Connect with us

ದಿನದ ಸುದ್ದಿ

ಕೋವಿಡ್ -19 | ಲಾಕ್ ಡೌನ್ ನಿಂದ ಉಂಟಾಗುವ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಮುನ್ನೋಟ..!

Published

on

  • ಕ್ರಾಂತಿರಾಜ್ ಒಡೆಯರ್ ಎಂ, ಸಹಾಯಕ ಪ್ರಾಧ್ಯಾಪಕರು, ಮೈಸೂರು

ಸಂದರ್ಭ 1

ಬೇರೆ ಬೇರೆ ರಾಜ್ಯಗಳಿಂದ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಿದ್ದ ವಲಸೆ ಕಾರ್ಮಿಕರು ಕೋವಿಡ್ 19 ಲಾಕ್ ಡೌನ್ ನಿಂದ ಕೆಲಸವಿಲ್ಲದೇ ಜೀವನೋಪಾಯ ಕಷ್ಟವಾಗಿ, ತಮ್ಮ ತಮ್ಮ ಊರುಗಳಿಗೆ ಹೊರಡಲು ರೈಲ್ವೆ ಹಾಗು ಬಸ್ಸು ನಿಲ್ದಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸೇರಿದ್ದ ವಲಸೆ ಕಾರ್ಮಿಕರ ಕುರಿತು ನಮ್ಮ ರಾಜ್ಯದ ಮುಖ್ಯಮಂತ್ರಿ ಯೆಡಿಯೂರಪ್ಪನವರು, ಕಾರ್ಮಿಕರು ವಾಪಸು ಹೋಗದಂತೆ ಕಳಕಳಿಯ ಮನವಿ ಮಾಡಿಕೊಂಡರೂ, ಮುಖ್ಯಮಂತ್ರಿಗಳ ಮನವಿಗೆ ಸ್ಪಂಧಿಸದ ವಲಸೆ ಕಾರ್ಮಿಕರು, ತಾವು 2 ತಿಂಗಳಿನಿಂದ ಅನುಭವಿಸುತ್ತಿರುವ ಯಾತನೆ ಸಾಕು.

ಈಗಲಾದರೂ ತಮ್ಮ ತಮ್ಮ ಊರುಗಳಿಗೆ ಸೇರಿಕೊಳ್ಳೋಣ ಎಂದು ಕೆಲವರು ಈಗಾಗಲೇ ತಮ್ಮ ಊರು ಸೇರಿಕೊಂಡಿದ್ದರೆ, ಹಲವರು ತಮ್ಮ ಗೂಡು ಸೇರಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಸಂದರ್ಭ 2

ಒಂದು ವಾರದ ಹಿಂದೆ ಟಿ ವಿ ಯಲ್ಲಿ ನೋಡಿದ್ದು. ಮುಂಬೈಯಿಂದ ಉತ್ತರ ಪ್ರದೇಶಕ್ಕೆ ಕಾಲ್ನಡಿಗೆಯಲ್ಲಿ ಹೊರಟಿದ್ದ ವಲಸೆ ಕಾರ್ಮಿಕನಿಗೆ ಪತ್ರಕರ್ತ ಕೇಳಿದ ಪ್ರಶ್ನೆ, “ಸರ್ಕಾರ ನಿಮಗಾಗಿ ರೈಲಿನ ವ್ಯವಸ್ಥೆ ಮಾಡಿದೆ.

ನೀವು ಏಕೆ ನಡೆದು ಹೋಗ್ತಿದ್ದೀರಾ? ಲಾಕ್ ಡೌನ್ ಮುಗಿದ ಮೇಲೆ ವಾಪಸ್ ಇಲ್ಲಿಗೆ ಬರುತ್ತೀರಾ?” ಎಂಬ ಹಲವಾರು ಪ್ರಶ್ನೆಗಳಿಗೆ ವಲಸೆ ಕಾರ್ಮಿಕ ಕೊಟ್ಟ ಉತ್ತರ, “ನಮಗೆ ಅಕ್ಷರ ಜ್ಞಾನ ಇಲ್ಲ, ಈ ಮೊಬೈಲ್ ಬಳಸಲು ಸಹ ಬರಲ್ಲ, ಅವರ ಇವರ ಬಳಿ ಕಾಡಿ ಬೇಡಿ ಅನ್ ಲೈನ್ ಅರ್ಜಿ ಸಲ್ಲಿಸಿದ್ದೆ ಅದು ರಿಜೆಕ್ಟ್ ಆಗಿದೆ, ಮತ್ತೆ ಯಾರು ಅರ್ಜಿ ಹಾಕಲು ಸಹಾಯ ಮಾಡಲಿಲ್ಲ, ಅದಕ್ಕೆ ನಡೆದುಕೊಂಡೆ ಹೋಗ್ತಿದ್ದಿನಿ.ಊರಲ್ಲಿ ಅಪ್ಪನಿಗೆ ವ್ಯವಸಾಯಕ್ಕೆ ಸಹಾಯ ಮಾಡಿಕೊಂಡು ಇರ್ತೀನಿ ವಿನಾ ಇಲ್ಲಿ ಬಂದು ಇನ್ನೊಮ್ಮೆ ನರಕಯಾತನೆ ಅನುಭವಿಸಲು ಇಷ್ಟ ಇಲ್ಲ”.

ಸಂದರ್ಭ 3

ಮೈಸೂರಿನ ಹೆಮ್ಮೆಯ ಉದ್ದಿಮೆಗಳಾದ ಸಥರನ್ ಸ್ಟಾರ್ ಹೋಟೆಲ್ ಹಾಗು ರೀಡ್ ಅಂಡ್ ಟೇಲರ್ ಕಂಪನಿಗಳು ಲಾಕ್ ಡೌನ್ ನಿಂದ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು, ದೇಶದ ಆರ್ಥಿಕ ಸ್ಥಿತಿಗತಿಯು ಅನಿಶ್ಚಿತತೆಯಿಂದ ಕೂಡಿದ್ದು, ಮುಂದೇನು ಮಾಡಬೇಕೆಂಬ ದಾರಿ ತೋಚದೆ, ಉದ್ದಿಮೆಗಳನ್ನು ಮುಚ್ಚಿದ್ದು, ಸುಮಾರು 2000 ಕಾರ್ಮಿಕರು ಬೀದಿಪಾಲಾದಂತಾಗಿದೆ.

ಈ ಸಮಸ್ಯೆ ಕೇವಲ ವಲಸೆ ಕಾರ್ಮಿಕರು ಹಾಗು ಕೆಲವು ಕಂಪೆನಿಗಳದ್ದಲ್ಲ. ದೇಶದ ಎಲ್ಲ ಆರ್ಥಿಕ ವಲಯಗಳಿಗೂ ಹರಡಿರುವ ಸಮಸ್ಯೆ. ಭಾರತದಲ್ಲಿ ಸರಿ ಸುಮಾರು 67% ರಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಹಲವು ಸಂಸ್ಥೆಗಳ ಸಮೀಕ್ಷೆಗಳು ಹೇಳುತ್ತವೆ.

ಈ ಸಂದರ್ಭದಲ್ಲಿ ಆಗಿರುವ ಬದಲಾವಣೆಗಳಿಂದ ದೇಶದಲ್ಲಿ ದೊಡ್ಡ ಮಟ್ಟದ ಆರ್ಥಿಕ ಹಾಗು ಸಾಮಾಜಿಕ ಸಮಸ್ಯೆಗಳು ಉಂಟಾಗಲಿದ್ದು, ನಮ್ಮ ಆಡಳಿತ ವ್ಯವಸ್ಥೆಯು ಸಮಸ್ಯೆ ಹೋಗಲಾಡಿಸಲು ಸರಿಯಾದ ಮಾರ್ಗೋಪಾಯಗಳನ್ನು ಕಂಡುಕೊಳ್ಳದ್ದಿದ್ದರೆ, ದೇಶವು ಸರಿಪಡಿಸಲಾಗದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಲಿದೆ. ಕೋವಿಡ್ 19 ಲಾಕ್ ಡೌನ್ ನಿಂದ ದೇಶದ ಆರ್ಥಿಕ ವಲಯಗಳ ಮೇಲೆ ಉಂಟಾಗುವ ಸಾಮಾಜಿಕ ಹಾಗು ಆರ್ಥಿಕ ಪರಿಣಾಮಗಳನ್ನು ಅವಲೋಕಿಸುವುದಾದರೆ..

ಸಣ್ಣ, ಮಧ್ಯಮ ಹಾಗು ಬೃಹತ್ ಉದ್ದಿಮೆಗಳ ಮೇಲೆ ಉಂಟಾಗುವ ಪರಿಣಾಮ

ಲಾಕ್ ಡೌನ್ ನಿಂದ ಉದ್ದಿಮೆಗಳು ಸಂಪೂರ್ಣ ಮುಚ್ಚಿದ್ದು, ಐಟಿ, ಬಿಟಿ ವಲಯಗಳೇನೋ ಕಾರ್ಮಿಕರಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವ ಸೌಲಭ್ಯವನ್ನು ಕಲ್ಪಿಸಿದ್ದು, ಈ ವ್ಯವಸ್ಥೆ ಇನ್ನೂ 6 ತಿಂಗಳು ಮುಂದುವರೆಯುವ ಮುನ್ಸೂಚನೆಯನ್ನು ಹಲವು ಕಂಪನಿಗಳು ನೀಡಿವೆ.

ಆದರೆ ಉತ್ಪಾದನಾ ವಲಯವು ಬೇಡಿಕೆ ಇಲ್ಲದೇ, ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದ್ದು, ಈ ವಲಯದ ಮುಂದಿನ ದಿನಗಳು ಅನಿಶ್ಚಿತತೆಯಿಂದ ಕೂಡಿದೆ. ಕೆಲಸ ಕಳೆದುಕೊಂಡ ಕಾರ್ಮಿಕರಲ್ಲಿ ಹಲವರು ಈಗಾಗಲೇ ತಮ್ಮ ತಮ್ಮ ಊರುಗಳನ್ನು ಸೇರಿಕೊಂಡಿದ್ದು, ಇನ್ನೂ ಹಲವರು ತಮ್ಮ ಊರು ಸೇರಿಕೊಳ್ಳುವ ಪ್ರಕ್ರಿಯೆಯಲ್ಲಿದ್ದು, ತಮ್ಮ ಜೀವನೋಪಾಯಕ್ಕೆ ತಮ್ಮ ತಮ್ಮ ಹಳ್ಳಿಗಳಲ್ಲೇ ಹಲವು ಆರ್ಥಿಕ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದು, ಮುಂದೊಂದು ದಿನ ದೇಶದ ಆರ್ಥಿಕ ವ್ಯವಸ್ಥೆ ಸರಿಹೋದರೂ, ಇವರು ತಮ್ಮ ಹಳೇ ಕೆಲಸಗಳಿಗೆ ಮರಳುವುದು ಕಷ್ಟಸಾಧ್ಯ.

ಇದರಿಂದ ಈ ವಲಯಕ್ಕೆ ಕಾರ್ಮಿಕರ ಕೊರತೆ ಉಂಟಾಗಲಿದ್ದು, ಉದ್ದಿಮೆಗಳಿಗೆ ತಗಲುವ ಕಾರ್ಮಿಕರ ವೆಚ್ಚ ಹೆಚ್ಚಾಗಲಿದ್ದು, ಇದರಿಂದ ಈ ವಲಯ ತಯಾರಿಸುವ ಉತ್ಪನ್ನಗಳ ಬೆಲೆ ಹೆಚ್ಚಾಗಲಿದ್ದು, ಗ್ರಾಹಕರ ಮೇಲೆ ಬೆಲೆ ಏರಿಕೆಯ ಬರೆ ಬೀಳುವುದು ಗ್ಯಾರಂಟಿ. ಮತ್ತೊಂದು ಸಮಸ್ಯೆ ಎಂದರೆ, ಕಾರ್ಖಾನೆಗಳ ಮಾಲೀಕರು ಈಗಾಗಲೇ ಅನುಭವಿಸಿರುವ ನಷ್ಟವನ್ನು ಸರಿದೂಗಿಸಿಕೊಳ್ಳಲು, ಬೇರೆ ದಾರಿ ತೋಚದೆ ಇದೇ ಕೆಲಸದಲ್ಲಿ ಉಳಿಯುವ ಕಾರ್ಮಿಕರಿಂದ ಕಡಿಮೆ ಸಂಬಳಕ್ಕೆ ಹೆಚ್ಚು ಕೆಲಸ ಮಾಡಿಸಿ ಶೋಷಣೆ ಮಾಡುವ ದಿನಗಳನ್ನು ಶೀಘ್ರದಲ್ಲೇ ನೋಡುತ್ತೇವೆ.

ಶಿಕ್ಷಣ ವಲಯದ ಮೇಲೆ ಉಂಟಾಗುವ ಪರಿಣಾಮ

ನಮ್ಮ ದೇಶದ ಆರ್ಥಿಕ ವ್ಯವಸ್ಥೆಯಲ್ಲಿನ ಬೇಡಿಕೆ ಕುಂಠಿತದಿಂದಾಗಿ ಉದ್ದಿಮೆಗಳು ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುತ್ತಿದ್ದು, ಬೇಡಿಕೆ ಮರಳಲು ಇನ್ನೂ 3 ರಿಂದ 4 ವರ್ಷಗಳು ಬೇಕಾಗಬಹುದು. ಈ ಸಂದರ್ಭದಲ್ಲಿ, ಪ್ರಸ್ತುತ ವರ್ಷದಲ್ಲಿ ಹಾಗೂ ಮುಂದಿನ ಕೆಲವು ವರ್ಷಗಳಲ್ಲಿ ಪದವಿ ಪಡೆದು ಉದ್ಯೋಗದ ಕನಸು ಕಟ್ಟಿಕೊಳ್ಳುವ ವಿದ್ಯಾರ್ಥಿಗಳನ್ನು ನೆನೆಸಿಕೊಂಡರೆ ಅಯ್ಯೋ ಎನಿಸುತ್ತದೆ. ಇವರು ಉದ್ಯೋಗ ಪಡೆದು ಜೀವನದಲ್ಲಿ ನೆಲೆಯೂರುವ ದಿನಗಳು ಮುಂದೆ ಹೋದಷ್ಟು, ಇವರ ಸ್ವಾಭಿಮಾನದ ಜೀವನದ ಕನಸು, ಮದುವೆ ಆಸೆಗಳು ಮುಂದೂಡಲಾಗಿ, ಜೀವನದ ಸಹಜ ಪ್ರಕ್ರಿಯೆಗಳಿಗೆ ಹಾಗು ಹಣಕಾಸಿನ ಸಂಪಾದನೆಗೆ ಅಡ್ಡದಾರಿಯನ್ನು ಹಿಡಿಯಬಹುದಾದ ಸಂದರ್ಭ ಬರಬಹುದು.

ಸರ್ಕಾರ ನಿರ್ವಹಿಸಬೇಕಾದ ಪಾತ್ರ

ಜಾನ್ ಮೇನಾರ್ಡ್ ಕೇನ್ಸ್ ಎಂಬ ಇಂಗ್ಲೆಂಡ್ ದೇಶದ ಶ್ರೇಷ್ಠ ಆರ್ಥಿಕ ತಜ್ಞ ಅವನ The theory of Empolyment, Interest and Money ಹಾಗೂ The Role of the Government ಎನ್ನುವ ಪುಸ್ತಕದಲ್ಲಿ ದೇಶಗಳು ಆರ್ಥಿಕ ಸಂಕಷ್ಟದಲ್ಲಿ ಯಾವ ರೀತಿಯ ಆರ್ಥಿಕ ನೀತಿಗಳನ್ನು ರೂಪಿಸಬೇಕು ಎಂದು ಹೇಳುತ್ತಾ, “ಆರ್ಥಿಕ ದುಸ್ಥಿತಿಯಲ್ಲಿ ಆಳುವ ಸರ್ಕಾರಗಳು, ಯಾವುದಾದರೂ ಮೂಲಗಳಿಂದ ಹಣವನ್ನು ತಂದು ಆರ್ಥಿಕ ವ್ಯವಸ್ಥೆಯ ತಳ ಪದರಕ್ಕೆ (ಕುಟುಂಬಗಳಿಗೆ ಹಾಗು ಕಾರ್ಮಿಕ ಸಮೂಹ) ನೇರ ಹಂಚಬೇಕು.ಇದರಿಂದ ಕಾರ್ಮಿಕರನ್ನು ಅವರವರ ಕೆಲಸಗಳಲ್ಲಿ ಜೀವಂತವಾಗಿಟ್ಟುಕೊಳ್ಳುವುದಲ್ಲದೇ, ಉತ್ಪನ್ನಗಳಿಗೆ ಬೇಡಿಕೆಯನ್ನೂ ಹುಟ್ಟಿಸಬಹುದಾಗಿದ್ದು, ದೊಡ್ಡಮಟ್ಟದ ಆರ್ಥಿಕ ಕುಸಿತದಿಂದ ದೇಶವನ್ನು ರಕ್ಷಿಸಬಹುದು” ಎಂದು ಹೇಳುತ್ತಾನೆ. ಇಂದಿನ ಸಂದರ್ಭದಲ್ಲಿ ಜಾನ್ ಮೇನಾರ್ಡ್ ಕೇನ್ಸ್ ನ ಆರ್ಥಿಕ ಸಿದ್ಧಾಂತವು ಪ್ರಸ್ತುತವೆನಿಸುತ್ತದೆ.

ಆದರೆ ನಮ್ಮ ಸರ್ಕಾರದ ಆರ್ಥಿಕ ಪ್ಯಾಕೇಜ್ ನೋಡಿದಾಗ, ಕಡಿಮೆ ಪ್ರಮಾಣದ ಹಣಕಾಸಿನ ಪ್ಯಾಕೇಜ್ ಆರ್ಥಿಕ ವ್ಯವಸ್ಥೆಯ ಕೆಳಸ್ತರಕ್ಕೆ ಮೀಸಲಿಟ್ಟಿದ್ದು, ದೊಡ್ಡ ಮಟ್ಟದ ಹಣ ಮೇಲಿನ ಸ್ತರಕ್ಕೆ ಮೀಸಲಿಟ್ಟಿದೆ.

ಇದರಿಂದ ಇಂದಿನ ಆರ್ಥಿಕ ಸಮಸ್ಯೆ ಬಗೆಹರಿಯದು ಎಂಬುದು ನನ್ನ ಅನಿಸಿಕೆ. ಇಂದು ನಮಗೆ ಬೇಕಿರುವುದು “BOTTOM TO TOP ECONOMIC APPROACH” ಹೊರತು “TOP TO BOTTOM ECONOMIC APPROACH” ಅಲ್ಲ. ಆಳುವ ಸರ್ಕಾರಗಳು ಲಭ್ಯವಿರುವ ಆರ್ಥಿಕ ಸಿದ್ದಾಂತಗಳನ್ನು ಅಧ್ಯಯಿಸಿ ಸಂದರ್ಭಕ್ಕೆ ಸರಿಯಾದ ಆರ್ಥಿಕ ನೀತಿಗಳನ್ನು ರೂಪಿಸಬೇಕೆಂಬುದು ನನ್ನ ಅನಿಸಿಕೆ.

(ಲೇಖಕರು :ಕ್ರಾಂತಿರಾಜ್ ಒಡೆಯರ್ ಎಂ
ಸಹಾಯಕ ಪ್ರಾಧ್ಯಾಪಕರು
ವ್ಯವಹಾರ ನಿರ್ವಹಣಾ ವಿಭಾಗ
ಸೇಪಿಯೆಂಟ್ ಕಾಲೇಜು
ಮೈಸೂರು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ

Published

on

ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.

ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.

ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.

ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.

ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು‌.”

  • ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
  • ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

Published

on

ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ ಶಿವಕುಮಾರ್ ಅವರು ಇಮ್ಮಡಿ ಪುಲ್ಲಕೇಶಿ ಸಾಮ್ರಾಟ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ನಂತರ ಜಿಲ್ಲಾಧ್ಯಕ್ಷರಾದ ಶಿವರತನ್ ಮಾತನಾಡಿ ,ನಾಡಿನ ಇತಿಹಾಸ ಪುಟಗಳಲ್ಲಿ ಕಣ್ಮರೆಯಾಗಿರುವ ಕನ್ನಡದ ಶ್ರೇಷ್ಠ ಸಾಮ್ರಾಟರಲ್ಲಿ ಇಮ್ಮಡಿ ಪುಲಿಕೇಶಿ ಅಗ್ರ ಸ್ಥಾನ ಪಡೆದಿದ್ದಾರೆ. ಇಂತಹ ಮಹಾನ್ ಸಾಮ್ರಾಟರನ್ನ ನೆನಪಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರು.

ಭಾರತೀಯ ನೌಕಾಪಡೆಯ ಪಿತಾಮಹ ಎಂದೇ ಕರೆಯಲಾಗುವ ಇಮ್ಮಡಿ ಪುಲಿಕೇಶಿ ಸಾಮ್ರಾಟರ ಜನ್ಮದಿನದ ಪ್ರಯುಕ್ತ ಭಾರತೀಯ ನೌಕಾಪಡೆ ದಿನಾಚರಣೆಯೆoದು ಆಚರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.

ಬೇರೆಲ್ಲ ಜಯಂತಿಗಳನ್ನು ಆಚರಿಸುವ ಸರ್ಕಾರಗಳು ಇಮ್ಮಡಿ ಪುಲಿಕೇಶಿ ಜಯಂತಿಯನ್ನು ಕಡ್ಡಾಯವಾಗಿ ಎಲ್ಲೆಡೆ ಆಚರಿಸಲು ಆಡಳಿತಾತ್ಮಕವಾಗಿ ಜಾರಿಗೊಳಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಮಹಿಳಾ ಅಧ್ಯಕ್ಷೆ ಶುಭಮಂಗಳ ಅವರು ಸಿಹಿ ವಿತರಿಸಿದರು. ಕನ್ನಡ ಚಳವಳಿಯ ಹಿರಿಯ ಹೋರಾಟಗಾರರು , ಕನ್ನಡ ಚಳವಳಿಯ ಮಾಜಿ ಅಧ್ಯಕ್ಷರಾದ ಬಂಕಾಪುರ ಚನ್ನಬಸಪ್ಪ, ದಾ.ಹ. ಶಿವಕುಮಾರ್. ಈಶ್ವರ್. ಪ್ರಕಾಶ್. ವಾರ್ತಾ ಇಲಾಖೆ ನಿವೃತ್ತ ಬಿ.ಎಸ್. ಬಸವರಾಜ್ ಹಾಗೂ ಹಲವಾರು ಕನ್ನಡಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೆರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಯನ್ನು ಉಪನಿರ್ದೇಶಕರು ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 24 ರೊಳಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಕಟ್ಟಡ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂ.ಸಿ.ಸಿ, ‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ:08192-264056 ಸಲ್ಲಿಸಬೇಕೆಂದು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending