Connect with us

ದಿನದ ಸುದ್ದಿ

ಸಾಮಾಜಿಕ ಜಾಲತಾಣಗಳು ಮತ್ತು ಸುಳ್ಳು ಸುದ್ದಿಗಳು..!

Published

on

  • ವಿವೇಕಾನಂದ. ಹೆಚ್.ಕೆ.

ಸಾಮಾಜಿಕ ಜಾಲತಾಣಗಳ ಮೇಲೆ ಇರುವ ಒಂದು ದೊಡ್ಡ ಆರೋಪ ಇಲ್ಲಿ ಸುಳ್ಳು ಮತ್ತು ಪ್ರಚೋದನಕಾರಿ ಸಂದೇಶಗಳು ಬಹು ವೇಗವಾಗಿ ಹರಡಿ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿವೆ. ಅವುಗಳಲ್ಲಿ ಬಿತ್ತರವಾಗುವ ಸಂದೇಶಗಳನ್ನು ಮಾನಿಟರ್ ಮಾಡಬೇಕು ಮತ್ತು ಶಿಕ್ಷೆ ವಿಧಿಸಬೇಕು ಎಂಬ ಕೂಗಿನ ಜೊತೆ ಕೆಲವು Watsapp ಗುಂಪುಗಳಲ್ಲಿ Forward ಮಾಡುವ ಸಂದೇಶಗಳಿಂದ ನಿರ್ವಾಹಕರು ತೊಂದರೆಗೆ ಆಗುವ ಭಯ ಕಾಡುತ್ತಿದೆ.

ಹಾಗಾದರೆ ವಾಸ್ತವ ಏನು ?

ಸುಳ್ಳು ವಂಚನೆ ಮೋಸ ವಿಷ ಕಾರುವ ಪ್ರಚೋದನಕಾರಿ ವಿಷಯಗಳು ಎಲ್ಲಾ ಕಾಲಕ್ಕೂ, ಎಲ್ಲಾ ಸಂದರ್ಭಗಳಿಗೂ ಯಾವಾಗಲೂ ಕಾನೂನು ಬಾಹಿರವೇ,ಅನೈತಿಕವೇ ಮತ್ತು ನಿಷಿದ್ಧವೇ. ಅದು ಸೋಷಿಯಲ್‌ ಮೀಡಿಯಾ ‌ಆಗಲಿ ಅಥವಾ ಎಲ್ಲೇ ಆಗಿರಲಿ ಅದನ್ನು ಒಪ್ಪುವ ಪ್ರಶ್ನೆಯೇ ಇಲ್ಲ.

ಒಂದು ವೇಳೆ ಅದು ಸಾಮಾಜಿಕ ಜಾಲತಾಣಗಳ ಕಾರಣದಿಂದ ಅತ್ಯಂತ ಅಪಾಯಕಾರಿ ಹಂತ ತಲುಪಿದೆ ಎಂದು ಹೇಳಿದರೆ ಇಡೀ ಸಮಾಜದ ಮಾನಸಿಕ ವರ್ತನೆಯ ಬಗ್ಗೆಯೇ ಅನುಮಾನಿಸಬೇಕಾಗುತ್ತದೆ. ಹಾಗಾದರೆ ನಾವೆಲ್ಲರೂ ಸುಳ್ಳು ವಂಚನೆಯ ಸಮಾಜದಲ್ಲಿ ಬದುಕುತ್ತಿದ್ದೇವೆಯೇ ಅಥವಾ ಅದನ್ನು ಅರ್ಥಮಾಡಿಕೊಳ್ಳುವ ಬುದ್ದಿ ಶಕ್ತಿ ನಮಗಿಲ್ಲವೇ.

ಇದನ್ನೂ ಓದಿ | ದಿ ಗ್ರೇಟೆಸ್ಟ್‌ ಇಂಡಿಯನ್ ಡಾ.ಅಂಬೇಡ್ಕರ್..!

ಸ್ವಲ್ಪ ಯೋಚಿಸಿ ನೋಡಿದರೆ ಸಾಮಾಜಿಕ ಜಾಲತಾಣಗಳನ್ನು ಅತಿಹೆಚ್ಚು ಸದುಪಯೋಗ ಮತ್ತು ದುರುಪಯೋಗ ಪಡಿಸಿಕೊಂಡ ಕುಖ್ಯಾತಿ ರಾಜಕೀಯ ಪಕ್ಷಗಳು ಮತ್ತು ಸಂಘಟನಾತ್ಮಕ ಪಂಥಗಳಿಗೆ ಸಲ್ಲುತ್ತದೆ.

ಇವು ಈ ಜಾಲತಾಣಗಳ ನಿರ್ವಹಣೆಗೆ ಏಜೆಂಟರುಗಳನ್ನು ನೇಮಿಸಿಕೊಂಡರು. ಕೆಲವು ಅಧೀಕೃತ ಮತ್ತೆ ಕೆಲವು ಅನಧಿಕೃತ. ಇವುಗಳ ಕೆಲಸ ಇತಿಹಾಸವನ್ನು ತಿರುಚುವುದು, ಅದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುವುದು, ಮಹಾಪುರುಷರ ಸಂದೇಶಗಳನ್ನು ತಪ್ಪಾಗಿ ಬರೆದು ತಮ್ಮ ಪರವಾಗಿ ತಿದ್ದುವುದು, ವಿರೋಧಿಗಳನ್ನು ದೇಶದ್ರೋಹಿಗಳಂತೆ ಚಿತ್ರಿಸುವುದು, ಇಲ್ಲಸಲ್ಲದ ಆರೋಪಗಳನ್ನು ಜಾಣ್ಮೆಯಿಂದ ಇತರರ ತಲೆಗೆ ಕಟ್ಟುವುದು.

ಪೋಟೋ ಶಾಪ್ ಸಂಕಲನ ತಂತ್ರದಿಂದ ಯಾರದೋ ತಲೆಗೆ ಇನ್ಯಾರನ್ನೋ ಜೋಡಿಸುವುದು, ಸುಳ್ಳು ಧ್ವನಿ ಸುರಳಿಗಳನ್ನು ಪ್ರಸಾರ ಮಾಡುವುದು, ಇತ್ತೀಚೆಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮುಸ್ಲಿಂಮನೊಬ್ಬ ಹಿಂದೂ ವೇಷ ಧರಿಸಿ, ಹಿಂದೂ ಒಬ್ಬ ಮುಸ್ಲಿಂ ವೇಷ ಧರಿಸಿ ಅನಾಹುತಕಾರಿಯಾಗಿ ಮಾತನಾಡುವುದು ಮುಂತಾದ ಅನೇಕ ಕುತಂತ್ರಗಳನ್ನು ಹರಿಯ ಬಿಡುತ್ತಾರೆ. ಇದು ಕೊನೆಗೆ ನಿಜ ಮತ್ತು ಸುಳ್ಳುಗಳ ನಡುವಿನ ವ್ಯತ್ಯಾಸಗಳನ್ನೇ ಗೊಂದಲಗೊಳಿಸಿದೆ. ಅದರ ಲಾಭವನ್ನು ಅವು ಪಡೆದರೆ ನಷ್ಟ ಮಾತ್ರ ಜನರ ಪಾಲಿಗೆ.

ಹಾಗಾದರೆ ಸುದ್ದಿಗಳ ನಿಖರತೆಯನ್ನು ಗುರುತಿಸುವುದು ಹೇಗೆ ?

ನೋಡಿ ಈಗಿನ ವ್ಯವಸ್ಥೆಯಲ್ಲಿ ಇದಕ್ಕೆ ದಿಡೀರನೇ ಒಂದು ಸ್ಪಷ್ಟ ಪರಿಹಾರ ಸಿಗುವುದಿಲ್ಲ. ಸತ್ಯ ಹರಿಶ್ಚಂದ್ರರ ಉಗಮವೂ ಆಗುವುದಿಲ್ಲ. ಇರುವುದರಲ್ಲಿ ನಾವು ಒಪ್ಪಬಹುದಾದ ಒಂದು ಸರಳ ಪರಿಹಾರವೆಂದರೆ..

ಏನೇ ಆಪಾದನೆಗಳು, ಪಕ್ಷಪಾತಗಳು, ವಿವೇಚನಾರಹಿತ ವಿಮರ್ಶೆಗಳು, ಸ್ಪರ್ಧಾತ್ಮಕ ತಂತ್ರಗಳು ಇದ್ದರೂ ಈಗಲೂ ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಲ್ಲಿ ಹೆಚ್ಚು ಕಡಿಮೆ ‌ನಂಬಲರ್ಹ ಸುದ್ದಿಗಳು ಪ್ರಸಾರವಾಗುತ್ತವೆ. ಅಧೀಕೃತ ಸುದ್ದಿ ಸಂಸ್ಥೆಗಳು, ಸರ್ಕಾರದ ಆಡಳಿತ ವ್ಯವಸ್ಥೆ, ಪೋಲೀಸ್, ಮುಂತಾದ ಎಲ್ಲವೂ ಮೊದಲು ಸುದ್ದಿಗಳನ್ನು ಇವುಗಳಿಗೆ ಕಳುಹಿಸುತ್ತವೆ‌.

ಈ ಮಾಧ್ಯಮಗಳಿಗೆ ಗೊತ್ತಿಲ್ಲದ ವಿಶ್ವದ ಯಾವುದೇ ದೊಡ್ಡ ಘಟನೆಗಳು ಇರುವುದೇ ಇಲ್ಲ. ಏನೇ ಅಪರಾಧ, ಅಪಘಾತ, ಅವಘಡ, ಸಾಧನೆ, ಪತನ, ಕ್ರಾಂತಿ, ಬದಲಾವಣೆ ಎಲ್ಲವೂ ಬಹುತೇಕ ಮಾಧ್ಯಮಗಳಿಗೆ ತಿಳಿಸಲಾಗುತ್ತದೆ. ಹಾಗೆಂದು ಸಂಪೂರ್ಣ ಎಲ್ಲವೂ ಎಂದು ಅಲ್ಲ.

ಕೆಲವು ಅಪರೂಪದ, ಕುತಂತ್ರದ, ಜನರಿಗೆ ಮರೆಮಾಚಿದ ಸುದ್ದಿಗಳು ಇರುತ್ತವೆ. ಆದರೆ ಅದು ಬಯಲಾಗುವುದು ಸಹ ಮಾಧ್ಯಮಗಳಿಂದಲೇ. ಯಾರೋ ಒಬ್ಬ ಜನಪ್ರಿಯ ವ್ಯಕ್ತಿಯ ಸಾವು ಮೊದಲು ಅಲ್ಲಿನ ಸ್ಥಳೀಯ ಜನರಿಗೆ ತಲುಪಿ, ಸಾಮಾಜಿಕ ಜಾಲತಾಣಗಳಲ್ಲಿ ಬಂದರೂ ಕೆಲವೇ ಕ್ಷಣಗಳಲ್ಲಿ ಮಾಧ್ಯಮಗಳಲ್ಲಿ ಬಂದೇ ಬರುತ್ತದೆ.

ಹಾಗೆಯೇ ಈ ಮಾಧ್ಯಮಗಳಲ್ಲಿ ಒಂದಷ್ಟು ಊಹೆ, ಆತುರ, ಕೆಟ್ಟ ವಿಮರ್ಶೆ, ವ್ಯಕ್ತಿ ನಿಂದನೆ ಇರುತ್ತದೆ. ಆದರೆ ತಲೆಬುಡವಿಲ್ಲದ ಅತ್ಯಂತ ಅಪಾಯಕಾರಿ ಸುದ್ದಿಗಳನ್ನು ಪ್ರಸಾರ ಮಾಡಲು ಭಯಪಡುತ್ತಾರೆ. ಏಕೆಂದರೆ ಅವರು ಸುದ್ದಿಗಳನ್ನು ಖಚಿತ ಪಡಿಸಿಕೊಳ್ಳುವ ವ್ಯವಸ್ಥೆ ಹೊಂದಿದ್ದಾರೆ ಮತ್ತು Accountability ಇದೆ. ಅವರ ಮೇಲೆಯೂ ಮಾನಹಾನಿ ಮೊಕದ್ದಮೆ ಹೂಡಬಹುದು.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಆ ರೀತಿಯ ವ್ಯವಸ್ಥೆ ಇಲ್ಲ. ಯಾರೋ ಒಬ್ಬ ವ್ಯಕ್ತಿ ವೈಯಕ್ತಿಕ ಸಂದೇಶವನ್ನು ಅಥವಾ ದೃಶ್ಯಗಳನ್ನು ಬೇಕಂತಲೇ ಹರಿಯ ಬಿಡಬಹುದು. ಅದು ಹೊಸದೋ ಹಳೆಯದೋ ನಿಜವೋ ಸುಳ್ಳೋ ಯಾರಿಗೂ ತಿಳಿಯುವುದಿಲ್ಲ ಮತ್ತು ಅದಕ್ಕೆ ಯಾರೂ ಜವಾಬ್ದಾರರಿರುವುದಿಲ್ಲ. ನೀವು ಯಾರನ್ನು ಪ್ರಶ್ನಿಸಲು ಸಿಗುವುದಿಲ್ಲ.

ಈಗ ಕೊರೋನಾ ವೈರಸ್ ದಾಳಿಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಕೆಲವು ನಿಭಂದನೆಗಳನ್ನು ವಿಧಿಸಿದೆ ಎಂಬ ಮಾಹಿತಿ ಇದೆ. ಇದು ಹೊಸದೇನು ಅಲ್ಲ. ಎಂದಿನಂತೆ ಸುಳ್ಳು ಪ್ರಚೋದನಕಾರಿ ವಿಷಯಗಳಿಗೆ ಮಾತ್ರ ಸಂಬಂಧಿಸಿದೆ. ಸತ್ಯವನ್ನು, ಸ್ವತಂತ್ರ ಅಭಿಪ್ರಾಯವನ್ನು,
ಅಧೀಕೃತ ಮಾಹಿತಿಯನ್ನು ಕಾನೂನು ಮತ್ತು ನೈತಿಕತೆಯ ಮಿತಿಯೊಳಗೆ ವ್ಯಕ್ತಪಡಿಸಲು ಯಾವುದೇ ಅಂಜಿಕೆ ಬೇಡ.

Forward ಮಾಡುವ ವಿಷಯದಲ್ಲಿ ಮಾತ್ರ ಜಾಗೃತವಾಗಿರಿ. ಒಂದು ವೇಳೆ ಸುದ್ದಿಯೊಂದು ಮಾಧ್ಯಮಗಳಲ್ಲಿ ಪ್ರಸಾರವಾಗದೆ ಕೇವಲ ಜಾಲತಾಣಗಳಲ್ಲಿ ಮಾತ್ರ ಹರಿದಾಡುತ್ತಿದ್ದರೆ ಅದನ್ನು ಅಷ್ಟಾಗಿ ನಂಬಬಾರದು ಮತ್ತು Forward ಮಾಡಬಾರದು. ಯಾರೋ ‌ದೇಶಭಕ್ತಿಯ ಹೆಸರಿನಲ್ಲಿ, ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಭಾವನಾತ್ಮಕವಾಗಿ ಏನನ್ನೋ ಹೇಳಿದರೆ ಅದನ್ನು ಓದಬಹುದೇ ಹೊರತು Forward ಮಾಡಬಾರದು.

ಬೇಕಾದರೆ ಅದರ ಸಾರಾಂಶವನ್ನು ಸ್ವತಂತ್ರ ಅಭಿಪ್ರಾಯದೊಂದಿಗೆ ಮತ್ತು ಒಂದು ಅನುಮಾನದೊಂದಿಗೆ ಸ್ವತಃ ಬರೆಯಬಹುದು. ಕರೋನ ಔಷಧಿ, ಸಾವಿನ ಅಂಕಿ ಸಂಖ್ಯೆಗಳು ಮುಂತಾದ ವಿಷಯಗಳ ಬಗ್ಗೆ ಯಾವುದೇ ಸಂದೇಶ ಕಳಿಸಬಾರದು. ಹೊಸ ಸಂಶೋಧನಾ ವರದಿ ಸರ್ಕಾರಕ್ಕೆ ಮಾತ್ರ ಕಳುಹಿಸಿ.

ಸುಳ್ಳುಗಳನ್ನೇ ಧೈರ್ಯವಾಗಿ ರಾಜಾರೋಷವಾಗಿ ಪ್ರಸಾರ ಮತ್ತು ಪ್ರಚಾರ ಮಾಡುವ ಸಂದರ್ಭದಲ್ಲಿ, ಅದರ ಮುಖಾಂತರವೇ ಸಮಾಜವನ್ನು ನಿಯಂತ್ರಣ ಪಡೆಯುವ ಸಮಯದಲ್ಲಿ ಸತ್ಯ ಹೇಳುವವರು ಹೆದರಿಕೊಳ್ಳಬಾರದು. ಸುಳ್ಳು ಸತ್ಯವನ್ನು ಸೋಲಿಸಲು ಬಿಡಬಾರದು.

ಖಂಡಿತವಾಗಿಯೂ ಸತ್ಯ ಸುಳ್ಳಿಗಿಂತ ಹೆಚ್ಚು ಬಲಶಾಲಿ ಮತ್ತು ಪರಿಣಾಮಕಾರಿ. ಆದರೆ ನಾವು ನಿಜಕ್ಕೂ ಪ್ರಾಮಾಣಿಕರಾಗಿರಬೇಕು ಮತ್ತು ಗಟ್ಟಿ ವ್ಯಕ್ತಿತ್ವ ಹೊಂದಿರಬೇಕು. ನಮಗೆ ಅನುಕೂಲಕರ ಮುಖವಾಡ ತೊಟ್ಟು ಸತ್ಯವನ್ನು ‌ಸಮರ್ಥಿಸಲು ಸಾಧ್ಯವಿಲ್ಲ. ನಮ್ಮ ನಡೆ ನುಡಿ ನೇರವಾಗಿದ್ದರೆ ಸುಳ್ಳನ್ನು ಗೆಲ್ಲುಬಹುದು.

ಇದನ್ನೂ ಓದಿ | ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ ‘ಅಲ್ಲಮಪ್ರಭು’

ಆದ್ದರಿಂದ ವ್ಯವಸ್ಥೆ ಯಾವುದೇ ಇರಲಿ, ಮಾಧ್ಯಮ ಯಾವುದೇ ಇರಲಿ, ಕಾನೂನು ಏನೇ ಹೇಳಲಿ, ಸುಳ್ಳು ಪ್ರಚೋದನೆ ಅನೈತಿಕತೆ ಖಂಡಿತ ಶಿಕ್ಷಾರ್ಹ ಅಪರಾಧ ಮತ್ತು ಅಮಾನವೀಯ ಹಾಗೂ ದೇಶದ್ರೋಹ. ಆದರೆ ಸತ್ಯಕ್ಕೆ, ಸಮಾಜ ಒಪ್ಪಿತ, ಕಾನೂನಿನ ವ್ಯಾಪ್ತಿಯ ನೈತಿಕತೆಗೆ ಯಾವುದೇ ತಡೆ ಇಲ್ಲ.

ಸಾಮಾನ್ಯ ಜ್ಞಾನ ಇಲ್ಲಿ ಮುಖ್ಯ

ಸಾಮಾಜಿಕ ಜಾಲತಾಣಗಳು ಸಾಮಾನ್ಯ ಜನರ ಪ್ರಜಾಪ್ರಭುತ್ವದ ಒಂದು ಅತ್ಯುತ್ತಮ ವೇದಿಕೆ. ಅದರ ಧ್ವನಿ ಅಡಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದು. ಕೆಟ್ಟದ್ದರ ನೆಪದಲ್ಲಿ ಒಳ್ಳೆಯದನ್ನು ನಾಶ ಮಾಡುವುದು ಬೇಡ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಆರನೇ ಹಂತದ ಲೋಕಸಭಾ ಚುನಾವಣೆ ಮತದಾನ ಶಾಂತಿಯುತ

Published

on

ಸುದ್ದಿದಿನ ಡೆಸ್ಕ್ : ದೇಶದಲ್ಲಿ ಲೋಕಸಭಾ ಚುನಾವಣೆಯ 6ನೇ ಹಂತಕ್ಕಾಗಿ ಇಂದು ನಡೆದ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದೆ.

ಈ ಹಂತದಲ್ಲಿ 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಒಳಗೊಂಡಂತೆ ಒಟ್ಟು 58 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಿತು. 5 ಗಂಟೆಯ ವೇಳೆಗೆ ಬಂದ ವರದಿಯ ಪ್ರಕಾರ, 6ನೇ ಹಂತದ 58 ಕ್ಷೇತ್ರಗಳಲ್ಲಿ ಒಟ್ಟಾರೆ ಶೇಕಡ 57.70 ರಷ್ಟು ಮತದಾನವಾಗಿದೆ.

ಬಿಹಾರದಲ್ಲಿ ಶೇಕಡ 52.24, ಜಾರ್ಖಂಡ್‌ನಲ್ಲಿ ಶೇಕಡ 61.41, ಹರ್ಯಾಣzಲ್ಲಿ ಶೇಕಡ 55.93, ಒಡಿಶಾದಲ್ಲಿ ಶೇಕಡ 59.60, ಉತ್ತರಪ್ರದೇಶದಲ್ಲಿ 52.02 ಮತ್ತು ಪಶ್ಚಿಮಬಂಗಾಳದಲ್ಲಿ 77.99, ದೆಹಲಿಯಲ್ಲಿ 53.73 ಹಾಗೂ ಜಮ್ಮು-ಕಾಶ್ಮೀರದಲ್ಲಿ ಶೇಕಡ 51.35ರಷ್ಟು ಮತದಾನವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚನ್ನಗಿರಿ | ಆರೋಪಿ ಮೃತಪಟ್ಟ ಪ್ರಕರಣ ; ಅದು ಲಾಕಪ್ ಡೆತ್ ಅಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

Published

on

ಸುದ್ದಿದಿನ,ದಾವಣಗೆರೆ : ಚನ್ನಗಿರಿಯಲ್ಲಿ ಪೊಲೀಸ್ ವಶದಲ್ಲಿ ಆರೋಪಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಆರೋಪಿಗೆ ಮೂರ್ಛೆ ರೋಗವಿದ್ದು ಲಾಕಪ್ ಡೆತ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸ್ಪಷ್ಟನೆ

ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಪೊಲೀಸ್ ವಶದಲ್ಲಿದ್ದ ಆರೋಪಿ ಆದಿಲ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದು, ದೂರಿನ ಬೆನ್ನಲ್ಲೇ ಆದಿಲ್‌ನನ್ನು ಪೊಲೀಸರು ಠಾಣೆಗೆ ಕರೆತಂದಿದ್ದಾರೆ.

ಕರೆತಂದ ಕೆಲವೇ ನಿಮಿಷದಲ್ಲೇ ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿದ್ದಾನೆ. ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ಕಾರಣ ತಿಳಿದುಬರಲಿದೆ ಎಂದು ಹೇಳಿದ್ದಾರೆ.

ಆದಿಲ್ ಸಾವು ಬೆನ್ನಲ್ಲೇ ರೊಚ್ಚಿಗೆದ್ದ ಜನರು, ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದಾರೆ. ಚನ್ನಗಿರಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಚನ್ನಗಿರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಮಧ್ಯಾಹ್ನದ ಪ್ರಮುಖ ಸುದ್ದಿಗಳು 

Published

on

ಸುದ್ದಿದಿನ ಕನ್ನಡ ನ್ಯೂಸ್ ಮಧ್ಯಾಹ್ನದ ಪ್ರಮುಖ ಸುದ್ದಿಗಳು 

  1. ದೇಶದಲ್ಲಿ ಲೋಕಸಭಾ ಚುನಾವಣೆಯ 6ನೇ ಹಂತಕ್ಕಾಗಿ ಇಂದು ಮತದಾನ ಪ್ರಗತಿಯಲ್ಲಿದೆ. 11 ಗಂಟೆಯ ವೇಳೆಗೆ ಬಂದ ವರದಿಯ ಪ್ರಕಾರ ಒಟ್ಟಾರೆ 6ನೇ ಹಂತದ 58 ಕ್ಷೇತ್ರಗಳಲ್ಲಿ ಶೇಕಡ 25.76ರಷ್ಟು ಮತದಾನವಾಗಿದೆ. ಬಿಹಾರದಲ್ಲಿ ಶೇಕಡ 23.67, ಹರಿಯಾಣದ ಶೇಕಡ 22.09, ಜಾರ್ಖಂಡ್‌ನಲ್ಲಿ ಶೇಕಡ 27.80, ಒಡಿಶಾದ ಶೇಕಡ 21.30, ಉತ್ತರಪ್ರದೇಶದ 27.06, ಪಶ್ಚಿಮಬಂಗಾಳದಲ್ಲಿ 36.88, ದೆಹಲಿಯಲ್ಲಿ 21.69 ಹಾಗೂ ಜಮ್ಮು-ಕಾಶ್ಮೀರದಲ್ಲಿ ಶೇಕಡ 23.11ರಷ್ಟು ಮತದಾನವಾಗಿದೆ.
  2. ದೆಹಲಿಯಲ್ಲಿಂದು ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಕೇಂದ್ರ ಸಚಿವರಾದ ಡಾ. ಎಸ್. ಜೈಶಂಕರ್, ಹರ್‌ದೀಪ್ ಸಿಂಗ್ ಪುರಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಆಪ್ ನಾಯಕಿ ಅತೀಶಿ ಸಿಂಗ್ ಸೇರಿದಂತೆ ಹಲವು ಪ್ರಮುಖರು ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಸಾರ್ವಜನಿಕರನ್ನು ಮತದಾನದಲ್ಲಿ ಭಾಗವಹಿಸಲು ಪ್ರೇರೇಪಿಸಿದ್ದಾರೆ.
  3. ಮಳೆಗಾಲ ಆರಂಭವಾಗಿದ್ದು, ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಹಾವೇರಿ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
  4. ಎರಡು ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಹಾಗೂ ಗಾಳಿಯಿಂದ ಉಂಟಾದ ಹಾನಿಗೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆಯೂ ಆಗಿರುವ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.
  5. ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ – ಎನ್‌ಐಎ ಬಂಧಿಸಿದೆ. ಹುಬ್ಬಳ್ಳಿಯ 35 ವರ್ಷದ ಶೋಯಬ್ ಅಹಮದ್ ಮಿರ್ಜಾ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 5ನೇ ಆರೋಪಿಯಾಗಿದ್ದು, ಲಷ್ಕರ್ ಎ ತೊಯ್ಬಾದ ಭಯೋತ್ಪಾದನಾ ಸಂಚು ಪ್ರಕರಣದಲ್ಲಿ ಮಾಜಿ ಆರೋಪಿಯಾಗಿದ್ದಾನೆ ಎಂದು ಎನ್‌ಐಎ ತಿಳಿಸಿದೆ.
  6. ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ಸ್ ಪಂದ್ಯದಲ್ಲಿ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು, ವಿಶ್ವದ 20ನೇ ಶ್ರೇಯಾಂಕಿತ ಥೈಲ್ಯಾಂಡ್‌ನ ಬುಸಾನನ್ ಆಂಗ್‌ಬಾಮ್‌ರುಂಗ್‌ಫಾನ್ ವಿರುದ್ಧ ಫೈನಲ್ಸ್ ಪ್ರವೇಶಿಸಲು ಸೆಣಸಲಿದ್ದಾರೆ.
  7. ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 36 ರನ್‌ಗಳ ಗೆಲುವು ದಾಖಲಿಸಿದ್ದು, ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending