Connect with us

ರಾಜಕೀಯ

ಪೌರತ್ವ (ತಿದ್ದುಪಡಿ) ಮಸೂದೆ : ಹೊಸ ವಿಭಜನಕಾರೀ ಅಜೆಂಡಾ

Published

on

ಪೌರತ್ವ (ತಿದ್ದುಪಡಿ) ಮಸೂದೆ ಅಥವ ಸಿ.ಎ.ಬಿ. ಮುಸ್ಲಿಮೇತರ ವಲಸಿಗರನ್ನು ನಾಗರಿಕರೆಂದು ಕಾನೂನುಬದ್ಧಗೊಳಿಸುವ ದುಷ್ಟತನದಿಂದ ತುಂಬಿರುವ ಶಾಸನವಾದರೆ ಎನ್.ಆರ್.ಸಿ., ಅಂದರೆ, ರಾಷ್ಟ್ರೀಯ ಪೌರರ ನೋಂದಣಿ ಎಂಬುದು ಮುಸ್ಲಿಂ ನುಸುಳುಕೋರರು ಎನ್ನಲಾಗುವವರ ಮೇಲೆ ಗುರಿಯಿಡುತ್ತದೆ.ಬಿಜೆಪಿ ಇಟ್ಟುಕೊಂಡಿರುವ ಗುರಿಯೆಂದರೆ, ಎರಡನೇ ದರ್ಜೆಯ ನಾಗರಿಕರು ಎಂಬೊಂದು ವಿಧವನ್ನು ಸೃಷಿಸುವುದು ಮತ್ತು ಅವರ ಹಕ್ಕುಗಳನ್ನು ತೀವ್ರವಾಗಿ ಮಿತಿಗೊಳಿಸುವುದು.

ಈ ಯೋಚನೆಯ ಹಿಂದೆ ಇರುವುದು ವಿ.ಡಿ.ಸಾವರ್ಕರ್ ಪ್ರತಿಪಾದಿಸಿದ ಎರಡು-ರಾಷ್ಟ್ರಗಳ ಸಿದ್ಧಾಂತ. ಸಿ.ಎ.ಬಿ. ಮತ್ತು ಎನ್.ಆರ್.ಸಿ.ಯ ಎರಡು ಕಡೆಗಳಿಂದ ಸುತ್ತುವರೆಯುವ ತಂತ್ರವನ್ನು ಬಿಜೆಪಿ-ಆರೆಸ್ಸೆಸ್‌ನ ಸಂಕುಚಿತ ರಾಜಕಾರಣಕ್ಕೆ ಹೊಂದುವಂತೆ ಕೋಮು ಆತಂಕಗಳನ್ನು ಹೆಚ್ಚಿಸಲು ಮತ್ತು ಒಂದು ಹೊಸ ವಿಭಜನಕಾರೀ ಅಜೆಂಡಾವನ್ನು ಸೃಷ್ಟಿಸಲು ಉಪಯೋಗಿಸಲಾಗುತ್ತದೆ.

ಬಿಜೆಪಿಯ ದುಷ್ಟತಂತ್ರಗಳನ್ನು ವಿಫಲಗೊಳಿಸಲು ಈ ಮಸೂದೆಗೆ ಸುಪ್ರಿಂ ಕೋರ್ಟಿನಲ್ಲಿ ಸವಾಲು ಹಾಕುವುದರೊಂದಿಗೇ, ಅವನ್ನು ಬಯಲಿಗೆಳೆಯಲು ವ್ಯಾಪಕವಾದ ಪ್ರಚಾರಾಂದೋಲನವನ್ನು ನಡೆಸಬೇಕು.

  • ಪ್ರಕಾಶ ಕಾರಟ್

ಪೌರತ್ವ (ತಿದ್ದುಪಡಿ) ಮಸೂದೆ, 2019(ಸಿ.ಎ.ಬಿ.) ಸಂಸತ್ತಿನ ಒಳಗೂ, ಹೊರಗೂ ಬಲವಾದ ಪ್ರತಿಭಟನೆಗಳ ನಡುವೆ ಅಂಗೀಕಾರಗೊಂಡಿದೆ. ಸಿ.ಎ.ಬಿ. ಸಂವಿಧಾನದ ಮೂಲ ನೀತಿಗಳಿಗೆ ತದ್ವಿರುದ್ಧವಾಗಿರುವ ಒಂದು ಅಪಯಕಾರಿ ಶಾಸನ. ಈ ಮಸೂದೆಯಲ್ಲಿ ವಿಧಿಸಿರುವ ಅಂಶಗಳು ಸಂವಿಧಾನದಲ್ಲಿ ಪ್ರತಿಷ್ಠಾಪಿತಗೊಂಡಿರುವ ಪೌರತ್ವದ ಜಾತ್ಯತೀತ ಪರಿಕಲ್ಪನೆಯನ್ನು ಶಿಥಿಲಗೊಳಿಸುತ್ತವೆ.

ಸಂವಿಧಾನದ ಕಲಮು 14, ಭಾರತದ ಪ್ರದೇಶದ ಒಳಗೆ ಯಾವುದೇ ವ್ಯಕ್ತಿಗೆ ಕಾನೂನಿನ ಎದುರು ಸಮಾನತೆ ಅಥವ ಕಾನೂನಿನ ಸಮಾನ ರಕ್ಷಣೆಯನ್ನು ನಿರಾಕರಿಸಲಾಗದು ಎಂದು ವಿಧಿಸಿದೆ. ಸಂವಿಧಾನವು ಮತ, ಜಾತಿ, ಪಂಥ ಅಥವ ಲಿಂಗದ ಆಧಾರದಲ್ಲಿ ತಾರತಮ್ಯವನ್ನು ಕೂಡ ನಿಷೇದಿಸಿದೆ.

ಸಿ.ಎ.ಬಿ. ಕೆಲವು ವಿಭಾಗಗಳ ಜನರನ್ನು ಪೌರತ್ವ ನೀಡಿಕೆಗೆ ಪರಿಶೀಲಿಸುವಾಗ ಒಂದು ಮತೀಯ ಮಾನದಂಡವನ್ನು ಸೇರಿಸಿದೆ. ಈ ತಿದ್ದುಪಡಿಯ ಪ್ರಕಾರ ಡಿಸೆಂಬರ್ 31, 2014ರ ಮೊದಲು ಅಫಘಾನಿಸ್ತಾನ, ಬಾಂಗ್ಲಾದೇಶ್ ಅಥವ ಪಾಕಿಸ್ತಾನದಿಂದ ಬಂದಿರುವ ಹಿಂದೂಗಳು, ಸಿಖ್ಖರು, ಔದ್ಧರು, ಜೈನರು, ಪಾರ್ಸಿಗಳು ಅಥವ ಕ್ರಿಶ್ಚಿಯನ್ನರನ್ನು ಕಾನೂನುಬಾಹಿರ ವಲಸಿಗರು ಎಂದು ಕಾಣುವುದಿಲ್ಲ.

ಅವರು ಭಾರತದಲ್ಲಿ ಕನಿಷ್ಟ ಐದು ವರ್ಷಗಳನ್ನು ಕಳೆದಿದ್ದರೆ,ಸಹಜೀಕರಣ(ನೆಚುರಲೈಸೇಶನ್)ದಿಂದ ಪೌರತ್ವಕ್ಕೆ ಅರ್ಹರಾಗಬಹುದು. ಈ ಮೊದಲು ಸಹಜೀಕರಿಸಲು ಸಮಯಮಿತಿ ಹನ್ನೊಂದು ವರ್ಷಗಳಾಗಿದ್ದವು. ಅಂದರೆ ಈ ಮಿತಿಯನ್ನು ಸಡಿಲಿಸಲಾಗುತ್ತಿದೆ.

ಅದರೆ ಇದು ಈ ಮೂರು ದೇಶಗಳಿಂದ ಬಂದಿರುವ ಮುಸ್ಲಿಮರಿಗೆ ಅನ್ವಯಿಸುವುದಿಲ್ಲ. ಅವರನ್ನು ಕಾನೂನುಬಾಹಿರ ವಲಸಿಗರೆಂದು ಪರಿಗಣಿಸಲಾಗುತ್ತದೆ. ಮತೀಯ ಆಧಾರದಲ್ಲಿ ಈ ತಾರತಮ್ಯವೇ ಪೌರತ್ವದ ಕಾಯ್ದೆಗೆ ಈ ತಿದ್ದುಪಡಿಯನ್ನು ಅಸಂವಿಧಾನಿಕ ಮತ್ತು ಕಾನೂನುಬಾಹಿರಗೊಳಿಸುತ್ತದೆ.

ಬಿಜೆಪಿ ಈ ಮೊದಲೇ ಹಿಂದಿನ ಲೋಕಸಭೆಯಲ್ಲಿ ಈ ಮಸೂದೆಯನ್ನು ಪಾಸುಮಾಡಿಕೊಂಡಿತ್ತು. ಆದರೆ ರಾಜ್ಯಸಭೆಯಲ್ಲಿ ಬಹುಮತವಿಲ್ಲದ್ದರಿಂದ ಪಾಸಾಗಲಿಲ್ಲ. ಈ ಮಸೂದೆಯ ಉದ್ದೇಶ ಬಾಂಗ್ಲಾದೇಶದಿಂದ ಅಸ್ಸಾಂಗೆ ಬಂದಿರುವ ಹಿಂದೂ ವಲಸಿಗರಿಗೆ ಪೌರತ್ವವನ್ನು ಖಾತ್ರಿಪಡಿಸುತ್ತಲೇ, ಆ ದೇಶದಿಂದ ಬರುವ ಯಾವುದೇ ಮುಸ್ಲಿಂ ವಲಸಿಗರನ್ನು ಹೊರಗಿಡುವ ಕೋಮುವಾದಿ ಅಜೆಂಡಾ. ಅಸ್ಸಾಂನಲ್ಲಿ ಎನ್.ಆರ್.ಸಿ. ಪ್ರಕ್ರಿಯೆ ಮಾರ್ಚ್ 24, 1971ರ ನಂತರ ಪ್ರವೇಶಿಸಿರುವ ಎಲ್ಲರನ್ನೂ ಹೊರಗಿಡುವುದರಿಂದಾಗಿ ಈ ಕ್ರಮ ಅಗತ್ಯವಾಗಿತ್ತು.

ಅಸ್ಸಾಂನಲ್ಲಿ ರಾಷ್ಟ್ರೀಯ ಪೌರರ ನೋಂದಣಿ(ಎನ್.ಆರ್.ಸಿ.)ಯ ಅಂತಿಮ ಪಟ್ಟಿಯನ್ನು ಈ ವರ್ಷ ಆಗಸ್ಟ್ 31ರಂದು ಸಿ.ಎ.ಬಿ.ಯನ್ನು ಜಾರಿಗೊಳಿಸುವ ಮೊದಲು ಪ್ರಕಟಿಸಲಾಯಿತು. ಇದರ ಫಲಿತಾಂಶವಾಗಿ ಬಾಂಗ್ಲಾದೇಶದಿಂದ ಬಂದು ಹಿಂದೂಗಳನ್ನೂ ದೊಡ್ಡ ಸಂಖ್ಯೆಯಲ್ಲಿ ಹೊರಗಿಡಲಾಗಿದೆ. ಆದ್ದರಿಂದಲೇ ಅಸ್ಸಾಂನ ಬಿಜೆಪಿ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಎನ್.ಆರ್.ಸಿ. ಪಟ್ಟಿಯನ್ನು ವಿರೋಧಿಸಿವೆ.

ಹೀಗೆ ಮೋದಿ ಸರಕಾರಕ್ಕೆ ಇಡೀ ದೇಶಕ್ಕೆ ಎನ್.ಆರ್.ಸಿ. ಯನ್ನು ಸಿದ್ದಪಡಿಸುವ ಕೆಲಸಕ್ಕೆ ಕೈಹಾಕುವ ಮೊದಲು ಸಿ.ಎ.ಬಿ.ಯನ್ನು ಅಂಗೀಕರಿಸುವ ತುರ್ತು ಬಂದಿತು. ಗೃಹಮಂತ್ರಿ ಅಮಿತ್ ಷಾ ಕಪಟತನದಿಂದ ಅಸ್ಸಾಂನಲ್ಲಿ ಎನ್.ಆರ್.ಸಿ. ಯನ್ನು ಇಡೀ ದೇಶದ ಜತೆಗೆ ಮತ್ತೊಮ್ಮೆ ಮಾಡಲಾಗುವುದು ಎಂದು ಪ್ರಕಟಿಸಿದ್ದಾರೆ.

ಈ ಸಿ.ಎ.ಬಿ. ಗೆ ಅಸ್ಸಾಂ ಮತ್ತು ಈಶಾನ್ಯ ಭಾರತದ ಜನಗಳಿಂದ ಕೋಪಾವೇಶದ ಪ್ರತಿಕ್ರಿಯೆ ಎದುರಾಗಿದೆ. ಅಸ್ಸಾಂನ ಜನರು ಈ ಶಾಸನ ಅಸ್ಸಾಂ ಒಪ್ಪಂದದಲ್ಲಿ ನೀಡಿದ ವಚನಕ್ಕೆ ಮಾಡಿರುವ ವಿಶ್ವಾಸದ್ರೋಹ ಎಂದು ಕಾಣುತ್ತಿದ್ದಾರೆ. ಏಕೆಂದರೆ ಆ ಒಪ್ಪಂದದ ಪ್ರಕಾರ ಮಾರ್ಚ್ 1971ರ ನಂತರ ಅಸ್ಸಾಂ ಪ್ರವೇಶಿಸಿದವರಿಗೆ ಪೌರತ್ವವನ್ನು ಕೊಡಲಾಗುವುದಿಲ್ಲ.

ಸಿ.ಎ.ಬಿ. ಈ ಸಮಯಮಿತಿಯನ್ನು ಡಿಸೆಂಬರ್ 31, 2014 ರ ವರೆಗೆ ವಿಸ್ತರಿಸಿ ಕಾನೂನುಬಾಹಿರ ವಲಸಿಗರನ್ನು ಕಾನೂನುಬದ್ಧಗೊಳಿಸಿ, 1985ರಲ್ಲಿ ಅಸ್ಸಾಂ ಒಪ್ಪಂದದ ಮೂಲಕ ಏರ್ಪಟ್ಟಿರುವ ಜಾಗರೂಕತೆಯಿಂದ ಸಮತೋಲಗೊಳಿಸಿದ್ದ ಒಡಂಬಡಿಕೆಯನ್ನು ತಲೆಕೆಳಗಾಗಿಸಿದೆ.

ಈಶಾನ್ಯ ಭಾರತದ ಎಲ್ಲ ರಾಜ್ಯಗಳಲ್ಲಿ ಅಲ್ಲಿಯ ಮೂಲನಿವಾಸಿಗಳ ಅಸ್ಮಿತೆಗಳು ಹೊಸದಾಗಿ ಪೌರತ್ವ ಪಡೆಯುವ ಜನಗಳು ದೊಡ್ಡಪ್ರಮಾಣದಲ್ಲಿ ಬಂದು ಸೇರುವುದರಿಂದಾಗಿ ಮುಳುಗಿ ಹೋಗಬಹುದು ಎಂಬ ಭಯ ಮೂಡಿದೆ.

ಸಂವಿಧಾನದ ಆರನೇ ಶೆಡ್ಯೂಲಿನ ಅಡಿಯಲ್ಲಿ ಬರುವ ಬುಡಕಟ್ಟು ಪ್ರದೇಶಗಳಿಗೆ ಮತ್ತು ಇನ್ನರ್ ಲೈನ್(ಒಳಗಣ ರೇಖೆ) ಇರುವ ಪ್ರದೇಶಗಳಿಗೆ ಈ ಸಿ.ಎ.ಬಿ.ಯಿಂದ ವಿನಾಯ್ತಿ ಕೊಟ್ಟು ಅವರನ್ನು ಸಮಾಧಾನ ಪಡಿಸುವ ಮೋದಿ ಸರಕಾರದ ಪ್ರಯತ್ನ ವಿಫಲವಾಗಿದೆ. ಈ ಸುರಕ್ಷಿತ ಕ್ಷೇತ್ರಗಳು ಹೊರಗಿಂದ ಅಲ್ಲಿಯೇ ನೆಲೆಸಲು ಬರುವ ಜನಗಳಿಂದ ಸತತವಾಗಿ ಒತ್ತಡಗಳನ್ನು ಎದುರಿಸುತ್ತಲೇ ಇರುವುದರಿಂದಾಗಿ ಮೋದಿ ಸರಕಾರದ ಈ ಪ್ರಯತ್ನ ಫಲ ಕೊಟ್ಟಿಲ್ಲ.

ಸಿ.ಎ.ಬಿ. ಮತ್ತು ಎನ್.ಆರ್.ಸಿ. ಯನ್ನು ಒಟ್ಟಾಗಿ ಕಾಣಬೇಕು. ಸಿ.ಎ.ಬಿ. ಮುಸ್ಲಿಮೇತರ ವಲಸಿಗರನ್ನು ನಾಗರಿಕರೆಂದು ಕಾನೂನುಬದ್ಧಗೊಳಿಸಿದರೆ, ಎನ್.ಆರ್.ಸಿ. ಮುಸ್ಲಿಂ ನುಸುಳುಕೋರರು ಎನ್ನಲಾಗುವವರ ಮೇಲೆ ಗುರಿಯಿಡುತ್ತದೆ. ಬಿಜೆಪಿ ಇಟ್ಟುಕೊಂಡಿರುವ ಗುರಿಯೆಂದರೆ, ಎರಡನೇ ದರ್ಜೆಯ ನಾಗರಿಕರು ಎಂಬೊಂದು ವಿಧವನ್ನು ಸೃಷಿಸುವುದು ಮತ್ತು ಅವರ ಹಕ್ಕುಗಳನ್ನು ತೀವ್ರವಾಗಿ ಮಿತಿಗೊಳಿಸುವುದು. ಈ ಯೋಚನೆಯ ಹಿಂದೆ ಇರುವುದು ವಿ.ಡಿ.ಸಾವರ್ಕರ್ ಪ್ರತಿಪಾದಿಸಿದ ಎರಡು-ರಾಷ್ಟ್ರಗಳ ಸಿದ್ಧಾಂತ.

ಸಿ.ಎ.ಬಿ. ಮತ್ತು ಎನ್.ಆರ್.ಸಿ.ಯ ಎರಡು ಕಡೆಗಳಿಂದ ಸುತ್ತುವರೆಯುವ ತಂತ್ರವನ್ನು ಬಿಜೆಪಿ-ಆರೆಸ್ಸೆಸ್‌ನ ಸಂಕುಚಿತ ರಾಜಕಾರಣಕ್ಕೆ ಹೊಂದುವಂತೆ ಕೋಮು ಆತಂಕಗಳನ್ನು ಹೆಚ್ಚಿಸಲು ಮತ್ತು ಒಂದು ಹೊಸ ವಿಭಜನಕಾರೀ ಅಜೆಂಡಾವನ್ನು ಸೃಷ್ಟಿಸಲು ಉಪಯೋಗಿಸಲಾಗುತ್ತದೆ.

ಈ ಪೌರತ್ವ ತಿದ್ದುಪಡಿ ಮಸೂದೆಗೆ ಸುಪ್ರಿಂ ಕೋರ್ಟಿನಲ್ಲಿ ಸವಾಲು ಹಾಕಬೇಕು. ಹಾಗೆ ಮಾಡುತ್ತಲೇ, ಸಿ.ಎ.ಬಿ.-ಎನ್.ಆರ್.ಸಿ.ಗೆ ಸಂಬಂಧಪಟ್ಟಂತೆ ಬಿಜೆಪಿಯ ದುಷ್ಟತಂತ್ರಗಳನ್ನು ಬಯಲಿಗೆಳೆಯಲು ವ್ಯಾಪಕವಾದ ಪ್ರಚಾರಾಂದೋಲನವನ್ನು ನಡೆಸಬೇಕು.

(ಈ ವಾರದ ಜನಶಕ್ತಿ ವಾರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

Published

on

ಸುದ್ದಿದಿನ,ದಾವಣಗೆರೆ : 66/11 ಕೆ.ವಿ. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ತುರ್ತು ನಿರ್ವಹಣಾ ಕಾಮಗಾರಿಗಳ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಜೂನ್ 23 ರಂದು ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆÉ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಮಾಮಾಸ್ ಜಾಯಿಂಟ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಎಮ್.ಸಿ.ಸಿ.ಬಿ : ಶಾಬನೂರು ರಸ್ತೆ, ಎಸ್.ಎಸ್. ಲೇಔಟ್, ಎ ಬ್ಲಾಕ್, ಕುವೆಂಪು ನಗರ, ಬಾಟ್ಲಿ ಬಿಲ್ಡಿಂಗ್ ಸುತ್ತ ಮುತ್ತ, ಸಿದ್ದವೀರಪ್ಪ ಬಡಾವಣೆ, 1ನೇ ಅಡ್ಡ ರಸ್ತೆ ಯಿಂದ 7ನೇ ಅಡ್ಡರಸ್ತೆವರೆಗೆ, ಗ್ಲಾಸ್ ಹೌಸ್, ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಹಿಂಭಾಗದ ಪ್ರದೇಶ , ಬಿ.ಐ.ಇ.ಟಿ. ಕಾಲೇಜು ಹಾಗೂ ಸುತ್ತ ಮುತ್ತ ಪ್ರದೇಶಗಳು.

ಮಂಡಿಪೇಟೆ, ಬೆನ್ನೆ ಕಂಪನಿ ರಸ್ತೆ, ಎಮ್ ಜಿ ರಸ್ತೆ, ಎನ್ ಆರ್ ರಸ್ತೆ, ಬೆಲ್ಲೌಡಿಹಲ್ಲಿ, ಮಹಾವೀರ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಬಿ.ಟಿ.: ಮಂಡಕ್ಕಿ ಬಟ್ಟಿ, 1 ರಿಂದ 10 ನೇ ಕ್ರಾಸ್, ಇಂದಿರಾ ನಗರ, ಸಿದ್ದರಾಮೇಶ್ವರ ಬಡಾವಣೆ, ಕಾರ್ಲ್ ಮಾರ್ಸ್ ನಗರ, ಕೋಳಿ ಚನ್ನಪ್ಪ ಬಡಾವಣೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು, ಮೌನೇಶ್ವರ : ಹೆಚ್.ಕೆ. ಆರ್. ಸರ್ಕಲ್, ಕೆ.ಇ.ಬಿ ಕಾಲೋನಿ, ನಿಟುವಳ್ಳಿ ಹಾಗು ನಿಟುವಳ್ಳಿ ಹೊಸಬಡಾವಣೆ, ಮೌನೇಶ್ವರ ಬಡಾವಣೆ, ಸೈಯದ್ ಪೀರ್ ಬಡಾವಣೆ, ಐ.ಟಿ.ಐ. ರಿಂಗ್ ರಸ್ತೆ, ಜಯನಗರ, ದುರ್ಗಾಂಬಿಕ ದೇವಸ್ಥಾನ ಸುತ್ತಮುತ್ತ.

ಎಸ್.ಎಸ್. ಹೈಟೆಕ್ ಆಸ್ಪತ್ರೆ ರಸ್ತೆ, ಭಗೀರಥ ಸರ್ಕಲ್, ಕಾಳಿಕಾಂಬ ದೇವಸ್ಥಾನ, ಶಕ್ತಿನಗರ, ಹಾಗು ಇ.ಎಸ್.ಐ ಆಸ್ಪತ್ರೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳ, ಪಿ.ಬಿ. ರಸ್ತೆ., ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಕೆಟಿಜೆ: ಶ್ರೀ ಮುರಘ ರಾಜೇಂದ್ರ ಸ್ವಾಮಿಗಳ ಮಠ, ಜಾಧವ್ ಕ್ಲಿನಿಕ್ ಸುತ್ತ ಮುತ್ತ , ಶಿವಪ್ಪ ವೃತ್ತದಿಂದ ಜಯದೇವ ವೃತ್ತದವರೆಗೆ ಹಾಗು ಸುತ್ತಮುತ್ತ ಪ್ರದೇಶಗಳು, ಪಿಜೆ: ಪೋಲೀಸ್ ಕ್ವಾಟ್ರಸ್, ತುಂಗ, ಭದ್ರ, ಸರಸ್ವತಿ, ಕೃಷ್ಣ ಬ್ಲಾಕ್, ಅರುಣಾ ಸರ್ಕಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಸಿಜಿಹೆಚ್: ಎಮ್.ಸಿ.ಸಿ. ಎ ಬ್ಲಾಕ್, ನ್ಯಾಯಾಧೀಶರ ವಸತಿ ಗೃಹಗಳು, ತೊಗಟವೀರ ಕಲ್ಯಾಣ ಮಂದಿರ, ವಿನೋಬ ನಗರ 1ನೇ ಮುಖ್ಯ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಎಸ್.ಎಸ್. ಬಡಾವಣೆ, ಎ ಬ್ಲಾಕ್, ಶಾಂತಿ ನಗರ, ಕುಂದುವಾಡ ರಸ್ತೆ, ಮಹಾನಗರ ಪಾಲಿಕೆ ಕುಡಿಯುವ ನೀರಿನ ಸ್ಥಾವರ, ಬಸವೇಶ್ವರ ಬಡಾವಣೆ, ಮಹಾಲಕ್ಷ್ಮೀ ಬಡಾವಣೆ, ಬಾಲಾಜಿ ನಗರ, ಕುಂದುವಾಡ ಕೆರೆ ಹಾಗು ಸುತ್ತಮುತ್ತ ಪ್ರದೇಶಗಳು.

ಕರೂರು ಇಂಡಸ್ಟ್ರಿಯಲ್ ಏರಿಯಾ, ಡಿ.ಸಿ. ಕಛೇರಿ, ಜಿ.ಎಂ.ಐ.ಟಿ. ಬಸವೇಶ್ವರ ನಗರ, ರಶ್ಮೀ, ಹರಿಹರ ರಸ್ತೆ, ವಿಜಯ ನಗರ, ಅಶೋಕ ನಗರ, ಆರ್.ಟಿ.ಓ. ಕಛೇರಿ, ಎಸ್.ಪಿ. ಕಛೇರಿ, ರಿಂಗ್ ರಸ್ತೆ, ಶಿಬಾರ, ಎಸ್.ಎಂ.ಕೆ. ನಗರ, ಹಾಗೂ ಚಿತ್ತನಹಳ್ಳಿ, ಕಕ್ಕರಗೊಳ್ಳ, ಆವರಗೊಳ್ಳ, ನೀಲನಹಳ್ಳಿ, ದೇವರಹಟ್ಟಿ, ದೊಡ್ಡಬಾತಿ, ಹಳೆಬಾತಿ, ನಾರಾಯಣ ಕ್ಯಾಂಪ್, ಯರಗುಂಟಾ, ಕೋಡಿಹಳ್ಳಿ, ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು, ಮಾಗಾನಹಳ್ಳಿ, ಮಾಗಾನಹಳ್ಳಿ ಕ್ಯಾಂಪ್, ಓಬಜ್ಜಿಹಳ್ಳಿ, ಓಬಜ್ಜಿಹಳ್ಳಿ ಕ್ಯಾಂಪ್, ಕಡ್ಲೇಬಾಳು, ಹಳೆಕಡ್ಲೆಬಾಳು, ಮಾಳಗೊಂಡನಹಳ್ಳಿ, ಅರಸಾಪುರ, ಬದುನಾಯಕನತಾಂಡ, ಚಿಕ್ಕಓಬಜ್ಜೀಹಳ್ಳಿ, ದೊಡ್ಡಓಬಜ್ಜೀಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು, ಮ್ಯಾಸರಹಳ್ಳಿ, ಗುಮ್ಮನೂರು, ಹುಣಸೆಕಟ್ಟೆ, ಮುಡೇನಹಳ್ಳಿ, ಕೆಂಚಮ್ಮನಹಳ್ಳಿ, ಹೊಸಹಳ್ಳಿ, ಕಾಟಿಹಳ್ಳಿ.

ಮಂಡಲೂರು ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಹನುಮನಹಳ್ಳಿ, ಕೊಗ್ಗÀನೂರು, ಹನುಮನಹಳ್ಳಿ, ಆನಗೋಡು, ಹೆಬ್ಬಾಳು, ನೀರ್ಥಡಿ, ಶಿವಪುರ, ಹಾಲುವರ್ತಿ, ಗಂಗನಕಟ್ಟೆ, ನೇರ್ಲಿಗಿ, ಚಿನ್ನಸಮುದ್ರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಮತ್ತು ಆರಾಧ್ಯಾ ಕೈಗಾರಿಕೆ, ಅತ್ತಿಗೆರೆ, ಕುರ್ಕಿ, ಬಾಡ, ಕಬ್ಬೂರು, ಹೀರೆತೊಗಲೇರಿ, ಗೊಪಾನಾಳು, ಕಂದ್ಗಲ್, ರಾಮಗೊಂಡನಹಳ್ಳಿ, ಕಾಶೀಪುರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಆರ್.ಎಂ.ಸಿ. ಲಿಂಕ್ ರಸ್ತೆ, ಬಿ.ಟಿ. ಲೇಔಟ್, ಗುಜರಿ ಲೈನ್, ಬಂಬೂ ಬಜಾರ್, ಮಟ್ಟಿಕಲ್, ಬಿಡಿಓ ಕಛೇರಿ, ಇಮಾಮ್ ನಗರ, ಅಮರಪ್ಪನ ತೋಟ.

ಆನೆಕೊಂಡ, ಎಲ್.ಬಿ.ಎಸ್. ನಗರ.ಟಿ.ಸಿ. ಲೇಔಟ್, ಬಿಟಿ ಲೇಔಟ್, ಕೆ.ಆರ್. ರಸ್ತೆ, ಇಮಾಮ್ ನಗರ, ಆನೆಕೊಂಡ, ಐನಳ್ಳಿ ಕಾಂಪೌಂಡ್, ಎಪಿಎಂಸಿ, ಭಾರತ್ ಕಾಲೋನಿ, ಶೇಖ್ರಪ್ಪ ನಗರ ಹೆಚ್.ಕೆ.ಆರ್. ನಗರ, ಕಬ್ಬೂರು ಬಸಾಪುರ ನಗರ, ಆಣ್ಣಾ ನಗರ, ಬಸಾಪುರ ರಸ್ತೆ, ಗೋಶಾಲೆ, ಪಿ.ಬಿ. ರಸ್ತೆ, ರವಿ ಮಿಲ್ ಹಾಗೂ ಆವರಗೆರೆ, ಹೊನ್ನೂರು, ಐಗೂರು, ಮಲ್ಲಶೆಟ್ಟಿಹಳ್ಳಿ, ತೊಳಹುಣಸೆ, ದಾವಣಗೆರೆ ವಿಶ್ವವಿದ್ಯಾಲಯ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪಿಂಚಣಿ ದಾರರು ಸಕಾಲದಲ್ಲಿ ಜೀವಂತ ಪ್ರಮಾಣ ಪತ್ರ ಸಲ್ಲಿಸಿ

Published

on

ಸುದ್ದಿದಿನ,ದಾವಣಗೆರೆ: ಪಿಂಚಣಿ ಪಡೆಯಲು ಜೀವಂತ ಸದಸ್ಯರ ಪ್ರಮಾಣ ಪತ್ರಗಳು ಕಡ್ಡಾಯವಾಗಿರುವುದರಿಂದ ಸಕಾಲಕ್ಕೆ ಸೂಕ್ತ ದಾಖಲಾತಿಗಳನ್ನು ನೀಡುವ ಮೂಲಕ ಸಹಕರಿಸಿ ಎಂದು ಉಪ ಮಹಾಲೇಖಪಾಲರಾದ ಸಚ್ಚಿನ್ ಕೃಷ್ಣ ಕೌಶಿಕ್ ತಿಳಿಸಿದರು.

ಶುಕ್ರವಾರ ಜೂನ್(19) ‌ಬೆಂಗಳೂರಿನ ಮಹಾಲೇಖಪಾಲರು ದಾವಣಗೆರೆ ಜಿಲ್ಲಾ ಖಜಾನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾಮಾನ್ಯ ಭವಿಷ್ಯ ನಿಧಿ ಹಾಗೂ ಲೆಕ್ಕಪತ್ರ ಸಮಸ್ಯೆಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪಿಂಚಣಿದಾರರು ತಮ್ಮ ಎಲ್ಲಾ ಬ್ಯಾಂಕ್‌ಗೆ 2ನೇ ವಾರ ಭೇಟಿ ನೀಡಿದರೆ ನಿಮ್ಮ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲಾಗುವುದು. ಜೀವಂತ ಸದಸ್ಯರ ದೃಢೀಕರಣ ಪತ್ರವನ್ನು ಪಡೆಯಲು ಸೈಬರ್‌ಕೆಫೆ ಇನ್ನಿತರ ಕೇಂದ್ರಗಳಿಗೆ ಅಲೆಯುವ ಅವಶ್ಯಕತೆ ಇಲ್ಲ. ನೀವು ಮನೆಯಲ್ಲಿ ಮೊಬೈಲ್‌ನಲ್ಲಿ ಅಫ್ ಲೋಡ್ ಮಾಡಿ ಪಡೆಯಬಹುದು. ಮತ್ತು ನಿಮ್ಮ ಸಮಸ್ಯೆಗಳನ್ನು ತಿಳಿಸುವಾಗ ಅರ್ಜಿಯಲ್ಲಿ ಇ-ಮೇಲ್ ವಿಳಾಸ, ಮೊಬೈಲ್ ನಂಬರ್‌ನ್ನು ಕಡ್ಡಾಯವಾಗಿ ನಮೂದಿಸಿದರೆ, ಇದರಿಂದ ನಿಮಗೆ ಮಾಹಿತಿ ನೀಡಲು ಅನುಕೂಲವಾಗುತ್ತದೆ ಎಂದರು.

ಪಿಂಚಣಿ ಅದಾಲತ್ ಎನ್ನುವುದು ನಿವೃತ್ತ ನೌಕರರು ಮತ್ತು ಪಿಂಚಣಿದಾರರ ದೀರ್ಘಕಾಲದ ಬಾಕಿ ಉಳಿದಿರುವ ಸಮಸ್ಯೆಗಳನ್ನು ಅಥವಾ ಕುಂದುಕೊರತೆಗಳನ್ನು ಪರಿಹರಿಸಲು ವಿಶೇಷ ವೇದಿಕೆಯಾಗಿದೆ. ಸ್ಥಳದಲ್ಲೇ ಅರ್ಜಿಗಳನ್ನು ಪರಿಶೀಲಿಸಿ, ಬ್ಯಾಂಕ್‌ ಅಧಿಕಾರಿಗಳ ಸಮ್ಮುಖದಲ್ಲಿ ತ್ವರಿತವಾಗಿ ಸಮಸ್ಯೆಗಳನ್ನು ಬಗೆಹರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಮಹಾಲೇಖಪಾಲರ ಕಚೇರಿಯ ಹಿರಿಯ ಲೆಕ್ಕಪರಿಶೋಧನಾ ಅಧಿಕಾರಿ ನಾಗಸೇನಾ.ಟಿ.ವಿ, ಮತ್ತು ಪದ್ಮವತಿ, ಜಿಲ್ಲಾ ಖಜಾನೆಯ ಉಪನಿರ್ದೇಶಕರಾದ ರಮೇಶ್ ಅರೆಮಲ್ಲಾಪುರ, ಸಹಾಯಕ ಲೆಕ್ಕಪರಿಶೋಧನಾ ಆಧಿಕಾರಿ ಚಂದನ್ ಮತ್ತು ಜಾಬ್‌ಲೀನೋ, ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆಯುರ್ವೇದ ಆರೋಗ್ಯಕರ ಜೀವನ ಶೈಲಿ

Published

on

ಸುದ್ದಿದಿನ,ದಾವಣಗೆರೆ:ಭಾರತದ ವೈದ್ಯಕೀಯ ಪರಂಪರೆಯು ಅತ್ಯಂತ ಪ್ರಾಚೀನ ಹಾಗೂ ಸಮೃದ್ಧವಾದುದಾಗಿದೆ. ಆಯುರ್ವೇದವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವ ವಿಜ್ಞಾನವಲ್ಲ, ಅದೊಂದು ಆರೋಗ್ಯಕರ ಜೀವನ ಶೈಲಿಯಾಗಿದೆ ಎಂದು ಘನವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.

ಅವರು ಶನಿವಾರ ತಪೋವನ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಸಂಸ್ಥೆಯು ಏರ್ಪಡಿಸಿದ್ದ ದ್ವಿತೀಯ ಘಟಿಕೋತ್ಸವ ಸಮಾರಂಭವನ್ನು ಉದ್ಪಾಟಿಸಿ ಮಾತನಾಡಿದರು.

ಈಗಿನ ದಿನಮಾನಗಳಲ್ಲಿ ಇಡೀ ಜಗತ್ತು ಮಾನಸಿಕ ಒತ್ತಡ ಹಾಗೂ ಪರಿಸರ ಸವಾಲುಗಳನ್ನು ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಪದ್ಧತಿಗಳ ಪ್ರಸ್ತುತತೆ ಹಾಗೂ ಮಹತ್ವ ಮತ್ತಷ್ಟು ಹೆಚ್ಚಾಗಿದೆ, ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಮಾನವೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ತಿಳಿಸಿದರು.

ಭಾರತದ ವೈದ್ಯಕೀಯ ಪರಂಪರೆಯು ಅತ್ಯಂತ ಪ್ರಾಚೀನ ಹಾಗೂ ಸಮೃದ್ಧವಾದುದಾಗಿದೆ. ಆಯುರ್ವೇದವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವ ವಿಜ್ಞಾನವಲ್ಲ, ಅದೊಂದು ಆರೋಗ್ಯಕರ ಜೀವನ ಶೈಲಿಯಾಗಿದೆ. ಜಗತ್ತು ಮಾನಸಿಕ ಒತ್ತಡ ಹಾಗೂ ಪರಿಸರ ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಪದ್ಧತಿಗಳ ಪ್ರಸ್ತುತತೆ ಹಾಗೂ ಮಹತ್ವ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.

ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ಆರೋಗ್ಯ ಸೇವೆಗಳು ಇಂದಿನ ವೈದ್ಯಕೀಯ ಕ್ಷೇತ್ರದ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸುತ್ತಿವೆ. ಇಂತಹ ತಾಂತ್ರಿಕ ಕ್ರಾಂತಿಯ ಯುಗದಲ್ಲಿ ಪದವಿ ಪಡೆದು ಹೊರಬರುತ್ತಿರುವ ನೂತನ ವೈದ್ಯರು ಕೇವಲ ಸಾಂಪ್ರದಾಯಿಕ ವೈದ್ಯಕೀಯ ಜ್ಞಾನಕ್ಕೆ ಸೀಮಿತವಾಗದೆ, ಆಧುನಿಕ ವಿಜ್ಞಾನದ ನೂತನ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಉಭಯ ಕ್ಷೇತ್ರಗಳ ನಡುವೆ ಬಲವಾದ ಸೇತುವೆಯಾಗಿ ಕೆಲಸ ಮಾಡಬೇಕಾದ ತುರ್ತು ಅಗತ್ಯವಿದೆ ಎಂದರು.

ಕೃತಕ ಬುದ್ಧಿಮತ್ತೆಯು ರೋಗನಿರ್ಣಯವನ್ನು ಹೆಚ್ಚು ನಿಖರ ಹಾಗೂ ವೇಗವಾಗಿಸಲು ನೆರವಾದರೆ, ಡಿಜಿಟಲ್ ಆರೋಗ್ಯ ಸೇವೆಗಳು ದೂರದ ಊರುಗಳಿಗೂ ಚಿಕಿತ್ಸೆಯನ್ನು ತಲುಪಿಸಲು ಸಹಕಾರಿಯಾಗಿವೆ. ಆದ್ದರಿಂದ, ಹೊಸ ತಲೆಮಾರಿನ ವೈದ್ಯರು ಕೇವಲ ದಿನನಿತ್ಯದ ಕ್ಲಿನಿಕ್ ಅಥವಾ ಆಸ್ಪತ್ರೆಯ ಚಿಕಿತ್ಸೆಗೆ ಸೀಮಿತವಾಗದೆ, ತಂತ್ರಜ್ಞಾನದ ದತ್ತಾಂಶಗಳನ್ನು ಬಳಸಿಕೊಂಡು ಹೊಸ ರೋಗಗಳಿಗೆ ಪರಿಹಾರ ಕಂಡುಕೊಳ್ಳುವ ಉತ್ತಮ ಸಂಶೋಧಕರಾಗಬೇಕು. ಇದರೊಂದಿಗೆ, ಸಮಾಜದಲ್ಲಿ ತಂತ್ರಜ್ಞಾನ ಮತ್ತು ಆರೋಗ್ಯದ ಕುರಿತು ಇರುವ ತಪ್ಪು ಕಲ್ಪನೆಗಳನ್ನು ದೂರಾಗಿಸಿ, ಮಾನವೀಯ ಕಾಳಜಿಯೊಂದಿಗೆ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ನೈಜ ಮಾರ್ಗದರ್ಶಕರಾಗಿ ಹೊರಹೊಮ್ಮಬೇಕಿದೆ ಎಂದು ತಿಳಿಸಿದರು.

ವೈದ್ಯಕೀಯ ಸೇವೆಯು ಅತ್ಯಂತ ಪವಿತ್ರವಾದ ಮಾನವೀಯ ಸೇವೆಯಾಗಿದೆ. ರೋಗಿಗಳಿಗೆ ಔಷಧಿಗಿಂತ ಮುಂಚಿತವಾಗಿ ವೈದ್ಯರ ಪ್ರೀತಿಯ ನುಡಿಗಳು ಹಾಗೂ ಸಕಾರಾತ್ಮಕ ನಡವಳಿಕೆಯ ಅಗತ್ಯವಿರುತ್ತದೆ. ಆದ್ದರಿಂದ ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಮಾನವೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಬೇಕು. ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯವು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಗುಜರಾತ್‌ನ ಜಾಮ್‌ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಗ್ಲೋಬಲ್ ಟ್ರೆಡಿಷನಲ್ ಮೆಡಿಸಿನ್ ಸೆಂಟರ್’ ಸ್ಥಾಪಿಸುತ್ತಿದೆ ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯರಾದ ಶ್ರೀ ನಾರಾಯಣಸಾ ಭಾಂಡಗೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾಜಿ ಡೀನ್ ಡಾ: ಶ್ರೀನಿವಾಸ್ ಬನ್ನಿಗೊಳ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಎಸ್.ವಿ.ಹಲಸೆ, ತಪೋವನ ಸಂಸ್ಥೆಯ ಅಧ್ಯಕ್ಷ ಡಾ. ಶಶಿಕುಮಾರ್ ವಿ.ಎಂ, ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ಅಶ್ವಿನಿ ಕೆ.ಆರ್., ಡಾ.ಸುಮನ ಭಟ್ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending