Connect with us

ದಿನದ ಸುದ್ದಿ

ಕಾರ್ಪೋರೇಟ್ ಬಾಹುಗಳಲ್ಲಿ ಭಾರತದ ದುಡಿಯುವ ವರ್ಗ

Published

on

ಸಾಂದರ್ಭಿಕ ಚಿತ್ರ

ಭವಿಷ್ಯದ ಬದುಕು ಮಸುಕಾಗುತ್ತಿದ್ದರೂ ಉನ್ಮಾದದಲ್ಲಿ ಮೈಮರೆಯುತ್ತಿರುವ ಶ್ರಮಜೀವಿಗಳ ನಡುವೆ

  • ನಾ ದಿವಾಕರ

ಭಾರತ ಇಂದು ಮತ್ತು ನಾಳೆ ಮತ್ತೊಂದು ಮುಷ್ಕರಕ್ಕೆ ಮುಖಾಮುಖಿಯಾಗಲಿದೆ. ಮಾರ್ಚ್ 28-29ರ ಎರಡು ದಿನಗಳ ಸಾರ್ವತ್ರಿಕ ಮುಷ್ಕರದಲ್ಲಿ ದೇಶದ ಕೋಟ್ಯಂತರ ಕಾರ್ಮಿಕರು, ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ.

ನವ ಉದಾರವಾದ, ಜಾಗತೀಕರಣ, ಖಾಸಗೀಕರಣ, ಉದ್ಯಮಗಳ ಕಾರ್ಪೋರೇಟೀಕರಣ ಮತ್ತು ಸಾರ್ವಜನಿಕ ಸ್ವತ್ತುಗಳ ಹರಾಜು ಪ್ರಕ್ರಿಯೆಯ ವಿರುದ್ಧ ದೇಶದ 56 ಕೋಟಿ ಶ್ರಮಜೀವಿಗಳ ಪೈಕಿ ಕನಿಷ್ಟ 20 ಕೋಟಿ ಜನರು ಈ ಎರಡು ದಿನಗಳ ಮುಷ್ಕರದಲ್ಲಿ ತಮ್ಮ ಪ್ರತಿರೋಧವನ್ನು ದಾಖಲಿಸಲಿದ್ದಾರೆ.

ಭಾರತ ಜಾಗತೀಕರಣ ನೀತಿಗಳನ್ನು ಒಪ್ಪಿಕೊಂಡ ದಿನದಿಂದ, ಕಳೆದ ಮೂರು ದಶಕಗಳಿಂದ, ಪ್ರತಿವರ್ಷ ನಡೆಯುತ್ತಿರುವ ಕಾರ್ಮಿಕರ ಸಾರ್ವತ್ರಿಕ ಮುಷ್ಕರ, ಡಿಜಿಟಲೀಕರಣ ಯುಗದಲ್ಲಿ ಮತ್ತಷ್ಟು ತೀವ್ರತೆ ಪಡೆದುಕೊಳ್ಳುತ್ತಿದೆ.

ಉದ್ಯೋಗದಲ್ಲಿರುವವರನ್ನು ಕಾಡುವಷ್ಟೇ ಅನಿಶ್ಚಿತತೆ, ಅಭದ್ರತೆ ಉದ್ಯೋಗಾಕಾಂಕ್ಷಿಗಳನ್ನೂ ಕಾಡುತ್ತಿರುವ ಈ ಸಂದರ್ಭದಲ್ಲಿ, ಕಾರ್ಮಿಕ ಸಮುದಾಯ ಏಕೆ ಬೀದಿಗಿಳಿದು ಹೋರಾಡುತ್ತಿದೆ ಎಂದು ಯೋಚಿಸುವ ವಿವೇಚನೆ, ವಿವೇಕವನ್ನೂ ಕಳೆದುಕೊಂಡಿರುವ ಈ ದೇಶದ ಹಿತವಲಯದ ಸುಶಿಕ್ಷಿತ ಸಮುದಾಯ, ಮತೀಯವಾದದ ಉನ್ಮಾದಕ್ಕೆ ಬಲಿಯಾಗಿ, “ಹಸಿದ ಹೊಟ್ಟೆಯಿಂದ ಅನ್ನ ಕಸಿಯುವ ” ಮತಾಂಧರ ಅಭಿಯಾನಕ್ಕೆ ಕೈಜೋಡಿಸುತ್ತಿದೆ.

ಈ ಅವನತಿಯ ವಾತಾವರಣದಲ್ಲೇ, ಅವಸಾನ ಹೊಂದುತ್ತಿರುವ ಸಾಮಾಜಿಕ ಪ್ರಜ್ಞೆ ಮತ್ತು ನಶಿಸಿಹೋಗುತ್ತಿರುವ ಮಾನವೀಯ ಸಂವೇದನೆಗಳನ್ನರಸುತ್ತಾ, ಈ ದೇಶದ ಕೋಟ್ಯಂತರ ಕಾರ್ಮಿಕರು ತಮ್ಮ ಇಂದಿನ ಮತ್ತು ಭವಿಷ್ಯದ ಹಾದಿಗಳತ್ತ ಕಣ್ಣಗಲಿಸಿ ನೋಡುತ್ತಿದ್ದಾರೆ.

ಬದುಕು ಕಟ್ಟಿಕೊಳ್ಳಲು ಲಭ್ಯವಿರುವ ಅವಕಾಶಗಳನ್ನೂ ಸಹ ಮತೀಯ ದ್ವೇಷದ ಜ್ವಾಲೆ ದಹಿಸುತ್ತಿರುವ ಸಂದರ್ಭದಲ್ಲಿ, ಮಲ್ಲಿಗೆ ಹೂ ಮಾರುವವರಿಂದ ಷಾಪಿಂಗ್ ಮಾಲ್ ಮಾಲೀಕರವರೆಗೆ ವ್ಯಾಪಿಸಿರುವ ದ್ವೇಷ ರಾಜಕಾರಣದ ವಿಷಜ್ವಾಲೆ, ಭಾರತೀಯ ಸಮಾಜದ ಅಂತಃಸತ್ವವನ್ನೇ ಭಸ್ಮ ಮಾಡುವ ನಿಟ್ಟಿನಲ್ಲಿ ಮುಂದುವರೆಯುತ್ತಿದೆ. ದುಡಿಯುವ ವರ್ಗಗಳಿಗೆ ತಮ್ಮ ನಿತ್ಯ ಬದುಕಿನ ಅನಿಶ್ಚಿತತೆಗಳು ಕಾಡುತ್ತಿರುವ ಸಂದರ್ಭದಲ್ಲೇ, ಸಣ್ಣ ಪುಟ್ಟ ಬೀದಿ ಬದಿ ವ್ಯಾಪಾರಿಗಳಿಗೆ, ಅವರ ಮತನಿಷ್ಠೆಯ ಕಾರಣಕ್ಕಾಗಿ, ಭವಿಷ್ಯದ ಹಾದಿಯನ್ನು ಮುಚ್ಚಲಾಗುತ್ತಿದೆ.

ಸಾಂಸ್ಕೃತಿಕ ರಾಷ್ಟ್ರೀಯತೆ, ಮತೀಯ ರಾಜಕಾರಣ ಮತ್ತು ಕಾರ್ಪೋರೇಟ್ ಮಾರುಕಟ್ಟೆಯ ಹಿತಾಸಕ್ತಿಗಳು ಒಂದಾಗುತ್ತಿರುವ ಸಂದರ್ಭದಲ್ಲೇ ಭಾರತದ ಕೋಟ್ಯಂತರ ಶ್ರಮಜೀವಿಗಳು ತಮ್ಮನ್ನು ಆವರಿಸಿರುವ ಅಸ್ಮಿತೆಗಳ ಶೃಂಖಲೆಗಳಿಂದ ಮುಕ್ತಿ ಪಡೆಯಬೇಕಿದೆ. ಮಂದಿರ ಮಸೀದಿಯಿಂದ ಆರಂಭವಾದ ಕೋಮುವಾದ-ಮತಾಂಧತೆಯ ದಳ್ಳುರಿ ಇಂದು ಶಾಲಾ ಕಾಲೇಜುಗಳನ್ನು ದಾಟಿ, ಸಂತೆ ಮಾಳಕ್ಕೆ ಬಂದು ನಿಂತಿದೆ.

ಈ ವಿಷಪಂಜುಗಳು ಇಡೀ ವಾತಾವರಣವನ್ನು ಅತ್ಯುಷ್ಣವಲಯವನ್ನಾಗಿ ಮಾಡುತ್ತಿರುವ ಸಂದರ್ಭದಲ್ಲೇ, ಭಾರತದ 20 ಕೋಟಿ ಕಾರ್ಮಿಕರು ಕೆಂಬಾವುಟಗಳನ್ನು ಹಿಡಿದು ತಮ್ಮ ಭವಿಷ್ಯದ ಬೆಳಕು ಕಾಣಲು ತವಕಿಸುತ್ತಿದ್ದಾರೆ. ಇಂದು ಕೆಂಬಾವುಟಗಳನ್ನು ಹಿಡಿದು ಜಿಂದಾಬಾದ್ ಕೂಗುವ ಧ್ವನಿಗಳೇ ನಾಳೆ ಯಾವುದೋ ಒಂದು ಜಾತ್ರೆಯಲ್ಲಿ, ಸಂತೆ ಮಾಳದಲ್ಲಿ ಮುಸಲ್ಮಾನನೊಬ್ಬನ ಅಂಗಡಿಯನ್ನು ಧ್ವಂಸ ಮಾಡುವ ಕಾಲಾಳು ಆಗುವ ದುರಂತವನ್ನು ನಾವು ಎದುರಿಸುತ್ತಿದ್ದೇವೆ.

ಈ ದುರಂತದ ನಡುವೆಯೇ ಎರಡು ದಿನಗಳ ಸಾರ್ವತ್ರಿಕ ಮುಷ್ಕರದ ಕಾರಣಗಳನ್ನೂ ತಿಳಿದುಕೊಳ್ಳಬೇಕಿದೆ. ಜಾತಿ-ಮತದ ಅಸ್ಮಿತೆಗಳು, ಧಾರ್ಮಿಕ ಶ್ರದ್ಧೆ ನಂಬಿಕೆಗಳು ಒದಗಿಸುವ ಒಂದು ಭೌತಿಕ ಭೂಮಿಕೆಯ ಮೇಲೆ ಸ್ಥಿರವಾಗಿ ನಿಲ್ಲಬೇಕಾದರೆ, ಶಾರೀರಿಕ ಸ್ವಾಸ್ಥ್ಯ ಮತ್ತು ಸಾಮಥ್ರ್ಯಗಳೂ ಬೇಕು ಎನ್ನುವ ವಾಸ್ತವವನ್ನು ಇಂದಿನ ಯುವ ಪೀಳಿಗೆ ಅರ್ಥಮಾಡಿಕೊಳ್ಳಬೇಕಿದೆ. ಈ ಸ್ವಾಸ್ಥ್ಯ ಮತ್ತು ಆತ್ಮ ಸ್ಥೈರ್ಯವನ್ನು ಗಳಿಸಲು ಒಂದು ಸುಭದ್ರ, ಸುರಕ್ಷಿತ ಆರ್ಥಿಕ ಬುನಾದಿಯೂ ಅತ್ಯಗತ್ಯ.

75 ವರ್ಷಗಳ ಸ್ವತಂತ್ರ ಆಳ್ವಿಕೆಯಲ್ಲಿ ಭಾರತ ಈ ಬುನಾದಿಯನ್ನು ಒದಗಿಸಿದೆ. ಇಂದು ಎತ್ತರದ ವೇದಿಕೆಗಳಲ್ಲಿ ನಿಂತು ಸಮಾಜವಾದಿ ಆರ್ಥಿಕ ನೀತಿ ಮತ್ತು ಸಮ ಸಮಾಜದ ಪರಿಕಲ್ಪನೆಗಳನ್ನು ಅಪಹಾಸ್ಯ ಮಾಡುತ್ತಿರುವ ಕಾರ್ಪೋರೇಟ್ ಪೂಜಾರಿಗಳು ಇದೇ ಸಮಾಜವಾದಿ ಆರ್ಥಿಕ ನೀತಿಗಳ ಫಲಾನುಭವಿಗಳು ಅಲ್ಲವೇ ? ಏಳು ದಶಕಗಳ ಕಾಲ ಕೋಟ್ಯಂತರ ಶ್ರಮಜೀವಿಗಳು ಕಟ್ಟಿದ ಸುಭದ್ರ ಸೌಧಗಳನ್ನು ಹಂತಹಂತವಾಗಿ ಶಿಥಿಲಗೊಳಿಸುತ್ತಿರುವ ನರೇಂದ್ರ ಮೋದಿ ಸರ್ಕಾರ ಈಗ ಭಾರತದ ಸಮಸ್ತ ಸಂಪತ್ತು ಮತ್ತು ಸಂಪನ್ಮೂಲಗಳನ್ನೇ ಹರಾಜು ಮಾಡಲು ಸಜ್ಜಾಗುತ್ತಿದೆ. ಪ್ರಜಾತಂತ್ರ ಭಾರತದ ಪ್ರಬುದ್ಧ (?) ಮತದಾರರು ಈ ಹರಾಜು ಪ್ರಕ್ರಿಯೆಯನ್ನು ಅನುಮೋದಿಸುತ್ತಲೇ ಬಂದಿದ್ದಾರೆ.

ಈ ದೇಶದ ಭೌತಿಕ ಸಂಪತ್ತು ಇಲ್ಲಿನ ಶ್ರಮಜೀವಿಗಳ ದುಡಿಮೆಯ ಫಲ. ಇದು ಭಾರತದ ನಾಗರಿಕರ ಆಸ್ತಿ. ಬ್ರಿಟೀಷರಿಂದ ವಿಮೋಚನೆ ಪಡೆದ ಭಾರತ ಏಕ ಕಾಲಕ್ಕೆ ಅಂತಾರಾಷ್ಟ್ರೀಯ ಬಂಡವಾಳಶಾಹಿಯಿಂದಲೂ ಮುಕ್ತಿ ಪಡೆಯಲಿಲ್ಲವಾದರೂ, ಮಿಶ್ರ ಆರ್ಥಿಕ ನೀತಿಗಳನ್ನು ಅನುಸರಿಸುತ್ತಲೇ ಸಾರ್ವಜನಿಕ ಉದ್ದಿಮೆಗಳನ್ನು ಪೋಷಿಸಿ ಬೆಳೆಸಲಾಯಿತು.

ಔದ್ಯೋಗಿಕ ಕ್ಷೇತ್ರದಲ್ಲಿ, ಸೇವಾ ವಲಯದಲ್ಲಿ, ಹಣಕಾಸು ವಲಯದಲ್ಲಿ ಎಪ್ಪತ್ತು ವರ್ಷಗಳ ಭಾರತ ಸೃಷ್ಟಿಸಿದ ಬ್ಯಾಂಕ್, ವಿಮೆ, ಸಾರಿಗೆ, ಕೈಗಾರಿಕೆ ಮತ್ತು ತಯಾರಿಕಾ ವಲಯಗಳು ಇಂದು ಮುಕ್ತ ಮಾರುಕಟ್ಟೆಯಲ್ಲಿ ಹರಾಜಾಗುತ್ತಿವೆ. ಲಕ್ಷಾಂತರ ಕುಟುಂಬಗಳಿಗೆ ಜೀವನಾಡಿಯಾಗಿರುವ ರೈಲ್ವೆಯಂತಹ ಸಾರಿಗೆ ವ್ಯವಸ್ಥೆಯನ್ನೂ ಕಾರ್ಪೋರೇಟ್ ವಲಯಕ್ಕೆ ಒಪ್ಪಿಸುವ ಮೂಲಕ, ಕೋಟ್ಯಂತರ ಶ್ರಮಜೀವಿಗಳನ್ನು ಬೀದಿಪಾಲು ಮಾಡಲಾಗುತ್ತದೆ.

50 ವರ್ಷಗಳ ಕಾಲ ದೇಶದ ಮೂಲೆ ಮೂಲೆಗಳನ್ನು ತಲುಪಿ, ಬ್ಯಾಂಕಿಂಗ್ ಸೇವೆಯನ್ನು ಒದಗಿಸುವ ಮೂಲಕ ತಳಮಟ್ಟದ ಜನಸಮುದಾಯಗಳಿಗೂ ಆರ್ಥಿಕ ಸ್ಥಿರತೆಯನ್ನು ತಂದು ಕೊಟ್ಟ ಸಾರ್ವಜನಿಕ ಬ್ಯಾಂಕುಗಳು, ತಮ್ಮ ಭವಿಷ್ಯದ ಬದುಕನ್ನು ನೆಮ್ಮದಿಯಿಂದ ಕಳೆಯಲು ಜನಸಾಮಾನ್ಯರಿಗೆ ನೆರವಾದ ಜೀವ ವಿಮಾ ನಿಗಮ ಇಂದು ಔದ್ಯಮಿಕ ಮೊಸಳೆಗಳಿಗೆ ಆಹಾರವಾಗಲಿವೆ.

ಮೂರು ಪೀಳಿಗೆಗಳನ್ನು ಸಲಹಿ, ಲಕ್ಷಾಂತರ ಜನರ ಬದುಕಿಗೆ ಸುಸ್ಥಿರತೆಯನ್ನು ತಂದುಕೊಟ್ಟ ಸಾರ್ವಜನಿಕ ಉದ್ದಿಮೆಗಳು ಒಂದೊಂದಾಗಿ ಅವಸಾನ ಹೊಂದುತ್ತಿವೆ. ಬಿಇಎಂಎಲ್, ಬಿಹೆಚ್‍ಇಎಲ್, ಹೆಚ್‍ಎಲ್, ಬಿಇಎಲ್, ಹೆಚ್‍ಎಂಟಿ, ನೌಕಾ ಸಾರಿಗೆಯ ಉದ್ದಿಮೆಗಳು, ಕಲ್ಲಿದ್ದಲು ಗಣಿಗಳು ಇಂದು ಜಾಗತಿಕ ಬಂಡವಾಳಶಾಹಿಗೆ ಬಲಿಯಾಗುತ್ತಿವೆ.

ತಮ್ಮ ಮತೀಯ ಅಸ್ಮಿತೆಯಿಂದಲೇ ವ್ಯಾಪಾರ ಮಾಡುವ ಅವಕಾಶಗಳನ್ನೂ ಕಳೆದುಕೊಳ್ಳುವ ದುರಂತ ಸನ್ನಿವೇಶವನ್ನು ಮುಸ್ಲಿಂ ವ್ಯಾಪಾರಿಗಳು ಎದುರಿಸುತ್ತಿರುವಾಗಲೇ, ವಾಲ್‍ಮಾರ್ಟ್‍ನಂತಹ ತಿಮಿಂಗಿಲಗಳು ಭಾರತದ ಮೂಲೆ ಮೂಲೆಗಳನ್ನೂ ತಲುಪುತ್ತಿದ್ದು, ಜನಸಾಮಾನ್ಯರ ದುಸ್ತರ ಬದುಕಿಗೆ ಸುಲಭವಾಗಿ ನಿಲುಕುವ ಕಿರಾಣಿ ಅಂಗಡಿಗಳನ್ನು ನುಂಗಿಹಾಕಲು ಬರುತ್ತಿದೆ.

ಜಾತ್ರೆಯಲ್ಲಿನ ಮುಸಲ್ಮಾನನೊಬ್ಬನ ಅಂಗಡಿಯನ್ನು ಎತ್ತಂಗಡಿ ಮಾಡುವ ಸಂಭ್ರಮದಲ್ಲಿರುವ ಹಿಂದೂ ವರ್ತಕನಿಗೆ ತನ್ನ ಅಡಿಪಾಯವೂ ಅಲುಗಾಡುತ್ತಿದೆ ಎಂಬ ಪ್ರಜ್ಞೆಯೇ ಇಲ್ಲದ ರೀತಿಯಲ್ಲಿ ಮತಾಂಧತೆಯ ಉನ್ಮಾದವನ್ನು ಹರಡಲಾಗುತ್ತಿದೆ. ಬಂಡವಾಳಶಾಹಿ ಪೋಷಿಸುವ ಮತ್ತು ಸಲಹುವ ವ್ಯಾಪಾರಿ ಧರ್ಮ ಸಣ್ಣ ಮೀನುಗಳನ್ನು ನಿರ್ದಾಕ್ಷಿಣ್ಯವಾಗಿ ನುಂಗಿನೀರುಕುಡಿಯುವ ತಿಮಿಂಗಿಲದಂತೆ ಎಲ್ಲರನ್ನೂ ಆವರಿಸುತ್ತಿದೆ. ಆದರೂ ಮತೀಯ ಉನ್ಮಾದಕ್ಕೆ ಬಲಿಯಾಗಿರುವ ಸುಶಿಕ್ಷಿತ ಸಮಾಜವೂ ಈ ಅಪಾಯವನ್ನು ನಿರ್ಲಕ್ಷಿಸುತ್ತಿದೆ.

ಯುವ ಪೀಳಿಗೆಯಲ್ಲಿ ಕೌಶಲ್ಯವನ್ನು ಹೆಚ್ಚಿಸುವ ಮೂಲಕ ಉದ್ಯೋಗ ಮಾರುಕಟ್ಟೆಯ ಸರಕುಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಿರುವ ಒಕ್ಕೂಟ ಸರ್ಕಾರ, ಬೃಹತ್ ಸಂಖ್ಯೆಯ ಯುವ ಸಮುದಾಯ ತನ್ನ ನಾಳಿನ ಚಿಂತೆಗಳಲ್ಲಿ ಬಸವಳಿಯುತ್ತಿರುವುದನ್ನು ಕಂಡೂ ಕಾಣದಂತೆ ವರ್ತಿಸುತ್ತಿದೆ. ಈಗಾಗಲೇ ಸುಭದ್ರ ನೌಕರಿ, ಸವಲತ್ತು, ಸೌಲಭ್ಯ ಮತ್ತು ಸುರಕ್ಷತೆಯ ವಾತಾವರಣದಲ್ಲಿ ದುಡಿಯುತ್ತಿರುವ ಸಂಘಟಿತ ವಲಯದ ಕಾರ್ಮಿಕರು, ತಮ್ಮ ಹಿಂದೆ ನಾಳಿನ ಚಿಂತೆಗಳ ಹೊತ್ತು ಸಾಲುಗಟ್ಟಿ ನಿಂತಿರುವ ಲಕ್ಷಾಂತರ ಯುವಕರತ್ತ ನೋಡದೆ ಹೋದರೆ, ಅವರು ಎತ್ತಿಹಿಡಿಯುವ ಕೆಂಬಾವುಟ ಮತ್ತು ಕಾರ್ಮಿಕ ಐಕ್ಯತೆಯ ಘೋಷಣೆಗಳು ವ್ಯರ್ಥಾಲಾಪವಾಗುತ್ತದೆ.

ವರ್ಗ ಪ್ರಜ್ಞೆಯನ್ನು ಬೆಳೆಸಿಕೊಳ್ಳದೆ ಕೇವಲ ಅರ್ಥಪ್ರಜ್ಞೆಯಲ್ಲೇ ತಮ್ಮ ಜೀವನವಿಡೀ ಕಳೆಯುವ ಸಂಘಟಿತ ಕಾರ್ಮಿಕರಲ್ಲಿ ಇನ್ನಾದರೂ ಹೊಸ ಪ್ರಜ್ಞೆ ಮೂಡಬೇಕಿದೆ. ತಾವು ಬದುಕುವ ಹಿತವಲಯದಿಂದಾಚೆಗೆ ಇರುವ ಒಂದು ಪ್ರಪಂಚ ಸಾಂಸ್ಕØತಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ದುರಂತ ಅವಸಾನದತ್ತ ಸಾಗುತ್ತಿದೆ ಎನ್ನುವ ಸುಡುವಾಸ್ತವವನ್ನು ಕಾರ್ಮಿಕರು ಅರ್ಥಮಾಡಿಕೊಳ್ಳಬೇಕಿದೆ.

ಜಾತಿ, ಮತ, ಧರ್ಮ ಮತ್ತು ಮತೀಯ ಅಸ್ಮಿತೆಗಳ ಸಂಕೋಲೆಗಳಿಂದ ತಮ್ಮ ಭೌತಿಕ ಮತ್ತು ಬೌದ್ಧಿಕ ಪ್ರಜ್ಞೆಯನ್ನು ಶೋಷಕ ವರ್ಗಗಳಿಗೆ ಒತ್ತೆ ಇಟ್ಟಿರುವ ಹಿತವಲಯದ ಕಾರ್ಮಿಕ ಸಮುದಾಯ, ತಾವು ದಶಕಗಳ ಕಾಲ ಪೋಷಿಸಿ ಬೆಳೆಸಿರುವ ಬೃಹತ್ ಉದ್ದಿಮೆಗಳು, ಸಂಸ್ಥೆಗಳು ಕಾರ್ಪೋರೇಟ್ ತೋಳಗಳಿಗೆ ಆಹಾರವಾಗುತ್ತಿರುವುದನ್ನು ಗಮನಿಸಬೇಕಿದೆ.

ಈ ಕಾರ್ಪೋರೇಟ್ ತೋಳಗಳು ಕೃತಕ ಬುದ್ಧಿಮತ್ತೆಯ ಹೊಸ ಪ್ರಪಂಚವನ್ನೇ ನಿರ್ಮಿಸಿ “ಶ್ರಮಿಕ ರಹಿತ” ಅರ್ಥವ್ಯವಸ್ಥೆಯೊಂದನ್ನು ನಿರ್ಮಿಸಲು ಸಜ್ಜಾಗುತ್ತಿದೆ. ಡಿಜಿಟಲೀಕರಣದ ಆಕರ್ಷಣೆ ಮತ್ತು ಅಲಂಕಾರಿಕ ಅನುಕೂಲತೆಗಳಿಂದ ತಮ್ಮ ದೂರದೃಷ್ಟಿಯನ್ನೇ ಕಳೆದುಕೊಂಡಿರುವ ಒಂದು ಇಡೀ ಪೀಳಿಗೆ, ಈ ಕಾರ್ಪೋರೇಟ್ ತೋಳಗಳ ಗುಲಾಮಗಿರಿಗೊಳಪಟ್ಟು ಅನಿಶ್ಚಿತ ಬದುಕನ್ನೇ ಸ್ವೀಕರಿಸಬೇಕಿದೆ. ಈ ದುರಂತ ಭವಿಷ್ಯದ ಮುನ್ನೋಟದೊಂದಿಗೇ, ಇಂದಿನ “ಆತ್ಮನಿರ್ಭರ” ಭಾರತವನ್ನು ಕಾಡುತ್ತಿರುವ ನಿರುದ್ಯೋಗ ಮತ್ತು ಬಡತನವನ್ನೂ ಗಮನಿಸಬೇಕಿದೆ.

ದೇಶದಲ್ಲಿ ನಿರುದ್ಯೋಗ ಸಮಸ್ಯೆಯೇ ಇಲ್ಲ ಎಂದು ಬಿಂಬಿಸಲು ಹರಸಾಹಸ ಮಾಡುತ್ತಿರುವ ವಂದಿಮಾಗಧ ಮಾಧ್ಯಮ ಸಮೂಹಗಳು ಮತ್ತು ಮತಿಹೀನ ರಾಜಕೀಯ ನಾಯಕರುಗಳಿಗೆ ಢಾಳಾಗಿ ಕಾಣುತ್ತಿರುವ ಉದ್ಯೋಗಾಕಾಂಕ್ಷಿಗಳ ಸಾಲುಗಳು ಏಕೆ ಕಾಣುತ್ತಿಲ್ಲ ಎಂದು ಆಲೋಚನೆ ಮಾಡುವ ಕನಿಷ್ಠ ವಿವೇಕವಾದರೂ ಯುವಪೀಳಿಗೆಗೆ ಇರಬೇಕಲ್ಲವೇ ? ಕೆಲವು ಉದಾಹರಣೆಗಳನ್ನು ನೋಡೋಣ.

“ ಹಿಮಾಚಲ ಪ್ರದೇಶ ಸರ್ಕಾರ ಸೆಪ್ಟಂಬರ್ 2021ರಲ್ಲಿ ನಾಲ್ಕನೆ ದರ್ಜೆಯ 42 ಹುದ್ದೆಗಳಿಗೆ(ತೋಟದ ಮಾಲಿ, ಜವಾನ ಮತ್ತು ಅಡುಗೆ ಕೆಲಸ) ಅರ್ಜಿ ಆಹ್ವಾನಿಸಿದಾಗ ಸಲ್ಲಿಸಲಾದ ಅರ್ಜಿಗಳು 18 ಸಾವಿರ. ಇವರ ಪೈಕಿ ನೂರಾರು ಅರ್ಜಿದಾರರು ಸ್ನಾತಕೋತ್ತರ ಪದವೀಧರರು. ಪಾನಿಪಟ್‍ನ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇದ್ದ 13 ಕೆಳಹಂತದ ಹುದ್ದೆಗಳಿಗೆ ಸಲ್ಲಿಸಲಾದ ಅರ್ಜಿಗಳ ಸಂಖ್ಯೆ 27 ಸಾವಿರ, ಇವರಲ್ಲಿ ಬಹುತೇಕ ಅಭ್ಯರ್ಥಿಗಳು ಪದವೀಧರರು.

2018ರ ಆಗಸ್ಟ್‍ನಲ್ಲಿ ಉತ್ತರ ಪ್ರದೇಶದ ಪೊಲೀಸ್ ಇಲಾಖೆಯಲ್ಲಿ 62 ಸಂದೇಶವಾಹಕರ ಹುದ್ದೆಗೆ ಸಲ್ಲಿಸಲಾದ ಅರ್ಜಿಗಳ ಸಂಖ್ಯೆ 93 ಸಾವಿರ. ಇವರ ಪೈಕಿ 3700 ಪಿಹೆಚ್‍ಡಿ ಹೊಂದಿದವರು, 50 ಸಾವಿರ ಪದವೀಧರರು. ಇತ್ತೀಚೆಗೆ ರೈಲ್ವೆ ಇಲಾಖೆಯ ಕೆಳಹಂತದ 35 ಸಾವಿರ ಹುದ್ದೆಗಳಿಗೆ ಸಲ್ಲಿಸಲಾದ ಅರ್ಜಿಗಳ ಸಂಖ್ಯೆ 1 ಕೋಟಿ 25 ಲಕ್ಷ. ಇವರ ಪೈಕಿ ಬಹುಪಾಲು ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಪಡೆದವರು. ”

ಇದು ಏನನ್ನು ಸೂಚಿಸುತ್ತದೆ ? ಉನ್ನತ ವ್ಯಾಸಂಗ ಮಾಡಿದವರೂ, ಪದವಿ ಗಳಿಸಿದವರೂ, ಹಿತವಲಯದ ಯುವಕರೂ, ಕೌಶಲ್ಯದ ಅವಶ್ಯಕತೆ ಇಲ್ಲದ ಹುದ್ದೆಗಳ ಆಕಾಂಕ್ಷಿಗಳಾಗಿದ್ದಾರೆ. ಅಂದರೆ, ಈ ಕೆಳಹಂತದ ಹುದ್ದೆಗಳಿಗಾಗಿ ಹಂಬಲಿಸುವ ಅರೆ ಶಿಕ್ಷಿತ, ಅಶಿಕ್ಷಿತ ಗ್ರಾಮೀಣ ಯುವ ಪೀಳಿಗೆ ಕಲಿತವರೊಡನೆ ಪೈಪೋಟಿ ನಡೆಸಿ ತಮ್ಮ ಜೀವನ ರೂಪಿಸಿಕೊಳ್ಳಬೇಕಾಗಿದೆ.

ಐದನೆಯ ತರಗತಿಯ ವಿದ್ಯಾರ್ಹತೆ ಸಾಕು ಎನಿಸುವಂತಹ ಉದ್ಯೋಗಗಳಿಗೆ ಸ್ನಾತಕೋತ್ತರ ಪದವೀಧರರು ಅರ್ಜಿ ಸಲ್ಲಿಸುವ ಒಂದು ವಿಷಮ ಪರಿಸ್ಥಿತಿಯನ್ನು ಭಾರತ ಎದುರಿಸುತ್ತಿರುವುದು ಸುಡುವಾಸ್ತವ. ಈ ನಡುವೆ ಈಗಾಗಲೇ ಸುಸ್ಥಿರ ನೌಕರಿ ಹೊಂದಿರುವ ಸಾರ್ವಜನಿಕ ಉದ್ದಿಮೆಗಳು, ಬ್ಯಾಂಕಿಂಗ್, ವಿಮೆ, ದೂರ ಸಂಪರ್ಕ ಮತ್ತು ಸಾರಿಗೆ ವಲಯದ ಲಕ್ಷಾಂತರ ಕಾರ್ಮಿಕರು ತಮ್ಮ ನಾಳೆಗಳ ಬಗ್ಗೆ ಆತಂಕದ ಕ್ಷಣಗಳನ್ನು ಎಣಿಸುವಂತಾಗಿದೆ. ಏತನ್ಮಧ್ಯೆ ಕೃಷಿ, ಗಣಿಗಾರಿಕೆ ಮತ್ತು ಅರಣ್ಯೋದ್ಯಮವನ್ನೂ ಸೇರಿದಂತೆ ನೈಸರ್ಗಿಕ ಸಂಪತ್ತಿನ ಮೇಲೆ ಕಾರ್ಪೋರೇಟ್ ಸಾಮ್ರಾಜ್ಯದ ಹಿಡಿತವನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ “ ಆತ್ಮನಿರ್ಭರಭಾರತದ” ಆರ್ಥಿಕ ನೀತಿಗಳು ದಾಪುಗಾಲು ಹಾಕುತ್ತಿವೆ.

ಈ ಅಪಾಯಗಳನ್ನು ಎದುರಿಸುತ್ತಲೇ ಭಾರತದ ಸಮಸ್ತ ಕಾರ್ಮಿಕ ವರ್ಗ ತಮ್ಮ ಹಕ್ಕೊತ್ತಾಯಗಳಿಗಾಗಿ ಮುಷ್ಕರ ನಡೆಸುತ್ತಿದೆ. ಒಂದು ತುಂಡು ವಸ್ತ್ರದ ಕಾರಣ ಹೆಣ್ಣುಮಕ್ಕಳ ಕತ್ತು ಹಿಸುಕುತ್ತಿರುವ ಕ್ರೂರ ಆಡಳಿತ ನೀತಿಯ ನಡುವೆಯೇ, ಒಂದು ಧರ್ಮವನ್ನವಲಂಬಿಸಿದ ಕಾರಣಕ್ಕೇ ತಮ್ಮ ಆದಾಯ ಮೂಲವನ್ನು ಕಳೆದುಕೊಳ್ಳುತ್ತಿರುವ ಸಣ್ಣಪುಟ್ಟ ವ್ಯಾಪಾರಿಗಳು ತಮ್ಮ ಬದುಕಿನ ನಾಳೆಗಳನ್ನು ಕಳೆದುಕೊಳ್ಳುತ್ತಿದ್ದಾರೆ.

ಕಾರ್ಖಾನೆಗಳ ಗೇಟುಗಳ ಮುಂದೆ ನೌಕರಿಗಾಗಿ ಅಂಗಲಾಚುತ್ತಿರುವ ಲಕ್ಷಾಂತರ ಕಾರ್ಮಿಕರು, ತಾವು ಬೆಳೆದ ಫಸಲಿಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸುತ್ತಲೇ ಆತ್ಮಹತ್ಯೆಯ ಹಾದಿ ಹಿಡಿಯುತ್ತಿರುವ ಲಕ್ಷಾಂತರ ರೈತರು, ತಾವು ಧರಿಸುವ ಒಂದು ತುಂಡುವಸ್ತ್ರದ ನಿಮಿತ್ತ ಶಾಲೆ ಪ್ರವೇಶಿಸಲಾಗದ ಸಾವಿರಾರು ಹೆಣ್ಣುಮಕ್ಕಳು, ತಮ್ಮ ಮತಶ್ರದ್ಧೆಯ ಕಾರಣಕ್ಕಾಗಿಯೇ ಸ್ವಂತ ದುಡಿಮೆಯ ನೆಲೆಯನ್ನು ಕಳೆದುಕೊಳ್ಳುತ್ತಿರುವ ಅಲ್ಪಸಂಖ್ಯಾತರು, ಭವಿಷ್ಯದ ಬದುಕಿಗಾಗಿ ಅರ್ಜಿಗಳನ್ನು ಕೈಯ್ಯಲ್ಲಿ ಹಿಡಿದು ನೌಕರಿಗಾಗಿ ಅಂಡಲೆಯುತ್ತಿರುವ ಕೋಟ್ಯಂತರ ಸಂಖ್ಯೆಯ ಯುವಸಮೂಹ ಈ ಹೊತ್ತಿನ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

ಇವರೆಲ್ಲರನ್ನೂ ಮತಾಂಧತೆಯ ಅಸ್ಮಿತೆಗಳಲ್ಲಿ ಬಂಧಿಸುವ ಮೂಲಕ ಸಂವೇದನೆಯನ್ನೇ ಕೊಲ್ಲುತ್ತಿರುವ ಮತಾಂಧ ಶಕ್ತಿಗಳು ನಿರ್ಭೀತಿಯಿಂದ ತಮ್ಮದೇ ಆದ ಸಾಮ್ರಾಜ್ಯವನ್ನು ನಿರ್ಮಿಸುತ್ತಿರುವ ಸಂದರ್ಭದಲ್ಲಿ, ತಮ್ಮ ಸಾಂವಿಧಾನಿಕ ಹೊಣೆಗಾರಿಕೆಯನ್ನೂ, ನೈತಿಕ ಜವಾಬ್ದಾರಿಯನ್ನೂ ಮರೆತಂತೆ ವರ್ತಿಸುತ್ತಿರುವ ಜನಪ್ರತಿನಿಧಿಗಳು ಭಾರತವನ್ನು “ಅಮೃತ ಮಹೋತ್ಸವದ” ಹೊಳೆಯಲ್ಲಿ ತೇಲಿಸಲು ಯತ್ನಿಸುತ್ತಿದ್ದಾರೆ.

ಈ ಹೊಳೆಯಲ್ಲಿ ಮುಳುಗುತ್ತಾ ಉಸಿರುಗಟ್ಟುತ್ತಿರುವ ಕೋಟ್ಯಂತರ ಜನರ ಕೈಗಳಲ್ಲಿರುವ ಕೆಂಬಾವುಟಗಳು ಹೊಳೆ ನೀರಿನ ಮೇಲ್ಭಾಗದಲ್ಲಿ ಪಟಪಟನೆ ಹಾರಾಡುತ್ತಿರುವುದನ್ನು ಈ ಎರಡು ದಿನಗಳಲ್ಲಿ ಕಾಣಬಹುದು. ಪಟಪಟಿಸುವ ಈ ಬಾವುಟಗಳು ಮತ್ತು ಕಿವಿಗಡಚಿಕ್ಕುವ ಘೋಷಣೆಗಳು ಜನಜಾಗೃತಿಯನ್ನು ಮೂಡಿಸುವ ವಾಹಿನಿಗಳಾಗಿ ಪರಿವರ್ತನೆಯಾಗುವುದರಲ್ಲಿ ಈ ಮುಷ್ಕರದ ಯಶಸ್ಸನ್ನು ಕಾಣಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ನವಿಲೇಹಾಳು ಗ್ರಾಮ ಪಂಚಾಯಿತಿಗೆ ಭೇಟಿ ; ಗ್ರಾಮಸಭೆ – ಗ್ರಾಮಾಭಿವೃದ್ಧಿಗೆ ಮನವಿ

Published

on

ಸುದ್ದಿದಿನ,ಚನ್ನಗಿರಿ: ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯು ಸೋಮೌಅರ ನವಿಲೇಹಾಳು ಗ್ರಾಮ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಅವರನ್ನು ಭೇಟಿಯಾಗಿ ಗ್ರಾಮಸಭೆಯನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಸುವಂತೆ ಮನವಿ ಪತ್ರ ಸಲ್ಲಿಸಲಾಯಿತು.

ಗ್ರಾಮಸಭೆ ಎಂಬುದು ಗ್ರಾಮಸ್ಥರ ಸಮಸ್ಯೆಗಳನ್ನು ನೇರವಾಗಿ ಚರ್ಚಿಸಿ, ಗ್ರಾಮದ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸುವ ಪ್ರಮುಖ ವೇದಿಕೆಯಾಗಿರುವುದರಿಂದ, ಗ್ರಾಮಸಭೆಯ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು PDO ಅವರಿಗೆ ಮನವಿ ಮಾಡಲಾಯಿತು.

ಅದರಂತೆ ಗ್ರಾಮಸಭೆಯ ದಿನಾಂಕ, ಸಮಯ ಹಾಗೂ ಸ್ಥಳದ ಮಾಹಿತಿಯನ್ನು ಟಾಂಟಾಂ/ಧ್ವನಿವರ್ಧಕದ ಮೂಲಕ ಗ್ರಾಮದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡುವುದರ ಜೊತೆಗೆ, ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡಿ, ಅರ್ಹ ಫಲಾನುಭವಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸಭೆಯಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸುವಂತೆ ತಿಳಿಸಲಾಯಿತು.

ಗ್ರಾಮದಲ್ಲಿಯೇ ಉದ್ಯೋಗ ಸೃಷ್ಟಿಗೆ ಒತ್ತು

ಇದೇ ಸಂದರ್ಭದಲ್ಲಿ ಮನರೇಗಾ (MGNREGA) ಯೋಜನೆಯಡಿ ಗ್ರಾಮದ ಅರ್ಹ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವಂತೆ ಮನವಿ ಮಾಡಲಾಯಿತು.

ಗ್ರಾಮಸ್ಥರು ಉದ್ಯೋಗಕ್ಕಾಗಿ ಅನಿವಾರ್ಯವಾಗಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗದಂತೆ, ಸರ್ಕಾರದ ಉದ್ಯೋಗ ಖಾತರಿ ಯೋಜನೆಯಡಿ ಲಭ್ಯವಿರುವ ಕೆಲಸಗಳನ್ನು ಸಮರ್ಪಕವಾಗಿ ಗುರುತಿಸಿ, ಅರ್ಹರಿಗೆ ನಿಯಮಾನುಸಾರ ಉದ್ಯೋಗ ಒದಗಿಸಬೇಕು ಎಂದು ತಿಳಿಸಲಾಯಿತು.

ಪ್ರಸ್ತುತ ಬತ್ತದ ನಾಟಿ ಕಾರ್ಯಕ್ಕೆ ಅಗತ್ಯವಿರುವ ನೀರಿನ ಸಮಸ್ಯೆಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೃಷಿ ಕೆಲಸಗಳು ಲಭ್ಯವಿಲ್ಲದ ಅವಧಿಯಲ್ಲಿ ಗ್ರಾಮಸ್ಥರಿಗೆ ಮನರೇಗಾ ಸೇರಿದಂತೆ ಇತರೆ ಸರ್ಕಾರಿ ಯೋಜನೆಗಳ ಮೂಲಕ ಉದ್ಯೋಗ ಒದಗಿಸಿ, ಗ್ರಾಮದಲ್ಲಿಯೇ ಆದಾಯದ ಅವಕಾಶಗಳನ್ನು ಸೃಷ್ಟಿಸುವುದು ಅಗತ್ಯವಾಗಿದೆ ಎಂದು ಮನವಿ ಮಾಡಲಾಯಿತು.

ಗ್ರಾಮದಲ್ಲಿಯೇ ಉದ್ಯೋಗ ದೊರೆತರೆ ಗ್ರಾಮಸ್ಥರ ಆರ್ಥಿಕ ಸ್ಥಿತಿ ಸುಧಾರಿಸುವುದರ ಜೊತೆಗೆ, ಗುಳೆ ಹೋಗುವುದನ್ನು ತಡೆಯಲು ಹಾಗೂ ಗ್ರಾಮದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು PDO ಅವರ ಗಮನಕ್ಕೆ ತರಲಾಯಿತು.

ಇತರೆ ಗ್ರಾಮಾಭಿವೃದ್ಧಿ ವಿಚಾರಗಳ ಚರ್ಚೆ

ಇದರ ಜೊತೆಗೆ ನವಿಲೇಹಾಳ ಗ್ರಾಮದ ವಿವಿಧ ಅಭಿವೃದ್ಧಿ ಸಮಸ್ಯೆಗಳು, ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳು, ಉದ್ಯೋಗಾವಕಾಶಗಳು, ಕೃಷಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು PDO ಅವರೊಂದಿಗೆ ಚರ್ಚಿಸಲಾಯಿತು.

ಗ್ರಾಮಸ್ಥರಿಗೆ ಸರ್ಕಾರದ ಯೋಜನೆಗಳ ಪ್ರಯೋಜನಗಳು ಸಮರ್ಪಕವಾಗಿ ತಲುಪುವಂತೆ ಪಾರದರ್ಶಕವಾಗಿ ಹಾಗೂ ನಿಯಮಾನುಸಾರ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಲಾಯಿತು.

ಗ್ರಾಮಸಭೆಯಲ್ಲಿ ಸಾರ್ವಜನಿಕರ ಹೆಚ್ಚಿನ ಭಾಗವಹಿಸುವಿಕೆ, ಸ್ಥಳೀಯ ಉದ್ಯೋಗ ಸೃಷ್ಟಿ ಹಾಗೂ ಗ್ರಾಮಾಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಮೂಲಕ ನವಿಲೇಹಾಳ ಗ್ರಾಮವನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.

“ಗ್ರಾಮದ ಅಭಿವೃದ್ಧಿ ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಒಗ್ಗೂಡಿ ಕಾರ್ಯನಿರ್ವಹಿಸಿದಾಗ ಮಾತ್ರ ಸಮಗ್ರ ಗ್ರಾಮಾಭಿವೃದ್ಧಿ ಸಾಧ್ಯ.”

ಗ್ರಾಮದ ಜನರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ನವಿಲೇಹಾಳ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ (ರಿ.) ನಿರಂತರವಾಗಿ ಜನಪರವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ದಾವಣಗೆರೆ ಜಿಲ್ಲಾಧ್ಯಕ್ಷರಾದ ಜಾಫರ್ ರವರು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ಅಂತರಂಗ

ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು

Published

on

~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ

ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.

ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.

 

ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.

ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

Continue Reading

ದಿನದ ಸುದ್ದಿ

ನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್

Published

on

ಸುದ್ದಿದಿನ,ದಾವಣಗೆರೆ: “ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಾವು ಮುಖ್ಯಮಂತ್ರಿಯಂತೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.

ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು, ನಾನು ಡಿ.ಕೆ ಶಿವಕುಮಾರ್‌ ಅವರ ಮನೆಮಗ, ಶಿವನ ಮುಂದೆ ಇರುವ ಬಸವ ನಾನು. ನಾನೇ ಮುಖ್ಯಮಂತ್ರಿ ಇದ್ದಂತೆ, ಮನೆ ಮಗನಿಗೆ ಯಾವಾಗಲೂ ಅವರ ಆಶೀರ್ವಾದ ಇದ್ದೇ ಇರುತ್ತದೆ ಎಂದಿದ್ದಾರೆ.

ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

“ನಾನು ಮುಖ್ಯಮಂತ್ರಿ ಅಲ್ಲ. ಆದರೆ ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದಾಗ ಮುಖ್ಯಮಂತ್ರಿಯಂತೆ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದೇನೆ. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ನನ್ನ ಮೊದಲ ಕರ್ತವ್ಯವಾಗಿದೆ. ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ,” ಎಂದು ಅವರು ಹೇಳಿದರು.

ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಇನ್ನೂ ಅನೇಕ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ ಅವರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತಿದೆ ಎಂದರು.

“ಜನಪ್ರತಿನಿಧಿಯಾಗಿ ಚುನಾಯಿತರಾದ ಬಳಿಕ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ಅನುದಾನ ತರುವ ಪ್ರಯತ್ನ ಮಾಡಲಾಗಿದೆ. ಕುಡಿಯುವ ನೀರಿನ ಯೋಜನೆಗಳು, ರಸ್ತೆ ಅಭಿವೃದ್ಧಿ, ಶಾಲೆಗಳ ಮೂಲಸೌಕರ್ಯ ಸುಧಾರಣೆ ಸೇರಿದಂತೆ ಹಲವು ಕಾಮಗಾರಿಗಳಿಗೆ ವೇಗ ನೀಡಲಾಗಿದೆ,” ಎಂದು ಹೇಳಿದರು.

ಕ್ಷೇತ್ರದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ. ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ನೀರಾವರಿ ಹಾಗೂ ರೈತರಿಗೆ ಅನುಕೂಲಕರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಸರ್ಕಾರದ ಅಭಿವೃದ್ಧಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಅರ್ಹ ವ್ಯಕ್ತಿ ಯೋಜನೆಯಿಂದ ವಂಚಿತರಾಗಬಾರದು ಎಂಬುದು ತಮ್ಮ ಉದ್ದೇಶವಾಗಿದೆ ಎಂದು ಶಾಸಕರು ತಿಳಿಸಿದರು.

ವಿರೋಧ ಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಟೀಕೆಗಳು ಪ್ರಜಾಪ್ರಭುತ್ವದ ಭಾಗ. ಆದರೆ ಅಭಿವೃದ್ಧಿಯೇ ನಮ್ಮ ಉತ್ತರ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಹಾಗೂ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದೇ ನಮ್ಮ ಗುರಿಯಾಗಿದೆ,” ಎಂದರು.

ಕ್ಷೇತ್ರದ ಜನರು ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಸಂಪರ್ಕಿಸಬಹುದು. ಜನಸೇವೆಗಾಗಿ ತಮ್ಮ ಕಚೇರಿ ಸದಾ ತೆರೆದಿರುತ್ತದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending