Connect with us

ಭಾವ ಭೈರಾಗಿ

ಕಥೆ | ಜೀವಧ್ವನಿ

Published

on

  • ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು,ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ

ಬೆಟ್ಟದ ತುತ್ತತುದಿಗೆ ಚಿಮ್ಮುತ್ತಾ ನೀರು ತನ್ನೊಳಗಿನ ಅಳಲನ್ನೆಲ್ಲಾ ತೋಡಿಕೊಳ್ಳತೊಡಗಿತು. ಮೋಡದೊಳಗಿಂದ ತೂರಿಬಂದು ಭೂಮಿಗೆ ಸುರಿದು ನದಿಯಾಗಿ ಹರಿಯುತ್ತಾ ಸಾಗರದವರೆಗೆ ತಲುಪಿಕೊಳ್ಳುವವರೆಗೆ ಎದುರುಗೊಳ್ಳುವ ತರಹೇವಾರಿ ಸಂಕಟಗಳನ್ನು ನಿವೇದಿಸಿಕೊಳ್ಳತೊಡಗಿತು.

ನೀಲಾಕಾಶದೆತ್ತರಕ್ಕೆ ಚಿಮ್ಮುತ್ತಲೇ ತನ್ನನ್ನು ಅರ್ಥಮಾಡಿಕೊಳ್ಳುವವರು ಯಾರಾದರೂ ಇದ್ದಾರಾ ಎಂದು ಪ್ರಶ್ನಿಸತೊಡಗಿತು. ಬಾವಿ, ಕೆರೆ, ಸಮುದ್ರ ಎಲ್ಲಿಯೂ ತಾನು ನೆಮ್ಮದಿಯಾಗಿಲ್ಲ ಎಂಬುದನ್ನು ಸಾರಿ ಸಾರಿ ಹೇಳತೊಡಗಿತು. ತಾನು ಖಾಲಿಯಾಗುತ್ತಾ ಭೂಮಿಯನ್ನು ಬರಡಾಗಿಸುವ ಎಚ್ಚರಿಸುವ ಎಲ್ಲ ಬಗೆಯ ತಂತ್ರಗಳನ್ನು ತೂರಿದರೂ ನರರ ಅತಿರೇಕಗಳು ಮುಂದುವರೆಯುತ್ತಿರುವುದರ ಬಗೆಗಿನ ಒಡಲಾಳದ ಬೇಗೆಯನ್ನು ವ್ಯಕ್ತಪಡಿಸುತ್ತಲೇ ಇತ್ತು.

ಸಮುದ್ರದ ದಂಡೆಯ ಕಡೆಗೆ ನುಗ್ಗುತ್ತಾ ಅಲೆಗಳ ಮೂಲಕ ಆರ್ಭಟಿಸಿದರೂ ಪ್ರಯೋಜನವಾಗದ ಕುರಿತು ಬೇಸರಿಸಿಕೊಳ್ಳುತ್ತಿತ್ತು. ಕೆಲಕಾಲ ಭೂಮಿಗೆ ಹನಿಯಾಗಿ ಬಾರದೇ ಎಲ್ಲೋ ಅಡಗಿ ಕುಳಿತುಕೊಂಡರೂ ಜಗತ್ತು ಮತ್ತಷ್ಟು ಕಠಿಣವಾಗುತ್ತಿರುವುದು ಅರಿವಿಗೆ ಬರುತ್ತಲೇ ಇತ್ತು. ಇವೆಲ್ಲವುಗಳ ನಡುವೆಯೇ ತನ್ನೊಳಗಿನ ಸೃಷ್ಟಿಪರ ಬದ್ಧತೆ ಈಗಲೂ ಮುಂದುವರೆಯುತ್ತಿರುವುದರ ಬಗ್ಗೆ ಒಂದಷ್ಟು ಹೆಮ್ಮೆಯ ಭಾವವೂ ಆಗಾಗ ಮಿಂಚಿ ಮಾಯವಾಗುತ್ತಿತ್ತು.

ತನ್ನ ಇರುವಿನೊಂದಿಗಿನ ಜಗದ ಅಸ್ತಿತ್ವದ ಬಗ್ಗೆ ನೆನಪಿಸಿಕೊಂಡು ಖುಷಿಯಾಗುತ್ತಿತ್ತು. ಜಗವನ್ನು ಶುದ್ಧವಾಗಿಸುವ ಜವಾಬ್ದಾರಿ ಸಿಕ್ಕಿರುವುದೇ ತನ್ನ ಹೆಚ್ಚುಗಾರಿಕೆ ಎಂಬ ಭಾವ ಒಡಲುಗೊಳ್ಳುತ್ತಿತ್ತು. ತಕ್ಷಣವೇ ತನ್ನನ್ನು ಯಾರೋ ಮತ್ತೆ ಮತ್ತೆ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ ಎಂಬ ಆತಂಕ ಆವರಿಸಿಕೊಳ್ಳುತ್ತಿತ್ತು. ತನ್ನನ್ನೇ ಇಲ್ಲವಾಗಿಸುವ ಹುನ್ನಾರಗಳು ಜಗದಾದ್ಯಂತ ನಡೆಯುತ್ತಿರುವ ಸುಳಿವುಗಳು ಗಮನಕ್ಕೆ ಬಂದಾಗಲಂತೂ ಭಯಭೀತಗೊಳ್ಳುತ್ತಿತ್ತು. ತನ್ನ ವಿರುದ್ಧ ಸಮರ ಸಾರುವ ಮತ್ತು ತನ್ನನ್ನು ಉಳಿಸಿಕೊಳ್ಳುವ ಇರಾದೆಯನ್ನು ಬೆಂಬಲಿಸುವ ಎರಡು ಬಗೆಯ ವೈಚಿತ್ರ್ಯವು ಒಗಟೆನ್ನಿಸುತ್ತಿತ್ತು.

ತಾನು ಇಲ್ಲವಾದರೇನಂತೆ, ಸೃಷ್ಟಿ ಮತ್ತೊಂದನ್ನು ರೂಪಿಸಬಹುದು ಎಂಬ ಸಮಾಧಾನವನ್ನೂ ತಂದುಕೊಳ್ಳುತ್ತಿತ್ತು. ತನ್ನೊಳಗಿನ ಚಲನೆಯ ಯಾನವನ್ನು ಮುಂದುವರೆಸಿಕೊಳ್ಳಬೇಕೆಂಬ ಆಶಾವಾದ ಎಂದೂ ಬಿಟ್ಟುಕೊಡಬಾರದು ಎಂದುಕೊಳ್ಳುತ್ತಿತ್ತು. ಬಹುಹಿಂದಿನಿಂದಲೂ ಸಿಹಿ-ಕಹಿಯ ಜೊತೆಗಿನ ಪ್ರಯಾಣದ ಅನಿವಾರ್ಯತೆಯನ್ನು ಕಂಡುಕೊಳ್ಳುತ್ತಾ ತನ್ನೊಳಗೆ ಚೈತನ್ಯವನ್ನು ರೂಪಿಸಿಕೊಳ್ಳುತ್ತಿತ್ತು.

ತೀರಾ ಇತ್ತೀಚೆಗಂತೂ ತನಗೆ ಮಾತು ಬಾರದ್ದರ ಬಗೆಗೆ ಕೊರಗಿಕೊಳ್ಳುತ್ತಿತ್ತು. ‘ಮಾತು ಬಾರದಿದ್ದರೇನಂತೆ, ಹರಿಯುವಾಗ ನಿನ್ನೊಳಗಿನ ನಿನಾದ ನಿನ್ನನ್ನು ಸಂಗೀತ ಜಗತ್ತಿನ ಶ್ರೇಷ್ಠ ಪ್ರತಿನಿಧಿಯನ್ನಾಗಿಸಿದೆ’ ಎಂದು ಆತ್ಮಸಾಕ್ಷಿ ಹೇಳಿದಾಕ್ಷಣ ಸಂತಸಗೊಳ್ಳುತ್ತಿತ್ತು. ಧುಮ್ಮಿಕ್ಕುವ ಜೀವಂತಿಕೆಯ ದನಿಯ ಭಾಷೆಯೇ ನಿನ್ನದಾಗಿರುವಾಗ ಮಾತಿನ ಸೀಮಿತ ಚೌಕಟ್ಟಿನ ಹಂಗೇಕೆ ನಿನಗೆ? ಎಂಬ ಪ್ರಶ್ನೆ ಎದುರುಗೊಳ್ಳುತ್ತಿತ್ತು. ಜಗತ್ತನ್ನು ನಾನೂ ಒಂದಿಷ್ಟು ನೋಡಬೇಕಿತ್ತು ಎಂದುಕೊಂಡಾಗಲೆಲ್ಲಾ ಕೋಟಿಕೋಟಿ ಜೀವರಾಶಿಗಳಿಗೆ ಇಂಬುಗೊಟ್ಟ ಹೆಗ್ಗಳಿಕೆಯೇ ನಿನ್ನೊಂದಿಗಿರುವಾಗ ಕಣ್ಣುಗಳನ್ನು ಹೊಂದುವ ಯಕಃಶ್ಚಿತ್ ಆಸೆ ಅತ್ಯಂತ ಸಣ್ಣದು ಎಂಬ ಒಳಸಾಂತ್ವನ ತೂರಿಬರುತ್ತಿತ್ತು.

ಸ್ಪರ್ಶಮಾತ್ರದಿಂದ ಜೀವಸಂಕುಲಕ್ಕೆ ಹಿತಾನುಭವ ನೀಡಿದಾಗಿನ ಪರಿಣಾಮಗಳನ್ನು ಗೊತ್ತುಮಾಡಿಕೊಳ್ಳುವ ಇರಾದೆ ಒಳಗೊಳಗೆ ಮೂಡಿದಾಗಲೆಲ್ಲಾ ಪ್ರತಿಫಲಾಪೇಕ್ಷೆ ಸಲ್ಲದು ಎಂಬ ಎಚ್ಚರ ಗೋಚರವಾಗಿಬಿಡುತ್ತಿತ್ತು. ಚಿಗುರಿಸುವ ತನ್ನೊಳಗಿನ ಶಕ್ತಿಯ ಸ್ವರೂಪವನ್ನು ಸ್ವತಃ ತಿಳಿದುಕೊಳ್ಳುವ ಶತಪ್ರಯತ್ನ ನಡೆಸುವಾಗ ಪ್ರಾಕೃತಿಕ ನಿಯುಕ್ತಿಯಿಂದ ವಿಮುಖಗೊಳ್ಳಕೂಡದು ಎಂಬ ಅಂತರಂಗದ ತಾಕೀತು ಸರಿಹಾದಿಯಲ್ಲಿರಿಸುತ್ತಿತ್ತು.
ಹೀಗೆ ಯೋಚಿಸುತ್ತಿರುವಾಗಲೇ ನನ್ನಿರುವೇ ಇಲ್ಲವಾಗಿಬಿಟ್ಟರೆ ಹೇಗೆ ಎಂಬುದು ಹೊಳೆಯಿತು.

ಆಗಲಾದರೂ ಮನುಷ್ಯರೆನ್ನಿಸಿಕೊಂಡವರೆಲ್ಲರೂ ಒಂದಾಗಿಬಿಡಬಹುದು ಎಂಬ ಆಶಾವಾದವು ಚಿಗುರೊಡೆಯಿತು. ತಕ್ಷಣವೇ ನಾನಿಲ್ಲದಿದ್ದರೆ ಮನುಷ್ಯ ಸೇರಿದಂತೆ ಸಕಲ ಜೀವಸಂಕುಲವೇ ಇಲ್ಲವಾಗಿಬಿಡುತ್ತದೆ ಎಂಬುದು ಅರಿವಿಗೆ ಬಂತು. ಹೀಗೆಲ್ಲಾ ನೀರು ತನ್ನೊಳಗೆ ಅಲ್ಲೋಲಕಲ್ಲೋಲ ಅಲೆಗಳನ್ನೆಬ್ಬಿಸಿಕೊಳ್ಳುತ್ತಿರುವುದಕ್ಕೆ ಕಾರಣಗಳೂ ಇವೆ. ನನ್ನ ಮೇಲೆ ಹಕ್ಕು ಸ್ಥಾಪಿಸಿಕೊಂಡವರೆಲ್ಲರೂ ಮತ್ತೊಬ್ಬರ ಮೇಲೆ ಪ್ರಾಬಲ್ಯ ಮೆರೆಯುವ ಸಂಕೇತವಾಗಿಸಿಕೊಂಡಿದ್ದರ ನೆನಪು ನೀರಿನಾಳದಲ್ಲೆಲ್ಲೋ ಈಗಲೂ ಇದೆ.

ನನ್ನನ್ನು ಒಬ್ಬರು ಮುಟ್ಟಿದರೆ ಸರಿ, ಮತ್ತೊಬ್ಬರು ಮುಟ್ಟಿದರೆ ಅಪವಿತ್ರ, ಮೈಲಿಗೆ ಎಂಬ ಸಂಕುಚಿತೆಯ ಪಳೆಯುಳಿಕೆ ಮತ್ತಷ್ಟು ಉತ್ಸಾಹ ಗಳಿಸಿಕೊಳ್ಳುತ್ತಿರುವ ಸುಳಿವುಗಳು ಸಿಗುತ್ತಿದ್ದವು. ದಣಿವಾರಿಸಿಕೊಳ್ಳುವಾಗ ಜೀವಗಳಿಗೆ ಸಾಥಿಯಾಗಿರುವ ಬಗ್ಗೆ ಧನ್ಯತೆ ಇರಿಸಿಕೊಳ್ಳುವ ಕಾಲಕ್ಕೆ ಮನುಜನೆಂಬೋ ಮನುಜನಿಂದ ಎದುರುಗೊಳ್ಳುವ ಸಂಕಟಗಳನ್ನು ನೆನೆದು ವ್ಯಥೆಯ ತೆಕ್ಕೆಗೀಡಾಗುತ್ತಿತ್ತು. ಆ ಕ್ಷಣಕ್ಕೆ ಇವರೆಲ್ಲರಿಗೆ ಪಾಠ ಕಲಿಸಬೇಕು ಎಂದುಕೊಳ್ಳುತ್ತಿತ್ತು.

ಒಂದು ತಿಂಗಳ ಕಾಲ ಕಣ್ಮರೆಯಾಗಬೇಕು ಎಂಬ ಠರಾವು ತೆಗೆದುಕೊಳ್ಳುತ್ತಿತ್ತು. ಸೂರ್ಯನ ಶಾಖವ ಎದುರುಗೊಂಡು ಅದೃಶ್ಯಗೊಳ್ಳಬಹುದು ಎಂದು ಲೆಕ್ಕ ಹಾಕುತ್ತಿತ್ತು. ಈ ಕಾರಣಕ್ಕಾಗಿಯೇ ತನ್ನೊಳಗೆ ಮಂಕು ಕವಿದು ಭೂಮಿತಾಯಿಯ ಗರ್ಭದೊಳಗೆ ಅಡಗಿ ಕುಳಿತುಕೊಂಡಾಗ ಜೀವಜಗದೊಳಗೆ ಏನೆಲ್ಲಾ ತಳಮಗಳಾಗುತ್ತಿದ್ದವು.

ಮನುಜನೆಡೆಗಿನ ಅಸಮಾಧಾನಕ್ಕೆ ಉಳಿದ ಜೀವಸಂಕುಲವ ಇಕ್ಕಟ್ಟಿಗೆ ಸಿಲುಕಿಸುವುದು ಸರಿಯಲ್ಲ ಎಂಬ ವಿವೇಚನೆ ಹೊಳೆದು ಮತ್ತೆ ನೆಲದ ಮೇಲಿನ ತನ್ನ ನಡಿಗೆಯನ್ನು ಮುಂದುವರೆಸುತ್ತಿತ್ತು. ಮೋಡದೊಳಗಿನ ಹನಿಗಳ ಬಳಗವನ್ನು ಸೇರಿಕೊಂಡು ಮತ್ತೆ ನೆಲದೆಡೆಗೆ ಪ್ರಯಾಣ ಬೆಳೆಸುವ ತನ್ನ ಎಂದಿನ ದಿನಚರಿಯನ್ನು ಚಾಲ್ತಿಯಿರಿಸಿಕೊಳ್ಳುತ್ತಿತ್ತು.

ಆದರೂ ಈ ಮನುಜಲೋಕ ತನ್ನೊಳಗೆ ಏನೆಲ್ಲಾ ಅಲ್ಲೋಲಕಲ್ಲೋಲ ಸೃಷ್ಟಿಸುತ್ತಿದೆಯಲ್ಲಾ ಎಂಬ ಬಗೆಗಿನ ಕೊರಗಂತೂ ಕರಗುತ್ತಲೇ ಇರಲಿಲ್ಲ. ತಾನು ಹರಿಯುವ ನೆಲದ ಮೇಲೆಲ್ಲಾ ಮನುಷ್ಯನ ಹೆಜ್ಜೆಗುರುತುಗಳು ಅಮ್ಮನ ಮಡಿಲಲ್ಲಿ ಆಡುವ ಮಗುವಿನ ಮುಗ್ಧತೆಯನ್ನು ಸಂಕೇತಿಸುವ ಬದಲು ಮತ್ತೆ ಮತ್ತೆ ಸವಾಲೆಸೆಯುತ್ತಿದ್ದವು.

ತನ್ನೊಳಗೆ ವಿಷ ಬೆರೆಸುವ ಅವನ ಆಟಾಟೋಪದಿಂದ ಮೈಯೆಲ್ಲಾ ಉರಿದಂತಾಗುತ್ತದೆ. ಹರಿಯುವೆಡೆಯೆಲ್ಲೆಲ್ಲಾ ಇರುವ ಜೀವಗಳು ಕ್ರಮೇಣ ಜೀವ ಕಳೆದುಕೊಳ್ಳುತ್ತವೆ. ಹರಿಯುವುದಕ್ಕೆ ಬೇಕಾದ ತಳಪಾಯದ ಗರ್ಭಕ್ಕೇ ಕನ್ನ ಹಾಕಿ ದೋಚುವ ಅವನ ವಿಲಕ್ಷಣ ಸ್ವಭಾವದ ಬಗ್ಗೆ ವಿಪರೀತ ಸಿಟ್ಟಿದ್ದರೂ ತನ್ನೊಳಗಿನ ಮಾತೃತ್ವ ಅವನ ವಿರುದ್ಧ ದ್ವೇಷದ ಭಾವ ತಳೆಯುವುದಕ್ಕೆ ಬಿಡುತ್ತಿರಲಿಲ್ಲ.

ತನ್ನನ್ನು ಪೂಜಿಸಿ ದೈವತ್ವದ ಪಟ್ಟ ಕಟ್ಟುವ ಇದೇ ಮನುಜಕುಲದವರಿಂದಲೇ ತನಗೆ ಮತ್ತೆ ಮತ್ತೆ ಸಂಕಷ್ಟ ಬಂದೊದಗುತ್ತಿರುವುದನ್ನು ನೆನೆದು ವಿಸ್ಮಯಗೊಳ್ಳುತ್ತಿತ್ತು. ತನ್ನನ್ನು ಪ್ರೋಕ್ಷಿಸಿ ಮಂತ್ರದ ಉದ್ಘೋಷ ಮೊಳಗಿಸಿ ದೊಡ್ಡ ದೊಡ್ಡ ಬಂಗಲೆಗಳನ್ನು ಪ್ರವೇಶಿಸುವ ಮನುಷ್ಯರ ನಡವಳಿಕೆಗಳು ವಿಚಿತ್ರವೆನ್ನಿಸುತ್ತಿದ್ದವು. ಪ್ರೋಕ್ಷಣೆಯ ಬೆಂಬಲದಿಂದ ಬಣ್ಣಬಣ್ಣದ ಗೋಡೆಗಳಿಗೆ ಅಪ್ಪಳಿಸಿದಾಗ ಅವುಗಳೊಳಗೆ ಅವಿತು ಕುಳಿತ ಮರಳಿನ ಕಣಗಳು ರೋಧಿಸುತ್ತಿರುವುದು ಕೇಳುತ್ತಿತ್ತು.

ಸಿಮೆಂಟಿನ ಕಬಂಧ ಬಾಹುವಿನಲ್ಲಿ ಬಿಗಿಯಲ್ಪಟ್ಟು ನನ್ನೊಳಗೆ ಉಸಿರುಗಟ್ಟುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಿರುವುದನ್ನು ಆಲಿಸುತ್ತಿತ್ತು. ಪೂಜಾಕಳಸಗಳೊಳಗಿದ್ದಾಗ ಕೆಳಗಿನಿಂದಲೂ ಆ ಕಣಗಳು ಒಟ್ಟಾಗಿ ನಮ್ಮೆಲ್ಲರನ್ನೂ ನಿನ್ನ ಹರಿವಿನ ಯಾನದಲ್ಲಿ ಸೇರಿಸಿಕೊಂಡುಬಿಡು, ಈ ಗೃಹಬಂಧನಕ್ಕೊಳಗಾಗಿ ಅಸ್ತಿತ್ವವೇ ಇಲ್ಲವಾಗಿದೆ ಎಂದು ಕೂಗುತ್ತಿದ್ದವು.

ನೆಲದಮ್ಮನ ಸಹನೆಯ ಮುಂದೆ ತನಗೆದುರಾಗುತ್ತಿರುವ ಸಂಕಟಗಳು ಏನೂ ಅಲ್ಲ ಎಂದುಕೊಂಡ ಕಾರಣಕ್ಕಾಗಿಯೇ ಮನುಷ್ಯರಲ್ಲದ ಮನುಷ್ಯರ ಅತಿರೇಕಗಳನ್ನು ತಡೆದುಕೊಳ್ಳುವುದಕ್ಕೆ ಸಾಧ್ಯವಾಗಿತ್ತು. ಆದರೆ, ಇದೇಬಗೆಯ ಆಲೋಚನೆ ಮೋಡಗಳಿಗೆ ಬರುತ್ತಲೇ ಇರಲಿಲ್ಲ. ಅವುಗಳದ್ದೇನಿದ್ದರೂ ನೇರನಿಷ್ಠುರ ನಿಲುವು. ಅಯ್ಯೋ ಎಂದು ಕೊರಗುವಂಥ ಸ್ವಭಾವ ಅವುಗಳದ್ದಲ್ಲ. ಜಗದ ಉದ್ದಗಲ ಇದ್ದ ಮರಗಳ ಮಾರಣಹೋಮಕ್ಕೆ ಕಾರಣವಾಗಿರುವ ಅವರಿಗೆ ಪಾಠ ಕಲಿಸುವ ಹಠ.

ಈ ಹಠದ ಕಾರಣಕ್ಕಾಗಿಯೇ ಅವು ಸ್ಥಗಿತಗೊಳ್ಳುತ್ತಿದ್ದವು. ಕಣ್ಮರೆಯಾಗುತ್ತಿದ್ದವು. ಅವುಗಳ ನೆರವಿಲ್ಲದೇ ತನಗೆ ಸ್ವತಂತ್ರ ಅಸ್ತಿತ್ವವಿಲ್ಲ ಎಂಬುದು ನೀರಿಗೆ ತಿಳಿದಿರುವುದರಿಂದ ಏನೂ ಮಾಡುವಂತಿರಲಿಲ್ಲ. ಒಮ್ಮೊಮ್ಮೆ ಅವುಗಳ ಸಿಟ್ಟು ಹೇಗಿರುತ್ತದೆಂದರೆ ದಿಢೀರನೆ ಪ್ರತ್ಯಕ್ಷಗೊಂಡು ತನ್ನನ್ನು ಸೆಳೆದುಕೊಂಡು ಒಂದೇ ಸಮನೆ ನೆಲಕ್ಕಪ್ಪಳಿಸಿ ಸಕಲ ಜೀವರಾಶಿ ದಿಗಿಲುಗೊಳ್ಳುವಂತಾಗುತ್ತದೆ.

ಇದರ ಅಂತರಾಳವೆಲ್ಲವನ್ನೂ ಬಲ್ಲ ರಾಮು ಸುಮ್ಮನಿರುತ್ತಿರಲಿಲ್ಲ. ಅದಕ್ಕೆ ಕನ್ನಡಿ ಹಿಡಿಯುವ ಹಂಬಲ ಅವನದ್ದು. ಇವನ ಊರಿನವರೆಲ್ಲರೂ ತನ್ನನ್ನು ಗಂಗೆಯ ಹೆಸರಿನಲ್ಲಿ ಕರೆಯುತ್ತಿದ್ದರು. ಅವರೆಲ್ಲರಿಗೆ ಗಂಗೆಯಾದರೆ ಇವನಿಗೆ ಬರೀ ಹೆಸರಿನಿಂದ ಕರೆಯುವ ವ್ಯಕ್ತಿತ್ವವಷ್ಟೇ ಅಲ್ಲ. ತನ್ನೊಳಗೆ ಜೀವಂತಿಕೆಯನ್ನು ನೆಲೆಗೊಳಿಸಿದ ಮಾತೃತ್ವದ ಆದರ್ಶ. ರಾಮು ಎಂಬ ಮನುಷ್ಯ ದೇಹಿ ನದಿಯ ಸ್ವರೂಪದ ತನ್ನೊಂದಿಗೆ ಏರ್ಪಡಿಸಿಕೊಂಡ ಮಾತುಕತೆ ಉಳಿದ ಯಾವ ಜೀವಿಗಳಿಗೂ ಸಾಧ್ಯವಾಗಿರಲಿಲ್ಲ. ಇವನು ಬಂದನೆಂದರೆ ಆಯಿತು.

ಗಂಗೆಗೆ ಖುಷಿಯಾಗುತ್ತಿತ್ತು. ನರಲೋಕದ ಬಗ್ಗೆ ಇದ್ದ ಎಲ್ಲ ಬಗೆಯ ತಪ್ಪುಕಲ್ಪನೆಗಳನ್ನು ಇವನೊಬ್ಬನ ಮಗುವಿನಂಥ ಸ್ಪರ್ಶ ಇಲ್ಲವಾಗಿಸಿಬಿಡುತ್ತಿತ್ತು. ಗಂಗೆಯ ಮಾತೃತ್ವದ ಕಾರಣಕ್ಕಾಗಿಯೇ ಸೃಷ್ಟಿಯ ವಿಶೇಷತೆಯ ಬಗ್ಗೆ ರಾಮುವಿನಲ್ಲಿ ಹೆಮ್ಮೆಯ ಭಾವಗಳಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಹೇಳಬೇಕಾದ ವಿಷಯ ಮತ್ತೊಂದಿದೆ. ಮನುಷ್ಯಲೋಕದ ಎರಡು ಜೀವಗಳು ಒಂದಾಗಿ ಅವುಗಳ ಮೂಲಕ ಜನ್ಮವೆತ್ತಿದ ನರಶಿಶುಗಳನ್ನು ತನ್ನೆಡೆಗೆ ಎಸೆದಾಗ ಅವುಗಳ್ಯಾವುವೂ ಬದುಕಿರಲಿಲ್ಲ. ಬದುಕುತ್ತಲೂ ಇರಲಿಲ್ಲ.

ಮನುಷ್ಯಲೋಕ ಹೆಸರಿಸಿಕೊಂಡ ಜಾತಿ, ಧರ್ಮಗಳ ಕಟ್ಟಳೆಗಳ ನೆಪದಲ್ಲಿ ಅತ್ಯಂತ ಕ್ರೂರವಾಗಿ ತನ್ನೆಡೆಗೆ ಎಸೆದಾಗ ತಾನು ಆ ಅಮಾಯಕ ಶಿಶುಗಳನ್ನು ತೇಲಿಸುವ ಪ್ರಯತ್ನ ನಡೆಸುತ್ತಿದ್ದೆನಾದರೂ ಆ ರಾಕ್ಷಸರು ಮತ್ತೆ ಧುಮುಕಿ ನನ್ನೊಳಗೆ ಮುಳುಗಿಸಿಬಿಡುತ್ತಿದ್ದರು. ಅವುಗಳ ಉಸಿರುಗಟ್ಟಿಸುತ್ತಿದ್ದರು. ಅವು ಸಾಯುವವರೆಗೂ ಬಿಡುತ್ತಿರಲಿಲ್ಲ. ಅಷ್ಟೇ ಅಲ್ಲ, ಅವುಗಳಿಗೆ ಜನ್ಮ ನೀಡಿದ ಹೆತ್ತವರ ಜಾತಿ ಮರ್ಯಾದೆಯನ್ನು ಕೆಡಿಸಿದ್ದೀರಿ ಎಂಬ ಆಪಾದನೆ ಹೊರಿಸಿ ನನ್ನ ಮೇಲೆ ಎಸೆದು ಮುಳುಗಿಸಿಬಿಡುತ್ತಿದ್ದರು.

ತನಗೋ ಮತ್ತೆ ಮತ್ತೆ ಪಾಪಪ್ರಜ್ಞೆ ಕಾಡುತ್ತಲೇ ಇತ್ತು. ಕೊಲೆಗೀಡಾದ ಈ ಅಮಾಯಕರ ರಕ್ತ ನದಿಯ ರೂಪದ ತನ್ನೊಳಗೆ ಬೆರೆತಾಗ ತನ್ನ ಅಸ್ತಿತ್ವದ ಬಗೆಗೇ ಜಿಗುಪ್ಸೆಯ ಭಾವ ಗಂಗೆಯನ್ನು ಮತ್ತೆ ಮತ್ತೆ ಆವರಿಸಿಕೊಂಡದ್ದೂ ಇದೆ. ಆದರೆ, ಇವನೊಬ್ಬನನ್ನು ಬದುಕಿಸಿದ ಒಂದಷ್ಟು ತೃಪ್ತಿ ಗಂಗೆಗಿದೆ. ಮುಂಚಿನ ಯಾರನ್ನೂ ಉಳಿಸಿಕೊಳ್ಳಲಾಗದ ಈ ಗಂಗೆ ರಾಮುವನ್ನು ಉಳಿಸಿಕೊಂಡ ಘಳಿಗೆ ಆಕೆಯೊಳಗೇ ವಿಸ್ಮಯವನ್ನುಂಟುಮಾಡಿದೆ.

ಪ್ರಕೃತಿಯೇ ಯಾವುದೋ ಮಹತ್ವದ ಉದ್ದೇಶಕ್ಕಾಗಿ ಈ ಕೂಸನ್ನು ಉಳಿಸಿರಬಹುದು ಎಂದುಕೊಳ್ಳುತ್ತಿದ್ದಳು. ಅಂದು ಇವನ ಹೆತ್ತವರನ್ನು ನನ್ನೆಡೆಗೆ ನೂಕಿ ಸಾಯಿಸಿದ ನಂತರ ಇವನ ದೇಹವನ್ನೂ ಎಸೆದುಬಿಟ್ಟಿದ್ದರು. ಅದ್ಯಾವುದೋ ಚೈತನ್ಯಶಕ್ತಿ ನನ್ನೊಳಗೆ ಧುಮುಕಿದ ಅನುಭವವಾಗಿತ್ತು. ಆ ಕ್ಷಣಕ್ಕೆ ಆ ಪುಟ್ಟ ಶಿಶುದೇಹ ನನ್ನಿರುವಿನ ನೆಲದಾಳದೊಳಕ್ಕಿಳಿದರೂ ಮುಳುಗಲೇ ಇಲ್ಲ. ಒಂದಷ್ಟು ಮುಂದಕ್ಕೆ ಹೋಗಿ ತೇಲಿಬಿಟ್ಟಿತು. ಬಹುದೂರ ಹೋಗುತ್ತಲೇ ದಡ ಸೇರಿಕೊಂಡುಬಿಟ್ಟಿತು.

ಆಗಲೇ ಅದು ಹೊಸಹುಟ್ಟು ಪಡೆದದ್ದು. ಅಲ್ಲಿಂದಲೇ ಗಂಗೆಗೆ ಅದರೊಂದಿಗೆ ಕರುಳಬಳ್ಳಿಯ ನಂಟು ಶುರುವಾಗಿತ್ತು. ಆಗಿನಿಂದಲೂ ಗಂಗೆ ಮತ್ತು ರಾಮು ಇಬ್ಬರೂ ಪರಮಾಪ್ತ ಆತ್ಮಗಳ ಹಾಗೆ ನಂಟನ್ನು ಬೆಸೆದುಕೊಂಡಿದ್ದಾರೆ. ಬಾಲ್ಯದಿಂದ ಹಿಡಿದು ಇಲ್ಲಿಯವರೆಗೆ ಸದಾ ಹರಿವ ಅಂತಃಕರಣದ ಗುಣದೊಂದಿಗೆ ಆಕೆ ಇವನನ್ನು ಆರೈಕೆ ಮಾಡಿದ್ದಾಳೆ. ಒಡಲಬೇಗೆಯ ಕಾರಣಕ್ಕಾಗಿಯೇ ಧುಮ್ಮಿಕ್ಕಿದ ಕಣ್ಣಹನಿಗಳನ್ನು ಒರೆಸಿ ಸಾಂತ್ವನ ಹೇಳಿದ್ದಾಳೆ.

ಹೆಜ್ಜೆಹೆಜ್ಜೆಗೂ ಬಡತನವು ಮತ್ತೆ ಮತ್ತೆ ಮುಖಾಮುಖಿಯಾಗಿಸಿದ ಅವಮಾನದ ತಾಪಗಳನ್ನು ನೀಗಿಸಿದ್ದಾಳೆ. ಊಟ ಇಲ್ಲದೇ ಹೊಟ್ಟೆ ಚುರುಗುಟ್ಟುವಾಗಲೆಲ್ಲಾ ಅವಳ ಅಮೃತಧಾರೆ ಜೀವನಪ್ರೀತಿಯನ್ನು ಹೆಚ್ಚಿಸಿದೆ. ದಣಿವಾರಿಸಿದ್ದಾಳೆ. ಊರಿಗೆ ಊರೇ ಬರಗಾಲದ ಹೊಡೆತಕ್ಕೆ ಸಿಲುಕಿದಾಗಲೆಲ್ಲಾ ಯಾವತ್ತೂ ಬತ್ತದ ತನ್ನ ಎಂದಿನ ಉತ್ಸಾಹಿ ನಡಿಗೆಯೊಂದಿಗೆ ಸ್ಫೂರ್ತಿ ತುಂಬಿದ್ದಾಳೆ. ಊರಿನವರ ಎಲ್ಲ ಬಗೆಯ ಸುಖ-ದುಃಖಗಳ ಸಾಕ್ಷಿಯಾಗಿ ಜೀವಂತಿಕೆಯನ್ನು ಮೆರೆದಿದ್ದಾಳೆ.

ಗಂಗೆಯೊಂದಿಗೆ ಮಾತನಾಡುವುದೆಂದರೆ ರಾಮುವಿಗೆ ಎಲ್ಲಿಲ್ಲದ ಖುಷಿ. ದಂಡೆಯ ಮೇಲೆ ನಿಂತುಕೊAಡು ಚೈತನ್ಯದ ಸಂಕೇತದಂತೆ ಕಂಗೊಳಿಸುವ ಅವಳೊಂದಿಗಿನ ಮೌನಸಂವಾದ ಆಂತರ್ಯದಲ್ಲಿ ಮೂಡಿಸುವ ತರಹೇವಾರಿ ಆಲೋಚನೆಗಳ ಅಲೆಗಳ ಅನುಭೂತಿಯಲ್ಲಿ ಮಿಂದೆದ್ದು ಕೃತಾರ್ಥನಾಗುವ ಅವನ ಭಾವಸಮೃದ್ಧಿಯನ್ನು ಅಷ್ಟು ಸುಲಭವಾಗಿ ಮಾತಿನಲ್ಲಿ ಹೇಳಲಾಗದು. ಇಷ್ಟಕ್ಕೂ ಅವನು ಹುಟ್ಟಿದ ಘಳಿಗೆಯೇ ಇಡೀ ಹೆತ್ತವರಿಗೆ ನಿರಾಳತೆಯನ್ನು ತಂದುಕೊಟ್ಟಿತ್ತು.

ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಕಾರಣಕ್ಕಾಗಿಯೇ ಸದಾ ಕೊಲ್ಲಲು ತವಕಿಸುತ್ತಿದ್ದ ಮನೆಯವರ ಕಣ್ಣು ತಪ್ಪಿಸಿ ದೂರದೂರ ಓಡಿಬಂದಿದ್ದ ಇವನ ಅಪ್ಪ-ಅಮ್ಮನ ಬದುಕಿನಲ್ಲಿ ಹೊಸ ಆಶಾವಾದದ ಬೆಳಕನ್ನು ಬೆಳಗಿಸಿದ್ದ ಮಗನಿವನು. ತಮ್ಮ ಜಾತಿಯವರನ್ನು ಬಿಟ್ಟು ಬೇರೊಬ್ಬನನ್ನು ಮದುವೆಯಾಗಿದ್ದು ಅಮ್ಮನ ಕಡೆಯವರೂ, ತಮ್ಮ ಧರ್ಮಕ್ಕೆ ಸೇರದವಳ ಜೊತೆಯಾಗಿ ಮರ್ಯಾದೆ ಹರಾಜು ಹಾಕಿದನು ಎಂದು ಅಪ್ಪನ ಕಡೆಯವರೂ ಕಿಚ್ಚಿನಿಂದ ಕುದಿದು ಕೊಲ್ಲಲು ಪ್ರಯತ್ನಿಸಿದ್ದರು.

ಅವರಿಂದ ತಪ್ಪಿಸಿಕೊಳ್ಳುತ್ತ ಇವರಿಬ್ಬರೂ ಬಹುದೂರ ಸಾಗಿದ್ದರು. ತಮ್ಮ ಪಾಡಿಗೆ ತಾವು ಬದುಕು ಕಟ್ಟಿಕೊಳ್ಳುವ ಸಂಕಲ್ಪ ಗಟ್ಟಿಗೊಳಿಸಿಕೊಂಡಿದ್ದರು. ಇದೇ ಘಳಿಗೆಯಲ್ಲಿಯೇ ಹುಟ್ಟಿದ್ದ ಮಗು ಅವರ ಖುಷಿಯನ್ನು ಇಮ್ಮಡಿಗೊಳಿಸಿತ್ತು. ಅದಕ್ಕಾಗಿಯೇ ಜಗತ್ತಿನ ಎಲ್ಲ ಬಗೆಯ ವಿಕಾರಗಳನ್ನು ಎದುರಿಸಿಬಿಡುವ ಛಲವನ್ನು ತೊಟ್ಟಿದ್ದರು. ಹೀಗಿರುವಾಗಲೇ ಮತ್ತೆ ಇಬ್ಬರ ಮನೆಯವರ ಕಡೆಯವರು ಬೆನ್ನತ್ತಿ ತುಂಬಿ ಹರಿಯುತ್ತಿದ್ದ ಗಂಗೆಯೊಳಗೆ ಮುಳುಗಿಸಿಬಿಟ್ಟಿದ್ದರು.

ತನ್ನಪ್ಪ, ಅಮ್ಮನನ್ನು ಕೊಂದು ಇದೇ ಗಂಗೆಯ ಮಡಿಲಿಗೆ ನೂಕಿಬಿಟ್ಟಿದ್ದರು ಎಂಬ ಸತ್ಯ ಗೊತ್ತಾಗಿನಿಂದಲಂತೂ ರಾಮು ಅತ್ಯಂತ ಭಾವುಕನಾಗಿ ಇವಳ ಹತ್ತಿರ ಬರುತ್ತಿದ್ದ. ತನನ್ನು ಉಳಿಸಿ ಕಾಪಾಡಿದ ಅವಳ ತಾಯ್ತನಕ್ಕೆ ಬೆರಗಾಗಿದ್ದ. ಯಾರೂ ಇಲ್ಲ ಎಂಬ ಅನಾಥ ಭಾವ ಗಾಢವಾಗಿ ಬೇರೂರಿದ ತಕ್ಷಣವೇ ಅವನು ಗಂಗೆಯ ಮುಂದೆ ನಿಂತು ನಿರಾಳವಾಗುವ ವಿಮುಕ್ತಿಯ ಅದ್ಭುತಮಾರ್ಗವನ್ನು ಕಂಡುಕೊಂಡಿದ್ದ. ಅದು ಅವನಿಗೆ ಅದ್ಭುತ ಮಾರ್ಗವಾಗಿದ್ದರೂ ಉಳಿದವರೆಲ್ಲರಿಗೂ ವಿಚಿತ್ರವೆನ್ನಿಸಿತ್ತು.
ವಿಚಿತ್ರವಾಗಿ ಕಾಣಿಸಿದ್ದಕ್ಕೂ ಕಾರಣವಿದೆ.

ಅಪ್ಪ ಹಾಕಿದ ಆಲದ ಮರಕ್ಕೆ ಜೋತುಬೀಳುವ ಸಂಪ್ರದಾಯಗಳೊಂದಿಗಿದ್ದವರನ್ನು ನಾರ್ಮಲ್ ಎಂತಲೂ, ಉಳಿದೆಲ್ಲರಿಗಿಂತ ಭಿನ್ನವಾಗಿರುವುದಕ್ಕೆ ಪ್ರಯತ್ನಿಸುವವರನ್ನು ಅಬ್‌ನಾರ್ಮಲ್ ಎಂದು ಪರಿಗಣಿಸುವ ಜಾಯಮಾನವೇ ಜಗದ ಅಲಿಖಿತ ನಿಯಮವಾದಾಗ ವಿನೂತನವಾದದ್ದೂ ಹಲವರಿಗೆ ವಿಚಿತ್ರವಾಗಿ ಕಾಣಿಸುತ್ತದೆ. ಈ ಮನುಷ್ಯ ಇಷ್ಟು ಭಾವುಕ ಆದರೆ ಹೇಗೆ ಎಂಬ ತಿವಿತದ ಮಾತುಗಳೂ ಬೋನಸ್‌ನ ರೂಪದಲ್ಲಿ ಹೊಡೆತ ನೀಡುತ್ತವೆ.

ಮೌನವಾಗಿ ನಿಲ್ಲುವುದಂತೆ, ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುವುದಂತೆ, ಮದುವೆಯಿಲ್ಲ, ಮಕ್ಕಳಿಲ್ಲ, ಈ ವಯಸ್ಸಿಗೇ ಹೀಗೆ ಆಡಿದರೆ ಮುದುಕನಾದ ಮೇಲೆ ಏನಾಗಿರುತ್ತಾನೋ? ಎನ್ನುವ ಕೊಂಕುನುಡಿಗಳೂ ಮತ್ತಷ್ಟು ಘಾಸಿಗೊಳಿಸುತ್ತವೆ. “ಅಲ್ಲೆಲ್ಲಾ ಹೋಗಿ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಹುಡುಕಿ ತೆಗೆಯುವುದು, ಪ್ಲಾಸ್ಟಿಕ್ ಬಾಟಲ್‌ಗಳನ್ನು ಆಯುವುದು, ಗಂಗೆಯ ಗರ್ಭವನ್ನು ಸೀಳುವ ದೊಡ್ಡ ದೊಡ್ಡ ಯಂತ್ರಗಳ ಗಾಡಿಗಳವರ ಗಾಡಿಗಳವರ ಹತ್ತಿರ ಹೋಗಿ ವಾಗ್ವಾದಕ್ಕಿಳಿಯುವುದು, ಅವರು ಇವನನ್ನು ನಿರ್ಲಕ್ಷಿಸಿದಾಗ ಸನ್ನಿವೇಶ ಬಿಗಡಾಯಿಸುವುದು….” ಇವೆಲ್ಲವೂ ಜನರಿಗೆ ವಿಚಿತ್ರವಾಗಿ ಕಾಣಿಸಿದ್ದವು. ಇಲ್ಲದ ಉಸಾಬರಿ ಇವನಿಗ್ಯಾಕೋ ಎಂಬ ಟೀಕೆಗಳು ಅವನ ಸ್ವಭಾವವನ್ನು ‘ವಿಚಿತ್ರ’ ಎಂಬ ಅಪವ್ಯಾಖ್ಯಾನದ ವ್ಯಾಪ್ತಿಗೆ ತಂದು ನಿಲ್ಲಿಸಿದ್ದವು.

ಬೇವೂರಿನವರ ಪ್ರಯಾಣ, ವ್ಯಾಪಾರ-ವಹಿವಾಟು, ಸರಕು-ಸಾಗಣೆಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ದೊಡ್ಡದಾದ ಸೇತುವೆ ಕಟ್ಟುವ ಯೋಚನೆ ಪ್ರಸ್ತಾಪವಾದಾಗ ಈ ಹುಡುಗ ರಾಮು ಭಾರೀ ಆಘಾತವಾಗಿದೆ ಎನ್ನುವ ಹಾಗೆ ತಗಾದೆ ತೆಗೆದಿದ್ದ. ನೂರಾರು ಕಿಲೋಮೀಟರ್ ದೂರ ಇರುವ ಊರುಗಳವರ ಪ್ರಯೋಜನಕ್ಕಾಗಿ ಅಣೆಕಟ್ಟು ಕಟ್ಟಲು ಯೋಜನೆ ರೂಪಿಸುತ್ತಿದ್ದಾಗ ಇದೇ ಹುಡುಗ ಬಂಡಾಯದ ಧ್ವನಿ ಎತ್ತಿದ್ದ.

ಜನದಟ್ಟಣೆ ಹೆಚ್ಚಿದಂತೆಲ್ಲಾ ಊರೆಂಬೋ ಊರು ತನ್ನತನವನ್ನು ಕಳೆದುಕೊಂಡು ಕೃತಕತೆಯನ್ನು ಹೊದ್ದುಕೊಳ್ಳುವಾಗಲೆಲ್ಲಾ ಸಿಡಿಮಿಡಿಗೊಳ್ಳುತ್ತಲೇ ಇದ್ದ. ಇಂಥ ಸಂದರ್ಭಗಳಲ್ಲೆಲ್ಲಾ ‘ಒಳ್ಳೇ ಹುಚ್ಚನ ಸಹವಾಸವಾಯಿತಲ್ಲಾ’ ಎಂದುಕೊಳ್ಳುತ್ತಿದ್ದರೇ ಹೊರತು ಅವನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಗೊಡವೆಗೇ ಹೋಗಲಿಲ್ಲ. ಫಲವತ್ತಾದ ಜಮೀನುಗಳನ್ನು ದೊಡ್ಡ ದೊಡ್ಡ ಕಂಪನಿಗಳು ದೊಡ್ಡ ಮೊತ್ತದ ಆಮಿಷವೊಡ್ಡಿ ಖರೀದಿಸುವಾಗಲೆಲ್ಲಾ ಇವನ ವಿರೋಧವನ್ನು ಹುಚ್ಚುತನದ ಪರಮಾವಧಿ ಎಂದು ಪರಿಗಣಿಸಿದವರೇ ಹೆಚ್ಚು.

ಇವನು ತುಂಗೆಯ ಪ್ರೇಮಕ್ಕೆ ಬಿದ್ದಾಗ ಗಂಗೆಯೇ ಮಧುರಭಾವಗಳ ಪ್ರವಹಿಸುವುದಕ್ಕೆ ವೇದಿಕೆಯಾಗಿದ್ದಾಳೆ. ಗಂಗೆಯ ಸಾನಿಧ್ಯದಲ್ಲೇ ತುಂಗೆಯೊಂದಿಗಿನ ಪ್ರೇಮದ ಭಾವಗಳನ್ನು ಹೊರಗೆಡಹಿದವನು ಇವನು. ಗಂಗೆಯೊಬ್ಬಳನ್ನು ಬಿಟ್ಟು ಈ ಜಗತ್ತಿನಲ್ಲಿ ಮತ್ತಿನ್ಯಾರೂ ಇಲ್ಲ ಎಂಬ ನಿರ್ಧಾರಕ್ಕೆ ಬರುವುದಕ್ಕೆ ಮುನ್ನ ತುಂಗೆಯ ಮಾಧುರ್ಯ ಅವನ ಬದುಕಿನಲ್ಲಿ ಪ್ರವೇಶಿಸಿತ್ತು. ಜಗತ್ತಿನಲ್ಲಿರುವವರು ಬಹುವಾಗಿ ಇಷ್ಟಪಡುವ ಯಾವ ಲಕ್ಷಣಗಳೂ ಇಲ್ಲದಿದ್ದರೂ ತುಂಗೆಯ ಪ್ರೇಮಕ್ಕೆ ಪಾತ್ರನಾದದ್ದು ಹೇಗೆ ಎಂಬ ಅಚ್ಚರಿ ಒಳಗೊಳಗೇ ಇದೆ.

ಒಂದು ಜೀವಕ್ಕೆ ಮತ್ತೊಂದು ಜೀವ ಇದ್ದೇ ಇರುತ್ತದೆ ಎಂಬ ಜಗದ ವೇದಾಂತವನ್ನು ದೃಢಪಡಿಸುವಂತೆಯೇ ತುಂಗೆ ತನ್ನನ್ನು ಸೆಳೆದಿದ್ದಾಳೆ ಎಂದೆನ್ನಿಸಿ ಆ ಕ್ಷಣದ ಖುಷಿಯನ್ನು ಅನುಭವಿಸುತ್ತಾನೆ ಅವನು. ಮನುಷ್ಯರೆನ್ನಿಸಿಕೊಂಡವರ ದಗಲ್ಬಾಜಿತನದ ಎಲ್ಲ ಬಗೆಯ ಅನುಭವಗಳಿಂದ ಹೈರಾಣಾದ ಸಂದರ್ಭದಲ್ಲಿ ಗಂಗೆಯ ಭೇಟಿಯಾಗಿತ್ತು. “ನೀನೇ ಕಣ್ಣೀರೊರೆಸಿಕೊಳ್ಳಬೇಕು, ಒರೆಸುವ ಮನುಷ್ಯ ಕೈಗಳೆಡೆಗಿನ ನಿರೀಕ್ಷೆ ಲಾಭದೊಪ್ಪಂದದ ಲೆಕ್ಕಾಚಾರದ ಬೆಳೆ ತೆಗೆದುಬಿಟ್ಟೀತು ಜೋಕೆ?” ಯಾರದ್ದೋ ಮಾತನ್ನು ಉದ್ಧರಿಸಿ ಯಾವಾಗಲೂ ಎಚ್ಚರಿಸುತ್ತಿದ್ದ ಗಂಗೆಯ ಮಾತುಗಳನ್ನು ಮತ್ತೆ ಮತ್ತೆ ದೃಢಪಡಿಸುತ್ತಿದ್ದ ಪ್ರಸಂಗಗಳು ನಡೆಯುತ್ತಲೇ ಇದ್ದವು.

ಅವುಗಳು ತೀವ್ರವಾಗಿ ಘಾಸಿಗೊಳಿಸಿದ್ದ ವೇಳೆ ತುಂಗೆ ಕಂಡಿದ್ದಳು. ಅಷ್ಟೇ ಅಲ್ಲ, ತನ್ನೊಂದಿಗೆ ಮಾತಿಗೆ ನಿಂತು ಮೊದಲ ನೋಟದಲ್ಲೇ ಸೆಳೆದಿದ್ದಳು. ಮೊದಲ ನೋಟವೆಂದರೆ ಅದು ಮೊದಲ ಸ್ಪರ್ಶದ ಕಥೆಯೇ ಹೌದು. ಅದಕ್ಕೆ ಮಳೆಯೇ ಮುನ್ನುಡಿಯಾಗಿದ್ದನ್ನು ಪ್ರಾಸಂಗಿಕ ಎಂದು ಗುರುತಿಸಬಹುದಾದರೂ ಪ್ರಕೃತಿಯ ಮಧುರ ಕುಮ್ಮಕ್ಕು ಎನ್ನುವುದೇ ಸೂಕ್ತವೇನೋ. ತುಂಗೆಯ ಭೇಟಿ ಜನ್ಮಜನ್ಮಾಂತರಗಳಲ್ಲಿ ಜೊತೆಯಾಗಿ ಬದುಕುವ ಸಂಕಲ್ಪವನ್ನು ಮೂಡಿಸಿತ್ತು.

ಡಾಕ್ಟರು, ಇಂಜಿನಿಯರಿಗಳಿಗಿದ್ದಷ್ಟು ಮಾರ್ಕೆಟ್ಟು ಬರಹಗಾರರಿಗೆಲ್ಲಿದೆ ಎಂಬ ಚುಚ್ಚುಮಾತುಗಳೇ ಕೇಳಿಬರುತ್ತಿದ್ದ ಕಾಲದಲ್ಲಿ ‘ಅವರಿಗಷ್ಟೇ ಅಲ್ಲ, ನಮ್ಮಂಥವರಿಗೂ ಬೆಲೆ ಇದ್ದೇ ಇದೆ’ ಎನ್ನುವ ಆಶಾವಾದ ಮೂಡಿಸುವ ಹಾಗೆ ತುಂಗೆ ಅವನೊಳಗೆ ಮೂಡಿಬಂದಿದ್ದಳು. ಸಿಟಿಯೊಂದರ ಕೆಟ್ಟ ಗಾಳಿಯ ನಡುವೆ ಬದುಕು ಹೊರೆಯುವುದಕ್ಕಾಗಿ ಕೆಲಸ ಮಾಡುತ್ತಿದ್ದ ರಾಮುವಿಗೆ ಮರಳಿ ಊರಿಗೆ ವಾಪಸ್ಸಾಗಿ ಉಳಿಯುವ ತವಕ.

ಹಾಗಾದರೆ, ತನಗೆ ಅತ್ಯಂತ ಇಷ್ಟವಾದ ಬರೆಯುವ ಕೆಲಸಕ್ಕೆ ಊರಲ್ಲಿ ಬೆಲೆಯಿಲ್ಲ. ಸಿಟಿಯಲ್ಲಿದ್ದರೆ ಮಾತ್ರ ಸಂಬಳದ ನೆರವು. ಅವತ್ಯಾವತ್ತೋ ರಾಮು ತನ್ನೂರಿನ ಗಂಗೆಯ ಹರಿವ ನಾದನಿನಾದ ಸೌಂದರ್ಯದ ಬಗ್ಗೆ ಬರೆದ ಬರಹವನ್ನು ಪತ್ರಿಕೆಗೆ ಕಳುಹಿಸಿದ್ದ. ಆ ಪತ್ರಿಕೆಯವರು ಇವನ ಬರೆವ ಪ್ರತಿಭೆಯನ್ನು ಗುರುತಿಸಿ ಕೆಲಸಕ್ಕೆ ನೇಮಿಸಿಕೊಂಡಿದ್ದರು.

ಆ ದೊಡ್ಡ ಮಹಾನಗರದಲ್ಲಿ ಸುದ್ದಿಪತ್ರಿಕೆಯ ಬರೆಯುವ ಕೆಲಸಕ್ಕೆ ಸೇರಿಕೊಂಡ ನಂತರ ರಾಮುವಿನೊಳಗಿನ ಕವಿಮನಸ್ಸನ್ನು ಘಾಸಿಗೊಳಿಸುವ ಅನೇಕಾನೇಕ ಅನುಭವಗಳು ಮತ್ತೆ ಮತ್ತೆ ಆಕ್ರಮಣಗೈಯ್ಯುತ್ತಲೇ ಇದ್ದವು. ಆ ದೊಡ್ಡ ಸಿಟಿ ಮಳೆಯ ಪ್ರವಾಹಕ್ಕೀಡಾಗಿ ತೊಂದರೆಗಳನ್ನೆದುರಿಸಿದ್ದ ನಂತರ ಬಹಳ ವಿಸ್ತಾರವಾದ ತನಿಖಾ ವರದಿ ಸಿದ್ಧಪಡಿಸಿದ್ದ. ಈ ಹಿಂದೆ ಇದ್ದ ಕೆರೆಗಳನ್ನು ಇಲ್ಲವಾಗಿಸಿ ದೊಡ್ಡ ದೊಡ್ಡ ಅಪಾರ್ಟುಮೆಂಟುಗಳಿಗಾಗಿ ಜಾಗವನ್ನು ಮಾರಾಟ ಮಾಡಿದ ಜಾಲವನ್ನು ಪತ್ತೆ ಹಚ್ಚಿ ಎಲ್ಲಿಂದ ಎಲ್ಲಿಯವರೆಗೆ ಲಿಂಕ್ ಇದೆ ಎನ್ನುವುದನ್ನು ಆಧಾರಸಹಿತ ಪ್ರಸ್ತುತಪಡಿಸಿದ್ದ. ಈ ವರದಿಯಿಂದಾಗಿ ಸಿಎಮ್ಮು ಗಾದಿ ಅಲ್ಲಾಡತೊಡಗಿತ್ತು.

ವಿರೋಧ ಪಕ್ಷಗಳವರು ಇದನ್ನೇ ಅಸ್ತ್ರವಾಗಿಸಿಕೊಂಡು ರಾಜೀನಾಮೆ ಆಗ್ರಹಿಸತೊಡಗಿದ್ದರು. ಮುಜುಗರದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಆಡಳಿತ ಪಕ್ಷದವರೇ ಬಲವಂತವಾಗಿ ರಾಜೀನಾಮೆ ಕೊಡಿಸಿ ಮತ್ತೊಬ್ಬ ಅಪಾಯಕಾರಿ ಮನುಷ್ಯನನ್ನು ಸಿಎಂ ಪಟ್ಟದಲ್ಲಿ ಕೂರಿಸಿಬಿಟ್ಟಿದ್ದರು. ಆತ ಅಧಿಕಾರಕ್ಕೆ ಬಂದ ತಕ್ಷಣವೇ ತನ್ನೂರಿನ ಸಮೀಪದಲ್ಲಿ ಭೂಗರ್ಭವನ್ನು ಸೀಳಿ ಜಲದ ಸಿರಿಯನ್ನು ದೋಚುವ ಯೋಜನೆಯನ್ನು ದೊಡ್ಡ ದೊಡ್ಡ ಕಂಪನಿಗಳೊಂದಿಗೆ ಶಾಮೀಲಾಗಿ ಅಂಗೀಕರಿಸಿಬಿಟ್ಟಿದ್ದ.

ವಿರೋಧ ಪಕ್ಷಗಳವರು ಉಸಿರೆತ್ತದಂತೆ ಹಣದ ಆಮಿಷಕ್ಕೀಡುಮಾಡಿ ಖುರ್ಚಿಯನ್ನು ಭದ್ರಪಡಿಸಿಕೊಂಡಿದ್ದ. ಈ ಬಗ್ಗೆ ಇಂಚಿಂಚು ಮಾಹಿತಿ ಸಂಗ್ರಹಿಸಿ ರಾಮು ಬರೆದ ಸುದ್ದಿಗಳು ಆಳುವವರಿಗೆ ಕಿರಿಕಿರಿಯನ್ನುಂಟುಮಾಡಿದ್ದವು. ಆಮೇಲೇನಾಯ್ತೋ ಏನೋ. ಇದಕ್ಕೆ ಸಂಬಂಧಿಸಿದ ವಿವಿಧ ತೆರನಾದ ಬರಹಗಳು ತದನಂತರ ಪ್ರಕಟವಾಗಲೇ ಇಲ್ಲ.

ಪ್ರಕಟವಾಗದೇ ಇರುವುದರ ಬಗ್ಗೆ ಸಂಪಾದಕರು ಸಮಜಾಯಿಷಿ ನೀಡಲೂ ಇಲ್ಲ. ಆ ಪಕ್ಷದ ಭಾರೀ ಆಸಾಮಿಯೇ ಪತ್ರಿಕೆಗೆ ಬಂಡವಾಳ ಹಾಕಿದ್ದನಾದ್ದರಿಂದ ಇಂಥ ವರದಿಗಳು ಬರದಂತೆ ನೋಡಿಕೊಳ್ಳುವ ಮುಂಚೂಣಿ ಜವಾಬ್ದಾರಿ ನಿರ್ವಹಿಸಿ ಸಿಎಂ ಖುರ್ಚಿ ಅಲುಗಾಡದಂತೆ ನೋಡಿಕೊಂಡಿದ್ದ.

ಖುದ್ದು ಸಿಎಂ ಮಗನೇ ನಿಂತುಕೊಂಡು ವಿವಿಧ ಕಡೆಗೆ ಹರಿವ ನೀರಿನ ನೆಲದ ನೆಲೆಗಳನ್ನು ಬಗೆದು ಅಕ್ರಮ ಧಂಧೆಯಲ್ಲಿದ್ದುದನ್ನೂ, ಜೀವಜಲದ ಸಲೆಗಳನ್ನು ಇಲ್ಲವಾಗಿಸಿ ಹರಿವ ಚಲನೆಯ ಶಕ್ತಿಯನ್ನು ಇಲ್ಲವಾಗಿಸುತ್ತಿರುವ ಹುನ್ನಾರಗಳನ್ನು ಕಾಣಿಸುವ ಎಲ್ಲ ಪ್ರಯತ್ನಗಳೂ ನಿಷ್ಪ್ರಯೋಜಕ ಜಕವೆನ್ನಿಸಿದ್ದವು. ಆದರೂ ಛಲಬಿಡದೇ ಬರಹಗಳನ್ನು ಅನಾಮಿಕ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತೇಲಿಬಿಡುತ್ತಿದ್ದ.

ಆದರೆ, ಅಲ್ಲಿರುವವರೆಲ್ಲರೂ ಸದ್ಯದ ಖುಷಿಯ ಅಮಲಲ್ಲಿ ಭವಿಷ್ಯವನ್ನೇ ಮರೆತವಾದ್ದರಿಂದ ಪೂರಕ ಬೆಂಬಲ ಸಿಗುತ್ತಲೇ ಇರಲಿಲ್ಲ. ಫೇಸ್ಬುಕ್‌ನಲ್ಲಿ ಏನಾದರೂ ಈ ಬಗ್ಗೆ ಬರೆದರೆ ‘ಹೀಗೆ ಯೋಚಿಸುವವರನ್ನು ಅನ್ನ, ನೀರಿಲ್ಲದ ಕಡೆಗೆ ಬಿಟ್ಟು ಬರಬೇಕು, ಆವಾಗಲೇ ಇವರಿಗೆ ಬುದ್ಧಿಬರೋದು’ ಅಂತ ಅತ್ಯಂತ ಕೆಟ್ಟದಾದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದವು. ಪ್ರಬಲರ ಪರವಾದ ಆರಾಧನೆಯ ಭಕ್ತಿ ಭಾವಗಳ ಪ್ರದರ್ಶನ ಹಿಂದೆಂದಿಗಿಂತಲೂ ಹೆಚ್ಚಾಗುತ್ತಲೇ ಇತ್ತು.

ಆ ದೊಡ್ಡ ಸಿಟಿಯಲ್ಲಿದ್ದವರು ಮನುಷ್ಯ ಸಂಬಂಧಗಳ ಸೊಗಡನ್ನೇ ಮರೆತು ಬದುಕನ್ನೇ ಯಾಂತ್ರಿಕಗೊಳಿಸಿಕೊಂಡು ಕಳೆದುಹೋಗಿದ್ದುದು ಅನುಭವಕ್ಕೆ ಬರುತ್ತಲೇ ಇತ್ತು. ಆದರೂ ರಾಮುವಿನೊಳಗೆ ಒಂದಷ್ಟೂ ವ್ಯಥೆಯಿರಲಿಲ್ಲ. ಮನುಷ್ಯ ಜನುಮದ ಸಾರ್ಥಕತೆ ಇರುವುದು ಸಮಾಜಕ್ಕಾಗಿ ಬದುಕನ್ನು ಮೀಸಲಿಟ್ಟಾಗಲೇ ಎಂಬುದನ್ನು ಗುರುಹಿರಿಯರು ಇವನೊಳಗೆ ಬೇರೂರಿಸಸಿಬಿಟ್ಟಿದ್ದರಿಂದ ಜಗತ್ತಿನ ಎಲ್ಲ ಬಗೆಯ ಊನಗಳ ಪ್ರವಾಹದ ವಿರುದ್ಧ ಈಜುವಂಥ ಅದಮ್ಯ ವಿಶ್ವಾಸವನ್ನು ತನ್ನದಾಗಿಸಿಕೊಂಡಿದ್ದ.

ಹಳೆಯದರೊಂದಿಗಿನ ನೆನಪುಗಳಿಂದ ದೂರವಾಗಬಾರದು ಎಂಬ ಕಾರಣದಿಂದಲೇ ತನ್ನೂರಿಗೆ ಮರಳುತ್ತಿದ್ದ ಇವನು ಈ ಗಂಗೆಯ ಮಡಿಲಿನಡೆಗೆ ಮತ್ತೆ ಮತ್ತೆ ವಾಪಸ್ಸಾಗುತ್ತಿದ್ದ. ತನ್ನ ಪ್ರಾಮಾಣಿಕ ಪ್ರಯತ್ನಗಳಿಗೆ ಪೂರಕವಾದ ವಾತಾವರಣ ಇಲ್ಲ ಎಂಬ ಸತ್ಯ ಗೊತ್ತಾಗುತ್ತಲೇ ಮನಸ್ಸು ಬೇಸರಿಸಿಕೊಂಡು ಕುಳಿತುಕೊಳ್ಳುತ್ತಿರಲಿಲ್ಲ. ಹಾಗನ್ನಿಸುತ್ತಲೇ ಅವನು ತನ್ನೂರಿನ ಗಂಗೆಯೆಡೆಗೆ ಬಂದುಬಿಡುತ್ತಿದ್ದ. ಒಂದಷ್ಟು ಚೇತರಿಸಿಕೊಂಡು ಮತ್ತೆ ಮಹಾನಗರದ ಸಂತೆಗೆ ಮರಳಿಬಿಡುತ್ತಿದ್ದ.

ಎಲ್ಲವೂ ಸರಿಯಿಲ್ಲ ಎನ್ನುವ ನೋವುಗಳ ಮಧ್ಯೆಯೇ ಇವನು ಮಧುರ ಭಾವಗಳ ತೆಕ್ಕೆಗೀಡಾಗಿ ಕವಿತೆ ಗೀಚುವುದನ್ನು ಬಿಟ್ಟಿರಲಿಲ್ಲ. ವರದಿಗಾರ ಕವಿಯಾಗಬಾರದು ಎಂಬ ಕಠಿಣ ಕಾನೂನೇನೂ ಇಲ್ಲವಲ್ಲ ಎಂಬ ಹುಮ್ಮಸ್ಸಿನೊಂದಿಗೇ ಇವನ ಕಾವ್ಯನಿನಾದ ಹೊರಹೊಮ್ಮುತ್ತಿತ್ತು…….. ಗಗನಕ್ಕೆ ಈಗ ಚಿತ್ರ ಬರೆಯುವಾಸೆ; ಕಾರಣ ಕೆದಕಿದರೆ ಅದು ನಿನ್ನ ಕಡೆಗೇ ನೋಟ ನೆಡುತ್ತಿದೆ…. ತಣ್ಣನೆಯ ಗಾಳಿಗೆ ತರುಣನಾಗುವ ಕನಸು; ವಿಚಾರಿಸಿದರೆ ಅದು ನಿನ್ನದೇ ಧ್ಯಾನದಲ್ಲಿದೆ… ನೀರಿಗೆ ನಿನ್ನ ಸ್ಪರ್ಶದ ತವಕ; ಕೇಳಿದರೆ ಅದು ನಿನ್ನ ನೆರವಿನಿಂದ ಶುದ್ಧವಾಗುವ ಹಂಬಲದಲ್ಲಿದೆ.

ಹೂವಿಗೆ ನಿನ್ನನ್ನೇ ತನ್ನ ಬಣ್ಣವಾಗಿಸಿಕೊಳ್ಳುವ ಉತ್ಸಾಹ; ಸಕಾರಣ ಹುಡುಕಿದರೆ ಅದರ ತುಂಬ ನಿನ್ನದೇ ಪ್ರತಿಬಿಂಬ…ಬೇರು ಮರವಾಗುವ ಬದಲು ಮನುಜನಾಗಲು ಪಟ್ಟು ಹಿಡಿದಿದೆ; ಅದಕ್ಕೆ ನಿನ್ನ ಇರುವಿನ ಉಳಿವು ಸಿಕ್ಕಿದೆ… ಹಸಿರ ಸಿರಿ ನಿನ್ನನ್ನೇ ತನ್ನ ಆಭರಣವಾಗಿಸುವ ಆತುರದಲ್ಲಿದೆ; ನೋಡಿದರೆ ಅದರ ಕಣ್ಣಲ್ಲಿ ನಿನ್ನದೇ ಗುನುಗು…. ಸದಾ ನಿನ್ನವನಾಗುವ ಪ್ರೀತಿ; ಅದರ ಪ್ರಭೆ ಕಾರಣ ಕೇಳುವ ಮನಸ್ಸುಗಳನ್ನು ಸುಮ್ಮನಾಗಿಸಿದೆ.. ಅದ್ಯಾವುದೋ ಅಮೃತಘಳಿಗೆಯಲ್ಲಿ ಇವನಿಂದ ಬರೆಸಿಕೊಂಡಿದ್ದ ಕವಿತೆಯನ್ನು ಓದಿದ ಕ್ಷಣದಿಂದಲೇ ತುಂಗೆಯ ಮಾಧುರ್ಯದ ಸುಳಿವು ಸಿಕ್ಕಿಬಿಟ್ಟಿತ್ತು. ತುಂಗೆಗಾಗಿಯೇ ಈ ಸಾಲುಗಳು ಹೊಳೆದಿದ್ದವು ಎಂಬುದನ್ನು ಆಕೆಯ ಫೋಟೋ ನೋಡಿದ ತಕ್ಷಣ ರಾಮುವೇ ಸ್ವತಃ ಸ್ಪಷ್ಟಪಡಿಸಿಕೊಂಡಿದ್ದ.

ಈ ಸಾಲುಗಳನ್ನು ಓದಿದ ತಕ್ಷಣವೇ ತುಂಗೆಯು ಇವನನ್ನು ಭೇಟಿಯಾಗುವ ಹಂಬಲವನ್ನು ವ್ಯಕ್ತಪಡಿಸಿದ್ದಳು. ರಾಮುವಿಗೆ ಇದು ಆಧುನಿಕ ಕಾಲದ ಅತ್ಯದ್ಭುತ ರಮ್ಯ ಪವಾಡ ಎನ್ನಿಸಿಬಿಟ್ಟಿತ್ತು. ಭೇಟಿಯಾದಾಗಲಂತೂ ಮತ್ತೂ ಖುಷಿಯಾಗಿತ್ತು.
ಅವಳು ತನ್ನೆಡೆಗೆ ಎಸೆದ ಮೊದಲ ಪ್ರಶ್ನೆ ಘಾಸಿಗೊಳಿಸಿತ್ತಾದರೂ ಅದರ ಹಿಂದಿನ ಉದ್ದೇಶ ತಿಳಿದುಕೊಂಡ ನಂತರ ಇವನು ನಿರಾಳವಾಗಿದ್ದ. ಹೆತ್ತವರು ಮನುಷ್ಯರಲ್ಲದವರು ರೂಪಿಸಿದ ಕಟ್ಟು-ಕಟ್ಟಳೆಗಳ ಭಯದಲ್ಲಿ, ಮರ್ಯಾದೆ ಹೋಗುತ್ತದೆ ಎಂಬ ಅಳುಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ತನ್ನನ್ನು ಅನಾಥಳನ್ನಾಗಿಸಿದ ವೇದನೆಯ ಕಥೆಯನ್ನು ನಿವೇದಿಸಿಕೊಂಡಾಗಲಂತೂ ತನ್ನ ಕಥೆಯೂ ಅಂಥದ್ದನ್ನೇ ಹೋಲುತ್ತದಲ್ಲ ಎಂದುಕೊಂಡಿದ್ದ.

ಜಗಕ್ಕೆ ಹೆದರಬಾರದು, ನಾವೂ ಬದುಕಿ, ಮಗುವನ್ನೂ ಉಳಿಸಿ ಮನುಷ್ಯತ್ವದ ಮೌಲ್ಯ ಸಾರಬೇಕು ಎಂಬ ಅವಳೊಳಗಿನ ಸಂಕಲ್ಪ ಇವನೊಳಗೆ ಅದಮ್ಯ ಚೈತನ್ಯವನ್ನು ಮಿಂಚಿಸಿತು. ಇಬ್ಬರೂ ಒಂದಾಗುವ ಸಂಕಲ್ಪ ತೊಟ್ಟರು. ಅಷ್ಟರಲ್ಲಾಗಲೇ ತನ್ನನ್ನು ಯಾವತ್ತೂ ತೊಡವಿಕೊಳ್ಳುತ್ತಿದ್ದ ಯುವಕರ ಗುಂಪೊಂದು ತಮ್ಮೆಡೆಗೆ ಬರುತ್ತಿರುವುದು ಕಂಡಿತು.

ನೋಡಿದ ತಕ್ಷಣವೇ ರಾಮುವಿಗೆ ಹಿಂದಿನ ಕಹಿಪ್ರಸಂಗಗಳು ನೆನಪಾದವು. ತನ್ನ ಬರಹಗಳ ಕಾರಣಕ್ಕಾಗಿಯೇ ತನ್ನನ್ನು ಕೊಲ್ಲಿಸುವ ಪ್ರಯತ್ನಗಳು ನಡೆದಿದ್ದವು. ಹೇಗೋ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದ. ಈಗ ಅದೇ ಗುಂಪು ತಮ್ಮೆಡೆಗೆ ಬರುತ್ತಿರುವುದನ್ನು ನೋಡಿದ. ಗುಂಪಿನಲ್ಲಿದ್ದವನು ಜಾತಿ, ಧರ್ಮದ ಗೊಡವೆಯಿಲ್ಲದ ಇಂಥ ನಾಯಿಗಳಿಗೆ ಪಾಠ ಕಲಿಸಬೇಕು ಎಂದು ಕೂಗಿ ಹೇಳುತ್ತಾ ಕತ್ತಿ ಝಳಪಿಸುತ್ತಾ ಉಳಿದವರಿಗೆ ಕುಮ್ಮಕ್ಕು ನೀಡುತ್ತಿದ್ದ. ಅದನ್ನು ನೋಡಿದ ತುಂಗೆಗೆ ಸ್ಪಷ್ಟವಾಗಿ ಹೋಯಿತು. ತನ್ನ ಬಂಧುಗಳೂ ಇವರೊಂದಿಗೆ ಸೇರಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಯಿತು.

ಇಬ್ಬರೂ ಆ ಕ್ಷಣಕ್ಕೆ ಗಂಗೆಯ ಮಡಿಲಿಗೆ ಧುಮುಕಿದರು. ಅವರು ದುಂಬಾಲು ಬಿದ್ದಿದ್ದರು. ಇವರಿಬ್ಬರ ನಡುವಿನ ಪ್ರೇಮದ ಜೀವಕಾರುಣ್ಯ ಕೊಲೆಗೈಯ್ಯುವವರಿಗೆ ಸವಾಲೆನ್ನಿಸಬಿಟ್ಟಿತ್ತು. ಇಬ್ಬರೂ ಬದುಕುವ ಪಣ ತೊಟ್ಟಿದ್ದರು. ನೀವು ಕೊಲ್ಲುವ ಹಠ ತೊಟ್ಟ ಮಾತ್ರಕ್ಕೆ ನಾವು ಸಾಯಲು ಸಿದ್ಧರಿಲ್ಲ ಎನ್ನುವುದನ್ನು ನಿರೂಪಿಸಲು ಸನ್ನದ್ಧವಾದಂತಿತ್ತು ಇಬ್ಬರ ಜೋಡಿ. ಅವರ ಬದುಕಿನ ಪ್ರೀತಿಯ ಉತ್ಸಾಹಕ್ಕೆ ಸಾಕುತಾಯಿ ಗಂಗೆ ಸಾಥಿಯಾಗಿದ್ದಳು. ತನ್ನ ಮಡಿಲಿಗೆ ಬಿದ್ದ ಈ ಎರಡೂ ಜೀವಗಳು ತನ್ನ ಬೆಂಬಲದ ಬಲದಲ್ಲಿ ಅರಳಿಕೊಳ್ಳಬೇಕು.

ಹಾಗೆ ಅರಳಿಕೊಳ್ಳುತ್ತಲೇ ಜಗಕ್ಕೆ ಮಾದರಿಯಾಗಬೇಕು. ಒಂದಾಗುವ ಜೀವಗಳನ್ನು ಇಲ್ಲವಾಗಿಸುವ ಜಗದ ಕ್ರೌರ್ಯ ಇಲ್ಲವಾಗಿಬಿಡಬೇಕು. ಹಾಗಂತ ತಾನು ಹರಿಯುವ ವ್ಯಾಪ್ತಿಯ ನೆಲದ ಹಾದಿಯಲ್ಲೆಲ್ಲಾ ಸಾರುತ್ತಾ ಕರೆದೊಯ್ದಳು. ಹಿಂದೆಂದಿಗಿಂತಲೂ ಹೆಚ್ಚಿನ ವೇಗದಲ್ಲಿ ಹರಿದಳು. ದೂರದೂರಕ್ಕೆ ಬಹುದೂರದವರೆಗೆ ಇವರಿಬ್ಬರನ್ನು ತೇಲಿಸಿಕೊಂಡು ಹರಿಯುತ್ತಲೇ ಇದ್ದಳು. ಮನುಷ್ಯಲೋಕದ ಯಾವ ಬಗೆಯ ಕ್ರೌರ್ಯವೂ ಇಲ್ಲದ ಆವರಣಕ್ಕೆ ಇವರನ್ನು ಸೇರಿಸಿಬಿಡಬೇಕು ಎಂಬ ಛಲ ಅವಳೊಳಗೆ ಎಲ್ಲಿಲ್ಲದ ಶಕ್ತಿಯನ್ನು ನೆಲೆಗೊಳಿಸಿತ್ತು. ಇಬ್ಬರನ್ನೂ ಜೋಡಿಯಾಗಿಸಿ ದಡಕ್ಕೆ ತಂದು ಮಲಗಿಸಿಬಿಟ್ಟಳು.

ಆ ಕ್ಷಣಕ್ಕೆ ನಿಸರ್ಗ ಮರುಕಪಟ್ಟಿತು. ಈ ಎರಡೂ ಜೀವಗಳು ಇಲ್ಲವಾದರೆ ಹೇಗೆ? ಎಂದು ಅದು ಕೊರಗುತ್ತಿದೆಯೇನೋ ಎನ್ನುವ ಹಾಗೆ ಸ್ತಬ್ಧವಾಗಿತ್ತು. ಅಷ್ಟರಲ್ಲಿ ರಾಮುವಿನ ಕೈಯ ಮೇಲಿದ್ದ ತುಂಗೆಯ ಕೈ ಸಣ್ಣಗೆ ಅಲುಗಾಡಿತು. ಅವರಿಬ್ಬರ ಕಣ್ಣರೆಪ್ಪೆಗಳು ಮಿಟುಕಿದವು. ಅವರಿಗೆ ನೀರಿಗೆ ಧುಮುಕಿದ್ದಷ್ಟೇ ನೆನಪು. ಇವರ ಮುಂದೆ ದಂಡೆಯ ಬಹುದೊಡ್ಡ ಪ್ರದೇಶ ಅನಂತವಾಗಿ ವ್ಯಾಪಿಸಿಕೊಂಡಂತೆ ಭಾಸವಾಯಿತು. ಅಲ್ಲಿ ಯಾವುದೇ ಬಗೆಯ ಚೌಕಟ್ಟುಗಳಿಲ್ಲ ಎಂಬುದನ್ನು ನೀಲಾಕಾಶ ದೃಢಪಡಿಸುತ್ತಿತ್ತು.

ಅದರೆಡೆಗೆ ನೋಡುತ್ತಲೇ ಇವರಿಬ್ಬರೊಳಗಿನ ಜೀವನೋತ್ಸಾಹ ಚಿಗುರಿಕೊಂಡಿತು. ಎದ್ದು ನಡೆಯಲಾರಂಭಿಸಿದರು. ಈ ಎರಡೂ ಜೀವಗಳು ಜೊತೆಯಾಗಿ ನಡೆಯುತ್ತಿರುವ ಸಂಭ್ರಮವನ್ನು ನಿಸರ್ಗ ಕಣ್ಣುತುಂಬಿಕೊಂಡಿತು. ಅವರ ಹೆಜ್ಜೆಗುರುತುಗಳ ಒಳಗೇ ತನ್ನ ಸೌಂದರ್ಯ ವಿಸ್ತಾರವಾಗುವ ಪರಿಯ ಸೊಬಗನ್ನು ಕಲ್ಪಿಸಿಕೊಂಡಿತು. ಇದಕ್ಕೆ ಸಮ್ಮತಿ ಸೂಚಿಸುವಂತೆ ಅಲ್ಲಿದ್ದ ಹೂವುಗಳೆಲ್ಲವೂ ತಮ್ಮ ಅಂದವನ್ನು ಹೆಚ್ಚಿಸಿಕೊಂಡಿದ್ದವು. ಗಂಗೆ ನಕ್ಕಳು. ಅವಳೊಳಗೆ ನೀರಿನಲೆಗಳ ಮಾಧುರ್ಯದ ನಿನಾದ ಹೊಮ್ಮುತ್ತಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕತೆ | ಹದ್ದುಗಳ ರಾಜ್ಯ

Published

on

~ತೆಲುಗು ಮೂಲ: ಡಾ.ವೇಂಪಲ್ಲಿ ಗಂಗಾಧರ್‌, ಕನ್ನಡಕ್ಕೆ: ಡಾ.ಶಿವಕುಮಾರ್‌ ಕಂಪ್ಲಿ

ಮಟಮಟ ಮಧ್ಯಾನ್ಹದೊಳಗ ಬರ ಬರನ ಕಾಲು ಬೀಸಿಗೋಂತ ಪಟ್ನದ ಕಡಿಗೆ ಹೋಗಿ ಬರುತಿದ್ದ ವೀರಭದ್ರಿ. ಆತ ಎಲ್ಯಾನ ಸೊಲುಪೊತ್ತು ನಿರುಮ್ಮಳವಾಗಲು ನೆಳ್ಳು ಕಂಡರೆ ಕುಂತಗಾ ಬೇಕು ಎಂದುಕೊಳ್ಳುತಿದ್ದಾನೆ.

ಅಸಲಿಗೆ ನೆಳ್ಳು ಎಲ್ಲೈತಿ?
ನೆಳ್ಳನ್ನು ನೀಡುವ ಹಚ್ಚನೆ ಮರಗಳ ಹಸುರು ಎಲ್ಲೈತಿ?
ಬರಗಾಲದ ಹೊಡೆತಕ್ಕೆ ಭೂಮಿತಾಯಿಯು ಬಿರುಕು ಬಿಟ್ಟು ನೆಲ ಸೀಳಿಕೊಂಡು ವಿಲ ವಿಲನೆ ವದ್ದಾಡುತ್ತಾ.. ಕೆಂಡದಂತಹ ಉಗಿಯನ್ನು ಉಗುಳುತ್ತಾ ಕೊತ ಕೊತನೆ ಕುದಿಯುತಿದ್ದಾಳೆ.
ನಡೆಯುವ ಕಾಲುಗಳು ಸೋತುಹೋಗುತ್ತಿವೆ.
ಕೆಂಪಗೆ ಕಾದ ಬಿಸಿಲ ಶೂಲವು ತಿವಿಯುತ್ತಿದೆ.
ಹಸನಾದ ನೆಲಕೆ ಬೀಜಗಳ ಚೆಲ್ಲಿ ಮಳೆ ಮೋಡಗಳ ಕನಸು ಕಾಣುವ ಕಣ್ಣುಗಳಿಗೆ ಒಂದು ಮಳೆ ಹನಿಯೂ ಕೂಡಾ ನಿಲುಕುತಿಲ್ಲ.
ರೋಹಿಣಿಯ ಮಳೆಗೆ ಓಣೆಲ್ಲಾ ಕಾಳು ಅನ್ನಂಗ, ಕಲ್ಲನಕೇರಿ ಕೆರೆ ಕೋಡಿ ಯೊಡೆದು ಹರಿಯುತ್ತಿದ್ದ ನೀರಿಂದ ಬರುತಿದ್ದ ಬಳ್ಳ ಬಳ್ಳದ ಜೋಳದ ಒಕ್ಕಲು ಊರಿಗೆ ತಾಗಿದ ನೆಲೆದ ಹಗೇವುಗಳಿಗೆ ಈಗ ನೆನಪುಗಳದೇ ಬದುಕಾಗಿದೆ.
ತಟುಗು ಕುಂದ್ರಾಕ ಎಲ್ಯಾನ ನೆರಳುಬೇಕು…ನೆರಳು…ನೆರಳು.
ಮ್ಯಾಲ ನೋಡಿದರೆ ಎಲ್ಡು ಮೂರು ಹದ್ದುಗಳು ಹರ‍್ಯಾಡುತ್ತಿವೆ.
ಕೆಳಗ ತನ್ನ ನೆಳ್ಳನ್ನ ತಾನೇ ನೋಡಿದರೆ, ತನಗೇ ತುಚ್ಚನಿಸುತ್ತಿದೆ.
ಥೂ…ಇವನೌವನಾ…ನರ ಜಲುಮ ನಾಯಿ ಜಲುಮ!
ಗಂಟಲು ಸಣ್ಣಕ ಒಣಗುತೈತಿ…
ಎಲೈತಪ್ಪೋ…ನೀರು…ನೀರು…
ಎದಿ ಒಡೆಯೋ ಹಂಗ ಕುಂತು ಅಬ್ಬರಿಸಿದರೂ ಕಣ್ಣೀರು ಕೂಡಾ ಸೆಟಗೊಂಡು ಕುಂತಾವು!
ತಾನು ಬದುಕುತ್ತಿರುವುದು ಒಂದು ಬದುಕೇನಾ?
ನೆಳ್ಳಿಲ್ಲದಿದ್ದರೆ ಪರಾವಾಗಿಲ್ಲ.
ನೀರಿಲ್ಲದಿದ್ದರೂ ಪರವಾಗಿಲ್ಲ.
ನಾಳೆ ವಿರುಪಾಪುರದೊಳಗ ನಡಿಯೋ ಪಂಚಾಯ್ತಿ ಏನಾದ್ರೂ ಪರವಾಗಿಲ್ಲ.
ನನಗೆ ಮೊದಲೇ ಗೊತ್ತು… ಪಂಚಾಯ್ತಿಯೊಳಗ ನನಗೆ ಅನ್ಯಾಯವೇ ಆಗುತ್ತದ.
ನಡೀಲಿ…ನಡೀಲಿ…ಮತ್ತೆ ಮತ್ತೆ ನಡೀಲಿ..!, ಹೊಸಾದು ನಡೆಯೋದು ಏನೈತಿ?
ಆ ಫಕ್ಕೀರ ಗೌಡನಿಗೆ ನಾಳೆಯಿಂದ ಏನಾರ ಒಂದಾಗುತ್ತದೆ.
ಅಂಗಾ ಅವನ ಸವಾಸಗಾರರಿಗೂ ಕೂಡಾ!
ಲಮ್ಡಿ ನನ ಮಕ್ಕಳು ಹೊಕ್ಕಾರ…ಹೊಕ್ಕಾರ.
ಊರಿಗೆ ಹಿಡಿದ ಶನಿ ಹೊಕ್ಕಾತಿ. ಅನಿಷ್ಟ ಹೊಕ್ಕತಿ…ಎಲ್ಲಾ ಸುಡಗಾಡಿಗೆ ಹೊಕ್ಕತಿ.
ಒಣಗುತ್ತಿರುವ ಗಂಟಲನ್ನ ಎಂಜಲು ನುಂಗಿ ವೀರಭದ್ರಿ ತಣ್ಣಗ ಮಾಡಿಕೊಂಡ.
ಕೈಗೆ ತಗುಲಿಸಿಕೊಂಡ ಹೊಲೆದ ಚೀಲದೊಳಗ ಆತನ ಹೊಸಾ ಬ್ಯಾಟಿಯ ಕೊಡ್ಲಿ ಬೆಚ್ಚಗೆ ನಿದ್ದಿ ಮಾಡುತ್ತಿತ್ತು …
ವೀರಭದ್ರಿಯ ಹೆಜ್ಜೆಗಳು ಬಡ ಬಡನೇ ಹಳ್ಳಿಯ ಕಡೆಗೆ ಹೊಂಟಿವೆ.
***
ಸುಮಾರು ಇಪ್ಪತೈದು ರ‍್ಷಕ್ಕೂ ಮೊದಲು…
ಪ್ರಶಾಂತವಾದ ಊರೊಳಗೆ ರಾಜಕೀಯ ಪರ‍್ಟಿಗಳ ನಡುವೆ ಕಿಚ್ಚು ಹೊತ್ತಿಕೊಂಡಿತ್ತು. ಮಲ್ಲನ ಗೌಡ, ಕೆಂಚನ ಗೌಡ ಇಬ್ಬರೂ ಒಂದೇ ಮನೆಯ ಅಣ್ಣ ತಮ್ಮಂದಿರು. ಅಣ್ಣ ಮಲ್ಲನ ಗೌಡ ಒಂದು ಪರ‍್ಟಿ ಸೇರಿದ್ದು ನೋಡಿ ಪೈಪೋಟಿಗೆ ಬಿದ್ದ ಇನ್ನೊಂದು ಪರ‍್ಟಿಯವರು ಬಣ್ಣದ ಮಾತಗಳನ್ನ ಹೇಳಿ, ಅಧಿಕಾರದ ಆಸೆ ತೋರಿಸಿ ಆತನ ತಮ್ಮ ಕೆಂಚನ ಗೌಡನನ್ನು ಆತನಿಗೆ ಎದುರು ನಿಲ್ಲಿಸಿದರು. ಊರು ಅವರಿಬ್ಬರ ರಾಜಕೀಯಗಳಿಗೆ ಒಡೆದು ಎರಡು ಹೋಳಾಯಿತು. ತಣ್ಣಗೆ ಸುಖವಾಗಿದ್ದ ಕುಟುಂಬವೂ ಛಿದ್ರವಾಯಿತು!
ಅಲ್ಲಿಯ ತನಕ ಮನೆಯ ಹಿರಿಯ ಯಜಮಾನ ರಾಜೇ ಗೌಡ ಈ ಇಬ್ಬರು ಮಕ್ಕಳ ಮೇಲೆ ಪ್ರಾಣ ಇಟ್ಟುಕೊಂಡು ಬದುಕುತಿದ್ದ. ಆತನ ಕಣ್ಣಿನೆದುರೇ ತನ್ನ ಕೂಡು ಕುಟುಂಬ ಚೂರಾಗುತಿದ್ದರೆ ತಡಕೊಳ್ಳಲಾರದೇ ರೋಷಿಗೊಂಡು ಮಕ್ಕಳಿಬ್ಬರಿಗೂ ಭೂಮಿ, ಆಸ್ತಿ, ಆದಾಯಗಳನ್ನು ಎರಡು ಸರಪಾಲುಗಳಾಗಿ ಮಾಡಿ ಹರಿದು ಹಂಚಿದನು. ಪತ್ನಿ ಜಾನಕವ್ವನನ್ನು ಕರಕೊಂಡು ಏಳು ಕೆರೆ ದಾಟಿ ಮಲ್ಲನ ಕೇರಿಗೆ ಹೋಗಿಬಿಟ್ಟನು.
ಹಿರೇ ಗೌಡರು ಊರು ಬಿಟ್ಟ ನಂತರ ಆತನ ಇಬ್ಬರು ಮಕ್ಕಳು ಹೊಟ್ಟೆ ತುಂಬಾ ಉಂಡದ್ದಿಲ್ಲ. ಕಣ್ ತುಂಬಾ ನಿದ್ರಿಸಿದ್ದಿಲ್ಲ. ಇವರ ಪರ‍್ಟಿಗಳ ಹೊಡೆತಕ್ಕೆ ಊರೂ ಕೂಡಾ ಎರಡು ಹೋಳಾಯಿತು. ಜನರಲ್ಲಿಯೂ ರ‍್ಧ ಮಂದಿ ಒಬ್ಬರ ಕಡಿಗೆ ಸರಿದರೆ, ಉಳಿದ ರ‍್ಧ ಮಂದಿ ಮತ್ತೊಬ್ಬರ ಕಡಿಗೆ ಸರಕೊಂಡು ನಿಂತು ಬಿಟ್ಟರು. ನೋಡು ನೋಡುತಿದ್ದಂಗೇನೆ ಅಧಿಕಾರಗಳ ಯುದ್ಧ ಶುರುವಾಯಿತು. ಊರೊಳಗೆ ಜೀಪುಗಳು ಬಂದವು. ನಾಡ ತುಪಾಕಿಗಳು ನುಗ್ಗಿದವು. ನಾಡ ಬಾಂಬುಗಳು ತಯಾರಾದವು. ಎರಡೂ ರ‍್ಗಗಳು ಬಲಿಷ್ಟವಾಗಿ ದರ‍್ಭಲವಾದ ಜನರನ್ನು ಬಲಿಪಶುಗಳನ್ನಾಗಿ ಮಾಡಲು ಪ್ರಾರಂಭಿಸಿದವು. ಒಮ್ಮಿಂದ ಒಮ್ಮೆಲೇ ಊರೊಳಗೆ ಹೊಡೆದಾಟಗಳು ಭುಗಿಲೆದ್ದವು.
ಪಟ್ನದಿಂದ ನಡುರಾತ್ರಿಯಲ್ಲಿ ಕಣಿವಿಹಳ್ಳಿ ಮೇಲೆ ಬರುತ್ತಿದ್ದ ಮಲ್ಲನ ಗೌಡನ ಜೀಪಿನ ಮೇಲೆ ಕೆಂಚನ ಗೌಡನ ಕಡೆಯವರು ನಾಡ ಬಾಂಬುಗಳಿಂದ ದಾಳಿ ಮಾಡಿದರು. ಎಗರಿದ ಜೀಪು ತುಂಡು ತುಂಡಾಗಿ ಸಿಡಿದಿತು.ಜನರ ಸುಳಿವರಿತು ಒಮ್ಮೆಲೇ ಜಿಗಿದು ಹಾರಿಕೊಂಡ ಮಲ್ಲನ ಗೌಡ ಪೆಳಿಯೊಳಗೆ ಎಗರಿ ಬಿದ್ದಿದ್ದ. ಸಣ್ಣಪುಟ್ಟ ಗಾಯಗಳಲ್ಲಿ ಪೆಳಿಯ ಹಿಂದೆ ಎದ್ದವನೇ ಅಲಮರಸಿಕೇರಿ ಕಾಲು ದಾರಿ ಕಡೆಗೆ ಓಡಿ ತಲೆ ಉಳಿಸಿಕೊಂಡಿದ್ದ. ಬೆಳಗಾ ಮುಂಜಾನೆ ಬಂದು ನೋಡಿದರೆ ಆ ನೆಲದೊಳಗೆ ಆರು ಹೆಣಗಳು ಬಕ್ಕಬಾರಲೇ ಬಿದ್ದಿದ್ದವು. ನಾಲ್ಕು ಜನ ಕುಂಬಾರ ಹುಡುಗರು ಇಬ್ಬರು ಮಾದರ ಹುಡುಗರು ಆ ರಾತ್ರಿಯ ಜೀಪು ದಾಳಿಯೊಳಗ ಸತ್ತಿದ್ದರು. ಹಗೆಯು ಅಲ್ಲಿಗೇ ಮುಗಿಯಲಿಲ್ಲ.
ಮರುದಿನವೇ ಕರೇಕಲ್ಲು ಗುಡ್ಡದ ಕರೆ ದಾರಿಯಿಂದ ಹಳ್ಳಿಗೆ ಬರುತ್ತಿರುವಾಗ ಕೆಂಚನ ಗೌಡನ ಕಡೆಯ ಎಂಟು ಜನರು ಹಾಳು ಬಿದ್ದ ಅಗಸಿ ಬಾವಿಯೊಳಗ ಶವಗಳಾಗಿ ತೇಲಿದರು! ನಾಲ್ವರು ಹೊಲೆಯರು, ನಾಕು ಜನ ತಳವಾರರು.
ಊರು ಊರೆಲ್ಲಾ ಉರಿಯಲ್ಲಿ ಹೊತ್ತಿಕೊಂಡು ಬೆಂದು ಹೋಯಿತು. ನಾಲ್ಕಂತಸ್ಥಿನ ಮಹಡಿ ಮನಿಯೊಳಗ ಕೆಂಚನ ಗೌಡ ಅರಾಮಾಗಿದ್ದ.ಎಕರೆ ಎಕರೆ ಕಲ್ಲಿನ ವಾಡೆಯೊಳಗ ಮಲ್ಲನ ಗೌಡ ಮಲ್ಲಿಗೆ ಹೂವಿನಂಗ ಕಳ ಕಳ ತುಂಬಿಕೊಂಡಿದ್ದ. ಊರೊಳಗೆ ಮಾತ್ರ ಎರಡು ದಿನದೊಳಗೆ ಹನ್ನೆರಡು ಜನರು ಶವಗಳಾದರು!
ರಾಜಕೀಯಗಳ ರಕ್ತಪಾತಗಳಾದವು. ದೊಡ್ಡಸ್ಥಿಕೆಗಾಗಿ ಕುಣಿವ ನಾಯಕರು ತಮ್ಮನ್ನು ನೆಚ್ಚಿಕೊಂಡ ಜನರ ಕುರಿತು ಎಳ್ಳಷ್ಟೂ ಆಲೋಚಿಸಲಿಲ್ಲ. ಕೊನೆ ಕೊನೆಗೆ ಈ ರಾಜಕೀಯದ ಗೊಡವೆಗಳು ಜಾತಿ ಗೊಡವೆಗಳಾದವು. ಮಾದರ, ಹೊಲೆಯ, ಕುಂಬಾರ, ತಳವಾರರ ಮದ್ಯ ಹಸಿರು ಹುಲ್ಲು ಹಾಕಿದರೂ ಭಗ್ಗನೆದ್ದು ಹೊತ್ತಿ ಕೊಳ್ಳುವಷ್ಟು ಉರಿ ಎದ್ದವು!
ಯಾರಾದರೂ ರಾತ್ರಿ ಹೊತ್ತು ಒಂಟಿಯಾಗಿ ತಿರುಗ ಬೇಕೆಂದರೂ ಕೂಡಾ ಜನ ಭಯ ಪಡುತಿದ್ದಾರೆ. ಪಟ್ನಕ್ಕೆ ಹೋಗ ಬೇಕೆಂದರೂ ಹೊಲಕ್ಕ ಹೋಗ ಬೇಕೆಂದರೂ..ಒಬ್ಬರ ಜೊತೆ ಇಲ್ಲಂದ್ರ ಹೊರಾಕೂ ಕೂಡಾ ಯಾರೂ ಇಣುಕಿ ನೋಡರು. ಊರು ಹಿಂಗೆ ಸುಡುಗಾಡಾಗಿ ಬದಲಾಗುತ್ತಿರುವ ಸುದ್ಧಿ ತಿಳಿದ ಹಿರಿಯ ಯಜಮಾನ ರಾಜುಗೌಡರು ಕುಂತಲ್ಲೇ….ಕಣ್ಣೀರು ಹಾಕಿದರು.
ಮಧ್ಯಾನ್ಹದ ಬಸ್ಸಿಳಿದು ಕಾಳವ್ವನ ಹೋಟಲ ಕಡೆಯಿಂದ ಬರುತಿದ್ದ ಅಲ್ಲಾ ಭಕ್ಷಿಯ ಮಗ ಗೌಸ್‌ ಮೊಯಿನುದ್ದೀನನನ್ನು ಕೆಂಚನ ಗೌಡನ ಕಡೆಯ ಜನ ಬೇಟೆಗಾರರಂತೆ ಬೆನ್ನಟ್ಟಿ ಬೆನ್ನಟ್ಟಿ, ಮಂಡಿ ದುರುಗಮ್ಮನ ಗುಡಿ ಹತ್ರ ಕತ್ತಿ ಬೀಸಿ ಒಂದು ಕೈ ತೋಳನ್ನೇ ಕಡಿದು ಬಿಟ್ಟರು! ಜಗ್ಗದ ಗೌಸ್‌ ಮೊಯಿನುದ್ದೀನ್‌ ಅಲ್ಲೇ ಸವಾಕಾರರ ಜೀನಿನ ಕಡೆಯ ಮುಳ್ಳ ಬೇಲಿ ಹಾರಿ ಮಲ್ಲನ ಗೌಡನ ಮನೆ ಸೇರಿಕೊಂಡು ಜೀವ ಉಳಿಸಿಕೊಂಡ.
“ ಬ್ಯಾಡಲೋ ಬ್ಯಾಡಲೋ … ಅಂತ ನಾಲಿಗಿ ಗಂಟಲು ಹರಿಯಂಗ ಬಡಕೊಂಡೆನಲ್ಲಲೋ… ಆ ರಾಜಕೀ ಪರ‍್ಟಿಗಳ ಜೊತಿಗೆ ತಿರುಗ್ಯಾಡ ಬೇಡ ಅಂದಿನಿ… ಬಂಗಾರದಂತಹ ನಿನ್ನ ಕೈ ಇಲ್ಲದಂಗಾತಲ್ಲೋ.. ಏನು ಮಾಡಿ ನಾ ಸಾಯಲೋ …ಅಲ್ಲಾ …ಅಲ್ಲಾ” ಎಂದು ಗೌಸ್‌ ಮೊಯಿನುದ್ದೀನನ ತಾಯಿ ಬಿದ್ದು ಬಿದ್ದೂ ಅತ್ತಳು.
“ ನಮಗ್ಯಾಕಲೇ ಒಣ ರಾಜಕೀ ಪರ‍್ಟಿಗಳು.. ಆ ಜೀಪುಗಳು? ಅವರ ಹಿಂದ ಹೋಗಬ್ಯಾಡ.. ಹೋಗಬ್ಯಾಡ …ಅಂದೆ… ಇದು ಎಂದೋ ಒಂದು ದಿನ ತಿರುಗು ಬಾಣ ಆಗಿ ಬಡಿತೈತಿ ಅಂದಿದ್ದನಲ್ಲಲೇ.. ನನ್ನ ಮಾತು ಕೇಳಲಿಲ್ಲೋ..ಸುವ್ವರ್‌ ” ಎಂದು ತಂದಿ ಅಲ್ಲಾ ಭಕ್ಷಿ ಎದಿ ಎದಿ ಹೊಡಕೊಂಡು ಅತ್ತನು.
ಅಗಸಿ ಬಾವಿಯೊಳಗ ಶವಗಳಾಗಿ ತೇಲಿದ ಎಂಟು ಜನರ ಕಥಿ ಹಿಂದ ಗೌಸ್‌ ಮೊಯಿನುದ್ದೀನನ ಕೈವಾಡ ಇತ್ತೆಂದು ತಿಳಿದುಕೊಂಡ ಕೆಂಚನ ಗೌಡನ ಜನರು ಕಾವಲು ಕಾದು ಹಿಂಗ ಒಳ ಏಟು ಕೊಟ್ಟಿದ್ದರು. ಗೌಸ್‌ ಮೊಯಿನುದ್ದೀನ್‌ ಮೇಲೆ ನಡೆದ ದಾಳಿಯೊಳಗೆ ಜಮಾಲ್‌ ಸಾಬ್ ಕೆಂಚನ ಗೌಡನ ಕಡೆಯವರೊಳಗ ಇದ್ದದ್ದರಿಂದಾಗಿ ಊರೊಳಗಿನ ಸಾಬರೂ ಎರಡು ರ‍್ಗಗಳಾಗಿ ಹೋಳಾಗಿ ಬಿಟ್ಟರು. ಪ್ರತಿ ರ‍್ಷ ಜಾಂಡಾ ಕಟ್ಟಿಯ ಹತ್ತಿರ ನಡೆಯೋ ಪರ‍್ಲ ದೇವರ ಹಬ್ಬ ಕೂಡಾ ಈ ರ‍್ತಿ ಯಾರೂ ಮಾಡದಂಗಾದರು.
ಊರೀಗ ಊರಂತಿಲ್ಲ.
ಹಬ್ಬಗಳಿಲ್ಲ. ಆಚರಣೆಗಳಿಲ್ಲ..
ಒಬ್ಬರಿಗೊಬ್ಬರ ಸಹಕಾರವಿಲ್ಲ. ಅವರೆಂದರೆ ಇವರಿಗೆ ಕೋಪ,ಇವರೆಂದರೆ ಅವರಿಗೆ ಉರಿ. ಊರು ತನ್ನ ಅಸ್ತಿತ್ವವನ್ನೇ ಕಳೆದುಕೊಂಡಂತಿದೆ. ಎಲ್ಲರೂ ಕೂಡಿ ನಕ್ಕು ನಲಿದು ಇದ್ದ ಊರೊಳಗೆ ಕಲಹಗಳೇ ಕುಣಿದು ಕೊರಳ ಕಡಿಯುತ್ತಿವೆ. ಊರೀಗ ಹಾಳುಬಿದ್ದ ಸ್ಮಶಾನವಾಗಿದೆ.
ಊರೀಗ ಒಡೆದು ಸರಿಪಾಲಾಗಿದೆ. ದೊಡ್ಡ ಕೇರಿಗಳೆಲ್ಲಾ ಮಲ್ಲನ ಗೌಡನ ಪಾಲಿಗಾದರೆ ಕೆಳಗೇರಿಗಳೆಲ್ಲಾ ಕೆಂಚನ ಗೌಡನ ಸೊತ್ತಾಗಿವೆ. ಊರಿಗೆ ಎರಡು ದಾರಿಗಳಾಗಿವೆ. ಕಾಳವ್ವನ ಹೋಟಲ ತನಕಾ ಬಸ್ಸು ಬರುತ್ತದೆ. ಅಲ್ಲಿಂದ ಊರೊಳಕ್ಕೆ ಬರದು. ಊರಿಗೆ ಸಂಬಂಧಿಸಿದ ಪಂಚಾಯ್ತಿಗಳು ನಡದ್ರೆ ಮಾತ್ರ ಕಾಳವ್ವನ ಹೋಟಲ ಹತ್ರದ ಚಾವಡಿಯೊಳಗೇ ನಡಿತದೆ.
“ಊರಿಗೆ ಶಾಲೆಯೊಂದು ಮಂಜೂರಾಗಿದೆ” ಎಂಬ ಸುದ್ಧಿ ತಿಳಿದೊಡನೆಯೇ ಊರಿನ ಎರಡೂ ಗುಂಪುಗಳವರು ಪೈಪೋಟಿಗೆ ಬಿದ್ದರು. ದೊಡ್ಡ ಕೇರಿಯಲ್ಲಿಯೇ ಆಗಬೇಕೆಂದು ಮಲ್ಲನ ಗೌಡ. ಕೆಳಗೇರಿಯಲ್ಲೇ ಆಗಬೇಕೆಂದು ಕೆಂಚನ ಗೌಡ. ಇಬ್ಬರೂ ಜಿಲ್ಲಾ ಶಿಕ್ಷಣಾಧಿಕಾರಿಗಳನ್ನು ಕಂಡು ಬಲು ಪ್ರಯತ್ನಗಳನ್ನು ನಡೆಸಿದರು. ಇದರ ಮೇಲಾಗಿ ಮಲ್ಲನ ಗೌಡ ಶಾಸಕರನ್ನು ಹಿಡಕೊಂಡು ರಾಜಕೀಯ ನಡೆಸಿದ. ಶಾಲೆ ಎಲ್ಲಿ ತೆಗೆಯಬೇಕೋ… ರ‍್ಥವಾಗದೇ ಶಿಕ್ಷಣ ಶಾಖೆಗೇ ತಿಕ್ಕಲೆದ್ದಿತು.
ಊರಿನೊಳಗೆ ಶಾಲೆ ತೆಗೆಯುವ ಸುದ್ಧಿಯನ್ನು ನಂತರ ಪರಿಶೀಲಿಸೋಣವೆಂದು ಹೇಳಿ ಪೆಂಡಿಗ್‌ ನಲ್ಲಿಟ್ಟು ಫೈಲ್‌ ಮುಚ್ಚಿಹಾಕಿ ಶಿಕ್ಷಣ ಶಾಖೆಯು ಕೈ ತೊಳೆದುಕೊಂಡಿತು.
ಶಾಲೆಯಿಲ್ಲದ ಊರಲ್ಲಿ ಮಕ್ಕಳಿಗೆ ಇನ್ನೇನು ಕೆಲಸವಿರುತ್ತದೆ? ಕೆಲವು ಜನ ಎತ್ತು,ಎಮ್ಮೆ,ಕುರಿ, ಅಡು ಮೇಯಿಸಲಿಕ್ಕೆ ಗುಡ್ಡದ ಕಡೆಗೆ ಹೊರಟರು. ಮತ್ತೆ ಕೆಲವರು ಪಟ್ನದ ಕಡೆಗೆ ಹೋಗಿ ಆಟೋ ರಿಕ್ಷಾಗಳನ್ನು ನಡೆಸಿ ಬದುಕ ತೊಡಗಿದರು. ಇನ್ನೂ ಕೆಲವರು ಮಲ್ಲನ ಗೌಡನ ಜೀಪಿಗೆ ಆತುಕೊಂಡು ಪರ‍್ಟಿಗಳ ಮಾಡತೊಡಗಿದರು. ಯಾವಕ್ಕೂ ಸೇರದವರು ಕೆಂಚನ ಗೌಡ ತಯಾರು ಮಾಡೋ ನಾಡ ಬಾಂಬಿನ ಕರ‍್ಖಾನೆಯೊಳಗೆ ಕೆಲಸಕ್ಕೆ ಹೋಗುತಿದ್ದಾರೆ.
ಕಥೆಯಲ್ಲಾ ಹೀಗೆ ನಡೀತಿರುವಾಗಲೇ ….
ಗ್ರಾಮ ಪಂಚಾಯ್ತಿ ಚುನಾವಣೆಗಳು ಬಂದು ಸತ್ತವು.
ಊರ ಪರಿಸ್ಥಿತಿಯು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು.
ಇದಕ್ಕೆ ಜೊತೆಯಾಗಿ ಮೀಸಲಾತಿ ಸೀಟು ಬಂದು ಖಾಯಂ ಆಗಿದೆ. ಊರೊಳಗೆ ಎಲ್ಲಿ ನೋಡಿದರೂ ಇದೇ ಸುದ್ದಿಯೇ… ದೊಡ್ಡದಾಗಿದೆ. ಲಿಂಗಾಯ್ತರು,ಬಿ.ಸಿ. ರ‍್ಗಗಳು, ಮೈನಾರಿಟಿ ರ‍್ಗಗಳು, ಒಳಗೊಳಗೇ ಬೈದುಕೊಂಡರು, ಆದ್ರೆ ಹೊರಗೆ ಯಾರಿಗೆ ಕೊಟ್ಟರೂ ಒಳ್ಳೆಯದೇ ಅಂತ ಹೇಳುತಿದ್ದರು.
ಊರೊಳಗೆ ಎರಡು ಗುಂಪಿನ ಮಧ್ಯೆ ಈ ಚುನಾವಣೆಯು ಮತ್ತಷ್ಟು ಬೆಂಕಿಯನ್ನು ಬೆಳಸಿತು.
ಒಂದು ಪರ‍್ಟಿಯ ಕಡೆಗೆ ಮಲ್ಲನ ಗೌಡ ತನ್ನ ವ್ಯಕ್ತಿ ಮಾದಿಗರ ಅಂಕಪ್ಪನನ್ನ ಅಭ್ರ‍್ಥಿಯಾಗಿ ನಿಲ್ಲಿಸಿದರೆ, ಕೆಂಚನಗೌಡ ತನ್ನ ಮತ್ತೊಂದು ಪರ‍್ಟಿಯ ಅಭ್ರ‍್ಥಿಯಾಗಿ ಹೊಲ್ಯಾರ ಹುಚ್ಚಪ್ಪನನ್ನ ಪ್ರತಿಸ್ರ‍್ಧಿಯಾಗಿಸಿದ. ಎರಡೂ ಅರ‍್ಥಿಗಳು ರ‍್ಥಿಕವಾಗಿ ಏನೂ ಇಲ್ಲದವರೇ. ಇಬ್ಬರದೂ ಗುಡಿಸಲ ಬಾಳು, ಆದರೆ ನಂಬಿಗಸ್ಥರು. ಮಾದಿಗರ ಅಂಕಪ್ಪ ಹೊಡೆದಾಟ ಜಗಳವೆಂದರೆ ಮಾರು ದೂರ ಇರುವ ಮನುಷ್ಯ.ಪ್ರತಿ ಗುರುವಾರದ ದಿನ ಸಂತೆಗೋಗಿ ತರಕಾರಿ ವ್ಯಾಪಾರ ಮಾಡುತಿದ್ದ. ಹೆಬ್ಬಟ್ಟಿನವನು.
ಇನ್ನ ಹುಚ್ಚಪ್ಪ ಕೆಂಚನ ಗೌಡ ಹಾಕಿದ ಗೆರೆ ದಾಟಲಾರ. ಬಾಳಾ ಕಾಲದಿಂದಲೂ ಜೀಪು ಡ್ರೈವರಾಗಿ ಅಲ್ಲೇ ಇದ್ದವ.ಹುಚ್ಚಪ್ಪ ಕಾಗದ ಬರೆಯೋವಷ್ಟು ಓದನ್ನೂ ಕಲಿತಿದ್ದಾನೆ. ನಾಕು ಜನ ಹೆಣ್ಣ ಮಕ್ಕಳ ತಂದೆ ಎಂಬ ಸಣ್ಣ ಸಹಾನುಭೂತಿಯೂ ಈತನ ಮೇಲಿದೆ.
ಊರೊಳಗೆ…
ಕುವೈತ್‌ ನಿಂದ ಅಕ್ಬರ್‌ ಭಾಷಾ ಮಗಳು ಬಂದಿದ್ದಾಳೆ.
ಅವರಿರೋದು ಕೆಳಗೇರಿಯಲ್ಲೇ…
ಆ ಹುಡುಗಿಯ ಮೇಲೆ ಕೆಂಚನ ಗೌಡನ ಕಣ್ಣು ಬಿದ್ದಿತು.
“ ಅಕ್ಬರ್‌ ಮಾವಾ… ನಿನಿಗೆ ತಿಳಿಯದೇನೈತಿ? ನೋಡು ನನಿಗೆ ಮದುವಿ ಆಗೇತಿ ಅದ್ರ ಹೊಟ್ಯಾಗ ಮಕ್ಕಳಿಲ್ಲ. ನೀನು ಒಪ್ಪಿಕೊಂಡ್ರೆ ನಿನ್ನ ಮಗಳನ್ನ ಮಾಡಿಕ್ಯಾಬೇಕಂತ ಅದಾನಿ” ಅಂತ ನಾಟಿ ಕೋಳಿ ರೆಡಿ ಮಾಡಿಸಿ, ರಾತ್ರಿ ತನ್ನ ನಾಲ್ಕಂತಸ್ಥಿನ ಮಹಡಿ ಮನೆಯೊಳಗ ಕೂಡಿಸಿ ಹೇಳಿದನು ಕೆಂಚನ ಗೌಡ.
ಅಕ್ಬರ್‌ ಭಾಷಾ ಗೌಡನ ಮಾತಿಗೆ ಎದರು ಮಾತಾಡಿದರೆ ಊರೊಳಗೆ ಇರಲಾಗದೆಂದು ಒಪ್ಪಿಕೊಂಡನೋ..
ಕುಡಿದ ಅಮಲಿನೊಳಗೆ ತಲೆಯಾಡಿಸಿದನೋ ತಿಳಿಯದು.
ಆದರೆ ಅಂದಿನಿಂದ ಇಬ್ಬರ ಮನೆ ನಡುವೆ ಹೋಗೋದು ಬರೋದು ನಡಿಯತೊಡಗಿದವು.
ಮಗಳ ನಿಖಾದೊಂದಿಗೆ ಅಕ್ಕ ಪಕ್ಕದ ಸಾಬರೆಲ್ಲಾ ಕೆಂಚನ ಗೌಡನ ಕಡಿಗೇ ಕಲೆತು ಸೇರೋ ಹಂಗಾಯಿತು.
ಸ್ರ‍್ಧೆಗೆ ನಿಂತ ಮಾದಿಗರ ಅಂಕಪ್ಪನಿಗೆ ಕರೆಕಲ್ಲು ಗುಡ್ಡದ ಹತ್ರ ಹೊಲವಿತ್ತು. ರಾತ್ರಿ ಹೊಲಕ್ಕ ನೀರು ಕಟ್ಟಲೆಂದು ಹೊಲಕ್ಕೆ ಹೋಗಿದ್ದ ಆತನನ್ನ ಯಾರೋ…ಹೊಲದಲ್ಲಿರುವ ಬೇವಿನ ಮರಕ್ಕೆ ಉರುಲು ಹಾಕಿ ಹೋಗಿ ಬಿಟ್ಟರು. ಕುಟುಂಬಕ್ಕೇ ದೊಡ್ಡ ಆಧಾರವಾಗಿದ್ದ ತನ್ನ ಗಂಡನ ಸಾವನ್ನ ಕಂಡ ಅಂಕಪ್ಪನ ಹೆಂಡತಿ ನಾಕು ರ‍್ಷದ ಮಗನನ್ನ ಹಿಡಕೊಂಡು ಬರ‍್ಯಾಡಿ ಅತ್ತಳು.
“ ಸಿಗತಾರ…ಸಿಗತಾರ…
ಯಾರನ್ನೂ ಬಿಡಲಾರೆವು. ಸೊಲುಪ ಉಸಿರಾಡಲಿ….” ಎಂದು ಅಂದು ಹೆಣ ತಂದ ಮನಿ ಮುಂದೆ ನಾಕು ಸಮಾಧಾನದ ಮಾತುಗಳೇಳಿ ಹೋದನು ಮಲ್ಲನ ಗೌಡ.
ಚುನಾವಣೆಯ ದಿನಾಂಕವು ಘೋಷಣೆಯಾಯಿತು.
“ ನಾನು ಹೇಳೋದು ಕೇಳಮ್ಮಾ…
ಆ.. ನನ ಮಕ್ಕಳು ನಮ್ಮ ಅಂಕಪ್ಪನನ್ನ ಯಂಗ ಉರುಲು ಹಾಕಿದರೋ…? ಅದನ್ನ ಮರೆತು ಬಿಟ್ಟೆಯಾ?…
ಏನು? ನೀನು ನಮ್ಮ ಕಡೆ ಮನುಷಾಳು ಭಯ ಪಡಬೇಡ… ಎಲ್ಲಾ ನಾನು ಹತ್ತಿರವಿದ್ದು ನೋಡಿಕೊಳ್ಳುತ್ತೇನೆ. ಇಂತಾ ಹೊತ್ನಾಗ ಧರ‍್ಯ ತೋರಿಸಬೇಕು…. ನೀನು ನನ್ನ ಮಾತು ಕೇಳಿ ನಾಮಿನೇಷನ್‌ ಮಾಡು ಬಾ… ಎಂದು ಮಲ್ಲನ ಗೌಡ ಅಂಕಪ್ಪನ ಹೆಂಡತಿ ಆದಿ ಲಕ್ಷ್ಮಿಯನ್ನ ಸ್ರ‍್ಧೆಗೆ ಇಳಿಯಲು ಹೇಳಿದ.
“ ಸೋಮಿ … ನನಗ್ಯಾಕ ರಾಜಕೀಯದ ಉಸಾಬರಿ? ಇರೋ ಒಬ್ಬ ಮಗನ ಮೇಲೆಯೇ ನನ್ನ ಜೀವ ಸಾಮಿ. ಅವನ್ನ ಇಟ್ಟಕೊಂಡು ಬದುಕು ಸವಸತಾ ಅದೀನಿ. ನನಗೂ ಏನಾನ ಅದೂ ಇದೂ ಆದ್ರೆ ಮಗ ಅನಾಥ ಅಕ್ಕಾನ” ಎಂದು ಆಕಿ ಹಲುಬ್ಯಾಡಿದಳು.
ಆದರೂ….
ಅದ್ಯಾವುದನ್ನೂ ಲೆಕ್ಕಿಸದದಂತೆ ಮಲ್ಲನ ಗೌಡ ನಿಂತು ಆದಿಲಕ್ಷ್ಮಿಯನ್ನು ನಾಮಿನೇಷನ್‌ ಮಾಡಿಸಿದ.
ಪಾಪ… ಗಂಡನನ್ನು ಕಳೆದುಕೊಂಡ ಹೆಂಗಸು.
ದಿಕ್ಕೆಟ್ಟ ಬಡ ಕುಟುಂಬವೆಂದು ಜನರೊಳಗೆ ಸಹಾನುಭೂತಿ ಹುಟ್ಟಿತು.
ಸ್ರ‍್ಧೆಯೊಳಗೆ ಆದಿಲಕ್ಷ್ಮಿ ಗೆದ್ದಳು.
ಮಲ್ಲನ ಗೌಡ ಮೀಸೆ ತಿರುವಿದನು.
ಹೊಲದ ಹತ್ರ ಅಂಕಪ್ಪನನ್ನು ನಿಜವಾಗಿಯೂ ಕೆಂಚನ ಗೌಡನ ಕಡೆಯವರು ಸಾಯಿಸಿದರಾ…? ತನ್ನ ರಾಜಕೀಯ ಆದಿಪತ್ಯವನ್ನು ಉಳಿಸಿಕೊಳ್ಳಲಿಕ್ಕೆ ಚುನಾವಣೆಯಲ್ಲಿ ತನ್ನ ಅಭ್ರ‍್ಥಿಯನ್ನು ಗೆಲ್ಲಿಸಲಿಕ್ಕೇ ಮಲ್ಲನ ಗೌಡ ಈ ಕೆಲಸ ಮಾಡಿಸಿದನೋ? ಎಂಬ ಅನುಮಾನಗಳ ಹಕ್ಕಿಗಳೂ ರೆಕ್ಕೆ ಬಿಚ್ಚಿ ಹರ‍್ಯಾಡಿದ್ದು ಗುಸು ಗುಸು ಸುದ್ಧಿಯಾಗಿಯೇ ಉಳಿದು ಹೋಯಿತು.
***
ಕೆಂಚನ ಗೌಡ ಮದುವೆ ಆಗುತ್ತೇನೆಂದು ಹೇಳಿದನೇ ವಿನಾ ಅದೇನೂ ನಡಿಯಲೇ ಇಲ್ಲ. ರಾಜಾ ರೋಷವಾಗಿ ಅಕ್ಬರ್‌ ಭಾಷಾ ನ ಮಗಳನ್ನ ಇಟ್ಟುಕೊಂಡು ಆಕೆಗೊಂದು ಚಿಕ್ಕ ಮನೆ ಮಾಡಿದನು. ಕೆಲವು ಕಾಲ ಇಬ್ಬರ ಸಂಸಾರವೂ ಸಾಗಿತು. ಆಕೆ ತಾಯಿಯೂ ಆದಳು. ಕೆಂಚನ ಗೌಡನ ಆನಂದಕ್ಕೆ ಎಣೆಯಿಲ್ಲದಂಗಾಯಿತು. ಅದು ಅಷ್ಟಿಷ್ಟಲ್ಲ. ಕೆಂಚನ ಗೌಡ ತನ್ನ ಕಾಲು ನೆಲಕ್ಕಿಡದಂತೆ ಹಕ್ಕಿಯಾಗಿ ಮುಗಿಲೊಳಗೇ ತೇಲಾಡ ಹತ್ತಿದ. ದೇವರ ಪೂಜೆಗಳ ಮಾಡಿಸಿದ.ದಾನ ರ‍್ಮಗಳ ಮಾಡಿಸಿದ.
ಕೆಂಚನ ಗೌಡನಿಗೆ ಮಗ ಹುಟ್ಟಿದನು.
ಮಗ ಬಲಹೀನವಾಗಿರುವನೆಂದು ಡಾಕ್ಟರ್‌ ಗಳು ಹೇಳಿದ್ದರಿಂದ ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ತಿರುಗ್ಯಾಡಿ ಬಂದನು. ಗ್ರಹ ಬಲದೊಳಗೆ ದೋಷ ವಿದೆಯೆಂದು ಫಕ್ಕೀರ ಗೌಡ ಎಂದು ಹೆಸರಿಡಬೇಕೆಂದು ಕೆಲವು ಜೋತಿಷಿಗಳು ಹೇಳಿದಂಗೆಯೇ ಮಾಡಿದನು. ಅತ್ತ ಮಸೀದಿಯೊಳಗೆ ಇತ್ತ ದೇವಾಲಯಗಳೊಳಗೆ ಎರಡೂ ಕಡಿಗೆ ಆತ ಪೂಜೆಗಳ ಮಾಡಿಸಿದ..
“ಬಲಹೀನವಾದ ಮಗು ಆರೋಗ್ಯವಾಗುತ್ತದೆ. ಆಯಿತವಾರ ಅಮಾಸೆ ದಿನ ರ‍್ಧರಾತ್ರಿ ಹೊತ್ತು ಹುಟ್ಟಿದ ಮಗ ದೊಡ್ಡ ರ‍್ವಜ್ಞನಾಗುತ್ತಾನೆ. ಇಲ್ಲಾಂದ್ರ ಪಾಪರು ಪಟ್ಟಿ ಪಟಿಂಗ ಕಳ್ಳನಾಗುತ್ತಾನೆ” ಎಂದು ಕೂಡಾ ಪೂಜಾರಿಗಳು ಹೇಳಿದರು.
ಈ ಮಾತುಗಳನ್ನ ಕೇಳಿ ಕೆಂಚನಗೌಡ ಬಿದ್ದೂ ಬಿದ್ದೂ ನಕ್ಕನು.
ಮಗನು ಬಂದ ಗಳಿಗೆ ಚಲೋದೈತೇನೋ, ಆದರೆ ಮಲ್ಲನ ಕೇರಿಯಿಂದ ಕೆಟ್ಟ ಸುದ್ಧಿಯೊಂದು ಆಗಲೇ ಬಂದು ಬಡಿಯಿತು. ತಂದೆ ರಾಜೇ ಗೌಡ ಸತ್ತನೆಂಬ ಸುದ್ಧಿ ತಿಳಿಯುತ್ತಲೇ ಕೆಂಚನ ಗೌಡನ ಎದೆಗೆ ಸಿಡಿಲು ಬಿಡಿದಂಗಾತು. ಪಟ್ಟನೇ ಮನೆಯಿಂದ ಹೊರ ಬಿದ್ದನು.
ಅಷ್ಟೊತ್ತಿಗೆ ಅಣ್ಣ ಮಲ್ಲನ ಗೌಡ ಕೂಡಾ ಬಂದು ಅಳುತಿದ್ದನು.
ಕೆಂಚನ ಗೌಡ ಕೂಡಾ ಬಂದು ಶವದ ಮೇಲೆ ಬಿದ್ದೂ ಬಿದ್ದು ಅತ್ತನು.
ಆ ನಂತರ ಮಷಾಣದ ಕರ‍್ಯಗಳೆಲ್ಲಾ… ಒಂದರ ನಂತರ ಒಂದು ಆಗಿ ಹೋದವು.
ಶವವನ್ನು ಗುದ್ದಿನೊಳಗೆ ಹೂತ ನಂತರ ಇಬ್ಬರೂ ಕೂಡಿ ಮೂರು ದಿನಗಳ ಹಿಂಡೇ ಕೂಳು ಎಡಿ ಮಾಡಿದರು.
ಮನೆಗೆ ತಂದ ಹೊಸ ಗಡಿಗೆಯೊಳಗೆ ಐದು ಪಾವುಗಳ ಅನ್ನ ಕುದಿಯುತ್ತಿರುವಾಗಲೇ ಮನೆಯೊಳಗೆ ಅಣ್ಣ ತಮ್ಮರಿಬ್ಬರೂ ದೇವರಿಗೆ ಪೂಜೆ ಮಾಡಿದರು. ದೀಪ ವಿಟ್ಟು ಹೊರಗೆ ಬಂದರು. ಒಳಗೆ ಏನು ಮಾತಾಡಿಕೊಂಡರೋ ತಿಳಿಯದು. ಆದರೆ ರಾಜ್ಯ ಮಟ್ಟದಲ್ಲಿ ರಾಜಕೀಯಗಳು ನಡೆದವು. ಎಂ.ಎಲ್.ಎ. ಯೊಂದಿಗೆ ಮಾತಾಡಿ ಬಂದಮೇಲೆ ರಾಜ್ಯ ಮಟ್ಟದಲ್ಲಿ ರಚಿಸಲಾದ ಕೃಷಿ ಮಾರುಕಟ್ಟೆ ಸಮತಿಯ ಕರ‍್ಯಕಾರಿ ಸದಸ್ಯನನ್ನಾಗಿ ಮಲ್ಲನ ಗೌಡನನ್ನು ಆಯ್ಕೆ ಮಾಡಲಾಯಿತು. ಇದಕ್ಕೆ ತೆರಿ ಹಿಂದೆ ಕೆಲಸ ಮಾಡಿದ್ದೇ ಕೆಂಚನಗೌಡನೆಂದು ಒಳಗಿನ ಗುಸು ಗುಸು….
ರ‍್ಕಾರದ ಬಂಗ್ಲೆ,ಕಾರು, ಆಫೀಸು ಪಡೆದು ಬೆಂಗಳೂರೊಳಗೆ ಕುಂತ ಮೇಲೆ ಊರೊಳಗಿನ ತನ್ನ ಕುಟುಂಬವನ್ನೆಲ್ಲಾ ಮಲ್ಲನ ಗೌಡ ಸಿಟಿಗೆ ಕರೆಸಿಕೊಂಡು ಬಿಟ್ಟ.
ಮಲ್ಲನ ಗೌಡನನ್ನು ಇಷ್ಟು ಕಾಲದಿಂದ ಊರೊಳಗೆ ನಂಬಿಕೊಂಡು ಬಂದವರ ಕಥೆಯೇನು? ಹೇಳಿಕೊಳ್ಳಲಾರದಂಗಾಯಿತು.
“ ನಾನು ಎಲ್ಲಿದ್ದರೂ ನಿಮಗೆ ಒಳ್ಳೆಯದೇ ಆಗುತ್ತದೆ. ರಾಜಧಾನಿಯೊಳಗೆ ಕುಳಿತರೆ ಎಂತಾ ಕೆಲಸಗಳಾದರೂ ಆಗುತ್ತವೆ. ನಿಮಗಾಗಿಯೇ ನಾನು ಹೋಗುತ್ತಿರುವುದು ” ಎಂದು ಹೇಳಿ ಮೊಸಳೆ ಕಣ್ಣೀರು ವರೆಸಿಕೊಂಡನು ಮಲ್ಲನ ಗೌಡ.
ಅಣ್ಣ ತಮ್ಮಂದಿರಿಬ್ಬರೂ ಕೂಡಿಕೊಂಡ ಮೇಲೆ ಊರು ಉದ್ದಾರ ವಾಗುತ್ತದೆಂದು ಎಲ್ಲರೂ ಅಂದುಕೊಂಡರು.
ಆದರೆ ಅದೇನೂ ಆಗಲಿಲ್ಲ.
ಊರೊಳಗೆ ಕೆಂಚನ ಗೌಡನದೇ ಆಡಳಿತವಾಯಿತು.
ಆತ ಹೇಳಿದ್ದೇ ಶಾಸನವಾಯಿತು.
ಅಲ್ಲಿ ತನಕ ಮಲ್ಲನ ಗೌಡನ ಬಳಿ ಕೆಲಸ ಮಾಡಿದವರನ್ನೆಲ್ಲಾ ಪೀಡಿಸುವುದು, ಕತ್ತರಿಸುವುದು, ಹೆಚ್ಚಾಯಿತು. ಕಷ್ಟ ಬಿದ್ದು ಎರಡು ಮೂರು ಸಲ ಬೆಂಗಳೂರಿಗೆ ಹೋಗಿ ಊರಿನ ಸಂಗತಿಗಳನ್ನೆಲ್ಲಾ ಮಲ್ಲನ ಗೌಡನಿಗೆ ಹೇಳಿದರೂ… ಏನೂ ಪ್ರಯೋಜನ ವಿಲ್ಲದಂಗಾಯಿತು.
“ಊರೊಳಗೆ ವಡೆದಾಟಗಳ್ಯಾಕೆ? ಯಾರೋ ಒಬ್ಬರು ಅನುಸರಿಸಿಕೊಂಡು ಹೋಗಬೇಕಪ್ಪಾ…ಏಷ್ಟು ಕಾಲ ಬಡಿದಾಡತೀರಿ ಅವು ಎಷ್ಟು ದಿನ ನಡೀತಾವೆ? ಸುಮ್ಮಕ ಸಿಕ್ಕಿದ್ದು ಗಳಿಸಿಕೊಂಡು ಸುಖ ಪಡಾದನ್ನ ನೋಡ್ರಿ. ಸಾಕಿನ್ನ… ಇಂಥಾ ರಾಡಿಗಳನ್ನ ಹೊತ್ತಗೊಂಡು ಇಲ್ಲಿತಂಕಾ ಬರಬ್ಯಾಡ್ರಿ. ಬೆಂಗಳೂರು ತಂಕ ತರಬ್ಯಾಡ್ರಿ ಬೇಸಿರಕಿಲ್ಲ ನಡ್ರೀ… ಇದಾ ಕಡೇ ಮಾತು ಎಚ್ಚರ” ಎಂದು ಕಡ್ಡಿ ಮುರಿದ ಮಲ್ಲನ ಗೌಡ.
ಅದಾ…ಕೊನಿ…
ಆ ಮ್ಯಾಲ ಅತನಿಂದ ಯಾರೂ ಒಳ್ಳೇದು ಬಯಸಲೂ ಇಲ್ಲ.
ನಮ್ಮ ರಾಡಿ ಪಂಚಾಯ್ತಿ ತೀರಿಸ ಬಾರಪ್ಪ ಎಂದು ಕೇಳಿಕೊಳ್ಳಲೂ ಇಲ್ಲ.
ಊರೊಳಗೆ ಕೆಂಚನ ಗೌಡಪ್ಪನದೇ ರ‍್ಭಾರಿಕಿ ನಡೆಯತೊಡಗಿತು. ಊರೊಳಗೆ ಆತನಿಗೆ ಯಾರ ಅಡೆತಡೆಯೇ… ಇಲ್ಲದಂಗಾಗಿ ಹೋಯಿತು.
ರೈತರು ಕಷ್ಟ ಪಟ್ಟು ಬೆವರು ಸುರಿಸಿ ಬೆಳೆದ ಬೆಳೆಯನ್ನ ತನಗೇ ಮಾರಬೇಕೆಂದು ಕೆಂಚನ ಗೌಡ ಠರಾವು ಹೊರಡಿಸಿದ. ರೈತರಿಗೆ ನ್ಯಾಯಯುತವಾದ ಬೆಲೆಯನ್ನು ಸಯಿತಾ ನೀಡಲಿಲ್ಲ.
ಊರೊಳಗೆ ರೈತರು ಕಷ್ಟ ಪಡುತ್ತಾರೆಯೇ ವಿನಾ, ಅವರು ಬೆಳೆದ ಬೆಳೆಗೆ ಬೆಲೆ ಕಟ್ಟುವುದು ಮಾತ್ರ ಕೆಂಚನ ಗೌಡನದೇ ಆಯಿತು. ʼಗೌಡನನ್ನು ಬಿಟ್ಟು ಮಾರಿದರೆ ಬೂದಿ ಪಾಲು ಗೌಡನಿಗೆ ತಂದು ಮಾರಿದರೆ ಕಾಡುಪಾಲುʼ ಅನ್ನಂಗಾತು. ಅವರ ಪಾಡು.
“ವ್ಯವಸಾಯವೆಂದರೆ ಜೂಜಾಟವಾ? ಕೊನೆಗಾಣದ ದುಃಖವಾ?”…
ಹೊಲಗಳ ಬಳಿಯೇ ಕೆಂಚನ ಗೌಡರ ನಾಲ್ಕು ಜನ ನಿಂತು, ಮುಖಕ್ಕೆ ಹೊಡೆದಂತೆ, ಟ್ರ‍್ಯಾಕ್ಟರ್‌ ಗಳೊಳಗೆ, ಲಾರಿಗಳೊಳಗೆ ರೈತರು ಬೆಳೆದ ಬೆಳೆಗಳನ್ನ ಹದ್ದುಗಳಂತೆ ಹಾರಿಸಿಕೊಂಡು ಹೋಗುತ್ತಿದ್ದಾರೆ…
ರೈತರು ತಿರುಗಿ ಬೀಳಲಾಗದೇ ಹೋದರು.
ಯಾರಿಗೆ ಹೇಳಿಕೊಳ್ಳುತ್ತಾರೆ?
ಇದಕ್ಕೆ ಜೊತೆಯಾಗಿ….
ಊರೊಳಗೆ ನಂಬರ್‌ ಗಳಾಟದ ಮಟ್ಕವೂ ಬಂದಿದೆ.
ಸುತ್ತು ಮುತ್ತಲ ಹಳ್ಳಿಗಳನ್ನೆಲ್ಲಾ ಸೆಳಕೊಂಡಿದೆ.
“ ರೂಪಾಯಿಗೆ ನೂರು ರೂಪಾಯಿಗಳು” ಎಂದು ಹೇಳಿದ್ದರಿಂದ ಆಸೆಪಟ್ಟ ಜನರು ತಮ್ಮ ಹತ್ತಿರ ಉಳಿಸಿದ ಹಣವನ್ನೆಲ್ಲಾ ತೆಗೆದು ತಮ್ಮ ಅದೃಷ್ಟವನ್ನ ಪರೀಕ್ಷಸಲು ನೋಡಿದರು. ಆ ಆಟ ಕೆಂಚನ ಗೌಡನ ಮನೆಗೆ ಹಣದ ಬೆಳೆಯಾಗಿ ಒದಗಿತು.
ರಾತ್ರೋ ರಾತ್ರಿಗೆ ಲಕ್ಷಾಧೀಶ್ವರರಾಗಬೇಕು,ಕೋಟ್ಯಾಧೀಶ್ವರರಾಗಬೇಕು ಎಂದು ಕನಸು ಕಾಣುವವರನ್ನು ಬೇಟೆಯಾಡುತ್ತಲೇ ಕೆಂಚನ ಗೌಡ ಬೆಳೆದುಬಿಟ್ಟನು. ಮಟ್ಕಾದ ಏಟಿಗೆ ಸುಖದ ಕುಟುಂಬಗಳು ಒಡೆದು ಛಿದ್ರ ಛಿದ್ರಗೊಂಡವು. ಹೆಣ್ಣು ಮಕ್ಕಳ ಕೊರಳೊಳಗಿನ ತಾಳಿ ಸರಗಳು ಕೂಡಾ ಮಟ್ಕಾದ ಮಹಾ ಮಾರಿಗೆ ಆಹುತಿ ಆದವು.
ನೋಡು ನೋಡುತ್ತಿದ್ದಂತೆಯೇ ಊರೊಳಗೆ ಮತ್ತೊಂದು ಅನಿಷ್ಟವು ಊರನ್ನು ಪ್ರವೇಶಿಸಿತು.
ರ‍್ಕರವು ಎರಡು ಬ್ರಾಂದಿ ಶಾಪುಗಳನ್ನು ತೆರೆಯಲು ಕೆಂಚನ ಗೌಡನಿಗೆ ರ‍್ಮಿಷನ್‌ ನೀಡಿತು.
ಇದರೊಂದಿಗೆ ಊರೆಲ್ಲಾ ಮತ್ತಾಗಿ ಮಲಗಿತು.
ಹೆಸರಿಗೆ ಅವು ಬ್ರಾಂದಿ ಶಾಪುಗಳಾದವೇ ವಿನಃ ಒಳಗೆಲ್ಲಾ ಅವು ಕಳ್ಳ ಬಟ್ಟಿ ಸರಾಯಿಯ ಸರಕೇ ಆಗಿದ್ದವು.
ಕಲ್ಲಪ್ಪನ ಗುಡಿ ಕೆಳಗಿನ ಕೆರೆ ಅಂಗಳದಲ್ಲಿ ಬಟ್ಟಿ ಸರಾಯಿ ತಯಾರು ಮಾಡುವುದು…
ಆ ಸರಕನ್ನು ಪ್ಲಾಸ್ಟಿಕ್‌ ಕ್ಯಾನ್‌ ಗಳೊಳಗೆ ಹಳ್ಳಿಗಳಿಗೆ ತರುವುದು…
ಆ ಸರಕಿನ ಯಾಪಾರವನ್ನು ಪುಲ್‌ ಬಾಟಲು.. ಆಫ್‌ ಬಾಟಲುಗಳಾಗಿ ಮರ‍್ಪಡಿಸುವ ವ್ಯಾಪಾರ ಸುರುವಾಯಿತು.
ಆ ನಂತರ ಕೆಂಚನ ಗೌಡ ಹಿಂದಕ್ಕೆ ತಿರುಗಿ ನೋಡಲೇ ಇಲ್ಲ…
ಮಲ್ಲನ ಗೌಡ ರಾಜಧಾನಿ ಲೆವೆಲ್‌ ನೊಳಗೆ ಸಂಪಾದಿಸಿಕೊಳ್ಳುತ್ತಾ ಊರಿನ ಕಡೆಗೆ ಬರಲೇ ಇಲ್ಲ.
ನೋಡಲೇ ಇಲ್ಲ.
***
ಕಾಲ ಕಳೆಯುತ್ತಲೇ ಇತ್ತು.
ಎಂ.ಎಲ್.ಎ ಈ ಸಲ ಚುನಾವಣೆಯೊಳಗೆ ತಾನು ನಿಲ್ಲಲಾರದೇ ತನ್ನ ಮಗ ವೀರನ ಗೌಡನನ್ನು ನಿಲ್ಲಿಸಿದನು. ಮಲ್ಲನ ಗೌಡನ ಪರ‍್ಟಿಯ ಗೆಲುವಿಗಾಗಿ ಕೆಂಚನ ಗೌಡ ಶ್ರಮಿಸಿದನು. ಎಂ.ಎಲ್.ಎ. ಮಗನನ್ನು ಗೆಲಿಸಿಕೊಳ್ಳಲಿಕ್ಕಾಗಿ ತಮಗೆ ಎದುರು ಬಿದ್ದ ಎರಡು ಮೂರು ಕಡೆಯ ಅಭ್ರ‍್ಥಿಗಳನ್ನು ಕಾವಲು ಕಾದು ಕಿಡ್ನಾಪ್‌ ಮಾಡಿಸಿದನು.
“ ಯಂಗಾದರೂ ಎಷ್ಟು ರ‍್ಚಾದರೂ ನನ್ನ ಮಗ ಗೆಲ್ಲಬೇಕು..” ಎಂದು ಎಂ.ಎಲ್.ಎ. ಶಪಥ ಮಾಡಿದ್ದ.
ಎರಡು ದಿನಗಳು ಹಳ್ಳಿ ಹಳ್ಳಿಗಳೊಳಗೆ ಬಿಳಿಯ ಸುಮೋ ಕಾರ್‌ ಗಳಲ್ಲಿ ಮಲ್ಲನ ಗೌಡ ತಿರುಗಾಡಿದ.
ಜನವ್ಯಾರೂ ಆತನನ್ನ ಗೌರವದಿಂದ ನೋಡಲಿಲ್ಲ.
ಅಭಿಮಾನಪಟ್ಟು ಆದರಿಸಲಿಲ್ಲ.
ಪ್ರಚಾರಗಳ ರ‍್ವವೂ ಮುಗಿಯಿತು.
ಓಟು ಹಾಕುವ ದಿನ ಬಂದೇ ಬಿಟ್ಟಿತು.
ಕಳ್ಳ ಬಟ್ಟಿ ಸರಾಯಿ ಹಳ್ಳಿಗಳನ್ನು ಹೊಕ್ಕು ಹಿಂಡಿ ಹಾಕಿತು. ನೋಟಿನ ಕಂತೆಗಳು ರೆಕ್ಕೆ ಬಿಚ್ಚಿಕೊಂಡು ಬಾಗಿಲುಗಳಿಗೆ ಮಾವಿನ ತೋರಣಗಳಾದವು. ಓಟಿಂಗ್‌ ಎಲ್ಲೂ ನಡೆಯಲಿಲ್ಲ. ಪೋಲಿಂಗ್‌ ಆಫೀಸರ್‌ ಗಳು ಮಾರಾಟವಾದರು. ಎಲ್ಲಾ ಓಟುಗಳನ್ನು ಕೆಂಚನ ಗೌಡನ ಕಡೆಯವರೇ ಗುದ್ದಿ ಬ್ಯಾಲೆಟ್‌ ಬಾಕ್ಸಗೆ ತುಂಬಿದರು. ಈ ಸಲದ ಚುನಾವಣೆಯ ನೇತೃತ್ವವನ್ನು ಕೆಂಚನ ಗೌಡನ ಮಗ ಫಕ್ಕೀರ ಗೌಡನೇ ವಹಿಸಿಕೊಂಡಿದ್ದ.
ಫಕೀರಗೌಡನ ಕಡೆಯವರು ಪೋಲಿಂಗ್‌ ದಿನ, ಕೋಡಿ ಹಳ್ಳಿಯ ವಿರೋಧ ಪಕ್ಷದ ಅಭ್ರ‍್ಥಿಯ ಏಜೆಂಟು ನಾಗಭೂಷಣನನ್ನು ತುಂಡು ತುಂಡಾಗಿ ಕತ್ತರಿಸಿದರು.
ಚುನಾವಣಾ ಅಧಿಕಾರಿಗಳು ಅಲ್ಲಿ ರೀಪೋಲಿಂಗ್‌ ʼಗೆ ಆದೇಶ ನೀಡಿದರು.
ಆ ನಂತರ ಅದನ್ನು ಕೂಡಾ ಮತ್ತೆ ಫಕ್ಕೀರಗೌಡ ರಾಜಕೀಯ ಮಾಡಿ ತಮ್ಮದನ್ನಾಗಿಸಿಕೊಂಡ.
ಎಂ.ಎಲ್.ಎ. ಮಗ ವೀರನ ಗೌಡ ಚುನಾವಣೆಯಲ್ಲಿ ಗೆದ್ದನು.
ಅವರಿಗಾದ ಸಂತೋಷ ಅಷ್ಟಿಷ್ಟಲ್ಲ.
“ಯುವಕರು ರಾಜಕೀಯದೊಳಗೆ ಕಾಲಿಡುವಂತಹ ಅಗತ್ಯವೇನೋ ಇದೆ. ಅದಕ್ಕೆ ಆತನಿಗೆ ಈ ಚುನಾವಣೆಯೇ ಶ್ರೀಕಾರವಾಯಿತು.” ಎಂದು ಶಾಸಕರು ಮೀಸೆ ತಿರುವಿಕೊಳ್ಳುತ್ತಾ ಹೇಳಿದರು.
ವೀರನ ಗೌಡ ತನ್ನ ಬೆಂಬಲಿಗರಾದ ಕೆಂಚನ ಗೌಡ, ಪಕ್ಕೀರ ಗೌಡರ ಜೊತೆಗೆ ಬಣ್ಣದಗಳಲ್ಲಿ ಮುಳುಗಿ ಕುಂಕುಮದ ತಿಲಕ ಇಟ್ಟುಕೊಂಡು ಸಂಭ್ರಮದಿಂದ ಪೇಪರ್‌ ಗಳಲ್ಲಿ ಕಾಣಿಸಿಕೊಂಡ.
ಫಕ್ಕೀರ ಗೌಡನೇ ಆ ಸಮಾರಂಭಕ್ಕೆ ರ‍್ಚು ಮಾಡಿದನೆಂದು ಸುದ್ಧಿಯಾಯಿತು..
ಈ ಚುನಾವಣೆಯೊಂದಿಗೆ ಕೆಂಚನ ಗೌಡನಿಗೆ ಒಂದು ನಂಬಿಕೆ ಕುದುರಿತು.
ಫಕ್ಕೀರ ಗೌಡ ತನ್ನಂತೆಯೇ ಬೆಳೆಯ ಬಲ್ಲ.
ಮಟ್ಕಾ ವ್ಯಾಪಾರಗಳು, ಭಟ್ಟಿ ಸರಾಯಿ, ರಸ್ತೆ ಕಾಮಗಾರಿಗಳ ಕಾಂಟ್ರಾಕ್ಟಗಳನ್ನೆಲ್ಲಾ ಆತನಿಗೇ ವಹಿಸಿದ.
ತಾನು ಎಲ್ಲಿಗೂ ಹೋಗಲಿಲ್ಲ.
ದಿನಗಳು ಹೀಗೇ ಕಳೆಯುತ್ತಲೇ ಇದ್ದವು…
ಇದ್ದಕ್ಕಿದ್ದ ಹಾಗೇ ಒಂದು ದಿನ ಎಂ.ಎಲ್.ಎ. ಮಲ್ಲನಗೌಡರು ಬಂದು ಹೊಸ ಸಂದೇಶವೊಂದನ್ನು ಬಿತ್ತರಿಸಿದರು.
“ ಅಮೇರಿಕಾಕ್ಕೆ ಹೋಗಿ ಎರಡು ರ‍್ಷ ಇದ್ದು ಬರೋಣಪ್ಪಾ ಬಾ” ಎಂದು ತಿಳಿಸಿದರು.
ಕೆಂಚನ ಗೌಡ ತುಟಿಗಳಲ್ಲಿ ನಗು ಅರಳಿಸುತ್ತಾ “ ಏನಣ್ಣಾ … ಆ ಕಡಿಕೆ ಗಾಳಿ ಬೀಸುಬುಟೈತೆ” ಎಂದ.
“ ಬುಡಾ ಇಷ್ಟು ರ‍್ಷಗಳೆಲ್ಲಾ ಮಾಡಿದವನ್ನೇ ಮಾಡಿ ಮಾಡಿ ಸಾಕಾತು. ಇನ್ನಾನ ಓಟು ಆ ದೂರದ ದೇಶಕ್ಕ ಹೋಗಿ ನಿರುಮ್ಮಳವಾಗಿ ಲೋಕ ಸುತ್ಯಗಂಡು ಬರೋನಾ ನಡಿ, ಇಲ್ಲಿ ಎಲ್ಲಾ ಸರಿ ಹೋಗೇತಿ ನಡಿ…” ಅಂತಾ ತೂಗ್ಯಾಡೋ ಕರ‍್ಚಿಯೊಳಗ ಕುಂತು ತೂಗುತ್ತಾ ಹೇಳಿದನು.
“ ಬಿಡು ನಡಿಯಣ್ಣಾ… ನನಗೂ ಅಂಗಾ ಅನಸಾಕತ್ತೇತಿ…. ನಮ್ಮ ಮ್ಯಾಲ ಯಾ ಜವಾಬ್ದಾರಿಗಳು ಗುಡಾ ಇಲ್ಲ. ಯಾಪಾರ..ಅಧಿಕಾರಗಳನ್ನೆಲ್ಲಾ ಮಕ್ಕಳೇ ನೋಡಿಕೊನಾಕತ್ಯಾವು. ಹ್ವಾದ ರ‍್ಷ ಅದೇನೋ ಪಾಸ್‌ ಪರ‍್ಟ ವಿಸಾ ಅದೆಲ್ಲಾ ಮಾಡಿಸಿದ್ದೆಲ್ಲಾ ಇದಕಾ ಏನು?, ಅಬಬಬೋ ಭಾರಿ ಬಿಡು ನೀನು. ಆತು ನಡಿಯಣ್ಣಾ ಹೋಗಾನ..ನಮಗೂ ಆ ಕಡಿ ಗಾಳಿ ಕುಡದಂಗಕ್ಕಾತಿ” ನಿರುಮ್ಮಳವಾಗಿ ಒಪ್ಪಿದನು ಕೆಂಚನ ಗೌಡ.
ಅಷ್ಟೇ….
ಬರೋ ವಾರಕ್ಕೇನೇ.. ಎಲ್ಲಾ ಹೊಂದಿಸಿಕೊಂಡರು.
ವಿಮಾನ ಗಾಳಿಯೊಳಗೆ ಹಾರಿತು.
***
ಕೆಂಚನ ಗೌಡ, ಮಲ್ಲನ ಗೌಡರು ಅತ್ತ ಅಮೇರಿಕಾಕ್ಕೆ ಹೋಗುತ್ತಲೇ…
ಇತ್ತ ಹೊಸ ಎಂ. ಎಲ್.ಎ. ವೀರನ ಗೌಡನ ಬೆಂಬಲಿಗರೊಂದಿಗೆ ಫಕ್ಕೀರ ಗೌಡ ಎದ್ದು ಕುಂತನು.
ಊರೊಳಗೆ ತನಗೆ ಎಡಗೈ ಬಲಗೈ ಆಗಿದ್ದ ಬಾರಕೀರ ಸಿದ್ಧಪ್ಪ, ತಳವಾರ ರೇವಣ ಸಿದ್ಧಪ್ಪನನ್ನ ಬೆನ್ನ ಹಿಂದೆ ಇಟ್ಟಕೊಂಡು ಹೊಲಗಳಿಗೆ ಕೆಲಸಕ್ಕೆಂದು ಬರುವ ಚಂದುಳ್ಳ ಹೆಣ್ಣುಮಕ್ಕಳನ್ನು ಬಿಡದೆ ಅನುಭವಿಸುವುದನ್ನು ಶುರುಮಾಡಿದನು.
ತನ್ನ ಹತ್ತಿರಕ್ಕೆ ನ್ಯಾಯ ಕೇಳಿಕೊಂಡು ಬರುವ ಬಡಜನರನ್ನು ಪೀಡಿಸಿ ಹಣ ವಸೂಲಿ ಮಾಡುವುದು…
ವಾರ ಬಡ್ಡಿಗೆ ರೊಕ್ಕ ಕೊಟ್ಟು ತನಗೆ ಬೇಕಾದಂಗೆ ಬಾಂಡು ಬರೆಸಿಕೊಂಡು… ಮನಿ ಮಠ ಎತ್ತಾಕಿಕೊಳ್ಳೋದು.
ಅಡ್ಡ ಬಂದವರನ್ನ…
ತಿರುಗಿ ಬಿದ್ದವರನ್ನ…
ಹಿಡಿ ಹಿಡಿದು ಊರ ಹೊರಗಿನ ತೋಟದ ಮನಿಗೆ ತಂದು ನಾದಿ ನಾದಿ.. ನರಗಳನ್ನ ಕತ್ತಿರಿಸೋದ ಮಾಡತೊಡಗಿದ.
ಫಕ್ಕೀರ ಗೌಡನ ಏಟಿಗೆ ಎದುರೇ ಇಲ್ಲದಂಗಾತು.
ಭೂಮಿ ಹುಚ್ಚು ಹಿಡಿಯಿತು.
ತನಗೆ ಹಿಡಿಸಿದ ಕಾಲುವೆ ಮ್ಯಾಗಳ ಭೂಮಿಗಳ ಮೇಲೆಲ್ಲಾ ಕಣ್ಣಾಕಿದ.
ರಾತ್ರೋ ರಾತ್ರಿ ನಂಬರ್‌ ಕಲ್ಲುಗಳನ್ನ ಬದಲಿಸಲು ಹೇಳಿದ…
ಹಳ್ಳಗಳನ್ನು ಮಾಯ ಮಾಡಿಸಿದ…
ಭೂಮಿಗಳನ್ನೆಲ್ಲಾ ಖಬ್ಜಾ ಮಾಡಿಕೊಳ್ಳ ತೊಡಗಿದ.
ಫಕ್ಕೀರ ಗೌಡನ ಕಡೆಯೋರಿಗೆಲ್ಲಾ ಇದೇ ಕಸಬಾಯಿತು.
ಅವರೆಲ್ಲಾ ಈ ಕಸಬಿನೊಳಗೇ ಮುಳುಗಿ ಹೋದರು.
ವೀರ ಭದ್ರಿಯ ಮನಸೆಲ್ಲಾ ಉರಿಯುತ್ತಿದೆ.
ರಕ್ತ ಕುದಿಯುತ್ತಿದೆ.
ಇದಕ್ಕೆ ನಾನು ಅಡ್ಡಲಾಗಬೇಕು.
ನನ್ನ ಭೂಮಿನ ನಾನು ಉಳಿಸಿಗ್ಯಾಬೇಕು.
***
ಅರಳೀ ಮರದ ರೆಂಬೆಗಳು ಗಾಳಿಗೆ ಸಣ್ಣಗೆ ತೂಗುತ್ತಿವೆ…
ಹೊತ್ತುಟ್ಟಿ ಎಳೆ ಬಿಸಿಲು ಬಿದ್ದು ಎಲೆಗಳೆಲ್ಲಾ ಥಳ ಥಳನೇ ಹೊಳೆಯುತ್ತಿವೆ…. ಪಕ್ಷಿಗಳ ಕೊರಳಿಂದ ನೂರಾ ಒಂದು ಸದ್ದು….
ಮರದ ರೆಂಬೆಗಳು ತೂಗುತ್ತಾ ತೂಗುತ್ತಾ ನೆಲದ ಬಳಿಗೆ ಹಾಯುತ್ತಿವೆ. ಅವು ಭೂಮಿ ತಾಯಿಯನ್ನ ಪ್ರೀತಿಯಿಂದ ಮುತ್ತಿಡಲು ಬಾಗಿದಂಗೆಯೇ ಕಾಣುತ್ತವೆ…
ಒಂದು ಕೈಯೊಳಗೆ ಖಡ್ಗವನ್ನು ಮತ್ತೊಂದು ಕೈಯೊಳಗೆ ಕುದುರೆಯ ಹಗ್ಗವನ್ನು ಹಿಡಕೊಂಡು ಹೋರಾಟ ಮಾಡುತ್ತಿರುವ ವೀರಗಲ್ಲೊಂದು ಆ ಮರದ ಪೊಟರೆಯೊಳಗೆ ಅತುಕೊಂಡು ನಿಂತಿದೆ.
ಅದೇ ಕಟ್ಟೆಯ ಮೇಲೆ ಊರ ಹಿರೀಕರು ಕುಳಿತಿದ್ದಾರೆ. ಉಳಿದವರೆಲ್ಲಾ ನೆಲದ ಮ್ಯಾಲೆಯೇ ಕುಳಿತಿದ್ದಾರೆ.
“ ಹಂಗಾದ್ರೆ… ಏನಂತಿಯಾ…ವೀರಭದ್ರೀ…? ಫಕ್ಕೀರ ಗೌಡ್ರು ನಿನ್ನ ಭೂಮಿನಾ ಒತ್ತಿಕ್ಯಂಡಾನ ಅಂತೀಯಾ? ಹಂಗದ್ರ ನೀನು ಆತನ್ನಾ… ಭೂಮಿ ಕಳ್ಳಾ ಅಂತೀಯಾ!?” ಅಂತಾ ಕೇಳಿದನು ರೇವಣಪ್ಪ.
ಅತ್ತ ಕಿವಿಗೊಡದೇ ಪಂಚಾಯ್ತಿ ಕಟ್ಟೆ ಕಡೆಗೆ ತಿರುಗಿದ ವೀರಭದ್ರಿ “ ಏನೇಳ್ತೀರಿ ಗೌಡ್ರೇ…ಎಕರಿಯಿಂದ ಈಗ ಎಲ್ಡೆಕ್ರೀ ಹಿಡದಾರ, ರಾತ್ರಿಗೆ ರಾತ್ರಿಯೇ ಮ್ಯಾರಿ ಕಲ್ಲು ಕಿತ್ತು ಈ ಕಡಿಗೆ ಹುಗುದಾರ. ಇದರ ಮ್ಯಾಲ ಪಂಚಾಯ್ತಿ ಇಟ್ಟರ ಅವರೇ ಹೇಳಿದ್ದ ಕೇಳಬೇಕು ಅಂತ ಅವತ್ತು ಕಳಿಸಿಬಿಟ್ಟಿರಿ. ಈಗ ಅವರೇ….ಸರಕಂತಾ ಸರಕಂತಾ.. ಹೊಲವೀಟೂ ಹಿಡದಾರ… ಈಗ ನಮಗ ಉಳಿದಿರೋದು ಹಳ್ಳದ ತುಂಡು ಹೊಲ ಒಂದಾ… ಅದು ಕೂಡಾ ಮೊನ್ನೆ ರಾತ್ರಿ ಫಕ್ಕೀರ ಗೌಡ್ರ ಭೂಮಿ ಒಳಗಾ ಬರತೈತಿ ಅನ್ನಂಗ ಮ್ಯಾರಿ ಕಲ್ಲು ಕಿತ್ತಕ್ಯಾರಪ್ಪೋ… ಇನ್ನ ನಾನೇನ್‌ ಮಾಡದು?” ಅಂತಾ ವೀರಭದ್ರ ದುಃಖಿಸಿದನು.
ಕಟ್ಟಿ ಮ್ಯಾಗ ಕುಂತ ದೊಡ್ಡ ಜನರೆಲ್ಲಾ ಆನಂದ ಪಡುತಿದ್ದರೆ ಕೆಳಗೆ ನೆಲದ ಮೇಲೆ ಕುಂತ ಹಳ್ಳಿ ಜನರು ಕಕ್ಕ ಬಿಕ್ಕಿಯಾಗಿ ನೋಡ್ತಾ ಇದ್ರು.
ಮರದ ಬುಡದಲ್ಲೇ ನಿಂತ ಫಕ್ಕೀರ ಗೌಡ ಮೀಸಿ ತಿರುವುತಿದ್ದಾನೆ.
ಮರದ ಕೊಂಬೆಗಳ ತೂಗಾಟವಿಲ್ಲ. ಶಬ್ದಗಳಿಲ್ಲ…. ಪಕ್ಷಿಗಳ ಕಲರವವಿಲ್ಲ…
ಕಣ್ಣಗಲಕ್ಕೂ….ವೀರಭದ್ರ ಅಳುತ್ತಿರುವ ನೋಟ.
“ ಅತ್ತು ಬಿಡಲೇ… ಗಂಡಸು ಅತ್ರೆ ಮುಂಡೆ ನೋಡಿದಂಗ ಅಕ್ಕಾತಿ…. ತಟಗನ್ನಾ ರೋಷವಿಲ್ಲದ ಕಳ್ಳ ಸೂಳೇ ಮಗನೇ…ನಮ್ಮ ಫಕ್ಕೀರ ಗೌಡ್ರನ್ನ ಪಂಚಾಯ್ತಿಗೆ ಕರಿತೀಯಾ ನೀನು!? ಅವ್ರ ಮೇಲೆನೇ… ಭೂಮಿ ಕಳುವು ಹೊರಸ್ತೀಯಾ?… ಅಂದ್ರ ಕಳ್ಳ ಅಂತೀಯೇನ್ಲೇ…
ಅಂತ ಪೊಗರು ಬಂದತೇನ್ಲೇ ನಿನಗೆ…” ಎಂದು ಎಗರಿ ಜಾಡಿಸಿ ಒದ್ದ ಬಾರಿಕೇರ ಸಿದ್ದಪ್ಪ.
ವೀರಭದ್ರಿ ಸಿಡಿದು ಅಷ್ಟು ದೂರ ಉರುಳಿದ.
ಏಳಲು ಹೋದವನಿಗೆ ಮತ್ತೊಂದು ಒದೆ ಬಿತ್ತು.
ಇದೇ ಅವಕಾಶ ನೋಡಿಕೊಂಡು ಫಕ್ಕೀರ ಗೌಡ ಕೂಡಾ ಒದೆಯಲು ಶುರುವಿಟ್ಟನು.
“ ಬೀಳ್ಲಿ ಸೊಕ್ಕು ಕರಗತಾವು. ಏಟು ತಿಮರು ಇರಬೇಕು ಈ ತಿರಬೋಕಿಗೆ ನಮ್ಮ ಗೌಡನ್ನ ಪಂಚಾಯ್ತಿಗೆ ಕರಸಾಕ. ಇನ್ನಾ ನಾಕು ಹಾಕ್ರಿ. ಬುದ್ಧಿ ರ‍್ತಾವು… ಲಮ್ಡಿ ನನ ಮಗನಿಗೆ” ….ಕುಂತು ಕಾರಿಕೊಂಡ ತಳವಾರ ರೇವಣಪ್ಪ.
ವೀರ ಭದ್ರನಿಗೆ ಎರಡೂ ಕಡೆಯಿಂದ ಏಟು ಬೀಳತೊಡಗಿದವು.
ಒಂದು ಕಡಿಗೆ ಸಿದ್ದಪ್ಪ, ಇನ್ನೊಂದು ಕಡಿಗೆ ಫಕ್ಕೀರ ಗೌಡ…. ಕೆಳಗೆ ಬೀಳಿಸಿಕೊಂಡು ರುಬ್ಬತೊಡಗಿದರು.
ಈ ರ‍್ತಿ ಫಕ್ಕೀರ ಗೌಡನು ಹಿಡಿದು ಎಳೆದು ಒದ್ದ ಏಟಿಗೆ ವೀರ ಭದ್ರ ಹಾರಿ ಮರದ ಪೊಟರಿ ಹತ್ರ ಬಿದ್ದ.
ಆತನ ಇನ್ನೊಂದು ಹೊಡ್ತ ಬೀಳೋ ಮುನ್ನವೇ ಬಗಲಾಗ ನೇತಾಡುತಿದ್ದ ಚೀಲದಿಂದ ಗಂಡು ಗೊಡಲಿ ತೆಗೆದು ಮಿಂಚಿನಂತೆ ಮೇಲಕ್ಕೆದ್ದ…
ಸುತ್ತು ಸೇರಿದ ಜನರು ಓಟ ಕಿತ್ತರು…
ವೀರಭದ್ರಿ ಬೀಸಿದ ಒಂದೇ ಒಂದು ಏಟಿಗೆ ಫಕ್ಕೀರ ಗೌಡನ ತಲೆ ಹಾರಿ ಕುಳ್ಳು ತುಂಬಿದ ಗೋಣೀ ಚೀಲದೊಳಕ್ಕೆ ಬಿತ್ತು!
ಇದನ್ನ ನೋಡಿ ಪ್ರಾಣವನ್ನ ಅಂಗೈಲೇ… ಹಿಡಕೊಂಡು ಓಡಲು ನೋಡಿದ ಬಾರಕೇರ ಸಿದ್ಧಪ್ಪ.
ಬೆನ್ನಟ್ಟಿ ಹಿಡಿಯಿತು ವೀರಭದ್ರನ ರುದ್ರಾವತಾರ!
ಹಾರಿ.. ಸಿದ್ಧಪ್ಪನು ಒದ್ದ ಬಲಗಾಲನ್ನು ಕಡಿದು ಬಿಟ್ಟ.
ಹಾ….ಎಂದು ಕುಸಿದ ಸಿದ್ಧಪ್ಪನ ಬಾಯನ್ನ ಹಂಗೇ ಗಂಡು ಗೊಡಲಿಯೊಳಗೆ ಕಡಿದು ಎರಡು ಹೋಳು ಮಾಡಿಬಿಟ್ಟ!
ತಲೆ ತುಂಬಾ ಮಾತಾಡಿದ ತಳವಾರ ರೇವಣಪ್ಪ ಓಡಲೆಂದು ನೋಡಿದನೇ ವಿನಃ. ಆತನ ಕೈ ಕಾಲೇ ಆಡುತಿಲ್ಲ. ನಿಂತಲ್ಲೇ ನಡುಗುತ್ತಾ… ರೇವಣಿ ಎದೆ ಒಡೆದು ಹಂಗೇ ಕುಸಿದು ಪ್ರಾಣ ಬಿಟ್ಟ!
ಅದರೂ…
ಬಿಡದ ವೀರಭದ್ರ ಎಳೆದು ಅವನ ರುಂಡವನ್ನ ಎಗರಿಸಿದ. ಅದು ಹಾರಿ ವೀರಗಲ್ಲಿನ ಪೊಟರೆಯ ಎದುರು ಕಾವಲು ಕಾಯುವಂತೆ ಕುಂತಿತು!
ಅವತ್ತೇ ಕೊನೆ….
ಊರೊಳಗೆ ಹದ್ದುಗಳು ಹಾರಿದ್ದು….
ಊರೊಳಗೆ ಪಾಪದ ಕೆಲಸ ನಿಂತವು.
ಊರ ಪಂಚಾಯ್ತಿಗಳು ನಿಂತವು.
ಊರೀಗ ಊರಿನಂತೆಯೇ ಇದೆ.
ಕಾಲ ಕಾಲಕ್ಕೆ ಮಳೆಯಾಗುತ್ತಿದೆ.
ಕಾಲುವೆಗಳು ತುಂಬಿ ಹರಿಯುತ್ತಿವೆ.
ಎಲ್ಲರ ಹೊಲಗಳೂ ಹಚ್ಚ ಹಸಿರಾಗಿವೆ.
ಎಲ್ಲರೂ ಸಮನಾಗಿ ಬಾಳುತಿದ್ದಾರೆ.
ಮರದ ಕೊಂಬೆಗಳು ಎಂದಿನ ಹಾಗೇ ನೆಲ ತಾಯಿಯ ಕೆನ್ನೆಗೆ ಬಾಗಿ ಮುದ್ದಿಡಲು ನೋಡುತ್ತಿವೆ.
ಸಣ್ಣಗೆ ಹನಿವ ಹನಿಗಳ ನಡುವೆ ಮೂಡಿದ ಕಾಮನ ಬಿಲ್ಲಿನ ಚಲುವಾದ ಬಣ್ಣಗಳು ಮುಗಿಲ ಸೆರಗನ್ನು ತುಂಬಿಕೊಂಡಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕತೆ | ಮಾಯಮ್ಮ

Published

on

~ತೆಲುಗು ಮೂಲ: ಡಾ.ವೇಂಪಲ್ಲಿ ಗಂಗಾಧರ್,ಕನ್ನಡಕ್ಕೆ: ಡಾ.ಶಿವಕುಮಾರ್ ಕಂಪ್ಲಿ

ʼಆಗಸದ ತುಂಬಾ ಕಪ್ಪನೆಯ ದಟ್ಟ ಮೋಡಗಳು ಕವಿದುಕೊಂಡಿವೆ. ಮೋಡ ಮೋಡಗಳು ಬಸೆದುಕೊಂಡು ಗುಡುಗು ರ‍್ಜಿಸುತ್ತಿದೆ. ಗುಡುಗು ಗುಡುಗುಗಳನ್ನು ಹೊತ್ತಿಕೊಂಡು ಮಿಂಚುಗಳು ಮಿನುಗುತ್ತಿವೆ. ಮಿಂಚು ಮಿಂಚುಗಳು ಹೊಸೆದುಕೊಂಡು ಬೆಂಕಿಸುರಿಸುತ್ತಿವೆ.ಆ ಸೆಕೆಗೆ ಕಪ್ಪುಮೋಡ ಕದಲಿಹೋಗುತ್ತಿದೆ. ಹೊಡೆದುಕೊಂಡು ಹೋಗುತ್ತಿದೆ. ಹೊಗೆಯನ್ನು ತಗಲಿಸಿಕೊಂಡು ಬೋಂಕನೆ ಸರಿಯುತ್ತಿದೆ. ನಕ್ಕನ್‌ ಕರೇಮೋಡ. ಈ ಗಡ್ಡೆಮ್ಯಾಕೆ ಸುರಿಬೇಕಂದರೆ ಈ ಮಾಡಗಳಿಗೆ ಏನು ಮಾಡಬೇಕೋ. ನಮ್ಮ ನೆತ್ತಿಯ ಮೇಲೆ ಬರವನ್ನು ಹಾಕಿ ಎಲ್ಲಿಗೋ ಮಳೆಗಳನ್ನ ಓಡಿಸಿಬಿಡುತ್ತವೆ. ಈ ಮಾಡಗಳಿಗೆ ಅದೇಟು ತೀಟಿ…” ವೀರಶಿವ ಬೈದುಕೊಳ್ಳುತಿದ್ದಾನೆ ಮಾಯಮ್ಮನ ಗುಡಿಯ ಪಡಸಾಲೆಯೊಳಗೆ ಉದ್ದಕೆ ಮಲಗಿಕೊಂಡು.
ಕಪ್ಪನೆಯ ಶರೀರ. ಮಾಸಿದ ಗಡ್ಡ. ಹರಿದುಹೋಗಿರುವ ಬಟ್ಟೆಗಳು. ಕೈಯೊಳಗೊಂದು ಬಿದುರು ಕೋಲು. ಹೆಗಲ ಮೇಲೊಂದು ಜೋಳಿಗೆ. ಧೂಳ ಕಾಲಿನ ಮೇಲೊಂದು ಕುರ ಅದಕ್ಕೆ ಮುತ್ತಿಕೊಳ್ಳುತ್ತಿರುವ ನೊಣದ ಹಿಂಡು, ಇವು ತಿಕ್ಕ ಶಿವನ ಆಕಾರ. ಯಾವಾಗಲೂ ಮಾಯವ್ವನ ಗುಡಿಯ ಹತ್ತಿರವೇ ಇರುತಾನೆ. ಹೊಟ್ಟೆ ಹಸಿದಾಗ ಮಾತ್ರವೇ ಎದ್ದು ಹಳ್ಳಿಗಳ ಒಳಗೆ ಬಂದು ಯಾರೋ ಒಬ್ಬರ ಮನಿಯೊಳಗೆ ಕುಂತು ಅಷ್ಟು ಜೋಳಿಗಿಯೊಳಗೆ ಹಾಕಿಸಿಕೊಂಡು ಹೋಗಿ ಆ ಗುಡಿಯ ಒಳಗೇ ಕುಂತು ತಿನ್ನುತ್ತಾನೆ. ಕಾಲುವೆಯೊಳಗೆ ಹರಿವ ನೀರನ್ನು ಬಾಯಿಗಚ್ಚಿಕೊಂಡೇ ಕುಡಿತಾನೆ. ಹಂಗೇ ಆತನ ಬದುಕೆಲ್ಲಾ ಕಳೆದು ಹೋಗುತ್ತಿದೆ.

ಆಕಾಶವೆಂದರೆ ಕೋಪ. ಮೋಡಗಳೆಂದರೆ ಕೋಪ. ಬೆಳೆಗಳೆಂದರೆ ಕೋಪ. ವ್ಯವಸಾಯವೆಂದರೆ ಕೋಪ. ನಂಬಿಕೊಂಡ ದೇವರೆಂದರೆ ಕೋಪ. ಅದುಕ್ಕೇ ಮಾಯವ್ವ ತಾಯಿಗೆ ಅರಿಷಿಣ ಕುಂಕುಮದ ಬದಲು ಮಸಿಬಳಿಯುತ್ತಾನೆ. ಆ ಗುಡಿ ಹತ್ರ ಆ ತಾಯಿಗೆ ಪೂಜೆಗಳಿಲ್ಲ ಪುನಸ್ಕಾರಗಳಿಲ್ಲ. ದೇವರ ವಿಗ್ರಹವೂ ಕೊಂಚ ಮುಕ್ಕಾಗಿದೆ. ಬಾವಲಿಗಳು ಸೇರಿಕೊಂಡಿವೆ. ಹೊಲಸು ನಾತ ಹೊಡೆಯುತ್ತದೆ. ಅಂತಹ ಗುಡಿಯಲ್ಲೇ ತಿಕ್ಕ ಶಿವಪ್ಪ. ಆ ತಾಯಿಗೆ ಬಾಯಿಗೆ ಬಂದಂಗೆ ಬೈಯುತ್ತಾ ಇರುತ್ತಾನೆ.
ತಿಕ್ಕ ಶಿವಪ್ಪನೆಂದರೆ ನಮ್ಮ ಹಳ್ಳಿಯೊಳಗೆ ಎಲ್ಲರಿಗೂ ಅಭಿಮಾನ. ದೊಡ್ಡ ದೊಡ್ಡವರೆಲ್ಲಾ ಕೈಯೆತ್ತಿ ಮುಗಿಯುತ್ತಾರೆ.

ಆತ್ಮೀಯತೆಯಿಂದ ಆದರಿಸುತ್ತಾರೆ. ಅತ ಬಂದು ಕೇಳಬೇಕೇ ವಿನಃ ಆಸ್ತಿಗಳನ್ನಾದರೂ ಕೊಟ್ಟುಬಿಡುತ್ತಾರೆ. ಆತನಿಗಿರುವ ಹೆಸರು ಅಂತಾದ್ದು. ತಿಕ್ಕ ಶಿವನೆನ್ನೋ ಹೆಸರು ಕೂಡಾ ಅಮಾಯಕವಾಗಿ ಮಕ್ಕಳು ಮಾತಾಡಿಕೊಳ್ಳೋದು. ʼವೀರ ಶಿವʼ ಅಂತಾ ಬಾಯತುಂಬಾ ಕರೆಯಬೇಕೆಂದರೆ ಎಲ್ಲರಿಗೂ ಪರಮಾನ್ನ ತಿನ್ನುವಷ್ಟು ಇಷ್ಟ. ಆಗ… ಆಗ್ಯಾವಾಗಲೋ.. ನಾನು ಸಣ್ಣವನಿದ್ದಾಗಿನ ದಿನದೊಳಗೆ ವೀರ ಶಿವನ ಸಾಹಸಗಳ ಕುರಿತು ಕತೆ ಕತೆಗಳಾಗಿ ಹೇಳುತಿದ್ದರು. ಆ ಕಥೆಗಳೆಲ್ಲವೂ ಜ್ಞಾಪಕಕ್ಕೆಬರುತ್ತಿವೆ…
***
ದಿನಾ ರಾತ್ರಿ ಹೊತ್ತಿಗೆ ದೊಡ್ಡ ಹುಲಿ ಬರುತಾತೆಂದು ಹಳ್ಳಿಯ ಜನ ಭಯಬೀಳುತಿದ್ದರೆ ಆ ವಿಷಯವು ಚಿಕ್ಕ ವೀರಶಿವನಿಗೆ ಒಂದು ದಿನ ತನ್ನ ಜೊತೆಗಾರರನ್ನು ಹಿಂದಾಕಿಕೊಂಡು ಬೆಟ್ಟದ ಮಲ್ಲಪ್ಪನ ಗುಡ್ಡದ ಬಯಲಿಗೆ ಹೊಂಟನು. ಕಣವಿಹಳ್ಳಿ ಅಡವಿಯೊಳಗಿಂದ ದಾಟಿಕೊಂಡು ಕುಮಾರನ ಹಳ್ಳಿ ದಿಕ್ಕಿಗೆ ತಿರುಗಿದನು.ಏಳು ಮೆಟ್ಟಿನ ಹುಲಿಬೇಟೆಗೆಂದು ತಿಳಿದರೆ ಯಾರೂ ಹಿಂದೆ ಬರಲಾರರೆಂದು ಮೊಲದ ಬೇಟಿಗೆ ಹೋಗಾನ ರ‍್ರಿ ಅಂತ ನಂಬಿಸಿದ್ದನು. ನಡು ರಾತ್ರಿತಂಕಾ ಮಲ್ಲಪ್ಪನ ಗುಡ್ಡಕ್ಕೆ ಸೇರಿಕೊಂಡು ಅಲ್ಲಿಂದ ಅಡ್ಡದಾರಿಗುಂಟಾ ಮಲ್ಲಪ್ಪನ ಗುಡ್ಡದ ಬಯಲ ಕಡೆಗೆ ಸೇರಿದರು.
ಕೈಯೊಳಗಿನ ನಾಡ ಬಂದೂಕು ಹಸಿದ ಕಣ್ಣು ಬಿಡುತ್ತಿದೆ. ಬಂಡೆಗಲ್ಲಿನ ಮೇಲೇರಿ ಕೆಳಗೆ ನೋಡುತಿದ್ದಾನೆ ವೀರಶಿವ. ಸಣ್ಣಗೆ ಪೊದೆಯೊಳಗಿನ ಎಲೆಗಳು ಅಲುಗಿದಂಗಾಯಿತು. ಜೊತೆಗಾರರು ಬೆದರಿ ಗುಡ್ಡದ ಮೇಲಕ್ಕೆ ಏರತೊಡಗಿದರು. ವೀರ ಶಿವ ತುಪಾಕಿಯನ್ನು ಸರಿಮಾಡಿಕೊಂಡನು. ಗುರಿ ಕುದುರಿತು. ನೋಟದೊಳಗೆ ಏನೋ ಅನುಮಾನ ಕಾಣಿಸಿತು. ತಡೆದನು. ಲಾಟೀನಿನ ಬುಡ್ಡಿ ದೀಪವನ್ನ ಸ್ವಲ್ಪ ಮೇಲೆತ್ತಿರೆಂದು ಹಿಡಿದುಕೊಳ್ಳಿರೆಂದು ಹೇಳಿದನು. ಪರೀಕ್ಷೆಯಿಂದ ಮರದ ಕಡೆಗೆ ನೋಡಿದನು. ಬಂಡೆ ಇಳಿಯಲು ಪ್ರಾರಂಭಿಸಿದನು. ಎಲ್ಲರೂ ಬ್ಯಾಡಾ ಅಂದರು. ಆದರೂ ಕೇಳದಂತೆ ಹೆಜ್ಜೆಯ ಸಪ್ಪಳ ಕೇಳದಂತೆ ಮರಗಳ ಕೆಳಗೆ ಹೋಗಿ ಸ್ವಲ್ಪ ಬಗ್ಗಿಕೊಂಡು ಎರಡು ಕೈಗಳಿಂದ ಅವಚಿಕೊಂಡನು. ದಾರಿ ಬಳಿ ಜಿಂಕೆ ಮರಿ ಕೊಸರಾಡುತ್ತಿದೆ. ಆಕಡಿಗೆ ಈ ಕಡಿಗೆ ಅದು ತಪ್ಪಿಸಿಕೊಳ್ಳಬೇಕೆಂದು ಕೊಸರಾಡುವುದನ್ನು ನೋಡಿ ಕೈಯೊಳಗಿದ್ದ ಹಗ್ಗದಿಂದ ಅದರ ಎರಡು ಕಾಲು ಕಟ್ಟಿ ಅಲ್ಲೇ ವಗೆದನು. ಅದು ಅರಚುತ್ತಲೇ ಇದೆ. ಅಲ್ಲಿಂದ ಚಕ ಚಕನೇ ಗುಡ್ಡದ ಬಂಡೆಯನ್ನೇರಿದನು. ನಾಡ ಬಂದೂಕನ್ನು ಕೈಯೊಳಗೆ ತೆಗೆದುಕೊಂಡನು. ಜಿಂಕೆ ಮರಿಯ ಕಡೆಗೆ ಗುರಿ ಇಟ್ಟುಕೊಂಡು ಹೊಂಚಿಕೊಂಡು ಕುಳಿತನು. ಆ ಜಿಂಕೆ ಮರಿ ಅಡವಿಯೆಲ್ಲಾ ಅದುರುವಂತೆ ಮೊರೆಯುತ್ತಲೇ ಇದೆ.

ಲಾಟೀನು ಬುಡ್ಡಿಯ ಬೆಳಕನ್ನು ಇಳಿಸಿದನು. ಜೊತೆಗೆ ಬಂದವರೆಲ್ಲಾ ಬೆದರಿ ಮುದುರಿಕೊಂಡು ಏನು ನಡೆಯುತ್ತಿದಿಯೋ ಏನೋ ಎಂದು ನೋಡುತಿದ್ದಾರೆ. ಬಂದೂಕು ಜಿಂಕೆ ಮರಿಯ ಕಡೆಗೇ ಇದೆ. ಜಿಂಕೆಯ ಕೂಗು ಹೆಚ್ಚಾಯಿತು. ಒಂದೇ ಸಾರಿಗೆ ಸಾವಿನ ಕೂಗು ಕೂಗಿತು. ವೀರಶಿವನ ಕೈಯೊಳಗಿನ ಬಂದೂಕು ರ‍್ಜಿಸಿತು. ತೋಟ ತೂರಿ ನುಗ್ಗಿಹೊರಟಿತು. ಹುಲಿ ಎಗರಿಬಿತ್ತು. ಹುಲಿ…ಹುಲಿ… ಜಿಂಕೆಗಾಗಿ ಬಂದಿತ್ತು. ವೀರಶಿವನ ಗುರಿ ಗೆದ್ದಿತು. ಆ ಕ್ಷಣದಲ್ಲೇ ಹಗ್ಗದ ಮೊಲಕು ಬಿಡಿಸಿಕೊಂಡ ಜಿಂಕೆ ಅಷ್ಟೇ ಹೆದರಿಕೆಯಲ್ಲಿ ಜಿಗಿದು ಹಾರಿ ಪೊದೆಯೊಳಗೆ ತೂರಿಹೋಯಿತು. ಗುಡ್ಡ ನಾಲ್ಕು ಹೆಜ್ಜೆ ಇಳಿದು ಮತ್ತೆ ಬಂದೂಕನ್ನು ಸರಿಪಡಿಸಿಕೊಂಡು ಕೆಳಗೆ ಬಿದ್ದು ವಿಲವಿಲನೇ ವದ್ದಾಡುತಿದ್ದ ಹುಲಿಯನ್ನು ಗುರಿಯಿಟ್ಟು ಮತ್ತೆ ಹೊಡೆದನು. ಅದು ರ‍್ಜಿಸುತ್ತಾ ವದ್ದಾಡಿ ಸತ್ತಿತು. ಇದನ್ನೆಲ್ಲಾ ಗದಗದನೇ ನಡುಗುತ್ತಾ ನೋಡುತಿದ್ದ ಜೊತೆಗಾರರೆಲ್ಲಾ ಅಂಗೇ ಕೇಕೆ ಹಾಕಿದರು. ಇದು ಪರಶಿವನ ಬೇಟೆಯ ಕಥೆ.
ಹುಲಿಯನ್ನು ಹೊಡೆದನೆಂದು ಊರೆಲ್ಲಾ ತಿಳಿದಮೇಲೆ ಎತ್ತನ ಬಂಡಿಯಮೇಲೆ ಸತ್ತ ಹುಲಿಯನ್ನೂ, ವೀರ ಶಿವನನ್ನೂ ಕೂರಿಸಿ ಮೆರವಣಿಗೆ ಮಾಡಿದರು ಊರಜನ. ಸುತ್ತು ಮುತ್ತಲ ಅರವತ್ತು ಹಳ್ಳಿಗಳವರೂ ಬಂದು ಹಬ್ಬ ಮಾಡಿದರು.ಆ ಹುಲಿ ರ‍್ಮ ತೆಗೆದು ರ‍್ಪದಿಂದ ಪರಶಿವನ ಮನೆಗೆ ನೇತು ಹಾಕಿದರು.ಹುಲಿಯುಗುರು ತೆಗೆದು ಬಂಗಾರದ ಸರಕ್ಕೆ ಹಾಕಿಕೊಂಡರು.
***
ಪರಶಿವನ ವಿವಾಹ ನಿಶ್ಚಯವಾಯಿತು. ಕರವಾಗಿ ಮಾವನಿಗೆ ಕೊಮಾರನ ಹಳ್ಳಿ ತಾಂಡಾದ ಬಳಿಯ ಬೆದ್ದಲು ಭೂಮಿಯನ್ನು ನೀಡಿದನು. ವಿವಾಹದ ದಿನ ವಧು ಪರ‍್ವತಿಗೆ ಏಳು ಗಜದ ರೇಷಿಮೆ ಸೀರಿ,ಝರಿ ರವಿಕೆ, ಬಂಗಾರದ ಬಳೆಗಳು,ಮೂಗು ನತ್ತು,ಬುಗುಡಿ,ಬೆಂಡೋಲಿ,ತೀಕಿ,ನಾಗರ,ಬೆಳ್ಳಿ ಡಾಬು, ಏಳುವರಹದ ವಡವೆಗಳು ಎಲ್ಲಾ ಪರಶಿವನೇ ಕನ್ನೆಗೆ ಇತ್ತನು.
“ ಬರಗಾಲವು ಕಿತ್ತು ತಿನ್ನುವಾಗ ಇದೇನಪೋ ಮದುವಿ” ಎಂದರು ಸರೀಕರು.
“ ನಮ್ಮೂರ ಗೌಡಪ್ಪನ ಮದುವಿ ನಾವು ಘನವಾಗೇ ಮಾಡಿಕೊಳ್ಳತೀವಿ” ಅಂದು ಆಕಾಸದಂಗ ಹಂದರ ಹಾಕಿ,ಊರೆಲ್ಲಾ ರಂಗೋಲಿ ಬಿಟ್ಟು,ದೊಡ್ಡ ಊರ ಹಬ್ಬದಂತೆ ಹನ್ನೆರಡು ದಿನಗಳ ಮದುವಿ ಮಾಡಿದರು. ಸುತ್ತು ಹಳ್ಳಿಗಳೂ ಸಂಭ್ರಮದಿಂದ ಕುಣಿದವು.
ಮದುವಿ ಹೆಣ್ಣು ಪರ‍್ವತಿ ಅದೆಷ್ಟು ಅದೃಷ್ಟವಂತಳೋ..!? ಎಂದು ಊರೆಲ್ಲಾ ಗಲಗಲನೇ ಅಂದುಕೊಂಡರು. ಅದೇನು ಗಾಚಾರನೋ…ಆಯಮ್ಮನು ಊರೊಳಗೆ ಕಾಲಿಟ್ಟೊಡನೆಯೇ ಬರವು ಬೆನ್ನುಬಿದ್ದಿತು. ಮನಿ ಮನಿಗೆ ಅರಿಷ್ಟವು ಬಡಿಯಿತು. ಬಾವಿಗಳೆಲ್ಲಾ ಒಣಗಿ ಹೋಗಿ, ಹಳ್ಳಗಳೆಲ್ಲಾ ಇಂಗಿ ಹೋಗಿ, ಊರು ನಂಬಿದ ಚಿನ್ನದ ಹಗರಿ ಎಂಬ ಕಿರು ನದಿಯು ಒಣಗಲು ಶುರುವಾಗಿದೆ. ಅವ್ವನ ಜಾತ್ರೆಯ ದಿನ ಮಾಯವ್ವನಿಗೆ ಬೋನಗಳ ಎಡೆ ಇಟ್ಟರು,ಅಂಗಳದಲ್ಲಿ ಕುರಿಕೋಣ,ಆಡು ಕೋಳಿಗಳೆಂಬೋ ನೂರಾರು ಜೀವಿಗಳ ರಕ್ತದ ಮುಖಗಳನ್ನ ಚಲ್ಲಿ, ಬಂಡಿಗಳ ಕಟ್ಟಿ, ಸಿಡಿಗೆ ತೋರಣಗಳನ್ನು ಕಟ್ಟಿಸಿದ್ದಾರೆ. ಗುಡಿಯಲ್ಲಿ ತಾಯಿಮರ‍್ತಿಗೆ ಬೆಳ್ಳಿಯ ಮುಖ,ಕಣ್ಣು,ಕೋರೆಗಳ ಮಾಡಿ ಇಟ್ಟಿದ್ದಾರೆ. ಜಾತ್ರಿಯ ಪೂಜಿ ಜೋರಾಗಿ ನಡೆಯುತ್ತಿದ್ದಾಗಲೇ ತಳವಾರ ಲಕ್ಷ್ಮಿಯ ಮೈಮ್ಯಾಲೆ ಆ ಮಾಯವ್ವ ತಾಯಿ ಮೈದುಂಬಿ ಬಂದಳು…
“ಅಲಲಲಲ ಮಕ್ಕಳೇ…ನಾನು ಯಾರು!?
ಈ ಭೂಮಿ ಆಕಾಶ ಹುಟ್ಟಿದಾಗಿಂದಲೂ…
ಮಹಾಶಕ್ತಿ; ಲೋಕ ಮಾತೆ
ಆದಿಶಕ್ತಿ ; ಲೋಕ ಮಾತೆ
ಕಾಲ ಮೀರಿದವಳು ಗುಡುಗು,ಸಿಡಿಲು,ಗಾಳಿ,ಮಳೆ,ಮುಗಿಲು..
ಈಗ ಒಂದು ಪಕ್ಷಿಯಾಗಿ ಹುಟ್ಟಿ…
ಕೂರಬೇಕೆಂಬ ತಾವು ಸಿಗದಾಗಿ…..
ಕಲ ಕಲನೆ ಗಾಳಿ ಗಾಳಿಯಾಗಿ ಅಂತರ ಅಂತರವಾಗಿ ಆಡುತ್ತಾ…
ಮಹಾ ಬಲಿದಾನವನ್ನ ಕೋರುತ್ತಿದೆ….” ಎಂದು ಹೇಳಿ ದೇವಾಲಯದ ಸುತ್ತಾ ಕಾರ ಮತ್ತು ಮಣ್ಣು ಚಲ್ಲುತ್ತಾ ತಿರುಗಿದಳು. ಜಾತರೆಯು ಪರ‍್ತಿಯಾಯಿತು. ಆದರೆ ಆ ತಾಯಿ ಶಾಂತಿಯಾಗಲಿಲ್ಲವೆಂದು ತಿಳಿದುಹೋಯಿತು.

ಹಸಿರು ಮರಗಿಡಗಳು ಒಣಗಿ ಹೋಗಿವೆ. ಎಲ್ಲಿಯೂ ಕೂಡಾ ಹನಿ ನೀರಿರದ ಪರಿಸ್ಥಿತಿ. ಬರಗಾಲ …ಬರಗಾಲಕ್ಕೆ ಕಾರಣ ಆಯಮ್ಮ ಪರ‍್ವತಿಯೇ…
“ಎಲ್ಲಿಂದಲೋ ಇಲ್ಲಿಗೆ ಸೊಸೆಯಾಗಿ ಬಂದಳು.ಇದೆಲ್ಲವೂ ಆಯಮ್ಮನ ಕಾಲ್ಗುಣವೇ ಎಂದು ಕೆಲವರು ಹೇಳಿದರೆ, ಅದೇನಿಲ್ಲ ಬರಕ್ಕೆ ಕಾರಣ ಆಯಮ್ಮನದೇಗಾಗುತ್ತದೆ ಎಂದು ಕೆಲವರು ಹೇಳಿದರು. ಅದೇನಲ್ಲ ಆಕೆ ಅರಿಷ್ಟ ಊರಿಗೆ ಶಾಪವಾಗಿದ್ದಾಳೆ ಎನ್ನಲು ಪ್ರಾರಂಭಿಸಿದರು. ಆಕೆಯ ಇಂತಹ ಮುಳ್ಳು ಮೊನೆಯ ಮಾತುಗಳನ್ನು ಭರಿಸದಾದಳು.ತನ್ನೊಳಗೆ ತಾನು ಕುಗ್ಗಿ ಕುಗ್ಗಿ ಅಳತೊಡಗಿದಳು. ತನ್ನ ಅರಿಷ್ಟದ ಕಾರಣದಿಂದಾಗಿಯೇ ಊರು ಬಂಜರು ನೆಲವಾಗುತ್ತಿದೆ ಎಂದು ಅಂದುಕೊಂಡಳು.
ಪರಶಿವನು ಸಮಾಧಾನಿಸಿದರೂ ಕೇಳಲಿಲ್ಲ.
ಗಂಡ ಹೊಲದ ಕಡೆಗೆ ಹೋದಾಗ ಆ ನಡು ಮದ್ಯಾನ್ಹದಲ್ಲಿ ಕಣಗಿಲೆಯ ಹೂಗಳನ್ನು ಬಟ್ಟಲತುಂಬಾ ಬಿಡಿಸಿಕೊಂಡು ಬಂದು ಅರೆದು ಮನಸಿನೊಳಗೆ ಆ ಮಾಯಮ್ಮ ತಾಯಿಗೆ ಅಡ್ಡ ಬಿದ್ದು ಹರಕೆ ಮಾಡಿಕೊಂಡಳು. “ ಊರು ಜನರ ಕಷ್ಟಗಳು ಕೊನಿಯಾಗಲಿ,ಕಣ್ಣೀರು ಬತ್ತಿ ಹೋಗಲಿ, ನೀರು ನೀರ ಸೆಲೆ ಹರಿದುಬರಲಿ…ಮಳೆ ಸುರಿದು ಸುರಿದೂ ನೆಲವೆಲ್ಲಾ ತೊಯ್ದು ಹಸಿರಾಗಲಿ. ಕರೆಗಳೆಲ್ಲಾ ತುಂಬಿಕೊಳ್ಳಲಿ…ಬೆಳೆ ಬೆಳೆದು ಸುಗ್ಗಿಯಾಗಲಿ… ಬರಗಾಲ ಹೋಗಲಿ… ಚಿನ್ನದ ಹಗರಿ ನದಿ ಮತ್ತೆ ಹರಿದಾಡಲಿ…. ತಾಯಿ ನನ್ನ ಆತ್ಮ ಬಲಿದಾನವನ್ನು ತೆಗೆದುಕೋ. ತಗೆದು ಕೋ ತಾಯಿ. ಎಂದು ಬಟ್ಟಲನ್ನು ಎತ್ತಿಕೊಂಡು ಗಟ ಗಟನೆ ಗಂಟಲಿಗೆ ಹಾಕಿಕೊಂಡಳು. ಕುಡಿದ ಕೆಲವೇ ಕ್ಷಣಗಳಲ್ಲಿ ಉಸಿರು ನಿಂತಿತು. ಕಾಲು ಕೈಗಳು ತಣ್ಣಗಾದವು.
ಚೆಂಜೆಗೆ ವೀರಶಿವನು ಬಂದು ನೋಡೋ ವೇಳೆಗೆ ಆಯಮ್ಮನ ಶರೀರವು ಕಪ್ಪಾಗಿ ಹೋಗಿತ್ತು.ಇನ್ನ ಯಾರೇನು ಮಾಡುತ್ತಾರೆ? ಪರಶಿವನ ದುಃಖವನ್ನು ಪದಗಳು ಹಿಡಿಯಲಾಗಲಿಲ್ಲ. ಬಿದ್ದು ಬಿದ್ದು ಅತ್ತನು. ಬಂಗಾರದಂತಹ ಹುಡುಗಿ ಮದುವಿ ಆಗಿ ಆರು ತಿಂಗಳು ಕಳೆಯಲಿಲ್ಲವಲ್ಲೋ…ಊರಿಗಾಗಿ ಪ್ರಾಣವನ್ನೇ ಕಳಕೊಂಡಳು ಎಂದು ಜನರೆಲ್ಲರೂ ಅಂದುಕೊಂಡರು. ಆಕೆಯನ್ನು ಚಿನ್ನದ ಹಗರಿ ನದಿ ದಡದಲ್ಲೇ ಹೂತರು. ಇನ್ನ ಆ ದಿನದಿಂದಲೇ ವೀರ ಶಿವನು ಆ ಮನೆಗೆ ಹೋಗದೆ ತೋಟದ ಬಳಿಯೇ ಇರತೊಡಗಿದನು. ಮನೆ ಬಳಿಗೆ ಹೋದರೆ ತನ್ನ ಪರ‍್ವತಿಯೇ ಗರ‍್ತಿಗೆ ಬರುತ್ತಾಳೆಂದು ಹೋಗುವುದನ್ನು ಬಿಟ್ಟು ಬಿಟ್ಟನು. ಮತ್ತೆ ಮದುವೆ ಮಾಡಿಕೊ ಎಂದು ಯಾರೇಳಿದರೂ ಕೇಳದಾದನು.
ನೀರಿನ ಪರಿಸ್ಥಿತಿ ಇನ್ನಾ ಅದ್ವಾನವಾಯಿತು. ಎಲ್ಲೆಲ್ಲಿಂದಲೋ ಗುಂಡೆಯೊಳಗಿನ ಗಬ್ಬು ನೀರನ್ನು ಕೂಡಾ ದೇವಿಕೊಂಡು ತರುತಿದ್ದಾರೆ.
***
ದಿನಗಳು ಕಳೆದು ಹೋಗುತ್ತಿದ್ದಂತೆ ಊರಿಗೆ ಪರ‍್ಲಬ್ಬವು ಬಂದಿತು.ಊರಿನೊಳಗೆ ಯಾವ ಸಂಭ್ರಮವೂ ಇಲ್ಲ. ಆಗ ಪರಶಿವನೇ ಮುಂದೆ ಬಂದು ಚಾವಡಿಯ ಬಳಿ ಸಮಾವೇಶ ನಡೆಸಿದನು. ನಾವಿರುವ ಊರೊಳಗೆ ಬರಗಾಲ ಹೋಗಬೇಕೆಂದರೆ ಅಲಾಯಿ ಹಬ್ಬವನ್ನು ಮಾಡಬೇಕು. ಬರಗಾಲ ಹೋಗಲು, ಮಳೆಹನಿ ಸುರಿಯಲು,ನಾವು ಊರಲ್ಲಿ ಪೀರ ದೇವರ ಅಲೆಗುಣಿ ತೋಡಬೇಕು.ಪೀರಲು ದೇವರನ್ನು ಕೂಡಿಸಿ, ಕತ್ತಲ ರಾತ್ರಿಯ ಅಲೆ ಕುಣಿಯ ಕೆಂಡದ ಕರ‍್ಯವು ಜರುಗಿಸಬೇಕು ಎಂದನು. ರ‍್ಮಕ್ಕಾಗಿ ಬಲಿದಾನವಾದ ಹಸನ ಹುಸೇನರಂತೆ ನಮ್ಮೂರಿನ ಒಳ್ಳೇದಕ್ಕಾಗಿಯೇ ಬಲಿದಾನವಾದ ಊರ ಪರ‍್ವತವ್ವನನ್ನು ನೆನೆದು ಯಾರಿಂದಲಾದರೂ ಊರಿಗೆ ಒಳ್ಳೆಯದಾದರೆ ಸಾಕು ಎಂದು ಊರಿನ ಹಿರಿಯರು ಹಾಗೇ ಆಗಲಿ ಎಂದು ಒಪ್ಪಿಕೊಂಡರು.

ಅಮಾಸಿ ಆದ ಮರುದಿನ ಅಲೆ ಕುಣಿ ತೋಡಿದರು. ಸುತ್ತಿಟ್ಟ ಪಂಜಾ ದೇವರುಗಳನ್ನು ಪೂಜೆಗಿಟ್ಟರು. ಹುಲಿಗಳು ಊರತುಂಬಾ ಕುಣಿಯತೊಡಗಿದವು. ಅಳ್ಳಳ್ಳಿ ಬುವ್ವಗಳು ಸೊಂಟಕ್ಕೆ ಗಂಟೆಯ ಪಟಗಾಣಿ ಕಟ್ಟಿಕೊಂಡು ಚಡ್ಡು ಹಿಡಿದು ಹೊರಟರು. ಮಸೂತಿಗೆ ಜನ ಬಂದು ಬಂದು ಸಕ್ಕರಿ ಓದಕಿ ಓದಿಸಿ ಸಿಹಿ ಪಡೆದು ಲಾಡಿ ಕಟ್ಟಿಕೊಂಡು ಹೊರಟರು.ಮಸೂತಿ ದೇವರುಗಳು ಊರೊಳಗೆ ಹೊರಟು ಎಲ್ಲಾ ದೇವರುಗಳನ್ನು ಬೇಟಿ ಮಾಡತೊಡಗಿದವು. ತಂಗಿ ಮಯಮ್ಮನ ಗುಡಿ ಹತ್ತಿರ ಬಂದು ಎರಡೂ ದೈವಗಳು ಅಪ್ಪಿಕೊಂಡು ಅತ್ತವು. ಬಿಡಿಸಿಕೊಂಡು ಬಿಡು ಊರಿಗೆ ಒಳಿತಾಗಲಿ ಎಂದು ಬಿಡಿಸಿಕೊಂಡು ಎರಡು ದಿಕ್ಕಿಗೆ ತಿರುಗಿದವು. ಕತ್ತಲ ರಾತ್ರಿಯ ದಿನ ಕಡಿದು ತಂದ ಮರದ ಬಡ್ಡೆಗಳು ಹೊತ್ತಿಕೊಂಡವು. ಕೆಂಪನೆಯ ಕೆಂಡದ ಕೆನ್ನಾಲಿಗೆಗಳು ಎದ್ದವು. ಜನ ಉಪ್ಪು ಹಿಡಿದು ಕಟ್ಟಿಗೆಗಳನ್ನು ಹೊತ್ತು ತಂದು ಕ್ವಾವ್‌ ಸೇನ್‌ ಬಾವ್‌ ಸೇನ್‌ ಎಂದು ಕುಣಿಗೆ ಹಾಕಿ ಉರಿ ಹೆಚ್ಚು ಮಾಡಿ ಸುತ್ತಿ ಸುತ್ತಿ ಹೊರಟರು.ಅಲೆ ಕುಣಿಯ ಕೆಂಡದ ಹಾಸಿಗೆಯೇನೋ ತಯಾರಾಯಿತು ಆದರೆ ಅದರಲ್ಲಿ ನಡೆಯುವವರು ಯಾರು? ಯಾವಾಗಲೂ ನಡೆಯೋ ಪೀರಣ್ಣ ಮಾವ ಮಂಚ ಹಿಡಿದಿದ್ದಾನೆ. ಮಗ ಜಮಾಲ ಕಮ್ಮಾರ ಹುಡುಗಿ ಕಾಂತಮ್ಮನನ್ನು ಎಬಿಸಿಗೊಂಡು ಊರು ಬಿಟ್ಟು ಓಡಿದ್ದಾನೆ.

ಕುಣಿ ಉರಿಯುತ್ತಲೇ ಇದೆ. ಆಗ ಪರಶಿವನೇ ಮುಂದಕ್ಕೆ ಬಂದನು. ಕೈಯೊಳಗೆ ದೊಡ್ಡ ಪೀರದೇವರ ಪಂಜಾವನ್ನು ಹಿಡಿದುಕೊಂಡು ಕುಣಿಯೊಳಗೆ ಹೆಜ್ಜೆ ಇಟ್ಟನು. ಹೆಜ್ಜೆ ಕದಲಲು ಕೆಂಡಗಳು ಹೂತು ಬಿಡುವಂತೆ ಎಗರಿ ಎಗರಿ ಬೀಳುತ್ತಿವೆ.ಅಲೆ ಕುಣಿಯ ತುಂಬಾ ಜನ…ತಾಗಿ ಕೊಳ್ಳುತ್ತಾ…ದಬ್ಬಿಕೊಳ್ಳುತ್ತಾ ನೋಡಲಿಕ್ಕೆ ಮೇಲೆ ಮೇಲೆ ಬೀಳುತಿದ್ದಾರೆ.
ಆ ಕಡೆಯಿಂದ ಈ ಕಡೆಗೆ , ಈ ಕಡೆಯಿಂದ ಆ ಕಡೆಗೆ ಮೂರು ಸಲ ಕೆಂಡದೊಳಗೆ ನಡೆದು ಪೀರದೇವರನ್ನು ಗದ್ದುಗೆ ಮೇಲಿಟ್ಟು ಕಣ್ಣು ತಿರುಗಿ ಕುಸಿದು ಬಿದ್ದನು ಪರಶಿವ.
“ ಅಭ್ಯಾಸವಿಲ್ಲದ ಕೆಲಸವನ್ನು ಯಾಕೆ ಮಾಡಬೇಕಪ್ಪಾ ಸ್ವಾಮಿ” ಎಂದನು ಪಕ್ಕದಲ್ಲಿದ್ದ ಹಿರಿಯ ಕತ್ಲಪ್ಪ.
“ ಈ ಬರಗಾಲ ನೋಡಲಾಗದೇ ಬಂದೆ ಕಣಜ್ಜೋ..” ಎಂದನು ವೀರ ಶಿವ ಬಿಗಿದ ಪಾದಗಳನ್ನು ನೋಡಿಕೊಳ್ಳುತ್ತಾ.
ಆದರೂ ಮಳೆರಾಯ ತಿರುಗಿ ನೋಡುತ್ತಿಲ್ಲ. ಹನಿ ಬೀಳುತ್ತಿಲ್ಲ. ಮಾಡಗಳೆಲ್ಲಾ ಮೊಂಡು ಬಿದ್ದುಬಿಟ್ಟಂಗದೆ.
ಅಲೆ ಕುಣಿಯ ಕೆಂಡ ಚೆಲ್ಲಾಡಿ ದೇವರು ಹೊರಟ ಬಳಿಕ ಆ ಬೂದಿಯನ್ನು ವಿಭೂತಿಯಾಗಿ ಬಳಸಲಿಕ್ಕೆ ,ಆಧಾರವಾಗಿ ಇಟ್ಟುಕೊಳ್ಳಲಿಕ್ಕೆ ಜನರು ಪೈಪೋಟಿಗೆ ಬಿದ್ದಿದ್ದಾರೆ. ಆ ಬೂದಿ ಇದ್ದರೆ ಮನೆಯೊಳಗೆ ದೆವ್ವಗಳ ಕಾಟ ಬರೋದಿಲ್ಲ. ಹತ್ತಿರ ಸುಳಿಯಲಾರವು ಎಂಬುದು ಅವರ ನಂಬಿಕೆ. ಉಳಿದ ಬೂದಿಯನ್ನ ಜನರು ಆಕಾಶಕ್ಕೆ ತೂರಿದರು. ಮಳೆರಾಯನಿಗೆ ಬಾರಪ್ಪೋ ಸ್ವಾಮಿ ಎಂದು ಕೈ ಮುಗಿದರು. ಆದರೂ ಆಕಾಶರಾಯ ಕರಗಲಿಲ್ಲ.
ಜನ ಗುಳೇ ಹೋಗಲು ಶುರು ಮಾಡಿದರು. ನೀರಿಲ್ಲದ ಊರಲ್ಲಿ ಬಿದ್ದು ಸಾಯುವುದಕ್ಕಿಂತಾ ಎಲ್ಯಾನ ಕಾಡಲ್ಲಾದರೂ ಗಡ್ಡೆ ಗೆಣಸು ತಿಂದು ಇರೋದೇ ಪಾಡೆಂದು ಊರ ಜನರು ಮನೆಗಳ ತೊರೆದು ಹೋಗುತಿದ್ದಾರೆ. ಇಷ್ಟು ಕಾಲ ನಂಬಿಕೊಂಡಿದ್ದ ನೆಲವನ್ನು ಬಿಟ್ಟು ಕೊಟ್ಟು ದೇಸಾಂತರ ಹೋಗುತ್ತಿರುವವರ ನೋಡಿದಾಗ ಪರಶಿವನಿಗೆ ನೋವಾಗುತ್ತಿದೆ.
ಆದರೂ ಪಾಪ ಆತನೇನು ಮಾಡುತ್ತಾನೆ. ಕರುಣ ರಸವನ್ನು ಹೊಮ್ಮಿಸುವ ಭಕ್ತ ಕುಮಾರವ್ಯಾಸನ ಕಥೆ ಹೇಳಿಸಿದರೆ ಆ ಮಾಡಗಳು ಕರಗಿ ಕರುಣಿಸುತ್ತವೆಂದು ಯಾರೋ ಹಿರಿಯ ಹೇಳಿದರೆ ಆಗಲಿ ಬಿಡೆಂದು ಶಿವಮೊಗ್ಗದ ಕಡೆಯಿಂದ ಕಲಾ ಕಾರರನ್ನು ಕರೆಕಳಿಸಿದನು. ರಾತ್ರಿಯೆಲ್ಲಾ ಮಾಯವ್ವ ತಾಯಿಗೆ ಕಾವ್ಯದ ರಸವನ್ನು ಉಣಿಸತೊಡಗಿದನು.
ಅಳಿದುಳಿದವರು ಕೂಡಿ ಮಳೆಯ ಹಾಡುಗಳ ಹಾಡುತಿದ್ದಾರೆ.
“ ಯಾತಕ್ಕೆ ಮಳೆ ಹೋದವೋ ಶಿವ ಶಿವಾ
ಲೋಕ ತಲ್ಲಣಿಸುತಾವೋ ಶಿವ ಶಿವಾ…
ಬೇಕಿಲ್ಲಾದಿದ್ದರೆ ಬೆಂಕಿಯ ಮಳೆ ಸುರಿದು
ಉರಿಸಿ ಕೊಲ್ಲಲು ಬಾರದೇ.
ಹೊಟ್ಟೆಗೆ ಅನ್ನ ಇಲ್ಲದಲೆ
ನಡೆದರೆ ಜೋಲಿ ಹೊಡೆಯುತಲೆ
ಪಟ್ಟದಾನೆಯಂತ ಸ್ತ್ರೀಯಾರು ಸೊರಗಿ
ಸೀರೆ ನಿಲ್ಲೋದಿಲ್ಲ ಸೊಂಟಾದ ಮೇಲೆ.
ಹಸುಗೂಸು ಹಸುವಿಗೆ ತಾಲದೆಲೆ
ಅಳುತಾವೆ ರೊಟ್ಟಿ ಕೇಳುತಲೇ
ಹಡೆದ ಬಾಣಂತಿಗೆ ಅನ್ನವು ಇಲ್ಲದಲೆ
ಏರುತಾವೆ ಮೊಳಕೈಗೆ ಬಳೆ.
ಒಕ್ಕಾಲು ಮಕ್ಕಳಂತೆ
ಅವರಿನ್ನು ಮಕ್ಕಳನು ಮಾರುಂಡರು
ಮಕ್ಕಳನು ಮಾರುಂಡು ರೊಕ್ಕವನು ಮಾಡುತಾರೆ
ಮುಕ್ಕಣ್ಣ ಮಳೆ ಕರುಣಿಸೋ..
ಸ್ತ್ರೀಯರು ಅಳುತ್ತಿದ್ದಾರೆ. ಹಳ್ಳಿ ಜನರು ಮುತ್ತಿಕೊಳ್ಳುತಿದ್ದಾರೆ. ಬಂಗಾರದಂತ ಮಕ್ಕಳನ್ನು ಮಾರುವುದೇಗೆ ಎಂದು , ಅಂತ ಘಳಿಗೆ ತಂದ ಮಳೆರಾಯನಿಗೆ ತಾಯಂದಿರು ಬರಕ್ಕೆ ಶಪಿಸುತಿದ್ದಾರೆ. ಇದನ್ನು ಕಂಡ ಪರಶಿವನಿಗೆ ಬಾಯಿ ಕಟ್ಟಿತು. ಕಾಲು, ಕೈಗಳು ಬಿಗಿಯಲಾರಂಭಿಸಿದವು. ನಾಟಿ ವೈದ್ಯರು ಬಂದು ಹಸಿರು ಸೊಪ್ಪಿನ ರಸ ಹಿಂಡಿ ಕೂಡಿಸಿದರು. ಹಾಡು ಕಾವ್ಯಗಳು ಮಧ್ಯದಲ್ಲೇ ನಿಂತು ಹೋದವು.
ಆ ದಿನ ಮೊದ ಮೊದಲು ಪರಶಿವನಿಗೆ ಸ್ವಲ್ಪ ಸ್ವಲ್ಪ ಮತಿ ತಪ್ಪುವುದು ಶುರುವಾಯಿತು. ಹುಚ್ಚು ಹುಚ್ಚಾಗಿ ಮಾತಾಡುವುದು…. ವಿಚಿತ್ರವಾಗಿ ನಗುವುದು..ಅಳುವುದು….ಆಕಾಶಕ್ಕೆ ತಿರುಗಿ ಉಗಿವುದು… ಈ ರ‍್ತನೆಯನ್ನು ನೋಡಿದವರಿಗೆ ಮನವೆಲ್ಲಾ ನೊಂದಿತು.
ಬಂಗಾರದಂತಹ ಮನೆಯ ನಡುಗಂಬ ಕುಸಿದು ಬಿದ್ದಾಗ, ಭೂಮಿಗಳೆಲ್ಲಾ ಪಾಳು ಬಿದ್ದಾಗ ವೀರಶಿವನನ್ನು ನೋಡಿಕೊಳ್ಳರ‍್ಯಾರೂ ಇಲ್ಲದಾದರು. ಕಾಲದೊಂದಿಗೆ ಆತನ ವಯಸ್ಸೂ ಕರಗಿ ಹೋಗುತ್ತಿದೆ. ಪ್ರಾಯ ಹಾರಿ ಹೋಗಿದೆ.
ಮನುಷ್ಯನೇನೂ ಕುಗ್ಗಲಿಲ್ಲ ಆದರೂ ಆಗಾಗ ಬಿದಿರುಕೋಲು ಹಿಡಕೊಂಡು ಊರೊಳಗೆ ಕಾಣಿಸುತಿರುತ್ತಲೇ ಇರುತ್ತಾನೆ. ಆದರೂ ಆ ಮನುಷ್ಯ ಸುಮ್ಮನಿರುತಾನಾ…
***
ಬೆಳಗಾದಗಿಂದಲೂ ಬೆಳ್ಳನೆಯ ಮೋಡಗಳನ್ನು ಬೈಯುತ್ತಲೇ ಇದ್ದವನು ಈಗ ಹೊರಟಿದ್ದಾನೆ.ವೀರಾಪುರದ ಬಳಿಯ ಕಾಕಿ ಚಣ್ಣದ ಎಲ್ಲಜ್ಜನನ್ನು ಕಲೆತು ಅಂಜನ ಹಾಕಿ ನೋಡು ಎಂದನು. ಚಿನ್ನದ ಹಗರಿ ನದಿ ಕತೆಯೇನೋ. ಆತ ನೋಡಿ ಹೇಳಿದನು.” ನೆಲದ ಕೆಳಗಿನಿಂದ ಆಕಾಶದ ಮೋಡದ ತನಕ ಅರಿಷ್ಟವು ಸುತ್ತಿಕೊಂಡಿದೆ. ದೊಡ್ಡ ಬಲಿದಾನ ನಡೆಯದ ಹೊರತು ಇದು ಹೋಗದು. “ ಹೌದೌದು. ಹುಣ್ಣಿಮೆ ದಿನವೂ ಮಾಯವ್ವ ತಾಯಿ ಮೈದುಂಬಿ ಇದೇ ಮಾತೇಳಿದಳು.” ಎನ್ನುತ್ತಾ ಜೋರು ಜೋರಾಗಿ ನಡೆದು ಮಾಯಮ್ಮ ದೇವಿ ಗುಡಿಯ ಬಳಿಗೆ ಬಂದನು. ವಿಗ್ರಹಕ್ಕೆ ಹತ್ತಿದ ಮಸಿಗುಡ್ಡೆಯನ್ನು ತೆಗೆದು ಹಾಕಿದನು. ಹರಿಷಿಣ ಕುಂಕುಮಗಳನ್ನು ಹಚ್ಚಿ ಹೂಗಳನ್ನು ಏರಿಸಿ ಪೂಜೆಗಳನ್ನು ಮಾಡಿದನು. ಗುಡಿಯೊಳಗೆ ಸೇರಿಕೊಂಡ ಬಾವಲಿಗಳನ್ನು ಓಡಿಸಿದನು. ಕಸಕಡ್ಡಿ ,ಮಲಿನಗಳನ್ನೆಲ್ಲಾ ತೆಗೆದು ದಿಬ್ಬದ ಮೇಲೆ ಒಗೆದನು. ಬಾಯಿಗೆ ಬಂದ ಮಂತ್ರಗಳೇನೋ ಆ ತಾಯಿಯ ಮುಂದೆ ಕೂತು ಹೇಳಿದನು. ಹಾಡಿದನು. ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿದನು. ಅತ್ತನು. ರಾತ್ರಿಯೆಲ್ಲಾ ಆ ತಾಯಿಯ ವಿಗ್ರಹದ ಬಳಿಯೇ ಕೂತು ಪ್ರರ‍್ಥಿಸಿದನು. ಬೆಳ್ಳಿ ಮೂಡುವ ವೇಳೆಗೆ ಯಾವುದೋ ರಹಸ್ಯವನ್ನು ಕಂಡು ಹಿಡಿದವನಂತೆ ಪರಶಿವನ ಸಂಭ್ರಮದಿಂದ ಊರಿನೊಳಗೆ ಬಂದನು.
“ ಇನ್ನ ಇರಲ್ಲ ಬಿಡು… ಈ ಬರಗಾಲವನ್ನ ಅವ್ನವೌನ್‌ ಅದರ ಹೆಣ ನೋಡ್ತಾನಿ” ಎಂದು ಊರೆಲ್ಲಾ ತಿರುಗುತ್ತಾ ಹೇಳಿದನು. ಜನರೆಲ್ಲಾ ಈ ಹುಚ್ಚು ಮಾತುಗಳನ್ನ ಆಶ್ರ‍್ಯದಿಂದ ಕೇಳಿದರು.
ಬಿದಿರು ಕೋಲನ್ನು ಪಕ್ಕಕ್ಕೆ ಬಿಸಾಕಿ ಮಾಯಮ್ಮ ತಾಯಿ ದೇವರ ಗುಡಿ ಮುಂದೆ ಆ ದೇವಿಗೆ ಧಿಡನಮಸ್ಕಾರ ಮಾಡಿದನು. ಅಂಗೇ ಹೊರ ಹೊಂಟನು… ಎಲ್ಲಿಗೆ ಸಿದ್ದಯ್ಯನ ಗುಡ್ಡದ ಮೇಲಕ್ಕೆ. ರ‍್ಮಾನುಷವಾಗಿ ಒಣಗಿ ಬೀಳು ಬಿದ್ದಿರುವ ಭೂಮಿಗಳು. ಕೆಂಪು ಧೂಳಿನಿಂದ ಸುತ್ತೂ ತಿರುಗಿ ಬರುತ್ತಲಿದೆ. ಏನು ಧೂಳಿನ ದೆವ್ವ ಗಾಳಿ. ಹಾಗೇ ಮುಂದಕ್ಕೆ ಸಾಗಿದನು. ಒಣಗಿದ ಕೆರೆಯ ಬಳಿ ನಿಂತು ಸುತ್ತೂ ಮಾಯಮ್ಮ ತಾಯಿಯನ್ನ ಬಿಡದಂತೆ ಕಂಡನು. ದುಃಖಿಸಿದನು. ದೂರದಲ್ಲಿ ಊರ ಜನರು ಓಡುತ್ತಾ ಇತ್ತ ಕಡೆಗೇ ಬರುತಿದ್ದಾರೆ.
ರಾತ್ರಿಯೆಲ್ಲಾ ಕುಳಿತು ಮಸೆದು ಇಟ್ಟ ರ‍್ಧಚಂದ್ರಾಕಾರದ ಗಂಡು ಗೊಡಲಿಗೆ ಮುತ್ತಿಟ್ಟನು. ನೆಲದ ಮಣ್ಣನ್ನು ತೆಗೆದುಕೊಂಡು ಕಣ್ಣಿಗೆ ತೀಡಿಕೊಂಡನು. “ ನಮಗೇಕೆ ತಾಯಿ ಈ ನರಕ. ಆ ಕಡಿಗೆ ಎಲ್ಲರನ್ನ ಸಾಯಿಸಾದರೂ ಸಾಯಿಸು. ಇಲ್ಲದಿದ್ದರೆ ಎಲ್ಲರಿಗನ್ನಾ ಹೊಟ್ಟೆತುಂಬಿಸು. ನಡುವಿನ ಈ ಬರಗಾಲವೇಕೆ” ಕೈಯೊಳಗೆ ಉಳಿದ ಮಣ್ಣನ್ನು ನೆಲಕ್ಕೆ ಹಾಕಿದನು.
“ ನನ್ನ ಪ್ರಾಣ ತಗಂಡನ್ನಾ ಶಾಂತವಾಗಿ ನಾಲ್ಕು ಚುಕ್ಕೆಗಳ ಕಣ್ಣೀರ ಹನಿಸು… ಎನ್ನುತ್ತಾ ಕೈಯೊಳಗಿನ ಗಂಡಗೊಡಲಿಯನ್ನ ಬಲವಾಗಿ ಗಿರ ಗಿರನೇ ತಿರುಗಿಸಿ ಮುಗಿಲ ಕಡೆಗೆ ಎಸೆದನು ಅದು ತಿರುಗುತ್ತಾ ತಿರುಗುತ್ತಾ ಕೆಳಕ್ಕೆ ಬರುತ್ತಿದೆ…ಬರುತ್ತಿದೆ..ಬರೋ ಕಡೆಗೇ ಶಿರ ಬಾಗಿಸಿದನು ವೀರ ಶಿವ. ತಲೆ ಬಾಗಿಸಿದವನನ್ನ ಪಕ್ಕಕ್ಕೆ ಎಳೆದುಕೊಂಡರು ಊರ ಜನರು.
“ ಬಿಡ್ರೋ… ಬಿಡ್ರೋ…” ಅಂತ ಬಿಡಿಸಿಕೊಂಡನು ವೀರಶಿವ.
ಮೇಲಿಂದ ಬೀಳುತಿದ್ದ ಗಂಡು ಗೊಡಲಿ ನೆಲದ ಮಣ್ಣಲ್ಲಿ ನಾಟಿಕೊಂಡಿತು.
“ ಏನು ಸ್ವಾಮಿ ಹಿಂಗ ಮಾಡಿದಿರಿ” ಜನರೊಳಗಿನ ಯಾರೋ ಕೇಳಿದರು.
“ ಸಾಯಲು ಬಿಡ್ರಿ ನನ್ನನ್ನು ಸಾಯಲು ಬಿಡ್ರಿ” ನಿಮಗೆ ಮಳೆ ರ‍್ತಾವು. ನೀವು ಸುಖವಾಗಿರುತ್ತೀರಿ..” ದುಃಖದಿಂದಲೇ ಹೇಳುತಿದ್ದಾನೆ.
“ ಸತ್ತರೇ ಮಳೆ ಬರುತಾದ ಅಂದ್ರ ದಿನಕ್ಕೊಬ್ಬರು ಸಾಯುತಿಲ್ಲವೇ ಸ್ವಾಮಿ. ಸಾವೇ ಸಮಾಧಾನವಾ…” ಎಂದು ಹೇಳಿದ ಜನರೊಳಗಿನ ಹಿರೀಕ.
“ ಮಾಯಮ್ಮ ತಾಯಿಗೆ ಕರುಣೆ ಹುಟ್ಟಿದರೆ ಈಗಲೇ ಮಳೆ ಬರುತ್ತದೆ. ನಾವ್ಯಾಕೆ ಪ್ರಾಣ ಕಳಕೋ ಬೇಕು. ಯಾರದೋ ಹೆಣ್ಣು ಧ್ವನಿ ಕೇಳುತ್ತಿದೆ.
ಓ… ತನೇನು ಮಾಡುತಿದ್ದೇನೆ. ಯಾಕೆ ಹೀಗೆ ರ‍್ತಿಸುತಿದ್ದೇನೆ. ಇಲ್ಲ. ನಾನು ಜನರಿಗಾಗಿ ವೀರಶಿವನಾಗಿಯೇ ಬದುಕಬೇಕು. ಜನರಿಗಾಗಿ ಬದುಕಬೇಕು. ಊರಿಗಾಗಿ ಬದುಕಬೇಕು. ಕಾಲ ಕೆಳಗೆ ತಣ್ಣನೆಯ ತಂಪು…ತಣ್ಣಗೆ ತಂಪಾದ ಸಣ್ಣನೆಯ ಅನುಭವ… ನೀರ ತೇವ…ಭೂಮಿ ಬಿರಿಯಿತು. ಭೂಮಿ ಉರಿಯಿತು. ಮುಗಿಲು ಬೆದರಿತು.
ಕವಿದುಕೊಂಡ ಕಪ್ಪು ಮೋಡಗಳು ಒಂದಕ್ಕೊಂದು ತಿವಿದುಕೊಂಡು ಅಪ್ಪಳಿಸಿದವು. ಮಿಂಚು ಮಿಂಚು ಹೆಣೆದುಕೊಂಡು ಬೆಂಕಿ ಬೆಳಗಿದವು. ಗುಡುಗು ಸಿಡಿಲು ಸಿಡಿದುಕೊಂಡು ಬೆಂಕಿ ಉಗಿದವು. ಆ ಬಿಸಿಗೆ ಕಪ್ಪು ಮೋಡಗಳು ಕದಲಿ ಕೆಳಗಿಳಿದವು. ಎಲ್ಲಿದ್ದವೋ ಅಲ್ಲೇ. ಎಲ್ಲಿ ನಿಂತ ಮೋಡ ಅಲ್ಲೇ ಹೃದಯವನ್ನು ತೆರೆದು ಕಣ್ಣೀರು ಸುರಿಸಿದಂತಹ ಹನಿಗಳು.
ಒಂದರ ನಂತರ ಒಂದು ನೆಲಕ್ಕೆ ಹಾರಿ ಹಾರಿ ಬರುತ್ತಲಿವೆ ಮಳೆ…ಮಳೆ..ಸುರಿಯುತ್ತಲೇ ಹೋಯಿತು. ಹಗಲೂ ಇರುಳು. ಹೊಳೆಗಳು ತುಂಬಿ ಹೊರಳತೊಡಗಿದವು.
ತಗ್ಗು ಹಳ್ಳ ದಿನ್ನೆಗಳೆಲ್ಲಾ ನೀರು…ನೀರು …ನೀರು.
ಎತ್ತ ನೋಡಿದರೂ ನೀರು… ಕರೆ ಕೋಡಿ ಬೀಳುತ್ತಿದೆ.
ತಾಯಿ ಮಹಾತಾಯಿ.ಮಾಯಮ್ಮ ತಾಯಿ ಹರಿಯುತ್ತಿದ್ದಾಳೆ.
ಚಿನ್ನದ ಹಗರಿಯಾಗಿ ಹರಿಯುತಿದ್ದಾಳೆ. ಪ್ರವಾಹವಾಗಿ ಉಕ್ಕುತಿದ್ದಾಳೆ.
ಹಸಿರಾಗಿ ನಗುತ್ತಾ ಹಾಡುತಿದ್ದಾಳೆ.
ಒಣಗಿದ ಬೇರುಗಳಿಗೆ ಉಸಿರು ಬಂದಿತು.
ಬಾಡಿದ ಎಲೆಗಳಿಗೆ ಪ್ರಾಣ ಬಂದಿದೆ… ಬಂದಿದೆ …ಬಂದಿದೆ.
ಊರಿಗೆ ಉಸಿರು ಬಂದಿದೆ. ಊರು ಹಸಿರ ಮರವಾಗಿದೆ.
ಪಕ್ಷಿಗಳ ಗೂಡಾಗಿದೆ…ಸುಗ್ಗಿಯ ನೆಲವಾಗಿದೆ… ಹಾಡುಗಳ ಕಣವಾಗಿದೆ…ಜಾತ್ರೆಯ ನದಿಯಾಗಿದೆ….ಮಾಯಮ್ಮ ತಾಯಿಯ ಬೆಳ್ಳಿ ಮುಖವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ಶಾಂತಿ ಮತ್ತು ಮಗು..!

Published

on

~ ಬಿ.ಶ್ರೀನಿವಾಸ

ಟದ ಸ್ಪರ್ಧೆ,
ಕಪ್ಪೆ ಜಿಗಿತ,
ಮ್ಯೂಸಿಕಲ್ ಚೇರು
ಸ್ಪರ್ಧೆಗಳಲ್ಲಿ ಗೆದ್ದ ಪುಟ್ಟ ಪುಟ್ಟ
ಕಪ್ಪು,
ಮೆಡಲುಗಳನು,
ಒಂದೊಂದಾಗಿ
ಹರಡುತ್ತಿದೆ
ಪುಟ್ಟ ಶಾಲೆಯ ಮಗು!
ನೊಬೆಲ್ ಶಾಂತಿ ಪ್ರಶಸ್ತಿ ವಂಚಿತನ ಮುಂದೆ!

ಶಾಂತಿ
ಪ್ರಶಸ್ತಿಗಳು
ಕೈತಪ್ಪಿದಾಗ
ಯುದ್ಧಗಳು ಘೋಷಣೆಯಾಗುತ್ತವೆ ಎಂಬ ಭಯವಿದೆ!

————————

ಅಮೆರಿಕ-ಕಾರಣಿಕ

ಯುದ್ಧಗಳು
ಘಟಿಸುತ್ತವೆ

ಶಾಂತಿ
ಸ್ಪೋಟಿಸುತ್ತದೆ !

ಇದು
ಆ ಊರಿನ ಕಾರಣಿಕ!

ಅಲ್ಲಿ
ಸ್ವಾತಂತ್ರ್ಯ
ಎನ್ನುವುದು
ಅಲುಗಾಡದೆ ನಿಂತ
ಶಾಂತ ಮೂರ್ತಿ!

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending