ರಾಜಕೀಯ
ಜೈ ಹಿಂದ್, ಜೈ ಕರ್ನಾಟಕ
![](https://suddidina.com/wp-content/uploads/2019/01/Jaihind-suddidina.jpg)
ಪ್ರಾಥಮಿಕ ಶಾಲಾ ದಿನಗಳು ನೆನಪಾಗುತ್ತಿವೆ. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಮತ್ತು ರಾಜ್ಯೋತ್ಸವ ದಿನಗಳಂದು ನಮ್ಮೊಳಗೆ ಎಲ್ಲಿಲ್ಲದ ಹುಮ್ಮಸ್ಸು ರೂಪುಗೊಳ್ಳುತ್ತಿತ್ತು. ಭಾಷಣ, ಗಾಯನ ಹೀಗೆ ವಿವಿಧ ಸ್ಪರ್ಧೆಗಳು ನಡೆಯುತ್ತಿದ್ದವು. ಮುಖ್ಯವಾಗಿ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಬಹುಮಾನ ಗೆಲ್ಲುವ ತವಕವಿರುತ್ತಿತ್ತು. ಆ ದಿನಗಳಲ್ಲಿ ಅಪ್ಪ ಬರೆದುಕೊಡುತ್ತಿದ್ದ ಎರಡು ಪುಟಗಳ ಭಾಷಣವನ್ನು ಓದಿಕೊಳ್ಳಬೇಕಾಗುತ್ತಿತ್ತು. ಅವರು ಅದರೊಳಗಿನ ತಿರುಳನ್ನು ಹೇಳಿಕೊಡುತ್ತಿದ್ದರು. ಅದನ್ನಷ್ಟೇ ತಿಳಿದುಕೊಂಡು ಭಾಷಣದ ವೇಳೆ ಆ ಕ್ಷಣಕ್ಕೆ ವ್ಯಕ್ತಪಡಿಸಬೇಕು ಎಂದು ಸಲಹೆ ನೀಡುತ್ತಿದ್ದರು. ಆದರೆ, ನಾವು ಆ ಪ್ರತಿಯೊಳಗಿನ ಪ್ರತಿ ವಾಕ್ಯ, ಪದಗಳನ್ನು ಉರುಹೊಡೆದು ನೆನಪಿನಲ್ಲಿರಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದೆವೇ ಹೊರತು ಅವರು ಹೇಳಿದ ಹಾಗೆ ಇಡೀ ಪ್ರತಿಯಲ್ಲಿನ ಮಹತ್ವದ ಅಂಶಗಳನ್ನು ಮನನ ಮಾಡಿಕೊಳ್ಳುತ್ತಿರಲಿಲ್ಲ. ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವ ಉತ್ಸಾಹ, ನಾನೇ ಮೊದಲ ಬಹುಮಾನ ಗೆಲ್ಲಬೇಕು ಎಂಬ ಆಸೆಯೇನೋ ಇರುತ್ತಿತ್ತು. ಆ ಕ್ಷಣಕ್ಕೆ ಉರುಹೊಡೆದ ಪದ, ವಾಕ್ಯಗಳು ನೆನಪಾಗದಿದ್ದರೆ ಎಂಬ ಭಯವೂ ಇತ್ತು. ಇದರ ಮಧ್ಯೆಯೂ ಖುಷಿ ನೀಡುತ್ತಿದ್ದ ಸಂಗತಿ ಎಂದರೆ ಭಾಷಣವು ಕೊನೆಗೊಳ್ಳುವ ಸಂದರ್ಭದಲ್ಲಿ ನಾವು ದೊಡ್ಡ ಧ್ವನಿಯಲ್ಲಿ ಹೇಳುತ್ತಿದ್ದ ‘ಜೈ ಹಿಂದ್, ಜೈ ಕರ್ನಾಟಕ’ ಉದ್ಘೋಷ. ಕೊನೆಗೂ ಭಾಷಣ ಮುಗಿಯಿತು ಎಂಬ ನಿರಾಳ ಭಾವವೂ ಸೇರಿ ಆ ಧ್ವನಿಗೆ ಶಕ್ತಿ ಬರುತ್ತಿತ್ತು.
ಮೊದಲ ಪುಟದಲ್ಲಿ ಉಲ್ಲೇಖಿಸಲ್ಪಟ್ಟ ವಾಕ್ಯ, ಪದಗಳು ಸುಲಭವಾಗಿ ನೆನಪಾಗುತ್ತಿದ್ದವು. ಆದರ್ಶ ವ್ಯಕ್ತಿತ್ವಗಳ ಹೆಸರುಗಳನ್ನು ಕ್ರಮಾನುಗತವಾಗಿ ಪ್ರಸ್ತುತಪಡಿಸುತ್ತಿದ್ದೆವು. ಆದರೆ, ತದನಂತರದ ಪುಟದ ವಾಕ್ಯಗಳನ್ನು ಹೇಳುವಾಗ ದ್ವಂದ್ವವಾಗುತ್ತಿತ್ತು. ಭಾಷಣ ಪ್ರತಿಯ ವಿಚಾರಗಳನ್ನು ಸಂಪೂರ್ಣವಾಗಿ ಗೊತ್ತುಮಾಡಿಕೊಳ್ಳದೇ ಕೇವಲ ಉರುಹೊಡೆದ ಕಾರಣಕ್ಕೇ ಈ ಸಮಸ್ಯೆ ಎಂಬುದು ಆಮೇಲೆ ಮನದಟ್ಟಾಯಿತು. ಹಾಗೆ ಮನದಟ್ಟಾದರೂ ಉರುಹೊಡೆದು ಓದಿಕೊಳ್ಳುವ ರೂಢಿಗತ ಅಭ್ಯಾಸ ಬಹುದಿನಗಳ ಕಾಲ ಮುಂದುವರೆದಿತ್ತು. ತೊದಲು ಮಾತು ಪರಿಪೂರ್ಣತೆಯ ಹಂತ ತಲುಪುವವರೆಗಿನ ಅವಧಿ, ನಮ್ಮೊಳಗೆ ಭಾಷೆಯ ಆಕೃತಿಗಳು ಆವರಿಸಿಕೊಳ್ಳುವ ರೀತಿ, ಆ ಮೂಲಕ ನಮಗೆ ಹರಿದುಬರುವ ಮಾಹಿತಿ, ಜ್ಞಾನ – ಇವೆಲ್ಲವೂ ಪ್ರಾಥಮಿಕ ಶಾಲಾ ದಿನಗಳಲ್ಲಿ ಕ್ರಮೇಣ ಅರಿವಿಗೆಟುಕಿದ್ದವು. ನಮ್ಮ ಗಮನವೆಲ್ಲವೂ ಶಾಲೆ, ತರಗತಿ, ಟೀಚರ್ಸ್, ಸ್ನೇಹಿತರು, ಆಟ, ರಜೆಗಳು ಆರಂಭವಾಗುವ ತಿಂಗಳು, ಓದುವ ಅವಧಿಯ ನಂತರ ಆಟಕ್ಕೆ ಹೋಗುವ ಕುತೂಹಲದ ಕಡೆಗೇ ಕೇಂದ್ರೀಕೃತವಾಗಿರುತ್ತಿತ್ತು. ರಾಜಕೀಯವು ಬಾಲ್ಯದ ಪ್ರಜ್ಞೆಯ ಆವರಣದ ಆಚೆಗೇ ಇರುತ್ತಿತ್ತು.
ಈಗ ಹಾಗಲ್ಲ. ಪ್ರಾಥಮಿಕ ಹಂತದಿಂದಲೇ ಶಿಕ್ಷಣದ ಭಾಷೆ ಯಾವುದಾಗಿರಬೇಕು ಎನ್ನುವುದನ್ನು ವಿವೇಚನಾರಹಿತವಾಗಿ ನಿರ್ಧರಿಸಿಬಿಡುವ ವಿಚಿತ್ರ ರಾಜಕಾರಣವು ಮಕ್ಕಳ ಕಲಿಕೆಯ ಸ್ವಾತಂತ್ರ್ಯದ ಮೇಲೆ ದಾಳಿಗೈಯ್ಯುತ್ತಿದೆ. ತರಗತಿಯೊಳಗೆ ಪಠ್ಯವಾಗಿ ಕಲಿಯಲ್ಪಡುವ ಸಂಗತಿಗಳು ರಾಜಕೀಯ ಬಣ್ಣ ಪಡೆಯುತ್ತಿವೆ. ಮೇಷ್ಟ್ರು ಹಾಜರಾತಿ ದೃಢೀಕರಿಸಿಕೊಳ್ಳಲು ನಮ್ಮ ಹೆಸರು ಕೂಗಿದ ತಕ್ಷಣ ಎಸ್ ಸರ್, ಪ್ರೆಸೆಂಟ್ ಸರ್, ಇದೀನಿ ಸಾರ್ ಎಂದು ಪ್ರತಿಕ್ರಿಯಿಸುವ ಸ್ವಾತಂತ್ರ್ಯವನ್ನು ಅಧಿಕಾರ ರಾಜಕಾರಣ ಕಿತ್ತುಕೊಳ್ಳುವುದರ ಕಡೆಗೆ ಆಸಕ್ತಿ ತೋರುತ್ತಿದೆ. ಯಾರು ಹೇಳಲಿ ಬಿಡಲಿ, ಮೇರಾ ಭಾರತ್ ಮಹಾನ್ ಎಂಬ ಹೆಮ್ಮೆಯ ಭಾವವು ರಾಷ್ಟ್ರೀಯ ಉತ್ಸವಗಳ ಮೂಲಕ ಮಕ್ಕಳಲ್ಲಿ ಮೇಳೈಸಿರುತ್ತದೆ. ನಮ್ಮ ನೆಲ, ಜಲದ ಕುರಿತಾದ ಅಭಿಮಾನವನ್ನು ಅಷ್ಟು ಸುಲಭವಾಗಿ ನಮ್ಮಿಂದ ದೂರಮಾಡಲಾಗದು. ಎಸ್ ಸರ್, ಪ್ರೆಸೆಂಟ್ ಸರ್ ಎನ್ನುವ ಬದಲು ಜೈ ಹಿಂದ್ ಹೇಳಬೇಕು ಎನ್ನುವ ಆಡಳಿತಾತ್ಮಕ ನಿಯಮಾವಳಿ ರೂಪಿಸಿ ಅನುಷ್ಠಾನಕ್ಕೆ ತರುವ ಪ್ರಯತ್ನ ರಾಷ್ಟ್ರದ ಕುರಿತಾದ ಅಭಿಮಾನ ಮತ್ತು ಹೆಮ್ಮೆಯ ಭಾವದ ಸಹಜತೆಯನ್ನು ಒಡೆಯುತ್ತದೆ.
ಶಿಕ್ಷಣವು ವಿದ್ಯಾರ್ಥಿಕೇಂದ್ರಿತವಾಗಿರಬೇಕೇ ಹೊರತು ಅಧಿಕಾರಕೇಂದ್ರಿತ ಅತಾರ್ಕಿಕ ನಿರ್ಧಾರಗಳ ತಿವಿತಕ್ಕೀಡಾಗಬಾರದು. ಪ್ರಾಥಮಿಕ, ಪ್ರೌಢ, ಕಾಲೇಜು, ಸ್ನಾತಕೋತ್ತರ – ಹೀಗೆ ಒಂದೊಂದು ಹಂತದಲ್ಲೂ ವಿದ್ಯಾರ್ಥಿಗಳ ಕಲಿಕೆಯು ಹೊಸ ಆಯಾಮ ಪಡೆದುಕೊಳ್ಳುತ್ತಿರುತ್ತದೆ. ವಿದ್ಯಾರ್ಥಿಗಳಿಗೆ ಒಳಿತು-ಕೆಡಕುಗಳ ವಿವೇಚನೆಯು ಹಂತಹಂತವಾಗಿಯೇ ಜೊತೆಯಾಗುತ್ತಾ ಹೋಗುತ್ತದೆ. ಶಿಕ್ಷಕರು, ಪಠ್ಯ ಮತ್ತು ಹಿರಿಯರ ಸಾಂದರ್ಭಿಕ ಮಾತುಗಳ ನೆರವಿನೊಂದಿಗೆ ಅವರು ವಿವೇಚನೆಯನ್ನು ತಮ್ಮದಾಗಿಸಿಕೊಳ್ಳುತ್ತಿರುತ್ತಾರೆ. ಇಂಥ ವಿವೇಚನೆಯನ್ನು ಗಟ್ಟಿಗೊಳಿಸುವ ಹಾಗೆಯೇ ಶಿಕ್ಷಣವು ಪುನರ್ಸ್ವರೂಪವನ್ನು ಪಡೆದುಕೊಳ್ಳುತ್ತಿರಬೇಕು. ಈ ಸಾಧ್ಯತೆಯು ಎಷ್ಟು ಬೇಗ ಅನುಷ್ಠಾನಗೊಳ್ಳುತ್ತದೋ ಅಷ್ಟೇ ತೀವ್ರಗತಿಯಲ್ಲಿ ಶಿಕ್ಷಣ ವಲಯದಲ್ಲಿನ ಸುಧಾರಣೆಯ ಪ್ರಕ್ರಿಯೆ ಚಾಲ್ತಿಗೆ ಬರುತ್ತದೆ. ಈ ವಿಷಯದಲ್ಲಿ ಅಧ್ಯಾಪಕವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅವರ ಪ್ರತಿಕ್ರಿಯೆಗಳನ್ನು ಆಧರಿಸಿಯೇ ಶಾಸಕಾಂಗ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಶಿಕ್ಷಣ ಇಲಾಖೆಯನ್ನು ಪ್ರತಿನಿಧಿಸುವ ಉನ್ನತ ಹಂತದ ಅಧಿಕಾರಿಗಳು ಈ ವಿಷಯದಲ್ಲಿ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು.
ಇಂಥ ಇಚ್ಛಾಶಕ್ತಿಯು ಬೆರಳೆಣಿಕೆಯ ಅಧಿಕಾರಿಗಳಲ್ಲಿ ಮಾತ್ರ ಇದೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ಅಧಿಕಾರಿಗಳ ನಿರ್ಲಿಪ್ತ ದೃಷ್ಟಿಕೋನವು ಶಾಸಕಾಂಗವನ್ನು ಪ್ರತಿನಿಧಿಸುವ ರಾಜಕಾರಣಿಗಳ ಅತಾರ್ಕಿಕ ನಿರ್ಧಾರ ಮತ್ತು ಲಾಬಿಗಳಿಗೆ ಶಿಕ್ಷಣ ವಲಯವು ಮಣಿಯಬೇಕಾದ ಅನಿವಾರ್ಯತೆ ಸೃಷ್ಟಿಸಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ದೂರಗಾಮಿ ಪರಿಣಾಮಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಅಮೂಲ್ಯ ವಾರ್ಷಿಕ ಯೋಜನೆಗಳನ್ನು ರೂಪಿಸುವ ಬದಲು ಅವರು ಯಥಾಸ್ಥಿತಿಯನ್ನಷ್ಟೇ ಮುಂದುವರೆಸುತ್ತಿದ್ದಾರೆ. ಈ ಬಗೆಯ ತಮ್ಮ ಮಿತಿಯು ಚರ್ಚೆಗೊಳಗಾಗುತ್ತಿದೆ ಎಂಬ ಸುಳಿವು ಸಿಕ್ಕಾಕ್ಷಣವೇ ಜನಪ್ರಿಯ ಧಾಟಿಯ ವಿವಾದಗಳಿಗೆ ಸರಕು ಒದಗಿಸಬಲ್ಲ ವಿವೇಚನಾರಹಿತ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ಲಾಭದ ಹಸಿವಿನಿಂದ ಬಳಲುವ ಸುದ್ದಿಮಾಧ್ಯಮಗಳಿಗೆ ಬಂಡವಾಳ ದುಡಿಯುವ ವಿವಾದದ ಸರಕನ್ನು ಒದಗಿಸುತ್ತಾರೆ. ಪರ ಮತ್ತು ವಿರೋಧಗಳ ಭಾವಾವೇಶದ ಗದ್ದಲದಲ್ಲಿ ಶಿಕ್ಷಣ ವಲಯದಲ್ಲಿ ಕಾಣಲೇಬೇಕಾದ ಸುಧಾರಣೆಯ ಹೆಜ್ಜೆಗಳ ವಿಸ್ತøತ ಚರ್ಚೆಯೇ ನಡೆಯುವುದಿಲ್ಲ. ಆ ಚರ್ಚೆಯಿಲ್ಲದೇ ಇಡೀ ವೃತ್ತಾಂತ ಕೊನೆಗೊಳ್ಳುತ್ತದೆ. ಜನರೂ ಆ ಕ್ಷಣದ ವಿವಾದಾತ್ಮಕ ಸಂಗತಿಯನ್ನು ಮರೆತುಬಿಡುತ್ತಾರೆ. ಚುನಾವಣೆ ಹತ್ತಿರವಾದಾಗ ಇಂಥದ್ದೇ ವಿವಾದೋದ್ಯಮದ ಲಾಭದ ಹವಣಿಗೆಯ ಭಾವೋನ್ಮಾದದ ವಿಷಯಗಳು ಮುನ್ನೆಲೆಗೆ ಬರುತ್ತವೆ.
ತರಗತಿಯಲ್ಲಿರುವ ಮಕ್ಕಳು ಮೇಷ್ಟ್ರು ಹೆಸರು ಹೇಳಿದಾಗ ಎಸ್ ಸರ್ ಎನ್ನುವ ಬದಲು ಜೈಹಿಂದ್ ಎಂದು ಹೇಳಬಹುದು. ಅದು ಕ್ರಿಯೆಯೊಂದಕ್ಕೆ ದಕ್ಕುವ ನಿರ್ದಿಷ್ಟ ಪ್ರತಿಕ್ರಿಯೆಯಾಗುತ್ತದಷ್ಟೇ. ನನ್ನ ಹೆಸರು ಹೇಳಿದ ತಕ್ಷಣ ನಾನು ಕ್ಲಾಸ್ನಲ್ಲಿದ್ದೇನೆ ಎಂಬುದನ್ನು ಸ್ಪಷ್ಟಪಡಿಸುವುದಕ್ಕೆ ಎಸ್ ಸರ್ ಅಥವಾ ಪ್ರೆಸೆಂಟ್ ಸರ್ ಎನ್ನುವ ಪ್ರತಿಕ್ರಿಯೆ ಬಳಕೆಯಾಗುತ್ತದೆ. ಗುರುಗಳು ಹೆಸರು ಕೂಗುವುದು, ವಿದ್ಯಾರ್ಥಿಗಳು ಓಗೊಡುವುದು – ಇವೆರಡೂ ತರಗತಿಯಲ್ಲಿ ನಡೆಯುವ ಅತ್ಯಂತ ಸಹಜ ಆಡಳಿತಾತ್ಮಕ ಕ್ರಿಯೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಭಾವುಕ ಬಾಂಧವ್ಯವನ್ನು ಗಟ್ಟಿಗೊಳಿಸುವ ಕ್ರಿಯೆಯನ್ನಾಗಿಯೂ ಇದನ್ನು ನೋಡಬಹುದು. ರೆಗ್ಯುಲರ್ ಆಗಿ ತರಗತಿಗೆ ಹಾಜರಾಗುವ ವಿದ್ಯಾರ್ಥಿ ಎಸ್ ಸರ್ ಎಂದು ಹೇಳದಿದ್ದರೆ ಶಿಕ್ಷಕರಿಗೆ ಕಸಿವಿಸಿಯಾಗುತ್ತದೆ. ಯಾಕೆ ಬಂದಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. ತರಗತಿಗೆ ಚಕ್ಕರ್ ಹೊಡೆಯುವುದನ್ನೇ ಪ್ರವೃತ್ತಿಯಾಗಿಸಿಕೊಂಡವರ ಕುರಿತೂ ಕಾಳಜಿ ಇರುತ್ತದೆ. ಅವರು ಎಷ್ಟೋ ದಿನಗಳ ನಂತರ ಹಾಜರಾಗಿ ಎಸ್ ಸರ್ ಎಂದಾಗ ಪ್ರೀತಿಯಿಂದ ಗದರಿ ಇನ್ಮೇಲಿಂದ ರೆಗ್ಯುಲರ್ ಆಗಿ ಕ್ಲಾಸ್ ಅಟೆಂಡ್ ಆಗಬೇಕು ಎಂದು ಹೇಳುತ್ತಾರೆ. ಇಂಥದ್ದೊಂದು ಶೈಕ್ಷಣಿಕ ಬಾಂಧವ್ಯದ ಆಯಾಮವಿರುವ ಈ ಕ್ರಿಯೆಯನ್ನು ಆಡಳಿತಾತ್ಮಕ ನಿಯಮ ಮತ್ತು ದೇಶಪ್ರೇಮದ ಪರಿಧಿಯ ಕಡ್ಡಾಯ ಆವರಣದೊಳಗೆ ತರುವುದು ಮಕ್ಕಳ ವಿವೇಚನೆಯ ಯಾನದ ಸಕಾರಾತ್ಮಕತೆಯ ದೃಷ್ಟಿಯಿಂದ ಅಪಾಯಕಾರಿ ಎಂದೆನ್ನಿಸುತ್ತದೆ.
ಹಿಂದೆಲ್ಲಾ ಪೆನ್ನು, ನೋಟ್ ಬುಕ್ಗಳ ಮೇಲೆ ಕಾಣಿಸಿಕೊಳ್ಳುತ್ತಿದ್ದ ‘ಮೇರಾ ಭಾರತ್ ಮಹಾನ್’ ಎಂಬ ಒಕ್ಕಣೆಯು ನಮ್ಮೊಳಗೆ ಹೆಮ್ಮೆ ಮೂಡಿಸುತ್ತಿತ್ತು. ನಾವು ಕ್ಲಾಸ್ನಲ್ಲಿ ಕೇಳಿಸಿಕೊಳ್ಳುತ್ತಿದ್ದ ಉದಾತ್ತ ಯೋಚನೆಗಳು, ಆದರ್ಶ ವ್ಯಕ್ತಿತ್ವಗಳ ಕೊಡುಗೆಗಳ ಬಗ್ಗೆ ತಿಳಿದುಕೊಂಡ ಸಂದರ್ಭದಲ್ಲಿ ಈ ಒಕ್ಕಣೆ ಕಾಣಿಸಿಕೊಂಡಾಗ ನಮ್ಮೊಳಗಿನ ಹೆಮ್ಮೆಯ ಭಾವ ಇಮ್ಮಡಿಗೊಳ್ಳುತ್ತಿತ್ತು. ಇದನ್ನು ನೋಡಲೇಬೇಕೆಂಬ, ಹೆಮ್ಮೆಯ ಭಾವ ಮೂಡಿಸಿಕೊಳ್ಳಲೇಬೇಕು ಎನ್ನುವ ಕಡ್ಡಾಯ ನಿಯಮವಿರಲಿಲ್ಲ. ಆದಾಗ್ಯೂ ಇದು ನಮ್ಮೊಳಗೆ ಆಪ್ತವಾಗಿ ಬೆರೆತುಹೋಗಿತ್ತು. ಉಳಿದೆಲ್ಲ ದೇಶಗಳಿಗಿಂತ ನಮ್ಮ ದೇಶ ಮಹಾನ್ ಎನ್ನುವ ಭಾವ ಅತ್ಯಂತ ಸಂಯಮಪೂರ್ಣವಾಗಿ ನಮ್ಮ ಪ್ರಜ್ಞೆಯೊಳಗೆ ಮೇಳೈಸಿತ್ತು. ಹೆಮ್ಮೆ ಪಟ್ಟುಕೊಳ್ಳುವಂಥ ದೇಶದಲ್ಲಿ ಸಮಸ್ಯೆಗಳೂ ಇವೆ, ಅವುಗಳ ನಿವಾರಣೆಯ ಕಡೆಗೆ ಕಾಳಜಿಪೂರ್ವಕ ಹೆಜ್ಜೆಗಳನ್ನಿಡುತ್ತಲೇ ಇಡೀ ದೇಶವನ್ನು ಮಹಾನ್ ಅಗಿಸುವ ಉದಾತ್ತ ಪ್ರಯತ್ನಗಳ ಕಡೆಗೆ ಗಮನವಿರಬೇಕು ಎಂಬ ಎಚ್ಚರವನ್ನೂ ರೂಢಿಸಿತ್ತು. ಅಧಿಕಾರ ರಾಜಕಾರಣದ ಮೊಗಸಾಲೆಯಿಂದ ಹೊರಟ ನಿರ್ದಿಷ್ಟ ನಿಲುವು ಆಡಳಿತಾತ್ಮಕ ತೀರ್ಮಾನವಾಗಿ ತರಗತಿಗಳ ಒಳಗೆ ಪ್ರವೇಶಿಸಿ ಮಕ್ಕಳಿಂದ ದೇಶದ ಬಗ್ಗೆ ಜೈಕಾರ ಮೊಳಗಬೇಕು ಎಂಬ ಕಾರ್ಯಸೂಚಿ ಅನುಷ್ಠಾನಗೊಂಡರೆ ಅದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕುಚಿತ ಗೋಡೆಗಳನ್ನು ಸೃಷ್ಟಿಸಬಹುದು. ಅಂಥ ಗೋಡೆಗಳು ಸೃಷ್ಟಿಯಾದರೆ ತರಗತಿಯ ವಿವೇಚನಾತ್ಮಕ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ.
ಜೈಹಿಂದ್ ಎಂಬ ಪ್ರತಿಕ್ರಿಯೆ ಕಡ್ಡಾಯವಾಗಿ ಅನುಷ್ಠಾನಗೊಂಡರೆ ಅದರಲ್ಲಿ ತಪ್ಪು ಹುಡುಕುವುದೇಕೆ? ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಎಂಬ ನಾಡಗೀತೆ ಕಡ್ಡಾಯವಾಗಿ ಶಾಲಾ-ಕಾಲೇಜುಗಳ ಆರಂಭಕ್ಕಿಂತ ಮುನ್ನ ಮೊಳಗುತ್ತಿರುವಾಗ ಇದಕ್ಕೆ ಆಕ್ಷೇಪವೇಕೆ? ಎಂಬ ಪ್ರಶ್ನೆಗಳು ಎದುರಾಗಬಹುದು. ಕುವೆಂಪು ವಿರಚಿತ ಈ ನಾಡಗೀತೆಯು ಕಡ್ಡಾಯ ಪಾಲನೆಯ ನಿಯಮದೊಂದಿಗೆ ಮೊಳಗುವುದಕ್ಕೂ ಜೈಹಿಂದ್ ಎಂಬ ಪ್ರತಿಕ್ರಿಯೆಯು ತರಗತಿಯ ಒಳಗೆ ವ್ಯಕ್ತವಾಗುವುದಕ್ಕೂ ವ್ಯತ್ಯಾಸವಿದೆ. ನಾಡಗೀತೆಯ ಧ್ವನಿಸುರುಳಿ ಶಾಲಾ-ಕಾಲೇಜುಗಳ ಆವರಣದಲ್ಲಿ ಮೊಳಗುವಾಗ ಅದರೊಳಗಿನ ವೈವಿಧ್ಯಮಯ ಸದಾಶಯಗಳ ಸಾಲುಗಳು ವಿದ್ಯಾರ್ಥಿಗಳ ವಿವೇಚನೆಯನ್ನು ವಿಸ್ತರಿಸುತ್ತಿರುತ್ತವೆ. ವಿವಿಧತೆಯಲ್ಲಿ ಏಕತೆ ಸಾಧಿಸಿರುವ ಈ ದೇಶದ ವೈಶಿಷ್ಟ್ಯತೆಯನ್ನು ಮನದಟ್ಟು ಮಾಡಿಕೊಡುತ್ತವೆ. ಅಷ್ಟೇ ಅಲ್ಲ, ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಈ ನೆಲವನ್ನು ನೋಡುವ ಸೌಜನ್ಯವನ್ನು ನಮ್ಮದಾಗಿಸಿಕೊಳ್ಳುವ ಒತ್ತಾಸೆ ಮೂಡಿಸುತ್ತವೆ. ಜೈ ಹಿಂದ್ ಎನ್ನುವ ಪ್ರತಿಕ್ರಿಯೆಯು ಕ್ಷಣಾರ್ಧದಲ್ಲಿ ಭಾರತದ ಪರವಾದ ಜಯಕಾರ ಹೇಳುವ ಮಹತ್ವದ ಸಂದರ್ಭವನ್ನು ಸೃಷ್ಟಿಸಬಹುದು. ಆದರೆ, ಈ ಜಯಕಾರದ ಸಾಂದಭಿರ್ಕತೆಯು ನಕಾರಾತ್ಮಕ ದೃಷ್ಟಿಕೋನಗಳಿಗೆ ಪ್ರಚೋದನೆಯನ್ನು ನೀಡಿ ಭಾರತವೇ ಗ್ರೇಟ್ ಎಂಬ ಶ್ರೇಷ್ಠತೆಯ ವ್ಯಸನದ ಸಂಕುಚಿತತೆಯನ್ನು ಬಿತ್ತಿಬಿಡಬಹುದು. ಉಳಿದೆಲ್ಲ ದೇಶಗಳ ವಿಶೇಷತೆಯನ್ನು ಅಲ್ಲಗಳೆಯುವ ವಿತಂಡವಾದಿ ಸ್ವಭಾವವನ್ನು ನೆಲೆಗೊಳಿಸಿಬಿಡಬಹುದು. ತರಗತಿ ಇಂಥ ಸಂಕುಚಿತತೆಯ ಮೂಲನೆಲೆಯಾಗಬಾರದು ಎಂಬ ವಿವೇಕ ರಾಜಕೀಯ ಪಕ್ಷಗಳು ಮತ್ತು ಅಧಿಕಾರ ಕೇಂದ್ರಗಳನ್ನು ಪ್ರತಿನಿಧಿಸುವವರೊಳಗಿರಬೇಕು. ಈ ವಿವೇಕ ಇಲ್ಲದಿರುವುದರಿಂದಲೇ ಅಧಿಕಾರರೂಢ ಪಕ್ಷಗಳು ಶಿಕ್ಷಣ ವಲಯವನ್ನು ತಮ್ಮ ರಾಜಕೀಯ ಲಾಭದ ಕಾರ್ಯತಂತ್ರದ ಭಾಗವಾಗಿ ನೋಡುತ್ತವೆ. ವಿರೋಧ ಪಕ್ಷಗಳೂ ಅದನ್ನು ರಾಜಕೀಯ ವಿವಾದ ಉಂಟುಮಾಡುವುದಕ್ಕಷ್ಟೇ ಬಳಸಿಕೊಂಡುಬಿಡುತ್ತವೆ. ತಾತ್ವಿಕ ಚರ್ಚೆ ಹುಟ್ಟುಹಾಕಿ ಗಮನಾರ್ಹ ಶೈಕ್ಷಣಿಕ ಬದಲಾವಣೆಯ ಚಿಂತನೆಯನ್ನು ಕೊಡುಗೆಯನ್ನಾಗಿ ನೀಡುವುದಿಲ್ಲ.
ಚುನಾವಣೆ ಸನ್ನಿಹಿತವಾಗುತ್ತಿರುವಾಗ ಜನಪ್ರಿಯವೆನ್ನಿಸುವ ಭಾವುಕ ಸಂಗತಿಗಳನ್ನು ಶಿಕ್ಷಣ ಕ್ಷೇತ್ರಕ್ಕೆ ತಳುಕುಹಾಕಿ ತೀರ್ಮಾನಗಳನ್ನು ಘೋಷಿಸುವ ಅವಸರದ ಪ್ರವೃತ್ತಿಯ ಬದಲು ಪ್ರಾಥಮಿಕ ಹಂತದಿಂದ ಹಿಡಿದು ಸ್ನಾತಕೋತ್ತರ ಹಂತದವರೆಗಿನ ಶೈಕ್ಷಣಿಕ ಕಲಿಕೆ ಮತ್ತು ತರಗತಿಗಳ ಸ್ವರೂಪವನ್ನು ಬದಲಾಯಿಸುವುದರ ಬಗ್ಗೆ ರಚನಾತ್ಮಕ ಚಿಂತನೆ ಹೊಳೆಸಿಕೊಳ್ಳಬೇಕಿದೆ. ಶಾಸಕಾಂಗ ಮತ್ತು ಕಾರ್ಯಾಂಗ ದೂರದರ್ಶಿತ್ವದ ಶ್ರದ್ಧೆಯೊಂದಿಗೆ ಇಂಥ ಕಾರ್ಯವನ್ನು ನಿರ್ವಹಿಸಬೇಕಿದೆ. ಹಳ್ಳಿಗಳಲ್ಲಿ ಶಾಲೆಗಳಿಲ್ಲ. ಶಾಲೆಗಳಿದ್ದರೂ ಶಿಕ್ಷಕರಿಲ್ಲ. ಶಿಕ್ಷಕರಿದ್ದರೂ ಅವರಿಗೆ ಉನ್ನತಾಧಿಕಾರಿ ವಲಯದಿಂದ ಹರಿದುಬರುವ ಆದೇಶಗಳ ಒತ್ತಡದ ಉಸಿರುಗಟ್ಟುವ ಪರಿಸ್ಥಿತಿ. ಮೂಲಭೂತ ಸೌಕರ್ಯಗಳಿಲ್ಲದ ಸ್ಥಿತಿಯಲ್ಲಿ ತರಗತಿಯನ್ನು ನಿರ್ವಹಿಸುವ ಅನಿವಾರ್ಯತೆ. ಹಳ್ಳಿ ರಾಜಕಾರಣದ ವಿಚಿತ್ರ ಸಿಕ್ಕುಗಳಲ್ಲಿ ಬಂಧಿಯಾಗುತ್ತಲೇ, ಮಾನಸಿಕವಾಗಿ ನರಳುತ್ತಲೇ ಪಾಠ ಮಾಡಬೇಕಾದ ಸಂದಿಗ್ಧತೆ. ಹೆಚ್ಚು ಸಂಖ್ಯೆಯಲ್ಲಿ ಮಕ್ಕಳಿರುವ ತರಗತಿಯನ್ನು ನಿಭಾಯಿಸುವ ಸವಾಲು. ಆಡಳಿತಾತ್ಮಕ ಕಿರಿಕಿರಿಗಳ ಭಾರದಲ್ಲಿ ಶಿಕ್ಷಕರ ಬೌದ್ಧಿಕ ಶಕ್ತಿ ನಲುಗುತ್ತಿದೆ. ಖಾಸಗಿ ಶಾಲೆ-ಕಾಲೇಜುಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸರ್ಕಾರಿ ಶಾಲೆಗಳಲ್ಲಿ ಕಲಿಯಲು ಬರುವ ಮಕ್ಕಳ ಶಿಕ್ಷಣದ ಸಾಧ್ಯತೆಗಳಿಗೆ ವ್ಯಾಪಕ ಆದ್ಯತೆ ಸಿಗುತ್ತಲೇ ಇಲ್ಲ. ಮೌಲಿಕ ಕಲಿಕೆ, ವೃತ್ತಿಪರ ಅವಕಾಶಗಳು ಮತ್ತು ಅಭಿವೃದ್ಧಿ – ಈ ಮೂರೂ ಅಂಶಗಳನ್ನು ಆಧರಿಸಿದ ಸಮಗ್ರ ನೀತಿಯನ್ನು ರೂಪಿಸಿ ವ್ಯವಸ್ಥಿತ ಅನುಷ್ಠಾನ ಸಾಧ್ಯವಾಗಿಸಬೇಕು. ಹಾಗಾದಾಗ ಮಾತ್ರ ಶಿಕ್ಷಣ, ಶಿಕ್ಷಕರು, ತರಗತಿ ಮತ್ತು ವಿದ್ಯಾರ್ಥಿಗಳು ಚುನಾವಣಾ ಅಖಾಡದ ಕಾರ್ಯತಂತ್ರಗಳಿಗೆ ಬಲಿಯಾಗುವುದಿಲ್ಲ. ಪ್ರತಿ ಚುನಾವಣೆಯೂ ಶಿಕ್ಷಣ ರಂಗದ ಸಬಲೀಕರಣದ ಚಿಂತನೆಗಳಿಗೆ ವೇದಿಕೆಯನ್ನು ಒದಗಿಸಬೇಕು. ಚಿಂತನೆಯ ಮಾದರಿ ಲಭ್ಯವಾಗುತ್ತಿರಬೇಕು. ಅದಕ್ಕನುಗುಣವಾಗಿ ತರಗತಿಗಳು ಪ್ರಬುದ್ಧ ನೆಲೆಗಳಾಗಿ ಪರಿವರ್ತಿತವಾಗಬೇಕು. ಇಡೀ ಶಿಕ್ಷಣ ವಲಯವು ದೇಶದ ಉಜ್ವಲ ಭವಿಷ್ಯಕ್ಕೆ ನೆರವಾಗುವ ಅಮೂಲ್ಯ ಸಂಪನ್ಮೂಲವಾಗಬೇಕು.
-ಡಾ.ಎನ್.ಕೆ.ಪದ್ಮನಾಭ
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
ಜುಲೈ 1 ರಿಂದ ಹೊಸ ಕ್ರಿಮಿನಲ್ ಕಾನೂನು ಜಾರಿ
![](https://suddidina.com/wp-content/uploads/2024/06/New_Criminal_law_suddidina.jpg)
ಸುದ್ದಿದಿನಡೆಸ್ಕ್:ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮರು ಪರಿಶೀಲಿಸುತ್ತಿಲ್ಲ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಸ್ಪಷ್ಟಪಡಿಸಿದ್ದಾರೆ.
ಭಾರತೀಯ ದಂಡ ಸಂಹಿತೆ 1860, ಭಾರತೀಯ ಸಾಕ್ಷ್ಯ ಕಾಯ್ದೆ 1872 ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ 1973 ಅನ್ನು ಬದಲಿಸುವ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಅವರು ಹೇಳಿದ್ದಾರೆ. ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ತಿಳಿಸಿದ್ದಾರೆ.
“ಐಪಿಸಿ, ಸಿಆರ್ಪಿಸಿ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳು ಬದಲಾಗುತ್ತಿವೆ. ಸೂಕ್ತ ಸಮಾಲೋಚನೆ ಪ್ರಕ್ರಿಯೆ ಅನುಸರಣೆ ಹಾಗೂ ಕಾನೂನು ಆಯೋಗದ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಈ ಮೂರು ಕಾನೂನುಗಳನ್ನು ಬದಲಾಯಿಸಲಾಗಿದೆ” ಎಂದು ಮೇಘವಾಲ್ ತಿಳಿಸಿದರು.”
ಈ ಮೂರು ಕಾನೂನುಗಳನ್ನು ಜುಲೈ 1 ರಿಂದ ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೆಸರಿನಲ್ಲಿ ಜಾರಿಗೆ ತರಲಾಗುವುದು. ಮೂರು ಹೊಸ ಕಾನೂನುಗಳ ತರಬೇತಿ ಸೌಲಭ್ಯಗಳನ್ನು ಎಲ್ಲಾ ರಾಜ್ಯಗಳಿಗೂ ಒದಗಿಸಲಾಗುತ್ತಿದೆ” ಎಂದು ಮೇಘವಾಲ್ ವಿವರಿಸಿದ್ದಾರೆ.”
ನಮ್ಮ ನ್ಯಾಯಾಂಗ ಅಕಾಡೆಮಿಗಳು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಸಹ ಈ ಬಗ್ಗೆ ತರಬೇತಿ ನೀಡುತ್ತಿವೆ. ಎಲ್ಲವೂ ಜೊತೆಜೊತೆಯಾಗಿ ಸಾಗುತ್ತಿದೆ ಮತ್ತು ಜುಲೈ 1 ರಿಂದ, ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ನಿರ್ಣಾಯಕವಾದ ಈ ಎಲ್ಲಾ ಮೂರು ಕಾನೂನುಗಳನ್ನು ದೇಶದಲ್ಲಿ ಜಾರಿಗೆ ತರಲಾಗುವುದು” ಎಂದು ಅವರು ಸ್ಪಷ್ಟಪಡಿಸಿದರು.
ದೇಶದಲ್ಲಿ ಅಪರಾಧ ನ್ಯಾಯ ಸುಧಾರಣೆಯು ದೇಶದ ನ್ಯಾಯದಾನ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಇದು ಸೂಚಿಸುತ್ತದೆ. ಮಹಿಳೆಯರು, ಮಕ್ಕಳು ಮತ್ತು ರಾಷ್ಟ್ರದ ವಿರುದ್ಧದ ಅಪರಾಧಗಳನ್ನು ಇದು ಮುಂಚೂಣಿಯಲ್ಲಿರಿಸುತ್ತದೆ. ಅಲ್ಲದೆ ಇದು ವಸಾಹತುಶಾಹಿ ಯುಗದ ಕಾನೂನುಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ; ವ್ಯಾಪಕ ಟೀಕೆ
![](https://suddidina.com/wp-content/uploads/2022/05/petrol_suddidina.jpg)
ಸುದ್ದಿದಿನಡೆಸ್ಕ್: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಟೀಕಿಸಿದ್ದಾರೆ.
ರಾಜ್ಯ ಸರ್ಕಾರ ಮೊನ್ನೆಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿದ ನಂತರ ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 3 ರೂಪಾಯಿ ಹಾಗೂ ಡೀಸೆಲ್ 3.5 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಪ್ರತಿ ಕುಟುಂಬದ ಮಹಿಳೆಗೆ ತಿಂಗಳಿಗೆ 8 ಸಾವಿರದ 500 ರೂಪಾಯಿಗಳನ್ನು ವರ್ಗಾವಣೆ ಮಾಡುವ ಭರವಸೆಯನ್ನು ಈಡೇರಿಸುವ ಬದಲು, ಕಾಂಗ್ರೆಸ್ ಆಡಳಿತದ ಕರ್ನಾಟಕ ಸರ್ಕಾರವು, ರಾಜ್ಯದ ಜನರಿಗೆ ಹೊರೆಯಾಗಿದೆ ಎಂದು ಹರ್ದೀಪ್ ಸಿಂಗ್ ಪುರಿ ಸಾಮಾಜಿಕ ಜಾಲತಾಣದಲ್ಲಿ ದೂರಿದ್ದಾರೆ. ಇಂತಹ ನಿರ್ಧಾರ ಹಣದುಬ್ಬರದ ಬಗ್ಗೆ ಮಾತನಾಡುವ ಕಾಂಗ್ರೆಸ್ನ ಬೂಟಾಟಿಕೆ ಬಹಿರಂಗಪಡಿಸುತ್ತದೆ. ಆದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರತಿ ಲೀಟರ್ಗೆ ಸುಮಾರು 8 ರೂಪಾಯಿಗಳಿಂದ 12 ರೂಪಾಯಿಗಳಷ್ಟು ಹೆಚ್ಚುವರಿ ವ್ಯಾಟ್ ಅನ್ನು ವಿಧಿಸುತ್ತಿದೆ ಎಂದು ಸಚಿವರು ಆರೋಪಿಸಿದ್ದಾರೆ.
ಈ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯ ಸರ್ಕಾರ ಮುಂದಾಲೋಚನೆ ಇಲ್ಲದೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು, ಈಗ ಆರ್ಥಿಕ ಹೊರೆ ತಡೆಯಲು ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮಾಡಿದೆ ಎಂದು ಹುಬ್ಬಳ್ಳಿಯಲ್ಲಿ ಆರೋಪಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಬಸ್ ದರ, ಹಾಲಿನ ದರ, ಅಗತ್ಯ ವಸ್ತುಗಳ ದರ ಹೆಚ್ಚಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಆಡಳಿತದ ವ್ಯವಸ್ಥೆ ಕುಸಿದುಹೋಗಿದೆ ಎಂದು ದೂರಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಪ್ರಲ್ಹಾದ್ ಜೋಶಿ ಎಚ್ಚರಿಕೆ ನೀಡಿದ್ದಾರೆ.
ಮತ್ತೊಂದೆಡೆ, ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ದರ ಏರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ವ್ಯಾಟ್ ಹೆಚ್ಚಳ ಬಳಿಕ ದಕ್ಷಿಣ ಭಾರತದ ರಾಜ್ಯಗಳಿಗಿಂತ ಕರ್ನಾಟಕದಲ್ಲಿಯೇ ದರ ಕಡಿಮೆ ಇದೆ. ಆರ್ಥಿಕವಾಗಿ ಬಲಿಷ್ಠವಾಗಿರುವ ಮಹಾರಾಷ್ಟ್ರಕ್ಕಿಂತಲ್ಲೂ ಹಾಗೂ ಗುಜರಾತ್ ಮತ್ತು ಮಧ್ಯಪ್ರದೇಶಕ್ಕಿಂತಲ್ಲೂ ನಮ್ಮ ರಾಜ್ಯದಲ್ಲಿ ದರ ಕಡಿಮೆ ಇದೆ ಎಂದು ಹೇಳಿದ್ದಾರೆ.
ಈ ಹಿಂದಿನ ಬಿಜೆಪಿ ಸರ್ಕಾರ ತೆರಿಗೆ ಕಡಿಮೆ ಮಾಡಿದ್ದರೂ, ಕೇಂದ್ರ ಸರ್ಕಾರ ಪದೇ ಪದೆ ವ್ಯಾಟ್ ಹೆಚ್ಚಳ ಮಾಡಿತ್ತು ಎಂದು ಆರೋಪಿಸಿದ್ದಾರೆ. ರಾಜ್ಯದ ತೆರಿಗೆ ಹೆಚ್ಚಳದಿಂದ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
ನೀಟ್ ಪರೀಕ್ಷೆಯಲ್ಲಿ ಕೃಪಾಂಕ ನೀಡಿಕೆ ನಿಲ್ಲಬೇಕು : ಸಿಎಂ ಸಿದ್ದರಾಮಯ್ಯ ಒತ್ತಾಯ
![](https://suddidina.com/wp-content/uploads/2023/06/siddaramaiah_davangere_suddidina.jpg)
ಸುದ್ದಿದಿನಡೆಸ್ಕ್:ಈ ಬಾರಿ ನಡೆದ ನೀಟ್ ಪರೀಕ್ಷೆಯಲ್ಲಿ ಕೃಪಾಂಕಗಳನ್ನು ನೀಡುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಕೃಪಾಂಕ ನೀಡಿಕೆ ಪದ್ಧತಿಯನ್ನು ನಿಲ್ಲಿಸಿ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದರು. ರಾಜ್ಯದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಕಡಿಮೆಗೊಳಿಸುವ ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ವೇದಿಕೆ ಸಜ್ಜಾಗಿದ್ದು, ಸದ್ಯದಲ್ಲೇ ಚುನಾವಣೆ ನಡೆಸಲಾಗುವುದೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
-
ದಿನದ ಸುದ್ದಿ7 days ago
JOB NEWS | ಡಿ.ಇಡಿ ಮತ್ತು ಬಿ.ಇಡಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
-
ಅಂತರಂಗ7 days ago
ನಾಳೆ ಡಾ.ಅಂಬೇಡ್ಕರ್ ಬರಹಗಳು ಮತ್ತು ಅವರ ಪ್ರಭಾವಿತ ಸಾಧಕರ ಸಂದರ್ಶನ ಸರಣಿ ಕಾರ್ಯಕ್ರಮ
-
ದಿನದ ಸುದ್ದಿ6 days ago
ಕೊಲೆ ಕೇಸ್ ; ನಾಳೆ ಚಿತ್ರದುರ್ಗದಲ್ಲಿ ನಟ ದರ್ಶನ್ ವಿರುದ್ಧ ಪ್ರತಿಭಟನೆ
-
ದಿನದ ಸುದ್ದಿ7 days ago
ಮಸ್ಕಿ | ಬಿಜೆಪಿ ಕಚೇರಿಯಲ್ಲಿ ಆತ್ಮಾವಲೋಕನ ಸಭೆ
-
ದಿನದ ಸುದ್ದಿ7 days ago
ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್ ಇನ್ನಿಲ್ಲ
-
ದಿನದ ಸುದ್ದಿ6 days ago
ಭಾರೀ ಮಳೆ ; ಡ್ಯಾಂಗಳಿಗೆ ಹರಿದು ಬಂದ ನೀರೆಷ್ಟು..? ಇಲ್ಲಿದೆ ಸಂಪೂರ್ಣ ಮಾಹಿತಿ
-
ಅಂತರಂಗ5 days ago
ದಾವಣಗೆರೆ | ಪ್ರೊ. ಎಸ್.ಬಿ. ರಂಗನಾಥ್ ಅವರಿಗೆ ಕೇಂದ್ರ ಕ ಸಾ ಪ ದತ್ತಿ ಪ್ರಶಸ್ತಿ ಪ್ರದಾನ