Connect with us

ದಿನದ ಸುದ್ದಿ

26ರ ಕಾರ್ಮಿಕರ ಮುಷ್ಕರ ಏಕೆ ನಿರ್ಣಾಯಕ..?

Published

on

  • ನಾ ದಿವಾಕರ

ಕೋವಿದ್ 19ರ ಬಿಕ್ಕಟ್ಟಿನಿಂದ ಭಾರತ ಪಾರಾಗುವುದೆಂದು ? ಈ ಪ್ರಶ್ನೆ ಪ್ರತಿಯೊಬ್ಬರ ಮನಸಿನಲ್ಲೂ ಕಾಡುತ್ತಿದೆ. ಕೋವಿದ್ 19 ಭಾರತದ ದುಡಿಯುವ ವರ್ಗಗಳಿಗೆ ಶಾಪವಾಗಿ ಪರಿಣಮಿಸಿದ್ದರೆ ಆಳುವ ವರ್ಗಗಳಿಗೆ ವರದಾನ ಆದಂತಿದೆ. ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಮನೆಗಳಿಗೆ ಹಿಂದಿರುಗಲು, ಸಾವಿರಾರು ಕಿಲೋಮೀಟರ್ ನಡೆದು, ಬಿರುಬಿಸಿಲಿನಲ್ಲಿ ನಿತ್ರಾಣರಾಗಿ, ಅಸುನೀಗಿದ ನೂರಾರು ವಲಸೆ ಕಾರ್ಮಿಕರು ಸರ್ಕಾರದ ಗಣನೆಗೇ ಬರಲಿಲ್ಲ ಎನ್ನುವುದನ್ನು ಗಮನಿಸಿದರೆ ನಾವು ಎಂತಹ ಅಮಾನುಷ ಆಡಳಿತ ವ್ಯವಸ್ಥೆಯಲ್ಲಿದ್ದೇವೆ ಎಂದು ತಿಳಿಯುತ್ತದೆ.

ಹೊರದೇಶಗಳಿಂದ ಬಂದಿರುವ ಲಕ್ಷಾಂತರ ಅಕ್ರಮ(?) ವಲಸೆ ಕಾರ್ಮಿಕರ ಬಗ್ಗೆ ಕರಾರುವಾಕ್ಕಾಗಿ ಮಾಹಿತಿ ಲಭ್ಯವಿದೆ ಎಂದು ಎಲ್ಲರನ್ನೂ ಹೊರಹಾಕಲು ಸಿದ್ಧತೆ ನಡೆಸಿದ್ದ ಸರ್ಕಾರವೊಂದಕ್ಕೆ, ತನ್ನ ನೆಲದಲ್ಲೇ ವಲಸೆ ಕಾರ್ಮಿಕರು ಎಷ್ಟಿದ್ದಾರೆ ಎನ್ನುವ ಸ್ಪಷ್ಟ ಮಾಹಿತಿ ಇಲ್ಲ ಎಂದರೆ ನಾವು ಇನ್ನೆಂತಹ ನಿಷ್ಕ್ರಿಯ ಆಡಳಿತ ವ್ಯವಸ್ಥೆಯಲ್ಲಿದ್ದೇವೆ ಎಂದು ಅರಿವಾಗುತ್ತದೆ.

ದೇಶದ ಸಂಪತ್ತಿನ ಉತ್ಪಾದನೆಗೆ ಅನಿವಾರ್ಯವಾಗಿ ಬೇಕಾಗುವ ಜೀವಗಳು ಬದುಕಿದ್ದಾಗ ಶೋಷಣೆಗೊಳಗಾದರೆ ಅಳಿದ ಮೇಲೆ ಅನಾಥವಾಗುವ ಒಂದು ವಿಕೃತ ಪರಿಸ್ಥಿತಿಯಲ್ಲಿ ಈ ದೇಶದ ಶ್ರಮಜೀವಿಗಳು ತಮ್ಮ ಬೆವರು ಹರಿಸಿ ದುಡಿಯುತ್ತಿದ್ದಾರೆ. ಉತ್ಪಾದನಾ ಪ್ರಕ್ರಿಯೆಯಲ್ಲಿ ಬಳಕೆಯಾಗುವ ಶ್ರಮ ಶಕ್ತಿ ಮತ್ತು ಈ ಶ್ರಮ ಶಕ್ತಿಯ ವಾರಸುದಾರರಾದ ಶ್ರಮಿಕರು ಯಾವುದೇ ಒಂದು ದೇಶದ ತಳಪಾಯ.

ಅರ್ಥಶಾಸ್ತ್ರಜ್ಞರು, ಮಾರುಕಟ್ಟೆ ತಜ್ಞರು ಮತ್ತು ತಮ್ಮ ಹವಾನಿಯಂತ್ರಿತ ಕೋಣೆಗಳಲ್ಲಿ ಕುಳಿತು ಅಭಿವೃದ್ಧಿಯ ನೀಲನಕ್ಷೆಯನ್ನು ಸಿದ್ಧಪಡಿಸುವ ಹಿತವಲಯದ ಅಧಿಕಾರಶಾಹಿ ವರ್ಗ ದೇಶದ ಜಿಡಿಪಿ , ಅಂದರೆ ನಿವ್ವಳ ದೇಶೀಯ ಉತ್ಪನ್ನದ ಏರಿಳಿತಗಳನ್ನು ಗಮನಿಸುತ್ತಲೇ ಇರುತ್ತಾರೆ.

ಆದರೆ ಈ ಸೂಚ್ಯಂಕದ ಏರಿಳಿತದ ಹಿಂದೆ ಇರುವ ಉತ್ಪನ್ನಗಳ ಉತ್ಪಾದನಾ ಪ್ರಕ್ರಿಯೆಗೆ ಲಕ್ಷಾಂತರ ಕೈಗಳು ದುಡಿದಿರುತ್ತವೆ, ಲಕ್ಷಾಂತರ ಕುಟುಂಬಗಳು ಹಸಿವನ್ನೂ ಲೆಕ್ಕಿಸದೆ ಶ್ರಮ ವಹಿಸಿರುತ್ತವೆ. ಗ್ರಾಮೀಣ ಕೃಷಿ ಮತ್ತು ಕೂಲಿ ಕಾರ್ಮಿಕರಿಂದ ಹಿಡಿದು ದೇಶದ ಬೃಹತ್ ಕೈಗಾರಿಕೆಗಳ ಕಾರ್ಮಿಕರವರೆಗೂ ಶ್ರಮಶಕ್ತಿ ಬಳಕೆಯಾಗಿರುತ್ತದೆ.

ಈ ಶ್ರಮಶಕ್ತಿಯನ್ನು ತನ್ನಿಚ್ಚೆಯಂತೆ, ಅಗ್ಗದ ಕೂಲಿ ನೀಡಿ, ಬಳಸಿಕೊಳ್ಳಲು ಬಂಡವಾಳಿಗರು ಮತ್ತು ಬಂಡವಾಳ ವ್ಯವಸ್ಥೆ ಸದಾ ಸಿದ್ಧವಾಗಿರುತ್ತದೆ. ಇಂದು ಈ ಬೃಹತ್ ಸಮುದಾಯ ಅಪಾಯದ ಅಂಚಿನಲ್ಲಿದೆ. ಭಾರತದ ಬಂಡವಾಳ ವ್ಯವಸ್ಥೆ ತನ್ನ ಕ್ರೌರ್ಯದ ಪರಾಕಾಷ್ಠೆ ತಲುಪಿರುವುದನ್ನು ವಲಸೆ ಕಾರ್ಮಿಕರ ಬವಣೆಯಲ್ಲಿ ಕಾಣದೆ ಹೋದರೆ ಬಹುಶಃ ನಾವು ದೃಷ್ಟಿಹೀನರು ಎಂದೇ ಭಾವಿಸಬೇಕಾಗುತ್ತದೆ. ಭಾರತದ ಶ್ರಮಜೀವಿಗಳು ಕಳೆದ ಮೂರು ದಶಕಗಳಿಂದಲೂ ಕವಲು ಹಾದಿಯಲ್ಲೇ ನಡೆದುಬಂದಿದ್ದಾರೆ. ಇದೀಗ ತಮ್ಮ ಭವಿಷ್ಯದ ಹಾದಿಯನ್ನೇ ಕಳೆದುಕೊಳ್ಳುವ ಸ್ಥಿತಿ ತಲುಪಿದ್ದಾರೆ.

ಕೃಷಿ, ಗುಡಿ ಕೈಗಾರಿಕೆಗಳಿಂದ ಹಿಡಿದು ಬ್ಯಾಂಕ್ ಮತ್ತು ವಿಮಾ ಕ್ಷೇತ್ರದವರೆಗಿನ ಸಮಸ್ತ ಕಾರ್ಮಿಕ ವರ್ಗ ಇಂದು-ನಾಳಿನ ಚಿಂತೆಯಲ್ಲಿದ್ದರೆ ಅದಕ್ಕೆ ಮೂಲ ಕಾರಣ ಈ ದೇಶದ ಆಳುವ ವರ್ಗಗಳು ಅನುಸರಿಸುತ್ತಿರುವ ನವ ಉದಾರವಾದಿ ಆರ್ಥಿಕ ನೀತಿ ಎನ್ನುವುದು ವಾಸ್ತವ.

ಆದರೆ ಈ ಅಮಾನುಷ ನೀತಿಗಳ ವಿರುದ್ಧ ಒಂದು ಸಮಗ್ರ ಹೋರಾಟ ರೂಪಿಸುವಲ್ಲಿ ನಾವು ಎಡವಿದ್ದೆಲ್ಲಿ ಎಂಬ ಪ್ರಶ್ನೆ ಎದುರಾದಾಗ ಕಾರ್ಮಿಕ ಚಳುವಳಿಯ ಮುಂಚೂಣಿಯಲ್ಲಿರುವ ಎಲ್ಲ ಸುಶಿಕ್ಷಿತರೂ ಮತ್ತೊಂದು ಮಾಸ್ಕ್ ಧರಿಸಬೇಕಾಗುತ್ತದೆ. ಇದು ಕಟು ವಾಸ್ತವ. ಈ ಲೋಪವನ್ನು ಒಪ್ಪಿಕೊಳ್ಳದೆ, ಆತ್ಮರತಿಯಲ್ಲೇ ಬದುಕುವುದಾದರೆ ನಮಗೆ, ಅಂದರೆ ಶ್ರಮಜೀವಿ ವರ್ಗಕ್ಕೆ, ನಾಳಿನ ನಕ್ಷತ್ರಗಳನ್ನೂ ಎಣಿಸಲಾಗುವುದಿಲ್ಲ.

ಏಕೆಂದರೆ ಇಂದು ಕಾರ್ಮಿಕ ವರ್ಗ ಎರಡು ನೆಲೆಯಲ್ಲಿ ಸಂಘರ್ಷ ನಡೆಸಬೇಕಿದೆ. ಮೊದಲನೆಯದು ನೂರಾರು ವರ್ಷಗಳ ಹೋರಾಟ, ತ್ಯಾಗ, ಬಲಿದಾನಗಳ ಮೂಲಕ ಪಡೆದಿರುವ ದುಡಿಮೆಯ ಹಕ್ಕುಗಳನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಆತಂಕ. ದುಡಿಮೆಯ ಅವಧಿ ವಿಸ್ತರಣೆ, ಮುಷ್ಕರದ ಹಕ್ಕು ನಿರಾಕರಣೆ, ಸಂಘಟನೆಯ ಹಕ್ಕುಗಳ ಮೇಲಿನ ನಿರ್ಬಂಧ, ಕಾರ್ಮಿಕರನ್ನು ತಮ್ಮ ಇಚ್ಚೆಗನುಸಾರ ನೇಮಿಸಿ ವಜಾ ಮಾಡಲು ಮಾಲಿಕರಿಗೆ ನೀಡಿರುವ ಹಕ್ಕುಗಳು ಮತ್ತು ಶಾಸನಗಳ ಮೂಲಕ ಸುಶಿಕ್ಷಿತ ಕಾರ್ಮಿಕ ವರ್ಗದ ಅಭಿವ್ಯಕ್ತಿ ಸ್ವಾತಂತ್ರ್ಯದ ನಿಯಂತ್ರಣ ಹೀಗೆ ದುಡಿಮೆಗಾರರು ಒಂದು ಶತಮಾನದ ಹಿಂದಿನ ವ್ಯವಸ್ಥೆಗೆ ಜಾರು ಅಪಾಯವನ್ನು ಎದುರಿಸುತ್ತಿದ್ದಾರೆ.

ಎರಡನೆಯದು, ದುಡಿಮೆಯ ಕ್ಷೇತ್ರದ ಹೊರಗೆ ಇನ್ನೂ ಹೆಚ್ಚಿನ ಅಪಾಯಗಳನ್ನು ಎದುರಿಸಬೇಕಿದೆ. 70 ವರ್ಷಗಳ ಅವಧಿಯಲ್ಲಿ ಸಂವಿಧಾನದ ಕರ್ತೃಗಳು ಮತ್ತು ಸ್ವತಂತ್ರ ಭಾರತದ ನಿರ್ಮಾತೃಗಳು ರೂಪಿಸಿ ಪೋಷಿಸಿಕೊಂಡು ಬಂದಿದ್ದ “ ಸ್ವಾವಲಂಬಿ ” ಭಾರತದ ಕನಸನ್ನು ನುಚ್ಚು ನೂರು ಮಾಡಲು ನಾವು “ ಆತ್ಮನಿರ್ಭರ ” ಭಾರತವನ್ನು ನಿರ್ಮಿಸಬೇಕಿದೆ. ನೆಹರೂ ಯುಗದ ಸ್ವಾವಲಂಬನೆಗೂ ಮೋದಿ ಯುಗದ ಆತ್ಮನಿರ್ಭರತೆಗೂ ನಿಘಂಟಿನಲ್ಲಿ ಒಂದೇ ಅರ್ಥ ಕಂಡುಬರುತ್ತದೆ. ಆದರೆ ವಾಸ್ತವ ಭಿನ್ನ. ಸ್ವಾತಂತ್ರ್ಯ ಪೂರ್ವ ದಾರ್ಶನಿಕರು ಕಂಡ ಸ್ವಾವಲಂಬಿ ಭಾರತದಲ್ಲಿ ಈ ದೇಶದ ಸಂಪತ್ತು ಸಮಸ್ತ ಭಾರತೀಯರಿಗೆ ಸೇರಬೇಕು ಎನ್ನುವ ಉದಾತ್ತ ಚಿಂತನೆ ಇತ್ತು. ಇಂದಿನ ಆತ್ಮನಿರ್ಭರತೆ ಈ ಸಂಪತ್ತು ಮತ್ತು ಸಂಪನ್ಮೂಲಗಳನ್ನು ವಸಾಹತುಶಾಹಿಯ ಆಧುನಿಕ ಅವತಾರ ಎನ್ನಬಹುದಾದ ಕಾರ್ಪೋರೇಟ್ ಔದ್ಯಮಿಕ ವಲಯಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ.

ಬ್ರಿಟೀಷ್ ಸಾಮ್ರಾಜ್ಯ ಭಾರತವನ್ನು ಎರಡು ಶತಮಾನಗಳ ದಾಸ್ಯಕ್ಕೆ ಒಳಪಡಿಸಲು ಕಾರಣ ಇಲ್ಲಿನ ರಾಜ ಮಹಾರಾಜರು, ಮೇಲ್ವರ್ಗದ ಶ್ರೀಮಂತ ವ್ಯಾಪಾರಿಗಳು ಈಸ್ಟ್ ಇಂಡಿಯಾ ಕಂಪನಿಗೆ ರತ್ನಗಂಬಳಿ ಹಾಕಿ ಸ್ವಾಗತಿಸಿದ್ದು ಎನ್ನುವುದು ಅಳಿಸಲಾಗದ ಇತಿಹಾಸ. ಈ ದಾಸ್ಯದಿಂದ ವಿಮೋಚನೆ ಹೊಂದಿದ ಭಾರತ ತಾನು ಕಳೆದುಕೊಂಡ ಸಂಪನ್ಮೂಲಗಳನ್ನು ಮತ್ತು ನೈಸರ್ಗಿಕ ಆಸ್ತಿಯನ್ನು ಮರಳಿ ಗಳಿಸಲು ಐದಾರು ದಶಕಗಳೇ ಬೇಕಾದವು ಎನ್ನುವುದು ವಾಸ್ತವ.

ಈ ಮರಳಿ ಪಡೆಯುವ ಪ್ರಕ್ರಿಯೆಯಲ್ಲೇ ದೇಶದ ಕೋಟ್ಯಂತರ ಜನತೆಗೆ ಬದುಕು ಕಟ್ಟಿಕೊಳ್ಳಲು ಸೂರು ಒದಗಿಸಿದ ಸಾರ್ವಜನಿಕ ಉದ್ದಿಮೆಗಳು ಸ್ಥಾಪನೆಯಾಗಿದ್ದು ಸಮಕಾಲೀನ ಇತಿಹಾಸ. ಈಗ ಈ ಸಾರ್ವಜನಿಕ ಉದ್ದಿಮೆಗಳು ಒಂದೊಂದಾಗಿ ಕೈಜಾರುತ್ತಿವೆ. ಕರ್ನಾಟಕದ ಪ್ರತಿಷ್ಠಿತ ಸಾರ್ವಜನಿಕ ಉದ್ದಿಮೆಗಳು ಮತ್ತು ಬ್ಯಾಂಕುಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವುದನ್ನು ಗಮನಿಸುತ್ತಲೇ ಇದ್ದೇವೆ.

ಸಾರಿಗೆ, ಸಂಪರ್ಕ, ಇಂಧನ, ಹಣಕಾಸು, ಸರಕು ಉತ್ಪಾದನೆ, ಕೃಷಿ ಉತ್ಪಾದನೆ, ಹೈನುಗಾರಿಕೆ ಈ ಎಲ್ಲ ಕ್ಷೇತ್ರಗಳಲ್ಲಿ ದುಡಿದ ಕೋಟ್ಯಂತರ ಜೀವಗಳ ಬೆವರಿನ ಹನಿಗಳನ್ನು ನಾವು ಚಲಿಸುವ ರೈಲುಗಳಲ್ಲಿ, ಸಾರ್ವಜನಿಕ ಉದ್ದಿಮೆಗಳ ಬೃಹತ್ ಕಟ್ಟಡಗಳಲ್ಲಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ, ಬ್ಯಾಂಕು ಮತ್ತು ವಿಮಾ ವಲಯದ ಫಲಕಗಳಲ್ಲಿ, ದೂರ ಸಂಪರ್ಕದ ತಂತುಗಳಲ್ಲಿ ಕಾಣದೆ ಹೋದರೆ ನಮ್ಮಷ್ಟು ಕೃತಘ್ಞರು ಮತ್ತಾರೂ ಇರಲಾರರು. ಹೌದು ನಾವು ಇದನ್ನು ಮಾನ್ಯ ಮಾಡುತ್ತಿದ್ದೇವೆ.

ಆದರೆ ಈ ಪ್ರತಿಯೊಂದು ಕ್ಷೇತ್ರದ, ವಲಯದ ಉದ್ದಿಮೆಗಳು ಒಂದೊಂದಾಗಿ ನಮ್ಮ ಕೈಜಾರಿ ಮತ್ತದೇ ಉದ್ಯಮಿಗಳ ಪಾಲಾಗುತ್ತಿರುವುದನ್ನು ಕಂಡೂ ಕಾಣದಂತೆ ನಮ್ಮ ಹಿತವಲಯಗಳಲ್ಲಿ ವಿರಮಿಸುತ್ತಿದ್ದೇವೆ. ಇಂದಿನ ಭಾರತದ ಯುವ ಪೀಳಿಗೆಯಲ್ಲಿ ಹರಿಯುತ್ತಿರುವುದೇ ಈ ಸಾರ್ವಜನಿಕ ಉದ್ದಿಮೆಗಳ ಮತ್ತು ಈ ಉದ್ದಿಮೆಗಳನ್ನು ಕಟ್ಟಿ ಬೆಳೆಸಿದ ಕೋಟ್ಯಂತರ ಕಾರ್ಮಿಕರ ನೆತ್ತರು ಮತ್ತು ಬೆವರು ಎನ್ನುವುದನ್ನು ಡಿಜಿಟಲ್ ಯುಗದ “ ಶತಮಾನದ ಮಕ್ಕಳು ” ಅರ್ಥಮಾಡಿಕೊಳ್ಳಬೇಕಿದೆ. ಅವರಿಗೆ ಅರ್ಥಮಾಡಿಸುವ ಜವಾಬ್ದಾರಿ ಇದರ ಮೂಲ ಫಲಾನುಭವಿಗಳ ಮೇಲಿದೆ.

ದುರಂತ ಎಂದರೆ ಈ ಫಲಾನುಭವಿಗಳು ತಮಗೆ ಅನ್ನ ನೀಡಿದ ನೆಲೆಯನ್ನೇ ಮರೆತು ನವ ಉದಾರವಾದದ ಕರಾಳ ಬಾಹುಗಳಲ್ಲಿ ವಿರಮಿಸುತ್ತಿದ್ದಾರೆ. ಕೋವಿದ್ 19 ಸಂದರ್ಭದ ವಲಸೆ ಕಾರ್ಮಿಕರ ಬವಣೆಯೂ ಹಿತವಲಯದ ಮಧ್ಯಮ ವರ್ಗಗಳ ಕಣ್ತೆರೆಸಿಲ್ಲ ಎನ್ನುವುದು ದುರಂತ.

ಇದು ಒಂದು ಸಹಜ ಪ್ರಕ್ರಿಯೆ ಎನ್ನುವಂತೆ ಆಳುವ ವರ್ಗಗಳ ಎಲ್ಲ ನೀತಿಗಳನ್ನೂ ಅಪ್ಪಿಕೊಳ್ಳಲು ಸಿದ್ದರಾಗುತ್ತಿದ್ದಾರೆ. ಈ ನಡುವೆ ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು, ಕೂಲಿ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಮತ್ತು “ ಪ್ರಜ್ಞಾವಂತ ” ನಾಗರಿಕರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ಕಾರ್ಮಿಕ ನೀತಿಗಳ ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಇದರ ಒಂದು ಹೆಜ್ಜೆ ನವಂಬರ್ 26ರ ಸಾರ್ವತ್ರಿಕ ಮುಷ್ಕರ.

ಕಾಕತಾಳಿಯವೇನೋ ಎನ್ನುವಂತೆ ಈ ದಿನ ಎರಡು ಕಾರಣಗಳಿಗಾಗಿ ಮಹತ್ವ ಪಡೆಯುತ್ತದೆ. ಮೊದಲನೆಯದು ಇದು ಸಂವಿಧಾನ ದಿನ. ಅಂದರೆ ರಾಜಕೀಯ ಸ್ವಾತಂತ್ರ್ಯ, ಸಾಮಾಜಿಕ ಸ್ವಾತಂತ್ರ್ಯ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸುವ ಮೂಲಕ ಸಮಾನತೆ, ಭ್ರಾತೃತ್ವ ಮತ್ತು ಸೌಹಾರ್ದತೆಯ ಮೂಲಕ ಸಮ ಸಮಾಜವನ್ನು ಕಟ್ಟುವ ಕನಸು ಸಾಕಾರಗೊಳಿಸಲು ಭಾರತದ ಸಂವಿಧಾನವನ್ನು ಅಂಗೀಕರಿಸಲಾದ ದಿನ.

ಈ ಮೂರು ಸ್ವಾತಂತ್ರ್ಯಗಳಲ್ಲಿ ಒಂದು ಇಲ್ಲದೆ ಹೋದರೂ ನಮ್ಮ ಕನಸು ನನಸಾಗುವುದಿಲ್ಲ ಎಂಬ ಅಂಬೇಡ್ಕರ್ ಅವರ ಮಾತುಗಳು ಈಗ ನಮಗೆ ಇನ್ನೂ ಹೆಚ್ಚು ಪ್ರಸ್ತುತ ಎನಿಸಬೇಕಲ್ಲವೇ ? ಏಕೆಂದರೆ ಈ ಮೂರೂ ಸ್ವಾತಂತ್ರ್ಯಗಳ ಪರಿಕಲ್ಪನೆಯನ್ನೇ ಅಳಿಸಹಾಕುವಂತಹ ಕರಾಳ ಶಾಸನಗಳ ಪರ್ವ ನಮ್ಮೆದುರು ಬೃಹತ್ ಬಂಡೆಯಂತೆ ನಿಂತಿದೆ.

ಎರಡನೆಯ ಕಾರಣ ಭಾರತದ ಅಖಂಡತೆ ಮತ್ತು ಏಕತೆಗೆ ಧಕ್ಕೆ ಉಂಟುಮಾಡುವಂತಹ ಮುಂಬೈ ಭಯೋತ್ಪಾದಕ ದಾಳಿ ನಡೆದದ್ದು ಇದೇ ದಿನ, 2008ರಲ್ಲಿ. ನಮಗೆ ನಾವೇ ಅರ್ಪಿಸಿಕೊಂಡ ಸಂವಿಧಾನವನ್ನು ಸ್ವತಃ ನಾವೇ ಅಲಕ್ಷಿಸಿದ್ದರಿಂದಲೇ 26/11 ನಡೆಯಲು ಸಾಧ್ಯವಾಯಿತು ಎನ್ನುವ ಪ್ರಜ್ಞೆ ನಮ್ಮಲ್ಲಿರಬೇಕು.

ಕಳೆದ ಮೂರು ದಶಕಗಳ ಸಾಂಸ್ಕೃತಿಕ ರಾಜಕಾರಣ, ಮತಾಂಧತೆ ಮತ್ತು ಮತೀಯ ಉಗ್ರವಾದದ ಬೆಳವಣಿಗೆಯನ್ನು ನೋಡಿದರೆ ಸಂವಿಧಾನ ಕರ್ತೃಗಳ ಮೂಲ ಆಶಯಗಳನ್ನು ನಾವು ಎಷ್ಟು ವ್ಯವಸ್ಥಿತವಾಗಿ ಮಣ್ಣುಪಾಲು ಮಾಡಿದ್ದೇವೆ ಎನ್ನುವುದನ್ನೂ ಗ್ರಹಿಸಬಹುದು. ನಮ್ಮ “ ಆತ್ಮ ನಿರ್ಭರತೆ ” ವ್ಯಕ್ತವಾಗಬೇಕಿರುವುದು ಇಲ್ಲಿ. ಭಾರತದ ಬಹುಸಂಸ್ಕೃತಿಯ ಚೌಕಟ್ಟಿನಲ್ಲಿ ಶತಮಾನಗಳಿಂದ ಇದ್ದ ಸೌಹಾರ್ದತೆಯನ್ನು ಅಡ್ಡಡ್ಡಲಾಗಿ ಸೀಳುವುದರಲ್ಲಿ ಈ ಸಮಾಜೋ ಸಾಂಸ್ಕೃತಿಕ ರಾಜಕೀಯ ಬೆಳವಣಿಗೆಗಳು ಯಶಸ್ವಿಯಾಗಿವೆ.

ಹಾಗೆಯೇ ಮೇಲ್ನೋಟಕ್ಕೆ ಕಾಣಬಹುದಾಗಿದ್ದ ಸೌಹಾರ್ದತೆಯ ನಡುವೆಯೇ ನಮ್ಮ ನಡುವೆ ಇದ್ದ ಜಾತಿ ಶ್ರೇಷ್ಠತೆಯ ವ್ಯಸನ ಮತ್ತು ಜಾತಿ ತಾರತಮ್ಯ, ದೌರ್ಜನ್ಯ ಮತ್ತು ಮೇಲ್ಜಾತಿಯ ಕ್ರೌರ್ಯವನ್ನು ಅಳಿಸಿ ಹಾಕುವ ಬದಲು ಮತ್ತಷ್ಟು ಗಟ್ಟಿಗೊಳಿಸುತ್ತಿರುವುದನ್ನೂ ಗಮನಿಸಬೇಕಿದೆ. 21ನೆಯ ಶತಮಾನದ ಮೂರನೆಯ ದಶಕವನ್ನು ಪ್ರವೇಶಿಸುತ್ತಿರುವ ಸಂದರ್ಭದಲ್ಲೂ ನಾವು ಅತ್ಯಾಚಾರಕ್ಕೊಳಗಾದ ಹೆಣ್ಣುಮಗುವಿನ ಶವದ ಮೇಲೆ ದೌರ್ಜನ್ಯ ಎಸಗುತ್ತಿರುವುದನ್ನು ನೋಡಿದರೆ ನಮ್ಮೊಳಗಿನ ಕ್ರೌರ್ಯದ ಫಸಲು ಇನ್ನೂ ಹಸನಾಗಿದೆ ಎನಿಸುವುದಿಲ್ಲವೇ ?

ಅನ್ನ ಬೆಳೆಯುವ ರೈತನ ಆಕ್ರಂದನವನ್ನು ಗ್ರಾಂಥಿಕ ಕ್ರೌರ್ಯದ ಮೂಲಕ (ಕರಾಳಶಾಸನಗಳನ್ನು ಹೀಗೆ ಕರೆಯಬಹುದು) ಎದುರಿಸುವ ಒಂದು ವಿಕೃತ ವ್ಯವಸ್ಥೆಯಲ್ಲಿ ನಾವು ನಾಳಿನ ಯೋಚನೆ ಮಾಡುತ್ತಿದ್ದೇವೆ. ಇಲ್ಲಿಯೇ ನಾವು ಮನುಸ್ಮೃತಿಯ ಮರುಹುಟ್ಟನ್ನು ಗುರುತಿಸಬೇಕಿದೆ. ಮನು ಎಂಬ ಹೆಸರಿನ ಋಷಿ ತನ್ನ ಕಾಲಘಟ್ಟದಲ್ಲಿದ್ದ ಉತ್ಪಾದನಾ ಸಂಬಂಧಗಳಿಗೆ ಅನುಗುಣವಾಗಿ ಸಮಾಜದ ನಿರ್ವಹಣೆಗೆ ಸಂಹಿತೆಗಳನ್ನು ರಚಿಸಿದ್ದ. ಆಧುನಿಕ ಭಾರತಕ್ಕೆ ಇದರ ಅವಶ್ಯಕತೆ ಇಲ್ಲ ಎನ್ನುವ ಕಾರಣಕ್ಕಾಗಿಯೇ ಅಂಬೇಡ್ಕರ್ ಅದನ್ನು ಸಾಂಕೇತಿಕವಾಗಿ ಸುಟ್ಟುಹಾಕಿದ್ದರು.

ಇಂದು ಮನುಸ್ಮೃತಿಯ ಅತ್ಯಾಧುನಿಕ ಅವತಾರವನ್ನು ಹಥ್ರಾಸ್ ಘಟನೆಯಲ್ಲಿ, ವಿದ್ಯುನ್ಮಾನ ಸುದ್ದಿಮನೆಗಳಲ್ಲಿ, ಶಾಸಕಾಂಗ ಸಭೆಗಳಲ್ಲಿ, ಸಂಸತ್ ಭವನದಲ್ಲಿ, ಆಡಳಿತ ವ್ಯವಸ್ಥೆಯಲ್ಲಿ ಮತ್ತು ಕೆಲವು ಸಂದರ್ಭಗಳಲ್ಲಿ ನ್ಯಾಯ ವ್ಯವಸ್ಥೆಯ ಅಂಗಳದಲ್ಲೂ ಕಾಣುತ್ತಿದ್ದೇವೆ. ಶೋಷಿತ ಸಮುದಾಯಗಳು ಮತ್ತು ಶ್ರಮಜೀವಿ ವರ್ಗಗಳು, ಈ ಎರಡರ ನಡುವೆ ಇರುವ ರೇಖೆ ಬರಿಗಣ್ಣಿಗೆ ಕಾಣಿಸದಷ್ಟು ತೆಳುವಾಗಿದೆ.

26/11ರಂದು ನಡೆದ ದಾಳಿ ದೇಶದ ಜನತೆಯನ್ನು ಕೆಲವು ವರ್ಷಗಳ ಕಾಲ ತಲ್ಲಣಗೊಳಿಸಿತ್ತು. ಆದರೆ ಇಂದು ನವ ಉದಾರವಾದದ ದಾಳಿ ದೇಶದ ಬಹುಸಂಖ್ಯೆಯ ಜನತೆಯನ್ನು ತಲ್ಲಣಗೊಳಿಸುತ್ತಿದೆ. ಈ ಗ್ರಾಂಥಿಕ ದಾಳಿಗೆ ಕೋಟ್ಯಂತರ ಶ್ರಮಜೀವಿಗಳು ತತ್ತರಿಸಿಹೋಗಲಿದ್ದಾರೆ, ಬೀದಿ ಪಾಲಾಗಲಿದ್ದಾರೆ. ನವ ಭಾರತದ ನಿರ್ಮಾಣಕ್ಕೆ ಇದು ಅತ್ಯವಶ್ಯ ಎನ್ನುವುದಾರೆ ಆ ನವಭಾರತದ ನವ ಸ್ವರೂಪವನ್ನು ನಾವು ತಿರಸ್ಕರಿಸಬೇಕಾಗುತ್ತದೆ.

ಕಾರ್ಮಿಕ ಕಾನೂನುಗಳನ್ನು ಸಂಕುಚಿತಗೊಳಿಸುವ ಮೂಲಕ ದುಡಿಮೆಯ ಕೈಗಳನ್ನು ಮತ್ತೊಮ್ಮೆ ಔದ್ಯಮಿಕ ಸಂಕೋಲೆಗಳಲ್ಲಿ ಬಂಧಿಸಲು ಹೊರಟಿರುವ ಭಾರತದ ಆಳುವ ವರ್ಗಗಳು, ಭಾರತದ ಬೆನ್ನೆಲುಬು ಎಂದೇ ಹೇಳಲಾಗುವ ಕೃಷಿ ಕ್ಷೇತ್ರವನ್ನೂ ಉದ್ಯಮಪತಿಗಳಿಗೆ ಪರಭಾರೆ ಮಾಡುವ ಮೂಲಕ ಶೇ 60ರಷ್ಟು ಜನಸಂಖ್ಯೆಯ ಮೇಲೆ ದಾಳಿ ನಡೆಸುತ್ತಿದೆ.

ದೇಶದ ಶೈಕ್ಷಣಿಕ ಸಂಪತ್ತನ್ನೂ ಸಹ ಬಹುತ್ವದ ನೆಲೆಗಳಿಂದ ದೂರ ಮಾಡಿ, ವರ್ಣಾಶ್ರಮ ಧರ್ಮವನ್ನು ಪುನರ್ ಸ್ಥಾಪಿಸಿ, ಇಡೀ ಶಿಕ್ಷಣ ವ್ಯವಸ್ಥೆಯನ್ನು ಕಾರ್ಪೋರೇಟ್ ಉದ್ಯಮಿಗಳಿಗೆ ವಹಿಸುವ ಸೂಚನೆಯನ್ನು ಹೊಸ ಶಿಕ್ಷಣ ನೀತಿಯಲ್ಲಿ ಕಾಣಬಹುದಾಗಿದೆ. ಸಂಸತ್ತಿನಲ್ಲಿ ಚರ್ಚೆಯಿಲ್ಲದೆ ಅನುಮೋದನೆಯಾಗಿರುವ ಈ ಕರಾಳ (!) ಶಾಸನಗಳಿಗೂ, ಎಲ್ಲ ರಾಜಕೀಯ ಪಕ್ಷಗಳೂ ಅನುಮೋದಿಸುವ ಯುಎಪಿಎ ಮುಂತಾದ ಕರಾಳ ಶಾಸನಗಳಿಗೆ ವ್ಯತ್ಯಾಸವೇನಾದರೂ ಇದ್ದರೆ ಅದು ಗ್ರಾಂಥಿಕ ಮಾತ್ರ. ಎರಡೂ ಸಹ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಅಸ್ತ್ರಗಳೇ ಆಗಿವೆ.

ಈ ಎರಡು ಅಸ್ತ್ರಗಳ ವಿರುದ್ಧ ಸ್ವಾವಲಂಬಿ ಭಾರತಕ್ಕೆ ಬದ್ಧರಾಗಿರುವ ಪ್ರತಿಯೊಬ್ಬ ನಾಗರಿಕನೂ ದನಿ ಎತ್ತಬೇಕಿದೆ. ದೇಶದ ಬಹುಸಂಖ್ಯೆಯ ಜನರ ಬದುಕಿಗೆ ಅವಶ್ಯವಾದ ಸ್ವಾವಲಂಬನೆಯನ್ನು ಬಲಿಕೊಟ್ಟು, ಬೆರಳೆಣಿಕೆಯಷ್ಟು ಶ್ರೀಮಂತರ ಸ್ವಾವಲಂಬನೆಗೆ ಅವಕಾಶ ಮಾಡಿಕೊಡುವ “ ಆತ್ಮನಿರ್ಭರ ” ಭಾರತ ಭಾರತವನ್ನು ಮತ್ತೊಂದು ರೀತಿಯ ದಾಸ್ಯಕ್ಕೆ ದೂಡುತ್ತದೆ.

ಭೌಗೋಳಿಕವಾಗಿ ಭಾರತ ಸಂಕೋಲೆಗಳಿಂದ ಮುಕ್ತವಾಗಿಯೇ ಇದ್ದರೂ, ಬೌದ್ಧಿಕವಾಗಿ ಈ ದೇಶದ ಕೋಟ್ಯಂತರ ಶೋಷಿತರು, ಅವಕಾಶವಂಚಿತರು, ಅಂಚಿಗೆ ತಳ್ಳಲ್ಪಟ್ಟಿರುವವರು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಇಂದಿಗೂ ಹೋರಾಡುತ್ತಿರುವ ದಮನಿತರು ಕಾರ್ಪೋರೇಟ್ ದಾಸ್ಯಕ್ಕೆ ಒಳಗಾಗಲಿದ್ದಾರೆ. ಇದು ನಮ್ಮ ಮುಂದಿರುವ ಅಪಾಯ.

ಒಂದು ಸುಂದರ ಸೌಧ ನಿರ್ಮಾಣವಾಗುತ್ತಿದೆ ಒಂದು ಅಂಗುಲ ಭೂಮಿ ಕೊಟ್ಟರೆ ತಪ್ಪೇನಿಲ್ಲ ಎಂದು ಹೇಳುವ ಕಾಲ ಇದಲ್ಲ. ಈ ಸೌಧದ ಅಡಿಪಾಯಕ್ಕೆ ಭೂಮಿ ಕೊಟ್ಟವರ ಎಲುಬುಗಳನ್ನೇ ಅಸ್ತಿಭಾರದಂತೆ ಬಳಸಲಾಗುತ್ತದೆ. ಇದು ನವ ಉದಾರವಾದದ ನೀತಿ. ಮೂರು ದಶಕಗಳ ನವ ಉದಾರವಾದಿ ನೀತಿಯ ಪರಿಣಾಮ ಈಗಾಗಲೇ ನಾವು ನೆಲೆ ಕಳೆದುಕೊಂಡಿದ್ದೇವೆ.

ಈಗ ಸಮಾಜೋ ಸಾಂಸ್ಕೃತಿಕ ನೆಲೆಗಳೂ ಧ್ವಂಸವಾಗುತ್ತಿವೆ. ಮತಾಂಧತೆ, ಜಾತಿ ಪ್ರಜ್ಞೆ ಮತ್ತು ಬಂಡವಾಳದ ಮೈತ್ರಿಯ ಎದುರು ಈ ದೇಶದ ದುಡಿಯುವ ವರ್ಗಗಳು ಹೋರಾಡಬೇಕಿದೆ. ಹಾಗಾಗಿಯೇ ನವಂಬರ್ 26ರ ಸಾರ್ವತ್ರಿಕ ಮುಷ್ಕರ ನಿರ್ಣಾಯಕವಾಗಲಿದೆ.

ಕೊನೆಯ ಹನಿ : ಬ್ರಿಟೀಷರು, ಫ್ರೆಂಚರು, ಡಚ್ಚರು ಮತ್ತು ಪೋರ್ಚುಗೀಸರು ಭಾರತದ ಸಂಪತ್ತನ್ನು ಕೊಳ್ಳೆಹೊಡೆಯಲು ಪ್ರವೇಶಿಸಿದಾಗ ಪ್ರತಿಯೊಂದು ಸಂಸ್ಥಾನದ ರಾಜ/ಸಾಮಂತರೂ ಯೋಚಿಸಿದ್ದು “ ಪಕ್ಕದ ಸಂಸ್ಥಾನ ಅವರ ಪಾಲಾಗಿದೆ ನಾನು ಸುರಕ್ಷಿತ ” ಎಂದು. ನಂತರ ನಡೆದದ್ದು ಇತಿಹಾಸ. ಈಗ ಭಾರತದ ದುಡಿಯುವ ವರ್ಗಗಳಲ್ಲೂ ಇದೇ ರೀತಿಯ “ ನಮ್ಮ ದುಡಿಮೆಯ ವಲಯ/ಕ್ಷೇತ್ರ/ಸಂಸ್ಥೆ ಸುರಕ್ಷಿತವಾಗಿದೆ ” ಎನ್ನುವ ಮನೋಭಾವ ಇದೆ. ಮತ್ತೊಮ್ಮೆ ದಾಸ್ಯಕ್ಕೊಳಗಾಗುವ ಮುನ್ನ,,,,,,,,,ಎಚ್ಚೆತ್ತುಕೊಳ್ಳಲು ನವಂಬರ್ 26ರ ದನಿಗೆ ದನಿಗೂಡಿಸೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ

Published

on

ಸುದ್ದಿದಿನ,ದಾವಣಗೆರೆ:ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುತ್ತಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ದಾವಣಗೆರೆಯ ಬಾಷಾನಗರ,ಆನೆಕೊಂಡ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮನೆಮನೆಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರವಾಗಿ ಮತಯಾಚನೆ ಮಾಡಿ ನಂತರ ಮಾತನಾಡಿದರು.

ರಾಜ್ಯದಲ್ಲಿ ನಿಮ್ಮದೇ ಕಾಂಗ್ರೆಸ್ ಸರ್ಕಾರವಿದ್ದು, ಅದನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದೆ ಎಂದ ಅವರು ಶಾಮನೂರು ಕುಟುಂಬವು ಸದಾ ಜನರ ಸಮಸ್ಯೆಗಳ ಪರಿಹಾರಕ್ಕೆ ನಿಂತುಕೊಳ್ಳುತ್ತದೆ ಎಂಬ ಭರವಸೆಯನ್ನೂ ನೀಡಿದರು.

ಪ್ರಚಾರದ ವೇಳೆ ಸ್ಥಳೀಯರು ತಮ್ಮ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರ ಬಗ್ಗೆ ಜನರಿಗೆ ಭರವಸೆ ನೀಡಿದರು. ಜನರ ಹಕ್ಕುಪತ್ರದ ಸಮಸ್ಯೆಗಳು ಕುರಿತು ಈ ಹಿಂದೆ ಶಾಮನೂರು ಶಿವಶಂಕರಪ್ಪ ಅವರು ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಿದ್ದರು.ಈಗ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಜನರ ಎಲ್ಲಾ ಸಮಸ್ಯೆಗಳ ಪರಿಹಾರ ಮಾಡುತ್ತಿದ್ದಾರೆ ಎಂದರು.

ಯುವ ನಾಯಕ ಸಮರ್ಥ್ ಶಾಮನೂರು ಕುರಿತು ಮಾತನಾಡಿದ ಅವರು ಸಮರ್ಥ್ ಜನರೊಂದಿಗೆ ಉತ್ತಮ ಒಡನಾಟ ಹೊಂದಿರುವುದಾಗಿ ತಿಳಿಸಿದರು. ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಭಾಗವಹಿಸಿ, ಏಪ್ರಿಲ್ 9 ರಂದು ಮತಗಟ್ಟೆಗೆ ಬಂದು ಕ್ರಮ ಸಂಖ್ಯೆ 3ರ ‘ಹಸ್ತ’ ಚಿಹ್ನೆಗೆ ಮತ ಹಾಕಿ ಸಮರ್ಥ್ ಅವರನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು. ಈ ವೇಳೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ

Published

on

~ಗೋವರ್ಧನ ನವಿಲೇಹಾಳು

ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್‌ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್‌ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.

ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.

ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್‌ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್‌ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್‌ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್‌ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.

ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್‌ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್‌ನ ನಷ್ಟ ಅಪಾರ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್‌ಎಚ್‌ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್‌ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.

ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್‌ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್‌ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?

ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್‌ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್‌ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್‌ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್‌ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್‌ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.

ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್‌ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್‌ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.

ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್‌ನ ಮಕ್ಕಳ ಸಾವುಗಳು, ಇಸ್ರೇಲ್‌ನ ಗಾಯಗೊಂಡ ಕುಟುಂಬಗಳು, ಗಲ್ಫ್‌ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ

Published

on

ಸುದ್ದಿದಿನ,ದಾವಣಗೆರೆ:ಮುಖ್ಯಮಂತ್ರಿಗಳೇ, ಒಳ್ಳೆಯ ಕಾರಣಕ್ಕೆ ನಿಮ್ಮ ಸರಕಾರ ಯಾವಾಗ ಸುದ್ದಿಯಾಗಿದೆ ಹೇಳಿ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಸರಕಾರದ ದುರಾಡಳಿತ ಸಂಬಂಧ ಆರೋಪ ಪಟ್ಟಿ ಬಿಡುಗಡೆ ಮಾಡಿ ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ಕಳೆದ 3 ವರ್ಷಗಳಲ್ಲಿ ಈ ಸರಕಾರ ಒಳ್ಳೆಯ ಕಾರಣಕ್ಕೆ ಯಾವಾಗ ಹೆಸರಾಗಿತ್ತು ಎಂದು ಹೇಳಲೂ ಸಿಗುವುದಿಲ್ಲ. ಭ್ರಷ್ಟಾಚಾರ, ಬೆಲೆ ಏರಿಕೆ, ದರೋಡೆ ಪ್ರಕರಣಗಳು ಸುದ್ದಿಯಾದವು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸುಮಾರು 3 ವರ್ಷಗಳಾಗಿವೆ. ಈ ಅವಧಿಯ ಭ್ರಷ್ಟಾಚಾರ, ಬೆಲೆ ಏರಿಕೆ, ದುರಾಡಳಿತ ಕುರಿತ ಚಾರ್ಜ್ ಶೀಟನ್ನು ಇವತ್ತು ಬಿಡುಗಡೆ ಮಾಡಿದ್ದೇವೆ ಎಂದರು.

ಡ್ರಗ್ಸ್ ವಿಚಾರದಲ್ಲಿ ರಾಜ್ಯ ಸುದ್ದಿಯಾಗಿದೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ ಇದೆ. ಸರಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡರು. ಬಾಣಂತಿಯರು, ಹಸುಗೂಸುಗಳ ಸರಣಿ ಸಾವಿನ ಕಾರಣಕ್ಕೆ ಈ ಸರಕಾರ ಸುದ್ದಿಯಲ್ಲಿತ್ತು. ಸರಕಾರಿ ಆಸ್ಪತ್ರೆಯಲ್ಲಿ ಔಷಧಿ ಕೊರತೆಗೆ ಈ ಸರಕಾರ ಸುದ್ದಿಯಲ್ಲಿತ್ತು. ಅಂಗನವಾಡಿ ಶಿಕ್ಷಕಿಯರ ಚಳವಳಿ, ಆಶಾ ಕಾರ್ಯಕರ್ತೆಯರ ಚಳವಳಿ, ಅತಿಥಿ ಉಪನ್ಯಾಸಕರಿಂದ ಸಂಬಳ ಸಿಗುತ್ತಿಲ್ಲವೆಂದು ಹೋರಾಟ, ಗುತ್ತಿಗೆ ನೌಕರರ ಹೋರಾಟ- ಹೀಗೆ ಚಳವಳಿಗಳ ಕಾಟಕ್ಕೆ ಈ ಸರಕಾರ ಸುದ್ದಿಯಲ್ಲಿದೆ ಎಂದು ವ್ಯಂಗ್ಯವಾಡಿದರು.

ಒಳ್ಳೆಯ ಕಾರಣಕ್ಕೆ ಒಂದು ದಿನವೂ ಸುದ್ದಿಯಲ್ಲಿ ಇರಲಿಲ್ಲ

ಕಳೆದ 3 ವರ್ಷದಲ್ಲಿ ಕೆಟ್ಟ ಕಾರಣಕ್ಕಾಗಿ ಈ ಸರಕಾರ ಸುದ್ದಿಯಲ್ಲಿದೆಯೇ ಹೊರತು ಒಳ್ಳೆಯ ಕಾರಣಕ್ಕೆ ಒಂದು ದಿನವೂ ಸುದ್ದಿಯಲ್ಲಿ ಇರಲಿಲ್ಲ ಎಂದು ವಿಶ್ಲೇಷಿಸಿದರು. ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಲಿಯಾದವರು ನೂರಾರು ಜನ; ರಸ್ತೆ ಗುಂಡಿ ಕಾರಣಕ್ಕೆ ಈ ಸರಕಾರ ಸುದ್ದಿಯಲ್ಲಿತ್ತು. ಹೀಗೆ ಪ್ರತಿನಿತ್ಯ ಸರಕಾರ ಸುದ್ದಿಯಲ್ಲಿ ಇರುವುದು ಕೇವಲ ಕೆಟ್ಟ ಕಾರಣಕ್ಕಾಗಿ ಎಂದು ಆರೋಪಿಸಿದರು. ಅಭಿವೃದ್ಧಿ ಕೆಲಸ ಮಾಡಿದ್ದಕ್ಕಾಗಿ ಒಂದು ದಿನವೂ ಸುದ್ದಿಯಲ್ಲಿ ಇರಲಿಲ್ಲ ಎಂದು ಆಕ್ಷೇಪಿಸಿದರು.

ಮುಡಾ, ವಾಲ್ಮೀಕಿ ನಿಗಮದ ಹಗರಣ ಮಾನಗೆಟ್ಟ ಕೆಲಸವಲ್ಲವೇ?

ಮುಖ್ಯಮಂತ್ರಿಗಳು ಬಿಜೆಪಿಯವರು ಮಾನಗೆಟ್ಟವರು ಎಂದು ಭಾಷಣದಲ್ಲಿ ಹೇಳಿದ್ದಾರೆ. ಯಾರು ಮುಖ್ಯಮಂತ್ರಿಗಳೇ ಮಾನಗೆಟ್ಟವರು? ಮುಡಾ ಹಗರಣ ಯಾರ ಮೇಲೆ ಬಂತು? ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ನಿಮ್ಮ ಸರಕಾರದ ಸಚಿವರೇ ರಾಜೀನಾಮೆ ಕೊಡಬೇಕಾಯಿತಲ್ಲವೇ? ಇದು ಮಾನಗೆಟ್ಟ ಕೆಲಸವಲ್ಲವೇ? ಎಂದು ಕೇಳಿದರು. ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಬಳಕೆ ಆಗಬೇಕಾದ ಹಣವನ್ನು ನಿಮ್ಮ ಒಬ್ಬ ಸಚಿವರು ಹೆಂಡತಿಗೆ ಒಡವೆ ಕೊಡಿಸಲು, ಚುನಾವಣೆಗೆ ಬಾರ್ ನಿಂದ ಎಣ್ಣೆ ಸರಬರಾಜು ಮಾಡಲು ಹಣ ಬಳಸಿದ್ದು ಮರ್ಯಾದೆ ಇದ್ದವರು ಮಾಡುವ ಕೆಲಸವೇ ಎಂದು ಕೇಳಿದರು.

ಮರ್ಯಾದೆ ಇದ್ದವರು ಅಧಿಕಾರಕ್ಕೆ ಅಂಟಿಕೊಳ್ಳುವರೇ?
ನೀವು ಬಿಜೆಪಿ ಮೇಲೆ ಶೇ 40 ಆರೋಪ ಹೊರಿಸಿ ಅಧಿಕಾರಕ್ಕೆ ಬಂದಿದ್ದೀರಿ. ಗುತ್ತಿಗೆದಾರರು ಶೇ 60 ಕಮಿಷನ್‍ನ ಸರಕಾರ ಎಂದು ನಿಮ್ಮ ಸರಕಾರದ ಮೇಲೆ ಆರೋಪ ಮಾಡಿದ್ದಾರಲ್ಲವೇ? ಮರ್ಯಾದೆ ಇದ್ದವರು ಆ ಆರೋಪ ಕೇಳಿಯೂ ಅಧಿಕಾರಕ್ಕೆ ಅಂಟಿಕೊಳ್ಳುತ್ತಾರಾ ಎಂದು ಪ್ರಶ್ನೆಯನ್ನು ಮುಂದಿಟ್ಟರು. ನಿಮ್ಮ ಅಬಕಾರಿ ಸಚಿವರ ಮೇಲೆ ಬಾರ್ ಮಾಲೀಕರು ತಿಂಗಳ ಮಾಮೂಲಿ ಕೇಳುವ ಕುರಿತು ಆರೋಪ ಮಾಡಿದ್ದಾರಲ್ಲವೇ? ಇದು ಮರ್ಯಾದೆ ಇದ್ದವರು ಮಾಡುವ ಕೆಲಸವೇ? ಮಾನಗೆಟ್ಟವರು ಮಾಡುವ ಕೆಲಸವೇ ಎಂದು ಪ್ರಶ್ನೆ ಹಾಕಿದರು.

ಮುಖ್ಯಮಂತ್ರಿಗಳೇ, ಇಡೀ ಸಂಪುಟದಲ್ಲಿ ಮಾನಗೆಟ್ಟವರು ಇದ್ದಾರೆಯೇ ಹೊರತು ಮರ್ಯಾದೆ ಇದ್ದವರು ಯಾರಿದ್ದಾರೆ ಹೇಳಿ ಎಂದು ಕೇಳಿದರು. ಮಾನಗೆಟ್ಟ ಕೆಲಸ ಮಾಡುವವರನ್ನು ಸಚಿವರನ್ನಾಗಿ ಮಾಡಿಕೊಂಡು, ಶೇ 60ರ ಆರೋಪ ಹೊತ್ತುಕೊಂಡು ನೀವು ಬಿಜೆಪಿ ವಿರುದ್ಧ ಮಾನಗೆಟ್ಟ ಬಿಜೆಪಿ ಎಂದು ಆರೋಪ ಮಾಡುತ್ತೀರಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ನಿಮ್ಮದು ದರೋಡೆಕೋರ ಸರಕಾರವಲ್ಲವೇ?

ರಾಜ್ಯದ ಉಸ್ತುವಾರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರು ಬಿಜೆಪಿಯನ್ನು ಜೇಬುಗಳ್ಳರು ಎಂದಿದ್ದಾರೆ. ನೀವು ಬಿಜೆಪಿ ಸರಕಾರವನ್ನು ಜೇಬುಗಳ್ಳರು ಎಂದು ಕರೆಯುವುದಾದರೆ ಯುದ್ಧದ ಕಾರಣಕ್ಕೆ ಕೆಲವು ಬೆಲೆ ಏರಿಕೆಗಳಾಗಿವೆ. ನಿಮ್ಮ ಸರಕಾರವನ್ನು ದರೋಡೆಕೋರ ಸರಕಾರ ಎಂದು ಕರೆಯುವುದರಲ್ಲಿ ತಪ್ಪೇನಿದೆ ಎಂದು ಕೇಳಿದರು. ನಿಮ್ಮ ಸರಕಾರ ಯಾವ್ಯಾವ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ ಎಂಬ ಪಟ್ಟಿ ಕೊಡಲೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.

20 ರೂ. ಸ್ಟಾಂಪ್ ಪೇಪರ್ ಮಾಯವಾಗಿದೆ..

ನಂದಿನಿ ಹಾಲಿನ ದರ ಏರಿಕೆ ಮಾಡಿದ್ದೀರಿ. ಪೆಟ್ರೋಲ್ ಮೇಲೆ 3 ರೂ. ಸೆಸ್, ಡೀಸೆಲ್ ಮೇಲೆ 5.08 ರೂ. ಸೆಸ್ ಹಾಕಿದ್ದೀರಿ. ಕೇಂದ್ರ ಸರಕಾರ ದರ ಇಳಸಿದರೆ ನೀವು ಸೆಸ್ ಹಾಕಿ ಅವರ ಲಾಭ ಜನರಿಗೆ ಸಿಗದಂತೆ ಮಾಡಿದ್ದೀರಿ ಎಂದು ಟೀಕಿಸಿದರು. ಬಸ್ ಪ್ರಯಾಣ ದರ ಶೇ 15, ಮೆಟ್ರೋ ದರ ಶೇ 50ರಷ್ಟು ಹೆಚ್ಚಿಸಿದ್ದೀರಿ. ಪ್ರತಿ ಯೂನಿಟ್ 4.50 ರೂ. ವಿದ್ಯುತ್ ದರವನ್ನು ರೂ 5.90 ಮಾಡಿದ್ದೀರಿ. ವಾಣಿಜ್ಯ ದರವನ್ನು 7 ರೂ.ಗೂ ಹೆಚ್ಚಳ ಮಾಡಲಾಗಿದೆ. ಅಬಕಾರಿ ಸುಂಕವನ್ನು ಶೇ 20ರಷ್ಟು ಏರಿಸಿದ್ದೀರಿ. ಸ್ಟಾಂಪ್ ಡ್ಯೂಟಿ ಹೆಚ್ಚಿಸಿದ್ದೀರಿ. 20 ರೂ. ಸ್ಟಾಂಪ್ ಪೇಪರ್ ಮಾಯವಾಗಿದೆ. ಅದರ ಜಾಗಕ್ಕೆ 100, 200 ರೂ.ಗಳ ಸ್ಟಾಂಪ್ ಪೇಪರ್ ಖರೀದಿಸಬೇಕಾಗಿದೆ. ನಮ್ಮ ಚಿನ್ನ ನಾವು ಒತ್ತೆ ಇಡಲು 0.5ರಷ್ಟು ಸ್ಟಾಂಪ್ ಡ್ಯೂಟಿ ಕಟ್ಟಬೇಕಾಗಿದೆ ಎಂದು ಆಕ್ಷೇಪಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending