Connect with us

ದಿನದ ಸುದ್ದಿ

ಅಂಗನವಾಡಿ ಟೀಚರ್ ಮಕ್ಕಳ ‌ಯಶೋಗಾಥೆ..!

Published

on


ಅವರು ಡಿವೈಎಸ್ಪಿ , ಪತ್ನಿ ಡಾಕ್ಟರ್. ಇವರಿಬ್ಬರ ತಾಯಂದಿರು ಅಂಗನವಾಡಿ ಟೀಚರ್. ಮಕ್ಕಳ ಸಾಧನೆಗೆ ಈ ಹೆತ್ತಮ್ಮನೇ ಕಾರಣ. ಅಮ್ಮನ ದಿನಾಚರಣೆ ನಿಮಿತ್ತ ಸಣ್ಣ ಲೇಖನ. ತಪ್ಪದೇ ಓದಿ.ಇದರೊಳಗೆ ನೋವು, ನಲಿವು, ಪ್ರೀತಿಯ ಹೂರಣವಿದೆ.


ಸುದ್ದಿದಿನ,ದಾವಣಗೆರೆ : ಅವರೊಬ್ಬ ಉತ್ತಮ, ದಕ್ಷ ಪೊಲೀಸ್ ಅಧಿಕಾರಿ. ಪತ್ನಿ ಮಾವಿನಕಟ್ಟೆಯಲ್ಲಿ ವೈದ್ಯೆ. ಇಬ್ಬರದ್ದು ಸರಳ ಜೀವನ. ಇವರ ಸುಖೀ ಬದುಕಿಗೆ ಕಾರಣ ಆದವರೇ ಹೆತ್ತ ತಾಯಿ !

ಹೌದು, ಚನ್ನಗಿರಿ ಡಿವೈಎಸ್ಪಿ ಡಾ.ಸಂತೋಷ್ ಹಾಗೂ ಪತ್ನಿ ಡಾ.ಪವಿತ್ರಾ ಅವರ ಸಾಧನೆ ಹಿಂದೆ ತಾಯಿ ಇದ್ದಾರೆ. ಇವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಡಿವೈಎಸ್ಪಿ ಸಂತೋಷ್ ತಾಯಿ ಸುವರ್ಣಮ್ಮ, ಪತ್ನಿ ಪವಿತ್ರರ ತಾಯಿ ಹಾಲಮ್ಮ. ಇವರಿಬ್ಬರು ಕೂಡ ಅಂಗನವಾಡಿ ಕಾರ್ಯಕರ್ತೆಯರು ಎಂಬುದು ಒಂದು ವಿಶೇಷ. ಹಾಗೆ ಕಾಕಾತಾಳೀಯ ಕೂಡ.

ಈ ಇಬ್ಬರೂ ತಾಯಂದಿರು ಜೀವನದಲ್ಲಿ ಮಕ್ಕಳನ್ನು ಓದಿಸಿ, ಉನ್ನತ ಸ್ಥಾನಕ್ಕೆ ತಲುಪಿಸುವಲ್ಲಿ ಅಗಾಧ ಶ್ರಮ ಪಟ್ಟಿದ್ದಾರೆ.
ಡಿವೈಎಸ್ಪಿ ತಾಯಿ ಸುವರ್ಣಮ್ಮರ ತವರುಮನೆ ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ. ಅಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ಡಾ.ಪವಿತ್ರಾ ಅವರ ತಾಯಿ ಹಾಲಮ್ಮ ಕೊಟ್ಟೂರು ಬಳಿಯ ಐನಳ್ಳಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಬ್ಬರು ಸ್ನೇಹಿತೆಯರಾಗಿದ್ದರು ಅನ್ನೋದು ಮತ್ತೊಂದು ವಿಶೇಷ. ಇವರಿಬ್ಬರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಸದಾ ಚರ್ಚೆ ಮಾಡುತ್ತಿದ್ದರು.

ಅದು 1981ರ ಕಾಲ. ಡಿವೈಎಸ್ಪಿ ಸಂತೋಷ್ ತಾಯಿ ಕಾನಾಹೊಸಹಳ್ಳಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿರುತ್ತಾರೆ. ಆ ಸಣ್ಣ ಆದಾಯ ದಿಂದಲೇ ಮಕ್ಕಳನ್ನು ಓದಿಸುತ್ತಾರೆ. ಕುಟುಂಬದ ಆರ್ಥಿಕ ಸ್ಥಿತಿ ಹೇಳತೀರದು. ಯಥೇಚ್ಛ ಬಡತನ. ಅಷ್ಟಿದ್ದರೂ ಮಕ್ಕಳ ಶಿಕ್ಷಣಕ್ಕೆ ಕೊರತೆ ಮಾಡಲಿಲ್ಲ.

ನಿತ್ಯ ಬೆಳಗ್ಗೆ ಹತ್ತರಿಂದ ಮಧ್ನಾಹ್ನ 1 ಗಂಟೆವರೆಗೂ ಅಂಗನವಾಡಿಯಲ್ಲಿ ಕೆಲಸ. ಬಳಿಕ ಮನೆಯಲ್ಲಿ ಮಕ್ಕಳ ಪಾಲನೆ. ರಜೆ ಇದ್ದ ವೇಳೆ ಹೊಲದಲ್ಲಿ ಕೆಲಸ. ಅಲ್ಲದೇ ಇವರ ತಾಯಿ ಆಗಿನ ಕಾಲದಲ್ಲಿಯೇ ಬಿಎ., ಓದಿದ್ದವರು. ಮೊದಲು ತಾನು ಓದಿಕೊಂಡು, ನಂತರ ಮಗನಿಗೆ ಹೇಳಿಕೊಡುತ್ತಿದ್ದರು. ಸಂತೋಷ್ 1 ರಿಂದ 8 ನೇ ತರಗತಿವರೆಗೂ ತಾಯಿಯೇ ಪಾಠ ಮಾಡುತ್ತಿದ್ದರು.

ಮಳೆಗೆ ಬಿದ್ದ ಮನೆ

ಡಿವೈಎಸ್ಪಿ ಸಂತೋಷ್‌ಗೆ ಓದುವ ಹಂಬಲ. ಎಸ್ಸೆಸ್ಸೆಲ್ಸಿಯಲ್ಲಿ ಕೂಡ್ಲಿಗಿ ತಾಲೂಕಿಗೆ ಟಾಪರ್ ಆಗಿದ್ದರು. ಹೀಗಿರುವಾಗ ಒಂದು ದಿನ ಜೋರಾದ ಮಳೆಗೆ ಮಣ್ಣಿನಿಂದ ಕಟ್ಟಿದ ಮನೆ ಬಿದ್ದಿತ್ತು. ಮೊದಲೇ ಸಂಕಷ್ಟ, ಆ ಕಷ್ಟದಲ್ಲಿ ಈ ಸಮಸ್ಯೆ. ಆದರೂ ಎದೆಗುಂದದ ತಾಯಿ ಸುವರ್ಣಮ್ಮ ಬಿದ್ದ ಮನೆ ಬಾಗಿಲಿಗೆ ಪರದೆಯೊಂದನ್ನು ಕಟ್ಟಿದರು. ಮೂರು ಇಟ್ಟಿಗೆಯಿಟ್ಟು ಒಲೆ ಹೂಡಿ ಅಡುಗೆ ಮಾಡಿ ಇಡೀ ಕುಟುಂಬಕ್ಕೆ ಅನ್ನ ಹಾಕುತ್ತಿದ್ದರು.

ಸಂತೋಷ್ ಈ ಮುರಿದ ಮನೆ ಹೊರಗಡೆ ಕೂತು ಓದಿದರು. ಅಮ್ಮನ ಪ್ರೇರಣೆಯೇ ನಾನೀಗ ಡಿವೈಎಸ್ಪಿ ಹುದ್ದೆಯಲ್ಲಿದ್ದು ಸರಕಾರೀ ಸೇವೆ ಸಲ್ಲಿಸಲು ಒಂದು ಅವಕಾಶ ದೊರೆಯಿತು.
ಪತ್ನಿ ಡಾ.ಪವಿತ್ರಾಮನೆಯಲ್ಲಿಯೂ ಇದೇ ಪರಿಸ್ಥಿತಿ ಇತ್ತು. ಕೊಟ್ಟೂರು ಇವರ ಸ್ವಂತ ಊರು. ಕೆ. ಐನಳ್ಳಿಯಲ್ಲಿ ತಾಯಿ ಹಾಲಮ್ಮ ಅಂಗನವಾಡಿ ಕಾರ್ಯಕರ್ತೆಯಾಗಿರುತ್ತಾರೆ.

ತಂದೆ ಪ್ರಗತಿ ಕೃಷ್ಣ ಬ್ಯಾಂಕ್‌ನಲ್ಲಿ ಡಿ.ದರ್ಜೆ ನೌಕರರಾಗಿರುತ್ತಾರೆ. ಇವರು ಕೂಡ ಆಗಿನ ಕಾಲಕ್ಕೆ ಪಿಯುಸಿ ಓದಿದ್ದರು., ಮಗಳನ್ನು ವೈದ್ಯೆಯನ್ನಾಗಿ ಮಾಡುವ ಹಂಬಲ ಕನಸು ಹೊತ್ತಿರುತ್ತಾರೆ. ಮಗಳು ಕೂಡ ಅಷ್ಟೇ ಚೆನ್ನಾಗಿ ಓದುತ್ತಿದ್ದ ವೇಳೆ ಸಿಇಟಿಯಲ್ಲಿ 2400 ನೇ ರಾಂಕ್ ಗಳಿಸುತ್ತಾರೆ. ಬಳ್ಳಾರಿಯ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಗುತ್ತದೆ. ಆಗ ಕಾಲೇಜಿಗೆ 16,000 ರೂ. ಬೀಸು ಕಟ್ಟಬೇಕಾಗಿರುತ್ತದೆ. ಆದರೆ ಅಷ್ಟೋಂದು ಹಣ ತಾಯಿ ಬಳಿ ಇರಲಿಲ್ಲ.

ಹೀಗಿರುವಾಗ ಸಂಬಂಧಿಕರೊಬ್ಬರು ಒಡವೆಗಳನ್ನು ಅಡ ಇಟ್ಟು ಹಣ ಕೊಡುತ್ತಾರೆ. ಅಲ್ಲಿಯೂ ಕೂಡ ತಾಯಿ ಪಾತ್ರ ದೊಡ್ಡದು. ಶಿವಮೊಗ್ಗದಲ್ಲಿ ಸೀಟು ಸಿಗುತ್ತದೆ. ಅಲ್ಲಿಂದ ಗುರಿ ಬೆನ್ನತ್ತಿದ್ದ ಪವಿತ್ರಾ ವೈದ್ಯರಾಗಿ ಹೊರ ಹೊಮ್ಮುತ್ತಾರೆ. ಒಟ್ಟಾರೆ ಇವರಿಬ್ಬರ ಸಾಧನೆ ಹಿಂದೆ ಅಂಗನವಾಡಿಯಾಗಿ ಕೆಲಸ ಮಾಡಿದ ತಾಯಿಯರ ಪರಿಶ್ರಮ ಇದೆ. ತ್ಯಾಗ ಇದೆ. ಅದು‌ ಈಗ ಫಲ ಕೊಡುತ್ತಿದೆ..ಹ್ಯಾಟ್ಸ್ ಆಫ್ ಅಮ್ಮ.

ಡಿವೈಎಸ್ಪಿ ಸಂತೋಷ್‌ ಕೂಡ ಸಿಇಟಿಯಲ್ಲಿ ರಾಂಕ್ ಗಳಿಸುತ್ತಾರೆ. ಬಳ್ಳಾರಿಯಲ್ಲಿ ಮೆಡಿಕಲ್ ಸೀಟು ಸಿಕ್ಕಿರುತ್ತದೆ. ಆದರೆ ಅಲ್ಲಿನ ಕೆಲ ಯುವಕರು ಇವರಿಗೆ ರಾಗಿಂಗ್ ಮಾಡಿರುತ್ತಾರೆ. ಮನಸ್ಸಿಗೆ ಘಾಸಿ ಆಗಿ ವಾಪಸ್ ಕಾನಹೊಸಳ್ಳಿಗೆ ಬರುತ್ತಾರೆ. ಊರಿನ ಜನ ಆಡಿಕೊಂಡರೂ, ತಾಯಿ ಮಾತ್ರ ಛಲ ಬಿಡದೇ ಮಗನನ್ನು ಓದಿಸುತ್ತಾರೆ. ನಂತರ ಉತ್ತರ ಪ್ರದೇಶದ ಬರೇಲಿಗೆ ಹೋಗುತ್ತಾರೆ.

ಅಲ್ಲಿ ತನ್ನ ಸ್ನೇಹಿತ ಐಪಿಎಸ್ ಕೋಚಿಂಗ್ ಓದುವುದನ್ನು ನೋಡಿ ಪ್ರೇರಿತರಾಗಿ ಯುಪಿಎಸ್ಸಿ ಎಕ್ಸಾಂ ಬರೆಯುತ್ತಾರೆ. ಪ್ರಿಮಲರಿ, ಮೇನ್ಸ್ ಆ ಪಾಸ್ ಮಾಡುತ್ತಾರೆ. ಅಂತಿಮ ಕ್ಷಣದಲ್ಲಿ ಲಿಸ್ಟ್‌ನಲ್ಲಿ ಹೆಸರು ಇರೋದಿಲ್ಲ. ಮತ್ತೆ ಸಿಇಟಿ ಬರೆಯುತ್ತಾರೆ ವೆಟನರಿಯಲ್ಲಿ ಸೀಟು ಸಿಗುತ್ತದೆ. ಅದನ್ನು ಮುಗಿಸಿ ಕೆಪಿಎಸ್ಸಿ ಎಕ್ಸಾಂ ಬರೆಯುತ್ತಾರೆ. ಮೊದಲ ಲಿಸ್ಟ್‌ನಲ್ಲಿಯೇ ಆಯ್ಕೆ ಆಗಿ ಆಲೂರಿನಲ್ಲಿ ವೈದ್ಯರಾಗಿ ಡ್ಯೂಟಿ ಮಾಡುತ್ತಾರೆ. ಬಳಿಕ ಕೆಎಸ್‌ಪಿಎಸ್‌ ಎಕ್ಸಾಂ ಬರೆದು ಡಿವೈಎಸ್ಪಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ.


  • ಬಡತನದಲ್ಲಿಯೂ ನನ್ನ ತಾಯಿ ಹಾಗೂ ನನ್ನ ಪತ್ನಿ ತಾಯಿ ಅಂಗನವಾಡಿ ಕಾರ್ಯಕರ್ತೆಯರಾಗಿ ಕೆಲಸ ಮಾಡಿ ನಮ್ಮನ್ನು ಓದಿಸಿದ್ದಾರೆ. ನಮ್ಮ ಈ ಶ್ರಮಕ್ಕೆ ತಾಯಿಯೇ ಕಾರಣ. ಅಂಗನವಾಡಿ ಟೀಚರ್ ಆಗಿ ಮಕ್ಕಳನ್ನು ಓದಿಸೋದಕ್ಕೆ ಆಗೋದಿಲ್ಲ ಎನ್ನುವವರಿಗೆ ನಮ್ಮಿಬ್ಬರ ತಾಯಂದಿರು ಸ್ಫೂರ್ತಿ ಆಗಬಲ್ಲರು.

| ಡಾ.ಸಂತೋಷ್, ಡಿವೈಎಸ್ಪಿ


ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಎಸ್‌ಎಸ್‌ಎಲ್‌ಸಿ ಫಲಿತಾಂಶ| ಗುರುಕುಲ ಶಾಲೆಯ ವಿದ್ಯಾರ್ಥಿಗಳ ಭರ್ಜರಿ ಸಾಧನೆ; ಶೇ. 98 ಅಂಕಗಳೊಂದಿಗೆ ಮದಿಹಾ ಅಗ್ರಸ್ಥಾನ

Published

on

ಸುದ್ದಿದಿನ,ದಾವಣಗೆರೆ: 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ನಗರದ ಪ್ರತಿಷ್ಠಿತ ಶಾಲೆಗಲ್ಲಿ ಒಂದಾದ ಗುರುಕುಲ ಶಾಲೆ (Gurukul School) ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಮ್ಮೆ ತನ್ನ ವರ್ಚಸ್ಸನ್ನು ಸಾಬೀತುಪಡಿಸಿದೆ. ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿನಿ ಮದಿಹಾ ಸಾಧನೆಯ ಶಿಖರದಲ್ಲಿ

ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಮದಿಹಾ ಅವರು ಒಟ್ಟು ಶೇ. 98 ಅಂಕಗಳನ್ನು ಗಳಿಸುವ ಮೂಲಕ ಶಾಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಸಾಧನೆಗೈದಿದ್ದಾರೆ. ಈಕೆಯ ಸಾಧನೆಯು ಸಹಪಾಠಿಗಳಿಗೆ ಮತ್ತು ಕಿರಿಯ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ. ಅಲ್ಲದೇ ಕುಶಾಲ್‌ ಶೇ. 97 ದ್ವಿತೀಯ ಹಾಗೂ ಸಮರ್ಥ್‌ 95.5 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ಗಮನ ಸೆಳೆದ ಫಲಿತಾಂಶ: ಈ ಬಾರಿಯ ಫಲಿತಾಂಶದಲ್ಲಿ ವಿದ್ಯಾರ್ಥಿಗಳ ಸಾಧನೆ ಮೆಚ್ಚುವಂತಿದೆ.

ಡಿಸ್ಟಿಂಕ್ಷನ್ ಸಾಧಕರು: 15 ವಿದ್ಯಾರ್ಥಿಗಳು ಶೇ. 90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ.
ಪ್ರಥಮ ಶ್ರೇಣಿ: ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಉತ್ತಮ ಫಲಿತಾಂಶ: ಉಳಿದ ಎಲ್ಲಾ ವಿದ್ಯಾರ್ಥಿಗಳು ಸಹ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕ ಶಾಲೆಯು ನೂರಕ್ಕೆ ನೂರರಷ್ಟು ಫಲಿತಾಂಶದತ್ತ ದಾಪುಗಾಲು ಹಾಕಿದೆ.

ಯಶಸ್ಸಿನ ಹಿಂದಿನ ಶಕ್ತಿ:

ವಿದ್ಯಾರ್ಥಿಗಳ ಈ ಭವ್ಯ ಸಾಧನೆಗೆ ಶಾಲೆಯ ವ್ಯವಸ್ಥಿತ ಮಾರ್ಗದರ್ಶನವೇ ಕಾರಣ ಎಂದು ಆಡಳಿತ ಮಂಡಳಿ ತಿಳಿಸಿದೆ. ಶಾಲಾ ಕಾರ್ಯದರ್ಶಿ ಅಬ್ದುಲ್ ಸರ್ ಅವರ ನಿರಂತರ ಮಾರ್ಗದರ್ಶನ, ಆಡಳಿತ ಮಂಡಳಿಯ ಬೆಂಬಲ, ಮುಖ್ಯೋಪಾಧ್ಯಾಯರ ಸಮರ್ಥ ನಾಯಕತ್ವ ಹಾಗೂ ಶಿಕ್ಷಕ ವೃಂದದವರ ಅವಿರತ ಪರಿಶ್ರಮ ಈ ಯಶಸ್ಸಿಗೆ ಬುನಾದಿಯಾಗಿದೆ.

ಈ ಕುರಿತು ಸಂತಸ ವ್ಯಕ್ತಪಡಿಸಿರುವ ಶಾಲಾ ಕಾರ್ಯದರ್ಶಿ ಅಬ್ದುಲ್‌, “ವಿದ್ಯಾರ್ಥಿಗಳ ಏಕಾಗ್ರತೆ, ಪೋಷಕರ ಸಹಕಾರ ಮತ್ತು ಶಿಕ್ಷಕರ ಬೋಧನಾ ಶೈಲಿಯಿಂದ ಈ ಮೈಲಿಗಲ್ಲು ಸಾಧ್ಯವಾಗಿದೆ. ಈ ಯಶಸ್ಸು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಇನ್ನಷ್ಟು ಉನ್ನತ ಗುರಿಗಳನ್ನು ತಲುಪಲು ಪ್ರೇರಣೆಯಾಗಲಿ,” ಎಂದು ಹಾರೈಸಿದ್ದಾರೆ.
ಶಾಲೆಯ ಈ ಸಾಧನೆಗೆ ಪೋಷಕರು ಮತ್ತು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭಕೋರಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕ್ಷೇತ್ರ ಪುನರ್ವಿಂಗಡಣೆ ಮಸೂದೆ ; ಬಿಜೆಪಿ ಷಡ್ಯಂತ್ರ ಬಯಲು : ಕವಿತಾ ಚಂದ್ರಶೇಖರ್ ಕಿಡಿ

Published

on

ಸುದ್ದಿದಿನ,ದಾವಣಗೆರೆ: ಬಿಜೆಪಿಯು ಪಂಚರಾಜ್ಯಗಳ ಚುನಾವಣೆಗಮನದಲ್ಲಿಟ್ಟುಕೊಂಡು ತರಾತುರಿಯಲ್ಲಿ ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮಂಡನೆ ಮಾಡಲು ಹೋಗಿ ಮುಖಭಂಗಕ್ಕೀಡಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಕವಿತಾ ಚಂದ್ರಶೇಖರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಹುನ್ನಾರ ದೇಶದ ಜನರ ಮುಂದೆ ಬಯಲಾಗಿದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. ಮಹಿಳೆಯರ ವಿರೋಧಿ ಕಾಂಗ್ರೆಸ್ ಪಕ್ಷ ಎಂದು ಹೇಳುತ್ತಿರುವ ಬಿಜೆಪಿಯು ಮಹಿಳೆಯರ ಭಾವನೆ ಜೊತೆ ಚೆಲ್ಲಾಟ ಆಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಸುದ್ದಿಗೋಷ್ಟಿಯಲ್ಲಿ ಪ್ರಶ್ನಿಸಿದ್ದಾರೆ.

ಪ್ರತಿಪಕ್ಷಗಳು ಡಿಲಿಮಿಟೇಶನ್ ಮಸೂದೆಗೆ ವಿರೋಧ ವ್ಯಕ್ತಪಡಿಸಿವೆಯೇ ವಿನಾಃ ಮಹಿಳಾ ಮೀಸಲಾತಿ ಮಸೂದೆಗಲ್ಲ. ಕೇಂದ್ರ ಸರ್ಕಾರವು ಪ್ರಾಮಾಣಿಕವಾಗಿದ್ದರೆ 2023 ರ ಕಾನೂನನ್ನು ಜಾರಿಗೆ ತರಬೇಕು.

ನಾರಿ ಶಕ್ತಿ ವಂದನ ಚೌಕಟ್ಟು ಎಂದು ವ್ಯಾಪಕವಾಗಿ ಕರೆಯಲ್ಪಡುವ 2023ರ ಕಾನೂನು, ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿಯ ಅನುಷ್ಠಾನವನ್ನು ಹೊಸ ಜನಗಣತಿಯನ್ನು ಪೂರ್ಣಗೊಳಿಸಿ ನಂತರ ಡಿಲಿಮಿಟೇಶನ್ ಬಗ್ಗೆ ಚರ್ಚಿಸಿ
ಅನುಷ್ಠಾನಗೊಳಿಸಲಿ. ಅದನ್ನು ಬಿಟ್ಟು ವಿನಾಕಾರಣ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಸೋಲಾಗಿರುವುದು “ಪ್ರಜಾಪ್ರಭುತ್ವದ ಗೆಲುವು. ಭಾರತದ ಒಕ್ಕೂಟ ರಚನೆ ಬದಲಾಯಿಸಲು ಮುಂದಾಗಿದ್ದಕ್ಕೆ ತಕ್ಕ ಶಾಸ್ತಿಯಾಗಿದೆ. ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಕೇಂದ್ರ ಸರ್ಕಾರದ ಪಿತೂರಿಗೆ ತಕ್ಕ ಉತ್ತರ ನೀಡಲಾಗಿದೆ. ಇದು ಸಂವಿಧಾನಕ್ಕೆ ಸಿಕ್ಕ ಗೆಲುವು, ದೇಶಕ್ಕೆ, ವಿರೋಧ ಪಕ್ಷದ ಒಗ್ಗಟ್ಟಿಗೆ ಸಿಕ್ಕ ಗೆಲುವು.

ಉತ್ತರ ಭಾರತದಲ್ಲಿ ಹೆಚ್ಚು ಸ್ಥಾನಗಳನ್ನು ಸೃಷ್ಟಿಸಿ ಹೇಗಾದರೂ ಅಧಿಕಾರದಲ್ಲಿ ಉಳಿಯಬೇಕೆಂಬ ಬಿಜೆಪಿಯ ಪಿತೂರಿ ಜನರಿಗೆ ಅರ್ಥವಾಗಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಡಿಮೆ ಸ್ಥಾನ ಆಗುವ ಆತಂಕ ಇದೆ. ಯಾವುದೇ ರೀತಿಯಲ್ಲಿಯೂ ಚರ್ಚಿಸದೇ ಏಕಾಏಕಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಜಾರಿಗೆ ಮುಂದಾಗಿದ್ದೇಕೆ ಎಂದು ಕವಿತಾ ಚಂದ್ರಶೇಖರ್
ಪ್ರಶ್ನಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಎಸ್ ಎಸ್ ಎಲ್ ಸಿ ಫಲಿತಾಂಶ | ಭರತ್ ಜಿ ರಾಜ್ಯಕ್ಕೆ ಪ್ರಥಮ ; ನನ್ನ ಕ್ಷೇತ್ರದ ವಿದ್ಯಾರ್ಥಿ ಸಾಧನೆಗೆ ಸಲ್ಯೂಟ್ ಶಾಸಕ ಕೆ.ಎಸ್.ಬಸವಂತಪ್ಪ ಹರ್ಷ

Published

on

ಸುದ್ದಿದಿನ,ದಾವಣಗೆರೆ:ಇವತ್ತು ನನಗೆ ಬಹಳ ಸಂತೋಷದ ದಿನ. ನನ್ನ ಕ್ಷೇತ್ರದ ಕಬ್ಬಳ ಗ್ರಾಮದ ಒಬ್ಬ ರೈತ ಕುಟುಂಬದಿಂದ ಬಂದ ಜಿ.ಭರತ್ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 625ಕ್ಕೆ 625 ಅಂಕ ಪಡೆದಿರುವುದು ನನಗೆ ಬಹಳ ಹೆಮ್ಮೆ ತಂದಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

ಕಬ್ಬಳ ಗ್ರಾಮದ ವಿದ್ಯಾಲಕ್ಷ್ಮಿ ಶಾಲೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಜಿ.ಭರತ್ ಮತ್ತು ಪೋಷಕರನ್ನು ಅಭಿನಂದಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದ ವಿದ್ಯಾರ್ಥಿ ಇಷ್ಟು ದೊಡ್ಡ ಸಾಧನೆ ಮಾಡಿರುವುದು ಸಂತಸದ ವಿಷಯ. ವಿದ್ಯಾ ಲಕ್ಷ್ಮಿ ಶಾಲೆಯವರು ಬಹಳ ಪ್ರಾಮಾಣಿಕವಾಗಿ ಮಕ್ಕಳ ಶಿಕ್ಷಣದ ಬಗ್ಗೆ ಆಸಕ್ತಿ ತೋರಿಸಿ ಅವರನ್ನು ಉನ್ನತ ಮಟ್ಟಕ್ಕೆ ತರಲು ಶ್ರಮಿಸಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.

ನಮಗೆ ಮೊದಲ ಆದ್ಯತೆ ದೇಗುಲಗಳಿಗಿಂತ ಶಾಲೆಗಳಿಗೆ ಇರಬೇಕು. ಇಂತಹ ಶಾಲೆಯೆಂಬ ದೇಗುಲದಿಂದ ಹೊರ ಬರುವ ಭರತ್‌ನಂತಹ ಮಕ್ಕಳು ಮುಂದಿನ ದಿನಗಳಲ್ಲಿ ಈ ದೇಶದ ಉನ್ನತ ಅಧಿಕಾರಿಗಳಾಗಿ ಅಥವಾ ವಿಜ್ಞಾನಿಗಳಾಗಿ ಸೇವೆ ಸಲ್ಲಿಸುವಂತಾಗಲಿ ಎಂದು ಶುಭ ಹಾರೈಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending