Connect with us

ದಿನದ ಸುದ್ದಿ

ಆಡಳಿತ ವ್ಯವಸ್ಥೆಗೆ ಬೇಕಿದೆ ತುರ್ತು ಚಿಕಿತ್ಸೆ

Published

on

  • ನಾ ದಿವಾಕರ

ನವ ಭಾರತದ ಆಡಳಿತ ವ್ಯವಸ್ಥೆ ಕ್ರಮೇಣ ತನ್ನ ಪ್ರಜಾತಂತ್ರ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ, ವ್ಯವಸ್ಥೆ ಕುಸಿಯುತ್ತಿದೆ, ಹದಗೆಡುತ್ತಿದೆ ಎಂದು ಕ್ಷಣಕ್ಷಣಕ್ಕೂ ಪರಿತಪಿಸುತ್ತಿದ್ದ ಪ್ರಜ್ಞಾವಂತ ನಾಗರಿಕರು ಇನ್ನು ಚಿಂತಿಸಬೇಕಿಲ್ಲ. ಏಕೆಂದರೆ ವ್ಯವಸ್ಥೆ ಕುಸಿದುಹೋಗಿದೆ.

ಪ್ರಜಾತಂತ್ರ ಮತ್ತು ಸಾಂವಿಧಾನಿಕ ಮೌಲ್ಯಗಳು ಇನ್ನೂ ಉಳಿದಿದೆ ಎನ್ನುವುದಾದರೆ ಅದು ಕೇವಲ ಗ್ರಾಂಥಿಕವಾಗಿ ಮಾತ್ರ ಎನ್ನುವುದು ಮನದಟ್ಟಾಗಿದೆ. ಮತ್ತಷ್ಟು ಕುಸಿದು ಪಾತಾಳಕ್ಕೆ ಹೋಗುವ ಮುನ್ನ ಎಚ್ಚೆತ್ತುಕೊಳ್ಳುವುದು ನಮ್ಮ ಮುಂದಿರುವ ಸವಾಲು. ಸ್ವತಂತ್ರ ಭಾರತ ತನ್ನ ಮೂಲ ತಳಪಾಯವನ್ನೇ ಕಳೆದುಕೊಂಡು ಬೆತ್ತಲಾಗುತ್ತಿರುವಂತೆಯೇ ದೇಶದ ಅಂತಃಸತ್ವವನ್ನು ಕಾಪಾಡುವ ಸ್ತಂಭಗಳು ಸತ್ವಹೀನವಾಗಿವೆ.

ಒಂದು ಪ್ರಜಾತಂತ್ರ ವ್ಯವಸ್ಥೆ ಊರ್ಜಿತವಾಗಲು ಮುಖ್ಯವಾಗಿ ಬೇಕಿರುವುದು ಆಡಳಿತ ನಿರ್ವಹಣೆ ನಡೆಸುವ ಸಾಂವಿಧಾನಿಕ ಸಂಸ್ಥೆಗಳ ಬದ್ಧತೆ ಮತ್ತು ಈ ಸಂಸ್ಥೆಗಳನ್ನು ನಿರ್ವಹಿಸುವ ವ್ಯಕ್ತಿಗಳ ಪ್ರಾಮಾಣಿಕತೆ. ಇವೆರಡೂ ಪರಸ್ಪರ ಪೂರಕವಾಗಿ ಇದ್ದಾಗ ಮಾತ್ರ ಪ್ರಜಾಸತ್ತೆ ತನ್ನ ಘನತೆ ಗೌರವ ಉಳಿಸಿಕೊಳ್ಳಲು ಸಾಧ್ಯ.

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಕಾರ್ಯವೈಖರಿ ಮತ್ತು ದಕ್ಷತೆ ಮತ್ತು ಈ ಸಾಂವಿಧಾನಿಕ ಅಂಗಗಳ ಮೂಲಕ ದೇಶದ ಸಾರ್ವಭೌಮ ಪ್ರಜೆಗಳನ್ನು ಪ್ರತಿನಿಧಿಸುವ ವ್ಯಕ್ತಿಗಳಲ್ಲಿನ ಸಾಂವಿಧಾನಿಕ ಪ್ರಜ್ಞೆ ಮತ್ತು ಪ್ರಾಮಾಣಿಕತೆ, ಇವು ಪ್ರಜಾತಂತ್ರ ವ್ಯವಸ್ಥೆಯ ಬುನಾದಿ. ಈ ಬುನಾದಿಯ ಮೇಲೆ ನಿಂತಿರುವ ಮೂರೂ ಆಡಳಿತ ಅಂಗಗಳು ಮತ್ತು ಇವುಗಳನ್ನು ಸದಾ ಜಾಗೃತಗೊಳಿಸಲು ಇರುವ ಮಾಧ್ಯಮ ವಲಯ ನಾಲ್ಕು ಸ್ತಂಭಗಳು.

ಭಾರತದ ದುರಂತ ಎಂದರೆ ನ್ಯಾಯಾಂಗವನ್ನು ಹೊರತುಪಡಿಸಿದರೆ ಉಳಿದೆಲ್ಲ ಅಂಗಗಳೂ ತಮ್ಮ ಅಂತಃಸತ್ವವನ್ನು ಕಳೆದುಕೊಂಡು ನಿಸ್ತೇಜವಾಗಿವೆ. ಒಂದೆರಡು ಪ್ರಸಂಗಗಳನ್ನು ಹೊರತುಪಡಿಸಿದರೆ ನ್ಯಾಯಾಂಗ ಇನ್ನೂ ಸಹ ಜನತೆಯ ವಿಶ್ವಾಸವನ್ನು ಉಳಿಸಿಕೊಂಡುಬಂದಿದೆ. ಆದರೆ ಇತ್ತೀಚಿನ ದಿನಗಳ ಕೆಲವು ಬೆಳವಣಿಗೆಗಳು ಆಶಾದಾಯಕವಾಗಿಲ್ಲ ಎಂದಷ್ಟೇ ಹೇಳಬಹುದು.

ಕಾರ್ಯಾಂಗದಲ್ಲಿ ಪ್ರಾಮಾಣಿಕತೆ ಉಳಿಯಲು ಅವಶ್ಯವಾಗಿ ಬೇಕಾದ ಶಾಸಕಾಂಗದ ದಕ್ಷತೆ ಮತ್ತು ಸಂವಿಧಾನ ಬದ್ಧತೆಯನ್ನು ಭಾರತದ ಆಳುವ ವರ್ಗಗಳು ಎಂದೋ ಕಳೆದುಕೊಂಡಿವೆ. ಇತ್ತೀಚಿನ ದಿನಗಳಲ್ಲಿ ದಕ್ಷತೆ ಎನ್ನುವ ಪದವೇ ಸಾಪೇಕ್ಷವಾಗುತ್ತಿದ್ದು, ಬದ್ಧತೆ ಸಂಪೂರ್ಣ ನಶಿಸಿಹೋಗಿದೆ.

ಪಕ್ಷ ನಿಷ್ಠೆಯನ್ನು ಬದಿಗಿಟ್ಟು, ವಸ್ತುನಿಷ್ಟವಾಗಿ ನೋಡಿದರೆ ಇದನ್ನು ಗ್ರಹಿಸುವುದು ಸುಲಭ. ಇಂದು ಭಾರತದ ಸಾರ್ವಭೌಮ ಪ್ರಜೆಗಳಾದ ನಾವು ಆಯ್ಕೆ ಮಾಡುತ್ತಿರುವ ಜನಪ್ರತಿನಿಧಿಗಳ ಹಿನ್ನೆಲೆ ಮತ್ತು ಅವರ ಧೋರಣೆಯನ್ನು (ಕೆಲವು ಅಪವಾದಗಳನ್ನು ಹೊರತುಪಡಿಸಿ) ಸೂಕ್ಷ್ಮವಾಗಿ ಗಮನಿಸಿದರೆ ಆಡಳಿತ ದಕ್ಷತೆಯ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳುವುದೇ ವ್ಯರ್ಥ ಎನಿಸುತ್ತದೆ.

ಒಂದು ವರದಿಯ ಪ್ರಕಾರ ಇತ್ತೀಚೆಗಷ್ಟೇ ಮುಗಿದ ಬಿಹಾರ ಚುನಾವಣೆಗಳಲ್ಲಿ ಶೇ 68ರಷ್ಟು ಚುನಾಯಿತ ಪ್ರತಿನಿಧಿಗಳು ಅಪರಾಧದ ಹಿನ್ನೆಲೆಯುಳ್ಳವರಾಗಿದ್ದಾರೆ. ಇದು ನಮಗೆ ಒಂದು ಗಂಭೀರ ವಿಚಾರ ಎನಿಸುತ್ತಲೇ ಇಲ್ಲ. ಏಕೆಂದರೆ ರಾಜಕಾರಣದಲ್ಲಿ ಅಪರಾಧದ ಹಿನ್ನೆಲೆ ಇಲ್ಲದವರ ಸಂಖ್ಯೆ ಕ್ಷೀಣಿಸುತ್ತಿದೆ. ಮತ್ತೊಂದೆಡೆ ಪಕ್ಷ ರಾಜಕಾರಣದ ಸ್ವಾರ್ಥ ಹಿತಾಸಕ್ತಿಗಳು ಅಪರಾಧಿಗಳಿಗೆ ಶ್ರೀರಕ್ಷೆ ಒದಗಿಸಲು ಸದಾ ಸಿದ್ಧವಾಗಿರುತ್ತವೆ.

ಆದರೂ ನಾವು, ಭಾರತ ಭ್ರಷ್ಟಾಚಾರ ಮುಕ್ತವಾಗಿದೆ ಎಂದು ಬೆನ್ನುತಟ್ಟಿಕೊಳ್ಳುತ್ತಿದ್ದೇವೆ. ಏಕೆಂದರೆ ಸಾಮಾನ್ಯ ಪರಿಭಾಷೆಯಲ್ಲಿ ಭ್ರಷ್ಟಾಚಾರ ಎಂದರೆ ಹಣಕಾಸು ಅವ್ಯವಹಾರ ಮಾತ್ರವೇ ನಿಷ್ಕರ್ಷೆಗೊಳಪಡುತ್ತದೆ. ನೈತಿಕ ಭ್ರಷ್ಟಾಚಾರವನ್ನು ನಾವೂ ಸಹ, ಅಂದರೆ ಪ್ರಜ್ಞೆ ಇರುವ ಪ್ರಜೆಗಳೂ ಸಹ, ಈ ಭ್ರಷ್ಟಾಚಾರದ ವ್ಯಾಪ್ತಿಗೆ ಒಳಪಡಿಸಿಲ್ಲ. ಹಾಗೊಮ್ಮೆ ನಾವು ಭಾವಿಸಿದರೆ ಇಂದು ಭಾರತದ ಶಾಸಕಾಂಗವನ್ನು ಪ್ರತಿನಿಧಿಸುವವರ ಪೈಕಿ ಶೇ 90ರಷ್ಟು ಪ್ರತಿನಿಧಿಗಳು ಅನರ್ಹರಾಗಿಬಿಡುತ್ತಾರೆ.

ಏಕೆಂದರೆ ಇಡೀ ಶಾಸಕಾಂಗವೇ ನೈತಿಕತೆಯನ್ನು ಕಳೆದುಕೊಂಡಿದೆ. ಸಣ್ಣ ಪುಟ್ಟ ವಂಚನೆಯಿಂದ ಹಿಡಿದು ಸಾಮೂಹಿಕ ಹತ್ಯಾಕಾಂಡ, ಅತ್ಯಾಚಾರ ಮತ್ತು ಭಯೋತ್ಪಾದನೆಯವರೆಗೂ ಎಲ್ಲ ಅಪರಾಧಗಳ ತುಣುಕುಗಳನ್ನು ನಮ್ಮ ಶಾಸನ ಸಭೆಗಳಲ್ಲಿ ಕಾಣಬಹುದಾದರೆ ಅದಕ್ಕೆ ಕಾರಣ ನಮ್ಮ ಗ್ರಹಿಕೆಯಲ್ಲಿನ ದೋಷ ಮತ್ತು ನಾಗರಿಕ ಪ್ರಜ್ಞೆಯ ಕೊರತೆ.

ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುವ ಬಿಜೆಪಿಯ ಘೋಷಣೆ ಸಾಕಾರಗೊಳ್ಳುವುದು ಕಷ್ಟವೇನಲ್ಲ. ಶಾಸಕರ ಖರೀದಿ ಪ್ರಕ್ರಿಯೆ ಈಗ ಅಸಾಂವಿಧಾನಿಕ ಎನ್ನುವ ಕನಿಷ್ಟ ಪ್ರಜ್ಞೆಯನ್ನೂ ಕಳೆದುಕೊಂಡಿರುವ ನವ ಭಾರತದ ಸಮಾಜದಲ್ಲಿ ಇದು “ ಆಲಿಬಾಬಾ ಮತ್ತು 40 ಕಳ್ಳರು” ಕತೆಯಂತೆ ಅನಾವರಣಗೊಳ್ಳುತ್ತಾ ಹೋಗುತ್ತದೆ.

ಜನಾದೇಶಕ್ಕಿಂತಲೂ ಸರ್ಕಾರಗಳನ್ನು ರಚಿಸುವ ಸಂದರ್ಭದಲ್ಲಿನ ಧನಾದೇಶವೇ ಹೆಚ್ಚು ಪ್ರಾಶಸ್ತ್ಯ ಪಡೆಯುತ್ತಿರುವ ಒಂದು ವಿಕೃತ ಪ್ರಜಾತಂತ್ರದಲ್ಲಿ ನಾವು ಸುಖಿಸುತ್ತಿದ್ದೇವೆ. ಹಾಗಾಗಿ ಭ್ರಷ್ಟರು, ಕೊಲೆ ಆರೋಪ ಹೊತ್ತವರು, ಗೂಂಡಾಗಿರಿ ಮಾಡಿದವರು, ಕಪ್ಪುಹಣದ ವಾರಸುದಾರರು ಎಲ್ಲರೂ ಸಹ ತಮ್ಮ ಅಂತಿಮ ಆಶ್ರಯ ತಾಣವನ್ನು, ಅಂದರೆ ಆಡಳಿತಾರೂಢ ಪಕ್ಷಗಳನ್ನು, ಅರಸುತ್ತಲೇ ಚುನಾವಣೆ ಎನ್ನಲಾಗುವ ಪ್ರಜಾತಾಂತ್ರಿಕ ಪ್ರಹಸನದಲ್ಲಿ ಪಾಲ್ಗೊಳ್ಳುತ್ತಾರೆ.

ಕೆಲವು ಸೂಕ್ಷ್ಮ ಸಂಗತಿಗಳನ್ನು ಗಮನಿಸೋಣ

ಶಾಸಕರ ಖರೀದಿ ಅಥವಾ ಹರಾಜು ಪ್ರಹಸನ, ಹರಾಜು ಪ್ರಕ್ರಿಯೆಯಿಂದ ತಾಂತ್ರಿಕವಾಗಿ “ಜನಪ್ರತಿನಿಧಿ” ಎನ್ನಲಾಗುವ ಭೌತಿಕ ಸರಕುಗಳನ್ನು ರಕ್ಷಿಸಲು ರೆಸಾರ್ಟ್‍ಗಳಲ್ಲಿ ತಾತ್ಕಾಲಿಕವಾಗಿ ಶೇಖರಿಸಿಡುವುದು (ಈ ಕಸರತ್ತಿಗೆ ತಗಲುವ ವೆಚ್ಚವನ್ನು ಭರಿಸಲು ಒಬ್ಬ ಕಾರ್ಪೋರೇಟ್ ಅಥವಾ ರಿಯಲ್ ಎಸ್ಟೇಟ್ ಉದ್ಯಮಿ ಇರುತ್ತಾನೆ).

ಚುನಾಯಿತರಾದ ಕೆಲವೇ ತಿಂಗಳುಗಳ ನಂತರ ಜನಪ್ರತಿನಿಧಿಗಳು ತಮ್ಮ ಶಾಸಕ/ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಂದು ಪಕ್ಷದ ಲಾಂಛನ ಹೊತ್ತು ಅದೇ ಜನತೆಯಿಂದ ಪುನರಾಯ್ಕೆಯಾಗುವುದು (ಇಲ್ಲಿ ತೊಡಗಿಸಲಾಗುವ, ಹೆಚ್ಚಿನ ಚುನಾವಣಾ ವೆಚ್ಚ , ಅಂದರೆ ರಾಜಕೀಯ ಬಂಡವಾಳವನ್ನೂ ಸಹ ಕಾರ್ಪೋರೇಟ್ ಉದ್ಯಮಿಗಳು ಭರಿಸುತ್ತಾರೆ).

ಯಾವುದೋ ಹಗರಣದಲ್ಲಿ ಸಿಲುಕಿ ಇನ್ನೇನು ಶಿಕ್ಷೆಯಾಗುತ್ತದೆ ಎನ್ನುವ ಕ್ಷಣದಲ್ಲಿ ತಮ್ಮ ತವರುಮನೆ ತೊರೆದು ಆಡಳಿತಾರೂಢ ಪಕ್ಷಕ್ಕೆ ಜಿಗಿದು ಆರೋಪ ಮುಕ್ತರಾಗುವುದು ಮತ್ತು ಹೊಸ ಮನೆಯಲ್ಲಿ ಒಂದು ಉನ್ನತ ಹುದ್ದೆ ಪಡೆದು ಪ್ರಾಮಾಣಿಕತೆಯ ಪಾಠ ಪ್ರವಚನ ಮಾಡುವುದು.

ತಾವು ಬಯಸಿದ ಹುದ್ದೆ ಅಥವಾ ಅನುಕೂಲಗಳು ಸರ್ಕಾರದಲ್ಲಿ ದೊರೆಯದೆ ಹೋದರೆ ಒತ್ತಡದ ರಾಜಕಾರಣ ಮಾಡುವ ಮೂಲಕ ಸರ್ಕಾರಗಳನ್ನು ಅಸ್ಥಿರಗೊಳಿಸಿ ತಮ್ಮ ಸ್ಥಾನ/ಮಾನ ಕಾಪಾಡಿಕೊಳ್ಳಲು ಶ್ರಮಿಸುವುದು. –

ಇವೆಲ್ಲವೂ ಸ್ವತಂತ್ರ ಭಾರತದ ರಾಜಕೀಯ ಅವಿಷ್ಕಾರಗಳು ಮತ್ತು ಕಳೆದ ಹತ್ತು ಹನ್ನೆರಡು ವರ್ಷಗಳಲ್ಲಿ ಅಧಿಕೃತವಾಗಿ ಮಾನ್ಯತೆ ಪಡೆದಿರುವಂತಹ ವಿದ್ಯಮಾನಗಳು. ಅದರೂ ನಾವು ನಮ್ಮ ದೇಶ ಬಯಲುಶೌಚ ಮುಕ್ತವಾಗಿದೆ ಎಂದು ಬೆನ್ನುತಟ್ಟಿಕೊಳ್ಳುತ್ತಿದ್ದೇವೆ.

2016ರ ನೋಟು ಅಮಾನ್ಯೀಕರಣದ ನಂತರ ಭಾರತ ಕಪ್ಪುಹಣ ಮುಕ್ತವಾಗಿದೆ ಎಂದು ನಾವೇ ಜಗಜ್ಜಾಹೀರಾಗುವಂತೆ ಘೋಷಿಸಿಕೊಂಡಿರುವುದರಿಂದ ಚುನಾವಣೆಗಳಲ್ಲಿ ಹಂಚಲಾಗುವ ಹಣ, ಸೀರೆ, ಹೆಂಡ, ಟಿವಿ, ಲ್ಯಾಪ್ ಟಾಪ್, ಮೊಬೈಲ್, ಸೆಟ್ ಟಾಪ್ ಬಾಕ್ಸ್ ಇವೆಲ್ಲವೂ ಅಧಿಕೃತ ಖರ್ಚಿನ ವ್ಯಾಪ್ತಿಗೇ ಒಳಪಡುತ್ತವೆ. ಯಾರು ಎಷ್ಟು ಹಂಚಿದ್ದಾರೆ ಎನ್ನುವುದಷ್ಟೇ ಚರ್ಚೆಗೊಳಗಾಗುವುದೇ ಹೊರತು, ಈ ಹರಿದು ಹಂಚುವ ದುಷ್ಟ ಪರಂಪರೆಯ ವಿರುದ್ಧ ದನಿ ಎತ್ತುವ ಪರಿಜ್ಞಾನವನ್ನೂ ನಮ್ಮ ಸಮಾಜ ಕಳೆದುಕೊಂಡುಬಿಟ್ಟಿದೆ.

ಏಕೆಂದರೆ ಇಂತಹ ಪ್ರಕರಣಗಳನ್ನು ಆಲಿಸಿ, ವಿಚಾರಣೆ ನಡೆಸಿ, ಶಿಕ್ಷೆ ವಿಧಿಸುವಂತಹ ಒಂದು ನ್ಯಾಯ ವ್ಯವಸ್ಥೆಯನ್ನು ಆಳುವ ವರ್ಗಗಳು ರೂಪಿಸಿಯೇ ಇಲ್ಲ. ನಾಗರಿಕರು ಸಲ್ಲಿಸುವ ಅರ್ಜಿಗಳು ಸಾಕ್ಷ್ಯಾಧಾರಗಳಿಲ್ಲದೆ ಕಸದ ಬುಟ್ಟಿ ಸೇರುತ್ತವೆ. ಕಣ್ಣೆದುರಿನಲ್ಲೇ ದೇಹಗಳು ಸುಟ್ಟು ಕರಕಲಾದರೂ ಸಾಕ್ಷ್ಯ ಹೇಳಲಾಗದ ದೇಶದಲ್ಲಿ ಇಂತಹ ಕ್ಷುಲ್ಲಕ (?) ಘಟನೆಗಳಿಗೆ ಸಾಕ್ಷ್ಯ ಹೇಗೆ ತಾನೇ ದೊರೆಯಲು ಸಾಧ್ಯ ?

ನಮ್ಮ ವ್ಯವಸ್ಥೆಯೊಳಗಿನ ಈ ಅವ್ಯವಸ್ಥೆಯನ್ನು ಸರಿಪಡಿಸಲು, ಈ ದುರವಸ್ಥೆಯಿಂದ ಹೊರಬರಲು ಸಂವಿಧಾನದ ಎರಡು ಅಂಗಗಳು ಇನ್ನೂ ಸಾರ್ವಭೌಮ ಪ್ರಜೆಗಳ ಪಾಲಿಗೆ ಲಭ್ಯವಿದೆ. ಒಂದು ನ್ಯಾಯಾಂಗ ಮತ್ತೊಂದು ಮಾಧ್ಯಮ ವಲಯ. ನ್ಯಾಯಾಂಗ ವ್ಯವಸ್ಥೆಯಲ್ಲಿ , ಸಂಭವಿಸಿದ ಘಟನೆಗಿಂತಲೂ ಸಾಕ್ಷ್ಯಾಧಾರಗಳೇ ಪ್ರಧಾನವಾಗುವುದರಿಂದ ಕೆಲವೊಮ್ಮೆ ನಡೆದ ಅಪರಾಧಗಳು ನಡೆದೇ ಇಲ್ಲ ಎಂದು ತೀರ್ಪು ನೀಡಲಾಗುತ್ತದೆ.

ಇದನ್ನು ದೋಷ ಎನ್ನಲಾಗುವುದಿಲ್ಲ. ಏಕೆಂದರೆ ಸಾಂವಿಧಾನಿಕವಾಗಿ ಅಕ್ರಮ ಎಂದು ಪರಿಗಣಿಸಲ್ಪಡುವ ಯಾವುದೇ ಒಂದು ದುಷ್ಕೃತ್ಯಕ್ಕೆ ಅಥವಾ ಕುಕೃತ್ಯಕ್ಕೆ ಸಾಕ್ಷಿ ಪುರಾವೆ ಒದಗಿಸಬೇಕಿರುವುದು ಆಡಳಿತಾರೂಢ ಸರ್ಕಾರ. ಅಪರಾಧಿಗಳಿಗೆ ರಕ್ಷಣೆ ನೀಡುವುದರ ಮೂಲಕವೇ ಅಧಿಕಾರ ಅನುಭವಿಸುವ ಸರ್ಕಾರಗಳಿಂದ ಇದನ್ನು ನಿರೀಕ್ಷಿಸುವುದೂ ತಪ್ಪಲ್ಲವೇ ?

ಇನ್ನು ಈ ಸಾಕ್ಷ್ಯಾಧಾರಗಳನ್ನು ಒದಗಿಸುವ ನೈತಿಕ ಮತ್ತು ಸಾಂವಿಧಾನಿಕ ಹೊಣೆ ಮಾಧ್ಯಮಗಳ ಮೇಲಿರುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಭಾರತದ ಸುದ್ದಿ ಮಾಧ್ಯಮಗಳು ಮತ್ತು ವಿದ್ಯುನ್ಮಾನ ಸುದ್ದಿಮನೆಗಳು ಈ ನೈತಿಕತೆಯನ್ನು ಬಹುಮಟ್ಟಿಗೆ ಕಳೆದುಕೊಂಡಿವೆ.

ಕಳೆದ ಎರಡು ದಶಕಗಳಲ್ಲಿ ತಮ್ಮ ಸ್ವಂತಿಕೆ, ಸ್ವಾಯತ್ತತೆ ಮತ್ತು ಸ್ವಾಭಿಮಾನಿ ನೆಲೆಯನ್ನು ಕಳೆದುಕೊಂಡಿರುವ ಬಹುಪಾಲು ಮಾಧ್ಯಮ ಮನೆಗಳು ಕಾರ್ಪೋರೇಟ್ ಉದ್ಯಮಿಗಳ ಒಡೆತನದಲ್ಲಿರುವುದರಿಂದ, ಕಾರ್ಪೋರೇಟ್ ಪ್ರೇರಿತ ರಾಜಕಾರಣ ಮತ್ತು ರಾಜಕೀಯ ಪ್ರೇರಿತ ಔದ್ಯಮಿಕ ಹಿತಾಸಕ್ತಿಗಳ ನಡುವೆ ಸಿಲುಕಿ ತಮ್ಮ ನೈತಿಕ ಹೊಣೆಯನ್ನು ಮರೆತಿವೆ. ಹಾಗಾಗಿ ಈ ದೇಶದ ಸಾಮಾನ್ಯ ಪ್ರಜೆಗಳು ತಮ್ಮ ಮೇಲೆ ನಡೆಯುವ ದೌರ್ಜನ್ಯಗಳಿಗೆ, ತಮ್ಮ ಹಿತಾಸಕ್ತಿಯ ವಿರುದ್ಧ ನಡೆಯುವ ಅಕ್ರಮಗಳಿಗೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಒಂದು ಮಾರ್ಗವನ್ನೇ ಕಳೆದುಕೊಂಡಂತಾಗಿದೆ.

ಕಳೆದ ಆರು ವರ್ಷಗಳಲ್ಲಿ, ಅಧಿಕಾರ ಪೀಠಕ್ಕೆ ಹತ್ತಿರುವಾಗುವುದೇ ಮಾಧ್ಯಮ ಮನೆಗಳ, ಸಮೂಹಗಳ ಆದ್ಯತೆಯಾಗಿರುವುದರಿಂದ ಸುದ್ದಿಮನೆಗಳ ಸಂಪಾದಕರು ತಮ್ಮ ಸಾಂಸ್ಥಿಕ ಮತ್ತು ವ್ಯಕ್ತಿಗತ ಸ್ವಾಯತ್ತತೆ ಹಾಗೂ ಸ್ವಾಭಿಮಾನ ಎರಡನ್ನೂ ಅಧಿಕಾರಸ್ಥರಿಗೆ ಒತ್ತೆ ಇಟ್ಟಿರುವುದನ್ನು ಗಮನಿಸುತ್ತಲೇ ಇದ್ದೇವೆ.

ಹೀಗಿರುವುದರಿಂದಲೇ ಮಾಧ್ಯಮ ಲೋಕದ ದಿಗ್ಗಜರಿಗೂ ಅಭಯಹಸ್ತ, ಶ್ರೀರಕ್ಷೆ, ಅಕ್ಷಯ ವಸ್ತ್ರ ಸದಾ ಸಿದ್ಧವಾಗಿರುತ್ತದೆ. ಇತ್ತೀಚಿನ ಅರ್ನಾಬ್ ಗೋಸ್ವಾಮಿ ಪ್ರಕರಣ ಒಂದು ನಿದರ್ಶನವಷ್ಟೇ. ಈ ಪ್ರಕರಣದಲ್ಲಿ ಗೋಸ್ವಾಮಿಗೆ ಜಾಮೀನು ದೊರೆತದ್ದು ಆಕ್ಷೇಪಾರ್ಹವೇನಲ್ಲ. ಜಾಮೀನು ಒಬ್ಬ ಆರೋಪಿಯ ಕಾನೂನಾತ್ಮಕ ಹಕ್ಕು ಎಂದೇ ಭಾವಿಸಲಾಗುತ್ತದೆ.

ಆದರೆ ಗೋಸ್ವಾಮಿಗೆ ದೊರೆತಷ್ಟೇ ಶೀಘ್ರಗತಿಯಲ್ಲಿ 80ರ ವೃದ್ಧ ಸ್ಟಾನ್ ಸ್ವಾಮಿಗೆ ಏಕೆ ಜಾಮೀನು ದೊರೆಯುವುದಿಲ್ಲ ಎನ್ನುವ ಪ್ರಶ್ನೆ ಜಟಿಲವಾಗಿಯೇ ಉಳಿಯುತ್ತದೆ. ಮತ್ತದೇ ಸಮಸ್ಯೆ, ಸಾಕ್ಷ್ಯಾಧಾರಗಳನ್ನು ಒದಗಿಸುವವರು ಯಾರು ಎನ್ನುವುದು.

ಆದರೆ ನಮ್ಮ ಮುಂದಿರುವ ಪ್ರಶ್ನೆ ಗೋಸ್ವಾಮಿ ಅಲ್ಲ. ಸ್ಟಾನ್ ಸ್ವಾಮಿ ಮತ್ತು ಅವರಂತೆಯೇ ಯಾವುದೇ ಅಪರಾಧ ಮಾಡದೆಯೇ, ಜಾಮೀನು ಸಹ ಪಡೆಯಲಾಗದೆ ಸೆರೆವಾಸ ಅನುಭವಿಸುತ್ತಿರುವ ನೂರಾರು ಕಾರ್ಯಕರ್ತರು, ಹೋರಾಟಗಾರರು, ವಿದ್ವಾಂಸರು ಮತ್ತು ಲೇಖಕ-ಕಲಾವಿದರು. ಇವರು ಸಮಸ್ತ ಭಾರತವನ್ನು ಪ್ರತಿನಿಧಿಸುವ ಮನಸ್ಸನ್ನು ಹೊತ್ತವರು.

ಇದು ನಮ್ಮ ಮುಂದಿನ ಜಟಿಲ ಸಮಸ್ಯೆಯ ಒಂದು ಅಂಶ ಮಾತ್ರ. ಪ್ರಧಾನವಾಗಿ ನಮ್ಮೆದುರು ಇರುವುದು ಈ ದೇಶದ ಸಾಮಾಜಿಕ-ರಾಜಕೀಯ ವ್ಯವಸ್ಥೆಯ ದೌರ್ಬಲ್ಯ ಮತ್ತು ಆ ದೌರ್ಬಲ್ಯ ಏನು ಎಂದು ಗ್ರಹಿಸಲು ಸಾಧ್ಯವಾಗದ ನಾಗರಿಕರ ದೌರ್ಬಲ್ಯ. ಸಂವಿಧಾನ ಮತ್ತು ಆಡಳಿತ ವ್ಯವಸ್ಥೆ ಕುಸಿಯುತ್ತಿದ್ದರೆ ಅದಕ್ಕೆ ಕಾರಣ ವ್ಯವಸ್ಥೆಯ ಅಡಿಪಾಯವೇ ದುರ್ಬಲವಾಗಿದೆ, ಆಧಾರ ಸ್ತಂಭಗಳು ಶಿಥಿಲವಾಗುತ್ತಿವೆ.

ಈ ಸ್ತಂಭಗಳಿಗೆ ಒಂದು ಭೌತಿಕ ಸ್ವರೂಪ ಇಲ್ಲ, ಅಲ್ಲವೇ ? ಈ ದೇಶದ 130 ಕೋಟಿಗೂ ಹೆಚ್ಚು ಜನರನ್ನು ಸಾಂಕೇತಿಕವಾಗಿ ಈ ಸ್ತಂಭಗಳು ಪ್ರತಿನಿಧಿಸುತ್ತವೆ. ಈ ಬೃಹತ್ ಜನಸಂಖ್ಯೆಯಲ್ಲಿ ಶೇ 10ರಷ್ಟು ಜನರಲ್ಲಿ ನಾಗರಿಕ ಪ್ರಜ್ಞೆ, ಸಾಂವಿಧಾನಿಕ ಮೌಲ್ಯಗಳ ಅರಿವು, ಪ್ರಜಾತಂತ್ರದ ರಕ್ಷಣೆಯ ಪರಿಜ್ಞಾನ ಮತ್ತು ಜಾಗೃತಿ ಮೂಡಿಸಿದಲ್ಲಿ ಈ ಜನಸಂಖ್ಯೆಯೇ ಬೃಹದಾಕಾರದ ಸ್ತಂಭವಾಗಿ ದೇಶದ ವ್ಯವಸ್ಥೆಯನ್ನು ಪಾತಾಳಕ್ಕೆ ಕುಸಿಯುವುದರಿಂದ ತಪ್ಪಿಸಲು ಸಾಧ್ಯ. ಈ ನಿಟ್ಟಿನಲ್ಲಿ ರಾಜಕಾರಣ ನಿಮಿತ್ತ ಮಾತ್ರ.
ರಾಜಕೀಯ ಪಕ್ಷಗಳು ನೆಪ ಮಾತ್ರ.

ಬದಲಾವಣೆ, ಕತ್ತಲಿನಿಂದ ಬೆಳಕಿನೆಡೆಗೆ ಮುನ್ನಡೆಸುವ ಬದಲಾವಣೆ, ಬೇಕೆಂದರೆ ಈ ನಿಮಿತ್ತಗಳಿಂದಾಚೆಗೂ ಪ್ರಯತ್ನಗಳು ಸಾಧ್ಯ. ಸದ್ಯದ ಪರಿಸ್ಥಿತಿಯಲ್ಲಿ ಅರೆ ಜ್ಞಾನದಿಂದಲೋ, ಅಜ್ಞಾನದಿಂದಲೋ ಉನ್ಮಾದಕ್ಕೊಳಗಾಗಿ, ಸಮೂಹ ಸನ್ನಿಗೆ ಬಲಿಯಾಗಿರುವ ಯುವ ಪೀಳಿಗೆಯನ್ನು ಈ ಪ್ರಯತ್ನಗಳಲ್ಲಿ ತೊಡಗುವಂತೆ ಮಾಡುವುದು ಪ್ರಜ್ಞಾವಂತ ನಾಗರಿಕ ಸಮಾಜದ ಆದ್ಯತೆಯಾಗಬೇಕು.ಆಲೋಚನೆ ಮಾಡೋಣವೇ ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ

Published

on

ಸುದ್ದಿದಿನ,ದಾವಣಗೆರೆ:ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುತ್ತಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ದಾವಣಗೆರೆಯ ಬಾಷಾನಗರ,ಆನೆಕೊಂಡ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮನೆಮನೆಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರವಾಗಿ ಮತಯಾಚನೆ ಮಾಡಿ ನಂತರ ಮಾತನಾಡಿದರು.

ರಾಜ್ಯದಲ್ಲಿ ನಿಮ್ಮದೇ ಕಾಂಗ್ರೆಸ್ ಸರ್ಕಾರವಿದ್ದು, ಅದನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದೆ ಎಂದ ಅವರು ಶಾಮನೂರು ಕುಟುಂಬವು ಸದಾ ಜನರ ಸಮಸ್ಯೆಗಳ ಪರಿಹಾರಕ್ಕೆ ನಿಂತುಕೊಳ್ಳುತ್ತದೆ ಎಂಬ ಭರವಸೆಯನ್ನೂ ನೀಡಿದರು.

ಪ್ರಚಾರದ ವೇಳೆ ಸ್ಥಳೀಯರು ತಮ್ಮ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರ ಬಗ್ಗೆ ಜನರಿಗೆ ಭರವಸೆ ನೀಡಿದರು. ಜನರ ಹಕ್ಕುಪತ್ರದ ಸಮಸ್ಯೆಗಳು ಕುರಿತು ಈ ಹಿಂದೆ ಶಾಮನೂರು ಶಿವಶಂಕರಪ್ಪ ಅವರು ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಿದ್ದರು.ಈಗ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಜನರ ಎಲ್ಲಾ ಸಮಸ್ಯೆಗಳ ಪರಿಹಾರ ಮಾಡುತ್ತಿದ್ದಾರೆ ಎಂದರು.

ಯುವ ನಾಯಕ ಸಮರ್ಥ್ ಶಾಮನೂರು ಕುರಿತು ಮಾತನಾಡಿದ ಅವರು ಸಮರ್ಥ್ ಜನರೊಂದಿಗೆ ಉತ್ತಮ ಒಡನಾಟ ಹೊಂದಿರುವುದಾಗಿ ತಿಳಿಸಿದರು. ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಭಾಗವಹಿಸಿ, ಏಪ್ರಿಲ್ 9 ರಂದು ಮತಗಟ್ಟೆಗೆ ಬಂದು ಕ್ರಮ ಸಂಖ್ಯೆ 3ರ ‘ಹಸ್ತ’ ಚಿಹ್ನೆಗೆ ಮತ ಹಾಕಿ ಸಮರ್ಥ್ ಅವರನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು. ಈ ವೇಳೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ

Published

on

~ಗೋವರ್ಧನ ನವಿಲೇಹಾಳು

ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್‌ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್‌ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.

ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.

ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್‌ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್‌ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್‌ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್‌ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.

ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್‌ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್‌ನ ನಷ್ಟ ಅಪಾರ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್‌ಎಚ್‌ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್‌ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.

ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್‌ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್‌ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?

ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್‌ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್‌ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್‌ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್‌ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್‌ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.

ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್‌ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್‌ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.

ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್‌ನ ಮಕ್ಕಳ ಸಾವುಗಳು, ಇಸ್ರೇಲ್‌ನ ಗಾಯಗೊಂಡ ಕುಟುಂಬಗಳು, ಗಲ್ಫ್‌ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ

Published

on

ಸುದ್ದಿದಿನ,ದಾವಣಗೆರೆ:ಮುಖ್ಯಮಂತ್ರಿಗಳೇ, ಒಳ್ಳೆಯ ಕಾರಣಕ್ಕೆ ನಿಮ್ಮ ಸರಕಾರ ಯಾವಾಗ ಸುದ್ದಿಯಾಗಿದೆ ಹೇಳಿ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಸರಕಾರದ ದುರಾಡಳಿತ ಸಂಬಂಧ ಆರೋಪ ಪಟ್ಟಿ ಬಿಡುಗಡೆ ಮಾಡಿ ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ಕಳೆದ 3 ವರ್ಷಗಳಲ್ಲಿ ಈ ಸರಕಾರ ಒಳ್ಳೆಯ ಕಾರಣಕ್ಕೆ ಯಾವಾಗ ಹೆಸರಾಗಿತ್ತು ಎಂದು ಹೇಳಲೂ ಸಿಗುವುದಿಲ್ಲ. ಭ್ರಷ್ಟಾಚಾರ, ಬೆಲೆ ಏರಿಕೆ, ದರೋಡೆ ಪ್ರಕರಣಗಳು ಸುದ್ದಿಯಾದವು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸುಮಾರು 3 ವರ್ಷಗಳಾಗಿವೆ. ಈ ಅವಧಿಯ ಭ್ರಷ್ಟಾಚಾರ, ಬೆಲೆ ಏರಿಕೆ, ದುರಾಡಳಿತ ಕುರಿತ ಚಾರ್ಜ್ ಶೀಟನ್ನು ಇವತ್ತು ಬಿಡುಗಡೆ ಮಾಡಿದ್ದೇವೆ ಎಂದರು.

ಡ್ರಗ್ಸ್ ವಿಚಾರದಲ್ಲಿ ರಾಜ್ಯ ಸುದ್ದಿಯಾಗಿದೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ ಇದೆ. ಸರಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡರು. ಬಾಣಂತಿಯರು, ಹಸುಗೂಸುಗಳ ಸರಣಿ ಸಾವಿನ ಕಾರಣಕ್ಕೆ ಈ ಸರಕಾರ ಸುದ್ದಿಯಲ್ಲಿತ್ತು. ಸರಕಾರಿ ಆಸ್ಪತ್ರೆಯಲ್ಲಿ ಔಷಧಿ ಕೊರತೆಗೆ ಈ ಸರಕಾರ ಸುದ್ದಿಯಲ್ಲಿತ್ತು. ಅಂಗನವಾಡಿ ಶಿಕ್ಷಕಿಯರ ಚಳವಳಿ, ಆಶಾ ಕಾರ್ಯಕರ್ತೆಯರ ಚಳವಳಿ, ಅತಿಥಿ ಉಪನ್ಯಾಸಕರಿಂದ ಸಂಬಳ ಸಿಗುತ್ತಿಲ್ಲವೆಂದು ಹೋರಾಟ, ಗುತ್ತಿಗೆ ನೌಕರರ ಹೋರಾಟ- ಹೀಗೆ ಚಳವಳಿಗಳ ಕಾಟಕ್ಕೆ ಈ ಸರಕಾರ ಸುದ್ದಿಯಲ್ಲಿದೆ ಎಂದು ವ್ಯಂಗ್ಯವಾಡಿದರು.

ಒಳ್ಳೆಯ ಕಾರಣಕ್ಕೆ ಒಂದು ದಿನವೂ ಸುದ್ದಿಯಲ್ಲಿ ಇರಲಿಲ್ಲ

ಕಳೆದ 3 ವರ್ಷದಲ್ಲಿ ಕೆಟ್ಟ ಕಾರಣಕ್ಕಾಗಿ ಈ ಸರಕಾರ ಸುದ್ದಿಯಲ್ಲಿದೆಯೇ ಹೊರತು ಒಳ್ಳೆಯ ಕಾರಣಕ್ಕೆ ಒಂದು ದಿನವೂ ಸುದ್ದಿಯಲ್ಲಿ ಇರಲಿಲ್ಲ ಎಂದು ವಿಶ್ಲೇಷಿಸಿದರು. ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಲಿಯಾದವರು ನೂರಾರು ಜನ; ರಸ್ತೆ ಗುಂಡಿ ಕಾರಣಕ್ಕೆ ಈ ಸರಕಾರ ಸುದ್ದಿಯಲ್ಲಿತ್ತು. ಹೀಗೆ ಪ್ರತಿನಿತ್ಯ ಸರಕಾರ ಸುದ್ದಿಯಲ್ಲಿ ಇರುವುದು ಕೇವಲ ಕೆಟ್ಟ ಕಾರಣಕ್ಕಾಗಿ ಎಂದು ಆರೋಪಿಸಿದರು. ಅಭಿವೃದ್ಧಿ ಕೆಲಸ ಮಾಡಿದ್ದಕ್ಕಾಗಿ ಒಂದು ದಿನವೂ ಸುದ್ದಿಯಲ್ಲಿ ಇರಲಿಲ್ಲ ಎಂದು ಆಕ್ಷೇಪಿಸಿದರು.

ಮುಡಾ, ವಾಲ್ಮೀಕಿ ನಿಗಮದ ಹಗರಣ ಮಾನಗೆಟ್ಟ ಕೆಲಸವಲ್ಲವೇ?

ಮುಖ್ಯಮಂತ್ರಿಗಳು ಬಿಜೆಪಿಯವರು ಮಾನಗೆಟ್ಟವರು ಎಂದು ಭಾಷಣದಲ್ಲಿ ಹೇಳಿದ್ದಾರೆ. ಯಾರು ಮುಖ್ಯಮಂತ್ರಿಗಳೇ ಮಾನಗೆಟ್ಟವರು? ಮುಡಾ ಹಗರಣ ಯಾರ ಮೇಲೆ ಬಂತು? ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ನಿಮ್ಮ ಸರಕಾರದ ಸಚಿವರೇ ರಾಜೀನಾಮೆ ಕೊಡಬೇಕಾಯಿತಲ್ಲವೇ? ಇದು ಮಾನಗೆಟ್ಟ ಕೆಲಸವಲ್ಲವೇ? ಎಂದು ಕೇಳಿದರು. ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಬಳಕೆ ಆಗಬೇಕಾದ ಹಣವನ್ನು ನಿಮ್ಮ ಒಬ್ಬ ಸಚಿವರು ಹೆಂಡತಿಗೆ ಒಡವೆ ಕೊಡಿಸಲು, ಚುನಾವಣೆಗೆ ಬಾರ್ ನಿಂದ ಎಣ್ಣೆ ಸರಬರಾಜು ಮಾಡಲು ಹಣ ಬಳಸಿದ್ದು ಮರ್ಯಾದೆ ಇದ್ದವರು ಮಾಡುವ ಕೆಲಸವೇ ಎಂದು ಕೇಳಿದರು.

ಮರ್ಯಾದೆ ಇದ್ದವರು ಅಧಿಕಾರಕ್ಕೆ ಅಂಟಿಕೊಳ್ಳುವರೇ?
ನೀವು ಬಿಜೆಪಿ ಮೇಲೆ ಶೇ 40 ಆರೋಪ ಹೊರಿಸಿ ಅಧಿಕಾರಕ್ಕೆ ಬಂದಿದ್ದೀರಿ. ಗುತ್ತಿಗೆದಾರರು ಶೇ 60 ಕಮಿಷನ್‍ನ ಸರಕಾರ ಎಂದು ನಿಮ್ಮ ಸರಕಾರದ ಮೇಲೆ ಆರೋಪ ಮಾಡಿದ್ದಾರಲ್ಲವೇ? ಮರ್ಯಾದೆ ಇದ್ದವರು ಆ ಆರೋಪ ಕೇಳಿಯೂ ಅಧಿಕಾರಕ್ಕೆ ಅಂಟಿಕೊಳ್ಳುತ್ತಾರಾ ಎಂದು ಪ್ರಶ್ನೆಯನ್ನು ಮುಂದಿಟ್ಟರು. ನಿಮ್ಮ ಅಬಕಾರಿ ಸಚಿವರ ಮೇಲೆ ಬಾರ್ ಮಾಲೀಕರು ತಿಂಗಳ ಮಾಮೂಲಿ ಕೇಳುವ ಕುರಿತು ಆರೋಪ ಮಾಡಿದ್ದಾರಲ್ಲವೇ? ಇದು ಮರ್ಯಾದೆ ಇದ್ದವರು ಮಾಡುವ ಕೆಲಸವೇ? ಮಾನಗೆಟ್ಟವರು ಮಾಡುವ ಕೆಲಸವೇ ಎಂದು ಪ್ರಶ್ನೆ ಹಾಕಿದರು.

ಮುಖ್ಯಮಂತ್ರಿಗಳೇ, ಇಡೀ ಸಂಪುಟದಲ್ಲಿ ಮಾನಗೆಟ್ಟವರು ಇದ್ದಾರೆಯೇ ಹೊರತು ಮರ್ಯಾದೆ ಇದ್ದವರು ಯಾರಿದ್ದಾರೆ ಹೇಳಿ ಎಂದು ಕೇಳಿದರು. ಮಾನಗೆಟ್ಟ ಕೆಲಸ ಮಾಡುವವರನ್ನು ಸಚಿವರನ್ನಾಗಿ ಮಾಡಿಕೊಂಡು, ಶೇ 60ರ ಆರೋಪ ಹೊತ್ತುಕೊಂಡು ನೀವು ಬಿಜೆಪಿ ವಿರುದ್ಧ ಮಾನಗೆಟ್ಟ ಬಿಜೆಪಿ ಎಂದು ಆರೋಪ ಮಾಡುತ್ತೀರಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ನಿಮ್ಮದು ದರೋಡೆಕೋರ ಸರಕಾರವಲ್ಲವೇ?

ರಾಜ್ಯದ ಉಸ್ತುವಾರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರು ಬಿಜೆಪಿಯನ್ನು ಜೇಬುಗಳ್ಳರು ಎಂದಿದ್ದಾರೆ. ನೀವು ಬಿಜೆಪಿ ಸರಕಾರವನ್ನು ಜೇಬುಗಳ್ಳರು ಎಂದು ಕರೆಯುವುದಾದರೆ ಯುದ್ಧದ ಕಾರಣಕ್ಕೆ ಕೆಲವು ಬೆಲೆ ಏರಿಕೆಗಳಾಗಿವೆ. ನಿಮ್ಮ ಸರಕಾರವನ್ನು ದರೋಡೆಕೋರ ಸರಕಾರ ಎಂದು ಕರೆಯುವುದರಲ್ಲಿ ತಪ್ಪೇನಿದೆ ಎಂದು ಕೇಳಿದರು. ನಿಮ್ಮ ಸರಕಾರ ಯಾವ್ಯಾವ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ ಎಂಬ ಪಟ್ಟಿ ಕೊಡಲೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.

20 ರೂ. ಸ್ಟಾಂಪ್ ಪೇಪರ್ ಮಾಯವಾಗಿದೆ..

ನಂದಿನಿ ಹಾಲಿನ ದರ ಏರಿಕೆ ಮಾಡಿದ್ದೀರಿ. ಪೆಟ್ರೋಲ್ ಮೇಲೆ 3 ರೂ. ಸೆಸ್, ಡೀಸೆಲ್ ಮೇಲೆ 5.08 ರೂ. ಸೆಸ್ ಹಾಕಿದ್ದೀರಿ. ಕೇಂದ್ರ ಸರಕಾರ ದರ ಇಳಸಿದರೆ ನೀವು ಸೆಸ್ ಹಾಕಿ ಅವರ ಲಾಭ ಜನರಿಗೆ ಸಿಗದಂತೆ ಮಾಡಿದ್ದೀರಿ ಎಂದು ಟೀಕಿಸಿದರು. ಬಸ್ ಪ್ರಯಾಣ ದರ ಶೇ 15, ಮೆಟ್ರೋ ದರ ಶೇ 50ರಷ್ಟು ಹೆಚ್ಚಿಸಿದ್ದೀರಿ. ಪ್ರತಿ ಯೂನಿಟ್ 4.50 ರೂ. ವಿದ್ಯುತ್ ದರವನ್ನು ರೂ 5.90 ಮಾಡಿದ್ದೀರಿ. ವಾಣಿಜ್ಯ ದರವನ್ನು 7 ರೂ.ಗೂ ಹೆಚ್ಚಳ ಮಾಡಲಾಗಿದೆ. ಅಬಕಾರಿ ಸುಂಕವನ್ನು ಶೇ 20ರಷ್ಟು ಏರಿಸಿದ್ದೀರಿ. ಸ್ಟಾಂಪ್ ಡ್ಯೂಟಿ ಹೆಚ್ಚಿಸಿದ್ದೀರಿ. 20 ರೂ. ಸ್ಟಾಂಪ್ ಪೇಪರ್ ಮಾಯವಾಗಿದೆ. ಅದರ ಜಾಗಕ್ಕೆ 100, 200 ರೂ.ಗಳ ಸ್ಟಾಂಪ್ ಪೇಪರ್ ಖರೀದಿಸಬೇಕಾಗಿದೆ. ನಮ್ಮ ಚಿನ್ನ ನಾವು ಒತ್ತೆ ಇಡಲು 0.5ರಷ್ಟು ಸ್ಟಾಂಪ್ ಡ್ಯೂಟಿ ಕಟ್ಟಬೇಕಾಗಿದೆ ಎಂದು ಆಕ್ಷೇಪಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending