ಲೈಫ್ ಸ್ಟೈಲ್
ಮುದ್ರಾ ಯೋಗದಿಂದ ಆರೋಗ್ಯಭಾಗ್ಯ..!
ಈ ಬ್ರಹ್ಮಾಂಡವು ಪಂಚತತ್ವಗಳಿಂದ ಕೂಡಿದೆ. ಅವುಗಳಾವುವೆಂದರೆ ಅಗ್ನಿ, ವಾಯು, ಆಕಾಶ, ಪೃಥ್ವಿ ಮತ್ತು ಜಲ. ಅದೇ ರೀತಿ ನಮ್ಮ ಶರೀರವು ಸಹ ಪಂಚತತ್ವಗಳಿಂದಾಗಿದೆ. ಯಾವಾಗ ಈ ಪಂಚತತ್ವಗಳು ಸಮತೋಲನದಲ್ಲಿರುತ್ತವೆಯೋ ಆಗ ನಾವು ಆರೋಗ್ಯದಿಂದಿರುತ್ತೇವೆ. ಯಾವಾಗ ಸಮತೋಲನ ಕಳೆದುಕೊಳ್ಳತ್ತೇವೆಯೋ ಆಗ ನಮಗೆ ಅನಾರೋಗ್ಯದಿಂದ ರೋಗಗಳು ತಲೆದೋರುತ್ತವೆ. ಈ ಪಂಚತತ್ವಗಳನ್ನು ಸಮತೋಲನದಲ್ಲಿ ಕಾಪಾಡುವುದೇ ಮುದ್ರಾಯೋಗದ ಉದ್ದೇಶವಾಗಿದೆ.
ಮುದ್ರೆಗಳನ್ನು ಯೋಗದ ಅಂಶವೆಂದು ಪರಿಗಣಿಸಲಾಗಿದೆ. ಕೈಯ ಅಂಗುಷ್ಠದೊಂದಿಗೆ ಇತರ ಬೆರಳುಗಳನ್ನು ಸಂಯೋಜಿಸಿ ಮಾಡುವ ಭಂಗಿಗಳನ್ನು ಹಸ್ತಮುದ್ರೆಗಳೆನ್ನುವರು. ಈ ಮುದ್ರೆಗಳಿಂದ ಆರೋಗ್ಯವನ್ನು ಸಂವರ್ಧಿಸಿ, ಸಂರಕ್ಷಿಸಬಹುದಾಗಿರುತ್ತದೆ.
ನಮ್ಮ ಶರೀರದಿಂದ ಇಲೆಕ್ಟ್ರೊ ಮ್ಯಾಗ್ನೆಟಿಕ್ ಪವರ್ ಅಥವಾ ವಿದ್ಯುತ್ ಕಾಂತೀಯ ಅಲೆಗಳು, ಸತತವಾಗಿ ಹೊರಹೊಮ್ಮುತ್ತಿರುತ್ತವೆ. ಈ ಚೈತನ್ಯ ಶಕ್ತಿಯು ಕೈ ಬೆರಳುಗಳ ತುದಿ, ಮೂಗು, ತುಟಿ, ಕಿವಿ ಮತ್ತು ಕಾಲುಬೆರಳುಗಳ ತುದಿಯಿಂದ ಸದಾ ಹೊರಹೊಮ್ಮುತ್ತಿರುತ್ತವೆ. ಮುದ್ರಾಯೋಗವನ್ನು ಕೈಬೆರಳುಗಳಿಂದ ಮಾಡುವ ಮೂಲಕ, ಈ ಚೈತನ್ಯ ಶಕ್ತಿಯನ್ನು ಬಂಧಿಸಿ ಶರೀರಕ್ಕೆ ಮರುಕಳಿಸುವಂತೆ ಮಾಡಿ, ಪಂಚತತ್ವಗಳನ್ನು ಸಮತೋಲನವಾಗಿ ಇಟ್ಟುಕೊಳ್ಳಬಹುದಾಗಿರುತ್ತದೆ.
ನಮ್ಮ ಶರೀರದಲ್ಲಿರುವ ಪಂಚ ತತ್ವಗಳಾದ ಆಕಾಶ, ವಾಯು, ಅಗ್ನಿ, ಪೃಥ್ವಿ, ಜಲ ಇವುಗಳು ಇಡೀ ಶರೀರದಲ್ಲಿ ಸಂಚರಿಸುತ್ತಿದ್ದು, ಪ್ರತಿ ತತ್ವದ ಪ್ರಾಬಲ್ಯವು ವಿಶಿಷ್ಟ ಭಾಗದಲ್ಲಿವೆ.
ತತ್ವ ,ದೇಹದ ಭಾಗ, ಬೆರಳುಗಳ ಸಂಬಂಧ
• ಅಗ್ನಿ ತತ್ವ – ನಾಭಿಯಿಂದ ಎದೆಯವರೆಗೆ ಹೆಬ್ಬೆರಳು
• ವಾಯು ತತ್ವ -ಮೂಗಿನಿಂದ ಎದೆಯವರೆಗೆ – ತೋರು ಬೆರಳು
• ಆಕಾಶ ತತ್ವ – ಶಿರಸ್ಸು-ಮಧ್ಯದ ಬೆರಳು
• ಪೃಥ್ವಿ ತತ್ವ – ಅಂಗಾಲಿನಿಂದ ಮಂಡಿಗಳವರೆಗೆ- ಉಂಗುರದ ಬೆರಳು
• ಜಲ ತತ್ವ – ಮಂಡಿಗಳಿಂದ ನಾಭಿಯವರೆಗೆ – ಕಿರಿ ಬೆರಳು
ಮುದ್ರೆಗಳನ್ನು ಮಾಡುವುದು ಹೇಗೆ?
• ಹೆಬ್ಬೆರಳಿನೊಂದಿಗೆ ಇತರ ಬೆರಳುಗಳ ತುದಿಯನ್ನು ಜೋಡಿಸಿದಾಗ, ಆಯಾ ತತ್ವವು ಸಮತೋಲನದಲ್ಲಿರುತ್ತದೆ.
• ಹೆಬ್ಬೆರಳಿನ ಬುಡದ ಕೆಳಗೆ ಇತರ ಬೆರಳುಗಳ ತುದಿ ಜೋಡಿಸಿದಾಗ, ಆಯಾ ತತ್ವವು ಕಡಿಮೆ ಆಗುತ್ತದೆ.
• ಹೆಬ್ಬೆರಳಿನ ತುದಿಯು ಇತರ ಬೆರಳುಗಳ ಬುಡಕ್ಕೆ ತಾಗಿಸಿದಾಗ, ಆಯಾ ತತ್ವವು ಹೆಚ್ಚುತ್ತದೆ.
• ಮುದ್ರೆಗಳನ್ನು ಮಾಡುವಾಗ ಬೆರಳಿನ ತುದಿಭಾಗಗಳ ಸ್ಪರ್ಶ ಮಾತ್ರ ಆದರೆ ಸಾಕು. ಒತ್ತು ಕೊಡುವ ಅವಶ್ಯಕತೆ ಇಲ್ಲ. ಇತರ ಬೆರಳುಗಳನ್ನು ಸಾಕಷ್ಟು ನೇರವಾಗಿಡಬೇಕು.
• ಇದನ್ನು ಎಲ್ಲಾ ವಯಸ್ಸಿನವರು ಮಾಡಬಹುದು, ಇದನ್ನು ಮಾಡಲು ಸಮಯ, ದಿಕ್ಕು, ಆಸನಗಳ ಬಂಧನವಿಲ್ಲ.ಮುದ್ರೆ ಮಾಡುವಾಗ ಕೈಗಳನ್ನು ಮೇಲ್ಮುಖವಾಗಿಡಬೇಕು.
ಮುದ್ರೆಗಳು ವೆಚ್ಚವಿಲ್ಲದ ಚಿಕಿತ್ಸೆ, ಸ್ವತಃ ಮಾಡುವ ಚಿಕಿತ್ಸೆ. ಎಲ್ಲಾ ರೀತಿಯ ಕಾಯಿಲೆಗಳಿಗೂ ಮುದ್ರೆಗಳಿಂದ ಚಿಕಿತ್ಸೆ ಮಾತ್ರವಲ್ಲ, ನಮ್ಮಲ್ಲಿನ ರೋಗ ಪ್ರತೀಕಾರಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದೊಂದು ಔಷಧಿರಹಿತವಾದ ಚಿಕಿತ್ಸೆ. ಇದರಲ್ಲಿ ಔಷಧಿಯ ಸೈಡ್ ಎಫೆಕ್ಟ್ಗಳಿಲ್ಲದೆ ಆರೋಗ್ಯವನ್ನು ಸರಿಪಡಿಸಬಹುದು.
ಮುದ್ರಾಯೋಗವನ್ನು ಯಾರು ಬೇಕಾದರು ಮಾಡಬಹುದು, ಎಲ್ಲಾ ಪ್ರಕಾರದ ರೋಗಗಳನ್ನು ನಿವಾರಿಸಿಕೊಳ್ಳಬಹುದು. ಮುದ್ರಾ ಯೋಗ ಮಾಡುವುದರ ಜೊತೆಗೆ ನಂಬಿಕೆ, ವಿಶ್ವಾಸ ಮತ್ತು ತಾಳ್ಮೆ ಇದ್ದರೆ ಮಾತ್ರ ಪರಿಣಾಮಕಾರಿ. ಬಹು ಮುಖ್ಯವಾದ ಕೆಲವು ಮುದ್ರೆಗಳನ್ನು ಮಾಡುವ ವಿಧಾನ ಹಾಗೂ ಅದರ ಉಪಯೋಗಗಳು
1 ಜ್ಞಾನ ಮುದ್ರೆ
ಹೆಬ್ಬೆರಳಿನ ತುದಿ ಮತ್ತು ತೋರು ಬೆರಳಿನ ತುದಿಯನ್ನು ಸ್ಪರ್ಶಿಸಿದಾಗ ಜ್ಞಾನಮುದ್ರೆ ಆಗುತ್ತದೆ.ಇದು ಏಕಾಗ್ರತೆ ಹೆಚ್ಚಿಸುತ್ತದೆ, ನಿದ್ರ್ರಾಹೀನತೆ, ತಲೆನೋವು, ಕೋಪದ ಸಮಸ್ಯೆ, ಮರೆವು ಪರಿಹರಿಸುತ್ತದೆ. ಮುಖ್ಯವಾಗಿ ಮತಿಮಾಂದ್ಯತೆ ನೀಗುತ್ತದೆ (ರಾತ್ರಿ ಇಡೀ ಮುದ್ರೆಗೆ ಟೇಪ್ ಹಾಕಿಡಬೇಕು). ಸ್ಮರಣ ಶಕ್ತಿ ಚುರುಕಾಗುತ್ತದೆ.
2 ಆಕಾಶ ಮುದ್ರೆ
ಹೆಬ್ಬೆರಳಿನ ತುದಿ ಮತ್ತು ಮಧ್ಯದ ಬೆರಳಿನ ತುದಿಯನ್ನು ಸ್ಪರ್ಶಿಸಿದಾಗ ಆಕಾಶ ಮುದ್ರೆ ಆಗುತ್ತದೆ. ಹೃದಯದ ಯಾವುದೇ ಸಮಸ್ಯೆಯಿದ್ದರೂ, ಈ ಮುದ್ರೆಯಿಂದ ಶಮನವಾಗುತ್ತದೆ. ಕಿವಿಯ ತೊಂದರೆ ಸರಿಪಡಿಸುತ್ತದೆ. ಎಲುಬುಗಳನ್ನು ಗಟ್ಟಿಮುಟ್ಟಾಗಿಡುತ್ತದೆ. ಮೈಗ್ರೇನ್ ತಲೆನೋವುವನ್ನು ಸರಿಪಡಿಸುತ್ತದೆ. ಶರೀರದಲ್ಲಿನ ವಿಷದ್ರವ್ಯಗಳನ್ನು ಹೊರ ಹಾಕಿ ಶರೀರ ಶುದ್ಧವಾಗಿದುತ್ತದೆ.
3 ಪೃಥ್ವಿ ಮುದ್ರೆ
ಹೆಬ್ಬೆರಳಿನ ತುದಿ ಮತ್ತು ಬೆರಳಿನ ತುದಿ ಸ್ಪರ್ಶಿಸಿದಾಗ ಪೃಥ್ವಿ ಮುದ್ರೆ ಆಗುತ್ತದೆ.
ಜ್ವರ ಬರದಂತೆ ಕಾಪಾಡುತ್ತದೆ/ಜ್ವರ ಇದ್ದರೆ ಅದನ್ನು ಇಳಿಸುತ್ತದೆ. ಈ ಮುದ್ರೆಯು ರಕ್ತದ ಚಲನೆ ಹೆಚ್ಚಿಸುತ್ತದೆ. ಇದು ನಮ್ಮ ದೇಹದ ಎಲುಬು ಮತ್ತು ಸ್ನಾಯುಗಳ ಬಲವರ್ಧಿಸುತ್ತದೆ. ತ್ವಚೆಯ ಕಾಂತಿ ಹೆಚ್ಚುಸುತ್ತದೆ. ಬಾವು, ಹುಣ್ಣು ಸರಿಪಡಿಸುತ್ತದೆ. ತಲೆಗೂದಲು ಉದುರುತ್ತ್ತಿದ್ದರೆ, ನೆರೆಯುತ್ತಿದ್ದರೆ ಸರಿಪಡಿಸುತ್ತದೆ.
4 ವರುಣ ಮುದ್ರೆ
ಹೆಬ್ಬೆರಳಿನೊಂದಿಗೆ ಕಿರುಬೆರಳಿನ ತುದಿ ಸ್ಪರ್ಶಿಸಿದಾಗ ವರುಣ ಮುದ್ರೆ ಆಗುತ್ತದೆ.
ಈ ಮುದ್ರೆಯು ನಮ್ಮ ದೇಹದಲ್ಲಿರುವ ನೀರಿನ ಅಂಶವನ್ನು ಸಮತೋಲನದಲ್ಲಿ ಇಡುತ್ತದೆ. ನಮ್ಮ ದೇಹದ ಸೌಂದರ್ಯ ಹೆಚ್ಚಿಸುತ್ತದೆ. ನಮ್ಮ ಚರ್ಮಕ್ಕೆ ಕಾಂತಿ ನೀಡುತ್ತದೆ, ಏಕೆಂದರೆ ದೇಹದಲ್ಲಿರುವ ನೀರಿನ ಅಂಶಕ್ಕೆ ಚಾಲನೆ ನೀಡಿ ಅದು ಚರ್ಮವನ್ನು ಪೋಷಿಸುತ್ತದೆ. ಅನೀಮಿಯಾ ಆಗಿ ರಕ್ತ ಕಡಿಮೆ ಆದಾಗ ಸರಿಪಡಿಸುತ್ತದೆ. ಮೂರ್ಛೆ ರೋಗವನ್ನು ಸರಿಪಡಿಸಬಹುದಾಗಿದೆ.
ಎರಡು ಬೆಟ್ಟಿನ ಮುದ್ರೆಗಳು
5 ಆಪಾನ ಮುದ್ರೆ
ಹೆಬ್ಬೆಟ್ಟಿನ ತುದಿಯೊಂದಿಗೆ ಮಧ್ಯದ ಬೆರಳಿನ ತುದಿ ಮತ್ತು ಉಂಗುರ ಬೆರಳಿನ ತುದಿ ಸ್ಪರ್ಶ ಮಾಡಿದಾಗ ಅಪಾನ ಮುದ್ರೆ ಆಗುತ್ತದೆ.
ಹೊಟ್ಟೆಯ ನೋವು, ಉಬ್ಬರಿಸಿದರೆ ಶಮನಗೊಳ್ಳುತ್ತದೆ. ಮೂಲವ್ಯಾಧಿ, ಮಧುಮೇಹದ ಕಾಯಿಲೆ ಸರಿಪಡಿಸುತ್ತದೆ. ಕೈಕಾಲು, ಹೊಟ್ಟೆ, ಎದೆ ಉರಿಗಳನ್ನು ಶಮನಗೊಳಿಸುತ್ತದೆ. ಹಲ್ಲು ನೋವು, ವಸಡು ರೋಗಗಳನ್ನು ಗುಣಪಡಿಸುತ್ತದೆ.
6 ಪ್ರಾಣ ಮುದ್ರೆ
ಹೆಬ್ಬೆಟ್ಟಿನ ತುದಿಯೊಂದಿಗೆ ಉಂಗುರ ಬೆರಳಿನ ತುದಿ ಮತ್ತು ಕಿರಿಬೆರಳಿನ ತುದಿ ಸ್ಪರ್ಶ ಮಾಡಿದಾಗ ಪ್ರಾಣ ಮುದ್ರೆ ಆಗುತ್ತದೆ.
ಈ ಮುದ್ರೆಯು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಸುಧಾರಿಸಿ, ದೃಷ್ಟಿಯನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ಆಯಾಸವನ್ನು ಹೋಗಲಾಡಿಸಿ ಹೆಚ್ಚು ಉಲ್ಲಾಸದಿಂದ ಇರಲು ನೆರವಾಗುತ್ತದೆ. ಶರೀರಕ್ಕೆ ಬೇಕಾದ ಎ, ಬಿ, ಸಿ, ಡಿ, ಇ ಮತ್ತು ಕೆ ವಿಟಾಮಿನ್ಗಳನ್ನು ಪೂರೈಸುತ್ತದೆ. ಅತ್ತಿ ಮುಖ್ಯವಾದ ವಿಷಯವೆಂದರೆ ಯಾವುದೇ ಚಿಕಿತ್ಸೆಗೋಸ್ಕರ ಮಾಡಿದ ಮುದ್ರೆಯ ಜೊತೆಗೆ ಈ ಮುದ್ರೆ ಮಾಡಿದರೆ, ಚಿಕಿತ್ಸೆ ಬಹುಬೇಗ ಫಲಿಸುತ್ತದೆ.
7 ವಾಯು ಮುದ್ರೆ
ತೋರುಬೆರಳಿನ ತುದಿಯನ್ನು ಹೆಬ್ಬೆಟ್ಟಿನ ಬುಡಕ್ಕೆ ತಾಗಿಸಿ ಹೆಬ್ಬೆಟ್ಟನ್ನು ತೋರು ಬೆರಳಿನ ಬೆನ್ನಿನ ಮೇಲೆ ಇಡಬೇಕು ಆಗ ಅದು ವಾಯು ಮುದ್ರೆ ಆಗುತ್ತದೆ. ಈ ಮುದ್ರೆಯು ನಮ್ಮ ದೇಹದಲ್ಲಿನ ಗಾಳಿಯನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಶರೀರದ ಹಲವು ಭಾಗಗಳಲ್ಲಿ ವಾಯುವು ಹೆಚ್ಚಾಗಿ ನೋವುಗಳು ಬರುತ್ತವೆ. ವಾಯು ಮುದ್ರೆ ಮಾಡುವುದರಿಂದ ಎಲ್ಲಾ ನೋವನ್ನು ಶಮನಗೊಳಿಸಿಕೊಳ್ಳಬಹುದು.
8 ಸೂರ್ಯ ಮುದ್ರೆ
ಉಂಗುರ ಬೆರಳಿನ ತುದಿಯನ್ನು ಹೆಬ್ಬೆಟ್ಟಿನ ಬುಡಕ್ಕೆ ತಾಗಿಸಿ, ಹೆಬ್ಬೆಟ್ಟನ್ನು ಉಂಗುರ ಬೆರಳಿನ ಬೆನ್ನಿನ ಮೇಲೆ ಇರಿಸಬೇಕು. ಆಗ ಅದು ಸೂರ್ಯ ಮುದ್ರೆ ಆಗುತ್ತದೆ.
ಬೊಜ್ಜು ಕರಗಿಸಬಹುದು. ರಕ್ತದಲ್ಲಿ ಕೊಲೇಸ್ಟ್ರಾಲ್ ಕಡಿಮೆಗೊಳಿಸುತ್ತದೆ. ಶರೀರದಲ್ಲಿ ಉಷ್ಣಾಂಶ ಕಡಿಮೆ ಆದಾಗ ಈ ಮುದ್ರೆ ಮಾಡುವುದರಿಂದ ದೇಹದ ಉಷ್ಣಾಂಶ ಹೆಚ್ಚುತ್ತದೆ.
ಸೌಮ್ಯ ಅಶೋಕ್
ಬೆಂಗಳೂರು

ದಿನದ ಸುದ್ದಿ
ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣ | ಭದ್ರಾ ನಾಲೆ ನೀರು ನಿರ್ವಹಣೆ
ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
ಗುರುವಾರ(ಫೆ.19) ರಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಾಲೆಯ ಕೊನೆಯ ಭಾಗದ ರೈತರಿಗೆ ನೀರು ತಲುಪಿಸಲು ನಾಲೆಯುದ್ದಕ್ಕೂ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಅನಧಿಕೃತವಾಗಿ ನೀರು ಎತ್ತುವವರ ಮೋಟಾರ್ಗಳನ್ನು ವಶಪಡಿಸಿಕೊಳ್ಳಲಾಗುವುದು.
ಪ್ರಿಪೇಯ್ಡ್ ಆಟೋಗಳನ್ನು ಚಾಲ್ತಿಗೊಳಿಸಿದ್ದು, ಇದಕ್ಕೆ ರೂ.38/-ಶುಲ್ಕ ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಶೇಖರ್ ಹೆಚ್.ಟಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಂಕಣ
Indian birthwort: ಪರಮಾತ್ಮನ ಹೆಸರಲ್ಲೇ ಇರುವ ದಿವ್ಯೌಷದ ಈಶ್ವರ ಬಳ್ಳಿ ಬಗ್ಗೆ ಗೊತ್ತೇ?
‘ಈಶ್ವರ’ ಎಂದ ಕೂಡಲೇ ಪರಮಾತ್ಮನನ್ನೆ ನೆನಪಿಸಿಕೊಳ್ಳೋ ನಮಗೆ ಅದೇ ಹೆಸರಿನಲ್ಲಿ ದಿವ್ಯೌಷಧಿ ಇದೆ ಎಂಬುದು ಎಷ್ಟು ಜನರಿಗೆ ತಿಳಿದೀತು? ಹೌದು! ಪರಮಾತ್ಮನ ಹೆಸರಿನಲ್ಲೇ ಒಂದು ಗಿಡಮೂಲಿಕೆ ಇದೆ (Indian birthwort). ಇದರ ವಿಶೇಷತೆ ಏನು? ಅದರಿಂದಾಗುವ ಪ್ರಯೋಜನಗಳೇನು? ಆರೋಗ್ಯದ ಮೇಲೆ ಬೀರುವ ಪ್ರಬಾವಗಳೇನು? ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಈ ಬಳ್ಳಿಯನ್ನು ಹೆಚ್ಚಾಗಿ ಭಾರತ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಬಹುದಾಗಿದೆ. ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ. ಸಾಮಾನ್ಯವಾಗಿ ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿಯಾಗಿದ್ದು, ಇದರ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇನ್ನೂ ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ ಹಾಗು ಇದರ ಬೇರುಗಳಲ್ಲಿ ಸುಗಂಧ ತೈಲವಿರುತ್ತದೆ.
ಈಶ್ವರ ಬಳ್ಳಿ (Indian birthwort)ಯ ಪೌರಾಣಿಕ ಹಿನ್ನೆಲೆ:
ನಮ್ಮೆಲ್ಲರಿಗೂ ತಿಳಿದಂತೆ ಶಿವ ಸಮುದ್ರ ಮಂಥನ ಮಾಡುವಾಗ ಹಾಲಾಹಲ (ವಿಷ) ಉತ್ಪತ್ತಿಯಾಯಿತು. ಆ ವಿಷ ಯಾರಿಗೂ ತೊಂದರೆಯಾಗಬಾರದೆಂದು ತಾನೇ ಅದನ್ನು ಕುಡಿದ. ಇದನ್ನು ನೋಡಿದ ಪಾರ್ವತಿ ದೇವಿ ಆ ವಿಷ ತನ್ನ ಪತಿಯ ಹೊಟ್ಟೆ ಸೇರಬಾರದೆಂದು ಆತನ ಕುತ್ತಿಗೆಯನ್ನು ಒತ್ತಿ ಹಿಡಿದಳು. ವಿಷ ಒಳ ಹೋಗಲಿಲ್ಲ. ವಿಷದ ಪ್ರಭಾವದಿಂದ ಕುತ್ತಿಗೆ ನೀಲ ವರ್ಣವಾಯಿತು. ಶಿವ ನೀಲಕಂಠನಾದ. ಶಿವ ವಿಷ ಕುಡಿದರೂ ಶಿವನಿಗೆ ಏನೂ ಆಗಲಿಲ್ಲ. ವಿಷವನ್ನು ನಿರ್ವಿಷ ಮಾಡುವ ಗುಣ ಶಿವನಿಗಿದ್ದಂತೆ ಈ ಗಿಡಕ್ಕೂ ಇರುವ ಕಾರಣ ‘ಈಶ್ವರ’ ಎಂಬ ಹೆಸರು ಈ ವನಸ್ಪತಿಗೆ ಇಟ್ಟಿದ್ದಾರೆ.
ಇದನ್ನೂ ಓದಿ: ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ
‘ಈಶ್ವರ’ ಬಳ್ಳಿ ಮತ್ತು ಅದರ ಫಲ ನೋಡಲು ಹೇಗಿರುತ್ತದೆ?
ಕೆಲ ‘ಈಶ್ವರ’ ಬಳ್ಳಿಯು ಮರದಂತೆ ಉದ್ದಕ್ಕೆ ಏರುತ್ತದೆ. ಮತ್ತಷ್ಟು ಬಳ್ಳಿಯು ಪೊದೆಯಾಗಿ ಆವರಿಸಿಕೊಳ್ಳುತ್ತದೆ. ಸ್ವಲ್ಪ ಉದ್ದ ಆಯತಾಕಾರದ ಎಲೆಗಳು. ಎಲೆಗಳು ಅಲ್ಲಾಡಿದರೆ ಪರಿಮಳ ಸೂಸುತ್ತದೆ. ಎಲೆಯನ್ನು ಕಿವಿಚಿದರೂ ಪರಿಮಳ ಬರುತ್ತದೆ. ಹೂಗಳು ಬಾಯಿ ತೆರೆದ ಹಕ್ಕಿಗಳಂತೆ ಕಂಡುಬರುತ್ತದೆ. ಫಲಗಳು ಉದ್ದ ಹಾಗೂ ಸ್ವಲ್ಪ ದುಂಡಾಗಿ ಇರುತ್ತದೆ. ಫಲ ಬೆಳೆದು ಒಡೆದಾಗ ತಲೆ ಕೆಳಗಾಗಿ ಬಿಡಿಸಿದ ಪ್ಯಾರಾಚೂಟ್ನಂತೆ ಕಾಣುತ್ತದೆ. ಅದರೊಳಗೆ ತೆಳುವಾದ ತ್ರಿಕೋಣಾಕಾರದ ಬೀಜಗಳು ಇರುತ್ತದೆ.
‘ಈಶ್ವರ’ ಬಳ್ಳಿ (Indian birthwort)ಯಿಂದ ಆಗುವ ಪ್ರಯೋಜನಗಳೇನು?
ಭಾರತದ ಎಲ್ಲಾ ಕಡೆ ಕಂಡು ಬರುವ ಈಶ್ವರ ಬಳ್ಳಿಯ ಬೇರು, ಎಲೆಗಳು ಔಷಧಿಗಾಗಿ ಉಪಯೋಗಿಸಲ್ಪಡುತ್ತದೆ. ಕ್ರಿಮಿ ಬಾಧೆ, ಕಫ ಬಾಧೆ, ಸ್ತ್ರೀಯರ ಕೆಲವು ತೊಂದರೆಗಳಲ್ಲಿ, ವಿಷ ಚಿಕಿತ್ಸೆಯಲ್ಲಿ ವಿಶೇಷವಾಗಿ ಇದನ್ನು ಉಪಯೋಗಿಸಲ್ಪಡುತ್ತದೆ.
ಜೇಡ, ಚೇಳು, ಇಲಿ ಕಚ್ಚಿದರೆ: ಇದರ 3ಗ್ರಾಂ ಬೇರನ್ನು ಅಕ್ಕಿ ತೊಳೆದ ನೀರಲ್ಲಿ ಕಲಸಿ ಕುಡಿಸಬೇಕು ಹಾಗೂ ಅದರ ಎಲೆಯನ್ನು ನೀರಲ್ಲಿ ಅರೆದು ಕಚ್ಚಿದಲ್ಲಿಗೆ ಲೇಪಿಸಬೇಕು.
ತಲೆ ನೋವಿಗೆ ರಾಮಬಾಣ: ಈಶ್ವರ ಬಳ್ಳಿಯ ಎಲೆಯಲ್ಲಿ 10 ಗ್ರಾಂ ರಸ ತೆಗೆದು, 3ಗ್ರಾಂ ಅರಿಶಿನ ಪುಡಿ ಸೇರಿಸಿ ಕುಡಿಯುವುದರಿಂದ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
ಗಂಟುನೋವು, ಬಿಳಿ ಮಚ್ಚೆಗಳು: ಈ ಎಲೆಯನ್ನು ನೀರಲ್ಲಿ ಅರೆದು ಗಂಟುನೋವು ಅಥವಾ ಬಿಳಿ ಮಚ್ಚೆಗಳ ಮೇಲೆ ಹಚ್ಚುತ್ತ ಬಂದರೆ ಕ್ರಮೇಣ ವಾಸಿಯಾಗುತ್ತದೆ.
ಕೆಮ್ಮು ಕಫಕ್ಕೆ ಔಷಧಿ: ಇದರ ಎಲೆಯ ಜ್ಯೂಸ್ ತೆಗೆದು 15 ಎಂಎಲ್ ನಷ್ಟು ಕುಡಿಸುವುದರಿಂದ ಕಡಿಮೆಯಾಗುವುದು. ಕೆಲವೊಮ್ಮೆ ಈ ಎಲೆಯ ಜ್ಯೂಸ್ ಕುಡಿದ ಸ್ವಲ್ಪ ಹೊತ್ತಿನಲ್ಲಿ ಕಫ ವಾಂತಿಯಾಗಿ ಕರಗಿ ಹೋಗುತ್ತದೆ. ಕಫ ಜಾಸ್ತಿ ಇರುವಾಗ ಸಾಮಾನ್ಯವಾಗಿ ಅಮೃತಾಂಜನ, ವಿಕ್ಸ್ ಎದೆಗೆ ಹಚ್ಚುತ್ತಾರೆ. ಅದೇ ರೀತಿ ಎಲೆಯನ್ನು ಅರೆದು ಎದೆಗೆ ಹಚ್ಚಬಹುದು.
ಮುಟ್ಟಿನ ದೋಷ ನಿವಾರಣೆ: ಹೆಣ್ಣುಮಕ್ಕಳ ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ 10ಗ್ರಾಂ ಈಶ್ವರ ಬೇರಿನ ಕಷಾಯ ಮಾಡಿ (30 ರಿಂದ 40 ಎಂ.ಎಲ್) ಕುಡಿಸಬೇಕು.
ಹೊಟ್ಟೆ ಕ್ರಿಮಿ ಬಾಧೆ: 5-10 ಮಿಲಿ ಎಲೆರಸವನ್ನು 3 ದಿನ ಕುಡಿಯುವುದರಿಂದ ಕಡಿಮೆಯಾಗುವುದು.
ಜ್ವರಕ್ಕೆ ದಿವ್ಯೌಷಧಿ: 5 ಗ್ರಾಂ ಈಶ್ವರ ಬೇರನ್ನು ಕಷಾಯ ಮಾಡಿ ಅದಕ್ಕೆ 1/2 ಚಮಚ ಕಾಳು ಮೆಣಸು ಪುಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು. ಶರೀರ ಬಿಸಿ ಆಗಿ ಚಳಿಯಿಂದ ಕೂಡಿದ ಜ್ವರವಿದ್ದರೆ ಈಶ್ವರ ಬೇರಿನ ಕಷಾಯದೊಂದಿಗೆ ಈಶ್ವರ ಬೇರಿನ ಎಲೆ ರಸಕ್ಕೆ ಹಿಪ್ಪಿಯನ್ನು ಪುಡಿಮಾಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು.
ಸರ್ಪ ಸುತ್ತಿಗೆ ರಾಮಬಾಣ: ಇತ್ತೀಚೆಗೆ ಸರ್ಪ ಸುತ್ತಿಗೆ ಅನೇಕ ಔಷಧಿಗಳಿದ್ದರು ಈಶ್ವರ ಬೇರು ಮತ್ತು ನೀಲಿ ಸೊಪ್ಪನ್ನು ಸೇರಿಸಿ ಅರೆದು ಹಚ್ಚುವುದರಿಂದ ಉರಿ ನೋವು ಕಡಿಮೆಯಾಗುವುದು.
ದೃಷ್ಟಿ ದೋಷ ನಿವಾರಣೆ: ಇದರ ಬೇರನ್ನು ನಯವಾಗಿ ಚೂರ್ಣಮಾಡಿ ಅದಕ್ಕೆ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.
ಮಲಬದ್ಧತೆ ಮತ್ತು ಮೂಲವ್ಯಾಧಿ ನಿವಾರಣೆ: ಈಶ್ವರಿಬೇರು, ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಇವುಗಳೆಲ್ಲವನ್ನು ಸಮತೂಕದಲ್ಲಿ ನಯವಾಗಿ ಚೂರ್ಣಿಸಬೇಕು. ನಂತರ 2 ರಿಂದ 2.5 ಗ್ರಾಂ ಚೂರ್ಣವನ್ನು ಸೇವಿಸಿ ಬಿಸಿನೀರು ಕುಡಿದರೆ ಮಲಬದ್ಧತೆ ಮತ್ತು ಮೂಲವ್ಯಾದಿ ನಿವಾರಣೆಯಾಗುತ್ತದೆ.
ಹೀಗೆ ಈಶ್ವರ ಬೇರು (Indian birthwort) ಮತ್ತು ಅದರ ಎಲೆಯಲ್ಲಿ ಅಡಗಿರುವ ದಿವ್ಯೌಷಧಿ ಅಪಾರ. ಅದರಲ್ಲಿ ತೀಕ್ಷ ಗುಣಗಳುಳ್ಳ ಮದ್ದಾಗಿದ್ದು, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಯಾವುದೇ ಔಷಧಿಯಾದರು ಉಪಯೋಗಿಸು ಮುನ್ನ ಒಮ್ಮೆ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ.












