ರಾಜಕೀಯ
ಮಲ್ಲಿಕಾರ್ಜುನ ಖರ್ಗೆಯವರು ಯಾಕೆ ಗೆಲ್ಲಬೇಕು ಎಂದರೆ…!
2004 ಈಗಿನಂತಹದ್ದೇ ದೆಹಲಿಯ ಏಪ್ರಿಲ್-ಮೇ ತಿಂಗಳ ಸುಡು ಬಿಸಿಲಿನ ಕಾಲ. ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಪಕ್ಷ ಸೋತು ಜೆಡಿ ಎಸ್ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದ ಹೊತ್ತು. ಕಾಂಗ್ರೆಸ್ ಪಕ್ಷದ ಇಬ್ಬರು ಮುಖ್ಯಮಂತ್ರಿ ಅಭ್ಯರ್ಥಿಗಳ ಸಂದರ್ಶನ ಮಾಡಲು ಹೊರಟಿದ್ದೆ.
ಮೊದಲು ಧರ್ಮಸಿಂಗ್ ಸಿಕ್ಕರು. ಮೆದು ಸ್ವಭಾವದ, ಬಹಳ ಡಿಪ್ಲೊಮೆಟಿಕ್ ಆಗಿ ಮಾತನಾಡುವ ಧರ್ಮಸಿಂಗ್ ಆ ದಿನ ತೀರಾ ಅಗ್ರೆಸಿವ್ ಆಗಿದ್ದರು. ‘’ಹೌದು, ನಾನು ಮುಖ್ಯಮಂತ್ರಿ ಪದವಿ ಆಕಾಂಕ್ಷಿ ಎಂದು ಬರೆಯಿರಿ’’ ಎಂದು ಜೋರು ದನಿಯಲ್ಲಿಯೇ ವಿವರವಾಗಿ ಮಾತನಾಡಿದ್ದರು.
ಅದರ ನಂತರ ಪಕ್ಕದ ರೂಮ್ ನಲ್ಲಿದ್ದ ಖರ್ಗೆ ಬಳಿ ಹೋದೆ. ಅವರು ‘’ ನೋಡ್ರಿ ದಿನೇಶ್, ಈ ಸಂದರ್ಶನ ಎಲ್ಲ ಬೇಡ, ನಮ್ಮಪಕ್ಷ ನಿಮಗೆ ಗೊತ್ತಲ್ಲ, ಹೈಕಮಾಂಡ್ ಗೆ ಇಷ್ಟವಾಗುವುದಿಲ್ಲ. ನೀವೇ ಲೇಖನ ಬರೆದು ಬಿಡಿ, ಸಂದರ್ಶನ ಬೇಡ’’ ಅಂದ್ರು ‘’ ನೋಡಿ ಸಾರ್, ಈಗಾಗಲೇ ನಿಮ್ಮ ಸ್ನೇಹಿತರು ನಾನು ಸಿಎಂ ಪದವಿಯ ಆಕಾಂಕ್ಷಿ ಎಂದು ಹೇಳಿಬಿಟ್ಟಿದ್ದಾರೆ. ಅವರಿಗೆ ಹೈಕಮಾಂಡ್ ಭಯ ಇಲ್ವಾ?’’ ಎಂದೆ. ಆಗಲೂ ಹಿಂದೆ ಮುಂದೆ ನೋಡಿದರು. ಅವರ ಜತೆ ನನಗೆ ಸ್ವಲ್ಪ ಸಲಿಗೆ ಇದೆ. ಆ ಕಾರಣಕ್ಕೆ ಸ್ವಲ್ಪ ಸಿಟ್ಟೂ ಬಂದಿತ್ತು. ‘’ ನೋಡಿ ಸಾರ್, ನೀವು ಹೀಗೆ ಹಿಂಜರಿಯುತ್ತಾ ಕೂತರೆ ಮುಖ್ಯಮಂತ್ರಿ ಆಗುವುದೇ ಇಲ್ಲ’’ ಎಂದು ಬಿಟ್ಟೆ, ನಕ್ಕರು. ಕೊನೆಗೂ ಅವರನ್ನು ಸಂದರ್ಶನಕ್ಕೆ ಒಪ್ಪಿಸುವಷ್ಟರಲ್ಲಿ ಸಾಕಾಗಿ ಹೋಗಿತ್ತು.
2013ರ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಇದೇ ಏಪ್ರಿಲ್ ತಿಂಗಳ ಬಿಸಿಲಲ್ಲಿ ಧರ್ಮಸಿಂಗ್ ಮತ್ತು ಖರ್ಗೆ ಅವರ ಜತೆಯಲ್ಲಿ ಎರಡು ದಿನ ಅವರ ಹೆಲಿಕಾಪ್ಟರ್ ನಲ್ಲಿ ಸುತ್ತಿದ್ದೆ. ಆ ದಿನಗಳಲ್ಲಿ ಸಂವಿಧಾನದ 371ಜೆ ತಿದ್ದುಪಡಿಯ ರೂವಾರಿಯಾಗಿದ್ದ ಖರ್ಗೆ ‘’ವಿಕಾಸ ಪುರುಷ’’ನ ಹೊಸ ಅವತಾರದಲ್ಲಿದ್ದರು. ಹೋದಲ್ಲೆಲ್ಲ ಜೈಕಾರ.
ನಮ್ಮ ಹಾರಾಟದ ಮೊದಲ ದಿನ ನಾಲ್ಕು ಕ್ಷೇತ್ರಗಳನ್ನು ಆರಿಸಿಕೊಂಡಿದ್ದರು. ಅದರ ಬಗ್ಗೆ ಹೇಳುತ್ತಾ ‘’ ನೋಡಿ, ನಾವು ಹೋಗುತ್ತಿರುವ ನಾಲ್ಕೂ ಕ್ಷೇತ್ರಗಳಲ್ಲಿರುವ ನಮ್ಮ ಪಕ್ಷದ ಅಭ್ಯರ್ಥಿಗಳು ನನ್ನ ಲೋಕಸಭಾ ಚುನಾವಣೆಯಲ್ಲಿ ನನಗೆ ವಿರುದ್ಧವಾಗಿ ಕೆಲಸ ಮಾಡಿದ್ದರು ಗೊತ್ತಾ? ಎಂದರು. ನನಗೆ ಆಶ್ಚರ್ಯವಾಯಿತು.
‘’ ಹಾಗಿದ್ದರೆ ಅವರಿಗೆ ಟಿಕೆಟ್ ತಪ್ಪಿಸಬಹುದಿತ್ತಲ್ಲಾ?’’ ಎಂದೆ.. ‘’ ಛೇ, ಹಾಗೆಲ್ಲ ಮಾಡೋಕ್ಕಾಗುತ್ತಾ, ಅವರಿಗೆ ಟಿಕೆಟ್ ತಪ್ಪಿಸಿದೆ ಎಂದು ತಿಳಿದುಕೊಳ್ಳಿ. ಏನಾಗುತ್ತಿತ್ತು? ಅವರು ಬಂಡುಕೋರರಾಗಿ ಸ್ಪರ್ಧಿಸುತ್ತಿದ್ದರು. ಅದರಿಂದ ನಮ್ಮ ಪಕ್ಷದ ಅಭ್ಯರ್ಥಿ ಸೋತುಹೋದರೆ ಅದನ್ನು ಮತ್ತೆ ಕೈಗೆ ತೆಗೆದುಕೊಳ್ಳಲು ಹತ್ತು ವರ್ಷ ಬೇಕು. ಅವರನ್ನು ಗೆಲ್ಲಿಸಿದರೆ ನನ್ನ ಮುಂದಿನ ಚುನಾವಣೆಯಲ್ಲಿಯಾದರೂ ನನ್ನ ಪರವಾಗಿ ಕೆಲಸ ಮಾಡಬಹುದಲ್ಲಾ?’’ ಎಂದರು. ಆ ದಿನ ನಾವು ಹೋಗಿದ್ದ ಎರಡು ಕ್ಷೇತ್ರಗಳಲ್ಲಿ ಒಂದು ಅಫಜಲ್ ಪುರ, ಇನ್ನೊಂದು ಚಿಂಚೋಳಿ. (ಆಗಲೂ ಚಿಂಚೋಳಿ ಬೀದರ್ ಲೋಕಸಭೆಗೆ ಸೇರಿತ್ತು)
ಕಾಂಗ್ರೆಸ್ ಪಕ್ಷದಲ್ಲಿ ‘’ ಸೋಲಿಸುವ ರಾಜಕಾರಣ’’ ದ ಪಂಟರ್ ಗಳಿದ್ದಾರೆ. ಅವರ ಜೊತೆ ಮಾತನಾಡುವಾಗೆಲ್ಲ ಖರ್ಗೆಯವರ ಜತೆಗಿನ ಈ ಮಾತುಕತೆಯನ್ನು ತಪ್ಪದೆ ಹೇಳುತ್ತೇನೆ. ಒಳಗುದ್ದುಗಳ ಮೂಲಕ ‘’ಸೋಲಿಸುವ ರಾಜಕಾರಣ’’ದ ಮೂಲಕ ರಾಜಕೀಯವಾಗಿ ಗೆದ್ದವರು ಕಡಿಮೆ ಎನ್ನುವದು ನನ್ನ ಅನುಭವ.
ಮಲ್ಲಿಕಾರ್ಜುನ ಖರ್ಗೆಯವರ ಜತೆಗಿನ ಈ ಎರಡು ಮಾತುಕತೆಗಳಲ್ಲಿ ನನಗೆ ಕಂಡದ್ದು ಅವರ ಪ್ರಶ್ನಾತೀತ ಪಕ್ಷ ನಿಷ್ಠೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಪಕ್ಷ ನಿಷ್ಠೆಯಿಂದಾಗಿ ಅವರಿಗೆ ರಾಜಕೀಯದಲ್ಲಿ ಲಾಭಕ್ಕಿಂತ ನಷ್ಟವಾದುದೇ ಹೆಚ್ಚು. ಯಾರಿಗೆ ಗೊತ್ತು, ಮುಂದಿನ ದಿನಗಳಲ್ಲಿ ಅವರಿಗಾಗಲಿರುವ ದೊಡ್ಡ ರಾಜಕೀಯ ಲಾಭವಾಗಿ ಬಿಟ್ಟರೆ, ಹಿಂದಿನ ದಿನಗಳ ರಾಜಕೀಯ ನಷ್ಟಗಳು ಸಣ್ಣಪುಟ್ಟ ಎಂದು ಅನಿಸಿಬಿಡಬಹುದು. ಹಾಗಾಗಲಿ. ಆ ದೊಡ್ಡ ಲಾಭದ ಸಾಧ್ಯತೆ ಯಾವುದೆಂದು ಬಿಡಿಸಿ ಹೇಳಬೇಕೇ?
–ದಿನೇಶ್ ಅಮಿನ್ ಮಟ್ಟು
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | 18 ನೇ ವಾರ್ಡ್ ನಲ್ಲಿ ಕೈ ಅಭ್ಯರ್ಥಿ ಸಮರ್ಥ ಶಾಮನೂರು ಪ್ರಚಾರ
ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಅವರು ಮಂಗಳವಾರ 18 ನೇ ವಾರ್ಡ್ ವ್ಯಾಪ್ತಿಯಲ್ಲಿ ಅಬ್ಬರ ಪ್ರಚಾರ ನಡೆಸಿದರು.
ನಗರದ ಬಾರ್ ಲೈನ್ ದರ್ಗಕ್ಕೆ ತೆರಳಿ ಚಾದರ ಅರ್ಪಿಸಿದ ಸಮರ್ಥ ಶಾಮನೂರು ಅವರಿಗೆ ಮುಸ್ಲಿಂ ಸಮಾಜದ ಬಾಂಧವರು ಆತ್ಮೀಯವಾಗಿ ಸನ್ಮಾನಿಸಿದರು. ಬಳಿಕ ಅಲ್ಲಿಂದ ಪ್ರಚಾರವನ್ನು ಆರಂಭಿಸಿದ ಅವರು ಎಂ.ಬಿ ಕೇರಿ, ಮಟನ್ ಮಾರ್ಕೇಟ್, ಗಡಿಯಾರ ಕಂಬ, ಸ್ವಾಗೇರ್ ಪೇಟೆ, ಹೊಂಡದ ರಸ್ತೆ, ಕಾಯಿಪೇಟೆಯ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ನರಸಿಂಹಪ್ಪ, ರವಿಕುಮಾರ್, ಕಾಶಿನಾಥ್ ಅವರ ಮನೆಗೆ ಅಭ್ಯರ್ಥಿ ಸಮರ್ಥ ಶಾಮನುರು ಅವರು ಭೇಟಿ ನೀಡಿದಾಕ್ಷಣ ಕುಟುಂಬಸ್ಥರು ದಿವಂಗತರಾದ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ನೆನೆದು ಭಾವುಕರಾದರು. ಶಾಮನೂರು ಸಮರ್ಥ ಅವರಿಗೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಂಡ ಬಹುಮತವನ್ನು ನೀಡಿ ಗೆಲ್ಲಿಸುತ್ತೇವೆ ಎಂದು ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡರಾದ ಚಂದ್ರ ಶೇಖರ್, ಸೋಗಿ ಶಾಂತಕುಮಾರ್, ಪ್ರವೀಣ್ ರಾವ್, ಬಕ್ಕೇಶ್, ಪರಮೇಶ್, ಜಯರಾಜ್, ಹನುಮಂತ್, ರಾಘವೇಂದ್ರ, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕರ್ನಾಟಕ ಜಾಹೀರಾತು ನೀತಿಗೆ ಸಂಪಾದಕರ ವಿರೋಧ ; ಸಿಎಂಗೆ ಮನವಿ
ನೀತಿಯನ್ನು ಪರಿಶೀಲಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಮಧ್ಯಾಹ್ನ ನಗರದ ಎಂ.ಬಿ.ಎ ಗ್ರೌಂಡ್ ಹೆಲಿಪ್ಯಾಡ್ ನಲ್ಲಿ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕರ್ನಾಟಕ ಜಾಹೀರಾತು ನೀತಿ-2026 ಜಿಲ್ಲಾ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿದ್ದು,ಇದರಿಂದ ಶತಶತಮಾನಗಳಿಂದ ಸಮಾಜದ ಮತ್ತು ಸರ್ಕಾರದ ಕೊಂಡಿಯಾಗಿ ಸೇವೆ ಮಾಡುತ್ತಿರುವ ಪತ್ರಿಕೆಗಳು ಮುಚ್ಚುತ್ತವೆ. ಯಾವುದೇ ಕಾರಣಕ್ಕೂ ಪತ್ರಿಕೆಗಳಿಗೆ ಮಾರಕವಾಗುವ ನಿಯಮಗಳನ್ನು ಅಳವಡಿಸದೇ ಪತ್ರಿಕೆಗಳ ಏಳಿಗೆಗೆ ಪೂರಕವಾದ ಅಂಶಗಳನ್ನು ಸೇರಿಸಿ ಕರ್ನಾಟಕ ಜಾಹೀರಾತು ನೀತಿಯನ್ನು ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.
ಸಂಘಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಜಾಹೀರಾತು ನೀತಿ ಪರಿಶೀಲಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ಆರ್ ಕುಣೆಬೆಳಕೆರೆ, ಖಜಾಂಜಿ ಶಿವಮೂರ್ತಿ ಟಿ.ಜಿ , ರಾಜ್ಯ ಸಂಘದ ನಾಮನಿರ್ದೇಶನ ಸದಸ್ಯ ಕೆ.ಜೈಮುನಿ ಮತ್ತು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕರಾದ ಇ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ಖಜಾಂಚಿ ಜೆ.ಎಸ್.ವೀರೇಶ್ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಬಡದಾಳ್ , ಹಿರಿಯ ಪತ್ರಕರ್ತರಾದ ಕೆ.ಏಕಾಂತಮ್ಮ, ಬಿ.ಎನ್.ಮಲ್ಲೇಶ್, ಮಲ್ಲಿಕಾರ್ಜುನ ಕಬ್ಬೂರು, ಆರ್.ಎಸ್.ತಿಪ್ಪೇಸ್ವಾಮಿ, ಕೊಟ್ರೇಶ್ ಅಣಬೂರುಮಠ, ನಿಂಗಪ್ಪ, ಗೋವಿಂದ ರಾಜು, ಫಕೃದ್ದೀನ್, ಆರ್.ರವಿ,ಬಿ.ವಾಸುದೇವ, ರಾಘವೇಂದ್ರ ರಾವ್, ವೇದಮೂರ್ತಿ,ನಿಂಗಪ್ಪ, ಪರಶುರಾಮ, ನಂದಕುಮಾರ್ ಮುಂತಾದವರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


