ಲೈಫ್ ಸ್ಟೈಲ್
ನಮ್ಮನೆಗೂ ಕರೆಂಟ್ ಬಂತು..!
- ಡಾ.ಎನ್.ಬಿ.ಶ್ರೀಧರ
ಭಾಗ -01
“ಅಯ್ಯಯ್ಯೋ.ಕರೆಂಟಾ…ನಮ್ ಮನೇಗಂತೂ ಬ್ಯಾಡವೇ ಬ್ಯಾಡ… ಸ್ವಿಚ್ ಆಫ಼್ ಮಾಡದೇ ಮುಟ್ಟಿದ್ದ್ರೆ …ಸರ್ …ಅಂತ ಮೈಯಲ್ಲಿನ ರಕ್ತ ಎಲ್ಲಾ ಎಳ್ಕಳತ್ತೆ..ಮೈಯಲ್ಲಿನ ನರಗಳಲ್ಲಿ ಹರಿದು ಶಕ್ತಿಯನ್ನೆಲ್ಲಾ ಹಿಂಡಿ ಹಿಪ್ಪೆ ಮಾಡುತ್ತೆ.. ಪಂಪಿನಿಂದ ಎತ್ತಿದ ನೀರಲ್ಲಿ ಸತ್ವಾನೇ ಇರಲ್ಲ.. ಬರಿ ಸಪ್ಪೆ…. ಅದರ ಸಹವಾಸ ಸಾಕು”… ಇದು ವಿದ್ಯುಚ್ಚಕ್ತಿ (ಇನ್ಮುಂದೆ ಕರೆಂಟು) ಬಗ್ಗೆ 1985 ರ ಕಾಲದಲ್ಲಿನ ಹಿರಿಯರೊಬ್ಬರ ಅಂಬೋಣ.
ಉತ್ತರ ಕನ್ನಡದ ಅನೇಕ ಹಳ್ಳಿಗಳಂತೇ ನಮ್ಮೂರಿಗೂ ಸಹ 1985 ರವರೆಗೂ ಸಹ ಕರೆಂಟೇ ಇರಲಿಲ್ಲ. ನಾವೆಲ್ಲಾ ಗದ್ದೆಗಳಲ್ಲಿ ಕಾಡು ಹಂದಿಗಳು ಬಂದು ಬೆಳೆ ಹಾಳು ಮಾಡದಂತೆ ಕಾಯಲು ಗದ್ದೆ ತೋಟಗಳ ಮಧ್ಯೆ ಮಾಳಗಳಲ್ಲಿ ಲಾಟೀನು ದೀಪದಲ್ಲಿ ಓದಿದ್ದೇ ಜಾಸ್ತಿ. ಈ ಮಾಳ ಎಂದರೇನು ಎಂಬುದು ಮಲೆನಾಡಿಗರನ್ನು ಬಿಟ್ಟು ಬೇರೆ ಕೆಲವರಿಗೆ ಅರ್ಥವಾಗಲಿಕ್ಕಿಲ್ಲ.
ಗದ್ದೆಯನ್ನು ಕಾಡು ಹಂದಿಗಳಿಂದ ಕಾಯಲು ಅವುಗಳಿಗೆ ಮನುಷ್ಯರ ಭಯ ಇರಲಿ ಎಂದು ರಚಿಸಿದ ಸುಮಾರು 10 ಅಡಿ ಎತ್ತರದಲ್ಲಿ, ಹಾವು, ಕಪ್ಪೆ, ಇಲಿಗಳ ಕಾಟದಿಂದ ರಕ್ಷಣೆ ಪಡೆಯಲು ಮರದ ಕಂಬಗಳನ್ನು ಉಪಯೋಗಿಸಿ, ಅಡಿಕೆ ಸೋಗೆಗಳನ್ನು ಹಾಕಿ ಮಳೆಗೆ ಸೋರದಂತೆ ಕಟ್ಟಿದ ಆಕಾಶ ಚಪ್ಪರ ಎನ್ನಬಹುದೇನೋ.
ರಾತ್ರಿ ಊಟವಾದ ಮೇಲೆ ಸುರಿಯುತ್ತಿರುವ ಮಳೆಯಲ್ಲಿ ಗದ್ದೆ ಬದುಗಳಲ್ಲಿ ನಡೆದು ಹೋಗಿ ಲಾಟೀನುಗಳ ಸಹಾಯದಿಂದ ತಡರಾತ್ರಿಯವರೆಗೆ ಓದುವುದು ನನಗೆ ರೂಢಿಯಾಗಿತ್ತು. ಕೆಲವೊಮ್ಮೆ ಈ ಮಾಳದ ಮಾಡಿನಲ್ಲಿ ನಮ್ಮ ಹಾಗೇ ಬೆಚ್ಚನೆ ವಾಸಸ್ಥಳಕ್ಕಾಗಿ ಅಥವಾ ಅವುಗಳ ಅಹಾರವಾದ ಇಲಿ ಬೇಟೆಗಾಗಿ ಬಂದು ಕೆಲವು ನಾಗಸ್ನೇಹಿತರು ತಲೆ ಹೊರಹಾಕಿ, ಸೀಳಿದ ನಾಲಿಗೆಯನ್ನು ಲೊಚ ಲೊಚನೇ ಚಮಕಿಸಿ ನಮ್ಮ ಜೀವ ಬಾಯಿಗೆ ಬರುವ ಹಾಗೇ ಮಾಡಿದ್ದಿದೆ.
ಲಾಟೀನಿನ ಬೆಳಕಿಗೆ ಆಕರ್ಷಿತವಾದ ವಿವಿಧ ಬಣ್ಣದ ಮಿಡತೆಗಳನ್ನೋ ಅಥವಾ ಕಾಡು ಹುಳಗಳನ್ನೋ ತಿನ್ನಲೆಂದೋ ಬಂದ ಅಸಹ್ಯ ರೂಪದ ಹಲ್ಲಿಗಳು ಪಿಷ್ಟಿ ಹಾಕಿ ಹಾಸಿಕೆಯನ್ನೆಲ್ಲಾ ಅಸಹ್ಯ ಮಾಡುತ್ತಿದ್ದವು. ಒಮ್ಮೊಮ್ಮೆ ತಲೆಯ ಮೇಲೆಯೇ ಬಿದ್ದು ಬಗ್ಗೋಣ ಪಂಚಾಂಗದ ಹಲ್ಲಿ ಶಕುನದ “ತಲೆಯ ಮೇಲೆ ಬಿದ್ದರೆ ಮರಣ” ಬೆನ್ನಿನ ಮೇಲೆ ಬಿದ್ದರೆ ಅಪಘಾತ” ಎಂಬಿತ್ಯಾದಿಗಳನ್ನು ಅಪರಾತ್ರಿಯಲ್ಲಿ ನೆನಪಿಸಿದ್ದಿದೆ.
ಹಾಳಾಗಿ ಹೋಗಲಿ.. ಅವುಗಳು ಪುತ ಪುತನೇ ಉದುರಿಸುವ ಬುಳಿ ಕಂದು ಮಿಶ್ರಿತ ಇಕ್ಕೆಗಳು ಪುಸ್ತಕದ ಮೇಲೆ ಬಿದ್ದು ಪುಸ್ತಕದ ಅಂದ ಕೆಡಿಸುವುದಲ್ಲದೇ, ಅವುಗಳ ಗಬ್ಬು ಅಸಹ್ಯ ವಾಸನೆಯಿಂದ ವ್ಯಾಕ್.. ಎನಿಸುತ್ತಿದ್ದವು.
ಕುಂಬ್ಳಜ್ಜಿ ಎಂದು ಹಳ್ಳಿ ಭಾಷೆಯಲ್ಲಿ ಕರೆಯುವ ವಾಸನಾಯುಕ್ತ ಜೀರುಂಡೆ ಲಾಟಿನಿನ್ ಬೆಳಕಿಗೆ ಆಕರ್ಷಿತವಾಗಿ ಮೈತಾಕಿದಾಗ ದಿನವಾದರೂ ಉಳಿಯುವ ಅದರ ಅಸಹ್ಯ ಗಬ್ಬು ವಾಸನೆ, ಸಂಜೆಯಾದೊಣೆ ರೆಂವ್, ರೆಂವ್ ಅಂತ ಶಬ್ಧ ಮಾಡಿ ತಲೆ ಚಿಟ್ಟು ಹಿಡಿಸುವ ಹುಳ ಹುಪ್ಪಟೆಗಳು, ಇವುಗಳನ್ನು ತಿಂದು ಹೊಟ್ಟೆ ಡುಮ್ಮಣ್ಣನಾಗಲು ಬರುವ ಕಪ್ಪೆಗಳು, ಈ ಕಪ್ಪೆಗಳನ್ನು ಬೆನ್ನಟ್ಟಿ ಬರುವ ನಾನಾ ತರದ ಹಾವುಗಳು, ಈ ಹಾವುಗಳನ್ನು ಹೇಗಾದರೂ ಹೊಂಚುಹಾಕಿ ಹಿಡಿದು ಮುಕ್ಕಲು ಕಾದು ಕುಳಿತ ಗಿಡುಗಗಳು ಪರಿಸರದ ಆಹಾರ ಸರಪಳಿಗೆ ಅತ್ಯುತ್ತಮ ಜೀವಂತ ನೈಜ ಉದಾಹರಣೆಗಳಾಗಿದ್ದವು.
ಈ ಮಾಳವಿದ್ದ ಮೇಲೆ ಅದಕ್ಕೊಂದು ಜೋಡಿ ಜೀವವಾಗಿ ಒಂದು ಹೊಡಸಲು ಇರಲೇ ಬೇಕು. ಹೊಡಸಲು ಅಂದರೆ ಮಳೆಗಾಲದಲ್ಲಿ ಕಂಬಳಿಗಳನ್ನು ಒಣಹಾಕಲು ಬಳಸುವ ನೇತಾಡುವ ಮಂಚದಂತಿರುವ ಆಕೃತಿ. ಮಳೆಯ ರಭಸಕ್ಕೆ ಎಲ್ಲರೂ ಈ ಹೊಡಸಲಿನ ಸುತ್ತಮುತ್ತ ಗಟ್ಟಿಯಾಗಿ ತಳವೂರಿ ಹಲಸಿನ ಬೀಜ, ಗೇರು ಬೀಜಗಳನ್ನು ಅಡಿಯ ಬೆಂಕಿಯ ಕೆಂಡದಲ್ಲಿ ಬೇಯಿಸಿ ತಿನ್ನುತ್ತಾ ಡರ್ರ್ ಎಂದು ತೇಗಿ ಹಳೆಯ ರೈಲು ಇಂಜಿನ್ನಿನಂತೆ “ಟುಸ್.. ಟುಸ್ ಡ್ರುಸ್.. ಎಂದು ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಯಥಾನುಶಕ್ತಿ ವಾಯುಪ್ರಕೋಪಗಳನ್ನು ನೀಗಿಸಿಕೊಳ್ಳುವುದು ಮಲೆನಾಡಿಗರಿಗೆ ಸಾಮಾನ್ಯ.
ಹಲಸಿನ ಬೀಜಗಳು ಒಮ್ಮೊಮ್ಮೆ ಸ್ವಲ್ಪ ಹಸಿಯಾಗಿದ್ದರೆ “ಡಂ” ಎಂದು ಸಶಬ್ಧವಾಗಿ ಸಿಡಿದು ಕೆಂಡದುಂಡೆಗಳನ್ನು ಬೂಧಿಯ ಸಮೇತ ಅಕ್ಕ ಪಕ್ಕಕ್ಕೆ ಚಲ್ಲುತ್ತಿದ್ದವು. ಅದಕ್ಕೆ ಹಲಸಿನ ಬೀಜಗಳಿಗೆ ಕಬ್ಬಿಣದ ತಂತಿಯಿಂದ ತೂತು ಮಾಡಿ ಒಳಗೆ ಗ್ಯಾಸು ಸೇರದಂತೆ ಮಾಡಿ ನಿಗಿ ನಿಗಿ ಕೆಂಡದಲ್ಲಿ ಬೇಯಿಸುತ್ತಿದ್ದರು.
ಹಲಸಿನ ಕಾಯಿಯ ಹಪ್ಪಳವನ್ನು ಈ ಕೆಂಡದ ಮೇಲೆ ಇಟ್ಟು ಅದು ಹಿತ ಮಿತವಾಗಿ ಅರಳಿದೊಡನೆ ಅದಕ್ಕೊಂದಿಷ್ಟು ಕೊಬ್ಬರಿ ಎಣ್ಣೆ ಸವರಿ ಕರಂ.. ಕುರುಂ ಎನ್ನುತ್ತಾ ತಿಂದು ಒಂದು ಕುಡತೆ ಸಕ್ಕರೆ ಹಾಕದ ಚಪ್ಪೆ ಚಾ ಕುಡಿದರೆ ಅದೆಂತದೋ ತೃಪ್ತಿ. ಇನ್ನು ಗೇರುಬೀಜಗಳನ್ನು ಈ ಹೊಡಸಲಿನ ಬೆಂಕಿಯಲ್ಲಿ ಹಾಕಿ ಅದು ಬಿಡುವ ಎಣ್ಣೆಯಿಂದ ಅಗ್ನಿಯ ಕೆನ್ನಾಲಿಗೆ ಆಕಡೆ ಈ ಕಡೆ ಟಾಸ್ ಪುಸ್ ಎನ್ನುತ್ತಾ ಚಾಚುತ್ತಿದ್ದರೆ ಅದನ್ನು ಜಡಿಮಳೆಯಲ್ಲಿ ನೋಡುವುದೇ ಚಂದ.
ಆ ಕಾಲಕ್ಕೆ ಆಗಷ್ಟೇ ಪ್ರಾರಂಭವಾಗಿದ್ದ ರಮಾನಂದ ಸಾಗರರ ರಾಮಾಯಣ ಧಾರಾವಾಹಿಯನ್ನು ವಿದ್ಯುತ್ ಇರುವ ನೆಂಟರ ಮನೆಗೆ ಹೋಗಿ ಅಲ್ಲಿರುವ ಟಿವಿಯಲ್ಲಿ ಮಸುಕು ಮಸುಕಾಗಿ ಬರುತ್ತಿರುವ ರಾಮಾಯಣದ ಪಾತ್ರಗಳನ್ನು ನೋಡುವುದಕ್ಕೆ ಏನೆಲ್ಲಾ ನೆಪಗಳು !!.ಕರೆಂಟನ್ನು ನಮ್ಮ ಮನೆಗೂ ಹಾಕಿಸಬೇಕೆಂಬ ಉತ್ಕಟ ಆಸೆಗೆ ಇದೂ ಒಂದು ಕಾರಣವಿರಬಹುದು.
ನಮ್ಮೂರಿಗಿಂತ ದೂರದ ಅನೇಕ ಹಳ್ಳಿಗೆಲ್ಲಾ ಕರೆಂಟು ಹರಿದಾಗ ನಮ್ಮೂರಿಗೂ ಯಾಕೆ ಕರೆಂಟು ಬರಬಾರದು ಅನಿಸಿತು. ಸಾತೊಡ್ಡಿ, ದೇಹಳ್ಳಿ, ಬಳಗಾರು, ಬೀರಗದ್ದೆಗಳೆಂಬ ಊರುಗಳಿಗೆ ದಿನಕ್ಕೆ ಒಮ್ಮೆ ಮಾತ್ರ ಒಂದು ಬಸ್ಸು ಇದ್ದು ಅಲ್ಲಿಯ ಜನರೆಲ್ಲಾ ಬೇಸಿಗೆಯಲ್ಲೇ ಮಳೆಗಾಲಕ್ಕೆ ಅವಶ್ಯವಿರುವ ಎಲ್ಲಾ ವಸ್ತುಗಳನ್ನು ತಲೆಹೊರೆಯ ಮೇಲೆಯೇ ಸಾಗಿಸಬೇಕಿತ್ತು.
ಈ ಎಲ್ಲಾ ಹಳ್ಳಿಗಳಿಗೆ ಯಾವುದೋ ಸ್ಕೀಮಿನಲ್ಲಿ ವಿದ್ಯುತ್ ನೀಡಿ ಬಿಟ್ಟಿದ್ದರು. ವಿದ್ಯುತ್ ವೈರುಗಳು ಕರೆಂಟು ಕಂಬಗಳ ತಲೆಯ ಮೇಲೆ ನೇತಾಡುತ್ತಾ ಆ ಹಳ್ಳಿಗಳನ್ನು ಸೇರಿ ಅಲ್ಲಿ ಸ್ವಿಚ್ಚು ಹಾಕಿದ ಕೂಡಲೇ ಟಕ್ಕನೇ ಹತ್ತಿಕೊಂಡು ಮಹದಾಶ್ಚರ್ಯ ಮೂಡುತ್ತಿತ್ತು.
ನೂರಾರು ಅಡಿ ಆಳದ ಬಾವಿಯಿಂದ ಗುರ್ರೆಂದು ಶಬ್ಧ ಮಾಡುತ್ತಾ ನೀರೆತ್ತುವ ಪಂಪುಸೆಟ್ಟುಗಳು, ಕೇಜಿಗಟ್ಟಲೆ ಅಕ್ಕಿಯನ್ನು ಅನಾಯಾಸವಾಗಿ ಗರ ಗರನೇ ರುಬ್ಬಿ ಬಿಸಾಕುವ ಗ್ರೈಂಡರುಗಳು, ಐದಾರು ಗೆರಟೆ ತುಂಬಾ ಇರುವ ತೆಂಗಿನ ಕಾಯಿಯ ತಿರುಳನ್ನು ಕ್ಷಣ ಮಾತ್ರದಲ್ಲಿ ರೊಂಯ್ ಎಂದು ಚಟ್ನಿ ಮಾಡಿ ಹಾಕುವ ಮಿಕ್ಸಿಗಳು, ಗುಡಾಣ ಹೊಟ್ಟೆಯ ಸದಾ “ಗುಂಯ್” ಎನ್ನುತ್ತಿರುವ ಟ್ರಾನ್ಸ್ಫಾರ್ಮರುಗಳು ಪ್ರಶ್ನಾರ್ಥಕವಾಗಿ ಸೋಜಿಗದ ವಸ್ತುಗಳಾಗಿ ಆಶ್ಚರ್ಯ ಹುಟ್ಟಿಸುತ್ತಿದ್ದವು.
ಆದರೆ ಈ ವಿದ್ಯುತ್ತಿನ ಆಯಸ್ಸು ಮಳೆಗಾಲ ಬರುವ ವರೆಗೆ ಮಾತ್ರ ಎನ್ನುವುದನ್ನು ಅಲ್ಲಿನ ಜನ ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡು ಬಿಟ್ಟಿದ್ದರು. ಧೋ.. ಧೋ.. ಎಂದು ಎಡೆಬಿಡದೇ ಸುರಿಯುವ ಮಳೆಗಾಲದಲ್ಲಿ ಮರಗಳೆಲ್ಲಾ ಕರೆಂಟು ಕಂಬಗಳ ತಂತಿಗಳ ಮೇಲಾ ಲಗಾಟಿ ಹೊಡೆದು ಒಮ್ಮೆಯೇ ಹತ್ತು ಹದಿನೈದು ಕಂಬಗಳು ಧರಾಶಾಯಿಯಾದವು ಎಂದರೆ ಆ ವರ್ಷ ಮಳೆಗಾಲದಲ್ಲಿ ಪುನ: ಚಿಮಣಿ ಬುರುಡೆ ಲಾಟೀನುಗಳೇ ಗತಿ.
ಪಿಯುಸಿ ಸಮಯದಲ್ಲಿ ಕೊಟ್ಟಿಗೆಯ ಕೆಲಸ ಮುಗಿಸಿಯೇ ಕಾಲೇಜಿಗೆ ಹೋಗುವ ವೇಳೆಗೆ ಕೆಲ ಸಮಯ ತಡವಾಗುತ್ತಿತ್ತು. ಈಗಿನಂತೆ ಕೊಟ್ಟಿಗೆಗೆ ಚಪ್ಪಡಿ ಏನೂ ಇರಲಿಲ್ಲ. ದೊಡ್ಡ ಹೊಂಡ ಗುಂಡಿಗಳ ಮೇಲೆ ಮರಗಿಡಗಳಿಂದ ಸೊಪ್ಪಿನ ಬೆಟ್ಟದಿಂದ ತಂದ ಸೊಪ್ಪುಗಳನ್ನು ಹಾಸಿ ಜಾನುವಾರು ಮಲಗಲು ಅನುವು ಮಾಡಲಾಗುತ್ತಿತ್ತು. ಅವುಗಳ ಸಗಣಿ, ಮೂತ್ರ ಈ ಹೊಂಡಗಳಲ್ಲಿ ಸಂಗ್ರಹವಾಗುತ್ತಿತ್ತು.
ಈ ಹೊಂಡಗಳಲ್ಲಿರುವ ಕೊಳೆದ ಸೊಪ್ಪು ಸದೆ ಸೇರಿ ವಿಚಿತ್ರ “ಪರಿಮಳ” ಹೊರಹೊಮ್ಮುತ್ತಿತ್ತು. ಇದನ್ನು ಸ್ವಚ್ಚ ಮಾಡಿ, ಸ್ನಾನ ಮುಗಿಸಿ, ಪಿಟಿ ಕ್ಲಾಸಿಗೆ ಹೋಗಬೇಕಾದರೆ ಏನಾದರೂ ತಡವಾದರೆ ಪಿಟಿ ಮಾಸ್ತರ್ ಶೀಟಿ ಬೆಲ್ಟ್ ಏಟು ಖಚಿತ. ಎಮ್ಮೆಗಳು ಅವುಗಳ ಮೂತ್ರದಲ್ಲಿ ಬಾಲ ಅದ್ದಿ ರಫ಼್ ಅಂತ ಬೀಸಿದರೆ ಮೈಯೆಲ್ಲಾ ಒಂದು ರೀತಿಯ ಗಮಲು ವಾಸನೆಯಿಂದ ಅಸಹ್ಯವಾಗುತ್ತಿತ್ತು. ಆಗ ಮೇಷ್ಟ್ರು “ಏ ದನಾ ಕಾಯವ್ನೇ.. ಈವತ್ತೂ ಲೇಟೇನೋ?!! ಅಂತ ತರಾಟೆಗೆ ತೆಗೆದು ಕೊಳ್ಳೋದು ಗ್ಯಾರಂಟಿ ಅಂತ ಭಯ. ಈ ಪಿಟಿ ಮೇಷ್ಟ ’ಹೊಡೆತ” ತಾಳಲಾರದೇ ಕೆಲವು ಹುಡುಗರು ಶಾಲೆಯನ್ನೇ ಬಿಟ್ಟಿದ್ದಾರೆ ಎನ್ನುವುದೂ ಒಂದು ಸುದ್ಧಿ.
ಎಲ್ಲರ ಮನೆಯಲ್ಲಿರುವ ಕರೆಂಟೆಂಬ ಮಾಯೆ ನಮ್ಮಲ್ಲಿರಬೇಕಾಗಿತ್ತು ಎಂಬ ಹಪ ಹಪಿ ಪ್ರಾರಂಭವಾದೊಡನೆ ಸಿಕ್ಕ ಸಿಕ್ಕ ಕರೆಂಟು ಕಂಬಗಳೆಲ್ಲಾ ರವಿವರ್ಮನ ಕುಂಚದ ಕಲೆಯ ಅದ್ಭುತ ಕಲಾಕೃತಿಗಳ ಗೋಚರಿಸತೊಡಗಿದವು. ಅದಕ್ಕೆ ನೇತಾಕಿದ ಆಗಾಗ ಅಕ್ಕ ಪಕ್ಕದ ಮರಗಳಿಗೆ ತಾಗಿ ಜೊರ್ ಎಂದು ಶಬ್ಧ ಮಾಡುವ ಅಲ್ಯುಮಿನಿಯಂ ವೈರುಗಳು ಹರಿಪ್ರಿಯಾಳ ಮುಂಗುರಳಂತೆ ಮೋಹಕವಾಗಿ ಮನಸೂರೆ ಮಾಡುತ್ತಿದ್ದವು.
ಬೇಕಾದೊಡನೆ ಬಂದು ಬಿಡಲು ಕರೆಂಟು ಅಷ್ಟು ಸುಲಭಕ್ಕೆ ಸಿಗುವ ವಸ್ತುವೇ? ಸೀದಾ ಕರೆಂಟಾಫೀಸಿಗೆ ನಡೆಯಿತು ನನ್ನ ಆಕೃತಿ. ಅಲ್ಲೊಬ್ಬ ದಢೂತಿ ಕೆಂಪನೇ ಮನುಷ್ಯ ಕೆಂಪು ಮಾನವರ ತರ ಆಗ ತಾನೆ ಸಮುದ್ರ ಸ್ನಾನ ಮಾಡಿ ಬಂದ ವ್ಯಕ್ತಿ ಕೂತಿದ್ದ. ನಮಗೂ ಕರೆಂಟು ಬೇಕೆಂಬ ನನ್ನ ಅದ್ಭುತ ಅಹವಾಲನ್ನು ಹೇಳಿಕೊಂಡೆ.
ಕಿವಿಯಲ್ಲಿ ಕಡ್ಡಿಯೊಂದಕ್ಕೆ ಸ್ವಲ್ಪ ಹತ್ತಿಯನ್ನು ಹಾಕಿ ಮೀಟಿ ಮೀಟಿ ಅದೇನೋ ವಸ್ತುವನ್ನು ತೆಗೆದು ಮೂಸಿ ಮೂಸಿ ಬಿಸಾಕುತ್ತಿದ್ದ ಆ ವ್ಯಕ್ತಿಯ ಮುಂದಿನ ಬೋರ್ಡು ನೋಡಿದೆ. ಅದರಲ್ಲಿ ಅದೆಂತದೋ ಹೆಸರು ಬರೆದು ಸೆಕ್ಷನ್ ಆಫೀಸರ್ ಎಂದು ಪೇಂಟಿನಲ್ಲಿ ಬರೆದಿತ್ತು. ಅತ್ಯಂತ ಅಸಡ್ಡೆಯಿಂದ ಆ ವ್ಯಕ್ತಿ “ನಿಮ್ಮೂರಿಗೆ ಕರೆಂಟಾ? ಇನ್ನೈದು ವರ್ಷ ಬಿಟ್ಕಂಡ್ ಬನ್ನಿ. ನಿಮ್ಮ ಕ್ಯೂ ಬರಕ್ಕೆ ಇನ್ನೂ ಅಷ್ಟು ವರ್ಷ ಆಗ್ತದೆ” ಎಂದು ಈಗೆಲ್ಲಾ ಆನ್ಲೈನ್ ಬಹಳ ಕಷ್ಟ ಎಂದೊರಲುವ ಕಛೇರಿ ಗುಮಾಸ್ತರ ತರ ಉಡಾಪೆಯಿಂದ ಉತ್ತರಿಸಿದ.
ಛಲಬಿಡದ ತ್ರಿವಿಕ್ರಮನಂತೆ ದಿನಾ ಕಾಲೇಜಿಗೆ ಹೋಗಿ ವಾಪಸ್ಸು ಬರುತ್ತಾ ಕರೆಂಟು ಕಛೇರಿಗೆ ಪೆನ್ಶನ್ನು ಬರದ ತಬರನಂತೆ ಎಡತಾಕತೊಡಗಿದೆ. ಕೊನೆಗೂ ನನ್ನ ಕಾಟ ತಡೆಯಲಾರದೇ ಆ ಸೆಕ್ಷನ್ನು ಆಫೀಸರ್ರು ಹತ್ತು ಹಲವು ಪುಟಗಳ ಒಂದು ಅರ್ಜಿ ಫಾರಮ್ಮನ್ನು ಹಲವು ಕಡೆ ಇಂಟು ಮಾರ್ಕು ಹಾಕಿ ನಮ್ಮಪ್ಪನ ಹತ್ತಿರ ಸಹಿ ಮಾಡುವಂತೆಯೂ ಹಾಗೂ ಒಂದಿಷ್ಟು ದುಡ್ಡನ್ನು ಕರೆಂಟು ಇಲಾಖೆಗೆ ಕಟ್ಟುವಂತೆ ಆಜ್ಞೆ ಹೊರಡಿಸಿದ.
ನಾನು ಅರ್ಜಿಯನ್ನು ಶಬರಿಯು ರಾಮನು ಕಚ್ಚಿ ಬಿಸಾಕಿದ ಹಣ್ಣನ್ನು ಜತನದಿಂದ ಎತ್ತಿಕೊಂಡಂತೆ ಎತ್ತಿಕೊಂಡು ಬಂದು ಮನೆಗೆ ತಂದೆ. ಘನಘೋರ ಚರ್ಚೆಯ ನಂತರ ಕರೆಂಟಿನ ಸಾಧಕ ಬಾಧಕಗಳನ್ನು ವಿಚಾರಿಸಿದ ನಂತರ ಕರೆಂಟೊಂದು ಅತ್ಯವಶ್ಯಕ ವಸ್ತುವೆಂದು ಅದು ಮನೆಯಲ್ಲಿದ್ದರೆ ಅನುಕೂಲವೆಂಬ ತೀರ್ಮಾನವಾಗಿ ಅಪ್ಪನ ಸಹಿ ಬಿದ್ದ ನಂತರ ಪುನ: ಅರ್ಜಿಯು ಕರೆಂಟಾಫಿಸಿಗೆ ಬಂದು ದುಡ್ಡು ತುಂಬಿಸಿಕೊಂಡು ಸೆಕ್ಷನ್ನಾಫಿಸರಿನ ಮುಂದೆ ಮಂಡಿಯೂರಿತು.
ಅದರ ತಲೆಯ ಮೇಲೆ ಗೆಜ಼ೆಟಡ್ ಅಧಿಕಾರಿಯಾದ ಆತ ಹಸಿರಿಂಕಿನಲ್ಲಿ ದಸ್ಕತ್ತು ಹಾಕಿ ಪಕ್ಕದ ಗುಮಾಸ್ಥನಿಗೆ ರವಾನಿಸಿದ. ನಾನು ಅಳುಕುತ್ತಲೇ ಮತ್ತೊಮ್ಮೆ ಹೋಗಿ ಕರೆಂಟು ಕೊಡಲು ಇನ್ನೆಷ್ಟು ದಿನಗಳಾಗಬಹುದೆಂದು ಕೇಳಿಕೊಂಡೆ. ಆತ ಸರ್ರನೇ ರೇಗಿ “ ಈಗಷ್ಟೇ ಅರ್ಜಿ ಕೊಟ್ಟಿದ್ದಿಯಾ.. ಆಗ್ಲೇ ಕರೆಂಟು ಬೇಕೋ ನಿಂಗೆ. ಪೇಟೆಂದ ಒಂದು ಹತ್ತು ಕೆಜಿ ತಗೊಂಡು ಹೋಗು. ಇನ್ನೈದು ವರ್ಷ ಬಿಟ್ಟು ಬಾ” ಎನ್ನುತ್ತಾ ನನ್ನ ಅರ್ಜಿಯ ಮೇಲೆ ನನ್ನ ವೇಟಿಂಗ್ ಸಂಖ್ಯೆ ಹಾಕಿ ಕೊಟ್ಟ.
ಈ ಕರೆಂಟು ಆಸೆ ಯಾಕೆ ಹುಟ್ಟಿಕೊಂಡ್ತೋ ಗೊತ್ತಿಲ್ಲ. ನಾನು ಸಂಪೂರ್ಣ ಪರಧ್ಯಾನಿಯಾದೆ. ಕಾಲೇಜಿಗೆ ಸೈಕಲ್ಲಿನಲ್ಲಿ ಹೋಗುವಾಗ ದೇಹಳ್ಳಿ ರಸ್ತೆಯ ಬದಿಯಲ್ಲೇ ಹಾದು ಹೋಗುವ ಹೊಸ ಕರೆಂಟು ಕಂಬಗಳು ಆಸೆ ಉಕ್ಕಿಸುತ್ತಿದ್ದವು. ರಾತ್ರಿ ಕನಸಿನಲ್ಲಿ ನಮ್ಮನೆಗೂ ಕರೆಂಟು ಬಂದಾಂಗೆ, ಸ್ವಿಚ್ಚು ಹಾಕಿದ ಕೂಡಲೇ ಟಕ್ಕನೆ ಹೊಸ ಟ್ಯೂಬು ಲೈಟು ಹತ್ತಿದ ಹಾಗೇ ತರಾವರಿ ಕನಸು ಬೀಳತೊಡಗಿದವು. ಸೆಕ್ಷನ್ನಾಫೀಸರು ಏನೇ ಬಯ್ದರೂ ಸಹ ಈ ಕರೆಂಟಿನಾಸೆ ನನ್ನನ್ನು ಕರೆಂಟಾಫೀಸಿನ ಕಡೆ ಪದೇಪದೇ ಕರೆದುಕೊಂಡು ಹೋಗುತ್ತಿತ್ತು. ಹೀಗೆಯೇ ಪಾದಯಾತ್ರೆ ನಡೆದಾಗ ನನ ಕಾಟ ತಡೆಯದೇ ಆತ ಒಂದು ಎಸ್ಟಿಮೇಟ್ ತಯಾರಿಸಿಯೇ ಬಿಟ್ಟ.
ಅದರಲ್ಲಿ ನಮ್ಮ ಮನೆಯಿಂದ ನಾಲ್ಕು ಕಿಲೋಮಿಟರ್ ದೂರದಿಂದ ಇರುವ ಟ್ರಾನ್ಸ್ಫಾರ್ಮರಿನಿಂದ ವೈರುಗಳನ್ನು ಎಳೆದು ತರಬೇಕೆಂದೂ ಕಂಬ, ವೈರು, ತಂತಿ ಕೂಲಿ ಸೇರಿ ಅನೇಕ ಲಕ್ಷಗಳಾಗುತ್ತವೆಯೆಂದೂ, ಅಲ್ಲಿ ವರೆಗೆ ಲೈನು ಬರುವುದರಿಂದ ವೋಲ್ಟೇಜು ಕಡಿಮೆಯಾಗಿ ದೀಪ ಕುರುಡು ಕೆರೋಸಿನ್ನು ದೀಪದಂತೆ ಉರಿಯುವುದೆಂದೂ, ಇದಕ್ಕೆಲ್ಲಾ ಸುಮಾರು ೫ ಲಕ್ಷಗಳ ಖರ್ಚು ಬರುವುದೆಂದೂ, ಒಂದೇ ಮನೆಯಿರುವುದರಿಂದ ಇಷ್ಟೆಲ್ಲಾ ಖರ್ಚು ಮಾಡುವುದು ವ್ಯರ್ಥವೆಂಬ ರೀತಿಯಲ್ಲಿ ಹಸಿರು ಇಂಕಿನ ಶರಾ ಬರೆದು ಇಟ್ಟಿದ್ದ.
ಅಯ್ಯೋ ದೇವ್ರೆ? ಇದೇನಿದು? ಕರೆಂಟನ್ನು ಅಷ್ಟು ದೂರದಿಂದ ತರಬೇಕೇ? ತಂದರೂ ಸಹ ನಮ್ಮನೆಲಿ ಬೆಳಕು ಡಿಮ್ಮೇ? ಪಂಪಿನ ಮೋಟರ್ರು ತಿರುಗಲ್ವೇ? ನಮ್ಮನೆಗೆ ಕರೆಂಟು ಬರಲು ಇಷ್ಟೆಲ್ಲಾ ಕಸರತ್ತು ಇದೆಯೇ? ಎಂಬೆಲ್ಲಾ ಯಕ್ಷಪ್ರಶ್ನೆಗಳು ಕಾಡತೊಡಗಿದವು. ನಮ್ಮನೆಯ ಹತ್ತಿರದಲ್ಲೇ ದೊಡ್ಡ ದೊಡ್ಡ ಕಂಬಗಳ ಮೇಲೆ ಹಾದು ಹೋದ ತಂತಿಯ ಮೂಲಕ ಹಾದುಹೋಗುವ ತಂತಿಗಳಿಂದ ನಮ್ಮನೆಗೆ ಕರೆಂಟು ಯಾಕೆ ಕೊಡಬಾರದು ಎಂಬುದು ನನಗೆ ಚಿದಂಬರ ರಹಸ್ಯವಾಗಿತ್ತು.
ಇದಕ್ಕೆ ಸೆಕ್ಷನ್ನಾಫೀಸರ್ರು ಚೆನ್ನಾಗಿ ಉತ್ತರ ನೀಡಿದ್ದ.
ನಮ್ಮನೆ ಪಕ್ಕದಲ್ಲಿ ಹಾದು ಹೋಗುವುದು 11 ಕೆವಿಯ ಭಯಂಕರ ವೋಲ್ಟೆಜು ಇರುವ ಲೈನಾಗಿದ್ದು ಅದರಿಂದೆಲ್ಲಾ ಕರೆಂಟು ತಗಳ್ಳಕ್ಕೆ ಆಗಲ್ವಂತೆ.ಅದು ಜೋಗದಿಂದ ಸೀದಾ ಬಂದ ಲೈನಾಗಿದ್ದರಿಂದ ಅದು ಬೆಂಗಳೂರಿಗೇ ಸೇರಿಯೇ ನಿಲ್ಲುವುದಂತೆ. ಅದಕ್ಕೆ ಅಲ್ಲಿ ದೊಡ್ಡ ದೊಡ್ಡ ಟ್ರಾನ್ಸ್ ಫಾರ್ರ್ಮರುಗಳನ್ನು ಹಾಕಿ ಕರೆಂಟನ್ನು ಕಡಿಮೆ ಗೊಳಿಸಿ ಹಂಚುತ್ತಾರಂತೆ ಎಂದೆಲ್ಲಾ ತಲೆ ಬುಡ ಗೊತ್ತಾಗದ ತಾಂತ್ರಿಕ ವಿಷಯದಿಂದ ಆ ಲೈನಿನಿಂದ ನಮಗೆ ಕರೆಂಟು ಬರಲ್ಲ. ಅದಕ್ಕೆ ಪ್ರತ್ಯೇಕ ಟ್ರಾನ್ಸಫಾರ್ಮರು ಹಾಕಿ ತರಬೇಕು ಎನ್ನುವ ಮಹತ್ವದ ವಿಷಯದ ಅರಿವಾಯ್ತು. ಇಲ್ಲಿಂದ ಶುರುವಾಗಿದ್ದು ಮಹಾ ಭಗೀರಥ ಪ್ರಯತ್ನ..
ಮುಂದುವರೆಯುವುದು
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಂಕಣ
Indian birthwort: ಪರಮಾತ್ಮನ ಹೆಸರಲ್ಲೇ ಇರುವ ದಿವ್ಯೌಷದ ಈಶ್ವರ ಬಳ್ಳಿ ಬಗ್ಗೆ ಗೊತ್ತೇ?
‘ಈಶ್ವರ’ ಎಂದ ಕೂಡಲೇ ಪರಮಾತ್ಮನನ್ನೆ ನೆನಪಿಸಿಕೊಳ್ಳೋ ನಮಗೆ ಅದೇ ಹೆಸರಿನಲ್ಲಿ ದಿವ್ಯೌಷಧಿ ಇದೆ ಎಂಬುದು ಎಷ್ಟು ಜನರಿಗೆ ತಿಳಿದೀತು? ಹೌದು! ಪರಮಾತ್ಮನ ಹೆಸರಿನಲ್ಲೇ ಒಂದು ಗಿಡಮೂಲಿಕೆ ಇದೆ (Indian birthwort). ಇದರ ವಿಶೇಷತೆ ಏನು? ಅದರಿಂದಾಗುವ ಪ್ರಯೋಜನಗಳೇನು? ಆರೋಗ್ಯದ ಮೇಲೆ ಬೀರುವ ಪ್ರಬಾವಗಳೇನು? ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಈ ಬಳ್ಳಿಯನ್ನು ಹೆಚ್ಚಾಗಿ ಭಾರತ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಬಹುದಾಗಿದೆ. ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ. ಸಾಮಾನ್ಯವಾಗಿ ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿಯಾಗಿದ್ದು, ಇದರ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇನ್ನೂ ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ ಹಾಗು ಇದರ ಬೇರುಗಳಲ್ಲಿ ಸುಗಂಧ ತೈಲವಿರುತ್ತದೆ.
ಈಶ್ವರ ಬಳ್ಳಿ (Indian birthwort)ಯ ಪೌರಾಣಿಕ ಹಿನ್ನೆಲೆ:
ನಮ್ಮೆಲ್ಲರಿಗೂ ತಿಳಿದಂತೆ ಶಿವ ಸಮುದ್ರ ಮಂಥನ ಮಾಡುವಾಗ ಹಾಲಾಹಲ (ವಿಷ) ಉತ್ಪತ್ತಿಯಾಯಿತು. ಆ ವಿಷ ಯಾರಿಗೂ ತೊಂದರೆಯಾಗಬಾರದೆಂದು ತಾನೇ ಅದನ್ನು ಕುಡಿದ. ಇದನ್ನು ನೋಡಿದ ಪಾರ್ವತಿ ದೇವಿ ಆ ವಿಷ ತನ್ನ ಪತಿಯ ಹೊಟ್ಟೆ ಸೇರಬಾರದೆಂದು ಆತನ ಕುತ್ತಿಗೆಯನ್ನು ಒತ್ತಿ ಹಿಡಿದಳು. ವಿಷ ಒಳ ಹೋಗಲಿಲ್ಲ. ವಿಷದ ಪ್ರಭಾವದಿಂದ ಕುತ್ತಿಗೆ ನೀಲ ವರ್ಣವಾಯಿತು. ಶಿವ ನೀಲಕಂಠನಾದ. ಶಿವ ವಿಷ ಕುಡಿದರೂ ಶಿವನಿಗೆ ಏನೂ ಆಗಲಿಲ್ಲ. ವಿಷವನ್ನು ನಿರ್ವಿಷ ಮಾಡುವ ಗುಣ ಶಿವನಿಗಿದ್ದಂತೆ ಈ ಗಿಡಕ್ಕೂ ಇರುವ ಕಾರಣ ‘ಈಶ್ವರ’ ಎಂಬ ಹೆಸರು ಈ ವನಸ್ಪತಿಗೆ ಇಟ್ಟಿದ್ದಾರೆ.
ಇದನ್ನೂ ಓದಿ: ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ
‘ಈಶ್ವರ’ ಬಳ್ಳಿ ಮತ್ತು ಅದರ ಫಲ ನೋಡಲು ಹೇಗಿರುತ್ತದೆ?
ಕೆಲ ‘ಈಶ್ವರ’ ಬಳ್ಳಿಯು ಮರದಂತೆ ಉದ್ದಕ್ಕೆ ಏರುತ್ತದೆ. ಮತ್ತಷ್ಟು ಬಳ್ಳಿಯು ಪೊದೆಯಾಗಿ ಆವರಿಸಿಕೊಳ್ಳುತ್ತದೆ. ಸ್ವಲ್ಪ ಉದ್ದ ಆಯತಾಕಾರದ ಎಲೆಗಳು. ಎಲೆಗಳು ಅಲ್ಲಾಡಿದರೆ ಪರಿಮಳ ಸೂಸುತ್ತದೆ. ಎಲೆಯನ್ನು ಕಿವಿಚಿದರೂ ಪರಿಮಳ ಬರುತ್ತದೆ. ಹೂಗಳು ಬಾಯಿ ತೆರೆದ ಹಕ್ಕಿಗಳಂತೆ ಕಂಡುಬರುತ್ತದೆ. ಫಲಗಳು ಉದ್ದ ಹಾಗೂ ಸ್ವಲ್ಪ ದುಂಡಾಗಿ ಇರುತ್ತದೆ. ಫಲ ಬೆಳೆದು ಒಡೆದಾಗ ತಲೆ ಕೆಳಗಾಗಿ ಬಿಡಿಸಿದ ಪ್ಯಾರಾಚೂಟ್ನಂತೆ ಕಾಣುತ್ತದೆ. ಅದರೊಳಗೆ ತೆಳುವಾದ ತ್ರಿಕೋಣಾಕಾರದ ಬೀಜಗಳು ಇರುತ್ತದೆ.
‘ಈಶ್ವರ’ ಬಳ್ಳಿ (Indian birthwort)ಯಿಂದ ಆಗುವ ಪ್ರಯೋಜನಗಳೇನು?
ಭಾರತದ ಎಲ್ಲಾ ಕಡೆ ಕಂಡು ಬರುವ ಈಶ್ವರ ಬಳ್ಳಿಯ ಬೇರು, ಎಲೆಗಳು ಔಷಧಿಗಾಗಿ ಉಪಯೋಗಿಸಲ್ಪಡುತ್ತದೆ. ಕ್ರಿಮಿ ಬಾಧೆ, ಕಫ ಬಾಧೆ, ಸ್ತ್ರೀಯರ ಕೆಲವು ತೊಂದರೆಗಳಲ್ಲಿ, ವಿಷ ಚಿಕಿತ್ಸೆಯಲ್ಲಿ ವಿಶೇಷವಾಗಿ ಇದನ್ನು ಉಪಯೋಗಿಸಲ್ಪಡುತ್ತದೆ.
ಜೇಡ, ಚೇಳು, ಇಲಿ ಕಚ್ಚಿದರೆ: ಇದರ 3ಗ್ರಾಂ ಬೇರನ್ನು ಅಕ್ಕಿ ತೊಳೆದ ನೀರಲ್ಲಿ ಕಲಸಿ ಕುಡಿಸಬೇಕು ಹಾಗೂ ಅದರ ಎಲೆಯನ್ನು ನೀರಲ್ಲಿ ಅರೆದು ಕಚ್ಚಿದಲ್ಲಿಗೆ ಲೇಪಿಸಬೇಕು.
ತಲೆ ನೋವಿಗೆ ರಾಮಬಾಣ: ಈಶ್ವರ ಬಳ್ಳಿಯ ಎಲೆಯಲ್ಲಿ 10 ಗ್ರಾಂ ರಸ ತೆಗೆದು, 3ಗ್ರಾಂ ಅರಿಶಿನ ಪುಡಿ ಸೇರಿಸಿ ಕುಡಿಯುವುದರಿಂದ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
ಗಂಟುನೋವು, ಬಿಳಿ ಮಚ್ಚೆಗಳು: ಈ ಎಲೆಯನ್ನು ನೀರಲ್ಲಿ ಅರೆದು ಗಂಟುನೋವು ಅಥವಾ ಬಿಳಿ ಮಚ್ಚೆಗಳ ಮೇಲೆ ಹಚ್ಚುತ್ತ ಬಂದರೆ ಕ್ರಮೇಣ ವಾಸಿಯಾಗುತ್ತದೆ.
ಕೆಮ್ಮು ಕಫಕ್ಕೆ ಔಷಧಿ: ಇದರ ಎಲೆಯ ಜ್ಯೂಸ್ ತೆಗೆದು 15 ಎಂಎಲ್ ನಷ್ಟು ಕುಡಿಸುವುದರಿಂದ ಕಡಿಮೆಯಾಗುವುದು. ಕೆಲವೊಮ್ಮೆ ಈ ಎಲೆಯ ಜ್ಯೂಸ್ ಕುಡಿದ ಸ್ವಲ್ಪ ಹೊತ್ತಿನಲ್ಲಿ ಕಫ ವಾಂತಿಯಾಗಿ ಕರಗಿ ಹೋಗುತ್ತದೆ. ಕಫ ಜಾಸ್ತಿ ಇರುವಾಗ ಸಾಮಾನ್ಯವಾಗಿ ಅಮೃತಾಂಜನ, ವಿಕ್ಸ್ ಎದೆಗೆ ಹಚ್ಚುತ್ತಾರೆ. ಅದೇ ರೀತಿ ಎಲೆಯನ್ನು ಅರೆದು ಎದೆಗೆ ಹಚ್ಚಬಹುದು.
ಮುಟ್ಟಿನ ದೋಷ ನಿವಾರಣೆ: ಹೆಣ್ಣುಮಕ್ಕಳ ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ 10ಗ್ರಾಂ ಈಶ್ವರ ಬೇರಿನ ಕಷಾಯ ಮಾಡಿ (30 ರಿಂದ 40 ಎಂ.ಎಲ್) ಕುಡಿಸಬೇಕು.
ಹೊಟ್ಟೆ ಕ್ರಿಮಿ ಬಾಧೆ: 5-10 ಮಿಲಿ ಎಲೆರಸವನ್ನು 3 ದಿನ ಕುಡಿಯುವುದರಿಂದ ಕಡಿಮೆಯಾಗುವುದು.
ಜ್ವರಕ್ಕೆ ದಿವ್ಯೌಷಧಿ: 5 ಗ್ರಾಂ ಈಶ್ವರ ಬೇರನ್ನು ಕಷಾಯ ಮಾಡಿ ಅದಕ್ಕೆ 1/2 ಚಮಚ ಕಾಳು ಮೆಣಸು ಪುಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು. ಶರೀರ ಬಿಸಿ ಆಗಿ ಚಳಿಯಿಂದ ಕೂಡಿದ ಜ್ವರವಿದ್ದರೆ ಈಶ್ವರ ಬೇರಿನ ಕಷಾಯದೊಂದಿಗೆ ಈಶ್ವರ ಬೇರಿನ ಎಲೆ ರಸಕ್ಕೆ ಹಿಪ್ಪಿಯನ್ನು ಪುಡಿಮಾಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು.
ಸರ್ಪ ಸುತ್ತಿಗೆ ರಾಮಬಾಣ: ಇತ್ತೀಚೆಗೆ ಸರ್ಪ ಸುತ್ತಿಗೆ ಅನೇಕ ಔಷಧಿಗಳಿದ್ದರು ಈಶ್ವರ ಬೇರು ಮತ್ತು ನೀಲಿ ಸೊಪ್ಪನ್ನು ಸೇರಿಸಿ ಅರೆದು ಹಚ್ಚುವುದರಿಂದ ಉರಿ ನೋವು ಕಡಿಮೆಯಾಗುವುದು.
ದೃಷ್ಟಿ ದೋಷ ನಿವಾರಣೆ: ಇದರ ಬೇರನ್ನು ನಯವಾಗಿ ಚೂರ್ಣಮಾಡಿ ಅದಕ್ಕೆ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.
ಮಲಬದ್ಧತೆ ಮತ್ತು ಮೂಲವ್ಯಾಧಿ ನಿವಾರಣೆ: ಈಶ್ವರಿಬೇರು, ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಇವುಗಳೆಲ್ಲವನ್ನು ಸಮತೂಕದಲ್ಲಿ ನಯವಾಗಿ ಚೂರ್ಣಿಸಬೇಕು. ನಂತರ 2 ರಿಂದ 2.5 ಗ್ರಾಂ ಚೂರ್ಣವನ್ನು ಸೇವಿಸಿ ಬಿಸಿನೀರು ಕುಡಿದರೆ ಮಲಬದ್ಧತೆ ಮತ್ತು ಮೂಲವ್ಯಾದಿ ನಿವಾರಣೆಯಾಗುತ್ತದೆ.
ಹೀಗೆ ಈಶ್ವರ ಬೇರು (Indian birthwort) ಮತ್ತು ಅದರ ಎಲೆಯಲ್ಲಿ ಅಡಗಿರುವ ದಿವ್ಯೌಷಧಿ ಅಪಾರ. ಅದರಲ್ಲಿ ತೀಕ್ಷ ಗುಣಗಳುಳ್ಳ ಮದ್ದಾಗಿದ್ದು, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಯಾವುದೇ ಔಷಧಿಯಾದರು ಉಪಯೋಗಿಸು ಮುನ್ನ ಒಮ್ಮೆ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ದಿನದ ಸುದ್ದಿ
ಗೃಹಬಳಕೆ ಎಲ್ಪಿಜಿ ಸಿಲೆಂಡರ್ ಬೆಲೆಯಲ್ಲಿ ಬದಲಾವಣೆ ಇಲ್ಲ
ಸುದ್ದಿದಿನಡೆಸ್ಕ್:ಗೃಹಬಳಕೆಯ ಎಲ್ಪಿಜಿ ಸಿಲೆಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.
ಗೃಹ ಬಳಕೆ ಎಲ್ಪಿಜಿ ಸಿಲೆಂಡರ್ ಬೆಲೆಯನ್ನು 111 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿರುವ ಸಚಿವಾಲಯ, ವಾಣಿಜ್ಯ ಸಿಲೆಂಡರ್ ಬೆಲೆಯು ಅಂತಾರಾಷ್ಟ್ರೀಯ ಕಚ್ಚಾ ಅನಿಲ ಮತ್ತು ಸಂಬAಧಿತ ದರಗಳ ಮೇಲೆ ಅವಲಂಬಿತವಾಗಿದ್ದು, ಆಗಾಗ್ಗೆ ಮಾರುಕಟ್ಟೆಯ ದರಗಳು ಬದಲಾಗುತ್ತವೆ. ಆದರೆ, ಗೃಹ ಬಳಕೆಯ ಸಿಲೆಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಸಿದೆ.
ದೆಹಲಿಯಲ್ಲಿ 14.2 ಕೆಜಿ ಗೃಹ ಬಳಕೆ ಅಡುಗೆ ಅನಿಲ ಸಿಲೆಂಡರ್ ಬೆಲೆ 950 ರೂಪಾಯಿಯಾಗಿದ್ದು, ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇದು 553 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಇದು ಆಗಸ್ಟ್ 2023 ರಿಂದ ನವೆಂಬರ್ 2025ರವರೆಗೆ ಹೋಲಿಸಿದರೆ, ಶೇಕಡಾ 39 ರಷ್ಟು ದರ ಕಡಿತವನ್ನು ಸೂಚಿಸುತ್ತದೆ. ಜನರಿಗೆ ಸುಸ್ಥಿರ ಇಂಧನ ಪೂರೈಕೆಗೆ ಒತ್ತು ನೀಡಲಾಗಿದ್ದು, ದರ ಬದಲಾವಣೆ ಇಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoದಾವಣಗೆರೆ | ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಫೆ.14 ರಂದು ಸಂತ ಸೇವಾಲಾಲ್ರವರ 287ನೇ ಜಯಂತಿ ಕಾರ್ಯಕ್ರಮ
-
ದಿನದ ಸುದ್ದಿ4 days agoಕನ್ನಡಭಾಷೆಯಲ್ಲಿ ನಾಮಫಲಕ ಕಡ್ಡಾಯ : ಆಯುಕ್ತೆ ರೇಣುಕಾ ಆದೇಶ
-
ದಿನದ ಸುದ್ದಿ2 days agoಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
-
ದಿನದ ಸುದ್ದಿ2 days agoಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ



