ದಿನದ ಸುದ್ದಿ
ಉರಿ ಚಮ್ಮಾಳಿಗೆ
- ಡಾ.ವಡ್ಡಗೆರೆ ನಾಗರಾಜಯ್ಯ
ಅವೊತ್ತಿನ ಬೆಳಗು ನನಗಿನ್ನೂ ಹಸಿರಾಗಿ ನೆನಪಿಗಿದೆ. ಪ್ರಾಯಶಃ ಇನ್ನೆಂದಿಗೂ ಮಾಸದ ನೆನಪು ಅದು ; ನನ್ನ ಕರೇಕುಲದ ಮುಂದಿನ ಪೀಳಿಗೆಗಳು ಸೂರ್ಯ ಚಂದ್ರನಿರುವ ತನಕ ಈ ನೆನಪನ್ನು ತಮ್ಮೊಡನೆ ಹೊತ್ತೊಯ್ಯುತ್ತವೆಂಬ ಬಲವಾದ ನಂಬಿಕೆ ನನಗಿದೆ.
ಮಾನವ ನಿರ್ಮಿತ ಯಾವುದೇ ಉಪಾಯಗಳು ನನ್ನ ಕುಲಸ್ತರು ಅನುಭವಿಸಿದ ಸುಖ ದುಃಖ, ನೋವು – ನಲಿವು, ಸಂಕಟ ಹಾಗೂ ಹೋರಾಟಗಳ ನೆನಪಿನ ಬೇರನ್ನು ಕಿತ್ತು ಹಾಕಲು ಸಾಧ್ಯವಿಲ್ಲ ; ಆ ದೇವರಿಂದಲೂ ಕೂಡ! ನಮ್ಮ ನೆನಪಿಗೆ ಅಂತಹ ಅಗಾಧ ಶಕ್ತಿಯಿದೆ. ಅದು ನಿತ್ಯಗಾಮಿನಿ.
ಆ ದಿನ ಬೆಳಗ್ಗೆ ಅನುಭವ ಮಂಟಪದ ದಾರಿಯಲ್ಲಿ ಎದುರಾದ ನಿನ್ನನ್ನು ನೋಡಿದ ನಾನು ‘ಶರಣು ಬಸವಣ್ಣ’ ಎಂದು ನಂಬಿಸಿದ್ದೆ. ಇದಕ್ಕೆ ಪ್ರತಿಯಾಗಿ ನೀನೂ ಸಹ “ಶರಣು ಶರಣು ಹರಳಯ್ಯ” ಎಂದು ವಂದಿಸಿದ್ದೆ. ನೆನಪಿದೆಯಾ ಅಣ್ಣಾ? ನಿನ್ನಿಂದ ಒಂದು ಶರಣರಿಗೆ ಬದಲಾಗಿ ಎರಡು ಸಲ “ಶರಣು ಶರಣು” ಎಂಬ ನುಡಿ ಕೇಳಿದ ನಾನು ಎಷ್ಟೊಂದು ತತ್ತರಿಸಿ ಹೋದೆ.
ನಿನಗೆ ಗೊತ್ತಿರಲಿಕ್ಕಿಲ್ಲ. ನೀನು ನನ್ನ ಅರಿವಿಗೆ ಬಾರದಂತೆ ಸಹಜವಾಗಿ ಒಂದು ಶರಣು ಹೆಚ್ಚುವರಿ ಋಣಭಾರ ನನ್ನ ಮೇಲೆ ಹೇರಿದ್ದೆ. ನೀನೇನೋ ಭಾರ ಇಳಿಸಿಕೊಳ್ಳಲು ಚಡಪಡಿಸಿ ಬೆಂದು ಹೋಗುವಂಥವನು ನಿಜ. ನಿಮ್ಮವರು ಹೊತ್ತ ಭಾರ ಇಳಿಸಲು ಹೋದ ನೀನು ನನ್ನ ಮೇಲೆ ಭಾರ ಹೇರಿದೆಯಲ್ವಾ, ಇದು ನ್ಯಾಯವೇ? ಎಷ್ಟಾದರೂ ನೀನು ಭಾರ ಹೊರಿಸುವ ಕುಲದಿಂದ ಬಂದವನು; ನಾನಾದರೋ ಭಾರ ಹೊರಲೆಂದೇ ಹುಟ್ಟಿದ ನೊಗವೆಳೆವ ಮೂಕತ್ತು ಎಂಬುದು ನನಗೆ ಅರಿವಾಯಿತು.
ನಾನು ಹೊಲೆಯುವ ಮೆಟ್ಟುಗಳ ಮೇಲೆ ಭಾರ ಹಾಕಿ ನಡೆಯುವ ದಾರಿಹೋಕರು ನನ್ನೆದುರಿನಲ್ಲಿದ್ದಾರೆ. ಮೆಟ್ಟು ಹೊಲೆಯುವ ನನಗೆ ಮೆಟ್ಟೆಂದಿಗೂ ಭಾರವಲ್ಲ. ನಡೆಯುವ ದಾರಿಹೋಕರ ದಣಿವನ್ನು ತಾಪವನ್ನು ನನ್ನ ಮೆಟ್ಟು ಕಳೆಯಬಲ್ಲದು. ಕಲ್ಲು ಮುಳ್ಳುಗಳು ನನ್ನ ಮೆಟ್ಟುಗಳಿರುವ ಕಡೆಗೆ ದಾರಿಹೋಕರ ಪಾದಗಳನ್ನು ಚುಚ್ಚಲಾರವು.
ಆ ದಿನ ನೀನು ಶರಣು ಶರರಣಯ್ಯಾ ಎಂದು ಹೇಳಿದ ಬಳಿಕ ಏರುವ ಹೊತ್ತಿನೊಂದಿಗೆ ನೀನು ಹೊರಿಸಿದ ಶರಣೆಂಬ ವಜೆಯೂ ಏರುತ್ತಾ ಹೋಯಿತು.
ಏರುವ ಹೊತ್ತಿನೊಡನೆ ನೀನು ಹೊರಿಸಿದ ಶರಣೆಂಬ ವಜೆ ಹೊತ್ತ ನನ್ನ ಬೆನ್ನ ಬುಡದಿಂದ ಸಣ್ಣಗೆ ಶುರುವಾದ ಚಳುಕು ಇಡೀ ಶರೀರವನ್ನೆಲ್ಲಾ ಬಾಧಿಸತೊಡಗಿತ್ತು. ಅಣ್ಣಾ ನನಗೆ ಗೊತ್ತು. ನೀನು ಬಲಾತ್ಕರಿಸಿಯೇನು ಹೊರಿಸಲಿಲ್ಲ ; ಹಾಗೆ ನೋಡಿದರೆ ನೀನು ನಿನ್ನ ಪೂರ್ವಿಕರಿಗಿಂತಲೂ ಬದಲು ಕರುಣಿ. ಅವರಾದರೂ ನಮ್ಮನ್ನು ಪಶುಗಳಿಗಿಂತಲೂ ಕಡೆಯಾಗಿ ನಡೆಸಿಕೊಂಡರು.
ಛೇ! ಕ್ಷಮಿಸು. ನೀನೆಲ್ಲಿ ಅವರಲ್ಲಿ? ಎತ್ತಣಿಂದೆತ್ತ ಸಂಬಂಧ. ಅಂತಹ ಪೂರ್ವಿಕ ಪಳೆಯುಳಿಕೆಗಳನ್ನು ಬಿಸುಡಿ ನಿಮ್ಮ ಹಟ್ಟಿಗೆ ಓಡೋಡಿ ಬಂದ ನೀನು, ‘ಅಪ್ಪನು ನಮ್ಮ ಮಾದಾರ ಚನ್ನಯ್ಯ, ಬೊಪ್ಪ ನು ನಮ್ಮ ಡೋಹರ ಕಕ್ಕಯ್ಯ”ನೆಂದು ನಮ್ಮನ್ನೆಲ್ಲಾ ಬಾವುಣಿಕೆಯಿಂದ ತಬ್ಬಿಕೊಂಡು ನಮ್ಮ ಕಲ ಕರೇಕಲದೊಬ್ಬ ಮಗನಾದೆ ; ನೀನೊಂದು ನವಜಾತ ಶಿಶು!
ಇಲ್ಲಿ ನನ್ನ ಹಟ್ಟಿಯಲ್ಲಿ ತುಂಬಿ ಫಲದೂಗುವ ತೆಂಗಿನ ಮರದಂಥ ತಾಯಂದಿರು ತಮ್ಮ ಮಕ್ಕಳಿಗೆ ಹಾಲೂಡುವುದು ಬಲು ಸೋಜಿಗ! ಹಾಲು ಬತ್ತಿದ ಅಜ್ಜಿಯರೂ ತಮ್ಮ ಎದೆಗೆ ಅವುಚಿಕೊಂಡು ಮೊಮ್ಮಕ್ಕಳಿಗೆ ಮೊಲೆಯುಣಿಸುತ್ತಾರೆ : ಅಲ್ಲಿ ಪ್ರೀತಿ ಜಿನುಗುತ್ತದೆ! ಎಲ್ಲ ತಾಯಂದಿರೂ ತಮ್ಮೊಳಗಿನ ಮಾತೃತ್ವವನ್ನು ಹುಟ್ಟಿದ್ದ ಪ್ರತಿ ಮಗುವಿಗೂ ನೇವರಿಸಿ ಉಣ ಬಡಿಸುತ್ತಾರೆ.
ತಮ್ಮ ಕಂದಮ್ಮಗಳಿಗೆ ಎಷ್ಟು ಸಲ ಎದೆ ಹಾಲು ಕುಡಿಸಿದರೂ ತೃಪ್ತಿಯಾಗದ ಸಮಗಾರ ಭೀಮಮ್ಮವರು ನಮ್ಮ ಕರೇಕುಲದ ಹಟ್ಟಿಯಲ್ಲಾಡುವ ಇತರ ಕಂದಮ್ಮಗಳಿಗೂ ಹಾಲು ಕುಡಿಸುವುದುದುಂಟು. ಇಲ್ಲಿ ಹುಟ್ಟುವ ಪ್ರತಿ ಶಿಶುವು ಹಟ್ಟಿಯ ಎಲ್ಲ ತಾಯಂದಿರ ಎದೆ ಹಾಲು ಕುಡಿದು ಬೆಳೆಯುತ್ತದೆ. ಹೇ, ಬಸವಣ್ಣಾ ಇಂತಹ ಭಾಗ್ಯ ನಮ್ಮ ಶಿಶುವಾಗಿ ನೀನು ಕಂಡೆ!
ನನಗೆ ಹಟ್ಟಿ ತುಂಬಾ ತಾಯಂದಿರು. ಹಟ್ಟಿ, ಬಯಲಲ್ಲಿ ಬಟ್ಟ ಬಯಲಲ್ಲಿ ಊರ ಸೆರಗಲ್ಲಿ, ಎಲ್ಲೆಂದರಲ್ಲಿ ಎದೆ ಹಾಲು ಕುಡಿಸಿದ ನನ್ನ ತಾಯಂದಿರು ನನಗೆ ಹೇಳುತ್ತಿದ್ದ ಒಂದು ಮಾತು “ಅನ್ಯರ ಹೊರೆ ನೀನು ಹೊರಬೇಕಲ್ಲದೆ ನಿನ್ನ ಹೊರೆಯನ್ನು ಪರರ ಮೇಲೆ ಹೊರಿಸುವುದು ಸಲ್ಲತಕ್ಕದ್ದಲ್ಲ ಹರಳಯ್ಯಾ” ಎಂಬುದು. ಆ ದಿನ ನಾನು ಹೊರಿಸಿದ ಒಂದು ಶರಣಿನ ಹೆಚ್ಚಿನ ಹೊರೆ ಹೊತ್ತು ನಾನು ಮನೆಗೆ ಬಂದೆ. ಆಗ ಇಳಿ ಹೊತ್ತು; ಧೂಳು ಸಂಜೆ.
ನನ್ನ ನೆಚ್ಚಿನ ಸತಿ ಶಿವಶರಣೆ ಕಲ್ಯಾಣಮ್ಮನ ಕೂಟೆ ಮಾತನಾಡುತ್ತಾ ಹೊರೆ ಇಳಿಸಿಕೊಳ್ಳುವ ಉಪಾಯವನ್ನು ಕೇಳಿದೆ. ಹೊರೆ ಇಳಿಸುವ ಮಾರ್ಗ ಹೆಂಗಸರಿಗೆ ಮಾತ್ರ ಗೊತ್ತೆಂದರೆ ನಿನಗೆ ಆಶ್ಚರ್ಯವಾಗಬಹುದಲ್ಲವೆ ಬಸವಣ್ಣ? ಹೌದು, ನನ್ನ ಹೆಂಡತಿ ಕಾರ್ಯಸಾಧ್ಯವಾದ ಉಪಾಯವನ್ನು ಹೇಳುತ್ತಾಳೆಂಬ ವಿಶ್ವಾಸದಿಂದಲೇ ಕೇಳಿದ್ದೆ.
“ನೋಡು, ಶಿವಶರಣ ಬಸವಣ್ಣನವರ ಶರಣಿನ ತೂಕಕ್ಕೆ ಸಮವಾಗುವಂಥ ಸಂಪತ್ತು ನಮ್ಮತಾವ ಏನು ತಾನೆ ಐತೆ? ಹೂವುನ ಹಾಸ್ಗೆ ಮ್ಯಾಲ ನಡೆದಂಗೆ ಕಾಣೋಂಥ ಪಾದ್ರಾಕ್ಷಿ ಮಾಡ್ಕೊಡನಿ” ಎಂದು ನಮ್ಮ ಕರೇಕುಲದ ಸಮಗಾರರು ಜತನವಾಗಿ ಕಾಪಾಡಿಕೊಂಡು ಬಂದ ಚಮ್ಮಾರಿಕೆಯ ಉಪಾಯವನ್ನು ಅವಳಿಂದ ಕೇಳಿದ ನಾನು, ದೇವಾಂಶಿ ಮಾತುಮನಾದ ನಿನಗೆ ತೀರಾ ವಿಶೇಷವಾದ ಪಾದ್ರಾಕ್ಷಿಯನೇ ಮಾಡೋಡಬೇಕು, ಯಂಗೆ ಮಾಡೋದು? ಯಾವ ತೊಗಲಿನಿಂದ ಮಾಡೋದು? ಎಂಬ ಯೋಚನೆಗಳ ಸುಳಿಗೆ ಬಿದ್ದೆ.
ಆಗ ನನ್ನ ಮುಖದ ನೆರಿಗೆಗಳ ಅಕ್ಷರಗಳನ್ನು ಸಲೀಸಾಗಿ ಓದಿ ಅರ್ಥ ಮಾಡಿಕೊಂಡು, ‘ಗೋವಿನ ತೊಗಲು ಉಪಯೋಗಿಸಿದಂತೆಯೇ ನರ ಮನುಷ್ಯ ತೊಗಲ ಚಮ್ಮಾಳಿಗೆ ಮಾಡಿಕೊಡದ ವಿನಾ ಶರಣಿನ ವಜೆಯನ್ನು ನೀಗಿಕೊಳ್ಳಲಾಗದು’ ಎಂಬ ಸಲಹೆಯನ್ನು ಮುಂದಿಟ್ಟ ಕಲ್ಯಾಣಮ್ಮ, ನಮ್ಮ ಮಕ್ಕಳನ್ನು ಆಡಿಸಿ ನಲಿಸಿ ತೂಗಿ ಮಲಗಿಸಿದ ನಮ್ಮ ಅಂಕಪೀಠದ ತೊಡೆ ತೊಗಲು ಮಾತ್ರ ಈ ಕಾರ್ಯಕ್ಕೆ ಯೋಗ್ಯವೆಂದು ಬಗೆದು ಮೊದಲಿಗೆ ತನ್ನ ಚರ್ಮವನ್ನೇ ನೀಡಲು ದುಡದಿಂದ ಮುಂದಾದಳು. ಈಗ ಯೋಚಿಸು ಬಸವಣ್ಣಾ ನಮ್ಮ ಹೆಣ್ಣಿನ ಮಹಿಮೆ ಎಂಥದ್ದು?
ಮರುದಿನ ಬೆಳಗ್ಗೆ ಎದ್ದು ಸ್ನಾನಾದಿಗಳನ್ನು ಮಾಡಿ, ಮನೆಯನ್ನೆಲ್ಲಾ ಸಾರಿಸಿ, ಗುಡಿಸಿ, ಚುಕ್ಕಿ ರಂಗೋಲಿ ಎಳೆದು ಮೂಡಲ ಮುಖನಾಗಿ ‘ತಿತ್ತಿ’ ಯೊಂದಿಗೆ ಕುಳಿತಿದ್ದ ಕಲ್ಯಾಣಮ್ಮ ಮುಖ ಹೊಂಬಣ್ಣದಲ್ಲಿ ಹೊಳೆವ ಸೂರ್ಯನಂತೆಯೇ ಕಾಂತಿಯಿಂದ ಶೋಭಿಸುತ್ತಿತ್ತು. ಅವಳ ಮುಖದ ಕಾಂತಿಯ ಸುಂಕು ನನ್ನ ಮುಖಕ್ಕೆ ಪರಾಗಸ್ಪರ್ಶಗೊಂಡ ಬಳಿಕವೇ ತಿತ್ತಿಗೆ ಶರಣೆಂದು ಚೂರಿಯನ್ನು ತೆಗೆದುಕೊಂಡು ಕುಲಕಾರ್ಯೇವು ಮಾಡಲು ಕುಳಿತೆ.
ಅಣ್ಣಾ … ಬಸವಣ್ಣ…! ಅಂದು ಬೆಳಗ್ಗೆ ನಮ್ಮ ಗುಡಿಸಲ ನೆತ್ತಿ ಮೇಲೆ ನವಿಲೆರಡು ಆಡುತ್ತಿದ್ದವು. ಸಾವಿರ ಕಣ್ಣು ಅರಳಿಸಿ ಎಳೆ ಬಿಸಿಲಿನಲ್ಲಿ ನರ್ತಿಸುತ್ತಿದ್ದ ಬಂಗಾರದ ನವಿಲುಗಳು! ಬಾಲ್ಯದಲ್ಲಿ ನನ್ನ ಅಮ್ಮ ಹೇಳುತ್ತಿದ್ದಳು, “ಹರಳಯ್ಯಾ, ಈ ಜಗತ್ತು ಹುಟ್ಟಿದ್ದು ನವಿಲು ಮೊಟ್ಟೆಯಿಂದ ಕಣೋ, ಇಲ್ಲದಿದ್ದರೆ ಈ ಸೃಷ್ಟಿ ಇಷ್ಟೊಂದು ಸುಂದರವಾಗಿರಲು ಹೇಗೆ ತಾನೆ ಸಾಧ್ಯವಿತ್ತು?”
ಹೌದು ಬಸವಣ್ಣಾ ನನ್ನ ಅಮ್ಮ ಹೇಳಿದ ಅದೇ ನವಿಲು ನಮ್ಮ ಗುಡಿಸಲು ಮೇಲೇರಿ ಹಾರಿ ಕುಣಿಯುತ್ತಿರುವಾಗ ನಾನು ನನ್ನ ಬಲ ತೊಡೆ ತೊಗಲನ್ನು, ಕಲ್ಯಾಣಮ್ಮ ತನ್ನ ಎಡ ತೊಡೆ ತೊಗಲನ್ನು ಪರಸ್ಪರ ಸುಲಿದು ತೆಗೆಯಲು ದುಡಮಾಡಿ ಕುಳಿತಿದ್ದೆವು; ನವಿಲುಗಳು ಕುಣಿಯುತ್ತಲೇ ಇದ್ದವು ಬಲು ಚೆಂದವಾಗಿ!
ಅಣ್ಣಾ… ನಿಜ ಹೇಳಬೇಕೆಂದರೆ ಗಲ್ಲೇಬಾನಿಯ ದಿವ್ಯೋದಕ ಸ್ಪರ್ಶದಿಂದ ತೋಯ್ದುದಕ್ಕಿಂತಲೂ ಮಿಗಿಲಾಗಿ ನೀನು ನಮ್ಮ ಕುಲಸ್ಥರಿಗೆ ತೋರಿಸಿದ ಕರುಣಾಮೃತದಿಂದಲೇ ನಮ್ಮ ದೇಹಕ್ಕಾವರಿಸಿದ್ದ ಸೂತಕದ ತೊಗಲು ತೊಯ್ದು ಹೋಗಿತ್ತು! ಸೂತಕದ ತೊಗಲನ್ನು ಸುಲಿದು ತೆಗೆಯಲು ನೀನು ಹೊರಿಸಿದ ‘ಶರಣು’ ಒಂದು ನೆಪವಾಗಿತ್ತು.
ಸಾಮು ಹಿಡಿದ ಚೂರಿಯಿಂದ ಬಹಳ ಚಮತ್ಕಾರಿಕವಾಗಿಯೆ ತೊಗಲು ಸುಲಿದೆವು; ನಾವು ಕುಶಲಕರ್ಮಿಗಳು; ತೊಗಲು ಸುಲಿಯುವ ನನಗೆ ದೇಹವೆಂಬುದು ಯಾವತ್ತಿಗೂ ಅಡ್ಡಿಯಾಗದು! ತನ್ನ ತೊಗಲನ್ನು ತಾನು ಸುಲಿದುಕೊಳ್ಳಲಾಗದವನು ಸಮಗಾರನೇ ಅಲ್ಲ! ಹೇ! ಬಸವಣ್ಣಾ ನಿನ್ನನ್ನು ಆವರಿಸಿಕೊಳ್ಳುತ್ತಿದ್ದ ಬ್ರಾಹ್ಮಣ್ಯದ ಸೂತಕದ ತೊಗಲನ್ನು ಹರಿದು ಬಿಸಾಕಿದ ನೀನೊಬ್ಬ ದೊಡ್ಡ ಸಮಗಾರ.
ಅಂತೂ ನಿನಗೆ ಚಮ್ಮಾಳಿಗೆ ಮಾಡಿಕೊಡಲೆಂದು ನಾನು, ನನ್ನ ಪತ್ನಿಯೂ ನಮ್ಮ ತೊಗಲನ್ನು ನಾವೇ ಸುಲಿದು, ಅದರ ಸೆಳ್ಳೆ ತೆಗೆದು, ಬಿಸಿಲಿನಲ್ಲಿ ಒಣಗಿಸಿ ಕರೆಹಾಯಿಸಲು ಸಿದ್ಧಗೊಳಿಸಿದೆವು.
ಚರ್ಮ ಹದ ಮಾಡುವ ವಿಧಾನವನ್ನು ಕರೆ ಹಾಯಿಸುವುದು ಎಂದು ಹೇಳುವುದು ವಾಡಿಕೆ. ಬಸವಣ್ಣಾ ಈ ವಿಧಾನವು ನಿನಗೆ ಕೇಳಿಯೋ ನೋಡಿಯೋ ಗೊತ್ತಿರಬಹುದೆಂದು ನಾನು ಊಹಿಸುತ್ತೇನೆ. ಆದರೂ ನಿನಗೆ ಅರ್ಪಿಸಿದ ಚಮಾಳಿಗೆಯನ್ನು ತಯಾರಿಸಿದ ಬಗೆಯನ್ನು ಹೇಳುತ್ತೇನೆ ಕೇಳು.
ಗಲ್ಲೇಬಾನಿಯಲ್ಲಿ ಒಂದು ಗುಲಿಕೆ ತಂಗಡಿ ಗಿಡದ ಚಕ್ಕೆ ಪುಡಿಯೊಂದಿಗೆ ಪಾವು ಗುಲಿಕೆ ಸುಣ್ಣದ ಪುಡಿಯನ್ನು ಕಲೆಸಿದೆ. ನನ್ನ ಕೆಲಸದ ಬಳಿಕ ಕಲ್ಯಾಣಮ್ಮ ಎರಡು ಹರುವಿ ನೀರು ಸುರಿದು ಗಲ್ಲೇಬಾನಿಯಲ್ಲಿ ಎರಡು ಜಾವ ಚರ್ಮವನ್ನು ನೆನೆ ಹಾಕಿದಳು. ಒಂದೊಂದು ಪ್ರಾಣಿಯ ಚರ್ಮವನ್ನೂ ಅದರದೇ ವಿಶಿಷ್ಟ ವಿಧಾನಾನುಸಾರ ಕರೆ ಹಾಯಿಸಬೇಕು.
ತಂಗಡಿ ಚಕ್ಕೆಯ ಪುಡಿ ಮತ್ತು ಸುಣ್ಣದ ನೀರಿನಲ್ಲಿ ಹದಗೊಂಡ ಚರ್ಮವನ್ನು ಶುದ್ಧ ನೀರಿನಲ್ಲಿ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು. ಆದರೆ ನಿನಗೆ ಚಮ್ಮಾಳಿಗೆ ತಯಾರಿಸಿ ಕೊಡಲು ನಾವು ಬಹಳ ಜಾಗರೂಕತೆ ವಹಿಸಿದ್ದೆವು. ಸೋಸಿದ ನೀರಿನ ‘ತಿಳಿಗರೆ’ಯಲ್ಲಿ ಹದಗೊಂಡ ಚರ್ಮವನ್ನು ಮತ್ತೊಂದು ಗಲ್ಲೇಬಾನಿಯ ಬೆವರ ಗಂಧೋದಕದಲ್ಲಿ ತೊಳೆದು, ಮುಗಿಲ ಮಿಂಚನೆ ಎರೆದು, ರಾತ್ರಿ ಮಂಜಿನಲಿ ನೆನೆದ ಚರ್ಮವನ್ನು ರಾತ್ರಿಯ ಚಂದ್ರಮನ ಬೆಳ್ಳಿ ಕಿರಣಗಳ ಬಿಸಿಯಲ್ಲಿ ಕಾಯಿಸಿ, ಬೆಳಗಿನ ಪ್ರಥಮ ಉಷಾಕಿರಣದಲ್ಲಿ ಕಾಯ್ದ ಚರ್ಮವನ್ನು ಸಂಜೆಯ ಮಂದ ನಿಷಾಕಿರಣಗಳಿಂದ ತಂಪು ಮಾಡಿ ಅದರೊಳಕ್ಕೆ ಪಾಂಗಿತವಾಗಿ ಅಗ್ನಿ ಪಾದಕವನ್ನು ತಂಪುಗೊಳಿಸಿ ಹೆಪ್ಪಿಡಲಾಯಿತು.
ಅಣ್ಣಾ…. ಬಸವಣ್ಣಾ ಹೀಗೆ ಪಾಕಾದ ಚರ್ಮವನ್ನು ನೆಲದ ಮೇಲೆ ಹರವಿ, ಮೈನಾಗಿರುವುದು ಕಂಡು, ಹರುಷಗೊಂಡು ನಿನ್ನ ಪಾದಗಳ ಅಳತೆಯನ್ನು ಧೇನಿಸತೂಡಗಲು ನಿನ್ನ ಪಾದಗಳೋ
“ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ ಕೂಡಲಸಂಗಮ ದೇವಾ”
ನಿನ್ನ ಅನಂತ ಪಾದದ ಅಳತೆ ನನ್ನ ಕಣ್ಣ ಆಯತಕ್ಕೆ ಸಿಕ್ಕದಾಗಿ ಕುಲದ ತಂದೆ ಜಾಂಬವನನ್ನು ಧ್ಯಾನಿಸಲು, ಜಾಂಬವ ತಾತನಾದರೋ ದೇವಿ ಅರುಂಧತಿಯವರಿಗೆ ನಿನ್ನ ಪಾದದಳತೆಯನು. ಕೆಂಡರಿಸುವಂತೆ ತಿಳಿಸಲು, ದೇವಿ ಅರುಂಧತಿಯಾದರೋ ತನ್ನ ಬಸಿರೊಳಗೆ ಹುಟ್ಟಿದ ಮಾದಾರ ಚೆನ್ನಯ್ಯನಿಗೆ ಅನುಜ್ಞೆ ಮಾಡಲು, ಚನ್ನಯ್ಯನು ತನ್ನ ಕರುಳ ಹೊಕ್ಕುಳ ಬಳ್ಳಿ ಕಲ್ಯಾಣಮ್ಮನವರಿಗೆ ನಿನ್ನ ಪಾದದ ಅಳತೆಯ ಸೋಜುಗವ ವಿವರಿಸಿದರು ಹೀಗೆ :-
ಬಸವಣ್ಣನೆಂಬುವನು ನಮ್ಮಕುಲದ ಬಂಗಾರದ ಶಿಶುವಲ್ಲವೋ ಅವನು ಉಸಿರೆಂಬ ಘನವೋ. ಅವನು ಉಸಿರೆಂಬ ಘನವಲ್ಲವೋ ಘನವೆಂಬ ಉಸಿರೊಳಡಗಿದ ಪ್ರಾಣವೋ!”
ಇಂತೀ ನಿನಗೆ ಒಪ್ಪುವ ಪಾದ್ರಾಕ್ಷಿಯ ಅಳತೆಯನ್ನು ಅರಿಯದವಳಾದ ಕಲ್ಯಾಣಮ್ಮನು ಮೂಲದಲ್ಲಿ ಜಲಮಯವಾಗಿದ್ದ ಈ ಸೃಷ್ಟಿಗೆ ತನ್ನ ರಕ್ತವನ್ನೇ ಬಸಿದು ಹೆಪ್ಪಿಟ್ಟು ಭೂಮಿಯನ್ನು ಸೃಷ್ಟಿಸಿದ ಮಾದಿಗರ ಮೊದಲ ಮಗನಾದ ಹೆಪ್ಪುಮುನಿಯನ್ನು ಸಾಕ್ಷಿಯಾಗಿ ಒಡ್ಡಿ, “ಬಸವಣ್ಣನು ನಿಜವಾದ ನಮ್ಮ ಮಾದಾರ ಕುಲದ ಮಗನೇ ಆಗಿದ್ದಲ್ಲಿ ಪುರೋಹಿತರ ಕಣ್ಣ ಎಚ್ಚರಿಕೆಯ ತಪ್ಪಿಸಿ ಓಡಿ ಬಂದು ನನ್ನ ಮಡಿಲಲ್ಲಿ ಮಲಗುವ ಕಂದಮ್ಮನಂತೆ ನನ್ನ ಸೆರಗು ಹಿಡಿದು ‘ಅವ್ವಾ’ ಎಂದು ಚೆಲುನುಡಿಗಳಲ್ಲಿ ಕರೆಯಲಿ” ಎಂದು ಪ್ರೀತಿಯಿಂದ ಕೂಗಿದಾಗ, ಬಿಜ್ಜಳನ ಅಧಿಕಾರದ ಸೆರಗಿನ ಮರೆಯಲ್ಲಿದ್ದ ನೀನು ನಿನ್ನ ಜನ್ಮಧಾರಕ ವೇಷ ಕಳೆದು, ಜಗ್ಗನೆ ಜನಿವಾರ ಹರಿದು, ಬಯಲ ಬೆತ್ತಲೆಯಂತೆ ಹುಟ್ಟುಮಾರ್ಗದಲ್ಲಿ ದಿಬ್ಬ ಹತ್ತಿ ಕಣಿವೆ ಇಳಿದು ಅಗ್ರಹಾರದಿಂದ ಬಲು ದೂರವುಳ್ಳ ಹಟ್ಟಿಯ ಹೊಕ್ಕು ನಮ್ಮ ಮನೆಯಲ್ಲಿ ಕಿಲಗುಡುವ ಕಂದನಾದೆ!
ಆ ಬಳಿಕ… ಚಲುವ ಚಂದಿರನಂಥ ಕಂದಮನಾದ ನಿನ್ನ ಅಂದದ ಆಟಗಳು ಚಂದದ ನೋಟಗಳು ಸಾವಿರ ನಕ್ಷತ್ರಗಳ ಕಣ್ಣು ಬಿಡುವ ನವಿಲು ಕುಣಿತದ ಹೊಳಪನ್ನು ನಮ್ಮ ಗುಡಿಸಲು ತುಂಬಿ, ಕಲ್ಯಾಣಮ್ಮನವರು ತಾಯ ಸೆರಗು ಮರೆಮಾಡಿ ಕಿಲಕಿಲನೆ ನಗುತ್ತಾ ನಿನ್ನ ಪುಟ್ಟ ಪಾದಗಳನ್ನು ಕಣ್ಣೊಳಗೆ ಮುಚ್ಚಿಕೊಂಡರಲ್ಲೋ ಅಣ್ಣಾ!
ಹೀಗೆ ನಿನ್ನ ಪಾದಗಳನ್ನು ಕಣ್ಣೊಳಗೆ ಮುಚ್ಚಿಕೊಂಡ ಸೋಜಿಗವನ್ನು ಕಲ್ಯಾಣಮ್ಮ ಬೀಜದೊಳಗಿರುವ ಮೊಳಕೆಯನ್ನು ಕಾಣಿಸುವಂತೆ ನನಗೆ ಕಂಡರಿಸಿದಾಗ ಅಲ್ಲಿ ನಮ್ಮ ಗುಡಿಸಲೊಳಗೆ ಅಡಿಗಲ್ಲ ಮೇಲೆ ಮುದ್ರೆಯೊತ್ತಿತ್ತು. ನಿನ್ನ ಪಾದಗಳ ಅಳತೆ ನಮ್ಮ ಅಡಿಗಲ್ಲಿನ ಮೇಲೆ ಬಟುವಾದ ಉದ್ದ, ಬಟುವಾದ ಅಗಲ ; ನಿನ್ನ ಪಾದ ಅಷ್ಟೆ!
ಅಣ್ಣಾ, ಮಾದಾರನ ಚಮ್ಮಾರಿಕೆಯ ಅಡಿಗಲ್ಲು ಸಾಮಾನ್ಯವಲ್ಲ ; ಪೂರ್ವದಲ್ಲಿ ಇವಳು ಕಾಳಿಕಾ ಮಾತೆ; ವಿಶ್ವಕರ್ಮನ ತಾಯಿ! ಮಾದಿಗರ ಹೊಸ್ತಿಲಲ್ಲಿ ಅಡಿಗಲ್ಲು ರೂಪಾಗಿ ಕುಂತವಳೆ!
ಇದು ತಾತ ಜಾಂಬವರು ನೀಡಿದ ಕುಲದ ದಾನ. ಕುಶಲ ಕರ್ಮಿಯ ಕಲೆ ಅರಳುವುದು ಇಲ್ಲಿ. ನಿನಗೆ ಮಾಡಿಕೊಟ್ಟ ಚಮ್ಮಾಳಿಗೆ ಕುಶಲತೆಯಲ್ಲಿ ಅರಳಿದ್ದು ಇದೇ ಅಡಿಗಲ್ಲ ಮೇಲೆ. ವಚನ ಕಟ್ಟುವುದು ನಿನಗೆ ಹೇಗೋ ಹಾಗೆ ನಮಗೆ ಚಮ್ಮಾರಿಕೆ ಸೃಷ್ಟಿಶೀಲ ಕ್ರಿಯೆ. ನಿನಗೆ ನಾವು ತಯಾರಿಸಿಕೊಟ್ಟ ಚಮ್ಮಾಳಿಗೆ ನಮ್ಮ ಪಾಲಿಗೊಂದು ಶ್ರೇಷ್ಢ ವಚನ. ಅದಕ್ಕಾಗಿ ನಾನಾಗಲೀ ನನ್ನ ಹೆಂಟತಿಯಾಗಲೀ ಅನ್ಯ ವಚನಗಳನ್ನೇ ಬರೆದಿಲ್ಲ. ನಮ್ಮ ಕಾಯಕದ ಬದುಕೇ ಒಂದು ವಚನ.
(ಚರ್ಮಕ್ಕೆ ಕರೆ ಹಾಯಿಸಿ ಹದಮಾಡುವ ವಿಧಾನವನ್ನು ಕುರಿತು ಮಾಹಿತಿ ನೀಡಿದವರು ನನ್ನ ತಂದೆ ಹನುಮಂತಯ್ಯ ಮತ್ತು ತಾಯಿ ಕದರಮ್ಮ)
(ಡಾ.ವಡ್ಡಗೆರೆ ನಾಗರಾಜಯ್ಯ
8722724174)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅಲ್ಪಸಂಖ್ಯಾತರ ಇಲಾಖೆ ನಿರ್ದೇಶಕ ಜಿಲಾನಿ ಎಚ್. ಮೊಕಾಶಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಇಲಾಖೆಯ ನಿಯಮಾನುಸಾರ ಬಯೋಟ್ರಿಕ್ ಹಾಜರಾತಿ ಅಳವಡಿಸಿಕೊಳ್ಳದೆ ಸರ್ಕಾರಕ್ಕೆ ವಂಚಿಸಿರುವ ಬಗ್ಗೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರಾದ ಜಿಲಾನಿ ಎಚ್. ಮೊಕಾಶಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರತಿದಿನದ ಹಾಜರಾತಿಯನ್ನು ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯ ಮೂಲಕ ಕಡ್ಡಾಯವಾಗಿ ನಿರ್ವಹಿಸಲು ದಿನಾಂಕ: 12-07-2022 ರಂದು ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ, ಬೆಂಗಳೂರು ಇವರು ಸುತ್ತೋಲೆ ಹೊರಡಿಸಿದ್ದಾರೆ.
ಸದರಿ ಸುತ್ತೋಲೆಯಲ್ಲಿ ‘ಎಲ್ಲಾ ನಿಲಯಪಾಲಕರು/ ಮೇಲ್ವಿಚಾರಕರು ಬೆಲಗ್ಗೆ ತಿಂಡಿ ಸಮಯದಲ್ಲಿ ಹಾಗೂ ರಾತ್ರಿ ಊಟದ ಸಮಯದಲ್ಲಿ ವಸತಿ ಶಾಲೆ/ಕಾಲೇಜು ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಕಡ್ಡಾಯವಾಗಿ ಹಾಜರಿದ್ದು, ವಿದ್ಯಾರ್ಥಿಗಳ ಬಯೋಮೆಟ್ರಿಕ್ ಹಾಜರಾತಿಯನ್ನು ಪಡೆಯತಕ್ಕದ್ದು’ ಎಂಬುದಾಗಿ ಸೂಚಿಸಲಾಗಿದೆ.
‘ಬಯೋಮೆಟ್ರಿಕ್ ಹಾಜರಾತಿ ಪಡೆಯದೆ ಆಹಾರ ವೆಚ್ಚ ಭರಿಸಿದ್ದಲ್ಲಿ ಸಂಬAಧಪಟ್ಟ ನಿಲಯಪಾಲಕರು, ಅಲ್ಪಸಂಖ್ಯಾತರ ತಾಲ್ಲೂಕು ವಿಸ್ತರಣಾಧಿಕಾರಿಗಳು/ ಪ್ರಾಂಶುಪಾಲರು, ಜಿಲ್ಲಾ ಅಧಿಕಾರಿಗಳನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಿ ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸಲಾಗುವುದು’ ಎಂಬುದಾಗಿ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿರುತ್ತದೆ.
ಆದರೆ ದಾವಣಗೆರೆ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳದೆ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವ ಮಾಹಿತಿ ಆಧಾರದಲ್ಲಿ ದಿನಾಂಕ: 28-11-2025 ರಂದು ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಾವಣಗೆರೆ ಇವರಿಗೆ ದಿನಾಂಕ: 28-11-2025 ರಂದು ದೂರು ನೀಡಿ ‘ದಾವಣಗೆರೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಅಳವಡಿಸಿರುವ ಬಯೋಮೆಟ್ರಿಕ್ ಹಾಜರಾತಿ ನಿರ್ವಹಣೆಯನ್ನು ತನಿಖೆಗೆ ಒಳಪಡಿಸುವಂತೆ’ ಕೋರಲಾಗಿತ್ತು.
ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಾವಣಗೆರೆ ಇವರು ನೀಡಿದ ಹಿಂಬರಹದಲ್ಲಿ ‘ಈ ಸಂಬAಧ ಜಿಲ್ಲೆಯ ಕೆಲವು ವಸತಿ ನಿಲಯಗಳಲ್ಲಿ ಬಯೋಮೆಟ್ರಿಕ್ ಯಂತ್ರದಲ್ಲಿನ ತಾಂತ್ರಿಕ ದೋಷದಿಂದ ವಿದ್ಯಾರ್ಥಿಗಳ ಹಾಜರಾತಿಯನ್ನು ದಾಖಲಿಸಲು ಸಾಧ್ಯವಾಗಿರುವುದಿಲ್ಲವೆಂದು ಹಾಗೂ ಮತ್ತೆ ಕೆಲವು ವಸತಿ ಶಾಲೆ ಮತ್ತು ವಸತಿ ನಿಲಯಗಳಿಗೆ ಹೊಸ ಬಯೋಮೆಟ್ರಿಕ್ ಯಂತ್ರವನ್ನು ಪೂರೈಕೆ ಮಾಡುವಂತೆ ಪ್ರಾಂಶುಪಾಲರುಗಳು ಮತ್ತು ತಾಲ್ಲೂಕು ವಿಸ್ತರಣಾಧಿಕಾರಿಗಳು ಕೋರಿರುವ ಪತ್ರವನ್ನು ಲಗತ್ತಿಸಿ’ ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶಕರು, ಬೆಂಗಳೂರು ಇವರಿಗೆ ಪತ್ರ ಬರೆಯಲಾಗಿದೆ ಎಂಬುದಾಗಿ ತಿಳಿಸಿರುತ್ತಾರೆ.
ಆದ ಕಾರಣ ದಿನಾಂಕ: 17-02-2026 ರಂದು ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ, ಬೆಂಗಳೂರು ಇವರಿಗೆ ದೂರು ನೀಡಿ ದಾವಣಗೆರೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಇಲಾಖೆಯ ನಿಯಮಾನುಸಾರ ಬಯೋಟ್ರಿಕ್ ಹಾಜರಾತಿ ಅಳವಡಿಸಿಕೊಳ್ಳದೆ ಸರ್ಕಾರಕ್ಕೆ ವಂಚಿಸಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ವರದಿಯನ್ನು ಒಂದು ತಿಂಗಳ ಒಳಗಾಗಿ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಕೋರಲಾಗಿತ್ತು. ಆದರೆ ದೂರು ನೀಡಿ 3 ತಿಂಗಳು ಕಳೆದರೂ ಅಲ್ಪಸಂಖ್ಯಾತರ ನಿರ್ದೇಶನಾಲಯ ನಿರ್ದೇಶಕರಾದ ಜಿಲಾನಿ ಎಚ್. ಮೊಕಾಶಿ ಇವರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬಳ್ಳಾರಿ ಗಾಂಧಿನಗರ ಠಾಣೆಯ ವ್ಯಾಪ್ತಿ ಜೂಜಾಟ | ಠಾಣೆಯ ಅಧಿಕಾರಿಗಳು ಮೌನ ; ಕ್ರಮ ಕೈಗೊಳ್ತಾರಾ ಎಸ್ ಪಿ..?
ಗಿರೀಶ್ ಬಳ್ಳಾರಿ
ಸುದ್ದಿದಿನ,ಬಳ್ಳಾರಿ:ನಗರದ ಗಾಂಧಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ರಾತ್ರಿ 10 ಗಂಟೆಯ ನಂತರ ಕೊಂಡಯ್ಯ ಫ್ಯಾಕ್ಟರಿಯ ಹುಸೇನ್ ನಗರದ ಜಾಲಿ ಬೇಲಿಯ ಒಳಭಾಗದಲ್ಲಿ ಅಕ್ರಮವಾಗಿ ಇಸ್ಪೀಟ್ ಆಡುತ್ತಿದ್ದಾರೆ ಜೊತೆಗೆ ಆ ಪ್ರದೇಶಕ್ಕೆ ಹೋಗುವ ಈ ಜೂಜಾಟ ಆಡುವವರು ಬೈಕ್ ಗಳ ಶಬ್ದ ಮಾಡಿಕೊಂಡು, ಮನೆಗಳಲ್ಲಿ ಇರುವ ಮಹಿಳೆಯರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ ಎನ್ನುವ ಆರೋಪ ಸ್ಥಳೀಯ ನಿವಾಸಿಗಳಿಂದ ಕೇಳಿ ಬಂದಿದೆ.
ಇನ್ನು ಈ ಇಸ್ಪೀಟ್ ಜೂಜಾಟ ಆಡಿಸುತ್ತಿರುವ ವ್ಯಕ್ತಿಗಳು ದುಬ್ಬ ರಾಜು, ದಾದು ಮತ್ತು ಜಾನಿ, ರಘು ಎಂದು ತಿಳಿದು ಬಂದಿದೆ. ಇನ್ನು ಗಾಂಧಿನಗರ ಠಾಣೆಯ ಸಿಪಿಐ ಮತ್ತು ಪಿ.ಎಸ್.ಐ ಮತ್ತು ಕ್ರೈಂ ಸಿಬ್ಬಂದಿಗಳಿಗೆ ಮಾಹಿತಿ ಇದ್ದರು ಅವರಿಂದ ಹಣ ಪಡೆದುಕೊಂಡು ಈ ಜೂಜಾಟ ಆಡಿಸುತ್ತಿರುವ ಮಾಹಿತಿ ಸಹ ಲಭ್ಯವಾಗಿದೆ.
ಸಾಧಿಕ್ ಪೊಲೀಸರಿಗೆ ಸಾಥ್
ಇನ್ನು ಸಾಧಿಕ್ ಎನ್ನುವ ವ್ಯಕ್ತಿ ಗಾಂಧಿನಗರ ಠಾಣೆಯ ಅನೇಕ ಪೊಲೀಸರಿಗೆ ಪರಿಚಯ ಇದ್ದಾನೆ ಅಂತ ಹೇಳಿ ಜನ ಸಾಮಾನ್ಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮಾಡಿ ಅವರ ವಿರುದ್ಧ ಠಾಣೆಯಲ್ಲಿ ಕೇಸ್ ಹಾಕಿಸುತ್ತೇನೆ ಎಂದು ಹಣ ವಸೂಲಿ ಸಹ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.
ಇನ್ನು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ನ ಪನ್ನಿಕರ್ ಪೊಲೀಸ್ ಠಾಣೆಯ ಸಿಪಿಐ ಮತ್ತು ಪಿಎಸ್ಐ ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ. ಇನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಕರೆಯನ್ನು ಸ್ವೀಕರಿಸಿಲಿಲ್ಲ.
“ಇನ್ನು ಗಾಂಧಿನಗರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವಿಚಂದ್ರ ಅವರಿಗೆ ದೂರವಾಣಿ ಮೂಲಕ ಮಾತನಾಡಿಸಿದಾಗ ನಮ್ಮ ಗಮನಕ್ಕೆ ಇಲ್ಲ, ಗೋತ್ತಾದ್ರೆ ರೈಡ್ ಮಾಡುತ್ತೇವೆ ಎಂದರು.”
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪಂಚಪಾಡಿ ಪದ್ಧತಿಯಲ್ಲಿ ವಿದ್ಯಾಭ್ಯಾಸ | ತ್ಯಾವಣಿಗೆಯ ಮಂದಾರ ಶಾಲೆಯಲ್ಲಿ ಪ್ರವೇಶ ಪ್ರಾರಂಭ
~ವಿದ್ಯಾನಾಯ್ಕ್ ಅರೇಹಳ್ಳಿ
ಸುದ್ದಿದಿನ,ದಾವಣಗೆರೆ:ಚನ್ನಗಿರಿ ತಾಲೂಕು ವ್ಯಾಪ್ತಿಯ ತ್ಯಾವಣಿಗೆ ಗ್ರಾಮದಲ್ಲಿ ಪಂಚಪಾಡಿ ಮತ್ತು ಆಧುನಿಕ ಪದ್ಧತಿಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಒಂದು ವಿನೂತನ ಕಾರ್ಯಕ್ಕೆ ಮುಂದಡಿ ಇಟ್ಟಿದ್ದಾರೆ. ಪಂಚಪಾಡಿ ಕಲಿಕೆ ಎನ್ನುವುದು ಶಿಕ್ಷಣ ಕ್ಷೇತ್ರದಲ್ಲಿ ಬಳಸಲಾಗುವ ಒಂದು ವ್ಯವಸ್ಥಿತ ಮತ್ತು ಪ್ರಭಾವಶಾಲಿ ಬೋಧನಾ ವಿಧಾನವಾಗಿದ್ದು, ವಿಶೇಷವಾಗಿ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ – NEP ಯಲ್ಲೂ ಇದರ ಪ್ರಸ್ತಾಪವಿದೆ ಎನ್ನಲಾಗಿದೆ.
ಪಂಚಪಾಡಿ ಎಂದರೇನು?
ಪಂಚಪಾಡಿ ಎಂದರೆ ಮಗುವಿನ ಸಮಗ್ರ ವಿಕಾಸಕ್ಕಾಗಿ ಐದು ಹಂತಗಳ ಕಲಿಕಾ ಪ್ರಕ್ರಿಯೆಯನ್ನು ಬಳಸಲಾಗುತ್ತದೆ.
ಅಂದರೆ ಜ್ಞಾನರ್ಜನೆಗೆ ಐದು ಹೆಜ್ಜೆಗಳು ಅಥವಾ ಐದು ಹಂತಗಳು ಎಂದರ್ಥ.
ಜ್ಞಾನವನ್ನು ಕೇವಲ ನೆನಪಿನಲ್ಲಿಟ್ಟುಕೊಳ್ಳುವುದರ ಬದಲಾಗಿ, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಈ ವಿಧಾನ ಸಹಾಯ ಮಾಡುತ್ತದೆ.
ಪಂಚಪಾಡಿ ಕಲಿಕೆಯ 5 ಹಂತಗಳು
ಅದಿತಿ ( ಪರಿಚಯ / ಗ್ರಹಿಕೆ): ಈ ಪದ್ಧತಿಯ ಮೊದಲ ಹಂತವೇ ಅದಿತಿ. ಇಲ್ಲಿ ವಿದ್ಯಾರ್ಥಿಗೆ ಹೊಸ ವಿಷಯವನ್ನು ಪರಿಚಯಿಸಲಾಗುತ್ತದೆ. ಶಿಕ್ಷಕರು ಕಥೆ,ಚಿತ್ರ ಉದಾಹರಣೆ ಅಥವಾ ಚಟುವಟಿಕೆಗಳ ಮೂಲಕ ಹೊಸ ವಿಷಯವನ್ನು ಮಗುವಿನ ಮುಂದೆ ಪ್ರಸ್ತುತಪಡಿಸುತ್ತಾರೆ. ಮಗು ವಿಷಯವನ್ನು ಕೇಳಿ, ನೋಡಿ ಗ್ರಹಿಸಲು ಆರಂಭಿಸುತ್ತದೆ.
ಬೋಧ : (ತಿಳುವಳಿಕೆ / ಅರ್ಥೈಸಿಕೊಳ್ಳುವಿಕೆ): ಪರಿಚಯಿಸಿಕೊಂಡ ವಿಷಯವನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಹಂತವಿದು. ಮಗು ವಿಷಯದ ಹಿಂದಿರುವ ಪರಿಕಲ್ಪನೆ ಮತ್ತು ಕಾರಣಗಳನ್ನು ಅರ್ಥಮಾಡಿಕೊಳ್ಳುತ್ತದೆ. ಪ್ರಶ್ನೆಗಳನ್ನು ಕೇಳುವ ಮೂಲಕ ಮತ್ತು ಚರ್ಚೆಗಳಲ್ಲಿ ಭಾಗವಹಿಸುವ ಮೂಲಕ ತನ್ನ ಗೊಂದಲಗಳನ್ನು ನಿವಾರಿಸಿಕೊಳ್ಳುತ್ತದೆ.
ಅಭ್ಯಾಸ : (ರೂಢಿಸಿಕೊಳ್ಳುವುದು / ತರಬೇತಿ): ಕಲಿತ ವಿಷಯ ಮನಸ್ಸಿನಲ್ಲಿ ಗಟ್ಟಿಯಾಗಲು ನಿರಂತರ ಸ್ಮರಣೆ ಅಥವಾ ಅಭ್ಯಾಸದ ಅಗತ್ಯವಿದೆ. ಮಕ್ಕಳು ಕಲಿತ ವಿಷಯವನ್ನು ಬರವಣಿಗೆ, ಗಣಿತದ ಲೆಕ್ಕಗಳು, ಪ್ರಯೋಗಗಳು ಅಥವಾ ಪುನರಾವರ್ತನೆ (Revision) ಮೂಲಕ ಅಭ್ಯಾಸ ಮಾಡುತ್ತಾರೆ. ಇದು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಕೇವಲ ಪುಸ್ತಕದಲ್ಲಿ ಕಲಿತದ್ದನ್ನು ನಿಜ ಜೀವನದಲ್ಲಿ ಅಥವಾ ಹೊಸ ಸಂದರ್ಭಗಳಲ್ಲಿ ಬಳಸಿ ನೋಡುವುದೇ ಪ್ರಯೋಗ.
ಉದಾಹರಣೆಗೆ, ಗಣಿತದಲ್ಲಿ ‘ಲಾಭ-ನಷ್ಟ’ ಕಲಿತ ನಂತರ ಮಗು ಮಾರುಕಟ್ಟೆಗೆ ಹೋಗಿ ವ್ಯವಹಾರ ಮಾಡುವುದು, ಅಥವಾ ವಿಜ್ಞಾನದ ತತ್ವವನ್ನು ಪ್ರಾಜೆಕ್ಟ್ ಮೂಲಕ ಮಾಡಿ ನೋಡುವುದು.
ಪ್ರಸಾರ : (ಹಂಚಿಕೊಳ್ಳುವುದು) ಕಲಿಕೆಯ ಅತ್ಯುನ್ನತ ಹಂತವೆಂದರೆ ತಾನು ಕಲಿತ ಜ್ಞಾನವನ್ನು ಇತರರಿಗೆ ಮನವರಿಕೆ ಮಾಡಿಕೊಡುವುದು. ವಿದ್ಯಾರ್ಥಿ ತನಗೆ ತಿಳಿದ ವಿಷಯವನ್ನು ತನ್ನ ಸಹಪಾಠಿಗಳಿಗೆ ವಿವರಿಸುವುದು, ಭಾಷಣ ಮಾಡುವುದು ಅಥವಾ ಗುಂಪು ಚರ್ಚೆಯಲ್ಲಿ ಹಂಚಿಕೊಳ್ಳುವುದು. “ಕಲಿಸುವುದರಿಂದ ಕಲಿಕೆ ಪೂರ್ಣವಾಗುತ್ತದೆ” ಎಂಬ ತತ್ವ ಇದರ ಹಿಂದಿದೆ.
ಪಂಚಪಾಡಿ ಕಲಿಕೆಯ ಮಹತ್ವ
”ಶುಷ್ಕ ಜ್ಞಾನಕ್ಕಿಂತ ಪ್ರಾಯೋಗಿಕ ಜ್ಞಾನವೇ ಮೇಲು.”
ಇದು ಮಕ್ಕಳಲ್ಲಿ ಸ್ವಯಂ ಕಲಿಕೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ.
ಕಂಠಪಾಠ ಮಾಡುವ ಪದ್ಧತಿಯನ್ನು ತಪ್ಪಿಸಿ, ವಿಷಯದ ಆಳವಾದ ತಿಳುವಳಿಕೆಗೆ ನೆರವಾಗುತ್ತದೆ.
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ್ಯವನ್ನು ಬೆಳೆಸುತ್ತದೆ.
ಶಾಲೆಯ ವೈಶಿಷ್ಟ
ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಸ್ಕಾರವನ್ನು ಕಲಿಸಬೇಕೆಂಬ ಮಹಾದಾಸೆಯಿಂದ ಶಾಲೆ ಪ್ರಾರಂಭ ಮಾಡಿರುವ ವೀಣಾ ಮಂಜುನಾಥ್ ಅವರು ಈ ಶಾಲೆಯಲ್ಲಿ ಸ್ಮಾರ್ಟ್ ತರಗತಿ, ಪ್ರೊಜೆಕ್ಟರ್ ಬಳಕೆ, 5ರಿಂದ 10ನೇ ತರಗತಿ ಮಕ್ಕಳಿಗೆ ವಿಶೇಷ ಬೋಧನೆ, ಚಟುವಟಿಕೆ ಆಧಾರಿತ ಕಲಿಕೆ, ಕರಾಟೆ, ಯೋಗ ಹೀಗೆ ವಿಭಿನ್ನ ರೀತಿಯ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಪ್ರಸ್ತುತ ಪೂರ್ವ ಪ್ರಾಥಮಿಕದಿಂದ 10ನೇ ತರಗತಿಯವರೆಗೆ ಮಕ್ಕಳಿಗೆ ಶಿಕ್ಷಣ ನೀಡುತ್ತಾ ಬಂದಿರುತ್ತದೆ. ಸಂಸ್ಥೆಯು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗಾಗಿ ಶಾಲೆಯಲ್ಲಿ ಪೀಠೋಪಕರಣಗಳು, ಪಾಠೋಪಕರಣಗಳು ,ಗ್ರಂಥಾಲಯ, ಆಟೋಪಕರಣಗಳು, ಕಂಪ್ಯೂಟರ್ ಮುಂತಾದ ಸೌಕರ್ಯಗಳನ್ನು ಹೊಂದಿರುತ್ತದೆ.
ಕಳೆದ ಕೆಲವು ವರ್ಷಗಳಿಂದ ಕರಾಟೆ ಮತ್ತು ಸ್ಪೋಕನ್ ಇಂಗ್ಲಿಷ್ ಶಿಕ್ಷಣವನ್ನು ನಮ್ಮ ಶಾಲೆಯಲ್ಲಿ ಪರಿಚಯಿಸಿದ್ದು ಎಲ್ ಕೆ ಜಿ ತರಗತಿಯಿಂದ ಹತ್ತನೇ ತರಗತಿಯವರೆಗೆ ಕರಾಟೆ ಮತ್ತು ಸ್ಪೋಕನ್ ಇಂಗ್ಲಿಷ್ ಶಿಕ್ಷಣವನ್ನು ಅಳವಡಿಸಲಾಗಿದೆ.
ಸಾಂಸ್ಕೃತಿಕ ವಾತಾವರಣವನ್ನು ಶಾಲೆಯಲ್ಲಿ ನಿರ್ಮಿಸಲು ಸಂಗೀತ , ಭರತನಾಟ್ಯ , ಯೋಗ , ಚಿತ್ರಕಲೆ , ಮುಂತಾದ ಚಟುವಟಿಕೆಗಳನ್ನು ಪರಿಚಯಿಸಲಾಗುವುದು. ಇಂಗ್ಲಿಷ್ , ಹಿಂದಿ ಭಾಷೆಗಳ ಕಲಿಕೆಗೆ ಮಕ್ಕಳಲ್ಲಿ ವಿಶೇಷ ಆಸಕ್ತಿಯನ್ನು ಬೆಳೆಸುವುದು.
ಒಟ್ಟಾರೆ ಸಂಸ್ಥೆಯು ವಿದ್ಯಾರ್ಥಿಗಳನ್ನು ಸರ್ವತೋಮುಖ ಅಭಿವೃದ್ಧಿಪಡಿಸಲು ಹಾಗೂ ದೇಶದ ಜವಾಬ್ದಾರಿಯುತ ಪ್ರಜೆಯನ್ನಾಗಿ ರೂಪಿಸುವ ಉದಾತ್ತ ಧ್ಯೇಯವನ್ನು ಇಟ್ಟುಕೊಂಡಿದ್ದೇವೆ ಎನ್ನುತ್ತಾರೆ ಶಾಲೆ ಮುಖ್ಯಸ್ಥರಾದ ವೀಣಾ ಮಂಜುನಾಥ್..
ಜೂನ್ 2ಕ್ಕೆ ಶಾಲಾ ಪ್ರವೇಶಕ್ಕೆ ಕೊನೆದಿನ
2010-11ನೇ ಸಾಲಿನಲ್ಲಿ ರಿಜಿಸ್ಟರ್ ಆದ ಈ ಶಾಲೆಯಲ್ಲಿ ಪ್ರಥಮವಾಗಿ 2012-13ರಲ್ಲಿ ಎಲ್ ಕೆಜಿ, ಯುಕೆಜಿ, 2014-15ನೇ ಸಾಲಿನಲ್ಲಿ 1ನೇ ತರಗತಿ, 2019-20ರಲ್ಲಿ 6ರಿಂದ 8ನೇ ತರಗತಿ, 2024-25ರಲ್ಲಿ 9ರಿಂದ 10ನೇ ತರಗತಿ ಹಂತ ಹಂತವಾಗಿ ಪ್ರಾರಂಭ ಮಾಡಲಾಗಿದೆ.
ಶಾಲೆಯ ವೈಶಿಷ್ಟ
ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಸ್ಕಾರವನ್ನು ಕಲಿಸಬೇಕೆಂಬ ಮಹಾದಾಸೆಯಿಂದ ಶಾಲೆ ಪ್ರಾರಂಭ ಮಾಡಿರುವ ವೀಣಾ ಮಂಜುನಾಥ್ ಅವರು ಈ ಶಾಲೆಯಲ್ಲಿ ಸ್ಮಾರ್ಟ್ ತರಗತಿ, ಪ್ರೊಜೆಕ್ಟರ್ ಬಳಕೆ, 5ರಿಂದ 10ನೇ ತರಗತಿ ಮಕ್ಕಳಿಗೆ ವಿಶೇಷ ಬೋಧನೆ, ಚಟುವಟಿಕೆ ಆಧಾರಿತ ಕಲಿಕೆ, ಕರಾಟೆ, ಯೋಗ ಹೀಗೆ ವಿಭಿನ್ನ ರೀತಿಯ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಪ್ರಸ್ತುತ ಪೂರ್ವ ಪ್ರಾಥಮಿಕದಿಂದ 10ನೇ ತರಗತಿಯವರೆಗೆ ಮಕ್ಕಳಿಗೆ ಶಿಕ್ಷಣ ನೀಡುತ್ತಾ ಬಂದಿರುತ್ತದೆ. ಸಂಸ್ಥೆಯು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗಾಗಿ ಶಾಲೆಯಲ್ಲಿ ಪೀಠೋಪಕರಣಗಳು, ಪಾಠೋಪಕರಣಗಳು ,ಗ್ರಂಥಾಲಯ, ಆಟೋಪಕರಣಗಳು, ಕಂಪ್ಯೂಟರ್ ಮುಂತಾದ ಸೌಕರ್ಯಗಳನ್ನು ಹೊಂದಿರುತ್ತದೆ.
ಕಳೆದ ಕೆಲವು ವರ್ಷಗಳಿಂದ ಕರಾಟೆ ಮತ್ತು ಸ್ಪೋಕನ್ ಇಂಗ್ಲಿಷ್ ಶಿಕ್ಷಣವನ್ನು ನಮ್ಮ ಶಾಲೆಯಲ್ಲಿ ಪರಿಚಯಿಸಿದ್ದು ಎಲ್ ಕೆ ಜಿ ತರಗತಿಯಿಂದ ಹತ್ತನೇ ತರಗತಿಯವರೆಗೆ ಕರಾಟೆ ಮತ್ತು ಸ್ಪೋಕನ್ ಇಂಗ್ಲಿಷ್ ಶಿಕ್ಷಣವನ್ನು ಅಳವಡಿಸಲಾಗಿದೆ.
ಸಾಂಸ್ಕೃತಿಕ ವಾತಾವರಣವನ್ನು ಶಾಲೆಯಲ್ಲಿ ನಿರ್ಮಿಸಲು ಸಂಗೀತ , ಭರತನಾಟ್ಯ , ಯೋಗ , ಚಿತ್ರಕಲೆ , ಮುಂತಾದ ಚಟುವಟಿಕೆಗಳನ್ನು ಪರಿಚಯಿಸಲಾಗುವುದು. ಇಂಗ್ಲಿಷ್ , ಹಿಂದಿ ಭಾಷೆಗಳ ಕಲಿಕೆಗೆ ಮಕ್ಕಳಲ್ಲಿ ವಿಶೇಷ ಆಸಕ್ತಿಯನ್ನು ಬೆಳೆಸುವುದು.
ಒಟ್ಟಾರೆ ಸಂಸ್ಥೆಯು ವಿದ್ಯಾರ್ಥಿಗಳನ್ನು ಸರ್ವತೋಮುಖ ಅಭಿವೃದ್ಧಿಪಡಿಸಲು ಹಾಗೂ ದೇಶದ ಜವಾಬ್ದಾರಿಯುತ ಪ್ರಜೆಯನ್ನಾಗಿ ರೂಪಿಸುವ ಉದಾತ್ತ ಧ್ಯೇಯವನ್ನು ಇಟ್ಟುಕೊಂಡಿದ್ದೇವೆ ಎನ್ನುತ್ತಾರೆ ಶಾಲೆ ಮುಖ್ಯಸ್ಥರಾದ ವೀಣಾ ಮಂಜುನಾಥ್..
“2010-11ನೇ ಸಾಲಿನಲ್ಲಿ ರಿಜಿಸ್ಟರ್ ಆದ ಈ ಶಾಲೆಯಲ್ಲಿ ಪ್ರಥಮವಾಗಿ 2012-13ರಲ್ಲಿ ಎಲ್ ಕೆಜಿ, ಯುಕೆಜಿ, 2014-15ನೇ ಸಾಲಿನಲ್ಲಿ 1ನೇ ತರಗತಿ, 2019-20ರಲ್ಲಿ 6ರಿಂದ 8ನೇ ತರಗತಿ, 2024-25ರಲ್ಲಿ 9ರಿಂದ 10ನೇ ತರಗತಿ ಹಂತ ಹಂತವಾಗಿ ಪ್ರಾರಂಭ ಮಾಡಲಾಗಿದೆ. ಕೇವಲ ಪುಸ್ತಕ ಆಧಾರಿತ ಆಧುನಿಕ ಪದ್ಧತಿಯ ಕಲಿಕೆ ಮಾತ್ರವಲ್ಲದೆ ಹಿಂದಿನ ಗುರುಕುಲ ಮತ್ತು ಪ್ರಾಯೋಗಿಕ ಕಲಿಕೆಗೆ ಮಹತ್ವ ನೀಡಿ ಮಕ್ಕಳಿಗೆ ಉತ್ತಮ ರೀತಿಯ ವಿದ್ಯಾಭ್ಯಾಸ ನೀಡುವ ಮಹಾದಾಸೆ ಇದೆ.”
| ವೀಣಾ ಮಂಜುನಾಥ್ ಮುಖ್ಯಸ್ಥರು
ಪ್ರವೇಶ ಪ್ರಾರಂಭ : ಸದರಿ ಶಾಲೆಯಲ್ಲಿ 2026-27ನೇ ಸಾಲಿನ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದೆ. ಮೇ 17ರಿಂದ ಆರಂಭವಾದ ಪ್ರವೇಶ ಪ್ರಕ್ರಿಯೆ ಜೂನ್ 2ಕ್ಕೆ ಕೊನೆಗೂಳ್ಳುತ್ತದೆ. ಸಂಪರ್ಕಿಸಿ : Mandara School Tyavanige 919148141665
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days agoಪಂಚಪಾಡಿ ಪದ್ಧತಿಯಲ್ಲಿ ವಿದ್ಯಾಭ್ಯಾಸ | ತ್ಯಾವಣಿಗೆಯ ಮಂದಾರ ಶಾಲೆಯಲ್ಲಿ ಪ್ರವೇಶ ಪ್ರಾರಂಭ
-
ದಿನದ ಸುದ್ದಿ7 days agoಲೋಕಾಯುಕ್ತ ಪೋಲಿಸ್ ಇನ್ಸ್ಪೆಕ್ಟರ್ ಪ್ರಭು ಬಿ. ಸೂರಿನ ಅವರಿಂದ ಕಾನೂನು ಅರಿವು
-
ದಿನದ ಸುದ್ದಿ6 days agoಈಜುಕೊಳದಲ್ಲಿ ಸಾವು ; ಪರಿಹಾರಕ್ಕೆ ಆದೇಶ
-
ದಿನದ ಸುದ್ದಿ3 days agoಬಳ್ಳಾರಿ ಗಾಂಧಿನಗರ ಠಾಣೆಯ ವ್ಯಾಪ್ತಿ ಜೂಜಾಟ | ಠಾಣೆಯ ಅಧಿಕಾರಿಗಳು ಮೌನ ; ಕ್ರಮ ಕೈಗೊಳ್ತಾರಾ ಎಸ್ ಪಿ..?
-
ಅಂಕಣ3 days agoಗೆಳೆತನದ ಮಹತ್ವ ಸಾರುವ ಕುಚುಕು ಇಂದಿನಿಂದ ಅಮೋಘ ಪ್ರಾರಂಭ ; ದಾವಣಗೆರೆ ಹುಡುಗ ಅರ್ಜುನ್ ಚೌಹಾಣ್ ಅವರ ಮೂರನೇ ಚಿತ್ರ ತೆರೆಗೆ
-
ದಿನದ ಸುದ್ದಿ7 days agoಸ್ವಾಮಿ ವಿವೇಕಾನಂದರ ಚಿಂತನೆಗಳಿಂದ ಯುವಜನತೆಗೆ ಪ್ರೇರಣೆ ; ವಿಶ್ವನಾಥ.ಡಿ. ಅರ್
-
ದಿನದ ಸುದ್ದಿ2 days agoಅಲ್ಪಸಂಖ್ಯಾತರ ಇಲಾಖೆ ನಿರ್ದೇಶಕ ಜಿಲಾನಿ ಎಚ್. ಮೊಕಾಶಿ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoದಾವಣಗೆರೆ | ಇದೇ 22 ರಂದು ಕರ್ನಾಟಕ ಎಜುಕೇಶನ್ ಎಕ್ಸ್ ಪೋ – 2026 ಕಾರ್ಯಕ್ರಮ



