ಭಾವ ಭೈರಾಗಿ
ಕ್ರಾಂತಿ ಪಕ್ಕದ ಮನೆಯಲ್ಲಾದರೆ ಮಾತ್ರ ಚೆಂದ
ಇದು ಸಾಮಾನ್ಯವಾಗಿ ಬಹುತೇಕರಿಗೆ ಇರುವಂತಹಾ ಖಾಯಿಲೆ. ಬದಲಾವಣೆ ಎಂದರೆ ಎಲ್ಲರಿಗೂ ಇಷ್ಟ. ಹೌದು ಜಗತ್ತು ಬದಲಾಗಬೇಕು. ಸಮಾಜದ ಉದ್ದಾರ ಮಾಡಲು ಮಹಾತ್ಮರು ಜನ್ಮತಾಳಬೇಕು. ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಮುಂದಿನ ಪೀಳಿಗೆಗಾಗಿ ಏನಾದರೂ ಕೊಡಬಲ್ಲ ಧೀಮಂತ ವ್ಯಕ್ತಿಗಳು ನಮಗೆ ಅವಶ್ಯವಾಗಿ ಬೇಕು. ಮತ್ತೊಮ್ಮೆ ನಮ್ಮ ದೇಶದಲ್ಲಿ ಗಾಂಧಿ, ಅಂಬೇಡ್ಕರ್ ಹುಟ್ಟಬೇಕು. ಬುದ್ದ ಬಸವರು ಜನ್ಮತಾಳಬೇಕು. ಮದರ್ ಥೆರೆಸಾರಂತೆ ಸಮಾಜಕ್ಕಾಗಿ ಬದುಕುವವರು ಬೇಕು. ವಿವೇಕಾನಂದರಂತೆ ದೇಶದ, ಸಮಾಜದ ಉದ್ದಾರಕ್ಕಾಗಿ ಸರ್ವಸ್ವವನ್ನೂ ನೀಬಲ್ಲವರು ಬೇಕು. ಇವರೆಲ್ಲ ಮತ್ತೆ ಮತ್ತೆ ಹುಟ್ಟಿಬರಬೇಕು ಆದರೆ ನಮ್ಮ ಮನೆಯಲ್ಲಲ್ಲ, ಪಕ್ಕದ ಮನೆಯಲ್ಲೋ ಅಥವಾ ಮತ್ಯಾರದೋ ಮನೆಯಲ್ಲಿ ಹುಟ್ಟಿಬಂದರೆ ಒಳಿತು.
ಇದು ನಮ್ಮ ತಪ್ಪಲ್ಲ ಬಿಡಿ ನಮ್ಮಲ್ಲಿ ಬಹುತೇಕರು ಬೆಳೆದು ಬಂದ ವಾತಾವರಣವೇ ಹಾಗಿರುತ್ತದೆ. ಹೆಚ್ಚಿನ ತಂದೆ ತಾಯಿಗಳು ಮಕ್ಕಳಿಗೆ ಹೇಳಿಕೊಟ್ಟಿರುವ ಒಂದೇ ಪಾಠವೆಂದರೆ ಊರಿನ ಉಸಾಬರಿ ನಿನಗ್ಯಾಕಪ್ಪ, ಊರ ದನಾ ಕಾಯ್ದು ದೊಡ್ಡ ಬೋರಾ ಎನಿಸಿಕೊಳ್ಳೋದು ಬೇಡ ಸುಮ್ಮನಿರು. ಯಾಕಂದ್ರೆ ಅವರಪ್ಪ ಅಮ್ಮ ಅವರಿಗೆ ಹೇಳಿಕೊಟ್ಟಿರುವುದೂ ಇದನ್ನೇ ಅಲ್ವಾ,,, ಹಾಗಾದರೆ ಹೀಗೆ ಹೇಳಿಕೊಟ್ಟವರೆಲ್ಲ ಕೆಟ್ಟವರಾ ಅಂದರೆ ಅಲ್ಲ. ಅದು ಅವರವರ ವ್ಯಾಪ್ತಿಗೆ ಸಂಬಂದಿಸಿದ ವಿಷಯ. ಒಂದು ಪುಟ್ಟ ಹಳ್ಳಿಯಲ್ಲಿ ಎಲೆಮರೆ ಕಾಯಿಯಂತೆ ಬದುಕಿದ ಅವ್ವ ಅಪ್ಪನಿಗೆ ನಾವು ಇದುವರೆಗೂ ನಾಲ್ಕುಜನರ ಬಾಯಿಗೆ ಸಿಕ್ಕಿಲ್ಲ. ಯಾರೂ ನಮ್ಮ ಬಗ್ಗೆ ಬೆರಳು ಮಾಡಿ ತೋರಿಸಿಲ್ಲ ಎಂಬುದೇ ಹೆಗ್ಗಳಿಕೆಯಾಗಿರುತ್ತದೆ. ಅದು ಅವರ ತಪ್ಪೂ ಅಲ್ಲ. ಆದರೆ ಅವರು ಹೇಳಿದಂತೆಯೇ ಬೆಳದ ಮಗು ಯಾರನ್ನೂ ಪ್ರಶ್ನಿಸುವುದು ಅಸಾಧ್ಯ. ಅದು ತನ್ನನ್ನು ತಾನು ಬಂಧಿಸಿಕೊಂಡುಬಿಡುತ್ತದೆ. ಮತ್ತೊಂದು ರೀತಿಯ ತಂದೆ ತಾಯಂದಿರಿದ್ದಾರೆ ಅವರು ಮಕ್ಕಳು ಹುಟ್ಟಿರುವುದೇ ಕೆಲಸ ಪಡೆದು ಹಣ ಗಳಿಸುವುದಕ್ಕೆ ಎಂದು ನಂಬಿರುತ್ತಾರೆ, ತಮ್ಮ ಮಕ್ಕಳಿಗೂ ಅದನ್ನೇ ತುಂಬುತ್ತಾರೆ. ನೀನು ಮನುಷ್ಯನಾಗಬೇಕು , ನಾಲ್ಕು ಜನರ ಬದುಕಿಗೆ ದಾರಿದೀಪವಾಗಬೇಕು ಸಂತನಾಗಬೇಕು, ತತ್ವಜ್ನಾನಿಯಾಗಬೇಕು, ನೂರುಜನರಿಗೆ ಕೆಲಸ ನೀಡುವವನಾಗಬೇಕು, ಸಮಾಜ ಸುಧಾರಕನಾಗಬೇಕು, ಸಂಗೀತಗಾರನಾಗಬೇಕು, ನೃತ್ಯಪಟು,ನಾಟಕಕಾರ, ಕಲಾವಿದನಾಗಬೇಕು ಎಂದು ಹೇಳಿರುವ ತಾಯಂದಿರು ವಿರಳಾತಿವಿರಳವೇ ಸರಿ.
ನನ್ನ ಎರಡು ವರ್ಷದ ಮಗನಿಗೆ ಮೊಬೈಲ್ ನಲ್ಲಿ ಎ ಟು ಝೆಡ್ ಗೊತ್ತು. ಆರನೇಕ್ಲಾಸಿನ ನನ್ನ ಮಗ ಈಗಲೇ ಬೈಕ್ ಕೇಳ್ತಾನೆ. ಯಾಕೆ ಕೇಳ್ತೀರಾ ಸಾರ್ ಎಲ್ಲದರಲ್ಲೂ ನೈಂಟಿ ಸ್ಕೋರ್ ಮಾಡ್ತಾನೆ ಅಂತೆಲ್ಲ ಸಂತಸ ಪಡುವ ಹೆತ್ತವರು ಮಗ ಸಮಾಜದ ಬಗ್ಗೆ ಚಿಂತೆ ಮಾಡ್ತಾನೆ. ದೊಡ್ಡವರ ಬಗ್ಗೆ ಕೇಳಿ ತಿಳಿದುಕೊಳ್ತಾನೆ, ಓದಿನ ಆಚೆಗೂ ಯಾವುದರಲ್ಲೋ ಆಸಕ್ತಿ ಹೊಂದಿದ್ದಾನೆ ಅನ್ನೋ ಯಾವ ಹೆಮ್ಮೆಯೂ ಹೆಮ್ಮೆ ಪಡಲ್ಲ. ಇಂಥವರ ಕೈಲಿ ಬೆಳದ ಮಗು ಗುಮಾಸ್ತನೋ, ಸಂಬಳಕ್ಕೆ ಕಾಯುವ ಉದ್ಯೋಗಿಯೋ ಆಗುವುದು ಬಿಟ್ಟು ಮತ್ತೇನಾಗಲು ಸಾಧ್ಯ.
ಹಾಗಾದರೆ ಗುಮಾಸ್ತನಾಗುವುದು ಅಪರಾಧವೇ,,, ಖಂಡಿತ ಅಲ್ಲ. ಅದು ಜೀವನ ನಿರ್ವಹಣೆಗಾಗಿ ಮಾಡುವ ಒಂದು ಕಾಯಕ ಅಷ್ಟೆ , ಆದರೆ ಅದರಿಂದಾಚೆಗೂ ನಮಗೊಂದು ವ್ಯಕ್ತಿತ್ವವಿರುತ್ತದೆ, ಅದರಿಂದ ನಮ್ಮನ್ನು ಗುರುತಿಸುವಂತಾಗಬೇಕು . ನಾಳೆ ನಮ್ಮ ಮಗು ಅದರ ಉದ್ಯೋಗದಿಂದ ಅಷ್ಟೇ ಅಲ್ಲದೇ ಅದರಿಂದಾಚೆಗೂ ಏನಾದರೂ ಸಾಧಿಸಬೇಕು ಎಂದು ಹೆತ್ತವರು ಕನಸುಕಾಣುವಂತಾಗಬೇಕು. ಮೌಲ್ಯಯುತ ವ್ಯಕ್ತಿಯಾಗಲು ಸಹಕಾರಿಯಾಗುವಂತೆ ಮಕ್ಕಳಿಗೆ ಪೂರಕ ವಾತಾವರಣ ನಿರ್ಮಿಸಿಕೊಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಸಿಲಬಸ್ ಬಿಟ್ಟು ಮತ್ತೇನನ್ನು ಓದಿದರೂ ಅಪರಾಧ ಎನ್ನುವ ಶಿಕ್ಷಕರ ಮನೋಭಾವ ಬದಲಾಗಬೇಕಿದೆ.
ಪದೇ ಪದೇ ನನ್ನನ್ನು ಕಾಡುವ ಒಂದು ಪ್ರಶ್ನೆ ಎಂದರೆ ಜಗತ್ತಿನ ಎಲ್ಲ ಸಾಧಕರ ಬಗ್ಗೆಯೂ ನಾವು ಪಠ್ಯಪುಸ್ತಕದಲ್ಲಿ ಹೇಳಲು ಸಾಧ್ಯವಿಲ್ಲ ಅಂದ ಮಾತ್ರಕ್ಕೆ ಅವರ ಅಪಾರವಾದ ಸಾಧನೆ ನಮ್ಮ ಮಕ್ಕಳಿಗೆ ತಲುಪಲೇ ಬಾರದಾ? ಪಠ್ಯದಲ್ಲಿ ಸೇರಿಸಲಾಗದ ಅದೆಷ್ಟೋ ಮೌಲ್ಯಗಳು ಜೀವನಕ್ಕೆ ಅತ್ಯವಶ್ಯಕವಾಗಿವೆ, ಅವುಗಳನ್ನು ಮಕ್ಕಳು ತಿಳಿಯುವುದಾದರೂ ಹೇಗೆ. ಬೇಂದ್ರೆ ಬರೆದ ಒಂದೆರಡು ಪದ್ಯಗಳಷ್ಟೇ ಪಠ್ಯದಲ್ಲಿರಬಹುದು ಉಳಿದ ಸಾವಿರಾರು ಕವಿತೆಗಳು ಯಾರಿಗಾಗಿ? ಕುವೆಂಪು ಬರೆದ ಸಾವಿರ ಸಾವಿರ ಮೌಲ್ಯಗಳು ಜೀವನ ಸಂದೇಶಗಳು ಯಾರಿಗಾಗಿ? ಇದೆಲ್ಲವನ್ನೂ ನಮ್ಮ ಶಿಕ್ಷಕ ಮಿತ್ರರು ಅರ್ಥ ಮಾಡಿಕೊಳ್ಳಬೇಕು. ಎಲ್ಲೋ ಯಾರೋ ಸಾಧಿಸಿದ್ದನ್ನು ನೋಡಿ ಮಕ್ಕಳಿಗೆ ತೋರಿಸುವುದಕ್ಕಿಂತ ಅವರನ್ನೇ ಸಾಧಕರನ್ನಾಗಿ ಮಾಡುವತ್ತ ಗಮನ ಹರಿಸಬೇಕು. ಮಕ್ಕಳ ಅಂತರಾತ್ಮದ ತಲೆಗೆ ಹೊಡೆದು ಕೂರಿಸುವುದಕ್ಕಿಂತ ಅವರ ಇಷ್ಟದ ಕ್ಷೇತ್ರದಲ್ಲಿ ಅವರನ್ನು ಬೆಳೆಯಲು ಬಿಡಬೇಕು. ಉತ್ತಮರಾರನ್ನೋ ಹುಡುಕುವ ಬದಲು ನಾವೇ ಉತ್ತಮರಾಗಲು ಪ್ರಯತ್ನಿಸಬೇಕು.
ದಿನದ ಸುದ್ದಿ
ಕವಿತೆ | ನೆನಪು
- ರುದ್ರಪ್ಪ ಹನಗವಾಡಿ
ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ
ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು
ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು
ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?
( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ಮಣ್ಣ ಮಕ್ಕಳು
- ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ
ಮಣ್ಣ ಮಕ್ಕಳು ನಾವು
ಹಗಳಿರುಳೆನ್ನದೆ ಬೆವರು ಬಸಿದು
ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು
ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ
ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು
ಚಿಂದಿ ಅಂಗಿಯಲಿ ಶಾಲೆಗೆ ದಾಖಲಾದವರು.
ಬರಿಗಾಲಲಿ ಕಾಡು ದಾರಿಯಲಿ ಮೈಲು ದೂರ ನಡೆದು
ನೆಗ್ಗಿಲ ಮುಳ್ಳು ತುಳಿದವರು ; ನಿಬ್ಬು ನೆಗ್ಗಿದ ಪೆನ್ನಿನಲಿ
ಹೆಸರು ಬರೆಯಲು ಕಲಿತವರು ಹರಿದ ಪಠ್ಯದಲಿ ಅಕ್ಷರ ಹುಡುಕಿ ಒಡೆದ ಪ್ಲೇಟಿನಲಿ ಬರೆದವರು.
ತೂತು ಬಿದ್ದ ಸೂರಿನಲಿ ಇಣುಕಿದ ಚುಕ್ಕಿ ಚಂದ್ರಮರ ನೋಡಿ
ವಿದ್ಯುತ್ ದೀಪದ ಕನಸು ಕಂಡವರು
ಮೋಸ ವಂಚನೆಗೆ ಬಗ್ಗದೆ ಶೋಷಣೆಗೆ ಸಿಡಿದವರು
ಮಣ್ಣ ಮಕ್ಕಳು ನಾವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಿ.ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿಯ ಕುರಿತು
ಸಂಡೂರಿನ ಜನರ ಮುದುಡಿದ ಅಂಗಿಯ ಮೇಲೆ,ಹೆಂಗಸರು ಮಾಸಿದ ಸೀರೆಯ ಸೆರಗಿನ ಮೇಲೆ ಬಿ.ಶ್ರೀನಿವಾಸ ಅಕ್ಷರ ಬಿಡಿಸುತ್ತಾರೆ.
ಅನ್ನದ ಅಗುಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು,ಕಿಡ್ನಿ,ಈ ಸಣ್ಣವು ಗಳಲ್ಲಿ ಜೀವಸಾಕ್ಷಿ ಹುಡುಕುವ ಕಥೆಗಳಿವು.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅನ್ನದ ಅಗಳು,ಕಾಗದದ ಚೂರನ್ನು ಎತ್ತಿಹಿಡಿಯುವ ಗೆಳೆಯ ಶ್ರೀನಿವಾಸ *ಧೂಳನ್ನೇ ಅಕ್ಷರಗಳನ್ನಾಗಿಸಿದ ಲೇಖಕ.
- ಬಸವರಾಜ ಹೂಗಾರ
ಇಲ್ಲಿನ ಹುಚ್ಚರ ಕತೆಗಳನ್ನು ಓದುವಾಗ ಕುಂ.ವೀ.ಯವರ ಹಾಗೂ ಸಾದತ್ ಹಸನ್ ಮಾಂಟೋ ಅವರ ಹುಚ್ಚರ ಕತೆಗಳು ನೆನಪಾಗುತ್ತವೆ.ಇಲ್ಲಿನ ನತದೃಷ್ಟರ ಬದುಕನ್ನು ಹಿಡಿದಿಡಲು ಲೇಖಕರು ಕಂಡುಕೊಂಡಿರುವ ಅಭಿವ್ಯಕ್ತಿ ವಿನ್ಯಾಸ ವಿಶಿಷ್ಟವಾಗಿದೆ. ಬರಹಗಳು ದೀರ್ಘವಾಗಿಲ್ಲ. ಚುಟುಕಾಗಿವೆ. ಕವನಗಳೊ, ಗದ್ಯಗಳೊ ಎಂದು ಹೇಳಲಾಗದ ರೂಪದಲ್ಲಿವೆ.
ಗಾಢವಾದ ಅರ್ಥವನ್ನು ಕೆಲವೇ ಸಾಲುಗಳಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಹಿಡಿಯಲು ಯತ್ನಿಸುತ್ತವೆ.
ಇಲ್ಲಿರುವ ಲೋಕದ ನೋವಿಗೆ ಮಿಡಿವ ಸಂವೇದನೆ,ಓದುವ ಓದುಗರನ್ನೂ ಆವರಿಸಿಕೊಂಡು,ಚಿಂತನೆಗೆ ಹಚ್ಚುತ್ತದೆ.ಓದುತ್ತ,ಓದುತ್ತಾ ನಿಟ್ಟುಸಿರು ಹೊಮ್ಮುತ್ತದೆ.ಮನಸ್ಸು ಮಂಕಾಗುತ್ತದೆ.ಇಂತಹ ಬರಹಗಳನ್ನು ಕೊಟ್ಟಿರುವ ಶ್ರೀನಿವಾಸ ತಮ್ಮ ಅಂತಃಕರಣ ,ಚೂಪಾದ ಗ್ರಹಿಕೆ,ಆಳವಾದ ಸಂವೇದನೆಗಳನ್ನು ಇತರೆ ಪ್ರಕಾರಗಳಲ್ಲಿಯೂ ಪ್ರಕಟಿಸುವ ಜರೂರಿಯಿದೆ.
- ಡಾ.ರಹಮತ್ ತರೀಕೆರೆ
ಒಬ್ಬ ಮನುಷ್ಯ ಮತ್ತೊಬ್ಬನನ್ನು ಕಿತ್ತು ತಿನ್ನಬಾರದು.ಹೊಟ್ಟೆಪಾಡಿಗಾಗಿ ನಿರ್ವಹಿಸುವ ಪ್ರತಿ ಕೆಲಸವೂ ಸೃಜನಶೀಲವಾಗಿರಬೇಕು-ಎಂಬ ಧಾವಂತದಲ್ಲಿ ಹುಟ್ಟಿದ ಮನದ ಪ್ರಕ್ರಿಯೆಗಳಿಗೆಲ್ಲ ಇಲ್ಲಿ ಹರಡಿಕೊಂಡಿವೆ.
- ಬಿ.ಶ್ರೀನಿವಾಸ,ಕೃತಿ ಲೇಖಕ
ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು ನೊಂದವರ ಮನದಲ್ಲಿ ಅಲ್ಪಾವಧಿ ಗುರುತು ಮೂಡಿಸಬಹುದು ನಿಮ್ಮ ಈ ಪುಸ್ತಕ ಮತ್ತು ಅದರಲ್ಲಿರುವ ಎಷ್ಟೋ ವಿಚಾರಗಳು ನನ್ನನ್ನು ಡಿಸ್ಟರ್ಬ್ ಮಾಡಿವೆ. ಕೇವಲ ವಾಟ್ಸಾಪ್ ಲೈನ್ ಸಾಕಾಗಲ್ಲ ಎದುರುಗಡೆ ಕುಳಿತು ಇನ್ನು ಹೆಚ್ಚು ತಿಳಿದುಕೊಳ್ಳಬೇಕೇನಿಸುತ್ತದೆ. ಸಂಡೂರಿನ ದಾರುಣ ಚಿತ್ರಗಳನ್ನು,ಕೋರ್ಟಿನ ಚಿತ್ರಗಳನ್ನು,ಬದುಕಿನ ಚಿತ್ರಗಳನ್ನು ಕಣ್ಣಿಗೆ ರಾಚುವಂತೆ ಮೂಡಿಸಿದ್ದೀರಿ.
ಸಾವಿಗಿಂತ ಹಸಿವು ಬಹಳ ಕ್ರೂರಿ ಎನ್ನುವುದು: ನೋವಿನ ಬದಲು ಹಸಿವಿನ ಏಟುಗಳು ಬೀಳಬೇಕಿತ್ತು ಎನ್ನುವ ಸಾಲುಗಳಂತೂ Geographical Hungrey ಪುಸ್ತಕ ನೆನಪಿಸುತ್ತವೆ. ಸೊಂಡೂರಿನ ಚಿತ್ರಗಳ ಮೂಡಿಸಿದೆ ಗಾಢ ವಿಷಾದತೆ, ನನ್ನನ್ನು ಹೊರಬರಲು ಬಿಡುತ್ತಿಲ್ಲ.
“ಉಳ್ಳವರು ಹೊತ್ತ ಮೂಟೆಗಳಲ್ಲಿ ಬಡವರ ಹಸಿವಿನದ್ದೇ ಭಾರ”ಇವೆಲ್ಲ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಸರಿಯಾಗಿ ಅರ್ಥವಾಗುವ ಸಾಲುಗಳು.
ಇನ್ನು ,ಕೋರ್ಟಿನ ಚಿತ್ರಗಳು, ಎಷ್ಟು ಜನ ಇರ್ತಾರೆ ಇವನ್ನೆಲ್ಲ ಸೂಕ್ಷ್ಮ ವಾಗಿ ತಿಳಿದುಕೊಳ್ಳುವವರು ?
ಶಾಲೆ ಹಿಂದೆ ತಿರುಗಬಾರದು ಕೋರ್ಟ್ ಕಚೇರಿ ಮುಂದೆ ತಿರುಗಬಾರದು ಎಂದು ನಮ್ಮ ಜನಪದರು ಹೇಳ್ವ ಮಾತು ಎಷ್ಟೋ ಸಲ ಸತ್ಯ ಎನಿಸುತ್ತದೆ.
ನೀವು ಹಿಡಿದಿಟ್ಟ ಬದುಕಿನ ಚಿತ್ರಗಳಲ್ಲಿನ “ಶವಪೆಟ್ಟಿಗೆ ಸಣ್ಣದಿದ್ದಷ್ಟು ಹೊರುವುದು ಬಹಳ ಕಷ್ಟ “ಎಂಬ ಮಾತಂತೂ ಚಿಕ್ಕಮಕ್ಕಳ ತಂದೆತಾಯಿಯರ ಕಣ್ಣಲ್ಲಿ ನೀರು ತರಿಸುವುದು.
ತಲೆ ಮ್ಯಾಲೆ ಮಲ ಸುರುವಿಕೊಂಡೆವಲ್ಲ ಸರ್ ಅವತ್ತೇ… ನಾವ್ ಹುಟ್ಟಿದ್ದು ಎನ್ನುವ ಸವಣೂರಿನ ಭಂಗಿಯ ಮಾತನ್ನು ಎಷ್ಟು ಅರ್ಥಗರ್ಭಿತವಾಗಿ ಸೋ ಕಾಲ್ಡ್ ಸೊಸೈಟಿಗೆ ಮುಟ್ಟಿ ನೋಡಿಕೊಳ್ಳುವಂತೆ ಬರೆದಿದ್ದೀರಿ. ಆಕೆ ಏನನ್ನೋ ಆಯ್ಕೆ ಮಾಡಿಕೊಂಡಿದ್ದಾಳೆ ಎಂಬ ವಿಚಾರಗಳು ಕೇವಲ ವಿಚಾರಗಳಲ್ಲ ,ಬದುಕಿನ ಸತ್ಯ ಚಿತ್ರಣಗಳು ದಿನ ನಿತ್ಯ ನಮ್ಮ ನಡುವೆ ನಡೆಯುವಂತವು.ಅವನ್ನು ಕಾಣುವಂತ ದೃಷ್ಟಿ ಇದ್ದವರಿಗೆ ಮಾತ್ರ ಇವು ಕಾಣುತ್ತವೆ ಸರ್ .
ನಿಮ್ಮ ನೈಜ ದೃಷ್ಟಿಗೆ ದನ್ಯವಾದಗಳು ಸರ್, ಉಳಿದದ್ದು ಎದುರು ಬದುರು ಕುಳಿತು ಮಾತಾಡೋಣ
- ಡಾ.ರಾಮಚಂದ್ರ ಹಂಸನೂರು, ಬೆಟಗೇರಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ7 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಕವಿತೆ | ನೆನಪು