Connect with us

ಅಂತರಂಗ

ಅರಿಮೆಯ ಅರಿವಿರಲಿ-7 : ಕುಮಾರ ಕಾಮ

Published

on

ಚಿತ್ರಕಲೆ : ಹಜರತ್ ಅಲಿ
  • ಯೋಗೇಶ್ ಮಾಸ್ಟರ್

ಹಗ್ಗದ ಕೊನೆಗಳು

ಪ್ರೇಮ ಮತ್ತು ಕಾಮಗಳ ನಡುವೆ ಅದೆಷ್ಟೇ ಅಂತರವನ್ನು ಕಾಯ್ದುಕೊಂಡಿದ್ದರೂ, ಅಥವಾ ವ್ಯತ್ಯಾಸವನ್ನು ಕಂಡುಕೊಂಡಿದ್ದರೂ ಅವೆರಡೂ ಕೆಲವೊಮ್ಮೆ ಬೆರೆತುಕೊಂಡುಬಿಡುತ್ತವೆ. ಕಾರಣ ಈವೆರಡೂ ಒಂದೇ ಹಗ್ಗದ ಎರಡು ಕೊನೆಗಳೇ ಹೊರತು, ಎರಡು ಪ್ರತ್ಯೇಕ ಹಗ್ಗಗಳ ತುಂಡುಗಳಲ್ಲ. ಪ್ರೇಮಿಗಳಲ್ಲೂ ಗಮನಿಸಿ ಪವಿತ್ರ ಪ್ರೇಮದ ಬಗ್ಗೆ ಮಾತಾಡುತ್ತಲೇ, ವೈವಾಹಿಕ ಜೀವನದ ಬಗ್ಗೆ ಕನವರಿಸುತ್ತಲೇ ಹಗ್ಗ ಜಗ್ಗಾಟದಲ್ಲಿ ಯಾವಾಗಲೋ ಒಮ್ಮೆ ಮಧ್ಯದ ಗೆರೆಯನ್ನು ದಾಟುವಂತೆ ಯಾರೋ ಒಬ್ಬರು ಎಳೆದುಬಿಟ್ಟಿರುತ್ತಾರೆ. ಮತ್ತೊಬ್ಬರಲ್ಲೂ ಎಳೆಸಿಕೊಳ್ಳುವ ತವಕ ಗುಪ್ತವಾಗಿರುತ್ತದೆ. ಅದು ಪ್ರವೃತ್ತಿ. ಇದು ಇಲ್ಲವೇ, ಯಾವುದೇ ಕಾರಣದಿಂದ ಹಗ್ಗ ತುಂಡಾಗಿಬಿಟ್ಟಿರುತ್ತದೆ.

ಸರೀ, ಈ ಹಗ್ಗವ್ಯಾವುದು ಗೊತ್ತೇ? ಆನಂದ.
ಇರಲಿ, ಸಧ್ಯಕ್ಕೆ ಇಷ್ಟು ತಿಳಿದುಕೊಳ್ಳೋಣ. ಕಾಮ ಮತ್ತು ಪ್ರೇಮದ ಮೂಲದ್ರವ್ಯ ಆನಂದ. ಕಾಮವೂ ಆನಂದಕ್ಕಾಗಿಯೇ, ಪ್ರೇಮವೂ ಆನಂದಕ್ಕಾಗಿಯೇ. ಪ್ರೇಮಕ್ಕೂ ಮತ್ತು ಕಾಮಕ್ಕೂ ಸಧ್ಯಕ್ಕೆ ಕಣ್ಗಾವಲು ಎಂದರೆ ವ್ಯಕ್ತಿಯ ಪಾತ್ರ, ಹಾಗೂ ನೀತಿಸಂಹಿತೆಯನ್ನು ನೀಡುವುದೆಂದರೆ ಅದು ಹೊಣೆಗಾರಿಕೆ. ಅಂದರೆ ಪ್ರೇಮ ಮತ್ತು ಕಾಮದ ನಿರ್ವಹಣೆಯಲ್ಲಿ ಅಥವಾ ಅನುಭವದಲ್ಲಿ ಶಿಷ್ಟ ಅಥವಾ ಕ್ರಮಬದ್ದ ಸಮಾಜದಲ್ಲಿ ನಿರೀಕ್ಷಿಸಬೇಕಾಗಿರುವುದೇನೆಂದರೆ ಪಾತ್ರವರಿತ ಹೊಣೆಗಾರಿಕೆ ಅಥವಾ ಹೊಣೆಗಾರಿಕೆಯನ್ನರಿತ ಪಾತ್ರ. ಎರಡೂ ಒಂದೇ. ಅಳಿಯ ಅಲ್ಲ ಮಗಳ ಗಂಡ ಅಷ್ಟೇ. ಒಟ್ಟಾರೆ ಈ ಎಚ್ಚರಿಕೆ ಪ್ರೇಮ ಮತ್ತು ಕಾಮವು ದಿಕ್ಕು ದಾರಿ ಮತ್ತು ಗುರಿ ತಪ್ಪದಂತೆ ನೋಡಿಕೊಳ್ಳುತ್ತದೆ.

ಪಾತ್ರನಿರ್ವಹಣೆಯ ಹೊಣೆಗಾರಿಕೆ

ನಾನು ಮತ್ತು ಅವಳು ಇಬ್ಬರೂ ವ್ಯಕ್ತಿಗಳು. ಈ ಇಬ್ಬರ ವ್ಯಕ್ತಿಗಳು ಪರಸ್ಪರ ಯಾವ ಪಾತ್ರಗಳನ್ನು ನಿರ್ವಹಿಸುತ್ತಾ ಸಂಬಂಧಿಸಿಕೊಂಡಿದ್ದೇವೆ? ನಮ್ಮ ನಮ್ಮ ಪಾತ್ರಗಳು ವಿಧಿಸಿಕೊಂಡಿರುವ ಅಥವಾ ವಿಧಿಸಿರುವ ಹೊಣೆಗಾರಿಕೆಯನ್ನು ಸಮರ್ಥವಾಗಿ ಮತ್ತು ಗೊಂದಲ ಅಥವಾ ಸಂಘರ್ಷಗಳಿಲ್ಲದೇ ನಿಭಾಯಿಸಬೇಕೆಂದರೆ ಹಗ್ಗದ ಯಾವ ತುದಿಯನ್ನು ಹಿಡಿದುಕೊಳ್ಳಬೇಕು? ಆನಂದವು ಕ್ಷೋಭೆಗೊಳ್ಳದಿರಲು ಯಾವ ಕ್ರಮವನ್ನು ಪಾಲಿಸಬೇಕು? ಇದೇ ಪಾತ್ರಗಳು ತಮ್ಮ ಹೊಣೆಗಾರಿಕೆಯನುಸಾರವಾಗಿ ತೆಗೆದುಕೊಳ್ಳಬೇಕಾದ ತರಬೇತಿ. ಮಗುವೊಂದಕ್ಕೆ ಸಮಾಜವು ಈ ತರಬೇತಿಯನ್ನು ಭಾವನಾತ್ಮಕವಾಗಿಯೂ, ಮಾನಸಿಕವಾಗಿಯೂ ಹಾಗೂ ಭೌತಿಕವಾಗಿಯೂ ರೂಢಿಗೊಳ್ಳುವಂತೆ ನೀಡುತ್ತದೆ.

ಆದರೆ ಮನುಷ್ಯನು ಹುಟ್ಟುತ್ತಲೇ ತರಬೇತಿಯನ್ನು ಹೊಂದಿಲ್ಲದ ಕಾರಣ ಅವನು ಸ್ವಾಭಾವಿಕವಾಗಿ ನೈಸರ್ಗಿಕ ಪಶುವಿನಂತೆ ಪ್ರವೃತ್ತಿಗಳನ್ನು ಹೊಂದಿರುತ್ತಾನೆ. ಹಾಗಾಗಿಯೇ ತಾಯರಿಮೆ, ತಂದೆಯರಿಮೆ ಇತ್ಯಾದಿ ಅರಿಮೆಗಳು ಸಣ್ಣ ಮಗುವಿದ್ದಾಗ ಕಾಣುತ್ತವೆ, ನಂತರ ಶಿಷ್ಟ ಸಮಾಜದ ತರಬೇತಿಗೆ ಒಳಗಾಗುತ್ತಿದ್ದಂತೆ ಅವು ಮರೆಯಾಗುತ್ತವೆ.ವ್ಯಕ್ತಿಯಿಂದ ವ್ಯಕ್ತಿಗೆ ಕಲಿಕೆಯ ಸಾಮರ್ಥ್ಯದಲ್ಲಿ ವ್ಯತ್ಯಾಸವಿರುವಂತೆ, ಗ್ರಹಣಾಶಕ್ತಿಯಲ್ಲಿ ವ್ಯತ್ಯಾಸಗಳಿರುವಂತೆ, ಮನಸ್ಸೆಂಬ ವಿದ್ಯುತ್ಚಕ್ತಿಯ ಪ್ರವಹಿಸುವಿಕೆಯಲ್ಲಿ ವ್ಯತ್ಯಯವಾಗುವಂತೆ; ಮಾನಸಿಕ ಸ್ಥಿತಿಗಳೂ ಏಕಪ್ರಕಾರವಾಗಿ ನಿರಂತರ ಪ್ರವಹನೆಯಲ್ಲಿರುವುದಿಲ್ಲ. ಯಾವುದ್ಯಾವುದೋ ಪ್ರಭಾವಗಳು, ಪ್ರೇರಣೆಗಳು, ಸ್ಪಂದನೆಗಳು ಒಂದಿಷ್ಟು ಅಷ್ಟು ವ್ಯತ್ಯಾಸಗಳಾಗುವಂತೆ ಮಾಡುತ್ತವೆ. ಅದೇನೂ ಪ್ರಮಾದವಲ್ಲ. ಹಾಗಾಗುವುದು ಸ್ವಾಭಾವಿಕ.

ಆದರೆ, ಈ ವ್ಯತ್ಯಾಸದಲ್ಲೇ ಆನಂದವನ್ನು ಕಂಡುಕೊಂಡು ಅದನ್ನೇ ಗಟ್ಟಿಗೊಳಿಸಿಕೊಂಡುಬಿಟ್ಟರೆ ಕ್ರಮಗೊಳಿಸಿರುವ ಶಿಷ್ಟ ಸಮಾಜದ ವ್ಯವಸ್ಥೆಯು ಶಿಥಿಲಗೊಳ್ಳುವುದು ಮತ್ತು ಗೊಂದಲಗಳೂ ಹಾಗೂ ಸಂಘರ್ಷಗಳೂ ಆಗುವವು. ಹಲವು ಬಗೆಯ ವ್ಯಕ್ತಿಗಳೆಲ್ಲರೂ ಹಲವು ಬಗೆಯ ವ್ಯತ್ಯಾಸಗಳ ಮೇಲೆ ಹಕ್ಕು ಸ್ಥಾಪನೆ ಮಾಡಲು ಹೋದರೆ ಇಡೀ ಕ್ರಮವೇ ಪಲ್ಲಟಗೊಂಡು ಎಲ್ಲವೂ ಅಯೋಮಯವಾಗುವುದೆಂದು ನೈತಿಕ ಚೌಕಟ್ಟನ್ನು ವಿಧಿಸಿರುವುದು. ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ; ಹೀಗೆ ಹಲವು ಪ್ರಕಾರಗಳಲ್ಲಿ ಮನಸ್ಸಿನ ವ್ಯತ್ಯಯಗಳನ್ನು ಅಂಕೆಯಲ್ಲಿಡಲು ಸಾಮಾಜಿಕ ವ್ಯವಸ್ಥೆಯು ಹೆಣಗಾಡುವುದು.

ಇರಲಿ, ಈಗ ನಾವು ಇಷ್ಟರಮಟ್ಟಿಗೆ ಈ ವ್ಯತ್ಯಾಸ ಅಥವಾ ವ್ಯತ್ಯಯಗಳನ್ನು ಕಂಡುಕೊಂಡು ಏನೋ ಒಂದು ಹೈಪೊಥೀಸಿಸ್ ಮಾಡುತ್ತಿದ್ದೇವೆ. ಆದರೆ ಈ ಕ್ರಮವರಿತ ತರಬೇತಿಗಳ ಅಗತ್ಯವನ್ನು ಕಂಡುಕೊಳ್ಳುವ ಮುನ್ನವೂ ನಮ್ಮ ಮಾನವನ ಬದುಕಿತ್ತಲ್ಲಾ! ಆಗಲೂ ಲೈಂಗಿಕ ಚಟುವಟಿಕೆಗಳು ನಡೆಯುತ್ತಿತ್ತಲ್ಲ! ಪ್ರೇಮವೋ, ಕಾಮವೋ ಎಂತದ್ದೋ ಆನಂದವನ್ನು ಪಡೆಯಲು ವ್ಯಕ್ತಿ ವ್ಯಕ್ತಿಗಳ ಸೆಳೆತವಿತ್ತಲ್ಲ! ಅವೆಲ್ಲವೂ ಇವತ್ತಿದ್ದಂತೆಯೇ ಇದ್ದಿರಲು ಸಾಧ್ಯವೇ ಇಲ್ಲ. ಈಗಿರುವುದನ್ನು ಮಾನವ ಸಮಾಜದ ವಯಸ್ಕ ಭಾಗ ಎನ್ನುವುದಾದರೆ ಈ ಮಾನವ ಸಮಾಜಕ್ಕೆ ಬಾಲ್ಯವೂ ಇದ್ದಿರಬೇಕಲ್ಲ?

ಪ್ರೌಢ ಸಮಾಜಕ್ಕೆ ಬಾಲ್ಯವಿಲ್ಲವೇ?

ಆ ಸಮಾಜದ ಬಾಲ್ಯದಲ್ಲಿ ಮನೋಲೈಂಗಿಕ ಸಂಘರ್ಷಗಳು ಇರಲಿಲ್ಲ. ಮನಸ್ಸಿಗೆ ಸಂಘರ್ಷವು ಪ್ರಾರಂಭವಾಗುವುದೇ ಕಟ್ಟುಪಾಡುಗಳಿಗೆ ಒಳಗಾದಾಗ. ಅದಕ್ಕೆ ಮುಕ್ತ ಅಭಿವ್ಯಕ್ತಿ ಸಾಧ್ಯವಾಗದಿದ್ದಾಗ, ಅದರ ಆಸೆ ಮತ್ತು ಅಗತ್ಯಗಳನ್ನು ಸ್ವತಂತ್ರವಾಗಿ ಹಾಗೂ ಸಮರ್ಥವಾಗಿ ಪೂರೈಸಿಕೊಳ್ಳಲು ನಿರ್ಬಂಧಗಳಿದ್ದಾಗ.

ಮಾನವನ ಪ್ರಾರಂಭಿಕ ಸಮುದಾಯದ ಬದುಕಿನಲ್ಲಿ ನಿರ್ಬಂಧಗಳಿರಲಿಲ್ಲ. ಸಂಬಂಧಗಳ ಕಟ್ಟುಪಾಡುಗಳಿರಲಿಲ್ಲ. ಅವನ ಜೀವಿತಕ್ಕೆ ಇದ್ದಂತಹ ಮಾದರಿಯೆಂದರೆ ಅವು ಪ್ರಾಣಿಗಳು. ಪ್ರಾಣಿಗಳ ಬದುಕೇ ನಮ್ಮ ಬದುಕೂ ಆಗಿತ್ತು. ಆ ಪ್ರಾಣಿಗಳಲ್ಲಿ ಅಮ್ಮ, ಅಪ್ಪ, ಅಜ್ಜ, ಅಜ್ಜಿ, ಸೋದರ ಮಾವ, ಅಳಿಯ, ಸೊಸೆ, ಗಂಡ ಹೆಂಡತಿ ಇವೆಲ್ಲವೂ ಇಲ್ಲ. ಈಗ ನಾವು ಗುರುತಿಸಿಕೊಂಡು ಕರೆದರೆ ಅವುಗಳ ಗಂಟೇನೂ ಹೋಗುವುದಿಲ್ಲ. ಅವುಗಳದೇನೂ ಅಭ್ಯಂತರವಿಲ್ಲ. ಆದರೆ ನೀನು ತಾಯಿ ನಾಯಿ, ಮಗನಾಗಿರುವ ನಾಯಿಯ ಜೊತೆ ಸಂಭೋಗ ಮಾಡಬೇಡ ಎಂದರೆ ಅವು ಕೇಳುವುದಿಲ್ಲ. ನೀವಿಬ್ಬರೂ ಸೋದರ ಸೋದರಿಯರು ನೀವಿಬ್ಬರು ಪ್ರೀತಿಸಬಹುದೇ ಹೊರತು ಲೈಂಗಿಕ ಕ್ರಿಯೆ ನಡೆಸಬಾರದು ಎಂಬ ಕಟ್ಟಳೆಯು ಪ್ರಾಣಿಗಳಲ್ಲಿ ಸಮ್ಮತವಿಲ್ಲ.ಅಷ್ಟೇಕೆ ನಮ್ಮ ಚಾರಿತ್ರಿಕ ನೆನಪುಗಳಲ್ಲಿ ಪುರಾತನ ಗ್ರೀಸಿನ ರಾಜಮನೆತನಗಳಲ್ಲಿ ಸೋದರ ಸೋದರಿಯರು ವಿವಾಹವಾಗುತ್ತಿದ್ದರು ಮತ್ತು ಮಕ್ಕಳನ್ನು ಪಡೆಯುತ್ತಿದ್ದರು.

ಜೊಕಾಸ್ಟ ಕಾಂಪ್ಲೆಕ್ಸ್

ತನ್ನ ಮಗುವಿನ ಕುರಿತಾದ ತಾಯಿಯ ಪ್ರೇಮವು ಕಾಮವಾಗಿ ಮಾರ್ಪಾಡಾಗುವುದನ್ನು ಮಗನರಿಮೆ ಅಥವಾ ಜೊಕಾಸ್ಟ ಕಾಂಪ್ಲೆಕ್ಸ್ ಎಂದು ಮನೋವಿಜ್ಞಾನದಲ್ಲಿ ಗುರುತಿಸುತ್ತಾರೆ. ಇದಕ್ಕೆ ಜೊಕಾಸ್ಟ ಕಾಂಪ್ಲೆಕ್ಸ್ ಎನ್ನುವ ಬದಲು ನಾವೂ ನಮ್ಮ ಕನ್ನಡದ ಐತಿಹ್ಯಗಳಲ್ಲಿ ಸಿಗುವಂತಹ ಕಥೆಗಳನ್ನು ಆಧರಿಸಿ ಹೆಸರಿಡಲು ಹೋದರೆ ಕುಮಾರ ಕಾಮ ಎನ್ನಬಹುದು. ಕುಮಾರ ರಾಮನ ಕಥೆಯಲ್ಲಿ ಅವನ ಮಲತಾಯಿಯು ಕುಮಾರ ರಾಮನನ್ನು ಕಾಮಿಸುತ್ತಾಳೆ. ಅದರಂತೆಯೇ ಅದರ ತದ್ರೂಪದ ಕತೆಯಂತಿರುವ ಸತ್ಯವಂತ ಸಾರಂಗಧರನದೂ ಇದೇ ಪ್ರಸಂಗವೇ.

ರಾಮನಗರದ ಕಡೆಗಿರುವ ಜಾನಪದ ಐತಿಹ್ಯ. ಕುಮಾರ ರಾಮನ ತಾಯಿಯಾಗಲಿ, ಅಥವಾ ಸಾರಂಗಧರನ ತಾಯಿಯಾಗಲಿ ಅವರವರ ಮಲತಾಯಿಯರು. ಮಲತಾಯಿಯಾದರೂ ಅವಳ ಪಾತ್ರ ತಾಯಿಯದು. ಹೆತ್ತ ತಾಯಿಯಷ್ಟು ನಿರ್ವಹಿಸಲು ಅಲ್ಲಿ ಅವಕಾಶವಿಲ್ಲವಾದರೂ, ಸಮಾಜದ ನಿರೀಕ್ಷೆ ಮತ್ತು ಅಪೇಕ್ಷೆ ತಾಯಿಯ ಪಾತ್ರವನ್ನು ನಿರ್ವಹಿಸುವುದು.

ಸಮಾಜದ ನಿರೀಕ್ಷೆ ಮತ್ತು ಅಪೇಕ್ಷೆಗಳನ್ನು ಪೂರೈಸಲು ಕೆಲವಷ್ಟು ಪಾತ್ರ ನಿರ್ವಹಣೆ ಮಾಡಲು ಸಾಧ್ಯವಿಲ್ಲದೇ ಹೋಗುವುದಕ್ಕೆ ಅವರದೇ ಆದಂತಹ ಕಾರಣಗಳಿರುತ್ತವೆ. ನಾವು ಬರಿಯ ಶಿಷ್ಟ ಚೌಕಟ್ಟಿನಲ್ಲಿ ಅಳೆದು ಬಸಿದು ಬಿಸಾಡಲಾಗದು. ಕುಮಾರ ರಾಮನ ಅಥವಾ ಸಾರಂಗಧರನ ಮಲತಾಯಿಯರಿಬ್ಬರೂ ವಯಸ್ಸಿನಲ್ಲಿ ಕಿರಿಯರೂ ಮತ್ತು ತಾವು ಮದುವೆಯಾದ ವ್ಯಕ್ತಿಯು ಒಂದು ಹಂತಕ್ಕೆ ವೃದ್ಧನೂ ಆಗಿದ್ದನು. ಜೊತೆಗೆ ಮನುಷ್ಯ ಸ್ವಾಭಾವಿಕವಾಗಿಯೇ ಹೆಚ್ಚೂ ಕಡಿಮೆ ತಮ್ಮದೇ ವಯಸ್ಸಿನ ಮಗನ ಜೊತೆಗೆ ಹಗ್ಗದ ಪ್ರೇಮದ ಕೊನೆಯಿಂದ ಕಾಮದ ಇನ್ನೊಂದು ಕೊನೆಗೆ ಬರುವುದು ವಿಚಿತ್ರವೋ ಅಥವಾ ಅಸಹಜವೋ ಅಲ್ಲ. ಆ ಅಂತರವನ್ನು ಕಾಪಾಡಿಕೊಳ್ಳುವುದು ಅವರ ತರಬೇತಿಯ ಅಥವಾ ರೂಢಿಯ ಸಾಮರ್ಥ್ಯವಷ್ಟೇ ಆಗಿರುತ್ತದೆ.

ಏನೇ ಆಗಲಿ, ಜೊಕಾಸ್ಟಾ ಕಾಂಪ್ಲೆಕ್ಸ್ ಅಥವಾ ಕುಮಾರ ಕಾಮವನ್ನು ಸಿಗ್ಮಂಡ್ ಫ್ರಾಯ್ಡ್ ನಾನಾ ರೀತಿಗಳಲ್ಲಿ ವಿವರಿಸಲು ಯತ್ನಿಸುತ್ತಾರೆ. ಮಗುವು ತಾಯಿಯ ಮೊಲೆ ಹಾಲು ಕುಡಿಯುವಾಗ ತಾಯಿಯು ಲೈಂಗಿಕಾನಂದವನ್ನು ಪಡೆಯುತ್ತಾಳೆ ಎಂದೂ ಹೇಳುತ್ತಾರೆ. ಆದರೆ ನಾನದನ್ನು ಬರಿಯ ಆನಂದಕ್ಕೆ ಸೀಮಿತಗೊಳಿಸಲು ಯತ್ನಿಸುತ್ತೇನೆ. ಫ್ರಾಯ್ಡ್‍ಅಂತೆ ಮೈಯನ್ನೆಲ್ಲಾ ಲಿಂಗಮಯಗೊಳಿಸಿಕೊಳ್ಳುವ ಬದಲು ಆನಂದಮಯಗೊಳಿಸಿಕೊಂಡರೆ ಸರಿ ಹೋಗುವುದು ಎಂಬುದು ನನ್ನ ಅಭಿಪ್ರಾಯ.

ಏಕೆಂದರೆ ಕಾಮ ಅಥವಾ ಆನಂದವೆನ್ನುವುದರ ಮೂಲ ಲಿಂಗ ಮಾತ್ರವಲ್ಲ. ಲಿಂಗವೂ ಕೂಡಾ ಕಾಮುಕತೆಯ ಏಕೈಕ ಮೂಲವಲ್ಲ. ಲಿಂಗದ ಹೊರತಾಗಿ ದೇಹದ ವಿವಿಧ ಭಾಗಗಳು ವಿವಿಧ ವ್ಯಕ್ತಿಗಳಿಗೆ ಲೈಂಗಿಕಾನಂದದ ಸರಕುಗಳೇ ಆಗಿರುತ್ತವೆ. ಅದು ಅವರವರ ಅಭಿರುಚಿ, ಆಸಕ್ತಿ, ಸಮಸ್ಯೆ, ಅರಿಮೆ; ಏನೋ ಒಂದು.
ಹಾಗೆಯೇ ಸಂಬಂಧಗಳಲ್ಲಿ ಬರಿಯ ಆನಂದದ ವಾಸನೆಯನ್ನು ಮಾತ್ರ ಬೆನ್ನತ್ತಿದರೆ ಆಗದು. ಬೇರೆ ಬೇರೆ ಆಯಾಮಗಳೂ ಕೂಡಾ ಸಂಬಂಧಗಳಲ್ಲಿ ಅನಾವರಣಗೊಳ್ಳುತ್ತಿರುತ್ತವೆ. ಕಾರಣಗಳು ಏನೇ ಇರಲಿ ಕಾಂಪ್ಲೆಕ್ಸುಗಳು ಮೂಲದಲ್ಲಿ ಕೆಲಸ ಮಾಡುತ್ತಿರುತ್ತವೆ.

ಬಹುಪತಿ ಪದ್ಧತಿ ಅಥವಾ ಪಾಲಿಯಂಡ್ರಿ

ಹಿಂದೆ ಮಾನವನ ಸಮುದಾಯದ ಬದುಕು ಬಾಲ್ಯಾವಸ್ಥೆಯಲ್ಲಿದ್ದಾಗ ಹೆಣ್ಣೇ ಗುಂಪಿನ ನಾಯಕಿ. ಆ ಹೆಣ್ಣನ್ನು ಇಂದಿನ ಪರಿಭಾಷೆಯಲ್ಲಿ ತಾಯಿ ಎನ್ನುತ್ತೇವೆ. ಅದನ್ನೇ ಉಪಯೋಗಿಸಿದರೆ ವಿಷಯ ಅರ್ಥ ಮಾಡಿಕೊಳ್ಳುವುದು ಸುಲಭ. ಆಗ ತಾಯಿಯು ತನ್ನ ಗುಂಪಿನಲ್ಲಿರುವ ಸಮರ್ಥನನ್ನು ತನ್ನೊಡನೆಯ ಸಂಭೋಗಕ್ಕೆ ಆಯ್ದುಕೊಳ್ಳುತ್ತಿದ್ದಳು. ಅದು ವಿವಾಹ ಪೂರ್ವ ಕಾಲದಲ್ಲಿ. ಸರಿ, ಮದುವೆಯ ವ್ಯವಸ್ಥೆಯು ತಲೆಯೆತ್ತಿದ ಮೇಲೂ ಒಂದು ಹೆಣ್ಣಿಗೆ ಹಲವು ಗಂಡುಗಳನ್ನು ಮದುವೆಯಾಗುವ ಅಧಿಕಾರವಿತ್ತು, ರೂಢಿಯೂ ಬಹಳ ಕಾಲ ಅಸ್ತಿತ್ವದಲ್ಲಿತ್ತು. ಅವಳು ವಿವಾಹಪೂರ್ವ ಕಾಲದಲ್ಲಿ ಗುಂಪಿನ ನಾಯಕಿಯಾಗಿದ್ದಂತೆ ಮದುವೆಯ ವ್ಯವಸ್ಥೆಯ ನಂತರವೂ ಮನೆಯ ಯಜಮಾನಿಯಾಗಿ ಮುಂದುವರಿದು ಸೂಕ್ತವಾದ ಶಿಷ್ಟ ಮಾರ್ಪಾಡುಗಳೊಡನೆ ಮಾತೃ ಪ್ರಧಾನ ಸಮಾಜವು ತಲೆ ಎತ್ತಿತ್ತು.

ಆದರೆ ಒಂದು ಹೆಣ್ಣು ವಿಧವೆಯಾದರೆ ತನ್ನ ಗಂಡನ ತಮ್ಮನನ್ನು ವೈದಿಕರೂ ಸೇರಿದಂತೆ ಹಲವಾರು ಬುಡಕಟ್ಟುಗಳಲ್ಲಿ ರೂಢಿಯಲ್ಲಿತ್ತು. ಇನ್ನೂ ಕೆಲವು ಬುಡಕಟ್ಟುಗಳಲ್ಲಿ ತನ್ನ ಹಿರಿಯ ಮಗನನ್ನು ಮದುವೆಯಾಗುವ ಪದ್ಧತಿಯೂ ನಮ್ಮ ಪ್ರಾಚೀನ ಭಾರತದಲ್ಲಿತ್ತು. ಅನೇಕ ಪುರುಷರನ್ನು ಒಬ್ಬಳು ಮದುವೆಯಾಗುವ ಪದ್ಧತಿಯಂತೂ ನಮ್ಮ ಪ್ರಾಚೀನ ಭಾರತಕ್ಕೆ ಏನೇನೂ ಪರಕೀಯವಾಗಿರಲಿಲ್ಲ. ದ್ರೌಪದಿಯು ಐವರು ಗಂಡಂದಿರ ಮದುವೆಯಾಗಿರುವುದು ಮಹಾಭಾರತದಲ್ಲಿರುವುದರಿಂದ ಅದು ಪ್ರಖ್ಯಾತ ದಾಖಲು. ದ್ರೌಪದಿ ಪಾತ್ರದ ಚಿತ್ರಣವೂ ಕೂಡಾ ಮಹಾಭಾರತದಲ್ಲಿ ಬಲವಾಗಿಯೇ ಇದೆ. ಐದೂ ಜನ ಗಂಡಂದಿರನ್ನು ಅವಳು ತನ್ನ ಅಂಕೆಯಲ್ಲಿಯೇ ಇಟ್ಟುಕೊಂಡಿದ್ದಳು.

ಗಟ್ಟಿತನದಿಂದಲೇ ಅವಳು ವ್ಯಕ್ತಿಗಳನ್ನೂ ಮತ್ತು ಸನ್ನಿವೇಶಗಳನ್ನು ನಿರ್ವಹಿಸುತ್ತಿದ್ದಳು. ಅವಳಲ್ಲಿ ಯಜಮಾನಿಕೆ ಇದೆ. ದ್ರೌಪದಿಯ ಊರು ಪಾಂಚಾಲ ಎಂದು ಹೆಸರಿಸುವುದು ಇಂದಿನ ಹಿಮಾಚಲ ಪ್ರದೇಶದ ಕಿನೌರ್ ಪ್ರಾಂತ್ಯದಲ್ಲಿ. ಉತ್ತರಖಂಡದ ಹಿಮಾಲಯದ ಕೆಳಗಣಿವೆಗಳ ಜೌನ್ಸರ್ ಬವರ್ ಪ್ರದೇಶದಲ್ಲಿ ಪಹಾರಿಗಳೆಂಬ ಜನಾಂಗವಿದೆ. ಅವರಲ್ಲಿಯೂ, ಹಾಗೆಯೇ ಅದರಂತೆಯೇ ದಕ್ಷಿಣ ಭಾರತಕ್ಕೆ ಬಂದರೆ ತೋಡಾ ಬುಡಕಟ್ಟಿನಲ್ಲಿಯೂ ಕೂಡಾ ಬಹುಪತಿ ಪದ್ಧತಿ ರೂಢಿಯಲ್ಲಿತ್ತು. ಹತ್ತೊಬತ್ತನೆಯ ಶತಮಾನದವರೆಗೂ ಕೇರಳದ ಹಲವಾರು ಜಾತಿಗಳಲ್ಲಿ ಇದು ರೂಢಿಯಲ್ಲಿತ್ತು.

1911ರ ಜನಗಣತಿಯಲ್ಲಿ ಇ ಎ ಗೈಟ್ ಟಿಬೇಟಿನಿಂದ ನಮ್ಮ ದಕ್ಷಿಣ ಭಾರತದ ಸಮುದ್ರದ ತುದಿಯವರೆಗೂ ಅನೇಕಾನೇಕ ಬುಡಕಟ್ಟುಗಳಲ್ಲಿ ಬಹುಪತಿ ಅಥವಾ ಪಾಲಿಯಂಡ್ರಿ ಪದ್ಧತಿಯನ್ನು ನಮೂದಿಸುತ್ತಾರೆ.
ಆಸ್ತಿಯ ಹಕ್ಕೂ ಕೂಡಾ ಅವಳಿಗೇ ಇತ್ತು. ಅದನ್ನು ಉಳಿಸಿಕೊಳ್ಳಲು ಮತ್ತು ಸಂಬಂಧವನ್ನೂ ಆಪ್ತಗೊಳಿಸಿಕೊಳ್ಳಲು ವಿವಾಹದ ಸಂಬಂಧಗಳನ್ನೂ ಬೆಳೆಸಿಕೊಳ್ಳುತ್ತಿದ್ದರು. ಹೆಣ್ಣು ತನ್ನ ತವರಿಗೇ ತನ್ನ ಮಗಳನ್ನು ಕೊಡುವುದು, ಅಂದರೆ ತನ್ನ ಸೋದರನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿಕೊಂಡು ತವರಿನಾ ಬಾಂಧವ್ಯವನ್ನು ಉಳಿಸಿಕೊಳ್ಳುವ ಮೂಲದಲ್ಲಿ ಜೊಕಾಸ್ಟಾ ಕಾಂಪ್ಲೆಕ್ಸ್ ಹೊಗೆಯಾಡುತ್ತಿದೆ ಎಂದರೆ ಗಾಬರಿಯಾಗುವ ಅಗತ್ಯವೇನಿಲ್ಲ.
ವರಸೆ ಇದೆ.

ನನ್ನ ಗೆಳೆಯನೊಬ್ಬನಿಗೆ ಅವನ ಅಕ್ಕ ತನ್ನ ಮಗಳನ್ನು ಕೊಡಲು ಎಷ್ಟೋ ಪರಿಪಾಟಲು ಪಟ್ಟಳು. ಅವನು ಬಲವಾಗಿ ನಿರಾಕರಿಸುತ್ತಿದ್ದ. “ನನಗೆ ಅಕ್ಕನಾದ ನೀನೂ ಕೂಡಾ ತಾಯಂತೆ. ನಿನ್ನ ಮಗಳೂ ಅದೇ ರಕ್ತದವಳು. ಅವಳನ್ನು ನನಗೆ ಹೆಂಡತಿಯಾಗಿ ಒಪ್ಪಲು ಸಾಧ್ಯವೇ ಇಲ್ಲ. ಅವಳು ನನಗೆ ತಂಗಿಯ ಸಂಬಂಧದಂತೆಯೇ ತೋರುತ್ತಾಳೆ” ಎಂಬುದು ಅವನ ಭಾವ.
“ಹಾಗೆಲ್ಲ ಅಂದುಕೊಳ್ಳಬೇಡ. ನಿಮ್ಮಿಬ್ಬರಿಗೂ ವರಸೆ ಇದೆ” ಎಂದು ಅವನ ಅಕ್ಕ ಅವನಿಗೆ ಮನವೊಲಿಸಲು ಪ್ರಯತ್ನಿಸುತ್ತಿದ್ದಳು. ಅದಕ್ಕೆ ಅವನು ಕೊಟ್ಟ ಉತ್ತರ, “ನೀವು ಹೇಳುತ್ತಿರುವ ವರಸೆ ಕೂಡಾ ಅಂದುಕೊಳ್ಳುವುದು ತಾನೇ? ನಿಮಗೆ ಅನುಕೂಲವಾಗುವಂತೆ ನೀವು ಅಂದುಕೊಳ್ಳಿ. ನನ್ನ ಮನೋಭಾವಕ್ಕೆ ತೋರುವಂತೆ ನಾನು ಅಂದುಕೊಳ್ಳುತ್ತೇನೆ.

ಒಟ್ಟಿನಲ್ಲಿ ಸಂಬಂಧಗಳು ಅನ್ನೋದೇ ಅಂದುಕೊಳ್ಳೋದು. ಬಿಡಿ” ಎಂದ. ಅವನ ಅಕ್ಕನ ಮಗಳ ಜೊತೆ ಅವನ ಮದುವೆಯಾಗಲಿಲ್ಲ.ವೈದ್ಯಕೀಯವಾಗಿ ರಕ್ತಸಂಬಂಧದಲ್ಲಿ ಮದುವೆಯಾಗುವುದು ಅಷ್ಟೇನೂ ಒಳಿತಲ್ಲದ ಕಾರಣದಿಂದ ಅವನ ನಿರ್ಧಾರವೂ ಒಳ್ಳೆಯದೇ. ಏನೇ ಆಗಲಿ, ಸಂಬಂಧಗಳು ಅನ್ನೋದು ನಾವು ನಾವು ಅಂದುಕೊಳ್ಳೋದು ಅಷ್ಟೇ! ನೈಸರ್ಗಿಕವಾಗಿ ಏನಿದೆ? ನಿಸರ್ಗದ ಸ್ವಾಭಾವಿಕ ವಾಸನೆಗಳ ಪಳೆಯುಳಿಕೆಗಳೇ ಈ ಅರಿಮೆಗಳು.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Suddidina.com Kannada online news portal. Its providing Kannada news, film news Kannada, sports news Kannada, political NeWS in Kannada and more.

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

Published

on

~ ಯೋಗೇಶ್ ಮಾಸ್ಟರ್

ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.

ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.

ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.

ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?

ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.

ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.

ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.

ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

Continue Reading

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ

Published

on

~ಯೋಗೇಶ್ ಮಾಸ್ಟರ್, ಚಿಂತಕರು

ಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.

ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!

ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!

ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.

ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.

ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.

ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!

ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ದಿಮಾಗಿ ನಕ್ಸಲ್-ನಗರ ನಕ್ಸಲ್

Published

on

~ರಹಮತ್ ತರೀಕೆರೆ, ಚಿಂತಕರು

ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.

ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.

ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.

ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.

ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.

ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರ‍ಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.

ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.

ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.

ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending