ಲೈಫ್ ಸ್ಟೈಲ್
ಮುದ್ರಾ ಯೋಗದಿಂದ ಆರೋಗ್ಯಭಾಗ್ಯ..!
ಈ ಬ್ರಹ್ಮಾಂಡವು ಪಂಚತತ್ವಗಳಿಂದ ಕೂಡಿದೆ. ಅವುಗಳಾವುವೆಂದರೆ ಅಗ್ನಿ, ವಾಯು, ಆಕಾಶ, ಪೃಥ್ವಿ ಮತ್ತು ಜಲ. ಅದೇ ರೀತಿ ನಮ್ಮ ಶರೀರವು ಸಹ ಪಂಚತತ್ವಗಳಿಂದಾಗಿದೆ. ಯಾವಾಗ ಈ ಪಂಚತತ್ವಗಳು ಸಮತೋಲನದಲ್ಲಿರುತ್ತವೆಯೋ ಆಗ ನಾವು ಆರೋಗ್ಯದಿಂದಿರುತ್ತೇವೆ. ಯಾವಾಗ ಸಮತೋಲನ ಕಳೆದುಕೊಳ್ಳತ್ತೇವೆಯೋ ಆಗ ನಮಗೆ ಅನಾರೋಗ್ಯದಿಂದ ರೋಗಗಳು ತಲೆದೋರುತ್ತವೆ. ಈ ಪಂಚತತ್ವಗಳನ್ನು ಸಮತೋಲನದಲ್ಲಿ ಕಾಪಾಡುವುದೇ ಮುದ್ರಾಯೋಗದ ಉದ್ದೇಶವಾಗಿದೆ.
ಮುದ್ರೆಗಳನ್ನು ಯೋಗದ ಅಂಶವೆಂದು ಪರಿಗಣಿಸಲಾಗಿದೆ. ಕೈಯ ಅಂಗುಷ್ಠದೊಂದಿಗೆ ಇತರ ಬೆರಳುಗಳನ್ನು ಸಂಯೋಜಿಸಿ ಮಾಡುವ ಭಂಗಿಗಳನ್ನು ಹಸ್ತಮುದ್ರೆಗಳೆನ್ನುವರು. ಈ ಮುದ್ರೆಗಳಿಂದ ಆರೋಗ್ಯವನ್ನು ಸಂವರ್ಧಿಸಿ, ಸಂರಕ್ಷಿಸಬಹುದಾಗಿರುತ್ತದೆ.
ನಮ್ಮ ಶರೀರದಿಂದ ಇಲೆಕ್ಟ್ರೊ ಮ್ಯಾಗ್ನೆಟಿಕ್ ಪವರ್ ಅಥವಾ ವಿದ್ಯುತ್ ಕಾಂತೀಯ ಅಲೆಗಳು, ಸತತವಾಗಿ ಹೊರಹೊಮ್ಮುತ್ತಿರುತ್ತವೆ. ಈ ಚೈತನ್ಯ ಶಕ್ತಿಯು ಕೈ ಬೆರಳುಗಳ ತುದಿ, ಮೂಗು, ತುಟಿ, ಕಿವಿ ಮತ್ತು ಕಾಲುಬೆರಳುಗಳ ತುದಿಯಿಂದ ಸದಾ ಹೊರಹೊಮ್ಮುತ್ತಿರುತ್ತವೆ. ಮುದ್ರಾಯೋಗವನ್ನು ಕೈಬೆರಳುಗಳಿಂದ ಮಾಡುವ ಮೂಲಕ, ಈ ಚೈತನ್ಯ ಶಕ್ತಿಯನ್ನು ಬಂಧಿಸಿ ಶರೀರಕ್ಕೆ ಮರುಕಳಿಸುವಂತೆ ಮಾಡಿ, ಪಂಚತತ್ವಗಳನ್ನು ಸಮತೋಲನವಾಗಿ ಇಟ್ಟುಕೊಳ್ಳಬಹುದಾಗಿರುತ್ತದೆ.
ನಮ್ಮ ಶರೀರದಲ್ಲಿರುವ ಪಂಚ ತತ್ವಗಳಾದ ಆಕಾಶ, ವಾಯು, ಅಗ್ನಿ, ಪೃಥ್ವಿ, ಜಲ ಇವುಗಳು ಇಡೀ ಶರೀರದಲ್ಲಿ ಸಂಚರಿಸುತ್ತಿದ್ದು, ಪ್ರತಿ ತತ್ವದ ಪ್ರಾಬಲ್ಯವು ವಿಶಿಷ್ಟ ಭಾಗದಲ್ಲಿವೆ.
ತತ್ವ ,ದೇಹದ ಭಾಗ, ಬೆರಳುಗಳ ಸಂಬಂಧ
• ಅಗ್ನಿ ತತ್ವ – ನಾಭಿಯಿಂದ ಎದೆಯವರೆಗೆ ಹೆಬ್ಬೆರಳು
• ವಾಯು ತತ್ವ -ಮೂಗಿನಿಂದ ಎದೆಯವರೆಗೆ – ತೋರು ಬೆರಳು
• ಆಕಾಶ ತತ್ವ – ಶಿರಸ್ಸು-ಮಧ್ಯದ ಬೆರಳು
• ಪೃಥ್ವಿ ತತ್ವ – ಅಂಗಾಲಿನಿಂದ ಮಂಡಿಗಳವರೆಗೆ- ಉಂಗುರದ ಬೆರಳು
• ಜಲ ತತ್ವ – ಮಂಡಿಗಳಿಂದ ನಾಭಿಯವರೆಗೆ – ಕಿರಿ ಬೆರಳು
ಮುದ್ರೆಗಳನ್ನು ಮಾಡುವುದು ಹೇಗೆ?
• ಹೆಬ್ಬೆರಳಿನೊಂದಿಗೆ ಇತರ ಬೆರಳುಗಳ ತುದಿಯನ್ನು ಜೋಡಿಸಿದಾಗ, ಆಯಾ ತತ್ವವು ಸಮತೋಲನದಲ್ಲಿರುತ್ತದೆ.
• ಹೆಬ್ಬೆರಳಿನ ಬುಡದ ಕೆಳಗೆ ಇತರ ಬೆರಳುಗಳ ತುದಿ ಜೋಡಿಸಿದಾಗ, ಆಯಾ ತತ್ವವು ಕಡಿಮೆ ಆಗುತ್ತದೆ.
• ಹೆಬ್ಬೆರಳಿನ ತುದಿಯು ಇತರ ಬೆರಳುಗಳ ಬುಡಕ್ಕೆ ತಾಗಿಸಿದಾಗ, ಆಯಾ ತತ್ವವು ಹೆಚ್ಚುತ್ತದೆ.
• ಮುದ್ರೆಗಳನ್ನು ಮಾಡುವಾಗ ಬೆರಳಿನ ತುದಿಭಾಗಗಳ ಸ್ಪರ್ಶ ಮಾತ್ರ ಆದರೆ ಸಾಕು. ಒತ್ತು ಕೊಡುವ ಅವಶ್ಯಕತೆ ಇಲ್ಲ. ಇತರ ಬೆರಳುಗಳನ್ನು ಸಾಕಷ್ಟು ನೇರವಾಗಿಡಬೇಕು.
• ಇದನ್ನು ಎಲ್ಲಾ ವಯಸ್ಸಿನವರು ಮಾಡಬಹುದು, ಇದನ್ನು ಮಾಡಲು ಸಮಯ, ದಿಕ್ಕು, ಆಸನಗಳ ಬಂಧನವಿಲ್ಲ.ಮುದ್ರೆ ಮಾಡುವಾಗ ಕೈಗಳನ್ನು ಮೇಲ್ಮುಖವಾಗಿಡಬೇಕು.
ಮುದ್ರೆಗಳು ವೆಚ್ಚವಿಲ್ಲದ ಚಿಕಿತ್ಸೆ, ಸ್ವತಃ ಮಾಡುವ ಚಿಕಿತ್ಸೆ. ಎಲ್ಲಾ ರೀತಿಯ ಕಾಯಿಲೆಗಳಿಗೂ ಮುದ್ರೆಗಳಿಂದ ಚಿಕಿತ್ಸೆ ಮಾತ್ರವಲ್ಲ, ನಮ್ಮಲ್ಲಿನ ರೋಗ ಪ್ರತೀಕಾರಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದೊಂದು ಔಷಧಿರಹಿತವಾದ ಚಿಕಿತ್ಸೆ. ಇದರಲ್ಲಿ ಔಷಧಿಯ ಸೈಡ್ ಎಫೆಕ್ಟ್ಗಳಿಲ್ಲದೆ ಆರೋಗ್ಯವನ್ನು ಸರಿಪಡಿಸಬಹುದು.
ಮುದ್ರಾಯೋಗವನ್ನು ಯಾರು ಬೇಕಾದರು ಮಾಡಬಹುದು, ಎಲ್ಲಾ ಪ್ರಕಾರದ ರೋಗಗಳನ್ನು ನಿವಾರಿಸಿಕೊಳ್ಳಬಹುದು. ಮುದ್ರಾ ಯೋಗ ಮಾಡುವುದರ ಜೊತೆಗೆ ನಂಬಿಕೆ, ವಿಶ್ವಾಸ ಮತ್ತು ತಾಳ್ಮೆ ಇದ್ದರೆ ಮಾತ್ರ ಪರಿಣಾಮಕಾರಿ. ಬಹು ಮುಖ್ಯವಾದ ಕೆಲವು ಮುದ್ರೆಗಳನ್ನು ಮಾಡುವ ವಿಧಾನ ಹಾಗೂ ಅದರ ಉಪಯೋಗಗಳು
1 ಜ್ಞಾನ ಮುದ್ರೆ
ಹೆಬ್ಬೆರಳಿನ ತುದಿ ಮತ್ತು ತೋರು ಬೆರಳಿನ ತುದಿಯನ್ನು ಸ್ಪರ್ಶಿಸಿದಾಗ ಜ್ಞಾನಮುದ್ರೆ ಆಗುತ್ತದೆ.ಇದು ಏಕಾಗ್ರತೆ ಹೆಚ್ಚಿಸುತ್ತದೆ, ನಿದ್ರ್ರಾಹೀನತೆ, ತಲೆನೋವು, ಕೋಪದ ಸಮಸ್ಯೆ, ಮರೆವು ಪರಿಹರಿಸುತ್ತದೆ. ಮುಖ್ಯವಾಗಿ ಮತಿಮಾಂದ್ಯತೆ ನೀಗುತ್ತದೆ (ರಾತ್ರಿ ಇಡೀ ಮುದ್ರೆಗೆ ಟೇಪ್ ಹಾಕಿಡಬೇಕು). ಸ್ಮರಣ ಶಕ್ತಿ ಚುರುಕಾಗುತ್ತದೆ.
2 ಆಕಾಶ ಮುದ್ರೆ
ಹೆಬ್ಬೆರಳಿನ ತುದಿ ಮತ್ತು ಮಧ್ಯದ ಬೆರಳಿನ ತುದಿಯನ್ನು ಸ್ಪರ್ಶಿಸಿದಾಗ ಆಕಾಶ ಮುದ್ರೆ ಆಗುತ್ತದೆ. ಹೃದಯದ ಯಾವುದೇ ಸಮಸ್ಯೆಯಿದ್ದರೂ, ಈ ಮುದ್ರೆಯಿಂದ ಶಮನವಾಗುತ್ತದೆ. ಕಿವಿಯ ತೊಂದರೆ ಸರಿಪಡಿಸುತ್ತದೆ. ಎಲುಬುಗಳನ್ನು ಗಟ್ಟಿಮುಟ್ಟಾಗಿಡುತ್ತದೆ. ಮೈಗ್ರೇನ್ ತಲೆನೋವುವನ್ನು ಸರಿಪಡಿಸುತ್ತದೆ. ಶರೀರದಲ್ಲಿನ ವಿಷದ್ರವ್ಯಗಳನ್ನು ಹೊರ ಹಾಕಿ ಶರೀರ ಶುದ್ಧವಾಗಿದುತ್ತದೆ.
3 ಪೃಥ್ವಿ ಮುದ್ರೆ
ಹೆಬ್ಬೆರಳಿನ ತುದಿ ಮತ್ತು ಬೆರಳಿನ ತುದಿ ಸ್ಪರ್ಶಿಸಿದಾಗ ಪೃಥ್ವಿ ಮುದ್ರೆ ಆಗುತ್ತದೆ.
ಜ್ವರ ಬರದಂತೆ ಕಾಪಾಡುತ್ತದೆ/ಜ್ವರ ಇದ್ದರೆ ಅದನ್ನು ಇಳಿಸುತ್ತದೆ. ಈ ಮುದ್ರೆಯು ರಕ್ತದ ಚಲನೆ ಹೆಚ್ಚಿಸುತ್ತದೆ. ಇದು ನಮ್ಮ ದೇಹದ ಎಲುಬು ಮತ್ತು ಸ್ನಾಯುಗಳ ಬಲವರ್ಧಿಸುತ್ತದೆ. ತ್ವಚೆಯ ಕಾಂತಿ ಹೆಚ್ಚುಸುತ್ತದೆ. ಬಾವು, ಹುಣ್ಣು ಸರಿಪಡಿಸುತ್ತದೆ. ತಲೆಗೂದಲು ಉದುರುತ್ತ್ತಿದ್ದರೆ, ನೆರೆಯುತ್ತಿದ್ದರೆ ಸರಿಪಡಿಸುತ್ತದೆ.
4 ವರುಣ ಮುದ್ರೆ
ಹೆಬ್ಬೆರಳಿನೊಂದಿಗೆ ಕಿರುಬೆರಳಿನ ತುದಿ ಸ್ಪರ್ಶಿಸಿದಾಗ ವರುಣ ಮುದ್ರೆ ಆಗುತ್ತದೆ.
ಈ ಮುದ್ರೆಯು ನಮ್ಮ ದೇಹದಲ್ಲಿರುವ ನೀರಿನ ಅಂಶವನ್ನು ಸಮತೋಲನದಲ್ಲಿ ಇಡುತ್ತದೆ. ನಮ್ಮ ದೇಹದ ಸೌಂದರ್ಯ ಹೆಚ್ಚಿಸುತ್ತದೆ. ನಮ್ಮ ಚರ್ಮಕ್ಕೆ ಕಾಂತಿ ನೀಡುತ್ತದೆ, ಏಕೆಂದರೆ ದೇಹದಲ್ಲಿರುವ ನೀರಿನ ಅಂಶಕ್ಕೆ ಚಾಲನೆ ನೀಡಿ ಅದು ಚರ್ಮವನ್ನು ಪೋಷಿಸುತ್ತದೆ. ಅನೀಮಿಯಾ ಆಗಿ ರಕ್ತ ಕಡಿಮೆ ಆದಾಗ ಸರಿಪಡಿಸುತ್ತದೆ. ಮೂರ್ಛೆ ರೋಗವನ್ನು ಸರಿಪಡಿಸಬಹುದಾಗಿದೆ.
ಎರಡು ಬೆಟ್ಟಿನ ಮುದ್ರೆಗಳು
5 ಆಪಾನ ಮುದ್ರೆ
ಹೆಬ್ಬೆಟ್ಟಿನ ತುದಿಯೊಂದಿಗೆ ಮಧ್ಯದ ಬೆರಳಿನ ತುದಿ ಮತ್ತು ಉಂಗುರ ಬೆರಳಿನ ತುದಿ ಸ್ಪರ್ಶ ಮಾಡಿದಾಗ ಅಪಾನ ಮುದ್ರೆ ಆಗುತ್ತದೆ.
ಹೊಟ್ಟೆಯ ನೋವು, ಉಬ್ಬರಿಸಿದರೆ ಶಮನಗೊಳ್ಳುತ್ತದೆ. ಮೂಲವ್ಯಾಧಿ, ಮಧುಮೇಹದ ಕಾಯಿಲೆ ಸರಿಪಡಿಸುತ್ತದೆ. ಕೈಕಾಲು, ಹೊಟ್ಟೆ, ಎದೆ ಉರಿಗಳನ್ನು ಶಮನಗೊಳಿಸುತ್ತದೆ. ಹಲ್ಲು ನೋವು, ವಸಡು ರೋಗಗಳನ್ನು ಗುಣಪಡಿಸುತ್ತದೆ.
6 ಪ್ರಾಣ ಮುದ್ರೆ
ಹೆಬ್ಬೆಟ್ಟಿನ ತುದಿಯೊಂದಿಗೆ ಉಂಗುರ ಬೆರಳಿನ ತುದಿ ಮತ್ತು ಕಿರಿಬೆರಳಿನ ತುದಿ ಸ್ಪರ್ಶ ಮಾಡಿದಾಗ ಪ್ರಾಣ ಮುದ್ರೆ ಆಗುತ್ತದೆ.
ಈ ಮುದ್ರೆಯು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಸುಧಾರಿಸಿ, ದೃಷ್ಟಿಯನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ಆಯಾಸವನ್ನು ಹೋಗಲಾಡಿಸಿ ಹೆಚ್ಚು ಉಲ್ಲಾಸದಿಂದ ಇರಲು ನೆರವಾಗುತ್ತದೆ. ಶರೀರಕ್ಕೆ ಬೇಕಾದ ಎ, ಬಿ, ಸಿ, ಡಿ, ಇ ಮತ್ತು ಕೆ ವಿಟಾಮಿನ್ಗಳನ್ನು ಪೂರೈಸುತ್ತದೆ. ಅತ್ತಿ ಮುಖ್ಯವಾದ ವಿಷಯವೆಂದರೆ ಯಾವುದೇ ಚಿಕಿತ್ಸೆಗೋಸ್ಕರ ಮಾಡಿದ ಮುದ್ರೆಯ ಜೊತೆಗೆ ಈ ಮುದ್ರೆ ಮಾಡಿದರೆ, ಚಿಕಿತ್ಸೆ ಬಹುಬೇಗ ಫಲಿಸುತ್ತದೆ.
7 ವಾಯು ಮುದ್ರೆ
ತೋರುಬೆರಳಿನ ತುದಿಯನ್ನು ಹೆಬ್ಬೆಟ್ಟಿನ ಬುಡಕ್ಕೆ ತಾಗಿಸಿ ಹೆಬ್ಬೆಟ್ಟನ್ನು ತೋರು ಬೆರಳಿನ ಬೆನ್ನಿನ ಮೇಲೆ ಇಡಬೇಕು ಆಗ ಅದು ವಾಯು ಮುದ್ರೆ ಆಗುತ್ತದೆ. ಈ ಮುದ್ರೆಯು ನಮ್ಮ ದೇಹದಲ್ಲಿನ ಗಾಳಿಯನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಶರೀರದ ಹಲವು ಭಾಗಗಳಲ್ಲಿ ವಾಯುವು ಹೆಚ್ಚಾಗಿ ನೋವುಗಳು ಬರುತ್ತವೆ. ವಾಯು ಮುದ್ರೆ ಮಾಡುವುದರಿಂದ ಎಲ್ಲಾ ನೋವನ್ನು ಶಮನಗೊಳಿಸಿಕೊಳ್ಳಬಹುದು.
8 ಸೂರ್ಯ ಮುದ್ರೆ
ಉಂಗುರ ಬೆರಳಿನ ತುದಿಯನ್ನು ಹೆಬ್ಬೆಟ್ಟಿನ ಬುಡಕ್ಕೆ ತಾಗಿಸಿ, ಹೆಬ್ಬೆಟ್ಟನ್ನು ಉಂಗುರ ಬೆರಳಿನ ಬೆನ್ನಿನ ಮೇಲೆ ಇರಿಸಬೇಕು. ಆಗ ಅದು ಸೂರ್ಯ ಮುದ್ರೆ ಆಗುತ್ತದೆ.
ಬೊಜ್ಜು ಕರಗಿಸಬಹುದು. ರಕ್ತದಲ್ಲಿ ಕೊಲೇಸ್ಟ್ರಾಲ್ ಕಡಿಮೆಗೊಳಿಸುತ್ತದೆ. ಶರೀರದಲ್ಲಿ ಉಷ್ಣಾಂಶ ಕಡಿಮೆ ಆದಾಗ ಈ ಮುದ್ರೆ ಮಾಡುವುದರಿಂದ ದೇಹದ ಉಷ್ಣಾಂಶ ಹೆಚ್ಚುತ್ತದೆ.
ಸೌಮ್ಯ ಅಶೋಕ್
ಬೆಂಗಳೂರು

ದಿನದ ಸುದ್ದಿ
ಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
~ಗೋವರ್ಧನ ನವಿಲೇಹಾಳು
ಭಾರತದ ಪ್ರಜಾಪ್ರಭುತ್ವವು ವಿಶ್ವದ ಅತಿದೊಡ್ಡ ಚುನಾವಣಾ ಪ್ರಯೋಗಶಾಲೆಯಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಕೋಟಿಗಟ್ಟಲೆ ಮತದಾರರು ತಮಗೆ ಅರ್ಹವೆನಿಸಿದ ಪ್ರತಿನಿಧಿಯನ್ನು ಆಯ್ಕೆಯನ್ನು ಮಾಡುತ್ತಾರೆ. ಹಾಗೆಯೇ ಪ್ರಜಾ ಪ್ರಭುತ್ವದ ಪ್ರಯೋಗಶಾಲೆಯಾದ ಭಾರತದ ಚುನಾವಣೆಗಳನ್ನು ಹಣ ಮತ್ತು ಜಾತಿಗಳು ನಿಯಂತ್ರಿಸುತ್ತಿವೆ ಎಂಬುದು ಕರಾಳ ಸತ್ಯ.
ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ ಮತ್ತು ಖರೀದಿಸುತ್ತಿವೆ. ಇದು ಕೇವಲ ಒಂದು ತಾತ್ಕಾಲಿಕ ಸಮಸ್ಯೆಯಲ್ಲ; ಇದು ಪ್ರಜಾಪ್ರಭುತ್ವದ ಮೂಲ ತತ್ತ್ವಗಳನ್ನೇ ಕೊಲ್ಲುತ್ತಿರುವ ದೀರ್ಘಕಾಲಿಕ ಕ್ಯಾನ್ಸರ್. ಒಂದು ದಿನಪತ್ರಿಕೆಯ ಸಂಪಾದಕನಾದ ನಾನು ಈ ಸಂಪಾದಕೀಯದ ಮೂಲಕ ಹಣ ಮತ್ತು ಜಾತಿ ಎಂಬ ಎರಡು ಶಕ್ತಿಗಳು ಹಾಗೂ ದೌರ್ಬಲ್ಯಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಲು ಬಯಸುತ್ತೇನೆ. ಇದು ಕೇವಲ ಟೀಕೆಯಲ್ಲ; ಎಚ್ಚರಿಕೆಯೂ ಹೌದು.
ಭಾರತದ ಚುನಾವಣೆಗಳ ವೆಚ್ಚವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. 2019ರ ಲೋಕಸಭಾ ಚುನಾವಣೆಗೆ ಸರ್ಕಾರಿ ಲೆಕ್ಕದ ಪ್ರಕಾರ 60,000 ಕೋಟಿ ರುಪಾಯಿ ವೆಚ್ಚವಾಗಿದ್ದರೆ, 2024ರ ಚುನಾವಣೆಯಲ್ಲಿ ಇದು ಒಂದು ಲಕ್ಷ ಕೋಟಿ ರುಪಾಯಿಗಳನ್ನು ಮೀರಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಆದರೆ ನಿಜವಾದ ವೆಚ್ಚ ಇನ್ನೂ ಹೆಚ್ಚು. ಪ್ರತಿ ಅಭ್ಯರ್ಥಿಯು ಒಂದು ಕ್ಷೇತ್ರದಲ್ಲಿ ಕನಿಷ್ಠ 10-20 ಕೋಟಿ ರುಪಾಯಿ ಖರ್ಚು ಮಾಡುತ್ತಾನೆ. ಇದಕ್ಕೆ ಕಾರಣ ಸರಳವಾಗಿದೆ, ಮತದಾರರನ್ನು ‘ಕೊಳ್ಳುವುದು’. ಚುನಾವಣಾ ಆಯೋಗದ ನಿಯಮಗಳು ಎಷ್ಟೇ ಕಟ್ಟುನಿಟ್ಟಾಗಿದ್ದರೂ, ಕಪ್ಪು ಹಣದ ಪ್ರವಾಹವನ್ನು ತಡೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಎಲೆಕ್ಟ್ರಾಲ್ ಬಾಂಡ್ಗಳು ತಾತ್ಕಾಲಿಕವಾಗಿ ಪಾರದರ್ಶಕತೆಯ ಮುಸುಕು ಹಾಕಿದ್ದಾವೆ. ಆದರೆ ಸುಪ್ರೀಂ ಕೋರ್ಟ್ ಅವುಗಳನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿದ ನಂತರವೂ, ಕಾರ್ಪೊರೇಟ್ಗಳು ಮತ್ತು ಉದ್ಯಮಪತಿಗಳು ಬೇರೆ ಬೇರೆ ಮಾರ್ಗಗಳ ಮೂಲಕ ಹಣ ಸುರಿಸುತ್ತಲೇ ಇದ್ದಾರೆ. ಫಲಿತಾಂಶ? ಶ್ರೀಮಂತ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮಾತ್ರ ಸ್ಪರ್ಧಿಸುತ್ತಾರೆ. 2024ರ ಲೋಕಸಭೆಯಲ್ಲಿ ಸರಾಸರಿ ಅಭ್ಯರ್ಥಿಯ ಆಸ್ತಿ 5 ಕೋಟಿ ರುಪಾಯಿಗಳಿಗಿಂತ ಹೆಚ್ಚಿತ್ತು.
ಜನಪ್ರತಿನಿಧಿಯಾಗುವುದು ಇಂದು ಉದ್ಯೋಗವಾಗಿದೆ, ಸೇವೆಯಲ್ಲ. ಹಣವು ಕೇವಲ ವೆಚ್ಚವಲ್ಲ; ಅದು ಅಧಿಕಾರದ ಹಂಚಿಕೆಯನ್ನೂ ನಿರ್ಧರಿಸುತ್ತದೆ. ಪಕ್ಷಗಳು ‘ಕ್ಯಾಷ್ ಫಾರ್ ವೋಟ್’ ಯೋಜನೆಗಳನ್ನು ಅನುಸರಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಒಂದು ಮನೆಗೆ 500 ರಿಂದ 2000 ರುಪಾಯಿ, ನಗರಗಳಲ್ಲಿ ಮೊಬೈಲ್ ರೀಚಾರ್ಜ್, ಸೈಕಲ್, ಟಿವಿ – ಇವೆಲ್ಲವೂ ಹಣದ ರೂಪದಲ್ಲಿ ಹಂಚಿಕೆಯಾಗುತ್ತವೆ. ಚುನಾವಣಾ ಆಯೋಗವು ರೇಡ್ ನಡೆಸುತ್ತದೆ, ಆದರೆ ಹಣದ ಹರಿವು ನಿಲ್ಲುವುದಿಲ್ಲ. ಇದರ ಫಲಿತಾಂಶವಾಗಿ ಜನರ ಸಮಸ್ಯೆಗಳು – ಬಡತನ, ಉದ್ಯೋಗ, ಶಿಕ್ಷಣ – ಮರೆಯುತ್ತವೆ. ಅಭ್ಯರ್ಥಿಯು ‘ನಾನು ಏನು ಮಾಡುತ್ತೇನೆ’ ಎಂದು ಹೇಳುವ ಬದಲು ‘ನಾನು ಎಷ್ಟು ಕೊಡುತ್ತೇನೆ’ ಎಂದು ಪ್ರಚಾರ ಮಾಡುತ್ತಾನೆ. ಇದು ಜನತಂತ್ರವಲ್ಲ; ಇದು ಹಣತಂತ್ರ.
ಇನ್ನು ಜಾತಿಯ ಸುಳಿಯನ್ನು ಚರ್ಚಿಸುವುದಾದರೆ, ಭಾರತದಲ್ಲಿ ಜಾತಿ ಎಂದರೆ ಕೇವಲ ಸಾಮಾಜಿಕ ವ್ಯವಸ್ಥೆಯಲ್ಲ; ಅದು ರಾಜಕೀಯ ಗಣಿತದ ಮೂಲಭೂತ ಸೂತ್ರ. ಕರ್ನಾಟಕದಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡು – ಎಲ್ಲೆಡೆ ಜಾತಿ ಸಮೀಕ್ಷೆಗಳು, ಜಾತಿ ಆಧಾರಿತ ಟಿಕೆಟ್ ಹಂಚಿಕೆ ಮತ್ತು ಜಾತಿ ಬ್ಯಾಂಕ್ಗಳು ಚುನಾವಣೆಗಳನ್ನು ನಿರ್ಧರಿಸುತ್ತವೆ.
ಕರ್ನಾಟಕದಲ್ಲಿ ಲಿಂಗಾಯತ, ಒಕ್ಕಲಿಗ, ದಲಿತ, ಮುಸ್ಲಿಂ – ಈ ಜಾತಿ ಬ್ಲಾಕ್ಗಳನ್ನು ಲೆಕ್ಕ ಹಾಕದೆ ಯಾವುದೇ ಪಕ್ಷ ಗೆಲ್ಲಲಾರದು. ಪಕ್ಷಗಳು ಜಾತಿ ನಾಯಕರನ್ನು ‘ಖರೀದಿಸುತ್ತವೆ’. ಒಂದು ಜಾತಿಯ ನಾಯಕನಿಗೆ ಟಿಕೆಟ್ ಕೊಟ್ಟರೆ ಆ ಜಾತಿಯ 70-80% ಮತಗಳು ಬರುತ್ತವೆ ಎಂಬ ಲೆಕ್ಕ. ಇದು ಜನರನ್ನು ವ್ಯಕ್ತಿಗಳಾಗಿ ನೋಡುವುದಿಲ್ಲ; ಅವರನ್ನು ಜಾತಿ ಬ್ಯಾಂಕ್ಗಳಾಗಿ ಪರಿವರ್ತಿಸುತ್ತದೆ.
ಜಾತಿ ರಾಜಕಾರಣವು ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡಿದೆ. ಸಂವಿಧಾನದಲ್ಲಿ ಮೀಸಲಾತಿ ಸಾಮಾಜಿಕ ನ್ಯಾಯಕ್ಕಾಗಿ ಇದೆ. ಆದರೆ ಇಂದು ಅದು ಅಧಿಕಾರದ ಲಾಭಕ್ಕಾಗಿ ಬಳಸಲಾಗುತ್ತಿದೆ. ಜಾತಿ ಸಮೀಕ್ಷೆಯ ಬೇಡಿಕೆಗಳು ಹೆಚ್ಚುತ್ತಿವೆ. ಕರ್ನಾಟಕದಲ್ಲಿ ಕೂಡ ಜಾತಿ ಸಮೀಕ್ಷೆಯ ವಿವಾದ ಎಲ್ಲರಿಗೂ ತಿಳಿದಿದೆ. ಇದು ನಿಜವಾಗಿಯೂ ಸಾಮಾಜಿಕ ನ್ಯಾಯವೇ? ಅಥವಾ ಹೆಚ್ಚು ಮೀಸಲಾತಿ ಬೇಡುವ ಮೂಲಕ ಅಧಿಕಾರ ಹಂಚಿಕೊಳ್ಳುವ ರಾಜಕೀಯ ತಂತ್ರವೇ? ಜಾತಿ ಆಧಾರಿತ ರಾಜಕಾರಣವು ಮೆರಿಟ್ ಅನ್ನು ಕೊಲ್ಲುತ್ತದೆ. ಯೋಗ್ಯರಾದ ಯುವಕರು ಅಥವಾ ಮಹಿಳೆಯರು ಜಾತಿ ಲೆಕ್ಕವಿಲ್ಲದೆ ಅವಕಾಶ ಪಡೆಯುವುದಿಲ್ಲ. ಇದು ದೇಶದ ಅಭಿವೃದ್ಧಿಯನ್ನು ಹಿಂದಕ್ಕೆ ಎಳೆಯುತ್ತದೆ.
ಹಣ ಮತ್ತು ಜಾತಿ ಒಂದರೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಹಣವು ಜಾತಿ ನಾಯಕರನ್ನು ಖರೀದಿಸುತ್ತದೆ. ಜಾತಿ ನಾಯಕರು ಹಣದಿಂದ ಮತಗಳನ್ನು ಖರೀದಿಸುತ್ತಾರೆ. ಒಂದು ಸಣ್ಣ ಗುಂಪು ಅಧಿಕಾರವನ್ನು ತನ್ನ ಕೈಯಲ್ಲಿ ಇಟ್ಟುಕೊಳ್ಳುತ್ತದೆ. ಸಾಮಾನ್ಯ ಜನರು ಕೇವಲ ಮತದಾರರಾಗಿ ಉಳಿಯುತ್ತಾರೆ, ನಿರ್ಣಾಯಕರಾಗುವುದಿಲ್ಲ. ಇದರಿಂದಾಗಿ ಭ್ರಷ್ಟಾಚಾರ ಹೆಚ್ಚುತ್ತದೆ. ಅಧಿಕಾರಕ್ಕೆ ಬಂದವರು ತಮ್ಮ ಹೂಡಿಕೆಯನ್ನು ತಿರುಗಿಸಿಕೊಳ್ಳುತ್ತಾರೆ. ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು – ಇವುಗಳ ಬದಲು ಅಭಿವೃದ್ಧಿ ಕೇವಲ ಫೋಟೋ ,ವಿಡಿಯೋಗಳಲ್ಲಿ ಉಳಿಯುತ್ತವೆ
ಈ ಸಮಸ್ಯೆಯನ್ನು ತೊಡೆದುಹಾಕಲು ಏನು ಮಾಡಬಹುದು? ಮೊದಲು ಚುನಾವಣಾ ಆಯೋಗವು ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ಅಭ್ಯರ್ಥಿಗಳ ಆಸ್ತಿ ಮತ್ತು ವೆಚ್ಚದ ಪಾರದರ್ಶಕ ಲೆಕ್ಕಪತ್ರವನ್ನು ಆನ್ಲೈನ್ನಲ್ಲಿ ಪ್ರಕಟಿಸಬೇಕು. ರಾಜ್ಯ ಆರ್ಥಿಕ ನೆರವು (ಸ್ಟೇಟ್ ಫಂಡಿಂಗ್ ಆಫ್ ಎಲೆಕ್ಷನ್ಸ್) ಅನ್ನು ಜಾರಿಗೊಳಿಸಬೇಕು. ಕಾರ್ಪೊರೇಟ್ ದಾನಗಳಿಗೆ ಕಟ್ಟುಪಾಡು ಬೇಕು. ಜಾತಿ ರಾಜಕಾರಣಕ್ಕೆ ಎದುರಾಗಿ ‘ಜಾತಿ-ಮುಕ್ತ’ ಅಭ್ಯರ್ಥಿ ಆಯ್ಕೆಯನ್ನು ಪ್ರೋತ್ಸಾಹಿಸಬೇಕು. ಜಾತಿ ಸಮೀಕ್ಷೆಗಳು ನಡೆಯಬೇಕು, ಆದರೆ ಅದನ್ನು ಅಧಿಕಾರದ ಲಾಭಕ್ಕಾಗಿ ಬಳಸಬಾರದು. ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಜಾತಿ ಆಧಾರಿತ ರಾಜಕಾರಣವನ್ನು ಕ್ರಮೇಣ ಕಡಿಮೆ ಮಾಡಬೇಕು.
ಜನರು ಈಗ ಎಚ್ಚರಗೊಳ್ಳಬೇಕು. ಮತವನ್ನು ಹಣಕ್ಕಾಗಿ ಅಥವಾ ಜಾತಿಗಾಗಿ ಮಾರಾಟ ಮಾಡುವುದು ಸ್ವಯಂ ವಿನಾಶಕ್ಕೆ ದಾರಿ. ಪ್ರಜಾಪ್ರಭುತ್ವವು ಜನರ ಕೈಯಲ್ಲಿದೆ. ಅದನ್ನು ಹಣ ಮತ್ತು ಜಾತಿಯ ಕೈಗೆ ಬಿಟ್ಟರೆ ನಾವು ನಮ್ಮ ಭವಿಷ್ಯವನ್ನೇ ಮಾರಿಕೊಳ್ಳುತ್ತೇವೆ. ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು ಮತ್ತು ನಾಗರಿಕ ಸಂಘಟನೆಗಳು ಈ ವಿಷಯವನ್ನು ಸತತವಾಗಿ ಚರ್ಚಿಸಬೇಕು. ಚುನಾವಣೆಗಳು ಕೇವಲ ಅಧಿಕಾರದ ಬದಲಾವಣೆಯಲ್ಲ; ಅವು ನಮ್ಮ ಸಮಾಜದ ದರ್ಶನವನ್ನು ನಿರ್ಧರಿಸುತ್ತವೆ.
ಇಂದು ನಾವು ಎದುರಿಸುತ್ತಿರುವುದು ಕೇವಲ ಒಂದು ಚುನಾವಣಾ ಸಮಸ್ಯೆಯಲ್ಲ; ಇದು ಭಾರತದ ಆತ್ಮದ ಸಮಸ್ಯೆ. ಹಣ ಮತ್ತು ಜಾತಿಯನ್ನು ಮೀರಿ ನಿಲ್ಲುವ ನಾಯಕರು ಬರಬೇಕು. ಅವರು ಜನರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ನಮ್ಮ ಪ್ರಜಾಪ್ರಭುತ್ವವು ಕೇವಲ ಹೆಸರಿನಲ್ಲಿ ಮಾತ್ರ ಉಳಿಯುತ್ತದೆ. ಜನತೆ ಎಚ್ಚರದಿಂದಿರಲಿ. ಇದು ನಮ್ಮ ದೇಶ, ನಮ್ಮ ಭವಿಷ್ಯ.
ಸುದ್ದಿದಿನ | ವಾಟ್ಸಾಪ್ | 9980346243

ದಿನದ ಸುದ್ದಿ
ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣ | ಭದ್ರಾ ನಾಲೆ ನೀರು ನಿರ್ವಹಣೆ
ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
ಗುರುವಾರ(ಫೆ.19) ರಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಾಲೆಯ ಕೊನೆಯ ಭಾಗದ ರೈತರಿಗೆ ನೀರು ತಲುಪಿಸಲು ನಾಲೆಯುದ್ದಕ್ಕೂ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಅನಧಿಕೃತವಾಗಿ ನೀರು ಎತ್ತುವವರ ಮೋಟಾರ್ಗಳನ್ನು ವಶಪಡಿಸಿಕೊಳ್ಳಲಾಗುವುದು.
ಪ್ರಿಪೇಯ್ಡ್ ಆಟೋಗಳನ್ನು ಚಾಲ್ತಿಗೊಳಿಸಿದ್ದು, ಇದಕ್ಕೆ ರೂ.38/-ಶುಲ್ಕ ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಶೇಖರ್ ಹೆಚ್.ಟಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

-
ದಿನದ ಸುದ್ದಿ1 day agoಸಂಪಾದಕೀಯ | ಕುಟುಂಬ ಉತ್ತರಾಧಿಕಾರ vs ಬದಲಾವಣೆಯ ಗಾಳಿ: ಉಪಚುನಾವಣೆಯ ಸವಾಲು
-
ದಿನದ ಸುದ್ದಿ23 hours agoಎಸ್ ಎಸ್ ಹಾದಿಯಲ್ಲಿ ಸಮರ್ಥ್ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ
-
ದಿನದ ಸುದ್ದಿ22 hours agoಉಪಚುನಾವಣೆ | ಕಾಂಗ್ರೆಸ್ ಗೆ ನಿರೀಕ್ಷೆಗೂ ಮೀರಿ ಜನಬೆಂಬಲ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ3 hours agoಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ











