರಾಹಕನೊಬ್ಬನಿಗೆ ರಾಷ್ಟ್ರೀಯ ಸಮ್ಮಾನ ದೊರೆಯಲಿಲ್ಲ. ರಾಷ್ಟ್ರೀಯ ಸಂತಾಪವೂ ದೊರೆಯಲಿಲ್ಲ. ದ್ವೇಷ ರಾಜಕಾರಣದ ಮುದ್ದು ಕೂಸುಗಳು ಸಾಮಾಜಿಕ ತಾಣಗಳಲ್ಲಿ ಸಂಭ್ರಮಿಸಿ, ಕೇಕೆ ಹಾಕಿದ್ದವು. ಆಫ್ಘಾನಿಸ್ತಾನದ ಬಲಿಪೀಠದಲ್ಲಿ, ತಾಲಿಬಾನ್ ಅರಣ್ಯ ನ್ಯಾಯಕ್ಕೆ ಬಲಿಯಾದ ಡಾನಿಷ್ ಸಿದ್ದಿಖಿ , #ಆತ್ಮನಿರ್ಭರ ಭಾರತದ ದೃಷ್ಟಿಯಲ್ಲಿ ಓರ್ವ ಮುಸ್ಲಿಂ ಆಗಿಬಿಟ್ಟ, ಪ್ರತಿರೋಧದ ದನಿಯಾಗಿಬಿಟ್ಟ, ನಮ್ಮ ಸ್ವಘೋಷಿತ ದೇಶಪ್ರೇಮದ ವ್ಯಾಪ್ತಿಯಿಂದ ಹೊರತಾಗಿಬಿಟ್ಟ.
ಹಾಗಾಗಿ ಕ್ಯಾಮರಾ ಹಿಡಿದ ಈ ಸೇನಾನಿ ಶಸ್ತ್ರ ಹಿಡಿದ ಸೇನಾನಿಗಿಂತಲೂ ಭಿನ್ನವಾಗಿ ಕಂಡುಬಿಟ್ಟ. ತ್ರಿವರ್ಣ ಧ್ಜಜದ ಹೊದಿಕೆಗಾಗಲೀ, ಭಾವೈಕ್ಯತೆಯ ಸಂಕೇತವಾಗಿ ಸಮ್ಮಾನಕ್ಕಾಗಲೀ ಹಕ್ಕುದಾರನಾಗಲಿಲ್ಲ. ಕೊನೆಯ ಪಕ್ಷ ಆಳುವ ವರ್ಗಗಳ ಸಂತಾಪದ ಮಾತುಗಳಿಗೂ ಅರ್ಹನಾಗಲಿಲ್ಲ.
ಇದೇನೂ ಅತಿಶಯ ಎನಿಸುವುದಿಲ್ಲ. ಏಕೆಂದರೆ ಈ ಪವಿತ್ರ ಭೂಮಿಯಲ್ಲೇ ಕಳೆದ ಐದಾರು ವರ್ಷಗಳಲ್ಲಿ ಪತ್ರಕರ್ತರ ಮೇಲೆ 200ಕ್ಕೂ ಹೆಚ್ಚು ಧಾಳಿಗಳು ನಡೆದಿವೆ. 2014-19ರ ಅವಧಿಯಲ್ಲಿ 40 ಪತ್ರಕರ್ತರು ಹತ್ಯೆಗೀಡಾಗಿದ್ದಾರೆ. ಇವರ ಪೈಕಿ 21 ಮೃತರು ನೇರ ಪತ್ರಿಕಾ ಧರ್ಮವನ್ನೇ ಪಾಲಿಸುತ್ತಿದ್ದವರಾಗಿದ್ದಾರೆ.
2010ರ ನಂತರ ದಾಖಲಾಗಿರುವ ಪತ್ರಕರ್ತರ ಹತ್ಯೆಯ 30 ಪ್ರಕರಣಗಳಲ್ಲಿ ಮೂರರಲ್ಲಿ ಮಾತ್ರವೇ ಶಿಕ್ಷೆಯಾಗಿದೆ. 2014ರ ನಂತರ ಯಾವುದೇ ಶಿಕ್ಷೆಯಾಗಿಲ್ಲ. ಒಂದು ಅಧ್ಯಯನದ ಪ್ರಕಾರ 2014ರ ನಂತರ 19 ಮಹಿಳಾ ಪತ್ರಕರ್ತರು ಹಲ್ಲೆಗೊಳಗಾಗಿದ್ದಾರೆ. ಮಹಿಳಾ ಆಯೋಗಕ್ಕಾಗಲೀ, ಸಚಿವಾಲಯಕ್ಕಾಗಲೀ ಇದು ಗಂಭೀರ ವಿಚಾರ ಎನಿಸಿಯೇ ಇಲ್ಲ.
ಕಳೆದ ಏಳು ವರ್ಷಗಳಲ್ಲಿ ಮಾಧ್ಯಮ ವಲಯದಲ್ಲಿ ಸೃಷ್ಟಿಯಾಗಿರುವ ಧೃವೀಕರಣವೂ ಈ ನಿಷ್ಕ್ರಿಯತೆಗೆ ಕಾರಣವಾಗಿದೆ. ರಾಜಕೀಯ ಪಕ್ಷಗಳ, ನಾಯಕರ ಮತ್ತು ಅಧಿಕಾರ ಕೇಂದ್ರಕ್ಕೆ ನಿಕಟ ಸಂಪರ್ಕ ಹೊಂದಿರುವವರ ಮಾಲಿಕತ್ವದಲ್ಲಿರುವ ಸುದ್ದಿ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ಪತ್ರಕರ್ತರ ಮೇಲಿನ ಧಾಳಿಗಳು ರಾಜಕೀಯ ಲೆಕ್ಕಾಚಾರಗಳಾಗಿ ಮಾತ್ರವೇ ಕಾಣುತ್ತದೆ.
“ ಸುದ್ದಿಯ ಸಂಸ್ಕರಣ ಮತ್ತು ಅಭಿಪ್ರಾಯ ಉತ್ಪಾದನೆ ”ಯ ಕಾರ್ಖಾನೆಗಳಂತೆ ಕಾರ್ಯ ನಿರ್ವಹಿಸುತ್ತಿರುವ ಬಹುಪಾಲು ಸುದ್ದಿಮನೆಗಳು ಮತ್ತು ಪತ್ರಿಕೆಗಳು ತಮ್ಮ ಪತ್ರಿಕೋದ್ಯಮದ ಸಂಹಿತೆಗಳಿಗಿಂತಲೂ, ತಾವು ಆಶ್ರಯಿಸುವ ರಾಜಕೀಯ ಅಧಿಕಾರ ಕೇಂದ್ರಗಳ ಸಂಹಿತೆಗಳನ್ನು ಹೆಚ್ಚು ನಿಷ್ಠೆಯಿಂದ ಪಾಲಿಸುತ್ತಿರುವುದನ್ನೂ ಈ ಸಂದರ್ಭದಲ್ಲಿ ಗಮನಿಸಬೇಕಿದೆ. ಕರ್ನಾಟಕದ ಗೌರಿ ಲಂಕೇಶ್, ಶ್ರೀನಗರದ ಶೂಜತ್ ಬುಖಾರಿ, ದೂರದರ್ಶನದ ಛಾಯಾಗ್ರಾಹಕ ಅಚ್ಯುತಾನಂದಸಾಹು (ಮಾವೋವಾದಿಗಳ ಗುಂಡೇಟಿಗೆ ಬಲಿಯಾದ್ದರು), ಈ ಮೂರು ಪ್ರಕರಣಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಪ್ರಸಂಗಗಳಲ್ಲಿ ಸಾಮಾನ್ಯವಾಗಿ ರಾಜಕೀಯ ಅಕ್ರಮಗಳ ವಿರುದ್ಧ ಮತ್ತು ಭೂಮಾಫಿಯಾ, ಜಲ ಮಾಫಿಯಾ, ಹೆಂಡದ ದೊರೆಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಪತ್ರಕರ್ತರೇ ಧಾಳಿಗೊಳಗಾಗಿದ್ದಾರೆ. ಈ ವಿಚಾರದಲ್ಲಿ ಮಾತ್ರ ನಮ್ಮ ದೇಶ ಅಪ್ಪಟ ಜಾತ್ಯತೀತ.
2020ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆದ ಗಲಭೆಗಳ ಹಿನ್ನೆಲೆಯಲ್ಲಿ 14 ಪತ್ರಕರ್ತರ ವಿರುದ್ಧ ದೆಹಲಿ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ. ಎಲ್ಲರೂ ಮುಸ್ಲಿಂ ಸಮುದಾಯಕ್ಕೆ ಸೇರಿರುವುದು ಕಾಕತಾಳೀಯವೇನಲ್ಲ. ಇದೇ ಸಂದರ್ಭದಲ್ಲಿ ಸಾರ್ವಜನಿಕವಾಗಿಯೇ ಪಿಸ್ತೂಲು ತೋರಿಸಿದ ವ್ಯಕ್ತಿ ಸರ್ವ ಸ್ವತಂತ್ರನಾಗಿದ್ದರೆ, “ ಗೋಲಿ ಮಾರೋ ಸಾಲೋಂಕೋ ” ಎಂದು ಮುಕ್ತವಾಗಿ ಕರೆ ನೀಡಿದ ವ್ಯಕ್ತಿ ಸಾಂವಿಧಾನಿಕ ರಕ್ಷಣೆ ಪಡೆದಿದ್ದಾರೆ. ಇಷ್ಟರ ನಡುವೆ ಕಳೆದ ಏಳು ವರ್ಷಗಳಲ್ಲಿ ದೇಶಾದ್ಯಂತ 200 ಮಾಹಿತಿ ಹಕ್ಕು ಕಾರ್ಯಕರ್ತರು ಹತ್ಯೆಗೀಡಾಗಿದ್ದಾರೆ. ಈ ಕಾರ್ಯಕರ್ತರು ಯಾವುದೇ ಮಾಧ್ಯಮ ಸಮೂಹಕ್ಕೆ ಸೇರದೆ, ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದರಿಂದ ಬಹುಶಃ ಗಣನೆಗೇ ಬರುವುದಿಲ್ಲ ಎನಿಸುತ್ತದೆ.
ಮಾಧ್ಯಮ ವಲಯದ ಈ ಬಂಧುಗಳ ಹತ್ಯೆಗಳಿಗೆ ಮತ್ತು ಅವರ ಮೇಲೆ ನಿರಂತರವಾಗಿ ನಡೆಯುತ್ತಿರುವ ಧಾಳಿಗಳ ಬಗ್ಗೆ ಮಾಧ್ಯಮ ಸಮೂಹವೇ ಮೌನವಾಗಿರುವುದನ್ನು ಗಮನಿಸಿದರೆ, ಈ ದೇಶದ ಅಧಿಕಾರ ರಾಜಕಾರಣ ಮತ್ತು ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಗಳು ಮಾಧ್ಯಮ ವಲಯದ ಮೇಲೆ ಹೇಗೆ ನಿಯಂತ್ರಣ ಸಾಧಿಸಿವೆ ಎನ್ನುವುದು ಸ್ಪಷ್ಟವಾಗುತ್ತದೆ.
ಕೋವಿದ್ ಸಾವುಗಳ ಬಗ್ಗೆ ಮತ್ತು ಸರ್ಕಾರ ಕೋವಿದ್ ಸಾವುಗಳನ್ನು ಬಚ್ಚಿಡುತ್ತಿರುವುದನ್ನು ಸವಿಸ್ತಾರವಾಗಿ ವರದಿ ಮಾಡಿದ ದೈನಿಕ್ ಭಾಸ್ಕರ್ ಪತ್ರಿಕಾ ಸಮೂಹ ಈಗ ಆದಾಯ ತೆರಿಗೆ ಧಾಳಿಗೆ ಒಳಗಾಗಿದೆ. 2014ರಲ್ಲಿ ನರೇಂದ್ರ ಮೋದಿಯವರನ್ನು ವೈಭವೀಕರಿಸಿದಾಗ ಪ್ರಾಮಾಣಿಕವಾಗಿ ಕಂಡುಬಂದಿದ್ದ ಈ ಪತ್ರಿಕೆ ಈಗ ಪ್ರತಿರೋಧದ ಧ್ವನಿಯಾಗಿ ಶಿಕ್ಷೆಗೊಳಗಾಗುತ್ತಿದೆ. ಕರ್ನಾಟಕದಲ್ಲಿ ಪವರ್ ಟಿವಿ ವಾಹಿನಿಯ ಪ್ರಕರಣವನ್ನೂ ಇಲ್ಲಿ ಸ್ಮರಿಸಬಹುದು.
ಸ್ವತಂತ್ರ ಮಾಧ್ಯಮದ ಪರಿಕಲ್ಪನೆಯನ್ನೇ ಬದಿಗೊತ್ತಿ ಈ ರೀತಿಯ ರಾಜಕೀಯ ಧೃವೀಕರಣಕ್ಕೊಳಗಾಗಿರುವುದರಿಂದಲೇ ಮಾಧ್ಯಮ ವಲಯ ಇಂದು ಅತಿ ಹೆಚ್ಚು ಆಕ್ರಮಣಗಳನ್ನು ಎದುರಿಸುತ್ತಿದೆ. ಇದರ ಹೊರೆಯನ್ನು ಪತ್ರಕರ್ತರು ಹೊರುತ್ತಿದ್ದಾರೆ. ಆಳುವ ವರ್ಗಗಳ ಪರ, ಕಾರ್ಪೋರೇಟ್ ಪರ , ಭೂಮಾಫಿಯಾ ಮತ್ತಿತರ ಅಕ್ರಮ ಸಂತಾನಗಳ ಪರ ಇರುವ ಶಕ್ತಿಗಳು ಪ್ರಾಮಾಣಿಕ ವರದಿಗಾರರನ್ನು, ಮಾಹಿತಿ ಹಕ್ಕು ಕಾರ್ಯಕರ್ತರನ್ನು, ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸಿ ತಮ್ಮ ಅಕ್ರಮ ಸಾಮ್ರಾಜ್ಯವನ್ನು ವಿಸ್ತರಿಸುತ್ತಿವೆ. #ಆತ್ಮನಿರ್ಭರ ಭಾರತದಲ್ಲಿ ಇಂತಹ ಶಕ್ತಿಗಳಿಗೆ ಹೆಚ್ಚು ನಿರ್ಭರವಾಗುತ್ತಿವೆ. ಪ್ರಾಮಾಣಿಕತೆ ದುರ್ಭರವಾಗುತ್ತಿವೆ. ಮತಾಂಧತೆ, ಜಾತಿ ದ್ವೇಷ ಮತ್ತು ಕೋಮುವಾದದ ಛಾಯೆ ಸಮಾಜದ ಮೇಲೆ ದಟ್ಟವಾಗಿ ಆವರಿಸುತ್ತಿರುವಂತೆಯೇ, ಈ ಅನ್ಯಾಯಗಳನ್ನು ಪ್ರಶ್ನಿಸುವ ವ್ಯವಧಾನವನ್ನೂ ನಮ್ಮ ಸುತ್ತಲಿನ ಸಮಾಜ ಕಳೆದುಕೊಳ್ಳುತ್ತಿದೆ.
ಈ ಕಗ್ಗೊಲೆಗಳ ವಿರುದ್ಧ, ರಾಜಕೀಯ ಪ್ರೇರಿತ, ದ್ವೇಷಪೂರಿತ, ಜಾತಿ ಪ್ರೇರಿತ ಹತ್ಯೆಗಳ ವಿರುದ್ಧ ನಾವು ಧ್ವನಿ ಎತ್ತಿ ಪ್ರತಿರೋಧ ವ್ಯಕ್ತಪಡಿಸಿದ್ದಲ್ಲಿ ಇಂದು ಡಾನಿಷ್ ಸಿದ್ದಿಖಿ ಅನಾಥ ಶವ ಆಗುತ್ತಿರಲಿಲ್ಲ. ಸುಶಿಕ್ಷಿತ ಎಂದು ಬೆನ್ನುತಟ್ಟಿಕೊಳ್ಳುವ ದೇಶದ ಬೃಹತ್ ಬೌದ್ಧಿಕ ವಲಯ ಇಂದು ಈ ನಿಷ್ಕ್ರಿಯತೆಯಿಂದ ಬಳಲುತ್ತಿದೆ. ಇದು ವಿಚ್ಚಿದ್ರಕಾರಿ ಶಕ್ತಿಗಳ ಪ್ರಾಬಲ್ಯವನ್ನು ಹೆಚ್ಚಿಸುತ್ತಿದೆ. ದುರಂತ ಎಂದರೆ ಪತ್ರಿಕಾ ಧರ್ಮ ಅಥವಾ ಮಾಧ್ಯಮ ಸಂಹಿತೆಯನ್ನು ಪಾಲಿಸಬೇಕಾದ ನಮ್ಮ ಸುದ್ದಿಮನೆಗಳೂ ತಮ್ಮ ನೈತಿಕ ಹೊಣೆಗಾರಿಕೆಯಿಂದ ವಿಮುಖವಾಗಿವೆ. ಡಾನಿಷ್ ಹತ್ಯೆಯನ್ನು ರಂಜನೀಯವಾಗಿ ಬಿತ್ತರಿಸುವ ಸುದ್ದಿಮನೆಗಳ ನಿರೂಪಕರಿಗೆ ನಮ್ಮ ನೆಲದಲ್ಲೇ ಅನಾಥರಾಗಿ ಮಡಿದ 200 ಪತ್ರಕರ್ತರ ಸಾವು ಗಣನೆಗೇ ಬರುವುದಿಲ್ಲ. ಮಾಧ್ಯಮ ಲೋಕದ ಈ ನಿರ್ದಯಿ ನಿಷ್ಕ್ರಿಯತೆ ಮತ್ತು ವಂದಿಮಾಗಧ ಧೋರಣೆಯೇ ಡಾನಿಷ್ ಸಿದ್ದಿಖಿ ಅಂತಹ ಅದ್ಭುತ ಪ್ರತಿಭೆಗಳಿಗೆ ಮಾರಕವಾಗುತ್ತದೆ.
ಜಾತೀಯತೆ, ಮತಾಂಧತೆ ಮತ್ತು ಹುಸಿ ದೇಶಪ್ರೇಮದ ಗುಂಗಿನಲ್ಲಿ ಬಹುಪಾಲು ಸುದ್ದಿಮನೆಗಳು, ಮಾಧ್ಯಮಗಳು ತಮ್ಮ ಸ್ವ ಪ್ರಜ್ಞೆಯನ್ನು ಮಾರಿಕೊಂಡಿವೆ, ಬಹಳಷ್ಟು ಮಾಧ್ಯಮ ಬಂಧುಗಳು ತಮ್ಮ ವಿವೇಕವನ್ನು ಒತ್ತೆ ಇಟ್ಟಿದ್ದಾರೆ, ತಮ್ಮ ವಿವೇಚನೆಯನ್ನು ಕಳೆದುಕೊಂಡಿದ್ದಾರೆ, ಸ್ವಾಮಿನಿಷ್ಠೆಗೆ ಬದ್ಧರಾಗಿ ವೃತ್ತಿನಿಷ್ಠೆಯನ್ನು ಕಳೆದುಕೊಂಡಿದ್ದಾರೆ. ಹಾಗಾಗಿಯೇ ಅಸಹಿಷ್ಣುತೆಯನ್ನೂ ಸಹ ಸಹನೀಯವಾಗಿಸುತ್ತಿದ್ದಾರೆ. ಆದರೆ ಈ ಪಾಪಪ್ರಜ್ಞೆ ಸಾರ್ವಜನಿಕರನ್ನಾದರೂ ಕಾಡುವಂತಾದರೆ, ಆಫ್ಘಾನ್ ನೆಲದಲ್ಲಿ ಉಗ್ರಗಾಮಿಗಳ ಧಾಳಿಗೆ ಬಲಿಯಾದ ಡಾನಿಷ್ ಸಿದ್ದಿಖಿಗೆ ಶ್ರದ್ಧಾಂಜಲಿ ಅರ್ಪಿಸುವ ಅರ್ಹತೆಯನ್ನಾದರೂ ಪಡೆಯಬಹುದೇನೋ !!!
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಭಾರತದ ಜನಸಂಖ್ಯೆ ವರವೋ..? ಶಾಪವೋ..?
- ಅಂಬಿಕಾ. ಕೆ
ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಬೆಂಗಳೂರು ವಿಶ್ವವಿದ್ಯಾಲಯ
ವಿಶ್ವ ಸಂಸ್ಥೆಯು ಪಾಪುಲೇಷನ್ ಫಂಡ್ ಮಾಡಿರುವ ಅಂದಾಜಿನ ಪ್ರಕಾರ ಭಾರತವು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎನಿಸಿಕೊಂಡಿದೆ.
ದೇಶದ ಒಟ್ಟು ಜನಸಂಖ್ಯೆಯು 142.86 ಕೋಟಿಗೆ ಏರಿಕೆಯಾಗಿದ್ದು, ಚೀನಾ ಎರಡನೇ ಸ್ಥಾನಕ್ಕೆ ಇಳಿದಿದೆ, ಇಂತಹದೊಂದು ಹಿರಿಮೆಗೆ ಭಾರತವು ಪಾತ್ರವಾಗಲಿದೆ ಎಂಬುದರ ಅರಿವು ಹಿಂದೆಯೇ ಇತ್ತು. ಹೊಸ ಭಾರತದ ಜನಸಂಖ್ಯೆಯ ಸ್ವರೂಪವೇನು ಮತ್ತು ಯಾವ ವಯೋ ಮಾನದವರು ಎಷ್ಟಿದ್ದಾರೆ. ಆದಾಯ ಮಟ್ಟ ಹೇಗಿದೆ, ಆದಾಯ ಹಂಚಿಕೆ ಹೇಗಿದೆ ಎಂಬುದರ ಕುರಿತು ಕೂಡ ಚರ್ಚೆಗಳು ನಡೆಯುತ್ತಿವೆ. ಒಟ್ಟು ಜನಸಂಖ್ಯೆಯ ಜತೆಗೆ ಈ ಎಲ್ಲಾ ಅಂಶಗಳು ಕೂಡ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮ ರೂಪಿಸುವಿಕೆ ಮೇಲೆ ಪ್ರಭಾವ ಬೀರುತ್ತವೆ. ರಾಜಕೀಯ ಪಕ್ಷಗಳು ಮತ್ತು ಗುಂಪುಗಳು ರಾಜಕೀಯ ಹಾಗೂ ಸಾಮಾಜಿಕ ಸ್ಥಾನಗಳನ್ನು ನಿರ್ಧರಿಸುವಲ್ಲಿಯೂ ಈ ಅಂಶಗಳು ಪಾತ್ರವಹಿಸುತ್ತವೆ ಭಾರತದಲ್ಲಿ ಗರಿಷ್ಠ ಸಂಖ್ಯೆಯು ಯುವ ಜನರಿದ್ದಾರೆ.
ಹಾಗೆಯೇ ಮುಂದುವರೆಯಲಿದೆ 15 ರಿಂದ 24 ವರ್ಷದೊಳಗಿನವರ ಸಂಖ್ಯೆಯು 25.4 ಕೋಟಿ ಎಂದು ಅಂದಾಜಿಸಲಾಗಿದೆ ಇನ್ನು ದೀರ್ಘಕಾಲ ಭಾರತವು ಈ ಸ್ಥಿತಿ ಕಾಯ್ದುಕೊಳ್ಳಲಿದೆ ಎಂಬುದರಲ್ಲಿಯೂ ಅನುಮಾನ ಇಲ್ಲ ಜನಸಂಖ್ಯೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನಕ್ಕೆ ಏರುವುದು, ಗೌರವ ಏನು ಅಲ್ಲ ಬದಲಿಗೆ ಇದು ದೇಶಕ್ಕೆ ಹಲವು ಸವಾಲುಗಳನ್ನು ಹುಟ್ಟುತ್ತದೆ ಜತೆಗೆ ಅವಕಾಶಗಳ ಬಾಗಿಗಳನ್ನು ತೆರೆಯುತ್ತದೆ ಆದರೆ, ಜನರನ್ನು ಸಕಾಲಿಕವಾಗಿ ಮತ್ತು ಪರಿಣಾಮಕಾರಿಯಾಗಿ ಬಲಿಸಿಕೊಳ್ಳದೆ ಇದ್ದರೆ ಜನಸಂಖ್ಯೆಯೇ ಶಾಪವಾಗಿ ದೊಡ್ಡ ಸವಾಲಾಗಿ ಪರಿಣಮಿಸಬಹುದು. ದೇಶ ಪ್ರತಿ ವರ್ಷವೂ ಹೆಚ್ಚು ಹೆಚ್ಚು ಜನರಿಗೆ ಆಹಾರ ಬಟ್ಟೆ ಶಿಕ್ಷಣ ಆರೋಗ್ಯ ಸೇವೆ ಉದ್ಯೋಗಾವಕಾಶಗಳನ್ನು ಒದಗಿಸಬೇಕಾಗುತ್ತದೆ.
ಹೀಗೆ ಮುಂದುವರೆದರೆ ಉದ್ಯೋಗಾವಕಾಶಗಳು ದೊರೆಯದೆ ಜನರ ಜೀವನ ಮಟ್ಟ ಸುಧಾರಿಸಿಕೊಳ್ಳುವುದು ಕಷ್ಟವೇ ಸರಿ ಕೆಲಸ ಮಾಡುವ ವಯೋಮಾನದ ಜನರನ್ನು ಸಮಂಜಸವಾಗಿ ಬಳಸಿಕೊಂಡರೇ ಮಾತ್ರ ಜನಸಂಖ್ಯೆಯು ದೇಶದ ಅಭಿವೃದ್ಧಿಗೆ ಪೂರಕವಾಗಿ ಪರಿಣಮಿಸುತ್ತದೆ. ದೇಶದಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಈಗಲೂ ಮೂಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಆದ್ದರಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯತಂತ್ರ ಗಳಿಗೆ ಸಂಬಂಧಿಸಿದ ಪ್ರಯತ್ನಗಳನ್ನು ನಡೆಸದೇ ಇದ್ದರೆ ಜನಸಂಖ್ಯೆ ಹೆಚ್ಚಳದ ಲಾಭವು ದೊರೆಯದೆ ಹೋಗಬಹುದು ಇದರ ಪರಿಣಾಮವಾಗಿ ಲಾಭದ ಹೆಸರಿನಲ್ಲಿ ನಷ್ಟವೇ ಹೆಚ್ಚು ಅದುವೇ ಒಂದು ಹೊರೆಯುವಾಗಬಹುದು.
ಯುವ ಜನರಿಗೆ ಸೌಲಭ್ಯಗಳು ಮತ್ತು ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಹೆಚ್ಚುತ್ತಲೇ ಇರುವ ಹಿರಿಯ ನಾಗರಿಕರ ಹಾರೈಕೆಯು ವ್ಯವಸ್ಥೆ ಮಾಡಬೇಕಿದೆ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದು ಮತ್ತು ಸವಾಲುಗಳನ್ನು ಎದುರಿಸುವುದು ಭಾರತೀಯರ ಹೊರೆಗಾರಿಕೆ ದೇಶದ ಜನರ ಅಗತ್ಯಗಳನ್ನು ಪೂರೈಸಲು ವಿಫಲವಾದರೆ, ಸಾಮಾಜಿಕ ಸಂಘರ್ಷ ಮತ್ತು ರಾಜಕೀಯ ದೃಷ್ಟಿ ಉಂಟಾಗಿ ಅದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಮುಂದೆ ಜನಸಂಖ್ಯಾ ಸ್ಫೋಟವಾದರೂ ಆಶ್ಚರ್ಯ ಪಡಬೇಕಾಗಿಲ್ಲ ಈಗಿನ ಸನ್ನಿವೇಶದಲ್ಲಿ ದೊರಕುತ್ತಿರುವ ಸಂಪನ್ಮೂಲಗಳ ಗರಿಷ್ಠ ಬಳಕೆ ಮತ್ತು ಪರಿಣಾಮಕಾರಿ ಬಳಕೆ ಬಹಳ ಮಹತ್ವವಾಗಿದೆ.
ಮೀಸಲಾತಿ, ವಲಸೆ , ರಾಜಕೀಯ ಪ್ರಾತಿನಿಧ್ಯ ಸಂಪನ್ಮೂಲಗಳ ಹಂಚಿಕೆ ಮತ್ತು ಇದರ ವಿಚಾರಗಳು ಚರ್ಚೆಗೆ ಒಳಗಾಗುವ ಸಾಧ್ಯತೆ ಇದೆ ಸಮಾಜದ ಎಲ್ಲಾ ವರ್ಗಗಳನ್ನು ಸಮಾನವಾಗಿ ಒಳಗೊಳ್ಳುವ ಆರ್ಥಿಕ ಪ್ರಗತಿಯು ಸಾಧ್ಯವಾದರೆ ಜನಸಂಖ್ಯೆ ಏರಿಕೆ ಸವಾಲಾಗಿ ಪರಿಣಮಿಸಬಹುದು ಮಾನವ ಅಭಿವೃದ್ಧಿಯೇ ಅತ್ಯುತ್ತಮ ಕುಟುಂಬ ಕಲ್ಯಾಣ ಯೋಜನೆ ಇದರಿಂದ ಜನಸಂಖ್ಯೆಯ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಜನಸಂಖ್ಯೆ ಹೆಚ್ಚಳ ಯಾವುದೋ ಒಂದು ಸಮುದಾಯ ಕಾರಣ ಎಂದು ದೂಷಿಸುವ ಪ್ರವೃತ್ತಿಗೆ ಜ್ಞಾನದಾದ ಆಧಾರ ಇಲ್ಲದ ಪೂರ್ವಗ್ರಹ ಕಾರಣದಿಂದ ಮತ್ತು ಇದು ತಪ್ಪು ನಡವಳಿಕೆಯ ಜನಸಂಖ್ಯೆಗೆ ಸಂಬಂಧಿಸಿದ ಸವಾಲುಗಳನ್ನು ಉತ್ತಮವಾಗಿ ಮತ್ತು ಜಾಣ್ಮೆಯಿಂದ ನಿರ್ವಹಿಸಿದರೆ ಈ ಶತಮಾನವನ್ನು ಭಾರತದ ಶತಮಾನವನ್ನಾಗಿ ಪರಿವರ್ತಿಸುವ ಅವಕಾಶ ನಮ್ಮ ಮುಂದೆ ಇದೆ ಜನರೇ ನಮ್ಮ ದೇಶದ ಸಂಪನ್ಮೂಲವನ್ನಾಗಿ ಮಾರ್ಪಾಡು ಮಾಡಿಕೊಳ್ಳುವ ಅವಕಾಶ ನಮ್ಮ ನಿಮ್ಮೆಲ್ಲರ ಮೇಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಾಬಾ ಸಾಹೇಬ ಅಂಬೇಡ್ಕರರ ‘ಧ್ಯಾನ’ ಗಾಯನ ; ವಿನೂತನ
- ವೆನ್ನೆಲಾ ಕೆ.
ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ,
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
ಬೆಂಗಳೂರು ವಿಶ್ವವಿದ್ಯಾಲಯ,ಬೆಂಗಳೂರು
ಇತ್ತೀಚೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದ 132ನೇ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಜನುಮ ನಿಮಿತ್ತವಾಗಿ “ಧಾನ್ಯ” ‘ಗಾಯನವು’ ವಿನೂತನವಾದ ಈ ಕಾರ್ಯಕ್ರಮವು 5 ಘಂಟೆ, 1ನಿಮಿಷ, 14 ಸೆಕೆಂಡ್ ಗೆ ಆರಂಭವಾಗಿದ್ದು ಅವಿಸ್ಮರಣೀಯವಾದ ದಿನ, ಇದೊಂದು ಭಾರತ ಇತಿಹಾಸದ ಪುಟದ ಚರಿತ್ರೆಯಲ್ಲೇ ಹೊಸ ದಾಖಲೆಯೂ ಅಂತ ಹೇಳಬಹುದು.
ಈ ಕಾರ್ಯಕ್ರಮವನ್ನು ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ವು ಇಡೀ ಭಾರತದಲ್ಲೇ ಯಾರು ಮಾಡಿರದ ಈ ವಿನೂತವಾದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಬೆಂಗಳೂರು ನಗರದಲ್ಲಿರುವ ಗಾಂಧಿ ಭವನದ ಆವರಣದಲ್ಲಿ ‘ಅನನ್ಯ ಸಂಸ್ಥೆ’ ವತಿಯಿಂದ 132 ನೇ ‘ವಿಶ್ವದ ವೀರ ವಿದ್ಯಾರ್ಥಿ ಹುಟ್ಟಿದ ದಿನ’ ಹಾಗೂ ‘ರಾಷ್ಟ್ರದ ಸ್ಫೂರ್ತಿಯ ದಿನ’ ‘ಸರ್ವ ಸಮುದಾಯದ ಶಕ್ತಿಯ ದಿನ’ ಇದೊಂದು ನಮ್ಮೆಲ್ಲರ ಹಬ್ಬದ ದಿನ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಇಂತಹ ಮೇರು ಶಿಖರ ಟ್ಯಾಗ್ ಲೈನ್ ಗಳಿಂದ ಅದ್ಭುತವಾಗಿ
ಆಯೋಜಿಸಿದ ಕಾರ್ಯಕ್ರಮಕ್ಕೆ ರಾಜ್ಯ ಕಂಡ ಪ್ರಸಿದ್ಧ ಐಪಿಎಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಸಿನಿಮಾ ಸೆಲೆಬ್ರಿಟಿಗಳು, ಸಮಸ್ತ ವಿದ್ಯಾರ್ಥಿ ಸಮೂಹ, ಸಾಮಾಜಿಕ ನ್ಯಾಯದ ವಿಚಾರಶೀಲರು, ಬರಹಗಾರರು, ಪತ್ರಕರ್ತರು ಇನ್ನೂ ಅನೇಕ ಮುಂತಾದವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇದಕ್ಕೆ ಮುಖ್ಯ ಕಾರಣಕರ್ತರಾದ ಅನನ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಂಪುರ ರಾಜೇಶ್ ರವರ ನಿರ್ದೇಶನದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಹೆಮ್ಮೆಯ ವಿಷಯ.
ಇದರ ಹಿನ್ನೆಲೆ: ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ದಲ್ಲಿ ಅತ್ಯುತ್ತಮ ಹಾಗೂ ಅತ್ಯಂತ ತುಂಬಾ ಮನಸ್ಸಿನಿಂದಲ್ಲೇ ವಿಶೇಷವಾದ ಆಸಕ್ತಿಯನ್ನು ಅಂಬೇಡ್ಕರ್ ರವರು ಸಂಗೀತ ಪ್ರಿಯರು ಹಾಗೂ ಅಂಬೇಡ್ಕರ್ ರವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು. ಹಾಗೇಯೆ ಇವರಿಗೆ ಚಿತ್ರಕಲೆಯೂ ಸಹ ಒಲಿದಿತ್ತು ಎಂಬುದು ಗಮನಾರ್ಹ ಸಂಗತಿ. ಇಂತಹ ವಿಷಯವನ್ನು ಯಾರು ಸಹ ಬೆಳಕು ಚೆಲ್ಲುವ ಸಾಹಸಕ್ಕೆ ಕೈ ಹಾಕಿ ಇರಲಿಲ್ಲ. ಇದೊಂದು ಅನನ್ಯ ಸಂಸ್ಥೆ ವತಿಯಿಂದ ಇಂತಹ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಐತಿಹಾಸಿಕ ಚರಿತ್ರೆಗೆ ಮುನ್ನುಡಿವಾಗಿದೆ.
ಅಂಬೇಡ್ಕರ್ ರವರಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಅದ್ಭುತವಾದ ಒಬ್ಬ ಸಂಗೀತ ಪ್ರಿಯರಾಗಿದ್ದರು. ಇವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು ಹಾಗೂ ವಿಶೇಷವಾಗಿ ಚಿತ್ರಕಲೆ ಸಹ ಸರಳವಾಗಿ ಮಾಡುವ ಮೂಲಕ ತಮ್ಮ ಮನದಲ್ಲಿ ಆಸಕ್ತಿ ಹೊಂದಿದ್ದರು. ಇನ್ನು ಹಲವಾರು ವಿಷಯದಲ್ಲಿ ಅಂದರೆ ಅಂಬೇಡ್ಕರ್ ರವರಿಗೆ ವಿಶೇಷವಾದ ಇವುಗಳಲ್ಲಿ ಆಸಕ್ತಿ ಮತ್ತು ಅಭಿರುಚಿಯನ್ನು ಹೊಂದಿದ್ದರು ಎಂಬುದನ್ನು ಮನಗಂಡ ಅನನ್ಯ ಸಂಸ್ಥೆಯ ವತಿಯಿಂದ ಆಯೋಜಿಸಿದ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಅತ್ಯುತ್ತಮವಾಗಿ ಮೂಡಿಬಂದಿದೆ.
ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಚಿತ್ರ ಸಾಹಿತ್ಯಗಳು, ಅಂಬೇಡ್ಕರ್ ವಾದಿಗಳು ಮತ್ತು ಚಿತ್ರರಂಗದ ಬಹುಮುಖ ಪ್ರತಿಭೆ, ಮಹಾಗುರುಗಳಾದ ಡಾ. ಹಂಸಲೇಖ ರವರು ಹೊಸದಾಗಿ ಹಾಡನ್ನು ಬರೆದದ್ದು ತುಂಬಾ ಅವಿಸ್ಮರಣೀಯ ಅಂತ ಹೇಳಬಹುದು. ಇವರು ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರೊತ್ಸಾಹ ನೀಡಿದ್ದು, ಸರ್ವ ಸಮುದಾಯದಕ್ಕೆ ಹೊಸ ಶಕ್ತಿ ತುಂಬಿದ್ದು ಮೇರು ವ್ಯಕ್ತಿಯಾಗಿದ್ದಾರೆ.
ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ಮುಖ್ಯವಾದ ಅಂಶವೆಂದರೆ ಇದರಲ್ಲಿ ಒಟ್ಟು ನಾಲ್ಕು ಭಗವಾನ್ ಬುದ್ಧ, ಅಂಬೇಡ್ಕರ್, ಬಸವೇಶ್ವರ ಮುಂತಾದರವರನ್ನು ವಿಷಯಗಳನ್ನು ಪರಿಗಣಿಸಿ ಅಂಬೇಡ್ಕರ್ ಧ್ಯಾನ ಹಾಡುಗಳ ರಚಿಸಿವುದರಲ್ಲಿ ಪ್ರಮುಖವಾಗಿ ರಾಜ್ಯದ ಹೆಸರಾಂತ ಸಾಹಿತಿ, ಪ್ರಗತಿಪರ ಚಿಂತಕರು ಹಾಗೂ ಮಾಜಿ ಅಧ್ಯಕ್ಷರಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರ
‘ಧೀ ಶಕ್ತಿಯೇ … ಜ್ಞಾನ ಪರ್ವತದ … ಧೀಮಂತ ಧೀಶಕ್ತಿಯೇ …
ಇಂತಹ ಸಾಲುಗಳನ್ನು, ಡಾ. ಕೈ.ವೈ.ನಾರಾಯಣಸ್ವಾಮಿರವರ ದೀಪಾ …. ಎಲ್ಲರೆದೆಯಲಿ … ಹಚ್ಚಿದ ದೀಪಾ .. ಭೂಪಾ … ಭೂಪಾ … ಭೀಮಾ ಭೂಪಾ .. ಬಾಬಾ .. ಸಾಹೇಬ್.. ಜೀವಸ್ವರವೇ … ಬಾಬಾ.. ಹಾಗೂ ರವಿ ಮರಿಯಪ್ಪರವರ ಹತ್ತು ಸಾವಿರ ವಯಲಿನನ್ನು … ವೀಣೆಗಳು ನೂರೆಂಟು … ಕೋಟಿ ಕೋಟಿ ಎದೆ ಸದ್ದಿನ ಡೊಳ್ಳು … ಸಂಯೋಜಿಸಿದರೇ .. ಸಂವಿಧಾನಾ … ಮತ್ತು ಚಿತ್ರ ಸಾಹಿತಿ, ಹೆಸರಾಂತ ಸಂಗೀತ ನಿರ್ದೇಶಕರು ಡಾ. ಹಂಸಲೇಖ ರವರು ನಿನ್ನ ಮೌನಾ … ದೀನ ಗಾನಾ… ನಿನ್ನ ಧ್ಯಾನಾ .. ಸಂವಿಧಾನಾ … ಈ ನಾಲ್ಕು ಅಂಬೇಡ್ಕರ್ ಧ್ಯಾನ ರಚನೆಗೆ ಇವರುಗಳ ಬರೆದಿರುವ ಅದ್ಭುತವಾದ ಅಂಬೇಡ್ಕರ್ ರವರ ಧ್ಯಾನ ಹಾಡುಗಳನ್ನು ನಮ್ಮ ಹಿಂದುಸ್ತಾನಿ ಸಂಗೀತ ಹಾಡುಗಳ ಮೂಲಕ ಕನ್ವರ್ಟ್ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತು.
ಹಾಗೆಯೇ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಬಹಳಷ್ಟು ಯಶಸ್ವಿಯಾಗಬೇಕಾದರೆ ಈ ಮೊದಲು ಪುಟ್ಟರಾಜ ಗವಾಯಿಗಳ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ಶ್ರೀ ಡಿ. ಕುಮಾರ್ ದಾಸ್ ಅವರ ವಿದ್ವತ್ ಶರೀರದಲ್ಲಿ ‘ಧ್ಯಾನ ಗಾಯನ’ ಹಾಗೂ ಇವರ ತಂಡದ ವತಿಯಿಂದ ನಡೆಸಿಕೊಟ್ಟ ಅದ್ಭತವಾದ ಅಂಬೇಡ್ಕರ್ ರವರ ಧ್ಯಾನವು ಹಿಂದುಸ್ತಾನಿ ಸಂಗೀತದ ಕನ್ವರ್ಟ್ ಮಾಡುವ ಮುಖಾಂತರ ಈ ಹಾಡುಗಳನ್ನು ಬಹಳ ಸೊಗಸಾಗಿ ಮೂಡಿಬಂದಿದ್ದು ಹೊಸ ದಾಖಲೆಗೆ ಸೇರ್ಪಡೆಯಾಗಿದೆ.
ಇನ್ನು ಮುಂಬರುವ ದಿನಗಳಲ್ಲಿ ಅದಷ್ಟು ಹಲವಾರು ವಿನೂತನವಾದ ಭಗವಾನ್ ಬುದ್ಧರ, ಬಸವೇಶ್ವರರ ಹಾಗೂ ವಿಶ್ವದ ವೀರ ವಿದ್ಯಾರ್ಥಿಯಾದ ಮೇರು ರಾಷ್ಟ್ರದ
ನಾಯಕರಾದ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ರವರ ಹಲವಾರು ಹಾಡುಗಳನ್ನು
ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದರೆ ಇನ್ನುಷ್ಟು ಭಾರತದ ಇತಿಹಾಸದ ಪುಟಗಳಲ್ಲಿ ಮರೆತು ಹೋಗಿರುವ ಹಲವು ಬಗ್ಗೆ ದಾಖಲೆ ಇಲ್ಲದ ನೈಜ ಸಂಗತಿಗಳನ್ನು ಪುನಃ ಹೊಸ ದಾಖಲೆಗೆ ಉಪಯುಕ್ತವಾದ ವಿಶಿಷ್ಟವಾದ ಮೇರು ನಾಯಕನ
ಅಂಬೇಡ್ಕರ್ ರವರ ವಿಚಾರ ಧಾರೆಗಳು ತಾವು ಅನುಭವಿಸಿದ ನೋವು, ನಲಿವು, ಭಾರತದ ರಾಜ್ಯಾಂಗದ ಶಿಲ್ಪಿಯನ್ನು ಮುಂಬರುವ ದಿನಗಳಲ್ಲಿ ಹೊಸ ಪೀಳಿಗೆಯ ಪರಿಚಯಿಸುವ ಕೀರ್ತಿದಾಯಿಕವಾಗಲಿ ಮತ್ತು ಅದಷ್ಟು ಮುಂಬರುವ ದಿನಗಳಲ್ಲಿ ಅಂಬೇಡ್ಕರ್ ರವರ ಆಸಕ್ತಿದಾಯಕ ವಿಚಾರಗಳು ಹಾಗೂ ಸಂಗೀತದ ಬಗ್ಗೆ ಹಲವಾರು ಮಾಹಿತಿಗಳು ಸಮಸಮಸಮಾಜಕ್ಕೆ ತಲುಪುವ ವ್ಯವಸ್ಥೆಗೆ ಸಾಕ್ಷಿಯಾಗಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಬಹಿರಂಗ
ರಷ್ಯಾದಲ್ಲಿ ಓಂ – ಭರತಾಸ್- ರಾಮ – ರಾವಣ ಲಂಕೇಶ – ಮಾರೀಚ – ಸೀತ ನದಿಗಳು..!
- ಲಕ್ಷ್ಮೀಪತಿ ಕೋಲಾರ, ಸಂಶೋಧಕರು, ಸಂಸ್ಕೃತಿ ಚಿಂತಕರು, ಬೆಂಗಳೂರು
ಸ್ಲಾವ್ ಸಮುದಾಯದ ಲಿತುವೇನಿಯ, ಲಾತ್ವಿಯ, ಬೆಲಾರಸ್,ಉಕ್ರೇನ್ ಮತ್ತು ರಷಿಯಾದಂತಹ ದೇಶಗಳ ನದಿ,ನಗರಗಳು ಸಂಸ್ಕೃತ ಮೂಲದ ಹೆಸರುಗಳನ್ನೆ ಇಂದಿಗು ಉಳಿಸಿಕೊಂಡಿರುವುದು ಆ ಭಾಷೆ ಮತ್ತು ಸಂಬಂಧಿತ ಸಂಸ್ಕೃತಿಯೊಂದಿಗೆ ಅವು ಹಿಂದೊಮ್ಮೆ ಹೊಂದಿದ್ದ ಬಲವಾದ ನಂಟಿಗೆ ಸಾಕ್ಷಿಯಾಗಬಲ್ಲವು.
ಇದರೊಂದಿಗೆ ಉತ್ತರ ಭಾರತದ ಆರ್ಯ ವೈದಿಕರ ಭಾಷೆ ಸಂಸ್ಕೃತಿಯೊಂದಿಗೆ ಸ್ಲಾವ್ ಸಮುದಾಯಕ್ಕೆ ಎಷ್ಟು ನಿಕಟ ಸಂಬಂಧವಿತ್ತೆಂಬುದನ್ನು ಮತ್ತು ನಾಲ್ಕೈದು ಸಾವಿರ ವರ್ಷಗಳ ಹಿಂದೆ ಈ ಎಲ್ಲ ಆರ್ಯ ಸಮುದಾಯಗಳು ಒಟ್ಟಿಗೆ ಒಂದೆಡೆಯೇ ಕಳ್ಳುಬಳ್ಳಿಗಳಾಗಿ ಜೀವಿಸಿದ್ದರೆಂಬುದನ್ನ ಈ ಹಿನ್ನೆಲೆಯಲ್ಲಿ ನಾವು ಗ್ರಹಿಸಬಹುದಾಗಿದೆ.
ಅದರಲ್ಲು ವಿಶೇಷವಾಗಿ ಲಿತುವೇನಿಯ ಮತ್ತು ರಷಿಯಾದ ನದಿಗಳ ಹೆಸರುಗಳು ಎಷ್ಟು ಸಂಸ್ಕೃತಮಯವು (ಇಂಡೋ – ಯುರೋಪಿಯನ್ ಭಾಷಾಮೂಲದ) ಮತ್ತು ವೈದಿಕರ ಪುರಾಣ ಮೂಲದವು ಆಗಿವೆ ಎಂದರೆ, ನಂಬಲಿಕ್ಕು ಅಸಾಧ್ಯ ಎಂಬಂತಿವೆ. ಇದರರ್ಥ ಸ್ಲಾವ್ ಜನರು ವೈದಿಕರ ಪುರಾಣಗಳಿಂದ ಪ್ರೇರಿತಗೊಂಡಿದ್ದಾರೆ ಎಂಬುದಲ್ಲ.
ಬದಲಿಗೆ ವೈದಿಕರ ಇಂದಿನ ಪುರಾಣ – ಸಂಸ್ಕೃತಿ – ಭಾಷೆಗಳು ವೈದಿಕರಿಗೆ ಎಷ್ಟು ಸಂಬಂಧಿಸಿದ್ದೋ ಅದಕ್ಕು ಹೆಚ್ಚಿನದಾಗಿ ಸ್ಲಾವ್ ಸಮುದಾಯಕ್ಕೂ ಸಂಬಂಧಿಸಿದ್ದಾಗಿದ್ದವು. ಹಾಗೆ ನೋಡಿದರೆ ಬ್ರಹ್ಮ – ವೇದ ಮೂಲವು ಕೂಡ ಸ್ಲಾವ್ ಸಮುದಾಯದ ಉತ್ತರ ಧ್ರುವ ಪ್ರದೇಶಕ್ಕೆ ಹೋಗಿ ನಿಲ್ಲುತ್ತದೆ ಎಂಬುದು ಸೋಜಿಗವಾದರು ನಿರ್ವಿವಾದವಾಗಿ ಚಾರಿತ್ರಿಕ ಸತ್ಯವಾಗಿದೆ. 12 – 13 ನೇ ಶತಮಾನಗಳಲ್ಲಿ ಸ್ಲಾವ್ ಜನರು ಕ್ರೈಸ್ತರಾಗಿ ಪರಿವರ್ತಿತರಾಗುವವರೆಗು ಅವರು ಶತಾಂಶ ಮತ್ತು ಥೇಟ್ ಶ್ರೇಷ್ಟ ಆರ್ಯ ವೈದಿಕರೆ ಆಗಿದ್ದರು.
ರಷ್ಯ ಮತ್ತು ಲಿತುವೇನಿಯಾಗಳಲ್ಲಿ ಭರತಾಸ್, ಓಂ, ರಾಮ, ಸೀತ, ಲಂಕೇಶ, ರಾವಣ, ಮಾರೀಚ, ನೆಮುನ (ಯಮುನ), ಕಾಮ, ಯಂತ್ರ, ಶ್ವೇತೆ, ದ್ರವ, ಮೋಕ್ಷ, ಋಗ್ವೇದದ ದಾನವ ಮಾತೆ ದನು ನೆನಪಿನ ದನುಬೆ ಮುಂತಾದ ನದಿಗಳು ಮತ್ತು ನಾರದ (ಈಗ ನರೋದ್ನಯ ಎಂದಿದ್ದರು ಸ್ಥಳೀಯರು ನಾರದ ಬೆಟ್ಟ ಎಂದೇ ಕರೆಯುತ್ತಾರೆ) ಹೆಸರಿನ ಬೆಟ್ಟವು ಇವೆ ಎಂದರೆ ಯಾರೂ ಅಚ್ಚರಿಪಡುವಂತದ್ದೆ.
ಯಾರಿಗಾದರು ಈ ಸಂಗತಿಗಳಲ್ಲಿ ಅನುಮಾನ ಹುಟ್ಟುವುದು ಸಹಜವೆ. ಯಾಕೆಂದರೆ ಸ್ಲಾವ್ – ವೈದಿಕ ಆರ್ಯರ ಮೂಲ ಪ್ರದೇಶವೆ ಉತ್ತರ ದ್ರುವ ಪ್ರದೇಶವಾಗಿತ್ತು ಎಂಬ ಚರಿತ್ರೆಯನ್ನೇ ನಮ್ಮಿಂದ ಮರೆಮಾಚಲಾಗಿತ್ತು ಮತ್ತು ಅದು ಬಹುದೊಡ್ಡ ಸಾಂಸ್ಕೃತಿಕ ರಾಜಕಾರಣವೂ ಆಗಿತ್ತು. ಆದರೆ ತಿಲಕರು ತಮ್ಮ “Arctic Home In the Vedas” ಎಂಬ ಪುಸ್ತಕದಲ್ಲಿ ಉತ್ತರ ಭಾರತದ ವೈದಿಕ ಆರ್ಯರ ತವರು ನೆಲ ಉತ್ತರ ದ್ರುವ ಪ್ರದೇಶವೆ, ಅಂದರೆ ಇಂದಿನ ಲಿತುವೇನಿಯ, ಲಾತ್ವಿಯ, ಬೆಲಾರಸ್ ಪ್ರದೇಶಗಳೇ ಆಗಿದ್ದವು ಎಂದು ಸಮರ್ಥ ಸಾಕ್ಷಾಧಾರಗಳೊಂದಿಗೆ ನಿರೂಪಿಸಿದ್ದಾರೆ.
ರಷ್ಯಾದಲ್ಲಿ ಸಂಸ್ಕೃತ ಭಾಷಾಮೂಲದ ನೂರಾರು ನದಿಗಳಿವೆ. ಭಾರತದಲ್ಲಿ ಕೆಲವು ನದಿಗಳನ್ನ ಹೊರತುಪಡಿಸಿದರೆ ಆ ಪ್ರಮಾಣದ ವೈದಿಕ ಪುರಾಣ ಮೂಲದ ನದಿ ಹೆಸರುಗಳು ಈ ನೆಲದಲ್ಲಿ ಇಲ್ಲವೆಂಬುದು ಪ್ರಾಚೀನ ಕಾಲದಿಂದಲು ಆರ್ಯ ವೈದಿಕರು ಇಲ್ಲಿರಲಿಲ್ಲವೆಂಬುದನ್ನೇ ಸೂಚಿಸುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243