Connect with us

ದಿನದ ಸುದ್ದಿ

ಬುದ್ದನ ಬಗ್ಗೆ ಸತ್ಯಗೊತ್ತಿದ್ದರೂ ಎಲ್ಲಿಯವರೆಗೂ ಸುಳ್ಳನ್ನ ಓದುವಿರಿ..?

Published

on

ಬುದ್ದ ಎಂದಾಕ್ಷಣ ನೆನಪಿಗೆ ಬರುವುದು ನಾಲ್ಕು ಸನ್ನಿವೇಶಗಳನ್ನು ಮುದುಕ, ರೋಗಿ, ಸನ್ಯಾಸಿ ಮತ್ತು ಶವಗಳನ್ನು ನೋಡಿ ರಾಜ್ಯ ತ್ಯಜಿಸಿದ, ಹೆಂಡತಿ ಮತ್ತು ಮಗು ರಾಹುಲನನ್ನು ರಾತ್ರಿಯೇ ಬಿಟ್ಟು ಹೋಗಿ ಸನ್ಯಾಸಿಯಾದ ಎಂದು ಇಲ್ಲಿಯವರೆಗೂ ಓದಿದ್ದೇವೆ ಅಥವಾ ಓದುತ್ತಿದ್ದೇವೆ ಇದು ಅಶ್ವಘೋಷನ ‘ಬುದ್ದ ಚರಿತೆ” ಕೃತಿ ಆಧರಿತವಾಗಿದೆ.

ಆದರೆ ಇತಿಹಾಸಕಾರನು ಪೂರ್ವಾಗ್ರಹಕ್ಕೆ ಒಳಗಾಗದೇ, ವಸ್ತುನಿಷ್ಠ ದೃಷ್ಟಿಕೋನದಲ್ಲಿ ನೋಡುವ ಮೂಲಕ ಸತ್ಯಾಸತ್ಯತೆಗಳನ್ನು ಪರಮರ್ಶನೆ ಮಾಡುತ್ತಾ ಸಂಶೋಧನಾತ್ಮಕ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಾಗ ಮಾತ್ರ ನೈಜ ಇತಿಹಾಸದ ಮೇಲೆ ಸತ್ಯದ ಬೆಳಕನ್ನು ಚೆಲ್ಲುವುದು.

ಈ ನಿಟ್ಟಿನಲ್ಲಿ ಭಾರತದ ಶ್ರೇಷ್ಠ ಇತಿಹಾಸಕಾರರಲ್ಲಿ ಒಬ್ಬರಾದ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಸತತ ಏಳೆಂಟು ವರ್ಷಗಳ ಗಂಭೀರ ಅಧ್ಯಯನ, ಸಂಶೋಧನೆ ಮೂಲಕ ಪಾಲಿ, ಪ್ರಾಕೃತ ಮತ್ತು ಸಂಸ್ಕøತ ಗ್ರಂಥಗಳನ್ನು ಜಾಲಾಡಿ ಬರೆದ ಕೃತಿಯಾದ “ಬುದ್ಧ ಅಂಡ್ ಹಿಸ್ ಧಮ್ಮ” ಎಂಬ ಕೃತಿಯು ಬುದ್ಧನು ಈ ಜಗತ್ತು ಕಂಡ ಅತಿ ಶ್ರೇಷ್ಠ ದಾರ್ಶನಿಕ ಎಂದು ವಿವರಿಸುವ ಮೂಲಕ ತಮ್ಮ ಸಂಶೋಧನಾತ್ಮಕ ಕೃತಿಯಲ್ಲಿ ಸ್ಪಷ್ಟವಾಗಿ ನಿರೂಪಿಸಿದ್ದಾರೆ.

ಸಿದ್ಧಾರ್ಥ ಸನ್ಯಾಸತ್ವ ಸ್ವೀಕರಿಸಿದ್ದು 29ನೇ ವಯಸ್ಸಿನಲ್ಲಿ ಅಲ್ಲಿಯವರೆಗೂ ಮುದುಕ, ರೋಗಿ, ಸನ್ಯಾಸಿ ಮತ್ತು ಶವವನ್ನು ನೋಡಿರಲಿಲ್ಲವೇ? ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ ನಾವುಗಳು. ಸಿದ್ಧಾರ್ಥ ತನ್ನ ಮಡದಿ ಮತ್ತು ಮಕ್ಕಳನ್ನ ನಡುರಾತ್ರಿಯಲ್ಲಿ ಬಿಟ್ಟುಹೋಗಲಿಲ್ಲ. ಇಡೀ ಜಗತ್ತು ಗೌತಮನನ್ನು ಗೌರವಯುತವಾಗಿ ನೋಡುವಂತೆ ಇತಿಹಾಸವಿದೆ.

ಕ್ರಿ.ಪೂ. ಆರನೆಯ ಶತಮಾನದ ಪೂರ್ವಕ್ಕೂ ಭಾರತ ದೇಶವು ಅನೇಕ ರಾಜ್ಯಗಳಾಗಿ ವಿಂಗಡಿಸಿ ಹೋಗಿತ್ತು. ಅವುಗಳಲ್ಲಿ ಸಣ್ಣ ಮತ್ತು ದೊಡ್ಡ ರಾಜ್ಯಗಳು ಸಹ ಅಸ್ತಿತ್ವದಲ್ಲಿದ್ದವು. ಕೆಲವು ರಾಜ್ಯಗಳು ಪ್ರಭುತ್ವಕ್ಕೆ ಒಳಪಟ್ಟಿದ್ದರೆ, ಇನ್ನು ಕೆಲವು ಒಳಪಟ್ಟಿರಲಿಲ್ಲ. ಒಳಪಟ್ಟವುಗಳೆಂದರೆ-(16) ಅಂಗ, ಮಗಧ ಕಾಶಿ, ಕೋಸಲ, ವ್ರಜ, ಮಲ್ಲ, ಛೇದಿ, ವತ್ಸ, ಕುರು, ಪಾಂಚಾಲ, ಮತ್ಸ್ಯ, ಶೌರಸೇನ, ಅಸ್ಸಾಕ, ಅವಂತಿ, ಗಾಂಧಾರ, ಕಾಂಭೋಜ.

ರಾಜಪ್ರಭುತ್ವ ವ್ಯವಸ್ಥೆಗೆ ಹೊರತಾಗಿ ಕಪಿಲವಸ್ತುವಿನ ಶಾಕ್ಯರು, ಪವದ ಮಲ್ಲರು, ಕುಶಿನಾರರು, ವೈಶಾಲಿಯ ಲಿಚ್ಛವಿಗಳು, ಮಿಥಿಲೆಯ ವಿದೇಹಿಗರು, ರಾಮಗಾಮದ ಕೊಲಿಯರು, ಅಲ್ಲಕಪದ ಬುಲಿಗಳು, ರೇಸಪುಟ್ಟದ ಕಳಿಂಗರು, ಪಿಪ್ಪಲವದ ಮೌರ್ಯರು ಹಾಗೂ ಭಗ್ಗರು ಮುಖ್ಯರಾಗಿದ್ದರು.

ಶಾಕ್ಯರಲ್ಲಿ ಆಡಳಿತ ನಡೆಸುತ್ತಿದ್ದ ಅನೇಕ ಕುಟುಂಬಗಳು ಸರದಿಯ ಮೇಲೆ ರಾಜರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಗೌತಮಬುದ್ಧನು ಸಿದ್ಧಾರ್ಥನಾಗಿ ಜನಿಸಿದ ಪೂರ್ವದಲ್ಲಿ ಅವನ ತಂದೆ ಶಾಕ್ಯರ ಗಣರಾಜ್ಯವಾದ ಕಪಿಲ ವಸ್ತುವಿನ ರಾಜನಾಗಿ ಕಾರ್ಯನಿರ್ವಸುತ್ತಿದ್ದನು. ಶುದ್ಧೋಧನನಿಗೆ ಮಹಾಮಯೆ ಎಂಬುವರೊಡನೆ ವಿವಾಹವಾಯಿತು.

ಮಹಾಮಯೆಯು ಅಂಜನ ಮತ್ತು ಸುಲಕ್ಷಣಾ ಎಂಬ ದಂಪತಿಗಳ ಪುತ್ರಿಯಾಗಿದ್ದಳು. ಶುದ್ಧೋಧನನು ಮಹಾಪರಾಕ್ರಮಿಯಾಗಿದ್ದನ್ನು ಹಾಗೂ ಬಹುದೊಡ್ಡ ಸೈನ್ಯದ ಒಡೆಯನಾಗಿದ್ದನು. ತನ್ನ ಶೌರ್ಯ ಸಾಹಸಗಳಿಂದಾಗಿ ಎರಡನೆಯ ವಿವಾಹದ ಅನುಮತಿಯು ದೊರೆಯಿತು. ಹೀಗಾಗಿ ತನ್ನ ಪತ್ನಿ ಮಹಾಮಾಯೆಯ ಹಿರಿಯ ಸಹೋದರಿಯಾದ ಮಹಾಪ್ರಜಾಪತಿ ಎಂಬಾಕೆಯನ್ನು ವಿವಾಹವಾದನು.

ಕ್ರಿ.ಪೂ. 563 ನೇ ವರ್ಷದ ವೈಶಾಖ ಪೂರ್ಣಿಮೆಯ ದಿನದಂದು ಮಹಾಮಾಯೆಗೆ ಗಂಡುಮಗುವಿಗೆ ಜನ್ಮ ನೀಡಿದ್ದಳು. ಆ ಸಂದರ್ಭದಲ್ಲಿ ‘ಅಸಿತ’ ಎಂಬ ಮಹನ್ ಋಷಿಯು ತನ್ನ ಸೋದರಳಿಯನಾದ ನರದತ್ತನೊಂದಿಗೆ ಹಿಮಾಲಯದಿಂದ ಹೊರಟು ಕಪಿಲವಸ್ತು ಅರಮನೆಗೆ ಬಂದು ಮಗುವನ್ನು ಕೂಲಂಕುಷವಾಗಿ ಪರೀಕ್ಷಿಸಿ, ಮಹಾಪುರುಷನಿಗಿರಬೇಕಾದ ಮೂವತ್ತೆರಡು ಲಕ್ಷಣಗಳು ಮತ್ತು ಎಂಬತ್ತು ಉಪಲಕ್ಷಣಗಳನ್ನು ಮಗು ಪಡೆದಿರುವುದು.

ಹಾಗೂ ಶುಕ್ರಬ್ರಹ್ಮರ ಶರೀರಕ್ಕಿಂತಲ್ಲೂ ಶ್ರೇಷ್ಠವಿದ್ದು, ಅವರಿಗಿಂತಲೂ ಕೋಟ್ಯಂತರ ಹೆಚ್ಚು ದಿವ್ಯಪ್ರಭೆಯನ್ನು ಹೊಂದಿದೆ ಎಂದು ತಮ್ಮ ದಿವ್ಯದೃಷ್ಟಿಯಿಂದ ಕಂಡುಕೊಂಡರು. “ಇದು ಈ ಜಗತ್ತಿನಲ್ಲಿ ಅಪರೂಪಕ್ಕೆ ಜನಿಸಿದ ಒಂದು ಅದ್ಭುತ ಶಿಶು” ಎಂದು ಹೇಳಿದರು. ಮೇಲೆದ್ದು ಮಗು ಸುತ್ತ ಪ್ರದರ್ಶನ ಮಾಡಿ, ಅದರ ಪಾದಕ್ಕೆ ನಮಿಸಿದನು. ಶುದ್ಧೋಧನನ ಕೈಯಿಂದ ಮಗುವನ್ನು ಎತ್ತಿಕೊಂಡು ಧ್ಯಾನಾಸಕ್ತನಾಗಿ “ಇವನು ಭವಿಷ್ಯದಲ್ಲಿ ಗೃಹಸ್ಥನಾದರೆ ಈ ಲೋಕದ ಚಕ್ರಾಧಿಪತಿ ಆಗುತ್ತಾನೆ.

ಅಕಸ್ಮಾತ್ ಗೃಹಸ್ಥ ಜೀವನವನ್ನು ತ್ಯಾಗ ಮಾಡಿ ಸನ್ಯಾಸಿಯಾದರೆ ಬೋಧಿಸತ್ವನಾದ ಪೂರ್ಣ ಬುದ್ಧನಾಗುತ್ತಾನೆ” ಎಂಬ ಮನದಟ್ಟಾಯಿತು. ಆದರೆ ಮುಂದೆ ಗೃಹಸ್ಥನಾಗಿ ಜೀವಿಸಲಾರ ಎಂಬುದು ಮನಗಂಡರು. ಸ್ವಲ್ಪ ಸಮಯದ ನಂತರ ಅಸಿತ ಮುನಿ ಕಣೀರಿಟ್ಟನ್ನು ಇದನ್ನು ನೋಡಿ ಶುದ್ಧೋಧನ ಗಾಬತಿಯಾದನು.
ಆಗ ಮುನಿಗಳು “ಓ ರಾಜನೇ ಈ ಮಗುವಿಗೆ ಭವಿಷ್ಯದಲ್ಲಿ ಭಯವಿಲ್ಲ. ಆದರೆ ನಾನು ನನಗಾಗಿ ಕಣ್ಣೀರಿಡುತ್ತಿದ್ದೇನೆ” ಎಂದು ಹೇಳಿದರು. ಏಕೆ ಸ್ವಾಮಿ ಎಂದು ಶುದ್ಧೋಧನ ಪ್ರಶ್ನಿಸಿದಾಗ, ಅಸಿತ ಮುನಿಗಳು “ನಾನು ವೃದ್ಧನಾಗಿದ್ದೇನೆ.

ಈ ಬಾಲಕಮುಂದೆ ಬುದ್ಧನಾಗಿ ಈ ಜಗತ್ತಿನ ಪರಿಪೂರ್ಣ ಜ್ಞಾನಿಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಮುಂದೆ ಲೋಕಜ್ಞಾನಿಯಾಗುವ ಇವನು ಜಗತ್ತಿನಲ್ಲಿ ಈ ಹಿಂದೆ ಯಾರೊಬ್ಬ ಮಾನವರು ಮಾಡಿರದ ರೀತಿಯಲ್ಲಿ ತಾನು ಮನಗಂಡ ಸತ್ಯ ಮತ್ತು ಸಿದ್ಧಾಂತಗಳನ್ನು ಬೋಧನೆಯ ಮಾರ್ಗದ ಮೂಲಕ ಮಾಡುತ್ತಾ ಬದುಕಿನ ಪೂರ್ಣಚಕ್ರವನ್ನು ತಿರುಗಿಸುತ್ತಾನೆ. ಅವನ ಜ್ಞಾನದಿಂದಲೇ ಅಸಂಖ್ಯಾತ ಜನರನ್ನು ದುಃಖಸಾಗರದಿಂದ ಪಾರುಮಾಡಿ ಅವರನ್ನು ಸುಖಿಗಳನ್ನಾಗಿ ಮಾಡುತ್ತಾನೆ. ನಾನು ಈ ಬುದ್ಧನನ್ನು ನೋಡಲಾರೆನು.

ಆದ್ದರಿಂದ ಅವನನ್ನು ಪೂಜಿಸಲಾರೆನಲ್ಲಾ ಎಂಬ ದುಃಖದಿಂದ ನಿಟ್ಟುಸಿರುಬಿಟ್ಟು ಕಣ್ಣೀರು ಹಾಕುತ್ತಿದ್ದೇನೆ” ಎಂದು ಆಸಿತ ಮುನಿಗಳು ನುಡಿದರು. ನಂತರ ಶುದ್ಧೋಧನನ ಆತಿಥ್ಯ ಸ್ವೀಕತಿಸಿ ನಿರ್ಗಮಿಸಿದರು. ಮಗು ಜನಿಸಿದ ಐದನೆಯ ದಿನ ‘ಸಿದ್ಧಾರ್ಥ’ ಎಂಬ ಹೆಸರಿಡಲಾಯಿತು. ಶುದ್ಧೋಧನನ ಗೋತ್ರದ ಹೆಸರು ಗೌತಮ ಎಂಬುದಾಗಿತ್ತು. ಆದ್ದರಿಂದ ‘ಸಿದ್ಧಾರ್ಥ ಗೌತಮ’ ಎಂದು ಕರೆಯಲಾಯಿತು.

ತಾಯಿ ಮಹಾಮಾಯೆಯು ಏಳನೆ ದಿನದಲ್ಲಿ ಅನಾರೋಗ್ಯ ಕಾರಣ ಸಿದ್ಧಾರ್ಥನನ್ನು ಪ್ರತಾಪತಿಗೆ ವಶಕ್ಕೊಪ್ಪಿಸಿ ಚಿರನಿದ್ರೆಗೆ ಜಾರಿದಳು. ಸಿದ್ಧಾರ್ಥನಿಗೆ ‘ನಂದ’ ಎಂಬ ಕಿರಿಯ ಸಹೋದರನೂ ಇದ್ದನು (ಶುದ್ಧೋಧನ ಮತ್ತು ಪ್ರಜಾಪತಿಯ ಪುತ್ರ). ಚಿಕ್ಕಪ್ಪ ಶುಕ್ಲೋಧರನ ಮಕ್ಕಳಾದ ಮಹಾನಾಮ (ಸಿದ್ಧಾರ್ಥನಿಗಿಂತ ಹಿರಿಯ) ಮತ್ತು ಅನುರುದ್ಧ. ಮತ್ತೊಬ್ಬ ಚಿಕ್ಕಪ್ಪನಾದ ಅಮಿತೋಧನ ಮಗನಾದ ಆನಂದ, ಚಿಕ್ಕಮ್ಮನ ಮಗನಾದ ದೇವದತ್ತ ಮತ್ತು ಅಮಿತಾ ಎಂಬುವರಾಗಿದ್ದರು. ಸಿದ್ಧಾರ್ಥನು ಇವರುಗಳ ಸಹವಾಸದಲ್ಲಿಯೇ ಬೆಳೆದನು.

ಸಿದ್ಧಾರ್ಥನು ಎಂಟನೇ ವಯಸ್ಸಿನಲ್ಲಿ ಅರಮನೆಯ ಶಿಕ್ಷಣ ಆರಂಭಿಸಿದನು. ಎಂಟು ಬ್ರಾಹ್ಮಣರು ಪ್ರಥಮ ಗುರುಗಳಾಗಿದ್ದರು. ಸಬ್ಬಮಿತ್ತನು ಎರಡನೆಯ ಗುರುವಾಗಿದ್ದನು. ಅಲಾರಕಮನ ಮುನಿಯ ಶಿಷ್ಯನಾದ ಭಾರದ್ವಾಜ ಎಂಬಾತನಿಂದ ಸಿದ್ಧಾರ್ಥನು ಏಕಾಗ್ರತೆ ಮತ್ತು ಧ್ಯಾನವನ್ನು ಅಭ್ಯಾಸ ಮಾಡಿದನು.

ಸಿದ್ಧಾರ್ಥನು ಮೂಲತಃ ಮೃದು ಸ್ವಭಾವದನಾಗಿದ್ದು, ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಶೋಷಿಸುವುದನ್ನು ಸಹಿಸುತ್ತಿರಲಿಲ್ಲ. ಒಮ್ಮೆ ಕಾರ್ಮಿಕನು ದುಡಿಯುವುದನ್ನು ನೋಡಿ “ಕಾರ್ಮಿಕರು ದುಡಿಯಬೇಕು; ಯಜಮಾನ ಮಾತ್ರ ಅದರ ಶ್ರಮದ ಫಲವನ್ನು ಅನುಭವಿಸಬೇಕು ಎಂಬುದು ಎಂತಹ ನ್ಯಾಯ” ಎಂದು ಪ್ರಶ್ನಿಸಿದನು.
ಸಿದ್ಧಾರ್ಥನು ಬೇಟೆಯಾಡುವುದನ್ನು ಸಹಿಸುತ್ತಿರಲಿಲ್ಲ. ಏಕೆಂದರೆ ಮನುಷ್ಯ ಮನುಷ್ಯನನ್ನು ಕೊಲ್ಲುವುದು ಮತ್ತು ಪ್ರಾಣಿಗಳನ್ನು ಕೊಲ್ಲುವುದು ತರವಲ್ಲ, ಎಂದು ಬೇಟೆಯಾಡುವುದನ್ನು ನಿರಾಕರಿಸಿದ್ದನು.

ಕ್ಷತ್ರಿಯನಾಗಿ ಇದೆಲ್ಲ ಕಲಿಯಬೇಕು ಎಂದು ಪ್ರಜಾಪತಿ ಮತ್ತು ಶುದ್ಧೋಧನನ ಬಯಕೆಯೆಯಾಗಿತ್ತು. ಆದರೆ ಧ್ಯಾನದಲ್ಲಿ ತೊಡಗಿಸಿಕೊಳ್ಳುವುದು ಸಿದ್ಧಾರ್ಥನ ಇಚ್ಚೆಯಾಗುತ್ತಿತ್ತು. ಧ್ಯಾನಕ್ಕೆ ಸ್ನೇಹಿತರನ್ನು ಪ್ರೇರೇಪಿಸುತ್ತಿದ್ದನು. ಸೂಕ್ತ ಆಸನಗಳನ್ನು ಕಲಿಸುವುದರ ಜೊತೆಗೆ “ನನಗೆ ಸುಖ ದೊರೆಯಲಿ, ನನ್ನ ಬಂಧು-ಬಾಂಧವರೆಲ್ಲರೂ ಸುಖವಾಗಿರಲಿ, ಜಗತ್ತಿನ ಎಲ್ಲಾ ಜೀವರಾಶಿಗಳು ಸುಖವಾಗಿರಲಿ” ಎಂಬ ವಿಷಯಗಳನ್ನು ಕುರಿತು ಧ್ಯಾನಿಸುವಂತೆ ಸ್ನೇಹಿತರಿಗೆ ಸಲಹೆ ನೀಡುತ್ತ ಪಾಲಿಸುತ್ತಿದ್ದನು. ಆದರೆ ಸ್ನೇಹಿತರು ಗಂಭೀರವಾಗಿ ಪಾಲಿಸುತ್ತಿರಲಿಲ್ಲ.
ದಂಡಪಾಣಿ ಎಂಬ ಶಾಕ್ಯನ 16 ವರ್ಷದ ಮಗಳಾದ ಯಶೋಧರೆಯನ್ನ 18 ವರ್ಷದ ಸಿದ್ಧಾರ್ಥನು ವಿವಾಹವಾದನು. ಹಲವು ವರ್ಷಗಳ ನಂತರ ರಾಹುಲ ಎಂಬ ಗಂಡು ಮಗುವಿಗೆ ಜನ್ಮ ನೀಡಿದಳು.

ಆಗಾಗ ಶೂದ್ಧೋಧನನಿಗೆ ಅಸಿತ ಮುನಿಗಳು ಹೇಳಿದ ಮಾತು ನೆನಪಾಗುತ್ತಿತ್ತು. ಸಿದ್ಧಾರ್ಥನು ಸನ್ಯಾಸಿಗಿಂತಲು ಚಕ್ರವರ್ತಿಯಾಗಿ ನೋಡುವುದು ಇಷ್ಟವಾಗುತ್ತಿತ್ತು. ಆದ್ದರಿಂದ ಸಿದ್ಧಾರ್ಥನ ಭೋಗ ಜೀವನಕ್ಕೆ ಋತುಮಾನಗಳಿಗೆ ಅನುಸಾರ ಚಳಿಗಾಲ, ಬೇಸಿಗೆ ಮತ್ತು ಮಳೆಗಾಲಕ್ಕೆ ತಕ್ಕಂತೆ ಮೂರು ಅರಮನೆಗಳನ್ನು ಕಟ್ಟಿ ಸುಂದರ ಯುವತಿಯರನ್ನ ಅಂತಃಪುರದಲ್ಲಿ ಇಟ್ಟಿದ್ದನು. ಆ ಮೋಹಕ ತಾರೆಯರು ಸಿದ್ಧಾರ್ಥನ ಮುಂದೆ ಸೋತೋದರು.

ಶಾಕ್ಯ ಜನಾಂಗದ ನಿಯಮದ ಪ್ರಕಾರ ಇಪ್ಪತ್ತು ವರ್ಷ ತುಂಬಿದ ಪ್ರತಿಯೊಬ್ಬ ಶಾಕ್ಯ ಯುವಕನೂ ಶಾಕ್ಯರ ಸಂಘದ ಸದಸ್ಯನಾಗಬೇಕಿತ್ತು. ಸಂಘದ ನಿಯಮಗಳಿಗೆ ಬದ್ಧನಾಗಿರಬೇಕಿತ್ತು. ಅದರಂತೆ ಸಿದ್ಧಾರ್ಥನು ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿ ಶಾಕ್ಯರ ಸಂಘದ ಸದಸ್ಯತ್ವವನ್ನು ಸ್ವೀಕರಿಸಿದನು. ನಂತರ ಎಂಟು ವರ್ಷಗಳ ಕಾಲ ಯಾವುದೇ ಗಂಭೀರ ಸಮಸ್ಯೆಯು ಬರಲಿಲ್ಲ ಎಂಟು ವರ್ಷಗಳು ಕಳೆದ ನಂತರ ಅಂದರೆ ಇಪ್ಪತ್ತೊಂಬತ್ತನೆಯ ವಯಸ್ಸಿನಲ್ಲಿ ಕಪಿಲವಸ್ತು ನಗರದ ಮಗ್ಗುಲಲ್ಲಿ ಹರಿಯುತ್ತಿದ್ದ ‘ರೋಹಿಣಿ’ ಎಂಬ ನದೀ ನೀರಿನ ಹಂಚಿಕೆಯ ವಿಚಾರವಾಗಿ ‘ಶಾಕ್ಯರಿಗೂ’ ಹಾಗೂ ಪಕ್ಕದ ಗಣರಾಜ್ಯವಾದ ‘ಕೋಲಿಯ’ ಎಂಬ ಸಮುದಾಯ ನಡುವೆ ಘರ್ಷಣೆ ಏರ್ಪಟ್ಟಿತು.

ಈ ಕುರಿತು ಶಾಕ್ಯರ ಸಂಘದ ಅಧಿವೇಶನದಲ್ಲಿ ಚರ್ಚೆನಡೆಯಿತು. ಪದೇ ಪದೇ ಜಗಳವಾಡುವ ಕೋಲಿಯರಿಗೆ ಬುದ್ದಿ ಕಲಿಸುವ ಉದ್ದೇಶದಿಂದ ಅವರ ಮೇಲೆ ಯುದ್ಧ ಮಾಡಬೇಕೆಂದು ಸಂಘ ತೀರ್ಮಾನ ತೆಗೆದುಕೊಂಡಿತು. ಈ ತೀರ್ಮಾನವನ್ನು ಮತಕ್ಕೆ ಹಾಕಿದಾಗ ಸಿದ್ಧಾರ್ಥನು ಎದ್ದು ನಿಂತು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಬಹುದಾದ ನೀರಿನ ವಿಷಯದಲ್ಲಿ ನಮ್ಮ ಸಹೋದರರಂತೆ ಇರುವ ಕೋಲಿಯರ ಮೇಲೆ ಯುದ್ಧ ಬೇಡವೆಂದು ತನ್ನ ಅಭಿಪ್ರಾಯವನ್ನು ಮಂಡಿಸಿದರು.

ಸಿದ್ಧಾರ್ಥನ ಅಭಿಪ್ರಾಯಕ್ಕೆ ಬಹುಮತಬಾರದೇ ಬಿದ್ದು ಹೋಯಿತು. ಆ ಸಂದರ್ಭದಲ್ಲಿ ತನ್ನ ನಿಲುವಿಗೆ ಅಂಟಿಕೊಂಡ ಸಿದ್ಧಾರ್ಥನು ನಾನು ಯುದ್ಧ ಮತ್ತು ಹಿಂಸೆಯ ವಿರೋಧಿ. ಹಾಗಾಗಿ ಯುದ್ಧದಲ್ಲಿ ಭಾಗವಹಿಸುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸಿದನು. ಏಕೆಂದರೆ ಯುದ್ಧ ಮಾಡುವುದರಿಂದ ನಮ್ಮ ಉದ್ದೇಶಗಳನ್ನು ಈಡೇರುವುದಿಲ್ಲ. ಬದಲಾಗಿ ಮತ್ತೊಂದು ಯುದ್ಧಕ್ಕೆ ಬೀಜವನ್ನು ಬಿತ್ತುತ್ತವೆ. ಎಂಬುದು ಸಿದ್ಧಾರ್ಥನ ಚಿಂತೆನೆಯಾಗಿತ್ತು.

ಶಾಕ್ಯರ ನಿಯಮದ ಪ್ರಕಾರ ಸಂಘದ ಸದಸ್ಯನಾದವನು ಮೂರು ನಿಯಮಗಳಲ್ಲಿ ಒಂದನ್ನು ಕಡ್ಡಾಯವಾಗಿ ಪಾಲಿಸ ಬೇಕಿತ್ತು. ಅವುಗಳೆಂದರೆ- ಒಂದು ಯುದ್ಧ ಮಾಡುವುದು ಎರಡು ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಗುರಿಯಾಗುವುದು. ಮೂರು ಗಡಿಪಾರು ಶಿಕ್ಷೆಗೆ ಗುರಿಯಾಗಿ ದೇಶಭ್ರಷ್ಟನಾಗಿ ರಾಜ್ಯದಿಂದ ಹೊರ ಹೋಗುವುದು. ಈ ಮೂರು ಅವಕಾಶಗಳಲ್ಲಿ ಸಿದ್ಧಾರ್ಥನು ಯುದ್ಧ ಮತ್ತು ಹಿಂಸೆಯನ್ನು ವಿರೋಧಿಸಿ, ಗಡಿಪಾರಿನ ಶಿಕ್ಷೆಯನ್ನು ಆಯ್ಕೆ ಮಾಡಿಕೊಂಡನು.

ಇದಾದ ನಂತರ ತನ್ನ ಅರಮನೆಗೆ ತಲುಪುವ ಮೊದಲೇ ಆತನ ತಂದೆ-ತಾಯಿಯರಿಗೆ ವಿಷಯ ತಿಳಿದು ತೀವ್ರ ದುಃಖತಪ್ತರಾಗಿದ್ದರು. “ನೀನೇ ಇಲ್ಲದಿರುವಾಗ ನಮಗೆ ಈ ಭೂಮಿಯಿಂದ ಪ್ರಯೋಜನವಾದರೂ ಏನು?” ಎಂದು ಶುದ್ಧೋಧನ ಕಣ್ಣೀರಿಟ್ಟನು. ಪ್ರಜಾಪತಿ ಗೌತಮಿಯು ಶುದ್ಧೋಧನ ಮಾತಿಗೆ ಧ್ವನಿಗೂಡಿಸಿ “ನಾನು ಸಹ ಅವರ ಮಾತನ್ನು ಒಪ್ಪುತ್ತೇನೆ. ನಮ್ಮನೆಲ್ಲ ತೊರೆದು ನೀನು ಏಕಾಂಗಿಯಾಗಿ ಹೇಗೆ ಹೋಗಬಲ್ಲೆ?” ಎಂದು ಮಗನನ್ನು ಪ್ರಶ್ನಿಸಿದಳು.

ಸಿದ್ಧಾರ್ಥನು ತನ್ನ ತಾಯಿಯನ್ನು ಸಂತೈಸುತ್ತಾ, “ಅಮ್ಮಾ, ನೀನು ಕ್ಷತ್ರಿಯನ ತಾಯಿಯೆಂದು ಯಾವಾಗಲೂ ಹೇಳಿಕೊಳ್ಳುತ್ತಿರಲಿಲ್ಲವೇ? ಆದ್ದರಿಂದ ನೀನು ಈಗ ಒಬ್ಬ ಧೀರ ತಾಯಿಯಂತೆ ವರ್ತಿಸಬೇಕು. ಈ ರೀತಿ ದುಃಖಿಸುವುದು ನಿನ್ನಂತಹವಳಿಗೆ ಶೋಭೆ ತರುವುದಿಲ್ಲ. ನಾನು ಯುದ್ಧರಂಗಕ್ಕೆ ಹೋಗಿ ಮರಣ ಹೊಂದಿದ್ದರೆ ಏನು ಮಾಡುತ್ತಿದ್ದೇ? ಆಗಲೂ ನೀನು ಈ ರೀತಿ ದುಃಖಿಸುತ್ತಿದ್ದೆಯಾ?” ಎಂದು ಪ್ರಶ್ನಿಸಿದನು.

ಆಗ ಪ್ರಜಾತಿಯು “ಯುದ್ಧರಂಗದಲ್ಲಿ ಅಂತಹ ಸಾವು ಕ್ಷತ್ರಿಯನಿಗೆ ಶೋಭೆ ತರುವುದು. ಆದರೆ, ನೀನು ನಿರ್ಜನ ಅರಣ್ಯಕ್ಕೆ ತೆರಳಿ ಜನಸಮೂಹದಿಂದ ದೂರವಿದ್ದು ಬದುಕಲು ಹೊರಟಿದ್ದೀಯ!. ನಾವು ಇಲ್ಲಿ ನೆಮ್ಮದಿಯಿಂದ ಇರಲು ಹೇಗೆ ಸಾಧ್ಯ? ನಮ್ಮನ್ನೂ ನಿನ್ನ ಜೊತೆ ಕರೆದುಕೊಂಡು ಹೋಗು ಎಂದು ಹೇಳುತ್ತಿದ್ದೇನೆ” ಎಂದಂಳು.

“ಅಮ್ಮಾ ನೀನು ದಯವಿಟ್ಟು ನನ್ನ ದಾರಿಗೆ ಅಡ್ಡ ಬರಬೇಡ. ನನಗೆ ಅನುಮತಿಯಿತ್ತು, ಆಶೀರ್ವದಿಸು. ಈಗ ನಡೆಯುತ್ತಿರುವುದೆಲ್ಲವೂ ಒಳ್ಳೆಯದಕ್ಕೆ ಎಂದು ಭಾವಿಸು” ಎಂದು ಸಿದ್ಧಾರ್ಥನು ಒತ್ತಾಯಿಸಿದನು. ಗೌತಮಿ ಮತ್ತು ಶುದ್ಧೋಧನ ಮೌನಕ್ಕೆ ಶರಣಾದರು.
ನಂತರ ಸಿದ್ಧಾರ್ಥನು ಪತ್ನಿ ಯಶೋಧರೆ ವಾಸಗೃಹದತ್ತ ನೆಡೆದನು. ವಿಷಯ ಹೇಳಿ ಹೇಗೆ ಒಪ್ಪಿಸಲಿ ಎಂದು ಮೌನವಾಗಿ ಯಶೋಧರೆ ಮುಂದೆ ನಿಂತನು. ಆಗ ಯಶೋಧರೆ “ಕಪಿಲವಸ್ತುವಿನ ಸಂಘದ ಸಭೆಯಲ್ಲಿ ನಡೆದ ಸಂಗತಿಯೆಲ್ಲ ನನಗೆ ಗೊತ್ತಿದೆ” ಎಂದಳು. ಹಾಗಾದರೆ ‘ಪರಿವ್ರಾಜಕನಾಗಬೇಕೆಂಬ ನನ್ನ ನಿರ್ಣಯವ ಬಗ್ಗೆ ನಿನ್ನ ಅಭಿಪ್ರಾಯವೇನು?’ ಎಂದು ಕೇಳಿದನು.

ಯಶೋಧರೆಯು “ನಿನ್ನ ಸ್ಥಾನದಲ್ಲಿ ನಾನಿದ್ದರೂ ಇದನ್ನೇ ಮಾಡಬೇಕಿತ್ತು. ಇದನ್ನು ಬಿಟ್ಟು ಬೇರೇನು ಮಾಡಲು ಸಾಧ್ಯವಿತ್ತು? ಕೋಲಿಯರ ಮೇಲಿನ ಯುದ್ಧದಲ್ಲಿ ಭಾಗವಹಿಸಲು ನಾನು ಒಪ್ಪುತ್ತಿರಲಿಲ್ಲ. ನಿಮ್ಮ ತೀರ್ಮಾನ ಸರಿಯಾಗಿದೆ. ಇದಕ್ಕೆ ನನ್ನ ಸಂಪೂರ್ಣ ಸಮ್ಮತಿಯಿದೆ ಜೊತೆಗೆ ಸಹಕಾರವೂ ಇದೆ. ನಾನು ನಿಮ್ಮೊಂದಿಗೆ ಪರಿವ್ರಾಜಕತ್ವವನ್ನು ಸ್ವೀಕರಸಬಹುದಿತ್ತು. ಆದರೆ, ರಾಹುಲನನ್ನು ನೋಡಿಕೊಳ್ಳಬೇಕಾಗಿರುವುದರಿಂದ ನಾನು ಹಾಗೆ ಮಾಡಲಾರೆ.

ನೀವು ನಿಮ್ಮ ತಂದೆ ತಾಯಿ ಮತ್ತು ಮಗುವಿನ ವಿಚಾರದಲ್ಲಿ ಆತಂಕ ಪಡಬೇಡಿ. ನನ್ನ ಕೊನೆಯ ಉಸಿರು ಇರುವ ವರೆಗೂ ಅವರ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ. ನೀವು ನಿಮ್ಮ ಬಂಧುಬಾಂಧವರನ್ನೆಲ್ಲ ತ್ಯಜಿಸಿ ಪರಿವ್ರಾಜಕ ದೀಕ್ಷೆಯನ್ನು ಸ್ವೀಕರಿಸುತ್ತಿರುವದರಿಂದ ನಿಮ್ಮ ಜೀವನದ ಹೊಸಪಥದ ಅನ್ವೇಷಣೆಯಲ್ಲಿ ಮನುಕುಲಕ್ಕೆ ಶ್ರೇಯಸ್ಸು ಸಿಗುವಂತಾಗಲಿ ಎಂದು ಹಾರೈಸುತ್ತೇನೆ” ಎಂದು ಉತ್ತರಿಸಿದಳು.

ಯಶೋಧರೆಯ ಮಾತನ್ನು ಕೇಳಿ ಸಿದ್ಧಾರ್ಥನು ತುಂಬಾ ಪ್ರಭಾವಿತನಾದನು. ಯಶೋಧರೆಯು ಎಂತಹ ಉದಾರಶೀಲಳು, ಶೌರ್ಯಸಂಪನ್ನಳು, ದೃಢಚಿತ್ತಳು ಎಂಬುದು ಅವನಿಗೆ ಮನದಟ್ಟಾಯಿತು. ತಾನು ಎಂಹತ ಅದೃಷ್ಟಶಾಲಿ. ಆದರೆ, ವಿಧಿ ತಮ್ಮಿಬ್ಬರನ್ನೂ ಬೇರ್ಪಡಿಸುತ್ತಿದೆ ಎಂದುಕೊಂಡನು. ಅನಂತರ ರಾಹುಲನನ್ನು ಕರೆತರುವಂತೆ ಆಕೆಗೆ ತಿಳಿಸಿದನು. ಪಿತೃವಾತ್ಸಲ್ಯ ತುಂಬಿದ ನೋಟದಿಂದ ಮಗುವನ್ನು ಒಮ್ಮೆ ನೋಡಿ ಅಲ್ಲಿಂದ ನಿರ್ಗಮಿಸಿದನು.

ಹೀಗೆ ತಂದೆ ತಾಯಿ ಪತ್ನಿ ಯಶೋಧರೆಗೆ ತಾನು ಪಾರಿವ್ರಾಜಕ ಪಡೆಯುವುದಾಗಿ ಒಪ್ಪಿಗೆಯನ್ನು ಪಡೆದನು. ಮರುದಿನ ಪ್ರೀತಿಯ ಕುದುರೆ ಕಂಥಕವನ್ನು ಏರಿ, ಸೇವಕನಾದ ಚನ್ನನ ಜೊತೆ ಕಪಿಲವಸ್ತು ಸಮೀಪವಿದ್ದ ಭಾರಧ್ವಜ ಎಂಬ ಮುನಿಯ ಆಶ್ರಮದತ್ತ ನಡೆದರು. ತಾನು ಧರಿಸಿದ್ದ ವಸ್ತ್ರಾಭರಣಗಳನ್ನು ಕಳಚಿ ಚನ್ನನಿಗೆ ನೀಡಿ ತಲೆ ಕೂದಲನ್ನು ತೆಗೆಸಿ, ಬಿಕ್ಷೆ ಪಾತ್ರೆಯನ್ನು ಹಿಡಿದು ಪಾರಿವ್ರಾಜಕವನ್ನು ತನ್ನ 29 ವಯಸ್ಸಿನಲ್ಲಿ ಸ್ವೀಕರಿಸಿದನು.

ಮುಂದೊಂದು ಕೆಲವು ದಿನಗಳ ನಂತರ ಐದು ಜನ ಪರಿವ್ರಾಜಕ ಪಡೆದ ಬಿಕ್ಕುಗಳು ಗೌತಮನ ಕುಟಿರವ ಬಳಿ ತಮ್ಮ ಕುಟಿರವನ್ನು ನಿರ್ಮಿಸಿಕೊಳ್ಳಲು ಬಂದಾಗ, ಸಿದ್ಧಾರ್ಥನ ಪರಿವ್ರಾಜಕದ ಹಿನ್ನೆಲೆ ತಿಳಿದು. ನೀವು ಕಪಿಲವಸ್ತುವನ್ನು ತ್ಯಜಿಸಿ ಬಂದಾಗ ಶಾಕ್ಯರು ಕೋಲಿಯರ ವಿರುದ್ಧ ಯುದ್ಧ ಮಾಡಬಾರದೆಂದು ದೊಡ್ಡ ಚಳುವಳಿಯೇ ನಡೆಯಿತು.

“ಕೋಲಿಯರು ನಮ್ಮ ಸಹೋದರರು, ಸಹೋದರರಾದವರು ಪರಸ್ಪರ ಕಾದಾಡುವುದು ತಪ್ಪು, ಸಿದ್ಧಾರ್ಥ ಗೌತಮನ ದೇಶತ್ಯಾಗವನ್ನು ಮರೆಯಬೇಡಿ” ಎಂದು ಘೋಷಣೆ ಕೂಗುತ್ತಾ ಮೆರವಣಿಗೆ ಮಾಡಿ ಶಾಂತಿಯುತವಾಗಿ ‘ರೋಹಿಣಿ’ ನದಿ ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಂಡರು. ನೀವು ಪರಿವ್ರಾಜಕ ಬಿಟ್ಟು ನಿಮ್ಮ ಕುಟುಂಬವನ್ನು ಸೇರಬಹುದಲ್ಲ ಎಂದರು.

ಅದಕ್ಕೆ ಸಿದ್ಧಾರ್ಥನು ಈ ಶುಭಾವಾರ್ತೆಯನ್ನು ತಿಳಿಸಿದ್ದು ನನಗೆ ಸಂತೊಷವಾಗಿದೆ ಇದು ನನಗಾದ ಗೆಲುವು ನಿಜ. ಆದರೆ ನಾನು ಹಿಂದಿರುಗಲಾರೆ. ನಾನು ಪರಿವ್ರಾಜಕವನ್ನು ಮುಂದುವರೆಸುವೆ. ಎಂದು ಮುಂದೆ ದೀರ್ಘ ತಪಸ್ಸಿನಿಂದ ಸಿದ್ಧಾರ್ಥ ಗೌತಮ ಬದಲಾಗಿ ಗೌತಮ ಬುದ್ದನಾಗುತ್ತಾನೆ.
ಇದಾದ ಏಳು ವರ್ಷಗಳ ನಂತರ ತಂದೆ ತಾಯಿ ಶುದ್ಧೋದನ (ಕೊನೆಯ ಭೇಟಿ), ಪ್ರಜಾಪತಿ ಗೌತಮಿ, ಪತ್ನಿ ಯಶೋಧರೆ ಮತ್ತು ಮಗ ರಾಹುಲನನ್ನು ಭೇಟಿ ಮಾಡುತ್ತಾನೆ.

ಬುದ್ಧನಿಗೆ ಎಂಬತ್ತು ವರ್ಷದ ವಯಸ್ಸಿನಲ್ಲಿ ತಾಯಿ ಮತ್ತು ಪತ್ನಿಯನ್ನು ಭೇಟಿ ಮಾಡಿದನು. ಕೊನೆಯಲ್ಲಿ ಮಗನನ್ನು ಭೇಟಿ ಮಾಡಿ ಉಪದೇಶವನ್ನು ಹೇಳಿದನು.ಬುದ್ಧನ ಕೊನೆಯ ದಿನಗಳೆಂದರೆ ಕ್ರಿ.ಪೂ. 482 ನೇ ವೈಶಾಖ ಪೌರ್ಣಿಮೆಯ ನಡುರಾತ್ರಿಯಲ್ಲಿ ಬುದ್ಧನು ಅಸುನೀಗಿದನು.
ಪಠ್ಯಪುಸ್ತಕಗಳಲ್ಲಿ ವಿಷಯಗಳನ್ನು ಸೇರಿಸುವಾಗ ಸತ್ಯಾಸತ್ಯತೆಗಳನ್ನು ಪರಮರ್ಶನ ಮಾಡಬೇಕು.

ಇತಿಹಾಸಕಾರರು ಇತಿಹಾಸವನ್ನು ವ್ಯಕ್ತಿನಿಷ್ಟತೆಗೆ ಅಥವಾ ವಸ್ತುನಿಷ್ಟತೆಗ ಆಧ್ಯತೆ ನೀಡಿರುವರೆ ಎಂಬುದನ್ನು ವಿಮರ್ಶೆಗೆ ಒಳಪಡಿಸಿದಾಗ ನೈಜ ಇತಿಹಾಸ ಅನಾವರಣಗೊಳ್ಳುವುದು. ಈ ಪ್ರಯತ್ನ ಪಠ್ಯಕ್ರಮ ರಚನೆಕಾರರು ಮಾಡಬೇಕು. ಶಿಕ್ಷಕರು ವಿಮರ್ಶಿಸಿ ವಿದ್ಯಾರ್ಥಿಗಳಿಗೆ ಹೇಳಿದಾಗ ಮಾತ್ರ ವಿದ್ಯಾರ್ಥಿಗಳು ಸತ್ಯಾಸತ್ಯತೆಗಳನ್ನು ಪರಮರ್ಶನೆ ಮಾಡುವ ಜ್ಞಾನ ಮತ್ತು ಕೌಶಲ ಬೆಳೆಸಿಕೊಳ್ಳಲು ಸಾಧ್ಯ. ಈ ರೀತಿ ವಿದ್ಯಾರ್ಥಿಗಳು ಸತ್ಯಾನ್ವೇಷಣೆ ಮೂಲಕ ಸಂಶೋಧನಾ ಪ್ರವೃತ್ತಿಗಳು ಬೆಳೆಸಿಕೊಳ್ಳುವರು.

ಕೃತಿ : “ಬುದ್ಧ ಅಂಡ್ ಹಿಸ್ ಧಮ್ಮ” – ಡಾ.ಬಿ.ಆರ್. ಅಂಬೇಡ್ಕರ್

-ಸಂಪಾದನೆ
ವೆಂಕಟೇಶ್ ಎಸ್
ಸಹಾಯಕ ಪ್ರಾಧ್ಯಾಪಕರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು

Published

on

~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ

ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.

ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.

 

ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.

ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

Continue Reading

ದಿನದ ಸುದ್ದಿ

ನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್

Published

on

ಸುದ್ದಿದಿನ,ದಾವಣಗೆರೆ: “ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಾವು ಮುಖ್ಯಮಂತ್ರಿಯಂತೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.

ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು, ನಾನು ಡಿ.ಕೆ ಶಿವಕುಮಾರ್‌ ಅವರ ಮನೆಮಗ, ಶಿವನ ಮುಂದೆ ಇರುವ ಬಸವ ನಾನು. ನಾನೇ ಮುಖ್ಯಮಂತ್ರಿ ಇದ್ದಂತೆ, ಮನೆ ಮಗನಿಗೆ ಯಾವಾಗಲೂ ಅವರ ಆಶೀರ್ವಾದ ಇದ್ದೇ ಇರುತ್ತದೆ ಎಂದಿದ್ದಾರೆ.

ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

“ನಾನು ಮುಖ್ಯಮಂತ್ರಿ ಅಲ್ಲ. ಆದರೆ ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದಾಗ ಮುಖ್ಯಮಂತ್ರಿಯಂತೆ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದೇನೆ. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ನನ್ನ ಮೊದಲ ಕರ್ತವ್ಯವಾಗಿದೆ. ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ,” ಎಂದು ಅವರು ಹೇಳಿದರು.

ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಇನ್ನೂ ಅನೇಕ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ ಅವರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತಿದೆ ಎಂದರು.

“ಜನಪ್ರತಿನಿಧಿಯಾಗಿ ಚುನಾಯಿತರಾದ ಬಳಿಕ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ಅನುದಾನ ತರುವ ಪ್ರಯತ್ನ ಮಾಡಲಾಗಿದೆ. ಕುಡಿಯುವ ನೀರಿನ ಯೋಜನೆಗಳು, ರಸ್ತೆ ಅಭಿವೃದ್ಧಿ, ಶಾಲೆಗಳ ಮೂಲಸೌಕರ್ಯ ಸುಧಾರಣೆ ಸೇರಿದಂತೆ ಹಲವು ಕಾಮಗಾರಿಗಳಿಗೆ ವೇಗ ನೀಡಲಾಗಿದೆ,” ಎಂದು ಹೇಳಿದರು.

ಕ್ಷೇತ್ರದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ. ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ನೀರಾವರಿ ಹಾಗೂ ರೈತರಿಗೆ ಅನುಕೂಲಕರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಸರ್ಕಾರದ ಅಭಿವೃದ್ಧಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಅರ್ಹ ವ್ಯಕ್ತಿ ಯೋಜನೆಯಿಂದ ವಂಚಿತರಾಗಬಾರದು ಎಂಬುದು ತಮ್ಮ ಉದ್ದೇಶವಾಗಿದೆ ಎಂದು ಶಾಸಕರು ತಿಳಿಸಿದರು.

ವಿರೋಧ ಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಟೀಕೆಗಳು ಪ್ರಜಾಪ್ರಭುತ್ವದ ಭಾಗ. ಆದರೆ ಅಭಿವೃದ್ಧಿಯೇ ನಮ್ಮ ಉತ್ತರ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಹಾಗೂ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದೇ ನಮ್ಮ ಗುರಿಯಾಗಿದೆ,” ಎಂದರು.

ಕ್ಷೇತ್ರದ ಜನರು ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಸಂಪರ್ಕಿಸಬಹುದು. ಜನಸೇವೆಗಾಗಿ ತಮ್ಮ ಕಚೇರಿ ಸದಾ ತೆರೆದಿರುತ್ತದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿಯ ನೂತನ ವಿಜ್ಞಾನ ಸಭಾಂಗಣದಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ಸ್ (ಎಮ್.ಸಿ.ಎ) ಹಾಗೂ ಕಂಪ್ಯೂಟರ್ ಸೈನ್ಸ್ (ಎಮ್.ಎಸ್ಸಿ) ವಿಭಾಗಗಳ ಸಂಯುಕ್ತಾಶ್ರಯದಲ್ಲಿ “ಸಂಶೋಧನಾ ಸಮಸ್ಯೆಯನ್ನು ಗುರುತಿಸುವ ವಿವಿಧ ವಿಧಾನಗಳು, ಹೊಸ ಸಂಶೋಧನಾ ಕಲ್ಪನೆಗಳ ಸೃಷ್ಟಿ ಹಾಗೂ ಟೈಯರ್-1 ಸಂಶೋಧನಾ ಲೇಖನಗಳ ಬರಹದ ಪ್ರಮುಖ ಅಂಶಗಳು” ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ, ಗುಣಮಟ್ಟದ ಸಂಶೋಧನೆಯೇ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಪ್ರಗತಿ ಮತ್ತು ಜಾಗತಿಕ ಮಾನ್ಯತೆಯ ಮೂಲಾಧಾರವಾಗಿದೆ ಎಂದು ಹೇಳಿದರು.

ಸಂಶೋಧನೆ ಕೇವಲ ಪದವಿ ಪಡೆಯುವ ಪ್ರಕ್ರಿಯೆಯಾಗಬಾರದು, ಅದು ಸಮಾಜದ ಸಮಸ್ಯೆಗಳಿಗೆ ಪರಿಹಾರ ನೀಡುವ ದಿಕ್ಕಿನಲ್ಲಿ ಸಾಗಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಪ್ರಕಟಣೆಗಳು ವಿಶ್ವವಿದ್ಯಾಲಯದ ಸಂಶೋಧನಾ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಯು ಕೆ ಮಾಂಚೆಸ್ಟರ್‌ನ ‘ಯೂನಿವರ್ಸಿಟಿ ಆಫ್ ಸ್ಯಾಲ್‌ಫೋರ್ಡ್’ನ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕ ಡಾ. ಶಿವಕುಮಾರ ಪಿ. ಮಾತನಾಡಿ, ಸಂಶೋಧನಾ ಸಮಸ್ಯೆ ಗುರುತಿಸುವಿಕೆ, ಸಂಶೋಧನಾ ಅಂತರ (Research Gap) ಪತ್ತೆ, ಸಾಹಿತ್ಯ ಸಮೀಕ್ಷೆ, ಪ್ರಯೋಗಾತ್ಮಕ ವಿನ್ಯಾಸ (Experimental Design), ಟೈಯರ್-1 ಜರ್ನಲ್ ಲೇಖನ ಬರಹ, ಪ್ರಕಟಣಾ ನೈತಿಕತೆ ಹಾಗೂ ವಿಮರ್ಶಕರ ಅಭಿಪ್ರಾಯಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

“ಒಂದು ಉತ್ತಮ ಸಂಶೋಧನಾ ಲೇಖನದ ಯಶಸ್ಸು ಅದರ ಹೊಸತನ, ವೈಜ್ಞಾನಿಕ ವಿಧಾನ ಮತ್ತು ಸ್ಪಷ್ಟವಾದ ಪ್ರಸ್ತುತೀಕರಣದಲ್ಲಿ ಅಡಗಿದೆ. ಸಂಶೋಧಕರು ಗುಣಮಟ್ಟದ ಸಮಸ್ಯೆಗಳನ್ನು ಆಯ್ಕೆ ಮಾಡಿಕೊಂಡು ಅಂತರರಾಷ್ಟ್ರೀಯ ಮಟ್ಟದ ಪ್ರಕಟಣೆಗೆ ಸಿದ್ಧರಾಗಬೇಕು,” ಎಂದು ಅವರು ಕರೆ ನೀಡಿದರು.

ಕಾರ್ಯಾಗಾರದಲ್ಲಿ 250ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ವಿವಿಧ ವಿಭಾಗಗಳ ಅಧ್ಯಾಪಕರು ಭಾಗವಹಿಸಿದ್ದರು. ಪೋಸ್ಟರ್ ಪ್ರಸೆಂಟೇಷನ್‌ಗಳು, ಸಂವಾದಾತ್ಮಕ ಚರ್ಚೆಗಳು ಮತ್ತು ಸಂಶೋಧನಾ ಲೇಖನ ಬರಹದ ಪ್ರಾಯೋಗಿಕ ಮಾರ್ಗದರ್ಶನ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಭವಿಷ್ಯದಲ್ಲೂ ಇಂತಹ ಕಾರ್ಯಾಗಾರಗಳ ಸರಣಿಯನ್ನು ಆಯೋಜಿಸಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕುಲಸಚಿವ ಶ್ರೀ ಎಸ್. ಬಿ. ಗಂಟಿ, ಪರೀಕ್ಷಾಂಗ ಕುಲಸಚಿವ ಡಾ. ಸಿ. ಕೆ. ರಮೇಶ್, ಡಾ. ಬಸವಣ್ಣ ಎಮ್. ಅಧ್ಯಕ್ಷರು, ಎಮ್.ಸಿ.ಎ ವಿಭಾಗ, ಡಾ. ಚಂದ್ರಕಾಂತ ಎನ್. ಅಧ್ಯಕ್ಷರು, ಕಂಪ್ಯೂಟರ್ ಸೈನ್ಸ್ ವಿಭಾಗ, ಹಣಕಾಸು ಅಧಿಕಾರಿ ಡಾ. ಆರ್. ಶಶಿಧರ್ ಹಾಗೂ ವಿವಿಧ ವಿಭಾಗಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending