Connect with us

ರಾಜಕೀಯ

ಕೇಜ್ರಿವಾಲ್ ಮತ್ತು ದೆಹಲಿ ಗಲಭೆ

Published

on

  • ವಿ.ನಟರಾಜ್

ದೆಹಲಿಯ ಮತೀಯ ಗಲಭೆಗಳ ನಿರ್ವಹಣೆಯ ವಿಚಾರದಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಅಸಹಾಯಕತೆಯನ್ನು ಪ್ರದರ್ಶಿಸಿರುವ ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರ ಬಗ್ಗೆ‌ ಬಹುತೇಕ ಗೆಳೆಯರು ಧಿಡೀರನೆ ಭ್ರಮನಿರಸನಗೊಂಡಿದ್ದಾರೆ.

ಮತೀಯ ಗಲಭೆ ವಿಚಾರದಲ್ಲಿ ಮೋದಿ-ಶಾ ಜೋಡಿಯ ‘ಎಂದಿನ ಸಂವೇದನಾಶೂನ್ಯತೆ’ಯನ್ನು, ಅದರಲ್ಲಿಯೂ ವಿಶೇಷವಾಗಿ ಕಾಶ್ಮೀರದ ವಿಚಾರದಲ್ಲಿ ತಾನು ಭಲೇ ಭಲೇ ಉಕ್ಕಿನ ಮನುಷ್ಯ ಎಂದು ಸಾಬೀತು ಪಡಿಸಿರುವುದಾಗಿ ತೊಡೆ ತಟ್ಟುತ್ತಿದ್ದ ಗೃಹ ಸಚಿವ ಅಮಿತ್‌ ಶಾ, ದೆಹಲಿ ಗಲಭೆಯ ವಿಚಾರದಲ್ಲಿ ಬೇಕೆಂದೇ ಬೆನ್ನುಮೂಳೆ ಕಳೆದುಕೊಂಡ ಬಗ್ಗೆ ಹೆಚ್ಚಿನ ತಕರಾರು ಪ್ರಗತಿಪರರಿಗೂ ಇದ್ದಂತಿಲ್ಲ.

ಯಾಕೆಂದರೆ, ಇಂಥದ್ದನ್ನೆಲ್ಲಾ ಈ ಜೋಡಿಯ ಆಡಳಿತ ಕಾಲದಲ್ಲಿ ನೋಡಲು ಬಹುಶಃ ಎಲ್ಲ ಪ್ರಗತಿಪರರೂ ಮಾನಸಿಕವಾಗಿ ಸಿದ್ಧರಾಗಿದ್ದಂತಿದೆ. ಆದರೆ, ಕೇಜ್ರಿವಾಲ್‌ ಕೂಡಾ ಇಷ್ಟು ಬೇಗನೇ ಮತೀಯಗಲಭೆಗಳಂತಹ ಗಂಭೀರ ವಿಷಯದಲ್ಲಿ ಶುದ್ಧಾತಿಶುದ್ಧ ರಾಜಕಾರಣಿಯಾಗಿ ಹೊರಹೊಮ್ಮುತ್ತಾರೆ, ಆಪ್ ನ ದೆಹಲಿ ರಾಜಕಾರಣಿಗಳು ರಂಗೋಲಿ ಕೆಳಗೆ ತೂರುವಂತಹ ಮಾತುಗಳನ್ನು ಆಡತೊಡಗುತ್ತಾರೆ ಎನ್ನುವುದನ್ನು ಬಹುತೇಕ ಗೆಳೆಯರು ನಿರೀಕ್ಷಿಸಿರಲಿಲ್ಲ.

ಇದೀಗ ದೇಶದ್ರೋಹ ಪ್ರಕರಣದಲ್ಲಿ ಜೆಎನ್‌ಯು ಮಾಜಿ ಮುಖಂಡ ಕನ್ಹಯ್ಯ ಕುಮಾರ್ ಹಾಗೂ ಸಂಗಡಿಗರ ವಿರುದ್ಧ ದೇಶದ್ರೋಹದ ಪ್ರಕರಣದ ವಿಚಾರಣೆಗೆ ದೆಹಲಿ ಸರ್ಕಾರ ಅನುಮತಿ ನೀಡಿರುವುದು ಸಹ ಅನೇಕರಿಗೆ ಅಚ್ಚರಿ ಉಂಟುಮಾಡಿದೆ. ದೆಹಲಿ ಗಲಭೆಯ ವಿಚಾರದಲ್ಲಿ ಆಪ್‌ ನ ಧೋರಣೆಯನ್ನು ಖಂಡಿಸಿದ್ದ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಪರೋಕ್ಷವಾಗಿ ಕೇಜ್ರಿ ಸರ್ಕಾರ ಚಾಟಿ ಬೀಸಿದೆಯೇ ಎನ್ನುವ ಅನುಮಾನ ಮೇಲುನೋಟಕ್ಕೇ ಗೋಚರಿಸುತ್ತಿದೆ.

ದೆಹಲಿ ಮತೀಯ ಗಲಭೆಗಳ ಮೊದಲ ಮೂರು ದಿನ ಆಪ್ ವರ್ತಿಸಿದ ರೀತಿ ಹೇಗಿತ್ತೆಂದರೆ, ಇಂತಹದ್ದೊಂದು ಗಲಭೆ ಸಂಭವಿಸಿದರೆ ಮಾತ್ರ ದೆಹಲಿ ಸರ್ಕಾರದ ಕೆಳಗೆ ಪೊಲೀಸ್‌ ಇಲಾಖೆ ಹಾಗೂ ಆ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹೊಣೆ ಬರಬೇಕು ಎನ್ನುವ ತನ್ನ ವಾದಕ್ಕೆ ಬಲ ಬರುತ್ತದೆ ಎನ್ನುವಂತಿತ್ತು. ಕೇಜ್ರಿವಾಲ್‌ ಅವರಂತೂ ‘ಹೆಚ್ಚುವರಿ’ ಅಸಹಾಯಕತೆಯನ್ನೇ ತಮ್ಮ ಮೇಲೆ ಆವಾಹಿಸಿಕೊಂಡವರಂತೆ ‘ಪೊಲೀಸ್‌ ಇಲಾಖೆ ನಮ್ಮ ಬಳಿ ಇಲ್ಲ’, ಎನ್ನುವುದನ್ನು ಸಾರಿ ಸಾರಿ ಹೇಳುವಂತೆ ಪ್ರತಿಕ್ರಿಯಿಸಿದರು.

ಇಂತಹದ್ದೊಂದು ‘ಚಾಲಾಕಿತನದ ರಾಜಕಾರಣ’ವನ್ನು ಕೇಜ್ರಿವಾಲ್ ಯಾವತ್ತಿದ್ದರೂ‌ ಪ್ರದರ್ಶಿಸುತ್ತಾರೆ ಎನ್ನುವುದು ಅವರ ಹೋರಾಟಗಳನ್ನು ಹತ್ತಿರದಿಂದ ಗಮನಿಸಿದವರಿಗೆ ತಿಳಿಯದ ವಿಷಯವೇನಲ್ಲ. ಎಷ್ಟಾದರೂ ಕೇಜ್ರಿವಾಲ್ ಇಂದಿನ ಪೀಳಿಗೆ ಬಯಸುವ ಫಟಾಫಟ್ ಕಾರ್ಪೊರೆಟ್‌ ಮಾದರಿ ರಾಜಕಾರಣವನ್ನು ಅನುಸರಿಸುತ್ತಾ‌ ಅಡಳಿತಾತ್ಮಕ ವಿಷಯಗಳ ಮೂಲಕ ಅಂಕಗಳಿಸುವ ರಾಜಕಾರಣಿಯೇ ಹೊರತು ಸೈದ್ಧಾಂತಿಕವಾಗಿ ಗಟ್ಟಿಯಾದ, ದಿಟ್ಟ ಹೆಜ್ಜೆಯನ್ನು ಇಡಬಹುದಾದ ರಾಜಕಾರಣಿ ಅಲ್ಲ.

ಈ ಬಗ್ಗೆ ತಕರಾರು ತೆಗೆಯ ಬಯಸುವವರ ವಾದಗಳಿಗೆ ಕೇಜ್ರಿವಾಲ್ ರ ಈವರೆಗಿನ ನಡೆಗಳಲ್ಲಿ ಹೆಚ್ಚಿನ ಸಾಕ್ಷ್ಯಗಳೂ ಸಿಗುವುದಿಲ್ಲ. ಕೇಜ್ರಿ ಹೀಗೇಕೆ ಎಂದು ಕಾರಣ ಹುಡುಕುತ್ತಾ ಹೊರಟವರಿಗೆ, ಇದೆಲ್ಲದರ ಬೀಜಗಳು ಇರುವುದು ಅವರನ್ನು ಅಧಿಕಾರ ರಾಜಕಾರಣದ ಕೇಂದ್ರಕ್ಕೆ ತಂದ “ಭ್ರಷ್ಟಾಚಾರದ ವಿರುದ್ಧ”ದ ಹೋರಾಟದಲ್ಲಿ ಎನ್ನುವುದನ್ನು ಇಲ್ಲಿ ಮತ್ತೊಮ್ಮೆ ನೆನಪಿಸಬೇಕಾಗುತ್ತದೆ.

ಭ್ರಷ್ಟಾಚಾರದ ವಿರುದ್ಧದ ಹೋರಾಟ ಎನ್ನುವ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ನಡೆದ ‘ದೆಹಲಿ ಕೇಂದ್ರಿತ’ ಹೋರಾಟವನ್ನು ಬಿಜೆಪಿ ಹೈಜಾಕ್‌ ಮಾಡದಂತೆ ಕೇಜ್ರಿವಾಲ್‌ ತಡೆದರು ಎನ್ನುವುದನ್ನು ಹೊರತುಪಡಿಸಿದರೆ, ಅವರು ಭ್ರಷ್ಟಾಚಾರದ ಹೋರಾಟವನ್ನು ಮತೀಯವಾದಿ ಮನಸ್ಸುಗಳನ್ನು ದೂರವಿಟ್ಟು ಕಟ್ಟಿದರು ಎಂದು ಯಾರೂ ಎದೆತಟ್ಟಿ ಹೇಳಲಾರರು.

ಒಂದೆಡೆ ಕಾಂಗ್ರೆಸ್‌ನ ಅಹಿಂದ ವೋಟ್‌ ಬ್ಯಾಂಕ್‌, ಮತ್ತೊಂದೆಡೆ ಬಿಜೆಪಿಯ ಮತೀಯವಾದಿ ರಾಜಕಾರಣ ಈ ಎರಡರಿಂದ ಸೈದ್ಧಾಂತಿಕವಾಗಿ ಸಮಾನಾಂತರವಾಗಿ ಇದ್ದುಕೊಂಡು ತಮ್ಮದೇ ಆದ ವೋಟ್‌ ಬ್ಯಾಂಕ್‌ ರೂಪಿಸಿಕೊಳ್ಳುವುದು ಸುದೀರ್ಘ ಅವಧಿಯನ್ನು, ಶ್ರಮವನ್ನು ಬೇಡುವಂತಹ ರಾಜಕಾರಣ ಎನ್ನುವುದನ್ನು ಅರಿತಿದ್ದ ಕೇಜ್ರಿವಾಲ್, ಫಟಾಫಟ್‌ ರಾಜಕಾರಣಕ್ಕೆ ಮೊರೆ ಹೋದರು.

ಈ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಸುಲಭಕ್ಕೆ‌ ‘ವೋಟು ಕೀಳುವ’ ರಾಜಕಾರಣಕ್ಕೆ ತಮ್ಮನ್ನು ಮುಡಿಪಾಗಿಟ್ಟುಕೊಂಡರು. ಕೇಜ್ರಿವಾಲ್‌ ಭ್ರಷ್ಟಾಚಾರದ ವಿರುದ್ಧ ಮಾತನಾಡಿದಷ್ಟೇ ಉತ್ಸಾಹದಿಂದ ಸಾಮಾಜಿಕ ನ್ಯಾಯ, ಮತೀಯ ಸಾಮರಸ್ಯದಂತಹ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ. ಈ ವಿಚಾರಗಳು ಬಂದಾಗ ಪ್ರಗತಿಪರರ ಮನಸ್ಸಿಗೆ ನೋವಾಗದಂತೆ ಎಚ್ಚರಿಕೆ ವಹಿಸುತ್ತಾರಾದರೂ, ಸ್ಥಳೀಯ ರಾಜಕಾರಣದಲ್ಲಿ ತಮ್ಮನ್ನು ಬೆಂಬಲಿಸುವ ಮೂಲತಃ ಬಿಜೆಪಿಯ ಮತದಾರರ ಆಕ್ರೋಶವನ್ನು ಕಟ್ಟಿಕೊಳ್ಳುವಷ್ಟು ದೂರಕ್ಕೆ ಅವರೆಂದೂ ಹೋಗುವುದಿಲ್ಲ. ಒಂದು ವೇಳೆ ಹೋದರೂ, ಅವಕಾಶ ನೋಡಿ ಚಕ್ಕನೆ ಹಿಂದಕ್ಕೆ ಪಲ್ಟಿ ಹೊಡೆದು ಬಿಡುತ್ತಾರೆ!

ಈ ವಿಷಯದಲ್ಲಿ ಅವರೊಬ್ಬ ಉತ್ತಮ ‘ಅಕ್ರೋಬ್ಯಾಟ್’. ಕೇಜ್ರಿವಾಲ್‌ ಅವರನ್ನು ಮುಂದೆ ಬಿಟ್ಟುಕೊಂಡ ಹಿಂದೆ ಓಡುವುದೆಂದರೆ ಅದೊಂದು ದುಸ್ಸಾಹಸವೇ ಸರಿ. ಕೇಜ್ರಿ, ಯಾವಾಗ ಛಕ್ಕನೆ ಲೇನ್‌ ಬದಲಿಸಿ ಹಿಂದಕ್ಕೆ ತಿರುಗಿ ಓಡಿಬಿಡುತ್ತಾರೋ ಹೇಳಲುಬಾರದು! ಹಾಗಾಗಿಯೇ, ಅವರ ಈ ವರಸೆಗಳನ್ನು ಕಂಡಾಗ, ಸದಾಕಾಲ ಅಧಿಕಾರದ ಕೇಂದ್ರದಲ್ಲಿರಲು ಅತ್ತಿಂದಿತ್ತ ಲಾಗ ಹಾಕುವ ಜೆಡಿಯು ಮುಖಂಡ ನಿತೀಶ್‌ ಕುಮಾರ್ ಅವರ ಸುಧಾರಿತ ಆವೃತ್ತಿಯಂತೆ ಕೇಜ್ರಿ ಭಾಸವಾಗುತ್ತಾರೆ!

ಬಿಜೆಪಿಯನ್ನು ವಿರೋಧಿಸುವ ಕಟ್ಟರ್‌ ಕಾಂಗ್ರೆಸ್ಸಿಗರು ಹಾಗೂ ಸಮಾಜವಾದಿಗಳಿಗೆ, ಅದೇ ರೀತಿ, ಕಾಂಗ್ರೆಸ್‌ ಹಾಗೂ ಸಮಾಜವಾದಿಗಳನ್ನು ಕಂಡರೆ ಉರಿದುಬೀಳುವ ಉಗ್ರ ಹಿಂದುತ್ವವಾದಿಗಳಿಗೆ ಕೇಜ್ರಿವಾಲ್‌ ಒಂದು ತಂಗುದಾಣದಂತೆ. ಹೇಗಾದರೂ ಸರಿ ತಮ್ಮ ವೋಟು ಕಾಂಗ್ರೆಸ್ಸಿಗೆ ಹೋಗಬಾರದು ಎಂದು ಬಯಸುವವರು, ಎಷ್ಟಾದರೂ ಸರಿ, ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ಇಚ್ಛಿಸುವವರು ಕೇಜ್ರಿವಾಲ್‌ ರ ಪರಿಣಾಮಕಾರಿ ಆಡಳಿತ ಶೈಲಿಗೆ ಜೈಕಾರ ಹಾಕಿ ಅವರಿಗೆ ಮತ ನೀಡುತ್ತಾರೆ. ಹೀಗೆ ತಮಗೆ ಯಾವುದೇ ಸೈದ್ಧಾಂತಿಕ ಬಲದ ಸಹಾಯವಿಲ್ಲದೆ ಹರಿದುಬರುವ ಮತಗಳಿಂದಾಗಿ, ಕೇಜ್ರಿಯವರು ಯಾವತ್ತೂ ಹ್ಯಾಪಿಯೇ!

ಸೈದ್ಧಾಂತಿಕವಾಗಿ ಪೊಳ್ಳಾದರೂ ಸಹ ಇದು ಅಧಿಕಾರದ ಪಡಸಾಲೆಯಲ್ಲಿ ಬಹುಕಾಲ ಉಳಿಯುವ ವಾಸ್ತವ ರಾಜಕಾರಣದ ತಂತ್ರ ಎನ್ನುವುದನ್ನು ಅವರ ಅರ್ಥ ಮಾಡಿಕೊಂಡು, ಜೀರ್ಣಿಸಿಕೊಂಡಿದ್ದಾರೆ. ಪಾಪ, ಇದಾವುದರ ಅರಿವಿಲ್ಲದೆ, ಕೇಜ್ರಿ ಅವರಲ್ಲಿ ನೆಹರು ಪ್ರಣೀತ ಅಭಿವೃದ್ಧಿ ಮಾದರಿಯನ್ನು, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ನಿರೀಕ್ಷಿಸಲು ಹೊರಟವರು ಭ್ರಮನಿರಸನಕ್ಕೆ ಒಳಗಾಗುತ್ತಾರೆ…

ಇನ್ನು, ಈ ಭ್ರಷ್ಟಾಚಾರದ ವಿರುದ್ಧದ ಹೋರಾಟ ಎನ್ನುವ ಪರಿಕಲ್ಪನೆ ಇಂದು ಬಹುತೇಕವಾಗಿ ಅವಕಾಶವಾದಿ ರಾಜಕಾರಣದ ಸರಕಾಗಿಬಿಟ್ಟಿದೆ. ಇದು ಎಲ್ಲರನ್ನೂ ಒಳಗೊಳ್ಳುವ, ‘ರಾಜಕೀಯ ಚಲಾವಣೆ’ಯ ಹೋರಾಟ ಎನ್ನುವ ಕಾರಣಕ್ಕೆ ಸುಲಭಕ್ಕೆ ನಮ್ಮ ಅನೇಕ ಭರವಸೆಯ ನಾಯಕರು ಗೊತ್ತಿದ್ದೋ, ಗೊತ್ತಿಲ್ಲದೆಯೋ, ಉದ್ದೇಶಪೂರ್ವಕವಾಗಿಯೋ, ದುರುದ್ದೇಶಪೂರ್ವಕವಾಗಿಯೋ ಇದಕ್ಕೆ ಜೋತು ಬೀಳುತ್ತಾರೆ. ವಿಪರ್ಯಾಸವೆಂದರೆ, ಭ್ರಷ್ಟಾಚಾರವನ್ನು ಅಸಾಮರ್ಥ್ಯದೊಂದಿಗೂ, ಅಸಾಮರ್ಥ್ಯವನ್ನು ಮೀಸಲಾತಿಯೊಂದಿಗೂ, ಮೀಸಲಾತಿಯನ್ನು ಮೇಲ್ಜಾತಿ ವಿರೋಧಿ ರಾಜಕಾರಣದೊಂದಿಗೂ ಚಕಚಕನೆ ಜೋಡಿಸಿ ಬಿಡುವ ದುರಾಲೋಚನಾ ಪ್ರವಾಹವೊಂದನ್ನು ಈ ದೇಶದಲ್ಲಿ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ.

ಈ ಪ್ರವಾಹದ ಚಾಲಕಶಕ್ತಿಯಾಗಿರುವ ವರ್ಗವು ಯಾವುದೇ ಬಗೆಯ ಸಾಮಾಜಿಕ ಅಸಮಾನತೆಯ ಬಗ್ಗೆ ಅಪ್ಪಿತಪ್ಪಿಯೂ ಬಾಯಿಬಿಡುವುದಿಲ್ಲ, ಬದಲಿಗೆ, ಭ್ರಷ್ಟಾಚಾರದ ಬಗ್ಗೆ ಮಾತ್ರ ಉದ್ದುದ್ದ ಭಾಷಣ ಬಿಡುತ್ತದೆ. ನಿರುದ್ಯೋಗ, ಕುಸಿದಿರುವ ಆರ್ಥಿಕತೆ, ಹೆಚ್ಚುತ್ತಿರುವ ಸಾಮಾಜಿಕ ಉದ್ವಿಗ್ನತೆ, ಕಂದಾಚಾರ, ಮೌಢ್ಯಗಳ ವಿರುದ್ಧ ಇದಕ್ಕೆ ಪ್ರತಿಭಟಿಸುವ ಇರಾದೆ ಇರುವುದಿಲ್ಲ. ಮತೀಯವಾದದ ಬಗ್ಗೆಯಂತೂ ತುಟಿ ಬಿಚ್ಚುವುದೇ ಇಲ್ಲ. ಹೀಗಾಗಿಯೇ ಈ ಬಗೆಯ ಹೋರಾಟಗಳು ಬಹುತೇಕ ಬಾರಿ ಸಂವಿಧಾನ ವಿರೋಧಿಗಳಿಗೆ ಶಕ್ತಿಯನ್ನು ತುಂಬಿವೆ!

ಅಂದಹಾಗೆ, ಕೊನೆಯದಾಗಿ, ಕಾಶ್ಮೀರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ತಿಂಗಳುಗಟ್ಟಲೆ ಮೊಬೈಲ್ ಹಾಗೂ ಇಂಟರ್ನೆಟ್‌ ಸೇವೆಗಳನ್ನು ಬಂದ್‌ ಮಾಡಿದ್ದನ್ನು ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ ದೆಹಲಿಯಲ್ಲಿ ಸಾಲು ಸಾಲು ಹೆಣಗಳು ಉರುಳಿದರೂ ಇಂತಹ ನಿರ್ಧಾರ ಕೈಗೊಳ್ಳಲಿಲ್ಲ! ಕೇವಲ ಒಂದು ವಾರ ಕಾಲವಾದರೂ ದೆಹಲಿಯಲ್ಲಿ ಮೊಬೈಲ್‌ ಹಾಗೂ ಇಂಟರ್‌ನೆಟ್‌ ಸೇವೆಗಳನ್ನು ಕೇಂದ್ರ ಸರ್ಕಾರ ಬಂದ್‌ ಮಾಡಲಿಲ್ಲವೇಕೆ? ಮೊದಲೇ ಕುಸಿದು ಕೂತಿರುವ ಅರ್ಥಿಕತೆಯ ಈ ಸಂದರ್ಭದಲ್ಲಿ ದೇಶದ ಯಾವುದೇ ಮೊಟ್ರೋ ನಗರಿಯಲ್ಲಿ ಇಂಟರ್ನೆಟ್‌ ಸೇವೆಯನ್ನು ಬ್ಯಾನ್‌ ಮಾಡುವುದು ಕೇಂದ್ರ ಸರ್ಕಾರಕ್ಕೆ ಸಾಧ್ಯವೇ? ಇಲ್ಲ. ಕಾಶ್ಮೀರದ ಪ್ರಯೋಗವನ್ನೇನಾದರೂ ದೇಶದ ಇತರೆಡೆ ಮಾಡಿದರೆ ಅದರಿಂದ ದೇಶದ ಆರ್ಥಿಕತೆಗೆ ಎಂತಹ ಹೊಡೆತ ಬೀಳಬಹುದು ಎನ್ನುವುದು ಅದಕ್ಕೆ ಗೊತ್ತು. ಹಾಗಾಗಿಯೇ ಅಂತಹ ದುಸ್ಸಾಹಸಕ್ಕೆ ಕೈ ಹಾಕಲು ಹೋಗುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಪ್ರಜಾಪ್ರಭುತ್ವ: ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಹೊಣೆಗಾರಿಕೆ

Published

on

~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಮುನ್ನೋಟ: ಜೀವನಕ್ರಮವಾಗಿ ಪ್ರಜಾಪ್ರಭುತ್ವ

ಪ್ರಜಾಪ್ರಭುತ್ವವು ಕೇವಲ ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣಾ ಪ್ರಕ್ರಿಯೆಯಲ್ಲ; ಅದು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಎತ್ತಿಹಿಡಿಯುವ ಒಂದು ಉದಾತ್ತ ಜೀವನಕ್ರಮ. ಸೈದ್ಧಾಂತಿಕವಾಗಿ ಪ್ರಜಾಪ್ರಭುತ್ವವು ‘ನಿಷ್ಪಕ್ಷಪಾತ’ ಮನೋಭಾವವನ್ನು ಪ್ರತಿಪಾದಿಸುತ್ತದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವವು ಕೇವಲ ಕಾಗದದ ಮೇಲಿನ ವಾಕ್ಯವಾಗದೆ, ಹುಟ್ಟಿನಿಂದ ಹೇರಲ್ಪಟ್ಟ ಶ್ರೇಣೀಕೃತ ವ್ಯವಸ್ಥೆಯ ಗೋಡೆಗಳನ್ನು ಕೆಡವುವ ಶಕ್ತಿಯಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ದೇಶದ ಅತ್ಯುನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಾನಕ್ಕೇರಲು ಸಾಧ್ಯವಿರುವುದು ಈ ವ್ಯವಸ್ಥೆಯ ಅತಿದೊಡ್ಡ ಯಶಸ್ಸು.

ಸಾಮಾಜಿಕ ನ್ಯಾಯ ಮತ್ತು ಸಾಂವಿಧಾನಿಕ ಬಲ

ಸಾಮಾಜಿಕ ನ್ಯಾಯವು ಪ್ರಜಾಪ್ರಭುತ್ವದ ಅಂತರಾತ್ಮವಿದ್ದಂತೆ. ಐತಿಹಾಸಿಕವಾಗಿ ಶೋಷಣೆಗೆ ಒಳಗಾದ ಸಮುದಾಯಗಳಿಂದ ಬಂದ ವ್ಯಕ್ತಿಗಳು ನಾಯಕತ್ವದ ಸ್ಥಾನಕ್ಕೇರುವುದು ಹೊರನೋಟಕ್ಕೆ ಒಂದು ಪವಾಡದಂತೆ ಭಾಸವಾಗಬಹುದು. ಆದರೆ, ವಾಸ್ತವದಲ್ಲಿ ಇದು ಸಂವಿಧಾನ ನೀಡಿರುವ ‘ಮತದಾನದ ಹಕ್ಕು’ ಮತ್ತು ‘ಪ್ರಾತಿನಿಧ್ಯದ ಅವಕಾಶ’ಗಳ ಫಲಶೃತಿಯಾಗಿದೆ. ಪ್ರಜಾಪ್ರಭುತ್ವವು ಕೇವಲ ಬಹುಮತದ ಆಡಳಿತವಲ್ಲ, ಬದಲಿಗೆ ಅಲ್ಪಸಂಖ್ಯಾತ ಮತ್ತು ದಮನಿತ ಧ್ವನಿಗಳಿಗೂ ನೀತಿ ನಿರೂಪಣೆಯಲ್ಲಿ ಸಮಾನ ವೇದಿಕೆ ಕಲ್ಪಿಸುವ ಒಳಗೊಳ್ಳುವಿಕೆಯ (Inclusion) ಪ್ರಕ್ರಿಯೆಯಾಗಿದೆ. ಅಧಿಕಾರವು ಕೆಲವೇ ಜನರ ಕೈಯಲ್ಲಿ ಕೇಂದ್ರಿಕೃತವಾಗದೆ, ವಿಕೇಂದ್ರೀಕರಣದ ಮೂಲಕ ಸಾಮಾನ್ಯ ಜನರಿಗೂ ತಲುಪಿದಾಗ ಮಾತ್ರ ಪ್ರಜಾಪ್ರಭುತ್ವದ ಆಶಯ ಸಾಕಾರಗೊಳ್ಳುತ್ತದೆ.

ನಾಯಕತ್ವದ ನೈತಿಕತೆ ಮತ್ತು ಸಾಂವಿಧಾನಿಕ ಬದ್ಧತೆ

ಪ್ರಜಾಪ್ರಭುತ್ವದ ಅತ್ಯಂತ ನಿರ್ಣಾಯಕ ಅಂಶವೆಂದರೆ ಅಧಿಕಾರವನ್ನು ಪಡೆದವರ ನೈತಿಕ ನಡೆ. ಪ್ರಜಾಪ್ರಭುತ್ವದ ಒತ್ತಾಸೆಯಿಂದ ಅವಕಾಶ ಮತ್ತು ಅಧಿಕಾರವನ್ನು ಪಡೆಯುವ ಪ್ರತಿಯೊಬ್ಬರೂ ಪ್ರಜಾಸತ್ತಾತ್ಮಕ ನಿಲುವುಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸುವ ನೈತಿಕತೆಯನ್ನು ಹೊಂದಿರಬೇಕಾಗುತ್ತದೆ. ಅಧಿಕಾರವು ಒಂದು ಸೌಲಭ್ಯವಲ್ಲ, ಅದೊಂದು ಜವಾಬ್ದಾರಿ. ಯಾವ ವ್ಯವಸ್ಥೆಯು ಒಬ್ಬ ವ್ಯಕ್ತಿಯನ್ನು ಸಾಮಾನ್ಯ ಸ್ಥಿತಿಯಿಂದ ನಾಯಕತ್ವದ ಸ್ಥಾನಕ್ಕೆ ಏರಿಸುತ್ತದೆಯೋ, ಅದೇ ವ್ಯವಸ್ಥೆಯ ಮೌಲ್ಯಗಳನ್ನು ಎತ್ತಿಹಿಡಿಯುವುದು ಆ ನಾಯಕನ ಪರಮ ಧರ್ಮ. ಸಾಂವಿಧಾನಿಕ ಆಶಯಗಳಿಗೆ ದ್ರೋಹ ಬಗೆಯದೆ, ವೈಯಕ್ತಿಕ ಹಿತಾಸಕ್ತಿಗಿಂತ ಜನಹಿತವೇ ದೊಡ್ಡದು ಎಂಬ ನಿಲುವು ತಳೆದಾಗ ಮಾತ್ರ ಅಧಿಕಾರಕ್ಕೆ ಸಾರ್ಥಕತೆ ದೊರೆಯುತ್ತದೆ.

ಐತಿಹಾಸಿಕ ಪ್ರೇರಣೆ: ಅಬ್ರಹಾಂ ಲಿಂಕನ್ ಎಂಬ ಮಾದರಿ

ಪ್ರಜಾಪ್ರಭುತ್ವದ ಇತಿಹಾಸವನ್ನು ಚರ್ಚಿಸುವಾಗ ಅಬ್ರಹಾಂ ಲಿಂಕನ್ ಅವರ ಹೆಸರು ಅನಿವಾರ್ಯ. “ಜನರಿಗಾಗಿ, ಜನರಿಂದ, ಜನರಿಗೋಸ್ಕರ” ಎಂಬ ಅವರ ಸರಳ ವ್ಯಾಖ್ಯಾನವು ಜಗತ್ತಿನಾದ್ಯಂತ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಭದ್ರ ಬುನಾದಿ ಹಾಕಿತು. ಒಬ್ಬ ಸಾಮಾನ್ಯ ಹಿನ್ನೆಲೆಯ ವ್ಯಕ್ತಿ ಅಮೆರಿಕದ ಅಧ್ಯಕ್ಷನಾಗಿ ಗುಲಾಮಗಿರಿಯ ವಿರುದ್ಧ ಹೋರಾಡಿದ್ದು, ಪ್ರಜಾಪ್ರಭುತ್ವದ ಗುಣಕ್ಕೆ (Flexibility) ಸಾಕ್ಷಿಯಾಗಿದೆ. ಲಿಂಕನ್ ಅವರ ಹೋರಾಟವು ಮಾನವೀಯತೆ ಮತ್ತು ಸಮಾನತೆಯನ್ನು ಪ್ರಜಾಪ್ರಭುತ್ವದ ಅನಿವಾರ್ಯ ಅಂಗವನ್ನಾಗಿಸಿತು, ಇದು ಇಂದಿಗೂ ಜಾಗತಿಕ ರಾಜಕೀಯಕ್ಕೆ ದಾರಿದೀಪವಾಗಿದೆ.

ಸಿನಿಮಾ, ಸಮಾಜ ಮತ್ತು ರಾಜಕೀಯ ನಾಯಕತ್ವದ ಮನ್ವಂತರ

ತಮಿಳುನಾಡಿನಂತಹ ರಾಜ್ಯಗಳಲ್ಲಿ ರಾಜಕೀಯವು ಯಾವಾಗಲೂ ಸಾಮಾಜಿಕ ನ್ಯಾಯದ ಪ್ರಯೋಗಶಾಲೆಯಾಗಿ ಕಾರ್ಯನಿರ್ವಹಿಸಿದೆ. ದ್ರಾವಿಡ ಚಳವಳಿಯ ಹಿನ್ನೆಲೆಯಲ್ಲಿ ಬೆಳೆದು ಬಂದ ಇಲ್ಲಿನ ರಾಜಕೀಯ ಸಂಸ್ಕೃತಿಯಲ್ಲಿ, ಸಿನಿಮಾ ರಂಗದ ವ್ಯಕ್ತಿಗಳನ್ನು ಕೇವಲ ನಟರನ್ನಾಗಿ ನೋಡದೆ, ತಮ್ಮ ಸಾಮಾಜಿಕ ಆಶೋತ್ತರಗಳನ್ನು ಈಡೇರಿಸುವ ‘ಪ್ರತಿನಿಧಿ’ಗಳಾಗಿ ಜನರು ಸ್ವೀಕರಿಸುತ್ತಾ ಬಂದಿದ್ದಾರೆ. ಇತ್ತೀಚಿನ ವಿದ್ಯಮಾನಗಳಲ್ಲಿ ಸಿ. ಜೋಸೆಫ್ ವಿಜಯ್ (ನಟ ವಿಜಯ್) ಅವರಂತಹ ವ್ಯಕ್ತಿಗಳು ರಾಜಕೀಯ ಪ್ರವೇಶದ ಹಾದಿಯಲ್ಲಿರುವುದು ಈ ಪರಂಪರೆಯ ಮುಂದುವರಿಕೆಯಾಗಿದೆ. ಜನರು ಇಂತಹ ನಾಯಕರಲ್ಲಿ ಒಬ್ಬ ‘ಸ್ಟಾರ್’ಗಿಂತ ಹೆಚ್ಚಾಗಿ, ಶೋಷಿತರ ಪರವಾಗಿ ಧ್ವನಿ ಎತ್ತುವ ಮತ್ತು ಅಧಿಕಾರದ ವಿಕೇಂದ್ರೀಕರಣಕ್ಕೆ ಶ್ರಮಿಸುವ ನಾಯಕತ್ವವನ್ನು ನಿರೀಕ್ಷಿಸುತ್ತಾರೆ.

ಭವಿಷ್ಯದ ಆಶಯ

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಜಾಪ್ರಭುತ್ವವು ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ತನ್ನನ್ನು ತಾನು ರೂಪಿಸಿಕೊಳ್ಳುತ್ತಿದೆ. ಅಧಿಕಾರವು ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವ ಸಾಧನವಾಗಬೇಕೇ ಹೊರತು, ಅದು ಕೇವಲ ಆಡಳಿತ ನಡೆಸುವ ಅಧಿಕಾರವಲ್ಲ. ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಅಧಿಕಾರಸ್ಥರ ನೈತಿಕ ಬದ್ಧತೆಯ ಮೂಲಕ ಮಾತ್ರ ಒಂದು ಸಮಾಜವು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವದ ಯಶಸ್ಸನ್ನು ಸಂಭ್ರಮಿಸಲು ಸಾಧ್ಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

2.5 ಕೋಟಿ ಖರೀದಿಯಲ್ಲಿ ಅವ್ಯವಹಾರ ; ಆಯುಕ್ತೆ ಮಂಜುಶ್ರೀ ಸೇರಿ 6 ಅಧಿಕಾರಿಗಳ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ:ಕಾಲೇಜು ಶಿಕ್ಷಣ ಇಲಾಖೆಯ 19 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಐ.ಡಿ.ಪಿ ಅನುದಾನದ ಅಡಿಯಲ್ಲಿ ನಡೆದಿರುವ ರೂ. 2,59,89,250/-ಗಳ ಖರೀದಿ ವ್ಯವಹಾರದಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆಗೆ ಒಳಪಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಯುಕ್ತೆ ಮಂಜುಶ್ರೀ ಸೇರಿ 6 ಜನ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಐ.ಡಿ.ಪಿ ಅನುದಾನವನ್ನು ಅಗತ್ಯಕ್ಕೆ ಅನುಗುಣವಾಗಿ ಆಯಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರುಗಳೇ ನಿಯಮಾನುಸಾರ ಖರೀದಿ ವ್ಯವಹಾರ ನಡೆಸಬೇಕೆಂಬ ನಿಯಮವಿದ್ದರೂ, ಕಮೀಷನ್ ಆಸೆಗಾಗಿ ಕಾಲೇಜು ಶಿಕ್ಷಣ ಇಲಾಖೆ ಕೇಂದ್ರ ಕಛೇರಿಯ ಅಧಿಕಾರಿಗಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರುಗಳ ಅಧಿಕಾರವನ್ನು ಕಿತ್ತುಕೊಂಡು 2024-25ನೇ ಸಾಲಿನಲ್ಲಿ ರೂ. 2,59,89,250/-ಗಳ ಖರೀದಿ ಪ್ರಕ್ರಿಯೆಗೆ ಮುಂದಾಗಿರುತ್ತಾರೆ. ಐ.ಡಿ.ಪಿ ಅನುದಾನದಲ್ಲಿ 19 ಕಾಲೇಜುಗಳಿಗೆ ಅಗತ್ಯವಿರುವ ಡೆಸ್ಕ್ಟಾಪ್, ಲ್ಯಾಪ್‌ಟಾಪ್, ಯು.ಪಿ.ಎಸ್ ಮತ್ತು ಪ್ರಿಂಟರ್‌ಗಳ ಖರೀದಿಯಲ್ಲಿ ಸಾಕಷ್ಟು ಲೋಪಗಳಿದ್ದು, ನಿಯಮಾನುಸಾರ ಟೆಂಡರ್ ಪ್ರಕ್ರಿಯೆ ನಡೆಸದೆ ಇರುವುದು, ಖರೀದಿಸಿದ ಸಾಮಾಗ್ರಿಗಳಿಗೆ ಮಾರುಕಟ್ಟೆಗಿಂತ ಅಧಿಕ ಬೆಲೆ ನೀಡಿರುವುದು ಸೇರಿ ಹಲವಾರು ಅಂಶಗಳನ್ನು ಗುರುತಿಸಿ ಹೆಚ್ಚಿನ ತನಿಖೆ ನಡೆಸುವಂತೆ ದೂರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಇಷ್ಟೆ ಅಲ್ಲದೆ ಇದೇ ಸಮಯದಲ್ಲಿ ರೂಸಾ ಅನುದಾನದ ಅಡಿಯಲ್ಲಿ ನಡೆದ ಖರೀದಿ ವ್ಯವಹಾರ ಹಾಗೂ ಕಾಲೇಜುಗಳಿಗೆ ವಿಜ್ಞಾನ ಪರಿಕರಗಳ ಖರೀದಿ ವ್ಯವಹಾರವನ್ನು ನಡೆಸಿದ್ದು, ಇದರಲ್ಲಿಯೂ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ನಡೆದಿದ್ದು, ಈ ಎಲ್ಲಾ ಖರೀದಿ ವ್ಯವಹಾರಗಳಲ್ಲಿ ಭಾಗಿಯಾಗಿರುವ ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಡಾ.ಶೋಭಾ ಜಿ, ನಿರ್ದೇಶಕರು. ಶ್ರೀ ಚೇತನ್ ಕುಮಾರ್ ಎನ್, ಲೆಕ್ಕಾಧಿಕಾರಿಗಳು, ಡಾ.ನಂದಿತಾ ಪ್ರಸಾದ್, ಮಾಹಿತಿ ತಂತ್ರಜ್ಞಾನ ಅಧಿಕಾರಿಗಳು. ಡಾ.ಶ್ರೀಕಾಂತ್ ಆರ್, ಸಮನ್ವಯಾಧಿಕಾರಿಗಳು. ಡಾ.ಸುಮ ಎಸ್, ರೂಸಾ ಸಮನ್ವಯಾಧಿಕಾರಿಗಳು ಇವರುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆರೋಪಿಸಿರುವುದಾಗಿ ತಿಳಿಸಿದ್ದಾರೆ.

2023ನೇ ಸಾಲಿನಲ್ಲಿ ಅಂದಾಜು 23 ಕೋಟಿ ರೂಪಾಯಿಗಳ ಖರೀದಿ ವ್ಯವಹಾರವನ್ನು ಕೇಂದ್ರ ಕಛೇರಿಯಿಂದ ನಡೆಸಿದ್ದು, ಇದಕ್ಕೆ ಸಂಬಂಧಿಸಿದ ಅಧಿಕೃತ ಮಾಹಿತಿಯನ್ನು ನೀಡದ ಕಾರಣ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಿಗೆ ದೂರು ನೀಡಿ, ಇಲಾಖಾ ತನಿಖೆ ನಡೆಸುವಂತೆ ಕೋರಲಾಗಿದ್ದು, ನಿಗಧಿತ ಅವಧಿಯಲ್ಲಿ ಯಾವುದೇ ಪ್ರತ್ಯುತ್ತರ ಬಂದಿರುವುದಿಲ್ಲ. ಮುಂದಿನ ದಿನಗಳಲ್ಲಿ ಅಂದಾಜು 23 ಕೋಟಿ ಮೊತ್ತದ ಖರೀದಿ ವ್ಯವಹಾರವನ್ನು ತನಿಖೆ ನಡೆಸುವಂತೆ ದೂರು ನೀಡಲಾಗುವುದು ಎಂಬುದಾಗಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ

Published

on

ಸುದ್ದಿದಿನ,ದಾವಣಗೆರೆ: ಜಿಲ್ಲೆಯ 5 ರಿಂದ 7 ವರ್ಷ ಹಾಗೂ 15 ರಿಂದ 17 ವರ್ಷದ ವಯೋಮಿತಿಯ ಮಕ್ಕಳಿಗೆ ಕಡ್ಡಾಯ ಬಯೋಮೆಟ್ರಿಕ್ ಅಪ್‌ಡೇಟ್ (Mandatory Biometric Update) ಮಾಡಿಸಲು ಜಿಲ್ಲಾಡಳಿತವು ವಿಶೇಷ ಅವಕಾಶ ಕಲ್ಪಿಸಿದೆ. ಜಿಲ್ಲೆಯ ಎಲ್ಲಾ ಆಧಾರ್ ಕೇಂದ್ರಗಳಲ್ಲಿ ಸೆಪ್ಟೆಂಬರ್ 30, 2026 ರವರೆಗೆ ಈ ಸೇವೆಯು ಸಂಪೂರ್ಣ ಉಚಿತವಾಗಿ ಲಭ್ಯವಿರಲಿದೆ.

ಆಧಾರ್ ನಿಯಮಗಳ ಪ್ರಕಾರ, ಮಕ್ಕಳಿಗೆ 5 ಮತ್ತು 15 ವರ್ಷ ತುಂಬಿದಾಗ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸುವುದು ಕಡ್ಡಾಯವಾಗಿದೆ. ಈ ನವೀಕರಣದಿಂದ ಶಾಲಾ ದಾಖಲಾತಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು, ವಿದ್ಯಾರ್ಥಿ ವೇತನ ಹಾಗೂ ಸರ್ಕಾರದ ವಿವಿಧ ಜನಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ.

ಪೋಷಕರು ತಮ್ಮ ಮಕ್ಕಳ ಆಧಾರ್ ಕಾರ್ಡ್ ಮತ್ತು ಪೂರಕ ದಾಖಲೆಗಳೊಂದಿಗೆ ಹತ್ತಿರದ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಜಿಲ್ಲೆಯ ಎಲ್ಲಾ ಪೋಷಕರು ಈ ಜವಾಬ್ದಾರಿಯನ್ನು ಅರಿತು, ನಿಗದಿತ ಅವಧಿಯೊಳಗೆ ತಮ್ಮ ಮಕ್ಕಳ ಆಧಾರ್ ನವೀಕರಿಸುವ ಮೂಲಕ ಸರ್ಕಾರದ ಯೋಜನೆಗಳು ತಲುಪಲು ಸಹಕರಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending