ದಿನದ ಸುದ್ದಿ
ಜಲಶಕ್ತಿ ಅಭಿಯಾನ 2021 ಕಾರ್ಯಕ್ರಮ ಕ್ರಿಯಾ ಯೋಜನೆಗೆ ಅಸ್ತು:ಅಭಿಯಾನ ಯಶಸ್ವಿಗೊಳಿಸಲು ಡಿಸಿ ಮಹಾಂತೇಶ್ ಬೀಳಗಿ ಕರೆ
ಸುದ್ದಿದಿನ,ದಾವಣಗೆರೆ : ಜಲಶಕ್ತಿ ಅಭಿಯಾನ 2021 ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಮಳೆ ನೀರನ್ನು ಸಂಗ್ರಹಿಸಿ, ಶೇಖರಿಸಿ, ಬಳಕೆ ಮಾಡುವ ಹಾಗೂ ನೀರಿನ ಮೂಲಗಳನ್ನು ಸಂರಕ್ಷಿಸುವ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಸಮಿತಿಯು 100 ದಿನಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿತು.
ಮಂಗಳವಾರ ಸಂಜೆ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ‘ಜಲಶಕ್ತಿ ಅಭಿಯಾನ 2021’ ಕಾರ್ಯಕ್ರಮ ಅನುಷ್ಟಾನದ ಹಿನ್ನೆಲೆ ಕ್ರಿಯಾಯೋಜನೆಗೆ ಅನುಮೋದನೆ ನೀಡುವ ಹಾಗೂ ಕಾರ್ಯಕ್ರಮ ಯಶಸ್ವಿಗೊಳಿಸುವ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧ್ಯಕ್ಷತೆ ವಹಿಸಿ, ಅಭಿಯಾನದ ಸುಮಾರು 2442 ಕಾರ್ಯಕ್ರಮಗಳ 100 ದಿನಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದರು.
ಇದನ್ನೂ ಓದಿ | ದಾವಣಗೆರೆ | ಸ್ವಾತಂತ್ರ್ಯ ಅಮೃತ ಮಹೋತ್ಸವ : ಏ.2 ಕ್ಕೆ ಚಾಲನೆ
ಈ ವೇಳೆ ಅವರು ಮಾತನಾಡಿ, ಭಾರತ ಸರ್ಕಾರವು ಜಲಶಕ್ತಿ ಅಭಿಯಾನ 2021 ಕ್ಕೆ ‘ಕ್ಯಾಚ್ ದಿ ರೈನ್ – ವೇರ್ ಇಟ್ ಫಾಲ್ಸ್, ವೆನ್ ಇಟ್ ಫಾಲ್ಸ್’, ಅಂದರೆ ಮಳೆ ಬಂದಾಗ ನೀರನ್ನು ಸಂಗ್ರಹಿಸುವ ಧ್ಯೇಯ ವಾಕ್ಯದೊಂದಿಗೆ ಮಾನ್ಯ ಪ್ರಧಾನಮಂತ್ರಿಯವರು ಮಾರ್ಚ್ 22 ರಂದು ಚಾಲನೆ ನೀಡಿದ್ದು, ಎಲ್ಲ ರಾಜ್ಯಗಳಲ್ಲಿ ಮಾ.22 ರಿಂದ ನ.30 ರವರೆಗೆ ನೀರಿನ ತೇವಾಂಶ ಮತ್ತು ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಮಳೆ ನೀರು ಸಂಗ್ರಹಣೆ, ಶೇಖರಣೆ ಮತ್ತು ಬಳಕೆ ಹಾಗೂ ಜಲ ಮೂಲ ಸಂರಕ್ಷಣೆ ಮಾಡಲು ಹಾಗೂ ಶುದ್ದ ನೀರಿನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸರ್ಕಾರಿ ಕಟ್ಟಡಗಳು, ಶಾಲೆಗಳು, ಹಾಸ್ಟೆಲ್ಗಳು, ಖಾಸಗಿ ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಮಳೆ ನೀರನ್ನು ಸಂಗ್ರಹಿಸಿ ಭೂಮಿಯಲ್ಲಿ ಇಂಗಿಸುವ ಅಥವಾ ಬಳಸುವ ಬಗ್ಗೆ ಹಾಗೂ ಕೆರೆ, ಕಲ್ಯಾಣಿ ಅಭಿವೃದ್ದಿ, ಹಸುರೀಕರಣ ಕಾರ್ಯ ಕೈಗೊಳ್ಳಲು ತಾ.ಪಂ ಇಓ ಗಳು, ವಿವಿಧ ಇಲಾಖೆಗಳು ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿದ್ದಾರೆ.
ನಗರ ಭಾಗದ ದೊಡ್ಡ ಕಟ್ಟಡಗಳಲ್ಲಿ ಮಳೆ ನೀರು ಸದ್ಬಳಕೆ ಹಾಗೂ ನೀರಿನ ಮೂಲಕ ಸಂರಕ್ಷಣೆ ಕುರಿತು ಪಾಲಿಕೆ ಆಯುಕ್ತರು ಹಾಗೂ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರು ಕ್ರಮ ವಹಿಸಬೇಕು. ಹಾಗೂ ಡಿಡಿಪಿಐ ರವರು ಶಾಲಾ ಕಟ್ಟಡಗಳಲ್ಲಿ ನರೇಗಾದಡಿ ಮಳೆ ಕೊಯ್ಲು ಅಥವಾ ಮಳೆ ನೀರು ಇಂಗಿಸಲು ಕ್ರಮ ವಹಿಸಬೇಕು. ಹಾಗೂ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಕೈಗೊಂಡ ಕ್ರಮಗಳ ಬಗ್ಗೆ ಪ್ರತಿವಾರ ನನಗೆ ವರದಿ ನೀಡಬೇಕೆಂದರು.
ಕೆರೆಗಳ ಅಭಿವೃದ್ದಿ ಸೇರಿದಂತೆ ಮಳೆ ನೀರು ಹಾಗೂ ನೀರಿನ ಮೂಲ ಸಂರಕ್ಷಣೆ ಕಾಮಗಾರಿಗಳನ್ನು ದಾನಿಗಳ ಸಹಾಯ ಪಡೆದು ಕೂಡ ಮಾಡಬಹುದು. ದಾನಿಗಳಿಂದ ಜೆಸಿಬಿ, ಡೀಸೆಲ್ ಇತ್ಯಾದಿ ಅಭಿಯಾನದ ಯಶಸ್ಸಿಗೆ ಪೂರಕ ಸಹಾಯ ಪಡೆಯಬಹುದು ಎಂದರು.
ಸಾಮಾಜಿಕ ಅರಣ್ಯ ವಿಭಾಗದಿಂದ ಜಿಲ್ಲೆಯ ಸರ್ಕಾರಿ ಶಾಲೆಗಳು ಮತ್ತು ಇತರೆ ಕಚೇರಿ ಕಟ್ಟಗಳ ಆವರಣದಲ್ಲಿ ಜೂನ್ 5 ರ ವನಮಹೋತ್ಸವದಂದು ನೆಡಲು 50 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೀಡುವಂತೆ ಅರಣ್ಯ ಅಧಿಕಾರಿಗೆ ಸೂಚನೆ ನೀಡಿದ ಅವರು ಎಲ್ಲ ವಿದ್ಯಾರ್ಥಿಗಳು ಅಂದು ಒಂದೊಂದು ಗಿಡ ದತ್ತು ಪಡೆದು ಗಿಡಕ್ಕೆ ನೀರು ಹಾಕಿ ಬೆಳೆಸುವಂತೆ ಪ್ರೇರೇಪಿಸಬೇಕೆಂದು ಡಿಡಿಪಿಐ ರವರಿಗೆ ತಿಳಿಸಿದರು.
ಜಗಳೂರಿನಲ್ಲಿ ಬಿಳಿಚೋಡು ಕೆರೆ, ಸಂಗೇನಹಳ್ಳಿ, ತುಪ್ಪದಹಳ್ಳಿ ಮತ್ತು ಜಗಳೂರು ಪಟ್ಟಣದಲ್ಲಿ ದೊಡ್ಡ ಕೆರೆಗಳಿದ್ದು ಕೆರೆ ಅಭಿವೃದ್ದಿ ಸೇರಿದಂತೆ ಇಂಗುಗುಂಡಿ, ಗೋಕಟ್ಟೆ ನಿರ್ಮಾಣ, ಹಸಿರೀಕರಣ ಮತ್ತು ಮಳೆ ಕೊಯ್ಲು ಯೋಜನೆಗೆ ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ ಎಂದು ತಾ.ಪಂ ಇಓ ತಿಳಿಸಿದರು.
ಚನ್ನಗಿರಿಯಲ್ಲಿ 6 ಮತ್ತು ಹೊನ್ನಾಳಿಯಲ್ಲಿ 18 ಮಳೆ ಕೊಯ್ಲು ಯೋಜನೆ ಸೇರಿ ಒಟ್ಟು 66 ಮಳೆಕೊಯ್ಲು, ಇಂಗುಗುಂಡಿ, ಕಲ್ಯಾಣಿ, ಕೆರೆ ಅಭಿವೃದ್ದಿ ಹಾಗೂ ವಿವಿಧ ನೀರಿನ ಮೂಲ ಸಂರಕ್ಷಣೆ ಕುರತು ಎಲ್ಲ ತಾಲ್ಲೂಕುಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು ಸೇರಿ ಒಟ್ಟು 2442 ಕಾಮಗಾರಿಗಳಿಗೆ ಸಮಿತಿಯು ಇಂದು ಅನುಮೋದನೆ ನೀಡಿದ್ದು, ಸಂಬಂಧಿಸಿದ ಎಲ್ಲ ಸ್ಥಳೀಯ ಸಂಸ್ಥೆಗಳು, ಶಿಕ್ಷಣ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು ಸೇರಿ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಜಿ.ಪಂ. ಸಿಇಓ ಡಾ.ವಿಜಯ ಮಹಾಂತೇಶ ದಾನಮ್ಮನವರ್ ಮಾತನಾಡಿ, ಸಮಗ್ರ ಕೆರೆ ಅಭಿವೃದ್ದಿ ಯೋಜನೆಯಡಿ ವಿವಿಧ ತಾಲ್ಲೂಕುಗಳ ಕೆರೆಗಳಲ್ಲಿ ಹೂಳೆತ್ತೆಸಿ ಅಭಿವೃದ್ದಿಪಡಿಸಬೇಕು. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಒತ್ತು ನೀಡಿ, ಭೂಮಿ ಲಭ್ಯತೆ ಇದ್ದರೆ ತಹಶೀಲ್ದಾರರು ಜಿಲ್ಲೆಯಲ್ಲಿ ಹೊಸ ಕೆರೆಗಳನ್ನು ಸಹ ಮಾಡಬೇಕು ಎಂದರು.
ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಅಭಿಯಾನಕ್ಕೆ ಚಾಲನೆ ಈ ಅಭಿಯಾನ ಕಾರ್ಯಕ್ರಮದ ಚಾಲನೆಯನ್ನು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕ್ರಮವಾಗಿ ಶಾಸಕರು ಮತ್ತು ಉಸ್ತುವಾರಿ ಮಂತ್ರಿಗಳಿಂದ ಮಾಡಿಸಬೇಕಿದ್ದು, ಜಗಳೂರು ತಾಲ್ಲೂಕಿನ ಗುತ್ತಿದುರ್ಗದ ಕೊಣಚಗಲ್ಗುಡ್ಡದ ಕಲ್ಯಾಣಿಯನ್ನು ಅಭಿವೃದ್ದಿಪಡಿಸಿ ಇಲ್ಲಿಯೇ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಚಾಲನೆ ನೀಡಲು ಡಿಪಿಆರ್ ಮತ್ತಿತರೆ ತಯಾರಿ ನಡೆಸುವಂತೆ ತಾ.ಪಂ ಇಓ ಮತ್ತು ತಹಶೀಲ್ದಾರರಿಗೆ ಸೂಚನೆ ಜಿ.ಪಂ ಸಿಇಓ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಧೂಡಾ ಆಯುಕ್ತ ಕುಮಾರಸ್ವಾಮಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್, ತೋಟಗಾರಿಕೆ ಇಲಾಖೆ ಡಿಡಿ ಲಕ್ಷ್ಮೀಕಾಂತ್ ಬೊಮ್ಮನ್ನಾರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ರೇಷ್ಮಾ ಕೌಸರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಆರ್.ಗಂಗಪ್ಪ ಸೇರಿದಂತೆ ತಾ.ಪಂ ಇಓ ಗಳು, ಅಧಿಕಾರಿಗಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಂಕಿ ರಹಿತ ಕುಕಿಂಗ್ ಕಾರ್ಯಕ್ರಮ
ಸುದ್ದಿದಿನ,ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗಾಗಿ “ಕುಕಿಂಗ್ ವಿಥೌಟ್ ಫೈರ್” ಎಂಬ ಬೆಂಕಿ ರಹಿತ ಆಹಾರ ತಯಾರಿ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಹಲವಾರು ತಂಡಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ಅಂಗವಾಗಿ ಆಹಾರ ಮೇಳವೂ ಏರ್ಪಡಿಸಲಾಯಿತು. ವಿದ್ಯಾರ್ಥಿನಿಯರು ಕಾರಟ್ ಹಲ್ವಾ, ಫ್ರೂಟ್ ಸಲಾಡ್, ಚುರಿ ಮುರಿ, ಮೊಸರು ಅವಲಕ್ಕಿ, ವಿವಿಧ ರುಚಿಯ ಜ್ಯೂಸ್ಗಳು, ಕೊಕೊನೆಟ್ ಬರ್ಫಿ, ಕುಕುಂಬರ್ ಬೋಟ್, ಟೊಮೇಟೊ ಚಾಟ್, ಆಪಲ್ ಪೇಡ ಮತ್ತು ಅವಲಕ್ಕಿ ಚಿತ್ರಾನ್ನ ಸೇರಿದಂತೆ ಹಲವಾರು ಪೌಷ್ಟಿಕ ಹಾಗೂ ರುಚಿಕರ ಆಹಾರಗಳನ್ನು ತಯಾರಿಸಿ ಪ್ರದರ್ಶನೆ ಮತ್ತು ಮಾರಾಟ ಮಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ವಿದ್ಯಾರ್ಥಿನಿಯರು ಪಾಲ್ಗೊಂಡು ಯಶಸ್ವಿ ಕಾರ್ಯಕ್ರಮವನ್ನಾಗಿ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ
ಸುದ್ದಿದಿನ,ದಾವಣಗೆರೆ: ಜಿಲ್ಲೆಯ 5 ರಿಂದ 7 ವರ್ಷ ಹಾಗೂ 15 ರಿಂದ 17 ವರ್ಷದ ವಯೋಮಿತಿಯ ಮಕ್ಕಳಿಗೆ ಕಡ್ಡಾಯ ಬಯೋಮೆಟ್ರಿಕ್ ಅಪ್ಡೇಟ್ (Mandatory Biometric Update) ಮಾಡಿಸಲು ಜಿಲ್ಲಾಡಳಿತವು ವಿಶೇಷ ಅವಕಾಶ ಕಲ್ಪಿಸಿದೆ. ಜಿಲ್ಲೆಯ ಎಲ್ಲಾ ಆಧಾರ್ ಕೇಂದ್ರಗಳಲ್ಲಿ ಸೆಪ್ಟೆಂಬರ್ 30, 2026 ರವರೆಗೆ ಈ ಸೇವೆಯು ಸಂಪೂರ್ಣ ಉಚಿತವಾಗಿ ಲಭ್ಯವಿರಲಿದೆ.
ಆಧಾರ್ ನಿಯಮಗಳ ಪ್ರಕಾರ, ಮಕ್ಕಳಿಗೆ 5 ಮತ್ತು 15 ವರ್ಷ ತುಂಬಿದಾಗ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸುವುದು ಕಡ್ಡಾಯವಾಗಿದೆ. ಈ ನವೀಕರಣದಿಂದ ಶಾಲಾ ದಾಖಲಾತಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು, ವಿದ್ಯಾರ್ಥಿ ವೇತನ ಹಾಗೂ ಸರ್ಕಾರದ ವಿವಿಧ ಜನಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ.
ಪೋಷಕರು ತಮ್ಮ ಮಕ್ಕಳ ಆಧಾರ್ ಕಾರ್ಡ್ ಮತ್ತು ಪೂರಕ ದಾಖಲೆಗಳೊಂದಿಗೆ ಹತ್ತಿರದ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಜಿಲ್ಲೆಯ ಎಲ್ಲಾ ಪೋಷಕರು ಈ ಜವಾಬ್ದಾರಿಯನ್ನು ಅರಿತು, ನಿಗದಿತ ಅವಧಿಯೊಳಗೆ ತಮ್ಮ ಮಕ್ಕಳ ಆಧಾರ್ ನವೀಕರಿಸುವ ಮೂಲಕ ಸರ್ಕಾರದ ಯೋಜನೆಗಳು ತಲುಪಲು ಸಹಕರಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ಹಿರಿಯ ಕ್ರಿಕೆಟ್ ಪಟು ಎನ್ಆರ್ಎಚ್ ರಮೇಶ್ ನಿಧನ
ಸುದ್ದಿದಿನ,ದಾವಣಗೆರೆ: ನಗರದ ಎನ್ಆರ್ಎಚ್ ಸೈಕಲ್ ಮಾರ್ಟ್ ಮಾಲೀಕ, ದಾವಣಗೆರೆ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ನ ನಾಯಕನಾಗಿದ್ದ ಎನ್.ಆರ್.ಎಚ್.ರಮೇಶ ಇಲ್ಲಿನ ಕೆಟಿಜೆ ನಗರದ 15ನೇ ಕ್ರಾಸ್, 2ನೇ ಮೇನ್ನಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ಸಂಜನೆ ನಿಧನರಾಗಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಓರ್ವ ಸಹೋದರ, ಮೂವರು ಸಹೋದರಿಯರು ಸೇರಿದಂತೆ ಬಂಧು-ಬಳಗ ಅಗಲಿದ್ದಾರೆ. ದಾವಣಗೆರೆ ಗಾಂಧಿ ನಗರ ಸಮೀಪದ ವೀರಶೈವ ರುದ್ರಭೂಮಿಯಲ್ಲಿ ಮೇ.7ರಂದು ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.
90ರ ದಶಕದಲ್ಲಿ ದಾವಣಗೆರೆ ಸೇರಿದಂತೆ ನೆರೆ ಹೊರೆಯ ಜಿಲ್ಲೆಗಳಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯ, ಪಂದ್ಯಾವಳಿಗಳಲ್ಲಿ ಭರ್ಜರಿ ಸಿಕ್ಸರ್ ಭಾರಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಆಟಗಾರನಾಗಿ ರಮೇಶ ಸಾಧನೆ ಮಾಡಿದ್ದರು. ಎನ್ಆರ್ಎಚ್ ರಮೇಶ ನಿಧನಕ್ಕೆ ಎಫ್ಸಿಸಿ ತಂಡದ ಹಿರಿಯ ಆಟಗಾರರು, ದಾವಣಗೆರೆ ಕ್ರಿಕೆಟ್ ಕ್ಲಬ್ ಸೇರಿದಂತೆ ವಿವಿಧ ಕ್ರಿಕೆಟ್ ಕ್ಲಬ್ಗಳ ಹಿರಿಯ ಆಟಗಾರರು ತೀವ್ರ ಸಂತಾಪ ಸೂಚಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಸುಗಮ ಮತ ಎಣಿಕೆಗೆ ಸಜ್ಜು
-
ಅಂಕಣ3 days agoಸಮರ್ಥ್ ಶಾಮನೂರು ಪ್ರಯಾಸದ ಗೆಲುವು ಮತ್ತು ಮುಂದಿನ ಸವಾಲುಗಳು
-
ದಿನದ ಸುದ್ದಿ6 days agoದಾವಣಗೆರೆ | ದೇಗುಲಗಳಲ್ಲಿ ನಿಧಿ ಶೋಧನೆ ಯತ್ನ ; ಆರು ಜನರ ಬಂಧನ
-
ದಿನದ ಸುದ್ದಿ2 days agoಸಂಶೋಧಕರಿಂದ ಪಶ್ಚಿಮ ಘಟ್ಟಗಳಲ್ಲಿ ಮೂರು ಅಣಬೆಯ ಹೊಸ ಶಿಲೀಂಧ್ರ ಜಾತಿಗಳ ಪತ್ತೆ
-
ದಿನದ ಸುದ್ದಿ1 day agoದಾವಣಗೆರೆ | ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಂಕಿ ರಹಿತ ಕುಕಿಂಗ್ ಕಾರ್ಯಕ್ರಮ
-
ದಿನದ ಸುದ್ದಿ1 day agoಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ
-
ಕ್ರೀಡೆ1 day agoಹಿರಿಯ ಕ್ರಿಕೆಟ್ ಪಟು ಎನ್ಆರ್ಎಚ್ ರಮೇಶ್ ನಿಧನ

