ಭಾವ ಭೈರಾಗಿ
ಕ್ರಾಂತಿ ಪಕ್ಕದ ಮನೆಯಲ್ಲಾದರೆ ಮಾತ್ರ ಚೆಂದ

ಇದು ಸಾಮಾನ್ಯವಾಗಿ ಬಹುತೇಕರಿಗೆ ಇರುವಂತಹಾ ಖಾಯಿಲೆ. ಬದಲಾವಣೆ ಎಂದರೆ ಎಲ್ಲರಿಗೂ ಇಷ್ಟ. ಹೌದು ಜಗತ್ತು ಬದಲಾಗಬೇಕು. ಸಮಾಜದ ಉದ್ದಾರ ಮಾಡಲು ಮಹಾತ್ಮರು ಜನ್ಮತಾಳಬೇಕು. ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಮುಂದಿನ ಪೀಳಿಗೆಗಾಗಿ ಏನಾದರೂ ಕೊಡಬಲ್ಲ ಧೀಮಂತ ವ್ಯಕ್ತಿಗಳು ನಮಗೆ ಅವಶ್ಯವಾಗಿ ಬೇಕು. ಮತ್ತೊಮ್ಮೆ ನಮ್ಮ ದೇಶದಲ್ಲಿ ಗಾಂಧಿ, ಅಂಬೇಡ್ಕರ್ ಹುಟ್ಟಬೇಕು. ಬುದ್ದ ಬಸವರು ಜನ್ಮತಾಳಬೇಕು. ಮದರ್ ಥೆರೆಸಾರಂತೆ ಸಮಾಜಕ್ಕಾಗಿ ಬದುಕುವವರು ಬೇಕು. ವಿವೇಕಾನಂದರಂತೆ ದೇಶದ, ಸಮಾಜದ ಉದ್ದಾರಕ್ಕಾಗಿ ಸರ್ವಸ್ವವನ್ನೂ ನೀಬಲ್ಲವರು ಬೇಕು. ಇವರೆಲ್ಲ ಮತ್ತೆ ಮತ್ತೆ ಹುಟ್ಟಿಬರಬೇಕು ಆದರೆ ನಮ್ಮ ಮನೆಯಲ್ಲಲ್ಲ, ಪಕ್ಕದ ಮನೆಯಲ್ಲೋ ಅಥವಾ ಮತ್ಯಾರದೋ ಮನೆಯಲ್ಲಿ ಹುಟ್ಟಿಬಂದರೆ ಒಳಿತು.
ಇದು ನಮ್ಮ ತಪ್ಪಲ್ಲ ಬಿಡಿ ನಮ್ಮಲ್ಲಿ ಬಹುತೇಕರು ಬೆಳೆದು ಬಂದ ವಾತಾವರಣವೇ ಹಾಗಿರುತ್ತದೆ. ಹೆಚ್ಚಿನ ತಂದೆ ತಾಯಿಗಳು ಮಕ್ಕಳಿಗೆ ಹೇಳಿಕೊಟ್ಟಿರುವ ಒಂದೇ ಪಾಠವೆಂದರೆ ಊರಿನ ಉಸಾಬರಿ ನಿನಗ್ಯಾಕಪ್ಪ, ಊರ ದನಾ ಕಾಯ್ದು ದೊಡ್ಡ ಬೋರಾ ಎನಿಸಿಕೊಳ್ಳೋದು ಬೇಡ ಸುಮ್ಮನಿರು. ಯಾಕಂದ್ರೆ ಅವರಪ್ಪ ಅಮ್ಮ ಅವರಿಗೆ ಹೇಳಿಕೊಟ್ಟಿರುವುದೂ ಇದನ್ನೇ ಅಲ್ವಾ,,, ಹಾಗಾದರೆ ಹೀಗೆ ಹೇಳಿಕೊಟ್ಟವರೆಲ್ಲ ಕೆಟ್ಟವರಾ ಅಂದರೆ ಅಲ್ಲ. ಅದು ಅವರವರ ವ್ಯಾಪ್ತಿಗೆ ಸಂಬಂದಿಸಿದ ವಿಷಯ. ಒಂದು ಪುಟ್ಟ ಹಳ್ಳಿಯಲ್ಲಿ ಎಲೆಮರೆ ಕಾಯಿಯಂತೆ ಬದುಕಿದ ಅವ್ವ ಅಪ್ಪನಿಗೆ ನಾವು ಇದುವರೆಗೂ ನಾಲ್ಕುಜನರ ಬಾಯಿಗೆ ಸಿಕ್ಕಿಲ್ಲ. ಯಾರೂ ನಮ್ಮ ಬಗ್ಗೆ ಬೆರಳು ಮಾಡಿ ತೋರಿಸಿಲ್ಲ ಎಂಬುದೇ ಹೆಗ್ಗಳಿಕೆಯಾಗಿರುತ್ತದೆ. ಅದು ಅವರ ತಪ್ಪೂ ಅಲ್ಲ. ಆದರೆ ಅವರು ಹೇಳಿದಂತೆಯೇ ಬೆಳದ ಮಗು ಯಾರನ್ನೂ ಪ್ರಶ್ನಿಸುವುದು ಅಸಾಧ್ಯ. ಅದು ತನ್ನನ್ನು ತಾನು ಬಂಧಿಸಿಕೊಂಡುಬಿಡುತ್ತದೆ. ಮತ್ತೊಂದು ರೀತಿಯ ತಂದೆ ತಾಯಂದಿರಿದ್ದಾರೆ ಅವರು ಮಕ್ಕಳು ಹುಟ್ಟಿರುವುದೇ ಕೆಲಸ ಪಡೆದು ಹಣ ಗಳಿಸುವುದಕ್ಕೆ ಎಂದು ನಂಬಿರುತ್ತಾರೆ, ತಮ್ಮ ಮಕ್ಕಳಿಗೂ ಅದನ್ನೇ ತುಂಬುತ್ತಾರೆ. ನೀನು ಮನುಷ್ಯನಾಗಬೇಕು , ನಾಲ್ಕು ಜನರ ಬದುಕಿಗೆ ದಾರಿದೀಪವಾಗಬೇಕು ಸಂತನಾಗಬೇಕು, ತತ್ವಜ್ನಾನಿಯಾಗಬೇಕು, ನೂರುಜನರಿಗೆ ಕೆಲಸ ನೀಡುವವನಾಗಬೇಕು, ಸಮಾಜ ಸುಧಾರಕನಾಗಬೇಕು, ಸಂಗೀತಗಾರನಾಗಬೇಕು, ನೃತ್ಯಪಟು,ನಾಟಕಕಾರ, ಕಲಾವಿದನಾಗಬೇಕು ಎಂದು ಹೇಳಿರುವ ತಾಯಂದಿರು ವಿರಳಾತಿವಿರಳವೇ ಸರಿ.
ನನ್ನ ಎರಡು ವರ್ಷದ ಮಗನಿಗೆ ಮೊಬೈಲ್ ನಲ್ಲಿ ಎ ಟು ಝೆಡ್ ಗೊತ್ತು. ಆರನೇಕ್ಲಾಸಿನ ನನ್ನ ಮಗ ಈಗಲೇ ಬೈಕ್ ಕೇಳ್ತಾನೆ. ಯಾಕೆ ಕೇಳ್ತೀರಾ ಸಾರ್ ಎಲ್ಲದರಲ್ಲೂ ನೈಂಟಿ ಸ್ಕೋರ್ ಮಾಡ್ತಾನೆ ಅಂತೆಲ್ಲ ಸಂತಸ ಪಡುವ ಹೆತ್ತವರು ಮಗ ಸಮಾಜದ ಬಗ್ಗೆ ಚಿಂತೆ ಮಾಡ್ತಾನೆ. ದೊಡ್ಡವರ ಬಗ್ಗೆ ಕೇಳಿ ತಿಳಿದುಕೊಳ್ತಾನೆ, ಓದಿನ ಆಚೆಗೂ ಯಾವುದರಲ್ಲೋ ಆಸಕ್ತಿ ಹೊಂದಿದ್ದಾನೆ ಅನ್ನೋ ಯಾವ ಹೆಮ್ಮೆಯೂ ಹೆಮ್ಮೆ ಪಡಲ್ಲ. ಇಂಥವರ ಕೈಲಿ ಬೆಳದ ಮಗು ಗುಮಾಸ್ತನೋ, ಸಂಬಳಕ್ಕೆ ಕಾಯುವ ಉದ್ಯೋಗಿಯೋ ಆಗುವುದು ಬಿಟ್ಟು ಮತ್ತೇನಾಗಲು ಸಾಧ್ಯ.
ಹಾಗಾದರೆ ಗುಮಾಸ್ತನಾಗುವುದು ಅಪರಾಧವೇ,,, ಖಂಡಿತ ಅಲ್ಲ. ಅದು ಜೀವನ ನಿರ್ವಹಣೆಗಾಗಿ ಮಾಡುವ ಒಂದು ಕಾಯಕ ಅಷ್ಟೆ , ಆದರೆ ಅದರಿಂದಾಚೆಗೂ ನಮಗೊಂದು ವ್ಯಕ್ತಿತ್ವವಿರುತ್ತದೆ, ಅದರಿಂದ ನಮ್ಮನ್ನು ಗುರುತಿಸುವಂತಾಗಬೇಕು . ನಾಳೆ ನಮ್ಮ ಮಗು ಅದರ ಉದ್ಯೋಗದಿಂದ ಅಷ್ಟೇ ಅಲ್ಲದೇ ಅದರಿಂದಾಚೆಗೂ ಏನಾದರೂ ಸಾಧಿಸಬೇಕು ಎಂದು ಹೆತ್ತವರು ಕನಸುಕಾಣುವಂತಾಗಬೇಕು. ಮೌಲ್ಯಯುತ ವ್ಯಕ್ತಿಯಾಗಲು ಸಹಕಾರಿಯಾಗುವಂತೆ ಮಕ್ಕಳಿಗೆ ಪೂರಕ ವಾತಾವರಣ ನಿರ್ಮಿಸಿಕೊಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಸಿಲಬಸ್ ಬಿಟ್ಟು ಮತ್ತೇನನ್ನು ಓದಿದರೂ ಅಪರಾಧ ಎನ್ನುವ ಶಿಕ್ಷಕರ ಮನೋಭಾವ ಬದಲಾಗಬೇಕಿದೆ.
ಪದೇ ಪದೇ ನನ್ನನ್ನು ಕಾಡುವ ಒಂದು ಪ್ರಶ್ನೆ ಎಂದರೆ ಜಗತ್ತಿನ ಎಲ್ಲ ಸಾಧಕರ ಬಗ್ಗೆಯೂ ನಾವು ಪಠ್ಯಪುಸ್ತಕದಲ್ಲಿ ಹೇಳಲು ಸಾಧ್ಯವಿಲ್ಲ ಅಂದ ಮಾತ್ರಕ್ಕೆ ಅವರ ಅಪಾರವಾದ ಸಾಧನೆ ನಮ್ಮ ಮಕ್ಕಳಿಗೆ ತಲುಪಲೇ ಬಾರದಾ? ಪಠ್ಯದಲ್ಲಿ ಸೇರಿಸಲಾಗದ ಅದೆಷ್ಟೋ ಮೌಲ್ಯಗಳು ಜೀವನಕ್ಕೆ ಅತ್ಯವಶ್ಯಕವಾಗಿವೆ, ಅವುಗಳನ್ನು ಮಕ್ಕಳು ತಿಳಿಯುವುದಾದರೂ ಹೇಗೆ. ಬೇಂದ್ರೆ ಬರೆದ ಒಂದೆರಡು ಪದ್ಯಗಳಷ್ಟೇ ಪಠ್ಯದಲ್ಲಿರಬಹುದು ಉಳಿದ ಸಾವಿರಾರು ಕವಿತೆಗಳು ಯಾರಿಗಾಗಿ? ಕುವೆಂಪು ಬರೆದ ಸಾವಿರ ಸಾವಿರ ಮೌಲ್ಯಗಳು ಜೀವನ ಸಂದೇಶಗಳು ಯಾರಿಗಾಗಿ? ಇದೆಲ್ಲವನ್ನೂ ನಮ್ಮ ಶಿಕ್ಷಕ ಮಿತ್ರರು ಅರ್ಥ ಮಾಡಿಕೊಳ್ಳಬೇಕು. ಎಲ್ಲೋ ಯಾರೋ ಸಾಧಿಸಿದ್ದನ್ನು ನೋಡಿ ಮಕ್ಕಳಿಗೆ ತೋರಿಸುವುದಕ್ಕಿಂತ ಅವರನ್ನೇ ಸಾಧಕರನ್ನಾಗಿ ಮಾಡುವತ್ತ ಗಮನ ಹರಿಸಬೇಕು. ಮಕ್ಕಳ ಅಂತರಾತ್ಮದ ತಲೆಗೆ ಹೊಡೆದು ಕೂರಿಸುವುದಕ್ಕಿಂತ ಅವರ ಇಷ್ಟದ ಕ್ಷೇತ್ರದಲ್ಲಿ ಅವರನ್ನು ಬೆಳೆಯಲು ಬಿಡಬೇಕು. ಉತ್ತಮರಾರನ್ನೋ ಹುಡುಕುವ ಬದಲು ನಾವೇ ಉತ್ತಮರಾಗಲು ಪ್ರಯತ್ನಿಸಬೇಕು.

ಭಾವ ಭೈರಾಗಿ
ಕವಿತೆ | ಯುಗಾದಿ ಪುರುಷ

- ಡಾ.ಕೆ.ಎ.ಓಬಳೇಶ್
ಯುಗ ಯುಗದಾಚೆಗಿನ
ಬಂಧನದ ಬದುಕಿಗೆ
ಬಿಡುಗಡೆಯ ಹಾದಿ ತೋರಿ
ಹೊಸ ಯುಗದತ್ತ ಕೊಂಡೊಯ್ದ
ಯುಗಪುರುಷ ನೀನಾದೆ.
ಯುಗ ಯುಗದಾದಿಯಾಗಿ
ಸಾಗುತ್ತಲೆ ಇತ್ತು
ಸ್ವಾಭಿಮಾನವಿರದ ಯುಗಾದಿ
ನಿಮ್ಮ ಜ್ಞಾನವೇ ನಮಗಾಯ್ತು
ಹೊಸ ಸಂವತ್ಸರಕೆ ನಾಂದಿ.
ಸ್ವಾಭಿಮಾನಿ ಹೋರಾಟದಲಿ
ಕಹಿಯ ತಾನುಂಡು
ಸಿಹಿಯ ನಮಗಂಚಿ
ನಮಗೊಂದು ಹೊಸ ಯುಗವ
ಕರುಣಿಸಿದ ಕರುಣಾಳು ನೀನಾದೆ.
ನಿಮ್ಮ ಹೊರತು ಸ್ವಾಭಿಮಾನದ ಯುಗವೇ ಇಲ್ಲ
ನೀವೆ ಈ ಜಗದ ಹಾದಿ
ನೀವೆ ಯುಗದ ಆದಿ
ನೀವೆ ನಮ್ಮ ಯುಗಾದಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಅವಳು ಮಸಣ ಕಾಯುವ ಪಾರ್ವತಿ..!

- ಪದ್ಮಶ್ರೀ ಗೋವಿಂದರಾಜು,ಭದ್ರಾವತಿ
ಹುಂ!!
ಅವಳ ಪರಶಿವನು ಅದೇ ಮಸಣದಲಿ ಐಕ್ಯವಾಗಿಹನು
ಅದಕೇ ಅವಳು ಹಲವು ನಿರ್ಜೀವ ಅನಾಥ ದೇಹಗಳ
ಹಗಲು ರಾತ್ರಿಯೇನ್ನದೆ ಕಾಯುವಳು
ಅನಾಥವಾದ ದೇಹಕೆ ಅವಳಿಂದಲೇ ಮೋಕ್ಷ
ಅವಳೇ ವಂಶವಿಲ್ಲದ ದೇಹಕೆ ವಾರಸುದಾರಳು!!
ಚಿತೆಯ ಅಗ್ನಿ ಸ್ಪರ್ಶ ಮಾಡಿ ತಿರುಗಿ
ನೋಡದೆ ಹೋದ ನೆಂಟರು,
ಉಳಿಸಿ ಹೋದ ಬೆಂಕಿಯ
ಅರದಂತೆ ಉರಿಸುವಳು ಅವಳು.
ಮಕ್ಕಳು ಮರಿಯ ಸಂಸಾರವೇ
ಇಲ್ಲದ ಅವಳಿಗೆ ಆಗಾಗ ಬರುವ
ದೇಹಗಳ ಜೊತೆ ಬಂದ ಜನರು
ನಡೆದಾಡುವ ಶವಗಳಂತೆ ಕಾಣುವರು
ಕಾರಣ
ಮಸಣವೊಂದೇ ಕೊನೆಯ ಮನೆ
ಆಕೆ ಅರಿತಿದ್ದಾಳೆ
ಅದಕೇ
ಆಕೆ ಮಸಣ ಕಾಯುವ ಪಾರ್ವತಿ!!
(ಸುಮಾರು ವರ್ಷಗಳಿಂದ ಶಿವಮೊಗ್ಗ ಸ್ಮಶಾನ ಕಾಯುವುದು ಒಬ್ಬ ಹೆಣ್ಣು.
ಆಕೆಯ ಛಲದ ಬದುಕಿಗೆ ಒಂದು ಪ್ರಣಾಮ )
ಸುದ್ದಿದಿನ.ಕಾಂ | ವಾಟ್ಸಾಪ್ | 9980346243

ಭಾವ ಭೈರಾಗಿ
ಕಾದಂಬರಿ ವಿಮರ್ಶೆ | ಸ್ವಪ್ನದಲ್ಲಿ ಸೊರಗಿದ ಪ್ರೀತಿ

- ಸಿಂಪಲ್ ಸಿಂಚು
ಇತ್ತೀಚಿಗಷ್ಟೇ ಕರುನಾಡ ಹಣತೆ ಕವಿ ಬಳಗದ ಮೂಲಕ ಪರಿಚಿತರಾದ ಕೆ.ಸಿರಿ (ಗ್ರಾಮ ಲೆಕ್ಕಿಗರು) ಚಾಮರಾಜನಗರ. ಇವರು ಪರಿಚಯವಾದ ಹತ್ತು ನಿಮಿಷದಲ್ಲಿಯೇ ಇವರ ಕಾದಂಬರಿ ನನ್ನ ಕೈಗೆ ತಲುಪಿತು. “ಸ್ವಪ್ನದಲ್ಲಿ ಸೊರಗಿದ ಪ್ರೀತಿ”. ಅತ್ಯದ್ಭುತವಾದ ಶೀರ್ಷಿಕೆ ಹೊಂದಿದೆ. ನಾನು ಒಬ್ಬಳು ಬರಹಗಾರ್ತಿಯಾಗಿ ಶೀರ್ಷಿಕೆ ನೋಡಿ ನನ್ನದೇ ಆದಂತಹ ಒಂದು ಕಲ್ಪನೆಯಲ್ಲಿ ನಾನು ಮುಳುಗಿದಾಗ.
ಪ್ರೀತಿಯೆಂದರೆ, ಪ್ರೇಮ ಅಷ್ಟೇ ಅಂದುಕೊಂಡಿದ್ದೆ ಆದರೆ ಕುತೂಹಲದಿಂದ ಕಾದಂಬರಿಯನ್ನು ಓದುತ್ತಿರುವಾಗ ಅರ್ಥವಾಯಿತು, ಪ್ರೀತಿಯೆಂದರೆ ಹೆಸರು ಹಾಗೆಯೇ ಪ್ರೇಮ ಅನ್ನೋದು ಕೂಡ ಹೆಸರು, ಅಂತ. ಸಮಾಜದಲ್ಲಿ ಪ್ರೇಮ ನಿವೇದನೆಯನ್ನು ಮೊದಲಿಗೆ ಹುಡುಗರು ಮಾಡಬೇಕು, ಅದಕ್ಕೂ ಮೊದಲು ಪ್ರೇಮ ನಿವೇದನೆಯನ್ನು ಹುಡುಗಿ ಮಾಡಿದರೆ ತಪ್ಪು.
ಎಂಬುದು ವಿಶ್ವವಿಖ್ಯಾತಿ ಅಭಿಪ್ರಾಯ. ಅದು ಇನ್ನು ಹಲವಾರು ಜನರ ಅಭಿಪ್ರಾಯವೂ ಹೌದು. ಹೆಣ್ಣಾದವಳು ತನ್ನೊಳಗಿನ ಭಾವನೆಗಳನ್ನು, ನನ್ನೊಳಗಿನ ತಲ್ಲಣಗಳನ್ನು ಹೊರಹಾಕಲು ಸಮಾಜದಲ್ಲಿ ಸರಿಯಾದ ರೀತಿಯ ಸ್ವತಂತ್ರ ಕೂಡ ಇಲ್ಲ ಅಂತಹ ಕಟ್ಟುಪಾಡುಗಳಿಗೆ ಸ್ವಪ್ನದಲ್ಲಿ ಸೊರಗಿದ ಪ್ರೀತಿಯು ಪರಿಹಾರವಾಗಿದೆ.
ಇದನ್ನೂ ಓದಿ | ಪುಸ್ತಕ ವಿಮರ್ಶೆ | ಮೋಹದ ಮೋಡಗಳು
ಈ ಕಾದಂಬರಿಯನ್ನೂ ಪೂರ್ತಿಯಾಗಿ ಇದರಲ್ಲಿ ಮುಳುಗಿ ಓದಿದಾಗ ಮಧ್ಯದಿಂದ ಹಿಡಿದು ಕೊನೆಯವರೆಗೂ ದುಃಖ ನನ್ನನ್ನು ಅವರಿಸುತ್ತದೆ. ಪ್ರೀತಿ ಪ್ರೇಮ್ ಎಂಬ ಹೆಸರಿನ ಹೊಂದಾಣಿಕೆ ತುಂಬಾ ಅದ್ಭುತವಾಗಿದೆ. ಪ್ರೀತಿ ಪ್ರೇಮ್ ನಾ ಹುಟ್ಟಿದ ದಿನ, ಕೆಂಪುಬಣ್ಣದ ಅಭಿರುಚಿ, ಪ್ರೀತಿ ಪ್ರೇಮಿಗಳ ದಿನವನ್ನು ಆಚರಿಸುತ್ತಿದಂತಹ ಪದ್ಧತಿ.
ಎಲ್ಲವೂ ಕೂಡ ತುಂಬಾ ಮನಸ್ಸಿಗೆ ಇಷ್ಟವಾಯಿತು. ಹಾಗೆಯೇ ಪ್ರೀತಿ ಎಷ್ಟು ವರ್ಷಗಳ ಕಾಲವಾದರೂ ತನ್ನ ಪ್ರೀತಿಯನ್ನು ಉಳಿಸಿಕೊಂಡು ಹೋಗುವ ರೀತಿ. ನಮ್ಮಂತಹ ಹೂಮನಸ್ಸಿಗರಿಗೆ ಸ್ಫೂರ್ತಿದಾಯಕವಾಗಿದೆ. ಈ ಕಾದಂಬರಿಯಲ್ಲಿ ಹುಚ್ಚುಕೋಡಿ ಮನಸ್ಸಿನ ಚಿತ್ರಣವನ್ನು ಮತ್ತು ನಿಯಂತ್ರಣವನ್ನು, ಪ್ರೇಮ್ನಾ ಮೂಲಕ ಬಣ್ಣಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರೀತಿ-ಪ್ರೇಮವೆಂದು ಆವೇಶ ಪಟ್ಟು ಆತ್ಮಹತ್ಯೆ, ಸಾವಿನ ಕೃತ್ಯಗಳನ್ನು ಕೈಗೊಳ್ಳುವ ಯುವಜನರಿಗೆ ಜೀವನದ ಗುರಿ ಮುಖ್ಯ ಎಂಬುದನ್ನು ತಿಳಿಸುತ್ತದೆ. ಮುಂದುವರೆದು ಕನ್ನಡ ದೇಸಿ ಪದಗಳ ಸಂಭಾಷಣೆ, ನಿರ್ಗಳತೆಯಿಂದ ಕಾದಂಬರಿ ಓದುವವರಿಗೆ ಪ್ರಯಾಣದಲ್ಲಿ ನಿಲ್ದಾಣಗಳಂತೆ ಸರಳವಾಗಿ ಅರ್ಥವಾಗುವ ಕವನಗಳು ಕಾದಂಬರಿಯ ವಿಶೇಷತೆಯಾಗಿದೆ.
ಅಪ್ಪ-ಅಮ್ಮನ ಮಾತಿಗೆ ಬೆಲೆ ಕೊಡದಿರುವ ಯುವಜನಾಂಗಕ್ಕೆ ಮಾದರಿ ಪ್ರೇಮ್ ಒಂದೆಡೆ ಆದರೆ, ಇನ್ನೊಂದೆಡೆ ಅದೇ ಪ್ರೇಮ್ ಪ್ರೀತಿಯ ಪ್ರೀತಿಯನ್ನು ನಿಭಾಯಿಸಲು ಬರದೆ, ತನಗೆ ತಾನು ಮೋಸ ಮಾಡಿಕೊಂಡಿದ್ದು ತುಂಬಾ ದುಃಖಕರ ವಿಚಾರ. ಅತಿ ಹೆಚ್ಚು ಭಾವುಕರಾದ ಕ್ಷಣ ಪ್ರೇಮ್ ತನ್ನ ಅಪ್ಪನನ್ನು ಪ್ರೀತಿಯ ಗೋರಿಯ ಹತ್ತಿರ ಕರೆದುಕೊಂಡು ಹೋಗಿ.
ತನ್ನ ದುಃಖವನ್ನು ಹೇಳಿಕೊಂಡು ಅಪ್ಪ-ಮಗ ಇಬ್ಬರೂ ಪಶ್ಚತಾಪ ಪಡುವ ಕ್ಷಣ.ಪ್ರೀತಿಯ ಬದಲಿಗೆ ಪಾರ್ವತಿ ಬಂದಾಗ, ಪ್ರೀತಿಯನ್ನು ಪಾರ್ವತಿಯಲ್ಲಿ ಕಾಣುವುದು!! ಇಲ್ಲದಿರುವ ವ್ಯಕ್ತಿಗಳನ್ನು ಇರುವ ವ್ಯಕ್ತಿಗಳೊಂದಿಗೆ ಕಲ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅಂತಹ ಸಂದರ್ಭವನ್ನು ತುಂಬಾ ಸೂಕ್ಷ್ಮವಾಗಿ ವರ್ಣಿಸಿದ್ದಾರೆ.
ನಾನು ಪಿಯುಸಿ ನಲ್ಲಿರುವಾಗ ವಿನಿತ್ ಎಂಬ ಹುಡುಗ ದ್ವಿತೀಯ ಪಿಯುಸಿ ಪರೀಕ್ಷೆಯ ಸಮಯದಲ್ಲಿ ಪ್ರೇಮ ನಿವೇದನೆಯನ್ನು ತನ್ನ ಗೆಳೆಯರೊಂದಿಗೆ ಹೇಳಿಕಳಿಸಿದ್ದ ನಾನು ಮೊದಲು ಪರೀಕ್ಷೆ ಬರೆದು ಪಾಸ್ ಆಗಲಿಕ್ಕೆ ಹೇಳು ಎಂದು ಬೈದು ಕಳಿಸಿದ ಕ್ಷಣ ನೆನಪಾಗಿ ನಕ್ಕಿದೆ.
ಈ ಕಾದಂಬರಿಯನ್ನು ಓದಿದ ಕ್ಷಣಗಳು ನನ್ನನ್ನು ತುಂಬಾ ಯೋಚನೆ, ತುಂಬಾ ಭ್ರಮೆಗಳಿಗೆ, ತುಂಬಾ ಪ್ರಶ್ನೆಗಳಿಗೆ ಅನುವು ಮಾಡಿ ಎಲ್ಲದಕ್ಕೂ ಕೊನೆಯಲ್ಲಿ ಉತ್ತರ ಹುಡುಕುವಲ್ಲಿ ವಿಶಾಲವಾದ ಮನಸ್ಥಿತಿಯನ್ನು ತಂದುಕೊಟ್ಟಂತಹ “ಕೆ. ಸಿರಿಯವರ ಸ್ವಪ್ನದಲ್ಲಿ ಸೊರಗಿದ ಪ್ರೀತಿಗೆ ಸದಾಕಾಲ ಚಿರಋಣಿ”. ಶುಭವಾಗಲಿ ಶ್ರೀಧರ್ ಸರ್. ಇನ್ನು ಹಲವಾರು ವಿಶೇಷ ವಿಭಿನ್ನ ಕಾದಂಬರಿಗಾಳಿಗಾಗಿ ಕಾಯುತ್ತಿರುವ ಆಶಾ ಜೀವಿ ನಿಮ್ಮ ಅನುಯಾಯಿ. ಸಿಂಪಲ್ ಸಿಂಚು. ಧನ್ಯವಾದಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ನಿತ್ಯ ಭವಿಷ್ಯ6 days ago
ಈ ರಾಶಿಯವರಿಗೆ ನಿಶ್ಚಿತಾರ್ಥ ಸಂಭವ! ಶನಿವಾರ- ರಾಶಿ ಭವಿಷ್ಯ ಏಪ್ರಿಲ್-17,2021
-
ನಿತ್ಯ ಭವಿಷ್ಯ6 days ago
ಈ ರಾಶಿಯವರಿಗೆ ಸಂಜೆಯೊಳಗೆ ಒಂದು ಖುಷಿ ಸಂದೇಶ! ಭಾನುವಾರ- ರಾಶಿ ಭವಿಷ್ಯ ಏಪ್ರಿಲ್-18,2021
-
ದಿನದ ಸುದ್ದಿ5 days ago
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ಸಾಮಾಜಿಕ ಸಂವರ್ಧನೆಗೆ ಸಾಹಿತ್ಯಿಕ ಚರ್ಚೆ ಅವಶ್ಯ : ಹಿರಿಯ ಸಾಹಿತಿ ಡಾ. ಎಂ. ಜಿ. ಈಶ್ವರಪ್ಪ
-
ದಿನದ ಸುದ್ದಿ5 days ago
ಮತ್ತೆ ಬಂದರೂ ಅದೇ ಕೊರೋನ, ನಾವು ಹೆದರದಿರೋಣ
-
ದಿನದ ಸುದ್ದಿ3 days ago
ಹಳೇ ಕುಂದುವಾಡ ಮನಾ ಯುವ ಬ್ರಿಗೇಡ್, ಜರವೇ ನಾಲ್ಕನೇ ವಾರ್ಷಿಕೋತ್ಸವ | ಯುವಕರ ಸಮಾಜ ಮುಖಿ ಕೆಲಸಗಳು ಉತ್ತಮ ನಾಯಕತ್ವಕ್ಕೆ ಬುನಾದಿ : ಮೇಯರ್ ಎಸ್.ಟಿ.ವೀರೇಶ್
-
ದಿನದ ಸುದ್ದಿ5 days ago
ಡೀಲರ್ಶಿಪ್ಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ದಾವಣಗೆರೆ | ಮೇ 04 ರವರೆಗೆ ರಾತ್ರಿ ಕಫ್ರ್ಯೂ ಹಾಗೂ ವಾರಾಂತ್ಯ ಕಫ್ರ್ಯೂ ಘೋಷಣೆ