ಲೈಫ್ ಸ್ಟೈಲ್
ಮೂಳೆ, ಚರ್ಮ, ನರರೋಗಗಳಿಗೆ ಮದ್ದು ‘ವಿಟಮಿನ್ – ಡಿ’ ಬಗ್ಗೆ ನೀವಿಷ್ಟು ತಿಳಿಯಲೇ ಬೇಕು..!
ಸುದ್ದಿದಿನ ಡೆಸ್ಕ್ : ಕೆಲ ಅಧ್ಯಯನಗಳ ಪ್ರಕಾರ ಶೇ. 32 ಕ್ಕಿಂತ ಹೆಚ್ಚು ಭಾರತೀಯರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಚಪ್ಪೆ ಮೂಳೆ ಮುರಿತಕ್ಕೊಳಗಾಗುವ, ಶೇ. 75ರಷ್ಟು ಜನರಲ್ಲಿ ವಿಟಮಿನ್ ಡಿ ಕೊರತೆ ಇರುವುದು ಕಂಡು ಬಂದಿದೆ.
ವಿಟಮಿನ್ ಡಿ ಉತ್ಪಾದನೆಯಾಗುವ ಪ್ರಮುಖ ಅಂಗವೆಂದರೆ ದೇಹದ ಚರ್ಮ. ಸೂರ್ಯನ ರಶ್ಮಿ ಚರ್ಮದ ಮೇಲೆ ಬಿದ್ದಾಗ ವಿಟಮಿನ್ ಡಿ ಉತ್ಪತ್ತಿಯಾಗುವುದು. ಆದರೆ ಭಾರತ `ಟ್ರಾಪಿಕಲ್ ರಾಷ್ಟ್ರವಾಗಿದ್ದು, ಬಿಸಿಲಿನ ಕೊರತೆಯಿಲ್ಲ. ಆದರೂ ಈ ಕೊರತೆ ಏಕೆ ಎಂಬುದು ಚಿಂತನಾರ್ಹ.
ಭಾರತೀಯರ ಮೈ ಚರ್ಮದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೆಲಾನಿನ್ ಎಂಬ ಬಣ್ಣಕಾರಕ ವಸ್ತುವಿದ್ದು, ಇದು ಸೂರ್ಯನಿಂದ ಹೊರಹೊಮ್ಮುವ ಅಲ್ಟ್ರವಯೊಲೆಟ್ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ.
ವಿಟಮಿನ್ ಡಿ ಕೊರತೆಯಿಂದ ಮೂಳೆಯ ಶಕ್ತಿ ಕುಂದುತ್ತದೆ. ಮೂಳೆ ಮೆತ್ತಗಾಗುತ್ತದೆ. ಮಕ್ಕಳಲ್ಲಿ ರಿಕೆಟ್ಸ್ ಹಾಗೂ ದೊಡ್ಡವರಲ್ಲಿ ಆಸ್ಟಿಯೋಮಲೇಸಿಯಾ ತೊಂದರೆ, ಅಲ್ಲದೆ, ಶ್ವಾಸಕೋಶದ ತೊಂದರೆ, ಸ್ತನ ಹಾಗೂ ಅಂಡಾಶಯ ಕ್ಯಾನ್ಸರ್ ಹಾಗೂ ಅನೇಕ ನರರೋಗಗಳೂ ಉಂಟಾಗುವುವು.
ಕೊರತೆಗೆ ಕಾರಣವೇನು?
- ಜೀವನ ಶೈಲಿಯ ಬದಲಾವಣೆ. ಹಿಂದಿನ ಕಾಲದಲ್ಲಿ ಮಕ್ಕಳೆಲ್ಲಾ, ಬೀದಿಯಲ್ಲಿ ಗಂಟೆಗಟ್ಟಲೆ ಆಟ ಆಡುತ್ತಿದ್ದರು. ರಜಾ ದಿನಗಳಲ್ಲಂತೂ ಅವರು ಮನೆ ಸೇರುವುದೇ ಕಷ್ಟವಾಗುತ್ತಿತ್ತು. ಈಗಿನ ಕಾಲದ ಮಕ್ಕಳು ಇದಕ್ಕೆ ತದ್ವಿರುದ್ಧ! ರಜೆ ಬಂತೆಂದರೆ ಟಿ.ವಿ. ಹಾಗೂ ಕಂಪ್ಯೂಟರ್ ಆಟಗಳಿಗೆ ಶರಣಾಗುವರು. ಜನನಿಬಿಡ ಪ್ರದೇಶಗಳು, ವಾಹನ ಸಂಚಾರ ದಟ್ಟವಾಗಿರುವ ರಸ್ತೆಗಳಲ್ಲಿ ಮಕ್ಕಳನ್ನು ಆಡಲು ಬಿಡಲು ಪಾಲಕರಿಗೆ ಅಂಜಿಕೆ!
- ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ನೀಳ ಕೂದಲು. ಹರಳೆಣ್ಣೆ ಹಚ್ಚಿ, ಅಭ್ಯಂಜನ ಮಾಡಿಸುತ್ತಿದ್ದರು. ಆದರೆ ಕೂದಲು ಒಣಗಿಸಲು ಹೇರ್ ಡ್ರೈಯರ್ ಲಭ್ಯವಿರುತ್ತಿರಲಿಲ್ಲ. ಮನೆಯಂಗಳದಲ್ಲಿ ಸೂರ್ಯನ ಬಿಸಿಲಿನಿಂದ ಚೆನ್ನಾಗಿ ಕೂದಲನ್ನು ಒಣಗಿಸಿಕೊಳ್ಳುತ್ತಿದ್ದರು. ಆದರೆ ಈಗ ಸ್ನಾನ ಮಾಡಿ, ಡ್ರೈಯರ್ನ ಸಹಾಯದಿಂದ ಕೂದಲನ್ನು ಒಣಗಿಸಿಕೊಳ್ಳುತ್ತಾರೆ. ಆದರೆ ಸೂರ್ಯನ ಕಿರಣಗಳು ನಮಗೆ ಎಷ್ಟು ಪೂರಕವಾಗಿ ಕೆಲಸ ಮಾಡುತ್ತವೆ ಎಂಬುದನ್ನು ತಿಳಿಯಬೇಕು.
- ದೇಹಾರೋಗ್ಯಕ್ಕೆ ಬೇಕಾದ ವಿಟಮಿನ್ ಡಿ ಉತ್ಪತ್ತಿಗಾಗಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯ ಅಂತರದ ಸಮಯದಲ್ಲಿ 30 ನಿಮಿಷದಿಂದ 40 ನಿಮಿಷದವರೆಗೆ ಸೂರ್ಯನ ಕಿರಣಗಳು ದೇಹದ ಮೇಲೆ ಬೀಳುವಂತಾಗಬೇಕು.
- ಉತ್ತರ ಭಾರತದಲ್ಲಿಯೂ ಸಹ ಆರೋಗ್ಯವಂತ ಜನ ಸಮುದಾಯದಲ್ಲಿ ಶೇ. 50 ರಷ್ಟು ಜನರಿಗೆ ವಿಟಮಿನ್ ಡಿ ಕೊರತೆಯಿರುವುದು ಕಂಡು ಬಂದಿದೆ.
- ಗರ್ಭಿಣಿ ಸ್ತ್ರೀಯರಲ್ಲಿ ಕೊರತೆಯ ತೀವ್ರತೆ ಹೆಚ್ಚು. ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣಕ್ಕೆ ತಾಯಿಯು ಸಾಕಷ್ಟು ವಿಟಮಿನ್ ಡಿ ಯನ್ನು ಒದಗಿಸಬೇಕಾಗುವುದು.
- ಪ್ರಸವದ ನಂತರ, ಮಗುವಿಗೆ ಹಾಲುಣಿಸುವ ಅನೇಕ ತಾಯಂದಿರು, ಬೆನ್ನುನೋವಿಗಾಗಿ ವೈದ್ಯರನ್ನು ಸಂಪರ್ಕಿಸುವುದು ಹೆಚ್ಚಾಗುತ್ತಿದೆ. ಇಂಥಹ ಸಮಯದಲ್ಲಿ ಅನೇಕರಿಗೆ ಬೆನ್ನು ಮೂಳೆಯ ಕ್ಷಯವಿರಬಹುದೆಂಬ ಶಂಕೆಯಿಂದ, ಕ್ಷಯರೋಗ ಚಿಕಿತ್ಸೆಯನ್ನು ಕೊಟ್ಟಲ್ಲಿ, ಮೂಳೆಗಳು ಮತ್ತಷ್ಟು ಶಕ್ತಿ ಹೀನವಾಗಿ, ಅನೇಕ ಕಡೆ ಫ್ರಾಕ್ಚರ್ಗಳಾಗಬಹುದು.
ಬಿಸಿಲಿಗೆ ಮೈಯೊಡ್ಡಿದ್ದಲ್ಲಿ, ಚರ್ಮವು ಕಪ್ಪಾಗುವುದೆಂಬ ಭಯ ಅನೇಕ ಹೆಣ್ಣುಮಕ್ಕಳಿಗೆ. ಚರ್ಮವನ್ನು ಸೂರ್ಯನ ಯು.ವಿ.ಕಿರಣಗಳಿಂದ ರಕ್ಷಿಸಲು, ಲಭ್ಯವಿರುವ ಯಾವುದೇ ಕ್ರೀಂ ಅಥವಾ ಲೋಶನ್ ಬಳಸಿ ಬಿಸಿಲಲ್ಲಿ ನಿಲ್ಲಬಹುದು. ಚರ್ಮಕ್ಕೆ ಇಂಥಹ ಸನ್ ಸ್ಕ್ರೀನ್ ಲೋಶನ್ ಹಚ್ಚಿದಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಡಿ ಉತ್ಪತ್ತಿಗೆ ಇನ್ನೂ ಸ್ವಲ್ಪ ಹೆಚ್ಚಿನ ಸಮಯ ಬಿಸಿಲಲ್ಲಿ ನಿಲ್ಲಬೇಕಾಗುವುದು.
ಭಾರತೀಯರಲ್ಲಿ ವಿಟಮಿನ್ ಡಿ ಕೊರತೆಗೆ ಮತ್ತೊಂದು ಕಾರಣ, ಆಹಾರ ಕೊರತೆ, ಬಡತನ !
ಸುಮಾರು ಒಂದು ದಶಕದಿಂದಲೂ, ಭಾರತೀಯರ ದೇಹದಲ್ಲಿನ ವಿಟಮಿನ್ ಡಿ ಕೊರತೆಯ ಬಗ್ಗೆ ಅಧ್ಯಯನಗಳಿಂದ ತಿಳಿದಿದ್ದರೂ ಸಹ ಬಡತನ, ಸಿರಿತನ ಎಂಬ ಬೇಧ ಭಾವವಿಲ್ಲದೆ, ಯಾವುದೇ ವಯಸ್ಸಿನವರಲ್ಲೂ ವಿಟಮಿನ್ ಡಿ ಕೊರತೆ ಮುಂದುವರಿಯುತ್ತಿದೆ.
ವಿಟಮಿನ್ ಡಿ ಕೊರತೆಯ ಪ್ರಾರಂಭಿಕ ಹಂತದಲ್ಲಿ ದೇಹದಲ್ಲಿ ಫ್ಯಾರಾಥೈರಾಯಿಡ್ ಹಾರ್ಮೋನ್ನ ಪ್ರಮಾಣ ಹೆಚ್ಚಾಗುವುದು. ಇದರ ಸದುದ್ದೇಶವೆಂದರೆ, ರಕ್ತದಲ್ಲಿನ ಕ್ಯಾಲ್ಸಿಯಂ ಅಂಶವನ್ನು ಸರಿಪ್ರಮಾಣದಲ್ಲಿಡುವುದು. ರಕ್ತದಲ್ಲಿನ ಕ್ಯಾಲ್ಸಿಯಂ ಅಂಶವನ್ನು ಸರಿಯಾದ ಪ್ರಮಾಣದಲ್ಲಿರಿಸಲು ವಿಟಮಿನ್ ಡಿ ಅತ್ಯಗತ್ಯ.
ದಿನನಿತ್ಯ ನಮ್ಮ ದೇಹಕ್ಕೆ ಬೇಕಾಗುವ ಕ್ಯಾಲ್ಸಿಯಂ ಪ್ರಮಾಣ, ಒಂದು ಗ್ರಾಂ ನಷ್ಟು. ನಗರ ಪ್ರದೇಶದ ಜನರ ಆಹಾರದಲ್ಲಿ ಸುಮಾರು 340 ಮಿ.ಗ್ರಾಂ. ನಷ್ಟು ಕ್ಯಾಲ್ಸಿಯಂ ಲಭ್ಯವಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಇದರ ಪ್ರಮಾಣ ಸುಮಾರು 280 ಮಿ.ಗ್ರಾಂ.ನಷ್ಟು. ಅಂದರೆ, ಆಹಾರದ ಮೂಲಕ ನಾವು ದೇಹಕ್ಕೆ ಒದಗಿಸುತ್ತಿರುವ ಕ್ಯಾಲ್ಸಿಯಂ ಅಂಶವು ನಿಗದಿತ ಪ್ರಮಾಣದಲ್ಲಿ ಒಂದನೇ ಮೂರು ಭಾಗದಷ್ಟು ಮಾತ್ರ!
ವಿಟಮಿನ್ ಡಿ ಕೊರತೆಯಿಂದಾಗುವ ದುಷ್ಪರಿಣಾಮಗಳಾವುವು?
ರಿಕೆಟ್ಸ್, ಆಸ್ಟಿಯೋಮಲೇಸಿಯಾ (ಮೆದುಮೂಳೆ), ಮೂಳೆಸವೆತದ ಜೊತೆಗೆ, ಎದೆಗೂಡಿನ ಮೂಳೆಗಳ ವಿಕೃತಿಯಿಂದ ಶ್ವಾಸಕೋಶದ ರೋಗಗಳು, ಉಸಿರಾಟದ ಸಮಸ್ಯೆ, ನರರೋಗಗಳು, ಹೃದಯರೋಗಗಳು, ಅನೇಕ ಕ್ಯಾನ್ಸರ್ಗಳು, ಥೈರಾಯಿಡ್ ಸಮಸ್ಯೆ, ಸುಲಭವಾಗಿ ಮೂಳೆಮುರಿಯುವುದು. ಇವೆಲ್ಲಕ್ಕೂ ವಿಟಮಿನ್ ಡಿ ಕೊರತೆಯೇ ಕಾರಣ.
ರಾಷ್ಟ್ರೀಯ ಕಾರ್ಯಕ್ರಮ
- ಹಾಗಾದರೆ ವಿಟಮಿನ್ ಡಿ ಕೊರತೆಯನ್ನು ನೀಗಿಸುವುದು ಸರ್ಕಾರ ತೆಗೆದುಕೊಳ್ಳಬೇಕಾದ ರಾಷ್ಟ್ರೀಯ ಕಾರ್ಯಕ್ರಮ. ಡೈರಿ ಹಾಲನ್ನು ಸಾಕಷ್ಟು ವಿಟಮಿನ್ ಡಿ ಯೊಂದಿಗೆ ಬಲಪಡಿಸುವಿಕೆ.
- ಕ್ಯಾಲ್ಸಿಯಂಯುಕ್ತ ಆಹಾರಗಳು: ಹಾಲು, ಹಾಲಿನ ಉತ್ಪನ್ನಗಳು, ಸೋಯಾಬಿನ್ಸ್, ಕಾಳುಗಳು, ರಾಗಿ, ಬಾದಾಮಿ, ಸೊಪ್ಪು, ಹಸಿರು ತರಕಾರಿ, ಬೀನ್ಸ್, ಮುಂತಾದವು.
- ವಿಟಮಿನ್ ಡಿ ಯುಕ್ತ ಆಹಾರ: ಮೊಟ್ಟೆ, ಮೀನು, ಮಾಂಸ, ಕಾಡ್ಲಿವರ್ ಎಣ್ಣೆ, ಹಾಲು ಹಾಗೂ ಹಾಲಿನ ಉತ್ಪನ್ನಗಳು. ದಿನನಿತ್ಯದ ವಿಟಮಿನ್ ಡಿ ಅವಶ್ಯಕತೆ – 200 ಯುನಿಟ್ಗಳು ವಯಸ್ಕರಿಗೆ, ವಯಸ್ಸಾದ ನಂತರ 400 ರಿಂದ 600 ಯುನಿಟ್.
- ವಿಟಮಿನ್ ಡಿ ಪಡೆಯಲು ಅತೀ ಸುಲಭ ಹಾಗೂ ಅತ್ಯುತ್ತಮವಾದ ಮಾರ್ಗವೆಂದರೆ ದಿನಕ್ಕರ್ಧ ಗಂಟೆ ಸೂರ್ಯನ ಕಿರಣಗಳು ಬೆನ್ನು ಹಾಗೂ ಮೈಮೇಲೆ ಬೀಳುವಂತೆ ಮಾಡುವುದು.
- ಸೂಕ್ಷ್ಮ ಚರ್ಮವಿರುವವರು, ಜಾಗ್ರತೆಯಾಗಿರಿ. ಸ್ವಲ್ಪ ಸಮಯ ಬಿಸಿಲು ಚರ್ಮದ ಮೇಲೆ ಬಿದ್ದ ನಂತರ, ಸನ್ ಸ್ಕ್ರೀನ್ ಲೋಶನ್ ಬಳಸಿರಿ. ಸನ್ ಸ್ಕ್ರೀನ್ ಲೋಶನ್ನಲ್ಲಿ ಎಸ್.ಪಿ.ಎಫ್. 15 ಕ್ಕಿಂತ ಹೆಚ್ಚಿದ್ದಲ್ಲಿ ಅದು ಚರ್ಮವನ್ನು ಹಾನಿಕಾರಕ ಯು.ವಿ.ಕಿರಣಗಳಿಂದ ರಕ್ಷಿಸುವುದೆನ್ನಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಸಾಮಾಜಿಕ ಬದಲಾವಣೆಗೆ ಮಾದರಿಯಾಗಬೇಕಿದ್ದ ಯೋಜನೆಗೆ ದಾಖಲೆ, ಅನುದಾನ ಕೊರತೆ ಅಡ್ಡಿ; ಸಾವಿರಾರು ಅರ್ಜಿಗಳು ಬಾಕಿ
ಸುದ್ದಿದಿನ,ಶಿವಮೊಗ್ಗ: ಜಾತಿ-ಧರ್ಮದ ಕಟ್ಟುಪಾಡುಗಳನ್ನು ಮೀರಿ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಮದುವೆಯಾಗುವ ದಂಪತಿಗಳಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆಯೇ ಇದೀಗ ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿದೆ. ಸಮಾಜದ ವಿರೋಧವನ್ನು ಎದುರಿಸಿ ಹೊಸ ಬದುಕು ಕಟ್ಟಿಕೊಳ್ಳುವ ದಂಪತಿಗಳಿಗೆ ನೆರವಾಗಬೇಕಿದ್ದ ಯೋಜನೆಯಲ್ಲಿ ಹಣ ಬಿಡುಗಡೆ ವಿಳಂಬವಾಗುತ್ತಿದ್ದು, ಅರ್ಹ ಫಲಾನುಭವಿಗಳು ಸರ್ಕಾರದ ನೆರವಿಗಾಗಿ ಕಾಯುವಂತಾಗಿದೆ.
| ಹೈಲೈಟ್ಸ್: |
|
http://Visit : www.suddidina.com
ಅಂತರ್ಜಾತಿ ವಿವಾಹಕ್ಕೆ ಎಷ್ಟು ಪ್ರೋತ್ಸಾಹಧನ?
ಅಸ್ಪೃಶ್ಯತೆ ನಿವಾರಣೆ ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಪುರುಷ ಬೇರೆ ಜಾತಿಯ ಮಹಿಳೆಯನ್ನು ವಿವಾಹವಾದರೆ ₹2.50 ಲಕ್ಷ ಹಾಗೂ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಮಹಿಳೆ ಬೇರೆ ಜಾತಿಯ ಪುರುಷನನ್ನು ವಿವಾಹವಾದರೆ ₹3 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ.
ಆದರೆ, ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಿದವರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಹಣ ಪಾವತಿ ಮಾತ್ರ ಅದೇ ವೇಗದಲ್ಲಿ ನಡೆಯುತ್ತಿಲ್ಲ. 2025-26ನೇ ಸಾಲಿನಲ್ಲಿ 5,612 ಅರ್ಜಿಗಳು ಸಲ್ಲಿಕೆಯಾಗಿದ್ದು, 1,615 ಅರ್ಜಿಗಳಿಗೆ ಮೊದಲ ಹಂತದ ಪ್ರೋತ್ಸಾಹಧನಕ್ಕೆ ಅನುಮೋದನೆ ದೊರೆತಿದೆ. ಆದರೆ ಕೇವಲ 39 ಫಲಾನುಭವಿಗಳಿಗೆ ಮಾತ್ರ ಹಣ ಪಾವತಿಯಾಗಿದ್ದು, 3,997 ಅರ್ಜಿಗಳು ಇನ್ನೂ ಬಾಕಿ ಉಳಿದಿವೆ. 909 ಅರ್ಜಿಗಳು ಅಪೂರ್ಣ ದಾಖಲೆಗಳ ಕಾರಣದಿಂದ ಬಾಕಿಯಾಗಿವೆ.
ಹೊಸ ಸಾಲಿನಲ್ಲೂ ಅದೇ ಕಥೆ
2026-27ನೇ ಸಾಲಿನಲ್ಲಿ ಇದುವರೆಗೆ 2,194 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 61 ಅರ್ಜಿಗಳಿಗೆ ಅನುಮೋದನೆ ದೊರೆತಿದ್ದರೂ, ಮೊದಲ ಕಂತಿನ ಹಣ ಯಾರಿಗೂ ಪಾವತಿಯಾಗಿಲ್ಲ. 392 ಅರ್ಜಿಗಳು ಅಪೂರ್ಣ ದಾಖಲೆಗಳ ಕಾರಣದಿಂದ ಬಾಕಿ ಉಳಿದಿವೆ.
ಅನುದಾನ ಹೆಚ್ಚಳವಾಗದಿರುವುದು ದೊಡ್ಡ ಸಮಸ್ಯೆ
ಅಂತರ್ಜಾತಿ ವಿವಾಹಗಳ ಸಾಮಾಜಿಕ ಸ್ವೀಕಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಏರಿಕೆಯಾಗಿದೆ. ಆದರೆ, ಅರ್ಜಿಗಳ ಸಂಖ್ಯೆಗೆ ಅನುಗುಣವಾಗಿ ಯೋಜನೆಯ ಅನುದಾನ ಹೆಚ್ಚಳವಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿ ಹಿಂದಿನ ವರ್ಷದ ಅರ್ಜಿಗಳೇ ಬಾಕಿ ಉಳಿಯುತ್ತಿರುವಾಗ ಹೊಸ ಅರ್ಜಿಗಳ ವಿಲೇವಾರಿಯೂ ವಿಳಂಬವಾಗುತ್ತಿದೆ.
2018-19ರಲ್ಲಿ ₹64.27 ಕೋಟಿ, 2019-20ರಲ್ಲಿ ₹90.42 ಕೋಟಿ, 2020-21ರಲ್ಲಿ ₹99.9 ಕೋಟಿ, 2021-22ರಲ್ಲಿ ₹171.84 ಕೋಟಿ ಹಾಗೂ 2022-23ರಲ್ಲಿ ₹94.62 ಕೋಟಿ ಅನುದಾನ ಮೀಸಲಿಡಲಾಗಿತ್ತು. ಆದರೆ ವಾರ್ಷಿಕವಾಗಿ ಬರುತ್ತಿರುವ ಅರ್ಜಿಗಳನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲು ಈ ಮೊತ್ತ ಸಾಕಾಗುತ್ತಿಲ್ಲ ಎಂಬ ಪ್ರಶ್ನೆ ಎದುರಾಗಿದೆ.
2026-27ನೇ ಸಾಲಿನ ಈವರೆಗಿನ ಅಂತರ್ಜಾತಿ ಪ್ರೋತ್ಸಾಹಧನ ಯೋಜನೆಯ ವಿವರ
- 2026-27ನೇ ಸಾಲಿನಲ್ಲಿ ಸಲ್ಲಿಕೆಯಾದ ಅರ್ಜಿಗಳು: 2,194
- ಮೊದಲ ಕಂತಿಗೆ ಅನುಮೋದನೆ: 61
- ಪ್ರೋತ್ಸಾಹ ಧನ ಪಾವತಿ: 00
- ಅಪೂರ್ಣ ಅರ್ಜಿಗಳು: 392
- ತಿರಸ್ಕಾರಗೊಂಡ ಅರ್ಜಿಗಳು: 02
ಸಾಮಾಜಿಕ ಧೈರ್ಯಕ್ಕೆ ಆರ್ಥಿಕ ಬೆಂಬಲ ಬೇಕಿದೆ
ಅಂತರ್ಜಾತಿ ವಿವಾಹದ ನಿರ್ಧಾರ ಕೈಗೊಳ್ಳುವ ಜೋಡಿಗಳು ಕೆಲವೊಮ್ಮೆ ಕುಟುಂಬದ ವಿರೋಧ, ಸಾಮಾಜಿಕ ಒತ್ತಡ, ಬಹಿಷ್ಕಾರ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಪ್ರೋತ್ಸಾಹಧನ ಕೇವಲ ಹಣಕಾಸಿನ ನೆರವಲ್ಲ; ಅದು ಹೊಸ ದಂಪತಿಗಳ ನಿರ್ಧಾರಕ್ಕೆ ಸಾಮಾಜಿಕ ಬೆಂಬಲದ ಸಂಕೇತವೂ ಹೌದು.
ಆದರೆ ಅರ್ಜಿ ಸಲ್ಲಿಸಿ ಅನುಮೋದನೆಗಾಗಿ, ನಂತರ ಹಣಕ್ಕಾಗಿ ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಉಂಟಾದರೆ ಯೋಜನೆಯ ಮೂಲ ಉದ್ದೇಶವೇ ದುರ್ಬಲವಾಗುತ್ತದೆ. ಹೀಗಾಗಿ ಬಾಕಿ ಅರ್ಜಿಗಳ ತ್ವರಿತ ವಿಲೇವಾರಿ, ದಾಖಲೆ ಪ್ರಕ್ರಿಯೆ ಸರಳೀಕರಣ ಹಾಗೂ ಅಗತ್ಯ ಅನುದಾನ ಹೆಚ್ಚಳಕ್ಕೆ ಸರ್ಕಾರ ಗಮನಹರಿಸಬೇಕಿದೆ.

ದಿನದ ಸುದ್ದಿ
ಅಪೌಷ್ಟಿಕತೆ ನಿವಾರಣೆಗೆ ಹೊಸ ಹೆಜ್ಜೆ; ಶಾಲೆ ಮುಗಿಯುವ ಮುನ್ನ ಮಕ್ಕಳಿಗೆ ಪೌಷ್ಟಿಕ ತಿನಿಸು
ಸುದ್ದಿದಿನ,ಹೂವಿನಹಡಗಲಿ: ಗಣಿ ಚಟುವಟಿಕೆಗಳಿಂದ ಬಾಧಿತ ಪ್ರದೇಶಗಳ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆ ಸುಧಾರಣೆಗೆ ಕರ್ನಾಟಕ ಗಣಿ ಮತ್ತು ಪರಿಸರ ಪುನಸ್ಥಾಪನೆ ನಿಗಮ (ಕೆಎಂಆರ್ಸಿಇ) ಹೊಸ ಹೆಜ್ಜೆ ಇಟ್ಟಿದೆ. ವಿಜಯನಗರ, ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ಶೀಘ್ರದಲ್ಲೇ ಸಂಜೆ ಸ್ನ್ಯಾಕ್ಸ್ ವಿತರಿಸುವ ಯೋಜನೆ ರೂಪಿಸಲಾಗಿದೆ.
ಈ ಸಂಬಂಧ ನಾಲ್ಕು ಜಿಲ್ಲೆಗಳ ಜಿಲ್ಲಾ ಪಂಚಾಯಿತಿಗಳ ಮೂಲಕ ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ರವಾನೆಯಾಗಿದ್ದು, ಯೋಜನೆಯನ್ನು ಅನುಷ್ಠಾನಗೊಳಿಸಲು ಸಿದ್ಧತೆ ಆರಂಭಿಸಲಾಗಿದೆ. ಹೂವಿನಹಡಗಲಿ ತಾಲೂಕಿನಲ್ಲಿ ಈಗಾಗಲೇ ಮುಖ್ಯಗುರುಗಳ ಸಭೆ ನಡೆಸಿ ಅಗತ್ಯ ಕ್ರಮಗಳ ಕುರಿತು ಚರ್ಚಿಸಲಾಗಿದೆ.
http://Visit : www.suddidina.com
ಅಪೌಷ್ಟಿಕತೆ ತಡೆಗೆ ಪೌಷ್ಟಿಕ ಆಹಾರ
ಗಣಿ ಬಾಧಿತ ಪ್ರದೇಶಗಳಲ್ಲಿ ಮಕ್ಕಳಿಗೆ ಹೆಚ್ಚುವರಿ ಪೌಷ್ಟಿಕ ಆಹಾರ ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಸಂಜೆ ಸಮಯದಲ್ಲಿ ಮಕ್ಕಳಿಗೆ ನೆನೆಸಿದ ಶೇಂಗಾ, ಮೊಳಕೆಯೊಡೆದ ಹೆಸರುಕಾಳು, ಚಕ್ಕಿ ಸೇರಿದಂತೆ ವಿವಿಧ ಪೌಷ್ಟಿಕ ಆಹಾರಗಳನ್ನು ನೀಡಲು ಉದ್ದೇಶಿಸಲಾಗಿದೆ. ಕೆಲವು ದಿನಗಳಲ್ಲಿ ಮೂಸಂಬಿ, ಕಿತ್ತಳೆ, ಸಪೋಟ ಮತ್ತಿತರ ಹಣ್ಣುಗಳನ್ನೂ ವಿತರಿಸುವ ವ್ಯವಸ್ಥೆ ಇರಲಿದೆ.
ಮಕ್ಕಳಲ್ಲಿ ಕಂಡುಬರುತ್ತಿರುವ ಅಪೌಷ್ಟಿಕತೆ ಹಾಗೂ ಪೌಷ್ಟಿಕಾಂಶದ ಕೊರತೆ ನಿವಾರಣೆಗೆ ಪೂರಕವಾಗುವಂತೆ ಈ ಯೋಜನೆ ರೂಪಿಸಲಾಗಿದೆ. ಶಾಲೆಯಲ್ಲಿ ಶಿಕ್ಷಣದ ಜತೆಗೆ ಮಕ್ಕಳ ಆರೋಗ್ಯಕ್ಕೂ ಆದ್ಯತೆ ನೀಡುವ ಪ್ರಯತ್ನ ಇದಾಗಿದೆ.
24,352 ಮಕ್ಕಳಿಗೆ ಪ್ರಯೋಜನ
ಹೂವಿನಹಡಗಲಿ ತಾಲೂಕಿನಲ್ಲಿ 138 ಸರ್ಕಾರಿ ಪ್ರಾಥಮಿಕ ಹಾಗೂ 27 ಪ್ರೌಢಶಾಲೆಗಳ ಒಟ್ಟು 24,352 ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಯೋಜನೆಗಾಗಿ ಕೆಎಂಆರ್ಸಿಇ ವತಿಯಿಂದ ₹10.64 ಕೋಟಿಗೂ ಹೆಚ್ಚು ಮೊತ್ತದ ಅನುದಾನ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಮೂರು ವರ್ಷಗಳ ಅವಧಿಗೆ ಒಟ್ಟು ಸುಮಾರು ₹33 ಕೋಟಿ ಆಡಳಿತಾತ್ಮಕ ಮಂಜೂರಾತಿ ದೊರೆತಿದ್ದು, ಅಡುಗೆದಾರರು ಮತ್ತು ಸಹಾಯಕಿಯರ ವೆಚ್ಚಕ್ಕೂ ಪ್ರತ್ಯೇಕ ಅನುದಾನ ಮೀಸಲಿಡಲಾಗಿದೆ. ಇದರಿಂದ ಯೋಜನೆ ಕೇವಲ ತಾತ್ಕಾಲಿಕ ಕ್ರಮವಾಗದೆ ನಿರಂತರವಾಗಿ ನಡೆಯುವ ನಿರೀಕ್ಷೆ ಮೂಡಿದೆ.
SATS ಮಾಹಿತಿ ಅಪ್ಡೇಟ್ ಸವಾಲು
ಆದರೆ ಯೋಜನೆ ಅನುಷ್ಠಾನಕ್ಕೆ ವಿದ್ಯಾರ್ಥಿಗಳ ನಿಖರ ಸಂಖ್ಯೆಯೇ ಪ್ರಮುಖ ಆಧಾರವಾಗಿದ್ದು, SATS ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಮಾಹಿತಿ ಅಪ್ಡೇಟ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಹೊಸ ಪ್ರವೇಶ, ಶಾಲೆ ಬದಲಾವಣೆ ಸೇರಿದಂತೆ ಹಲವು ಕಾರಣಗಳಿಂದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಬದಲಾವಣೆಯಾಗಿರುವುದರಿಂದ ಅಂತಿಮ ಪಟ್ಟಿ ಸಿದ್ಧಪಡಿಸುವುದು ಸವಾಲಾಗಿದೆ.
ಸೆಪ್ಟೆಂಬರ್ 5ರೊಳಗೆ ಮಾಹಿತಿ ನವೀಕರಣ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ನಂತರ ಸಂಜೆ ಸ್ನ್ಯಾಕ್ಸ್ ವಿತರಣೆಗೆ ವೇಗ ಸಿಗುವ ಸಾಧ್ಯತೆಯಿದೆ.
ಶಿಕ್ಷಕರಿಗೆ ಹೆಚ್ಚುವರಿ ಹೊರೆ?
ಯೋಜನೆಯ ಉದ್ದೇಶ ಉತ್ತಮವಾಗಿದ್ದರೂ, ಅನುಷ್ಠಾನದ ಹೊಣೆಗಾರಿಕೆ ಶಿಕ್ಷಕರ ಮೇಲೆಯೇ ಹೆಚ್ಚಾಗುವ ಆತಂಕವೂ ವ್ಯಕ್ತವಾಗಿದೆ. ಈಗಾಗಲೇ ಎಐ ಹಾಜರಾತಿ, ಬಿಸಿಯೂಟ, ಮೊಟ್ಟೆ, ಬಾಳೆಹಣ್ಣು ಹಾಗೂ ವಿವಿಧ ಡಿಜಿಟಲ್ ದಾಖಲೆಗಳ ನಿರ್ವಹಣೆಯಲ್ಲಿ ಶಿಕ್ಷಕರು ನಿರತರಾಗಿದ್ದಾರೆ. ನೆಟ್ವರ್ಕ್ ಸಮಸ್ಯೆಯೂ ಕೆಲವೊಮ್ಮೆ ತೊಂದರೆ ನೀಡುತ್ತಿದೆ.
ಶಾಲೆ ಮುಗಿಯುವ ವೇಳೆಯಲ್ಲಿ ಸ್ನ್ಯಾಕ್ಸ್ ವಿತರಣೆ, ದಾಖಲಾತಿ ಮತ್ತು ಮೇಲ್ವಿಚಾರಣೆ ಮತ್ತೊಂದು ಜವಾಬ್ದಾರಿಯಾಗಬಹುದು ಎಂಬುದು ಶಿಕ್ಷಕರ ಅಭಿಪ್ರಾಯ. ಹೀಗಾಗಿ ಮಕ್ಕಳಿಗೆ ಪೌಷ್ಟಿಕ ಆಹಾರ ತಲುಪಿಸುವ ಯೋಜನೆಯ ಜತೆಗೆ ಶಿಕ್ಷಕರ ಮೇಲಿನ ಆಡಳಿತಾತ್ಮಕ ಒತ್ತಡ ಕಡಿಮೆ ಮಾಡುವ ವ್ಯವಸ್ಥೆಯೂ ಅಗತ್ಯವಾಗಿದೆ.
ವಾರದ ಆರು ದಿನಗಳಲ್ಲಿ ವಿವಿಧ ಪೌಷ್ಟಿಕ ತಿನಿಸುಗಳು ಹಾಗೂ ಶನಿವಾರ ಹಣ್ಣು ವಿತರಿಸುವ ಉದ್ದೇಶವಿದ್ದು, ಸರಕಾರದ ಅಂತಿಮ ಸೂಚನೆ ಬಂದ ಬಳಿಕ ಯೋಜನೆಗೆ ಚಾಲನೆ ಸಿಗಲಿದೆ.

ಕ್ರೀಡೆ
ಕಲ್ಲು-ಮುಳ್ಳಿನ ದಾರಿಯಲ್ಲೂ ನಿಲ್ಲದ ಹೆಜ್ಜೆ; ತಾಯಿಯ ಛಲಕ್ಕೆ ಮ್ಯಾರಥಾನ್ನಲ್ಲಿ ಪ್ರಥಮ ಸ್ಥಾನ
ಸುದ್ದಿದಿನ,ಮುಂಬಯಿ: ಬದುಕಿನಲ್ಲಿ ಎದುರಾಗುವ ಸಂಕಷ್ಟಗಳು ಕೆಲವೊಮ್ಮೆ ಮನುಷ್ಯನನ್ನು ಕುಗ್ಗಿಸುತ್ತವೆ. ಆದರೆ ತಾಯಿಯೊಬ್ಬಳಿಗೆ ಮಕ್ಕಳ ಭವಿಷ್ಯದ ಕನಸು ದೊಡ್ಡದಾಗಿದ್ದರೆ, ಆಕೆಯ ಮುಂದೆ ನೋವು, ಬಡತನ, ಅಡೆತಡೆ ಯಾವುದೂ ನಿಲ್ಲುವುದಿಲ್ಲ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗೈನ 47 ವರ್ಷದ ರಮಾಬಾಯಿ ರಣವೀರ್ ಅವರ ಕಥೆ ಇದಕ್ಕೆ ಜೀವಂತ ಸಾಕ್ಷಿಯಾಗಿದೆ. ಪತಿಯ ಅಕಾಲಿಕ ಅಗಲಿಕೆಯ ಬಳಿಕ ಇಬ್ಬರು ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಹೋರಾಟ ನಡೆಸುತ್ತಿರುವ ರಮಾಬಾಯಿ, ಬರಿಗಾಲಿನಲ್ಲಿ ಮ್ಯಾರಥಾನ್ ಓಡಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.
http://Visit : www.suddidina.com
ಕೂಲಿ ಕೆಲಸದಿಂದ ಅಡುಗೆ ಕೆಲಸದವರೆಗೆ
ಮುಂಬಯಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡ ಬಳಿಕ ರಮಾಬಾಯಿ ಕುಟುಂಬದ ಜವಾಬ್ದಾರಿಯನ್ನು ಸಂಪೂರ್ಣವಾಗಿ ತಮ್ಮ ಹೆಗಲ ಮೇಲೆ ಹೊತ್ತರು. ಗದ್ದೆಗಳಲ್ಲಿ ಕೂಲಿ ಕೆಲಸ ಮಾಡುತ್ತಾ ಮಕ್ಕಳನ್ನು ಬೆಳೆಸಿದ ಅವರು, ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಅಂಬಾಜೋಗೈನ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವೊಂದರಲ್ಲಿ ಅಡುಗೆ ಕೆಲಸಕ್ಕೂ ಸೇರಿದರು.
ದಿನವಿಡೀ ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು ಸೇರಿದಂತೆ ದುಡಿಮೆಯ ನಡುವೆಯೂ ಅವರ ಮನಸ್ಸಿನಲ್ಲಿದ್ದದ್ದು ಒಂದೇ ಕನಸು—ತಮ್ಮ ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸ್ವಾವಲಂಬಿಗಳನ್ನಾಗಿ ಮಾಡುವುದು.
₹3 ಸಾವಿರಕ್ಕಾಗಿ ಆರಂಭವಾದ ಓಟ
ಮಕ್ಕಳ ವಿದ್ಯಾಭ್ಯಾಸದ ಅಗತ್ಯಕ್ಕೆ ಪುಸ್ತಕಗಳನ್ನು ಖರೀದಿಸಲು ಹಣ ಬೇಕಾಗಿತ್ತು. ಇದೇ ಸಂದರ್ಭದಲ್ಲಿ ‘ಅಮೃತ್ ದೌಡ್’ ಮ್ಯಾರಥಾನ್ ಕುರಿತು ಅವರಿಗೆ ಮಾಹಿತಿ ದೊರೆಯಿತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ₹3 ಸಾವಿರ ನೀಡಲಾಗುತ್ತದೆ ಎಂಬುದು ತಿಳಿದ ತಕ್ಷಣ ರಮಾಬಾಯಿ ಓಟದಲ್ಲಿ ಭಾಗವಹಿಸಲು ನಿರ್ಧರಿಸಿದರು.
ಯುವಕರು ಟ್ರ್ಯಾಕ್ಸೂಟ್ ಮತ್ತು ಶೂ ಧರಿಸಿ ಓಟಕ್ಕೆ ಸಜ್ಜಾಗಿದ್ದರೆ, ರಮಾಬಾಯಿ ಮಾತ್ರ ಸಾಮಾನ್ಯ ಸೀರೆಯಲ್ಲೇ ಸ್ಪರ್ಧೆಯ ಕಣಕ್ಕಿಳಿದರು. ಆರಂಭದಲ್ಲಿ ಕಾಲಿಗೆ ಚಪ್ಪಲಿ ಇದ್ದರೂ ಓಟದ ವೇಗ ಹೆಚ್ಚಾದಂತೆ ಅದು ಜಾರಲಾರಂಭಿಸಿತು.
ಚಪ್ಪಲಿ ಬಿಟ್ಟು ಬರಿಗಾಲಿನಲ್ಲಿ ಓಟ
ಗುರಿ ಮುಟ್ಟಬೇಕೆಂಬ ಛಲದ ಮುಂದೆ ಚಪ್ಪಲಿ ಅಡ್ಡಿಯಾಗಬಾರದು ಎಂದು ನಿರ್ಧರಿಸಿದ ರಮಾಬಾಯಿ, ಚಪ್ಪಲಿಯನ್ನು ಕೈಗೆತ್ತಿಕೊಂಡು ಬರಿಗಾಲಿನಲ್ಲೇ ಓಡತೊಡಗಿದರು. ರಸ್ತೆಯ ಕಲ್ಲು-ಮುಳ್ಳುಗಳು ಕಾಲಿಗೆ ಚುಚ್ಚಿದರೂ ಅವರು ಓಟ ನಿಲ್ಲಿಸಲಿಲ್ಲ.
ಸೀರೆಯ ಅಂಚನ್ನು ಸರಿಪಡಿಸಿಕೊಳ್ಳುತ್ತಾ, ನೋವನ್ನು ಮರೆತು ಗುರಿಯತ್ತ ಮುನ್ನುಗ್ಗಿದ ಅವರು ಎಲ್ಲ ಸ್ಪರ್ಧಿಗಳನ್ನು ಹಿಂದಿಕ್ಕಿ ಮೊದಲಿಗರಾಗಿ ಫಿನಿಶ್ ಲೈನ್ ತಲುಪಿದರು. ಈ ಗೆಲುವಿನ ಹಿಂದೆ ಬಹುಮಾನದ ಹಣಕ್ಕಿಂತಲೂ ದೊಡ್ಡದಾದ ಒಂದು ಕನಸು—ಮಕ್ಕಳ ಭವಿಷ್ಯ—ಇತ್ತು.
ತಾಯಿಯ ಹಾದಿಯಲ್ಲೇ ಮಗಳ ಗೆಲುವು
ಈ ಮ್ಯಾರಥಾನ್ನಲ್ಲಿ ರಮಾಬಾಯಿಯ ಮಗಳು ಪೂಜಾ ಕೂಡ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುವುದು ವಿಶೇಷ. ತಾಯಿಯ ಪರಿಶ್ರಮದಿಂದ ಪ್ರೇರಣೆ ಪಡೆದ ಪೂಜಾ, ಭವಿಷ್ಯದಲ್ಲಿ ಪೊಲೀಸ್ ಅಧಿಕಾರಿಯಾಗುವ ಸಂಕಲ್ಪ ಮಾಡಿದ್ದಾರೆ. ಮತ್ತೊಬ್ಬ ಮಗಳು ಬ್ಯಾಂಕಿಂಗ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.
ಪೂಜಾಳ ಪರಿಶ್ರಮ ಮತ್ತು ರಮಾಬಾಯಿಯ ತ್ಯಾಗವನ್ನು ಗಮನಿಸಿದ ತರಬೇತಿ ಅಕಾಡೆಮಿಯ ನಿರ್ದೇಶಕರು ಪೂಜಾಳ ಶಿಕ್ಷಣ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡಿದ್ದಾರೆ. ಹೀಗಾಗಿ ಒಂದು ಮ್ಯಾರಥಾನ್ ಗೆಲುವು ಕೇವಲ ₹3 ಸಾವಿರದ ಬಹುಮಾನಕ್ಕೆ ಸೀಮಿತವಾಗದೆ, ಕುಟುಂಬದ ಭವಿಷ್ಯಕ್ಕೆ ಹೊಸ ಆಶಾಕಿರಣವನ್ನೇ ಮೂಡಿಸಿದೆ.

-
ದಿನದ ಸುದ್ದಿ6 days agoಮಹಿಳೆಯರ ಉಚಿತ ಪ್ರಯಾಣದ ನಡುವೆ ನಿಗಮಗಳಿಗೆ ಹಣಕಾಸಿನ ಸಂಕಷ್ಟ; ವೇತನ, ಡೀಸೆಲ್ ಖರೀದಿಗೂ ಎದುರಾಗುತ್ತಿದೆ ಒತ್ತಡ
-
ದಿನದ ಸುದ್ದಿ6 days agoಸಾಮಾಜಿಕ ಬದಲಾವಣೆಗೆ ಮಾದರಿಯಾಗಬೇಕಿದ್ದ ಯೋಜನೆಗೆ ದಾಖಲೆ, ಅನುದಾನ ಕೊರತೆ ಅಡ್ಡಿ; ಸಾವಿರಾರು ಅರ್ಜಿಗಳು ಬಾಕಿ
-
ದಿನದ ಸುದ್ದಿ6 days agoಭದ್ರಾ ಜಲಾಶಯ: ಮಲೆನಾಡಿನ ಮಳೆಯಿಂದ ಬಯಲುಸೀಮೆಯ ಹಸಿರಿನವರೆಗೆ… ಲಕ್ಷಾಂತರ ಜನರ ಬದುಕಿನ ಜಲನಾಡಿ!
-
ಸಿನಿ ಸುದ್ದಿ6 days agoಅಭಿಮಾನಿಗಳ ಸಂಭ್ರಮದಿಂದ ದೂರ ಕಿಚ್ಚನ ಬರ್ತ್ಡೇ; 53ನೇ ವಸಂತದಲ್ಲಿ ಸುದೀಪ್ ಸಿನಿಮಾ ಸರ್ಪ್ರೈಸ್ಗೆ ಕೌಂಟ್ಡೌನ್!
-
ನಿತ್ಯ ಭವಿಷ್ಯ6 days agoಮೇಷದಿಂದ ಮೀನದವರೆಗೆ: ಉದ್ಯೋಗ, ಹಣಕಾಸು, ಕುಟುಂಬ, ಆರೋಗ್ಯದಲ್ಲಿ ಏನಿದೆ?


