ದಿನದ ಸುದ್ದಿ
ಆತ್ಮಕತೆ | ಕೇಂದ್ರದಲ್ಲಿ ಮೂಡಿ ಮಡಿದವರು
- ರುದ್ರಪ್ಪ ಹನಗವಾಡಿ
ಮನಸ್ಸಿನಲ್ಲಿ ಉಳಿದು ಹೋದ ಆರೋಗ್ಯವಂತ ವಿದ್ಯಾರ್ಥಿಗಳ ಕಿರುಚಿತ್ರಣ
ಯಶೋದ
ಈಗ್ಗೆ ಸುಮಾರು 8 ವರ್ಷಗಳಿಂದ ಅಧ್ಯಾಪಕ ವೃತ್ತಿಯನ್ನು ಮಾಡಿಕೊಂಡು ಬರುತ್ತಿದ್ದೇನೆ. ಈ ಅವಧಿಯಲ್ಲಿ ನಾವು ಸಂಪರ್ಕಿಸಿದ ವಿದ್ಯಾರ್ಥಿಗಳು ಹಲವು ನೂರು ಸಂಖ್ಯೆಗಳಿಗೆ ಮೀರಬಹುದು. ಹಲ ಕೆಲವರು ನಮ್ಮಿಂದ ಕಲಿತವರಿದ್ದರೆ, ಮತ್ತೆ ಕೆಲವರು ಇವರದೇನು ಎಂಬ ಮಾತಿರಬಹುದು. ಹೀಗೆ ಪ್ರತಿವರ್ಷವೂ ಬಂದು ಹೋಗುವ, ಹಲವು ಹತ್ತಾರು ವಿದ್ಯಾರ್ಥಿಗಳಲ್ಲಿ ಕೆಲವು ವಿದ್ಯಾರ್ಥಿಗಳು ಅವರ ವಿಶೇಷ ಗುಣಗಳಿಗೆ, ಸಾಮರ್ಥ್ಯಕ್ಕೆ ಹೆಸರಾಗಿ ಹಲವರು ಮನಸ್ಸಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ. ಹಾಗೆ ಉಳಿದು ನಿಜ ಬದುಕಿನಲ್ಲಿ ಅಳಿದು ಹೋದ ಕೆಲವು ವಿದ್ಯಾರ್ಥಿಗಳ ನೆನಪು ಮಾಡಿಕೊಳ್ಳುವುದೇ ಈ ಲೇಖನದ ಉದ್ದೇಶ.
1981ನೇ ವರ್ಷ ನನ್ನ ಬದುಕಿನಲ್ಲಿ ಅನೇಕ ಘಟನಾವಳಿಗಳಿಂದ ಕೂಡಿದ ವರ್ಷ. ಮೇ ತಿಂಗಳಲ್ಲೊಂದು ದಿನ ನಮ್ಮ ಊರಿಗೆ ಹೋಗಿ, ಅಲ್ಲಿನ ತರಲೆಗಳನ್ನೆಲ್ಲ ತಲೆಯಲ್ಲಿ ತುಂಬಿಕೊAಡು ಅವ್ವ ಕೊಟ್ಟ ಸಣ್ಣಪುಟ್ಟ ಸಾಮಾನುಗಳನ್ನು ಕಟ್ಟಿಕೊಂಡು ಮೂರು ಮೈಲು ನಡೆದು. ಶಿವಮೊಗ್ಗದ ಬಸ್ಸು ಹಿಡಿದು ಪ್ರಾಜೆಕ್ಟ್ ತಲುಪುವ ವೇಳೆಗೆ ನನಗೆ ಸಾಕೋ ಸಾಕಾಗಿ ಹೋಗಿತ್ತು. ಹಲವು ಆತಂಕಗಳನ್ನು ಪಾರುಮಾಡಿಕೊಂಡು ನಮಗಾಗಿದ್ದ ಮಗ, ಹೆಂಡತಿಯನ್ನು ನೋಡೋ ಕಾತರದಲ್ಲಿ ದಣಿವು ಕರಗುತ್ತಿತ್ತು. ಮನೆಯೊಳಗೆ ಕಾಲಿಡುತ್ತಿದ್ದಂತೆ ಮಗನ ಆಟ-ಪಾಟ, ತನ್ನ ನೌಕರಿ ವಿಷಯ ಹೇಳುತ್ತಿದ್ದೆ.
ನನ್ನಾಕೆ `ಶಿವಮೊಗ್ಗದಲ್ಲೇನಾದರು ಕಾಫಿ ಕುಡಿದಿದ್ದೀರಾ?’ ಎಂದು ಕೇಳಿದಳು. ನನಗೆ ಅದ್ಯಾವ ದೊಡ್ಡ ಪ್ರಶ್ನೆ ಎಂದು ಉತ್ತರಿಸುವ ಗೋಜಿಗೆ ಹೋಗದೆ ಆರಾಮವಾಗಿ ಕೂರುವ ಹಂಚಿಕೆಯಲ್ಲಿದ್ದೆ. ಇಪ್ಪತ್ನಾಲ್ಕು ಗಂಟೆಗಳೂ ತಾನೊಬ್ಬಳೇ ಸಹಿಸಿಕೊಂಡು ಹಿಂಸೆಪಟ್ಟುದನ್ನು ಒಮ್ಮೆಲೆ ಕಣ್ಣೀರ ಕೋಡಿಯಲ್ಲಿ ಉಸುರಿದಳು. `ಯಶೋದÀ ಬೆಂಗಳೂರಲ್ಲಿ ತೀರಿ ಹೋದಳಂತೆ, ನಿಮಗೆ ಫೋನ್ ಮಾಡಿದ್ದರು’ ಎಂದಾಗ ನನಗೆ ಅಸಾಧ್ಯ ಸಂಕಟದೊಡನೆ ದಿಗ್ಭçಮೆಯಾಯಿತು. ಹತ್ತಿರದ ಮನೆಯವರಿಂದ ಸೈಕಲ್ ಪಡೆದು ಅವಳ ಶವ ತಂದ ಹಳ್ಳಿಯ ಕಡೆಗೆ ವೇಗವಾಗಿ ಹೊರಟೆ.
1977-78ರ ಈ ಕೇಂದ್ರದ ಪ್ರಾರಂಭದ ದಿನಗಳಲ್ಲಿ ಅಭಿನಯಿಸಲಾದ ಅನೇಕ ನಾಟಕಗಳಲ್ಲಿ ಸ್ಫೂರ್ತಿಯನ್ನು ವೈವಿಧ್ಯತೆಯನ್ನು ತಂದು ಕೊಟ್ಟ ಇವಳು ಅಭಿನಯ ಕಲೆಯಲ್ಲಿ ನಿಷ್ಣಾತಳಾಗಿದ್ದಳು. ಅರ್ಥಶಾಸ್ತçದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿ ಕರ್ನಾಟಕದ ಮುಖ್ಯ ಸಂಶೋಧನ ಕೇಂದ್ರದಲ್ಲಿ ಸಂಶೋಧನೆ ಮಾಡುತ್ತಿದ್ದ ಇವಳ ಸಾವು, ನಮ್ಮ ಕೇಂದ್ರದಿAದ ಹಾರಿಬಿಟ್ಟ ಹಕ್ಕಿಯ ರೆಕ್ಕೆ ಮುರಿದು ಬೆಂಕಿಗೆ ಬಿದ್ದಷ್ಟು ನೋವು ತಂದಿತ್ತು.
ವಿದ್ಯಾರ್ಥಿ ದೆಸೆಯಿಂದಲೂ ಉದಾತ್ತ ಗುಣಗಳನ್ನು ಬೆಳೆಸಿಕೊಂಡಿದ್ದ ಯಶೋದ ನ್ಯಾಯಕ್ಕಾಗಿ ಯಾರ ನಿಷ್ಠುರವನ್ನೂ ಲೆಕ್ಕಿಸದ, ನೇರ ಮನಸ್ಸಿನ ಸರಳ ಸುಂದರ ಹುಡುಗಿ. ನಮ್ಮ ಅನೇಕ ಹುಡುಗ-ಹುಡುಗಿಯರಲ್ಲಿ ಕಾಣಸಿಗದ, ಆರೋಗ್ಯಕರ ಮನಸ್ಸಿನ ಈ ಹುಡುಗಿಗೆ ಅನಾರೋಗ್ಯವು ಇಷ್ಟು ಬೇಗ ಸಾವು ತರುವುದೆಂದು ಯಾರು ತಾನೆ ಊಹಿಸಿದ್ದರು? ನನ್ನ ಮಗನನ್ನು ನೋಡಲು ಬರುವೆ ಎಂದು ಕಾಗದ ಬರೆದಿದ್ದು, ಇವಳು ಕೊನೆಗೆ ಮಾಂಸದ ಮುದ್ದೆಯಾಗಿ ಅವಳ ಊರಲ್ಲಿ ನೋಡಿ, ನನ್ನ ವಿದ್ಯಾರ್ಥಿನಿಯಾಗಿ ಓಡಾಡುತ್ತಿದ್ದವಳು ಇವಳೇ ಎಂದು ಯೋಚನೆಯಲ್ಲಿ ಮುಳುಗುವಂತೆ ಮಾಡಿ ಮರೆಯಾದಳು.
ಬಷೀರ್ ಅಹಮದ್
ಬಷೀರ್ ಅಹಮದ್ ಎಂಬ ವಿದ್ಯಾರ್ಥಿ ಓದು ಮುಗಿಸಿ ಹೋದ ನಂತರ, ಆತನ ಶಿಸ್ತನ್ನು ಹೋಲುವ ವಿದ್ಯಾರ್ಥಿಗಳು ನಮ್ಮ ಕೇಂದ್ರಕ್ಕೆ ಬಂದಿಲ್ಲವೆಂದೇ ಹೇಳಬೇಕು. ವಿನಯ ವಿದ್ಯಾಭ್ಯಾಸದ ಲಕ್ಷಣ ಎನ್ನುವ ರೀತಿಯಂತೆ ಈತನ ನಡವಳಿಕೆ.
ಕನ್ನಡವನ್ನು ಸರಾಗವಾಗಿ ಮಾತನಾಡಲಾರದವನಾಗಿದ್ದ ಈತ ನನ್ನನ್ನು ಹಲವು ಬಾರಿ ಕಾಡಿ ಕನ್ನಡವನ್ನು ಕಲಿತದ್ದುಂಟು. ಅವನ ಮಧುರವಾದ ಕಂಠದಿಂದ ಕನ್ನಡ ಹಾಡುಗಳನ್ನು ಹಾಡಿಸಲು ನಾನು ಕನ್ನಡ ಪದ್ಯಗಳನ್ನು ವಿವರಿಸಿ ಬರೆದುಕೊಡುತ್ತಿದ್ದೆ. ಅವನಿಗೆ ಇದ್ದ ಅಪಾರ ಶ್ರದ್ಧೆಯಿಂದಾಗಿ ಸುಲಲಿತವಾಗಿ ಕನ್ನಡ ಮಾತಾಡುವುದರ ಜೊತೆಗೆ, ಕನ್ನಡ ಹಾಡುಗಳನ್ನು ಹಾಡಿ ನಮ್ಮ ಕೇಂದ್ರದ ಮತ್ತು ನಮ್ಮ ಈ ಪರಿಸರದ ಜನರ ಹೃದಯದಲ್ಲಿ ಈಗಲೂ ಗುಂಯ್ಗುಡುತ್ತಿದ್ದಾನೆ.
ಕೇಂದ್ರದಿಂದ ಎಂ.ಎ., ಪಾಸು ಮಾಡಿಕೊಂಡು ಹೋದ ಮೇಲೆ ಬೆಂಗಳೂರಿನಲ್ಲಿ ಉಪಾಧ್ಯಾಯನಾಗಿ ಕೆಲಸ ಮಾಡುತ್ತಿರುವಾಗ ಮತ್ತೆ ಪ್ರಾಜೆಕ್ಟ್ಗೆ ಬಂದಿದ್ದನು. ಆತನ ಕಂಠ ಮಾಧರ್ಯವನ್ನು ಸವಿಯಲು, ಮನೆಗೆ ತಿಂಡಿ ತಿನ್ನಲು ಬನ್ನಿ ಎಂದು ಆಹ್ವಾನಿಸಿದೆ. ಆತ, ತಿಂಡಿ ತಿನ್ನಲು ಬೇರೊಬ್ಬ ಅಧ್ಯಾಪಕರು ಕರೆದಿದ್ದಾರೆ, ನಿಮ್ಮ ಮನೆಗೆ ಊಟಕ್ಕೇನೆ ಬರುವೆ ಸಾರ್, ಅಂದಾಗ ಸಂತೋಷದಿAದ ಕರೆದೊಯ್ದೆ. ಜೊತೆಗೆ ಮಾತುಕತೆ ಹೀಗೆ ನಡೆದಿತ್ತು. ಪುಳಿಚಾರು ಊಟ ಕಣಯ್ಯಾ ಎಂದಾಗ, ಮುಂದಿನ ಸಾರಿ ನಾನೆ ಬಂದು ಬಿರಿಯಾನಿ ಮಾಡುವೆ ಎಂದು ಹೇಳಿದ. ಬಿರಿಯಾನಿ ಮಾಡಿ ಉಣ್ಣುವ ದಿನ ಬರುವ ಮುನ್ನವೇ ಜಾಂಡೀಸ್ ಬಂದು ಬಷೀರ್ ಇನ್ನಿಲ್ಲವಾದ. ಸತ್ತ ಹಲವು ದಿನಗಳ ನಂತರ ಬಂದ ಪತ್ರದಿಂದ ಸಂಕಟವಾಯಿತು.
ಈಗ ಯಾವ ಸಭೆ ಸಮಾರಂಭಗಳಲ್ಲಿ ಯಾರು ಹಾಡು ಹೇಳಿದರೂ ಬಷೀರ್ನ ನೆನಪು ಬಂದು ಕಣ್ಣು ತೇವವಾಗುತ್ತದೆ. ಕಡುಬಡತನದಿಂದ ಬಂದು ಅಪಾರ ಸ್ವಾಭಿಮಾನಿಯಾಗಿ ಬೆಳೆದು ಅಧ್ಯಾಪಕರೆಲ್ಲರ ವಿಶ್ವಾಸ ಗಳಿಸಿ ನಿಗರ್ವಿಯಾಗಿದ್ದ ಬಷೀರ್ ಅಹಮದ್ ಹಲವು ಆಸೆಗಳನ್ನಿಟ್ಟುಕೊಂಡು ಹಗಲಿರುಳು ದುಡಿಯುತ್ತಿದ್ದ. ಸಾಮಾನ್ಯ ರೋಗವೊಂದು ಅವನ ಆಸೆಗಳಿಗೆ, ಅವನ ಸಾಮರ್ಥ್ಯಗಳಿಗೆ ಇತಿಶ್ರೀ ಹಾಡುವುದೆಂದು ಯಾರು ತಾನೆ ನಂಬಿದ್ದರು?
ಗೋಪಾಲಸ್ವಾಮಿ
ಈತ ನಮ್ಮ ಕೇಂದ್ರಕ್ಕೆ ಬಂದಾಗಲೇ ನನಗೆ, ಹೊಸ ಶಕ್ತಿಯುಳ್ಳ ಯುವಕನೊಬ್ಬ ಬಂದಿದ್ದಾನೆ ಎಂಬ ಆಸೆ ಹುಟ್ಟಿತ್ತು, ಗೋಪಾಲಸ್ವಾಮಿ ನೋಡಲು ಪೀಚಲು. ಇವನೆಂತಹ ಹುಡುಗ ಎಂದು ಯಾರಾದರೂ ಕಡೆಗಣಿಸಬಹುದಾಗಿದ್ದ ಈತ ಮನದೊಳಗೆ ಅಗಾಧ ಬಾಂಬನ್ನೇ ಇಟ್ಟುಕೊಂಡಿದ್ದು ಸಿಡಿಸಲಾಗುವ ಮುನ್ನವೇ ನೆನಪಾಗಿ ಹೋದನು.
ಕನ್ನಡ ಎಂ.ಎ., ಗೆ ಬಂದು ಸೇರಿದಾಗ ಸಂಘಟನೆ, ಬಂಡಾಯ ಎಂದು ಹಲವು ಹತ್ತು ರೀತಿಯ ಹೋರಾಟದಲ್ಲಿ ಹಲವು ಬಾರಿ ಪೋಲೀಸ್ ಏಟು ತಿಂದು ಈ ದೇಶದ ಜಡ್ಡುಗಟ್ಟಿದ ಸಮಾಜದ ನಿರ್ಲಜ್ಜ ಅಸಮಾನತೆಯನ್ನು ಧಿಕ್ಕರಿಸಿದ ಈತನಿಗೆ ಸ್ವಂತ ಆಸೆಗಳು ದೂರ. ಈತ ನಮ್ಮ ಕೇಂದ್ರಕ್ಕೆ ಬಂದಾಗಲೇ ನನಗೆ, ಹೊಸ ಶಕ್ತಿಯುಳ್ಳ ಯುವಕನೊಬ್ಬ ಬಂದಿದ್ದಾನೆ ಎಂಬ ಆಸೆ ಹುಟ್ಟಿತ್ತು. ಆದರೆ ಅದು ಬಹಳ ದಿನ ಉಳಿಯಲಿಲ್ಲ.
ಸಾಮಾನ್ಯ ಖಾಯಿಲೆಯೆಂದು ಮೆಗ್ಗಾನ್ ಆಸ್ಪತ್ರೆ ಸೇರಿದ. ಈತನ ಹಣಕಾಸಿನ ಸಮಸ್ಯೆಗೆ ವಿದ್ಯಾರ್ಥಿಗಳು ಅಧ್ಯಾಪಕರು ಹಣ ಸೇರಿಸಿಕೊಟ್ಟರು. ವಿದ್ಯಾರ್ಥಿ ಜೀವನದುದ್ದಕ್ಕೂ ಹೋರಾಟದ ಬದುಕಿನಲ್ಲಿ ಏಟು ತಿಂದು ಅಪರೂಪದ ವ್ಯಕ್ತಿಯ ಬದುಕು ಬೆಳಗುವ ಮುನ್ನವೇ ನಂದಿಹೋಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | 18 ನೇ ವಾರ್ಡ್ ನಲ್ಲಿ ಕೈ ಅಭ್ಯರ್ಥಿ ಸಮರ್ಥ ಶಾಮನೂರು ಪ್ರಚಾರ
ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಅವರು ಮಂಗಳವಾರ 18 ನೇ ವಾರ್ಡ್ ವ್ಯಾಪ್ತಿಯಲ್ಲಿ ಅಬ್ಬರ ಪ್ರಚಾರ ನಡೆಸಿದರು.
ನಗರದ ಬಾರ್ ಲೈನ್ ದರ್ಗಕ್ಕೆ ತೆರಳಿ ಚಾದರ ಅರ್ಪಿಸಿದ ಸಮರ್ಥ ಶಾಮನೂರು ಅವರಿಗೆ ಮುಸ್ಲಿಂ ಸಮಾಜದ ಬಾಂಧವರು ಆತ್ಮೀಯವಾಗಿ ಸನ್ಮಾನಿಸಿದರು. ಬಳಿಕ ಅಲ್ಲಿಂದ ಪ್ರಚಾರವನ್ನು ಆರಂಭಿಸಿದ ಅವರು ಎಂ.ಬಿ ಕೇರಿ, ಮಟನ್ ಮಾರ್ಕೇಟ್, ಗಡಿಯಾರ ಕಂಬ, ಸ್ವಾಗೇರ್ ಪೇಟೆ, ಹೊಂಡದ ರಸ್ತೆ, ಕಾಯಿಪೇಟೆಯ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ನರಸಿಂಹಪ್ಪ, ರವಿಕುಮಾರ್, ಕಾಶಿನಾಥ್ ಅವರ ಮನೆಗೆ ಅಭ್ಯರ್ಥಿ ಸಮರ್ಥ ಶಾಮನುರು ಅವರು ಭೇಟಿ ನೀಡಿದಾಕ್ಷಣ ಕುಟುಂಬಸ್ಥರು ದಿವಂಗತರಾದ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ನೆನೆದು ಭಾವುಕರಾದರು. ಶಾಮನೂರು ಸಮರ್ಥ ಅವರಿಗೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಂಡ ಬಹುಮತವನ್ನು ನೀಡಿ ಗೆಲ್ಲಿಸುತ್ತೇವೆ ಎಂದು ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡರಾದ ಚಂದ್ರ ಶೇಖರ್, ಸೋಗಿ ಶಾಂತಕುಮಾರ್, ಪ್ರವೀಣ್ ರಾವ್, ಬಕ್ಕೇಶ್, ಪರಮೇಶ್, ಜಯರಾಜ್, ಹನುಮಂತ್, ರಾಘವೇಂದ್ರ, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕರ್ನಾಟಕ ಜಾಹೀರಾತು ನೀತಿಗೆ ಸಂಪಾದಕರ ವಿರೋಧ ; ಸಿಎಂಗೆ ಮನವಿ
ನೀತಿಯನ್ನು ಪರಿಶೀಲಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಮಧ್ಯಾಹ್ನ ನಗರದ ಎಂ.ಬಿ.ಎ ಗ್ರೌಂಡ್ ಹೆಲಿಪ್ಯಾಡ್ ನಲ್ಲಿ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕರ್ನಾಟಕ ಜಾಹೀರಾತು ನೀತಿ-2026 ಜಿಲ್ಲಾ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿದ್ದು,ಇದರಿಂದ ಶತಶತಮಾನಗಳಿಂದ ಸಮಾಜದ ಮತ್ತು ಸರ್ಕಾರದ ಕೊಂಡಿಯಾಗಿ ಸೇವೆ ಮಾಡುತ್ತಿರುವ ಪತ್ರಿಕೆಗಳು ಮುಚ್ಚುತ್ತವೆ. ಯಾವುದೇ ಕಾರಣಕ್ಕೂ ಪತ್ರಿಕೆಗಳಿಗೆ ಮಾರಕವಾಗುವ ನಿಯಮಗಳನ್ನು ಅಳವಡಿಸದೇ ಪತ್ರಿಕೆಗಳ ಏಳಿಗೆಗೆ ಪೂರಕವಾದ ಅಂಶಗಳನ್ನು ಸೇರಿಸಿ ಕರ್ನಾಟಕ ಜಾಹೀರಾತು ನೀತಿಯನ್ನು ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.
ಸಂಘಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಜಾಹೀರಾತು ನೀತಿ ಪರಿಶೀಲಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ಆರ್ ಕುಣೆಬೆಳಕೆರೆ, ಖಜಾಂಜಿ ಶಿವಮೂರ್ತಿ ಟಿ.ಜಿ , ರಾಜ್ಯ ಸಂಘದ ನಾಮನಿರ್ದೇಶನ ಸದಸ್ಯ ಕೆ.ಜೈಮುನಿ ಮತ್ತು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕರಾದ ಇ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ಖಜಾಂಚಿ ಜೆ.ಎಸ್.ವೀರೇಶ್ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಬಡದಾಳ್ , ಹಿರಿಯ ಪತ್ರಕರ್ತರಾದ ಕೆ.ಏಕಾಂತಮ್ಮ, ಬಿ.ಎನ್.ಮಲ್ಲೇಶ್, ಮಲ್ಲಿಕಾರ್ಜುನ ಕಬ್ಬೂರು, ಆರ್.ಎಸ್.ತಿಪ್ಪೇಸ್ವಾಮಿ, ಕೊಟ್ರೇಶ್ ಅಣಬೂರುಮಠ, ನಿಂಗಪ್ಪ, ಗೋವಿಂದ ರಾಜು, ಫಕೃದ್ದೀನ್, ಆರ್.ರವಿ,ಬಿ.ವಾಸುದೇವ, ರಾಘವೇಂದ್ರ ರಾವ್, ವೇದಮೂರ್ತಿ,ನಿಂಗಪ್ಪ, ಪರಶುರಾಮ, ನಂದಕುಮಾರ್ ಮುಂತಾದವರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243



