Connect with us

ಸಿನಿ ಸುದ್ದಿ

ಮಲಯಾಳಿ ಮನಸ್ಸುಗಳಲ್ಲಿ ಪ್ರೀತಿ-ಪ್ರೇಮದ ಕಿಡಿ ಹೊತ್ತಿಸಿದ ‘ಮೊಯ್ದಿನ್’..!

Published

on

  • ಶಫಿಕ್ ಅಬ್ಬಾಸ್

1960-70ರ ದಶಕದಲ್ಲಿ ಕೇರಳದ ಕಲ್ಲಿಕೋಟೆ ಜಿಲ್ಲೆಯ ಮುಕ್ಕಂ ಎಂಬ ಊರಿನಲ್ಲಿ ತುಂಬಾ ಆತ್ಮೀಯವಾಗಿದ್ದ ಎರಡು ಕುಟುಂಬದ ಕುಡಿಗಳು ಧರ್ಮವನ್ನೇ ಮೀರಿ ಪ್ರೀತಿಸಿದ್ದರು. ಸಂಪ್ರದಾಯಸ್ಥ ಹಿಂದೂ ಕುಟುಂಬದ ಕಾಂಚನಮಾಲಾ ಹಾಗೂ ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದ ಬಿ.ಪಿ ಮೊಯ್ದಿನ್ ಪ್ರೀತಿಗೆ ಧರ್ಮ ಅಡ್ಡಿಯಾಗಿದ್ದರಲ್ಲಿ ಅಚ್ಚರಿ ಏನೂ ಇಲ್ಲ. ಅಲ್ಲಾಹ್ ಏಸು ಈಶ್ವರನ ಮೇಲಾಣೆ; ಅದು ಲವ್ ಜಿಹಾದ್ ಅಲ್ಲ, ಶುದ್ಧ ಪ್ರೀತಿ. ಪರಸ್ಪರ ಪ್ರೀತಿಯೇ ಅವರ ಜೀವನ ಆಗಿತ್ತು. ಸಂಪ್ರದಾಯಸ್ಥರ ಮನೆಯಲ್ಲಿ ಹುಟ್ಟಿ ಬೆಳೆದಿದ್ದರೂ ಇಬ್ಬರದ್ದು ರೆಬೆಲ್ ಪರ್ಸನಾಲಿಟಿ..

ಪ್ರೀತಿಸುವುದೇ ಅಪರಾಧವಾಗಿದ್ದ ಆ ಕಾಲದಲ್ಲಿ ‘ಹಿಂದೂ-ಮುಸ್ಲಿಂ’ ಪ್ರೀತಿಯನ್ನು ಯಾರಾದರೂ ಒಪ್ಪಿಯಾರೇ? ಕಾಲೇಜು ಕಲೀತಿದ್ದ ಕಾಂಚನಮಾಲಾಗೆ ಗೃಹಬಂಧನದ ಶಿಕ್ಷೆ.. ತನ್ನ ಆಪ್ತ ಮಿತ್ರನ ಮಗಳನ್ನೇ ಪ್ರೀತಿಸಿದ ಕಾರಣಕ್ಕೆ ಮೊಯ್ದಿನ್ ನ ಮುಂಗೋಪಿ ಅಪ್ಪ ತನ್ನ ಕರುಳ ಕುಡಿಯನ್ನೇ ಗುಂಡಿಕ್ಕಿ ಕೊಲ್ಲಲು ಪ್ರಯತ್ನ ಮಾಡಿದ್ದ.

ಮತ್ತೊಮ್ಮೆ 22 ಬಾರಿ ಇರಿದು ಸೀದಾ ಪೊಲೀಸ್ ಠಾಣೆಗೆ ಹೋದ ಮೊಯ್ದಿನ್ ಅಪ್ಪ, ‘ಮಗನನ್ನು ನಾನೇ ಕೊಂದೆ’ ಅಂತ ಶರಣಾಗಿದ್ದ. ಮೊಯ್ದಿನ್ ಪವಾಡದ ರೀತಿ ಬದುಕುಳಿದಿದ್ದ. “ನನಗ್ಯಾರು ಇರಿದಿಲ್ಲ, ನಾನೇ ಬಿದ್ದು ಗಾಯಗೊಂಡೆ” ಎಂದು ಕೋರ್ಟ್ ಕಟಕಟೆಯಲ್ಲಿ ಸುಳ್ಳು ಹೇಳಿ ಶಿಕ್ಷೆಯಿಂದ ಅಪ್ಪನನ್ನು ಪಾರು ಮಾಡಿದ್ದ. ‘ನನ್ನನ್ನು ಕೊಂದರೂ ನಮ್ಮ ಪ್ರೀತಿ ಸಾಯಲ್ಲ’ ಎಂದು ಹಠ ಹಿಡಿದಿದ್ದ ಮೊಯ್ದಿನ್ ಕೊನೆಗೆ ಹುಟ್ಟಿದ ಮನೆಯಿಂದಲೇ ಹೊರದಬ್ಬಲ್ಪಟ್ಟಿದ್ದ.

ಉಲ್ಲಾಟಿಲ್ ಉನ್ನಿ ಮೊಯ್ದಿನ್ ಸಾಹೇಬರ ಮಗ ಮೊಯ್ದಿನ್ ಹಾಗೂ ಕೊಟ್ಟಂಗಲ್ ಅಚ್ಯುತನ್ ಅವರ ಮಗಳು ಕಾಂಚನಮಾಲಾ ಮಧ್ಯೆ ಪ್ರೀತಿಗೆ ಕಿಚ್ಚು ಹಚ್ಚಿದ್ದು ಮುಕ್ಕಂನಲ್ಲಿ ಹರಿಯುವ ಇರುವಂಜಿ ನದಿ. ಈ ನದಿ ದಂಡೆಯಲ್ಲಿ ಪ್ರೇಮ ಹಕ್ಕಿಗಳು ಬರೋಬ್ಬರಿ ಹತ್ತು ವರ್ಷಗಳ ಬಳಿಕ ಮುಖಾಮುಖಿಯಾದಾಗ ಕಣ್ಣುಗಳೇ ಮಾತಾಡಿ ನಿಟ್ಟುಸಿರು ಬಿಟ್ಟಿದ್ದವು.

‘ಇರುವಂಜಿಪುಝ ಹರಿದು ಅರಬ್ಬಿ ಸಮುದ್ರವನ್ನು ಸೇರುವ ಹಾಗೆ ನಾವು ಒಂದು ದಿನ ಜೊತೆಯಾಗಿ ಬಾಳೋದು ಸತ್ಯ’ ಎಂದು ಮೊಯ್ದಿನ್ ಮಾತು ಕೊಟ್ಟಿದ್ದ. ಕಾಂಚನಾಳ ಈ ಸುದೀರ್ಘ ಗೃಹ ಬಂಧನದ ಸಮಯದಲ್ಲಿ ಇಬ್ಬರ ಮಧ್ಯೆ ಪತ್ರ ವ್ಯವಹಾರ ಮಾತ್ರ ನಡೀತಿತ್ತು. ಯಾರಿಗೂ ಗೊತ್ತಾಗಬಾರದೆಂಬ ಕಾರಣಕ್ಕೆ ತನ್ನ ಪ್ರೇಮ ಪತ್ರಕ್ಕೆ ಹೊಸ ಲಿಪಿ ಕಂಡುಹಿಡಿದಿದ್ದಳು ಕಾಂಚನ. ಈ ಜಗತ್ತಿನಲ್ಲಿ ಮೊಯ್ದಿನ್ ಮತ್ತು ಕಾಂಚನಾಳಿಗೆ ಮಾತ್ರ ಓದೋಕೆ ಬರೆಯೋಕೆ ಸಾಧ್ಯವಿರುವ ಲಿಪಿ ಅದು.

ಇರುವಂಜಿ ನದಿ ಹರಿದು ಸಮುದ್ರ ಸೇರಲು ಒಂದಷ್ಟು ದಿನಗಳಾಗುತ್ತೆ ಅಂತ ನಂಬಿಕೊಂಡಿದ್ದ ಈ ಜೋಡಿ ಕಾಯುವಿಕೆಯನ್ನೂ ಪ್ರೀತಿಸಿದ್ದರು. ಪ್ರೀತಿಗೆ ಮನೆಯವರು ಒಪ್ಪುತ್ತಿಲ್ಲ ಎಂಬ ಸಿಟ್ಟಲ್ಲಿ ಈಗಿನ ಜಮಾನದವರಂತೆ ಓಡಿಹೋಗಲಿಲ್ಲ. ಎರಡು ದಶಕಗಳ ಕಾಲ ಮನೆಯವರ ಒಪ್ಪಿಗೆಗಾಗಿ ಕಾದು ಕುಳಿತರು.

ಆದರೆ ಹೆತ್ತವರ ಮನಸು ಬದಲಾಗಲಿಲ್ಲ. ‘ಹುಡುಗಿ ಇಸ್ಲಾಮಿಗೆ ಮತಾಂತರವಾದರೆ ಓಕೆ’ ಎಂಬ ಅಂತಿಮ ಆಯ್ಕೆಯ ಸಂದೇಶ ಅಪ್ಪನ ಕಡೆಯಿಂದ ಬಂದಾಗ “ಆಕೆ ಮತಾಂತರವಾದ ಕ್ಷಣವೇ ನನ್ನ ಪ್ರೀತಿ ಅಂತ್ಯಗೊಳ್ಳುತ್ತೆ” ಎಂಬ ಉದಾತ್ತ ಧರ್ಮ ಸಹಿಷ್ಣುತೆಯ ಸಂದೇಶ ಮೊಯ್ದಿನ್ ಕಡೆಯಿಂದ ರವಾನೆಯಾಗಿತ್ತು.

ಅಪ್ಪ ಕಟ್ಟಾ ಕಾಂಗ್ರೆಸ್ಸಿಗನಾದರೂ ಮಗ ಮೊಯ್ದಿನ್ ಪಕ್ಕಾ ಸೋಷಿಯಲಿಸ್ಟ್. ಪ್ರಜಾ ಸೋಷಿಯಲಿಸ್ಟ್ ಪಕ್ಷಕ್ಕೆ ಕಾಂಗ್ರೆಸ್ ಪಕ್ಷದ ಮೂಗು ಮುಟ್ಟೋಕೂ ಸಾಧ್ಯವಿಲ್ಲ ಎಂದು ಅಪ್ಪ‌ ಮೂದಲಿಸಿದಾಗ ಮುಕ್ಕಂನಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷ ಸಂಘಟಿಸಿ ಕಾಂಗ್ರೆಸಿಗರೇ ಮೂಗು ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ದು ಮೊಯ್ದಿನ್ ಹೆಗ್ಗಳಿಕೆ. ಪಂಚಾಯತ್ ಚುನಾವಣೆಯಲ್ಲಿ ಗೆದ್ದು ಮೊಯ್ದಿನ್ ಜನಪ್ರತಿನಿಧಿಯೂ ಆಗಿದ್ದ.

ಮುಕ್ಕಂ ಮಣ್ಣಿನ ಅಪತ್ಬಾಂದವನಾಗಿದ್ದ ಮೊಯ್ದಿನ್ ಬಹುಮುಖ ಪ್ರತಿಭೆ. ಪತ್ರಕರ್ತ, ಛಾಯಗ್ರಾಹಕ, ಲೇಖಕ, ಪ್ರಕಾಶಕ, ನಿರ್ದೇಶಕ, ನಿರ್ಮಾಪಕ, ಜನನಾಯಕ.. ಉತ್ತಮ ಫುಟ್ಬಾಲ್ ಆಟಗಾರ, ನುರಿತ ಈಜುಗಾರ, ಆಟಗಾರ-ಓಟಗಾರ, ಖಡಕ್ ಹೋರಾಟಗಾರ. ಮುಕ್ಕಂನ ಸಮಸ್ಯೆಗೆ ಪರಿಹಾರ ಬೇಕಾದರೆ ಅಲ್ಲಿ ಮೊಯ್ದಿನ್ ಇರಲೇಬೇಕಿತ್ತು. “ಕೇರಳದ ಹುಡುಗಿಯರು ಪ್ರೀತಿ ಮಾಡಿ ಓಡಿಹೋಗಲು ಕಾರಣಾಗಿರುವ ನಟ”, ಕೇರಳಿಯರ ನೆಚ್ಚಿನ ಸಿನಿಮಾ ಹೀರೋ ಪೃಥ್ವಿರಾಜ್ ಗೂ ಈ ಮೊಯ್ದಿನೇ ರಿಯಲ್ ಹೀರೋ.

60 ದಶಕದ ಪ್ರೀತಿ 80ರ ದಶಕವನ್ನು ದಾಟಿತ್ತು. ದಿನಗಳು ಊರುಳುತ್ತಾನೇ ಇತ್ತು. ಗೃಹಬಂಧನದಲ್ಲಿದ್ದ ಕಾಂಚನ,, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಮೊಯ್ದಿನ್.. ಇಬ್ಬರ ವಯಸ್ಸು 40ರ ಗಡಿ ದಾಟಿತ್ತು. ಆದರೆ ಪರಸ್ಪರ ಪ್ರೀತಿ ಚೂರು ಕಡಿಮೆಯಾಗಿರಲಿಲ್ಲ. ದೂರದಲ್ಲೇ ಇದ್ದು ಗಾಢವಾಗಿ ಪ್ರೀತಿಸುತ್ತಲೇ ಇದ್ದರು.

1982ರ ಮಳೆಗಾಲದ ಸಮಯ. ಆ ದಿನ ಮುಕ್ಕಂನಲ್ಲಿ ಮಳೆಯ ಆರ್ಭಟ ಜೋರಿತ್ತು. ಇರುವಂಜಿ ನದಿಯ ನೀರಿನ ಮಟ್ಟ ಕೂಡ ಏರಿತ್ತು. 10 ಜನರ ಕೆಪಾಸಿಟಿ ಇರುವ ದೋಣಿಯಲ್ಲಿ 30 ಮಂದಿ ತೂರಿಕೊಂಡಿದ್ದರು. ಮುಂದಾಗುವ ಅನಾಹುತದ ಸುಳಿವು ಯಾರಿಗೂ ಇರಲಿಲ್ಲ. ನದಿದಂಡೆಯಿಂದ ಹತ್ತಿಪ್ಪತ್ತು ಮೀಟರ್ ದೂರ ಸಾಗುತ್ತಿದ್ದಂತೆ ದೋಣಿ ಮಗುಚಿ ಬಿತ್ತು. ಮುಕ್ಕಂ‌ನ ಆಪತ್ಬಾಂದವ ಮೊಯ್ದಿನ್ ಶಾಲಾ ಮಕ್ಕಳು, ಮಹಿಳೆಯರು ಸೇರಿದಂತೆ ಮುಳುಗುತ್ತಿದ್ದವರ ರಕ್ಷಣೆಗೆ ಧುಮುಕಿದ್ದ. ಆಳಕ್ಕೆ ಹೋಗಿ ಒಬ್ಬರನ್ನೇ ತಂದು ದಡ ಮುಟ್ಟಿಸುತ್ತಿದ್ದ. “ನನ್ನ ಬಗ್ಗೆ ಚಿಂತೆ ಬಿಡಿ, ಬೇರೆಯವರನ್ನು ನೋಡಿ” ಎಂದು ಹೇಳಿ ಕೊನೆಯದಾಗಿ ಆಳಕ್ಕೆ ಹೋದ ಮೊಯ್ದಿನ್ ಮರಳಿ ಬರಲೇ ಇಲ್ಲ.

ಆಳದಲ್ಲಿದ್ದ ನೀರಿನ ಸುಳಿ ಮೊಯ್ದಿನ್ ನ ಬಲಿ ಪಡೆದಿತ್ತು. ಸಮಾಜಕ್ಕಾಗಿ ತನ್ನ ಜೀವನ ಮುಡುಪಾಗಿಟ್ಟಿದ್ದ ಮೊಯ್ದಿನ್ ಬೇರೆಯವರ ಜೀವ ಉಳಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡಿದ್ದ. ಮೂರು ದಿನಗಳ ಬಳಿಕ ಶವ ಮೇಲೆ ಬಂದಾಗಲೂ ಮುಕ್ಕಂನ ಕಣ್ಣೀರು ಕೊನೆಯಾಗಿರಲಿಲ್ಲ. ಮಳೆಯ ರೂಪದಲ್ಲಿ ಕಣ್ಣೀರು ಸುರಿಸುತ್ತ ಆ ವಿಧಿ ಕೂಡ ಪಶ್ಚತಾಪ ಪಟ್ಟಿತ್ತು. ಆ ಕಾಲದಲ್ಲಿ ಮುಕ್ಕಂನ ಮಣ್ಣಿನಲ್ಲಿ ನಿಂತು ಇಂದಿರಾ ಗಾಂಧಿಯ ನೀತಿಗಳ ವಿರುದ್ಧ ಧಿಕ್ಕಾರ ಕೂಗುತ್ತಿದ್ದ ಮೊಯ್ದಿನ್ ಗೆ 1983ರಲ್ಲಿ ಇಂದಿರಾ ಗಾಂಧಿಯ ಸರ್ಕಾರವೇ ಮರಣೋತ್ತರ ಜೀವನ್ ರಕ್ಷಾ ಪದಕ ನೀಡಿ ಗೌರವಿಸಿತ್ತು.

ಪ್ರಿಯಕರನ ಸಾವಿನ ಸುದ್ದಿ ಕೇಳಿ ಕುಸಿದು ಹೋಗಿದ್ದ ಕಾಂಚನಾಳಿಗೆ, ಮೊಯ್ದಿನ್ ಮುಖ ನೋಡಬೇಕೆಂಬ ಕೊನೆ ಆಸೆಯೂ ಈಡೇರಲಿಲ್ಲ. ಮೊಯ್ದಿನ್ ಸಮಾಧಿಯಾಗುವುದರ ಜೊತೆಯಲ್ಲೇ ಅಪ್ಪಟ ಪ್ರೀತಿಯೊಂದಕ್ಕೆ ಗೋರಿ ಕಟ್ಟಲಾಯಿತು. ಮೊಯ್ದಿನ್ ಇಲ್ಲದ ಜಗತ್ತಿನಲ್ಲಿ ಬದುಕಬೇಕೆಂಬ ಯಾವ ಆಸೆಯೂ ಕಾಂಚನಾಳಿಗೆ ಇರಲಿಲ್ಲ. ಐದು ಬಾರಿ ಆತ್ಮಹತ್ಯೆಗೆ ಯತ್ನಿಸಿದಾಗಲೂ ಮನೆಯವರು ತಡೆಯಾದರು.

ಆರನೇ ಪ್ರಯತ್ನದಲ್ಲಿ ಆಸ್ಪತ್ರೆ ಸೇರಿ ಕಣ್ಣುಬಿಟ್ಟಾಗ ಕಾಂಚನಾಳ ಮುಂದೆ ಮೊಯ್ದಿನ್ ತಾಯಿ ನಿಂತಿದ್ದರು. ಮೊಯ್ದಿನ್-ಕಾಂಚನ ಮದುವೆಯಾಗದಿದ್ದರೂ ಹಿಂದೂ ಹುಡುಗಿಯನ್ನು ವಿಧವಾ ಸೊಸೆಯಾಗಿ ಸ್ವೀಕರಿಸಿದಳು ಮೊಯ್ದಿನ್ ಉಮ್ಮ. ಆತ್ಮಹತ್ಯೆ ನಿರ್ಧಾರದಿಂದ ಹಿಂದೆ ಸರಿದ ಕಾಂಚನ, ಮೃತ ಪ್ರಿಯಕರನ ಮನೆ ಸೇರಿಕೊಂಡಳು. ಹಿಂದೂವಾಗಿದ್ದುಕೊಂಡೇ ಮುಸ್ಲಿಂ ಮನೆಯಲ್ಲಿ ಹೊಸ ಜೀವನ ಶುರು ಮಾಡಿದಳು.

79 ವರ್ಷ ವಯಸ್ಸಿನ ಕಾಂಚನ ಅಮ್ಮ, ಮೊಯ್ದಿನ್ ಎಂಬ ಅಮರ ಪ್ರೇಮಿಯ ನೆನಪಲ್ಲಿ ಈಗಲೂ ಅದೇ ಮನೆಯಲ್ಲಿದ್ದಾರೆ. ಮುಕ್ಕಂನ ಮಳೆಯಲಿ ನಡೆಯುತ್ತ, ಇರುವಂಜಿ ನದಿ ದಂಡೆಯಲ್ಲಿ ವಿಹರಿಸುತ್ತ, ಖಬರಸ್ಥಾನದಲ್ಲಿ ಮೊಯ್ದಿನ್ ಸಮಾಧಿ ಸಂದರ್ಶನ ಮಾಡುತ್ತ ತಮ್ಮ ಪ್ರೀತಿಯನ್ನು ಜೀವಂತವಾಗಿಟ್ಟಿದ್ದಾರೆ ದೇವರ ನಾಡಿನ ಬ್ಯಾಚುಲರ್ ವಿಧವೆ ಕಾಂಚನಮಾಲಾ.

ಇವತ್ತು ಜುಲೈ 15.. ಸರಿಯಾಗಿ 37 ವರ್ಷಗಳ ಹಿಂದೆ ಇದೇ ದಿನದಂದು ಇರುವಂಜಿ ನದಿ ಮೊಯ್ದಿನ್ ಎಂಬ ಮಹಾತ್ಮನನ್ನು ಬಲಿ ಪಡೆದಿತ್ತು. ಮೊಯ್ದಿನ್ ಈ ಜಗತ್ತಿನಲ್ಲಿ ಇಲ್ಲದಿದ್ದರೂ ಆತನ ಪ್ರೀತಿ ಇವತ್ತಿಗೂ ಅಮರ. ಮೊಯ್ದಿನ್ ಹುಟ್ಟಿ ಬೆಳೆದಿದ್ದ ಮನೆ ಈಗ ಮೊಯ್ದಿನ್ ಸೇವಾ ಮಂದಿರವಾಗಿ ಬದಲಾಗಿದೆ. ತನ್ನ ಮನೆಯನ್ನು ಮೊಯ್ದಿನ್ ತಾಯಿ ‘ವಿಧವಾ ಸೊಸೆಗೆ’ ಕೊಟ್ಟು ನಿರ್ಗಮಿಸಿದ್ದರು. ಹಿರಿಯ ಜೀವ ಕಾಂಚನಮಾಲಾ ಸೇವಾ ಮಂದಿರದ ಮೂಲಕ ಮೊಯ್ದಿನ್ ಅರ್ಧದಲ್ಲಿ ಬಿಟ್ಟುಹೋಗಿದ್ದ ಕನಸುಗಳನ್ನು ಪೂರ್ತಿ ಮಾಡುತ್ತಿದ್ದಾರೆ.

“ಜಲಂ ಕೊಂಡು ಮುರಿವೇಟಲ್” (ನೀರಿನಿಂದ ಆಗಿರುವ ಗಾಯ) ಹೆಸರಿನ ಡಾಕ್ಯುಮೆಂಟರಿ ಮೂಲಕ ಈ ಅಮರ ಪ್ರೇಮ ಕತೆಯನ್ನು 2006ರಲ್ಲಿ ಜಗತ್ತಿಗೆ ತಿಳಿಸಿದ ಕೇರಳದ ಪತ್ರಕರ್ತ ವಿಮಲ್, 2015ರಲ್ಲಿ ಇದೇ ರಿಯಲ್ ಸ್ಟೋರಿಯನ್ನು “ಎನ್ನುಂ ನಿಂಡೆ ಮೊಯ್ದಿನ್“( ಎಂದಿಗೂ ನಿನ್ನ ಮೊಯ್ದಿನ್) ಹೆಸರಿನ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ತಂದಿದ್ದರು. ಪೃಥ್ವಿರಾಜ್ ಮತ್ತು ಪಾರ್ವತಿ ಮೆನನ್ ನಟನೆಯ ಈ ಚಿತ್ರ ಮಾಲಿವುಡ್ ಬಾಕ್ಸ್ ಆಫೀಸಿನಲ್ಲಿ ಅಬ್ಬರ ಮಾಡಿತ್ತು. ಈ ಸಿನಿಮಾದ ‘ಮುಕ್ಕತ್ತೆ ಪೆಣ್ಣೆ’ ಹಾಡು ಪ್ರೇಮಿಗಳ ಪಾಲಿಗೆ ಪವಿತ್ರ ಗೀತೆ..

ಅಮರ ಪ್ರೇಮ ಅಂದರೆ ರೋಮಿಯೋ-ಜೂಲಿಯೆಟ್,, ಲೈಲಾ- ಮಜ್ನು, ಸಲೀಂ-ಅನಾರ್ಕಲಿ ಅಂತ ಜಗತ್ತು ನೆನಪು ಮಾಡಬಹುದು. ಆದ್ರೆ ಕೇರಳಕ್ಕೆ ಮಾತ್ರ ಮೊಯ್ದಿನ್- ಕಾಂಚನ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ರೇಣುಕಾಸ್ವಾಮಿ ಕೊಲೆ ಮತ್ತು ಗಂಡುಹೆಣ್ಣಿನ ನಡುವಿನ ಸಂಬಂಧ

Published

on

  • ರಾಜೇಂದ್ರ ಬುರಡಿಕಟ್ಟಿ

ರೇಣುಕಾಸ್ವಾಮಿ ಕೊಲೆ ಕೇಸನ್ನು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುವ ಅನೇಕ ಸ್ನೇಹಿತರು ಈ ಕೇಸಿನಲ್ಲಿ ಮೊದಲನೆಯ ಮತ್ತು ಎರಡನೆಯ ಆರೋಪಿಗಳೆಂದು ಹೆಸರಿಸಲ್ಪಟ್ಟ ದರ್ಶನ್ ಮತ್ತು ಪವಿತ್ರ ಗೌಡ ಅವರ ನಡುವಿನ ಸಂಬಂಧದ ಬಗ್ಗೆ ಅನಗತ್ಯವಾಗಿ ಚರ್ಚಿಸಿ ಪವಿತ್ರಗೌಡ ಅವರನ್ನು ‘ಇಟ್ಟುಕೊಂಡವಳು’ ಇತ್ಯದಿ ಪದಬಳಸಿ ಹಿಯ್ಯಾಳಿಸಿದ್ದಾರೆ.

ಒಂದು ಟಿವಿ ಚಾನೆಲ್ ನವರು ಅವರನ್ನು ‘ಸೆಕೆಂಡ್ ಹ್ಯಾಂಡ್ ಸುಂದರಿ’ ಎಂದೂ ಕರೆದದ್ದು ವರದಿಯಾಗಿದೆ. ಇದನ್ನು ಮಾಡುವ ಹಕ್ಕು ಯಾರಿಗೂ ಇಲ್ಲ. ನಮ್ಮ ವಿರೋಧ ಇರಬೇಕಾದದ್ದು ಅವರು ರೂಪಿಸಿದ್ದಾರೆ ಎನ್ನಲಾದ ಕೊಲೆಯ ಕೇಸಿನ ಬಗ್ಗೆಯೇ ಹೊರತು ಅವರಿಬ್ಬರ ನಡುವಿನ ವೈಯಕ್ತಿಕ ಸಂಬಂಧದ ಬಗ್ಗೆ ಅಲ್ಲ.

ಗಂಡು ಹೆಣ್ಣಿನ ನಡುವಿನ ಸಂಬಂಧ ಎಂಬುದು ಅತ್ಯಂತ ಸಹಜವಾದದ್ದು. ಯಾರಿಗೆ ಯಾರ ಮೇಲೆ ಯಾವಾಗ ಆಕರ್ಷಣೆ ಉಂಟಾಗಿ ಸಂಬಂಧಗಳು ಬೆಸೆದುಕೊಳ್ಳುತ್ತವೆ ಎಂಬುದನ್ನು ಹೇಳಲಾಗದು. ಇದಕ್ಕೆ ‘ನೈತಿಕ’ ‘ಅನೈತಿಕ’ ಎಂಬ ಹಣೆಪಟ್ಟಿ ಹಚ್ಚಿ ಗೌರವಿಸುವ ಅಥವಾ ಅವಹೇಳನ ಮಾಡುವ ಕ್ರಮ ಸರಿಯಾದದ್ದಲ್ಲ. ಪ್ರತಿಯೊಬ್ಬರಿಗೂ ಆಯ್ಕೆಗಳಿರುತ್ತವೆ. ತಮಗೆ ಬೇಕಾದ ಗಂಡನ್ನು ಅಥವಾ ಹೆಣ್ಣನ್ನು ಆಯ್ದುಕೊಳ್ಳುವ ಅವರೊಡನೆ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳುವ ಸ್ವಾತಂತ್ರ್ಯವಿದೆ. ಎಲ್ಲರಿಗೂ ಇದೆ. ಅದನ್ನು ಪ್ರಶ್ನಿಸುವ ಹಕ್ಕು ಇತರರಿಗೆ ಇಲ್ಲ. ಪರಸ್ಪರ ಒಪ್ಪಿತ ಲೈಂಗಿಕ ಸಂಬಂಧವು ದೇಶದ ಕಾನೂನಿನ ಪ್ರಕಾರವೂ ಅಪರಾಧವಲ್ಲ.

ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹಿರಿಯ ಸಾಹಿತಿ ಡಾ. ಶಿವರಾಮ ಕಾರಂತರು ತಮ್ಮ ಅನೇಕ ಕಾದಂಬರಿಗಳ ಮೂಲಕ ಇದಕ್ಕೆ ಸಂಬಂಧಿಸಿದಂತೆ ಒಂದು ತಾತ್ವಿಕತೆಯನ್ನು ನಮಗೆ ರೂಪಿಸಿಕೊಡುತ್ತಾರೆ. ಅದೆಂದರೆ ‘ಲೈಂಗಿಕ ಸುಖ ಎನ್ನುವುದು ಮನುಷ್ಯನ ಬದುಕು ಮನುಷ್ಯನಿಗೆ ನೀಡುವ ಅತ್ಯಂತ ಸುಖದ ಸಂಗತಿಗಳಲ್ಲಿ ಒಂದು. ಅದರಿಂದ ಯಾರೂ ವಂಚಿತರಾಗಬಾರದು. ಪರಸ್ಪರ ಒಪ್ಪಿಕೊಂಡ ಗಂಡು ಹೆಣ್ಣುಗಳ ನಡುವಿನ ಲೈಂಗಿಕ ಸಂಬಂಧದಲ್ಲಿ ಒಂದು ಚೆಲುವು ಇರುತ್ತದೆ. ಇಂತಹ ಒಂದು ಒಳ್ಳೆಯ ಸಂಬಂಧಕ್ಕೆ ಮದುವೆ ಎಂಬುದು ಒಂದು ‘ಪೂರ್ವಾಗತ್ಯ’ವಾಗಬೇಕಿಲ್ಲ. ಗಂಡುಹೆಣ್ಣಿನ ನಡುವಿನ ಒಂದು ಒಳ್ಳೆಯ ಸಂಬಂಧವು ವಿವಾಹದ ಒಳಗೂ ಇರಬಹುದು; ಹೊರಗೂ ಇರಬಹುದು. ಅದೇ ರೀತಿ ಒಂದು ಕೆಟ್ಟ ಸಂಬಂಧವು ವಿವಾಹದ ಒಳಗೂ ಇರಬಹುದು ಹೊರಗೂ ಇರಬಹುದು. ವಿವಾಹದ ಚೌಕಟ್ಟಿನ ಒಳಗಿನ ಒಂದು ಕೆಟ್ಟ ಸಂಬಂಧಕ್ಕಿಂತ ವಿವಾಹದ ಚೌಕಟ್ಟಿನ ಹೊರಗಿನ ಒಳ್ಳೆಯ ಸಂಬಂಧ ಬೆಲೆಯುಳ್ಳದ್ದು.

ಹೀಗಾಗಿ ಯಾರೊಡನೆ ಎಂತಹ ಸಂಬಂಧ ಇಟ್ಟುಕೊಳ್ಳಬೇಕು ಎಂಬುದು ಅವರವರ ವೈಯಕ್ತಿಕ ವಿಚಾರ. ಅದರಲ್ಲಿ ಇತರರು ತಲೆಹಾಕುವುದು ಅವಿವೇಕತನ. ‘ಮದುವೆ ಎಂಬುದು ಏಳೇಳು ಜನ್ಮಗಳ ಸಂಬಂಧ’ ಏನೇ ಆದರೂ ಅದರ ಗೆರೆದಾಟಿ ಬೇರೆಯವರೊಡನೆ ಲೈಂಗಿಕ ಸಂಬಂಧ ಇಟ್ಟುಕೊಳ್ಳಬಾರದು’ ಎನ್ನುವವರು ಹಾಗೆಯೇ ಇರಬಹುದು. ಅದಕ್ಕೂ ಅವರಿಗೆ ಸ್ವಾತಂತ್ರ್ಯವಿದೆ. ಆದರೆ ಮದುವೆಯ ಚೌಕಟ್ಟಿನ ಹೊರಗಿನ ಸಂಬಂಧಗಳನ್ನು ಟೀಕಿಸುವ ಸ್ವಾತಂತ್ರ್ಯ ಹಕ್ಕು ಅವರಿಗಿಲ್ಲ. ಈ ವಿಷಯದಲ್ಲಿ ನಮ್ಮ ಆಲೋಚನಾ ಕ್ರಮ ಸಾಕಷ್ಟು ಬದಲಾಗಬೇಕಿದೆ. ಒಂದು ಗಂಡು ಮತ್ತು ಒಂದು ಹೆಣ್ಣಿನ ನಡುವಿನ ಸಂಬಂಧ ಎಂಥದ್ದೇ ಇರಲಿ ಅದು ಅವರಿಬ್ಬರಿಗೂ ಸಂತೋಷವನ್ನು ಕೊಡುತ್ತಿದ್ದರೆ ಅದನ್ನು ಕಂಡು ನಾವು ಸಂತೋಷ ಪಡಬೇಕೆ ಹೊರತು ಹೊಟ್ಟೆಕಿಚ್ಚು ಪಡಬಾರದು. ಅದನ್ನು ಗೌರವಿಸುವುದನ್ನು ನಾವು ಮೊದಲು ಕಲಿಯಬೇಕು. ಈ ಹಿನ್ನಲೆಯಲ್ಲಿ ನಮ್ಮ ವಿರೋಧವಿರಬೇಕಾದದ್ದು ಅವರಿಬ್ಬರು ಸೇರಿ ವ್ಯಕ್ತಿಯೊಬ್ಬರ ಕೊಲೆಮಾಡಿದ್ದಾರೆ ಎನ್ನಲಾದ ವಿಚಾರಕ್ಕೆ ಹೊರತು ಅವರ ನಡುವಿನ ವೈಯಕ್ತಿಕ ಸಂಬಂಧದ ಬಗ್ಗೆ ಅಲ್ಲ. ಇಂತದ್ದೇ ವಿಚಾರವನ್ನು ಬೇರೆ ರೀತಿಯಲ್ಲಿ ಹೇಳಿರುವ ಸುಹಾಸಿನಿ ಶ್ರೀ Suhasini Shree ಅವರ ಒಂದು ಪೋಸ್ಟನ್ನೂ ಆಸಕ್ತಿ ಇರುವವರು ಗಮನಿಸಬಹುದು.(ರಾಬು (23-06-2024)
(ರಾಜೇಂದ್ರ ಬುರಡಿಕಟ್ಟಿ ಅವರ ಫೇಸ್ ಬುಕ್ ಬರೆಹ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಟ ದರ್ಶನ್ ಪರಪ್ಪನ ಆಗ್ರಹಾರ ಜೈಲು ಪಾಲು

Published

on

ಸುದ್ದಿದಿನಡೆಸ್ಕ್:ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಎರಡನೇ ಆರೋಪಿ ದರ್ಶನ್ ಹಾಗೂ ಇತರೆ ಆರೋಪಿಗಳಾದ ವಿನಯ್, ಪ್ರದೋಷ್, ಧನರಾಜ್‌ಗೆ 13 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವಿಚಾರಣೆ ನಡೆಸಿದ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಜುಲೈ 4 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಹಿನ್ನೆಲೆಯಲ್ಲಿ 2ನೇ ಆರೋಪಿ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳು ಪರಪ್ಪನ ಆಗ್ರಹಾರ ಜೈಲು ಪಾಲಾಗಿದ್ದಾರೆ. ಇದೇ ಪ್ರಕರಣದಲ್ಲಿ ಆರೋಪಿಗಳಾದ ಪವಿತ್ರಾ ಹಾಗೂ ಇತರರಿಗೆ 2 ದಿನಗಳ ಹಿಂದೆಯೇ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಈ ಕ್ಷಣದ ಪ್ರಮುಖ ಸುದ್ದಿಗಳು

Published

on

ರಾಜ್ಯದಲ್ಲಿ ಜರುಗಿದ ಈ ಕ್ಷಣದ ಕೆಲವು ಸುದ್ದಿಗಳ ಪ್ರಮುಖಾಂಶಗಳು ( ಕನ್ನಡ ನ್ಯೂಸ್; ಕನ್ನಡ ಸುದ್ದಿ)

  1. ರಾಜ್ಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸದಿದ್ದರೆ ಕುಡಿಯುವ ನೀರು ಕಲುಷಿತಗೊಳ್ಳುವ ಪ್ರಕರಣ ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾಗಿ ಗ್ರಾಮೀಣ ನೀರು ಸರಬರಾಜು ಇಲಾಖೆಯ ಇಂಜಿನಿಯರ್‌ಗಳು ಕಟ್ಟೆಚ್ಚರ ವಹಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದ್ದಾರೆ.
  2. ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟ ತೆರಿಗೆ ಏರಿಕೆ ಹಾಗೂ ಇತರ ಬೆಲೆ ಏರಿಕೆ ನೀತಿ ವಿರೋಧಿಸಿ ಬಿಜೆಪಿ ಬೆಂಗಳೂರಿನಲ್ಲಿಂದು ವಿಧಾನಸೌಧದವರೆಗೆ ಸೈಕಲ್ ಜಾಥಾ ನಡೆಸಿತು. ಪಕ್ಷದ ಕಚೇರಿಯಿಂದ ವಿಧಾನಸೌಧದವರೆಗೆ ಜಾಥಾದಲ್ಲಿ ಹೊರಟ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.
  3. ಪ್ರತಿಯೊಂದು ವಾಹನಗಳಿಗೆ ಕೇಂದ್ರ ಮೋಟಾರು ವಾಹನ ಕಾಯ್ದೆಯಡಿ ನಮೂದಿಸಿರುವ ಮಾನದಂಡದಂತೆ ಎಲ್‌ಇಡಿ ದೀಪಗಳನ್ನು ಅಳವಡಿಸದಿದ್ದರೆ ವಾಹನಗಳ ಸವಾರರುಗಳ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ತಿಳಿಸಿದ್ದಾರೆ.
  4. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಶುಭ ಕೋರಿದ್ದಾರೆ. ಪ್ರಧಾನಿ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ದೇಶಕ್ಕಾಗಿ ಅಪ್ರತಿಮ ಸೇವೆಯನ್ನು ಸಲ್ಲಿಸುತ್ತಿದ್ದು, ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದ್ದಾರೆ.
  5. ತಮಿಳುನಾಡಿನ ಕಲ್ಲಕುರಿಚಿಯಲ್ಲಿ ನಡೆದ ಕಳ್ಳಬಟ್ಟಿ ಸರಾಯಿ ದುರಂತದಲ್ಲಿ 33 ಮಂದಿ ಮೃತಪಟ್ಟಿದ್ದು, 60ಕ್ಕೂ ಅಧಿಕ ಮಂದಿ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳ್ಳಬಟ್ಟಿ ಸರಾಯಿ ಸೇವಿಸಿ ಅಸ್ವಸ್ಥರಾಗಿದ್ದ ಜನರನ್ನು ಕಲ್ಲಕುರಿಚಿ, ಸೆಲಂ ಮತ್ತು ಪುದುಚೇರಿಯ ಜೆಐಪಿಎಂಇಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
  6. ಕೇಂದ್ರ ಸರ್ಕಾರದ ಆದೇಶದಂತೆ 2019ರ ಏಪ್ರಿಲ್‌ಗಿಂತ ಮುಂಚಿತವಾಗಿ ನೋಂದಣಿಯಾಗಿರುವ ವಾಹನಗಳಿಗೆ ಹೈಸೆಕ್ಯೂರಿಟಿ ನೋಂದಣಿ ಫಲಕ ಅಳವಡಿಕೆ ಗಡುವನ್ನು ರಾಜ್ಯ ಸರ್ಕಾರ ಸೆಪ್ಟೆಂಬರ್ 15ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending