ದಿನದ ಸುದ್ದಿ
“ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಮ್ಯಾಸ ಬೇಡರ ಅಭಿವೃಧ್ದಿ ನಿಗಮ” ಸ್ಥಾಪನೆಗೆ ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಮನವಿ
ಸುದ್ದಿದಿನ, ದಾವಣಗೆರೆ : ಮ್ಯಾಸ ಬೇಡ ಬುಡಕಟ್ಟು ಜನರ ಅಭಿವೃದ್ದಿಗಾಗಿ “ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಮ್ಯಾಸ ಬೇಡರ ಅಭಿವೃಧ್ದಿ ನಿಗಮ” ಸ್ಥಾಪನೆ ಮಾಡಲು ಕೋರಿ ಸೋಮವಾರ ಮ್ಯಾಸ ಬೇಡ (ಮ್ಯಾಸ ನಾಯಕ) ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಲಾಯಿತು.
ಮನವಿಯು ಈ ಕೆಳಕಂಡ ಅಂಶಗಳನ್ನು ಒಳಗೊಂಡಿದೆ
ಕರ್ನಾಟಕ ಆಂದ್ರ ಗಡಿ ಜಿಲ್ಲೆಗಳಾದ ಬಳ್ಳಾರಿ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ನಾಯಕ ಪಂಗಡದವರಾದ ಮ್ಯಾಸ ನಾಯಕ/ಮ್ಯಾಸ ಬೇಡರು ನೆಲೆಸಿರುತ್ತೇವೆ. ನಮ್ಮ ಬುಡಕಟ್ಟಿನಲ್ಲಿ ಮಂದ ನಾಯಕ ಮತ್ತು ಮಲ್ಲ ನಾಯಕ ಎಂಬ ಎರಡು ಗುಂಪುಗಳಿರುತ್ತವೆ. ಮ್ಯಾಸ ಬೇಡರ ಭಾಷೆ ತೆಲುಗು ಭಾಷೆಯ ಉಪ ಭಾಷೆ. ವಿದ್ವಾಂಸರು ಇದನ್ನು “ಮ್ಯಾಸ ಭಾಷೆ “ಎಂದೇ ಕರೆದಿರುತ್ತಾರೆ.
ನಾವು ಮೂಲತ: ಗೊಂಡವಾನ ಪ್ರದೇಶದ ಬುಡಕಟ್ಟುಗಳಲ್ಲಿ ಒಂದಾದ ‘ಭಿಲ್’ ಬುಡಕಟ್ಟು ಜನಾಂಗದಿಂದ ಬೇರ್ಪಟ್ಟ ‘ನಾಯ್ಕಡ’ ಬುಡಕಟ್ಟಿಗೆ ಸೇರಿರುತ್ತೇವೆ. ಆಂದ್ರದ ಶ್ರೀಶೈಲದ ಮೂಲಕ ಕರ್ನಾಟಕ ಆಂದ್ರ ಗಡಿಗೆ ಹೊಂದಿಕೊಂಡಂತೆ ಬಂದು ನೆಲೆಸಿರುತ್ತೇವೆ. ನಾಯ್ಕಡ ನಾಯಕ ಪಂಗಡದವರಾದ ಮ್ಯಾಸ ನಾಯಕ / ಮ್ಯಾಸ ಬೇಡ ಬುಡಕಟ್ಟು ಜನರು ಆದ ನಾವು ಮೂರ್ತಿ ಪೂಜಕರು ಅಲ್ಲ. ‘ಉದಿ-ಪದಿ’ ಎಂಬ ಬುಡಕಟ್ಟು ಧಾರ್ಮಿಕ ಸಂಪ್ರದಾಯವನ್ನು ಪಾಲಿಸುತ್ತೇವೆ.
‘ಉದಿ’ ಎಂದರೆ ಪೆಟ್ಟಿಗೆ, ಬುಟ್ಟಿಗಳಲ್ಲಿ ಇಟ್ಟಿರುವ ಪವಿತ್ರ ವಸ್ತುಗಳ ಪುಟ್ಟಿ ಅಥವಾ ಪೆಟ್ಟಿಗೆ ಇವುಗಳನ್ನೇ ದೇವರೆಂದು ನಾವು ಪೂಜಿಸುವುದರಿಂದ ಇವುಗಳನ್ನು ಪೆಟ್ಟಿಗೆ ದೇವರುಗಳೆಂದು ಕರೆಯುತ್ತೇವೆ.. ಬಿಲ್ಲು, ಕತ್ತಿ, ಕೋಲು ಮುಂತಾದ ಆಯುಧಗಳನ್ನು ಸಹ ಪೂಜಿಸುತ್ತೇವೆ. ಈ ಪೆಟ್ಟಿಗೆ ಮತ್ತು ಆಯುಧಗಳನ್ನು ನಮ್ಮ ಹಟ್ಟಿಗಳಲ್ಲಿ ಇರುವ ಗುಬ್ಬ (ಹುಲ್ಲಿನ ಗುಡಿಸಲು) ಗಳಲ್ಲಿ ಇಟ್ಟು ದೇವರೆಂದು ಪೂಜೆಮಾಡುವವರನ್ನು ‘ಉದಿ’ ಪೂಜಾರಿ ಎಂದು ಕರೆಯುತ್ತೇವೆ.
ದೇವರ ಎತ್ತುಗಳನ್ನು ಸಾಕುವುದಕ್ಕಾಗಿ ನೇಮಿಸಿರುವವರನ್ನು ‘ಪದಿ ಪೂಜಾರಿ’ ಅಥವಾ ‘ಕಿಲಾರಿ’ ಎನ್ನುತ್ತೇವೆ. ಈ ದೇವರ ಎತ್ತುಗಳು ನಮ್ಮ ಪೂರ್ವಿಕರ ಆತ್ಮವನ್ನು ಹೊಂದಿರುವ ಪ್ರಾಣಿಗಳೆಂದು ಪೂಜಿಸುತ್ತೇವೆ. ನಾವು ಪ್ರಾಣಿ ಪೂಜಕರೆ ಹೊರತು, ಮೂರ್ತಿ ಪೂಜಕರಲ್ಲ ಮತ್ತು ವೈಧಿಕ ಸಂಪ್ರದಾಯಗಳನ್ನು ಪಾಲಿಸುವವರಲ್ಲ. ಮ್ಯಾಸ ಬೇಡರ ಉಡುಪು, ಬಿಳಿ ಚಲ್ಲಣ, ಬಿಳಿ ರುಮಾಲು, ಹೆಗಲ ಮೇಲೆ ಕರಿ ಕಂಬಳಿ ಕೈಯಲ್ಲಿ ಕೋಲು. ನಾವು ‘ಮ್ಯಾಸರಟ್ಟಿ’ ಎಂಬ ಪ್ರತ್ಯೇಕ ಹಟ್ಟಿಗಳಲ್ಲಿ ಮುಖ್ಯವಾಹಿನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತೇವೆ. ನಾವು ತೆಲುಗಿನ ಉಪ ಭಾಷೆಯನ್ನು ಮಾತನಾಡುತ್ತೇವೆ.
ನಾವು ಕೋಳಿ ಮಾಂಸವನ್ನು ತಿನ್ನುವುದಿಲ್ಲ ಮತ್ತು ಕೋಣದ ಮಾಂಸವನ್ನು ಸಮಾನ್ಯವಾಗಿ ಮುಖ್ಯ ಮಾಂಸ ಭೋಜನವಾಗಿ ಉಪಯೋಗಿಸುತ್ತೇವೆ. ನಾವು ಶಟ್ಲು ದ್ಯಾವರಿ, ದೂಲಿಹಬ್ಬ, ಗುಗ್ಗರಿ ಹಬ್ಬ ಮುಂತಾದ ನಮ್ಮದೇ ಹಬ್ಬಗಳನ್ನು ಆಚರಿಸುತ್ತೇವೆ. ದೇವರ ಕುಣಿತ, ಮಣೇವು ಕಣಿತ, ಪೋತಪ್ಪಗಳ ಕುಣಿತ ಮುಂತಾದವು ನಮ್ಮ ಬುಡಕಟ್ಟು ನೃತ್ಯಗಳಾಗಿವೆ. ಪೋತಪ್ಪಗಳು ಎಂದರೆ ದಡ್ಡಲು ಮಾರಮ್ಮ ಮತ್ತು ಗೌರಸಮುದ್ರ ಮಾರಮ್ಮನ ಮತ್ತು ಮಾದಲಿಂಗಪ್ಪನ ಪೂಜಿಸುವ ಬುಟುಗಲರು ಬೆಡಗಿನವರು ಮೇಕೆಯ (ಆಡು) ಮರಿಯ ಬಿಸಿ ರಕ್ತವನ್ನು ಕುಡಿಯುತ್ತಾರೆ ಮತ್ತು ಹಸಿ ಮಾಂಸವನ್ನು ತಿನ್ನುತಾರೆ.
ಚಾಟಿಯಿಂದ ಮೈಯಿಗೆ ಹೊಡೆದು ಕೊಳ್ಳುತ್ತಾ ಕುಪ್ಪಳಿಸುತ್ತಾ ಮಾಡುವ ಸಹಾಸ ಭಯಾನಕವಾಗಿರುತ್ತವೆ. ಇವೆಲ್ಲಾ ಮ್ಯಾಸ ಬೇಡರ ವಿಶೇಷ ಬುಡಕಟ್ಟು ಅಚಾರ ಮತ್ತು ಸಂಪ್ರದಾಯಗಳಾಗಿವೆ. ಚಿತ್ರದುರ್ಗ ಪಾಳೆಯಗಾರರು ನಮ್ಮ ಮ್ಯಾಸ ಬೇಡ ಬುಡಕಟ್ಟಿನ ಕಾಮಗೇತಿ ಬೆಡಗಿಗೆ ಸೇರಿದ ವೀರರಾಗಿರುತ್ತಾರೆ. ರಾಜ್ಯದ ಬಳ್ಳಾರಿ ಜಿಲ್ಲೆ, ಚಿತ್ರದುರ್ಗ ಜಿಲ್ಲೆ ಮತ್ತು ಜಗಳೂರು ತಾಲ್ಲೂಕಿನಲ್ಲಿ ನಮ್ಮ ನಾಯಕ ಪಂಗಡ ಮ್ಯಾಸ ಬೇಡರು ಜನ ಸಂಖ್ಯೆಯಲ್ಲಿ ಬಹುಸಂಖ್ಯಾತರಾಗಿರುತ್ತೇವೆ.
ಮ್ಯಾಸ ಬೇಡ ಸಮುದಾಯದ ಜನರು ಆರ್ಥಿಕ, ಸಮಾಜಿಕ, ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿದ್ದೇವೆ. ಬುಡಕಟ್ಟು ಹಿನ್ನೆಲೆಯನ್ನು ಹೊಂದಿರುವ ಮ್ಯಾಸ ಬೇಡ ಸಮುದಾಯದ ಜನರನ್ನು ಈಗಾಗಲೇ ನಾಯಕ ವಾಲ್ಮೀಕಿ ಎಂಬ ಹೆಸರಿನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿ ಮೀಸಲಾತಿಯನ್ನು ನೀಡಿ 45ವರ್ಷಗಳೇ ಗತಿಸಿದರು ಸಹ ಈ ಬುಡಕಟ್ಟು ಜನರು ಮುಖ್ಯವಾಹಿನಿಗೆ ಬರಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಮ್ಯಾಸ ಬೇಡ ಸಮುದಾಯವು ನೆಲೆಸಿರುವ ಹಟ್ಟಿಗಳು ಇದುವರೆಗೂ ಕಂದಾಯ ಗ್ರಾಮಗಳು ಆಗಿರುವುದಿಲ್ಲ. ನಮ್ಮ ಬುಡಕಟ್ಟು ಜನಾಂಗದ ಸಾಂಸ್ಕೃತಿಕ ವೀರರ ಹೆಸರಲ್ಲಿ ಮತ್ತು ಮ್ಯಾಸರಹಟ್ಟಿ ಎಂಬ ಹೆಸರಿನಲ್ಲಿ ಊರುಗಳು ಇರುತ್ತವೆ. ನಮ್ಮ ಬುಡಕಟ್ಟು ಸಮುದಾಯದ ಧಾರ್ಮಿಕ ನಂಬಿಕೆಯ ಪ್ರತೀಕವಾದ ದೇವರು ಎತ್ತುಗಳು ಇವೆ.
ಸುಮಾರು ಗುಡಿಕಟ್ಟೆಯ ದೇವರ ಎತ್ತುಗಳು ದಶಕಗಳಿಂದ ಮೇವು ನೀರಿಲ್ಲದೆ ಸತ್ತುಹೋಗಿರುತ್ತವೆ. ಬಯಲು ಸಿಮೇಯಲ್ಲಿ ಇರುವುದರಿಂದ ಇವುಗಳನ್ನು ಉಳಿಸಿಕೊಳ್ಳಲು ಕಿಲಾರಿಗಳು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹಾಲವಾರು ಬಾರಿ ಮಾದ್ಯಮಗಳಲ್ಲಿಯು ವರದಿಯಾಗಿರುತ್ತದೆ. ನಾವು ಕೂಡ ಹಾಲವಾರು ಬಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಹ ಸಲ್ಲಿಸಲಾಗಿದೆ ಆದರೆ ಯಾವುದೇ ರೀತಿ ಕ್ರಮಕೈಗೊಂಡಿರುವುದಿಲ್ಲ.
ಸರ್ಕಾರದಿಂದ ಸಿಗಬೇಕಾದ ಮೂಲಭೂತ ಸೌಲಭ್ಯಗಳು ಮತ್ತು ಅನುಧಾನವು ತಳವಾರ ಪರಿವಾರ ಜಾತಿಯವರ ಪಾಲಗುತ್ತಿದೆ. ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವುದರಿಂದ ನಿಧಾನವಾಗಿ ನಮ್ಮ ಬುಡಕಟ್ಟು ಸಂಸ್ಕೃತಿಯು ನಾಶವಾಗುವ ಹಂತಕ್ಕೆ ತಲುಪಿರುತ್ತದೆ. ಈ ಸಮುದಾಯದ ಹಟ್ಟಿಗಳು ಮತ್ತು ಜನರು ಮೂಲ ಸೌಲಭ್ಯಗಳಿಲ್ಲದೆ ಸಂಪೂರ್ಣವಾಗಿ ಅಭಿವೃದ್ದಿಯಿಂದ ವಂಚಿತವಾಗಿದ್ದೇವೆ.
ನಮ್ಮ ಮ್ಯಾಸ ಬೇಡ ಬುಡಕಟ್ಟಿಗೆ ಸಂಬಂಧವಿರದ ತಳವಾರ ಪರಿವಾರ ಸಮುದಾಯವು ಸಹ ನಾಯಕ ವಾಲ್ಮೀಕಿ ಹೆಸರಲ್ಲಿ ಮೀಸಲಾತಿಯನ್ನು ಪಡೆಯುವುದರಿಂದ ನಮಗೆ ತುಂಬಾ ಅನ್ಯಾಯವಾಗಿದೆ. ಶ್ರೀ ಮಹರ್ಷಿ ವಾಲ್ಮೀಕಿ ಮಠ ರಾಜನಹಳ್ಳಿಯಿಂದಲೂ ಸಹ ಸಾಕಷ್ಟು ಅನ್ಯಾಯವಾಗಿರುತ್ತದೆ. ವಾಲ್ಮೀಕಿ ಮಠವನ್ನು ಮ್ಯಾಸ ನಾಯಕ ಬುಡಕಟ್ಟಿಗೆ ಸೇರಿದ ಮಾಜಿ ಮಂತ್ರಿಗಳಾದ ದಿ.ತಿಪ್ಪೇಸ್ವಾಮಿ ಚಳ್ಳಕೆರೆಯವರು ಮತ್ತು ಇತರೆ ಮ್ಯಾಸ ನಾಯಕ ಮುಖಂಡರು ಸ್ಥಾಪನೆ ಮಾಡಿರುತ್ತಾರೆ.
ಆದರೆ 2014 ರಲ್ಲಿ ಬುಡಕಟ್ಟು ಸಂಶೋಧನ ಸಂಸ್ಥೆ ಮೈಸೂರು ರವರು ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ವಾಲ್ಮೀಕಿ ಮಠವನ್ನು ತಳವಾರ ಪರಿವಾರದವರು ಸ್ಥಾಪನೆ ಮಾಡಿಕೊಂಡಿದ್ದಾರೆ ಎಂದು ಬರೆಯಿಸಿ ಮ್ಯಾಸ ನಾಯಕರಿಗೆ ವಂಚನೆ ಮಾಡಿರುತ್ತಾರೆ. ಈಗಾಗಲೇ ಇರುವ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದಿಂದ ನಮಗೆ ಯಾವುದೇ ರೀತಿಯ ಅನುಕೂಲವಿಲ್ಲ.
ಆದ್ದರಿಂದ ಕರ್ನಾಟಕ ಆಂದ್ರ ಗಡಿ ಭಾಗದಲ್ಲಿರುವ ನಾಯಕ ಪಂಗಡದ ಮ್ಯಾಸ ಬೇಡ ಬುಡಕಟ್ಟು ಜನಾಂಗದ ಅಳಿವು ಉಳಿವು ನಿಮ್ಮ ಕೈಯಲ್ಲಿ ಇದೆ. ರಾಜಕೀಯ ಮುಖಂಡರ ಇಚ್ಛಾಶಕ್ತಿಯ ಕೊರೆತೆಯಿಂದಾಗಿ ಇಂದು ಈ ಸಮುದಾಯ ಜ್ವಾಲಂತ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ.
ಮುಗ್ದ ಸಾಮಾನ್ಯ ಮ್ಯಾಸ ಬೇಡ ಬುಡಕಟ್ಟು ಜನರ ಉಳಿವಿಗಾಗಿ ಮತ್ತು ಅಭಿವೃದ್ದಿಗಾಗಿ ತಮ್ಮ ಅಧಿಕಾರ ಅವಧಿಯಲ್ಲಿ “ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಮ್ಯಾಸ ಬೇಡರ ಅಭಿವೃಧ್ದಿ ನಿಗಮ” ಸ್ಥಾಪನೆ ಮಾಡಿ ಪ್ರತ್ಯೇಕ ಅನುದಾನವನ್ನು ಮೀಸಲಿಡುವುದರ ಮೂಲಕ ಸಂವಿಧಾನ ಬದ್ದ ನಮ್ಮ ಹಕ್ಕುಗಳು ಮತ್ತು ಸೌಲಭ್ಯಗಳು ನಮಗೆ ಸಿಗುವಂತೆ ಮಾಡಿ ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಡಾ.ಗೆರೆಗಲ್ ಪಾಪಯ್ಯ, ಕಾರ್ಯದರ್ಶಿ ದೊಡ್ಡಮನಿ ಪ್ರಸಾದ್, ಡಾ. ಓಬಳೇಶ್, ಮಂಜುನಾಥ್ ಗೋಣಿವಾಡ, ಪ್ರಕಾಶ್ ಹಾಗೂ ಸದಸ್ಯರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಹಿಳೆಯರ ಉಚಿತ ಪ್ರಯಾಣದ ನಡುವೆ ನಿಗಮಗಳಿಗೆ ಹಣಕಾಸಿನ ಸಂಕಷ್ಟ; ವೇತನ, ಡೀಸೆಲ್ ಖರೀದಿಗೂ ಎದುರಾಗುತ್ತಿದೆ ಒತ್ತಡ
ಸುದ್ದಿದಿನ,ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸುವ ಮೂಲಕ ರಾಜ್ಯದ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾದ ಶಕ್ತಿ ಯೋಜನೆಯ ಮತ್ತೊಂದು ಮುಖ ಇದೀಗ ಚರ್ಚೆಗೆ ಬಂದಿದೆ. ಯೋಜನೆಯಡಿ ಮಹಿಳಾ ಪ್ರಯಾಣಿಕರಿಗೆ ನೀಡಿರುವ ಉಚಿತ ಟಿಕೆಟ್ಗಳ ಮೊತ್ತದಲ್ಲಿ ಸರ್ಕಾರವು ನಾಲ್ಕು ಸಾರಿಗೆ ನಿಗಮಗಳಿಗೆ ₹5,651.24 ಕೋಟಿ ಬಾಕಿ ಉಳಿಸಿಕೊಂಡಿರುವುದು ನಿಗಮಗಳ ಆರ್ಥಿಕ ನಿರ್ವಹಣೆಗೆ ಸವಾಲಾಗಿ ಪರಿಣಮಿಸಿದೆ. ಬಾಕಿ ಮೊತ್ತದ ಮರುಪಾವತಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ವೇತನ, ಡೀಸೆಲ್, ಬಿಡಿಭಾಗಗಳ ಖರೀದಿ ಸೇರಿದಂತೆ ದೈನಂದಿನ ವೆಚ್ಚಗಳನ್ನು ನಿರ್ವಹಿಸುವ ಒತ್ತಡ ಹೆಚ್ಚಾಗಿದೆ.
ಶಕ್ತಿ ಯೋಜನೆಗೆ ಮೂರು ವರ್ಷಗಳ ಪಯಣ
ಕಾಂಗ್ರೆಸ್ ಸರ್ಕಾರ 2023ರ ಜೂನ್ 11ರಂದು ಶಕ್ತಿ ಯೋಜನೆಯನ್ನು ಜಾರಿಗೆ ತಂದಿತ್ತು. ರಾಜ್ಯದ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿತ್ತು. ಯೋಜನೆ ಜಾರಿಯಾದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಸಾರಿಗೆ ನಿಗಮಗಳ ಮೇಲೆ ಸೇವಾ ಹೊರೆ ಕೂಡ ವಿಸ್ತರಿಸಿದೆ.
2023-24ರಿಂದ 2026ರ ಜುಲೈ ಅಂತ್ಯದವರೆಗೆ ನಾಲ್ಕು ಸಾರಿಗೆ ನಿಗಮಗಳ ಬಸ್ಗಳಲ್ಲಿ ಮಹಿಳೆಯರು 797.16 ಕೋಟಿ ಪ್ರಯಾಣ ಕೈಗೊಂಡಿದ್ದಾರೆ. ಈ ಪ್ರಯಾಣಗಳಿಗೆ ನೀಡಲಾದ ಉಚಿತ ಟಿಕೆಟ್ಗಳ ಒಟ್ಟು ಮೌಲ್ಯ ₹20,955.99 ಕೋಟಿ ಎಂದು ಅಂಕಿ-ಅಂಶಗಳು ತಿಳಿಸುತ್ತವೆ.
₹15,304 ಕೋಟಿ ಪಾವತಿ, ಇನ್ನೂ ₹5,651 ಕೋಟಿ ಬಾಕಿ
ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್ ಮೊತ್ತವನ್ನು ಸರ್ಕಾರ ಸಾರಿಗೆ ನಿಗಮಗಳಿಗೆ ಮರುಪಾವತಿ ಮಾಡಬೇಕಿದೆ. ಇದುವರೆಗೆ ₹15,304.76 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ ಇನ್ನೂ ₹5,651.24 ಕೋಟಿ ಪಾವತಿಯಾಗಬೇಕಿದೆ.
ಈ ಬಾಕಿ ಮೊತ್ತದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಪಾಲುದಾರರಾಗಿವೆ.
ನಿಗಮಗಳಿಗೆ ಆರ್ಥಿಕ ಒತ್ತಡ ಏಕೆ?
ಈಗಾಗಲೇ ಹಲವು ವರ್ಷಗಳಿಂದ ಸಾರಿಗೆ ನಿಗಮಗಳು ನಷ್ಟದ ಒತ್ತಡದಲ್ಲಿವೆ. ಶಕ್ತಿ ಯೋಜನೆಯ ಟಿಕೆಟ್ ಮೊತ್ತ ಸಕಾಲದಲ್ಲಿ ಪಾವತಿಯಾಗದಿರುವುದು ನಗದು ಹರಿವಿನ ಮೇಲೆ ಪರಿಣಾಮ ಬೀರುತ್ತಿದೆ. ಸಿಬ್ಬಂದಿಯ ವೇತನ, ಡೀಸೆಲ್ ಖರೀದಿ, ಬಸ್ಗಳ ನಿರ್ವಹಣೆ, ಬಿಡಿಭಾಗಗಳ ಪೂರೈಕೆ ಹಾಗೂ ನಿವೃತ್ತ ನೌಕರರ ಬಾಕಿ ಪಾವತಿ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿಗಮಗಳು ನಿರ್ವಹಿಸಬೇಕಿದೆ.
₹18,459 ಕೋಟಿ ನೆರವು ನೀಡಿದರೂ ನಷ್ಟದ ಹೊರೆ
ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರವು ವಿವಿಧ ಕಾರಣಗಳಿಗಾಗಿ ಸಾರಿಗೆ ನಿಗಮಗಳಿಗೆ ₹18,459.37 ಕೋಟಿ ನೆರವು ನೀಡಿದೆ. ಶಕ್ತಿ ಯೋಜನೆ, ವಿದ್ಯಾರ್ಥಿ ಪಾಸ್ಗಳ ಸಹಾಯಧನ, ಸಾಲ ಮತ್ತು ಬಡ್ಡಿ ಮರುಪಾವತಿ, ಬಸ್ ಖರೀದಿ, ವೇತನ, ಡೀಸೆಲ್, ಪಿಎಫ್ ಹಾಗೂ ರಜೆ ನಗದೀಕರಣ ಸೇರಿದಂತೆ ಹಲವು ವೆಚ್ಚಗಳಿಗೆ ಈ ನೆರವು ಬಳಕೆಯಾಗಿದೆ.
ಆದರೂ ನಿಗಮಗಳ ಆರ್ಥಿಕ ಸಂಕಷ್ಟ ಸಂಪೂರ್ಣವಾಗಿ ದೂರವಾಗಿಲ್ಲ. ಡೀಸೆಲ್ ಬಸ್ಗಳ ಜತೆಗೆ ಎಲೆಕ್ಟ್ರಿಕ್ ಬಸ್ಗಳ ಕಾರ್ಯಾಚರಣೆಯಿಂದಲೂ ನಿರೀಕ್ಷಿತ ಮಟ್ಟದ ಆದಾಯ ಬರುತ್ತಿಲ್ಲ ಎಂಬುದು ಮತ್ತೊಂದು ಸವಾಲಾಗಿದೆ.
ಸಕಾಲಿಕ ಪಾವತಿಯೇ ಪರಿಹಾರವೇ?
ಶಕ್ತಿ ಯೋಜನೆಯ ಸಾಮಾಜಿಕ ಮಹತ್ವವನ್ನು ಪ್ರಶ್ನಿಸುವುದಕ್ಕಿಂತ, ಅದರ ಆರ್ಥಿಕ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಮುಖ್ಯವಾಗಿದೆ. ಸರ್ಕಾರದಿಂದ ಬಾಕಿ ಮೊತ್ತ ಸಕಾಲದಲ್ಲಿ ಬಿಡುಗಡೆಯಾದರೆ ನಿಗಮಗಳ ನಗದು ಹರಿವು ಸುಧಾರಿಸಿ, ವೇತನ, ಇಂಧನ ಮತ್ತು ನಿರ್ವಹಣಾ ವೆಚ್ಚಗಳನ್ನು ನಿರ್ವಹಿಸಲು ಹೆಚ್ಚಿನ ಬಲ ದೊರೆಯಬಹುದು.

ದಿನದ ಸುದ್ದಿ
ಭದ್ರಾ ಜಲಾಶಯ: ಮಲೆನಾಡಿನ ಮಳೆಯಿಂದ ಬಯಲುಸೀಮೆಯ ಹಸಿರಿನವರೆಗೆ… ಲಕ್ಷಾಂತರ ಜನರ ಬದುಕಿನ ಜಲನಾಡಿ!
ಸುದ್ದಿದಿನ,ಶಿವಮೊಗ್ಗ: ಭದ್ರಾ ಜಲಾಶಯ ಎಂದರೆ ಕೇವಲ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಅಣೆಕಟ್ಟಲ್ಲ. ಪಶ್ಚಿಮಘಟ್ಟದ ಮಳೆಯನ್ನು ಮಧ್ಯ ಕರ್ನಾಟಕದ ಬರಡು ಭೂಮಿಗೆ ಕೊಂಡೊಯ್ಯುವ ಜೀವನಾಡಿ. ಮಲೆನಾಡಿನ ನದಿಯಿಂದ ಆರಂಭವಾಗುವ ಭದ್ರೆಯ ಪಯಣವು ರೈತರ ಕೃಷಿ, ಜನರ ಕುಡಿಯುವ ನೀರು, ಸ್ಥಳೀಯ ಆರ್ಥಿಕತೆ, ವಿದ್ಯುತ್ ಉತ್ಪಾದನೆ ಹಾಗೂ ಪರಿಸರದೊಂದಿಗೆ ನೇರ ಸಂಬಂಧ ಹೊಂದಿದೆ. ಜಲಾಶಯ ತುಂಬಿದರೆ ಹಲವು ಜಿಲ್ಲೆಗಳ ರೈತರ ಮುಖದಲ್ಲಿ ಮಂದಹಾಸ ಮೂಡಿದರೆ, ನೀರಿನ ಕೊರತೆ ಎದುರಾದಾಗ ಇದೇ ಪ್ರದೇಶಗಳಲ್ಲಿ ಆತಂಕ ಹೆಚ್ಚುತ್ತದೆ.
http://Visit : www.suddidina.com
ಪಶ್ಚಿಮಘಟ್ಟದಿಂದ ಬಯಲುಸೀಮೆಯವರೆಗೆ ಭದ್ರೆಯ ಪಯಣ
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ–ವರಾಹ ಪರ್ವತ ಶ್ರೇಣಿಗಳ ಗಂಗಾಮೂಲದಲ್ಲಿ ಹುಟ್ಟುವ ಭದ್ರಾ ನದಿ ಕಳಸ, ಕೊಪ್ಪ, ನರಸಿಂಹರಾಜಪುರ, ತರೀಕೆರೆ ಹಾಗೂ ಭದ್ರಾವತಿ ತಾಲೂಕುಗಳಲ್ಲಿ ಹರಿದು ಕೂಡಲಿ ಬಳಿ ತುಂಗಾ ನದಿಯನ್ನು ಸೇರುತ್ತದೆ. ಬಳಿಕ ತುಂಗಾಭದ್ರೆಯಾಗಿ ಮುಂದುವರಿದು ಕೃಷ್ಣಾ ನದಿಯನ್ನು ಸೇರುತ್ತದೆ.
ತರೀಕೆರೆ ತಾಲೂಕಿನ ಲಕ್ಕವಳ್ಳಿ ಬಳಿ ನಿರ್ಮಿಸಲಾಗಿರುವ ಭದ್ರಾ ಜಲಾಶಯ 1,708 ಮೀಟರ್ ಉದ್ದ ಹಾಗೂ 59.14 ಮೀಟರ್ ಎತ್ತರ ಹೊಂದಿದೆ. ಇದರ ಒಟ್ಟು ಸಂಗ್ರಹ ಸಾಮರ್ಥ್ಯ 71.50 ಟಿಎಂಸಿ. 1,968.40 ಚದರ ಕಿಲೋಮೀಟರ್ ಜಲಾನಯನ ಪ್ರದೇಶ ಹೊಂದಿರುವ ಈ ಯೋಜನೆಗೆ ಸ್ವಾತಂತ್ರ್ಯಾನಂತರ 1947ರಲ್ಲಿ ಚಾಲನೆ ದೊರೆತಿದ್ದು, ಅಣೆಕಟ್ಟು ಕಾಮಗಾರಿ 1959ರಲ್ಲಿ ಹಾಗೂ ನಾಲೆಗಳ ಕಾಮಗಾರಿ 1966ರಲ್ಲಿ ಪೂರ್ಣಗೊಂಡಿತು.
ಒಣಭೂಮಿಗೆ ಹಸಿರು ಹೊದಿಸಿದ ನೀರು
ಭದ್ರಾ ನೀರಾವರಿ ಯೋಜನೆಯು ಮಧ್ಯ ಕರ್ನಾಟಕದ ಕೃಷಿಯ ಚಿತ್ರಣವನ್ನೇ ಬದಲಿಸಿದೆ. ಎಡದಂಡೆ ನಾಲೆ 77.24 ಕಿ.ಮೀ. ಹರಿದು ಸುಮಾರು 8,300 ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಿದರೆ, ಬಲದಂಡೆ ನಾಲೆ 366.90 ಕಿ.ಮೀ. ಉದ್ದಕ್ಕೆ ಹರಿದು ಸುಮಾರು ಒಂದು ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತದೆ.
ಒಂದು ಕಾಲದಲ್ಲಿ ಭತ್ತ ಮತ್ತು ಕಬ್ಬು ಪ್ರಧಾನವಾಗಿದ್ದ ಪ್ರದೇಶಗಳಲ್ಲಿ ಇದೀಗ ಅಡಕೆ ಸೇರಿದಂತೆ ವಿವಿಧ ವಾಣಿಜ್ಯ ಬೆಳೆಗಳ ವಿಸ್ತರಣೆ ಕಂಡುಬಂದಿದೆ. ಹೀಗಾಗಿ ಭದ್ರಾ ನೀರು ಕೃಷಿ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದೆ.
ಕುಡಿಯುವ ನೀರಿಗೂ ಭದ್ರೆಯೇ ಆಸರೆ
ಮಧ್ಯ ಕರ್ನಾಟಕದ ಹಲವು ನಗರಗಳು, ಪಟ್ಟಣಗಳು ಹಾಗೂ ಸಾವಿರಾರು ಹಳ್ಳಿಗಳ ಕುಡಿಯುವ ನೀರಿನ ವ್ಯವಸ್ಥೆಯಲ್ಲೂ ಭದ್ರಾ ಜಲಾಶಯ ಪ್ರಮುಖ ಪಾತ್ರ ವಹಿಸುತ್ತದೆ. ಜಲಾಶಯದಲ್ಲಿ ಕುಡಿಯುವ ನೀರಿಗಾಗಿ 8.50 ಟಿಎಂಸಿ ನೀರನ್ನು ಮೀಸಲಿಡಲಾಗಿದೆ. ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ, ವಿಜಯನಗರ, ಬಳ್ಳಾರಿ ಸೇರಿದಂತೆ ಹಲವು ಪ್ರದೇಶಗಳ ಜನಜೀವನಕ್ಕೆ ಈ ನೀರು ಆಸರೆಯಾಗಿದೆ.
ಹೂಳು, ಮೇಲ್ದಂಡೆ ಯೋಜನೆ: ಭವಿಷ್ಯದ ಸವಾಲು
ಜಲಾಶಯದ ಸಂಗ್ರಹ ಸಾಮರ್ಥ್ಯದ ಮೇಲೆ ಹೂಳು ಕೂಡ ಪರಿಣಾಮ ಬೀರುತ್ತಿದೆ. ಮೂಲ ಸಂಗ್ರಹಕ್ಕೆ ಹೋಲಿಸಿದರೆ ಸುಮಾರು 95.74 ಮಿಲಿಯನ್ ಘನ ಮೀಟರ್ ಹೂಳು ಸೇರಿಕೊಂಡಿದೆ ಎನ್ನಲಾಗುತ್ತದೆ. ಸದ್ಯ ಡೆಡ್ ಸ್ಟೋರೇಜ್ ಇರುವುದರಿಂದ ತಕ್ಷಣದ ಬಳಕೆಗೆ ದೊಡ್ಡ ತೊಂದರೆ ಇಲ್ಲವಾದರೂ, ಭವಿಷ್ಯದ ಜಲಭದ್ರತೆ ದೃಷ್ಟಿಯಿಂದ ಹೂಳು ನಿರ್ವಹಣೆ ಮಹತ್ವದ್ದಾಗಿದೆ.
ಇದರ ನಡುವೆ ಭದ್ರಾ ಮೇಲ್ದಂಡೆ ಯೋಜನೆ ಬರಪೀಡಿತ ಪ್ರದೇಶಗಳಿಗೆ ನೀರೊದಗಿಸುವ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಸೂಕ್ಷ್ಮ ನೀರಾವರಿ ಹಾಗೂ ಕೆರೆಗಳ ಭರ್ತಿಗೆ ಯೋಜನೆ ರೂಪಿಸಲಾಗಿದೆ. ಜತೆಗೆ ನಾಲೆಗಳ ಮೂಲಕ 37.2 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯೂ ನಡೆಯುತ್ತಿದೆ. ಮೀನು ಮರಿ ಸಾಕಣೆ ಕೇಂದ್ರವೂ ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡುತ್ತಿದೆ.
ಭದ್ರೆಯ ಅಂಕಿ-ಅಂಶಗಳು
- ಜಲಾನಯನ ಪ್ರದೇಶ: 1,968.40 ಚ.ಕಿ.ಮೀ.
- ಅಣೆಕಟ್ಟು ಎತ್ತರ: 59.14 ಮೀಟರ್
- ಅಣೆಕಟ್ಟು ಉದ್ದ: 1,708 ಮೀಟರ್
- ನೀರು ಸಂಗ್ರಹ ಸಾಮರ್ಥ್ಯ: 71.50 ಟಿಎಂಸಿ
- ಅಚ್ಚುಕಟ್ಟು ಪ್ರದೇಶ: 1,05,570 ಹೆಕ್ಟೇರ್
- ನಾಲೆಗಳ ಒಟ್ಟು ಉದ್ದ: 444.14 ಕಿ.ಮೀ.

ದಿನದ ಸುದ್ದಿ
ಸಾಮಾಜಿಕ ಬದಲಾವಣೆಗೆ ಮಾದರಿಯಾಗಬೇಕಿದ್ದ ಯೋಜನೆಗೆ ದಾಖಲೆ, ಅನುದಾನ ಕೊರತೆ ಅಡ್ಡಿ; ಸಾವಿರಾರು ಅರ್ಜಿಗಳು ಬಾಕಿ
ಸುದ್ದಿದಿನ,ಶಿವಮೊಗ್ಗ: ಜಾತಿ-ಧರ್ಮದ ಕಟ್ಟುಪಾಡುಗಳನ್ನು ಮೀರಿ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಮದುವೆಯಾಗುವ ದಂಪತಿಗಳಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆಯೇ ಇದೀಗ ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿದೆ. ಸಮಾಜದ ವಿರೋಧವನ್ನು ಎದುರಿಸಿ ಹೊಸ ಬದುಕು ಕಟ್ಟಿಕೊಳ್ಳುವ ದಂಪತಿಗಳಿಗೆ ನೆರವಾಗಬೇಕಿದ್ದ ಯೋಜನೆಯಲ್ಲಿ ಹಣ ಬಿಡುಗಡೆ ವಿಳಂಬವಾಗುತ್ತಿದ್ದು, ಅರ್ಹ ಫಲಾನುಭವಿಗಳು ಸರ್ಕಾರದ ನೆರವಿಗಾಗಿ ಕಾಯುವಂತಾಗಿದೆ.
| ಹೈಲೈಟ್ಸ್: |
|
http://Visit : www.suddidina.com
ಅಂತರ್ಜಾತಿ ವಿವಾಹಕ್ಕೆ ಎಷ್ಟು ಪ್ರೋತ್ಸಾಹಧನ?
ಅಸ್ಪೃಶ್ಯತೆ ನಿವಾರಣೆ ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಪುರುಷ ಬೇರೆ ಜಾತಿಯ ಮಹಿಳೆಯನ್ನು ವಿವಾಹವಾದರೆ ₹2.50 ಲಕ್ಷ ಹಾಗೂ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಮಹಿಳೆ ಬೇರೆ ಜಾತಿಯ ಪುರುಷನನ್ನು ವಿವಾಹವಾದರೆ ₹3 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ.
ಆದರೆ, ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಿದವರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಹಣ ಪಾವತಿ ಮಾತ್ರ ಅದೇ ವೇಗದಲ್ಲಿ ನಡೆಯುತ್ತಿಲ್ಲ. 2025-26ನೇ ಸಾಲಿನಲ್ಲಿ 5,612 ಅರ್ಜಿಗಳು ಸಲ್ಲಿಕೆಯಾಗಿದ್ದು, 1,615 ಅರ್ಜಿಗಳಿಗೆ ಮೊದಲ ಹಂತದ ಪ್ರೋತ್ಸಾಹಧನಕ್ಕೆ ಅನುಮೋದನೆ ದೊರೆತಿದೆ. ಆದರೆ ಕೇವಲ 39 ಫಲಾನುಭವಿಗಳಿಗೆ ಮಾತ್ರ ಹಣ ಪಾವತಿಯಾಗಿದ್ದು, 3,997 ಅರ್ಜಿಗಳು ಇನ್ನೂ ಬಾಕಿ ಉಳಿದಿವೆ. 909 ಅರ್ಜಿಗಳು ಅಪೂರ್ಣ ದಾಖಲೆಗಳ ಕಾರಣದಿಂದ ಬಾಕಿಯಾಗಿವೆ.
ಹೊಸ ಸಾಲಿನಲ್ಲೂ ಅದೇ ಕಥೆ
2026-27ನೇ ಸಾಲಿನಲ್ಲಿ ಇದುವರೆಗೆ 2,194 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 61 ಅರ್ಜಿಗಳಿಗೆ ಅನುಮೋದನೆ ದೊರೆತಿದ್ದರೂ, ಮೊದಲ ಕಂತಿನ ಹಣ ಯಾರಿಗೂ ಪಾವತಿಯಾಗಿಲ್ಲ. 392 ಅರ್ಜಿಗಳು ಅಪೂರ್ಣ ದಾಖಲೆಗಳ ಕಾರಣದಿಂದ ಬಾಕಿ ಉಳಿದಿವೆ.
ಅನುದಾನ ಹೆಚ್ಚಳವಾಗದಿರುವುದು ದೊಡ್ಡ ಸಮಸ್ಯೆ
ಅಂತರ್ಜಾತಿ ವಿವಾಹಗಳ ಸಾಮಾಜಿಕ ಸ್ವೀಕಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಏರಿಕೆಯಾಗಿದೆ. ಆದರೆ, ಅರ್ಜಿಗಳ ಸಂಖ್ಯೆಗೆ ಅನುಗುಣವಾಗಿ ಯೋಜನೆಯ ಅನುದಾನ ಹೆಚ್ಚಳವಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿ ಹಿಂದಿನ ವರ್ಷದ ಅರ್ಜಿಗಳೇ ಬಾಕಿ ಉಳಿಯುತ್ತಿರುವಾಗ ಹೊಸ ಅರ್ಜಿಗಳ ವಿಲೇವಾರಿಯೂ ವಿಳಂಬವಾಗುತ್ತಿದೆ.
2018-19ರಲ್ಲಿ ₹64.27 ಕೋಟಿ, 2019-20ರಲ್ಲಿ ₹90.42 ಕೋಟಿ, 2020-21ರಲ್ಲಿ ₹99.9 ಕೋಟಿ, 2021-22ರಲ್ಲಿ ₹171.84 ಕೋಟಿ ಹಾಗೂ 2022-23ರಲ್ಲಿ ₹94.62 ಕೋಟಿ ಅನುದಾನ ಮೀಸಲಿಡಲಾಗಿತ್ತು. ಆದರೆ ವಾರ್ಷಿಕವಾಗಿ ಬರುತ್ತಿರುವ ಅರ್ಜಿಗಳನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲು ಈ ಮೊತ್ತ ಸಾಕಾಗುತ್ತಿಲ್ಲ ಎಂಬ ಪ್ರಶ್ನೆ ಎದುರಾಗಿದೆ.
2026-27ನೇ ಸಾಲಿನ ಈವರೆಗಿನ ಅಂತರ್ಜಾತಿ ಪ್ರೋತ್ಸಾಹಧನ ಯೋಜನೆಯ ವಿವರ
- 2026-27ನೇ ಸಾಲಿನಲ್ಲಿ ಸಲ್ಲಿಕೆಯಾದ ಅರ್ಜಿಗಳು: 2,194
- ಮೊದಲ ಕಂತಿಗೆ ಅನುಮೋದನೆ: 61
- ಪ್ರೋತ್ಸಾಹ ಧನ ಪಾವತಿ: 00
- ಅಪೂರ್ಣ ಅರ್ಜಿಗಳು: 392
- ತಿರಸ್ಕಾರಗೊಂಡ ಅರ್ಜಿಗಳು: 02
ಸಾಮಾಜಿಕ ಧೈರ್ಯಕ್ಕೆ ಆರ್ಥಿಕ ಬೆಂಬಲ ಬೇಕಿದೆ
ಅಂತರ್ಜಾತಿ ವಿವಾಹದ ನಿರ್ಧಾರ ಕೈಗೊಳ್ಳುವ ಜೋಡಿಗಳು ಕೆಲವೊಮ್ಮೆ ಕುಟುಂಬದ ವಿರೋಧ, ಸಾಮಾಜಿಕ ಒತ್ತಡ, ಬಹಿಷ್ಕಾರ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಪ್ರೋತ್ಸಾಹಧನ ಕೇವಲ ಹಣಕಾಸಿನ ನೆರವಲ್ಲ; ಅದು ಹೊಸ ದಂಪತಿಗಳ ನಿರ್ಧಾರಕ್ಕೆ ಸಾಮಾಜಿಕ ಬೆಂಬಲದ ಸಂಕೇತವೂ ಹೌದು.
ಆದರೆ ಅರ್ಜಿ ಸಲ್ಲಿಸಿ ಅನುಮೋದನೆಗಾಗಿ, ನಂತರ ಹಣಕ್ಕಾಗಿ ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಉಂಟಾದರೆ ಯೋಜನೆಯ ಮೂಲ ಉದ್ದೇಶವೇ ದುರ್ಬಲವಾಗುತ್ತದೆ. ಹೀಗಾಗಿ ಬಾಕಿ ಅರ್ಜಿಗಳ ತ್ವರಿತ ವಿಲೇವಾರಿ, ದಾಖಲೆ ಪ್ರಕ್ರಿಯೆ ಸರಳೀಕರಣ ಹಾಗೂ ಅಗತ್ಯ ಅನುದಾನ ಹೆಚ್ಚಳಕ್ಕೆ ಸರ್ಕಾರ ಗಮನಹರಿಸಬೇಕಿದೆ.

-
ದಿನದ ಸುದ್ದಿ7 days agoಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿ: ಪ್ರತಿ ತಿಂಗಳು ಎರಡು ದಿನ ಪ್ರವಾಸ
-
ದಿನದ ಸುದ್ದಿ7 days agoಶ್ರೀಮಂತಿಕೆಯ ನಡುವೆ ಸರಳ ಬದುಕು: 50 ರೂ. ಹೇರ್ಕಟ್ ಹೇಳಿದ ಡಿಕೆಶಿ
-
ದಿನದ ಸುದ್ದಿ5 days agoಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್ಮೆಂಟ್ಗೆ ‘ಡೆಮಾಲಿಷನ್’ ಶುರು!
-
ದಿನದ ಸುದ್ದಿ5 days agoಕಲಬುರಗಿ ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್ ಮೇಲುಗೈ: ಮೇಯರ್-ಉಪ ಮೇಯರ್ ಸ್ಥಾನವೂ ‘ಕೈ’ ತೆಕ್ಕೆಗೆ!
-
ದಿನದ ಸುದ್ದಿ5 days agoವಾಲ್ಮೀಕಿ ಹಗರಣದ ಕಿಡಿ ಮತ್ತೆ ಬಳ್ಳಾರಿಯಲ್ಲಿ: ನಾಗೇಂದ್ರ ವಿರುದ್ಧ ಜನಾರ್ಧನ ರೆಡ್ಡಿ ವಾಗ್ದಾಳಿ, ಕಾಂಗ್ರೆಸ್ಗೆ ರಾಜೀನಾಮೆ ಸವಾಲು!
-
ದಿನದ ಸುದ್ದಿ5 days agoವೈದ್ಯಕೀಯ ಕಾಲೇಜುಗಳ ಹಾಸ್ಟೆಲ್ ಕ್ಯಾಂಟೀನ್ಗಳಿಗೆ ಅಧಿಕಾರಿಗಳ ಶಾಕ್! 34 ಕ್ಯಾಂಟೀನ್ ಪರಿಶೀಲನೆ, 5ಕ್ಕೆ ನೋಟಿಸ್
-
ದಿನದ ಸುದ್ದಿ5 days agoTrump Oil Deal: ವೆನೆಜುವೆಲಾದ 65 ಬಿಲಿಯನ್ ಬ್ಯಾರೆಲ್ ತೈಲದ ಮೇಲೆ ಅಮೆರಿಕದ ಕಣ್ಣು; ಇದು ವಿಶ್ವದ ಅತಿದೊಡ್ಡ ಡೀಲ್ನಾ?
-
ದಿನದ ಸುದ್ದಿ5 days agoಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ


