ನೆಲದನಿ
ನುಡಿಯ ಒಡಲು -07 : ಭಾಷಿಕ ಕ್ರಿಯೆ ಮತ್ತು ಮನುಷ್ಯ ಘನತೆ
- ಡಾ.ಮೇಟಿ ಮಲ್ಲಿಕಾರ್ಜುನ,ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಭಾಗ – 03
ಮನುಷ್ಯ ಘನತೆ ಎಂಬುದು ನೈತಿಕ ಮತ್ತು ತಾತ್ವಿಕ ನಿಲುವಾಗಿದೆ. ಇದು ಹಲವು ನೆಲೆಯ ತಿರುಳುಗಳನ್ನು ಪಡೆದಿಕೊಂಡಿದೆ. ಪ್ರತೀ ತಿರುಳಿನೊಂದಿಗೆ ವಿಭಿನ್ನ ಭಾಷಿಕ ಕ್ರಿಯೆಗಳು ಪ್ರಚೂರಗೊಳ್ಳುತ್ತವೆ. ಮನುಷ್ಯ ಘನತೆ ಎಂಬೀ ಪರಿಕಲ್ಪನೆಗೆ ಪ್ರಾಪ್ತವಾಗುವ ಘನವಾದ ಅರ್ಥವು ಲೋಕಗ್ರಹಿಕೆಯನ್ನು ನೆಲೆಯಾಗಿಸಿಕೊಂಡಿರುತ್ತದೆ.
ಒಂದು ನಿರ್ದಿಷ್ಟ ಸಾಂಸ್ಕೃತಿಕ-ಸಾಮಾಜಿಕ ಗ್ರಹಿಕೆಯೊಂದು ಇಲ್ಲಿ ನೆಲೆಗೊಂಡಿರುತ್ತದೆ. ಅಂದರೆ ಸಮಾಜ/ಸಮುದಾಯದೊಂದಿಗೆ ವ್ಯಕ್ತಿಯೊಬ್ಬ ಹೊಂದಿರುವ ನೈತಿಕತೆಯ ನಿಲುವು ಇದಾಗಿರುತ್ತದೆ. ವ್ಯಕ್ತಿಯ ನೈತಿಕ ಸ್ಥೈರ್ಯವು ಎರಡು ನೆಲೆಯಲ್ಲಿ ವರ್ತಿಸುತ್ತದೆ. ಒಂದು ವೈಯಕ್ತಿಕ ನೆಲೆ ಇದನ್ನು ಬಿಡಿನೆಲೆ ಎನ್ನೋಣ. ಎರಡನೆಯದು ಸಾಮುದಾಯಿಕ ನೆಲೆ ಇದನ್ನು ಇಡಿನೆಲೆ ಎಂದು ಕರೆಯೋಣ. ಈ ಇಡಿ ಮತ್ತು ಬಿಡಿ ನೆಲೆಗಳ ನಡುವಣ ನಂಟಸ್ತಿಕೆ ಪರಸ್ಪರವಾಗಿ ಕಾರ್ಯನಿರ್ವಹಿಸುತ್ತವೆ.
ಹೀಗೆ ಪರಸ್ಪರ ವರ್ತಿಸುವ ಪ್ರಕ್ರಿಯೆಯಲ್ಲಿ ನೈತಿಕ ಮತ್ತು ತಾತ್ವಿಕ ನಿಲುವುಗಳನ್ನು ಒಂದು ಸಮುದಾಯ ಮತ್ತು ಒಬ್ಬ ವ್ಯಕ್ತಿ ಹೇಗೆ ಅನುಸರಿಸಲಾಗುತ್ತದೆ ಎನ್ನುವುದನ್ನು ಮನಗಾಣಬಹುದು. ಘನವಾದ ಅರ್ಥ ಎನ್ನುವುದು ಮಾನವೀಯ ಮೌಲ್ಯಗಳ ಮೂಲಗ್ರಹಿಕೆಗಳಿಂದ ಸಂಚಿತವಾಗಿರುತ್ತದೆ. ನಮ್ಮ ಸಾಮಾಜೀಕರಣ ಪ್ರಕ್ರಿಯೆಯೊಳಗೆಯೇ ಮೈದೆರೆಯುವ ಈ ಗ್ರಹಿಕೆಗಳು, ನಮ್ಮ ಪ್ರಜ್ಞೆಯ ಮೂಲ ನೈತಿಕ ತತ್ವಗಳಾಗಿ ಹೊರಹೊಮ್ಮುತ್ತವೆ.
ಇದು ಇಡಿಯಾಗಿ ಅನಾವರಣಗೊಳ್ಳುವ ನೈತಿಕತೆಯ ವಿನ್ಯಾಸವಾಗಿದೆ. ಈ ಮುಖೇನ ಬಿಡಿನೆಲೆಯ ನೈತಿಕ ದೃಷ್ಟಿಕೋನಗಳು ಏರ್ಪಡುತ್ತವೆ. ಪರಿಣಾಮವಾಗಿ ವ್ಯಕ್ತಿ ಘನತೆಯ ಚಹರೆಗಳನ್ನು ನಿರ್ವಚಿಸುವ ಇಲ್ಲವೇ ಅರ್ಥೈಸುವ ನಡೆಗಳು ಮುನ್ನೆಲೆಗೆ ಬರುತ್ತವೆ. ಇದನ್ನು ಬೇರು ಕಾಂಡ ಮತ್ತು ಚಿಗುರುಗಳ ನಡುವಣ ಸಾವಯವ ಸಂಬಂಧದ ರೂಪಕವನ್ನಾಗಿ ನೋಡಬಹುದು. ಇವುಗಳಿಗೆ ಮಾತೃಕೆಯಾಗಿರುವ ಭೂಮಿ ಇಲ್ಲಿ ಮಹತ್ವವನ್ನು ಪಡೆಯುತ್ತದೆ. ಏಕೆಂದರೆ ವಿಚಾರ ಮತ್ತು ಆಚಾರಗಳು ಕೆಲಸ ಮಾಡುವುದು ಬೀಜ ಮತ್ತು ಮಣ್ಣುಗಳ ನಡುವಿನ ಹದವಾದ ಹೊಂದಾಣಿಕೆ ಎಷ್ಟು ಬಲವಾಗಿರುತ್ತದೆಯೋ ಅದಕ್ಕೆ ಪೂರಕವಾಗಿ ಅದು ಅಷ್ಟೇ ಗಟ್ಟಿಯಾಗಿ ಬೇರೂರುತ್ತದೆ.
ನಾವು ಮಾತ್ನಾಡುವ ಬಹುತೇಕ ಸನ್ನಿವೇಶಗಳಲ್ಲಿ, ವ್ಯಕ್ತಿಗಳ ಮಾತು, ಧೋರಣೆ ಮತ್ತು ವರ್ತನೆಗಳನ್ನು ಕುರಿತು ಟೀಕೆಗಳನ್ನು ಮಾಡುತ್ತೇವೆ ಇಲ್ಲವೇ ಒಂದು ಬಗೆಯ ಹಪಾಹಪಿತನವನ್ನು ತೋರುತ್ತೇವೆ. ನಮ್ಮ ಬದುಕಿನ ಇಡೀ ನುಡಿಗಟ್ಟುಗಳು ಅಂದರೆ ನಮ್ಮ ನಡೆ ನುಡಿಗಳನ್ನು ಬಣ್ಣಿಸುವ ಅಭಿವ್ಯಕ್ತಿಯ ಮಾದರಿಗಳು ಮಾನವೀಯತೆ ಮತ್ತು ಮನುಷ್ಯ ಘನತೆಗೆ ಬಹುದೊಡ್ಡ ಕುತ್ತನ್ನು ತಂದಿವೆ ಎಂದು ಕೊರಗುತ್ತೇವೆ.
ಹಾಗಾಗಿ ನಮ್ಮ ಗತದ ಕೆಲವು ನಿರ್ದಿಷ್ಟ ನಿದರ್ಶನಗಳ ಮೂಲಕ ಈ ಹೊತ್ತಿನ ಆಪತ್ತುಗಳನ್ನು ನಿವಾರಿಸಿಕೊಳ್ಳುವ ಇರಾದೆಯನ್ನು ಹೊಂದುತ್ತೇವೆ. ಕನ್ನಡದ ಸಂದರ್ಭದಲ್ಲಿ ವಚನ ಸಾಹಿತ್ಯ, ದಾಸ ಸಾಹಿತ್ಯ ಹಾಗೂ ಇತ್ಯಾದಿ ನೆಲೆಗಳ ಉಲ್ಲೇಖಗಳ ಮೂಲಕ ವರ್ತಮಾನದ ಓರೆಕೋರೆಗಳನ್ನು ತಿದ್ದುವ ತೀಡುವ ಬಯಕೆಯನ್ನು ವ್ಯಕ್ತಪಡಿಸುತ್ತೇವೆ. ಅತ್ಯಂತ ಸುಲಲಿತವಾಗಿ ನಿರರ್ಗಳವಾಗಿ ವಚನಗಳನ್ನು ದಾಸರ ಪದಗಳನ್ನು ಹಾಗೂ ಗಾದೆ ಮಾತುಗಳನ್ನು ವ್ಯಕ್ತಮಾಡುತ್ತೇವೆ. ಅಂದರೇನಾಯಿತು, ಸದ್ಯದ ಬಿಕ್ಕಟ್ಟುಗಳಿಗೆ ನಮ್ಮ ಗತದಲ್ಲಿ ಪರಿಹಾರಗಳಿವೆ ಎಂದು ನಂಬಲಾಗುತ್ತದೆ.
ಈ ನಂಬಿಕೆಯ ಬೇರುಗಳು ನೆಲೆನಿಂತ ಇದೇ ವಾತಾವರಣದಲ್ಲಿ ನಾವು ಇವತ್ತು ಆರೋಪಿಸುವ ಈ ಸಮೂಹ ವಿರೋಧಿ ಎಂದು ಹೇಳಲಾಗುವ ನಡೆ ನುಡಿಗಳು ಹೇಗೆ ಮೈದಾಳಿದವು ಎಂಬ ಮೂಲಭೂತ ಪ್ರಶ್ನೆಯನ್ನು ನಾವು ಕೇಳುವುದಿಲ್ಲ. ನಮ್ಮ ಸದ್ಯದ ಮಾನವೀಯ ಸಂಬಂಧಗಳ ಫತನಕ್ಕೆ ಕಾರಣವಾಗಿರುವ ಎಲ್ಲ ಬಗೆಯ ನಿರೂಪಣೆಗಳು ಮೈದಾಳುವುದಕ್ಕೆ ಏನೆಲ್ಲ ಪುರಾವೆಗಳನ್ನು ನಾವು ಈಗ ಒದಗಿಸುತ್ತೆವೋ, ಅವುಗಳು ಕೂಡ ನಮ್ಮ ಬೇರುಗಳಲ್ಲಿಯೇ ಅಂತಸ್ಥವಾಗಿರುವ ಅವಗುಣಗಳಾಗಿವೆ. ಈ ಆಯಾಮವನ್ನು ಪರಿಶೀಲಿಸಲು ನಾವು ಕನ್ನಡ ಸಾಹಿತ್ಯದ ಬೇರೆ ಬೇರೆ ಪಠ್ಯಗಳು ಹಾಗೂ ಇತರೆ ನಿರೂಪಣೆಗಳನ್ನು ಆಶ್ರಯಿಸಬೇಕಾಗುತ್ತದೆ.
ಯಾವುದೇ ಗುಣವೊಂದನ್ನು ಬಣ್ಣಿಸುವ ಇಲ್ಲವೇ ವ್ಯಾಖ್ಯಾನಿಸುವ ನಮ್ಮ ತಾತ್ವಿಕ ಚೌಕಟ್ಟುಗಳು ಬಹುತೇಕವಾಗಿ ಸಾಪೇಕ್ಷಿತ ಇಲ್ಲವೇ ಬೈನರಿಯಾಗಿರುತ್ತವೆ. ಈ ಗುಣ ಅವಗುಣಗಳನ್ನು ಬೇರ್ಪಡಿಸುವ ಇರಾದೆಯಿಂದಲೇ ವಚನ, ದಾಸಪದ, ತತ್ವಪದಗಳು ಹಾಗೂ ಗಾದೆ ಮಾತು ಮತ್ತು ಉಕ್ತಿಗಳು ತಲೆಯೆತ್ತಿರುತ್ತವೆ ಎನ್ನುವ ವಾಸ್ತವವನ್ನು ಮರೆತುಬಿಡುತ್ತೇವೆ. ಯಾವುದೇ ಸಾಮಾಜಿಕ ನಡೆ ಹಾಗೂ ಸಾಂಸ್ಕೃತಿಕ ಆಚರಣೆ ಹಲವು ಬಗೆಗಳಲ್ಲಿ ಕಾಲ ಮತ್ತು ದೇಶಗಳಿಗೆ ಅನುಗುಣವಾಗಿ ಬದಲಾಗುತ್ತವೆ.
ಉದಾ.ಗೆ ಮೌಢ್ಯತೆ ಎನ್ನುವ ಪದವನ್ನು ನೆಗೆಟ್ ಮಾಡಲು ವೈಜ್ಞಾನಿಕ ಮನೋಭಾವ ಎಂಬ ಪರಿಕಲ್ಪನೆಯನ್ನು ಬಳಸುತ್ತೇವೆ. ಆದರೆ ಅಚ್ಚರಿಯ ಸಂಗತಿ ಏನೆಂದರೆ, ಯಾವ ವೈಜ್ಞಾನಿಕ ಮನೋಭಾವದಿಂದ ಮೌಢ್ಯತೆಯನ್ನು ನಿರಾಕರಿಸುವ ನಿರ್ಧಾಗಳನ್ನು ಮಾಡುತ್ತೇವೆಯೋ, ಅದರ ಬುಡದಲ್ಲಿಯೇ ಮೌಢ್ಯತೆಯ ಬೀಜಗಳನ್ನು ಹೊಸದಾದ ರೂಪದಲ್ಲಿ ಬಿತ್ತುತ್ತೇವೆ.
ಬಂಡವಾಳಶಾಹಿ ಮತ್ತು ಕಾರ್ಪೊರೇಟ್ ಶಕ್ತಿಗಳು ಪ್ರಾಯೋಜಿಸುವ ಯಾವುದೇ ಜಾಹಿರಾತಿಗೆ ಯಾವ ಬಗೆಯ ವೈಜ್ಞಾನಿಕ ದೃಷ್ಟಿಕೋನಗಳನ್ನು ಲಗತ್ತಿಸಲು ಸಾಧ್ಯ. ಯಾವ ಬಗೆಯ ವೈಚಾರಿಕ ಸ್ಪಷ್ಟೀಕರಣವನ್ನು ನೀಡಲು ಸಾಧ್ಯ. ಅಂದರೆ ಪ್ರಜಾಪ್ರಭುತ್ವ ನೀತಿಗಳ ಮೂಲಕ ವ್ಯಕ್ತಿ ಮತ್ತು ಸಮೂಹಗಳ ಘನತೆಯನ್ನು ಬಲಪಡಿಸುವ ಕೈಂಕರ್ಯದಲ್ಲಿ ತೊಡಗಿರುವಾಗಲೇ, ಬಂಡವಾಳಶಾಹಿ ಪ್ರೇರಿತ ಜಾಹಿರಾತುಗಳು ರಾರಾಜಿಸುತ್ತವೆ.
ಗತದಲ್ಲಿ ಮೈಪಡೆದ ನಡೆ ನುಡಿಗಳ ಕುರಿತ ಉಪದೇಶಗಳು ಯಾವ ಬಗೆಯ ಬಿಕ್ಕಟ್ಟನ್ನು ನಿವಾರಿಸಲು ಇವತ್ತು ಬಳಕೆಯಾಗುತ್ತವೆ. ಹೀಗೆ ಅವುಗಳನ್ನು ಮರುಉಚ್ಚರಿಸುವ ಮೂಲಕ ಯಾವ ಬಗೆಯ ಮನುಷ್ಯ ಮತ್ತು ಸಮೂಹಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆ. ಹಾಗೂ ಈ ನಿರೂಪಣೆಗಳಿಗೆ ನಾವು ಆರೋಪಿಸುವ ಅರ್ಥಗಳು ಎಂತಹವು ಹಾಗೂ ಇವುಗಳ ಮೂಲಕ ಏರ್ಪಡುವ ಸಾಮಾಜಿಕ ಕ್ರಿಯೆಗೂ ಮತ್ತು ಭಾಷಿಕ ಸಂವಹನಕ್ಕೂ ನಡುವೆ ಎಂತಹ ನಂಟಸ್ತಿಕೆ ಉಂಟಾಗುತ್ತದೆ ಅನ್ನುವುದೇ ಈಗಿನ ಸವಾಲು.
ಈ ಮಾತುಗಳ ಮೂಲಕ ಕೇವಲ ಒಂದು ಜಿಜ್ಞಾಸೆಯನ್ನು ಹುಟ್ಟು ಹಾಕುವುದಕ್ಕಾಗಿ ಇಲ್ಲಿ ಮಂಡಿಸುತ್ತಿಲ್ಲ. ಬದಲಾಗಿ ನಮ್ಮ ಬದುಕಿನ ಕ್ರಿಯಾವರ್ತುಲದೊಳಗೆ ಏರ್ಪಡುವ ಬಿಕ್ಕಟ್ಟುಗಳ ಸ್ವರೂಪವನ್ನು ಅರಿಯುವ ದಾರಿಗಳನ್ನು ಕಂಡುಕೊಳ್ಳಬೇಕಿದೆ. ಆ ಮೂಲಕ ಮನುಷ್ಯ ಘನತೆ ಮತ್ತು ಅದನ್ನು ನೆಲೆಯಾಗಿಸಿಕೊಂಡಿರುವ ನಿರೂಪಣೆಗಳ ತಾತ್ಪರ್ಯವನ್ನು ಘನಾರ್ಥದಲ್ಲಿ ಪರಿಭಾವಿಸುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲವಾದರೆ ನಮ್ಮೀ ಇಡೀ ಬದುಕಿನ ತಾತ್ಪರ್ಯಗಳು ಕೇವಲ ಸಂಕುಚಿತ ಅರ್ಥಗಳ ಆಗರವಾಗುತ್ತದೆ.
ಘನತೆಯ ಸ್ವರೂಪ ಇರುವುದೇ ಬದುಕಿನ ವ್ಯವಹಾರಗಳು ಘನವಾದ ಅರ್ಥವನ್ನು ಪಡೆದುಕೊಳ್ಳುವ ಬಗೆಯಲ್ಲಿ. ಸಮಾನತೆ, ಗೌರವ ಮತ್ತು ಮಾತುಗಳ ನಡುವಿನ ಹೊಂದಾಣಿಕೆ ವಿಚಿತ್ರ ಸ್ವರೂಪದಲ್ಲಿರುತ್ತದೆ. ಉದಾ.ಗೆ ಗಂಡು ಹೆಣ್ಣುಗಳ ನಡುವೆ ಸಮಾನತೆಯನ್ನು ಬಯಸುವವರು ಮಾತುಕತೆಯ ವಿವರಗಳನ್ನು ಬಿಡಿಸಿನೋಡಿದರೆ, ಅಸಮಾನತೆ ಕಣ್ಣಿಗೆ ರಾಚುತ್ತದೆ.
ಪರಸ್ಪರವಾಗಿ ಗೌರವಿಸುವ ವಿಧಾನಗಳು ಹೇಗೆ ಕೆಲಸ ಮಾಡುತ್ತವೆ, ಈ ವಿಧಾನದಲ್ಲಿಯೇ ಅಸಮಾನತೆಯನ್ನು ಹೇಗೆ ಸಮ್ಮತಿಸಲಾಗುತ್ತದೆ ಎಂಬಿತ್ಯಾದಿ ನಿಲುವುಗಳನ್ನು ವಿಶ್ಲೇಷಿಸಿದರೆ, ನಡೆ ನುಡಿಗಳ ಆಳದಲ್ಲಿ ಹುದುಗಿರುವ ಕಂದಕಗಳು ನಿಚ್ಚಳವಾಗಿ ಗೋಚರಿಸುತ್ತೇವೆ. ಇಂತಹ ಕಂದಕಗಳನ್ನು ನಿವಾರಿಸುವ ಹೆಬ್ಬಯಕೆಯಿಂದ ಅವತರಿಸಿದ ವಚನ ಸಾಹಿತ್ಯದಲ್ಲಿಯೂ ಈ ಕಂದಕಗಳು ಹಾಗೇ ಮುಂದುವರೆದಿವೆ.
ಜಾತಿ, ಲಿಂಗ, ಧರ್ಮ ಮೊದಲಾದ ಸಾಮಾಜಿಕ ವಿನ್ಯಾಸಗಳನ್ನು ಕುರಿತಾದ ನಿರೂಪಣೆಗಳು ಇವತ್ತು ನಮಗೆ ಆದರ್ಶದ ವಿನ್ಯಾಸಗಳಾಗಿ ಕಾಣಿಸುತ್ತವೆ. ಹಾಗೂ ವಚನ ಸಾಹಿತ್ಯದ ಶರಣ ಪರಿಕಲ್ಪನೆಯನ್ನು ವಿವರಿಸುವುದು ಹೇಗೆ? ಸಾಮಾಜಿಕ-ಸಾಂಸ್ಕೃತಿಕ ನಿರ್ದಿಷ್ಟತೆಗಳನ್ನು ಮನಗಾಣದೇ, ಅವುಗಳನ್ನು ಕೇವಲ ಆದರ್ಶದ ಮಾದರಿಗಳನ್ನಾಗಿ ಬಿಂಬಿಸುವುದೇ, ಸಂಕುಚಿತಾರ್ಥದ ನಿಲುವುಗಳಾಗಿವೆ.
ಈಗಾಗಲೇ ಹೇಳಿದಂತೆ ಯಾವುದು ವಿಶಾಲ ಮತ್ತು ಘನವಾದ ಅರ್ಥವನ್ನು ಪಡೆಯಲಾರದೋ, ಅಂತಹ ಸನ್ನಿವೇಶಗಳಲ್ಲಿ ಮನಷ್ಯ ಅಥವಾ ಸಮೂಹ ಘನತೆಯ ಚಹರೆಗಳು ಗೌಣವಾಗುತ್ತವೆ. ನೋಡಿ ಯಾವ ಪರಂಪರೆಯನ್ನು ನಾವು ಗೌರವಿಸುತ್ತೇವೆಯೋ, ಆ ಪರಂಪರೆಯಲ್ಲಿಯೇ ಅಪಮಾನದ, ಅಸ್ಪೃಶ್ಯತೆ, ಜಾತೀಯತೆ, ಲೈಂಗಿಕತೆಯ ಕುರಿತ ನಿರೂಪಣೆಗಳು ಯಾಕೇ ಮೈದಾಳುತ್ತವೆ? ಒಂದುಪಕ್ಷ, ಮನುಷ್ಯ ಘನತೆಗೆ ಕುತ್ತು ತರುವ ಇಂತಹ ಅಪಚಾರಗಳನ್ನು ನಿವಾರಿಸಲು ರೂಪಿಸಿದ ತಾತ್ವಿಕ-ನೈತಿಕ ನಿರೂಪಣೆಗಳು ಯಾಕೆ ಫಲಿಸಲಿಲ್ಲ? ಅನ್ನುವ ಪ್ರಶ್ನೆಯನ್ನೂ ಇವತ್ತು ಬಲವಾಗಿಯೇ ಕೇಳುವ ಜರೂರಿದೆ.
ಅಂದರೆ ಮನುಷ್ಯ ಘನತೆಯನ್ನು ರೂಪಿಸುವಂತಹದಲ್ಲ ಬದಲಾಗಿ ನಮ್ಮಲ್ಲಿ ಅಂತಸ್ಥವಾಗಿರುವ ಮಾನವೀಯ ಮೌಲ್ಯಗಳನ್ನು ನಿರಂತರಗೊಳಿಸುವ ಬಗೆಗೆ ಯೋಚಿಸಬೇಕಿದೆ. ಅದಕ್ಕಾಗಿಯೇ ಕುವೆಂಪು ಅವರು ಹೇಳಿದಂತೆ ‘ಹುಟ್ಟುತ್ತ ವಿಶ್ವಮಾನವ ಬೆಳೆಯುತ್ತ ಅಲ್ಪ ಮಾನವ’, ‘ಮಾನವ ಜನುಮ ದೊಡ್ಡದು ಹುಚ್ಚಪ್ಪಗಳಿರಾ ಹಾನಿ ಮಾಡಬೇಡಿ’ ಎಂದು ಹೇಳಿದ ದಾಸರ ಮಾತು ಹಾಗೂ ವಚನಕಾರರು ನೆಲೆಗೊಳಿಸಿದ ‘ಅರಿವೇ ಗುರು’ ಎಂಬ ತತ್ವಗಳು ಏನನ್ನು ಉದ್ದೇಶಿಸಿವೆ ಅಂದರೆ ಮನುಷ್ಯ ಘನತೆ ಎಂಬುದು ನಮ್ಮಲ್ಲಿ ಅಂತಸ್ಥವಾಗಿರುವ ವಿದ್ಯಮಾನವೇ ಹೊರತು ಅದು ಹೊರಗಿನ ಒತ್ತಾಯಗಳಿಂದ ಮಾತ್ರ ನೆಲೆಗೊಳ್ಳುವ ಪ್ರಕ್ರಿಯೆಯಲ್ಲ. ಹಾಗಾಗಿ ನಮ್ಮೊಳಗೆ ಅಂತಸ್ಥಗೊಂಡ ಈ (ಇನ್ನರ್ ಡಿಗ್ನಿಟಿ) ಮೌಲ್ಯವನ್ನು ನಿರಂತರವಾಗಿ ಸಜ್ಜುಗೊಳಿಸುವ ಅವಶ್ಯಕತೆ ಇದ್ದೇ ಇರುತ್ತದೆ.
ಮಾನವ ಮೌಲ್ಯವನ್ನು ಕುರಿತ ಈ ಮೂಲಗ್ರಹಿಕೆಗಳ ಮೂಲಕ ಹೊರಹೊಮ್ಮಿದ ಒಂದು ವ್ಯಾಪಕ ನೈತಿಕ ದೃಷ್ಟಿಕೋನವು ಮನುಷ್ಯ ಘನತೆಯ ಮತ್ತಿತರ ಮೂರು ಪ್ರಮುಖ ಪರಿಕಲ್ಪನೆಗಳಾದ ‘ಹಕ್ಕು, ಕರ್ತವ್ಯ ಮತ್ತು ಗೌರವ’ಗಳನ್ನು ವ್ಯಾಖ್ಯಾನಿಸಬೇಕಾಗುತ್ತದೆ. ಆದರೆ, ವಿಶೇಷವಾಗಿ ಭಾರತದ ಸನ್ನಿವೇಶದಲ್ಲಿ ಈ ಹಕ್ಕು, ಕರ್ತವ್ಯ ಮತ್ತು ಗೌರವಗಳನ್ನು ವ್ಯಾಖ್ಯಾನಿಸುವಾಗ ಸಾಕಷ್ಟು ಅಪಚಾರಗಳು ನಡೆದಿವೆ.
ವರ್ಣ ವ್ಯವಸ್ಥೆ ಮತ್ತು ಜಾತಿ ಶ್ರೇಣೀಕರಣಗಳ ಆಧಾರದ ಮೇಲೆ ಕಾಯಕ ಪರಿಕಲ್ಪನೆಯ ಅರ್ಥದ ಕ್ರಿಯೆಗಳು ಏರ್ಪಡುತ್ತವೆ. ಉದಾ.ಗೆ ‘ಕಾಯಕವೇ ಕೈಲಾಸ’ ಎಂಬೀ ಹೇಳಿಕೆಯ ತಾತ್ಪರ್ಯವೇನು? ಕಾಯಕದ ವ್ಯಾಖ್ಯಾನವೇನು? ಯುರೋಪಿನ ಸಂದರ್ಭದಲ್ಲಿ ಹೇಳಿದ ಡಿಗ್ನಿಟಿ ಆಫ್ ಲೇಬರ್ ಪರಿಕಲ್ಪನೆಯನ್ನು ನಾವು ಹೇಗೆ ಪರಿಭಾವಿಸಿಕೊಂಡಿದ್ದೇವೆ? ಏಕೆಂದರೆ ಕಾಯಕ, ಕೆಲಸ ಇಲ್ಲವೇ ಕಸುಬು ಮೊದಲಾದ ಪರಿಭಾಷೆಗಳನ್ನು ವಿವರಿಸುವಲ್ಲಿ ಸಾಮಾಜಿಕ ಅಂತಸ್ತಿನ ಪ್ರಶ್ನೆಗಳು ಮುನ್ನೆಲೆಗೆ ಬರುತ್ತವೆ. ಅಂದರೆ ಕಾಯಕ ಅನ್ನುವುದು ಕೇವಲ ಶ್ರಮದ ಪರಿಕಲ್ಪನೆ ಮಾತ್ರವಾಗದೇ, ಶ್ರಮ ವಿಭಜನೆಯ ತತ್ವವಾಗಿದೆ.
ಕರಕುಶಲ, ವಾಸ್ತುಶಿಲ್ಪ, ಕೃಷಿ, ನಿರ್ಮಾಣ, ಉತ್ಪಾದನೆಯ ಸ್ವರೂಪ ಇತ್ಯಾದಿ ವಲಯಗಳಲ್ಲಿ ನಾವು ಯಾವ ತಾತ್ವಿಕ ಮತ್ತು ನೈತಿಕ ನಿಲುವುಗಳನ್ನು ಆಧರಿಸಿ ಈ ಶ್ರಮ ವಿಭಜನೆಯನ್ನು ಮಾಡುತ್ತೇವೆ. ಅಂದರೆ, ಜಾತಿ, ಧರ್ಮ, ಲಿಂಗಗಳಂತಹ ಸಾಮಾಜಿಕ ರಚನೆಗಳ ಮೂಲಕ ಶ್ರಮ ಮತ್ತು ಕಾಯಕಗಳ ಸಂಬಂಧವನ್ನು ನಿರ್ವಚಿಸುತ್ತೇವೆ. ಈ ನಿರ್ವಚನೆಯಲ್ಲಿ ಬರೀ ವೈಶಿಷ್ಟ್ಯಗಳನ್ನು ಮಾತ್ರ ಪರಿಗಣಿಸದೇ, ಸಾಮಾಜಿಕ ಕಳಂಕಗಳಾಗಿರುವ ಈ ಜಾತಿ, ಧರ್ಮ ಮತ್ತು ಲಿಂಗಗಳನ್ನು ನೆಲೆಯಾಗಿಸುತ್ತೇವೆ.
ಇವುಗಳಿಗೆ ಅಂಟಿದ ಇದೇ ಕಳಂಕವೇ ಈ ಜಾತಿ, ಧರ್ಮ ಮತ್ತು ಲಿಂಗಗಳಿಗೆ ಅನುಗುಣವಾಗಿ ಆಯಾ ಕಾಯಕಗಳಿಗೆ ಆರೋಪಿಸಲಾಗುತ್ತದೆ. ಡಿಗ್ನಿಟಿ ಆಫ್ ಲೇಬರ್ ಇರಬಹುದು ಇಲ್ಲವೇ ಕಾಯಕವೇ ಕೈಲಾಸ ಇರಬಹುದು, ಮನುಷ್ಯರೊಳಗೆ ಅಂತರ್ನಿಹಿತವಾಗಿರುವ ಘನತೆಯನ್ನು ಮರೆಮಾಚಿ, ನಮ್ಮ ಕಾಯಕವನ್ನು ಕಸುಬುಗಳನ್ನಾಗಿ ರೂಪಿಸಲಾಗುತ್ತದೆ. ಕಸುಬುಗಳೆಂದು ಹೇಳಲು ಕಾರಣ ಈ ಪದವನ್ನು ಸಂಕುಚಿತ ನೆಲೆಯ ರೂಪಕವನ್ನಾಗಿಯೂ ಬಳಸಲಾಗುತ್ತದೆ.
ಈ ಇಡೀ ವಿನ್ಯಾಸವನ್ನು ಸಾಮಾಜಿಕ ಅಸಮಾನ ಅಂತಸ್ತುಗಳನ್ನು ಆಧರಿಸಿಕೊಂಡು ರೂಪಿಸಲಾಗುತ್ತದೆ. ಒಟ್ಟಿನಲ್ಲಿ ಈ ಸಾಮಾಜಿಕ ನಕ್ಷೆಯು ಅಸಮಾನತೆಯನ್ನೇ ತನ್ನ ಮೂಲತತ್ವವನ್ನಾಗಿಸಿಕೊಂಡಿದೆ. ಆದ್ದರಿಂದ ವ್ಯಕ್ತಿಗಳ ಘನತೆ ಅವರ ಅಸ್ತಿತ್ವದಿಂದ ಏರ್ಪಡದೇ, ಕೇವಲ ಸಾಮಾಜಿಕ ಅಸಮಾನ ನೀತಿಯಿಂದ ಉಂಟಾಗುತ್ತವೆ. ಸಹಜವಾಗಿ ನಮ್ಮ ಸಂವಹನ ಕ್ರಿಯೆ, ಮಾತುಕತೆಗಳ ವರಸೆ, ವರ್ತನೆ ಹಾಗೂ ನಾವು ಪರಸ್ಪರ ವ್ಯವಹರಿಸುವಾಗ ಈ ಅಸಮಾನ (ಸಾಮಾಜಿಕ) ವಿನ್ಯಾಸಗಳನ್ನೇ ಪ್ರಧಾನ ತತ್ವಗಳನ್ನಾಗಿಸಿಕೊಂಡು, ನಮ್ಮ ಭಾಷಿಕ ಅರ್ಥ ನಿರ್ವಚನೆಗಳನ್ನು ರೂಪಿಸುತ್ತೇವೆ ಇಲ್ಲವೇ ಅವುಗಳೇ ಘಟಿಸುತ್ತವೆ.
ಪುರುಷಪ್ರಧಾನ ಇಲ್ಲವೇ ಪಿತೃ ಪ್ರಧಾನ ಎನ್ನುವುದು ಸಮಾಜದ ಮೇಲ್ವರ್ಗಗಳ ಪ್ರಾಬಲ್ಯವೇ ಆಗಿರುತ್ತದೆ. ಹಾಗಾಗಿ ಶ್ರಮದ ಮೌಲ್ಯವನ್ನು ನಿರ್ಧರಿಸುವಲ್ಲಿ ಸಾಮಾಜಿಕ ತರತಮ ನೀತಿಗಳು ಬಹುಮುಖ್ಯ ಪರಿಕರಗಳು ಆಗುತ್ತವೆ. ಯಾವ ಕಸುಬಿಗೆ ಯಾವ ಸ್ಥಾನ, ಯಾವ ಜಾತಿಗೆ ಯಾವ ಹಕ್ಕು ಹಾಗೂ ಯಾವ ಸಮೂಹಕ್ಕೆ ಯಾವ ಬಗೆಯ ಗೌರವ ಎಂಬುದನ್ನೆಲ್ಲ ನಿರ್ವಚಿಸಿದ್ದು ಕೇವಲ ವರ್ಣ ವ್ಯವಸ್ಥೆಯ ಪ್ರಭಾವ ಮತ್ತು ಪರಿಣಾಮದಿಂದ.
ಭಾಷೆಯು ನಿರ್ವಾತದಲ್ಲಿ ವ್ಯವಹರಿಸುವುದಿಲ್ಲ ಅದು ಕೂಡ ಇಂತಹ ತರತಮದಿಂದ ಕೂಡಿದ ಸನ್ನಿವೇಶದಲ್ಲಿ ತನ್ನ ಅರ್ಥಗಳನ್ನು ಪ್ರಕಟಿಸುವುದರಿಂದ, ಆಯಾ ಸಾಮಾಜಿಕ ಮನ್ನೆಣೆಗೆ ಅನುಗುಣವಾಗಿ ಅರ್ಥಗಳು ಪ್ರಾಪ್ತವಾಗುತ್ತವೆ. ಪ್ರಜಾಸತ್ತಾತ್ಮಕ ಸವಲತ್ತುಗಳು ಯಾರಿಗೆ? ಹೇಗೆ? ಎಲ್ಲಿ? ಯಾವಾಗ? ಸಿಗುತ್ತವೆ ಎಂಬ ಪ್ರಶ್ನೆಯನ್ನು ಕೇಳಿದಾಗ, ನಮ್ಮ ಹಕ್ಕು, ಕರ್ತವ್ಯ ಮತ್ತು ಗೌರವಗಳೂ ಹಾಗೇ ಅವರವರ ಯೋಗ್ಯತೆ, ಅಂತಸ್ತುಗಳಿಗೆ ಪೂರಕವಾಗಿ ಲಭಿಸುತ್ತವೆ.
ಮತ್ತೇ ಇಲ್ಲಿ ಈ ಯೋಗ್ಯತೆ ಮತ್ತು ಅಂತಸ್ತು ಅನ್ನುವುದು ನಿರ್ಧಾರವಾಗುವುದು ಅದೇ ಸಾಮಾಜಿಕತೆಯ ನಿಲುವುಗಳಿಂದ. ಆದ್ದರಿಂದ ವಿಭಿನ್ನ ಸಮೂಹಗಳ ನಡುವೇ ಅವರವರ ಕಸುಬುಗಳಿಗೆ ಹೊರತಾಗಿ ಕೇವಲ ಮನುಷ್ಯನ ಅಸ್ತಿತ್ವದ ಆಧಾರದ ಮೇಲೆ ಸಾಮಾಜಿಕ ಐಕ್ಯತೆ ಮತ್ತು ಸಾಂಗತ್ಯ ಏರ್ಪಡುವುದಿಲ್ಲ. ಹಕ್ಕು, ಕಾಯಕ (ಕರ್ತವ್ಯ) ಮತ್ತು ಗೌರವಗಳ ನಡುವಣ ಸಂಬಂಧವು ಸಾವಯವ ಸಂಬಂಧವಾಗಬೇಕು. ಅಂದರೆ ಬೇರು ಕಾಂಡ ಮತ್ತು ಚಿಗುರುಗಳ ನಡುವಿನ ಸಾವಯವ ಸಂಬಂಧವೂ ಇಲ್ಲಿ ಏರ್ಪಡಬೇಕು. ಆವಾಗ ಮಾತ್ರ ಸಾಮಾಜಿಕ-ಸಾಂಸ್ಕೃತಿಕ ಸಾಮರಸ್ಯ ಸಾಧ್ಯ.
ಇಂತಹ ಸನ್ನಿವೇಶದಲ್ಲಿ ಪ್ರಕಟವಾಗುವ ಅರ್ಥಗಳು ಸಹಜವಾಗಿ ಸಾಮಾಜಿಕ ಸಾಂಗತ್ಯದ ರೂಪಕವಾಗುತ್ತವೆ. ಇಲ್ಲವಾದಲ್ಲಿ ವಾಕ್ ಮತ್ತು ಅರ್ಥಗಳ ಅಂತರ ಇನ್ನಷ್ಟು ಬಿಗಡಾಯಿಸುತ್ತದೆ. ಕಾಳಿದಾಸ ಇದನ್ನು ‘ವಾಗಾರ್ಥ’ ಎಂಬ ಐಕ್ಯಪದವನ್ನು ಬಳಸಿದ್ದರೂ ವಾಕ್ (ರೂಪು) ಹೆಣ್ಣಾಗಿಯೂ ಮತ್ತು ಅರ್ಥ (ನಿರ್ಧಾರ/ನಿರ್ಣಯ) ಗಂಡಾಗಿಯೂ ಇಲ್ಲಿ ಧ್ವನಿಸುತ್ತದೆ. ಅದಕ್ಕಾಗಿಯೇ ಈ ವಾಗಾರ್ಥವನ್ನು ಪಾರ್ವತಿ ಮತ್ತು ಪರಮೇಶ್ವರರ ಒಗ್ಗಟ್ಟಿನ ರೂಪಕವನ್ನಾಗಿ ಕೊಟ್ಟಿರುವುದು. ಭಾಷಿಕ ರೂಪಗಳಿಗೆ ಸ್ವಾಯತ್ತ ಅಸ್ತಿತ್ವ ಇರುವುದಿಲ್ಲ, ಅವುಗಳ ಅಸ್ತಿತ್ವ ಅರ್ಥ ನಿರ್ಣಯದಲ್ಲಿರುತ್ತದೆ.
ಈ ಅರ್ಥ ನಿರ್ಣಯವನ್ನು ಮಾಡುವುದು ಪುರುಷಪ್ರಧಾನ ವ್ಯವಸ್ಥೆಯಲ್ಲಿಯೇ ನಡೆಯುತ್ತದೆ. ಭಾಷಿಕ/ವಾಕ್ (ಪಾರ್ವತಿ) ರೂಪಗಳಿಗೆ ಅರ್ಥ (ಪರಮೇಶ್ವರ)ಗಳು ಏರ್ಪಡುವುದೇ ಗಂಡು ಕೇಂದ್ರಿತ ಚಿಂತನೆಯಾಗಿದೆ. ಆದ್ದರಿಂದ ಹಕ್ಕು, ಕರ್ತವ್ಯ ಮತ್ತು ಗೌರಗಳು ಪರಸ್ಪರವಾಗಿ ವ್ಯವಹರಿಸದೇ ಸಾಮಾಜಿಕ ಅಧಿಕಾರ ಸಂಬಂಧಗಳ ಮೂಲಕ ಘಟಿಸುತ್ತವೆ. ಇವುಗಳ ನಡುವೇ ಯಾವುದೇ ಸಾವಯವ ಸಂಬಂಧವನ್ನು ನೋಡಲು ಸಾಧ್ಯವಿಲ್ಲ. ಬೇರು, ಕಾಂಡ ಮತ್ತು ಚಿಗುರುಗಳು ಇಲ್ಲಿ ವಿಘಟನೆಯ ರೂಪಕಗಳಾಗಿ ನೆಲೆನಿಂತಿವೆ.
ದಿಟ ಮರದ ಯಾವುದೇ ಒಂದು ಭಾಗಕ್ಕೆ ಪೆಟ್ಟು ಬಿದ್ದರೆ ಇಡೀ ಮರದ ಅಸ್ತಿತ್ವವನ್ನು ನಾಶಪಡಿಸಲಾರದು. ಆದರೆ ಸಾಂಗತ್ಯ ಮತ್ತು ಐಕ್ಯತೆಯ ಪ್ರಶ್ನೆ ಇರುವುದು ಕೇವಲ ಯಾವುದೇ ಒಂದು ಅಂಗದಲ್ಲಿ ಅಲ್ಲ ಅದು ಅಖಂಡತೆಯ ರೂಪಕವಾಗಿದೆ. ಸಮಾಜದ ಅಖಂಡತೆಯನ್ನು ಕಾಪಾಡುವುದೆಂದರೆ, ಅರ್ಥಗಳ ಅಖಂಡತೆಯನ್ನೂ ಕಾಪಾಡುವುದು ಆಗಿರುತ್ತದೆ. ಮನುಷ್ಯ ಘನತೆಯನ್ನು ನಿರೂಪಿಸುವ ಇಲ್ಲವೇ ನಿರ್ವಚಿಸುವ ವಿಧಾನಗಳು ಸಾಮಾಜಿಕ ಅಖಂಡತ್ವದಿಂದ ಘಟಿಸುತ್ತವೆ.
ಇದೇನೂ ಸಾಮಾಜಿಕ ಸಮೀಕರಣದ ಮಾದರಿಯಲ್ಲ ಬದಲಾಗಿ ನಮ್ಮ ನಮ್ಮ ಅಸ್ಮಿತೆ ಮತ್ತು ಅಸ್ತಿತ್ವಗಳ ನಡುವಣ ಸಾಮರಸ್ಯದ ಬಗೆಯಾಗಿದೆ. ಈ ಸಾಮರಸ್ಯವು ಹಕ್ಕು, ಕರ್ತವ್ಯ ಮತ್ತು ಗೌರವಗಳ ನಡುವಿನ ಡಿಸ್ಟಿಂಗ್ಸೆನ್ ಆಗಿರುತ್ತದೆ. ಇದು ಮರದ ಬೇರುಗಳನ್ನು ಬಲಪಡಿಸುವ ಬಗೆಯಾಗಿದೆ. ಈ ಮೂಲಕ ಮನುಷ್ಯ ಘನತೆಯ ಘನವಾದ/ ಇಡಿಯಾದ ಅರ್ಥಗಳು ಮುನ್ನೆಲೆಗೆ ಬರುತ್ತವೆ. ಹಾಗಾಗಿ ಡಿಸ್ಟಿಂಗ್ಸೆನ್ ಎನ್ನುವುದು ಡೈಕಾಟಮಿಯಲ್ಲ ಬದಲಾಗಿ ಅವುಗಳಿಗೆ ಆರೋಪಿಸಲಾಗುವ ಅರ್ಥಗಳ ನಡುವೇ ಅಸಮಾನತೆ ಇರಕೂಡದು ಅಷ್ಟೇ.
ಅಂದರೆ ಸಾಮಾಜಿಕ ಸಾಂಸ್ಕೃತಿಕ ಸಮತೋಲವನ್ನು ಕಾಪಾಡುವ ಬಗೆಯಲ್ಲಿ ವ್ಯಾಖ್ಯಾನಗಳು, ಅರ್ಥ ಸಾಧ್ಯತೆಗಳು ಏರ್ಪಡಬೇಕು. ಹೌದು ಈ ಯಾವ ಪರಿಕಲ್ಪನೆಯೂ ಕೂಡ ಆತ್ಯಂತಿಕವಲ್ಲ ಆದರೆ ಅವುಗಳಿಗೆ ದೊರೆಯಬಹುದಾದ ಸಾಮಾಜಿಕ-ಸಾಂಸ್ಕೃತಿಕ ಮಾನ್ಯತೆಯಲ್ಲಿ ಸಮತೋಲನ ಇರಬೇಕೆಂಬ ಒತ್ತಾಯ ಮಾತ್ರ. ಈ ನಡೆ ಕೇವಲ ರಾಜಕೀಯ ಸರಿತನದ ವಿನ್ಯಾಸವಲ್ಲ. ಇದು ವಾಸ್ತವದಲ್ಲಿ ಸಾಂಸ್ಕೃತಿಕ ಸರಿತನದ ನಿಲುವೂ ಆಗಿದೆ. ಮನುಷ್ಯ ಘನತೆ ಎನ್ನುವುದು ಸಾಂಸ್ಕೃತಿಕ ಸಮತೋಲನ ಮತ್ತು ಸರಿತನದ ವಿದ್ಯಮಾನವಾಗಿದೆ. ಹೊರತು ಅದು ರಾಜಕೀಯ ಮೇಲಾಟದ ವಿನ್ಯಾಸವನ್ನಾಗಿ ಮಾತ್ರ ನೋಡ ಕೂಡದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತತ್ವಪದಗಳು ಸಾರ್ವಕಾಲಿಕ ಬೆಳಕನಿಧಿ: ಕಾ.ತ.ಚಿಕ್ಕಣ್ಣ
ಸುದ್ದಿದಿನ,ಬೆಂಗಳೂರು:ತತ್ವಪದಗಳು ಎಲ್ಲ ಕಾಲಕ್ಕೂ ಸಲ್ಲುವಂತಹ ಬೆಳಕನ್ನು ನೀಡುವ ಸೃಜನಶೀಲ ಸಂರಚನೆಗಳಾಗಿವೆ ಎಂದು ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಶ್ರೀ ಕಾ.ತ.ಚಿಕ್ಕಣ್ಣ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕೆ.ನಾರಾಯಣಪುರದ ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಹಾಗೂ ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ: ಸಾಂಸ್ಕೃತಿಕ ಅನುಸಂಧಾನ’ ವಿಷಯ ಕುರಿತಾದ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತತ್ವಪದ ಸಾಹಿತ್ಯ ರೂಪುಗೊಂಡಿದ್ದ ಕಾಲವನ್ನು ಕತ್ತಲಯುಗ ಎಂದು ಕರೆದು ವಿಸ್ಮೃತಿಗೆ ತಳ್ಳಲಾಗಿತ್ತು. ಆದರೆ ಆ ಕತ್ತಲೆಯುಗದಲ್ಲಿಯೇ ಜಗತ್ತಿಗೆ ಮಹೋನ್ನತ ಬೆಳಕು ನೀಡುವ ನುಡಿರತ್ನಗಳು ರಚನೆಗೊಂಡಿದ್ದವು. ತತ್ವಪದಕಾರರು ಪರಂಪರೆಯೊಂದಿಗೆ ಸಂವಾದ ನಡೆಸುತ್ತಾ ವರ್ತಮಾನಕ್ಕೆ ಸೂಕ್ತವಾಗಿ ಅನ್ವಯವಾಗುವ ಹಾಗೂ ಭವಿಷ್ಯಕ್ಕೆ ಬೇಕಾದ ಜಾಗೃತಿಯನ್ನು ನೀಡುವ ಮೂಲಕ ಕನ್ನಡ ಸಂಸ್ಕೃತಿಯಲ್ಲಿ ತಮ್ಮದೇ ಆದ ಮೌಲ್ಯಯುತ ಸ್ಥಾನವನ್ನು ಪಡೆದುಕೊಂಡಿವೆ. ಸಮಾಜದಲ್ಲಿರುವ ಜಾತಿಭೇದ, ಲಿಂಗಭೇದ, ವರ್ಣಭೇದ ಮೊದಲಾದ ವಿಷಕಾರಿ ಮನಸ್ಥಿತಿಗೆ ತತ್ವಪದಕಾರರು ತಮ್ಮ ನುಡಿ-ನಡೆಗಳ ಮೂಲಕ ಚಿಕಿತ್ಸೆ ನೀಡುವ ಮೂಲಕ ಬದುಕಿನ ಸತ್ಯ ಮತ್ತು ಸಾರ್ಥಕತೆಯನ್ನು ಸಾಧಿಸಿತೋರಿದ್ದಾರೆ ಎಂದು ತಿಳಿಸಿದರು.
ವಿಶ್ವಾತ್ಮಕವಾದ ಸಂವೇದನೆಯ ತತ್ವಪದ ಸಾಹಿತ್ಯ
ವಿಚಾರಸಂಕಿರಣವನ್ನು ಉದ್ಘಾಟನೆ ಮಾಡಿದ ಕ್ರಿಸ್ತು ಜಯಂತಿ ವಿವಿಯ ಸಂಸೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಫಾ.ಡಾ.ಮರಿಯಾಲಾಲ್ ಜೋಸೆಫ್ ಅವರು, ಕನ್ನಡದ ತತ್ವಪದಗಳು ಜನಸಾಮಾನ್ಯರ ವೇದಗಳಾಗಿವೆ. ಕನ್ನಡ ಸಾಹಿತ್ಯಕ್ಕೆ ಸಂಗೀತಾತ್ಮಕ ಶಾಸ್ತ್ರೀಯ ಸಂರಚನೆಯ ಜೊತೆಗೆ ವಿಶ್ವಾತ್ಮಕವಾದ ಸಂವೇದನೆಯ ಮೂಲಕ ಮಹತ್ತರವಾದ ಕೊಡುಗೆ ನೀಡಿದ್ದು ತತ್ವಪದ ಸಾಹಿತ್ಯ.
ಮಧ್ಯಯುಗೀನ ಕಾಲದ ಭಕ್ತಿಚಳವಳಿಯ ಭಾಗವಾಗಿ ಮೂಡಿಬಂದ ವಚನ ಸಾಹಿತ್ಯ ಹಾಗೂ ಕೀರ್ತನ ಸಾಹಿತ್ಯಗಳು ಕರ್ನಾಟಕದಲ್ಲಿ ಮೂಡಿಸಿದ ಸಾಂಸ್ಕೃತಿಕ ಚೈತನ್ಯಶೀಲತೆಯನ್ನು ನಂತರದಲ್ಲಿ ಮುಂದುವರೆಸುವ ಮೂಲಕ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದದ್ದು ತತ್ವಪದ ಸಾಹಿತ್ಯವಾಗಿದೆ. ಇಂದಿನ ಆವೇಗದ ಆಧುನಿಕ ಜಗತ್ತಿಗೆ ತತ್ವಪದಕಾರರು ನೀಡಿದ ಅರಿವಿನ ಬೆಳಕು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ನಿಜತ್ವ ಬೆಳಗುವ ದಾರಿದೀಪ ತತ್ವಪದಗಳು-ಪದ್ಮಾಲಯ ನಾಗರಾಜ್: ಪ್ರಧಾನಗೋಷ್ಠಿಯ ಅಧ್ಯಕ್ಷತೆ ವಹಿಸಿ ತತ್ವಪದಗಳ ಸಾಂಸ್ಕೃತಿಕ ಮಹತ್ವ ಕುರಿತು ಮಾತನಾಡಿದ ಅಚಲ ಸಾಧಕರಾದ ಪದ್ಮಾಲಯ ನಾಗರಾಜ್ ಅವರು, ಜಗತ್ತಿನಾದ್ಯಂತ ಇಂದು ನಡೆಯುತ್ತಿರುವ ಅಧಿಕಾರ ಹಾಗೂ ವ್ಯಾಪಾರದಾಹೀ ರಾಜಕೀಯ ಲಂಪಟ, ಆರ್ಥಿಕ ಲಂಪಟ ಹಾಗೂ ಸಾಮಾಜಿಕ ಅಸಮಾನ ಸೃಷ್ಟಿಗಳು ಮಾನವಲೋಕವನ್ನು ಭ್ರಮೆ ಮತ್ತು ಅಸತ್ಯದತ್ತ ಕೊಂಡೊಯ್ಯುತ್ತಿವೆ. ಅವೈಜ್ಞಾನಿಕ ಕಲ್ಪನೆಗಳನ್ನು ಹುಟ್ಟುಹಾಕುತ್ತಾ ವಾಸ್ತವಿಕತೆಯಿಂದ ದೂರಮಾಡುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರಂತರ ಆಗುವಿಕೆಯ ಅನಂತವಿಶ್ವದಲ್ಲಿ ನಾವೊಂದು ಬಿಂದುವೆಂಬ ಸತ್ಯದರ್ಶನ ಮಾಡಿಸುವ ಮೂಲಕ ನಿಜತ್ವವನ್ನು ಬೆಳಗುವ ದಾರದೀಪವಾಗಿವೆ ತತ್ವಪದಗಳು ಎಂದು ತಿಳಿಸಿದರು.
‘ತತ್ವಪದಕಾರ್ತಿಯರ ಲೋಕದೃಷ್ಠಿ’ಯನ್ನು ಕುರಿತು ವಿಚಾರಮಂಡನೆ ಮಾಡಿದ ಡಾ.ಶೋಭಾರಾಣಿ ಎನ್. ಅವರು, ‘ತತ್ವಪದಕಾರ್ತಿಯರು ಸಂಸಾರದ ಸಹಯಾನದೊಂದಿಗೇ ಅಧ್ಯಾತ್ಮಿಕ ಸಾಧನೆಯನ್ನು ಮಾಡಬಹುದೆಂದು ಸಾಧಿಸಿತೋರಿದ್ದಾರೆ. ನಿರ್ಭೀತ ನುಡಿಕಾರರು ತತ್ವಪದಕಾರ್ತಿಯರು. ಮಹಿಳಾ ತತ್ವಪದಕಾರರ ಇನ್ನೂ ಎಷ್ಟೋ ತತ್ವಪದಗಳು ಸಂಗ್ರಹವಾಗಬೇಕಿದೆ’ ಎಂದು ಅಭಿಪ್ರಯಪಟ್ಟರು.
‘ಕನ್ನಡ ತತ್ವಪದಗಳು ಮತ್ತು ಬಹುತ್ವ ಭಾರತ’ ಕುರಿತು ಮಾತನಾಡಿದ ರವಿ ಕಂಬಳಿ ಅವರು, ಬಹುಸಂಸ್ಕೃತಿಗಳಿರುವ ಭಾರತದಲ್ಲಿ ಏಕರೂಪೀತನದ ಯಾಜಮಾನ್ಯ ಹೇರುವ ದೌರ್ಜನ್ಯ ಹಾಗೂ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ ಕನ್ನಡ ತತ್ವಪದಕಾರರು ಬಹುತ್ವವನ್ನು ತಮ್ಮ ಸಾಹಿತ್ಯದ ಆಶಯ ಹಾಗೂ ಬದುಕಿನ ಆಚರಣೆಯನ್ನಾಗಿ ಮಾಡಿಕೊಂಡರು. ಮೌಢ್ಯರಹಿತವಾದ ಸಮಸಮಾಜ ಕಲ್ಪನೆ ಅವರದಾಗಿತ್ತು. ತಮಗಿಂತಲೂ ಹಿಂದೆ ಹಲವು ಬಗೆಯ ಬಹುತ್ವದ ಮಾದರಿಗಳನ್ನು ಪ್ರತಿಪಾದಿಸಿದ್ದ ವಚನಕಾರರು ಇವರಿಗೆ ಆದರ್ಶವಾಗಿದ್ದರು ಎಂದು ತಿಳಿಸಿದರು.
ವಿಚಾರಸಂಕಿರಣದ ಭಾಗವಾಗಿ ಹೊರತರಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ
ಸಾಂಸ್ಕೃತಿಕ ಅನುಸಂಧಾನ-ಸಂಪುಟ 1 ಮತ್ತು 2’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಪ್ರಸಿದ್ಧ ಗಾಯಕರಾದ ಶ್ರೀ ಖಾಸೀಂ ಮಲ್ಲಿಗೆ ಮಡುವು ತತ್ವಪದ ಗಾಯನವನ್ನು ಪ್ರಸ್ತುತಪಡಿಸಿದರು. ಪರ್ಯಾಯಗೋಷ್ಠಿಗಳಲ್ಲಿ 6೦ಕ್ಕೂ ಹೆಚ್ಚು ಸಂಶೋಧಕರು ಪ್ರಬಂಧ ಮಂಡನೆ ಮಾಡಿದರು.
ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ಡೀನರಾದ ಡಾ.ಗೋಪಕುಮಾರ್ ಎ.ವಿ. ಅವರು ಮುಖ್ಯ ಅತಿಥಿಯಾಗಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಚಾರಸಂಕಿರಣದ ಸಂಯೋಜಕರಾದ ಡಾ.ಕಿರಣಕುಮಾರ್ ಹೆಚ್.ಜಿ ಅವರು ವಂದಿಸಿದರು.
ಕನ್ನಡ ಪ್ರಾಧ್ಯಾಪಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ನಿರೂಪಿಸಿದರು. ಕನ್ನಡ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್., ಡಾ.ಸೈಯದ್ ಮುಯಿನ್, ಡಾ.ರವಿಶಂಕರ್ ಎ.ಕೆ., ತತ್ವಪದಕಾರರ ಅಧ್ಯಯನ ಕೇಂದ್ರದ ಸಿಬ್ಬಂದಿವರ್ಗದವರಾದ ರಜತಾ ಶೆಟ್ಟಿ ಹಾಗೂ ಸುಪ್ರಿಯಾ ಅವರು ಉಪಸ್ಥಿತರಿದ್ದರು. 200ಕ್ಕೂ ಹೆಚ್ಚು ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಭೀಮಾ ಕೋರೆಗಾಂವ ; ಮಹರ್ ಸೈನಿಕರ ವೀರಗಾಥೆ
~ ಡಾ. ಸುಜಾತಾ ಚಲವಾದಿ
ಭಾರತದ ಇತಿಹಾಸದಲ್ಲಿ ಅನೇಕ ಕ್ರೂರ ವ್ಯಂಗ್ಯಗಳಿವೆ. ಅವುಗಳಲ್ಲಿ ಪೇಶ್ವಾಶಾಹಿ ಆಡಳಿತವು ಒಂದು. ಅವರ ಆಡಳಿತ ಸಂದರ್ಭದಲ್ಲಿ ಅಸ್ಪೃಶ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿಯಿತ್ತು. ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಕಾಲವದು.
ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪೃಶ್ಯರದ್ದಾಗಿತ್ತು. ಕಿತ್ತುತಿನ್ನುವ ಬಡತನ, ಹಸಿವು, ದಾರಿದ್ರö್ಯ, ಅಶಿಕ್ಷಿತರಾದ ಅಸ್ಪಶ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವಾ ಆಡಳಿತವು ಶೂದ್ರರ, ನಿಮ್ನರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದರು.
ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು, ಮಾಂಗರು, ಚಮ್ಮಾರರು ಮತ್ತು ಮಹಿಳೆಯರು ತತ್ತರಿಸಿ ಹೋಗಿದ್ದರು. ಮಹಾರಾಷ್ಟçದ ಪೇಶ್ವಾಶಾಹಿ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳವಳಿಯನ್ನು ಬರಹದ ರೂಪದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ಮುಂದೆ ಇರಿಸಿದ್ದಾರೆ.
1ನೇ ಜನವರಿ 1818ರಲ್ಲಿ ಅಂದರೆ ಇಂದಿಗೆ 207 ವರ್ಷಗಳ ಹಿಂದೆ 28,000 ಸಾವಿರ ಸಂಖ್ಯೆಯ ಪೇಶ್ವಾಸೈನ್ಯದ ಎದುರು ಐದುನೂರು ಮಹಾರ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ ಕೋರೆಗಾಂವ್ ಯುದ್ಧ ‘ನ್ಯಾಯದ ಯುದ್ಧ’, ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತವಾಗಿ ಪರಿಣಮಿಸಿದೆ.
ಈ ದಿನವನ್ನು ಯಾವ ಮಹಾರರೂ ಮರೆಯುವ ಹಾಗಿಲ್ಲ. ಬಾಬಾಸಾಹೇಬರು ಈ ದಿನದ ಸ್ಮರಣೆಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಪ್ರತೀ ವರ್ಷ ಜನವರಿ 1 ರಂದು ತಪ್ಪದೇ ಹೋಗಿ ಬರುತ್ತಿದ್ದರು. ಜಾತಿಪದ್ಧತಿಯೇ ಪ್ರಧಾನವಾದ ಕಾಲದಲ್ಲಿ ಅಸ್ಪಶ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ಏರುಮುಖದಲ್ಲಿದ್ದ ಕಾಲ.
ಮನುಸ್ಮೃತಿಯನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪೃ್ಪಶ್ಯರನ್ನು ಕಂಡರೆ ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪೃಶ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು, ಅಸ್ಪೃಶ್ಯ ರಸ್ತೆಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಊರ ಪ್ರವೇಶಕ್ಕೆ ಸಮಯ ನಿಗದಿ ಮಾಡಿದ್ದರು.
ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ಅಸ್ಪೃಶ್ಯ ವ್ಯಕ್ತಿ ಊರಲ್ಲಿ ಬರುವಂತಿರಲಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ಮಾತ್ರ ಊರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೀದಿಯಲ್ಲಿ ಹೋಗಬೇಕಾದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು, ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗುಳಿಕೊಳ್ಳಬೇಕು. ಕಾರಣ ರಸ್ತೆಯಲ್ಲಿ ಅಸ್ಪೃಶ್ಯರು ಉಗುಳಿದರೆ ಅವನ ಹೇಸಿಗೆಯನ್ನು ಸವರ್ಣೀಯರು ತುಳಿಯಬಾರದು.
ತುಳಿದರೆ ಮೈಲಿಗೆಯಾಗುತ್ತಿತ್ತು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ಕಾಲಲ್ಲಿಯೇ ಉಳಿಯುವ ಹಾಗೇ ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಊರಲ್ಲಿ ಬರಬೇಕು. ನಡೆದುಕೊಂಡು ಹೋಗುವಾಗ ಹೆಜ್ಜೆ ಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಮುಳ್ಳಿನ ಪೊರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಅವರದಾಗಿತ್ತು. ಹಾಗೇ ಅಸ್ಪೃಶ್ಯನೊಬ್ಬ ಬರುವುದನ್ನು ‘ಸಂಭೋಳಿ ಸಂಭೋಳಿ ಮಾಯ್ ಬಾಪ್ ಹೊಲೆಯ ಬರುತ್ತಿದ್ದೇನೆ’ ಅಂತಾ ಕೂಗಿ ಹೇಳಬೇಕು. ಇಲ್ಲ, ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕಿಸಿಕೊಂಡು ಸದ್ದು ಮಾಡುತ್ತ ಹೋಗಬೇಕು.
ಇದಲ್ಲದೆ ಅಸ್ಪೃಶ್ಯ ಊರ ಪ್ರವೇಶ ಮಾಡಿದಾಗ ಯಾರಾದರೂ ಎದುರು ಬಂದರೆ ಸುಡುವ ಬಿಸಿಲಲ್ಲಿ ಓಡಿ ಹೋಗಿ ಭೂಮಿಯನ್ನು ಅಪ್ಪಿಕೊಳ್ಳಬೇಕು. ಸವರ್ಣೀಯರಿಗೆ ಅವನ ನೆರಳೂ ಸ್ಪರ್ಶ ಮಾಡುವಂಗಿರಲಿಲ್ಲ. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪಶ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಗಲರ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವೆಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವಗಳು ಮತ್ತು ಸವರ್ಣೀಯರು ಮಹಾರ್ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು.
1758 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರನ್ನು ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟಿದ್ದರ ಪರಿಣಾಮ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು-ಬಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು, ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.
ಎರಡನೆಯ ಬಾಜೀರಾವ್ ಪೇಶ್ವೆಯ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ 31 ನೇ ಡಿಸೆಂಬರ್ 1817 ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಡನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೆಗಳ ಮೇಲೆ ದಾಳಿ ಮಾಡಲು ಸಿದ್ಧಗೊಂಡಿತು. ಇದನ್ನು ತಿಳಿದ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕ ಮಾರುವೇಷದಲ್ಲಿ ಪೇಶ್ವೆಯನ್ನು ಕಾಣುತ್ತಾನೆ. ಆಗ ಪೇಶ್ವೆ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕನನ್ನು ಒಳಗೆ ಬಿಟ್ಟವನನ್ನು ಕೊಲ್ಲಿಸುತ್ತಾನೆ. ಇಂಗ್ಲಿಷರು ನಿಮ್ಮ ಮೇಲೆ ಯುದ್ಧ ಮಾಡುವರಿದ್ದಾರೆ, ನೀವು ನಮ್ಮ ಹಕ್ಕುಗಳನ್ನು ನಮಗೆ ನೀಡುವುದಾದರೆ ನಿಮ್ಮ ಪರವಾಗಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾನೆ. “ನಿಮ್ಮ ಹಕ್ಕುಗಳು ಯಾವವು? ನೀನು ಇನ್ನೊಂದು ಘಳಿಗೆ ಇಲ್ಲಿ ನಿಂತರೆ ನಿನ್ನ ಶಿರಚ್ಛೇದನ ಮಾಡುತ್ತೇನೆ” ಎಂದು ಗದರುತ್ತಾನೆ. ಸಿದ್ಧನಾಕ ಮರಳಿ ಬಂದು ಅಲ್ಲಿ ನಡೆದ ಎಲ್ಲ ವಿವರ ಸಂಗಾತಿಗಳಿಗೆ ನೀಡುತ್ತಾನೆ. ಅಂತಿಮವಾಗಿ ಇಂಗ್ಲಿಷರ ಪರವಾಗಿ ಮಹಾರ್ ಬೆಟಾಲಿಯನ್ ಹೋರಾಡಲು ಸಿದ್ಧವಾಗುತ್ತದೆ. ಪೇಶ್ವೆಗಳ ಸೈನ್ಯ ಕೋರೆಗಾಂವ್ ಪ್ರದೇಶದ ಭೀಮಾನದಿಯ ಬಲದಂಡೆಯ ಮೇಲೆ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ರೆಜಿಮೆಂಟ್ ಸೈನ್ಯ ಬ್ರಿಟಿಷರ ಪರವಾಗಿ ಯುದ್ಧಕ್ಕೆ ಸಜ್ಜಾಗಿದ್ದರು.
ಪೇಶ್ವೆಗಳ ಸೇನೆಯು 25,000 ಕುದುರೆ ಸವಾರರು ಮತ್ತು 3,000 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡೂ ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ್ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಡನ್ ತಾನು ಸೋಲುತ್ತೇನೆ ಎಂದುಕೊAಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ಧದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೆಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ಎರಡನೆಯ ಬಾಜಿರಾವ್ ಪೇಶ್ವೆಯು ಪಲಾಯನ ಮಾಡುವುದರಲ್ಲಿ ಮೊದಲಿಗ”ನೆಂದು ಬಾಬಾಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ.
ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು, ತಮ್ಮ ಮೇಲೆ ಅಮಾನವೀಯವಾದ ಅಸ್ಪೃಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ, ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾಕಾಲ ಸ್ಮರಿಸುವಂತೆ ಕೋರೆಗಾಂವನ ಭೀಮಾನದಿ ತೀರದ ಪ್ರಶಸ್ತವಾದ ಮೈದಾನ, ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.
26 ನೆಯ ಮಾರ್ಚ್ 1821 ರಲ್ಲಿ ಈ ಭವ್ಯ ವಿಜಯಸ್ತಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. 63 ಅಡಿ ಎತ್ತರ ಇರುವ ಈ ವಿಜಯಸ್ತಂಭವು 1822 ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ತಂಭವನ್ನು ಮಹಾರ್ ಸ್ತಂಭವೆAದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ತಂಭವೆಂದು ಹೆಸರಿಸಲಾಯಿತು.
ವಿಜಯಸ್ತಂಭದ ಮೇಲೆ 20 ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಪ್ರತಿವರ್ಷ ಜನೆವರಿ 1 ರಂದು ಬಾಬಾಸಾಹೇಬರು ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೆಗಾಂವ ಚಳವಳಿಯನ್ನು ಮತ್ತೆ ಮತ್ತೆ ನೆನೆಯುವುದು ಇಂದಿನ ಅನಿವಾರ್ಯವೂ ಹೌದು. ಏಕೆಂದರೆ ಬಾಬಾಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದಿದ್ದಲ್ಲದೆ ದಲಿತರಾರೂ ಕುರಿಗಳಲ್ಲ, ಅವರು ಹುಲಿಗಳು’ ಎಂದು ಹೇಳಿರುವುದನ್ನು ಮತ್ತೆ ಮತ್ತೆ ಮನನಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು
ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.
ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.
ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.
ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.
ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.
——————————————————————-
ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?
ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.
ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?
ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.
ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?
ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.
ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?
ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.
ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.
ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?
ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)
ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?
ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)
ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?
ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.
ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?
ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.
ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್
ಸುದ್ದಿದಿನ.ಕಾಂ|ವಾಟ್ಸಾಪ್|9980346243



