ಅಂತರಂಗ
ಧರ್ಮ ಮರ್ಮ – 10 : ಅಲ್ಲಿರುವುದು ನಮ್ಮನೆ
- ಯೋಗೇಶ್ ಮಾಸ್ಟರ್
ಅಲ್ಲಿರುವುದು ನಮ್ಮನೆ, ಇಲ್ಲಿರುವುದು ಸುಮ್ಮನೆ ಅಂತ ಸುಂಸುಮ್ನೆ ಹೊಡೆಯೋ ಡೈಲಾಗ್ನೆಲ್ಲಾ ಯಾರೂ ವ್ಯಾವಹಾರಿಕವಾಗಿ ಸೀರಿಯಸ್ಸಾಗಿ ತಗೊಂಡಿರೋದನ್ನ ನಾವ್ಯಾರೂ ನೋಡೇ ಇಲ್ಲ. ಅಲ್ಲಿರೋದು ತಾನೇ ನಮ್ಮನೆ ಇಲ್ಲಿ ಸುಮ್ಮಸುಮ್ಮನೆ ಯಾಕೆ ಮನೆ ಕಟ್ಟಿಸೋದು? ಇಲ್ಲಿ ಇರೋದಕ್ಕೆ ಯಾಕೆ ಅಷ್ಟೋಂದು ಮುತುವರ್ಜಿ ವಹಿಸೋದು? ಅಂತೆಲ್ಲಾ ಅಂದ್ರೆ, ವೇದಾಂತ ಆಡೋಕೆ, ತಿನ್ನೋಕೆ ಬದನೆಕಾಯಿ ಅಂತ ಪೆಕ್ರುಪೆಕ್ರಾಗಿ ನಗ್ತಾರೆ.
ಅಲ್ಲಿರೋದು ನಮ್ಮನೆ, ಇಲ್ಲಿರೋದು ಸುಮ್ಮನೆ ಅಂತ ಶುದ್ಧ ಅಧಿಕ ಪ್ರಸಂಗದ ಮಾತು ನಿಜವಾಗಿಯೂ ಸಾವಿನ ದವಡೆಯಲ್ಲಿರುವವರ ಮನಸ್ಥಿತಿಗಳಿಗೆ ಅನ್ನಿಸೀತು. ಯಾವುದೇ ಕಾರಣಕ್ಕೆ ತಮ್ಮ ಸಾವಿನ ನಿಗಧಿತ ಸಮಯವನ್ನು ಅಥವಾ ಕಾಣುತ್ತಿರುವಂತೆಯೇ ಸಮೀಪಿಸುತ್ತಿರುವ ಸಾವನ್ನು ಎದುರಿಸುತ್ತಿರುವವರು ವೈರಾಗ್ಯ ಭಾವಕ್ಕೆ ಒಳಗಾಗುವುದನ್ನು ನಾನು ಕಂಡಿದ್ದೇನೆ.
ಕ್ಯಾನ್ಸರ್ ಬಾಧೆಯಲ್ಲಿ ಜೀವನ್ಮರಣದ ತಾಕಲಾಟವನ್ನು ಎದುರಿಸಿ ಆಸ್ಪತ್ರೆಯಿಂದ ಹೊರಗೆ ಬಂದಿದ್ದ ಆ ಸಮಯದಲ್ಲಿ ಡಾ. ಎಂ ವಸು ಮಳಲಿ ತಮ್ಮ ಬದುಕಿನ ಇರುವ ಒಲವಿನ ಕುರಿತೂ, ಸಾವಿನ ಬಗ್ಗೆ ಸೈದ್ಧಾಂತಿಕವಾಗಿ ಮಾತಾಡುವುದಿರಲಿ, ಆಲೋಚಿಸುವುದಕ್ಕೂ ನಿರಾಕರಿಸುತ್ತಿದ್ದರು.
ಒಂದು ಪಕ್ಷ ಅಂತಹದ್ದೊಂದು ಮಾತು ಬಂದಾಗ ನೇರವಾಗಿ ಹೇಳುತ್ತಿದ್ದರು, “ನಿಮಗೆ ಎಲ್ಲವೂ ಸರಿಯಿದ್ದು, ಸಾವಿನ ಬಗ್ಗೆ ಭಯವಿಲ್ಲದಿರುವುದಕ್ಕೆ ಬೇಕಾದ ಫಿಲಾಸಫಿಯನ್ನ ಮಾತಾಡ್ತೀರಿ. ಸಾವನ್ನೂ ರೋಮ್ಯಾಂಟಿಕ್ ಆಗಿ ಬಣ್ಣಿಸ್ತೀರಿ. ಆದರೆ ಅದನ್ನು ನನ್ನಂತವಳು ಓದಿದರೆ ಅದು ಹುಸಿ ಅಂತ ಚೆನ್ನಾಗೇ ಗೊತ್ತಾಗತ್ತೆ” ಎಂದು ಹೇಳಿದ್ದರು. ಈಗ ಅವರಿಲ್ಲ. ಆದರೆ ಅವರು ನಿಜಕ್ಕೂ ಮೃತ್ಯುವಿನ ದವಡೆಗೆ ಹೋಗಿ ನಂತರ ಮರಣಿಸುವ ನಡುವೆ ಒಂದಷ್ಟು ಕಾಲ ಚೆನ್ನಾಗಿಯೇ ತಮ್ಮ ಜೀವನದ ಘನತೆಯನ್ನು ಸ್ಪಷ್ಟವಾಗಿಯೇ ಎತ್ತಿ ಹಿಡಿಯುತ್ತಾ ಚಟುವಟಿಕೆಪೂರ್ಣವಾಗಿಯೇ ಬದುಕಿದ್ದರು.
ಆ ಸಮಯದಲ್ಲಿ ಅವರೊಡನೆ ಹತ್ತಿರದಿಂದಾದರೂ, ಹೊರಗಿನಿಂದ ಒಡನಾಡುತ್ತಿದ್ದಾಗ ಸಾವಿನ ಬಗ್ಗೆ ಅವರು ಕಾಣುವಂತಹ ಒಳದೃಷ್ಟಿಯನ್ನು ನನಗೆ ಕಾಣಲಾಗುತ್ತಿರಲಿಲ್ಲ. ಅವರೆಷ್ಟೇ ಆಳದ ದೃಷ್ಟಿಯನ್ನು ನಮಗೆ ನೀಡಿದರೂ, ನನ್ನಂತವನು ಹೆಚ್ಚೆಂದರೆ ಸಕಾರಾತ್ಮಕವಾಗಿ ಬದುಕನ್ನು ನೋಡುವುದು, ನಾವು ಹೆದರುವ ಸಾವನ್ನು ಜಾಣತನದಿಂದ ಪಕ್ಕಕ್ಕೆ ಸರಿಸಿ ಬರೀ ಜೀವಿಸುವ ಅಂಶಗಳನ್ನಷ್ಟೇ ಸರಸಮಯವಾಗಿ ಚಿತ್ರಿಸುವುದಾಗುತ್ತಿತ್ತು. ಅದೂ ಸಾವಿನ ಭಯವಿರುವವರಿಗೆ ನಾವೇನೋ ಹೆದರಿಕೆಯನ್ನು ಹೋಗಲಾಡಿಸುವಂತೆ ಅಥವಾ ಪಾಸಿಟಿವ್ ಥಿಂಕಿಂಗ್ ಹೇಳಿಕೊಡುವಂತೆ!
ನನಗೆ ಎಷ್ಟೋ ಬಾರಿ ಅನ್ನಿಸುತ್ತದೆ, ನಮ್ಮಲ್ಲಿ ಬಹುಪಾಲು ಮಂದಿ ಯಾರಾದರೂ ಸತ್ತಾಗ ಅಳುವುದು ದುಃಖದಿಂದಲ್ಲ ಭಯದಿಂದ ಎಂದು. ಯಾವುದೇ ಒಂದು ಅಪಘಾತವಾದಿರುವುದನ್ನು ನೋಡಿದರೆ, ಕೇಳಿದರೆ ಆ ಕ್ಷಣಕ್ಕೆ ಕೊಂಚ ಎಚ್ಚರಿಕೆಯಿಂದ ವರ್ತಿಸುವ ನಂತರ ಮತ್ತೆ ಮರೆತುಬಿಡುವ ಜಾಯಮಾನ ನಮ್ಮದು. ಅಂತೆಯೇ ಮರಣಿಸಿದವರು ನಮ್ಮೊಡನೆ ಒಡನಾಡಿದ್ದರೆ ಆ ನೆನಪುಗಳಿಂದ ಬಾಧಿತರಾಗುತ್ತೇವೆ.
ನಮ್ಮೊಡನೆ ಮಾತಾಡಿದವರು, ಸ್ಪಂದಿಸಿದವರು, ನಮ್ಮ ಜೊತೆ ತಮ್ಮ ಪ್ರೀತಿ, ಅಕ್ಕರೆ, ಕನಸುಗಳನ್ನು ಹಂಚಿಕೊಂಡವರು, ಬಾಳನ್ನು ಬೆಳಗಿಸಿದವರು, ಬದುಕನ್ನು ಬೆರಗಿನಿಂದ ಸವಿದವರು ಇಂದು ನಿಶ್ಚೇತನರಾಗಿ ಮಣ್ಣಿನ ಕುಪ್ಪೆಯ ಕೆಳಗೆ ಮಲಗುವರು ಅಥವಾ ಬೆಂಕಿಯಲ್ಲಿ ಸುಟ್ಟು ಬೂಧಿಯಾಗುವರು ಎಂಬ ಆಲೋಚನೆಯೇ ಒಂದು ಆಘಾತಕರ, ಅವರಿನ್ನೆಂದೂ ನಮ್ಮೊಡನೆ ಈ ಮೊದಲಿದ್ದ ಹಾಗೆ ಇರುವುದೇ ಇಲ್ಲ ಎಂದು ಬರಿದೇ ನೆನೆಸಿಕೊಳ್ಳಲೂ ಸಂಕಟಕರ.
ಏನೇ ಸಕಾರಾತ್ಮಕವಾಗಿ ಯೋಚಿಸಿದರೂ ಸಾವೆಂಬುವ ಸತ್ಯವನ್ನು ನಿರಾಕರಿಸಲು ಸಾಧ್ಯವಿಲ್ಲದೇ ಇರುವ ಕಾರಣದಿಂದಲೇ ಚೇತನ, ಆತ್ಮ, ಮುಕ್ತಿ ಇತ್ಯಾದಿಗಳನ್ನು ಚಿಂತಿಸಲಾಯ್ತು. ಬೇರೆ ದಾರಿಗಳಿಲ್ಲದೇ ಸತ್ತವರ ಆತ್ಮಕ್ಕೆ ಶಾಂತಿ ಕೋರುವ, ಅವರ ಚೈತನ್ಯವು ನಮ್ಮೊಡನೆ ಇರುವಂತಹ ಅನೇಕ ಅಸಂಗತ ವಿಚಾರಗಳಿಂದ ನಮ್ಮ ಮನಸ್ಸುಗಳಿಗೆ ಸಮಾಧಾನ ತಂದುಕೊಳ್ಳುವ ರೀತಿಗಳನ್ನು ಕಂಡುಕೊಳ್ಳಲಾಯಿತು.
ಯಾರದೇ ಶವಸಂಸ್ಕಾರಕ್ಕೆ ಹೋದಾಗ “ಬದುಕು ಇಷ್ಟೇನೇ” ಎಂದು ಅನ್ನಿಸುವಂತಹ ಸ್ಮಶಾನ ವೈರಾಗ್ಯವನ್ನೇ ಗಟ್ಟಿಯಾಗಿ ಹಿಡಿದು, ಭೂಮಿಯ ವಿಸ್ತಾರ ಜೀವನದಲ್ಲಿ ನಮ್ಮ ಆಗಮನ ಮತ್ತು ನಿರ್ಗಮನದ ನಡುವಿನ ಅವಧಿಯು ಬಹಳ ಅಲ್ಪವೇ ಆದ್ದರಿಂದ, ಅಷ್ಟೂ ಸಮಯ ಸಾರ್ಥಕವಾಗಿ, ದಯೆ, ಕರುಣೆ, ಪ್ರೀತಿ, ಭಕ್ತಿಗಳಿಂದ ಬಾಳಿ ಬದುಕಿ “ಹೊರಟೆ ಸೇರೆ ನಮ್ಮ ಊರ” ಎಂದು (ತುಕಾರಾಂ ಹೇಳುವಂತೆ) ಹೋಗುತ್ತೇವೆ ಎಂಬುದನ್ನು ಸದಾ ಸ್ಮರಣೆಯಲ್ಲಿಟ್ಟುಕೊಳ್ಳಲೇ ಸಂಸಾರ ಕ್ಷಣಭಂಗುರ, ನೀರಿನ ಮೇಲೆ ಗುಳ್ಳೆ ನಿಜವಲ್ಲಾ ಹರಿಯೇ ಎಂದೆಲ್ಲಾ ದಾಸರು ಹೇಳುವುದು. ಇಂತಹ ವೈರಾಗ್ಯವೇ ಜೈನ ತೀರ್ಥಂಕರರ ಕಾರಣಿಕ ಶಕ್ತಿ, ಸಾರ.
ಈ ಅರಿವಿನಿಂದಲೇ ಭಾರತದಲ್ಲಂತೂ ಸಂತವರ್ಗದ ಸೃಷ್ಟಿ ಮತ್ತು ಬೆಳವಣಿಗೆ ಬಹಳವಾಯಿತು. ಇದೇ ತಿಳುವಳಿಕೆಯೇ ಆಧ್ಯಾತ್ಮಿಕತೆಯ ನೈತಿಕತೆಯ ಭದ್ರಬುನಾದಿಯನ್ನು ಭಕ್ತಿ ಚಳವಳಿಗೆ ನೀಡಿದ್ದು. ಈ ವಿಚಾರವೇ ಜಾತಿ, ಮತ, ಧರ್ಮಗಳು ಮತ್ತು ವರ್ಗಗಳು ಹುಟ್ಟಿ ಹಾಕಿದ ಮೇಲರಿಮೆ ಮತ್ತು ಕೀಳರಿಮೆಗಳನ್ನು ನಿರಾಕರಿಸಲು, ಸಂಪೂರ್ಣ ಧಿಕ್ಕರಿಸಲು ಸಹಕರಿಸಿದ್ದು. ಅರಿವಿಲ್ಲದಂತೆ ಆದ ಹುಟ್ಟೂ, ಅರಿತಿಲ್ಲದ್ದ ಬರುವ ಸಾವಿನ ನಡುವಿನ ಜೀವಿತಾವಧಿಯನ್ನು ಸಾರ್ಥಕಗೊಳಿಸಿಕೊಳ್ಳಲು, ಅದನ್ನು ಸಂಪೂರ್ಣವಾಗಿ ಸತ್ವಭರಿತವನ್ನಾಗಿಸಲು ಭಕ್ತಿ ಮತ್ತು ವೈರಾಗ್ಯವನ್ನು ಹೇಳಿಕೊಟ್ಟಿದ್ದು ನಮ್ಮ ಭಕ್ತಿ ಪರಂಪರೆ.
ಈ ಭಕ್ತಿಪರಂಪರೆಯು ಚಳುವಳಿಯ ರೀತಿಯಲ್ಲಿ ಸಮಾಜದಲ್ಲಿ ನೆಲೆಸಿದ್ದ ಅಸಮಾನತೆಯ ವಿರುದ್ಧ ಬಹಳ ಗಟ್ಟಿತನದಿಂದಲೂ, ಸಾತ್ವಿಕ ರೀತಿಯಿಂದಲೂ ಹೋರಾಡಿತು. ಬಹುದೊಡ್ಡ ಜನ ಸಮುದಾಯಕ್ಕೆ ವೈರಾಗ್ಯದ ಮನವರಿಕೆ ಮಾಡಿತ್ತು. ಇಂದಲ್ಲ ನಾಳೆ ನಾನು ಸಾಯುತ್ತೇನೆ. ಸಾಯುವ ಮುನ್ನ ಯಾವುದೇ ನಕಾರಾತ್ಮಕವಾಗಿರುವುದನ್ನು ಸಾಧಿಸಿ, ಇತರರನ್ನು ನೋಯಿಸಿ ಹೋಗಕೂಡದೆಂಬ ದಿವ್ಯ ಜ್ಞಾನವು ಸದಾ ಜಾಗೃತವಾಗಿರಲು ಭಕ್ತಿ ಪರಂಪರೆಯವರು ಬಳಸಿದ ಅತಿ ದೊಡ್ಡ ಅಸ್ತ್ರವೆಂದರೆ ಭಗವಂತನಲ್ಲಿ ನಿಷ್ಕಾಮ ಪ್ರೀತಿ. ಯಾವ ಪ್ರತಿಫಲವನ್ನೂ ಬಯಸದ ಭಕ್ತಿ. ಬರಿದೇ ಮುಕ್ತಿ.
ಕೋಳೂರ ಕೊಡಗೂಸು
ಮುಕ್ತಿಯನ್ನು ಪಡೆಯಲು, ನಿಜವಾದ ವೈರಾಗ್ಯ ಭಾವವನ್ನು ಹೊಂದಲು ಸಾಮಾಜಿಕ ಮತ್ತು ವೈಯಕ್ತಿಕವಾದ ಸ್ಥಾನ ಮಾನಗಳ ಅರಿಮೆಗಳನ್ನು, ಅಹಂಕಾರಗಳಿಂದ ಹುಟ್ಟಿರುವ ಭ್ರಮೆಗಳಿಂದ ಹೊರಬರುವ ಅಗತ್ಯವನ್ನು ಭಕ್ತಿ ಚಳುವಳಿಯು ಹೇಳುತ್ತಾ ಹೇಳುತ್ತಾ ಬಹು ಮುಖ್ಯವಾದ ಮತ್ತೊಂದು ವಿಷಯವನ್ನೂ ಸ್ಪಷ್ಟಗೊಳಿಸಿದ್ದರು. ಆಚರಣೆ ಮತ್ತು ಧಾರ್ಮಿಕ ನಿರ್ಬಂಧ ವಿಚಾರಗಳಿಂದ ಹೊರಗೆ ಬರಬೇಕೆಂಬುದನ್ನು ಕಾಲದಿಂದ ಕಾಲಕ್ಕೆ ತಿಳಿಸುತ್ತಲೇ ಬಂದರು.
ಭಗವಂತನೆಂಬ ಪರಿಕಲ್ಪನೆಯನ್ನು ಕಲ್ಲಿನಲ್ಲಿ ಸ್ಥಿರಗೊಳಿಸಿ, ನಮ್ಮ ಭಕ್ತಿ, ಪ್ರೀತಿಗಳನ್ನು ಮುಗ್ಧತೆಯಿಲ್ಲದೇ ಬರಿಯ ಆಚರಣೆಗಳಿಗೆ ಒಳಪಡಿಸಿ, ನೇಮದಲ್ಲಿದ್ದರೆ ಅದೂ ಕೂಡ ವ್ಯರ್ಥವೆಂದು ಸಾಧಿಸಲು ಅನೇಕ ಐತಿಹ್ಯಗಳನ್ನು ಸಮಾಜದ ಕಣ್ಣ ಮುಂದೆ ತಂದರು. ಅದರಲ್ಲಿ ಕೋಳೂರು ಕೊಡಗೂಸು ಒಂದು ಸುಂದರ ಕಥೆ.
ಧಾರವಾಡ ಜಿಲ್ಲೆಯ ಹಾವೇರಿಯಿಂದ ಸುಮಾರು ಮೂರು ಕಿಲೋ ಮೀಟರ್ ದೂರದಲ್ಲಿರುವ ಗ್ರಾಮವೇ ಈ ಕೋಳೂರು ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ನೇರ ತಮಿಳುನಾಡಿಗೆ ಒಯ್ಯುತ್ತಾರೆ. ಇದು ತಮಿಳು ಶೈವ ಭಕ್ತಿ ಪರಂಪರೆಯ ಪ್ರಮುಖವಾದ ಕಥೆಗಳಲ್ಲೊಂದು.ಏನೇ ಆಗಲಿ, ನಮ್ಮ ಭಕ್ತಿಯ ಸಾಂಸ್ಕೃತಿಕ ಪರಂಪರೆಯನ್ನು ತಿಳಿದುಕೊಳ್ಳಲು ಈ ಕಥೆ ಬಹಳ ಮುಖ್ಯ.
ಕೋಳೂರಿನ ಶಿವ ದೇವಾಲಯದಲ್ಲಿ ಶಿವದೇವನೆಂಬ ಬ್ರಾಹ್ಮಣ ಅರ್ಚಕ. ಅವನಿಗೆ ಒಬ್ಬಳೇ ಮಗಳು ಈ ನಮ್ಮ ಕೊಡಗೂಸು. ಅವಳೋ ಮಗುವಾಗಿದ್ದಾಗಲೇ ತಾಯನ್ನು ಕಳೆದುಕೊಂಡವಳು ಮತ್ತು ತಂದೆಯ ಸುಪರ್ದಿನಲ್ಲಿ ಬೆಳೆಯುತ್ತಾ ಬರುವಳು. ಶಿವದೇವನು ಪ್ರತಿದಿನವೂ ಶಿವನಿಗೆ ಶಾಲ್ಯಾನ್ನದಂತಹ ಭಕ್ಷ್ಯವನ್ನು ಸಿದ್ಧಪಡಿಸಿ ನೈವೇದ್ಯವನ್ನು ನೀಡುತ್ತಿದ್ದನು. (ಕೆಲವೊಂದು ಕೃತಿಗಳಲ್ಲಿ ಕಪಿಲೆಯೆಂಬ ಹಸುವಿನ ಹಾಲು ಎಂದೂ ಇದೆ.) ಒಮ್ಮೆ ಆರೋಗ್ಯ ತಪ್ಪಿದ ತನ್ನ ಸಂಬಂಧಿಕರನ್ನು ನೋಡಿ ಬರಲು ಶಿವದೇವನು ಹೋಗಬೇಕಾಗಿತ್ತು.
ತನ್ನ ಶಿವಪೂಜೆ ಮತ್ತು ನೈವೇದ್ಯದ ನೇಮವು ತಪ್ಪ ಬಾರದೆಂದು ಮಗಳಿಗೆ ಅದನ್ನು ವಹಿಸಿ ತಂದೆ ಹೋಗುವನು. ಈ ಕೂಸು ಶಿವನಿಗೆ ಆಹಾರವನ್ನು ಅರ್ಪಿಸುವುದೆಂದರೆ ಆತನಿಗೆ ತಿನ್ನಲು ಕೊಡುವುದೆಂದೇ ಭಾವಿಸುತ್ತದೆ. ಅಂತೆಯೇ ಕೊಡಲು ಹೋದಾಗ ಲಿಂಗವು ಈಗ ಮೌನವಾಗಿಯೇ ಇರುವಂತೆ ಆಗಲೂ ನಿಶ್ಚೇತನವಾಗಿಯೇ ಇರುತ್ತದೆ. ಆದರೆ ಕೊಡಗೂಸು ತನ್ನ ತಂದೆ ಕೊಡುವಾಗ ಸೇವಿಸುವ ಶಿವ ತಾನು ಕೊಡುವಾಗ ಏಕೆ ಸ್ವೀಕರಿಸುತ್ತಿಲ್ಲ? ಎಂದು ಪರಿಪರಿಯಾಗಿ ಶಿವನನ್ನು ಕರೆಯುತ್ತಾಳೆ. ಆದರೆ ಅವನು ಬರುವುದಿಲ್ಲ. ಬರ್ತೀಯೋ ಇಲ್ಲವೋ, ಎಂದು ಕಂಬಕ್ಕೋ, ಪಾಣೀಪೀಠಕ್ಕೋ ತಲೆ ಚಚ್ಚಿಕೊಂಡು ರಕ್ತಧಾರೆ ಹರಿಸಲು ಮುಂದಾದಾಗ ಶಿವನು ಪ್ರತ್ಯಕ್ಷನಾಗಿ ಅವಳಿಂದ ಆಹಾರವನ್ನು ಸ್ವೀಕರಿಸುತ್ತಾನೆ.
ಶಿವದೇವನು ಮರಳಿ ಬರುವವರೆಗೂ ಈ ಕೂಸು ಹೀಗೇ ಜೀವಂತವಾಗಿ ಎದುರಿಗೆ ಬಂದ ಶಿವನಿಗೆ ಆಹಾರ ಅರ್ಪಿಸುತ್ತಿರುತ್ತಾಳೆ. ತಂದೆ ಬರುತ್ತಾನೆ. ಅದೇ ತಾನೇ ಕೊಡಗೂಸು ದೇವಾಲಯದಿಂದ ಬರುತ್ತಾಳೆ. ತಂದೆ ನೈವೇದ್ಯ ಮಾಡಿರುವ ಪ್ರಸಾದ ಕೇಳುತ್ತಾನೆ. ಆದರೆ ಅದು ಇರುವುದಿಲ್ಲ. ಶಿವ ತಿಂದ ಎನ್ನುವ ಮಾತನ್ನು ಅರ್ಚಕ ತಂದೆ ಒಪ್ಪುವುದಿಲ್ಲ. ತಾನೇ ತಿಂದು ಶಿವನ ಮೇಲೆ ಹೇಳುವ ಮಗಳನ್ನು ಗದರಿಸುತ್ತಾನೆ. ಅದನ್ನು ನಿರೂಪಿಸಲು ಕೂಸು ಮತ್ತೆ ಶಿವನ ಮುಂದೆ ಹೋಗಿ ತಿನ್ನಲು ಕರೆಯುತ್ತಾಳೆ. ಬರುವುದಿಲ್ಲ. ಅವಳು ಅದೇ ರೀತಿ ತಲೆ ಚಚ್ಚಿಕೊಳ್ಳುವ ಕೆಲಸಕ್ಕೆ ಮುಂದಾದಾಗ ಶಿವ ಅಲ್ಲಿ ಪ್ರತ್ಯಕ್ಷನಾಗಿ ಅವಳನ್ನು ತನ್ನ ಜೊತೆ ಕರೆದುಕೊಂಡು ಹೋಗುತ್ತಾನೆ.
ಲಿಂಗದೊಳಕ್ಕೆ ಹೋಗುವ ಮಗುವನ್ನು ಹಿಡಿಯಲು ಹೋಗುವ ತಂದೆಗೆ ಅವಳ ಕೂದಲಷ್ಟೇ ಕೈಗೆ ಸಿಗುತ್ತದೆ. ಆ ಕೂದಲು ಲಿಂಗದಿಂದ ಈಗಲೂ ಹೊರಗಿದೆ ಎಂದು ಪ್ರತೀತಿ ಇದೆ. ಇದನ್ನು ತನ್ನ ರಗಳೆಯಲ್ಲಿ ಹರಿಹರ ಕವಿಯು ಬಹು ಸುಂದರವಾಗಿ ವರ್ಣಿಸಿದ್ದಾನೆ.
ಸಾಂಕೇತಿಕವಾಗಿ ವಿಜೃಂಭಿಸುವ ಕಥೆಯ ಒಗಟನ್ನು ಬಿಡಿಸಬೇಕು. ನೈಜ ಘಟನೆಯಂತೆ ವಾಸ್ತವವಾಗಿ ನೋಡಿ ವಿಮರ್ಶೆ ಮಾಡಬಾರದು. ಹಾಗೆ ಮಾಡಿಬಿಟ್ಟರೆ, ಇಡೀ ಕಥೆಯನ್ನೇ ಸುಳ್ಳು ಎಂದು ಹೇಳುವಂತಾಗಿಬಿಡುತ್ತದೆ. ದೇವಾಲಯವೆಂದರೆ ಬರೀ ಶಿವದೇವ ಮತ್ತು ಅವನ ಕೂಸಿಗೆ ಮಾತ್ರವಿತ್ತೇ? ತಾಯಿ ಇಲ್ಲದ ಈ ಮಗುವು ತಂದೆಗೆ ಪೂಜೆಗೆ ಪ್ರತಿನಿತ್ಯ ನೆರವಾಗುತ್ತಿದ್ದಾಗ ನೈವೇದ್ಯ ಮಾಡುವುದನ್ನು ನೋಡುತ್ತಿರಲಿಲ್ಲವೇ? ಅವನೋ ಮಗುವನ್ನು ಎಲ್ಲೋ ಹೊರಗೆ ಕಳುಹಿಸಿ ರಹಸ್ಯವಾಗಿ ಎಡೆ ಇಡುತ್ತಿದ್ದನೇ? ಶಿವ ಎಂಬ ಲಿಂಗವನ್ನು ಆರಾಧಿಸುವುದನ್ನು ನೋಡುತ್ತಿದ್ದಳೇ ಹೊರತು, ಅವನು ಎದ್ದು ಬಂದು ತಿಂದದ್ದೇನೂ ಅವಳೂ ನೋಡಿರಲಿಲ್ಲವಲ್ಲ! ಹೋಕ್ಕೊಳ್ಳಿ, ಶಿವ ಬಂದು ತಿನ್ನಲ್ಲಿಲ್ಲಾಂತ ಅಷ್ಟು ಪುಟ್ಟ ಬಾಲಕಿ ತಲೆ ಚಚ್ಚಿಕೊಂಡು ರಕ್ತಸ್ರಾವ ಮಾಡಿಕೊಂಡು ಸತ್ತು ಹೋಗುತ್ತೇನೆಂದು ಹೆದರಿಸಿ ತನ್ನ ಕೆಲಸ ಸಾಧಿಸಿಕೊಳ್ಳುವಷ್ಟು ಎಮೋಷನಲ್ ಬ್ಲ್ಯಾಕ್ ಮೇಲ್ ಮಾಡಲು ಎಲ್ಲಿ ಕಲಿತಳು? ಹೇಗೆ ಮಾಡುವಳು? ತಂದೆ ಮಗಳ ಸತ್ಯತೆಯನ್ನು ನಿರಾಕರಿಸಿ ಅನುಮಾನಿಸಿದಾಗ ಬರುವ ಶಿವ ‘ಅಲ್ಲಾ ಕಣಯ್ಯಾ ಅರ್ಚಕಾ, ನೀನು ಬರೀ ನೇಮ ಮಾಡಿದೆ.
ನಿನ್ನ ಮಗಳು ತನ್ನ ಮುಗ್ಧತೆಯಿಂದ ನನಗೆ ಊಟವನ್ನೇ ಮಾಡಿಸಿಬಿಟ್ಟಳು ಕಣಯ್ಯಾ. ನೇಮ ಗೀಮಾ ಅಂತಿರೋ ಸಂಪ್ರದಾಯ ಅಲ್ಲ ಮುಖ್ಯ. ಮಗುವಿಗಿರುವಂತಹ ಭಕ್ತಿ ಪ್ರೀತಿ ಮುಖ್ಯ ಕಣಯ್ಯಾ’ ಅಂತ ಬುದ್ಧಿ ಹೇಳೋದು ಬಿಟ್ಟು, ತಟಕ್ಕಂತ ಬಂದು ಪಟಕ್ಕಂತ ಹಾರಿಸಿಕೊಂಡು ಹೋಗಿಬಿಡುವುದೇ! ಪಾಪದ ಶಿವದೇವನಿಗೆ ಪುತ್ರಿಶೋಕ ನೀಡಿ, ಬರೀ ಜುಟ್ಟುಳಿಸಿ ಹೋಗುವುದೇ?
ವಿಷಯ ಅದಲ್ಲ. ಶಿವದೇವ ಬ್ರಾಹ್ಮಣ. ಬ್ರಾಹ್ಮಣರಲ್ಲಿ ಯಜ್ಞೋಪವೀತ ಧರಿಸುವ ಮತ್ತು ಉಪನಯನ ಮಾಡಿಸಿಕೊಂಡು ದೇವತಾಕಾರ್ಯವನ್ನು ಮಾಡುವ ಅಧಿಕಾರ ಪುರುಷ ಹೊಂದಿರುತ್ತಾನೆ. ತಮಾಷೆಯೆಂದರೆ ಶೂದ್ರಳೆಂದು ಕರೆಯುವ ಹೆಣ್ಣು ತನಗೆ ಹೆಂಡತಿಯಾದ ಮೇಲೆ ಅವಳ ಪರವಾಗಿ ತಾನೇ ಜನಿವಾರ ಹಾಕಿಕೊಂಡು ದೇವತಾಕಾರ್ಯ ಮಾಡುತ್ತಾನೆ.
ಇಂತಹದ್ದೊಂದು ಢಾಂಭಿಕತನವನ್ನು ಧಿಕ್ಕರಿಸುವ ಕಥೆ ಇದು. ಒಬ್ಬ ಅರ್ಚಕನು ತನ್ನ ನೇಮಾದಿಗಳನ್ನು ಯಾಂತ್ರಿಕವಾಗಿ ಮಾಡುತ್ತಾನೆಯೇ ಹೊರತು, ಅವನು ಹೊರತು ಪಡಿಸಿರುವಂತಹ ಹೆಣ್ಣು ತನ್ನ ನಿಜವಾದ ಭಕ್ತಿಯಿಂದ ಯಾವ ದೈವಿಕತೆಯ ಸೂಕ್ಷ್ಮವನ್ನು ಹೊಂದುವಳೋ ಅದನ್ನು ತನ್ನ ಸಹಜತೆ ಮತ್ತು ಮುಗ್ಧತೆಯಿಂದ ಪಡೆಯುವಳು ಎಂದು ಈ ಕಥೆ ಹೇಳುವುದು.
ಹಾಗೆಯೇ ದೇವಸ್ಥಾನದ ಅರ್ಚಕನಾಗಿ ಬರಿಯ ಸಂಪ್ರದಾಯದ ಚೌಕಟ್ಟಲ್ಲಿ ಬಂಧಿತರಾಗುವ ಮಂದಿಗೆ ದೈವತ್ವದ ಅರಿವಾಗದೆಂದೂ, ಸಹಜವಾದ ಮುಗ್ಧತೆ ಮತ್ತು ಪ್ರೀತಿಯಿಂದ ಅದರ ಅನುಭೂತಿಯನ್ನು ಪಡೆಯಬೇಕೆಂಬ ಪ್ರತಿಮಾ ರೂಪದ ಕಥೆಯಿದು.
ಯೇಸುವು ಹೇಳುವುದನ್ನು ನೆನಪಿಸಿಕೊಳ್ಳೋಣ, “ನೀವು ಮಕ್ಕಳಂತಾಗದಿದ್ದರೆ ನಿಮಗೆ ಸ್ವರ್ಗ ಸಾಮ್ರಾಜ್ಯವು ಇಲ್ಲ.” ಅಂತೆಯೇ ಈ ಕಥೆ ಕೊಡುವ ಮತ್ತೊಂದು ಮಹತ್ತರ ಸೂಚನೆ ಎಂದರೆ, ನೇಮಾದಿಗಳ ಸಾಂಪ್ರದಾಯಿಕ ಚೌಕಟ್ಟನ್ನು ಮುರಿದು ಹೋಗುವವರನ್ನು ಸಂಪ್ರದಾಯವಾದಿಗಳು ಉಳಿಗೊಳಿಸುವುದಿಲ್ಲ ಎಂದೂ ಕೂಡ. ನೋಡಿ, ಕೊಡಗೂಸು ಶಿವನ ಸೇರಿಕೊಂಡುಬಿಟ್ಟಳು.
ಅವಳ ತಂದೆ ಅರ್ಚಕ ವೃತ್ತಿ ಮಾಡಿಕೊಂಡು, ಅದೇ ನೈವೇದ್ಯವಿಟ್ಟುಕೊಂಡು ಉಳಿದುಕೊಂಡ. ಸಂಪ್ರದಾಯದ ನೇಮವನ್ನು ಮುರಿದವರು ಒಂದು ಐತಿಹ್ಯವಾಗಿ ಉಳಿಯುತ್ತಾರೆ. ರೂಪಕವಾಗಿ ವಿಜೃಂಭಿಸುತ್ತಾರೆ. ಆದರೆ ನೇಮ ಮಾಡುವವರು ಉಳಿದು ಬಾಳುತ್ತಾರೆ. ಸಂಪ್ರದಾಯವು ಮುಂದುವರಿಯುತ್ತದೆ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoಅನುದಾನ ದುರುಪಯೋಗ | ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಅಶೋಕ್ ಡಿ.ಆರ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಗೆ ದೂರು
-
ದಿನದ ಸುದ್ದಿ4 days agoಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
-
ದಿನದ ಸುದ್ದಿ2 days agoಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್


