Connect with us

ದಿನದ ಸುದ್ದಿ

ಉರಿ ಚಮ್ಮಾಳಿಗೆ

Published

on

  • ಡಾ.ವಡ್ಡಗೆರೆ ‌ನಾಗರಾಜಯ್ಯ

ವೊತ್ತಿನ ಬೆಳಗು ನನಗಿನ್ನೂ ಹಸಿರಾಗಿ ನೆನಪಿಗಿದೆ. ಪ್ರಾಯಶಃ ಇನ್ನೆಂದಿಗೂ ಮಾಸದ ನೆನಪು ಅದು ; ನನ್ನ ಕರೇಕುಲದ ಮುಂದಿನ ಪೀಳಿಗೆಗಳು ಸೂರ್ಯ ಚಂದ್ರನಿರುವ ತನಕ ಈ ನೆನಪನ್ನು ತಮ್ಮೊಡನೆ ಹೊತ್ತೊಯ್ಯುತ್ತವೆಂಬ ಬಲವಾದ ನಂಬಿಕೆ ನನಗಿದೆ.

ಮಾನವ ನಿರ್ಮಿತ ಯಾವುದೇ ಉಪಾಯಗಳು ನನ್ನ ಕುಲಸ್ತರು ಅನುಭವಿಸಿದ ಸುಖ ದುಃಖ, ನೋವು – ನಲಿವು, ಸಂಕಟ ಹಾಗೂ ಹೋರಾಟಗಳ ನೆನಪಿನ ಬೇರನ್ನು ಕಿತ್ತು ಹಾಕಲು ಸಾಧ್ಯವಿಲ್ಲ ; ಆ ದೇವರಿಂದಲೂ ಕೂಡ! ನಮ್ಮ ನೆನಪಿಗೆ ಅಂತಹ ಅಗಾಧ ಶಕ್ತಿಯಿದೆ. ಅದು ನಿತ್ಯಗಾಮಿನಿ.

ಆ ದಿನ ಬೆಳಗ್ಗೆ ಅನುಭವ ಮಂಟಪದ ದಾರಿಯಲ್ಲಿ ಎದುರಾದ ನಿನ್ನನ್ನು ನೋಡಿದ ನಾನು ‘ಶರಣು ಬಸವಣ್ಣ’ ಎಂದು ನಂಬಿಸಿದ್ದೆ. ಇದಕ್ಕೆ ಪ್ರತಿಯಾಗಿ ನೀನೂ ಸಹ “ಶರಣು ಶರಣು ಹರಳಯ್ಯ” ಎಂದು ವಂದಿಸಿದ್ದೆ. ನೆನಪಿದೆಯಾ ಅಣ್ಣಾ? ನಿನ್ನಿಂದ ಒಂದು ಶರಣರಿಗೆ ಬದಲಾಗಿ ಎರಡು ಸಲ “ಶರಣು ಶರಣು” ಎಂಬ ನುಡಿ ಕೇಳಿದ ನಾನು ಎಷ್ಟೊಂದು ತತ್ತರಿಸಿ ಹೋದೆ.

ನಿನಗೆ ಗೊತ್ತಿರಲಿಕ್ಕಿಲ್ಲ. ನೀನು ನನ್ನ ಅರಿವಿಗೆ ಬಾರದಂತೆ ಸಹಜವಾಗಿ ಒಂದು ಶರಣು ಹೆಚ್ಚುವರಿ ಋಣಭಾರ ನನ್ನ ಮೇಲೆ ಹೇರಿದ್ದೆ. ನೀನೇನೋ ಭಾರ ಇಳಿಸಿಕೊಳ್ಳಲು ಚಡಪಡಿಸಿ ಬೆಂದು ಹೋಗುವಂಥವನು ನಿಜ. ನಿಮ್ಮವರು ಹೊತ್ತ ಭಾರ ಇಳಿಸಲು ಹೋದ ನೀನು ನನ್ನ ಮೇಲೆ ಭಾರ ಹೇರಿದೆಯಲ್ವಾ, ಇದು ನ್ಯಾಯವೇ? ಎಷ್ಟಾದರೂ ನೀನು ಭಾರ ಹೊರಿಸುವ ಕುಲದಿಂದ ಬಂದವನು; ನಾನಾದರೋ ಭಾರ ಹೊರಲೆಂದೇ ಹುಟ್ಟಿದ ನೊಗವೆಳೆವ ಮೂಕತ್ತು ಎಂಬುದು ನನಗೆ ಅರಿವಾಯಿತು.

ನಾನು ಹೊಲೆಯುವ ಮೆಟ್ಟುಗಳ ಮೇಲೆ ಭಾರ ಹಾಕಿ ನಡೆಯುವ ದಾರಿಹೋಕರು ನನ್ನೆದುರಿನಲ್ಲಿದ್ದಾರೆ. ಮೆಟ್ಟು ಹೊಲೆಯುವ ನನಗೆ ಮೆಟ್ಟೆಂದಿಗೂ ಭಾರವಲ್ಲ. ನಡೆಯುವ ದಾರಿಹೋಕರ ದಣಿವನ್ನು ತಾಪವನ್ನು ನನ್ನ ಮೆಟ್ಟು ಕಳೆಯಬಲ್ಲದು. ಕಲ್ಲು ಮುಳ್ಳುಗಳು ನನ್ನ ಮೆಟ್ಟುಗಳಿರುವ ಕಡೆಗೆ ದಾರಿಹೋಕರ ಪಾದಗಳನ್ನು ಚುಚ್ಚಲಾರವು.

ಆ ದಿನ ನೀನು ಶರಣು ಶರರಣಯ್ಯಾ ಎಂದು ಹೇಳಿದ ಬಳಿಕ ಏರುವ ಹೊತ್ತಿನೊಂದಿಗೆ ನೀನು ಹೊರಿಸಿದ ಶರಣೆಂಬ ವಜೆಯೂ ಏರುತ್ತಾ ಹೋಯಿತು.

ಏರುವ ಹೊತ್ತಿನೊಡನೆ ನೀನು ಹೊರಿಸಿದ ಶರಣೆಂಬ ವಜೆ ಹೊತ್ತ ನನ್ನ ಬೆನ್ನ ಬುಡದಿಂದ ಸಣ್ಣಗೆ ಶುರುವಾದ ಚಳುಕು ಇಡೀ ಶರೀರವನ್ನೆಲ್ಲಾ ಬಾಧಿಸತೊಡಗಿತ್ತು. ಅಣ್ಣಾ ನನಗೆ ಗೊತ್ತು. ನೀನು ಬಲಾತ್ಕರಿಸಿಯೇನು ಹೊರಿಸಲಿಲ್ಲ ; ಹಾಗೆ ನೋಡಿದರೆ ನೀನು ನಿನ್ನ ಪೂರ್ವಿಕರಿಗಿಂತಲೂ ಬದಲು ಕರುಣಿ. ಅವರಾದರೂ ನಮ್ಮನ್ನು ಪಶುಗಳಿಗಿಂತಲೂ ಕಡೆಯಾಗಿ ನಡೆಸಿಕೊಂಡರು.

ಛೇ! ಕ್ಷಮಿಸು. ನೀನೆಲ್ಲಿ ಅವರಲ್ಲಿ? ಎತ್ತಣಿಂದೆತ್ತ ಸಂಬಂಧ. ಅಂತಹ ಪೂರ್ವಿಕ ಪಳೆಯುಳಿಕೆಗಳನ್ನು ಬಿಸುಡಿ ನಿಮ್ಮ ಹಟ್ಟಿಗೆ ಓಡೋಡಿ ಬಂದ ನೀನು, ‘ಅಪ್ಪನು ನಮ್ಮ ಮಾದಾರ ಚನ್ನಯ್ಯ, ಬೊಪ್ಪ ನು ನಮ್ಮ ಡೋಹರ ಕಕ್ಕಯ್ಯ”ನೆಂದು ನಮ್ಮನ್ನೆಲ್ಲಾ ಬಾವುಣಿಕೆಯಿಂದ ತಬ್ಬಿಕೊಂಡು ನಮ್ಮ ಕಲ ಕರೇಕಲದೊಬ್ಬ ಮಗನಾದೆ ; ನೀನೊಂದು ನವಜಾತ ಶಿಶು!

ಇಲ್ಲಿ ನನ್ನ ಹಟ್ಟಿಯಲ್ಲಿ ತುಂಬಿ ಫಲದೂಗುವ ತೆಂಗಿನ ಮರದಂಥ ತಾಯಂದಿರು ತಮ್ಮ ಮಕ್ಕಳಿಗೆ ಹಾಲೂಡುವುದು ಬಲು ಸೋಜಿಗ! ಹಾಲು ಬತ್ತಿದ ಅಜ್ಜಿಯರೂ ತಮ್ಮ ಎದೆಗೆ ಅವುಚಿಕೊಂಡು ಮೊಮ್ಮಕ್ಕಳಿಗೆ ಮೊಲೆಯುಣಿಸುತ್ತಾರೆ : ಅಲ್ಲಿ ಪ್ರೀತಿ ಜಿನುಗುತ್ತದೆ! ಎಲ್ಲ ತಾಯಂದಿರೂ ತಮ್ಮೊಳಗಿನ ಮಾತೃತ್ವವನ್ನು ಹುಟ್ಟಿದ್ದ ಪ್ರತಿ ಮಗುವಿಗೂ ನೇವರಿಸಿ ಉಣ ಬಡಿಸುತ್ತಾರೆ.

ತಮ್ಮ ಕಂದಮ್ಮಗಳಿಗೆ ಎಷ್ಟು ಸಲ ಎದೆ ಹಾಲು ಕುಡಿಸಿದರೂ ತೃಪ್ತಿಯಾಗದ ಸಮಗಾರ ಭೀಮಮ್ಮವರು ನಮ್ಮ ಕರೇಕುಲದ ಹಟ್ಟಿಯಲ್ಲಾಡುವ ಇತರ ಕಂದಮ್ಮಗಳಿಗೂ ಹಾಲು ಕುಡಿಸುವುದುದುಂಟು. ಇಲ್ಲಿ ಹುಟ್ಟುವ ಪ್ರತಿ ಶಿಶುವು ಹಟ್ಟಿಯ ಎಲ್ಲ ತಾಯಂದಿರ ಎದೆ ಹಾಲು ಕುಡಿದು ಬೆಳೆಯುತ್ತದೆ. ಹೇ, ಬಸವಣ್ಣಾ ಇಂತಹ ಭಾಗ್ಯ ನಮ್ಮ ಶಿಶುವಾಗಿ ನೀನು ಕಂಡೆ!

ನನಗೆ ಹಟ್ಟಿ ತುಂಬಾ ತಾಯಂದಿರು. ಹಟ್ಟಿ, ಬಯಲಲ್ಲಿ ಬಟ್ಟ ಬಯಲಲ್ಲಿ ಊರ ಸೆರಗಲ್ಲಿ, ಎಲ್ಲೆಂದರಲ್ಲಿ ಎದೆ ಹಾಲು ಕುಡಿಸಿದ ನನ್ನ ತಾಯಂದಿರು ನನಗೆ ಹೇಳುತ್ತಿದ್ದ ಒಂದು ಮಾತು “ಅನ್ಯರ ಹೊರೆ ನೀನು ಹೊರಬೇಕಲ್ಲದೆ ನಿನ್ನ ಹೊರೆಯನ್ನು ಪರರ ಮೇಲೆ ಹೊರಿಸುವುದು ಸಲ್ಲತಕ್ಕದ್ದಲ್ಲ ಹರಳಯ್ಯಾ” ಎಂಬುದು. ಆ ದಿನ ನಾನು ಹೊರಿಸಿದ ಒಂದು ಶರಣಿನ ಹೆಚ್ಚಿನ ಹೊರೆ ಹೊತ್ತು ನಾನು ಮನೆಗೆ ಬಂದೆ. ಆಗ ಇಳಿ ಹೊತ್ತು; ಧೂಳು ಸಂಜೆ.

ನನ್ನ ನೆಚ್ಚಿನ ಸತಿ ಶಿವಶರಣೆ ಕಲ್ಯಾಣಮ್ಮನ ಕೂಟೆ ಮಾತನಾಡುತ್ತಾ ಹೊರೆ ಇಳಿಸಿಕೊಳ್ಳುವ ಉಪಾಯವನ್ನು ಕೇಳಿದೆ. ಹೊರೆ ಇಳಿಸುವ ಮಾರ್ಗ ಹೆಂಗಸರಿಗೆ ಮಾತ್ರ ಗೊತ್ತೆಂದರೆ ನಿನಗೆ ಆಶ್ಚರ್ಯವಾಗಬಹುದಲ್ಲವೆ ಬಸವಣ್ಣ? ಹೌದು, ನನ್ನ ಹೆಂಡತಿ ಕಾರ್ಯಸಾಧ್ಯವಾದ ಉಪಾಯವನ್ನು ಹೇಳುತ್ತಾಳೆಂಬ ವಿಶ್ವಾಸದಿಂದಲೇ ಕೇಳಿದ್ದೆ.

“ನೋಡು, ಶಿವಶರಣ ಬಸವಣ್ಣನವರ ಶರಣಿನ ತೂಕಕ್ಕೆ ಸಮವಾಗುವಂಥ ಸಂಪತ್ತು ನಮ್ಮತಾವ ಏನು ತಾನೆ ಐತೆ? ಹೂವುನ ಹಾಸ್ಗೆ ಮ್ಯಾಲ ನಡೆದಂಗೆ ಕಾಣೋಂಥ ಪಾದ್ರಾಕ್ಷಿ ಮಾಡ್ಕೊಡನಿ” ಎಂದು ನಮ್ಮ ಕರೇಕುಲದ ಸಮಗಾರರು ಜತನವಾಗಿ ಕಾಪಾಡಿಕೊಂಡು ಬಂದ ಚಮ್ಮಾರಿಕೆಯ ಉಪಾಯವನ್ನು ಅವಳಿಂದ ಕೇಳಿದ ನಾನು, ದೇವಾಂಶಿ ಮಾತುಮನಾದ ನಿನಗೆ ತೀರಾ ವಿಶೇಷವಾದ ಪಾದ್ರಾಕ್ಷಿಯನೇ ಮಾಡೋಡಬೇಕು, ಯಂಗೆ ಮಾಡೋದು? ಯಾವ ತೊಗಲಿನಿಂದ ಮಾಡೋದು? ಎಂಬ ಯೋಚನೆಗಳ ಸುಳಿಗೆ ಬಿದ್ದೆ.

ಆಗ ನನ್ನ ಮುಖದ ನೆರಿಗೆಗಳ ಅಕ್ಷರಗಳನ್ನು ಸಲೀಸಾಗಿ ಓದಿ ಅರ್ಥ ಮಾಡಿಕೊಂಡು,‌ ‘ಗೋವಿನ ತೊಗಲು ಉಪಯೋಗಿಸಿದಂತೆಯೇ ನರ ಮನುಷ್ಯ ತೊಗಲ ಚಮ್ಮಾಳಿಗೆ ಮಾಡಿಕೊಡದ ವಿನಾ ಶರಣಿನ ವಜೆಯನ್ನು ನೀಗಿಕೊಳ್ಳಲಾಗದು’ ಎಂಬ ಸಲಹೆಯನ್ನು ಮುಂದಿಟ್ಟ ಕಲ್ಯಾಣಮ್ಮ, ನಮ್ಮ ಮಕ್ಕಳನ್ನು ಆಡಿಸಿ ನಲಿಸಿ ತೂಗಿ ಮಲಗಿಸಿದ ನಮ್ಮ ಅಂಕಪೀಠದ ತೊಡೆ ತೊಗಲು ಮಾತ್ರ ಈ ಕಾರ್ಯಕ್ಕೆ ಯೋಗ್ಯವೆಂದು ಬಗೆದು ಮೊದಲಿಗೆ ತನ್ನ ಚರ್ಮವನ್ನೇ ನೀಡಲು ದುಡದಿಂದ ಮುಂದಾದಳು. ಈಗ ಯೋಚಿಸು ಬಸವಣ್ಣಾ ನಮ್ಮ ಹೆಣ್ಣಿನ ಮಹಿಮೆ ಎಂಥದ್ದು?

ಮರುದಿನ ಬೆಳಗ್ಗೆ ಎದ್ದು ಸ್ನಾನಾದಿಗಳನ್ನು ಮಾಡಿ, ಮನೆಯನ್ನೆಲ್ಲಾ ಸಾರಿಸಿ, ಗುಡಿಸಿ, ಚುಕ್ಕಿ ರಂಗೋಲಿ ಎಳೆದು ಮೂಡಲ ಮುಖನಾಗಿ ‘ತಿತ್ತಿ’ ಯೊಂದಿಗೆ ಕುಳಿತಿದ್ದ ಕಲ್ಯಾಣಮ್ಮ ಮುಖ ಹೊಂಬಣ್ಣದಲ್ಲಿ ಹೊಳೆವ ಸೂರ್ಯನಂತೆಯೇ ಕಾಂತಿಯಿಂದ ಶೋಭಿಸುತ್ತಿತ್ತು. ಅವಳ ಮುಖದ ಕಾಂತಿಯ ಸುಂಕು ನನ್ನ ಮುಖಕ್ಕೆ ಪರಾಗಸ್ಪರ್ಶಗೊಂಡ ಬಳಿಕವೇ ತಿತ್ತಿಗೆ ಶರಣೆಂದು ಚೂರಿಯನ್ನು ತೆಗೆದುಕೊಂಡು ಕುಲಕಾರ್ಯೇವು ಮಾಡಲು ಕುಳಿತೆ.

ಅಣ್ಣಾ … ಬಸವಣ್ಣ…! ಅಂದು ಬೆಳಗ್ಗೆ ನಮ್ಮ ಗುಡಿಸಲ ನೆತ್ತಿ ಮೇಲೆ ನವಿಲೆರಡು ಆಡುತ್ತಿದ್ದವು. ಸಾವಿರ ಕಣ್ಣು ಅರಳಿಸಿ ಎಳೆ ಬಿಸಿಲಿನಲ್ಲಿ ನರ್ತಿಸುತ್ತಿದ್ದ ಬಂಗಾರದ ನವಿಲುಗಳು! ಬಾಲ್ಯದಲ್ಲಿ ನನ್ನ ಅಮ್ಮ ಹೇಳುತ್ತಿದ್ದಳು, “ಹರಳಯ್ಯಾ, ಈ ಜಗತ್ತು ಹುಟ್ಟಿದ್ದು ನವಿಲು ಮೊಟ್ಟೆಯಿಂದ ಕಣೋ, ಇಲ್ಲದಿದ್ದರೆ ಈ ಸೃಷ್ಟಿ ಇಷ್ಟೊಂದು ಸುಂದರವಾಗಿರಲು ಹೇಗೆ ತಾನೆ ಸಾಧ್ಯವಿತ್ತು?”

ಹೌದು ಬಸವಣ್ಣಾ ನನ್ನ ಅಮ್ಮ ಹೇಳಿದ ಅದೇ ನವಿಲು ನಮ್ಮ ಗುಡಿಸಲು ಮೇಲೇರಿ ಹಾರಿ ಕುಣಿಯುತ್ತಿರುವಾಗ ನಾನು ನನ್ನ ಬಲ ತೊಡೆ ತೊಗಲನ್ನು, ಕಲ್ಯಾಣಮ್ಮ ತನ್ನ ಎಡ ತೊಡೆ ತೊಗಲನ್ನು ಪರಸ್ಪರ ಸುಲಿದು ತೆಗೆಯಲು ದುಡಮಾಡಿ ಕುಳಿತಿದ್ದೆವು; ನವಿಲುಗಳು ಕುಣಿಯುತ್ತಲೇ ಇದ್ದವು ಬಲು ಚೆಂದವಾಗಿ!

ಅಣ್ಣಾ… ನಿಜ ಹೇಳಬೇಕೆಂದರೆ ಗಲ್ಲೇಬಾನಿಯ ದಿವ್ಯೋದಕ ಸ್ಪರ್ಶದಿಂದ ತೋಯ್ದುದಕ್ಕಿಂತಲೂ ಮಿಗಿಲಾಗಿ ನೀನು ನಮ್ಮ ಕುಲಸ್ಥರಿಗೆ ತೋರಿಸಿದ ಕರುಣಾಮೃತದಿಂದಲೇ ನಮ್ಮ ದೇಹಕ್ಕಾವರಿಸಿದ್ದ ಸೂತಕದ ತೊಗಲು ತೊಯ್ದು ಹೋಗಿತ್ತು! ಸೂತಕದ ತೊಗಲನ್ನು ಸುಲಿದು ತೆಗೆಯಲು ನೀನು ಹೊರಿಸಿದ ‘ಶರಣು’ ಒಂದು ನೆಪವಾಗಿತ್ತು.

ಸಾಮು ಹಿಡಿದ ಚೂರಿಯಿಂದ ಬಹಳ ಚಮತ್ಕಾರಿಕವಾಗಿಯೆ ತೊಗಲು ಸುಲಿದೆವು; ನಾವು ಕುಶಲಕರ್ಮಿಗಳು; ತೊಗಲು ಸುಲಿಯುವ ನನಗೆ ದೇಹವೆಂಬುದು ಯಾವತ್ತಿಗೂ ಅಡ್ಡಿಯಾಗದು! ತನ್ನ ತೊಗಲನ್ನು ತಾನು ಸುಲಿದುಕೊಳ್ಳಲಾಗದವನು ಸಮಗಾರನೇ ಅಲ್ಲ! ಹೇ! ಬಸವಣ್ಣಾ ನಿನ್ನನ್ನು ಆವರಿಸಿಕೊಳ್ಳುತ್ತಿದ್ದ ಬ್ರಾಹ್ಮಣ್ಯದ ಸೂತಕದ ತೊಗಲನ್ನು ಹರಿದು ಬಿಸಾಕಿದ ನೀನೊಬ್ಬ ದೊಡ್ಡ ಸಮಗಾರ.

ಅಂತೂ ನಿನಗೆ ಚಮ್ಮಾಳಿಗೆ ಮಾಡಿಕೊಡಲೆಂದು ನಾನು, ನನ್ನ ಪತ್ನಿಯೂ ನಮ್ಮ ತೊಗಲನ್ನು ನಾವೇ ಸುಲಿದು, ಅದರ ಸೆಳ್ಳೆ ತೆಗೆದು, ಬಿಸಿಲಿನಲ್ಲಿ ಒಣಗಿಸಿ ಕರೆಹಾಯಿಸಲು ಸಿದ್ಧಗೊಳಿಸಿದೆವು.

ಚರ್ಮ ಹದ ಮಾಡುವ ವಿಧಾನವನ್ನು ಕರೆ ಹಾಯಿಸುವುದು ಎಂದು ಹೇಳುವುದು ವಾಡಿಕೆ. ಬಸವಣ್ಣಾ ಈ ವಿಧಾನವು ನಿನಗೆ ಕೇಳಿಯೋ ನೋಡಿಯೋ ಗೊತ್ತಿರಬಹುದೆಂದು ನಾನು ಊಹಿಸುತ್ತೇನೆ. ಆದರೂ ನಿನಗೆ ಅರ್ಪಿಸಿದ ಚಮಾಳಿಗೆಯನ್ನು ತಯಾರಿಸಿದ ಬಗೆಯನ್ನು ಹೇಳುತ್ತೇನೆ ಕೇಳು.

ಗಲ್ಲೇಬಾನಿಯಲ್ಲಿ ಒಂದು ಗುಲಿಕೆ ತಂಗಡಿ ಗಿಡದ ಚಕ್ಕೆ ಪುಡಿಯೊಂದಿಗೆ ಪಾವು ಗುಲಿಕೆ ಸುಣ್ಣದ ಪುಡಿಯನ್ನು ಕಲೆಸಿದೆ. ನನ್ನ ಕೆಲಸದ ಬಳಿಕ ಕಲ್ಯಾಣಮ್ಮ ಎರಡು ಹರುವಿ ನೀರು ಸುರಿದು ಗಲ್ಲೇಬಾನಿಯಲ್ಲಿ ಎರಡು ಜಾವ ಚರ್ಮವನ್ನು ನೆನೆ ಹಾಕಿದಳು. ಒಂದೊಂದು ಪ್ರಾಣಿಯ ಚರ್ಮವನ್ನೂ ಅದರದೇ ವಿಶಿಷ್ಟ ವಿಧಾನಾನುಸಾರ ಕರೆ ಹಾಯಿಸಬೇಕು.

ತಂಗಡಿ ಚಕ್ಕೆಯ ಪುಡಿ ಮತ್ತು ಸುಣ್ಣದ ನೀರಿನಲ್ಲಿ ಹದಗೊಂಡ ಚರ್ಮವನ್ನು ಶುದ್ಧ ನೀರಿನಲ್ಲಿ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು. ಆದರೆ ನಿನಗೆ ಚಮ್ಮಾಳಿಗೆ ತಯಾರಿಸಿ ಕೊಡಲು ನಾವು ಬಹಳ ಜಾಗರೂಕತೆ ವಹಿಸಿದ್ದೆವು. ಸೋಸಿದ ನೀರಿನ ‘ತಿಳಿಗರೆ’ಯಲ್ಲಿ ಹದಗೊಂಡ ಚರ್ಮವನ್ನು ಮತ್ತೊಂದು ಗಲ್ಲೇಬಾನಿಯ ಬೆವರ ಗಂಧೋದಕದಲ್ಲಿ ತೊಳೆದು, ಮುಗಿಲ ಮಿಂಚನೆ ಎರೆದು, ರಾತ್ರಿ ಮಂಜಿನಲಿ ನೆನೆದ ಚರ್ಮವನ್ನು ರಾತ್ರಿಯ‌ ಚಂದ್ರಮನ ಬೆಳ್ಳಿ ಕಿರಣಗಳ ಬಿಸಿಯಲ್ಲಿ ಕಾಯಿಸಿ, ಬೆಳಗಿನ ಪ್ರಥಮ ಉಷಾಕಿರಣದಲ್ಲಿ ಕಾಯ್ದ ಚರ್ಮವನ್ನು ಸಂಜೆಯ ಮಂದ ನಿಷಾಕಿರಣಗಳಿಂದ ತಂಪು ಮಾಡಿ ಅದರೊಳಕ್ಕೆ ಪಾಂಗಿತವಾಗಿ ಅಗ್ನಿ ಪಾದಕವನ್ನು ತಂಪುಗೊಳಿಸಿ ಹೆಪ್ಪಿಡಲಾಯಿತು.

ಅಣ್ಣಾ…. ಬಸವಣ್ಣಾ ಹೀಗೆ ಪಾಕಾದ ಚರ್ಮವನ್ನು ನೆಲದ ಮೇಲೆ ಹರವಿ, ಮೈನಾಗಿರುವುದು ಕಂಡು, ಹರುಷಗೊಂಡು ನಿನ್ನ ಪಾದಗಳ ಅಳತೆಯನ್ನು ಧೇನಿಸತೂಡಗಲು ನಿನ್ನ ಪಾದಗಳೋ
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ ಕೂಡಲಸಂಗಮ ದೇವಾ”

ನಿನ್ನ ಅನಂತ ಪಾದದ ಅಳತೆ ನನ್ನ ಕಣ್ಣ ಆಯತಕ್ಕೆ ಸಿಕ್ಕದಾಗಿ ಕುಲದ ತಂದೆ ಜಾಂಬವನನ್ನು ಧ್ಯಾನಿಸಲು, ಜಾಂಬವ ತಾತನಾದರೋ ದೇವಿ ಅರುಂಧತಿಯವರಿಗೆ ನಿನ್ನ ಪಾದದಳತೆಯನು. ಕೆಂಡರಿಸುವಂತೆ ತಿಳಿಸಲು, ದೇವಿ ಅರುಂಧತಿಯಾದರೋ ತನ್ನ ಬಸಿರೊಳಗೆ ಹುಟ್ಟಿದ ಮಾದಾರ ಚೆನ್ನಯ್ಯನಿಗೆ ಅನುಜ್ಞೆ ಮಾಡಲು, ಚನ್ನಯ್ಯನು ತನ್ನ ಕರುಳ ಹೊಕ್ಕುಳ ಬಳ್ಳಿ ಕಲ್ಯಾಣಮ್ಮನವರಿಗೆ ನಿನ್ನ ಪಾದದ ಅಳತೆಯ ಸೋಜುಗವ ವಿವರಿಸಿದರು ಹೀಗೆ :-

ಬಸವಣ್ಣನೆಂಬುವನು ನಮ್ಮಕುಲದ ಬಂಗಾರದ ಶಿಶುವಲ್ಲವೋ ಅವನು ಉಸಿರೆಂಬ ಘನವೋ. ಅವನು ಉಸಿರೆಂಬ ಘನವಲ್ಲವೋ ಘನವೆಂಬ ಉಸಿರೊಳಡಗಿದ ಪ್ರಾಣವೋ!”

ಇಂತೀ ನಿನಗೆ ಒಪ್ಪುವ ಪಾದ್ರಾಕ್ಷಿಯ ಅಳತೆಯನ್ನು ಅರಿಯದವಳಾದ ಕಲ್ಯಾಣಮ್ಮನು ಮೂಲದಲ್ಲಿ ಜಲಮಯವಾಗಿದ್ದ ಈ ಸೃಷ್ಟಿಗೆ ತನ್ನ ರಕ್ತವನ್ನೇ ಬಸಿದು ಹೆಪ್ಪಿಟ್ಟು ಭೂಮಿಯನ್ನು ಸೃಷ್ಟಿಸಿದ ಮಾದಿಗರ ಮೊದಲ ಮಗನಾದ ಹೆಪ್ಪುಮುನಿಯನ್ನು ಸಾಕ್ಷಿಯಾಗಿ ಒಡ್ಡಿ, “ಬಸವಣ್ಣನು ನಿಜವಾದ ನಮ್ಮ ಮಾದಾರ ಕುಲದ ಮಗನೇ ಆಗಿದ್ದಲ್ಲಿ ಪುರೋಹಿತರ ಕಣ್ಣ ಎಚ್ಚರಿಕೆಯ ತಪ್ಪಿಸಿ ಓಡಿ ಬಂದು ನನ್ನ ಮಡಿಲಲ್ಲಿ ಮಲಗುವ ಕಂದಮ್ಮನಂತೆ ನನ್ನ ಸೆರಗು ಹಿಡಿದು ‘ಅವ್ವಾ’ ಎಂದು ಚೆಲುನುಡಿಗಳಲ್ಲಿ ಕರೆಯಲಿ” ಎಂದು ಪ್ರೀತಿಯಿಂದ ಕೂಗಿದಾಗ, ಬಿಜ್ಜಳನ ಅಧಿಕಾರದ ಸೆರಗಿನ ಮರೆಯಲ್ಲಿದ್ದ ನೀನು ನಿನ್ನ ಜನ್ಮಧಾರಕ ವೇಷ ಕಳೆದು, ಜಗ್ಗನೆ ಜನಿವಾರ ಹರಿದು, ಬಯಲ ಬೆತ್ತಲೆಯಂತೆ ಹುಟ್ಟುಮಾರ್ಗದಲ್ಲಿ ದಿಬ್ಬ ಹತ್ತಿ ಕಣಿವೆ ಇಳಿದು ಅಗ್ರಹಾರದಿಂದ ಬಲು ದೂರವುಳ್ಳ ಹಟ್ಟಿಯ ಹೊಕ್ಕು ನಮ್ಮ ಮನೆಯಲ್ಲಿ ಕಿಲಗುಡುವ ಕಂದನಾದೆ!

ಆ ಬಳಿಕ… ಚಲುವ ಚಂದಿರನಂಥ ಕಂದಮನಾದ ನಿನ್ನ ಅಂದದ ಆಟಗಳು ಚಂದದ ನೋಟಗಳು ಸಾವಿರ ನಕ್ಷತ್ರಗಳ ಕಣ್ಣು ಬಿಡುವ ನವಿಲು ಕುಣಿತದ ಹೊಳಪನ್ನು ನಮ್ಮ ಗುಡಿಸಲು ತುಂಬಿ, ಕಲ್ಯಾಣಮ್ಮನವರು ತಾಯ ಸೆರಗು ಮರೆಮಾಡಿ ಕಿಲಕಿಲನೆ ನಗುತ್ತಾ ನಿನ್ನ ಪುಟ್ಟ ಪಾದಗಳನ್ನು ಕಣ್ಣೊಳಗೆ ಮುಚ್ಚಿಕೊಂಡರಲ್ಲೋ ಅಣ್ಣಾ!

ಹೀಗೆ ನಿನ್ನ ಪಾದಗಳನ್ನು ಕಣ್ಣೊಳಗೆ ಮುಚ್ಚಿಕೊಂಡ ಸೋಜಿಗವನ್ನು ಕಲ್ಯಾಣಮ್ಮ ಬೀಜದೊಳಗಿರುವ ಮೊಳಕೆಯನ್ನು ಕಾಣಿಸುವಂತೆ ನನಗೆ ಕಂಡರಿಸಿದಾಗ ಅಲ್ಲಿ ನಮ್ಮ ಗುಡಿಸಲೊಳಗೆ ಅಡಿಗಲ್ಲ ಮೇಲೆ ಮುದ್ರೆಯೊತ್ತಿತ್ತು. ನಿನ್ನ ಪಾದಗಳ ಅಳತೆ ನಮ್ಮ ಅಡಿಗಲ್ಲಿನ ಮೇಲೆ ಬಟುವಾದ ಉದ್ದ, ಬಟುವಾದ ಅಗಲ ; ನಿನ್ನ ಪಾದ ಅಷ್ಟೆ!

ಅಣ್ಣಾ, ಮಾದಾರನ ಚಮ್ಮಾರಿಕೆಯ ಅಡಿಗಲ್ಲು ಸಾಮಾನ್ಯವಲ್ಲ ; ಪೂರ್ವದಲ್ಲಿ ಇವಳು ಕಾಳಿಕಾ ಮಾತೆ; ವಿಶ್ವಕರ್ಮನ ತಾಯಿ! ಮಾದಿಗರ ಹೊಸ್ತಿಲಲ್ಲಿ ಅಡಿಗಲ್ಲು ರೂಪಾಗಿ ಕುಂತವಳೆ!

ಇದು ತಾತ ಜಾಂಬವರು ನೀಡಿದ ಕುಲದ ದಾನ. ಕುಶಲ ಕರ್ಮಿಯ ಕಲೆ ಅರಳುವುದು ಇಲ್ಲಿ. ನಿನಗೆ ಮಾಡಿಕೊಟ್ಟ ಚಮ್ಮಾಳಿಗೆ ಕುಶಲತೆಯಲ್ಲಿ ಅರಳಿದ್ದು ಇದೇ ಅಡಿಗಲ್ಲ ಮೇಲೆ. ವಚನ ಕಟ್ಟುವುದು ನಿನಗೆ ಹೇಗೋ ಹಾಗೆ ನಮಗೆ ಚಮ್ಮಾರಿಕೆ ಸೃಷ್ಟಿಶೀಲ ಕ್ರಿಯೆ. ನಿನಗೆ ನಾವು ತಯಾರಿಸಿಕೊಟ್ಟ ಚಮ್ಮಾಳಿಗೆ ನಮ್ಮ ಪಾಲಿಗೊಂದು ಶ್ರೇಷ್ಢ ವಚನ. ಅದಕ್ಕಾಗಿ ನಾನಾಗಲೀ ನನ್ನ ಹೆಂಟತಿಯಾಗಲೀ ಅನ್ಯ ವಚನಗಳನ್ನೇ ಬರೆದಿಲ್ಲ. ನಮ್ಮ ಕಾಯಕದ ಬದುಕೇ ಒಂದು ವಚನ.

(ಚರ್ಮಕ್ಕೆ ಕರೆ ಹಾಯಿಸಿ ಹದಮಾಡುವ ವಿಧಾನವನ್ನು ಕುರಿತು ಮಾಹಿತಿ ನೀಡಿದವರು ನನ್ನ ತಂದೆ ಹನುಮಂತಯ್ಯ ಮತ್ತು ತಾಯಿ ಕದರಮ್ಮ)

(ಡಾ.ವಡ್ಡಗೆರೆ ‌ನಾಗರಾಜಯ್ಯ
8722724174)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ವಿಶ್ವ ಮೊಸಳೆಗಳ ದಿನ ; ಮೊಸಳೆ ಬಗ್ಗೆ ನಿಮಗಿಷ್ಟು ತಿಳಿದಿರಲಿ

Published

on

  • ಸಂಜಯ್ ಹೊಯ್ಸಳ

ಪ್ರತಿ ವರ್ಷದ ಜೂನ್ 17 ನ್ನು ವಿಶ್ವ ಮೊಸಳೆ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವದಲ್ಲಿ ಪ್ರಮುಖವಾಗಿ 24 ಜಾತಿಯ ಮೊಸಳೆಗಳಿದ್ದು, ಭಾರತದಲ್ಲಿ ಸದ್ಯಕ್ಕೆ 3 ಪ್ರಬೇಧದ ಮೊಸಳೆ ಸಂತತಿಗಳಿವೆ. ಅವುಗಳೆಂದರೆ..

ಉಪ್ಪು ನೀರಿನ ಮೊಸಳೆ (Saltwater crocodile) 
ಮಗ್ಗರ್/ಮಾರ್ಷ್ (Mugger)
ಘಾರಿಯಲ್ (Gharial)

ಇವುಗಳಲ್ಲಿ ಕರ್ನಾಟಕದಲ್ಲಿನ ನದಿಗಳಲ್ಲಿ, ಕೆಲವು ದೊಡ್ಡ ಕೆರೆಗಳಲ್ಲಿ ಕಂಡುಬರುವ ಮೊಸಳೆಗಳು ಮಗ್ಗರ್/ಮಾರ್ಷ್ ಮೊಸಳೆಗಳಾಗಿವೆ. ಕರ್ನಾಟಕದಲ್ಲಿ ಮೊಸಳೆಗಳು ಹೆಚ್ಚಾಗಿ ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ಪಾತ್ರದಲ್ಲಿ ಕಂಡುಬರುತ್ತವೆ. ಇತ್ತೀಚೆಗೆ ಮೊಸಳೆಯ ದವಣೆಗೆ ಸಿಲುಕಿ‌ ಕೆಲವು ಸಾವು ನೋವಿನ ಪ್ರಕರಣಗಳು ಆ ಭಾಗದಲ್ಲಿ ವರದಿಯಾಗಿವೆ‌.

ಇನ್ನು ಉತ್ತರ ಕರ್ನಾಟಕದ ಭಾಗದ ಕೆಲವು ಪ್ರಮುಖ ನದಿಗಳ ಪಾತ್ರದಲ್ಲೂ ಮೊಸಳೆಗಳು ಆಗಾಗ್ಗೆ ಕಂಡುಬರುತ್ತವೆ. ನಾನು ನೋಡಿದಂತೆ ಉತ್ತರ ಕರ್ನಾಟಕ ಭಾಗಕ್ಕೆ ಹೋಲಿಸಿದರೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಮೊಸಳೆಗಳ ದಾಳಿ ಪ್ರಕರಣಗಳು ತುಂಬಾ ಕಡಿಮೆ ಎನ್ನಬಹುದು. ಈ‌ ಭಾಗದ ನದಿಗಳಲ್ಲಿ ಮೊಸಳೆಗಳ ಸಂಖ್ಯೆ ಕಡಿಮೆ ಇರುವುದು ಇದಕ್ಕೆ ಕಾರ ಇರಬಹುದು.

ಕಾವೇರಿ ನದಿಯಲ್ಲಿ ಅತಿಹೆಚ್ಚು ಮೊಸಳೆಗಳು‌ ಕಂಡು ಬರುವುದು ಮಂಡ್ಯದ ಶ್ರೀರಂಗಪಟ್ಟಣ ತಾಲ್ಲೂಕಿನ ವಿಶ್ವವಿಖ್ಯಾತ ಪಕ್ಷಿ ಧಾಮವಾದ ರಂಗನತಿಟ್ಟು ಪಕ್ಷಿಧಾಮದಲ್ಲಿ. ಹಿಂದೆ ಪಂಚತಂತ್ರದಲ್ಲಿ ಮೊಸಳೆ ಮತ್ತು ಕೋತಿ‌ಕತೆಯಲ್ಲಿ ಮೊಸಳೆಯ ಹೆಂಡತಿಗೆ ಕೋತಿ‌ ನೇರಳೆ ಹಣ್ಣುಗಳನ್ನು ಹೊತ್ತೊಯ್ಯುವ ಕತೆಯಲ್ಲಿ ಗಂಡ ಮತ್ತು‌ ಹೆಂಡತಿ‌ ಮೊಸಳೆಯನ್ನು ಕಲ್ಪಿಸಿಕೊಂಡು ಮಾತ್ರ ನಾನು ಮೊದಲು ಅವುಗಳ ಸಹಜ ಆವಾಸಸ್ಥಾನದಲ್ಲಿ ಮೊಸಳೆಯನ್ನು ನೋಡಿದ್ದು ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿಯಲ್ಲಿ. ನಂತರ ಬಂಡೀಪುರ ದಟ್ಟಡವಿಯಲ್ಲಿ ಹರಿಯುವ ಮೂಲೆಹೊಳೆ/ ನುಗು ನದಿಯಲ್ಲಿ…‌ ನಂತರದ ದಿನಗಳಲ್ಲಿ ಕಬಿನಿ, ಪಾಲರ್ ಸೇರಿ ಬಹಳಷ್ಟು ಕಡೆ ಬಹಳಷ್ಟು ಮೊಸಳೆಗಳನ್ನು ನೋಡುವ ಅವಕಾಶ ಸಿಕ್ಕಿತು.

ಘಾರಿಯಲ್ ಗಳು ತುಂಬಾ ಅಪರೂಪದ ಮೊಸಳೆ ಸಂತತಿಗಳಾಗಿದ್ದು, ಸದ್ಯ ಉತ್ತರ ಭಾರತದ ಕೆಲವು ನದಿಗಳು ಹಾಗೂ ನೇಪಾಳದಲ್ಲಿ ಮಾತ್ರ ಇವು ಕಾಣಸಿಗುತ್ತಿವೆ. ಇವುಳನ್ನು IUCN red list ಗೆ ಸೇರಿಸಿದ್ದು, ಇವುಗಳ ಸಂರಕ್ಷಣೆಗೆ ವಿಶೇಷ ಗಮನ ನೀಡಲಾಗಿದೆ.

ನಮಗೆಲ್ಲಾ ಗೊತ್ತಿರುವಂತೆ ಜೀವವೈವಿಧ್ಯತೆಯ ರಕ್ಷಣೆಯಲ್ಲಿ ಎಲ್ಲಾ ಜೀವಿಗಳ‌ ಇರುವಿಕೆ ಬಹಳ ಮುಖ್ಯ. ಜಲಚರಗಳಲ್ಲಿ ಅಗ್ರ ಪರಪಕ್ಷಕಗಳಲ್ಲಿ ಒಂದೆನಿಸಿದ ಮೊಸಳೆ ಜಲಚರ ಜೀವಿಗಳ ಸಮತೋಲನ ಸಾಧಿಸಿ ಅಲ್ಲಿನ ಜೀವವೈವಿಧ್ಯ ಕಾಪಾಡುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ನಾವು ಮೊಸಳೆಗಳನ್ನು ಕೂಡ ಇತರ ಪ್ರಾಣಿಗಳಂತೆ ರಕ್ಷಿಸಬೇಕು.

ಮುಖ್ಯವಾಗಿ ಅವುಗಳ ಆವಾಸಸ್ಥಾನವಾದ ನದಿ, ಸರೋವರದಂತಹ ಜಲಮೂಲಗಳನ್ನು ಸಂರಕ್ಷಿಸಬೇಕು. ಅಲ್ಲಿ ಅಕ್ರಮ ಮರಳುಗಾರಿಗೆ ತಡೆದು, ಜಲಮಾಲಿನ್ಯ ನಿಯಂತ್ರಣ ಮಾಡಬೇಕು. ಹಾಗೆ ಪ್ಲಾಸ್ಟಿಕ್ ತ್ಯಾಜ್ಯಗಳು ನದಿ, ಸರೋವರಗಳನ್ನು ಸೇರದಂತೆ ಕ್ರಮವಹಿಸಬೇಕು. ಹಾಗೆಯೇ ಎಲ್ಲಾದರೂ ಮೊಸಳೆಗಳು ಕಂಡುಬಂದರೆ ಗಾಬರಿಯಾಗದೆ ತಕ್ಷಣ ಅರಣ್ಯ ಇಲಾಖೆಯ ಗಮನಕ್ಕೆ ತರಬೇಕು. (ಬರಹ:ಸಂಜಯ್ ಹೊಯ್ಸಳ,ಫೇಸ್ ಬುಕ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜುಲೈ 1 ರಿಂದ ಹೊಸ ಕ್ರಿಮಿನಲ್ ಕಾನೂನು ಜಾರಿ

Published

on

ಸುದ್ದಿದಿನಡೆಸ್ಕ್:ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮರು ಪರಿಶೀಲಿಸುತ್ತಿಲ್ಲ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಸ್ಪಷ್ಟಪಡಿಸಿದ್ದಾರೆ.

ಭಾರತೀಯ ದಂಡ ಸಂಹಿತೆ 1860, ಭಾರತೀಯ ಸಾಕ್ಷ್ಯ ಕಾಯ್ದೆ 1872 ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ 1973 ಅನ್ನು ಬದಲಿಸುವ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಅವರು ಹೇಳಿದ್ದಾರೆ. ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ತಿಳಿಸಿದ್ದಾರೆ.

“ಐಪಿಸಿ, ಸಿಆರ್‌ಪಿಸಿ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳು ಬದಲಾಗುತ್ತಿವೆ. ಸೂಕ್ತ ಸಮಾಲೋಚನೆ ಪ್ರಕ್ರಿಯೆ ಅನುಸರಣೆ ಹಾಗೂ ಕಾನೂನು ಆಯೋಗದ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಈ ಮೂರು ಕಾನೂನುಗಳನ್ನು ಬದಲಾಯಿಸಲಾಗಿದೆ” ಎಂದು ಮೇಘವಾಲ್ ತಿಳಿಸಿದರು.”

ಈ ಮೂರು ಕಾನೂನುಗಳನ್ನು ಜುಲೈ 1 ರಿಂದ ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೆಸರಿನಲ್ಲಿ ಜಾರಿಗೆ ತರಲಾಗುವುದು. ಮೂರು ಹೊಸ ಕಾನೂನುಗಳ ತರಬೇತಿ ಸೌಲಭ್ಯಗಳನ್ನು ಎಲ್ಲಾ ರಾಜ್ಯಗಳಿಗೂ ಒದಗಿಸಲಾಗುತ್ತಿದೆ” ಎಂದು ಮೇಘವಾಲ್ ವಿವರಿಸಿದ್ದಾರೆ.”

ನಮ್ಮ ನ್ಯಾಯಾಂಗ ಅಕಾಡೆಮಿಗಳು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಸಹ ಈ ಬಗ್ಗೆ ತರಬೇತಿ ನೀಡುತ್ತಿವೆ. ಎಲ್ಲವೂ ಜೊತೆಜೊತೆಯಾಗಿ ಸಾಗುತ್ತಿದೆ ಮತ್ತು ಜುಲೈ 1 ರಿಂದ, ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ನಿರ್ಣಾಯಕವಾದ ಈ ಎಲ್ಲಾ ಮೂರು ಕಾನೂನುಗಳನ್ನು ದೇಶದಲ್ಲಿ ಜಾರಿಗೆ ತರಲಾಗುವುದು” ಎಂದು ಅವರು ಸ್ಪಷ್ಟಪಡಿಸಿದರು.

ದೇಶದಲ್ಲಿ ಅಪರಾಧ ನ್ಯಾಯ ಸುಧಾರಣೆಯು ದೇಶದ ನ್ಯಾಯದಾನ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಇದು ಸೂಚಿಸುತ್ತದೆ. ಮಹಿಳೆಯರು, ಮಕ್ಕಳು ಮತ್ತು ರಾಷ್ಟ್ರದ ವಿರುದ್ಧದ ಅಪರಾಧಗಳನ್ನು ಇದು ಮುಂಚೂಣಿಯಲ್ಲಿರಿಸುತ್ತದೆ. ಅಲ್ಲದೆ ಇದು ವಸಾಹತುಶಾಹಿ ಯುಗದ ಕಾನೂನುಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ; ವ್ಯಾಪಕ ಟೀಕೆ

Published

on

ಸುದ್ದಿದಿನಡೆಸ್ಕ್: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಟೀಕಿಸಿದ್ದಾರೆ.

ರಾಜ್ಯ ಸರ್ಕಾರ ಮೊನ್ನೆಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿದ ನಂತರ ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 3 ರೂಪಾಯಿ ಹಾಗೂ ಡೀಸೆಲ್ 3.5 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಪ್ರತಿ ಕುಟುಂಬದ ಮಹಿಳೆಗೆ ತಿಂಗಳಿಗೆ 8 ಸಾವಿರದ 500 ರೂಪಾಯಿಗಳನ್ನು ವರ್ಗಾವಣೆ ಮಾಡುವ ಭರವಸೆಯನ್ನು ಈಡೇರಿಸುವ ಬದಲು, ಕಾಂಗ್ರೆಸ್ ಆಡಳಿತದ ಕರ್ನಾಟಕ ಸರ್ಕಾರವು, ರಾಜ್ಯದ ಜನರಿಗೆ ಹೊರೆಯಾಗಿದೆ ಎಂದು ಹರ್ದೀಪ್ ಸಿಂಗ್ ಪುರಿ ಸಾಮಾಜಿಕ ಜಾಲತಾಣದಲ್ಲಿ ದೂರಿದ್ದಾರೆ. ಇಂತಹ ನಿರ್ಧಾರ ಹಣದುಬ್ಬರದ ಬಗ್ಗೆ ಮಾತನಾಡುವ ಕಾಂಗ್ರೆಸ್‌ನ ಬೂಟಾಟಿಕೆ ಬಹಿರಂಗಪಡಿಸುತ್ತದೆ. ಆದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರತಿ ಲೀಟರ್‌ಗೆ ಸುಮಾರು 8 ರೂಪಾಯಿಗಳಿಂದ 12 ರೂಪಾಯಿಗಳಷ್ಟು ಹೆಚ್ಚುವರಿ ವ್ಯಾಟ್ ಅನ್ನು ವಿಧಿಸುತ್ತಿದೆ ಎಂದು ಸಚಿವರು ಆರೋಪಿಸಿದ್ದಾರೆ.

ಈ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯ ಸರ್ಕಾರ ಮುಂದಾಲೋಚನೆ ಇಲ್ಲದೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು, ಈಗ ಆರ್ಥಿಕ ಹೊರೆ ತಡೆಯಲು ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮಾಡಿದೆ ಎಂದು ಹುಬ್ಬಳ್ಳಿಯಲ್ಲಿ ಆರೋಪಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಬಸ್ ದರ, ಹಾಲಿನ ದರ, ಅಗತ್ಯ ವಸ್ತುಗಳ ದರ ಹೆಚ್ಚಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಆಡಳಿತದ ವ್ಯವಸ್ಥೆ ಕುಸಿದುಹೋಗಿದೆ ಎಂದು ದೂರಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಪ್ರಲ್ಹಾದ್ ಜೋಶಿ ಎಚ್ಚರಿಕೆ ನೀಡಿದ್ದಾರೆ.

ಮತ್ತೊಂದೆಡೆ, ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ದರ ಏರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ವ್ಯಾಟ್ ಹೆಚ್ಚಳ ಬಳಿಕ ದಕ್ಷಿಣ ಭಾರತದ ರಾಜ್ಯಗಳಿಗಿಂತ ಕರ್ನಾಟಕದಲ್ಲಿಯೇ ದರ ಕಡಿಮೆ ಇದೆ. ಆರ್ಥಿಕವಾಗಿ ಬಲಿಷ್ಠವಾಗಿರುವ ಮಹಾರಾಷ್ಟ್ರಕ್ಕಿಂತಲ್ಲೂ ಹಾಗೂ ಗುಜರಾತ್ ಮತ್ತು ಮಧ್ಯಪ್ರದೇಶಕ್ಕಿಂತಲ್ಲೂ ನಮ್ಮ ರಾಜ್ಯದಲ್ಲಿ ದರ ಕಡಿಮೆ ಇದೆ ಎಂದು ಹೇಳಿದ್ದಾರೆ.

ಈ ಹಿಂದಿನ ಬಿಜೆಪಿ ಸರ್ಕಾರ ತೆರಿಗೆ ಕಡಿಮೆ ಮಾಡಿದ್ದರೂ, ಕೇಂದ್ರ ಸರ್ಕಾರ ಪದೇ ಪದೆ ವ್ಯಾಟ್ ಹೆಚ್ಚಳ ಮಾಡಿತ್ತು ಎಂದು ಆರೋಪಿಸಿದ್ದಾರೆ. ರಾಜ್ಯದ ತೆರಿಗೆ ಹೆಚ್ಚಳದಿಂದ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending