ಬಹಿರಂಗ
ನಿರಂತರ ದೌರ್ಜನ್ಯದ ನಡುವೆ ಈ ಒಂದು ದಿನ
- ನಾ ದಿವಾಕರ
ಮತ್ತೊಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಮತ್ತೊಂದು ಒಕ್ಕೊರಲ ಪ್ರತಿರೋಧದ ದಿನ, ಮತ್ತೊಂದು ಕಪ್ಪು ಬಾವುಟ ಪ್ರದರ್ಶನ. ಭಾರತದಲ್ಲಿ ದೌರ್ಜನ್ಯಗಳ ವಿರುದ್ಧ ನಿರಂತರವಾಗಿ, ಶಾಶ್ವತವಾಗಿ ಹೋರಾಡುತ್ತಿರುವ ಸಮುದಾಯಗಳೆಂದರೆ ಅಸ್ಪೃಶ್ಯರು-ದಲಿತರು ಮತ್ತು ಮಹಿಳೆಯರು.
70 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರವೂ ಒಂದು ಸಂವಿಧಾನಬದ್ಧ ಪ್ರಜಾಪ್ರಭುತ್ವದಲ್ಲಿ ಇದು ಅಪಭ್ರಂಶ ಎನಿಸಬಹುದು. ಆದರೆ ಇದು ಭಾರತದ ವಾಸ್ತವ. ವಸಾಹತು ಕಾಲಘಟ್ಟಕ್ಕಿಂತಲೂ ಕ್ರೂರವಾದ ಒಂದು ಆಡಳಿತ ವ್ಯವಸ್ಥೆಯನ್ನು ಈ ದೇಶದ ಮಹಿಳೆಯರು ಎದುರಿಸುತ್ತಿದ್ದಾರೆ.
ತುಳಿತಕ್ಕೊಳಗಾದ ಸಮುದಾಯಗಳ ಮಹಿಳೆಯರು ದಿನದಿಂದ ದಿನಕ್ಕೆ ಇನ್ನೂ ಹೆಚ್ಚಿನ ದೌರ್ಜನ್ಯ ಎದುರಿಸುತ್ತಿದ್ದಾರೆ. ಇತ್ತೀಚಿನ ಕೆಲವು ಪ್ರಸಂಗಗಳಲ್ಲಿ ನ್ಯಾಯ ವ್ಯವಸ್ಥೆಯೂ ಪಿತೃಪ್ರಧಾನ ಮೌಲ್ಯಗಳನ್ನು ಪುಷ್ಟೀಕರಿಸುವಂತಹ ತೀರ್ಪುಗಳನ್ನು ನೀಡುತ್ತಿದೆ.
ಮಹಿಳಾ ದಿನ ಎಂದ ಕೂಡಲೇ ಸಾಧಕರ ಪಟ್ಟಿಯನ್ನು ಸಿದ್ಧಪಡಿಸಲು ಮುದ್ರಣ-ವಿದ್ಯುನ್ಮಾನ ಮಾಧ್ಯಮಗಳು ತುದಿಗಾಲಲ್ಲಿ ನಿಂತಿರುತ್ತವೆ. ಮೇಡಂ ಕ್ಯೂರಿ ಇಂದ ಇತ್ತೀಚಿನ ಹಿಮಾದಾಸ್ವರೆಗೆ ಮಹಿಳಾ ಸಾಧಕಿಯರ ಚಿತ್ರಗಳು ರಾರಾಜಿಸುತ್ತವೆ. ಇದು ಅವಶ್ಯವೂ ಹೌದು.
ಏಕೆಂದರೆ ಈ ದೇಶದಲ್ಲಿ ಓರ್ವ ಹುಡುಗಿ ಹತ್ತನೆ ತರಗತಿಯಲ್ಲಿ ಪ್ರಥಮ ಸ್ಥಾನ ಗಳಿಸುವುದೇ ಪತ್ರಿಕೆಯ ಮುಖ್ಯ ಸುದ್ದಿಯಾಗುತ್ತದೆ. ಐಎಎಸ್ ತೇರ್ಗಡೆಯಾದ ಮಹಿಳೆ ಮುಖ್ಯ ಸುದ್ದಿಯಾಗುತ್ತಾಳೆ. ಅಂದರೆ ಮಹಿಳೆಯರ ಸಾಧನೆ ಸಹಜ ಸುದ್ದಿಯಾಗುವುದಕ್ಕಿಂತಲೂ ಸಂಭ್ರಮದ ಸುದ್ದಿಯಾಗುತ್ತದೆ. ಕಾರಣ, ಭಾರತದ ಪುರುಷ ಸಮಾಜದ ಆಂತರ್ಯದಲ್ಲಿ ಇನ್ನೂ ಸ್ತ್ರೀ ಸಂವೇದನೆ ಗಟ್ಟಿಯಾಗಿಲ್ಲ.
ಈ ಸೂಕ್ಷ್ಮ ದ್ವಂದ್ವ ನಮಗೆ ಅರ್ಥವಾಗುವುದು ಮಹಿಳೆಯರ ಮೇಲೆ ನಿರಂತರ ದೌರ್ಜನ್ಯಗಳು ನಡೆದಾಗ. ಒಬ್ಬ ಆಟೋ ಚಾಲಕನ ಮಗಳು, ಬೀದಿ ವ್ಯಾಪಾರಿಯ ಮಗಳು ಹತ್ತನೆ ತರಗತಿಯಲ್ಲಿ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದರೆ ಅವರ ಮನೆ ಬಾಗಿಲಿಗೆ ಹೋಗಿ ಸಂದರ್ಶನ ನಡೆಸಿ ಮೇಳೈಸುವ ದೃಶ್ಯ ಮಾಧ್ಯಮಗಳು, ಇದೇ ಶ್ರಮಜೀವಿಗಳ ಹೆಣ್ಣು ಮಕ್ಕಳು ಬಾಲ್ಯ ವಿವಾಹದ ಪೀಡನೆಗೆ ಬಲಿಯಾದಾಗ, ವೇಶ್ಯಾವಾಟಿಕೆಗೆ ಬಲಿಯಾದಾಗ, ಮಾನವ ಸಾಕಾಣಿಕೆಗೆ ಬಲಿಯಾದಾಗ, ಅತ್ಯಾಚಾರ ಮತ್ತು ಹತ್ಯೆಗೀಡಾದಾಗ, ಮರ್ಯಾದಾ ಹತ್ಯೆಗೀಡಾದಾಗ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಕುಳಿತುಬಿಡುತ್ತವೆ. ಪುರುಷ ಸಮಾಜ ಮಹಿಳೆಯರನ್ನು ಭೋಗದ ವಸ್ತುವನ್ನಾಗಿ ನೋಡುವಂತೆಯೇ ಮಾಧ್ಯಮಗಳು ಟಿ ಆರ್ ಪಿ ಸರಕುಗಳಂತೆ ನೋಡುತ್ತವೆ. ನಿರ್ಭಯಾಳಿಂದ ಹಥ್ರಾಸ್ವರೆಗೆ ಈ ದ್ವಂದ್ವವನ್ನು ಗಮನಿಸುತ್ತಲೇ ಬಂದಿದ್ದೇವೆ.
ಮಹಿಳೆ ಎಂದಾಕ್ಷಣ ತಾಯಿ, ಮಗಳು, ಮಡದಿ, ಸೋದರಿ ಹೀಗೆ ಮನುಜ ಸಂಬಂಧಗಳ ಸಂಕೋಲೆಗಳಲ್ಲಿ ಬಂಧಿಯಾಗುವ ಚಿತ್ರಣವನ್ನೇ ವೈಭವೀಕರಿಸುತ್ತಾ, ಭವ್ಯ ಪರಂಪರೆ, ಸಂಸ್ಕೃತಿಯ ನೆಲೆಗಳಲ್ಲಿ ಮಹಿಳೆಯರ ಸ್ಥಾನಮಾನಗಳನ್ನು ನಿಷ್ಕರ್ಷೆ ಮಾಡುವ ನಾವು ಇದೇ ತಾಯಂದಿರು, ಅಕ್ಕ ತಂಗಿಯರು, ಹೆಣ್ಣು ಮಕ್ಕಳು, ಮಡದಿಯರು ಈ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು, ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡಲು, ಮನುಜ ಸೇತುವೆಗಳನ್ನು ಕಟ್ಟಲು, ಭವ್ಯ ಭಾರತವನ್ನು ಕಟ್ಟಲು ಹಗಲಿರುಳು ಶ್ರಮಿಸುವುದನ್ನು ಸಾಧನೆಗಳ ಶಿಖರಗಳ ಛಾಯೆಯಲ್ಲೇ ಕಾಣಲು ಬಯಸುತ್ತೇವೆ. ಈ ಸಾಧನೆಯ ಹಾದಿಯಲ್ಲಿ ಮಹಿಳೆಯರು ಅನುಭವಿಸುವ ನೋವು , ಸಂಕಷ್ಟ, ಬವಣೆ ಮತ್ತು ಕಿರುಕುಳಗಳು ನಮ್ಮ ಗಮನಕ್ಕೆ ಬರುವುದು ಹಾಳೆಗಳ ಮೇಲೆ ಮಾತ್ರ.
ಅಂಗನವಾಡಿ ಸಹಾಯಕರು, ಆಶಾ ಕಾರ್ಯಕರ್ತೆಯರು, ಆಸ್ಪತ್ರೆಗಳಲ್ಲಿ ದುಡಿಯುವ ದಾದಿಗಳು, ಪೌರ ಕಾರ್ಮಿಕರಾಗಿ ಶ್ರಮಿಸುವ ಕೋಟ್ಯಂತರ ಮಹಿಳೆಯರು ಪುರುಷ ಸಮಾಜದ ದರ್ಪ ಮತ್ತು ಅಟ್ಟಹಾಸದ ನಡುವೆಯೇ ನಿತ್ಯ ಕಿರುಕುಳ ಅನುಭವಿಸುವುದನ್ನು ಕಂಡೂ ಕಾಣದಂತೆ ಮೈಮರೆತಿರುತ್ತೇವೆ.
ಲೈಂಗಿಕ ಕಿರುಕುಳ ಅನುಭವಿಸುವವರಲ್ಲಿ ಈ ಕಾಯಕ ಜೀವಿಗಳಷ್ಟೇ ಇದ್ದಾರೆ ಎನ್ನುವುದು ಅರ್ಧಸತ್ಯ. ಸುಶಿಕ್ಷಿತ ಸಮಾಜದ ಒಂದು ಭಾಗವಾಗಿರುವ, ಮಧ್ಯಮ ವರ್ಗದವರೇ ತುಂಬಿರುವ ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ, ಕಾರ್ಖಾನೆಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲೂ ಮಹಿಳೆಯರು ಪುರುಷ ಸಮಾಜದ ಕಾಕದೃಷ್ಟಿಗೆ ಬಲಿಯಾಗುತ್ತಲೇ, ಮೌನಕ್ಕೆ ಜಾರಿರುತ್ತಾರೆ. ಕಾರ್ಯಕ್ಷೇತ್ರದಲ್ಲಿ ಲೈಂಗಿಕ ಕಿರುಕುಳವನ್ನು ನಿರ್ಬಂಧಿಸಲು, ನಿಯಂತ್ರಿಸಲು ಕಾನೂನು ಜಾರಿಮಾಡಿದ್ದರೂ ಇಂದಿಗೂ ಕಚೇರಿಗಳಲ್ಲಿ ಕಿರುಕುಳ ನಿಂತಿಲ್ಲ ಎನ್ನುವುದನ್ನು ಅನುಭವಿಸಿದವರೇ ಬಲ್ಲರು. ಇದು ಕಟು ವಾಸ್ತವ.
ಭಾರತದ ಸುಶಿಕ್ಷಿತ ಸಮಾಜ ಆಧುನಿಕತೆಯತ್ತ ಹೊರಳುತ್ತಿರುವಂತೆಲ್ಲಾ ತನ್ನ ಸೂಕ್ಷ್ಮ ಸಂವೇದನೆಯನ್ನೂ ಕಳೆದುಕೊಳ್ಳುತ್ತಿರುವುದನ್ನು ಈ ಬೆಳವಣಿಗೆಗಳಲ್ಲಿ ಕಾಣಬಹುದು. ರಾಜಕೀಯ ವಲಯದಲ್ಲಿ ಇಂದು ಮಹಿಳೆ ನಿರ್ಲಕ್ಷಿತಳಾಗುತ್ತಿದ್ದಾಳೆ. ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವ ಚಾರಿತ್ರಿಕ ಮಸೂದೆ ಪುರುಷಾಧಿಪತ್ಯದ ಅಧಿಕಾರ ರಾಜಕಾರಣದಲ್ಲಿ ಶಾಶ್ವತವಾಗಿ ಕಳೆದುಹೋಗಿದೆ.
ತಮ್ಮ ಪ್ರಣಾಳಿಕೆಗಳಲ್ಲೂ ಈ ಮಸೂದೆಯನ್ನು ಜಾರಿಗೊಳಿಸುವ ಆಶ್ವಾಸನೆಯನ್ನು ಯಾವುದೇ ಪಕ್ಷಗಳು ನೀಡುತ್ತಿಲ್ಲ. ಏಕೆಂದರೆ ಹಿಂದುತ್ವ ರಾಜಕಾರಣದ ಸಾಂಸ್ಕೃತಿಕ ರಾಷ್ಟ್ರೀಯತೆಯ ಪರಿಕಲ್ಪನೆಯಲ್ಲಿ ಇದಕ್ಕೆ ಅವಕಾಶವೇ ಇರುವುದಿಲ್ಲ. ರಾಜಕೀಯ ಪಕ್ಷಗಳಲ್ಲೂ ಸಹ ಮಹಿಳಾ ಸದಸ್ಯರಿಂದ ಈ ನಿಟ್ಟಿನಲ್ಲಿ ಒತ್ತಾಯ ಕಾಣದೆ ಇರುವುದು ಗಮನಿಸಬೇಕಾದ ಅಂಶ.
ಇತ್ತೀಚಿನ ಕೆಲವು ಬೆಳವಣಿಗೆಗಳಲ್ಲಿ ನ್ಯಾಯಾಂಗದ ಆವರಣದಲ್ಲೂ ಸ್ತ್ರೀ ಸಂವೇದನೆಯೇ ಇಲ್ಲದ ಕೆಲವು ತೀರ್ಪುಗಳನ್ನು ಕಾಣುತ್ತಿದ್ದೇವೆ. ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಾಧೀಶರು ಒಂದು ಪ್ರಕರಣದಲ್ಲಿ ಸಂತ್ರಸ್ತೆಯು ಬಾಲಕಿಯಾಗಿದ್ದಾಗ ಆಕೆಯ ಮೇಲೆ ನಿರಂತರ ಲೈಂಗಿಕ ಅತ್ಯಾಚಾರ ನಡೆಸಿದ ವ್ಯಕ್ತಿಗೆ “ ಸಂತ್ರಸ್ತೆಯನ್ನು ಮದುವೆಯಾಗುವೆಯಾ ” ಎಂದು ಕೇಳುವ ಮೂಲಕ ಆಯ್ಕೆ ಸ್ವಾತಂತ್ರ್ಯವನ್ನು ನೀಡುತ್ತಾರೆ.
ಮದುವೆಯಾಗುವುದಾದರೆ ಶಿಕ್ಷೆಯಿಂದ ಪಾರಾಗಬಹುದಲ್ಲವೇ ? ಇದು ಸ್ತ್ರೀ ಸೂಕ್ಷ್ಮತೆಯನ್ನು ಕೊಲ್ಲುವಂತಹ ಒಂದು ಬೆಳವಣಿಗೆ. ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯ ಬೇಗುದಿಯನ್ನು, ಅಂತರಿಕ ವೇದನೆಯನ್ನು ಮತ್ತು ಆಕೆಯ ಹೆಣ್ತನವನ್ನು ಗೌರವಿಸದ ಸಮಾಜದಲ್ಲಿ ಮಾತ್ರವೇ ಇಂತಹ ಪ್ರಸಂಗಗಳನ್ನು ಕಾಣಲು ಸಾಧ್ಯ.
ಇದರ ವ್ಯತಿರಿಕ್ತ ಅತಿರೇಕವನ್ನು ದೇಶಾದ್ಯಂತ ನಿರಂತರವಾಗಿ ನಡೆಯುತ್ತಲೇ ಇರುವ ಮರ್ಯಾದಾ-ಗೌರವ ಹತ್ಯೆಗಳಲ್ಲಿ ” ಕಾಣುತ್ತಿದ್ದೇವೆ. ಅನ್ಯ ಜಾತಿಯವನನ್ನು, ಅನ್ಯ ಕೋಮಿನ ವ್ಯಕ್ತಿಯನ್ನು ಪ್ರೀತಿಸುವ ಹೆಣ್ಣು ಮಕ್ಕಳನ್ನು ನಿರ್ಭೀತಿಯಿಂದ ಕೊಲೆ ಮಾಡುವ ಅಲಿಖಿತ ಕಾನೂನು ಭಾರತದಲ್ಲಿ ಇಂದಿಗೂ ಜಾರಿಯಲ್ಲಿದೆ. ಇಲ್ಲಿ ಹೆಣ್ಣು ಮಾತ್ರ ಅಪರಾಧಿಯಾಗುತ್ತಾಳೆ, ಗಂಡು ತನ್ನ ಹಕ್ಕು ಪ್ರತಿಪಾದಿಸುತ್ತಾನೆ.
ಈ ಹತ್ಯೆಗಳನ್ನು ಮರ್ಯಾದಾ-ಗೌರವ ಹತ್ಯೆ ಎಂದು ಸಾಮಾನ್ಯವಾಗಿ ಗುರುತಿಸಲಾಗುವುದಾದರೂ, ಇದು ಯಾರ ಗೌರವ ಅಥವಾ ಮರ್ಯಾದೆಯನ್ನು ಉಳಿಸುತ್ತದೆ ಎನ್ನುವ ಜಿಜ್ಞಾಸೆ ಕಾಡುವುದಂತೂ ಸತ್ಯ. ಒಂದು ಪ್ರಬುದ್ಧ ಸಮಾಜ ಇಂತಹ ಅಮಾನುಷ ಹತ್ಯೆಗಳಿಗೆ ಮುಂದಾಗುವುದರಿಂದ ತನ್ನ ಗೌರವವನ್ನು, ಮರ್ಯಾದೆಯನ್ನು ಕಳೆದುಕೊಳ್ಳುತ್ತದೆ.
ಮತಾಂಧತೆಯಿಂದ ಆವರಿಸಲ್ಪಟ್ಟಿರುವ ಭಾರತದ ಜಾತಿ ಪೀಡಿತ ಸಮಾಜದಲ್ಲಿ ಹೆಣ್ಣು ಲಕ್ಷ್ಮಣ ರೇಖೆಯನ್ನು ದಾಟುವುದೇ ಗೌರವಕ್ಕೆ ಚ್ಯುತಿ ಬರುವ ಕೃತ್ಯ ಎನಿಸಿಬಿಡುತ್ತದೆ. ನಮ್ಮ ಸುಶಿಕ್ಷಿತ ಸಮಾಜಕ್ಕೆ ಈ ಹತ್ಯೆಗಳು ಅಪರಾಧ ಎನಿಸುವುದೇ ಇಲ್ಲ. ಕೆಲವೊಮ್ಮೆ ಅತ್ಯಾಚಾರಗಳೂ ತಪ್ಪು ಎನಿಸುವುದಿಲ್ಲ ಎನ್ನುವುದನ್ನು ಹಥ್ರಾಸ್ ಸಂದರ್ಭದಲ್ಲಿ ಕಂಡಿದ್ದೇವೆ, ನಿರ್ಭಯಾ ಘಟನೆಯಲ್ಲೂ ಕಂಡಿದ್ದೇವೆ. ದಲಿತ ಅಥವಾ ಅಲ್ಪ ಸಂಖ್ಯಾತ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು, ಅತ್ಯಾಚಾರಗಳು ಭಾರತದ ಒಂದು ಬೃಹತ್ ಬೌದ್ಧಿಕ ವಲಯಕ್ಕೆ ಸ್ವೀಕಾರಾರ್ಹವೇ ಆಗಿಬಿಡುತ್ತದೆ.
ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪುವ ಸಂತ್ರಸ್ತೆಯನ್ನು ನಡುರಾತ್ರಿಯಲ್ಲಿ ಪೊಲೀಸರೇ ಸುಟ್ಟುಹಾಕಿದರೂ ನಮ್ಮ ಸಮಾಜ ವಿಚಲಿತವಾಗುವುದಿಲ್ಲ. 2018ರಲ್ಲಿ ಉತ್ತರಪ್ರದೇಶದ ಹಥ್ರಾಸ್ನಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯ ತಂದೆ, ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಆರೋಪಿಯಿಂದಲೇ ಹತ್ಯೆಗೀಡಾಗಿರುವುದು ಈ ಅಸೂಕ್ಷ್ಮತೆಯ ಮತ್ತೊಂದು ಮಜಲನ್ನು ನಮಗೆ ಪರಿಚಯಿಸುತ್ತದೆ.
ಲಿಂಗತ್ವ ಸಮಾನತೆಯನ್ನು ಸಾಧಿಸಲು ದೇಶದಲ್ಲಿ ಸಾಕಷ್ಟು ಕಾಯ್ದೆ ಕಾನೂನುಗಳನ್ನು ಜಾರಿಮಾಡಲಾಗಿದೆ. ನಿರ್ಭಯ ಪ್ರಕರಣದ ನಂತರದಲ್ಲಿ ವರ್ಮಾ ಸಮಿತಿಯ ಶಿಫಾರಸುಗಳನ್ನು ಆಧರಿಸಿ ಕೆಲವು ಕಠಿಣ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ) ಇಂತಹ ಕಾಯ್ದೆಗಳಲ್ಲಿ ಒಂದು.
ಆದರೆ ಈ ಕಾಯ್ದೆಗಳನ್ನು ಜಾರಿಮಾಡುವ ನಿಟ್ಟಿನಲ್ಲಿ ಕಾರ್ಯಾಂಗ ಮತ್ತು ನ್ಯಾಯಾಂಗ ಸೋಲುತ್ತಲೇ ಇದೆ. ಸಮಾಜದಲ್ಲಿ ಅಂತರ್ಗತವಾಗಿರುವ ಪಿತೃಪ್ರಧಾನ ಧೋರಣೆ ಮತ್ತು ಪುರುಷ ಪ್ರಧಾನ ಮನಸ್ಥಿತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳು ಕೇವಲ ಮಹಿಳಾ ಚಳುವಳಿಗಳಿಂದ ನಡೆಯುತ್ತಿವೆ.
ಮಹಿಳೆಯ ಘನತೆ ಮತ್ತು ಜೀವಿಸುವ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಭಾರತದ ನ್ಯಾಯಾಂಗ ಹಲವು ಚಾರಿತ್ರಿಕ ತೀರ್ಪುಗಳನ್ನು ನೀಡಿದೆ. ಇದೇ ವೇಳೆ ದೌರ್ಜನ್ಯಕ್ಕೊಳಗಾಗುವ ಮಹಿಳೆಯ ರಕ್ಷಣೆಗೆ ಬರುವಲ್ಲಿ ವಿಫಲವಾಗಿರುವುದನ್ನೂ ಭಾವರಿ ದೇವಿಯಂತಹ ಪ್ರಕರಣಗಳಲ್ಲಿ ಕಂಡಿದ್ದೇವೆ. ಇಂದಿಗೂ ಕಾಣುತ್ತಿದ್ದೇವೆ.
ಪಿತೃ ಪ್ರಧಾನ ಜಾತಿಪೀಡಿತ ಸಮಾಜದಲ್ಲಿ ನ್ಯಾಯ ವ್ಯವಸ್ಥೆಯನ್ನು ಪ್ರತಿನಿಧಿಸುವವರು ಜಾತ್ಯತೀತ ಮನೋಭಾವದೊಂದಿಗೇ ಸ್ತ್ರೀ ಸಂವೇದನೆಯನ್ನೂ ಹೊಂದಿರುವುದು ಎಷ್ಟು ಮುಖ್ಯ ಎನ್ನುವುದನ್ನು ಅನೇಕ ಪ್ರಕರಣಗಳಲ್ಲಿ ಗಮನಿಸಬಹುದು. ಇತ್ತೀಚೆಗೆ ಹಿಂದುತ್ವ ರಾಜಕಾರಣದ ಒಂದು ಭಾಗವಾಗಿಯೇ ರೂಪುಗೊಂಡಿರುವ ಲವ್ ಜಿಹಾದ್ ಕಾಯ್ದೆಗಳೂ ಸಹ ಮೂಲತಃ ಮಹಿಳಾ ವಿರೋಧಿಯಾಗಿದ್ದು ಇಲ್ಲಿಯೂ ಸಹ ಮಹಿಳೆಯ ಜೀವಿಸುವ ಹಕ್ಕು, ಘನತೆಯ ಹಕ್ಕು ಹಲ್ಲೆಗೊಳಗಾಗುತ್ತಿದೆ.
ಆಡಳಿತಾರೂಢ ಸರ್ಕಾರಗಳು ತಮ್ಮ ಸಾಂವಿಧಾನಿಕ ಹೊಣೆಗಾರಿಕೆಯನ್ನು ಮರೆತು ಖಾಪ್ ಪಂಚಾಯತ್ಗಳಿಗೆ, ಸಾಂಸ್ಕೃತಿಕ ಆರಕ್ಷಕ ಪಡೆಗಳಿಗೆ ಮತ್ತು ಧರ್ಮರಕ್ಷಕ ಗುಂಪುಗಳಿಗೆ ಮಾನ್ಯತೆ ನೀಡುವ ಮೂಲಕ ಪಿತೃಪ್ರಧಾನ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ನೆರವಾಗುತ್ತಿವೆ. ಸಾಂಪ್ರದಾಯಿಕ ಶಕ್ತಿಗಳು ಮತ್ತು ಮತಾಂಧರು ಎಲ್ಲ ಧರ್ಮಗಳಲ್ಲೂ ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದು, ಹೆಣ್ತನದ ಘನತೆಯನ್ನು ನಿರ್ಲಕ್ಷಿಸುತ್ತಿವೆ.
ಈ ಸಮಾಜೋ ಸಾಂಸ್ಕೃತಿಕ ಧೋರಣೆಗೆ ಪೂರಕವಾಗಿ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಯೂ ಇಲ್ಲವಾಗುತ್ತಿರುವುದು ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಲು ಮುಖ್ಯ ಕಾರಣವಾಗಿದೆ. ಮಹಿಳಾ ಸಬಲೀಕರಣದ ಘೋಷಣೆಗಳು ಸಮಾಜದ ಮೇಲ್ ಸ್ತರದ ವರ್ಗಗಳನ್ನು ಮಾತ್ರವೇ ಹೆಚ್ಚಾಗಿ ತಲುಪುತ್ತಿದ್ದು, ತಳಮಟ್ಟದ ಗ್ರಾಮೀಣ ಮಹಿಳೆಯರು ಇಂದಿಗೂ ಪುರುಷ ಸಮಾಜದ ಅಧಿಪತ್ಯಕ್ಕೆ ಒಳಗಾಗಿದ್ದಾರೆ. ಕೃಷಿ ಕಾರ್ಮಿಕರಿಂದ ಹಿಡಿದು ಕಾರ್ಖಾನೆಯಲ್ಲಿ ದುಡಿಮೆ ಮಾಡುವ ಮಹಿಳೆಯರವರೆಗೆ, ವೇತನ ನಿಗದಿಪಡಿಸುವ ಸಂದರ್ಭದಲ್ಲೂ, ಈ ತಾರತಮ್ಯವನ್ನು ಗಮನಿಸಬಹುದಾಗಿದೆ.
ಇಂದು ಭಾರತೀಯ ಮಹಿಳೆ ನಾಲ್ಕೂ ದಿಕ್ಕುಗಳಿಂದ ತಾರತಮ್ಯ , ಕಿರುಕುಳ, ದೌರ್ಜನ್ಯ ಎದುರಿಸಬೇಕಿದೆ. ಆರ್ಥಿಕವಾಗಿ ಮಾರುಕಟ್ಟೆ ಆರ್ಥಿಕತೆ ಮಹಿಳೆಯರನ್ನು ಅಗ್ಗದ ಶ್ರಮ ಸರಕುಗಳಂತೆ ಭಾವಿಸುತ್ತದೆ. ತನ್ನ ಲಾಭ ಹೆಚ್ಚಿಸಿಕೊಳ್ಳಲು ಔದ್ಯಮಿಕ ವಲಯ ಕಡಿಮೆ ವೇತನ ನೀಡುವ ಮೂಲಕ, ಮುಷ್ಕರದ ಹಕ್ಕುಗಳನ್ನು ಕಸಿದುಕೊಳ್ಳುವ ಮೂಲಕ, ಹೆಚ್ಚಿನ ದುಡಿಮೆ ಮಾಡಿಸಿಕೊಳ್ಳುವ ಮೂಲಕ ಮಹಿಳೆಯರನ್ನು ಶೋಷಣೆಗೊಳಪಡಿಸುತ್ತಿದೆ.
ಇದನ್ನೂ ಓದಿ |ಎಸ್ ಎಸ್ ಸಿ ವತಿಯಿಂದ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಸಾಮಾಜಿಕವಾಗಿ ಮಹಿಳೆ ಪುರುಷ ಸಮಾಜ ತನ್ನ ಸುತ್ತಲೂ ನಿರ್ಮಿಸಲಾಗಿರುವ ಬೇಲಿಗಳನ್ನು ದಾಟಲು ನಿರಂತರ ಹೋರಾಟ ಮಾಡಬೇಕಿದೆ. ಸಾಂಸ್ಕೃತಿಕವಾಗಿ ಸಾಂಪ್ರದಾಯಿಕ-ಮತಾಂಧ ಶಕ್ತಿಗಳು ಮಹಿಳೆಯರನ್ನು ನಾಲ್ಕು ಗೋಡೆಗಳ ನಡುವೆ ಬಂಧಿಸಲು ಸದಾ ಸನ್ನದ್ಧವಾಗಿರುತ್ತವೆ. ಶಹೀನ್ಭಾಗ್ ಪ್ರತಿಭಟನೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರು “ ಪ್ರತಿಭಟನೆಯಲ್ಲಿ ಮಹಿಳೆಯರು ಭಾಗವಹಿಸುವುದೇಕೆ ?” ಎಂದು ಪ್ರಶ್ನಿಸುವ ಮೂಲಕ ಇದೇ ಮನಸ್ಥಿತಿಯನ್ನು ಬಿಂಬಿಸಿದ್ದರು.
ಇಷ್ಟರ ನಡುವೆ ಅತ್ಯಾಚಾರ ಇಂದು ನಿತ್ಯ ಸುದ್ದಿಯಾಗಿಬಿಟ್ಟಿದೆ. ಅತ್ಯಾಚಾರಕ್ಕೊಳಗಾದ ಮಹಿಳೆಯ ಹತ್ಯೆ ಮಾಡುವುದು ನಾಗರಿಕ ಸಮಾಜದ ಒಂದು ವರ್ಗಕ್ಕೆ ಸುದ್ದಿ ಎನಿಸುವುದೇ ಇಲ್ಲ. ಭಾರತದ ವಿದ್ಯುನ್ಮಾನ ಮಾಧ್ಯಮಗಳ ಸುದ್ದಿಮನೆಗಳಿಗೆ ಮಹಿಳೆಯರ ಮೇಲಿನ ಈ ದೌರ್ಜನ್ಯಗಳು ಟಿ ಆರ್ ಪಿ ಹೆಚ್ಚಿಸಿಕೊಳ್ಳುವ ರೋಚಕ ಸುದ್ದಿಗಳಾಗಿ ಕಾಣುತ್ತವೆ.
ಹಾಗಾಗಿಯೇ ಅವೈಜ್ಞಾನಿಕ ಲಾಕ್ ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಪಟ್ಟ ಬವಣೆ ಮತ್ತು ಅದರಲ್ಲೂ ಮಹಿಳಾ ವಲಸೆ ಕಾರ್ಮಿಕರು ಎದುರಿಸಿದ ದುರ್ಭರ ದಿನಗಳು ಮುನ್ನೆಲೆಗೆ ಬರಲೇ ಇಲ್ಲ. ಇಂದು ದೇಶಾದ್ಯಂತ ವ್ಯಾಪಕವಾಗಿ ನಡೆಯುತ್ತಿರುವ ರೈತ ಮುಷ್ಕರದ ಸಂದರ್ಭದಲ್ಲೂ ಮಹಿಳಾ ಕೃಷಿ ಕಾರ್ಮಿಕರ ಮತ್ತು ಮಹಿಳಾ ರೈತರ ಸಮಸ್ಯೆಗಳು ಹೆಚ್ಚಾಗಿ ಮುನ್ನೆಲೆಗೆ ಬರುತ್ತಿಲ್ಲ ಎನ್ನುವುದೂ ಗಮನಿಸಬೇಕಾದ ಸಂಗತಿ.
ವಿಶ್ವ ಮಹಿಳಾ ದಿನ ಕೇವಲ ಮಹಿಳೆಯರ ಪ್ರತಿರೋಧದ ದಿನ ಆಗಬಾರದು, ಮಹಿಳೆಯರ ಹಕ್ಕೊತ್ತಾಯಗಳ ದಿನ ಆಗಬಾರದು. ಮಾರ್ಚ್ 8 ಭಾರತದಂತಹ ಸಾಂಪ್ರದಾಯಿಕ ಸಮಾಜಕ್ಕೆ ಆತ್ಮಾವಲೋಕನದ ದಿನ ಆಗಬೇಕು. ಈ ಒಂದು ದಿನವಾದರೂ ಆತ್ಮಾವಲೋಕನದ ಬಗ್ಗೆ ಆಲೋಚನೆ ಮಾಡುವ ಮನಸ್ಥಿತಿಯನ್ನು ಭಾರತದ ಪುರುಷ ಸಮಾಜ ಹೊಂದಿರಬೇಕು. ಆಗ ಮಾತ್ರ ಸ್ತ್ರೀ ಸಮಾನತೆ, ಸ್ತ್ರೀ ಸಂವೇದನೆ, ಹೆಣ್ತನದ ಘನತೆ, ಲಿಂಗತ್ವ ಸಮಾನತೆ ಮುಂತಾದ ಉದಾತ್ತ ಪದಗಳು ಅರ್ಥಪೂರ್ಣವಾಗುತ್ತವೆ.
ಕೃಪೆ : The Politic
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಭಾರತದ ಜನಸಂಖ್ಯೆ ವರವೋ..? ಶಾಪವೋ..?
- ಅಂಬಿಕಾ. ಕೆ
ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಬೆಂಗಳೂರು ವಿಶ್ವವಿದ್ಯಾಲಯ
ವಿಶ್ವ ಸಂಸ್ಥೆಯು ಪಾಪುಲೇಷನ್ ಫಂಡ್ ಮಾಡಿರುವ ಅಂದಾಜಿನ ಪ್ರಕಾರ ಭಾರತವು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎನಿಸಿಕೊಂಡಿದೆ.
ದೇಶದ ಒಟ್ಟು ಜನಸಂಖ್ಯೆಯು 142.86 ಕೋಟಿಗೆ ಏರಿಕೆಯಾಗಿದ್ದು, ಚೀನಾ ಎರಡನೇ ಸ್ಥಾನಕ್ಕೆ ಇಳಿದಿದೆ, ಇಂತಹದೊಂದು ಹಿರಿಮೆಗೆ ಭಾರತವು ಪಾತ್ರವಾಗಲಿದೆ ಎಂಬುದರ ಅರಿವು ಹಿಂದೆಯೇ ಇತ್ತು. ಹೊಸ ಭಾರತದ ಜನಸಂಖ್ಯೆಯ ಸ್ವರೂಪವೇನು ಮತ್ತು ಯಾವ ವಯೋ ಮಾನದವರು ಎಷ್ಟಿದ್ದಾರೆ. ಆದಾಯ ಮಟ್ಟ ಹೇಗಿದೆ, ಆದಾಯ ಹಂಚಿಕೆ ಹೇಗಿದೆ ಎಂಬುದರ ಕುರಿತು ಕೂಡ ಚರ್ಚೆಗಳು ನಡೆಯುತ್ತಿವೆ. ಒಟ್ಟು ಜನಸಂಖ್ಯೆಯ ಜತೆಗೆ ಈ ಎಲ್ಲಾ ಅಂಶಗಳು ಕೂಡ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮ ರೂಪಿಸುವಿಕೆ ಮೇಲೆ ಪ್ರಭಾವ ಬೀರುತ್ತವೆ. ರಾಜಕೀಯ ಪಕ್ಷಗಳು ಮತ್ತು ಗುಂಪುಗಳು ರಾಜಕೀಯ ಹಾಗೂ ಸಾಮಾಜಿಕ ಸ್ಥಾನಗಳನ್ನು ನಿರ್ಧರಿಸುವಲ್ಲಿಯೂ ಈ ಅಂಶಗಳು ಪಾತ್ರವಹಿಸುತ್ತವೆ ಭಾರತದಲ್ಲಿ ಗರಿಷ್ಠ ಸಂಖ್ಯೆಯು ಯುವ ಜನರಿದ್ದಾರೆ.
ಹಾಗೆಯೇ ಮುಂದುವರೆಯಲಿದೆ 15 ರಿಂದ 24 ವರ್ಷದೊಳಗಿನವರ ಸಂಖ್ಯೆಯು 25.4 ಕೋಟಿ ಎಂದು ಅಂದಾಜಿಸಲಾಗಿದೆ ಇನ್ನು ದೀರ್ಘಕಾಲ ಭಾರತವು ಈ ಸ್ಥಿತಿ ಕಾಯ್ದುಕೊಳ್ಳಲಿದೆ ಎಂಬುದರಲ್ಲಿಯೂ ಅನುಮಾನ ಇಲ್ಲ ಜನಸಂಖ್ಯೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನಕ್ಕೆ ಏರುವುದು, ಗೌರವ ಏನು ಅಲ್ಲ ಬದಲಿಗೆ ಇದು ದೇಶಕ್ಕೆ ಹಲವು ಸವಾಲುಗಳನ್ನು ಹುಟ್ಟುತ್ತದೆ ಜತೆಗೆ ಅವಕಾಶಗಳ ಬಾಗಿಗಳನ್ನು ತೆರೆಯುತ್ತದೆ ಆದರೆ, ಜನರನ್ನು ಸಕಾಲಿಕವಾಗಿ ಮತ್ತು ಪರಿಣಾಮಕಾರಿಯಾಗಿ ಬಲಿಸಿಕೊಳ್ಳದೆ ಇದ್ದರೆ ಜನಸಂಖ್ಯೆಯೇ ಶಾಪವಾಗಿ ದೊಡ್ಡ ಸವಾಲಾಗಿ ಪರಿಣಮಿಸಬಹುದು. ದೇಶ ಪ್ರತಿ ವರ್ಷವೂ ಹೆಚ್ಚು ಹೆಚ್ಚು ಜನರಿಗೆ ಆಹಾರ ಬಟ್ಟೆ ಶಿಕ್ಷಣ ಆರೋಗ್ಯ ಸೇವೆ ಉದ್ಯೋಗಾವಕಾಶಗಳನ್ನು ಒದಗಿಸಬೇಕಾಗುತ್ತದೆ.
ಹೀಗೆ ಮುಂದುವರೆದರೆ ಉದ್ಯೋಗಾವಕಾಶಗಳು ದೊರೆಯದೆ ಜನರ ಜೀವನ ಮಟ್ಟ ಸುಧಾರಿಸಿಕೊಳ್ಳುವುದು ಕಷ್ಟವೇ ಸರಿ ಕೆಲಸ ಮಾಡುವ ವಯೋಮಾನದ ಜನರನ್ನು ಸಮಂಜಸವಾಗಿ ಬಳಸಿಕೊಂಡರೇ ಮಾತ್ರ ಜನಸಂಖ್ಯೆಯು ದೇಶದ ಅಭಿವೃದ್ಧಿಗೆ ಪೂರಕವಾಗಿ ಪರಿಣಮಿಸುತ್ತದೆ. ದೇಶದಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಈಗಲೂ ಮೂಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಆದ್ದರಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯತಂತ್ರ ಗಳಿಗೆ ಸಂಬಂಧಿಸಿದ ಪ್ರಯತ್ನಗಳನ್ನು ನಡೆಸದೇ ಇದ್ದರೆ ಜನಸಂಖ್ಯೆ ಹೆಚ್ಚಳದ ಲಾಭವು ದೊರೆಯದೆ ಹೋಗಬಹುದು ಇದರ ಪರಿಣಾಮವಾಗಿ ಲಾಭದ ಹೆಸರಿನಲ್ಲಿ ನಷ್ಟವೇ ಹೆಚ್ಚು ಅದುವೇ ಒಂದು ಹೊರೆಯುವಾಗಬಹುದು.
ಯುವ ಜನರಿಗೆ ಸೌಲಭ್ಯಗಳು ಮತ್ತು ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಹೆಚ್ಚುತ್ತಲೇ ಇರುವ ಹಿರಿಯ ನಾಗರಿಕರ ಹಾರೈಕೆಯು ವ್ಯವಸ್ಥೆ ಮಾಡಬೇಕಿದೆ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದು ಮತ್ತು ಸವಾಲುಗಳನ್ನು ಎದುರಿಸುವುದು ಭಾರತೀಯರ ಹೊರೆಗಾರಿಕೆ ದೇಶದ ಜನರ ಅಗತ್ಯಗಳನ್ನು ಪೂರೈಸಲು ವಿಫಲವಾದರೆ, ಸಾಮಾಜಿಕ ಸಂಘರ್ಷ ಮತ್ತು ರಾಜಕೀಯ ದೃಷ್ಟಿ ಉಂಟಾಗಿ ಅದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಮುಂದೆ ಜನಸಂಖ್ಯಾ ಸ್ಫೋಟವಾದರೂ ಆಶ್ಚರ್ಯ ಪಡಬೇಕಾಗಿಲ್ಲ ಈಗಿನ ಸನ್ನಿವೇಶದಲ್ಲಿ ದೊರಕುತ್ತಿರುವ ಸಂಪನ್ಮೂಲಗಳ ಗರಿಷ್ಠ ಬಳಕೆ ಮತ್ತು ಪರಿಣಾಮಕಾರಿ ಬಳಕೆ ಬಹಳ ಮಹತ್ವವಾಗಿದೆ.
ಮೀಸಲಾತಿ, ವಲಸೆ , ರಾಜಕೀಯ ಪ್ರಾತಿನಿಧ್ಯ ಸಂಪನ್ಮೂಲಗಳ ಹಂಚಿಕೆ ಮತ್ತು ಇದರ ವಿಚಾರಗಳು ಚರ್ಚೆಗೆ ಒಳಗಾಗುವ ಸಾಧ್ಯತೆ ಇದೆ ಸಮಾಜದ ಎಲ್ಲಾ ವರ್ಗಗಳನ್ನು ಸಮಾನವಾಗಿ ಒಳಗೊಳ್ಳುವ ಆರ್ಥಿಕ ಪ್ರಗತಿಯು ಸಾಧ್ಯವಾದರೆ ಜನಸಂಖ್ಯೆ ಏರಿಕೆ ಸವಾಲಾಗಿ ಪರಿಣಮಿಸಬಹುದು ಮಾನವ ಅಭಿವೃದ್ಧಿಯೇ ಅತ್ಯುತ್ತಮ ಕುಟುಂಬ ಕಲ್ಯಾಣ ಯೋಜನೆ ಇದರಿಂದ ಜನಸಂಖ್ಯೆಯ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಜನಸಂಖ್ಯೆ ಹೆಚ್ಚಳ ಯಾವುದೋ ಒಂದು ಸಮುದಾಯ ಕಾರಣ ಎಂದು ದೂಷಿಸುವ ಪ್ರವೃತ್ತಿಗೆ ಜ್ಞಾನದಾದ ಆಧಾರ ಇಲ್ಲದ ಪೂರ್ವಗ್ರಹ ಕಾರಣದಿಂದ ಮತ್ತು ಇದು ತಪ್ಪು ನಡವಳಿಕೆಯ ಜನಸಂಖ್ಯೆಗೆ ಸಂಬಂಧಿಸಿದ ಸವಾಲುಗಳನ್ನು ಉತ್ತಮವಾಗಿ ಮತ್ತು ಜಾಣ್ಮೆಯಿಂದ ನಿರ್ವಹಿಸಿದರೆ ಈ ಶತಮಾನವನ್ನು ಭಾರತದ ಶತಮಾನವನ್ನಾಗಿ ಪರಿವರ್ತಿಸುವ ಅವಕಾಶ ನಮ್ಮ ಮುಂದೆ ಇದೆ ಜನರೇ ನಮ್ಮ ದೇಶದ ಸಂಪನ್ಮೂಲವನ್ನಾಗಿ ಮಾರ್ಪಾಡು ಮಾಡಿಕೊಳ್ಳುವ ಅವಕಾಶ ನಮ್ಮ ನಿಮ್ಮೆಲ್ಲರ ಮೇಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಾಬಾ ಸಾಹೇಬ ಅಂಬೇಡ್ಕರರ ‘ಧ್ಯಾನ’ ಗಾಯನ ; ವಿನೂತನ
- ವೆನ್ನೆಲಾ ಕೆ.
ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ,
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
ಬೆಂಗಳೂರು ವಿಶ್ವವಿದ್ಯಾಲಯ,ಬೆಂಗಳೂರು
ಇತ್ತೀಚೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದ 132ನೇ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಜನುಮ ನಿಮಿತ್ತವಾಗಿ “ಧಾನ್ಯ” ‘ಗಾಯನವು’ ವಿನೂತನವಾದ ಈ ಕಾರ್ಯಕ್ರಮವು 5 ಘಂಟೆ, 1ನಿಮಿಷ, 14 ಸೆಕೆಂಡ್ ಗೆ ಆರಂಭವಾಗಿದ್ದು ಅವಿಸ್ಮರಣೀಯವಾದ ದಿನ, ಇದೊಂದು ಭಾರತ ಇತಿಹಾಸದ ಪುಟದ ಚರಿತ್ರೆಯಲ್ಲೇ ಹೊಸ ದಾಖಲೆಯೂ ಅಂತ ಹೇಳಬಹುದು.
ಈ ಕಾರ್ಯಕ್ರಮವನ್ನು ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ವು ಇಡೀ ಭಾರತದಲ್ಲೇ ಯಾರು ಮಾಡಿರದ ಈ ವಿನೂತವಾದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಬೆಂಗಳೂರು ನಗರದಲ್ಲಿರುವ ಗಾಂಧಿ ಭವನದ ಆವರಣದಲ್ಲಿ ‘ಅನನ್ಯ ಸಂಸ್ಥೆ’ ವತಿಯಿಂದ 132 ನೇ ‘ವಿಶ್ವದ ವೀರ ವಿದ್ಯಾರ್ಥಿ ಹುಟ್ಟಿದ ದಿನ’ ಹಾಗೂ ‘ರಾಷ್ಟ್ರದ ಸ್ಫೂರ್ತಿಯ ದಿನ’ ‘ಸರ್ವ ಸಮುದಾಯದ ಶಕ್ತಿಯ ದಿನ’ ಇದೊಂದು ನಮ್ಮೆಲ್ಲರ ಹಬ್ಬದ ದಿನ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಇಂತಹ ಮೇರು ಶಿಖರ ಟ್ಯಾಗ್ ಲೈನ್ ಗಳಿಂದ ಅದ್ಭುತವಾಗಿ
ಆಯೋಜಿಸಿದ ಕಾರ್ಯಕ್ರಮಕ್ಕೆ ರಾಜ್ಯ ಕಂಡ ಪ್ರಸಿದ್ಧ ಐಪಿಎಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಸಿನಿಮಾ ಸೆಲೆಬ್ರಿಟಿಗಳು, ಸಮಸ್ತ ವಿದ್ಯಾರ್ಥಿ ಸಮೂಹ, ಸಾಮಾಜಿಕ ನ್ಯಾಯದ ವಿಚಾರಶೀಲರು, ಬರಹಗಾರರು, ಪತ್ರಕರ್ತರು ಇನ್ನೂ ಅನೇಕ ಮುಂತಾದವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇದಕ್ಕೆ ಮುಖ್ಯ ಕಾರಣಕರ್ತರಾದ ಅನನ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಂಪುರ ರಾಜೇಶ್ ರವರ ನಿರ್ದೇಶನದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಹೆಮ್ಮೆಯ ವಿಷಯ.
ಇದರ ಹಿನ್ನೆಲೆ: ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ದಲ್ಲಿ ಅತ್ಯುತ್ತಮ ಹಾಗೂ ಅತ್ಯಂತ ತುಂಬಾ ಮನಸ್ಸಿನಿಂದಲ್ಲೇ ವಿಶೇಷವಾದ ಆಸಕ್ತಿಯನ್ನು ಅಂಬೇಡ್ಕರ್ ರವರು ಸಂಗೀತ ಪ್ರಿಯರು ಹಾಗೂ ಅಂಬೇಡ್ಕರ್ ರವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು. ಹಾಗೇಯೆ ಇವರಿಗೆ ಚಿತ್ರಕಲೆಯೂ ಸಹ ಒಲಿದಿತ್ತು ಎಂಬುದು ಗಮನಾರ್ಹ ಸಂಗತಿ. ಇಂತಹ ವಿಷಯವನ್ನು ಯಾರು ಸಹ ಬೆಳಕು ಚೆಲ್ಲುವ ಸಾಹಸಕ್ಕೆ ಕೈ ಹಾಕಿ ಇರಲಿಲ್ಲ. ಇದೊಂದು ಅನನ್ಯ ಸಂಸ್ಥೆ ವತಿಯಿಂದ ಇಂತಹ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಐತಿಹಾಸಿಕ ಚರಿತ್ರೆಗೆ ಮುನ್ನುಡಿವಾಗಿದೆ.
ಅಂಬೇಡ್ಕರ್ ರವರಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಅದ್ಭುತವಾದ ಒಬ್ಬ ಸಂಗೀತ ಪ್ರಿಯರಾಗಿದ್ದರು. ಇವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು ಹಾಗೂ ವಿಶೇಷವಾಗಿ ಚಿತ್ರಕಲೆ ಸಹ ಸರಳವಾಗಿ ಮಾಡುವ ಮೂಲಕ ತಮ್ಮ ಮನದಲ್ಲಿ ಆಸಕ್ತಿ ಹೊಂದಿದ್ದರು. ಇನ್ನು ಹಲವಾರು ವಿಷಯದಲ್ಲಿ ಅಂದರೆ ಅಂಬೇಡ್ಕರ್ ರವರಿಗೆ ವಿಶೇಷವಾದ ಇವುಗಳಲ್ಲಿ ಆಸಕ್ತಿ ಮತ್ತು ಅಭಿರುಚಿಯನ್ನು ಹೊಂದಿದ್ದರು ಎಂಬುದನ್ನು ಮನಗಂಡ ಅನನ್ಯ ಸಂಸ್ಥೆಯ ವತಿಯಿಂದ ಆಯೋಜಿಸಿದ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಅತ್ಯುತ್ತಮವಾಗಿ ಮೂಡಿಬಂದಿದೆ.
ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಚಿತ್ರ ಸಾಹಿತ್ಯಗಳು, ಅಂಬೇಡ್ಕರ್ ವಾದಿಗಳು ಮತ್ತು ಚಿತ್ರರಂಗದ ಬಹುಮುಖ ಪ್ರತಿಭೆ, ಮಹಾಗುರುಗಳಾದ ಡಾ. ಹಂಸಲೇಖ ರವರು ಹೊಸದಾಗಿ ಹಾಡನ್ನು ಬರೆದದ್ದು ತುಂಬಾ ಅವಿಸ್ಮರಣೀಯ ಅಂತ ಹೇಳಬಹುದು. ಇವರು ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರೊತ್ಸಾಹ ನೀಡಿದ್ದು, ಸರ್ವ ಸಮುದಾಯದಕ್ಕೆ ಹೊಸ ಶಕ್ತಿ ತುಂಬಿದ್ದು ಮೇರು ವ್ಯಕ್ತಿಯಾಗಿದ್ದಾರೆ.
ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ಮುಖ್ಯವಾದ ಅಂಶವೆಂದರೆ ಇದರಲ್ಲಿ ಒಟ್ಟು ನಾಲ್ಕು ಭಗವಾನ್ ಬುದ್ಧ, ಅಂಬೇಡ್ಕರ್, ಬಸವೇಶ್ವರ ಮುಂತಾದರವರನ್ನು ವಿಷಯಗಳನ್ನು ಪರಿಗಣಿಸಿ ಅಂಬೇಡ್ಕರ್ ಧ್ಯಾನ ಹಾಡುಗಳ ರಚಿಸಿವುದರಲ್ಲಿ ಪ್ರಮುಖವಾಗಿ ರಾಜ್ಯದ ಹೆಸರಾಂತ ಸಾಹಿತಿ, ಪ್ರಗತಿಪರ ಚಿಂತಕರು ಹಾಗೂ ಮಾಜಿ ಅಧ್ಯಕ್ಷರಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರ
‘ಧೀ ಶಕ್ತಿಯೇ … ಜ್ಞಾನ ಪರ್ವತದ … ಧೀಮಂತ ಧೀಶಕ್ತಿಯೇ …
ಇಂತಹ ಸಾಲುಗಳನ್ನು, ಡಾ. ಕೈ.ವೈ.ನಾರಾಯಣಸ್ವಾಮಿರವರ ದೀಪಾ …. ಎಲ್ಲರೆದೆಯಲಿ … ಹಚ್ಚಿದ ದೀಪಾ .. ಭೂಪಾ … ಭೂಪಾ … ಭೀಮಾ ಭೂಪಾ .. ಬಾಬಾ .. ಸಾಹೇಬ್.. ಜೀವಸ್ವರವೇ … ಬಾಬಾ.. ಹಾಗೂ ರವಿ ಮರಿಯಪ್ಪರವರ ಹತ್ತು ಸಾವಿರ ವಯಲಿನನ್ನು … ವೀಣೆಗಳು ನೂರೆಂಟು … ಕೋಟಿ ಕೋಟಿ ಎದೆ ಸದ್ದಿನ ಡೊಳ್ಳು … ಸಂಯೋಜಿಸಿದರೇ .. ಸಂವಿಧಾನಾ … ಮತ್ತು ಚಿತ್ರ ಸಾಹಿತಿ, ಹೆಸರಾಂತ ಸಂಗೀತ ನಿರ್ದೇಶಕರು ಡಾ. ಹಂಸಲೇಖ ರವರು ನಿನ್ನ ಮೌನಾ … ದೀನ ಗಾನಾ… ನಿನ್ನ ಧ್ಯಾನಾ .. ಸಂವಿಧಾನಾ … ಈ ನಾಲ್ಕು ಅಂಬೇಡ್ಕರ್ ಧ್ಯಾನ ರಚನೆಗೆ ಇವರುಗಳ ಬರೆದಿರುವ ಅದ್ಭುತವಾದ ಅಂಬೇಡ್ಕರ್ ರವರ ಧ್ಯಾನ ಹಾಡುಗಳನ್ನು ನಮ್ಮ ಹಿಂದುಸ್ತಾನಿ ಸಂಗೀತ ಹಾಡುಗಳ ಮೂಲಕ ಕನ್ವರ್ಟ್ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತು.
ಹಾಗೆಯೇ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಬಹಳಷ್ಟು ಯಶಸ್ವಿಯಾಗಬೇಕಾದರೆ ಈ ಮೊದಲು ಪುಟ್ಟರಾಜ ಗವಾಯಿಗಳ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ಶ್ರೀ ಡಿ. ಕುಮಾರ್ ದಾಸ್ ಅವರ ವಿದ್ವತ್ ಶರೀರದಲ್ಲಿ ‘ಧ್ಯಾನ ಗಾಯನ’ ಹಾಗೂ ಇವರ ತಂಡದ ವತಿಯಿಂದ ನಡೆಸಿಕೊಟ್ಟ ಅದ್ಭತವಾದ ಅಂಬೇಡ್ಕರ್ ರವರ ಧ್ಯಾನವು ಹಿಂದುಸ್ತಾನಿ ಸಂಗೀತದ ಕನ್ವರ್ಟ್ ಮಾಡುವ ಮುಖಾಂತರ ಈ ಹಾಡುಗಳನ್ನು ಬಹಳ ಸೊಗಸಾಗಿ ಮೂಡಿಬಂದಿದ್ದು ಹೊಸ ದಾಖಲೆಗೆ ಸೇರ್ಪಡೆಯಾಗಿದೆ.
ಇನ್ನು ಮುಂಬರುವ ದಿನಗಳಲ್ಲಿ ಅದಷ್ಟು ಹಲವಾರು ವಿನೂತನವಾದ ಭಗವಾನ್ ಬುದ್ಧರ, ಬಸವೇಶ್ವರರ ಹಾಗೂ ವಿಶ್ವದ ವೀರ ವಿದ್ಯಾರ್ಥಿಯಾದ ಮೇರು ರಾಷ್ಟ್ರದ
ನಾಯಕರಾದ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ರವರ ಹಲವಾರು ಹಾಡುಗಳನ್ನು
ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದರೆ ಇನ್ನುಷ್ಟು ಭಾರತದ ಇತಿಹಾಸದ ಪುಟಗಳಲ್ಲಿ ಮರೆತು ಹೋಗಿರುವ ಹಲವು ಬಗ್ಗೆ ದಾಖಲೆ ಇಲ್ಲದ ನೈಜ ಸಂಗತಿಗಳನ್ನು ಪುನಃ ಹೊಸ ದಾಖಲೆಗೆ ಉಪಯುಕ್ತವಾದ ವಿಶಿಷ್ಟವಾದ ಮೇರು ನಾಯಕನ
ಅಂಬೇಡ್ಕರ್ ರವರ ವಿಚಾರ ಧಾರೆಗಳು ತಾವು ಅನುಭವಿಸಿದ ನೋವು, ನಲಿವು, ಭಾರತದ ರಾಜ್ಯಾಂಗದ ಶಿಲ್ಪಿಯನ್ನು ಮುಂಬರುವ ದಿನಗಳಲ್ಲಿ ಹೊಸ ಪೀಳಿಗೆಯ ಪರಿಚಯಿಸುವ ಕೀರ್ತಿದಾಯಿಕವಾಗಲಿ ಮತ್ತು ಅದಷ್ಟು ಮುಂಬರುವ ದಿನಗಳಲ್ಲಿ ಅಂಬೇಡ್ಕರ್ ರವರ ಆಸಕ್ತಿದಾಯಕ ವಿಚಾರಗಳು ಹಾಗೂ ಸಂಗೀತದ ಬಗ್ಗೆ ಹಲವಾರು ಮಾಹಿತಿಗಳು ಸಮಸಮಸಮಾಜಕ್ಕೆ ತಲುಪುವ ವ್ಯವಸ್ಥೆಗೆ ಸಾಕ್ಷಿಯಾಗಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಬಹಿರಂಗ
ರಷ್ಯಾದಲ್ಲಿ ಓಂ – ಭರತಾಸ್- ರಾಮ – ರಾವಣ ಲಂಕೇಶ – ಮಾರೀಚ – ಸೀತ ನದಿಗಳು..!
- ಲಕ್ಷ್ಮೀಪತಿ ಕೋಲಾರ, ಸಂಶೋಧಕರು, ಸಂಸ್ಕೃತಿ ಚಿಂತಕರು, ಬೆಂಗಳೂರು
ಸ್ಲಾವ್ ಸಮುದಾಯದ ಲಿತುವೇನಿಯ, ಲಾತ್ವಿಯ, ಬೆಲಾರಸ್,ಉಕ್ರೇನ್ ಮತ್ತು ರಷಿಯಾದಂತಹ ದೇಶಗಳ ನದಿ,ನಗರಗಳು ಸಂಸ್ಕೃತ ಮೂಲದ ಹೆಸರುಗಳನ್ನೆ ಇಂದಿಗು ಉಳಿಸಿಕೊಂಡಿರುವುದು ಆ ಭಾಷೆ ಮತ್ತು ಸಂಬಂಧಿತ ಸಂಸ್ಕೃತಿಯೊಂದಿಗೆ ಅವು ಹಿಂದೊಮ್ಮೆ ಹೊಂದಿದ್ದ ಬಲವಾದ ನಂಟಿಗೆ ಸಾಕ್ಷಿಯಾಗಬಲ್ಲವು.
ಇದರೊಂದಿಗೆ ಉತ್ತರ ಭಾರತದ ಆರ್ಯ ವೈದಿಕರ ಭಾಷೆ ಸಂಸ್ಕೃತಿಯೊಂದಿಗೆ ಸ್ಲಾವ್ ಸಮುದಾಯಕ್ಕೆ ಎಷ್ಟು ನಿಕಟ ಸಂಬಂಧವಿತ್ತೆಂಬುದನ್ನು ಮತ್ತು ನಾಲ್ಕೈದು ಸಾವಿರ ವರ್ಷಗಳ ಹಿಂದೆ ಈ ಎಲ್ಲ ಆರ್ಯ ಸಮುದಾಯಗಳು ಒಟ್ಟಿಗೆ ಒಂದೆಡೆಯೇ ಕಳ್ಳುಬಳ್ಳಿಗಳಾಗಿ ಜೀವಿಸಿದ್ದರೆಂಬುದನ್ನ ಈ ಹಿನ್ನೆಲೆಯಲ್ಲಿ ನಾವು ಗ್ರಹಿಸಬಹುದಾಗಿದೆ.
ಅದರಲ್ಲು ವಿಶೇಷವಾಗಿ ಲಿತುವೇನಿಯ ಮತ್ತು ರಷಿಯಾದ ನದಿಗಳ ಹೆಸರುಗಳು ಎಷ್ಟು ಸಂಸ್ಕೃತಮಯವು (ಇಂಡೋ – ಯುರೋಪಿಯನ್ ಭಾಷಾಮೂಲದ) ಮತ್ತು ವೈದಿಕರ ಪುರಾಣ ಮೂಲದವು ಆಗಿವೆ ಎಂದರೆ, ನಂಬಲಿಕ್ಕು ಅಸಾಧ್ಯ ಎಂಬಂತಿವೆ. ಇದರರ್ಥ ಸ್ಲಾವ್ ಜನರು ವೈದಿಕರ ಪುರಾಣಗಳಿಂದ ಪ್ರೇರಿತಗೊಂಡಿದ್ದಾರೆ ಎಂಬುದಲ್ಲ.
ಬದಲಿಗೆ ವೈದಿಕರ ಇಂದಿನ ಪುರಾಣ – ಸಂಸ್ಕೃತಿ – ಭಾಷೆಗಳು ವೈದಿಕರಿಗೆ ಎಷ್ಟು ಸಂಬಂಧಿಸಿದ್ದೋ ಅದಕ್ಕು ಹೆಚ್ಚಿನದಾಗಿ ಸ್ಲಾವ್ ಸಮುದಾಯಕ್ಕೂ ಸಂಬಂಧಿಸಿದ್ದಾಗಿದ್ದವು. ಹಾಗೆ ನೋಡಿದರೆ ಬ್ರಹ್ಮ – ವೇದ ಮೂಲವು ಕೂಡ ಸ್ಲಾವ್ ಸಮುದಾಯದ ಉತ್ತರ ಧ್ರುವ ಪ್ರದೇಶಕ್ಕೆ ಹೋಗಿ ನಿಲ್ಲುತ್ತದೆ ಎಂಬುದು ಸೋಜಿಗವಾದರು ನಿರ್ವಿವಾದವಾಗಿ ಚಾರಿತ್ರಿಕ ಸತ್ಯವಾಗಿದೆ. 12 – 13 ನೇ ಶತಮಾನಗಳಲ್ಲಿ ಸ್ಲಾವ್ ಜನರು ಕ್ರೈಸ್ತರಾಗಿ ಪರಿವರ್ತಿತರಾಗುವವರೆಗು ಅವರು ಶತಾಂಶ ಮತ್ತು ಥೇಟ್ ಶ್ರೇಷ್ಟ ಆರ್ಯ ವೈದಿಕರೆ ಆಗಿದ್ದರು.
ರಷ್ಯ ಮತ್ತು ಲಿತುವೇನಿಯಾಗಳಲ್ಲಿ ಭರತಾಸ್, ಓಂ, ರಾಮ, ಸೀತ, ಲಂಕೇಶ, ರಾವಣ, ಮಾರೀಚ, ನೆಮುನ (ಯಮುನ), ಕಾಮ, ಯಂತ್ರ, ಶ್ವೇತೆ, ದ್ರವ, ಮೋಕ್ಷ, ಋಗ್ವೇದದ ದಾನವ ಮಾತೆ ದನು ನೆನಪಿನ ದನುಬೆ ಮುಂತಾದ ನದಿಗಳು ಮತ್ತು ನಾರದ (ಈಗ ನರೋದ್ನಯ ಎಂದಿದ್ದರು ಸ್ಥಳೀಯರು ನಾರದ ಬೆಟ್ಟ ಎಂದೇ ಕರೆಯುತ್ತಾರೆ) ಹೆಸರಿನ ಬೆಟ್ಟವು ಇವೆ ಎಂದರೆ ಯಾರೂ ಅಚ್ಚರಿಪಡುವಂತದ್ದೆ.
ಯಾರಿಗಾದರು ಈ ಸಂಗತಿಗಳಲ್ಲಿ ಅನುಮಾನ ಹುಟ್ಟುವುದು ಸಹಜವೆ. ಯಾಕೆಂದರೆ ಸ್ಲಾವ್ – ವೈದಿಕ ಆರ್ಯರ ಮೂಲ ಪ್ರದೇಶವೆ ಉತ್ತರ ದ್ರುವ ಪ್ರದೇಶವಾಗಿತ್ತು ಎಂಬ ಚರಿತ್ರೆಯನ್ನೇ ನಮ್ಮಿಂದ ಮರೆಮಾಚಲಾಗಿತ್ತು ಮತ್ತು ಅದು ಬಹುದೊಡ್ಡ ಸಾಂಸ್ಕೃತಿಕ ರಾಜಕಾರಣವೂ ಆಗಿತ್ತು. ಆದರೆ ತಿಲಕರು ತಮ್ಮ “Arctic Home In the Vedas” ಎಂಬ ಪುಸ್ತಕದಲ್ಲಿ ಉತ್ತರ ಭಾರತದ ವೈದಿಕ ಆರ್ಯರ ತವರು ನೆಲ ಉತ್ತರ ದ್ರುವ ಪ್ರದೇಶವೆ, ಅಂದರೆ ಇಂದಿನ ಲಿತುವೇನಿಯ, ಲಾತ್ವಿಯ, ಬೆಲಾರಸ್ ಪ್ರದೇಶಗಳೇ ಆಗಿದ್ದವು ಎಂದು ಸಮರ್ಥ ಸಾಕ್ಷಾಧಾರಗಳೊಂದಿಗೆ ನಿರೂಪಿಸಿದ್ದಾರೆ.
ರಷ್ಯಾದಲ್ಲಿ ಸಂಸ್ಕೃತ ಭಾಷಾಮೂಲದ ನೂರಾರು ನದಿಗಳಿವೆ. ಭಾರತದಲ್ಲಿ ಕೆಲವು ನದಿಗಳನ್ನ ಹೊರತುಪಡಿಸಿದರೆ ಆ ಪ್ರಮಾಣದ ವೈದಿಕ ಪುರಾಣ ಮೂಲದ ನದಿ ಹೆಸರುಗಳು ಈ ನೆಲದಲ್ಲಿ ಇಲ್ಲವೆಂಬುದು ಪ್ರಾಚೀನ ಕಾಲದಿಂದಲು ಆರ್ಯ ವೈದಿಕರು ಇಲ್ಲಿರಲಿಲ್ಲವೆಂಬುದನ್ನೇ ಸೂಚಿಸುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ದಾವಣಗೆರೆ | ವಿನೋಬನಗರದ ಶ್ರೀ ಚೌಡೇಶ್ವರಿ ಜಾತ್ರೆ ಸಂಭ್ರಮ
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ6 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ4 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?