ದಿನದ ಸುದ್ದಿ
ನಿರ್ಭಯಾ ನೆನಪಾಗಿಯೇ ಉಳಿಯುವುದೇಕೆ..?
- ನಾ ದಿವಾಕರ
ಉತ್ತರ ಪ್ರದೇಶದ ಹಥ್ರಾಸ್ ಎಂಬ ಕುಗ್ರಾಮದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಮತ್ತೊಮ್ಮೆ ಹೆಣ್ತನದ ಘನತೆ, ರಕ್ಷಣೆ ಮತ್ತು ಗೌರವದ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ. ಹಥ್ರಾಸ್ ಘಟನೆ ನಡೆದು ಒಂದು ತಿಂಗಳು ಕಳೆದಿದೆ. ದೇಶಾದ್ಯಂತ ಪ್ರತಿರೋಧದ ದನಿಗಳು ಇನ್ನೂ ಕೇಳಿಬರುತ್ತಿವೆ. ಆರೋಪಿಗಳಿಗೆ ಶಿಕ್ಷೆಯಾಗುವುದೋ ಇಲ್ಲವೋ ಎನ್ನುವ ಪ್ರಶ್ನೆಯೂ ಕಾಡತೊಡಗಿದೆ.
ಏಕೆಂದರೆ ಸಿಬಿಐ ಎಂಬ ಸೂತ್ರದ ಗೊಂಬೆ ತನಿಖೆಯನ್ನು ಕೈಗೆತ್ತಿಕೊಂಡಿದೆ. ಭಾರತದ ಸಾರ್ವಭೌಮ ಪ್ರಜೆಗಳು ಸಾಂವಿಧಾನಿಕ ಸಂಸ್ಥೆಗಳಲ್ಲಿ ಮತ್ತು ಪ್ರಭುತ್ವದ ನ್ಯಾಯ ನಿರ್ವಹಣೆಯಲ್ಲಿ ವಿಶ್ವಾಸ ಕಳೆದುಕೊಳ್ಳಲು ಇನ್ನೇನೂ ಉಳಿದಿಲ್ಲ ಎನ್ನುವುದನ್ನು ಬಾಬ್ರಿ ಮಸೀದಿಯ ಧ್ವಂಸವನ್ನು ಕುರಿತ ತೀರ್ಪು ನಿರೂಪಿಸಿದೆ.
70 ವರ್ಷಗಳ ಭಾರತ ಆರು ವರ್ಷಗಳಲ್ಲಿ ಬದಲಾಗಿದೆ ಎಂದು ಹೇಳುವುದೇ ಆದರೆ, ಸಾಂವಿಧಾನಿಕ ಮೌಲ್ಯಗಳ ಮತ್ತು ಸಾಂಸ್ಥಿಕ ಅಧಃಪತನದ ವಿಚಾರದಲ್ಲಿ ನಿರ್ವಿವಾದವಾಗಿ ಒಪ್ಪಿಬಿಡಬಹುದು. ಅತ್ಯಾಚಾರ ನಮ್ಮ ಸಂಸ್ಕೃತಿಯ ಒಂದು ಭಾಗ ಎನ್ನುವ ಸಂಸದರು ನಮ್ಮ ನಡುವೆ ಇದ್ದಾರೆ, ಅತ್ಯಾಚಾರ ನಡೆದರೆ ಸುಖ ಪಡಬೇಕು ಎನ್ನುವ ಪಕ್ಷದ ಮಹಿಳಾ ವಕ್ತಾರರೂ ಇದ್ದಾರೆ.
ಸಾವು ಮತ್ತು ದೌರ್ಜನ್ಯಗಳನ್ನು ರಾಜಕೀಯ ಮೇಲು-ಕೀಳು ಪುಂಡಾಟಕ್ಕೆ ಬಳಸಿಕೊಳ್ಳುವ ರಾಜಕೀಯ ನಾಯಕರೂ ನಮ್ಮ ನಡುವೆ ಇದ್ದಾರೆ. ಸಾವಿಗೆ ಬೆಲೆ ಇಲ್ಲದ, ಜೀವಕ್ಕೆ ಮೌಲ್ಯವಿಲ್ಲದ ಒಂದು ದೇಶದಲ್ಲಿ ನಾವು ಬದುಕುತ್ತಿದ್ದೇವೆ, ನಿಜ, ಆದರೆ ಸಾವು ಎನ್ನುವುದು ಸಹಜೀವಿಗಳನ್ನು ಕಳೆದುಕೊಂಡವರನ್ನು ಜೀವಮಾನವಿಡೀ ಬಾಧಿಸುವ ಒಂದು ವಿದ್ಯಮಾನ ಎನ್ನುವ ಕನಿಷ್ಟ ಮಾನವೀಯ ಪ್ರಜ್ಞೆ ಮತ್ತು ಸಂವೇದನೆ ಆಡಳಿತ ವ್ಯವಸ್ಥೆಗೆ, ನಾಗರಿಕ ಸಮಾಜಕ್ಕೆ ಇರಬೇಕಲ್ಲವೇ ?
ಈ ಸಂವೇದನೆಯನ್ನು ಕಳೆದುಕೊಂಡಿರುವ ಸಮಾಜೋ-ರಾಜಕೀಯ ವ್ಯವಸ್ಥೆಯಲ್ಲಿ ಭಾರತ ಬದುಕುತ್ತಿದೆ. ಹಾಗೆಂದ ಮಾತ್ರಕ್ಕೆ ಈ ಮೊದಲು ಭಾರತದ ಆಳುವ ವರ್ಗಗಳಲ್ಲಿ ಸಂವೇದನೆ ಮತ್ತು ಮಾನವೀಯ ಪ್ರಜ್ಞೆ ಸದಾ ಜಾಗೃತವಾಗಿತ್ತು ಎಂದರ್ಥವಲ್ಲ. ಇದು ಕೇವಲ ಐದಾರು ವರ್ಷಗಳ ಬೆಳವಣಿಗೆಯೂ ಅಲ್ಲ. ಇಂದು ಅಧಿಕಾರಸ್ಥರ ದಿವ್ಯ ಮೌನದ ಹಿಂದೆ ನಮಗೆ ಕಾಣುತ್ತಿರುವ ಕ್ರೌರ್ಯ ಹಿಂದೆಯೂ ಕಂಡಿದೆ. ಇನ್ನು ಮುಂದೆಯೂ ಕಾಣುತ್ತದೆ.
ಏಕೆಂದರೆ ಈ ಮೌನದ ಹಿಂದೆ ಮೇಲರಿಮೆಯ ಅಹಮಿಕೆ ಇರುವಷ್ಟೇ ಪ್ರಮಾಣದಲ್ಲಿ ಕೀಳರಿಮೆಯ ತಾರತಮ್ಯವೂ ಅಡಗಿದೆ. ಸಾವು ಎಲ್ಲರಿಗೂ ಪೂರ್ವನಿರ್ಧರಿತವೇ ಆಗಿದ್ದರೂ ಭಾರತದಲ್ಲಿ ಇದಕ್ಕೆ ಸಾಮುದಾಯಿಕ ಸ್ಪರ್ಶ ಇದೆ. ಅಸಹಜ ಸಾವುಗಳು ಈ ಸಾಮುದಾಯಿಕ ಅಸ್ಮಿತೆಗಳನ್ನಾಧರಿಸಿ ಮಾನ್ಯತೆ, ಸ್ವೀಕೃತಿ, ಸಾಂತ್ವನ ಮತ್ತು ಶ್ರದ್ಧಾಂಜಲಿಗಳಿಗೆ ಅರ್ಹತೆ ಪಡೆಯುತ್ತವೆ. ಈ ಪರಂಪರೆಗೆ ಬಹಿರಂಗ ಮೌಖಿಕ ಅಭಿವ್ಯಕ್ತಿಯನ್ನು ಕಳೆದ ಆರು ವರ್ಷಗಳಿಂದ ಕಾಣುತ್ತಿದ್ದೇವೆ. ಹಾಗಾಗಿಯೇ ಹಥ್ರಾಸ್ ಘಟನೆಗೆ ಪ್ರಧಾನಮಂತ್ರಿ ಏಕೆ ಪ್ರತಿಕ್ರಯಿಸಬೇಕು ಎಂದು ಕೇಳುವ ಸಂವೇದನೆಯಿಲ್ಲದ ಸಂಸದರೂ ನಮ್ಮ ನಡುವೆ ಇದ್ದಾರೆ.
ಶಿಕ್ಷಕರು ಸಾಯ್ತಾರೆ ಅಂತ ಶಾಲೆ ಮುಚ್ಚೋಕಾಗುತ್ಯೇ ಎಂದು ಕೇಳುವ ರಾಜ್ಯ ಸಚಿವರೂ ನಮ್ಮ ನಡುವೆ ಇದ್ದಾರೆ. ಸತ್ರೆ ಸಾಯ್ತಾರೆ ನಾವೇನ್ಮಾಡೋಕಾಗುತ್ತೆ ಎಂದ ಸಂಸದರೊಬ್ಬರು ಈಗಾಗಲೇ ಇಹಲೋಕ ತ್ಯಜಿಸಿದ್ದಾರೆ. ಈ ಅಸೂಕ್ಷ್ಮತೆಗಳ ನಡುವೆಯೇ ಒಂದು ಆಡಳಿತ ವ್ಯವಸ್ಥೆ ತನ್ನ ಅಸ್ತಿತ್ವವನ್ನು ಭದ್ರಪಡಿಸಿಕೊಳ್ಳುತ್ತಿದೆ. ಹಥ್ರಾಸ್ ಘಟನೆಯನ್ನು ಕುರಿತು ಬಿಜೆಪಿ ನಾಯಕರು ನೀಡಿರುವ ಹೇಳಿಕೆಗಳನ್ನು ಗಮನಿಸಿದರೆ ಈ ಅಸೂಕ್ಷ್ಮತೆ ಎಷ್ಟು ಆಳವಾಗಿ ಬೇರೂರಿದೆ ಎನ್ನುವುದನ್ನು ಗ್ರಹಿಸಬಹುದು.
ಈ ಜನ ನಾಯಕರಿಗೆ ಮನುಜ ಜೀವಗಳು ಲಿಂಗ ಭೇದಗಳ ನೆಲೆಯಲ್ಲಿ, ಜಾತಿ ಭೇದಗಳ ನೆಲೆಯಲ್ಲಿ ಮತ್ತು ಮತ ಭೇದಗಳ ನೆಲೆಯಲ್ಲಿ ಕಾಣುತ್ತವೆ. ರಾಜಧಾನಿ ದೆಹಲಿಯಿಂದ ಕೇವಲ 200 ಕಿಲೋಮೀಟರ್ ದೂರದಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆ ಈ ದೇಶದ ಪ್ರಧಾನಮಂತ್ರಿಯ ಹೃದಯವನ್ನು ತಟ್ಟುವುದೇ ಇಲ್ಲ. ಗೃಹ ಸಚಿವರು ಕಾಣೆಯಾಗಿರುವುದರಿಂದ ಏನೂ ಹೇಳಲಾಗುವುದಿಲ್ಲ.
ಇರಲಿ, ಇದು ರಾಜಕೀಯ ವಿಕೃತಿಯ ಪರ್ವಕಾಲ. ಸಾವಿರಾರು ಅಮಾಯಕರ ಮಾರಣ ಹೋಮ ನಡೆದಾಗಲೂ ನಮ್ಮ ದೇಶ ಹೀಗೆಯೇ ಇದ್ದಿತಲ್ಲವೇ ? ವಿಕೃತ ರಾಜಕೀಯ ಪ್ರಜ್ಞೆ ಭಾರತದ ಪ್ರಜ್ಞಾವಂತ ಮನಸುಗಳನ್ನು ಎಷ್ಟು ಕೆಡಿಸಿದೆ ಎನ್ನುವುದು ನಮ್ಮ ಮುಂದಿನ ಗಹನವಾದ ವಿಚಾರ. ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯಗಳು ನಿತ್ಯ ಬದುಕಿನ ವಿದ್ಯಮಾನಗಳೇನೋ ಎನ್ನುವಂತೆ ವರ್ತಿಸುವ ಒಂದು ಬೃಹತ್ ಸಮುದಾಯದ ನಡುವೆ ನಾವು ಬದುಕುತ್ತಿದ್ದೇವೆ.
ಈ ಸಮುದಾಯ ಸುಶಿಕ್ಷಿತವಾಗಿದೆ, ಹಿತವಲಯದಲ್ಲಿದೆ ಮತ್ತು ಸುರಕ್ಷಿತವಾಗಿದೆ ಎಂದು ಹೇಳಬೇಕಿಲ್ಲ. ಒಂದು ಅತ್ಯಾಚಾರದ ಘಟನೆಗೆ ಇಡೀ ದೇಶವೇ ಭುಗಿಲೇಳುವುದಿಲ್ಲ ಆದರೆ ಸಾಮಾಜಿಕ ವಲಯದಲ್ಲಿ ಇಂತಹ ಘಟನೆಗಳು ಕೊಂಚವಾದರೂ ಪ್ರಕ್ಷುಬ್ಧತೆಯನ್ನು ಉಂಟುಮಾಡಬೇಕಲ್ಲವೇ ?
ಈ ನಿರ್ಲಜ್ಜತೆಯ ನಡುವೆಯೇ ಭಾರತದ ಮಹಿಳೆಯರು ತಮ್ಮ ಹೆಣ್ತನದ ರಕ್ಷಣೆಗಾಗಿ, ಸ್ವಾಭಿಮಾನದ ಸಂರಕ್ಷಣೆಗಾಗಿ, ಸಮಾನತೆ, ಘನತೆ ಮತ್ತು ಗೌರವಕ್ಕಾಗಿ ದಿನನಿತ್ಯ ಹೋರಾಡಬೇಕಿದೆ. ಅತ್ಯಾಚಾರ ನಡೆದ ಕೂಡಲೇ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎನ್ನುವ ದನಿಗಳು ಮುಗಿಲು ಮುಟ್ಟುತ್ತವೆ. ಆದರೆ ಗಲ್ಲಿಗೇರಿಸಲು ಕಾನೂನು ಪ್ರಕ್ರಿಯೆ ಶೀಘ್ರವಾಗಿ ನಡೆಯಬೇಕು. ನ್ಯಾಯವ್ಯವಸ್ಥೆಯಲ್ಲಿನ ಲೋಪಗಳು ಸರಿಹೋಗಬೇಕು.
ಪೊಲೀಸ್ ಇಲಾಖೆಯಲ್ಲಿ ಸುಧಾರಣೆಗಳು ಜಾರಿಯಾಗಬೇಕು. ಸಿಬಿಐನಂತಹ ಸಾಂವಿಧಾನಿಕ ಸಂಸ್ಥೆಗಳು ಸ್ವಾಯತ್ತತೆ ಪಡೆಯಬೇಕು. ಸರ್ಕಾರಗಳೇ ನೇಮಿಸುವ ವಿಶೇಷ ತನಿಖಾ ದಳ (ಎಸ್ ಐ ಟಿ) ನಿಷ್ಪಕ್ಷಪಾತವಾಗಬೇಕು. ರಾಜಕೀಯ ಹಸ್ತಕ್ಷೇಪಕ್ಕೆ ಅಂತ್ಯ ಹಾಡಬೇಕು. ಈ ಎಲ್ಲ ಆಡಳಿತ ಸುಧಾರಣೆಗಳನ್ನು ತರಲು ನಮ್ಮ ಜನಪ್ರತಿನಿಧಿಗಳಿಗೆ ಮೂಲತಃ ಮಾನವೀಯ ಪ್ರಜ್ಞೆ ಮತ್ತು ಸಂವೇದನೆ ಇರಬೇಕು. ಇಲ್ಲವಲ್ಲಾ !
ದುರಂತ ಎಂದರೆ ಜನಪ್ರತಿನಿಧಿಗಳು ಹೊಲಸು ಮಾತುಗಳ ಸರದಾರರಾಗಿದ್ದಾರೆ. ಹಥ್ರಾಸ್ ಘಟನೆಯ ಸಂದರ್ಭದಲ್ಲಿ ಉತ್ತರ ಪ್ರದೇಶ ಸರ್ಕಾರದ ವರ್ತನೆಯನ್ನು ಹೈಕೋರ್ಟ್ ಪ್ರಶ್ನಿಸಿರುವುದೇ ಅಲ್ಲದೆ ಕಟುವಾಗಿ ಟೀಕಿಸಿದೆ. ಆದರೆ ಭಾರತದ ನಾಗರಿಕ ಸಮಾಜದ ಪ್ರಜ್ಞೆ ಇದರಿಂದ ಕೊಂಚವೂ ವಿಚಲಿತವಾಗಿಲ್ಲ. ಪಕ್ಷ ರಾಜಕಾರಣ ಮತ್ತು ಇದರಿಂದ ಪ್ರಭಾವಿತವಾಗುವ ಅಸ್ಮಿತೆಯ ರಾಜಕಾರಣ ಭಾರತದ ಪ್ರಜ್ಞಾವಂತ ಸಮುದಾಯವನ್ನು ನಿಷ್ಕ್ರಿಯಗೊಳಿಸಿರುವುದನ್ನು ಕಳೆದ ಎರಡು ದಶಕಗಳಲ್ಲಿ ಕಂಡಿದ್ದೇವೆ.
1984ರ ಸಿಖ್ ಹತ್ಯಾಕಾಂಡ ಮತ್ತು 1980-90ರ ದಶಕದ ರಥಯಾತ್ರೆ ಮತ್ತು ಕೋಮು ಗಲಭೆಗಳಲ್ಲಿ ಮಡಿದ ಸಾವಿರಾರು ಜೀವಗಳಿಗೆ ನ್ಯಾಯ ಒದಗಿಸಲು ನಮ್ಮ ನ್ಯಾಯ ವ್ಯವಸ್ಥೆಗೆ ಸಾಧ್ಯವಾಗಿಲ್ಲ. 2002ರ ಗುಜರಾತ್ ಹತ್ಯಾಕಾಂಡದಲ್ಲಿ ಬಲಿಯಾದ ಜೀವಗಳನ್ನು ನಾವು ಮರೆತೇ ಹೋಗಿದ್ದೇವೆ. ಇದನ್ನು ಪ್ರಸ್ತಾಪಿಸಿದ ಕೂಡಲೇ ಕಾಶ್ಮೀರ ಮತ್ತು ಪಂಡಿತರ ಪ್ರಶ್ನೆ ಧುತ್ತೆಂದು ಎದುರಾಗುತ್ತದೆ. ಪಂಡಿತರಿಗೆ ಮಿಡಿಯುವ ಮನಸುಗಳು, ಕಾಶ್ಮೀರದಲ್ಲಿ ಒಂದೆಡೆ ಉಗ್ರಗಾಮಿಗಳ ಗುಂಡಿಗೆ ಮತ್ತೊಂದೆಡೆ ಸೇನೆಯ ಗುಂಡಿಗೆ ಬಲಿಯಾದ ಲಕ್ಷಾಂತರ ಅಮಾಯಕ ಕಾಶ್ಮೀರಿಗಳಿಗೆ ಮಿಡಿಯುವುದಿಲ್ಲ. ಅಲ್ಲಿ ಮತ್ತೆ ಅಸ್ಮಿತೆ ಮತ್ತು ರಾಜಕಾರಣ ಅಡ್ಡಿಯಾಗುತ್ತದೆ.
ಅಸಹಜ ಸಾವುಗಳಿಂದ ವಿಚಲಿತರಾಗದ ಮನಸ್ಥಿತಿಯನ್ನು ಭಾರತ ರೂಢಿಸಿಕೊಂಡು ವರುಷಗಳೇ ಕಳೆದಿವೆ. ಸತ್ತವರು ನಮ್ಮವರೋ ಅನ್ಯರೋ ಎಂದು ಶವಗಳನ್ನು ವಿಂಗಡಿಸುವ ಪರಂಪರೆಯನ್ನು ಈ ದೇಶದ ಸಾಂಸ್ಕೃತಿಕ ರಾಜಕಾರಣ ವ್ಯವಸ್ಥಿತವಾಗಿ ಬೆಳೆಸಿಕೊಂಡುಬಂದಿದೆ. ರಾಶಿರಾಶಿ ಶವಗಳಲ್ಲೂ ಹೆಕ್ಕಿ ತೆಗೆಯುವ ವಿಕೃತ ಪರಂಪರೆಯೂ ಇಲ್ಲಿ ನೆಲೆಯೂರಿದೆ.
ಈ ಪರಂಪರೆಗೆ ಜನಸಾಮಾನ್ಯರು ಬಲಿಯಾಗಿರುವುದೇ ಅಲ್ಲದೆ ಸಾಂವಿಧಾನಿಕ ಸಂಸ್ಥೆಗಳೂ ಬಲಿಯಾಗಿರುವುದನ್ನು ಇತ್ತೀಚಿನ ಬಾಬ್ರಿ ಮಸೀದಿ ಧ್ವಂಸದ ತೀರ್ಪಿನಲ್ಲಿ ಕಾಣಬಹುದು. ಇಡೀ ದೇಶವೇ ಗಮನಿಸಿದಂತೆ ಲಕ್ಷಾಂತರ ಯುವಕರನ್ನು ಪ್ರಚೋದಿಸಿ ಉರುಳಿಸಲಾದ 400 ವರ್ಷಗಳ ಒಂದು ಸ್ಥಾವರ ತಂತಾನೇ ಕುಸಿದಿದೆ, ಅದೊಂದು ಅಪಘಾತ ಎಂದು ಬಣ್ಣಿಸುವ ನ್ಯಾಯಾಂಗ, ಈ ಕುಸಿದ ಸ್ಥಾವರದ ಅವಶೇಷಗಳಡಿ ಸಿಲುಕಿರುವ ನೂರಾರು ಮೃತ ಜೀವಗಳಿಗೆ ನ್ಯಾಯ ಒದಗಿಸಲು ಸಾಧ್ಯವೇ ?
ಇಂತಹ ಒಂದು ವ್ಯವಸ್ಥೆಯಲ್ಲಿ ಶೋಷಿತ ಸಮುದಾಯದ ಹೆಣ್ಣು ಮಗಳಿಗೆ ನ್ಯಾಯ ದೊರೆಯುತ್ತದೆ ಎಂದು ನಿರೀಕ್ಷಿಸುವುದಾದರೂ ಹೇಗೆ ? ಅಪರಾಧಿಗಳ ರಕ್ಷಣೆಗಾಗಿ ಪ್ರತ್ಯಕ್ಷ ಸಾಕ್ಷಿಗಳನ್ನು ಎನ್ಕೌಂಟರ್ ಮೂಲಕ ಇಲ್ಲವಾಗಿಸುವ ವ್ಯವಸ್ಥೆಯಲ್ಲಿ ನಾವಿದ್ದೇವೆ. ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಒಂದು ಷಡ್ಯಂತ್ರಕ್ಕೆ ಈಗ ವ್ಯವಸ್ಥಿತ ಚೌಕಟ್ಟನ್ನು ನಿರ್ಮಿಸಲಾಗಿರುವುದನ್ನೂ ಕಾಣುತ್ತಿದ್ದೇವೆ.
ಹಥ್ರಾಸ್ನಲ್ಲಿ ಅತ್ಯಾಚಾರಕ್ಕೊಳಗಾದ ಯುವತಿಯ ಮೃತ ದೇಹವನ್ನು ಪೊಲೀಸರೇ ಸುಟ್ಟುಹಾಕಿರುವುದು ಈ ವಿದ್ಯಮಾನದ ಒಂದು ಆಯಾಮವಷ್ಟೇ. ಇದೆರ ವಿರಾಟ್ ಸ್ವರೂಪವನ್ನು 2002ರ ಗುಜರಾತ್ ಹತ್ಯಾಕಾಂಡದ ನಂತರ ಕಂಡಿದ್ದೇವೆ. ಬೆಲ್ಚಿಯಿಂದ ಕಂಬಾಲಪಲ್ಲಿ, ಊನ ಘಟನೆಗಳವರೆಗೆ ಕಂಡಿದ್ದೇವೆ. ಸ್ವತಂತ್ರ ಭಾರತದಲ್ಲಿ ಸಂಭವಿಸಿದ ಸಾಮೂಹಿಕ ಹತ್ಯಾಕಾಂಡಗಳಲ್ಲಿ ಯಾರಿಗೂ ಶಿಕ್ಷೆಯಾಗಿಲ್ಲ ಎನ್ನುವುದನ್ನು ನೆಲ್ಲಿ ಹತ್ಯಾಕಾಂಡದಿಂದ ಗುಜರಾತ್ ಹತ್ಯಾಕಾಂಡದವರೆಗೂ ಕಂಡಿದ್ದೇವೆ. ಇಲ್ಲಿಯೂ ನಮ್ಮ ಪ್ರಜ್ಞೆ ಪಕ್ಷ ರಾಜಕಾರಣ ಮತ್ತು ಅಸ್ಮಿತೆಗಳ ಸರಳುಗಳಲ್ಲಿ ಬಂಧಿತವಾಗಿಬಿಡುತ್ತದೆ.
ಸಂಭವಿಸಿದ ಅಪರಾಧಗಳನ್ನು ಮುಖಾಮುಖಿಯಾಗಿಸುವ ಮೂಲಕ ಅಪರಾಧಿಗಳನ್ನು ಸಮರ್ಥಿಸಿಕೊಳ್ಳುವ ವಿಕೃತ ಪರಂಪರೆಯನ್ನು ಪೋಷಿಸುತ್ತಲೇ ಬಂದಿರುವ ಭಾರತದ ನಾಗರಿಕ ಸಮಾಜ, ಇಂದಿಗೂ ಅಪರಾಧಿಗಳನ್ನು ಶಾಸನ ಸಭೆಗಳಲ್ಲಿ ಸಹಿಸಿಕೊಳ್ಳುತ್ತಲೇ ಬಂದಿದೆ.
ಭ್ರಷ್ಟಾಚಾರ ರಹಿತ ಭಾರತದಲ್ಲಿ ಅನೇಕಾನೇಕ ಭ್ರಷ್ಟರು ಅಧಿಕಾರ ಪೀಠದಲ್ಲಿ ವಿರಾಜಮಾನರಾಗಿದ್ದಾರೆ. ಮತ್ತದೇ ಪಕ್ಷ ರಾಜಕಾರಣ ಮತ್ತು ಅಸ್ಮಿತೆಯ ಗುಂಗು. ಐದು ವರ್ಷಕ್ಕೊಮ್ಮೆ ಮತ ಚಲಾಯಿಸುವಾಗ ಬೆರಳ ತುದಿಗೆ ಹಚ್ಚುವ ಶಾಯಿಯ ಗುರುತು ಸ್ವಲ್ಪ ದಿನಗಳ ನಂತರ ಅಳಿಸಿಹೋಗುತ್ತದೆ. ಆದರೆ ಇಂದು ನಮ್ಮ ಪ್ರಜಾತಂತ್ರ ದೇಶದಲ್ಲಿ ಅಧಿಕಾರ ಪೀಠಗಳಲ್ಲಿ ಕುಳಿತು ಆದರ್ಶ, ನೈತಿಕತೆ, ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ಮಾತುಗಳನ್ನಾಡುತ್ತಿರುವವರ ಕೈಗಳಿಗೆ ಮೆತ್ತಿರುವ ಅಮಾಯಕ ಜನರ ನೆತ್ತರ ಕಲೆ ಅಳಿಸಲು ಸಾಧ್ಯವೇ ಇಲ್ಲ.
ಆದರೆ ನಮಗೆ ಅದು ಗೆಲುವಿನ ಸಂಕೇತದಂತೆ ಕಾಣುತ್ತದೆ, ವಿಜಯೋತ್ಸವದ ಚಿಹ್ನೆಯಂತೆ ಕಾಣುತ್ತದೆ. ಇದು ನಮ್ಮ ದೇಶದ ದುರಂತ. ನಾವು ಪ್ರಜಾತಂತ್ರವನ್ನು ಬಯಸುತ್ತೇವೆ ಆದರೆ ಪ್ರಜಾಸತ್ತಾತ್ಮಕ ಮನಸ್ಥಿತಿಯನ್ನು ಅಸ್ಮಿತೆಗಳ ಭ್ರಮೆಗೆ ಸಿಲುಕಿ ಹೊಸಕಿ ಹಾಕುತ್ತಿದ್ದೇವೆ. ಮಾನವ ಹಕ್ಕುಗಳು ನಮಗೆ ಅಪಥ್ಯವಾಗುತ್ತದೆ, ಕೆಲವೊಮ್ಮೆ ಸಹಮಾನವರೇ ಅಪಥ್ಯವಾಗಿಬಿಡುತ್ತಾರೆ.
ಹಥ್ರಾಸ್ ಘಟನೆಯಲ್ಲಿ ಮೃತಪಟ್ಟ ಮನೀಷಾ ಈ ಅಪಥ್ಯರಾದವರ ಗುಂಪಿಗೆ ಸೇರುತ್ತಾಳೆ. ಆಕೆಯ ಮೇಲೆ ಅತ್ಯಾಚಾರ ಎಸಗಿದ ಠಾಕೂರರು ಕೆಲವು ವರ್ಷಗಳ ನಂತರ ಕೇಂದ್ರ ಸಚಿವರಾದರೂ ನಾವು ವಿಚಲಿತರಾಗುವುದಿಲ್ಲ. ಈ ಮನಸ್ಥಿತಿ ನಾಗರಿಕ ಸಮಾಜವನ್ನು ಆವರಿಸಿರುವುದರಿಂದಲೇ ನಿರ್ಭಯ ನಮಗೆ ನೆನಪಾಗಿಯೇ ಉಳಿಯಲಿದ್ದಾಳೆ. ಜಾತಿ, ಮತಧರ್ಮ ಮತ್ತು ಲಿಂಗಭೇದಗಳ ಚೌಕಟ್ಟಿನಲ್ಲಿ ಸಾವು ಸ್ವೀಕೃತವಾಗುತ್ತಿರುವಂತೆಯೇ ಮನುಷ್ಯನ ಪ್ರಜ್ಞೆಯೂ ಸಹ ವಿಕೃತಿಯ ಪರಾಕಾಷ್ಠೆ ತಲುಪುತ್ತಿದೆ. ಇದಕ್ಕೆ ಪರಿಹಾರವೇನು ? ಪ್ರತಿರೋಧಗಳ ನಡುವೆಯೇ ನಾವು ಶೋಧಿಸಬೇಕಿರುವುದು ಇದನ್ನೇ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ
ಸುದ್ದಿದಿನ,ಬೆಂಗಳೂರು: ಜಗತ್ತಿನ ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. AI ಕಲಿಯದಿದ್ದರೆ ಉದ್ಯೋಗ ತೊರೆಯುವಂತೆ ಸೂಚಿಸಿದ್ದು, ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಘೋಷಿಸಿದೆ.
‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP)
AI ಕಲಿಯುವುದು ಅನಿವಾರ್ಯ: ಗೂಗಲ್ ಈಗ ಸಂಪೂರ್ಣವಾಗಿ ‘AI ಫಸ್ಟ್’ ಕಂಪನಿಯಾಗಿ ರೂಪಾಂತರಗೊಳ್ಳುತ್ತಿದೆ. ತಂತ್ರಜ್ಞಾನದ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಅಥವಾ AI ಕಲಿಯಲು ಆಸಕ್ತಿ ಇಲ್ಲದ ಉದ್ಯೋಗಿಗಳಿಗೆ ಗೌರವಯುತವಾಗಿ ಉದ್ಯೋಗ ತೊರೆಯಲು ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಯನ್ನು ಜಾರಿಗೊಳಿಸಿದೆ.
ಯಾರಿಗೆ ಅನ್ವಯಿಸುತ್ತದೆ?: ಇದು ಮುಖ್ಯವಾಗಿ ಗೂಗಲ್ನ ಗ್ಲೋಬಲ್ ಬಿಸಿನೆಸ್ ಆರ್ಗನೈಸೇಷನ್ (GBO) ವಿಭಾಗದ ಉದ್ಯೋಗಿಗಳಿಗೆ (ಸೇಲ್ಸ್, ಕಾರ್ಪೊರೇಟ್ ಡೆವಲಪ್ಮೆಂಟ್ ಮತ್ತು ಸೊಲ್ಯೂಷನ್ಸ್ ಟೀಮ್) ಗೆ ಅನ್ವಯಿಸುತ್ತದೆ. ಆದರೆ, ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಿರುವ ತಂಡಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
ಇದು ಲೇ-ಆಫ್ ಅಲ್ಲ: ಇದು ಕಡ್ಡಾಯವಾಗಿ ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆಯಲ್ಲ. ಬದಲಾಗಿ, ಸ್ವತಃ ಹೊರಹೋಗಲು ಬಯಸುವ ಉದ್ಯೋಗಿಗಳಿಗೆ ಉತ್ತಮ ಪರಿಹಾರ ಧನ (Severance Package) ಮತ್ತು ಇತರ ಸೌಲಭ್ಯಗಳನ್ನು ನೀಡಿ ಕಳುಹಿಸಿಕೊಡುವ ಯೋಜನೆಯಾಗಿದೆ.
ಕಾರಣವೇನು?: ತಂತ್ರಜ್ಞಾನ ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಕಂಪನಿಗೆ AI ಮಿಷನ್ಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಮತ್ತು ಕ್ರಿಯಾತ್ಮಕವಾಗಿ ಕೆಲಸ ಮಾಡುವ ಕಾರ್ಯಪಡೆಯ ಅಗತ್ಯವಿದೆ ಎಂದು ಗೂಗಲ್ನ ಚೀಫ್ ಬಿಸಿನೆಸ್ ಆಫೀಸರ್ ಫಿಲಿಪ್ ಶೆಡ್ಲರ್ ತಿಳಿಸಿದ್ದಾರೆ.
ಭವಿಷ್ಯದ ಮುನ್ಸೂಚನೆ: ಅಮೆಜಾನ್, ಮೆಟಾ ಮತ್ತು ಮೈಕ್ರೋಸಾಫ್ಟ್ನಂತಹ ಇತರ ಟೆಕ್ ದೈತ್ಯ ಕಂಪನಿಗಳು ಕೂಡ ಇದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ. 2026ರಲ್ಲಿ ಈ ನಾಲ್ಕು ಕಂಪನಿಗಳು AI ತಂತ್ರಜ್ಞಾನಕ್ಕಾಗಿ ಸುಮಾರು 58.92 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಅಂದಾಜಿದೆ.
ಒಟ್ಟಾರೆಯಾಗಿ, ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ AI ಕೌಶಲ್ಯ ಅತ್ಯಂತ ಅನಿವಾರ್ಯ ಎಂಬ ಎಚ್ಚರಿಕೆಯ ಸಂದೇಶವನ್ನು ಗೂಗಲ್ ಈ ಮೂಲಕ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
ಸುದ್ದಿದಿನ,ದಾವಣಗೆರೆ:ಮಾರ್ಚ್ 18 ರಿಂದ ಪ್ರಾರಂಭವಾಗುವ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಹೆಚ್ಚಿಸಲು ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಮತ್ತು ಶೈಕ್ಷಣಿಕ ಕಾರ್ಯಾಗಾರದಲ್ಲಿ ಜಿಲ್ಲಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಮತ್ತು ಉಪ ಪ್ರಾಂಶುಪಾಲರನ್ನು ಉದ್ದೇಶಿಸಿ ಮಾತನಾಡಿದರು.
ಪ್ರಸ್ತುತ ಎಸ್.ಎಸ್.ಎಲ್.ಸಿ ಎರಡು ಪೂರ್ವಭಾವಿ ಪರೀಕ್ಷೆಗಳು ನಡೆದಿದ್ದು ಶೇ. 18 ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳಿಗೆ ನೋಟಿಸ್ ನೀಡಿ ವಿವರಣೆಯನ್ನು ಪಡೆಯಬೇಕು, ಎಸ್.ಎಸ್.ಎಲ್.ಸಿ ಗೆ ಪ್ರವೇಶ ಪಡೆದು ಪರೀಕ್ಷೆಗೆ ಗೈರಾಗಿರುವ ಮಕ್ಕಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಮನೆಮನೆ ಭೇಟಿ, ಅವರನ್ನು ಮತ್ತೇ ಶಾಲೆಗೆ ಕರೆತರಲು ಕ್ರಮವಹಿಸಬೇಕು ಎಂದು ತಿಳಿಸಿದರು.
ಡಿಡಿಪಿಐ ಕೊಟ್ರೇಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 21,863 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪ್ರವೇಶ ಪಡೆದಿದ್ದಾರೆ, ವಿವಿಧ ಕಾರಣಗಳಿಂದ 378 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿಲ್ಲ. ಅಂತಿಮವಾಗಿ 21,400 ವಿದ್ಯಾರ್ಥಿಗಳು ಪರೀಕ್ಷೆಗೆ ದಾಖಲಾಗಿದ್ದಾರೆ. ಮೊದಲ ಪೂರ್ವಸಿದ್ಧತಾ ಪರೀಕ್ಷೆಗೆ 20,129 ವಿದ್ಯಾರ್ಥಿಗಳು ಹಾಜರಾಗಿದ್ದು, 1,353 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.
ಕಡಿಮೆ ಹಾಜರಾತಿ (75% ಕ್ಕಿಂತ ಕಡಿಮೆ) ಮತ್ತು ಪರೀಕ್ಷೆಯ ಬಗ್ಗೆ ಆಸಕ್ತಿ ಇಲ್ಲದಿರುವುದು ಗೈರುಹಾಜರಿಗೆ ಮುಖ್ಯ ಕಾರಣಗಳಾಗಿವೆ. ಮೊದಲ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಜಿಲ್ಲೆಯ ಒಟ್ಟು ಫಲಿತಾಂಶ 49% ಬಂದಿದೆ. ಎರಡನೇ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಫಲಿತಾಂಶ 68% ಕ್ಕೆ ಏರಿಕೆಯಾಗಿದೆ, ಆದರೆ 1,460 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು. ಗೈರುಹಾಜರಾದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ಪೋಷಕರ ಮನವೊಲಿಸಿ ಅವರನ್ನು ಶಾಲೆಗೆ ಕರೆತರುವಂತೆ ಕ್ರಮವಹಿಸಲಾಗಿದೆ, ವಿದ್ಯಾರ್ಥಿಗಳ ಸಂದೇಹಗಳನ್ನು ಪರಿಹರಿಸುವುದು ಮತ್ತು ಪರೀಕ್ಷಾ ವಿಧಾನಗಳ ಬಗ್ಗೆ ತಿಳಿಸಿಕೊಡುವುದು.
ಮಂಡಳಿಯಿAದ ನೀಡಲಾದ 4 ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು 2 ಪೂರ್ವಸಿದ್ಧತಾ ಪರೀಕ್ಷಾ ಪತ್ರಿಕೆಗಳು ಸೇರಿದಂತೆ ಒಟ್ಟು 6 ಪ್ರಶ್ನೆ ಪತ್ರಿಕೆಗಳನ್ನು ಪದೇ ಪದೇ ಬಿಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವುದು. ಅನುತ್ತೀರ್ಣರಾಗುವ ಸಾಧ್ಯತೆ ಇರುವ ಸುಮಾರು 1,400 ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಗಮನ ಹರಿಸಿ ಅವರು ತೇರ್ಗಡೆಯಾಗುವಂತೆ ನೋಡಿಕೊಳ್ಳಲು ಕ್ರಮವಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
ಶಿಕ್ಷಕರು ಅತಿ ಮುಖ್ಯವಾಗಿ ಗೈರುಹಾಜರಾಗಿರೋ ಮಕ್ಕಳನ್ನ ಶಾಲೆಗೆ ಕರೆತರಬೇಕು, ಮನೆ ಮನೆ ಭೇಟಿ ಮಾಡಿ ಪಾಲಕ ಪೋಷಕರಿಗೆ ಮನವೊಲಿಸಿ, ಶಿಕ್ಷಣ ಇಲಾಖೆ ನೀಡಿರುವ ಬ್ಲೂಪ್ರಿಂಟ್ ಪ್ರಕಾರ ಮಕ್ಕಳನ್ನು ಸಿದ್ದಗೊಳಿಸಿ, ಪ್ರಶ್ನೆ ಪತ್ರಿಕೆಗಳನ್ನ ಪದೇ ಪದೇ ಬಿಡಿಸೋದರ ಮೂಲಕ ಮಕ್ಕಳಲ್ಲಿ ಒಂದು ಆತ್ಮವಿಶ್ವಾಸ ತುಂಬಬೇಕು , ಗೈರಾಗಿರುವ ವಿದ್ಯಾರ್ಥಿಗಳ ಸಂಖ್ಯೆ 1,400 ಇದೆ, ಆ ವಿದ್ಯಾರ್ಥಿಗಳು ಉತ್ತೀರ್ಣರಾದರೆ ಒಂದು ಉತ್ತಮ ಫಲಿತಾಂಶವನ್ನ ನಿರೀಕ್ಷೆ ಮಾಡಬಹುದು, ಮಕ್ಕಳಿಗೆ ಪಾಠದ ಜೊತೆಗೆ ಆಟಕ್ಕೂ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಸಿಇಒ ಗಿತ್ತೇ ಮಾಧವ ವಿಠಲ್ ರಾವ್, ಡಯಟ್ ಪ್ರಾಂಶುಪಾಲರಾದ ಗೀತಾ, ಜಿಲ್ಲೆಯ ಎಲ್ಲಾ ಕ್ಷೇತ್ರಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಫೆ.14 ರಂದು ಸಂತ ಸೇವಾಲಾಲ್ರವರ 287ನೇ ಜಯಂತಿ ಕಾರ್ಯಕ್ರಮ
ಸುದ್ದಿದಿನ,ದಾವಣಗೆರೆ:ಸಂತ ಸೇವಾಲಾಲ್ರವರ 287ನೇ ಜಯಂತ್ಸೋವ ಕಾರ್ಯಕ್ರಮವು ಫೆ. 14 ರಂದು ಮಧ್ಯಾಹ್ನ 2 ಗಂಟೆಗೆ ನ್ಯಾಮತಿ ತಾಲ್ಲೂಕಿನ ಭಾಯಾಗಡ್-ಸೂರಗೊಂಡನಕೊಪ್ಪದಲ್ಲಿ ನಡೆಯಲಿದೆ.
ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ನಿಯಮಿತ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ದಿ ಮತ್ತು ನಿರ್ವಾಹಣಾ ಪ್ರತಿಷ್ಠಾನ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಭಾಯ್ಗಡ್, ಸೂರಗೊಂಡನಕೊಪ್ಪ ಇವರ ಸಹಯೋಗದಲ್ಲಿ ಜರುಗಲಿರುವ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸುವರು.ಹೊನ್ನಾಳಿ ಕ್ಷೇತ್ರದ ಶಾಸಕರಾದ ಡಿ.ಜಿ.ಶಾಂತನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಸಂತಸೇವಾಲಾಲ್ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಇವರು ವಲಸೆ ಮಕ್ಕಳ ವಸತಿ ಶಾಲೆಯ ಶಂಕುಸ್ಥಾಪನೆಯನ್ನು ಉದ್ಘಾಟಿಸುವರು.
ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ.ಸೋಮಣ್ಣ ಘನ ಉಪಸ್ಥಿತರಾಗಿರುವರು.
ಮುಖ್ಯ ಅತಿಥಿಗಳಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್, ಗೃಹಮಂತ್ರಿಗಳಾದ ಡಾ.ಜಿ.ಪರಮೇಶ್ವರ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ವಿರೋಧಪಕ್ಷದ ನಾಯಕರಾದ ಆರ್.ಅಶೋಕ, ಮತ್ತು ಛಲವಾದಿ ನಾರಾಯಣಸ್ವಾಮಿ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕ.ಟಿ, ವಿಧಾನಸಭೆಯ ಉಪಸಭಾಪತಿ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ, ಮಹಾರಾಷ್ಟ್ರ ಸರ್ಕಾರದ ಮಣ್ಣು ಮತ್ತು ಜಲ ಸಂರಕ್ಷಣಾ ಸಚಿವರಾದ ಸಂಜಯ್ ಡಿ.ರಾಥೋಡ್, ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ, ಲೋಕೋಪಯೋಗಿ, ಕೈಗಾರಿಕೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವರಾದ ಇಂದ್ರನಿಲ್ ಮನೋಹರ್ ನಾಯ್ಕ್, ತೆಲಂಗಾಣ ರಾಜ್ಯದ ಮಹಬೂಬಬಾದ್ ಕ್ಷೇತ್ರದ ಸಂಸದರಾದ ಬಲರಾಮ ನಾಯ್ಕ, ಭಾಗವಹಿಸುವರು.
ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರುಗಳಾದ ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಬಸವರಾಜು ವಿ.ಶಿವಗಂಗಾ, ಬಿ.ಪಿ ಹರೀಶ್, ಜೆ.ಡಿ.ಎಸ್ ಶಾಸಕಾಂಗ ಪಕ್ಷದ ಉಪನಾಯಕರು ಹಾಗೂ ಶಾಸಕರಾದ ಶಾರದಾ ಪೂರ್ಯಾನಾಯ್ಕ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜಿ.ಹೆಚ್ ಮರಿಯೋಜಿರಾವ್, ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾದ ವಡ್ನಾಳ್ ಜಗದೀಶ್, ಬಯಲುಸೀಮೆ ಪ್ರದ್ರೇಶಾಭಿವೃದ್ದಿ ಮಂಡಳಿಯ ಹೆಚ್.ಬಿ.ಮಂಜಪ್ಪ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎನ್. ಜಯದೇವನಾಯ್ಕ್, ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ಎಲ್.ಭೋಜೇಗೌಡ, ಡಿ.ಎಸ್.ಅರುಣ್, ಕೆ.ಅಬ್ದುಲ್ ಜಬ್ಬಾರ್, ಡಿ.ಟಿ.ಶ್ರೀನಿವಾಸ್, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಡಾ.ಧನಂಜಯ್ ಸರ್ಜಿ, ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಕಾಂತಾನಾಯಕ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಾಮನೂರು.ಟಿ.ಬಸವರಾಜ್,ಲೋಕಸೇವಾ ಆಯೋಗದ ಸದಸ್ಯರಾದ ಭೋಜ್ಯಾನಾಯ್ಕ, ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧ್ಯಕ್ಷರಾದ ಬಾಬು ಹೊನ್ನನಾಯಕ್, ಬಂಜಾರ ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ. ಮೋತಿಲಾಲ್ ಚವ್ಹಾಣ್, ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಭು ಬಿ ಚವ್ಹಾಣ್, ಡಾ.ಅವಿನಾಶ್ ಜಾಧವ್, ನೇಮಿರಾಜ್ ನಾಯ್ಕ್, ಕೃಷ್ಣನಾಯ್ಕ, ಡಾ.ಚಂದ್ರ ಲಮಾಣಿ, ಭಾಯ್ಗಡ್ ಉನ್ನತಮಟ್ಟದ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಪಿ.ಟಿ ಪರಮೇಶ್ವರ್ನಾಯ್ಕ್.
ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಂದೀಪ್.ಡಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ.ರಾಕೇಶ್ ಕುಮಾರ್.ಕೆ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ, ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್.ಹೆಚ್ ತೆಕ್ಕಣ್ಣನವರ್, ಸಮಾಜ ಕಲ್ಯಾಣ ಇಲಾಖೆಯ ನೋಡೆಲ್ ಎಜೆನ್ಸಿ ಸಲಹೆಗಾರರಾದ ಡಾ.ಇ ವೆಂಕಯ್ಯ, ಕ.ತಾ.ಅ.ನಿ.ನಿ ವ್ಯವಸ್ಥಾಪಕ ನಿರ್ದೇಶಕರಾದ ಎನ್.ರಾಜು, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಪ್ರಧಾನ ಧರ್ಮದರ್ಶಿ ಬಿ. ಹೀರಾನಾಯ್ಕ, ಮಹಾಮಠ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಹನುಮಂತನಾಯ್ಕ, ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಅರುಣ್ ಕುಮಾರ್ ಭಾಗವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoದಾವಣಗೆರೆ | ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoಫೆ.14 ರಂದು ಸಂತ ಸೇವಾಲಾಲ್ರವರ 287ನೇ ಜಯಂತಿ ಕಾರ್ಯಕ್ರಮ
-
ದಿನದ ಸುದ್ದಿ3 days agoಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
-
ದಿನದ ಸುದ್ದಿ5 days agoಕನ್ನಡಭಾಷೆಯಲ್ಲಿ ನಾಮಫಲಕ ಕಡ್ಡಾಯ : ಆಯುಕ್ತೆ ರೇಣುಕಾ ಆದೇಶ
-
ದಿನದ ಸುದ್ದಿ3 days agoಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ

