Connect with us

ದಿನದ ಸುದ್ದಿ

ಉರಿ ಚಮ್ಮಾಳಿಗೆ

Published

on

  • ಡಾ.ವಡ್ಡಗೆರೆ ‌ನಾಗರಾಜಯ್ಯ

ವೊತ್ತಿನ ಬೆಳಗು ನನಗಿನ್ನೂ ಹಸಿರಾಗಿ ನೆನಪಿಗಿದೆ. ಪ್ರಾಯಶಃ ಇನ್ನೆಂದಿಗೂ ಮಾಸದ ನೆನಪು ಅದು ; ನನ್ನ ಕರೇಕುಲದ ಮುಂದಿನ ಪೀಳಿಗೆಗಳು ಸೂರ್ಯ ಚಂದ್ರನಿರುವ ತನಕ ಈ ನೆನಪನ್ನು ತಮ್ಮೊಡನೆ ಹೊತ್ತೊಯ್ಯುತ್ತವೆಂಬ ಬಲವಾದ ನಂಬಿಕೆ ನನಗಿದೆ.

ಮಾನವ ನಿರ್ಮಿತ ಯಾವುದೇ ಉಪಾಯಗಳು ನನ್ನ ಕುಲಸ್ತರು ಅನುಭವಿಸಿದ ಸುಖ ದುಃಖ, ನೋವು – ನಲಿವು, ಸಂಕಟ ಹಾಗೂ ಹೋರಾಟಗಳ ನೆನಪಿನ ಬೇರನ್ನು ಕಿತ್ತು ಹಾಕಲು ಸಾಧ್ಯವಿಲ್ಲ ; ಆ ದೇವರಿಂದಲೂ ಕೂಡ! ನಮ್ಮ ನೆನಪಿಗೆ ಅಂತಹ ಅಗಾಧ ಶಕ್ತಿಯಿದೆ. ಅದು ನಿತ್ಯಗಾಮಿನಿ.

ಆ ದಿನ ಬೆಳಗ್ಗೆ ಅನುಭವ ಮಂಟಪದ ದಾರಿಯಲ್ಲಿ ಎದುರಾದ ನಿನ್ನನ್ನು ನೋಡಿದ ನಾನು ‘ಶರಣು ಬಸವಣ್ಣ’ ಎಂದು ನಂಬಿಸಿದ್ದೆ. ಇದಕ್ಕೆ ಪ್ರತಿಯಾಗಿ ನೀನೂ ಸಹ “ಶರಣು ಶರಣು ಹರಳಯ್ಯ” ಎಂದು ವಂದಿಸಿದ್ದೆ. ನೆನಪಿದೆಯಾ ಅಣ್ಣಾ? ನಿನ್ನಿಂದ ಒಂದು ಶರಣರಿಗೆ ಬದಲಾಗಿ ಎರಡು ಸಲ “ಶರಣು ಶರಣು” ಎಂಬ ನುಡಿ ಕೇಳಿದ ನಾನು ಎಷ್ಟೊಂದು ತತ್ತರಿಸಿ ಹೋದೆ.

ನಿನಗೆ ಗೊತ್ತಿರಲಿಕ್ಕಿಲ್ಲ. ನೀನು ನನ್ನ ಅರಿವಿಗೆ ಬಾರದಂತೆ ಸಹಜವಾಗಿ ಒಂದು ಶರಣು ಹೆಚ್ಚುವರಿ ಋಣಭಾರ ನನ್ನ ಮೇಲೆ ಹೇರಿದ್ದೆ. ನೀನೇನೋ ಭಾರ ಇಳಿಸಿಕೊಳ್ಳಲು ಚಡಪಡಿಸಿ ಬೆಂದು ಹೋಗುವಂಥವನು ನಿಜ. ನಿಮ್ಮವರು ಹೊತ್ತ ಭಾರ ಇಳಿಸಲು ಹೋದ ನೀನು ನನ್ನ ಮೇಲೆ ಭಾರ ಹೇರಿದೆಯಲ್ವಾ, ಇದು ನ್ಯಾಯವೇ? ಎಷ್ಟಾದರೂ ನೀನು ಭಾರ ಹೊರಿಸುವ ಕುಲದಿಂದ ಬಂದವನು; ನಾನಾದರೋ ಭಾರ ಹೊರಲೆಂದೇ ಹುಟ್ಟಿದ ನೊಗವೆಳೆವ ಮೂಕತ್ತು ಎಂಬುದು ನನಗೆ ಅರಿವಾಯಿತು.

ನಾನು ಹೊಲೆಯುವ ಮೆಟ್ಟುಗಳ ಮೇಲೆ ಭಾರ ಹಾಕಿ ನಡೆಯುವ ದಾರಿಹೋಕರು ನನ್ನೆದುರಿನಲ್ಲಿದ್ದಾರೆ. ಮೆಟ್ಟು ಹೊಲೆಯುವ ನನಗೆ ಮೆಟ್ಟೆಂದಿಗೂ ಭಾರವಲ್ಲ. ನಡೆಯುವ ದಾರಿಹೋಕರ ದಣಿವನ್ನು ತಾಪವನ್ನು ನನ್ನ ಮೆಟ್ಟು ಕಳೆಯಬಲ್ಲದು. ಕಲ್ಲು ಮುಳ್ಳುಗಳು ನನ್ನ ಮೆಟ್ಟುಗಳಿರುವ ಕಡೆಗೆ ದಾರಿಹೋಕರ ಪಾದಗಳನ್ನು ಚುಚ್ಚಲಾರವು.

ಆ ದಿನ ನೀನು ಶರಣು ಶರರಣಯ್ಯಾ ಎಂದು ಹೇಳಿದ ಬಳಿಕ ಏರುವ ಹೊತ್ತಿನೊಂದಿಗೆ ನೀನು ಹೊರಿಸಿದ ಶರಣೆಂಬ ವಜೆಯೂ ಏರುತ್ತಾ ಹೋಯಿತು.

ಏರುವ ಹೊತ್ತಿನೊಡನೆ ನೀನು ಹೊರಿಸಿದ ಶರಣೆಂಬ ವಜೆ ಹೊತ್ತ ನನ್ನ ಬೆನ್ನ ಬುಡದಿಂದ ಸಣ್ಣಗೆ ಶುರುವಾದ ಚಳುಕು ಇಡೀ ಶರೀರವನ್ನೆಲ್ಲಾ ಬಾಧಿಸತೊಡಗಿತ್ತು. ಅಣ್ಣಾ ನನಗೆ ಗೊತ್ತು. ನೀನು ಬಲಾತ್ಕರಿಸಿಯೇನು ಹೊರಿಸಲಿಲ್ಲ ; ಹಾಗೆ ನೋಡಿದರೆ ನೀನು ನಿನ್ನ ಪೂರ್ವಿಕರಿಗಿಂತಲೂ ಬದಲು ಕರುಣಿ. ಅವರಾದರೂ ನಮ್ಮನ್ನು ಪಶುಗಳಿಗಿಂತಲೂ ಕಡೆಯಾಗಿ ನಡೆಸಿಕೊಂಡರು.

ಛೇ! ಕ್ಷಮಿಸು. ನೀನೆಲ್ಲಿ ಅವರಲ್ಲಿ? ಎತ್ತಣಿಂದೆತ್ತ ಸಂಬಂಧ. ಅಂತಹ ಪೂರ್ವಿಕ ಪಳೆಯುಳಿಕೆಗಳನ್ನು ಬಿಸುಡಿ ನಿಮ್ಮ ಹಟ್ಟಿಗೆ ಓಡೋಡಿ ಬಂದ ನೀನು, ‘ಅಪ್ಪನು ನಮ್ಮ ಮಾದಾರ ಚನ್ನಯ್ಯ, ಬೊಪ್ಪ ನು ನಮ್ಮ ಡೋಹರ ಕಕ್ಕಯ್ಯ”ನೆಂದು ನಮ್ಮನ್ನೆಲ್ಲಾ ಬಾವುಣಿಕೆಯಿಂದ ತಬ್ಬಿಕೊಂಡು ನಮ್ಮ ಕಲ ಕರೇಕಲದೊಬ್ಬ ಮಗನಾದೆ ; ನೀನೊಂದು ನವಜಾತ ಶಿಶು!

ಇಲ್ಲಿ ನನ್ನ ಹಟ್ಟಿಯಲ್ಲಿ ತುಂಬಿ ಫಲದೂಗುವ ತೆಂಗಿನ ಮರದಂಥ ತಾಯಂದಿರು ತಮ್ಮ ಮಕ್ಕಳಿಗೆ ಹಾಲೂಡುವುದು ಬಲು ಸೋಜಿಗ! ಹಾಲು ಬತ್ತಿದ ಅಜ್ಜಿಯರೂ ತಮ್ಮ ಎದೆಗೆ ಅವುಚಿಕೊಂಡು ಮೊಮ್ಮಕ್ಕಳಿಗೆ ಮೊಲೆಯುಣಿಸುತ್ತಾರೆ : ಅಲ್ಲಿ ಪ್ರೀತಿ ಜಿನುಗುತ್ತದೆ! ಎಲ್ಲ ತಾಯಂದಿರೂ ತಮ್ಮೊಳಗಿನ ಮಾತೃತ್ವವನ್ನು ಹುಟ್ಟಿದ್ದ ಪ್ರತಿ ಮಗುವಿಗೂ ನೇವರಿಸಿ ಉಣ ಬಡಿಸುತ್ತಾರೆ.

ತಮ್ಮ ಕಂದಮ್ಮಗಳಿಗೆ ಎಷ್ಟು ಸಲ ಎದೆ ಹಾಲು ಕುಡಿಸಿದರೂ ತೃಪ್ತಿಯಾಗದ ಸಮಗಾರ ಭೀಮಮ್ಮವರು ನಮ್ಮ ಕರೇಕುಲದ ಹಟ್ಟಿಯಲ್ಲಾಡುವ ಇತರ ಕಂದಮ್ಮಗಳಿಗೂ ಹಾಲು ಕುಡಿಸುವುದುದುಂಟು. ಇಲ್ಲಿ ಹುಟ್ಟುವ ಪ್ರತಿ ಶಿಶುವು ಹಟ್ಟಿಯ ಎಲ್ಲ ತಾಯಂದಿರ ಎದೆ ಹಾಲು ಕುಡಿದು ಬೆಳೆಯುತ್ತದೆ. ಹೇ, ಬಸವಣ್ಣಾ ಇಂತಹ ಭಾಗ್ಯ ನಮ್ಮ ಶಿಶುವಾಗಿ ನೀನು ಕಂಡೆ!

ನನಗೆ ಹಟ್ಟಿ ತುಂಬಾ ತಾಯಂದಿರು. ಹಟ್ಟಿ, ಬಯಲಲ್ಲಿ ಬಟ್ಟ ಬಯಲಲ್ಲಿ ಊರ ಸೆರಗಲ್ಲಿ, ಎಲ್ಲೆಂದರಲ್ಲಿ ಎದೆ ಹಾಲು ಕುಡಿಸಿದ ನನ್ನ ತಾಯಂದಿರು ನನಗೆ ಹೇಳುತ್ತಿದ್ದ ಒಂದು ಮಾತು “ಅನ್ಯರ ಹೊರೆ ನೀನು ಹೊರಬೇಕಲ್ಲದೆ ನಿನ್ನ ಹೊರೆಯನ್ನು ಪರರ ಮೇಲೆ ಹೊರಿಸುವುದು ಸಲ್ಲತಕ್ಕದ್ದಲ್ಲ ಹರಳಯ್ಯಾ” ಎಂಬುದು. ಆ ದಿನ ನಾನು ಹೊರಿಸಿದ ಒಂದು ಶರಣಿನ ಹೆಚ್ಚಿನ ಹೊರೆ ಹೊತ್ತು ನಾನು ಮನೆಗೆ ಬಂದೆ. ಆಗ ಇಳಿ ಹೊತ್ತು; ಧೂಳು ಸಂಜೆ.

ನನ್ನ ನೆಚ್ಚಿನ ಸತಿ ಶಿವಶರಣೆ ಕಲ್ಯಾಣಮ್ಮನ ಕೂಟೆ ಮಾತನಾಡುತ್ತಾ ಹೊರೆ ಇಳಿಸಿಕೊಳ್ಳುವ ಉಪಾಯವನ್ನು ಕೇಳಿದೆ. ಹೊರೆ ಇಳಿಸುವ ಮಾರ್ಗ ಹೆಂಗಸರಿಗೆ ಮಾತ್ರ ಗೊತ್ತೆಂದರೆ ನಿನಗೆ ಆಶ್ಚರ್ಯವಾಗಬಹುದಲ್ಲವೆ ಬಸವಣ್ಣ? ಹೌದು, ನನ್ನ ಹೆಂಡತಿ ಕಾರ್ಯಸಾಧ್ಯವಾದ ಉಪಾಯವನ್ನು ಹೇಳುತ್ತಾಳೆಂಬ ವಿಶ್ವಾಸದಿಂದಲೇ ಕೇಳಿದ್ದೆ.

“ನೋಡು, ಶಿವಶರಣ ಬಸವಣ್ಣನವರ ಶರಣಿನ ತೂಕಕ್ಕೆ ಸಮವಾಗುವಂಥ ಸಂಪತ್ತು ನಮ್ಮತಾವ ಏನು ತಾನೆ ಐತೆ? ಹೂವುನ ಹಾಸ್ಗೆ ಮ್ಯಾಲ ನಡೆದಂಗೆ ಕಾಣೋಂಥ ಪಾದ್ರಾಕ್ಷಿ ಮಾಡ್ಕೊಡನಿ” ಎಂದು ನಮ್ಮ ಕರೇಕುಲದ ಸಮಗಾರರು ಜತನವಾಗಿ ಕಾಪಾಡಿಕೊಂಡು ಬಂದ ಚಮ್ಮಾರಿಕೆಯ ಉಪಾಯವನ್ನು ಅವಳಿಂದ ಕೇಳಿದ ನಾನು, ದೇವಾಂಶಿ ಮಾತುಮನಾದ ನಿನಗೆ ತೀರಾ ವಿಶೇಷವಾದ ಪಾದ್ರಾಕ್ಷಿಯನೇ ಮಾಡೋಡಬೇಕು, ಯಂಗೆ ಮಾಡೋದು? ಯಾವ ತೊಗಲಿನಿಂದ ಮಾಡೋದು? ಎಂಬ ಯೋಚನೆಗಳ ಸುಳಿಗೆ ಬಿದ್ದೆ.

ಆಗ ನನ್ನ ಮುಖದ ನೆರಿಗೆಗಳ ಅಕ್ಷರಗಳನ್ನು ಸಲೀಸಾಗಿ ಓದಿ ಅರ್ಥ ಮಾಡಿಕೊಂಡು,‌ ‘ಗೋವಿನ ತೊಗಲು ಉಪಯೋಗಿಸಿದಂತೆಯೇ ನರ ಮನುಷ್ಯ ತೊಗಲ ಚಮ್ಮಾಳಿಗೆ ಮಾಡಿಕೊಡದ ವಿನಾ ಶರಣಿನ ವಜೆಯನ್ನು ನೀಗಿಕೊಳ್ಳಲಾಗದು’ ಎಂಬ ಸಲಹೆಯನ್ನು ಮುಂದಿಟ್ಟ ಕಲ್ಯಾಣಮ್ಮ, ನಮ್ಮ ಮಕ್ಕಳನ್ನು ಆಡಿಸಿ ನಲಿಸಿ ತೂಗಿ ಮಲಗಿಸಿದ ನಮ್ಮ ಅಂಕಪೀಠದ ತೊಡೆ ತೊಗಲು ಮಾತ್ರ ಈ ಕಾರ್ಯಕ್ಕೆ ಯೋಗ್ಯವೆಂದು ಬಗೆದು ಮೊದಲಿಗೆ ತನ್ನ ಚರ್ಮವನ್ನೇ ನೀಡಲು ದುಡದಿಂದ ಮುಂದಾದಳು. ಈಗ ಯೋಚಿಸು ಬಸವಣ್ಣಾ ನಮ್ಮ ಹೆಣ್ಣಿನ ಮಹಿಮೆ ಎಂಥದ್ದು?

ಮರುದಿನ ಬೆಳಗ್ಗೆ ಎದ್ದು ಸ್ನಾನಾದಿಗಳನ್ನು ಮಾಡಿ, ಮನೆಯನ್ನೆಲ್ಲಾ ಸಾರಿಸಿ, ಗುಡಿಸಿ, ಚುಕ್ಕಿ ರಂಗೋಲಿ ಎಳೆದು ಮೂಡಲ ಮುಖನಾಗಿ ‘ತಿತ್ತಿ’ ಯೊಂದಿಗೆ ಕುಳಿತಿದ್ದ ಕಲ್ಯಾಣಮ್ಮ ಮುಖ ಹೊಂಬಣ್ಣದಲ್ಲಿ ಹೊಳೆವ ಸೂರ್ಯನಂತೆಯೇ ಕಾಂತಿಯಿಂದ ಶೋಭಿಸುತ್ತಿತ್ತು. ಅವಳ ಮುಖದ ಕಾಂತಿಯ ಸುಂಕು ನನ್ನ ಮುಖಕ್ಕೆ ಪರಾಗಸ್ಪರ್ಶಗೊಂಡ ಬಳಿಕವೇ ತಿತ್ತಿಗೆ ಶರಣೆಂದು ಚೂರಿಯನ್ನು ತೆಗೆದುಕೊಂಡು ಕುಲಕಾರ್ಯೇವು ಮಾಡಲು ಕುಳಿತೆ.

ಅಣ್ಣಾ … ಬಸವಣ್ಣ…! ಅಂದು ಬೆಳಗ್ಗೆ ನಮ್ಮ ಗುಡಿಸಲ ನೆತ್ತಿ ಮೇಲೆ ನವಿಲೆರಡು ಆಡುತ್ತಿದ್ದವು. ಸಾವಿರ ಕಣ್ಣು ಅರಳಿಸಿ ಎಳೆ ಬಿಸಿಲಿನಲ್ಲಿ ನರ್ತಿಸುತ್ತಿದ್ದ ಬಂಗಾರದ ನವಿಲುಗಳು! ಬಾಲ್ಯದಲ್ಲಿ ನನ್ನ ಅಮ್ಮ ಹೇಳುತ್ತಿದ್ದಳು, “ಹರಳಯ್ಯಾ, ಈ ಜಗತ್ತು ಹುಟ್ಟಿದ್ದು ನವಿಲು ಮೊಟ್ಟೆಯಿಂದ ಕಣೋ, ಇಲ್ಲದಿದ್ದರೆ ಈ ಸೃಷ್ಟಿ ಇಷ್ಟೊಂದು ಸುಂದರವಾಗಿರಲು ಹೇಗೆ ತಾನೆ ಸಾಧ್ಯವಿತ್ತು?”

ಹೌದು ಬಸವಣ್ಣಾ ನನ್ನ ಅಮ್ಮ ಹೇಳಿದ ಅದೇ ನವಿಲು ನಮ್ಮ ಗುಡಿಸಲು ಮೇಲೇರಿ ಹಾರಿ ಕುಣಿಯುತ್ತಿರುವಾಗ ನಾನು ನನ್ನ ಬಲ ತೊಡೆ ತೊಗಲನ್ನು, ಕಲ್ಯಾಣಮ್ಮ ತನ್ನ ಎಡ ತೊಡೆ ತೊಗಲನ್ನು ಪರಸ್ಪರ ಸುಲಿದು ತೆಗೆಯಲು ದುಡಮಾಡಿ ಕುಳಿತಿದ್ದೆವು; ನವಿಲುಗಳು ಕುಣಿಯುತ್ತಲೇ ಇದ್ದವು ಬಲು ಚೆಂದವಾಗಿ!

ಅಣ್ಣಾ… ನಿಜ ಹೇಳಬೇಕೆಂದರೆ ಗಲ್ಲೇಬಾನಿಯ ದಿವ್ಯೋದಕ ಸ್ಪರ್ಶದಿಂದ ತೋಯ್ದುದಕ್ಕಿಂತಲೂ ಮಿಗಿಲಾಗಿ ನೀನು ನಮ್ಮ ಕುಲಸ್ಥರಿಗೆ ತೋರಿಸಿದ ಕರುಣಾಮೃತದಿಂದಲೇ ನಮ್ಮ ದೇಹಕ್ಕಾವರಿಸಿದ್ದ ಸೂತಕದ ತೊಗಲು ತೊಯ್ದು ಹೋಗಿತ್ತು! ಸೂತಕದ ತೊಗಲನ್ನು ಸುಲಿದು ತೆಗೆಯಲು ನೀನು ಹೊರಿಸಿದ ‘ಶರಣು’ ಒಂದು ನೆಪವಾಗಿತ್ತು.

ಸಾಮು ಹಿಡಿದ ಚೂರಿಯಿಂದ ಬಹಳ ಚಮತ್ಕಾರಿಕವಾಗಿಯೆ ತೊಗಲು ಸುಲಿದೆವು; ನಾವು ಕುಶಲಕರ್ಮಿಗಳು; ತೊಗಲು ಸುಲಿಯುವ ನನಗೆ ದೇಹವೆಂಬುದು ಯಾವತ್ತಿಗೂ ಅಡ್ಡಿಯಾಗದು! ತನ್ನ ತೊಗಲನ್ನು ತಾನು ಸುಲಿದುಕೊಳ್ಳಲಾಗದವನು ಸಮಗಾರನೇ ಅಲ್ಲ! ಹೇ! ಬಸವಣ್ಣಾ ನಿನ್ನನ್ನು ಆವರಿಸಿಕೊಳ್ಳುತ್ತಿದ್ದ ಬ್ರಾಹ್ಮಣ್ಯದ ಸೂತಕದ ತೊಗಲನ್ನು ಹರಿದು ಬಿಸಾಕಿದ ನೀನೊಬ್ಬ ದೊಡ್ಡ ಸಮಗಾರ.

ಅಂತೂ ನಿನಗೆ ಚಮ್ಮಾಳಿಗೆ ಮಾಡಿಕೊಡಲೆಂದು ನಾನು, ನನ್ನ ಪತ್ನಿಯೂ ನಮ್ಮ ತೊಗಲನ್ನು ನಾವೇ ಸುಲಿದು, ಅದರ ಸೆಳ್ಳೆ ತೆಗೆದು, ಬಿಸಿಲಿನಲ್ಲಿ ಒಣಗಿಸಿ ಕರೆಹಾಯಿಸಲು ಸಿದ್ಧಗೊಳಿಸಿದೆವು.

ಚರ್ಮ ಹದ ಮಾಡುವ ವಿಧಾನವನ್ನು ಕರೆ ಹಾಯಿಸುವುದು ಎಂದು ಹೇಳುವುದು ವಾಡಿಕೆ. ಬಸವಣ್ಣಾ ಈ ವಿಧಾನವು ನಿನಗೆ ಕೇಳಿಯೋ ನೋಡಿಯೋ ಗೊತ್ತಿರಬಹುದೆಂದು ನಾನು ಊಹಿಸುತ್ತೇನೆ. ಆದರೂ ನಿನಗೆ ಅರ್ಪಿಸಿದ ಚಮಾಳಿಗೆಯನ್ನು ತಯಾರಿಸಿದ ಬಗೆಯನ್ನು ಹೇಳುತ್ತೇನೆ ಕೇಳು.

ಗಲ್ಲೇಬಾನಿಯಲ್ಲಿ ಒಂದು ಗುಲಿಕೆ ತಂಗಡಿ ಗಿಡದ ಚಕ್ಕೆ ಪುಡಿಯೊಂದಿಗೆ ಪಾವು ಗುಲಿಕೆ ಸುಣ್ಣದ ಪುಡಿಯನ್ನು ಕಲೆಸಿದೆ. ನನ್ನ ಕೆಲಸದ ಬಳಿಕ ಕಲ್ಯಾಣಮ್ಮ ಎರಡು ಹರುವಿ ನೀರು ಸುರಿದು ಗಲ್ಲೇಬಾನಿಯಲ್ಲಿ ಎರಡು ಜಾವ ಚರ್ಮವನ್ನು ನೆನೆ ಹಾಕಿದಳು. ಒಂದೊಂದು ಪ್ರಾಣಿಯ ಚರ್ಮವನ್ನೂ ಅದರದೇ ವಿಶಿಷ್ಟ ವಿಧಾನಾನುಸಾರ ಕರೆ ಹಾಯಿಸಬೇಕು.

ತಂಗಡಿ ಚಕ್ಕೆಯ ಪುಡಿ ಮತ್ತು ಸುಣ್ಣದ ನೀರಿನಲ್ಲಿ ಹದಗೊಂಡ ಚರ್ಮವನ್ನು ಶುದ್ಧ ನೀರಿನಲ್ಲಿ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು. ಆದರೆ ನಿನಗೆ ಚಮ್ಮಾಳಿಗೆ ತಯಾರಿಸಿ ಕೊಡಲು ನಾವು ಬಹಳ ಜಾಗರೂಕತೆ ವಹಿಸಿದ್ದೆವು. ಸೋಸಿದ ನೀರಿನ ‘ತಿಳಿಗರೆ’ಯಲ್ಲಿ ಹದಗೊಂಡ ಚರ್ಮವನ್ನು ಮತ್ತೊಂದು ಗಲ್ಲೇಬಾನಿಯ ಬೆವರ ಗಂಧೋದಕದಲ್ಲಿ ತೊಳೆದು, ಮುಗಿಲ ಮಿಂಚನೆ ಎರೆದು, ರಾತ್ರಿ ಮಂಜಿನಲಿ ನೆನೆದ ಚರ್ಮವನ್ನು ರಾತ್ರಿಯ‌ ಚಂದ್ರಮನ ಬೆಳ್ಳಿ ಕಿರಣಗಳ ಬಿಸಿಯಲ್ಲಿ ಕಾಯಿಸಿ, ಬೆಳಗಿನ ಪ್ರಥಮ ಉಷಾಕಿರಣದಲ್ಲಿ ಕಾಯ್ದ ಚರ್ಮವನ್ನು ಸಂಜೆಯ ಮಂದ ನಿಷಾಕಿರಣಗಳಿಂದ ತಂಪು ಮಾಡಿ ಅದರೊಳಕ್ಕೆ ಪಾಂಗಿತವಾಗಿ ಅಗ್ನಿ ಪಾದಕವನ್ನು ತಂಪುಗೊಳಿಸಿ ಹೆಪ್ಪಿಡಲಾಯಿತು.

ಅಣ್ಣಾ…. ಬಸವಣ್ಣಾ ಹೀಗೆ ಪಾಕಾದ ಚರ್ಮವನ್ನು ನೆಲದ ಮೇಲೆ ಹರವಿ, ಮೈನಾಗಿರುವುದು ಕಂಡು, ಹರುಷಗೊಂಡು ನಿನ್ನ ಪಾದಗಳ ಅಳತೆಯನ್ನು ಧೇನಿಸತೂಡಗಲು ನಿನ್ನ ಪಾದಗಳೋ
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ ಕೂಡಲಸಂಗಮ ದೇವಾ”

ನಿನ್ನ ಅನಂತ ಪಾದದ ಅಳತೆ ನನ್ನ ಕಣ್ಣ ಆಯತಕ್ಕೆ ಸಿಕ್ಕದಾಗಿ ಕುಲದ ತಂದೆ ಜಾಂಬವನನ್ನು ಧ್ಯಾನಿಸಲು, ಜಾಂಬವ ತಾತನಾದರೋ ದೇವಿ ಅರುಂಧತಿಯವರಿಗೆ ನಿನ್ನ ಪಾದದಳತೆಯನು. ಕೆಂಡರಿಸುವಂತೆ ತಿಳಿಸಲು, ದೇವಿ ಅರುಂಧತಿಯಾದರೋ ತನ್ನ ಬಸಿರೊಳಗೆ ಹುಟ್ಟಿದ ಮಾದಾರ ಚೆನ್ನಯ್ಯನಿಗೆ ಅನುಜ್ಞೆ ಮಾಡಲು, ಚನ್ನಯ್ಯನು ತನ್ನ ಕರುಳ ಹೊಕ್ಕುಳ ಬಳ್ಳಿ ಕಲ್ಯಾಣಮ್ಮನವರಿಗೆ ನಿನ್ನ ಪಾದದ ಅಳತೆಯ ಸೋಜುಗವ ವಿವರಿಸಿದರು ಹೀಗೆ :-

ಬಸವಣ್ಣನೆಂಬುವನು ನಮ್ಮಕುಲದ ಬಂಗಾರದ ಶಿಶುವಲ್ಲವೋ ಅವನು ಉಸಿರೆಂಬ ಘನವೋ. ಅವನು ಉಸಿರೆಂಬ ಘನವಲ್ಲವೋ ಘನವೆಂಬ ಉಸಿರೊಳಡಗಿದ ಪ್ರಾಣವೋ!”

ಇಂತೀ ನಿನಗೆ ಒಪ್ಪುವ ಪಾದ್ರಾಕ್ಷಿಯ ಅಳತೆಯನ್ನು ಅರಿಯದವಳಾದ ಕಲ್ಯಾಣಮ್ಮನು ಮೂಲದಲ್ಲಿ ಜಲಮಯವಾಗಿದ್ದ ಈ ಸೃಷ್ಟಿಗೆ ತನ್ನ ರಕ್ತವನ್ನೇ ಬಸಿದು ಹೆಪ್ಪಿಟ್ಟು ಭೂಮಿಯನ್ನು ಸೃಷ್ಟಿಸಿದ ಮಾದಿಗರ ಮೊದಲ ಮಗನಾದ ಹೆಪ್ಪುಮುನಿಯನ್ನು ಸಾಕ್ಷಿಯಾಗಿ ಒಡ್ಡಿ, “ಬಸವಣ್ಣನು ನಿಜವಾದ ನಮ್ಮ ಮಾದಾರ ಕುಲದ ಮಗನೇ ಆಗಿದ್ದಲ್ಲಿ ಪುರೋಹಿತರ ಕಣ್ಣ ಎಚ್ಚರಿಕೆಯ ತಪ್ಪಿಸಿ ಓಡಿ ಬಂದು ನನ್ನ ಮಡಿಲಲ್ಲಿ ಮಲಗುವ ಕಂದಮ್ಮನಂತೆ ನನ್ನ ಸೆರಗು ಹಿಡಿದು ‘ಅವ್ವಾ’ ಎಂದು ಚೆಲುನುಡಿಗಳಲ್ಲಿ ಕರೆಯಲಿ” ಎಂದು ಪ್ರೀತಿಯಿಂದ ಕೂಗಿದಾಗ, ಬಿಜ್ಜಳನ ಅಧಿಕಾರದ ಸೆರಗಿನ ಮರೆಯಲ್ಲಿದ್ದ ನೀನು ನಿನ್ನ ಜನ್ಮಧಾರಕ ವೇಷ ಕಳೆದು, ಜಗ್ಗನೆ ಜನಿವಾರ ಹರಿದು, ಬಯಲ ಬೆತ್ತಲೆಯಂತೆ ಹುಟ್ಟುಮಾರ್ಗದಲ್ಲಿ ದಿಬ್ಬ ಹತ್ತಿ ಕಣಿವೆ ಇಳಿದು ಅಗ್ರಹಾರದಿಂದ ಬಲು ದೂರವುಳ್ಳ ಹಟ್ಟಿಯ ಹೊಕ್ಕು ನಮ್ಮ ಮನೆಯಲ್ಲಿ ಕಿಲಗುಡುವ ಕಂದನಾದೆ!

ಆ ಬಳಿಕ… ಚಲುವ ಚಂದಿರನಂಥ ಕಂದಮನಾದ ನಿನ್ನ ಅಂದದ ಆಟಗಳು ಚಂದದ ನೋಟಗಳು ಸಾವಿರ ನಕ್ಷತ್ರಗಳ ಕಣ್ಣು ಬಿಡುವ ನವಿಲು ಕುಣಿತದ ಹೊಳಪನ್ನು ನಮ್ಮ ಗುಡಿಸಲು ತುಂಬಿ, ಕಲ್ಯಾಣಮ್ಮನವರು ತಾಯ ಸೆರಗು ಮರೆಮಾಡಿ ಕಿಲಕಿಲನೆ ನಗುತ್ತಾ ನಿನ್ನ ಪುಟ್ಟ ಪಾದಗಳನ್ನು ಕಣ್ಣೊಳಗೆ ಮುಚ್ಚಿಕೊಂಡರಲ್ಲೋ ಅಣ್ಣಾ!

ಹೀಗೆ ನಿನ್ನ ಪಾದಗಳನ್ನು ಕಣ್ಣೊಳಗೆ ಮುಚ್ಚಿಕೊಂಡ ಸೋಜಿಗವನ್ನು ಕಲ್ಯಾಣಮ್ಮ ಬೀಜದೊಳಗಿರುವ ಮೊಳಕೆಯನ್ನು ಕಾಣಿಸುವಂತೆ ನನಗೆ ಕಂಡರಿಸಿದಾಗ ಅಲ್ಲಿ ನಮ್ಮ ಗುಡಿಸಲೊಳಗೆ ಅಡಿಗಲ್ಲ ಮೇಲೆ ಮುದ್ರೆಯೊತ್ತಿತ್ತು. ನಿನ್ನ ಪಾದಗಳ ಅಳತೆ ನಮ್ಮ ಅಡಿಗಲ್ಲಿನ ಮೇಲೆ ಬಟುವಾದ ಉದ್ದ, ಬಟುವಾದ ಅಗಲ ; ನಿನ್ನ ಪಾದ ಅಷ್ಟೆ!

ಅಣ್ಣಾ, ಮಾದಾರನ ಚಮ್ಮಾರಿಕೆಯ ಅಡಿಗಲ್ಲು ಸಾಮಾನ್ಯವಲ್ಲ ; ಪೂರ್ವದಲ್ಲಿ ಇವಳು ಕಾಳಿಕಾ ಮಾತೆ; ವಿಶ್ವಕರ್ಮನ ತಾಯಿ! ಮಾದಿಗರ ಹೊಸ್ತಿಲಲ್ಲಿ ಅಡಿಗಲ್ಲು ರೂಪಾಗಿ ಕುಂತವಳೆ!

ಇದು ತಾತ ಜಾಂಬವರು ನೀಡಿದ ಕುಲದ ದಾನ. ಕುಶಲ ಕರ್ಮಿಯ ಕಲೆ ಅರಳುವುದು ಇಲ್ಲಿ. ನಿನಗೆ ಮಾಡಿಕೊಟ್ಟ ಚಮ್ಮಾಳಿಗೆ ಕುಶಲತೆಯಲ್ಲಿ ಅರಳಿದ್ದು ಇದೇ ಅಡಿಗಲ್ಲ ಮೇಲೆ. ವಚನ ಕಟ್ಟುವುದು ನಿನಗೆ ಹೇಗೋ ಹಾಗೆ ನಮಗೆ ಚಮ್ಮಾರಿಕೆ ಸೃಷ್ಟಿಶೀಲ ಕ್ರಿಯೆ. ನಿನಗೆ ನಾವು ತಯಾರಿಸಿಕೊಟ್ಟ ಚಮ್ಮಾಳಿಗೆ ನಮ್ಮ ಪಾಲಿಗೊಂದು ಶ್ರೇಷ್ಢ ವಚನ. ಅದಕ್ಕಾಗಿ ನಾನಾಗಲೀ ನನ್ನ ಹೆಂಟತಿಯಾಗಲೀ ಅನ್ಯ ವಚನಗಳನ್ನೇ ಬರೆದಿಲ್ಲ. ನಮ್ಮ ಕಾಯಕದ ಬದುಕೇ ಒಂದು ವಚನ.

(ಚರ್ಮಕ್ಕೆ ಕರೆ ಹಾಯಿಸಿ ಹದಮಾಡುವ ವಿಧಾನವನ್ನು ಕುರಿತು ಮಾಹಿತಿ ನೀಡಿದವರು ನನ್ನ ತಂದೆ ಹನುಮಂತಯ್ಯ ಮತ್ತು ತಾಯಿ ಕದರಮ್ಮ)

(ಡಾ.ವಡ್ಡಗೆರೆ ‌ನಾಗರಾಜಯ್ಯ
8722724174)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ

Published

on

ಸುದ್ದಿದಿನ,ಚಿತ್ರದುರ್ಗ: ಹರಳಯ್ಯ ಮಠದ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆಯನ್ನು ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಮಠಾಧೀಶರ ಮೇಲೆ ಇಂತಹ ದುಷ್ಕೃತ್ಯ ಹೆಚ್ಚಾಗಬಹುದು ಎಂದು ಮಾಜಿ ಸಚಿವ ಎಚ್.ಆಂಜನೇಯ ಆತಂಕ ವ್ಯಕ್ತಪಡಿಸಿದ್ದಾರೆ.

ಎಸಿ, ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳು, ಗ್ರಾಮದ ಮುಖಂಡರೊಂದಿಗೆ ಐಮಂಗಲ ಸಮೀಪದ ಹರಳಯ್ಯ ಮಠಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿ, ಚಿತ್ರದುರ್ಗ ಜಿಲ್ಲಾಸ್ಪತ್ರೆ ಬಳಿಕ ಮಠಕ್ಕೆ ಶ್ರೀಗಳು ಬಂದಿದ್ದಾರೆಂದು ಭಾವಿಸಿ ಧೈರ್ಯ ಹೇಳಲು ಬಂದಿದ್ದೇನೆ. ಆದರೆ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದು ಅವರ ಆರೋಗ್ಯ ಸ್ಥಿತಿ ಕುರಿತು ಕಳವಳ ವ್ಯಕ್ತವಾಗಿದೆ ಎಂದರು.

ಮುರುಘ ಮಠದ ಡಾ. ಶ್ರೀ ಶಿವಮೂರ್ತಿ ಮುರುಘ ಶರಣರು ಎಲ್ಲ ಶೋಷಿತ, ದಲಿತ, ಹಿಂದುಳಿದ ವರ್ಗಗಳಿಗೆ ಧಾರ್ಮಿಕ ಸ್ಥಾನ ನೀಡಲು ಹಲವರಿಗೆ ದೀಕ್ಷೆ ನೀಡಿ, ಜಮೀನು ಸೇರಿ ಅಗತ್ಯ
ಸಹಕಾರ ನೀಡಿದ್ದು ಸ್ಮರಣೀಯ. ಆ ಸಂದರ್ಭದಲ್ಲಿ ಹರಳಯ್ಯ ಮಠ ಸ್ಥಾಪನೆಗಾಗಿ ಜಮೀನು ಖರೀದಿಸಲು ಹಣ ಕೊಟ್ಟಿದ್ದರು. ಆ ಹಣದಲ್ಲಿ ಭೂಮಿ ಖರೀದಿಸಿ ಮಠ, ಶಾಲೆ ನಿರ್ಮಿಸಲು ಬಸವ ಹರಳಯ್ಯ ಸ್ವಾಮೀಜಿ ಶ್ರಮಿಸಿ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.

ಮಠ-ಮಾನ್ಯಗಳು ಮಾಡಬೇಕಾದ ಕಾರ್ಯವನ್ನು ಅತ್ಯಂತ ಶ್ರದ್ಧೆ, ಸವಾಲುಗಳ ಮಧ್ಯೆ,‌ ಹಗಲು-ರಾತ್ರಿ ಶ್ರಮಪಟ್ಟು ಹರಳಯ್ಯ ಸ್ವಾಮೀಜಿ ಮಾಡಿದ್ದಾರೆ. ಸಮಾಜ ಕಲ್ಯಾಣ
ಸಚಿವನಾಗಿದ್ದ ವೇಳೆ 1 ಕೋಟಿ ರೂ. ಅನುದಾನ ಕೊಡಿದ್ದೇ. ಬಳಿಕ ಅಸ್ಥಿತ್ವಕ್ಕೆ ಬಂದ ಸರ್ಕಾರ ಹಾಗೂ ಭಕ್ತರು, ಜನರಿಗೆ ದೇಣಿಗೆ ಸಂಗ್ರಹಿಸಿ ಭವ್ಯವಾದ ಮಠ ನಿರ್ಮಿಸಿದ್ದಾರೆ.
ಸುತ್ತಮುತ್ತಲ ಬಡ ಮಕ್ಕಳಿಗಾಗಿ ಶಾಲೆ, ಸತ್ ಚಿಂತನೆ ಮೂಡಿಸಲು ಧಾರ್ಮಿಕ ಕಾರ್ಯಕ್ಕಾಗಿ ಸಭಾಂಗಣ ನಿರ್ಮಿಸಿದ್ದಾರೆ ಎಂದರು.

ಈ ಸಂದರ್ಭ ತಗ್ಗುಗುಂಡಿ ಆಗಿದ್ದ ಅನುಪಯುಕ್ತ ಎರಡು ಗುಂಟೆ ಜಮೀನು ಗೊಂದಲದಿಂದ ಒತ್ತುವರಿ ಆಗಿದೆ. ಈ ವಿಷಯಕ್ಕಾಗಿ ಹಲವು ಬಾರಿ ವ್ಯಕ್ತಿಯೊರ್ವ ಗಲಾಟೆ ಮಾಡಿದ್ದಾನೆ. ಗೊತ್ತಿಲ್ಲದೆ ಎರಡು ಗುಂಟೆ ಜಾಗ ಒತ್ತುವರಿ ಆಗಿದ್ದು, ತಪ್ಪು ನನ್ನಿಂದಲೇ ಆಗಿದೆಯೆಂದು ಶ್ರೀಗಳು ಒಪ್ಪಿಕೊಂಡಿದ್ದಾರೆ. ಜತೆಗೆ ಆ ಜಾಗಕ್ಕೆ ಈಗಿನ ಮಾರುಕಟ್ಟೆ ಮೌಲ್ಯದಷ್ಟು ಹಣ ಕೊಡುತ್ತೇನೆ ಎಂದು ತಿಳಿಸಿದ್ದಾರೆ. ವ್ಯಕ್ತಿ ನಿರಾಕರಿಸಿದಾಗ ಒತ್ತುವರಿ ಜಾಗದಲ್ಲಿ ಕಟ್ಟಿದ್ದ ಕಾಂಪೌಂಡನ್ನು ಸ್ವಾಮೀಜಿ ಕೆಡವಿಸಿದ್ದಾರೆ. ಆದರೂ ಆ ವ್ಯಕ್ತಿ ದ್ವೇಷ ಮುಂದುವರಿಸಿದ್ದು ಏಕಾಏಕಿ ಮಠಕ್ಕೆ ನುಗ್ಗಿ ಸ್ವಾಮೀಜಿ ಮೇಲೆ
ಮಾರಾಣಾಂತಿಕ ಹಲ್ಲೆ ನಡೆಸಿದ್ದು, ದೂರು ಕೊಡಲು ಠಾಣೆಗೆ ತೆರಳಿರುವ ವಿಷಯ ತಿಳಿದು ಅಲ್ಲಿಗೆ ತೆರಳಿ ಕಾಲಿನಿಂದ ಸ್ವಾಮೀಜಿ ಎದೆಗೆ ಒದ್ದಿದ್ದಾನೆ ಎಂದರು.

ಧಾರ್ಮಿಕ ನೇತಾರರನ್ನು ಗೌರವಿಸುವ ನಾಡು ಭಾರತ. ಇಂತಹ ಸಂದರ್ಭ ಖಾವಿಧಾರಿಯೊಬ್ಬರ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ, ಅವ್ಯಾಚ್ಯ ಶಬ್ದಗಳಿಂದ ನಿಂಧಿಸಿರುವುದು ಎಚ್ಚರಿಕೆ
ಗಂಟೆಯಾಗಿದೆ. ಈ ದುಷ್ಕೃತ್ಯವನ್ನು ನಾಡಿನ ಎಲ್ಲ ಮಠಾಧೀಶರು ಖಂಡಿಸಬೇಕು, ಸ್ವಾಮೀಜಿಗೆ ನೈತಿಕವಾಗಿ ಬೆಂಬಲಿಸಬೇಕು. ಇಲ್ಲದಿದ್ದರೇ ಇಂತಹ ಕೃತ್ಯಗಳು ಹೆಚ್ಚಾಗುವ ಸಾಧ್ಯತೆ ಎಂದು ಆತಂಕ ವ್ಯಕ್ತಪಡಿಸಿದರು.

ಹಲ್ಲೆ ನಡೆಸಿದ ಮೂವರನ್ನು ಮಟ್ಟಹಾಕುವ ಶಕ್ತಿ ನಮ್ಮಲ್ಲೂ ಇದೆ. ಆದರೆ, ನಾವು ವಾಮಮಾರ್ಗದಲ್ಲಿ ಸಾಗುವವರಲ್ಲ, ಕಾನೂನು ಪರಿಪಾಲಕರು. ನಮ್ಮ ಹಕ್ಕೋತ್ತಾಯ ಬಸವ
ತತ್ವದಡಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆ ಭೀತಿ ಹುಟ್ಟಿಸುವಂತದ್ದಾಗಿದೆ. ಈ ಕುರಿತು ತಕ್ಷಣವೇ ಎಲ್ಲ ಮಠಾಧೀಶರು, ಧರ್ಮಗಳ ಪ್ರತಿಪಾದಕರು ಖಂಡಿಸಬೇಕು ಎಂದು ಕೋರಿದರು.

ಈಗ ಯಾವುದೇ ಕಾರಣಕ್ಕೂ ಸಂಧಾನ-ಚರ್ಚೆ ಅಗತ್ಯವಿಲ್ಲ. ಮಠದ ಸಾಮಾಜಿಕ ಕಾರ್ಯಕ್ಕಾಗಿ ಸರ್ಕಾರ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು. ಅದಕ್ಕೆ ತಗಲುವ ವೆಚ್ಚವನ್ನು ನಾನೇ‌ ಸ್ವಂತವಾಗಿ ಭರಿಸುತ್ತೇನೆ. ತಕ್ಷಣ ಅಧಿಕಾರಿಗಳು ಈ ಸಂಬಂಧ ಕಾರ್ಯಪ್ರವೃತ್ತರಾಗಬೇಕೆಂದು ಆಂಜನೇಯ ಆಗ್ರಹಿಸಿದರಲ್ಲದೇ ಒಂದು ವೇಳೆ ಭೂಮಿ ಯಾರದ್ದಾಗಿದ್ದರೇ ಅವರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಪರಿಹಾರ ನೀಡಬಹುದು. ಈ ನಿಟ್ಟಿನಲ್ಲಿ ನಾನು ತಗಲುವ ಸಂಪೂರ್ಣ ವೆಚ್ಚ ಭರಿಸುವೆ ಎಂದು ತಿಳಿಸಿದರು.

ಐಮಂಗಲ ಸುತ್ತಮುತ್ತಲ ಗ್ರಾಮಗಳ ಬಡ ಮಕ್ಕಳಿಗೆ ಶಿಕ್ಷಣ ನೀಡುವುದು, ಅನಾಥಾಲಯ ಸ್ಥಾಪನೆಯ ಸದುದ್ದೇಶ ಹೊಂದಿರುವ ಶ್ರೀಗಳ ಮೇಲೆ ಹಲ್ಲೆ ಇಡೀ ಧಾರ್ಮಿಕ ಮುಖಂಡರಿಗೆ ಮಾಡಿರುವ ಅಪಮಾನ ಮತ್ತು ಅವರಲ್ಲಿ ಭೀತಿ ಸೃಷ್ಠಿಸುವಂತದ್ದಾಗಿದೆ. ಆದ್ದರಿಂದ‌ ಮಾರಾಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ತಕ್ಷಣವೇ ರಾಜ್ಯದಿಂದಲೇ ಗಡಿಪಾರು ಮಾಡಬೇಕು. ಜೊತೆಗೆ ಕಠಿಣ ಶಿಕ್ಷೆ ಆಗುವ ರೀತಿ ಕಾನೂನು ಪ್ರಕ್ರಿಯೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ‌ ಸಂದರ್ಭದಲ್ಲಿ ಎಸಿ ಕಾಂತರಾಜ್, ಡಿವೈಎಸ್ಪಿ ಶಿವಕುಮಾರ್, ಸಿಪಿಐ ಗುಡ್ಡಪ್ಪ ಹಾಗೂ ಗ್ರಾಮದ ಹಿರಿಯರು
ಉಪಸ್ಥಿತರಿದ್ದರು.

*ಪೋಟೊ ಕ್ಯಾಪ್ಷನ್* ಐಮಂಗಲದ ಹರಳಯ್ಯ ಗುರುಪೀಠಕ್ಕೆ ಶುಕ್ರವಾರ ಸಂಜೆ ಮಾಜಿ‌ಸಚಿವ ಎಚ್.ಆಂಜನೇಯ ‌ಅಧಿಕಾರಿಗಳೊಂದಿಗೆ ಭೇಟಿ‌ ನೀಡಿ‌ ಪರಿಶೀಲಿಸಿದರು.

Continue Reading

ದಿನದ ಸುದ್ದಿ

ದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು

Published

on

ಮುಖ್ಯಾಂಶಗಳು


ಟೆಂಡರ್ ಇಲ್ಲದೆ ಸಾಮಗ್ರಿ ಖರೀದಿ ಆರೋಪ

​ಜುಲೈ 10ರ ವರೆಗೆ ಸ್ಥಳ ಪರಿಶೀಲನೆ, ದಾಖಲೆಗಳ ತಪಾಸಣೆ

ತನಿಖಾಧಿಕಾರಿಗಳ ಮುಂದೆ ಹಾಜರಾಗಲು ದೂರುದಾರರಿಗೆ ನೋಟಿಸ್

ಸುದ್ದಿದಿನ,​ದಾವಣಗೆರೆ: ತಾಲೂಕು ಪಂಚಾಯಿತಿಯ 2022-23ನೇ ಸಾಲಿನ ಅನಿರ್ಬಂಧಿತ ಅನುದಾನದಡಿ ಕೈಗೊಳ್ಳಲಾದ ವಿವಿಧ ಕಾಮಗಾರಿಗಳ ಖರೀದಿ ವ್ಯವಹಾರದಲ್ಲಿ ನಿಯಮ ಉಲ್ಲಂಘಿಸಿ, ಸರ್ಕಾರಿ ಹಣ ದುರುಪಯೋಗಪಡಿಸಿಕೊಂಡಿರುವ ಗಂಭೀರ ಆರೋಪದ ಬೆನ್ನತ್ತಿರುವ ಲೋಕಾಯುಕ್ತ ಸಂಸ್ಥೆಯು ತನಿಖೆಯನ್ನು ತೀವ್ರಗೊಳಿಸಿದೆ.

​ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದ ತಾಂತ್ರಿಕ ಮತ್ತು ಲೆಕ್ಕಪತ್ರ ಶಾಖೆಯ ಅಧಿಕಾರಿಗಳು ಜುಲೈ 7 ರಿಂದ 10 ರವರೆಗೆ ಜಿಲ್ಲೆಯಲ್ಲಿ ಬೀಡುಬಿಡಲಿದ್ದು, ಸ್ಥಳ ತನಿಖೆ ಹಾಗೂ ದಾಖಲೆಗಳ ಪರಿಶೀಲನೆ ನಡೆಸಲಿದ್ದಾರೆ.

ನಿಯಮ ಗಾಳಿಗೆ: ‘ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ– ಕರ್ನಾಟಕ’ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಕೆ.ಎ. ಓಬಳೇಶ್ ಅವರು 2025ರ ಜನೆವರಿ 21ರಂದು ಲೋಕಾಯುಕ್ತಕ್ಕೆ ಈ ಕುರಿತು ಅಧಿಕೃತ ದೂರು ನೀಡಿದ್ದರು. 2022-23ನೇ ಸಾಲಿನಲ್ಲಿ ದಾವಣಗೆರೆ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ವಿವಿಧ ಯೋಜನೆಗಳ ಕಾಮಗಾರಿಗಳಿಗೆ ಸಾಮಗ್ರಿಗಳನ್ನು ಖರೀದಿಸುವಾಗ ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸಿಲ್ಲ. ಅಧಿಕೃತ ಮಾರಾಟಗಾರರಿಂದ ದರಪಟ್ಟಿ (ಕೊಟೇಷನ್) ಪಡೆಯದೆ, ನಿಯಮಾವಳಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಸರ್ಕಾರದ ಹಣ ಪೋಲು ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ತನಿಖೆ ಎದುರಿಸುತ್ತಿರುವವರು

ಶ್ರೀ ಎನ್.ಜೆ. ಆನಂದ್, ಕಾರ್ಯನಿರ್ವಾಹಕ ಅಧಿಕಾರಿ (ಇಒ), ತಾಲೂಕು ಪಂಚಾಯಿತಿ, ದಾವಣಗೆರೆ.

​ಶ್ರೀ ನಾಗರಾಜ್ ನಾಯ್ಕ್, ಸಹಾಯಕ ಲೆಕ್ಕಾಧಿಕಾರಿ, ತಾಲೂಕು ಪಂಚಾಯಿತಿ, ದಾವಣಗೆರೆ.

​ಶ್ರೀ ಚನ್ನಪ್ಪ ಎ., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ), ಜಿಲ್ಲಾ ಪಂಚಾಯತ್, ದಾವಣಗೆರೆ.

ಕಚೇರಿಯಲ್ಲಿ ತಪಾಸಣೆ

ದೂರಿನ ಅನ್ವಯ ಲೋಕಾಯುಕ್ತದ ತಾಂತ್ರಿಕ ಮತ್ತು ಲೆಕ್ಕಪತ್ರ ಶಾಖೆಯ ತನಿಖಾಧಿಕಾರಿ ಟಿ.ಸಿ. ಜಯರಾಮಯ್ಯ ಅವರು ತನಿಖಾ ವೇಳಾಪಟ್ಟಿ ಸಿದ್ಧಪಡಿಸಿದ್ದಾರೆ. ಜುಲೈ 7 ರಂದು ಬೆಳಗ್ಗೆ 11.30ಕ್ಕೆ ದಾವಣಗೆರೆ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ತನಿಖಾ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 10 ರವರೆಗೆ ಸರಣಿ ದಾಖಲೆಗಳ ಪರಿಶೀಲನೆ ನಡೆಯಲಿದೆ. ಸ್ಥಳ ತನಿಖೆಯ ಸಂದರ್ಭದಲ್ಲಿ ಖುದ್ದಾಗಿ ಹಾಜರಿದ್ದು, ಪೂರಕ ದಾಖಲೆಗಳೊಂದಿಗೆ ಸಹಕರಿಸುವಂತೆ ದೂರುದಾರರಿಗೂ ನೋಟಿಸ್ ನೀಡಲಾಗಿದೆ.

​ಜಿಲ್ಲೆಯ ಪ್ರಭಾವಿ ಅಧಿಕಾರಿಗಳೇ ಲೋಕಾಯುಕ್ತ ತನಿಖೆಯ ಬಿಸಿಗೆ ಸಿಲುಕಿರುವುದು ಆಡಳಿತ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ 

Published

on

ಸುದ್ದಿದಿನ,ದಾವಣಗೆರೆ: ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ತಿಳಿಸಿದರು.

ಅವರು ಸೋಮವಾರ, ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಎಲ್ಲೂ ಕೂಡ ಸಾಮೂಹಿಕವಾಗಿ ಫಾರಂ ವಿತರಣೆ ಮಾಡುತ್ತಿಲ್ಲ ಮತ್ತು ಮಾಡುವುದೂ ಇಲ್ಲ, ಕೆಲವು ಬೂತ್‌ಗಳಲ್ಲಿ ಸಾರ್ವಜನಿಕರೇ ಗುಂಪುಗೂಡಿ ಇಲ್ಲೇ ಫಾರಂ ನೀಡಿ ಎಂದು ಕೇಳಿರುವ ಉದಾಹರಣೆಗಳು ಇವೆಯೇ ಹೊರತು, ಇಲಾಖೆಯಿಂದ ಸಾಮೂಹಿಕ ವಿತರಣೆ ನಡೆದಿಲ್ಲ ಎಂದರು.

ಪ್ರತಿಯೊಬ್ಬ ಬೂತ್ ಮಟ್ಟದ ಅಧಿಕಾರಿಗಳಿಗೆ ಈಗಾಗಲೇ ಲಿಖಿತ ಸೂಚನೆ ಹಾಗೂ ಸೂಕ್ತ ತರಬೇತಿಯನ್ನು ನೀಡಲಾಗಿದೆ. ಅವರು ಕಡ್ಡಾಯವಾಗಿ ಪ್ರತಿಯೊಬ್ಬರ ಮನೆ ಮನೆಗೆ ಭೇಟಿ ನೀಡಿ ಫಾರಂಗಳನ್ನು ವಿತರಿಸುವರು. ಭೇಟಿ ನೀಡಿದ ನಂತರ ಮನೆಯ ಬಾಗಿಲಿನ ಮೇಲೆ ಕಡ್ಡಾಯವಾಗಿ ಸ್ಟಿಕ್ಕರ್ ಅಂಟಿಸಬೇಕೆಂದು ಆದೇಶಿಸಲಾಗಿದೆ. ಹಳ್ಳಿಗಳಲ್ಲಿ ಹಾಗೂ ಕೆಲವು ಕಡೆ ಸಾರ್ವಜನಿಕರು ತಮ್ಮ ಫಾರಂಗಳನ್ನು ಬೇಗ ಮಾಡಿಕೊಡಿ ಎಂದು ಬಿ.ಎಲ್.ಓಗಳ ಬಳಿ ಗುಂಪುಗೂಡುತ್ತಿರುವುದು ಕಂಡುಬಂದಿದೆ. ಆದರೆ, ಇನ್ನು ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಲು ನಮ್ಮ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಸಂಪೂರ್ಣ ತಂಡವು ಬಿ.ಎಲ್.ಓ.ಗಳಿಗೆ ನೆರವಾಗಲಿದ್ದಾರೆ ಎಂದು ತಿಳಿಸಿದರು.

ಸಾರ್ವಜನಿಕರ ಅನುಕೂಲಕ್ಕಾಗಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 40 ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ನೇರವಾಗಿ ಈ ಸಹಾಯ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಫಾರಂಗಳನ್ನು ಭರ್ತಿ ಮಾಡಿಕೊಳ್ಳಬಹುದು. ಭರ್ತಿ ಮಾಡಿದ ಫಾರಂಗಳನ್ನು ಕಡ್ಡಾಯವಾಗಿ ಬಿ.ಎಲ್.ಓ.ಗಳಿಗೆ ಹಸ್ತಾಂತರಿಸಬೇಕು ಎಂದರು
ರಾಷ್ಟ್ರೀಯ ಪಕ್ಷಗಳಿಂದ ನೇಮಕಗೊಂಡಿರುವ ಬಿ.ಎಲ್.ಎ (ಬೂತ್ ಮಟ್ಟದ ಏಜೆಂಟ್‌ಗಳು) ಸಾರ್ವಜನಿಕರಿಗೆ ಫಾರಂ ಭರ್ತಿ ಮಾಡಲು ಸಹಾಯ ಮಾಡಬಹುದು. ಅವರು ಮೊದಲ ಹಂತದಲ್ಲಿ ತಲಾ 50 ಫಾರಂಗಳನ್ನು ಸಂಗ್ರಹಿಸಿ, ಭರ್ತಿ ಮಾಡಿ ನಮ್ಮ ಬಿ.ಎಲ್.ಓ.ಗಳಿಗೆ ತಂದುಕೊಡಲು ಅವಕಾಶ ಕಲ್ಪಿಸಲಾಗಿದೆ. ಇದು ಗುಂಪಾಗಿ ಮಾಡುವುದಲ್ಲ, ಬದಲಿಗೆ ಮನೆ ಮನೆಗೆ ಹೋಗಿ ಬಿ.ಎಲ್.ಓಗಳ ಸಹಯೋಗದೊಂದಿಗೆ ಮಾಡುವ ಕಾರ್ಯವಾಗಿದೆ ಎಂದರು.

ಸಹಿ ಮಾಡುವ ಪ್ರಕ್ರಿಯೆಯು ಮತದಾರರದ್ದೇ ಆಗಿರುತ್ತದೆ. ಮೊಬೈಲ್ ಬಳಸಲು ಬಾರದ ಅನಕ್ಷರಸ್ಥರಿಗೆ ಅಥವಾ ತಾಂತ್ರಿಕ ತೊಂದರೆ ಇರುವವರಿಗೆ ಬಿ.ಎಲ್.ಓ ಹಾಗೂ ಬಿ.ಎಲ್.ಎ.ಗಳು ಸಹಾಯ ಮಾಡಲಿದ್ದಾರೆ. ಭಾರತೀಯ ಚುನಾವಣಾ ಆಯೋಗದ ನಿರ್ದೇಶನದ ಅಡಿಯಲ್ಲೇ ನಮ್ಮ ಇಡೀ ತಂಡ ಕೆಲಸ ಮಾಡುತ್ತಿದೆ ಎಂದರು.

ಒಂದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಮನೆ ಶಿಫ್ಟ್ ಮಾಡಿಕೊಂಡಿರುವ ಮತದಾರರು, ತಮ್ಮ ಹೆಸರು ಕೈಬಿಟ್ಟು ಹೋಗುವ ಆತಂಕ ಪಡಬೇಕಾಗಿಲ್ಲ. ಅಂತಹ ಮತದಾರರು ‘ಫಾರಂ-8’ ಅನ್ನು ಸಲ್ಲಿಸುವ ಮೂಲಕ ತಮ್ಮ ವಿಳಾಸವನ್ನು ಸುಲಭವಾಗಿ ಬದಲಾಯಿಸಿಕೊಳ್ಳಬಹುದು ಎಂದರು.

ಈಗಾಗಲೇ ಮ್ಯಾಪಿಂಗ್ ಆಗಿರುವ ಮತದಾರರು ಯಾವುದೇ ದಾಖಲೆಗಳನ್ನು ನೀಡುವ ಅಗತ್ಯವಿರುವುದಿಲ್ಲ. ಒಂದು ವೇಳೆ ತಪ್ಪಾಗಿ ಮ್ಯಾಪಿಂಗ್ ಆಗಿದ್ದರೆ ಅಥವಾ ತಂದೆ-ತಾಯಿಯ ಹೆಸರುಗಳಲ್ಲಿ ತಪ್ಪುಗಳಾಗಿದ್ದರೆ, 2002ರ ಹಳೆಯ ವೋಟರ್ ಐಡಿ ವಿವರಗಳ ಆಧಾರದ ಮೇಲೆ ಬಿ.ಎಲ್.ಓ ಮೊಬೈಲ್ ಆಪ್ (BLO Mobile App) ಮೂಲಕ ತಿದ್ದುಪಡಿ ಹಾಗೂ ವರ್ಗಾವಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

18 ವರ್ಷ ತುಂಬಿರುವ ಅರ್ಹ ಯುವ ಮತದಾರರು ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಿಗದಿಪಡಿಸಿದ ಫಾರಂಗಳನ್ನು ಪಡೆದು ಭರ್ತಿ ಮಾಡಬಹುದಾಗಿದೆ. ಇದಕ್ಕಾಗಿ ಸಾರ್ವಜನಿಕರು ಯಾರೂ ಮತಗಟ್ಟೆಗಳನ್ನಾಗಲಿ ಅಥವಾ ಬಿ.ಎಲ್.ಓಗಳನ್ನಾಗಲಿ ಹುಡುಕಿಕೊಂಡು ಹೋಗುವ ಅಗತ್ಯವಿಲ್ಲ, ನಾವೇ ನಿಮ್ಮ ಮನೆ ಬಾಗಿಲಿಗೆ ಬರುತ್ತೇವೆ ಎಂದು ತಿಳಿಸಿದರು.

ಅನಾಥಾಶ್ರಮಗಳಲ್ಲಿರುವ ಹಾಗೂ ತಂದೆ-ತಾಯಿಯರ ಮಾಹಿತಿ ಇಲ್ಲದವರಿಗೂ ಸಹ ಮತದಾನದ ಹಕ್ಕನ್ನು ಕಲ್ಪಿಸಲು ಚುನಾವಣಾ ಆಯೋಗವು ವಿಶೇಷ ಕ್ರಮ ಕೈಗೊಂಡಿದೆ. ಸರ್ಕಾರಿ ಅನಾಥಾಶ್ರಮವೊಂದರಲ್ಲಿರುವ 43 ಯುವಕರು 2025ನೇ ಇಸವಿಯಲ್ಲೂ ಮತದಾರರ ಪಟ್ಟಿಯಲ್ಲಿದ್ದಾರೆ. ಇಂತಹ ಸಂದರ್ಭಗಳಲ್ಲಿ ಸರ್ಕಾರವೇ ಅವರಿಗೆ ಪೋಷಕರಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರೆ ಅವರ ಅಧಿಕೃತ ಪೋಷಕರಾಗಿರುತ್ತಾರೆ ಎಂದರು.

ದೇವದಾಸಿಯರಂತಹ ಪ್ರಕರಣಗಳಲ್ಲಿ ತಂದೆಯ ವಿವರಗಳು ಲಭ್ಯವಿಲ್ಲದಿದ್ದರೆ, ತಾಯಿಯ ವಿವರಗಳನ್ನು ನೀಡಿ ಹೆಸರು ನಮೂದಿಸಲು ಅವಕಾಶವಿದೆ. ಇನ್ನು ಕೆಲವು ಸಂದರ್ಭಗಳಲ್ಲಿ ತಂದೆ-ತಾಯಿ ಇಬ್ಬರೂ ಇಲ್ಲದಿದ್ದರೆ, ಅಂತವರು ತಮ್ಮ ಅಜ್ಜ ಅಥವಾ ಅಜ್ಜಿಯ ಹೆಸರನ್ನು ಸಂಬಂಧದ ಕಾಲಂನಲ್ಲಿ ನಮೂದಿಸಿ ಗುರುತಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಚುನಾವಣಾ ಆಯೋಗವು ಇಂತಹ ಎಲ್ಲಾ ಸವಾಲುಗಳಿಗೂ ಕಾನೂನಾತ್ಮಕವಾಗಿ ಹಾಗೂ ecinet ಮೊಬೈಲ್ ಆಪ್ ಮತ್ತು https://voters.eci.gov.in ಮೂಲಕ ಸೂಕ್ತ ಪರಿಹಾರವನ್ನು ಕಲ್ಪಿಸಿದೆ. ಹೀಗಾಗಿ ಯಾವುದೇ ಮತದಾರರು ಆತಂಕ ಪಡುವ ಅಗತ್ಯವಿಲ್ಲ. ಬಿ.ಎ.ಲ್.ಓ ಗಳು ಮನೆಗೆ ಬಂದಾಗ ಅಥವಾ ದೂರವಾಣಿ ಮೂಲಕ ಸಂಪರ್ಕಿಸಿದಾಗ ಸಾರ್ವಜನಿಕರು ಸ್ಪಂದಿಸಿ, ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಫಾರಂ ಹಂಚಿಕೆಯಲ್ಲಿ ರಾಜ್ಯದಲ್ಲೇ ದಾವಣಗೆರೆ ಜಿಲ್ಲೆಗೆ 2ನೇ ಸ್ಥಾನ; ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ
ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಅತ್ಯಂತ ಯಶಸ್ವಿಯಾಗಿ ಪ್ರಗತಿಯಲ್ಲಿದ್ದು, ಜಿಲ್ಲಾದ್ಯಂತ ಒಟ್ಟಾರೆ ಶೇ. 94 ರಷ್ಟು ಎನ್ಯುಮರೇಷನ್ ಫಾರ್ಮ್‌ಗಳನ್ನು (Enumeration Forms) ಫಾರಂಗಳನ್ನು ಹಂಚಿಕೆ ಮಾಡುವ ಮೂಲಕ ದಾವಣಗೆರೆ ಜಿಲ್ಲೆಯು ರಾಜ್ಯದಲ್ಲಿಯೇ 2ನೇ ಸ್ಥಾನ ಪಡೆದು ಅಭೂತಪೂರ್ವ ಸಾಧನೆ ಮಾಡಿದೆ. ಇದೇ ವೇಳೆ ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಶೇ. 99.81 ರಷ್ಟು ದಾಖಲೆ ಪ್ರಮಾಣದ ಎನ್ಯುಮರೇಷನ್ ಫಾರ್ಮ್‌ಗಳನ್ನು (Enumeration Forms) ಪಾರಂಗಳನ್ನು ಅತ್ಯಂತ ಯಶಸ್ವಿಯಾಗಿ ಹಂಚಿಕೆ ಮಾಡಲಾಗಿದ್ದು, ಇಡೀ ರಾಜ್ಯದಲ್ಲಿಯೇ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ. ಹಾಗೂ ಶೇ. 10.8 ರಷ್ಟು ಗಣಕೀಕರಣವಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮನೆ ಮನೆ ಭೇಟಿ ಹಾಗೂ ಮಾಹಿತಿ ಸಂಗ್ರಹ ಪ್ರಗತಿಯಲ್ಲಿ

ದಾವಣಗೆರೆ ಜಿಲ್ಲೆಯಲ್ಲಿ ಜೂನ್‌ 16 ರ ವೇಳೆಗೆ ಒಟ್ಟು 14,99,282 ಮತದಾರರಿದ್ದು, ಇವರಿಗೆ ಸಂಬಂಧಿಸಿದ ಎನ್ಯುಮರೇಷನ್ ಫಾರ್ಮ್‌ಗಳನ್ನು (Enumeration Forms) ಮುದ್ರಿಸಿ ಬಿಎಲ್‌ಓಗಳಿಗೆ ವಿತರಿಸಲಾಗಿದೆ. ಜಿಲ್ಲಾದ್ಯಂತ ಜೂನ್‌ 06 ರಿಂದ ಜುಲೈ 29 ರ ಅವಧಿಯಲ್ಲಿ ಬಿಎಲ್‌ಓಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದು, ಇದೇ ಅವಧಿಯಲ್ಲಿ ಸಂಗ್ರಹಿಸಿದ ನಮೂನೆಗಳ ಗಣಕೀಕರಣ ಕಾರ್ಯವೂ ಪ್ರಗತಿಯಲ್ಲಿದೆ.

ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮತ್ತು ಪ್ರಗತಿ ವಿವರ

ಜಿಲ್ಲೆಯ ಒಟ್ಟು 14,99,282 ಮತದಾರರ ಪೈಕಿ ಬಿಎಲ್‌ಓಗಳು ಇದುವರೆಗೆ ಒಟ್ಟು 14,06,472 ಎನ್ಯುಮರೇಷನ್ ನಮೂನೆಗಳನ್ನು ವಿತರಿಸಿದ್ದು, 1,54,504 ನಮೂನೆಗಳನ್ನು ಗಣಕೀಕರಿಸಿದ್ದಾರೆ.

103-ಜಗಳೂರು: ಒಟ್ಟು 2,00,836 ಮತದಾರರಿದ್ದು, 1,88,446 ನಮೂನೆಗಳನ್ನು ವಿತರಿಸಲಾಗಿದ್ದು, 18,003 ನಮೂನೆಗಳನ್ನು ಗಣಕೀಕರಿಸಲಾಗಿದೆ. 105-ಹರಿಹರ: ಒಟ್ಟು 2,11,023 ಮತದಾರರಿದ್ದು, 2,06,550 ನಮೂನೆಗಳನ್ನು ವಿತರಿಸಲಾಗಿದ್ದು, 32,630 ನಮೂನೆಗಳನ್ನು ಗಣಕೀಕರಿಸಲಾಗಿದೆ. 106-ದಾವಣಗೆರೆ ಉತ್ತರ: ಒಟ್ಟು 2,58,718 ಮತದಾರರಿದ್ದು, 2,44,948 ನಮೂನೆಗಳನ್ನು ವಿತರಿಸಲಾಗಿದ್ದು, 7,120 ನಮೂನೆಗಳನ್ನು ಗಣಕೀಕರಿಸಲಾಗಿದೆ. 107-ದಾವಣಗೆರೆ ದಕ್ಷಿಣ : ಒಟ್ಟು 2,27,996 ಮತದಾರರಿದ್ದು, 194,785 ನಮೂನೆಗಳನ್ನು ವಿತರಿಸಲಾಗಿದ್ದು, 5,085 ನಮೂನೆಗಳನ್ನು ಗಣಕೀಕರಿಸಲಾಗಿದೆ. 108-ಮಾಯಕೊಂಡ: ಒಟ್ಟು 197,048 ಮತದಾರರಿದ್ದು, 196,486 ನಮೂನೆಗಳನ್ನು ವಿತರಿಸಲಾಗಿದ್ದು, 42,785 ನಮೂನೆಗಳನ್ನು ಗಣಕೀಕರಿಸಲಾಗಿದೆ. 109-ಚನ್ನಗಿರಿ ಒಟ್ಟು 2,03,628 ಮತದಾರರಿದ್ದು, 192,838 ನಮೂನೆಗಳನ್ನು ವಿತರಿಸಲಾಗಿದ್ದು, 36,531 ನಮೂನೆಗಳನ್ನು ಗಣಕೀಕರಿಸಲಾಗಿದೆ. 110- ಹೊನ್ನಾಳಿ ಒಟ್ಟು 2,00,033 ಮತದಾರರಿದ್ದು, 182,419 ನಮೂನೆಗಳನ್ನು ವಿತರಿಸಲಾಗಿದ್ದು, 12,350 ನಮೂನೆಗಳನ್ನು ಗಣಕೀಕರಿಸಲಾಗಿದೆ.

ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಮತದಾರರ ಗುರುತಿಸುವಿಕೆ ಪ್ರಗತಿ

ಜೂನ್‌ 6 ರಿಂದ ಜಿಲ್ಲೆಯಲ್ಲಿ ಮತದಾರರ ಎನ್ಯುಮರೇಷನ್ ಫಾರ್ಮ್ಸ್ ಹಂಚಿಕೆ ಹಾಗೂ ಮಾಹಿತಿ ಸಂಗ್ರಹಣೆಯ ವೇಳೆ ಒಟ್ಟು 1,707 ವಿವಿಧ ಪ್ರಕರಣಗಳನ್ನು ಗುರುತಿಸಲಾಗಿದೆ. ಇದರಲ್ಲಿ ಒಟ್ಟು 30 ನಮೂನೆಗಳು ಸಂಗ್ರಹವಾಗದ/ಗೈರು ಹಾಜರಿ ಪ್ರಕರಣಗಳಾಗಿದ್ದು, 641 ಶಾಶ್ವತ ವಲಸೆ, 751 ಮರಣ ಹಾಗೂ 271 ದ್ವಿಪ್ರತಿ (Duplicate) ಪ್ರಕರಣಗಳಾಗಿವೆ.
ಜಗಳೂರು ಕ್ಷೇತ್ರದಲ್ಲಿ 122 ಪ್ರಕರಣಗಳನ್ನು ಗುರುತಿಸಲಾಗಿದ್ದು (2 ಗೈರು, 31 ಶಾಶ್ವತ ವಲಸೆ, 47 ಮರಣ, 40 ದ್ವಿಪ್ರತಿ, 2 ಇತರೆ), ಹರಿಹರ ಕ್ಷೇತ್ರದಲ್ಲಿ 149 ಪ್ರಕರಣಗಳು (2 ಗೈರು, 48 ಶಾಶ್ವತ ವಲಸೆ, 71 ಮರಣ, 26 ದ್ವಿಪ್ರತಿ, 2 ಇತರೆ), ದಾವಣಗೆರೆ ಉತ್ತರ ಕ್ಷೇತ್ರದಲ್ಲಿ 246 ಪ್ರಕರಣಗಳು (5 ಗೈರು, 98 ಶಾಶ್ವತ ವಲಸೆ, 112 ಮರಣ, 31 ದ್ವಿಪ್ರತಿ), ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 235 ಪ್ರಕರಣಗಳು (6 ಗೈರು, 123 ಶಾಶ್ವತ ವಲಸೆ, 60 ಮರಣ, 44 ದ್ವಿಪ್ರತಿ, 2 ಇತರೆ), ಮಾಯಕೊಂಡ ಕ್ಷೇತ್ರದಲ್ಲಿ 337 ಪ್ರಕರಣಗಳು (4 ಗೈರು, 113 ಶಾಶ್ವತ ವಲಸೆ, 174 ಮರಣ, 45 ದ್ವಿಪ್ರತಿ,1 ಇತರೆ), ಚನ್ನಗಿರಿ ಕ್ಷೇತ್ರದಲ್ಲಿ 386 ಪ್ರಕರಣಗಳು (10 ಗೈರು, 139 ಶಾಶ್ವತ ವಲಸೆ, 167 ಮರಣ, 63 ದ್ವಿಪ್ರತಿ, 7 ಇತರೆ) ಹಾಗೂ ಹೊನ್ನಾಳಿ ಕ್ಷೇತ್ರದಲ್ಲಿ ಒಟ್ಟು 232 ಪ್ರಕರಣಗಳ (1 ಗೈರು, 89 ಶಾಶ್ವತ ವಲಸೆ, 120 ಮರಣ, 22 ದ್ವಿಪ್ರತಿ) ಗುರುತಿಸಿದೆ ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಗೂ ಮುನ್ನ ವಿವಿಧ ರಾಷ್ಟ್ರೀಯ ಪಕ್ಷಗಳೊಂದಿಗೆ ಸಭೆ ನಡೆಸಿದ್ದು, ರಾಷ್ಟ್ರೀಯ ಪಕ್ಷಗಳು ಮತದಾರರ ಪಟ್ಟಿ ಪರಿಷ್ಕರಣೆಗೆ ಬಿ.ಎಲ್.ಎ ಗಳನ್ನು ನೇಮಕ ಮಾಡಿದ್ದು ಎನ್ಯುಮರೇಷನ್ ಫಾರ್ಮ್‌ಗಳನ್ನು (Enumeration Forms) ಪಾರಂಗಳನ್ನು ನಮೂದಿಸಿ ಬಿ.ಎಲ್.ಓ ಗಳಿಗೆ ನೀಡಲು ಮತ್ತು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಕಾರ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ಸಹಕಾರ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್‌, ಉಪ ಕಾರ್ಯದರ್ಶಿ ಮಮತ ಹಸ ಗೌಡರ್‌, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್‌, ಪಾಲಿಕೆ ಆಯುಕ್ತ ಮಹಾಂತೇಶ್‌ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending