ದಿನದ ಸುದ್ದಿ
ಯುಗಾದಿ ಅಲ್ಲ ಉಗಾದಿ
ಉಗಾದಿ ಹಬ್ಬದ ದಿನ ಮಳವಳ್ಳಿಯ ಮಾಳವ ಜನಾಂಗದ ಕುಟುಂಬಗಳು ಧಾರ್ಮಿಕ ಮೆರವಣಿಗೆಯಲ್ಲಿ ತಮ್ಮೂರ ಅಮ್ಮನ ಗುಡಿಯಿ೦ದ ಬಹಳ ವರುಷಗಳಿ೦ದ ಗೊತ್ತು ಮಾಡಲಾದ ನೀರಿನ ಹೊ೦ಡ, ಕೆರೆ, ನದಿ, ಹಳ್ಳ, ಇಲ್ಲವೇ ಬಾವಿಗಳಿಗೆ ಹೊರಡುವ ಪದ್ಧತಿ ಬೆಳೆದು ಬಂದಿದೆ. ಅಲ್ಲಿಗೆ ತಲುಪಿದ ಮೇಲೆ ನೀರಿನ ಬಳಿ ಬಿ೦ದಿಗೆಗಳನ್ನು ಇಟ್ಟು ಅವುಗಳಿಗೆ ಪೂಜೆ ಮಾಡುತ್ತಾರೆ. ಉಗಾದಿ ಹಬ್ಬದಲ್ಲಿ ಮಾಳವರ ನಾಯಕನಾದ ಕುಲವಾಡಿ, ಚಕ್ರಿ, ನೀರಘಂಟಿ ಇಲ್ಲವೇ ಸಾಮಾನ್ಯವಾಗಿ ಆತನನ್ನು ಬೇರೆಯವರು ಕರೆಯುವ೦ತೆ ಊರ ಯಜಮಾನನಾದವನು ಉಗು ಮೆರವಣಿಗೆಗೆ ಪೂಜಾ ವಿಧಿವಿಧಾನಗಳನ್ನು ಸಲ್ಲಿಸಿ ಮೆರವಣಿಗೆಗೆ ಅಣಿಯಾದ ಎಲ್ಲ ಶೃದ್ಧಾಳುಗಳಿಗೂ ಒಂದೊಂದು ಬಿಂದಿಗೆ ಪವಿತ್ರ ನೀರನ್ನು ನೀರಿನ ಹೊರತೆಯಿ೦ದ ತೆಗೆದು ಕೊಡುತ್ತಾನೆ.
ನೀರು ತುಂಬಿದ ಬಿಂದಿಗೆಗಳನ್ನು ಪೂಜಿಸಿ ನೀರು ತು೦ಬಿಕೊ೦ಡ ಮೇಲೆ ಮಾಳವರು ಹಿ೦ತಿರುಗಿ ತಮ್ಮ-ತಮ್ಮ ಮನೆಗಳಿಗೆ ಪುನಃ ಮೆರವಣಿಗೆಯಲ್ಲಿ ಬಂದು ಮನೆಯ ದೇವರ ಕೋಣೆಯಲ್ಲಿ ಬಿ೦ದಿಗೆಗಳನ್ನು ಇಡುತ್ತಾರೆ. ಈ ಬಿಂದಿಗೆದುಂಬಿದ ನೀರನ್ನು ‘ಹೊಸನೀರು’ ಎಂದು ಕರೆಯಲಾಗುತ್ತದೆ. ಆ ಬಿ೦ದಿಗೆಗೆ ಪೂಜೆಸಲ್ಲಿಸಿ ಬಿಂದಿಗೆಯ ‘ಹೊಸನೀರ’ನ್ನು ಮನೆಯಲ್ಲಿ ತು೦ಬಿಟ್ಟು ಕೊ೦ಡಿರುವ ದಿನ ಬಳಕೆಯ ಹ೦ಡೆಗಳು, ತೊಟ್ಟಿಗಳು, ಬಿ೦ದಿಗೆಗಳು ಮತ್ತು ಬಕೇಟುಗಳ ನೀರಿಗೆ ತೊಟ್ಟು ಬೆರೆಸಿ ದಿನನಿತ್ಯದ ಅಡುಗೆ, ಸ್ನಾನ, ಪೂಜೆ ಪುನಸ್ಕಾರಾದಿ ಶುಭ ಕಾರ್ಯಗಳಿಗೆ ಬಳಸುವ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ.
ಮಾಳವರು ಉಗಾದಿಯ ಸಾ೦ಯಕಾಲ ಮುಳುಗುವ ಸೂರ್ಯನಿಗೆ ಹಾಗೂ ಉದಯಿಸುವ ಚ೦ದ್ರನಿಗೆ ನಮಿಸುತ್ತಾರೆ. ಸುಮೇರಿಯನ್ ಭಾಷೆಯಲ್ಲಿ ‘ಉಗು’ ಎಂದರೆ ನೀರಾವರಿ ಭೂಮಿ. ಕರ್ನಾಟಕದ ಮಂಡ್ಯ ಜಿಲ್ಲೆ ಮಳವಳ್ಳಿ ಪ್ರದೇಶದ ಮಾಳವ ಜನಾಂಗದ ಭಾಷೆಯಲ್ಲಿಯೂ ಉಗು ಎಂದರೆ ಜಲ ಸಂಪನ್ನ ಭೂಮಿ. ‘ಉ’ ಎ೦ದರೆ ನೀರು. ಉಗಳು ಎ೦ದರೆ ಮಾನವನ ಬಾಯಿಯ ನೀರು. ಇಲ್ಲಿ ಗ ಅಥವಾ ಕ ಎ೦ದರೆ ಬಾಯಿ. ಳು ಎ೦ದರೆ ಮಾನವ ಅಥವಾ ವ್ಯಕ್ತಿ. ‘ಉಕು’ ಎಂಬ ಶಬ್ದದ ಅರ್ಥವೂ ನೀರಾವರಿ ಭೂಮಿ. ಉಕುರಗುಡ್ಡೆ ಹೊಲ ಎಂದರೆ ಬೆಟ್ಟದಂಚಿನಿಂದ ಸಮೃದ್ಧ ನೀರು ಪಡೆಯುವ ನೀರಾವರಿ ಜಮೀನು ಎಂದಾಗುತ್ತದೆ. ‘ಉಗುನಿ ಹಂಬು’ ನೀರಿನ ಮೇಲ್ಭಾಗದವರೆಗೆ ಬೆಳೆಯುವ ಹಚ್ಚಹಸುರು ಗಿಡಗಂಟಿಗಳೆಂದು ಸಹ ಅರ್ಥೈಸುವ ಹಾಗೆ ಇನ್ನಿತರ ಸಂಪ್ರದಾಯಗಳು ‘ಉಗು’ವಿನೊಂದಿಗೆ ಹೆಣೆದುಕೊಂಡಿವೆ.
ನೀರು, ಸೂರ್ಯ ಹಾಗೂ ಚಂದ್ರನನ್ನು ಪೂಜಿಸುವ ಹಬ್ಬವೇ ‘ಉಗಾದಿ’. ಮಾಳವರಲ್ಲಿ ‘ಆದಿ’ ಎಂದರೆ ಸೂರ್ಯನ ಹೆಸರು. ಉಗು ಮತ್ತು ಆದಿ ಸೇರಿದಾಗ ನೀರು ಮತ್ತು ಸೂರ್ಯ ಎಂದಾಗುತ್ತದೆ. ನಾಗಾ ಜನಾಂಗದ ನಾಗಧರ್ಮದ ಕಾಲದ ದಿನಗಳಲ್ಲೇ ಸಂಪ್ರದಾಯ ಹುಟ್ಟಿ ಬೆಳೆದಿರಬಹುದು. ಉಗ್,ಉಗಿ, ಉಗ್ಗು, ಉಪ್ಪು, ಉಮಾ, ಉಕ್ಕು, ಉ೦ಣು, ಉಕ್ಕಡ, ಉಕ್ಕಡಗಾತ್ರಿ ಮತ್ತು ಇತ್ಯಾದಿ ಪದಗಳು ‘ಉ’ ಅ೦ದರೆ ನೀರಿಗೆ ಅ೦ಟಿಕೊ೦ಡ ಪದಗಳಾಗಿವೆ. ಪ್ರಸ್ತುತ ಉಗಾದಿ ತನ್ನ ಮೂಲಾರ್ಥ ಕಳೆದುಕೊಂಡು ‘ಹೊಸವರ್ಷ ಪ್ರಾರಂಭ’ ಎಂದಷ್ಟೇ ಆಚರಿಸಲಾಗುತ್ತಿದೆ. ಭಾರತೀಯ ಸಂಸ್ಕ್ರತಿಯೂ ಹಳೆಯ ನಾಗಾ ಸಂಪ್ರದಾಯವನ್ನು ಮರೆಮಾಚಿ( ನುಂಗಿಕೊಂಡು) ಸಾಧ್ಯವಾದಷ್ಟು ಇಂದಿನ ಸಂಪ್ರದಾಯಗಳಿಗೆ ಒಗ್ಗಿಕೊಂಡಿದೆ. ಇದು ‘ಉಗಾದಿ’ ಹೊರತು ‘ಯುಗಾದಿ’ ಅಲ್ಲ. ಉಗಾದಿ ಎ೦ಬ ಪದ ಮೂಲ ದ್ರಾವಿಡ ಪದವೇ ಹೊರತು ಸ೦ಸ್ಕೃತದಿ೦ದ ಉದಯಿಸಿಲ್ಲ.

ದಿನದ ಸುದ್ದಿ
ದೇವದಾಸಿ ಪುನರ್ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಮ್.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 12 ರೊಳಗಾಗಿ ಕಚೇರಿ ಸಲ್ಲಿಸಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ಯೋಜನಾಧಿಕಾರಿಗಳ ಹುದ್ದೆ ಸಂಖ್ಯೆ-1, ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂಎಸ್ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ಚನ್ನಗಿರಿ ತಾಲ್ಲೂಕು ಯೋಜನಾ ಅನುಷ್ಟಾನಾಧಿಕಾರಿಗಳು ಹುದ್ದೆ ಸಂಖ್ಯೆ-1, ಬಿಎಸ್ಡಬ್ಲ್ಯೂ, ಬಿಎ ಇನ್ ಸೋಶಿಯಲಾಜಿ, ಎಂಎಸ್ಸಿ ಇನ್ ಸೈಕೋಲಾಜಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ದಾಖಲಾಧಿಕಾರಿಗಳ ಹುದ್ದೆ ಸಂಖ್ಯೆ-1, ಬಿಕಾಂ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-222117 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ
ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ರಾಜ್ಯದಾದ್ಯಂತ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 25 ಹೆಚ್ಚುವರಿ ವಿಶೇಷ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ದಿನದ ಸುದ್ದಿ
ಕಾಗದ ರಹಿತ ನೋಂದಣಿ ವ್ಯವಸ್ಥೆಯ ತರಬೇತಿ
ಸುದ್ದಿದಿನ,ದಾವಣಗೆರೆ:ಕಾಗದ ರಹಿತ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಗೆ ಬರುವ ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ದಾವಣಗೆರೆ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರ ಸಿಬ್ಬಂದಿ ವರ್ಗದವರಿಗೆ ತರಬೇತಿ ಆಯೋಜಿಸಲಾಗಿದೆ.
ತರಬೇತಿಯು ಜ.30 ರಂದು ಹೊನ್ನಾಳಿ ಉಪ ನೋಂದಣಿ ಕಚೇರಿ ಆವರಣ, ಜ.31 ರಂದು ಚನ್ನಗಿರಿ ಉಪ ನೋಂದಣಿ ಕಚೇರಿ ಆವರಣ, ಫೆ.2 ರಂದು ಹರಿಹರ ಉಪ ನೋದಣಿ ಕಚೇರಿ ಆವರಣ, ಫೆ.3 ರಂದು ದಾವಣಗೆರೆ ಉಪ ನೋಂದಣಿ ಕಚೇರಿ, ಫೆ.4 ರಂದು ಜಗಳೂರು ಉಪ ನೋಂದಣಿ ಕಚೇರಿ ಆವರಣಗಳಲ್ಲಿ ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ನಡೆಯಲಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ತಿಳಿಸಿದ್ದಾರೆ.


