ರಾಜಕೀಯ
ಹಿಂದುತ್ವ ಮತ್ತು ಬಿಜೆಪಿ

ಪ್ರಗ್ಯಾ ಸಿಂಗ್ ಠಾಕೂರ್ ಅನ್ನು ಲೋಕಸಭಾ ಚುನಾವಣೆಯಲ್ಲಿ ನಿಲ್ಲಿಸಿದ್ದು ನನಗೆ ತೀರಾ ಆಶ್ಚರ್ಯವಾಗಿಯೇನೂ ಕಾಣುತ್ತಿಲ್ಲ. ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೇಟು ನಿರಾಕರಿಸಿದ್ದು ಕೂಡ ದೊಡ್ಡ ಆಶ್ಚರ್ಯವೇನಲ್ಲ. ಇದು ಸಂಘ ಪರಿವಾರದಲ್ಲಿ ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಯೋಜನಾ ಪ್ರಕ್ರಿಯೆ ಮತ್ತು ಅನುಷ್ಠಾನ.
ಜನಸಾಮಾನ್ಯ ಹಿಂದುತ್ವವಾದ ಮತ್ತು ಹಿಂದೂರಾಷ್ಟ್ರದ ಕಲ್ಪನೆಯನ್ನು ಪರಿಗಣಿಸುವಂತೆ ಮಾಡುವುದು ಅವರ ಮೊದಲ ಹಂತದ ಕೆಲಸವಾಗಿತ್ತು. ಸ್ವಾತಂತ್ರ್ಯದ ನಂತರದ ದಶಕಗಳಲ್ಲಿ ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಎಲ್ಲರನ್ನೂ ಒಳಗೊಳ್ಳುವ ಸಂವಿಧಾನ ಪ್ರೇರಿತ ರಾಷ್ಟ್ರೀಯತೆ ಬಹುಸಂಖ್ಯಾತ ಜನರಲ್ಲಿ ಸಾಮಾನ್ಯವಾಗಿಯೇ ಇತ್ತು. ಇಂಥಾ ವಾತಾವರಣದಲ್ಲಿ ವಾಜಪೇಯಿ, ಆಡ್ವಾಣಿ ಮತ್ತು ಜೋಷಿ ಸಾಕಷ್ಟು ಜಾಗರೂಕತೆಯಿಂದಲೇ ಕೆಲಸ ಮಾಡಬೇಕಿತ್ತು. ಇಲ್ಲದಿದ್ದರೆ ಅವರನ್ನಾಗಲೀ, ಅವರ ಸಿದ್ಧಾಂತವನ್ನಾಗಲೀ ಈಗ ಒಪ್ಪಿರುವವರೂ ಒಪ್ಪುವುದು ಕಷ್ಟವಿತ್ತು. ಈ ತಂಡ ಅದನ್ನು ಸಾಕಷ್ಟೂ ಯಶಸ್ವಿಯಾಗಿ ಮಾಡಿದ್ದಲ್ಲದೇ, ಬಲಪಂಥೀಯ ಸರ್ಕಾರಕ್ಕೂ ಕೂಡ ಒಂದು ಗಟ್ಟಿ ತಳಹದಿಯನ್ನು ಹಾಕಿಕೊಟ್ಟಿತು.
ಈ ತಳಹದಿ ದೊರೆತ ಮೇಲೆ ಹಿಂದುತ್ವವಾದವನ್ನು ಇನ್ನಷ್ಟು ನೆಲ-ಮನಕ್ಕಿಳಿಸಲು ಆ ತಲೆಮಾರಿಗಿಂತ ಹೆಚ್ಚು ಆಗ್ರಹಪೂರ್ವಕವಾಗಿ ಕೆಲಸ ಮಾಡುವ ತಲೆಮಾರಿನ ಅಗತ್ಯ ಕಾಣಿಸಿತು. ಹೀಗಾಗಿ ಮೋದಿಯನ್ನು ಮುನ್ನೆಲೆಗೆ ತರಲಾಯಿತು. ಜೋಷಿ, ಆಡ್ವಾಣಿಯವರನ್ನು ಬದಿಗೆ ಸರಿಸಿದ್ದು ಈ ಪ್ರಕ್ರಿಯೆಯೇ. ಮೋದಿಯವರ ಆಡಳಿತದಲ್ಲಿ ಪರಿವಾರ ಈ ಗುರಿಯತ್ತ ಸಾಕಷ್ಟು ದೂರ ಕ್ರಮಿಸುವುದು ಸಾಧ್ಯವಾಯಿತು ಎನ್ನುವುದನ್ನು ನಾವೆಲ್ಲ ಕಳೆದ ಐದು ವರ್ಷಗಳಲ್ಲಿ ಚೆನ್ನಾಗಿಯೇ ನೋಡಿದ್ದೇವೆ. ರಾಷ್ಟ್ರೀಯತೆಯ ವ್ಯಾಖ್ಯಾನವನ್ನು ಬದಲಿಸುವುದು, ದೇಶದ್ರೋಹವನ್ನು ಮರುವ್ಯಾಖ್ಯಾನಿಸುವುದು, ವಿಶ್ವವಿದ್ಯಾಲಯಗಳ ಮೇಲೆ, ವಿದ್ಯಾರ್ಥಿಗಳ ಮೇಲೆ ವೈಚಾರಿಕ ನಿರ್ಬಂಧ ಹೇರಿ, ತಮ್ಮದನ್ನು ಹೇರಲು ಮಾಡಿದಂಥಾ ಪ್ರಯತ್ನಗಳು, ದೇಶದ ಆಹಾರ ಪದ್ಧತಿಗಳ ಮೇಲೆ ಆದಂತಹ ಹಲ್ಲೆಗಳು, ಸಂವಿಧಾನವನ್ನು ನಿಕಶಕ್ಕೆ ಒಡ್ಡುವುದು, ಇನ್ನೂ ಮುಂತಾದವು ಕೇವಲ stray incidents ಅಲ್ಲ.
ಈಗ ಮೋದಿಯವರ “ಯಶಸ್ವೀ” ಪಾತ್ರವೂ ಕೊನೆಯ ಹಂತದಲ್ಲಿರುವಾಗ ಹಿಂದುತ್ವವಾದವನ್ನು ಅವರಿಗಿಂತ ಹೆಚ್ಚು ಭಾವೋದ್ವೇಗದಿಂದ ಹೇರುವ, ನಾಟಿಸುವ ತಲೆಮಾರಿನ ಅವಶ್ಯಕತೆ ಪರಿವಾರಕ್ಕೆ ಇದೆ. ಈ ಹಂತದಲ್ಲಿ ಬೌದ್ಧಿಕ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಭಾವನಾತ್ಮಕ ಸಾಮರ್ಥ್ಯದ ಅಗತ್ಯವಿದೆ. ಒಂದು ರೀತಿಯ ಮಿಲಿಟೆನ್ಸಿಯ ಅಗತ್ಯವೂ ಇದೆ. ಹೀಗಾಗಿಯೇ ಯಾರೂ ಊಹಿಸದ, ಆದರೆ ಅಂಥಾ ಉದ್ದೇಶಕ್ಕಾಗಿಯೇ ತರಬೇತಾಗಿರುವ ಯೋಗಿ, ಮಣಿಪುರ ಮತ್ತು ತ್ರಿಪುರಾದ ಮುಖ್ಯಮಂತ್ರಿಗಳು ಮುನ್ನೆಲೆಗೆ ಬಂದಿದ್ದು. ಅವರ ಕಾಲಾಳುಗಳಾಗಿ ದೇಶದ ತುಂಬಾ ಲಕ್ಷಾಂತರ ಯುವಕರು ತಯಾರಾಗಿದ್ದಾರೆ.
ಅವರಲ್ಲಿನ ಅನೇಕ ಮುಂದಾಳುಗಳಲ್ಲಿ ಒಬ್ಬ ಸೂರ್ಯ. ಆತನಿಗೆ ಇಂದು ಪ್ರವೇಶ ದೊರೆತಿದೆ. ಅದೇ ಪ್ರಕ್ರಿಯೆಯ ಭಾಗವಾಗಿಯೇ ಪ್ರಗ್ಯಾ ಸಿಂಗ್ ಠಾಕೂರ್ ಅನ್ನು ಕೂಡ ತರಲಾಗಿದೆ. ಒಂದು ವೇಳೆ ಇಂದು ಅನಂತಕುಮಾರ್ ಬದುಕಿದ್ದು, ಅವರನ್ನೂ ಈ ಚುನಾವಣೆಯಲ್ಲಿ ಬದಿಗೆ ಸರಿಸಿದ್ದರೂ ಕೂಡ ಆಶ್ಚರ್ಯವಾಗುತ್ತಿರಲಿಲ್ಲ. ಅದು ಕೂಡ ಆ ಕಾರ್ಯಕ್ರಮದ ಭಾಗವೇ ಆಗಿರುತ್ತಿತ್ತು. ಒಂದೆರಡು ದಿನಗಳ ಪ್ರತಿರೋಧದ ನಂತರ ಪರಿವಾರದೊಳಗೆ ಎಲ್ಲವೂ ತಣ್ಣಗಾಗುತ್ತಿತ್ತು. ಬಹುಶಃ ಈ ಚುನಾವಣೆಯಲ್ಲೇ ಹಾಗಾಗುತ್ತಿರಲಿಲ್ಲ ಎಂದುಕೊಳ್ಳುವುದು ಅವರ ಹತ್ತಿರದವರಿಗೆ ಸಮಾಧಾನ ತರಬಹುದು.
ಬಲಪಂಥೀಯತೆಯನ್ನು ಇಷ್ಟು ಕರಾರುವಾಕ್ಕಾಗಿ ಪಸರಿಸುತ್ತಿರುವ ಈ ಧೀರ್ಘಕಾಲೀನ ಕಾರ್ಯಕ್ರಮಕ್ಕೆ ತತ್ಸಮವಾಗಿ ಎದುರು ನಿಲ್ಲುವಂಥಾ ಮಾನವೀಯ ಕಾರ್ಯಕ್ರಮವೊಂದು ನಮ್ಮ ದೇಶದಲ್ಲಿ ಇನ್ನೂ ಗಟ್ಟಿಗೊಳ್ಳದಿರುವುದು ಶೋಚನೀಯ. ನಮ್ಮ ಯುವಪೀಳಿಗೆಗೆ ಇದನ್ನು ಮನದಟ್ಟು ಮಾಡಿಸುವ ಜವಾಬ್ದಾರಿ ನಮ್ಮ ಮೇಲಿದೆ.
–ಕೇಸರಿ ಹರವು
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಶ್ವೇತಪತ್ರ ಹೊರಡಿಸಲು ಎಚ್.ಡಿ. ಕುಮಾರಸ್ವಾಮಿ ಆಗ್ರಹ

ಸುದ್ದಿದಿನ, ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಯೋಜನೆಯ ಫಲ ಎಷ್ಟು ಜನರಿಗೆ ಲಭ್ಯವಾಗಿದೆ, ಆರ್ಥಿಕವಾಗಿ ಎಷ್ಟು ಹೊರೆಬಿದ್ದಿದೆ, ಇದುವರೆಗೆ ಫಲಾನುಭವಿಗಳ ಖಾತೆಗೆ ಎಷ್ಟು ಹಣ ಜಮೆಯಾಗಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ.
ಸರ್ಕಾರದ ಗ್ಯಾರಂಟಿ ಯೋಜನೆಗಳು ವಿಫಲವಾಗಿದೆ, ಸಮರ್ಪಕವಾಗಿ ಜಾರಿಯಾಗುತ್ತಿಲ್ಲ, ಈ ಬಗ್ಗೆ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪಂಚಾಯತ್ ರಾಜ್ ಇಲಾಖೆ ಜತೆ ಕೆಲಸ ಮಾಡಲು ಬಂಧುತ್ವ ಫೌಂಡೇಷನ್ ಸಿದ್ಧ : ಅಧ್ಯಕ್ಷ ರಾಘು ದೊಡ್ಡಮನಿ

ಸುದ್ದಿದಿನ, ದಾವಣಗೆರೆ : ಮಕ್ಕಳ ವಿಷೇಶ ಗ್ರಾಮ ಸಭೆಯ ಮೂಲಕ ಜಿಲ್ಲೆಯ ಮಕ್ಕಳ ಶಿಕ್ಷಣ, ರಕ್ಷಣೆ ಹಾಗೂ ಅವರ ಹಕ್ಕು ಬಾಧ್ಯತೆಗಳಿಗಾಗಿ ಪಂಚಾಯತ್ ರಾಜ್ ಇಲಾಖೆಯ ಜತೆ ಕೆಲಸ ಮಾಡಲು ನಮ್ಮ ಬಂಧುತ್ವ ಫೌಂಡೇಷನ್ ಸಿದ್ಧವಿದೆ ಎಂದು ಫೌಂಡೇಶನ್ ನ ಅಧ್ಯಕ್ಷರಾದ ರಾಘು ದೊಡ್ಡಮನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ಗ್ರಾಮ ಸಭೆ ರೂಪಿಸಲು ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಇದೇ ತಿಂಗಳ 14 ರಿಂದ ಜನವರಿ 24 ರವರೆಗೆ 10 ವಾರಗಳ ಮಕ್ಕಳ ಸ್ನೇಹಿ ಅಭಿಯಾನ ಹಾಗೂ ಮಕ್ಕಳ ಗ್ರಾಮ ಸಭೆ ನಡೆಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಸೂಚನೆ ನೀಡಲಾಗಿದೆ.
ಈ ಅಭಿಯಾನವು ಗ್ರಾಮ ಪಂಚಾಯಿತಿಗಳನ್ನು ಮಕ್ಕಳ ಸ್ನೇಹಿಯಾಗಿಸಲು ಪಂಚಾಯತ್ ರಾಜ್ ಇಲಾಖೆ ಈ ಮೂಲಕ ದಾಪುಗಾಲಿಟ್ಟಿದೆ. ಸ್ಥಳೀಯ ಸಂಸ್ಥೆಗಳ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಸರ್ಕಾರದ ಮಹಾತ್ವಕಾಂಕ್ಷೆಯ ಯೋಜನೆ ಇದಾಗಿದ್ದು, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿಗಳು ತಮ್ಮ ಸದಸ್ಯರು ಹಾಗೂ ಸ್ಥಳೀಯ ಶಾಲೆಗಳು, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಮ್ಮ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಕಡ್ಡಾಯವಾಗಿ ಈ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ವಿಷೇಶ ಗ್ರಾಮ ಸಭೆ ನಡೆಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.
ಮಕ್ಕಳ ವಿಷೇಶ ಗ್ರಾಮ ಸಭೆಯು ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಕ್ಕಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಮಕ್ಕಳ ಆರೋಗ್ಯ, ರಕ್ಷಣೆ, ಅಂಗನವಾಡಿಗಳು, ಶಾಲೆ, ಶಾಲಾ ಆವರಣ, ಸ್ವಚ್ಛತೆ, ಬಡ ಮಕ್ಕಳಿಗೆ ನೆರವು ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು. ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳ ಜೊತೆ ಅಧಿಕಾರಿಗಳು ಸಭೆಯಲ್ಲಿ ಖುದ್ದು ಹಾಜರಿರಬೇಕು. ಮಕ್ಕಳ ಸಭೆ ಅಲ್ಲವೇ ಎಂದು ಯಾರು ಸಹ ನಿರ್ಲಕ್ಷ್ಯ ತೋರುವಂತಿಲ್ಲ. ಸಾಮಾನ್ಯ ಗ್ರಾಮ ಸಭೆಗಳಿಗಿರುವಷ್ಟು ಪ್ರಾಮುಖ್ಯತೆ ಈ ಮಕ್ಕಳ ಸಭೆಗೂ ಇರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆ; ರಾಜಕೀಯ ಪಕ್ಷಗಳೊಂದಿಗೆ ಜಾಹಿರಾತು ದರ ನಿಗದಿ ಸಭೆ

ಸುದ್ದಿದಿನ,ದಾವಣಗೆರೆ : 2024 ರಲ್ಲಿ ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮುದ್ರಣ, ವಿದ್ಯುನ್ಮಾನ ಮಾಧ್ಯಮ, ಕೇಬಲ್ ಟಿ.ವಿ ಗಳಲ್ಲಿ ಪ್ರಚಾರ ಮಾಡಲು ನಿಗದಿ ಮಾಡಿರುವ ಜಾಹಿರಾತು ದರದ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನವೆಂಬರ್ 10 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.
ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ರಾಜ್ಯ ಮಟ್ಟದ ಪತ್ರಿಕೆಗಳು, ಸ್ಥಳೀಯ, ಪ್ರಾದೇಶಿಕ, ವಾರಪತ್ರಿಕೆ, ಕೇಬಲ್ ಟಿ.ವಿ.ಗಳಲ್ಲಿ ನೀಡುವ ಚುನಾವಣಾ ಜಾಹಿರಾತುಗಳಿಗೆ ಅನ್ವಯಿಸುವ ದರದ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರಿಗೆ ತಿಳಿಸಲಾಯಿತು.
ಚುನಾವಣಾ ಸಂದರ್ಭದಲ್ಲಿ ಎಂಸಿಎಂಸಿ ಸಮಿತಿಯು ಕಾರ್ಯನಿರ್ವಹಿಸಲಿದ್ದು ಇದರ ಎಲ್ಲಾ ಮೇಲ್ವಿಚಾರಣೆ ನಡೆಸಲಿದೆ. ಅಭ್ಯರ್ಥಿಗಳು ನೀಡುವ ಜಾಹಿರಾತು ವೆಚ್ಚವು ಸಹ ಅಭ್ಯರ್ಥಿಗಳಿಗೆ ವೆಚ್ಚಕ್ಕೆ ನಿಗದಿಪಡಿಸಿರುವ ಮೊತ್ತದಲ್ಲಿ ಸೇರಲಿದೆ ಎಂದು ಪಕ್ಷಗಳ ಮುಖಂಡರಿಗೆ ಮನವರಿಕೆ ಮಾಡಿದರು.
ಸಭೆಯಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಜಿ.ಸಿ.ರಾಘವೇಂದ್ರ ಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ, ಚುನಾವಣಾ ತಹಶೀಲ್ದಾರ್ ಅರುಣ್ ಎಸ್.ಕಾರ್ಗಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
