Connect with us

ದಿನದ ಸುದ್ದಿ

ಪತ್ರಕರ್ತರಿಗೆ ನಿವೇಶನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

Published

on

ಸುದ್ದಿದಿನ,ದಾವಣಗೆರೆ: ವರದಿಗಾರ ಕೂಟ ಹಾಗೂ ಪತ್ರಕರ್ತರಿಗೆ ನಿವೇಶನ ಒದಗಿಸುವ ಬಗ್ಗೆ ಸಚಿವರು, ಶಾಸಕರೊಂದಿಗೆ ಚರ್ಚಿಸಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ವರದಿಗಾರರ ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ, ಮಾಧ್ಯಮ ದಿನಾಚರಣೆ, ಮಾಧ್ಯಮ ಪ್ರಶಸ್ತಿ ಪ್ರದಾನ ಮತ್ತು ಜೀವಮಾನ ಸಾಧನೆಗೆ ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ಪತ್ರಕರ್ತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಅದೇ ರೀತಿ ಆರೋಗ್ಯಕ್ಕೆ ಆರ್ಥಿಕ ನೆರವು ನೀಡಲು ಪಾರ್ವತಮ್ಮ ಶಾಮನೂರು ಶಿವಶಂಕರಪ್ಪನವರ ಹೆಸರಿನಲ್ಲಿ ಚಿಂತನೆ ನಡೆಸಲಾಗುವುದು. ಸಮಾಜವನ್ನು ತಿದ್ದುವ ಮಹತ್ತರ ಜವಾಬ್ದಾರಿ ಇರುವ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಸಾರ, ಸುದ್ದಿಗಳ ವೈಭವೀಕರಣಕ್ಕೆ ಕಡಿವಾಣ ಬೀಳಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.

ಸಂವಿಧಾನದ ನಾಲ್ಕನೇ ಅಂಗವಾಗಿ ಕೆಲಸ ಮಾಡುತ್ತಿರುವ ಮಾಧ್ಯಮವೆಂದರೇ ಜನರಿಗೆ ನಂಬಿಕೆ ಹೆಚ್ಚಿರುತ್ತದೆ. ಸಮಾಜ ತಿದ್ದುವ ಜವಾಬ್ದಾರಿಯನ್ನು ಮಾಧ್ಯಮ ಹೊಂದಿದೆ. ಸ್ವಾತಂತ್ರ್ಯ ತಂದುಕೊಡುವಲ್ಲಿ, ಮೂಢನಂಬಿಕೆಗಳನ್ನು ದೂರಾಗಿಸುವಲ್ಲಿ ಮಾಧ್ಯಮಗಳು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಇಂತಹ ಮಾಧ್ಯಮಗಳು ಸುಳ್ಳು ಸುದ್ದಿಗಳಿಗೆ ಮತ್ತು ಸುದ್ದಿಗಳ ವೈಭವೀಕರಣಕ್ಕೆ ಕಡಿವಾಣ ಹಾಕಬೇಕಿದೆ ಎಂದು ಅವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ದಿಗಳು ಎಗ್ಗಿಲ್ಲದೇ ಬಿತ್ತರಗೊಳ್ಳುತ್ತಿವೆ. ಕೆಲ ಟಿವಿ ಮಾಧ್ಯಮಗಳು ತಾವೇ ಸ್ವಯಂಘೋಷಿತ ನ್ಯಾಯಾಲಯಗಳಾಗಿ ಪ್ರಕರಣದ ವಿಚಾರಣೆ ನಡೆಸಿ, ತೀರ್ಪು ನೀಡುವಂತೆ ವರ್ತಿಸುತ್ತವೆ. ಇದೆಲ್ಲದರ ನಿಯಂತ್ರಣ ಆಗಬೇಕು ಎಂದರು.

ಉತ್ತಮ ಸಮಾಜ ಕಟ್ಟುವಲ್ಲಿ ಪತ್ರಕರ್ತರ ಜವಾಬ್ದಾರಿ ಮಹತ್ವದ್ದಾಗಿದೆ. ಮಾಧ್ಯಮಗಳು ಜನರಿಗೆ ವಿಷಯ
ತಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪತ್ರಕರ್ತರು ಸಮಾಜದ ఎల్ల ವರ್ಗದ ಜನರಿಗೆ ಧ್ವನಿಯಾಗಿ ಕೆಲಸ ಮಾಡುತ್ತಾರೆ. ಪತ್ರಕರ್ತರಿಗೆ ಸಂಘಟನೆಯೇ ಧ್ವನಿಯಾಗಬೇಕು. ಈ ದಿಸೆಯಲ್ಲಿ ಜಿಲ್ಲಾ ವರದಿಗಾರರ ಕೂಟವು ಕೆಲಸ ಮಾಡಲಿ ಎಂದು ಆಶಿಸಿದರು.

ಪತ್ರಿಕೆ ಓದುವುದರಿಂದ ಜ್ಞಾನ, ಏಕಾಗ್ರತೆ ಹೆಚ್ಚಾಗುತ್ತದೆ. ಯುವಜನರಲ್ಲಿ ಪತ್ರಿಕೆ ಓದುವ ಹವ್ಯಾಸವನ್ನು ಉತ್ತೇಜಿಸುವ ಕೆಲಸವು ಮನೆ ಹಾಗೂ ಶಾಲಾ-ಕಾಲೇಜಿನಿಂದ ಶುರುವಾಗಬೇಕು ಎಂದು ಅವರು ಆಶಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಮಾತನಾಡಿ, ಪತ್ರಿಕಾ ರಂಗವು ಸಮಾಜವನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪತ್ರಕರ್ತರು ಸಮಾಜದ ಕನ್ನಡಿಯಂತೆ ಸರಿ-ತಪ್ಪು ತೋರುವ ಕೆಲಸ ಮಾಡುತ್ತಾರೆ. ಆದರೂ ಇತ್ತೀಚಿನ ದಿನಗಳಲ್ಲಿ ಮಾಧ್ಯಮ ರಂಗ ಹಳಿ ತಪ್ಪುತ್ತಿರುವಂತೆ ಭಾಸವಾಗುತ್ತದೆ. ಸುದ್ದಿಗಳ ಅತಿಯಾದ ವೈಭವೀಕರಣ ಕಡಿಮೆಯಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್, ಸುಮಾರು 17 ವರ್ಷಗಳ ಹಿಂದೆ ಸ್ವಾಭಿಮಾನಿ ಪತ್ರಕರ್ತರು ಸೇರಿಕೊಂಡು ಕಟ್ಟಿದ ವರದಿಗಾರರು ಕೂಟವು ಈವರೆಗೆ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಪತ್ರಕರ್ತರಿಗಾಗಿ ಸಾಕಷ್ಟು ಚಟುವಟಿಕೆ ಕೈಗೊಂಡಿರುವ ಜೊತೆಗೆ 46 ಪತ್ರಕರ್ತರಿಗೆ ನಿವೇಶನ ಕೊಡಿಸಿರುವುದು ಕೂಟದ ದೊಡ್ಡ
ಸಾಧನೆಯಾಗಿದೆ. ಇದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಎಲ್ಲಾ ಸಚಿವರು, ಶಾಸಕರು ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.

ಪತ್ರಕರ್ತರಿಗೆ ಸಮಾಜದಲ್ಲಿ ಗೌರವವಿದ್ದರೂ, ಸಂಕಷ್ಟದಲ್ಲಿರುವ ಪತ್ರಕರ್ತರು ಕೂಡ ಇದ್ದಾರೆ. ಬೇರೆಯವರ ಸಮಸ್ಯೆಗಳಿಗೆ ಧ್ವನಿಯಾಗುವ ಪತ್ರಕರ್ತರ ಗೋಳು ಕೇಳುವವರು ಇಲ್ಲದಂತಾಗಿದೆ. ಜೀವನ ಭದ್ರತೆ ಇಲ್ಲದ ಪತ್ರಿಕಾ ವೃತ್ತಿಯು ನೀರ ಮೇಲಿನ ಗುಳ್ಳೆ ಇದ್ದಂತೆ. ಇಂತಹ ಸಂದರ್ಭದಲ್ಲಿ ಅನಾರೋಗ್ಯಪೀಡಿತ ಪತ್ರಕರ್ತರ ಚಿಕಿತ್ಸೆಗೆ ನೆರವು ಸಿಗಬೇಕು. ಈಗಲೂ ನಿವೇಶನ ಪಡೆಯದ ಸಾಕಷ್ಟು ಜನ ಪತ್ರಕರ್ತರಿದ್ದು, ಅಂತಹವರಿಗೆ ಆದ್ಯತೆ ಮೇರೆಗೆ ರಿಯಾಯಿತಿ ದರದಲ್ಲಿ ನಿವೇಶನ ನೀಡಬೇಕು. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ವರದಿಗಾರರ ಕೂಟಕ್ಕೆ ಸ್ವಂತ ನಿವೇಶನ ಒದಗಿಸಲು ಸ್ಥಳೀಯ ಸಚಿವರು, ಶಾಸಕರು, ಜನಪ್ರತಿನಿಧಿಗಳು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗಣೇಶ ಕಮಲಾಪುರ, ವಿನಾಯಕ ನಾಯ್ಕ ಪೂಜಾರಿ, ದೇವಿಕಾ ಸುನೀಲ್, ಕೆ.ಆರ್.ಪುನೀತ್ ಆಪ್ತಿ, ಬಿ.ಹನುಮಂತರಾವ್, ಎಚ್.ನಿಂಗರಾಜ್, ಚನ್ನಬಸವ ಶೀಲವಂತ, ಎ.ಬಿ.ರುದ್ರಮ್ಮ ಅವರುಗಳಿಗೆ ವಾರ್ಷಿಕ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೀವಮಾನ ಸಾಧನೆಗಾಗಿ ವೀರಪ್ಪ ಎಂ.ಬಾವಿ, ಎನ್.ಆರ್.ನಟರಾಜ್, ಜಿ.ಎಂ.ಆರ್.ಆರಾಧ್ಯ, ಎಂ.ಶಶಿಕುಮಾರ್, ಎಸ್.ಎ.ಗಂಗರಾಜು, ಐ.ಗುರುಶಾಂತಪ್ಪ, ಬಸವರಾಜ್ ಐರಣಿ, ಬಕ್ಕೇಶ್ ನಾಗನೂರು ಅವರುಗಳಿಗೆ ಗೌರವ ಸನ್ಮಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ವರದಿಗಾರರ ಕೂಟದ ನೂತನ ವೆಬಸೈಟ್‌ಗೆ ಚಾಲನೆ ನೀಡಲಾಯಿತು.

ಹರಿಹರ ಶಾಸಕ ಬಿ.ಪಿ.ಹರೀಶ್, ಮಹಾನಗರಪಾಲಿಕೆ ಮೇಯ‌ರ್ ಬಿ.ಎಚ್.ವಿನಾಯಕ ಪೈಲ್ವಾನ್, ಕೂಟದ ಗೌರವಾಧ್ಯಕ್ಷ ಬಿ.ಎನ್. ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ, ಉಪಾಧ್ಯಕ್ಷರಾದ ಕೆ.ಚಂದ್ರಣ್ಣ, ಮಂಜುನಾಥ ಗೌರಕ್ಕಳವರ್, ಎಂ.ಬಿ.ನವೀನ್, ಎ.ಎಲ್. ತಾರಾನಾಥ, ರಾಮಪ್ರಸಾದ್, ಮಲ್ಲಿಕಾರ್ಜುನ ಕಬ್ಬರು, ಸದಾನಂದ ಹೆಗಡೆ, ಸಾರ್ವಜನಿಕ ಸಂಪರ್ಕ ಪ್ರತಿನಿಧಿ ಪಿ.ಎಸ್.ಲೋಕೇಶ, ಕಾರ್ಯದರ್ಶಿ ತೇಜಸ್ವಿನಿ ಪ್ರಕಾಶ, ಕೆ.ಜೈಮುನಿ, ಅನಿತಾ, ಬಿ.ಸಿಕಂದ‌ರ್ ಸೇರಿದಂತೆ ಕೂಟದ ನೂತನ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಎಸ್ ಎಸ್ ಎಲ್ ಸಿ ಫಲಿತಾಂಶ | ಭರತ್ ಜಿ ರಾಜ್ಯಕ್ಕೆ ಪ್ರಥಮ ; ನನ್ನ ಕ್ಷೇತ್ರದ ವಿದ್ಯಾರ್ಥಿ ಸಾಧನೆಗೆ ಸಲ್ಯೂಟ್ ಶಾಸಕ ಕೆ.ಎಸ್.ಬಸವಂತಪ್ಪ ಹರ್ಷ

Published

on

ಸುದ್ದಿದಿನ,ದಾವಣಗೆರೆ:ಇವತ್ತು ನನಗೆ ಬಹಳ ಸಂತೋಷದ ದಿನ. ನನ್ನ ಕ್ಷೇತ್ರದ ಕಬ್ಬಳ ಗ್ರಾಮದ ಒಬ್ಬ ರೈತ ಕುಟುಂಬದಿಂದ ಬಂದ ಜಿ.ಭರತ್ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 625ಕ್ಕೆ 625 ಅಂಕ ಪಡೆದಿರುವುದು ನನಗೆ ಬಹಳ ಹೆಮ್ಮೆ ತಂದಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

ಕಬ್ಬಳ ಗ್ರಾಮದ ವಿದ್ಯಾಲಕ್ಷ್ಮಿ ಶಾಲೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಜಿ.ಭರತ್ ಮತ್ತು ಪೋಷಕರನ್ನು ಅಭಿನಂದಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದ ವಿದ್ಯಾರ್ಥಿ ಇಷ್ಟು ದೊಡ್ಡ ಸಾಧನೆ ಮಾಡಿರುವುದು ಸಂತಸದ ವಿಷಯ. ವಿದ್ಯಾ ಲಕ್ಷ್ಮಿ ಶಾಲೆಯವರು ಬಹಳ ಪ್ರಾಮಾಣಿಕವಾಗಿ ಮಕ್ಕಳ ಶಿಕ್ಷಣದ ಬಗ್ಗೆ ಆಸಕ್ತಿ ತೋರಿಸಿ ಅವರನ್ನು ಉನ್ನತ ಮಟ್ಟಕ್ಕೆ ತರಲು ಶ್ರಮಿಸಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.

ನಮಗೆ ಮೊದಲ ಆದ್ಯತೆ ದೇಗುಲಗಳಿಗಿಂತ ಶಾಲೆಗಳಿಗೆ ಇರಬೇಕು. ಇಂತಹ ಶಾಲೆಯೆಂಬ ದೇಗುಲದಿಂದ ಹೊರ ಬರುವ ಭರತ್‌ನಂತಹ ಮಕ್ಕಳು ಮುಂದಿನ ದಿನಗಳಲ್ಲಿ ಈ ದೇಶದ ಉನ್ನತ ಅಧಿಕಾರಿಗಳಾಗಿ ಅಥವಾ ವಿಜ್ಞಾನಿಗಳಾಗಿ ಸೇವೆ ಸಲ್ಲಿಸುವಂತಾಗಲಿ ಎಂದು ಶುಭ ಹಾರೈಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಏ 25 ರಂದು ಅಗ್ರಿಕಲ್ಚರ್ ಪ್ರಾಕ್ಟಿಕಲ್ ಪರೀಕ್ಷೆಗೆ ಉಚಿತ ತರಬೇತಿ

Published

on

ಸುದ್ದಿದಿನ,ದಾವಣಗೆರೆ : ನಗರದ ಧವನ್ ಕಾಲೇಜಿನಲ್ಲಿ Viksit47 ಅಕಾಡೆಮಿ ವತಿಯಿಂದ ಉಚಿತ ತರಬೇತಿ ಕಾರ್ಯಗಾರವನ್ನು ಇದೇ 25 ರಂದು ಆಯೋಜಿಸಲಾಗಿದೆ ಎಂದು ಮುಖ್ಯಸ್ಥರಾದ ತೇಜಸ್ ಹೆಚ್.ಎನ್ ಅವರು ತಿಳಿಸಿದ್ದಾರೆ.

ವೆಟರ್ನರಿ, ಬಿಎಸ್ಸಿ ಕೃಷಿ, ಬಿಎಸ್ಸಿ ತೋಟಗಾರಿಕೆ ಮುಂತಾದ 12 ಕೋರ್ಸುಗಳ ಪ್ರವೇಶಕ್ಕೆ ಕೃಷಿಕರ ಕೋಟಾದ ಅಡಿಯಲ್ಲಿ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ 50% ಮೀಸಲಾತಿ ಇರುತ್ತದೆ,ಈ ಮೀಸಲಾತಿಯನ್ನು ಪಡೆಯಲು KCET ಪರೀಕ್ಷೆಯ ಜೊತೆಗೆ ಕೃಷಿ ವಿಶ್ವವಿದ್ಯಾಲಯಗಳಲ್ಲಿ ನಡೆಸುವ ಪ್ರಾಯೋಗಿಕ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ಈ ಉಚಿತ ಕಾರ್ಯಗಾರದಲ್ಲಿ ಅಗ್ರಿ ಪ್ರಾಕ್ಟಿಕಲ್ ಪರೀಕ್ಷೆಯ ಕುರಿತು ಸಂಪೂರ್ಣ ತರಬೇತಿಯನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ದ್ಬಿತೀಯ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಈ ಸದುಪಯೋಗ ಪಡಿಸಿಕೊಳ್ಳಬೇಕು. ಅಕ್ಕ ಪಕ್ಕದ ಜಿಲ್ಲೆಯ ವಿದ್ಯಾರ್ಥಿಗಳು ಸಹ ಇದರ ಸದುಪಯೋಗ ಪಡಿಸಿಕೊಳ್ಳಬಹುದು,ಮತ್ತು ಕಾಲೇಜುಗಳ ಆಡಳಿತ ಮಂಡಳಿಯವರು ತಮ್ಮ ವಿದ್ಯಾರ್ಥಿಗಳನ್ನು ಈ ಉಚಿತ ಕಾರ್ಯಗಾರದಲ್ಲಿ ಭಾಗವಹಿಸುವಂತೆ ವಿನಂತಿಸಿದ್ದಾರೆ.

ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಲು ಮೊಬೈಲ್ ನಂ: 8217413646 ಗೆ ಕರೆಮಾಡಲು ಸೂಚಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚನ್ನಗಿರಿ | ಎಸ್ ಎಸ್ ಎಲ್ ಸಿ ಫಲಿತಾಂಶ ; ಕಬ್ಬಳ ಶಾಲೆಯ ವಿದ್ಯಾರ್ಥಿ ಭರತ್ ಜಿ ರಾಜ್ಯಕ್ಕೆ ಟಾಪರ್

Published

on

ಸುದ್ದಿದಿನ,ದಾವಣಗೆರೆ: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಣಿವೆಬಿಳಚಿ ಗ್ರಾಮದ ವಿದ್ಯಾರ್ಥಿ ಭರತ್ ಜಿ. ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

625ಕ್ಕೆ 625 ಅಂಕಗಳನ್ನು ಪಡೆದ ಭರತ್ ಅವರು ಕಬ್ಬಳ ಗ್ರಾಮದ ವಿದ್ಯಾಲಕ್ಷ್ಮಿ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಯ ವಿದ್ಯಾರ್ಥಿ. ರಾಜ್ಯದ ಇತರ ಐದು ವಿದ್ಯಾರ್ಥಿಗಳೊಂದಿಗೆ ಅಗ್ರಸ್ಥಾನವನ್ನು ಭರತ್ ಅವರು ಹಂಚಿಕೊಂಡಿದ್ದಾರೆ. ಭರತ್ ಅವರ ತಂದೆ ಗಿರೀಶ್ ಕೃಷಿ ಹಾಗೂ ಗುತ್ತಿಗೆ ದಾರರು, ತಾಯಿ ಶಿಲ್ಪ ಗೃಹಿಣಿ.

ಗ್ರಾಮೀಣ ಭಾಗದಿಂದ ಬಂದ ಭರತ್ ರಾಜ್ಯಕ್ಕೆ ಟಾಪರ್ ಆಗಿ ದೊಡ್ಡ ಸಾಧನೆ ಮಾಡಿದ್ದಾರೆ.ನಮ್ಮ ಶಾಲೆಯು ಎರಡು ಬಾರಿ ಜಿಲ್ಲೆಗೆ ಹಾಗೂ ಎರಡು ಬಾರಿ ತಾಲ್ಲೂಕಿಗೆ ಟಾಪ‌ರ್ ಆಗಿತ್ತು. ಇದೀಗ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಯು ನಿರಂತರವಾಗಿ ಸಾಧನೆ ಮಾಡುತ್ತಿದ್ದು ಈ ಬಾರಿಯೂ ಶೇ 100ರಷ್ಟು ಫಲಿತಾಂಶ ನೀಡಿದೆ ಎಂದು ಮುಖ್ಯ ಶಿಕ್ಷಕಿ ಲಕ್ಷ್ಮೀದೇವಿ ಎ.ಎನ್ ಹರ್ಷ ವ್ಯಕ್ತಪಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending