Connect with us

ರಾಜಕೀಯ

ಆ ಮಹಾತ್ಯಾಗಿ ನುಡಿದ ಭವಿಷ್ಯ ಸುಳ್ಳಾಗಲಿಲ್ಲ

Published

on

ಕಾನ್ಷೀರಾಂ ಮತ್ತು ಮಾಯಾವತಿ

ಇಂದು ಅಕ್ಕ ಮಾಯಾವತಿಯವರ 64 ನೇ ಹುಟ್ಟು ಹಬ್ಬ. ಅವರಿಗೆ ಭೀಮ ಶುಭಾಶಯಗಳನ್ನು ಕೋರುತ್ತಾ..

  • ಮಹೇಶ್ ಸರಗೂರು

ಅದು 1977 ರ ಚಳಿಗಾಲದ ಸಮಯ. ದೆಹಲಿಯ ಚಳಿ ಎಂದರೆ ಕೇಳಬೇಕೆ? ಚಳಿ ಎಂದರೆ ಅಂತಿಂಥ ಚಳಿಯಲ್ಲ. ಅತ್ಯಂತ ಭೀಕರವಾದ ಚಳಿ. ನರನಾಡಿಗಳಲ್ಲಿ ನಡುಕ ಹುಟ್ಟಿಸುವ ಚಳಿ.ಇಂತಹ ವಿಪರೀತ ಚಳಿಯ ಅವಧಿಯಲ್ಲೂ ಕಾನ್ಷೀರಾಮ್ ಸಾಹೇಬರು ಬಾಂಸೆಫ್ ಸಂಘಟನೆಯನ್ನು ಹುಟ್ಟುಹಾಕಲು ಹಗಲಿರುಳು ಹೆಣಗುತ್ತಿದ್ದರು.

ಇಂತಹ ಸಮಯದಲ್ಲಿ ಒಂದು ದಿನ ಕಾನ್ಷೀರಾಮ್ ಸಾಹೇಬರು ಮನದಲ್ಲಿ ಅದೇನೋ ಒಂದು ಗಟ್ಟಿ ನಿರ್ಧಾರ ಮಾಡಿಕೊಂಡು ಮೇಲಕ್ಕೆದ್ದರು. ಕಿವಿಗೆ ಮತ್ತು ಕುತ್ತಿಗೆಗೆ ಉಲ್ಲನ್ ಸ್ಕಾರ್ಫ್ ಸುತ್ತಿಕೊಂಡು ಸಹೊದ್ಯೋಗಿಯೊಬ್ಬನನ್ನು ಜೊತೆಗೆ ಕರೆದುಕೊಂಡು ಹೊರನಡೆದರು. ಆಗ ಸಮಯ ರಾತ್ರಿ ಒಂಭತ್ತು ಗಂಟೆ.

ದೆಹಲಿಯ ಬಹುತೇಕ ಜನರು ಆ ಕೊರೆಯುವ ಚಳಿಗೆ ಹೆದರಿಕೊಂಡು, ಬೆಚ್ಚನೆಯ ಹಾಸಿಗೆಯಲ್ಲಿ ಮೈ ತುಂಬಾ ಹೊದ್ದುಕೊಂಡು ಮಲಗಿದ್ದರು. ಇಂತಹ ಸಮಯದಲ್ಲಿ ದೆಹಲಿಯ ಇಂದ್ರಪುರಿ ಪ್ರದೇಶವನ್ನು ಪ್ರವೇಶಿಸಿದ ಕಾನ್ಷೀರಾಮ್ ಸಾಹೇಬರು ಮತ್ತು ಅವರ ಸಹೋದ್ಯೋಗಿ ಇಕ್ಕಟ್ಟಾದ ಓಣಿಯಲ್ಲಿ ನಡೆದು ಮನೆಯೊಂದರ ಬಾಗಿಲು ಬಡಿದರು.

ಅದೇ ತಾನೇ ಊಟ ಮುಗಿಸಿ ಓದುತ್ತಿದ್ದ ಹೆಣ್ಣುಮಗಳೊಬ್ಬಳು ಇಂತಹ ಅಪರಾತ್ರಿಯಲ್ಲಿ ಅದ್ಯಾರು ಬಾಗಿಲು ಬಡಿಯುತ್ತಿರಬಹುದೆಂದು ಯೋಚಿಸುತ್ತಲೇ ಬಾಗಿಲು ತೆರೆದು ನೋಡಿದರೆ ಎದುರಿಗೆ ಕಾನ್ಷೀರಾಮ್ ಸಾಹೇಬರು ನಿಂತಿದ್ದರು.

ಬಾಗಿಲು ತೆರೆದ ಆ ಹೆಣ್ಣು ಮಗಳು ಬೇರಾರೂ ಆಗಿರಲಿಲ್ಲ. ಅವರೇ ಮಾಯಾವತಿ.
ಆಧುನಿಕ ಭಾರತದ ರಾಜಕೀಯ ಇತಿಹಾಸದಲ್ಲಿಯೇ ಅಚ್ಚರಿಯ ಪವಾಡ ಸೃಷ್ಟಿಸಿದ ಆ ಇಬ್ಬರು ಮಹಾಮಹಿಮರು ಒಬ್ಬರಿಗೊಬ್ಬರು ಎದುರುಗೊಂಡ ಮೊದಲ ಕ್ಷಣ ಅದಾಗಿತ್ತು.

ಅಕ್ಕ ಮಾಯಾವತಿಯವರಿಗೆ ಒಂದು ಕ್ಷಣ ಉಸಿರು ನಿಂತಂತಾಯಿತು. ಕಾರಣ ಅಲ್ಲಿ ನಿಂತವರು ವಾಸ್ತವವಾಗಿ ಕಾನ್ಷೀರಾಮ್ ಸಾಹೇಬರಾಗಿದ್ದರೂ ಅವರ ರೂಪ, ಪ್ರತಿರೂಪ ಸಾಕ್ಷಾತ್ ಭಗವಾನ್ ಬುದ್ದನಂತಿತ್ತು. ಭೋಧಿಸತ್ವ ಬಾಬಾಸಾಹೇಬ್ ಅಂಬೇಡ್ಕರ್ ರವರನ್ನು ಹೋಲುತ್ತಿತ್ತು.

ತನ್ನ ಕಣ್ಣನ್ನು ತಾನೇ ನಂಬದಾದ ಮಾಯಾವತಿಯವರು ಸಾವರಿಸಿಕೊಂಡು ಕಾನ್ಷೀರಾಮ್ ಸಾಹೇಬರನ್ನು ಮನೆಯೊಳಗೆ ಬರಮಾಡಿಕೊಂಡರು. ಕಾನ್ಷೀರಾಮ್ ಸಾಹೇಬರ ಆಕಸ್ಮಿಕ ಆಗಮನ ಮಾಯಾವತಿಯವರ ಮನೆಯಲ್ಲಿ ಮಿಂಚಿನ ಸಂಚಾರವನ್ನುಂಟುಮಾಡಿತ್ತು.

ಮಾಯಾವತಿಯವರ ತಂದೆತಾಯಿಗಳು ಗಡಬಡಿಸಿ ಬಂದು, ಆದರದಿಂದ ಸ್ವಾಗತಿಸಿ, ಪರಸ್ಪರ ಕ್ಷೇಮ ಸಮಾಚಾರ ವಿನಿಮಯ ಮಾಡಿಕೊಂಡರು. ಬಾಂಸೆಫ್ ಕೆಲಸದ ಮೂಲಕ ಅದಾಗಲೇ ಉತ್ತರ ಭಾರತದಾದ್ಯಂತ ಮನೆಮಾತಾಗಿದ್ದ ಕಾನ್ಷೀರಾಮ್ ಸಾಹೇಬರು ಇಂತಹ ಅಪರಾತ್ರಿ ಹೊತ್ತಲ್ಲಿ ಮನೆಗೆ ಬಂದಿದ್ದು ಪ್ರಭುದಾಸ್ ದಯಾಳ್ ಮತ್ತು ರಾಮರತಿಯವರಿಗೆ ಬಿಡಿಸಲಾಗದ ಒಗಟಿನಂತಾಗಿತ್ತು. ಏತಕ್ಕೆ ಬಂದಿದ್ದಾರೋ, ಏನು ಸುದ್ದಿ ತಂದಿದ್ದಾರೋ ಎಂಬ ಅಳುಕು ಅವರದಾಗಿತ್ತು.

ಅಂಬೇಡ್ಕರ್ ಆಶಯಗಳಿಗೆ ದ್ರೋಹವೆಸಗಿದ್ದೀರಿ

ಕಾನ್ಷೀರಾಮ್ ಸಾಹೇಬರು ಆ ಅಪರಾತ್ರಿಯಲ್ಲಿ ಮಾಯಾವತಿಯವರನ್ನು ಹುಡುಕಿಕೊಂಡು ಬರಲು ಕಾರಣವೊಂದಿತ್ತು. ಆ ಕಾರಣವೇನೆಂದರೆ, 1977 ರ ಸೆಪ್ಟೆಂಬರ್ ನಲ್ಲಿ ಸರ್ಕಾರದ ವತಿಯಿಂದ ದೆಹಲಿಯ Constitution club ನಲ್ಲಿ ಮೂರು ದಿನಗಳ ಕಾಲ ‘ಜಾತಿ ವಿನಾಶ’ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಅಂದಿನ ಕೇಂದ್ರ ಆರೋಗ್ಯ ಸಚಿವರಾಗಿದ್ದ ಮತ್ತು ಹೆಸರಾಂತ ಸಮಾಜವಾದಿ ನಾಯಕರಾಗಿದ್ದ ರಾಜ್ ನಾರಾಯಣ್ ರವರು ತಮ್ಮ ಭಾಷಣದಲ್ಲಿ ಅವಹೇಳನಕಾರಿಯಾದ ‘ಹರಿಜನ’ ಪದವನ್ನು ಪದೇ ಪದೇ ಬಳಸಿ ಮಾತನಾಡುತ್ತಿದ್ದರು.

ಅಲ್ಲೇ ಹಾಜರಿದ್ದ ಸರ್ಕಾರಿ ಶಿಕ್ಷಕಿ ಮಾಯಾವತಿಯವರು ಎದ್ದು ನಿಂತು ರಾಜ್ ನಾರಾಯಣ್ ರವರನ್ನು ತರಾಟೆಗೆ ತೆಗೆದುಕೊಂಡರು. ಪರಿಶಿಷ್ಟ ಜಾತಿಯವರಿಗೆ ಹರಿಜನರೆಂದು ಕರೆದು ಅಂಬೇಡ್ಕರ್ ಆಶಯಗಳಿಗೆ ದ್ರೋಹವೆಸಗಿದ್ದೀರಿ. ನಿಮ್ಮ ಘನತೆ ಮತ್ತು ಗೌರವಗಳನ್ನು ಮರೆತು ಬೇಜವಾಬ್ದಾರಿಯಿಂದ ಮಾತನಾಡಿದ್ದೀರಿ. ನೀವು ಈ ಕೂಡಲೇ ಬಹಿರಂಗ ಕ್ಷಮೆ ಕೇಳಬೇಕು ಎಂದು ಸಭೆಯಲ್ಲಿ ಕ್ಷಮೆ ಕೇಳಿಸಿ ಎಲ್ಲರ ಗಮನ ಸೆಳೆದಿದ್ದರು. ಈ ಘಟನೆಯಿಂದ ಮಾಯಾವತಿಯವರು ಎಲ್ಲರ ಕೇಂದ್ರ ಬಿಂದುವಾದರು.

ಇದೇ ಸಭೆಯಲ್ಲಿದ್ದ ಕೆಲವು ಬಾಂಸೆಫ್ ಕಾರ್ಯಕರ್ತರು ಮಾಯಾವತಿಯವರ ವಿಷಯವನ್ನು ಕಾನ್ಷೀರಾಮ್ ಸಾಹೇಬರಿಗೆ ವಿವರಿಸಿ, ಮಾಯಾವತಿಯವರು ನಮ್ಮ ಸಂಘಟನೆಯಲ್ಲಿದ್ದರೆ ಬಾಂಸೆಫ್ ಗೆ ಹೆಚ್ಚು ಬಲ ಬರುತ್ತದೆ ಎಂದು ತಿಳಿಸಿದರು. ಬಾಂಸೆಫ್ ಕಾರ್ಯಕರ್ತರ ಮಾತಿನಿಂದ ಉತ್ತೇಜಿತರಾದ ಕಾನ್ಷೀರಾಮ್ ಸಾಹೇಬರು ಮಾಯಾವತಿಯವರ ಅರಿವಿಗೆ ಬಾರದಂತೆ ಅವರ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಮಾಯಾವತಿಯವರ ಚಿಂತನೆಗಳನ್ನು ಗಮನವಿಟ್ಟು ಆಲಿಸಿದರು. ಅದಕ್ಕಾಗಿ ಮಾಯಾವತಿಯವರನ್ನು ಹುಡುಕಿಕೊಂಡು ಬಂದಿದ್ದರು.

ಐಎಎಸ್ ಅಧಿಕಾರಿಯಾಗಿ ಶೋಷಿತ ಜನಾಂಗಗಳ ಸೇವೆ ಮಾಡಬೇಕು

ಕಾನ್ಷೀರಾಮ್ ಸಾಹೇಬರು ಮಾಯಾವತಿಯವರ ಜೊತೆ ಸುಮಾರು ಒಂದು ಗಂಟೆಗಳ ಕಾಲ ಭಾರತದ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಮಹಾತ್ಮ ಜ್ಯೋತಿಭಾಫುಲೆಯವರಿಂದಿಡಿದು ಬಾಬಾಸಾಹೇಬ್ ಅಂಬೇಡ್ಕರ್ ವರೆಗಿನ ಎಲ್ಲಾ ಮಹಾಪುರುಷರ ಹೋರಾಟವನ್ನು ಮತ್ತು ಅದರ ಮುಂದುವರಿಕೆಯ ಮಹತ್ವವನ್ನು ಮನಮುಟ್ಟುವಂತೆ ವಿವರಿಸಿ ಹೇಳಿದರು.

ಇದಾದ ಬಳಿಕ ಮಾಯಾವತಿಯವರ ಜೀವನದ ಆಸೆ ಆಕಾಂಕ್ಷೆಗಳನ್ನು, ದ್ಯೇಯೋದ್ದೇಶಗಳನ್ನು ಕೇಳಿ ತಿಳಿದುಕೊಂಡರು. ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ತಾನು ಐಎಎಸ್ ಅಧಿಕಾರಿಯಾಗಿ ಶೋಷಿತ ಜನಾಂಗಗಳ ಸೇವೆ ಮಾಡಬೇಕು ಎನ್ನುವುದು ನನ್ನ ಗುರಿ ಎಂದು ಮಾಯಾವತಿಯವರು ತಿಳಿಸಿದರು.

ನಂತರ ಹೊರಡುವ ಸಮಯದಲ್ಲಿ ಅಂತಿಮವಾಗಿ ಒಂದು ನಿರ್ಧಾರಕ್ಕೆ ಬಂದ ಕಾನ್ಷೀರಾಮ್ ಸಾಹೇಬರು ” ನೀನು ಅಂದುಕೊಂಡಂತೆ ಖಂಡಿತವಾಗಿ ನೀನು ಐಎಎಸ್ ಅಧಿಕಾರಿ ಆಗಬಹುದು. ಆ ಅರ್ಹತೆ ನಿನಗಿದೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ನೀನು ಅಂದುಕೊಂಡಂತೆ ನಿನ್ನ ಜನರ ಸೇವೆ ಮಾಡುವುದು ಮಾತ್ರ ನಿಮ್ಮಿಂದ ಸಾಧ್ಯವಾಗುವುದಿಲ್ಲ.

ಕಾರಣ, ಒಬ್ಬ ಸರ್ಕಾರಿ ಅಧಿಕಾರಿಯಾಗಿ ನೀನು ಸರಕಾರ ನಡೆಸುವ ರಾಜಕಾರಿಣಿಗಳ ಇಚ್ಚೆಯಂತೆ ನಡೆಯಬೇಕಾಗುತ್ತದೆ. ಶ್ರೀಮಂತರ ನೋಟುಗಳಿಂದ ಬಡವರ ಓಟುಗಳನ್ನು ಖರೀದಿಸುವುದನ್ನೇ ಪ್ರಜಾಪ್ರಭುತ್ವ ಎಂದು ಪರಿಗಣಿಸಿರುವ ಭಾರತದಲ್ಲಿ ರಾಜಕೀಯ ನಾಯಕರ ಯೋಜನೆಗಳು ಮತ್ತು ಯೋಚನೆಗಳು ಜಾರಿಯಾಗುತ್ತವೆಯೇ ಹೊರತು ಐಎಎಸ್ ಅಧಿಕಾರಿಗಳ ಯೋಜನೆಗಳು ಮತ್ತು ಯೋಚನೆಗಳಲ್ಲ.

ಈಗ ನಮ್ಮ ಸಮಾಜದಲ್ಲಿ ಬೇಕಾದಷ್ಟು ಮಂದಿ ಐಎಎಸ್ ಅಧಿಕಾರಿಗಳಿದ್ದಾರೆ. ಆದರೆ ಅವರೆಲ್ಲ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದಾರೆ. ಅವರಿಂದ ಏನನ್ನೂ ನಿರೀಕ್ಷಿಸುವಂತಿಲ್ಲ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಹೀಗಾಗಿ ನಮಗೆ ಬೇಕಾಗಿರುವುದು ಐಎಎಸ್ ಅಧಿಕಾರಿಗಳಲ್ಲ. ರಾಜಕೀಯ ನಾಯಕರು. ಐಎಎಸ್ ಅಧಿಕಾರಿಗಳಿಂದ ಸರಿಯಾಗಿ ಕೆಲಸ ಮಾಡಿಸಬಲ್ಲ, ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಕುಳಿತು ಜನಪರ ಶಾಸನಗಳನ್ನು ರೂಪಿಸಬಲ್ಲ , ಅವುಗಳನ್ನು ಜಾರಿಗೊಳಿಸಬಲ್ಲ ಸಮರ್ಥ ರಾಜಕೀಯ ನಾಯಕರು.

ನಮ್ಮ ಸಮಾಜದಲ್ಲಿ ಇಂಥ ನಾಯಕರ ಕೊರತೆ ಇದೆ. ‌ನೀನು ಆ ಕೊರತೆಯನ್ನು ನೀಗಿಸಬೇಕು. ನಿನ್ನಲ್ಲಿ ಆ ಶಕ್ತಿಯಿದೆ. ನನ್ನ ಮಾತನ್ನು ನೀನು ನಂಬುವುದಾದರೆ, ನಿನ್ನಲ್ಲಿ ಇಂತದ್ದೊಂದು ಬಯಕೆ ಇದ್ದುದಾದರೆ ನಾನು ನಿನ್ನನ್ನು ಅಂಥ ಒಬ್ಬ ಸಮರ್ಥ ನಾಯಕಿಯನ್ನಾಗಿ ತಯಾರು ಮಾಡುತ್ತೇನೆ. ಆಗ ನೂರಾರು ಜನ ಐಎಎಸ್ ಅಧಿಕಾರಿಗಳು ತಮ್ಮ ಫೈಲುಗಳನ್ನು ಹಿಡಿದುಕೊಂಡು ಬಂದು ನಿನ್ನ ಆದೇಶಕ್ಕಾಗಿ ಕಾಯುತ್ತಾರೆ.

ಒಳ್ಳೆಯ ಮತ್ತು ಕೆಟ್ಟ ಕೆಲಸ ಎರಡನ್ನೂ ಮಾಡುವ ಶಕ್ತಿ ಹೊಂದಿರುವ ಐಎಎಸ್ ಅಧಿಕಾರಿಗಳಿಂದ ನೀನು ನಿನ್ನೆಲ್ಲ ಒಳ್ಳೆಯ ಕೆಲಸಗಳನ್ನೇ ಮಾಡಿಸಬಹುದು. ಅದಕ್ಕಾಗಿ ನೀನು ಒಬ್ಬ ಐಎಎಸ್ ಅಧಿಕಾರಿಯಾಗುವ ಬದಲು ಒಬ್ಬ ಸಮರ್ಥ ರಾಜಕೀಯ ನಾಯಕಿಯಾಗುವುದು ಒಳ್ಳೆಯದು. ಯಾವುದಕ್ಕೂ ಯೋಚಿಸಿ ಒಂದು ಸರಿಯಾದ ನಿರ್ಧಾರಕ್ಕೆ ಬಾ… ನೀನು ತೆಗೆದುಕೊಳ್ಳುವ ನಿರ್ಧಾರದಲ್ಲಿ ಬಹುಜನರ ಭವಿಷ್ಯ ಅಡಗಿದೆ ಎಂದು ಹೇಳಿ ಅಲ್ಲಿಂದ ಹೊರಟು ಹೋದರು.

ಮುಂದೆ ನಡೆದಿದ್ದೆಲ್ಲವೂ ನಮ್ಮ ಕಣ್ಣ ಮುಂದಿರುವ ಇತಿಹಾಸ. ನುಡಿದಂತೆ ನಡೆದು, ಯಕಶ್ಚಿತ್ ಶಾಲಾ ಶಿಕ್ಷಕಿಯೊಬ್ಬಳನ್ನು ಉತ್ತರಪ್ರದೇಶದಂತಹ ಅತಿದೊಡ್ಡ ರಾಜ್ಯದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿ, ದೇಶವೇ ಕೊಂಡಾಡುವಂತೆ ಅದ್ಬುತ ಕಾರ್ಯಗಳನ್ನು ಸಾಧಿಸಿ ತೋರಿಸಿದ ಪವಾಡ ಪುರುಷ ಕಾನ್ಷೀರಾಮ್. ಅಂದು ಆ ಮಹಾತ್ಯಾಗಿ ನುಡಿದ ಭವಿಷ್ಯ ಸುಳ್ಳಾಗಲಿಲ್ಲ. ಕಾರಣ, ಮಹಾಜ್ಞಾನಿಗಳ ಮಾತುಗಳು ಸುಳ್ಳಾಗಲು ಸಾದ್ಯವೇ ಇಲ್ಲ..!

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮೆಗಾ ಉದ್ಯೋಗ ಮೇಳ ವಿದ್ಯಾಭ್ಯಾಸದೊಂದಿಗೆ ಕೌಶಲ್ಯತೆಗೂ ಆದ್ಯತೆ ನೀಡಿ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್

Published

on

ಸುದ್ದಿದಿನ,ದಾವಣಗೆರೆ:ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯ ಶಿಕ್ಷಣಕ ಕಲಿಸಬೇಕು. ಯುವ ಜನತೆ ವಿದ್ಯಾರ್ಥಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ಸೋಮವಾರ(ಫೆ.23) ರಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಅಭಿಯಾನ, ಮಹಾನಗರಪಾಲಿಕೆ, ಜಿಲ್ಲಾ ಕೌಶಲ್ಯಾ ಮಿಷನ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು

ಯುವನಿಧಿ ಯೋಜನೆಯಡಿ ರಾಜ್ಯದಲ್ಲಿ 3,62,000 ಅಭ್ಯರ್ಥಿಗಳು ನೋಂದಾಯಿಸಿಕೊAಡಿದ್ದು, ಜಿಲ್ಲೆಯಲ್ಲಿ 10,404 ಪದವಿಧರರು, 226 ಡಿಪ್ಲೋಮ ಆದವರು ಯುವನಿಧಿಯ ಸೌಲಭ್ಯ ಪಡೆಯುತ್ತಿದ್ದಾರೆ. ಇದರಲ್ಲಿ 2326 ಯುವಕ, ಯುವತಿಯರಿಗೆ ಬೇರೆ ಬೇರೆ ಉದ್ಯೋಗ ಮೇಳದಲ್ಲಿ ಉದ್ಯೋಗ ದೊರತಿದೆ. 2024-25ನೇ ಸಾಲಿನಲ್ಲಿ ಸುಮಾರು 33 ಕೋಟಿ, 22 ಲಕ್ಷ ಹಣ ಸಂದಾಯವಾಗಿದೆ. ರಾಜ್ಯದಲ್ಲಿ ಕೌಶಲ್ಯಾಭಿವೃದ್ದಿ ಯೋಜನೆಯಡಿ 17,715 ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದು, 2376 ಅಭ್ಯರ್ಥಿಗಳಿಗೆ ಉದ್ಯೋಗ ದೊರತಿದೆ.

ಜೊತೆಗೆ ಪದವಿ ಉತ್ತೀರ್ಣ ವಿದ್ಯಾರ್ಥಿಗಳು ಸಿವಿಲ್ ಸರ್ವಿಸಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಒಟ್ಟಾರೆ ಯುವಜನತೆಗೆ ಐಎಎಸ್, ಕೆಎಎಸ್ ಈ ರೀತಿಯ ಉದ್ಯೋಗಾವಕಾಶಗಳು ಸಿಗುವಂತಾಗಲು ಎಸ್‌ಎಸ್ ಕೇರ್ ಟ್ರಸ್ಟ್ ನಿಂದ ತರಬೇತಿ ನೀಡಲಾಗುತ್ತಿದೆ.

ಯುವಕರು ಸ್ಕೂಲ್, ಕಾಲೇಜ್‌ಗೆ ಬಂದಾಗ ಅಲ್ಲಿರುವಂತಹ ವಿದ್ಯಾರ್ಥಿಗಳು ಸ್ಪೋರ್ಟ್ಸ್, ಕಲ್ಚರಲ್ ಆಕ್ಟಿವಿಟೀಸ್, ಜೊತೆಗೆ ಆನ್‌ಲೈನ್ ಕೋರ್ಸ್ಗಳಲ್ಲಿ ಭಾಗವಹಿಸಬೇಕು.
ಯಾವುದೇ ಕಂಪನಿಯ ಲಿಖಿತ ಪರೀಕ್ಷೆಗೆ ಹಾಜರಾದಾಗ ನಿಮ್ಮಲ್ಲಿ ಏನು ಲೋಪದೋಷ ಹೇಳಿದ್ರು, ಯಾವ ರೀತಿ ನೀವು ಮತ್ತೊಮ್ಮೆ ನಿಮ್ಮ ತಪ್ಪನ್ನು ಸರಿ ಮಾಡಿಕೊಳ್ಳಬಹುದು ಎನ್ನುವುದನ್ನು ಅರಿತು ಸಂದರ್ಶನ ಎದುರಿಸಬೇಕೆಂದರು.
ಉದ್ಯೋಗ ಮೇಳದಲ್ಲಿ ನೀಡಿದ ಪ್ರಮಾಣ ಪತ್ರ ಪಡೆದು ಆಯ್ಕೆಯಾದ ಕಂಪನಿಗೆ ವರದಿ ಮಾಡಿಕೊಳ್ಳಲು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಮಾತನಾಡಿ ಎಲ್ಲರಿಗೂ ಸರ್ಕಾರವೇ ಉದ್ಯೋಗ ನೀಡಲು ಆಗುವುದಿಲ್ಲ. ಜನರು ಸ್ವಯಂ ಬದುಕು ಕಟ್ಟಿಕೊಂಡು, ಉದ್ಯೋಗದಾತರಾಗಿ ಹೊರಹೊಮ್ಮಬೇಕು. ಶಿಕ್ಷಣ, ಜ್ಞಾನದ ಜೊತೆ ಕೌಶಲ್ಯತೆ ರೂಢಿಸಿಕೊಳ್ಳಬೇಕು. ಒಂದು ದೇಶದ ಪ್ರಗತಿ ಹಾಗೂ ಅಭಿವದ್ಧಿಗೆ ಯುವ ಶಕ್ತಿ ಪ್ರಮುಖವಾಗಿದ್ದು, ಉದ್ಯೋಗ ಮೇಳದಿಂದ ಯುವಕರಿಗೆ ಹೆಚ್ಚು ಲಾಭ ದೊರೆಯಲಿದೆ. ಇದರಿಂದ ಬದುಕು ಕಟ್ಟಿಕೊಂಡು ಯಶಸ್ಸು ಗಳಿಸಲು ಶ್ರಮಿಸಬೇಕು ಎಂದರು. ಯುವಕರು ದೇಶದ ಸಂಪತ್ತು. ಪ್ರತಿಯೊಬ್ಬರೂ ಯಾವುದಾದರೂ ಒಂದು ವೃತ್ತಿ ಮಾಡಬೇಕು. ಇದರಿಂದ ನಿಮ್ಮ ಭವಿಷ್ಯ ಉತ್ತಮವಾಗುತ್ತದೆ ಎಂದರು.

ಉದ್ಯೋಗದಾತ ಕಂಪನಿಗಳು ಕಾಲೇಜು ಆವರಣದಲ್ಲೇ ಮೇಳ ಆಯೋಜಿಸಿ, ಅಭ್ಯರ್ಥಿಗಳ ಸಂದರ್ಶನ ನಡೆಸಿ, ಅರ್ಹರಿಗೆ ಉದ್ಯೋಗ ನೀಡುತ್ತಿವೆ. ಇದು ವಿದ್ಯಾವಂತ ಬಡ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ ಎಂದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಕರು ಕೇವಲ ಪದವಿ ಪಡೆದರೆ ಸಾಲದು, ತಾಂತ್ರಿಕ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಬದ್ಧತೆ, ಸಮಯಪ್ರಜ್ಞೆ ಮತ್ತು ಆತ್ಮವಿಶ್ವಾಸವಿದ್ದರೆ ಯಾವುದೇ ಉದ್ಯೋಗವನ್ನು ಪಡೆಯಬಹುದು ಎಂದು ಯುವಜನತೆಗೆ ಕರೆ ನೀಡಿದರು. ತರಬೇತಿಯು ಹೆಚ್ಚು ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಯಶಸ್ವಿಯಾಗಿವೆ ಎಂದು ಅವರು ತಿಳಿಸಿದರು.

ಮೋನಿಕಾ, ಚಂದನಾ, ಸಿಂಚನಾ, ಸುಶೀಲಾ, ವಿನೂತ, ಸಾನಿಯಾ, ಶರತ್, ಅಶ್ವಿನಿ ಇನ್ನೂ ಕೆಲವು ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಆದೇಶ ಪ್ರತಿಯನ್ನು ನೀಡಿದರು.

ಮೇಳದ ಪ್ರಮುಖ ಅಂಕಿ-ಅAಶಗಳು: ಭಾಗವಹಿಸಿದ ಕಂಪನಿಗಳು: 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು, 61 ವಿಶೇಷ ಚೇತನ ಅಭ್ಯರ್ಥಿಗಳು ಒಳಗೊಂಡು 1944 ಉದ್ಯೋಗಾಕಾಂಕ್ಷಿಗಳು, ಆಯ್ಕೆ ಹಂತ ತಲುಪಿದವರು: 421 ಅಭ್ಯರ್ಥಿಗಳು, ಸ್ಥಳದಲ್ಲೇ ನೇಮಕಾತಿ: 421 ಅಭ್ಯರ್ಥಿಗಳಿಗೆ ಅಂತಿಮ ನೇಮಕಾತಿ ಆದೇಶ ಪಡೆದಿರುತ್ತಾರೆ. ಹಾಗೂ 555 ಅಭ್ಯರ್ಥಿಗಳು ಶಾರ್ಟ್ ಲಿಸ್ಟ್ ಆಗಿ 2ನೇ ಹಂತದ ಸಂದರ್ಶನ ಅರ್ಹತೆ ಪಡೆದಿರುತ್ತಾರೆ.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್‌ರಾವ್ ಪ್ರಾಸ್ತವಿಕ ನುಡಿಗಳಾನ್ನಾಡಿದರು.

ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಕೌಸರ್ ರೇಷ್ಮಾ, ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಬಸವರಾಜ.ಟಿ.ಶಾಮನೂರು, ಉಪಾಧ್ಯಕ್ಷರಾದ ಮಂಜಣ್ಣ, ಪ್ರಾಂಶುಪಾಲರಾದ ಬಸವರಾಜ ತಹಶೀಲ್ದಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ಜಿ.ಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕಂದಾಯ ಹಕ್ಕು ಪತ್ರ ಮತ್ತು ಪಾವತಿ ಆಂದೋಲನ

Published

on

ಸುದ್ದಿದಿನ,ದಾವಣಗೆರೆ:ಜಿಲ್ಲೆಯಲ್ಲಿ 298 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದ್ದು, ಈಗಾಗಲೇ 12,000ಕ್ಕೂ ಹೆಚ್ಚು ಹಕ್ಕು ಪತ್ರಗಳನ್ನು ವಿತರಿಸಲಾಗಿದ್ದು, ಬಾಕಿ ಇರುವವರು ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.

ಗುರುವಾರ(ಫೆ.19) ರಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅಲ್ಲದೆ, ಮೃತಪಟ್ಟ ರೈತರ ಹೆಸರಿರುವ ಪಹಣಿಗಳನ್ನು ವಾರಸುದಾರರ ಹೆಸರಿಗೆ ಸುಮಾರು 24000 ಪೌತಿ ಖಾತೆಗಳನ್ನು ಬದಲಾಯಿಸಲಾಗಿದ್ದು, ಪೌತಿ ಆಂದೋಲನವನ್ನು ಸಹ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ ಜಮೀನು ಮಂಜೂರು ಆಗಿ ಪೋಡಿ ಆಗದೇ ಪ್ರತ್ಯೇಕ ಪಹಣಿ ಬರದೇ ಇರುವುದರಿಂದ ಅಂತಹವುಗಳನ್ನು ಗೈರು ವಿಲೇ ಕಡತವನ್ನು ಮಾಡಲಾಗಿದ್ದು, ಸುಮಾರು 4000 ಜನರಿಗೆ ಈ ಗೈರು ವಿಲೇ ಕಡತವನ್ನು ನೀಡಲಾಗಿದೆ. ರಾಜ್ಯದಲ್ಲಿ ನಮ್ಮ ಜಿಲ್ಲೆಯೂ 3ನೇ ಸ್ಥಾನವನ್ನು ಹೊಂದಲಾಗಿದೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣ | ಭದ್ರಾ ನಾಲೆ ನೀರು ನಿರ್ವಹಣೆ

Published

on

ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.

ಗುರುವಾರ(ಫೆ.19) ರಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಾಲೆಯ ಕೊನೆಯ ಭಾಗದ ರೈತರಿಗೆ ನೀರು ತಲುಪಿಸಲು ನಾಲೆಯುದ್ದಕ್ಕೂ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಅನಧಿಕೃತವಾಗಿ ನೀರು ಎತ್ತುವವರ ಮೋಟಾರ್‌ಗಳನ್ನು ವಶಪಡಿಸಿಕೊಳ್ಳಲಾಗುವುದು.

ಪ್ರಿಪೇಯ್ಡ್ ಆಟೋಗಳನ್ನು ಚಾಲ್ತಿಗೊಳಿಸಿದ್ದು, ಇದಕ್ಕೆ ರೂ.38/-ಶುಲ್ಕ ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಶೇಖರ್ ಹೆಚ್.ಟಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending