ನೆಲದನಿ
ನುಡಿಯ ಒಡಲು -07 : ಭಾಷಿಕ ಕ್ರಿಯೆ ಮತ್ತು ಮನುಷ್ಯ ಘನತೆ
- ಡಾ.ಮೇಟಿ ಮಲ್ಲಿಕಾರ್ಜುನ,ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಭಾಗ – 03
ಮನುಷ್ಯ ಘನತೆ ಎಂಬುದು ನೈತಿಕ ಮತ್ತು ತಾತ್ವಿಕ ನಿಲುವಾಗಿದೆ. ಇದು ಹಲವು ನೆಲೆಯ ತಿರುಳುಗಳನ್ನು ಪಡೆದಿಕೊಂಡಿದೆ. ಪ್ರತೀ ತಿರುಳಿನೊಂದಿಗೆ ವಿಭಿನ್ನ ಭಾಷಿಕ ಕ್ರಿಯೆಗಳು ಪ್ರಚೂರಗೊಳ್ಳುತ್ತವೆ. ಮನುಷ್ಯ ಘನತೆ ಎಂಬೀ ಪರಿಕಲ್ಪನೆಗೆ ಪ್ರಾಪ್ತವಾಗುವ ಘನವಾದ ಅರ್ಥವು ಲೋಕಗ್ರಹಿಕೆಯನ್ನು ನೆಲೆಯಾಗಿಸಿಕೊಂಡಿರುತ್ತದೆ.
ಒಂದು ನಿರ್ದಿಷ್ಟ ಸಾಂಸ್ಕೃತಿಕ-ಸಾಮಾಜಿಕ ಗ್ರಹಿಕೆಯೊಂದು ಇಲ್ಲಿ ನೆಲೆಗೊಂಡಿರುತ್ತದೆ. ಅಂದರೆ ಸಮಾಜ/ಸಮುದಾಯದೊಂದಿಗೆ ವ್ಯಕ್ತಿಯೊಬ್ಬ ಹೊಂದಿರುವ ನೈತಿಕತೆಯ ನಿಲುವು ಇದಾಗಿರುತ್ತದೆ. ವ್ಯಕ್ತಿಯ ನೈತಿಕ ಸ್ಥೈರ್ಯವು ಎರಡು ನೆಲೆಯಲ್ಲಿ ವರ್ತಿಸುತ್ತದೆ. ಒಂದು ವೈಯಕ್ತಿಕ ನೆಲೆ ಇದನ್ನು ಬಿಡಿನೆಲೆ ಎನ್ನೋಣ. ಎರಡನೆಯದು ಸಾಮುದಾಯಿಕ ನೆಲೆ ಇದನ್ನು ಇಡಿನೆಲೆ ಎಂದು ಕರೆಯೋಣ. ಈ ಇಡಿ ಮತ್ತು ಬಿಡಿ ನೆಲೆಗಳ ನಡುವಣ ನಂಟಸ್ತಿಕೆ ಪರಸ್ಪರವಾಗಿ ಕಾರ್ಯನಿರ್ವಹಿಸುತ್ತವೆ.
ಹೀಗೆ ಪರಸ್ಪರ ವರ್ತಿಸುವ ಪ್ರಕ್ರಿಯೆಯಲ್ಲಿ ನೈತಿಕ ಮತ್ತು ತಾತ್ವಿಕ ನಿಲುವುಗಳನ್ನು ಒಂದು ಸಮುದಾಯ ಮತ್ತು ಒಬ್ಬ ವ್ಯಕ್ತಿ ಹೇಗೆ ಅನುಸರಿಸಲಾಗುತ್ತದೆ ಎನ್ನುವುದನ್ನು ಮನಗಾಣಬಹುದು. ಘನವಾದ ಅರ್ಥ ಎನ್ನುವುದು ಮಾನವೀಯ ಮೌಲ್ಯಗಳ ಮೂಲಗ್ರಹಿಕೆಗಳಿಂದ ಸಂಚಿತವಾಗಿರುತ್ತದೆ. ನಮ್ಮ ಸಾಮಾಜೀಕರಣ ಪ್ರಕ್ರಿಯೆಯೊಳಗೆಯೇ ಮೈದೆರೆಯುವ ಈ ಗ್ರಹಿಕೆಗಳು, ನಮ್ಮ ಪ್ರಜ್ಞೆಯ ಮೂಲ ನೈತಿಕ ತತ್ವಗಳಾಗಿ ಹೊರಹೊಮ್ಮುತ್ತವೆ.
ಇದು ಇಡಿಯಾಗಿ ಅನಾವರಣಗೊಳ್ಳುವ ನೈತಿಕತೆಯ ವಿನ್ಯಾಸವಾಗಿದೆ. ಈ ಮುಖೇನ ಬಿಡಿನೆಲೆಯ ನೈತಿಕ ದೃಷ್ಟಿಕೋನಗಳು ಏರ್ಪಡುತ್ತವೆ. ಪರಿಣಾಮವಾಗಿ ವ್ಯಕ್ತಿ ಘನತೆಯ ಚಹರೆಗಳನ್ನು ನಿರ್ವಚಿಸುವ ಇಲ್ಲವೇ ಅರ್ಥೈಸುವ ನಡೆಗಳು ಮುನ್ನೆಲೆಗೆ ಬರುತ್ತವೆ. ಇದನ್ನು ಬೇರು ಕಾಂಡ ಮತ್ತು ಚಿಗುರುಗಳ ನಡುವಣ ಸಾವಯವ ಸಂಬಂಧದ ರೂಪಕವನ್ನಾಗಿ ನೋಡಬಹುದು. ಇವುಗಳಿಗೆ ಮಾತೃಕೆಯಾಗಿರುವ ಭೂಮಿ ಇಲ್ಲಿ ಮಹತ್ವವನ್ನು ಪಡೆಯುತ್ತದೆ. ಏಕೆಂದರೆ ವಿಚಾರ ಮತ್ತು ಆಚಾರಗಳು ಕೆಲಸ ಮಾಡುವುದು ಬೀಜ ಮತ್ತು ಮಣ್ಣುಗಳ ನಡುವಿನ ಹದವಾದ ಹೊಂದಾಣಿಕೆ ಎಷ್ಟು ಬಲವಾಗಿರುತ್ತದೆಯೋ ಅದಕ್ಕೆ ಪೂರಕವಾಗಿ ಅದು ಅಷ್ಟೇ ಗಟ್ಟಿಯಾಗಿ ಬೇರೂರುತ್ತದೆ.
ನಾವು ಮಾತ್ನಾಡುವ ಬಹುತೇಕ ಸನ್ನಿವೇಶಗಳಲ್ಲಿ, ವ್ಯಕ್ತಿಗಳ ಮಾತು, ಧೋರಣೆ ಮತ್ತು ವರ್ತನೆಗಳನ್ನು ಕುರಿತು ಟೀಕೆಗಳನ್ನು ಮಾಡುತ್ತೇವೆ ಇಲ್ಲವೇ ಒಂದು ಬಗೆಯ ಹಪಾಹಪಿತನವನ್ನು ತೋರುತ್ತೇವೆ. ನಮ್ಮ ಬದುಕಿನ ಇಡೀ ನುಡಿಗಟ್ಟುಗಳು ಅಂದರೆ ನಮ್ಮ ನಡೆ ನುಡಿಗಳನ್ನು ಬಣ್ಣಿಸುವ ಅಭಿವ್ಯಕ್ತಿಯ ಮಾದರಿಗಳು ಮಾನವೀಯತೆ ಮತ್ತು ಮನುಷ್ಯ ಘನತೆಗೆ ಬಹುದೊಡ್ಡ ಕುತ್ತನ್ನು ತಂದಿವೆ ಎಂದು ಕೊರಗುತ್ತೇವೆ.
ಹಾಗಾಗಿ ನಮ್ಮ ಗತದ ಕೆಲವು ನಿರ್ದಿಷ್ಟ ನಿದರ್ಶನಗಳ ಮೂಲಕ ಈ ಹೊತ್ತಿನ ಆಪತ್ತುಗಳನ್ನು ನಿವಾರಿಸಿಕೊಳ್ಳುವ ಇರಾದೆಯನ್ನು ಹೊಂದುತ್ತೇವೆ. ಕನ್ನಡದ ಸಂದರ್ಭದಲ್ಲಿ ವಚನ ಸಾಹಿತ್ಯ, ದಾಸ ಸಾಹಿತ್ಯ ಹಾಗೂ ಇತ್ಯಾದಿ ನೆಲೆಗಳ ಉಲ್ಲೇಖಗಳ ಮೂಲಕ ವರ್ತಮಾನದ ಓರೆಕೋರೆಗಳನ್ನು ತಿದ್ದುವ ತೀಡುವ ಬಯಕೆಯನ್ನು ವ್ಯಕ್ತಪಡಿಸುತ್ತೇವೆ. ಅತ್ಯಂತ ಸುಲಲಿತವಾಗಿ ನಿರರ್ಗಳವಾಗಿ ವಚನಗಳನ್ನು ದಾಸರ ಪದಗಳನ್ನು ಹಾಗೂ ಗಾದೆ ಮಾತುಗಳನ್ನು ವ್ಯಕ್ತಮಾಡುತ್ತೇವೆ. ಅಂದರೇನಾಯಿತು, ಸದ್ಯದ ಬಿಕ್ಕಟ್ಟುಗಳಿಗೆ ನಮ್ಮ ಗತದಲ್ಲಿ ಪರಿಹಾರಗಳಿವೆ ಎಂದು ನಂಬಲಾಗುತ್ತದೆ.
ಈ ನಂಬಿಕೆಯ ಬೇರುಗಳು ನೆಲೆನಿಂತ ಇದೇ ವಾತಾವರಣದಲ್ಲಿ ನಾವು ಇವತ್ತು ಆರೋಪಿಸುವ ಈ ಸಮೂಹ ವಿರೋಧಿ ಎಂದು ಹೇಳಲಾಗುವ ನಡೆ ನುಡಿಗಳು ಹೇಗೆ ಮೈದಾಳಿದವು ಎಂಬ ಮೂಲಭೂತ ಪ್ರಶ್ನೆಯನ್ನು ನಾವು ಕೇಳುವುದಿಲ್ಲ. ನಮ್ಮ ಸದ್ಯದ ಮಾನವೀಯ ಸಂಬಂಧಗಳ ಫತನಕ್ಕೆ ಕಾರಣವಾಗಿರುವ ಎಲ್ಲ ಬಗೆಯ ನಿರೂಪಣೆಗಳು ಮೈದಾಳುವುದಕ್ಕೆ ಏನೆಲ್ಲ ಪುರಾವೆಗಳನ್ನು ನಾವು ಈಗ ಒದಗಿಸುತ್ತೆವೋ, ಅವುಗಳು ಕೂಡ ನಮ್ಮ ಬೇರುಗಳಲ್ಲಿಯೇ ಅಂತಸ್ಥವಾಗಿರುವ ಅವಗುಣಗಳಾಗಿವೆ. ಈ ಆಯಾಮವನ್ನು ಪರಿಶೀಲಿಸಲು ನಾವು ಕನ್ನಡ ಸಾಹಿತ್ಯದ ಬೇರೆ ಬೇರೆ ಪಠ್ಯಗಳು ಹಾಗೂ ಇತರೆ ನಿರೂಪಣೆಗಳನ್ನು ಆಶ್ರಯಿಸಬೇಕಾಗುತ್ತದೆ.
ಯಾವುದೇ ಗುಣವೊಂದನ್ನು ಬಣ್ಣಿಸುವ ಇಲ್ಲವೇ ವ್ಯಾಖ್ಯಾನಿಸುವ ನಮ್ಮ ತಾತ್ವಿಕ ಚೌಕಟ್ಟುಗಳು ಬಹುತೇಕವಾಗಿ ಸಾಪೇಕ್ಷಿತ ಇಲ್ಲವೇ ಬೈನರಿಯಾಗಿರುತ್ತವೆ. ಈ ಗುಣ ಅವಗುಣಗಳನ್ನು ಬೇರ್ಪಡಿಸುವ ಇರಾದೆಯಿಂದಲೇ ವಚನ, ದಾಸಪದ, ತತ್ವಪದಗಳು ಹಾಗೂ ಗಾದೆ ಮಾತು ಮತ್ತು ಉಕ್ತಿಗಳು ತಲೆಯೆತ್ತಿರುತ್ತವೆ ಎನ್ನುವ ವಾಸ್ತವವನ್ನು ಮರೆತುಬಿಡುತ್ತೇವೆ. ಯಾವುದೇ ಸಾಮಾಜಿಕ ನಡೆ ಹಾಗೂ ಸಾಂಸ್ಕೃತಿಕ ಆಚರಣೆ ಹಲವು ಬಗೆಗಳಲ್ಲಿ ಕಾಲ ಮತ್ತು ದೇಶಗಳಿಗೆ ಅನುಗುಣವಾಗಿ ಬದಲಾಗುತ್ತವೆ.
ಉದಾ.ಗೆ ಮೌಢ್ಯತೆ ಎನ್ನುವ ಪದವನ್ನು ನೆಗೆಟ್ ಮಾಡಲು ವೈಜ್ಞಾನಿಕ ಮನೋಭಾವ ಎಂಬ ಪರಿಕಲ್ಪನೆಯನ್ನು ಬಳಸುತ್ತೇವೆ. ಆದರೆ ಅಚ್ಚರಿಯ ಸಂಗತಿ ಏನೆಂದರೆ, ಯಾವ ವೈಜ್ಞಾನಿಕ ಮನೋಭಾವದಿಂದ ಮೌಢ್ಯತೆಯನ್ನು ನಿರಾಕರಿಸುವ ನಿರ್ಧಾಗಳನ್ನು ಮಾಡುತ್ತೇವೆಯೋ, ಅದರ ಬುಡದಲ್ಲಿಯೇ ಮೌಢ್ಯತೆಯ ಬೀಜಗಳನ್ನು ಹೊಸದಾದ ರೂಪದಲ್ಲಿ ಬಿತ್ತುತ್ತೇವೆ.
ಬಂಡವಾಳಶಾಹಿ ಮತ್ತು ಕಾರ್ಪೊರೇಟ್ ಶಕ್ತಿಗಳು ಪ್ರಾಯೋಜಿಸುವ ಯಾವುದೇ ಜಾಹಿರಾತಿಗೆ ಯಾವ ಬಗೆಯ ವೈಜ್ಞಾನಿಕ ದೃಷ್ಟಿಕೋನಗಳನ್ನು ಲಗತ್ತಿಸಲು ಸಾಧ್ಯ. ಯಾವ ಬಗೆಯ ವೈಚಾರಿಕ ಸ್ಪಷ್ಟೀಕರಣವನ್ನು ನೀಡಲು ಸಾಧ್ಯ. ಅಂದರೆ ಪ್ರಜಾಪ್ರಭುತ್ವ ನೀತಿಗಳ ಮೂಲಕ ವ್ಯಕ್ತಿ ಮತ್ತು ಸಮೂಹಗಳ ಘನತೆಯನ್ನು ಬಲಪಡಿಸುವ ಕೈಂಕರ್ಯದಲ್ಲಿ ತೊಡಗಿರುವಾಗಲೇ, ಬಂಡವಾಳಶಾಹಿ ಪ್ರೇರಿತ ಜಾಹಿರಾತುಗಳು ರಾರಾಜಿಸುತ್ತವೆ.
ಗತದಲ್ಲಿ ಮೈಪಡೆದ ನಡೆ ನುಡಿಗಳ ಕುರಿತ ಉಪದೇಶಗಳು ಯಾವ ಬಗೆಯ ಬಿಕ್ಕಟ್ಟನ್ನು ನಿವಾರಿಸಲು ಇವತ್ತು ಬಳಕೆಯಾಗುತ್ತವೆ. ಹೀಗೆ ಅವುಗಳನ್ನು ಮರುಉಚ್ಚರಿಸುವ ಮೂಲಕ ಯಾವ ಬಗೆಯ ಮನುಷ್ಯ ಮತ್ತು ಸಮೂಹಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆ. ಹಾಗೂ ಈ ನಿರೂಪಣೆಗಳಿಗೆ ನಾವು ಆರೋಪಿಸುವ ಅರ್ಥಗಳು ಎಂತಹವು ಹಾಗೂ ಇವುಗಳ ಮೂಲಕ ಏರ್ಪಡುವ ಸಾಮಾಜಿಕ ಕ್ರಿಯೆಗೂ ಮತ್ತು ಭಾಷಿಕ ಸಂವಹನಕ್ಕೂ ನಡುವೆ ಎಂತಹ ನಂಟಸ್ತಿಕೆ ಉಂಟಾಗುತ್ತದೆ ಅನ್ನುವುದೇ ಈಗಿನ ಸವಾಲು.
ಈ ಮಾತುಗಳ ಮೂಲಕ ಕೇವಲ ಒಂದು ಜಿಜ್ಞಾಸೆಯನ್ನು ಹುಟ್ಟು ಹಾಕುವುದಕ್ಕಾಗಿ ಇಲ್ಲಿ ಮಂಡಿಸುತ್ತಿಲ್ಲ. ಬದಲಾಗಿ ನಮ್ಮ ಬದುಕಿನ ಕ್ರಿಯಾವರ್ತುಲದೊಳಗೆ ಏರ್ಪಡುವ ಬಿಕ್ಕಟ್ಟುಗಳ ಸ್ವರೂಪವನ್ನು ಅರಿಯುವ ದಾರಿಗಳನ್ನು ಕಂಡುಕೊಳ್ಳಬೇಕಿದೆ. ಆ ಮೂಲಕ ಮನುಷ್ಯ ಘನತೆ ಮತ್ತು ಅದನ್ನು ನೆಲೆಯಾಗಿಸಿಕೊಂಡಿರುವ ನಿರೂಪಣೆಗಳ ತಾತ್ಪರ್ಯವನ್ನು ಘನಾರ್ಥದಲ್ಲಿ ಪರಿಭಾವಿಸುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲವಾದರೆ ನಮ್ಮೀ ಇಡೀ ಬದುಕಿನ ತಾತ್ಪರ್ಯಗಳು ಕೇವಲ ಸಂಕುಚಿತ ಅರ್ಥಗಳ ಆಗರವಾಗುತ್ತದೆ.
ಘನತೆಯ ಸ್ವರೂಪ ಇರುವುದೇ ಬದುಕಿನ ವ್ಯವಹಾರಗಳು ಘನವಾದ ಅರ್ಥವನ್ನು ಪಡೆದುಕೊಳ್ಳುವ ಬಗೆಯಲ್ಲಿ. ಸಮಾನತೆ, ಗೌರವ ಮತ್ತು ಮಾತುಗಳ ನಡುವಿನ ಹೊಂದಾಣಿಕೆ ವಿಚಿತ್ರ ಸ್ವರೂಪದಲ್ಲಿರುತ್ತದೆ. ಉದಾ.ಗೆ ಗಂಡು ಹೆಣ್ಣುಗಳ ನಡುವೆ ಸಮಾನತೆಯನ್ನು ಬಯಸುವವರು ಮಾತುಕತೆಯ ವಿವರಗಳನ್ನು ಬಿಡಿಸಿನೋಡಿದರೆ, ಅಸಮಾನತೆ ಕಣ್ಣಿಗೆ ರಾಚುತ್ತದೆ.
ಪರಸ್ಪರವಾಗಿ ಗೌರವಿಸುವ ವಿಧಾನಗಳು ಹೇಗೆ ಕೆಲಸ ಮಾಡುತ್ತವೆ, ಈ ವಿಧಾನದಲ್ಲಿಯೇ ಅಸಮಾನತೆಯನ್ನು ಹೇಗೆ ಸಮ್ಮತಿಸಲಾಗುತ್ತದೆ ಎಂಬಿತ್ಯಾದಿ ನಿಲುವುಗಳನ್ನು ವಿಶ್ಲೇಷಿಸಿದರೆ, ನಡೆ ನುಡಿಗಳ ಆಳದಲ್ಲಿ ಹುದುಗಿರುವ ಕಂದಕಗಳು ನಿಚ್ಚಳವಾಗಿ ಗೋಚರಿಸುತ್ತೇವೆ. ಇಂತಹ ಕಂದಕಗಳನ್ನು ನಿವಾರಿಸುವ ಹೆಬ್ಬಯಕೆಯಿಂದ ಅವತರಿಸಿದ ವಚನ ಸಾಹಿತ್ಯದಲ್ಲಿಯೂ ಈ ಕಂದಕಗಳು ಹಾಗೇ ಮುಂದುವರೆದಿವೆ.
ಜಾತಿ, ಲಿಂಗ, ಧರ್ಮ ಮೊದಲಾದ ಸಾಮಾಜಿಕ ವಿನ್ಯಾಸಗಳನ್ನು ಕುರಿತಾದ ನಿರೂಪಣೆಗಳು ಇವತ್ತು ನಮಗೆ ಆದರ್ಶದ ವಿನ್ಯಾಸಗಳಾಗಿ ಕಾಣಿಸುತ್ತವೆ. ಹಾಗೂ ವಚನ ಸಾಹಿತ್ಯದ ಶರಣ ಪರಿಕಲ್ಪನೆಯನ್ನು ವಿವರಿಸುವುದು ಹೇಗೆ? ಸಾಮಾಜಿಕ-ಸಾಂಸ್ಕೃತಿಕ ನಿರ್ದಿಷ್ಟತೆಗಳನ್ನು ಮನಗಾಣದೇ, ಅವುಗಳನ್ನು ಕೇವಲ ಆದರ್ಶದ ಮಾದರಿಗಳನ್ನಾಗಿ ಬಿಂಬಿಸುವುದೇ, ಸಂಕುಚಿತಾರ್ಥದ ನಿಲುವುಗಳಾಗಿವೆ.
ಈಗಾಗಲೇ ಹೇಳಿದಂತೆ ಯಾವುದು ವಿಶಾಲ ಮತ್ತು ಘನವಾದ ಅರ್ಥವನ್ನು ಪಡೆಯಲಾರದೋ, ಅಂತಹ ಸನ್ನಿವೇಶಗಳಲ್ಲಿ ಮನಷ್ಯ ಅಥವಾ ಸಮೂಹ ಘನತೆಯ ಚಹರೆಗಳು ಗೌಣವಾಗುತ್ತವೆ. ನೋಡಿ ಯಾವ ಪರಂಪರೆಯನ್ನು ನಾವು ಗೌರವಿಸುತ್ತೇವೆಯೋ, ಆ ಪರಂಪರೆಯಲ್ಲಿಯೇ ಅಪಮಾನದ, ಅಸ್ಪೃಶ್ಯತೆ, ಜಾತೀಯತೆ, ಲೈಂಗಿಕತೆಯ ಕುರಿತ ನಿರೂಪಣೆಗಳು ಯಾಕೇ ಮೈದಾಳುತ್ತವೆ? ಒಂದುಪಕ್ಷ, ಮನುಷ್ಯ ಘನತೆಗೆ ಕುತ್ತು ತರುವ ಇಂತಹ ಅಪಚಾರಗಳನ್ನು ನಿವಾರಿಸಲು ರೂಪಿಸಿದ ತಾತ್ವಿಕ-ನೈತಿಕ ನಿರೂಪಣೆಗಳು ಯಾಕೆ ಫಲಿಸಲಿಲ್ಲ? ಅನ್ನುವ ಪ್ರಶ್ನೆಯನ್ನೂ ಇವತ್ತು ಬಲವಾಗಿಯೇ ಕೇಳುವ ಜರೂರಿದೆ.
ಅಂದರೆ ಮನುಷ್ಯ ಘನತೆಯನ್ನು ರೂಪಿಸುವಂತಹದಲ್ಲ ಬದಲಾಗಿ ನಮ್ಮಲ್ಲಿ ಅಂತಸ್ಥವಾಗಿರುವ ಮಾನವೀಯ ಮೌಲ್ಯಗಳನ್ನು ನಿರಂತರಗೊಳಿಸುವ ಬಗೆಗೆ ಯೋಚಿಸಬೇಕಿದೆ. ಅದಕ್ಕಾಗಿಯೇ ಕುವೆಂಪು ಅವರು ಹೇಳಿದಂತೆ ‘ಹುಟ್ಟುತ್ತ ವಿಶ್ವಮಾನವ ಬೆಳೆಯುತ್ತ ಅಲ್ಪ ಮಾನವ’, ‘ಮಾನವ ಜನುಮ ದೊಡ್ಡದು ಹುಚ್ಚಪ್ಪಗಳಿರಾ ಹಾನಿ ಮಾಡಬೇಡಿ’ ಎಂದು ಹೇಳಿದ ದಾಸರ ಮಾತು ಹಾಗೂ ವಚನಕಾರರು ನೆಲೆಗೊಳಿಸಿದ ‘ಅರಿವೇ ಗುರು’ ಎಂಬ ತತ್ವಗಳು ಏನನ್ನು ಉದ್ದೇಶಿಸಿವೆ ಅಂದರೆ ಮನುಷ್ಯ ಘನತೆ ಎಂಬುದು ನಮ್ಮಲ್ಲಿ ಅಂತಸ್ಥವಾಗಿರುವ ವಿದ್ಯಮಾನವೇ ಹೊರತು ಅದು ಹೊರಗಿನ ಒತ್ತಾಯಗಳಿಂದ ಮಾತ್ರ ನೆಲೆಗೊಳ್ಳುವ ಪ್ರಕ್ರಿಯೆಯಲ್ಲ. ಹಾಗಾಗಿ ನಮ್ಮೊಳಗೆ ಅಂತಸ್ಥಗೊಂಡ ಈ (ಇನ್ನರ್ ಡಿಗ್ನಿಟಿ) ಮೌಲ್ಯವನ್ನು ನಿರಂತರವಾಗಿ ಸಜ್ಜುಗೊಳಿಸುವ ಅವಶ್ಯಕತೆ ಇದ್ದೇ ಇರುತ್ತದೆ.
ಮಾನವ ಮೌಲ್ಯವನ್ನು ಕುರಿತ ಈ ಮೂಲಗ್ರಹಿಕೆಗಳ ಮೂಲಕ ಹೊರಹೊಮ್ಮಿದ ಒಂದು ವ್ಯಾಪಕ ನೈತಿಕ ದೃಷ್ಟಿಕೋನವು ಮನುಷ್ಯ ಘನತೆಯ ಮತ್ತಿತರ ಮೂರು ಪ್ರಮುಖ ಪರಿಕಲ್ಪನೆಗಳಾದ ‘ಹಕ್ಕು, ಕರ್ತವ್ಯ ಮತ್ತು ಗೌರವ’ಗಳನ್ನು ವ್ಯಾಖ್ಯಾನಿಸಬೇಕಾಗುತ್ತದೆ. ಆದರೆ, ವಿಶೇಷವಾಗಿ ಭಾರತದ ಸನ್ನಿವೇಶದಲ್ಲಿ ಈ ಹಕ್ಕು, ಕರ್ತವ್ಯ ಮತ್ತು ಗೌರವಗಳನ್ನು ವ್ಯಾಖ್ಯಾನಿಸುವಾಗ ಸಾಕಷ್ಟು ಅಪಚಾರಗಳು ನಡೆದಿವೆ.
ವರ್ಣ ವ್ಯವಸ್ಥೆ ಮತ್ತು ಜಾತಿ ಶ್ರೇಣೀಕರಣಗಳ ಆಧಾರದ ಮೇಲೆ ಕಾಯಕ ಪರಿಕಲ್ಪನೆಯ ಅರ್ಥದ ಕ್ರಿಯೆಗಳು ಏರ್ಪಡುತ್ತವೆ. ಉದಾ.ಗೆ ‘ಕಾಯಕವೇ ಕೈಲಾಸ’ ಎಂಬೀ ಹೇಳಿಕೆಯ ತಾತ್ಪರ್ಯವೇನು? ಕಾಯಕದ ವ್ಯಾಖ್ಯಾನವೇನು? ಯುರೋಪಿನ ಸಂದರ್ಭದಲ್ಲಿ ಹೇಳಿದ ಡಿಗ್ನಿಟಿ ಆಫ್ ಲೇಬರ್ ಪರಿಕಲ್ಪನೆಯನ್ನು ನಾವು ಹೇಗೆ ಪರಿಭಾವಿಸಿಕೊಂಡಿದ್ದೇವೆ? ಏಕೆಂದರೆ ಕಾಯಕ, ಕೆಲಸ ಇಲ್ಲವೇ ಕಸುಬು ಮೊದಲಾದ ಪರಿಭಾಷೆಗಳನ್ನು ವಿವರಿಸುವಲ್ಲಿ ಸಾಮಾಜಿಕ ಅಂತಸ್ತಿನ ಪ್ರಶ್ನೆಗಳು ಮುನ್ನೆಲೆಗೆ ಬರುತ್ತವೆ. ಅಂದರೆ ಕಾಯಕ ಅನ್ನುವುದು ಕೇವಲ ಶ್ರಮದ ಪರಿಕಲ್ಪನೆ ಮಾತ್ರವಾಗದೇ, ಶ್ರಮ ವಿಭಜನೆಯ ತತ್ವವಾಗಿದೆ.
ಕರಕುಶಲ, ವಾಸ್ತುಶಿಲ್ಪ, ಕೃಷಿ, ನಿರ್ಮಾಣ, ಉತ್ಪಾದನೆಯ ಸ್ವರೂಪ ಇತ್ಯಾದಿ ವಲಯಗಳಲ್ಲಿ ನಾವು ಯಾವ ತಾತ್ವಿಕ ಮತ್ತು ನೈತಿಕ ನಿಲುವುಗಳನ್ನು ಆಧರಿಸಿ ಈ ಶ್ರಮ ವಿಭಜನೆಯನ್ನು ಮಾಡುತ್ತೇವೆ. ಅಂದರೆ, ಜಾತಿ, ಧರ್ಮ, ಲಿಂಗಗಳಂತಹ ಸಾಮಾಜಿಕ ರಚನೆಗಳ ಮೂಲಕ ಶ್ರಮ ಮತ್ತು ಕಾಯಕಗಳ ಸಂಬಂಧವನ್ನು ನಿರ್ವಚಿಸುತ್ತೇವೆ. ಈ ನಿರ್ವಚನೆಯಲ್ಲಿ ಬರೀ ವೈಶಿಷ್ಟ್ಯಗಳನ್ನು ಮಾತ್ರ ಪರಿಗಣಿಸದೇ, ಸಾಮಾಜಿಕ ಕಳಂಕಗಳಾಗಿರುವ ಈ ಜಾತಿ, ಧರ್ಮ ಮತ್ತು ಲಿಂಗಗಳನ್ನು ನೆಲೆಯಾಗಿಸುತ್ತೇವೆ.
ಇವುಗಳಿಗೆ ಅಂಟಿದ ಇದೇ ಕಳಂಕವೇ ಈ ಜಾತಿ, ಧರ್ಮ ಮತ್ತು ಲಿಂಗಗಳಿಗೆ ಅನುಗುಣವಾಗಿ ಆಯಾ ಕಾಯಕಗಳಿಗೆ ಆರೋಪಿಸಲಾಗುತ್ತದೆ. ಡಿಗ್ನಿಟಿ ಆಫ್ ಲೇಬರ್ ಇರಬಹುದು ಇಲ್ಲವೇ ಕಾಯಕವೇ ಕೈಲಾಸ ಇರಬಹುದು, ಮನುಷ್ಯರೊಳಗೆ ಅಂತರ್ನಿಹಿತವಾಗಿರುವ ಘನತೆಯನ್ನು ಮರೆಮಾಚಿ, ನಮ್ಮ ಕಾಯಕವನ್ನು ಕಸುಬುಗಳನ್ನಾಗಿ ರೂಪಿಸಲಾಗುತ್ತದೆ. ಕಸುಬುಗಳೆಂದು ಹೇಳಲು ಕಾರಣ ಈ ಪದವನ್ನು ಸಂಕುಚಿತ ನೆಲೆಯ ರೂಪಕವನ್ನಾಗಿಯೂ ಬಳಸಲಾಗುತ್ತದೆ.
ಈ ಇಡೀ ವಿನ್ಯಾಸವನ್ನು ಸಾಮಾಜಿಕ ಅಸಮಾನ ಅಂತಸ್ತುಗಳನ್ನು ಆಧರಿಸಿಕೊಂಡು ರೂಪಿಸಲಾಗುತ್ತದೆ. ಒಟ್ಟಿನಲ್ಲಿ ಈ ಸಾಮಾಜಿಕ ನಕ್ಷೆಯು ಅಸಮಾನತೆಯನ್ನೇ ತನ್ನ ಮೂಲತತ್ವವನ್ನಾಗಿಸಿಕೊಂಡಿದೆ. ಆದ್ದರಿಂದ ವ್ಯಕ್ತಿಗಳ ಘನತೆ ಅವರ ಅಸ್ತಿತ್ವದಿಂದ ಏರ್ಪಡದೇ, ಕೇವಲ ಸಾಮಾಜಿಕ ಅಸಮಾನ ನೀತಿಯಿಂದ ಉಂಟಾಗುತ್ತವೆ. ಸಹಜವಾಗಿ ನಮ್ಮ ಸಂವಹನ ಕ್ರಿಯೆ, ಮಾತುಕತೆಗಳ ವರಸೆ, ವರ್ತನೆ ಹಾಗೂ ನಾವು ಪರಸ್ಪರ ವ್ಯವಹರಿಸುವಾಗ ಈ ಅಸಮಾನ (ಸಾಮಾಜಿಕ) ವಿನ್ಯಾಸಗಳನ್ನೇ ಪ್ರಧಾನ ತತ್ವಗಳನ್ನಾಗಿಸಿಕೊಂಡು, ನಮ್ಮ ಭಾಷಿಕ ಅರ್ಥ ನಿರ್ವಚನೆಗಳನ್ನು ರೂಪಿಸುತ್ತೇವೆ ಇಲ್ಲವೇ ಅವುಗಳೇ ಘಟಿಸುತ್ತವೆ.
ಪುರುಷಪ್ರಧಾನ ಇಲ್ಲವೇ ಪಿತೃ ಪ್ರಧಾನ ಎನ್ನುವುದು ಸಮಾಜದ ಮೇಲ್ವರ್ಗಗಳ ಪ್ರಾಬಲ್ಯವೇ ಆಗಿರುತ್ತದೆ. ಹಾಗಾಗಿ ಶ್ರಮದ ಮೌಲ್ಯವನ್ನು ನಿರ್ಧರಿಸುವಲ್ಲಿ ಸಾಮಾಜಿಕ ತರತಮ ನೀತಿಗಳು ಬಹುಮುಖ್ಯ ಪರಿಕರಗಳು ಆಗುತ್ತವೆ. ಯಾವ ಕಸುಬಿಗೆ ಯಾವ ಸ್ಥಾನ, ಯಾವ ಜಾತಿಗೆ ಯಾವ ಹಕ್ಕು ಹಾಗೂ ಯಾವ ಸಮೂಹಕ್ಕೆ ಯಾವ ಬಗೆಯ ಗೌರವ ಎಂಬುದನ್ನೆಲ್ಲ ನಿರ್ವಚಿಸಿದ್ದು ಕೇವಲ ವರ್ಣ ವ್ಯವಸ್ಥೆಯ ಪ್ರಭಾವ ಮತ್ತು ಪರಿಣಾಮದಿಂದ.
ಭಾಷೆಯು ನಿರ್ವಾತದಲ್ಲಿ ವ್ಯವಹರಿಸುವುದಿಲ್ಲ ಅದು ಕೂಡ ಇಂತಹ ತರತಮದಿಂದ ಕೂಡಿದ ಸನ್ನಿವೇಶದಲ್ಲಿ ತನ್ನ ಅರ್ಥಗಳನ್ನು ಪ್ರಕಟಿಸುವುದರಿಂದ, ಆಯಾ ಸಾಮಾಜಿಕ ಮನ್ನೆಣೆಗೆ ಅನುಗುಣವಾಗಿ ಅರ್ಥಗಳು ಪ್ರಾಪ್ತವಾಗುತ್ತವೆ. ಪ್ರಜಾಸತ್ತಾತ್ಮಕ ಸವಲತ್ತುಗಳು ಯಾರಿಗೆ? ಹೇಗೆ? ಎಲ್ಲಿ? ಯಾವಾಗ? ಸಿಗುತ್ತವೆ ಎಂಬ ಪ್ರಶ್ನೆಯನ್ನು ಕೇಳಿದಾಗ, ನಮ್ಮ ಹಕ್ಕು, ಕರ್ತವ್ಯ ಮತ್ತು ಗೌರವಗಳೂ ಹಾಗೇ ಅವರವರ ಯೋಗ್ಯತೆ, ಅಂತಸ್ತುಗಳಿಗೆ ಪೂರಕವಾಗಿ ಲಭಿಸುತ್ತವೆ.
ಮತ್ತೇ ಇಲ್ಲಿ ಈ ಯೋಗ್ಯತೆ ಮತ್ತು ಅಂತಸ್ತು ಅನ್ನುವುದು ನಿರ್ಧಾರವಾಗುವುದು ಅದೇ ಸಾಮಾಜಿಕತೆಯ ನಿಲುವುಗಳಿಂದ. ಆದ್ದರಿಂದ ವಿಭಿನ್ನ ಸಮೂಹಗಳ ನಡುವೇ ಅವರವರ ಕಸುಬುಗಳಿಗೆ ಹೊರತಾಗಿ ಕೇವಲ ಮನುಷ್ಯನ ಅಸ್ತಿತ್ವದ ಆಧಾರದ ಮೇಲೆ ಸಾಮಾಜಿಕ ಐಕ್ಯತೆ ಮತ್ತು ಸಾಂಗತ್ಯ ಏರ್ಪಡುವುದಿಲ್ಲ. ಹಕ್ಕು, ಕಾಯಕ (ಕರ್ತವ್ಯ) ಮತ್ತು ಗೌರವಗಳ ನಡುವಣ ಸಂಬಂಧವು ಸಾವಯವ ಸಂಬಂಧವಾಗಬೇಕು. ಅಂದರೆ ಬೇರು ಕಾಂಡ ಮತ್ತು ಚಿಗುರುಗಳ ನಡುವಿನ ಸಾವಯವ ಸಂಬಂಧವೂ ಇಲ್ಲಿ ಏರ್ಪಡಬೇಕು. ಆವಾಗ ಮಾತ್ರ ಸಾಮಾಜಿಕ-ಸಾಂಸ್ಕೃತಿಕ ಸಾಮರಸ್ಯ ಸಾಧ್ಯ.
ಇಂತಹ ಸನ್ನಿವೇಶದಲ್ಲಿ ಪ್ರಕಟವಾಗುವ ಅರ್ಥಗಳು ಸಹಜವಾಗಿ ಸಾಮಾಜಿಕ ಸಾಂಗತ್ಯದ ರೂಪಕವಾಗುತ್ತವೆ. ಇಲ್ಲವಾದಲ್ಲಿ ವಾಕ್ ಮತ್ತು ಅರ್ಥಗಳ ಅಂತರ ಇನ್ನಷ್ಟು ಬಿಗಡಾಯಿಸುತ್ತದೆ. ಕಾಳಿದಾಸ ಇದನ್ನು ‘ವಾಗಾರ್ಥ’ ಎಂಬ ಐಕ್ಯಪದವನ್ನು ಬಳಸಿದ್ದರೂ ವಾಕ್ (ರೂಪು) ಹೆಣ್ಣಾಗಿಯೂ ಮತ್ತು ಅರ್ಥ (ನಿರ್ಧಾರ/ನಿರ್ಣಯ) ಗಂಡಾಗಿಯೂ ಇಲ್ಲಿ ಧ್ವನಿಸುತ್ತದೆ. ಅದಕ್ಕಾಗಿಯೇ ಈ ವಾಗಾರ್ಥವನ್ನು ಪಾರ್ವತಿ ಮತ್ತು ಪರಮೇಶ್ವರರ ಒಗ್ಗಟ್ಟಿನ ರೂಪಕವನ್ನಾಗಿ ಕೊಟ್ಟಿರುವುದು. ಭಾಷಿಕ ರೂಪಗಳಿಗೆ ಸ್ವಾಯತ್ತ ಅಸ್ತಿತ್ವ ಇರುವುದಿಲ್ಲ, ಅವುಗಳ ಅಸ್ತಿತ್ವ ಅರ್ಥ ನಿರ್ಣಯದಲ್ಲಿರುತ್ತದೆ.
ಈ ಅರ್ಥ ನಿರ್ಣಯವನ್ನು ಮಾಡುವುದು ಪುರುಷಪ್ರಧಾನ ವ್ಯವಸ್ಥೆಯಲ್ಲಿಯೇ ನಡೆಯುತ್ತದೆ. ಭಾಷಿಕ/ವಾಕ್ (ಪಾರ್ವತಿ) ರೂಪಗಳಿಗೆ ಅರ್ಥ (ಪರಮೇಶ್ವರ)ಗಳು ಏರ್ಪಡುವುದೇ ಗಂಡು ಕೇಂದ್ರಿತ ಚಿಂತನೆಯಾಗಿದೆ. ಆದ್ದರಿಂದ ಹಕ್ಕು, ಕರ್ತವ್ಯ ಮತ್ತು ಗೌರಗಳು ಪರಸ್ಪರವಾಗಿ ವ್ಯವಹರಿಸದೇ ಸಾಮಾಜಿಕ ಅಧಿಕಾರ ಸಂಬಂಧಗಳ ಮೂಲಕ ಘಟಿಸುತ್ತವೆ. ಇವುಗಳ ನಡುವೇ ಯಾವುದೇ ಸಾವಯವ ಸಂಬಂಧವನ್ನು ನೋಡಲು ಸಾಧ್ಯವಿಲ್ಲ. ಬೇರು, ಕಾಂಡ ಮತ್ತು ಚಿಗುರುಗಳು ಇಲ್ಲಿ ವಿಘಟನೆಯ ರೂಪಕಗಳಾಗಿ ನೆಲೆನಿಂತಿವೆ.
ದಿಟ ಮರದ ಯಾವುದೇ ಒಂದು ಭಾಗಕ್ಕೆ ಪೆಟ್ಟು ಬಿದ್ದರೆ ಇಡೀ ಮರದ ಅಸ್ತಿತ್ವವನ್ನು ನಾಶಪಡಿಸಲಾರದು. ಆದರೆ ಸಾಂಗತ್ಯ ಮತ್ತು ಐಕ್ಯತೆಯ ಪ್ರಶ್ನೆ ಇರುವುದು ಕೇವಲ ಯಾವುದೇ ಒಂದು ಅಂಗದಲ್ಲಿ ಅಲ್ಲ ಅದು ಅಖಂಡತೆಯ ರೂಪಕವಾಗಿದೆ. ಸಮಾಜದ ಅಖಂಡತೆಯನ್ನು ಕಾಪಾಡುವುದೆಂದರೆ, ಅರ್ಥಗಳ ಅಖಂಡತೆಯನ್ನೂ ಕಾಪಾಡುವುದು ಆಗಿರುತ್ತದೆ. ಮನುಷ್ಯ ಘನತೆಯನ್ನು ನಿರೂಪಿಸುವ ಇಲ್ಲವೇ ನಿರ್ವಚಿಸುವ ವಿಧಾನಗಳು ಸಾಮಾಜಿಕ ಅಖಂಡತ್ವದಿಂದ ಘಟಿಸುತ್ತವೆ.
ಇದೇನೂ ಸಾಮಾಜಿಕ ಸಮೀಕರಣದ ಮಾದರಿಯಲ್ಲ ಬದಲಾಗಿ ನಮ್ಮ ನಮ್ಮ ಅಸ್ಮಿತೆ ಮತ್ತು ಅಸ್ತಿತ್ವಗಳ ನಡುವಣ ಸಾಮರಸ್ಯದ ಬಗೆಯಾಗಿದೆ. ಈ ಸಾಮರಸ್ಯವು ಹಕ್ಕು, ಕರ್ತವ್ಯ ಮತ್ತು ಗೌರವಗಳ ನಡುವಿನ ಡಿಸ್ಟಿಂಗ್ಸೆನ್ ಆಗಿರುತ್ತದೆ. ಇದು ಮರದ ಬೇರುಗಳನ್ನು ಬಲಪಡಿಸುವ ಬಗೆಯಾಗಿದೆ. ಈ ಮೂಲಕ ಮನುಷ್ಯ ಘನತೆಯ ಘನವಾದ/ ಇಡಿಯಾದ ಅರ್ಥಗಳು ಮುನ್ನೆಲೆಗೆ ಬರುತ್ತವೆ. ಹಾಗಾಗಿ ಡಿಸ್ಟಿಂಗ್ಸೆನ್ ಎನ್ನುವುದು ಡೈಕಾಟಮಿಯಲ್ಲ ಬದಲಾಗಿ ಅವುಗಳಿಗೆ ಆರೋಪಿಸಲಾಗುವ ಅರ್ಥಗಳ ನಡುವೇ ಅಸಮಾನತೆ ಇರಕೂಡದು ಅಷ್ಟೇ.
ಅಂದರೆ ಸಾಮಾಜಿಕ ಸಾಂಸ್ಕೃತಿಕ ಸಮತೋಲವನ್ನು ಕಾಪಾಡುವ ಬಗೆಯಲ್ಲಿ ವ್ಯಾಖ್ಯಾನಗಳು, ಅರ್ಥ ಸಾಧ್ಯತೆಗಳು ಏರ್ಪಡಬೇಕು. ಹೌದು ಈ ಯಾವ ಪರಿಕಲ್ಪನೆಯೂ ಕೂಡ ಆತ್ಯಂತಿಕವಲ್ಲ ಆದರೆ ಅವುಗಳಿಗೆ ದೊರೆಯಬಹುದಾದ ಸಾಮಾಜಿಕ-ಸಾಂಸ್ಕೃತಿಕ ಮಾನ್ಯತೆಯಲ್ಲಿ ಸಮತೋಲನ ಇರಬೇಕೆಂಬ ಒತ್ತಾಯ ಮಾತ್ರ. ಈ ನಡೆ ಕೇವಲ ರಾಜಕೀಯ ಸರಿತನದ ವಿನ್ಯಾಸವಲ್ಲ. ಇದು ವಾಸ್ತವದಲ್ಲಿ ಸಾಂಸ್ಕೃತಿಕ ಸರಿತನದ ನಿಲುವೂ ಆಗಿದೆ. ಮನುಷ್ಯ ಘನತೆ ಎನ್ನುವುದು ಸಾಂಸ್ಕೃತಿಕ ಸಮತೋಲನ ಮತ್ತು ಸರಿತನದ ವಿದ್ಯಮಾನವಾಗಿದೆ. ಹೊರತು ಅದು ರಾಜಕೀಯ ಮೇಲಾಟದ ವಿನ್ಯಾಸವನ್ನಾಗಿ ಮಾತ್ರ ನೋಡ ಕೂಡದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

-
ದಿನದ ಸುದ್ದಿ4 hours agoಬೆಂಗಳೂರು ಇ-ಕಾಮರ್ಸ್ ಡಾರ್ಕ್ ಸ್ಟೋರ್ಗಳಲ್ಲಿ ಅವಧಿ ಮೀರಿದ ಆಹಾರ, ಔಷಧ ಪತ್ತೆ
-
ದಿನದ ಸುದ್ದಿ3 hours agoಮಧ್ಯಪ್ರಾಚ್ಯದಲ್ಲಿ ಏಳು ತಿಂಗಳಿನಿಂದ ಯುದ್ಧದ ಕಾರ್ಮೋಡ – ಇರಾನ್–ಅಮೆರಿಕ ಸಂಘರ್ಷ ತೀವ್ರ
-
ದಿನದ ಸುದ್ದಿ3 hours agoಸ್ಕ್ರೀನ್ ಬೆಳಕು, ಸಾಮಾಜಿಕ ಜಾಲತಾಣ – ನಿದ್ರೆಗೆ ಅಡ್ಡಿ, ಆರೋಗ್ಯಕ್ಕೆ ಹಾನಿ
-
ದಿನದ ಸುದ್ದಿ3 hours agoGold Rate Fall: 24 ಕ್ಯಾರೆಟ್ ಚಿನ್ನದ ದರ ₹104 ಇಳಿಕೆ, ಬೆಳ್ಳಿ ಗ್ರಾಂಗೆ ₹250 ಸ್ಥಿರ
-
ದಿನದ ಸುದ್ದಿ3 hours agoದಾವಣಗೆರೆ ನಗರಕ್ಕೆ ರಾಜ್ಯಮಟ್ಟದ “ಸ್ವಚ್ಛ ವಾರ್ಡ್ ವಾಯು ಸರ್ವೇಕ್ಷಣೆ 2025” ಪ್ರಶಸ್ತಿಯ ಗರಿ: ರೂ 25.00 ಲಕ್ಷ ನಗದು ಬಹುಮಾನ
-
ದಿನದ ಸುದ್ದಿ3 hours agoKPSCExam: ಬೆಂಗಳೂರು ಸೇರಿದಂತೆ ಜಿಲ್ಲೆಗಳಲ್ಲಿ ವೈದ್ಯರ ಕೊರತೆ – ತಕ್ಷಣ ನೇಮಕಾತಿ ಅಗತ್ಯ
-
ದಿನದ ಸುದ್ದಿ3 hours agoಬೆಂಗಳೂರು ಸೆಪ್ಟೆಂಬರ್ನಲ್ಲಿ 31.9 ಡಿ.ಸೆ. ದಾಖಲೆ – ಹವಾಮಾನ ಇಲಾಖೆ ಎಚ್ಚರಿಕೆ
-
ದಿನದ ಸುದ್ದಿ32 minutes agoEV ನೋಂದಣಿಯಲ್ಲಿ ಕರ್ನಾಟಕದ ಸಾಧನೆ – ಶುದ್ಧ ಚಲನೆಗೆ ಬೆಸ್ಕಾಂ ಮುನ್ನಡೆ


