ಭಾವ ಭೈರಾಗಿ
ಕಥೆ | ಜೀವಧ್ವನಿ
- ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು,ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ
ಬೆಟ್ಟದ ತುತ್ತತುದಿಗೆ ಚಿಮ್ಮುತ್ತಾ ನೀರು ತನ್ನೊಳಗಿನ ಅಳಲನ್ನೆಲ್ಲಾ ತೋಡಿಕೊಳ್ಳತೊಡಗಿತು. ಮೋಡದೊಳಗಿಂದ ತೂರಿಬಂದು ಭೂಮಿಗೆ ಸುರಿದು ನದಿಯಾಗಿ ಹರಿಯುತ್ತಾ ಸಾಗರದವರೆಗೆ ತಲುಪಿಕೊಳ್ಳುವವರೆಗೆ ಎದುರುಗೊಳ್ಳುವ ತರಹೇವಾರಿ ಸಂಕಟಗಳನ್ನು ನಿವೇದಿಸಿಕೊಳ್ಳತೊಡಗಿತು.
ನೀಲಾಕಾಶದೆತ್ತರಕ್ಕೆ ಚಿಮ್ಮುತ್ತಲೇ ತನ್ನನ್ನು ಅರ್ಥಮಾಡಿಕೊಳ್ಳುವವರು ಯಾರಾದರೂ ಇದ್ದಾರಾ ಎಂದು ಪ್ರಶ್ನಿಸತೊಡಗಿತು. ಬಾವಿ, ಕೆರೆ, ಸಮುದ್ರ ಎಲ್ಲಿಯೂ ತಾನು ನೆಮ್ಮದಿಯಾಗಿಲ್ಲ ಎಂಬುದನ್ನು ಸಾರಿ ಸಾರಿ ಹೇಳತೊಡಗಿತು. ತಾನು ಖಾಲಿಯಾಗುತ್ತಾ ಭೂಮಿಯನ್ನು ಬರಡಾಗಿಸುವ ಎಚ್ಚರಿಸುವ ಎಲ್ಲ ಬಗೆಯ ತಂತ್ರಗಳನ್ನು ತೂರಿದರೂ ನರರ ಅತಿರೇಕಗಳು ಮುಂದುವರೆಯುತ್ತಿರುವುದರ ಬಗೆಗಿನ ಒಡಲಾಳದ ಬೇಗೆಯನ್ನು ವ್ಯಕ್ತಪಡಿಸುತ್ತಲೇ ಇತ್ತು.
ಸಮುದ್ರದ ದಂಡೆಯ ಕಡೆಗೆ ನುಗ್ಗುತ್ತಾ ಅಲೆಗಳ ಮೂಲಕ ಆರ್ಭಟಿಸಿದರೂ ಪ್ರಯೋಜನವಾಗದ ಕುರಿತು ಬೇಸರಿಸಿಕೊಳ್ಳುತ್ತಿತ್ತು. ಕೆಲಕಾಲ ಭೂಮಿಗೆ ಹನಿಯಾಗಿ ಬಾರದೇ ಎಲ್ಲೋ ಅಡಗಿ ಕುಳಿತುಕೊಂಡರೂ ಜಗತ್ತು ಮತ್ತಷ್ಟು ಕಠಿಣವಾಗುತ್ತಿರುವುದು ಅರಿವಿಗೆ ಬರುತ್ತಲೇ ಇತ್ತು. ಇವೆಲ್ಲವುಗಳ ನಡುವೆಯೇ ತನ್ನೊಳಗಿನ ಸೃಷ್ಟಿಪರ ಬದ್ಧತೆ ಈಗಲೂ ಮುಂದುವರೆಯುತ್ತಿರುವುದರ ಬಗ್ಗೆ ಒಂದಷ್ಟು ಹೆಮ್ಮೆಯ ಭಾವವೂ ಆಗಾಗ ಮಿಂಚಿ ಮಾಯವಾಗುತ್ತಿತ್ತು.
ತನ್ನ ಇರುವಿನೊಂದಿಗಿನ ಜಗದ ಅಸ್ತಿತ್ವದ ಬಗ್ಗೆ ನೆನಪಿಸಿಕೊಂಡು ಖುಷಿಯಾಗುತ್ತಿತ್ತು. ಜಗವನ್ನು ಶುದ್ಧವಾಗಿಸುವ ಜವಾಬ್ದಾರಿ ಸಿಕ್ಕಿರುವುದೇ ತನ್ನ ಹೆಚ್ಚುಗಾರಿಕೆ ಎಂಬ ಭಾವ ಒಡಲುಗೊಳ್ಳುತ್ತಿತ್ತು. ತಕ್ಷಣವೇ ತನ್ನನ್ನು ಯಾರೋ ಮತ್ತೆ ಮತ್ತೆ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ ಎಂಬ ಆತಂಕ ಆವರಿಸಿಕೊಳ್ಳುತ್ತಿತ್ತು. ತನ್ನನ್ನೇ ಇಲ್ಲವಾಗಿಸುವ ಹುನ್ನಾರಗಳು ಜಗದಾದ್ಯಂತ ನಡೆಯುತ್ತಿರುವ ಸುಳಿವುಗಳು ಗಮನಕ್ಕೆ ಬಂದಾಗಲಂತೂ ಭಯಭೀತಗೊಳ್ಳುತ್ತಿತ್ತು. ತನ್ನ ವಿರುದ್ಧ ಸಮರ ಸಾರುವ ಮತ್ತು ತನ್ನನ್ನು ಉಳಿಸಿಕೊಳ್ಳುವ ಇರಾದೆಯನ್ನು ಬೆಂಬಲಿಸುವ ಎರಡು ಬಗೆಯ ವೈಚಿತ್ರ್ಯವು ಒಗಟೆನ್ನಿಸುತ್ತಿತ್ತು.
ತಾನು ಇಲ್ಲವಾದರೇನಂತೆ, ಸೃಷ್ಟಿ ಮತ್ತೊಂದನ್ನು ರೂಪಿಸಬಹುದು ಎಂಬ ಸಮಾಧಾನವನ್ನೂ ತಂದುಕೊಳ್ಳುತ್ತಿತ್ತು. ತನ್ನೊಳಗಿನ ಚಲನೆಯ ಯಾನವನ್ನು ಮುಂದುವರೆಸಿಕೊಳ್ಳಬೇಕೆಂಬ ಆಶಾವಾದ ಎಂದೂ ಬಿಟ್ಟುಕೊಡಬಾರದು ಎಂದುಕೊಳ್ಳುತ್ತಿತ್ತು. ಬಹುಹಿಂದಿನಿಂದಲೂ ಸಿಹಿ-ಕಹಿಯ ಜೊತೆಗಿನ ಪ್ರಯಾಣದ ಅನಿವಾರ್ಯತೆಯನ್ನು ಕಂಡುಕೊಳ್ಳುತ್ತಾ ತನ್ನೊಳಗೆ ಚೈತನ್ಯವನ್ನು ರೂಪಿಸಿಕೊಳ್ಳುತ್ತಿತ್ತು.
ತೀರಾ ಇತ್ತೀಚೆಗಂತೂ ತನಗೆ ಮಾತು ಬಾರದ್ದರ ಬಗೆಗೆ ಕೊರಗಿಕೊಳ್ಳುತ್ತಿತ್ತು. ‘ಮಾತು ಬಾರದಿದ್ದರೇನಂತೆ, ಹರಿಯುವಾಗ ನಿನ್ನೊಳಗಿನ ನಿನಾದ ನಿನ್ನನ್ನು ಸಂಗೀತ ಜಗತ್ತಿನ ಶ್ರೇಷ್ಠ ಪ್ರತಿನಿಧಿಯನ್ನಾಗಿಸಿದೆ’ ಎಂದು ಆತ್ಮಸಾಕ್ಷಿ ಹೇಳಿದಾಕ್ಷಣ ಸಂತಸಗೊಳ್ಳುತ್ತಿತ್ತು. ಧುಮ್ಮಿಕ್ಕುವ ಜೀವಂತಿಕೆಯ ದನಿಯ ಭಾಷೆಯೇ ನಿನ್ನದಾಗಿರುವಾಗ ಮಾತಿನ ಸೀಮಿತ ಚೌಕಟ್ಟಿನ ಹಂಗೇಕೆ ನಿನಗೆ? ಎಂಬ ಪ್ರಶ್ನೆ ಎದುರುಗೊಳ್ಳುತ್ತಿತ್ತು. ಜಗತ್ತನ್ನು ನಾನೂ ಒಂದಿಷ್ಟು ನೋಡಬೇಕಿತ್ತು ಎಂದುಕೊಂಡಾಗಲೆಲ್ಲಾ ಕೋಟಿಕೋಟಿ ಜೀವರಾಶಿಗಳಿಗೆ ಇಂಬುಗೊಟ್ಟ ಹೆಗ್ಗಳಿಕೆಯೇ ನಿನ್ನೊಂದಿಗಿರುವಾಗ ಕಣ್ಣುಗಳನ್ನು ಹೊಂದುವ ಯಕಃಶ್ಚಿತ್ ಆಸೆ ಅತ್ಯಂತ ಸಣ್ಣದು ಎಂಬ ಒಳಸಾಂತ್ವನ ತೂರಿಬರುತ್ತಿತ್ತು.
ಸ್ಪರ್ಶಮಾತ್ರದಿಂದ ಜೀವಸಂಕುಲಕ್ಕೆ ಹಿತಾನುಭವ ನೀಡಿದಾಗಿನ ಪರಿಣಾಮಗಳನ್ನು ಗೊತ್ತುಮಾಡಿಕೊಳ್ಳುವ ಇರಾದೆ ಒಳಗೊಳಗೆ ಮೂಡಿದಾಗಲೆಲ್ಲಾ ಪ್ರತಿಫಲಾಪೇಕ್ಷೆ ಸಲ್ಲದು ಎಂಬ ಎಚ್ಚರ ಗೋಚರವಾಗಿಬಿಡುತ್ತಿತ್ತು. ಚಿಗುರಿಸುವ ತನ್ನೊಳಗಿನ ಶಕ್ತಿಯ ಸ್ವರೂಪವನ್ನು ಸ್ವತಃ ತಿಳಿದುಕೊಳ್ಳುವ ಶತಪ್ರಯತ್ನ ನಡೆಸುವಾಗ ಪ್ರಾಕೃತಿಕ ನಿಯುಕ್ತಿಯಿಂದ ವಿಮುಖಗೊಳ್ಳಕೂಡದು ಎಂಬ ಅಂತರಂಗದ ತಾಕೀತು ಸರಿಹಾದಿಯಲ್ಲಿರಿಸುತ್ತಿತ್ತು.
ಹೀಗೆ ಯೋಚಿಸುತ್ತಿರುವಾಗಲೇ ನನ್ನಿರುವೇ ಇಲ್ಲವಾಗಿಬಿಟ್ಟರೆ ಹೇಗೆ ಎಂಬುದು ಹೊಳೆಯಿತು.
ಆಗಲಾದರೂ ಮನುಷ್ಯರೆನ್ನಿಸಿಕೊಂಡವರೆಲ್ಲರೂ ಒಂದಾಗಿಬಿಡಬಹುದು ಎಂಬ ಆಶಾವಾದವು ಚಿಗುರೊಡೆಯಿತು. ತಕ್ಷಣವೇ ನಾನಿಲ್ಲದಿದ್ದರೆ ಮನುಷ್ಯ ಸೇರಿದಂತೆ ಸಕಲ ಜೀವಸಂಕುಲವೇ ಇಲ್ಲವಾಗಿಬಿಡುತ್ತದೆ ಎಂಬುದು ಅರಿವಿಗೆ ಬಂತು. ಹೀಗೆಲ್ಲಾ ನೀರು ತನ್ನೊಳಗೆ ಅಲ್ಲೋಲಕಲ್ಲೋಲ ಅಲೆಗಳನ್ನೆಬ್ಬಿಸಿಕೊಳ್ಳುತ್ತಿರುವುದಕ್ಕೆ ಕಾರಣಗಳೂ ಇವೆ. ನನ್ನ ಮೇಲೆ ಹಕ್ಕು ಸ್ಥಾಪಿಸಿಕೊಂಡವರೆಲ್ಲರೂ ಮತ್ತೊಬ್ಬರ ಮೇಲೆ ಪ್ರಾಬಲ್ಯ ಮೆರೆಯುವ ಸಂಕೇತವಾಗಿಸಿಕೊಂಡಿದ್ದರ ನೆನಪು ನೀರಿನಾಳದಲ್ಲೆಲ್ಲೋ ಈಗಲೂ ಇದೆ.
ನನ್ನನ್ನು ಒಬ್ಬರು ಮುಟ್ಟಿದರೆ ಸರಿ, ಮತ್ತೊಬ್ಬರು ಮುಟ್ಟಿದರೆ ಅಪವಿತ್ರ, ಮೈಲಿಗೆ ಎಂಬ ಸಂಕುಚಿತೆಯ ಪಳೆಯುಳಿಕೆ ಮತ್ತಷ್ಟು ಉತ್ಸಾಹ ಗಳಿಸಿಕೊಳ್ಳುತ್ತಿರುವ ಸುಳಿವುಗಳು ಸಿಗುತ್ತಿದ್ದವು. ದಣಿವಾರಿಸಿಕೊಳ್ಳುವಾಗ ಜೀವಗಳಿಗೆ ಸಾಥಿಯಾಗಿರುವ ಬಗ್ಗೆ ಧನ್ಯತೆ ಇರಿಸಿಕೊಳ್ಳುವ ಕಾಲಕ್ಕೆ ಮನುಜನೆಂಬೋ ಮನುಜನಿಂದ ಎದುರುಗೊಳ್ಳುವ ಸಂಕಟಗಳನ್ನು ನೆನೆದು ವ್ಯಥೆಯ ತೆಕ್ಕೆಗೀಡಾಗುತ್ತಿತ್ತು. ಆ ಕ್ಷಣಕ್ಕೆ ಇವರೆಲ್ಲರಿಗೆ ಪಾಠ ಕಲಿಸಬೇಕು ಎಂದುಕೊಳ್ಳುತ್ತಿತ್ತು.
ಒಂದು ತಿಂಗಳ ಕಾಲ ಕಣ್ಮರೆಯಾಗಬೇಕು ಎಂಬ ಠರಾವು ತೆಗೆದುಕೊಳ್ಳುತ್ತಿತ್ತು. ಸೂರ್ಯನ ಶಾಖವ ಎದುರುಗೊಂಡು ಅದೃಶ್ಯಗೊಳ್ಳಬಹುದು ಎಂದು ಲೆಕ್ಕ ಹಾಕುತ್ತಿತ್ತು. ಈ ಕಾರಣಕ್ಕಾಗಿಯೇ ತನ್ನೊಳಗೆ ಮಂಕು ಕವಿದು ಭೂಮಿತಾಯಿಯ ಗರ್ಭದೊಳಗೆ ಅಡಗಿ ಕುಳಿತುಕೊಂಡಾಗ ಜೀವಜಗದೊಳಗೆ ಏನೆಲ್ಲಾ ತಳಮಗಳಾಗುತ್ತಿದ್ದವು.
ಮನುಜನೆಡೆಗಿನ ಅಸಮಾಧಾನಕ್ಕೆ ಉಳಿದ ಜೀವಸಂಕುಲವ ಇಕ್ಕಟ್ಟಿಗೆ ಸಿಲುಕಿಸುವುದು ಸರಿಯಲ್ಲ ಎಂಬ ವಿವೇಚನೆ ಹೊಳೆದು ಮತ್ತೆ ನೆಲದ ಮೇಲಿನ ತನ್ನ ನಡಿಗೆಯನ್ನು ಮುಂದುವರೆಸುತ್ತಿತ್ತು. ಮೋಡದೊಳಗಿನ ಹನಿಗಳ ಬಳಗವನ್ನು ಸೇರಿಕೊಂಡು ಮತ್ತೆ ನೆಲದೆಡೆಗೆ ಪ್ರಯಾಣ ಬೆಳೆಸುವ ತನ್ನ ಎಂದಿನ ದಿನಚರಿಯನ್ನು ಚಾಲ್ತಿಯಿರಿಸಿಕೊಳ್ಳುತ್ತಿತ್ತು.
ಆದರೂ ಈ ಮನುಜಲೋಕ ತನ್ನೊಳಗೆ ಏನೆಲ್ಲಾ ಅಲ್ಲೋಲಕಲ್ಲೋಲ ಸೃಷ್ಟಿಸುತ್ತಿದೆಯಲ್ಲಾ ಎಂಬ ಬಗೆಗಿನ ಕೊರಗಂತೂ ಕರಗುತ್ತಲೇ ಇರಲಿಲ್ಲ. ತಾನು ಹರಿಯುವ ನೆಲದ ಮೇಲೆಲ್ಲಾ ಮನುಷ್ಯನ ಹೆಜ್ಜೆಗುರುತುಗಳು ಅಮ್ಮನ ಮಡಿಲಲ್ಲಿ ಆಡುವ ಮಗುವಿನ ಮುಗ್ಧತೆಯನ್ನು ಸಂಕೇತಿಸುವ ಬದಲು ಮತ್ತೆ ಮತ್ತೆ ಸವಾಲೆಸೆಯುತ್ತಿದ್ದವು.
ತನ್ನೊಳಗೆ ವಿಷ ಬೆರೆಸುವ ಅವನ ಆಟಾಟೋಪದಿಂದ ಮೈಯೆಲ್ಲಾ ಉರಿದಂತಾಗುತ್ತದೆ. ಹರಿಯುವೆಡೆಯೆಲ್ಲೆಲ್ಲಾ ಇರುವ ಜೀವಗಳು ಕ್ರಮೇಣ ಜೀವ ಕಳೆದುಕೊಳ್ಳುತ್ತವೆ. ಹರಿಯುವುದಕ್ಕೆ ಬೇಕಾದ ತಳಪಾಯದ ಗರ್ಭಕ್ಕೇ ಕನ್ನ ಹಾಕಿ ದೋಚುವ ಅವನ ವಿಲಕ್ಷಣ ಸ್ವಭಾವದ ಬಗ್ಗೆ ವಿಪರೀತ ಸಿಟ್ಟಿದ್ದರೂ ತನ್ನೊಳಗಿನ ಮಾತೃತ್ವ ಅವನ ವಿರುದ್ಧ ದ್ವೇಷದ ಭಾವ ತಳೆಯುವುದಕ್ಕೆ ಬಿಡುತ್ತಿರಲಿಲ್ಲ.
ತನ್ನನ್ನು ಪೂಜಿಸಿ ದೈವತ್ವದ ಪಟ್ಟ ಕಟ್ಟುವ ಇದೇ ಮನುಜಕುಲದವರಿಂದಲೇ ತನಗೆ ಮತ್ತೆ ಮತ್ತೆ ಸಂಕಷ್ಟ ಬಂದೊದಗುತ್ತಿರುವುದನ್ನು ನೆನೆದು ವಿಸ್ಮಯಗೊಳ್ಳುತ್ತಿತ್ತು. ತನ್ನನ್ನು ಪ್ರೋಕ್ಷಿಸಿ ಮಂತ್ರದ ಉದ್ಘೋಷ ಮೊಳಗಿಸಿ ದೊಡ್ಡ ದೊಡ್ಡ ಬಂಗಲೆಗಳನ್ನು ಪ್ರವೇಶಿಸುವ ಮನುಷ್ಯರ ನಡವಳಿಕೆಗಳು ವಿಚಿತ್ರವೆನ್ನಿಸುತ್ತಿದ್ದವು. ಪ್ರೋಕ್ಷಣೆಯ ಬೆಂಬಲದಿಂದ ಬಣ್ಣಬಣ್ಣದ ಗೋಡೆಗಳಿಗೆ ಅಪ್ಪಳಿಸಿದಾಗ ಅವುಗಳೊಳಗೆ ಅವಿತು ಕುಳಿತ ಮರಳಿನ ಕಣಗಳು ರೋಧಿಸುತ್ತಿರುವುದು ಕೇಳುತ್ತಿತ್ತು.
ಸಿಮೆಂಟಿನ ಕಬಂಧ ಬಾಹುವಿನಲ್ಲಿ ಬಿಗಿಯಲ್ಪಟ್ಟು ನನ್ನೊಳಗೆ ಉಸಿರುಗಟ್ಟುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಿರುವುದನ್ನು ಆಲಿಸುತ್ತಿತ್ತು. ಪೂಜಾಕಳಸಗಳೊಳಗಿದ್ದಾಗ ಕೆಳಗಿನಿಂದಲೂ ಆ ಕಣಗಳು ಒಟ್ಟಾಗಿ ನಮ್ಮೆಲ್ಲರನ್ನೂ ನಿನ್ನ ಹರಿವಿನ ಯಾನದಲ್ಲಿ ಸೇರಿಸಿಕೊಂಡುಬಿಡು, ಈ ಗೃಹಬಂಧನಕ್ಕೊಳಗಾಗಿ ಅಸ್ತಿತ್ವವೇ ಇಲ್ಲವಾಗಿದೆ ಎಂದು ಕೂಗುತ್ತಿದ್ದವು.
ನೆಲದಮ್ಮನ ಸಹನೆಯ ಮುಂದೆ ತನಗೆದುರಾಗುತ್ತಿರುವ ಸಂಕಟಗಳು ಏನೂ ಅಲ್ಲ ಎಂದುಕೊಂಡ ಕಾರಣಕ್ಕಾಗಿಯೇ ಮನುಷ್ಯರಲ್ಲದ ಮನುಷ್ಯರ ಅತಿರೇಕಗಳನ್ನು ತಡೆದುಕೊಳ್ಳುವುದಕ್ಕೆ ಸಾಧ್ಯವಾಗಿತ್ತು. ಆದರೆ, ಇದೇಬಗೆಯ ಆಲೋಚನೆ ಮೋಡಗಳಿಗೆ ಬರುತ್ತಲೇ ಇರಲಿಲ್ಲ. ಅವುಗಳದ್ದೇನಿದ್ದರೂ ನೇರನಿಷ್ಠುರ ನಿಲುವು. ಅಯ್ಯೋ ಎಂದು ಕೊರಗುವಂಥ ಸ್ವಭಾವ ಅವುಗಳದ್ದಲ್ಲ. ಜಗದ ಉದ್ದಗಲ ಇದ್ದ ಮರಗಳ ಮಾರಣಹೋಮಕ್ಕೆ ಕಾರಣವಾಗಿರುವ ಅವರಿಗೆ ಪಾಠ ಕಲಿಸುವ ಹಠ.
ಈ ಹಠದ ಕಾರಣಕ್ಕಾಗಿಯೇ ಅವು ಸ್ಥಗಿತಗೊಳ್ಳುತ್ತಿದ್ದವು. ಕಣ್ಮರೆಯಾಗುತ್ತಿದ್ದವು. ಅವುಗಳ ನೆರವಿಲ್ಲದೇ ತನಗೆ ಸ್ವತಂತ್ರ ಅಸ್ತಿತ್ವವಿಲ್ಲ ಎಂಬುದು ನೀರಿಗೆ ತಿಳಿದಿರುವುದರಿಂದ ಏನೂ ಮಾಡುವಂತಿರಲಿಲ್ಲ. ಒಮ್ಮೊಮ್ಮೆ ಅವುಗಳ ಸಿಟ್ಟು ಹೇಗಿರುತ್ತದೆಂದರೆ ದಿಢೀರನೆ ಪ್ರತ್ಯಕ್ಷಗೊಂಡು ತನ್ನನ್ನು ಸೆಳೆದುಕೊಂಡು ಒಂದೇ ಸಮನೆ ನೆಲಕ್ಕಪ್ಪಳಿಸಿ ಸಕಲ ಜೀವರಾಶಿ ದಿಗಿಲುಗೊಳ್ಳುವಂತಾಗುತ್ತದೆ.
ಇದರ ಅಂತರಾಳವೆಲ್ಲವನ್ನೂ ಬಲ್ಲ ರಾಮು ಸುಮ್ಮನಿರುತ್ತಿರಲಿಲ್ಲ. ಅದಕ್ಕೆ ಕನ್ನಡಿ ಹಿಡಿಯುವ ಹಂಬಲ ಅವನದ್ದು. ಇವನ ಊರಿನವರೆಲ್ಲರೂ ತನ್ನನ್ನು ಗಂಗೆಯ ಹೆಸರಿನಲ್ಲಿ ಕರೆಯುತ್ತಿದ್ದರು. ಅವರೆಲ್ಲರಿಗೆ ಗಂಗೆಯಾದರೆ ಇವನಿಗೆ ಬರೀ ಹೆಸರಿನಿಂದ ಕರೆಯುವ ವ್ಯಕ್ತಿತ್ವವಷ್ಟೇ ಅಲ್ಲ. ತನ್ನೊಳಗೆ ಜೀವಂತಿಕೆಯನ್ನು ನೆಲೆಗೊಳಿಸಿದ ಮಾತೃತ್ವದ ಆದರ್ಶ. ರಾಮು ಎಂಬ ಮನುಷ್ಯ ದೇಹಿ ನದಿಯ ಸ್ವರೂಪದ ತನ್ನೊಂದಿಗೆ ಏರ್ಪಡಿಸಿಕೊಂಡ ಮಾತುಕತೆ ಉಳಿದ ಯಾವ ಜೀವಿಗಳಿಗೂ ಸಾಧ್ಯವಾಗಿರಲಿಲ್ಲ. ಇವನು ಬಂದನೆಂದರೆ ಆಯಿತು.
ಗಂಗೆಗೆ ಖುಷಿಯಾಗುತ್ತಿತ್ತು. ನರಲೋಕದ ಬಗ್ಗೆ ಇದ್ದ ಎಲ್ಲ ಬಗೆಯ ತಪ್ಪುಕಲ್ಪನೆಗಳನ್ನು ಇವನೊಬ್ಬನ ಮಗುವಿನಂಥ ಸ್ಪರ್ಶ ಇಲ್ಲವಾಗಿಸಿಬಿಡುತ್ತಿತ್ತು. ಗಂಗೆಯ ಮಾತೃತ್ವದ ಕಾರಣಕ್ಕಾಗಿಯೇ ಸೃಷ್ಟಿಯ ವಿಶೇಷತೆಯ ಬಗ್ಗೆ ರಾಮುವಿನಲ್ಲಿ ಹೆಮ್ಮೆಯ ಭಾವಗಳಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಹೇಳಬೇಕಾದ ವಿಷಯ ಮತ್ತೊಂದಿದೆ. ಮನುಷ್ಯಲೋಕದ ಎರಡು ಜೀವಗಳು ಒಂದಾಗಿ ಅವುಗಳ ಮೂಲಕ ಜನ್ಮವೆತ್ತಿದ ನರಶಿಶುಗಳನ್ನು ತನ್ನೆಡೆಗೆ ಎಸೆದಾಗ ಅವುಗಳ್ಯಾವುವೂ ಬದುಕಿರಲಿಲ್ಲ. ಬದುಕುತ್ತಲೂ ಇರಲಿಲ್ಲ.
ಮನುಷ್ಯಲೋಕ ಹೆಸರಿಸಿಕೊಂಡ ಜಾತಿ, ಧರ್ಮಗಳ ಕಟ್ಟಳೆಗಳ ನೆಪದಲ್ಲಿ ಅತ್ಯಂತ ಕ್ರೂರವಾಗಿ ತನ್ನೆಡೆಗೆ ಎಸೆದಾಗ ತಾನು ಆ ಅಮಾಯಕ ಶಿಶುಗಳನ್ನು ತೇಲಿಸುವ ಪ್ರಯತ್ನ ನಡೆಸುತ್ತಿದ್ದೆನಾದರೂ ಆ ರಾಕ್ಷಸರು ಮತ್ತೆ ಧುಮುಕಿ ನನ್ನೊಳಗೆ ಮುಳುಗಿಸಿಬಿಡುತ್ತಿದ್ದರು. ಅವುಗಳ ಉಸಿರುಗಟ್ಟಿಸುತ್ತಿದ್ದರು. ಅವು ಸಾಯುವವರೆಗೂ ಬಿಡುತ್ತಿರಲಿಲ್ಲ. ಅಷ್ಟೇ ಅಲ್ಲ, ಅವುಗಳಿಗೆ ಜನ್ಮ ನೀಡಿದ ಹೆತ್ತವರ ಜಾತಿ ಮರ್ಯಾದೆಯನ್ನು ಕೆಡಿಸಿದ್ದೀರಿ ಎಂಬ ಆಪಾದನೆ ಹೊರಿಸಿ ನನ್ನ ಮೇಲೆ ಎಸೆದು ಮುಳುಗಿಸಿಬಿಡುತ್ತಿದ್ದರು.
ತನಗೋ ಮತ್ತೆ ಮತ್ತೆ ಪಾಪಪ್ರಜ್ಞೆ ಕಾಡುತ್ತಲೇ ಇತ್ತು. ಕೊಲೆಗೀಡಾದ ಈ ಅಮಾಯಕರ ರಕ್ತ ನದಿಯ ರೂಪದ ತನ್ನೊಳಗೆ ಬೆರೆತಾಗ ತನ್ನ ಅಸ್ತಿತ್ವದ ಬಗೆಗೇ ಜಿಗುಪ್ಸೆಯ ಭಾವ ಗಂಗೆಯನ್ನು ಮತ್ತೆ ಮತ್ತೆ ಆವರಿಸಿಕೊಂಡದ್ದೂ ಇದೆ. ಆದರೆ, ಇವನೊಬ್ಬನನ್ನು ಬದುಕಿಸಿದ ಒಂದಷ್ಟು ತೃಪ್ತಿ ಗಂಗೆಗಿದೆ. ಮುಂಚಿನ ಯಾರನ್ನೂ ಉಳಿಸಿಕೊಳ್ಳಲಾಗದ ಈ ಗಂಗೆ ರಾಮುವನ್ನು ಉಳಿಸಿಕೊಂಡ ಘಳಿಗೆ ಆಕೆಯೊಳಗೇ ವಿಸ್ಮಯವನ್ನುಂಟುಮಾಡಿದೆ.
ಪ್ರಕೃತಿಯೇ ಯಾವುದೋ ಮಹತ್ವದ ಉದ್ದೇಶಕ್ಕಾಗಿ ಈ ಕೂಸನ್ನು ಉಳಿಸಿರಬಹುದು ಎಂದುಕೊಳ್ಳುತ್ತಿದ್ದಳು. ಅಂದು ಇವನ ಹೆತ್ತವರನ್ನು ನನ್ನೆಡೆಗೆ ನೂಕಿ ಸಾಯಿಸಿದ ನಂತರ ಇವನ ದೇಹವನ್ನೂ ಎಸೆದುಬಿಟ್ಟಿದ್ದರು. ಅದ್ಯಾವುದೋ ಚೈತನ್ಯಶಕ್ತಿ ನನ್ನೊಳಗೆ ಧುಮುಕಿದ ಅನುಭವವಾಗಿತ್ತು. ಆ ಕ್ಷಣಕ್ಕೆ ಆ ಪುಟ್ಟ ಶಿಶುದೇಹ ನನ್ನಿರುವಿನ ನೆಲದಾಳದೊಳಕ್ಕಿಳಿದರೂ ಮುಳುಗಲೇ ಇಲ್ಲ. ಒಂದಷ್ಟು ಮುಂದಕ್ಕೆ ಹೋಗಿ ತೇಲಿಬಿಟ್ಟಿತು. ಬಹುದೂರ ಹೋಗುತ್ತಲೇ ದಡ ಸೇರಿಕೊಂಡುಬಿಟ್ಟಿತು.
ಆಗಲೇ ಅದು ಹೊಸಹುಟ್ಟು ಪಡೆದದ್ದು. ಅಲ್ಲಿಂದಲೇ ಗಂಗೆಗೆ ಅದರೊಂದಿಗೆ ಕರುಳಬಳ್ಳಿಯ ನಂಟು ಶುರುವಾಗಿತ್ತು. ಆಗಿನಿಂದಲೂ ಗಂಗೆ ಮತ್ತು ರಾಮು ಇಬ್ಬರೂ ಪರಮಾಪ್ತ ಆತ್ಮಗಳ ಹಾಗೆ ನಂಟನ್ನು ಬೆಸೆದುಕೊಂಡಿದ್ದಾರೆ. ಬಾಲ್ಯದಿಂದ ಹಿಡಿದು ಇಲ್ಲಿಯವರೆಗೆ ಸದಾ ಹರಿವ ಅಂತಃಕರಣದ ಗುಣದೊಂದಿಗೆ ಆಕೆ ಇವನನ್ನು ಆರೈಕೆ ಮಾಡಿದ್ದಾಳೆ. ಒಡಲಬೇಗೆಯ ಕಾರಣಕ್ಕಾಗಿಯೇ ಧುಮ್ಮಿಕ್ಕಿದ ಕಣ್ಣಹನಿಗಳನ್ನು ಒರೆಸಿ ಸಾಂತ್ವನ ಹೇಳಿದ್ದಾಳೆ.
ಹೆಜ್ಜೆಹೆಜ್ಜೆಗೂ ಬಡತನವು ಮತ್ತೆ ಮತ್ತೆ ಮುಖಾಮುಖಿಯಾಗಿಸಿದ ಅವಮಾನದ ತಾಪಗಳನ್ನು ನೀಗಿಸಿದ್ದಾಳೆ. ಊಟ ಇಲ್ಲದೇ ಹೊಟ್ಟೆ ಚುರುಗುಟ್ಟುವಾಗಲೆಲ್ಲಾ ಅವಳ ಅಮೃತಧಾರೆ ಜೀವನಪ್ರೀತಿಯನ್ನು ಹೆಚ್ಚಿಸಿದೆ. ದಣಿವಾರಿಸಿದ್ದಾಳೆ. ಊರಿಗೆ ಊರೇ ಬರಗಾಲದ ಹೊಡೆತಕ್ಕೆ ಸಿಲುಕಿದಾಗಲೆಲ್ಲಾ ಯಾವತ್ತೂ ಬತ್ತದ ತನ್ನ ಎಂದಿನ ಉತ್ಸಾಹಿ ನಡಿಗೆಯೊಂದಿಗೆ ಸ್ಫೂರ್ತಿ ತುಂಬಿದ್ದಾಳೆ. ಊರಿನವರ ಎಲ್ಲ ಬಗೆಯ ಸುಖ-ದುಃಖಗಳ ಸಾಕ್ಷಿಯಾಗಿ ಜೀವಂತಿಕೆಯನ್ನು ಮೆರೆದಿದ್ದಾಳೆ.
ಗಂಗೆಯೊಂದಿಗೆ ಮಾತನಾಡುವುದೆಂದರೆ ರಾಮುವಿಗೆ ಎಲ್ಲಿಲ್ಲದ ಖುಷಿ. ದಂಡೆಯ ಮೇಲೆ ನಿಂತುಕೊAಡು ಚೈತನ್ಯದ ಸಂಕೇತದಂತೆ ಕಂಗೊಳಿಸುವ ಅವಳೊಂದಿಗಿನ ಮೌನಸಂವಾದ ಆಂತರ್ಯದಲ್ಲಿ ಮೂಡಿಸುವ ತರಹೇವಾರಿ ಆಲೋಚನೆಗಳ ಅಲೆಗಳ ಅನುಭೂತಿಯಲ್ಲಿ ಮಿಂದೆದ್ದು ಕೃತಾರ್ಥನಾಗುವ ಅವನ ಭಾವಸಮೃದ್ಧಿಯನ್ನು ಅಷ್ಟು ಸುಲಭವಾಗಿ ಮಾತಿನಲ್ಲಿ ಹೇಳಲಾಗದು. ಇಷ್ಟಕ್ಕೂ ಅವನು ಹುಟ್ಟಿದ ಘಳಿಗೆಯೇ ಇಡೀ ಹೆತ್ತವರಿಗೆ ನಿರಾಳತೆಯನ್ನು ತಂದುಕೊಟ್ಟಿತ್ತು.
ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಕಾರಣಕ್ಕಾಗಿಯೇ ಸದಾ ಕೊಲ್ಲಲು ತವಕಿಸುತ್ತಿದ್ದ ಮನೆಯವರ ಕಣ್ಣು ತಪ್ಪಿಸಿ ದೂರದೂರ ಓಡಿಬಂದಿದ್ದ ಇವನ ಅಪ್ಪ-ಅಮ್ಮನ ಬದುಕಿನಲ್ಲಿ ಹೊಸ ಆಶಾವಾದದ ಬೆಳಕನ್ನು ಬೆಳಗಿಸಿದ್ದ ಮಗನಿವನು. ತಮ್ಮ ಜಾತಿಯವರನ್ನು ಬಿಟ್ಟು ಬೇರೊಬ್ಬನನ್ನು ಮದುವೆಯಾಗಿದ್ದು ಅಮ್ಮನ ಕಡೆಯವರೂ, ತಮ್ಮ ಧರ್ಮಕ್ಕೆ ಸೇರದವಳ ಜೊತೆಯಾಗಿ ಮರ್ಯಾದೆ ಹರಾಜು ಹಾಕಿದನು ಎಂದು ಅಪ್ಪನ ಕಡೆಯವರೂ ಕಿಚ್ಚಿನಿಂದ ಕುದಿದು ಕೊಲ್ಲಲು ಪ್ರಯತ್ನಿಸಿದ್ದರು.
ಅವರಿಂದ ತಪ್ಪಿಸಿಕೊಳ್ಳುತ್ತ ಇವರಿಬ್ಬರೂ ಬಹುದೂರ ಸಾಗಿದ್ದರು. ತಮ್ಮ ಪಾಡಿಗೆ ತಾವು ಬದುಕು ಕಟ್ಟಿಕೊಳ್ಳುವ ಸಂಕಲ್ಪ ಗಟ್ಟಿಗೊಳಿಸಿಕೊಂಡಿದ್ದರು. ಇದೇ ಘಳಿಗೆಯಲ್ಲಿಯೇ ಹುಟ್ಟಿದ್ದ ಮಗು ಅವರ ಖುಷಿಯನ್ನು ಇಮ್ಮಡಿಗೊಳಿಸಿತ್ತು. ಅದಕ್ಕಾಗಿಯೇ ಜಗತ್ತಿನ ಎಲ್ಲ ಬಗೆಯ ವಿಕಾರಗಳನ್ನು ಎದುರಿಸಿಬಿಡುವ ಛಲವನ್ನು ತೊಟ್ಟಿದ್ದರು. ಹೀಗಿರುವಾಗಲೇ ಮತ್ತೆ ಇಬ್ಬರ ಮನೆಯವರ ಕಡೆಯವರು ಬೆನ್ನತ್ತಿ ತುಂಬಿ ಹರಿಯುತ್ತಿದ್ದ ಗಂಗೆಯೊಳಗೆ ಮುಳುಗಿಸಿಬಿಟ್ಟಿದ್ದರು.
ತನ್ನಪ್ಪ, ಅಮ್ಮನನ್ನು ಕೊಂದು ಇದೇ ಗಂಗೆಯ ಮಡಿಲಿಗೆ ನೂಕಿಬಿಟ್ಟಿದ್ದರು ಎಂಬ ಸತ್ಯ ಗೊತ್ತಾಗಿನಿಂದಲಂತೂ ರಾಮು ಅತ್ಯಂತ ಭಾವುಕನಾಗಿ ಇವಳ ಹತ್ತಿರ ಬರುತ್ತಿದ್ದ. ತನನ್ನು ಉಳಿಸಿ ಕಾಪಾಡಿದ ಅವಳ ತಾಯ್ತನಕ್ಕೆ ಬೆರಗಾಗಿದ್ದ. ಯಾರೂ ಇಲ್ಲ ಎಂಬ ಅನಾಥ ಭಾವ ಗಾಢವಾಗಿ ಬೇರೂರಿದ ತಕ್ಷಣವೇ ಅವನು ಗಂಗೆಯ ಮುಂದೆ ನಿಂತು ನಿರಾಳವಾಗುವ ವಿಮುಕ್ತಿಯ ಅದ್ಭುತಮಾರ್ಗವನ್ನು ಕಂಡುಕೊಂಡಿದ್ದ. ಅದು ಅವನಿಗೆ ಅದ್ಭುತ ಮಾರ್ಗವಾಗಿದ್ದರೂ ಉಳಿದವರೆಲ್ಲರಿಗೂ ವಿಚಿತ್ರವೆನ್ನಿಸಿತ್ತು.
ವಿಚಿತ್ರವಾಗಿ ಕಾಣಿಸಿದ್ದಕ್ಕೂ ಕಾರಣವಿದೆ.
ಅಪ್ಪ ಹಾಕಿದ ಆಲದ ಮರಕ್ಕೆ ಜೋತುಬೀಳುವ ಸಂಪ್ರದಾಯಗಳೊಂದಿಗಿದ್ದವರನ್ನು ನಾರ್ಮಲ್ ಎಂತಲೂ, ಉಳಿದೆಲ್ಲರಿಗಿಂತ ಭಿನ್ನವಾಗಿರುವುದಕ್ಕೆ ಪ್ರಯತ್ನಿಸುವವರನ್ನು ಅಬ್ನಾರ್ಮಲ್ ಎಂದು ಪರಿಗಣಿಸುವ ಜಾಯಮಾನವೇ ಜಗದ ಅಲಿಖಿತ ನಿಯಮವಾದಾಗ ವಿನೂತನವಾದದ್ದೂ ಹಲವರಿಗೆ ವಿಚಿತ್ರವಾಗಿ ಕಾಣಿಸುತ್ತದೆ. ಈ ಮನುಷ್ಯ ಇಷ್ಟು ಭಾವುಕ ಆದರೆ ಹೇಗೆ ಎಂಬ ತಿವಿತದ ಮಾತುಗಳೂ ಬೋನಸ್ನ ರೂಪದಲ್ಲಿ ಹೊಡೆತ ನೀಡುತ್ತವೆ.
ಮೌನವಾಗಿ ನಿಲ್ಲುವುದಂತೆ, ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುವುದಂತೆ, ಮದುವೆಯಿಲ್ಲ, ಮಕ್ಕಳಿಲ್ಲ, ಈ ವಯಸ್ಸಿಗೇ ಹೀಗೆ ಆಡಿದರೆ ಮುದುಕನಾದ ಮೇಲೆ ಏನಾಗಿರುತ್ತಾನೋ? ಎನ್ನುವ ಕೊಂಕುನುಡಿಗಳೂ ಮತ್ತಷ್ಟು ಘಾಸಿಗೊಳಿಸುತ್ತವೆ. “ಅಲ್ಲೆಲ್ಲಾ ಹೋಗಿ ಪ್ಲಾಸ್ಟಿಕ್ ಬ್ಯಾಗ್ಗಳನ್ನು ಹುಡುಕಿ ತೆಗೆಯುವುದು, ಪ್ಲಾಸ್ಟಿಕ್ ಬಾಟಲ್ಗಳನ್ನು ಆಯುವುದು, ಗಂಗೆಯ ಗರ್ಭವನ್ನು ಸೀಳುವ ದೊಡ್ಡ ದೊಡ್ಡ ಯಂತ್ರಗಳ ಗಾಡಿಗಳವರ ಗಾಡಿಗಳವರ ಹತ್ತಿರ ಹೋಗಿ ವಾಗ್ವಾದಕ್ಕಿಳಿಯುವುದು, ಅವರು ಇವನನ್ನು ನಿರ್ಲಕ್ಷಿಸಿದಾಗ ಸನ್ನಿವೇಶ ಬಿಗಡಾಯಿಸುವುದು….” ಇವೆಲ್ಲವೂ ಜನರಿಗೆ ವಿಚಿತ್ರವಾಗಿ ಕಾಣಿಸಿದ್ದವು. ಇಲ್ಲದ ಉಸಾಬರಿ ಇವನಿಗ್ಯಾಕೋ ಎಂಬ ಟೀಕೆಗಳು ಅವನ ಸ್ವಭಾವವನ್ನು ‘ವಿಚಿತ್ರ’ ಎಂಬ ಅಪವ್ಯಾಖ್ಯಾನದ ವ್ಯಾಪ್ತಿಗೆ ತಂದು ನಿಲ್ಲಿಸಿದ್ದವು.
ಬೇವೂರಿನವರ ಪ್ರಯಾಣ, ವ್ಯಾಪಾರ-ವಹಿವಾಟು, ಸರಕು-ಸಾಗಣೆಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ದೊಡ್ಡದಾದ ಸೇತುವೆ ಕಟ್ಟುವ ಯೋಚನೆ ಪ್ರಸ್ತಾಪವಾದಾಗ ಈ ಹುಡುಗ ರಾಮು ಭಾರೀ ಆಘಾತವಾಗಿದೆ ಎನ್ನುವ ಹಾಗೆ ತಗಾದೆ ತೆಗೆದಿದ್ದ. ನೂರಾರು ಕಿಲೋಮೀಟರ್ ದೂರ ಇರುವ ಊರುಗಳವರ ಪ್ರಯೋಜನಕ್ಕಾಗಿ ಅಣೆಕಟ್ಟು ಕಟ್ಟಲು ಯೋಜನೆ ರೂಪಿಸುತ್ತಿದ್ದಾಗ ಇದೇ ಹುಡುಗ ಬಂಡಾಯದ ಧ್ವನಿ ಎತ್ತಿದ್ದ.
ಜನದಟ್ಟಣೆ ಹೆಚ್ಚಿದಂತೆಲ್ಲಾ ಊರೆಂಬೋ ಊರು ತನ್ನತನವನ್ನು ಕಳೆದುಕೊಂಡು ಕೃತಕತೆಯನ್ನು ಹೊದ್ದುಕೊಳ್ಳುವಾಗಲೆಲ್ಲಾ ಸಿಡಿಮಿಡಿಗೊಳ್ಳುತ್ತಲೇ ಇದ್ದ. ಇಂಥ ಸಂದರ್ಭಗಳಲ್ಲೆಲ್ಲಾ ‘ಒಳ್ಳೇ ಹುಚ್ಚನ ಸಹವಾಸವಾಯಿತಲ್ಲಾ’ ಎಂದುಕೊಳ್ಳುತ್ತಿದ್ದರೇ ಹೊರತು ಅವನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಗೊಡವೆಗೇ ಹೋಗಲಿಲ್ಲ. ಫಲವತ್ತಾದ ಜಮೀನುಗಳನ್ನು ದೊಡ್ಡ ದೊಡ್ಡ ಕಂಪನಿಗಳು ದೊಡ್ಡ ಮೊತ್ತದ ಆಮಿಷವೊಡ್ಡಿ ಖರೀದಿಸುವಾಗಲೆಲ್ಲಾ ಇವನ ವಿರೋಧವನ್ನು ಹುಚ್ಚುತನದ ಪರಮಾವಧಿ ಎಂದು ಪರಿಗಣಿಸಿದವರೇ ಹೆಚ್ಚು.
ಇವನು ತುಂಗೆಯ ಪ್ರೇಮಕ್ಕೆ ಬಿದ್ದಾಗ ಗಂಗೆಯೇ ಮಧುರಭಾವಗಳ ಪ್ರವಹಿಸುವುದಕ್ಕೆ ವೇದಿಕೆಯಾಗಿದ್ದಾಳೆ. ಗಂಗೆಯ ಸಾನಿಧ್ಯದಲ್ಲೇ ತುಂಗೆಯೊಂದಿಗಿನ ಪ್ರೇಮದ ಭಾವಗಳನ್ನು ಹೊರಗೆಡಹಿದವನು ಇವನು. ಗಂಗೆಯೊಬ್ಬಳನ್ನು ಬಿಟ್ಟು ಈ ಜಗತ್ತಿನಲ್ಲಿ ಮತ್ತಿನ್ಯಾರೂ ಇಲ್ಲ ಎಂಬ ನಿರ್ಧಾರಕ್ಕೆ ಬರುವುದಕ್ಕೆ ಮುನ್ನ ತುಂಗೆಯ ಮಾಧುರ್ಯ ಅವನ ಬದುಕಿನಲ್ಲಿ ಪ್ರವೇಶಿಸಿತ್ತು. ಜಗತ್ತಿನಲ್ಲಿರುವವರು ಬಹುವಾಗಿ ಇಷ್ಟಪಡುವ ಯಾವ ಲಕ್ಷಣಗಳೂ ಇಲ್ಲದಿದ್ದರೂ ತುಂಗೆಯ ಪ್ರೇಮಕ್ಕೆ ಪಾತ್ರನಾದದ್ದು ಹೇಗೆ ಎಂಬ ಅಚ್ಚರಿ ಒಳಗೊಳಗೇ ಇದೆ.
ಒಂದು ಜೀವಕ್ಕೆ ಮತ್ತೊಂದು ಜೀವ ಇದ್ದೇ ಇರುತ್ತದೆ ಎಂಬ ಜಗದ ವೇದಾಂತವನ್ನು ದೃಢಪಡಿಸುವಂತೆಯೇ ತುಂಗೆ ತನ್ನನ್ನು ಸೆಳೆದಿದ್ದಾಳೆ ಎಂದೆನ್ನಿಸಿ ಆ ಕ್ಷಣದ ಖುಷಿಯನ್ನು ಅನುಭವಿಸುತ್ತಾನೆ ಅವನು. ಮನುಷ್ಯರೆನ್ನಿಸಿಕೊಂಡವರ ದಗಲ್ಬಾಜಿತನದ ಎಲ್ಲ ಬಗೆಯ ಅನುಭವಗಳಿಂದ ಹೈರಾಣಾದ ಸಂದರ್ಭದಲ್ಲಿ ಗಂಗೆಯ ಭೇಟಿಯಾಗಿತ್ತು. “ನೀನೇ ಕಣ್ಣೀರೊರೆಸಿಕೊಳ್ಳಬೇಕು, ಒರೆಸುವ ಮನುಷ್ಯ ಕೈಗಳೆಡೆಗಿನ ನಿರೀಕ್ಷೆ ಲಾಭದೊಪ್ಪಂದದ ಲೆಕ್ಕಾಚಾರದ ಬೆಳೆ ತೆಗೆದುಬಿಟ್ಟೀತು ಜೋಕೆ?” ಯಾರದ್ದೋ ಮಾತನ್ನು ಉದ್ಧರಿಸಿ ಯಾವಾಗಲೂ ಎಚ್ಚರಿಸುತ್ತಿದ್ದ ಗಂಗೆಯ ಮಾತುಗಳನ್ನು ಮತ್ತೆ ಮತ್ತೆ ದೃಢಪಡಿಸುತ್ತಿದ್ದ ಪ್ರಸಂಗಗಳು ನಡೆಯುತ್ತಲೇ ಇದ್ದವು.
ಅವುಗಳು ತೀವ್ರವಾಗಿ ಘಾಸಿಗೊಳಿಸಿದ್ದ ವೇಳೆ ತುಂಗೆ ಕಂಡಿದ್ದಳು. ಅಷ್ಟೇ ಅಲ್ಲ, ತನ್ನೊಂದಿಗೆ ಮಾತಿಗೆ ನಿಂತು ಮೊದಲ ನೋಟದಲ್ಲೇ ಸೆಳೆದಿದ್ದಳು. ಮೊದಲ ನೋಟವೆಂದರೆ ಅದು ಮೊದಲ ಸ್ಪರ್ಶದ ಕಥೆಯೇ ಹೌದು. ಅದಕ್ಕೆ ಮಳೆಯೇ ಮುನ್ನುಡಿಯಾಗಿದ್ದನ್ನು ಪ್ರಾಸಂಗಿಕ ಎಂದು ಗುರುತಿಸಬಹುದಾದರೂ ಪ್ರಕೃತಿಯ ಮಧುರ ಕುಮ್ಮಕ್ಕು ಎನ್ನುವುದೇ ಸೂಕ್ತವೇನೋ. ತುಂಗೆಯ ಭೇಟಿ ಜನ್ಮಜನ್ಮಾಂತರಗಳಲ್ಲಿ ಜೊತೆಯಾಗಿ ಬದುಕುವ ಸಂಕಲ್ಪವನ್ನು ಮೂಡಿಸಿತ್ತು.
ಡಾಕ್ಟರು, ಇಂಜಿನಿಯರಿಗಳಿಗಿದ್ದಷ್ಟು ಮಾರ್ಕೆಟ್ಟು ಬರಹಗಾರರಿಗೆಲ್ಲಿದೆ ಎಂಬ ಚುಚ್ಚುಮಾತುಗಳೇ ಕೇಳಿಬರುತ್ತಿದ್ದ ಕಾಲದಲ್ಲಿ ‘ಅವರಿಗಷ್ಟೇ ಅಲ್ಲ, ನಮ್ಮಂಥವರಿಗೂ ಬೆಲೆ ಇದ್ದೇ ಇದೆ’ ಎನ್ನುವ ಆಶಾವಾದ ಮೂಡಿಸುವ ಹಾಗೆ ತುಂಗೆ ಅವನೊಳಗೆ ಮೂಡಿಬಂದಿದ್ದಳು. ಸಿಟಿಯೊಂದರ ಕೆಟ್ಟ ಗಾಳಿಯ ನಡುವೆ ಬದುಕು ಹೊರೆಯುವುದಕ್ಕಾಗಿ ಕೆಲಸ ಮಾಡುತ್ತಿದ್ದ ರಾಮುವಿಗೆ ಮರಳಿ ಊರಿಗೆ ವಾಪಸ್ಸಾಗಿ ಉಳಿಯುವ ತವಕ.
ಹಾಗಾದರೆ, ತನಗೆ ಅತ್ಯಂತ ಇಷ್ಟವಾದ ಬರೆಯುವ ಕೆಲಸಕ್ಕೆ ಊರಲ್ಲಿ ಬೆಲೆಯಿಲ್ಲ. ಸಿಟಿಯಲ್ಲಿದ್ದರೆ ಮಾತ್ರ ಸಂಬಳದ ನೆರವು. ಅವತ್ಯಾವತ್ತೋ ರಾಮು ತನ್ನೂರಿನ ಗಂಗೆಯ ಹರಿವ ನಾದನಿನಾದ ಸೌಂದರ್ಯದ ಬಗ್ಗೆ ಬರೆದ ಬರಹವನ್ನು ಪತ್ರಿಕೆಗೆ ಕಳುಹಿಸಿದ್ದ. ಆ ಪತ್ರಿಕೆಯವರು ಇವನ ಬರೆವ ಪ್ರತಿಭೆಯನ್ನು ಗುರುತಿಸಿ ಕೆಲಸಕ್ಕೆ ನೇಮಿಸಿಕೊಂಡಿದ್ದರು.
ಆ ದೊಡ್ಡ ಮಹಾನಗರದಲ್ಲಿ ಸುದ್ದಿಪತ್ರಿಕೆಯ ಬರೆಯುವ ಕೆಲಸಕ್ಕೆ ಸೇರಿಕೊಂಡ ನಂತರ ರಾಮುವಿನೊಳಗಿನ ಕವಿಮನಸ್ಸನ್ನು ಘಾಸಿಗೊಳಿಸುವ ಅನೇಕಾನೇಕ ಅನುಭವಗಳು ಮತ್ತೆ ಮತ್ತೆ ಆಕ್ರಮಣಗೈಯ್ಯುತ್ತಲೇ ಇದ್ದವು. ಆ ದೊಡ್ಡ ಸಿಟಿ ಮಳೆಯ ಪ್ರವಾಹಕ್ಕೀಡಾಗಿ ತೊಂದರೆಗಳನ್ನೆದುರಿಸಿದ್ದ ನಂತರ ಬಹಳ ವಿಸ್ತಾರವಾದ ತನಿಖಾ ವರದಿ ಸಿದ್ಧಪಡಿಸಿದ್ದ. ಈ ಹಿಂದೆ ಇದ್ದ ಕೆರೆಗಳನ್ನು ಇಲ್ಲವಾಗಿಸಿ ದೊಡ್ಡ ದೊಡ್ಡ ಅಪಾರ್ಟುಮೆಂಟುಗಳಿಗಾಗಿ ಜಾಗವನ್ನು ಮಾರಾಟ ಮಾಡಿದ ಜಾಲವನ್ನು ಪತ್ತೆ ಹಚ್ಚಿ ಎಲ್ಲಿಂದ ಎಲ್ಲಿಯವರೆಗೆ ಲಿಂಕ್ ಇದೆ ಎನ್ನುವುದನ್ನು ಆಧಾರಸಹಿತ ಪ್ರಸ್ತುತಪಡಿಸಿದ್ದ. ಈ ವರದಿಯಿಂದಾಗಿ ಸಿಎಮ್ಮು ಗಾದಿ ಅಲ್ಲಾಡತೊಡಗಿತ್ತು.
ವಿರೋಧ ಪಕ್ಷಗಳವರು ಇದನ್ನೇ ಅಸ್ತ್ರವಾಗಿಸಿಕೊಂಡು ರಾಜೀನಾಮೆ ಆಗ್ರಹಿಸತೊಡಗಿದ್ದರು. ಮುಜುಗರದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಆಡಳಿತ ಪಕ್ಷದವರೇ ಬಲವಂತವಾಗಿ ರಾಜೀನಾಮೆ ಕೊಡಿಸಿ ಮತ್ತೊಬ್ಬ ಅಪಾಯಕಾರಿ ಮನುಷ್ಯನನ್ನು ಸಿಎಂ ಪಟ್ಟದಲ್ಲಿ ಕೂರಿಸಿಬಿಟ್ಟಿದ್ದರು. ಆತ ಅಧಿಕಾರಕ್ಕೆ ಬಂದ ತಕ್ಷಣವೇ ತನ್ನೂರಿನ ಸಮೀಪದಲ್ಲಿ ಭೂಗರ್ಭವನ್ನು ಸೀಳಿ ಜಲದ ಸಿರಿಯನ್ನು ದೋಚುವ ಯೋಜನೆಯನ್ನು ದೊಡ್ಡ ದೊಡ್ಡ ಕಂಪನಿಗಳೊಂದಿಗೆ ಶಾಮೀಲಾಗಿ ಅಂಗೀಕರಿಸಿಬಿಟ್ಟಿದ್ದ.
ವಿರೋಧ ಪಕ್ಷಗಳವರು ಉಸಿರೆತ್ತದಂತೆ ಹಣದ ಆಮಿಷಕ್ಕೀಡುಮಾಡಿ ಖುರ್ಚಿಯನ್ನು ಭದ್ರಪಡಿಸಿಕೊಂಡಿದ್ದ. ಈ ಬಗ್ಗೆ ಇಂಚಿಂಚು ಮಾಹಿತಿ ಸಂಗ್ರಹಿಸಿ ರಾಮು ಬರೆದ ಸುದ್ದಿಗಳು ಆಳುವವರಿಗೆ ಕಿರಿಕಿರಿಯನ್ನುಂಟುಮಾಡಿದ್ದವು. ಆಮೇಲೇನಾಯ್ತೋ ಏನೋ. ಇದಕ್ಕೆ ಸಂಬಂಧಿಸಿದ ವಿವಿಧ ತೆರನಾದ ಬರಹಗಳು ತದನಂತರ ಪ್ರಕಟವಾಗಲೇ ಇಲ್ಲ.
ಪ್ರಕಟವಾಗದೇ ಇರುವುದರ ಬಗ್ಗೆ ಸಂಪಾದಕರು ಸಮಜಾಯಿಷಿ ನೀಡಲೂ ಇಲ್ಲ. ಆ ಪಕ್ಷದ ಭಾರೀ ಆಸಾಮಿಯೇ ಪತ್ರಿಕೆಗೆ ಬಂಡವಾಳ ಹಾಕಿದ್ದನಾದ್ದರಿಂದ ಇಂಥ ವರದಿಗಳು ಬರದಂತೆ ನೋಡಿಕೊಳ್ಳುವ ಮುಂಚೂಣಿ ಜವಾಬ್ದಾರಿ ನಿರ್ವಹಿಸಿ ಸಿಎಂ ಖುರ್ಚಿ ಅಲುಗಾಡದಂತೆ ನೋಡಿಕೊಂಡಿದ್ದ.
ಖುದ್ದು ಸಿಎಂ ಮಗನೇ ನಿಂತುಕೊಂಡು ವಿವಿಧ ಕಡೆಗೆ ಹರಿವ ನೀರಿನ ನೆಲದ ನೆಲೆಗಳನ್ನು ಬಗೆದು ಅಕ್ರಮ ಧಂಧೆಯಲ್ಲಿದ್ದುದನ್ನೂ, ಜೀವಜಲದ ಸಲೆಗಳನ್ನು ಇಲ್ಲವಾಗಿಸಿ ಹರಿವ ಚಲನೆಯ ಶಕ್ತಿಯನ್ನು ಇಲ್ಲವಾಗಿಸುತ್ತಿರುವ ಹುನ್ನಾರಗಳನ್ನು ಕಾಣಿಸುವ ಎಲ್ಲ ಪ್ರಯತ್ನಗಳೂ ನಿಷ್ಪ್ರಯೋಜಕ ಜಕವೆನ್ನಿಸಿದ್ದವು. ಆದರೂ ಛಲಬಿಡದೇ ಬರಹಗಳನ್ನು ಅನಾಮಿಕ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತೇಲಿಬಿಡುತ್ತಿದ್ದ.
ಆದರೆ, ಅಲ್ಲಿರುವವರೆಲ್ಲರೂ ಸದ್ಯದ ಖುಷಿಯ ಅಮಲಲ್ಲಿ ಭವಿಷ್ಯವನ್ನೇ ಮರೆತವಾದ್ದರಿಂದ ಪೂರಕ ಬೆಂಬಲ ಸಿಗುತ್ತಲೇ ಇರಲಿಲ್ಲ. ಫೇಸ್ಬುಕ್ನಲ್ಲಿ ಏನಾದರೂ ಈ ಬಗ್ಗೆ ಬರೆದರೆ ‘ಹೀಗೆ ಯೋಚಿಸುವವರನ್ನು ಅನ್ನ, ನೀರಿಲ್ಲದ ಕಡೆಗೆ ಬಿಟ್ಟು ಬರಬೇಕು, ಆವಾಗಲೇ ಇವರಿಗೆ ಬುದ್ಧಿಬರೋದು’ ಅಂತ ಅತ್ಯಂತ ಕೆಟ್ಟದಾದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದವು. ಪ್ರಬಲರ ಪರವಾದ ಆರಾಧನೆಯ ಭಕ್ತಿ ಭಾವಗಳ ಪ್ರದರ್ಶನ ಹಿಂದೆಂದಿಗಿಂತಲೂ ಹೆಚ್ಚಾಗುತ್ತಲೇ ಇತ್ತು.
ಆ ದೊಡ್ಡ ಸಿಟಿಯಲ್ಲಿದ್ದವರು ಮನುಷ್ಯ ಸಂಬಂಧಗಳ ಸೊಗಡನ್ನೇ ಮರೆತು ಬದುಕನ್ನೇ ಯಾಂತ್ರಿಕಗೊಳಿಸಿಕೊಂಡು ಕಳೆದುಹೋಗಿದ್ದುದು ಅನುಭವಕ್ಕೆ ಬರುತ್ತಲೇ ಇತ್ತು. ಆದರೂ ರಾಮುವಿನೊಳಗೆ ಒಂದಷ್ಟೂ ವ್ಯಥೆಯಿರಲಿಲ್ಲ. ಮನುಷ್ಯ ಜನುಮದ ಸಾರ್ಥಕತೆ ಇರುವುದು ಸಮಾಜಕ್ಕಾಗಿ ಬದುಕನ್ನು ಮೀಸಲಿಟ್ಟಾಗಲೇ ಎಂಬುದನ್ನು ಗುರುಹಿರಿಯರು ಇವನೊಳಗೆ ಬೇರೂರಿಸಸಿಬಿಟ್ಟಿದ್ದರಿಂದ ಜಗತ್ತಿನ ಎಲ್ಲ ಬಗೆಯ ಊನಗಳ ಪ್ರವಾಹದ ವಿರುದ್ಧ ಈಜುವಂಥ ಅದಮ್ಯ ವಿಶ್ವಾಸವನ್ನು ತನ್ನದಾಗಿಸಿಕೊಂಡಿದ್ದ.
ಹಳೆಯದರೊಂದಿಗಿನ ನೆನಪುಗಳಿಂದ ದೂರವಾಗಬಾರದು ಎಂಬ ಕಾರಣದಿಂದಲೇ ತನ್ನೂರಿಗೆ ಮರಳುತ್ತಿದ್ದ ಇವನು ಈ ಗಂಗೆಯ ಮಡಿಲಿನಡೆಗೆ ಮತ್ತೆ ಮತ್ತೆ ವಾಪಸ್ಸಾಗುತ್ತಿದ್ದ. ತನ್ನ ಪ್ರಾಮಾಣಿಕ ಪ್ರಯತ್ನಗಳಿಗೆ ಪೂರಕವಾದ ವಾತಾವರಣ ಇಲ್ಲ ಎಂಬ ಸತ್ಯ ಗೊತ್ತಾಗುತ್ತಲೇ ಮನಸ್ಸು ಬೇಸರಿಸಿಕೊಂಡು ಕುಳಿತುಕೊಳ್ಳುತ್ತಿರಲಿಲ್ಲ. ಹಾಗನ್ನಿಸುತ್ತಲೇ ಅವನು ತನ್ನೂರಿನ ಗಂಗೆಯೆಡೆಗೆ ಬಂದುಬಿಡುತ್ತಿದ್ದ. ಒಂದಷ್ಟು ಚೇತರಿಸಿಕೊಂಡು ಮತ್ತೆ ಮಹಾನಗರದ ಸಂತೆಗೆ ಮರಳಿಬಿಡುತ್ತಿದ್ದ.
ಎಲ್ಲವೂ ಸರಿಯಿಲ್ಲ ಎನ್ನುವ ನೋವುಗಳ ಮಧ್ಯೆಯೇ ಇವನು ಮಧುರ ಭಾವಗಳ ತೆಕ್ಕೆಗೀಡಾಗಿ ಕವಿತೆ ಗೀಚುವುದನ್ನು ಬಿಟ್ಟಿರಲಿಲ್ಲ. ವರದಿಗಾರ ಕವಿಯಾಗಬಾರದು ಎಂಬ ಕಠಿಣ ಕಾನೂನೇನೂ ಇಲ್ಲವಲ್ಲ ಎಂಬ ಹುಮ್ಮಸ್ಸಿನೊಂದಿಗೇ ಇವನ ಕಾವ್ಯನಿನಾದ ಹೊರಹೊಮ್ಮುತ್ತಿತ್ತು…….. ಗಗನಕ್ಕೆ ಈಗ ಚಿತ್ರ ಬರೆಯುವಾಸೆ; ಕಾರಣ ಕೆದಕಿದರೆ ಅದು ನಿನ್ನ ಕಡೆಗೇ ನೋಟ ನೆಡುತ್ತಿದೆ…. ತಣ್ಣನೆಯ ಗಾಳಿಗೆ ತರುಣನಾಗುವ ಕನಸು; ವಿಚಾರಿಸಿದರೆ ಅದು ನಿನ್ನದೇ ಧ್ಯಾನದಲ್ಲಿದೆ… ನೀರಿಗೆ ನಿನ್ನ ಸ್ಪರ್ಶದ ತವಕ; ಕೇಳಿದರೆ ಅದು ನಿನ್ನ ನೆರವಿನಿಂದ ಶುದ್ಧವಾಗುವ ಹಂಬಲದಲ್ಲಿದೆ.
ಹೂವಿಗೆ ನಿನ್ನನ್ನೇ ತನ್ನ ಬಣ್ಣವಾಗಿಸಿಕೊಳ್ಳುವ ಉತ್ಸಾಹ; ಸಕಾರಣ ಹುಡುಕಿದರೆ ಅದರ ತುಂಬ ನಿನ್ನದೇ ಪ್ರತಿಬಿಂಬ…ಬೇರು ಮರವಾಗುವ ಬದಲು ಮನುಜನಾಗಲು ಪಟ್ಟು ಹಿಡಿದಿದೆ; ಅದಕ್ಕೆ ನಿನ್ನ ಇರುವಿನ ಉಳಿವು ಸಿಕ್ಕಿದೆ… ಹಸಿರ ಸಿರಿ ನಿನ್ನನ್ನೇ ತನ್ನ ಆಭರಣವಾಗಿಸುವ ಆತುರದಲ್ಲಿದೆ; ನೋಡಿದರೆ ಅದರ ಕಣ್ಣಲ್ಲಿ ನಿನ್ನದೇ ಗುನುಗು…. ಸದಾ ನಿನ್ನವನಾಗುವ ಪ್ರೀತಿ; ಅದರ ಪ್ರಭೆ ಕಾರಣ ಕೇಳುವ ಮನಸ್ಸುಗಳನ್ನು ಸುಮ್ಮನಾಗಿಸಿದೆ.. ಅದ್ಯಾವುದೋ ಅಮೃತಘಳಿಗೆಯಲ್ಲಿ ಇವನಿಂದ ಬರೆಸಿಕೊಂಡಿದ್ದ ಕವಿತೆಯನ್ನು ಓದಿದ ಕ್ಷಣದಿಂದಲೇ ತುಂಗೆಯ ಮಾಧುರ್ಯದ ಸುಳಿವು ಸಿಕ್ಕಿಬಿಟ್ಟಿತ್ತು. ತುಂಗೆಗಾಗಿಯೇ ಈ ಸಾಲುಗಳು ಹೊಳೆದಿದ್ದವು ಎಂಬುದನ್ನು ಆಕೆಯ ಫೋಟೋ ನೋಡಿದ ತಕ್ಷಣ ರಾಮುವೇ ಸ್ವತಃ ಸ್ಪಷ್ಟಪಡಿಸಿಕೊಂಡಿದ್ದ.
ಈ ಸಾಲುಗಳನ್ನು ಓದಿದ ತಕ್ಷಣವೇ ತುಂಗೆಯು ಇವನನ್ನು ಭೇಟಿಯಾಗುವ ಹಂಬಲವನ್ನು ವ್ಯಕ್ತಪಡಿಸಿದ್ದಳು. ರಾಮುವಿಗೆ ಇದು ಆಧುನಿಕ ಕಾಲದ ಅತ್ಯದ್ಭುತ ರಮ್ಯ ಪವಾಡ ಎನ್ನಿಸಿಬಿಟ್ಟಿತ್ತು. ಭೇಟಿಯಾದಾಗಲಂತೂ ಮತ್ತೂ ಖುಷಿಯಾಗಿತ್ತು.
ಅವಳು ತನ್ನೆಡೆಗೆ ಎಸೆದ ಮೊದಲ ಪ್ರಶ್ನೆ ಘಾಸಿಗೊಳಿಸಿತ್ತಾದರೂ ಅದರ ಹಿಂದಿನ ಉದ್ದೇಶ ತಿಳಿದುಕೊಂಡ ನಂತರ ಇವನು ನಿರಾಳವಾಗಿದ್ದ. ಹೆತ್ತವರು ಮನುಷ್ಯರಲ್ಲದವರು ರೂಪಿಸಿದ ಕಟ್ಟು-ಕಟ್ಟಳೆಗಳ ಭಯದಲ್ಲಿ, ಮರ್ಯಾದೆ ಹೋಗುತ್ತದೆ ಎಂಬ ಅಳುಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ತನ್ನನ್ನು ಅನಾಥಳನ್ನಾಗಿಸಿದ ವೇದನೆಯ ಕಥೆಯನ್ನು ನಿವೇದಿಸಿಕೊಂಡಾಗಲಂತೂ ತನ್ನ ಕಥೆಯೂ ಅಂಥದ್ದನ್ನೇ ಹೋಲುತ್ತದಲ್ಲ ಎಂದುಕೊಂಡಿದ್ದ.
ಜಗಕ್ಕೆ ಹೆದರಬಾರದು, ನಾವೂ ಬದುಕಿ, ಮಗುವನ್ನೂ ಉಳಿಸಿ ಮನುಷ್ಯತ್ವದ ಮೌಲ್ಯ ಸಾರಬೇಕು ಎಂಬ ಅವಳೊಳಗಿನ ಸಂಕಲ್ಪ ಇವನೊಳಗೆ ಅದಮ್ಯ ಚೈತನ್ಯವನ್ನು ಮಿಂಚಿಸಿತು. ಇಬ್ಬರೂ ಒಂದಾಗುವ ಸಂಕಲ್ಪ ತೊಟ್ಟರು. ಅಷ್ಟರಲ್ಲಾಗಲೇ ತನ್ನನ್ನು ಯಾವತ್ತೂ ತೊಡವಿಕೊಳ್ಳುತ್ತಿದ್ದ ಯುವಕರ ಗುಂಪೊಂದು ತಮ್ಮೆಡೆಗೆ ಬರುತ್ತಿರುವುದು ಕಂಡಿತು.
ನೋಡಿದ ತಕ್ಷಣವೇ ರಾಮುವಿಗೆ ಹಿಂದಿನ ಕಹಿಪ್ರಸಂಗಗಳು ನೆನಪಾದವು. ತನ್ನ ಬರಹಗಳ ಕಾರಣಕ್ಕಾಗಿಯೇ ತನ್ನನ್ನು ಕೊಲ್ಲಿಸುವ ಪ್ರಯತ್ನಗಳು ನಡೆದಿದ್ದವು. ಹೇಗೋ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದ. ಈಗ ಅದೇ ಗುಂಪು ತಮ್ಮೆಡೆಗೆ ಬರುತ್ತಿರುವುದನ್ನು ನೋಡಿದ. ಗುಂಪಿನಲ್ಲಿದ್ದವನು ಜಾತಿ, ಧರ್ಮದ ಗೊಡವೆಯಿಲ್ಲದ ಇಂಥ ನಾಯಿಗಳಿಗೆ ಪಾಠ ಕಲಿಸಬೇಕು ಎಂದು ಕೂಗಿ ಹೇಳುತ್ತಾ ಕತ್ತಿ ಝಳಪಿಸುತ್ತಾ ಉಳಿದವರಿಗೆ ಕುಮ್ಮಕ್ಕು ನೀಡುತ್ತಿದ್ದ. ಅದನ್ನು ನೋಡಿದ ತುಂಗೆಗೆ ಸ್ಪಷ್ಟವಾಗಿ ಹೋಯಿತು. ತನ್ನ ಬಂಧುಗಳೂ ಇವರೊಂದಿಗೆ ಸೇರಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಯಿತು.
ಇಬ್ಬರೂ ಆ ಕ್ಷಣಕ್ಕೆ ಗಂಗೆಯ ಮಡಿಲಿಗೆ ಧುಮುಕಿದರು. ಅವರು ದುಂಬಾಲು ಬಿದ್ದಿದ್ದರು. ಇವರಿಬ್ಬರ ನಡುವಿನ ಪ್ರೇಮದ ಜೀವಕಾರುಣ್ಯ ಕೊಲೆಗೈಯ್ಯುವವರಿಗೆ ಸವಾಲೆನ್ನಿಸಬಿಟ್ಟಿತ್ತು. ಇಬ್ಬರೂ ಬದುಕುವ ಪಣ ತೊಟ್ಟಿದ್ದರು. ನೀವು ಕೊಲ್ಲುವ ಹಠ ತೊಟ್ಟ ಮಾತ್ರಕ್ಕೆ ನಾವು ಸಾಯಲು ಸಿದ್ಧರಿಲ್ಲ ಎನ್ನುವುದನ್ನು ನಿರೂಪಿಸಲು ಸನ್ನದ್ಧವಾದಂತಿತ್ತು ಇಬ್ಬರ ಜೋಡಿ. ಅವರ ಬದುಕಿನ ಪ್ರೀತಿಯ ಉತ್ಸಾಹಕ್ಕೆ ಸಾಕುತಾಯಿ ಗಂಗೆ ಸಾಥಿಯಾಗಿದ್ದಳು. ತನ್ನ ಮಡಿಲಿಗೆ ಬಿದ್ದ ಈ ಎರಡೂ ಜೀವಗಳು ತನ್ನ ಬೆಂಬಲದ ಬಲದಲ್ಲಿ ಅರಳಿಕೊಳ್ಳಬೇಕು.
ಹಾಗೆ ಅರಳಿಕೊಳ್ಳುತ್ತಲೇ ಜಗಕ್ಕೆ ಮಾದರಿಯಾಗಬೇಕು. ಒಂದಾಗುವ ಜೀವಗಳನ್ನು ಇಲ್ಲವಾಗಿಸುವ ಜಗದ ಕ್ರೌರ್ಯ ಇಲ್ಲವಾಗಿಬಿಡಬೇಕು. ಹಾಗಂತ ತಾನು ಹರಿಯುವ ವ್ಯಾಪ್ತಿಯ ನೆಲದ ಹಾದಿಯಲ್ಲೆಲ್ಲಾ ಸಾರುತ್ತಾ ಕರೆದೊಯ್ದಳು. ಹಿಂದೆಂದಿಗಿಂತಲೂ ಹೆಚ್ಚಿನ ವೇಗದಲ್ಲಿ ಹರಿದಳು. ದೂರದೂರಕ್ಕೆ ಬಹುದೂರದವರೆಗೆ ಇವರಿಬ್ಬರನ್ನು ತೇಲಿಸಿಕೊಂಡು ಹರಿಯುತ್ತಲೇ ಇದ್ದಳು. ಮನುಷ್ಯಲೋಕದ ಯಾವ ಬಗೆಯ ಕ್ರೌರ್ಯವೂ ಇಲ್ಲದ ಆವರಣಕ್ಕೆ ಇವರನ್ನು ಸೇರಿಸಿಬಿಡಬೇಕು ಎಂಬ ಛಲ ಅವಳೊಳಗೆ ಎಲ್ಲಿಲ್ಲದ ಶಕ್ತಿಯನ್ನು ನೆಲೆಗೊಳಿಸಿತ್ತು. ಇಬ್ಬರನ್ನೂ ಜೋಡಿಯಾಗಿಸಿ ದಡಕ್ಕೆ ತಂದು ಮಲಗಿಸಿಬಿಟ್ಟಳು.
ಆ ಕ್ಷಣಕ್ಕೆ ನಿಸರ್ಗ ಮರುಕಪಟ್ಟಿತು. ಈ ಎರಡೂ ಜೀವಗಳು ಇಲ್ಲವಾದರೆ ಹೇಗೆ? ಎಂದು ಅದು ಕೊರಗುತ್ತಿದೆಯೇನೋ ಎನ್ನುವ ಹಾಗೆ ಸ್ತಬ್ಧವಾಗಿತ್ತು. ಅಷ್ಟರಲ್ಲಿ ರಾಮುವಿನ ಕೈಯ ಮೇಲಿದ್ದ ತುಂಗೆಯ ಕೈ ಸಣ್ಣಗೆ ಅಲುಗಾಡಿತು. ಅವರಿಬ್ಬರ ಕಣ್ಣರೆಪ್ಪೆಗಳು ಮಿಟುಕಿದವು. ಅವರಿಗೆ ನೀರಿಗೆ ಧುಮುಕಿದ್ದಷ್ಟೇ ನೆನಪು. ಇವರ ಮುಂದೆ ದಂಡೆಯ ಬಹುದೊಡ್ಡ ಪ್ರದೇಶ ಅನಂತವಾಗಿ ವ್ಯಾಪಿಸಿಕೊಂಡಂತೆ ಭಾಸವಾಯಿತು. ಅಲ್ಲಿ ಯಾವುದೇ ಬಗೆಯ ಚೌಕಟ್ಟುಗಳಿಲ್ಲ ಎಂಬುದನ್ನು ನೀಲಾಕಾಶ ದೃಢಪಡಿಸುತ್ತಿತ್ತು.
ಅದರೆಡೆಗೆ ನೋಡುತ್ತಲೇ ಇವರಿಬ್ಬರೊಳಗಿನ ಜೀವನೋತ್ಸಾಹ ಚಿಗುರಿಕೊಂಡಿತು. ಎದ್ದು ನಡೆಯಲಾರಂಭಿಸಿದರು. ಈ ಎರಡೂ ಜೀವಗಳು ಜೊತೆಯಾಗಿ ನಡೆಯುತ್ತಿರುವ ಸಂಭ್ರಮವನ್ನು ನಿಸರ್ಗ ಕಣ್ಣುತುಂಬಿಕೊಂಡಿತು. ಅವರ ಹೆಜ್ಜೆಗುರುತುಗಳ ಒಳಗೇ ತನ್ನ ಸೌಂದರ್ಯ ವಿಸ್ತಾರವಾಗುವ ಪರಿಯ ಸೊಬಗನ್ನು ಕಲ್ಪಿಸಿಕೊಂಡಿತು. ಇದಕ್ಕೆ ಸಮ್ಮತಿ ಸೂಚಿಸುವಂತೆ ಅಲ್ಲಿದ್ದ ಹೂವುಗಳೆಲ್ಲವೂ ತಮ್ಮ ಅಂದವನ್ನು ಹೆಚ್ಚಿಸಿಕೊಂಡಿದ್ದವು. ಗಂಗೆ ನಕ್ಕಳು. ಅವಳೊಳಗೆ ನೀರಿನಲೆಗಳ ಮಾಧುರ್ಯದ ನಿನಾದ ಹೊಮ್ಮುತ್ತಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
~ಯೋಗೇಶ್ ಮಾಸ್ಟರ್, ಚಿಂತಕರು
ಆಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.
ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!
ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!
ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.
ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.
ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.
ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!
ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂತರಂಗ6 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ3 days agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ4 days agoKPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
ದಿನದ ಸುದ್ದಿ3 days agoಇಂಗ್ಲಿಷ್ ಕಲಿಯಲು ಬಂದ ಜಪಾನ್ ಯುವಕ ಜೈಲು ಸೇರಿದ ; 75000 ಪರಿಹಾರ ಪಡೆದ
-
ದಿನದ ಸುದ್ದಿ4 days agoಸರ್ವರ್ ಡೌನ್, ಅಧಿಕಾರಿಗಳ ವಿಳಂಬ: ‘ಎ-ಖಾತೆ’ಗಾಗಿ ಕಾದು ಕುಳಿತ 60 ಸಾವಿರಕ್ಕೂ ಹೆಚ್ಚು ಅರ್ಜಿದಾರರು!
-
ದಿನದ ಸುದ್ದಿ4 days ago₹25 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶಕ್ಕೆ: ರಾಜಾಜಿನಗರ ಬಡಾವಣೆಯಲ್ಲಿ ಅನಧಿಕೃತ ನಿರ್ಮಾಣಕ್ಕೆ ಬಿತ್ತು ಬೀಗ
-
ದಿನದ ಸುದ್ದಿ4 days agoಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ

