Connect with us

ದಿನದ ಸುದ್ದಿ

ಗೋ ಹತ್ಯೆ ಅಲ್ಲ, ಪ್ರಜಾತಂತ್ರದ ಹತ್ಯೆ ನಿಷೇಧಿಸಬೇಕಿದೆ

Published

on

  • ನಾ ದಿವಾಕರ

2020 ಪ್ರಜಾಸತ್ತಾತ್ಮಕ ಭಾರತದ ಪಾಲಿಗೆ ಕರಾಳ ವರ್ಷ. ಕೋವಿದ್ 19ರ ಭೀಕರ ಪರಿಣಾಮಗಳು ನೈಸರ್ಗಿಕ. ಇದರಿಂದ ಉಂಟಾದ ಲಕ್ಷಾಂತರ ಸಾವುಗಳು, ಅಸಂಖ್ಯಾತ ಜನರ ಸಂಕಷ್ಟಗಳು ಮತ್ತು ಶೋಷಿತ ಜನಸಮುದಾಯಗಳ ಬವಣೆ ಆಡಳಿತ ವ್ಯವಸ್ಥೆಯ ಕೊಡುಗೆ. 130 ಕೋಟಿ ಜನಸಂಖ್ಯೆ ಇರುವ ಬೃಹತ್ ದೇಶದಲ್ಲಿ ಒಂದು ಸಾಂಕ್ರಾಮಿಕ ಪಿಡುಗಿಗೆ 1 ಲಕ್ಷ 41 ಜನರ ಸಾವು ಆಡಳಿತ ವ್ಯವಸ್ಥೆಯನ್ನು ಅಷ್ಟಾಗಿ ಭಾವಿಸುವುದಿಲ್ಲ.

ಆ ಮಟ್ಟಿಗೆ ಭಾರತೀಯ ಪ್ರಭುತ್ವದ ಸಂವೇದನೆ ಜಡ್ಡುಗಟ್ಟಿದೆ. ಏಕೆಂದರೆ 1995ರ ನಂತರದ 25 ವರ್ಷಗಳಲ್ಲಿ 3 ಲಕ್ಷ 50 ಸಾವಿರ ರೈತರು ಸಾಲದ ಹೊರೆಯಿಂದ, ಬೆಳೆ ವೈಫಲ್ಯದಿಂದ, ಇತರ ಕೃಷಿ ಸಂಬಂಧಿತ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಭಾರತದ ಪ್ರಭುತ್ವದ ದೃಷ್ಟಿಯಲ್ಲಿ ಕೋವಿದ್‍ನಿಂದ ಉಂಟಾಗುವ ಸಾವುಗಳಿಗೂ, ರೈತರ ಆತ್ಮಹತ್ಯೆಗಳಿಗೂ ವ್ಯತ್ಯಾಸವೇನೂ ಇರುವುದಿಲ್ಲ. ಆ ಮಟ್ಟಿಗೆ ಭಾರತದ ಆಡಳಿತ ವ್ಯವಸ್ಥೆ ಮಾನವೀಯ ಸ್ಪರ್ಶವನ್ನು ಕಳೆದುಕೊಂಡಿದೆ.

ನೈಸರ್ಗಿಕ ಕೋವಿದ್ ಮತ್ತು ಸಾಂದರ್ಭಿಕ ಕೃಷಿ ಬಿಕ್ಕಟ್ಟು-ರೈತರ ಆತ್ಮಹತ್ಯೆಗಳನ್ನು ಬದಿಗಿಟ್ಟು ನೋಡಿದರೂ 2020 ಭಾರತದ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಆಡಳಿತ ವ್ಯವಸ್ಥೆಗೆ ಕರಾಳ ವರ್ಷವೇ ಆಗಿದೆ. ಕಾಶ್ಮೀರದ ದಿಗ್ಬಂಧನ ಮತ್ತು ಕಾಶ್ಮೀರದ ಜನತೆಯ ಗೃಹಬಂಧನದ ಉನ್ಮಾದದ ನಡುವೆಯೇ ಕೇಂದ್ರ ಸರ್ಕಾರ ಭಾರತೀಯ ಪ್ರಜೆಗಳ ಪೌರತ್ವವನ್ನೇ ಪ್ರಶ್ನಿಸುವ ಕಾಯ್ದೆಯೊಂದನ್ನು ಜಾರಿಗೊಳಿಸಿದ್ದು ಕಳೆದ ವರ್ಷ ಡಿಸೆಂಬರ್ 11ರಂದು. ದೇಶದಲ್ಲಿ ಲಕ್ಷಾಂತರ ಸಂಖ್ಯೆಯ ಅಕ್ರಮ ವಲಸಿಗರು ಬಾಂಗ್ಲಾದೇಶ, ಪಾಕಿಸ್ತಾನದಿಂದ ಬಂದು ನೆಲೆಸಿದ್ದಾರೆ ಇವರೆಲ್ಲರನ್ನೂ ಉಚ್ಚಾಟಿಸುವ “ ಸ್ವಚ್ಚ ಭಾರತ ಅಭಿಯಾನಕ್ಕೆ ” ಚಾಲನೆ ದೊರೆತಿದ್ದು ಈ ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ.

ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿ ಬಹಳ ವರ್ಷಗಳಿಂದ ನೆಲೆಸಿರುವ ಹಿಂದೂಗಳಿಗೆ ಭಾರತದ ಪೌರತ್ವವನ್ನು ನೀಡುವುದು ಮತ್ತು ಭಾರತದಲ್ಲಿ ಬಹಳ ವರ್ಷಗಳಿಂದ ಅಕ್ರಮವಾಗಿ ನೆಲೆಸಿರುವ ಈ ದೇಶದ ಮುಸ್ಲಿಮರನ್ನು ಅವರ ದೇಶಗಳಿಗೆ ರವಾನಿಸುವುದು ಎನ್‍ಆರ್‍ಸಿ, ಎನ್‍ಪಿಆರ್ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲ ಉದ್ದೇಶವಾಗಿತ್ತು. ಈ ಮಸೂದೆಗಳನ್ನು ಸಂಸತ್ತಿನಲ್ಲಿ ಯಾವುದೇ ಚರ್ಚೆ ಇಲ್ಲದೆ ಅನುಮೋದಿಸಿದ ಮಾದರಿಯೇ ಪ್ರಜಾತಂತ್ರದ ಕಗ್ಗೊಲೆಯ ಸೂಚನೆಗಳಾಗಿದ್ದವು.

ದೇಶಾದ್ಯಂತ ಭುಗಿಲೆದ್ದ ಸಿಎಎ ವಿರೋಧಿ ಆಂದೋಲನ ಕೇಂದ್ರ ಸರ್ಕಾರದ ದುಸ್ಸಾಹಸಕ್ಕೆ ತಕ್ಕ ಪ್ರತಿರೋಧವಾಗಿ ರೂಪುಗೊಂಡಿತ್ತು. ಈ ಆಂದೋಲನವನ್ನು ವಿಫಲಗೊಳಿಸಲು ಕೇಂದ್ರ ಸರ್ಕಾರ ಮತ್ತು ಆಡಳಿತಾರೂಢ ಪಕ್ಷ ಬಳಸಿದ ವಾಮ ಮಾರ್ಗಗಳು ದೆಹಲಿಯ ಕೋಮು ಗಲಭೆಗಳಲ್ಲಿ ವ್ಯಕ್ತವಾಗಿದ್ದವು. ಜನರನ್ನು ಗುಂಡಿಟ್ಟು ಕೊಲ್ಲಿ ಎಂದು ಮುಕ್ತವಾಗಿ ರಸ್ತೆಯಲ್ಲೇ ಕೂಗಿ ಹೇಳುವ ವ್ಯಕ್ತಿಯನ್ನು ಬಂಧಿಸಲೂ ಸಾಧ್ಯವಾಗದ ಸರ್ಕಾರಕ್ಕೆ ಬಿಲ್ಕಿಸ್ ಬಾನು ಎನ್ನುವ 80ರ ವೃದ್ಧೆಯಲ್ಲಿ ಭಯೋತ್ಪಾದಕತೆಯ ಛಾಯೆ ಕಂಡುಬಂದಿದ್ದು ಆಡಳಿತ ವ್ಯವಸ್ಥೆಯ ಕ್ರೌರ್ಯದ ಸಂಕೇತವಾಗಿತ್ತು.

ಇದು ಭಾರತದಲ್ಲಿ ಪ್ರಜಾತಂತ್ರದ ಕಗ್ಗೊಲೆಯ ಆರಂಭದ ಹೆಜ್ಜೆಗಳು ಎಂದು ಅರ್ಥವಾಗುವ ಹೊತ್ತಿಗೆ ಕೋವಿದ್ 19 ಅಪ್ಪಳಿಸಿತ್ತು. ಕೋವಿದ್ ಒಂದು ಮಾರಣಾಂತಿಕ ಪಿಡುಗು, ಲಕ್ಷಾಂತರ ಜನರ ಬದುಕನ್ನೇ ಕಸಿದುಕೊಳ್ಳುವ ಒಂದು ಸಾಂಕ್ರಾಮಿಕ. ವಿಶ್ವದಾದ್ಯಂತ ಈ ಪಿಡುಗಿನಿಂದ ಉಂಟಾಗಿರುವ ಸಾಮಾಜಿಕ ಮತ್ತು ಆರ್ಥಿಕ ವ್ಯತ್ಯಯಗಳು ದುಡಿಯುವ ವರ್ಗಗಳನ್ನು ಮಾತ್ರವೇ ಅಲ್ಲದೆ ಮಧ್ಯಮ ಮತ್ತು ಮೇಲ್ ಮಧ್ಯಮ ವರ್ಗಗಳನ್ನೂ ಕಂಗಾಲಾಗಿಸಿವೆ.

ಕೋವಿದ್ ನಿಯಂತ್ರಿಸುವ ನಿಟ್ಟಿನಲ್ಲಿ ಯಾವುದೇ ಒಂದು ನಿರ್ದಿಷ್ಟ ಕಾನೂನನ್ನು ರೂಪಿಸದೆ ಲಕ್ಷಾಂತರ ಮಂದಿಯ ಸಂಕಷ್ಟಕ್ಕೆ ಕಾರಣವಾಗಿರುವುದು ಭಾರತ ಸರ್ಕಾರದ ಪ್ರಜಾತಂತ್ರ ವಿರೋಧಿ ಧೋರಣೆಗೆ ಮತ್ತೊಂದು ನಿದರ್ಶನ. ಬಹುಪಾಲು ರಾಷ್ಟ್ರಗಳಲ್ಲಿ ಕೋವಿದ್ ನಿಯಂತ್ರಿಸುವ ಉದ್ದೇಶದಿಂದಲೇ ಹೊಸ ಕಾಯ್ದೆಗಳನ್ನು ಜಾರಿ ಮಾಡಲಾಗಿದ್ದು ಭಾರತ ಇದಕ್ಕೆ ಹೊರತಾಗಿದೆ.

ಆದರೆ ಭಾರತದಲ್ಲಿ ಕೇಂದ್ರ ಸರ್ಕಾರ ಹಠಾತ್ತನೆ ವಿಧಿಸಿದ ಲಾಕ್ ಡೌನ್ ನಿಂದ ಉಂಟಾದ ದುಷ್ಪರಿಣಾಮಗಳನ್ನು ಮತ್ತಾವ ದೇಶದಲ್ಲೂ ಕಾಣಲಾಗುವುದಿಲ್ಲ. ಜಗತ್ತಿನ ಅತಿ ದೊಡ್ಡ ಪ್ರಜಾತಂತ್ರದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ಪಟ್ಟ ಬವಣೆ, ಅನುಭವಿಸಿದ ಸಾವು ನೋವು ಮತ್ತು ಸಾವಿರಾರು ಕಿಲೋಮೀಟರ್ ಕಾಲ್ನಡಿಗೆಯ ಮೂಲಕ ತಮ್ಮ ಸ್ವಂತ ಊರುಗಳನ್ನು ಸೇರಿಕೊಳ್ಳಲು ಯತ್ನಿಸಿದ ದಾರುಣ ಸನ್ನಿವೇಶ ಈ ದೇಶದ ಆಡಳಿತ ವ್ಯವಸ್ಥೆಯ ಕ್ರೌರ್ಯದ ಮತ್ತೊಂದು ಮುಖವನ್ನು ಪರಿಚಯಿಸಿತ್ತು. ಬಿಸಿಲಿನ ಝಳ, ಕೊರೋನಾ ವೈರಾಣುವಿನ ಸೊಂಕು, ಆರೋಗ್ಯ ಸೇವೆಯ ಕೊರತೆ, ಸಾರಿಗೆ ವ್ಯವಸ್ಥೆಯ ಕೊರತೆ, ಹಸಿವಿನ ಬಳಲಿಕೆ ಮತ್ತು ಕೇಂದ್ರ ಹಾಗೂ ಸರ್ಕಾರಗಳ ನಿರ್ಲಕ್ಷ್ಯ ಸಾವಿರಾರು ವಲಸೆ ಕಾರ್ಮಿಕರನ್ನು ಬೀದಿಪಾಲು ಮಾಡಿತ್ತು.

ಈ ದುರವಸ್ಥೆಯ ನಡುವೆಯೇ ನೂರಾರು ವಲಸೆ ಕಾರ್ಮಿಕರು ರಸ್ತೆಗಳಲ್ಲಿ, ಚಲಿಸುವ ರೈಲುಗಳಲ್ಲಿ ಮೃತಪಟ್ಟಿದ್ದರು. ದುರಂತ ಎಂದರೆ ದೇಶದಲ್ಲಿ ಲಕ್ಷಾಂತರ ಅಕ್ರಮ ವಲಸಿಗರು ಇರುವ ಮಾಹಿತಿ ಇದೆ ಎಂದು ಹೇಳುತ್ತಿದ್ದ ಕೇಂದ್ರ ಸರ್ಕಾರಕ್ಕೆ ಯಾವ ರಾಜ್ಯದಲ್ಲಿ ಎಷ್ಟು ವಲಸೆ ಕಾರ್ಮಿಕರಿದ್ದಾರೆ ಎನ್ನುವ ಕನಿಷ್ಟ ಮಾಹಿತಿಯನ್ನೂ ಒದಗಿಸಲಾಗಲಿಲ್ಲ. ಲಾಕ್‍ಡೌನ್ ವಿಧಿಸಿದ 15 ದಿನಗಳ ನಂತರ ಒಮ್ಮೆಲೆ ಹರಿದುಬಂದ ಲಕ್ಷಾಂತರ ವಲಸೆ ಕಾರ್ಮಿಕರ ದಂಡು ಎಲ್ಲ ರಾಜ್ಯಗಳ ಆಡಳಿತ ವ್ಯವಸ್ಥೆಯನ್ನು ಕಂಗೆಡಿಸಿದ್ದನ್ನು ಕಂಡಿದ್ದೇವೆ.

ಈ ಪರಿಸ್ಥಿತಿಯನ್ನು ನಿವಾರಿಸುವಲ್ಲಿ ಸರ್ಕಾರಗಳು ಯಶಸ್ವಿಯಾದರೂ ಆ ವೇಳೆಗಾಗಲೇ ನೂರಾರು ಕಾರ್ಮಿಕರು ಅಸು ನೀಗಿದ್ದರು. ಸಾವಿರಾರು ಕುಟುಂಬಗಳು ತಮ್ಮ ನೆಲೆ ಕಳೆದುಕೊಂಡಿದ್ದವು. ದುರಂತ ಎಂದರೆ ಈ ಅವ್ಯವಸ್ಥೆಯಲ್ಲಿ ಮಡಿದ ವಲಸೆ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ಯಾವುದೇ ಪರಿಹಾರವನ್ನೂ ಘೋಷಿಸಲಾಗಿಲ್ಲ. ಇದು ಪ್ರಭುತ್ವದ ಕ್ರೌರ್ಯದ ಮತ್ತೊಂದು ನಿದರ್ಶನ.

ಈ ದುರಂತಗಳ ನಡುವೆಯೇ, ದೇಶದ ಅಸಂಖ್ಯಾತ ಜನತೆ ತಮ್ಮ ನಾಳಿನ ಚಿಂತೆಯಲ್ಲಿ ಕಾಲ ಕಳೆಯುತ್ತಿರುವ ಸಂದರ್ಭದಲ್ಲೇ, ದುಡಿಯುವ ವರ್ಗಗಳ, ಶ್ರಮಜೀವಿಗಳ ಬದುಕಿಗೆ ಭರವಸೆ ನೀಡುವ ಕ್ರಮಗಳನ್ನು ಕೈಗೊಳ್ಳುವ ಬದಲು ಕೇಂದ್ರ ಸರ್ಕಾರ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಕಾನೂನುಗಳನ್ನು ರೂಪಿಸಲು ಮುಂದಾಗಿತ್ತು.

ಒಂದು ವರ್ಷದ ಕಾಲ ತುಟ್ಟಿ ಭತ್ಯೆಯನ್ನು ತಡೆಹಿಡಿಯುವುದು, ಕಾರ್ಖಾನೆಗಳಲ್ಲಿ ದುಡಿಯುವ ಅವಧಿಯನ್ನು ಹೆಚ್ಚಿಸುವುದು, ಕಾರ್ಮಿಕರ ಸಂಘಟನೆಯ ಹಕ್ಕುಗಳನ್ನು ಕಸಿದುಕೊಳ್ಳುವುದು ಮತ್ತು ಕಾರ್ಖಾನೆಗಳ ಮಾಲಿಕರಿಗೆ ಕಡಿಮೆ ವೇತನ ನೀಡಲು ಅಧಿಕಾರ ನೀಡುವುದು ಹೀಗೆ ಹಲವು ಕಾರ್ಮಿಕ ವಿರೋಧಿ ನಿಯಮಗಳನ್ನು ಕೋವಿದ್ 19 ಉಲ್ಬಣಿಸುತ್ತಿದ್ದ ಸಂದರ್ಭದಲ್ಲೇ ಜಾರಿಗೊಳಿಸಿದ ಕೇಂದ್ರ ಸರ್ಕಾರ ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸಲೆಂದೇ ದಶಕಗಳ ಹೋರಾಟದ ಪರಿಣಾಮವಾಗಿ ರೂಪಿಸಲಾಗಿದ್ದ 44 ಕಾರ್ಮಿಕ ಕಾಯ್ದೆಗಳನ್ನು ಕೇವಲ ನಾಲ್ಕು ಸಂಹಿತೆಗಳಲ್ಲಿ ಅಡಕಿಸುವ ಮೂಲಕ ಕಾರ್ಮಿಕರ ಎಲ್ಲ ಹಕ್ಕುಗಳನ್ನೂ ಕಸಿದುಕೊಳ್ಳುವ ಹೊಸ ಮಸೂದೆಯನ್ನು ಜಾರಿಗೊಳಿಸಿತ್ತು.

ಉಪವಾಸ, ಹಸಿವು, ಬಡತನ, ದಾರಿದ್ರ್ಯ, ಅನಾರೋಗ್ಯ ಮತ್ತೊ ಕೋವಿದ್‍ನಂತಹ ಮಾರಣಾಂತಿಕ ಪಿಡುಗು ಇಷ್ಟೆಲ್ಲಾ ಗಂಭೀರ ಸಮಸ್ಯೆಗಳ ನಡುವೆ ದೇಶದ ಶ್ರಮಜೀವಿಗಳ ಕತ್ತುಹಿಸುಕುವ ಈ ಕಾಯ್ದೆಗಳನ್ನು ಜಾರಿಗೊಳಿಸಲು ಯತ್ನಿಸುವುದು ಕ್ರೌರ್ಯದ ಪರಮಾವಧಿಯಲ್ಲವೇ ?

ಕೋವಿದ್ 19 ಸಂದರ್ಭದಲ್ಲಿ ಜನಸಂದಣಿಯಾಗದಂತೆ ನಿರ್ಬಂಧಗಳನ್ನು ವಿಧಿಸಿ, ಸಾರ್ವಜನಿಕ ಪ್ರತಿಭಟನೆಗಳಲ್ಲಿ ಸೇರಬಹುದಾದ ಜನರ ಸಂಖ್ಯೆಗೆ ನಿರ್ಬಂಧ ವಿಧಿಸಿ, ಜನವಿರೋಧಿ ಕಾನೂನುಗಳನ್ನು, ತಿದ್ದುಪಡಿ ಮಸೂದೆಗಳನ್ನು ಸಂಸತ್ತಿನಲ್ಲಿ ಚರ್ಚಿಸದೆಯೇ , ಸುಗ್ರೀವಾಜ್ಞೆಗಳ ಮೂಲಕ ಜಾರಿಗೊಳಿಸುವುದು ಪ್ರಜಾತಂತ್ರದ ಕಗ್ಗೊಲೆ ಅಲ್ಲವೇ ? ಈ ಸಂದರ್ಭದಲ್ಲೇ ಕೇಂದ್ರ ಸರ್ಕಾರ ದೇಶದ ಕೃಷಿ ವ್ಯವಸ್ಥೆಯ ಮೂಲ ಸ್ವರೂಪವನ್ನೇ ವಿರೂಪಗೊಳಿಸುವ ಮೂರು ಕೃಷಿ ಮಸೂದೆಗಳನ್ನು ಸಂಸತ್ತಿನಲ್ಲಿ ಅಂಗೀಕರಿಸಿದೆ.

ಶಾಸನ ಸಭೆಗಳಲ್ಲಿ ಸ್ಪಷ್ಟ ಬಹುಮತ ಇರುವ ಒಂದು ಸರ್ಕಾರ ತನ್ನ ಸಂಖ್ಯಾಬಲವನ್ನೇ ಅಸ್ತ್ರದಂತೆ ಬಳಸಿ ರೈತರ ಪಾಲಿಗೆ ಮಾರಣಾಂತಿಕ ಎನ್ನಬಹುದಾದ ಮೂರು ಮಸೂದೆಗಳನ್ನು ಜಾರಿಗೊಳಿಸಿದೆ. ಇಂದು ದೆಹಲಿಯಲ್ಲಿ ಮುಷ್ಕರ ಹೂಡಿರುವ ಲಕ್ಷಾಂತರ ರೈತರ ಒಕ್ಕೊರಲ ದನಿ ಈ ಕ್ರೌರ್ಯದ ವಿರುದ್ಧ ಪ್ರತಿಧ್ವನಿಸುತ್ತಿದೆ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಮಸ್ತ ದೇಶದ ಜನತೆ ಸರ್ಕಾರದ ಆಡಳಿತ ನೀತಿಯನ್ನು, ಕಾರ್ಯನೀತಿಗಳನ್ನು ಮತ್ತು ಶಾಸನಗಳನ್ನು ವಿರೋಧಿಸುವಾಗ ಆಡಳಿತಾರೂಢ ಪಕ್ಷಕ್ಕೆ, ಜನರ ಬಳಿ ಕುಳಿತು ಮಾತನಾಡುವ ಕನಿಷ್ಟ ಮಾನವೀಯ ಪ್ರಜ್ಞೆ ಇರಬೇಕಾಗುತ್ತದೆ. ನರೇಂದ್ರ ಮೋದಿ ಸರ್ಕಾರ ದೆಹಲಿಯ ಗಡಿಯಲ್ಲಿ, ತೀವ್ರವಾದ ಚಳಿಯಲ್ಲಿ ನೆರೆದ ಲಕ್ಷಾಂತರ ರೈತರೊಡನೆ ಮಾತನಾಡುವ ಬದಲು ಜಲಫಿರಂಗಿಗಳ ಮೂಲಕ, ಅಶ್ರುವಾಯು ಮೂಲಕ, ಪೊಲೀಸರ ಲಾಠಿಯ ಮೂಲಕ ಸ್ಪಂದಿಸಿರುವುದು ಪ್ರಭುತ್ವದ ಕ್ರೌರ್ಯದ ಮತ್ತೊಂದು ನಿದರ್ಶನ.

ಹೋರಾಟಗಾರರ ಸಮಸ್ಯೆಗಳನ್ನು ಆಲಿಸುವ ವಿವೇಚನೆ, ವಿವೇಕ ಮತ್ತು ವ್ಯವಧಾನವನ್ನು ಸಂಪೂರ್ಣ ಕಳೆದುಕೊಂಡಿರುವ ಒಂದು ಆಡಳಿತ ವ್ಯವಸ್ಥೆ ಮುಷ್ಕರ ನಿರತ ರೈತರಲ್ಲಿ ದಲ್ಲಾಳಿಗಳನ್ನು, ಖಲಿಸ್ತಾನಿಗಳನ್ನು, ಪಾಕಿಸ್ತಾನಿಯರನ್ನು, ನಗರ ನಕ್ಸಲರನ್ನು, ಭಯೋತ್ಪಾದಕರನ್ನು ಗುರುತಿಸಲು ಯತ್ನಿಸುವುದು ಪ್ರಜಾತಂತ್ರ ವ್ಯವಸ್ಥೆಗೆ ಅವಮಾನ ಮಾಡಿದಂತಾಗುತ್ತದೆ.

ಇಂದು ದೆಹಲಿಯಲ್ಲಿ ಈ ಕ್ರೌರ್ಯವನ್ನು ಕಾಣುತ್ತಿದ್ದೇವೆ. ತಮ್ಮ ಸಮಸ್ಯೆಗಳ ನಿವಾರಣೆಗಾಗಿ ದೇಶದ ರಾಜಧಾನಿಯಲ್ಲಿ ಬೀಡುಬಿಟ್ಟಿರುವ ಲಕ್ಷಾಂತರ ರೈತರನ್ನು ದೇಶದ್ರೋಹಿಗಳಂತೆ ಕಾಣುವ ಒಂದು ನಿರ್ದಯಿ ಸರ್ಕಾರವನ್ನು ನಾವೇ ಆಯ್ಕೆ ಮಾಡಿರುವುದು ಶತಮಾನದ ದುರಂತ. ಲಾಕ್ ಡೌನ್ ಸಂದರ್ಭದಲ್ಲಿ ಮಡಿದ ವಲಸೆ ಕಾರ್ಮಿಕರು, ಇಂದು ದೆಹಲಿಯಲ್ಲಿ ಸಾವು ಬದುಕಿನ ಹೋರಾಟ ನಡೆಸುತ್ತಿರುವ ರೈತರು, ಹಸಿವಿನಿಂದ ಸಾಯುತ್ತಿರುವ ಅಸಂಖ್ಯಾತ ಬಡಜನತೆ ಇವರೆಲ್ಲರೂ ಆಳುವ ವರ್ಗಗಳ ದೃಷ್ಟಿಯಲ್ಲಿ ನಿಕೃಷ್ಟರಾಗಿ ಕಾಣುತ್ತಿದ್ದಾರೆ.

ದೆಹಲಿಯ ನೀತಿಗಳನ್ನೇ ಯಥಾವತ್ತಾಗಿ ಅನುಸರಿಸುವ ಕರ್ನಾಟಕದ ಬಿಜೆಪಿ ಸರ್ಕಾರ ತನ್ನ ಸ್ವಂತ ವಿವೇಚನೆಯನ್ನೂ ಕಳೆದುಕೊಂಡು, ವಿಧಾನಸಭೆಯಲ್ಲಿ ಯಾವುದೇ ಚರ್ಚೆ ನಡೆಸದೆ ಭೂ ಸ್ವಾಧೀನ ಮಸೂದೆಯನ್ನು ಅಂಗೀಕರಿಸುತ್ತದೆ.

ರಾಜ್ಯ ರಾಜಧಾನಿಯಲ್ಲಿ ಭೂ ಸ್ವಾಧೀನ ಕಾಯ್ದೆಯ ವಿರುದ್ಧ, ನೂತನ ಕೃಷಿ ನೀತಿಯ ವಿರುದ್ಧ ಹೋರಾಡುತ್ತಿರುವ ರೈತಾಪಿ ಮತ್ತು ಕಾರ್ಮಿಕರೊಡನೆ ಮಾತುಕತೆ ನಡೆಸುವ ಸೌಜನ್ಯವನ್ನೂ ಕಳೆದುಕೊಂಡಿರುವ ರಾಜ್ಯ ಬಿಜೆಪಿ ಸರ್ಕಾರ ಈ ಗೊಂದಲದ ನಡುವೆಯೇ ಗೋ ಹತ್ಯೆ ನಿಷೇಧ ಕಾಯ್ದೆಯನ್ನೂ ಅಂಗೀಕರಿಸುತ್ತದೆ.

ಸರ್ಕಾರದ ಆಡಳಿತ ನೀತಿಗಳ ವಿರುದ್ಧ ಮತ್ತು ಜನವಿರೋಧಿ ಕಾಯ್ದೆಗಳ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುವ ಪ್ರತಿಯೊಂದು ದನಿಯನ್ನೂ “ ಭೌಗೋಳಿಕ ದೇಶ ಮತ್ತು ಕಾಲ್ಪನಿಕ ಪ್ರೇಮ ”ದ ಚೌಕಟ್ಟಿನಲ್ಲಿರಿಸಿ ದೇಶದ್ರೋಹದ ಪಟ್ಟ ಕಟ್ಟುವ ಒಂದು ಪರಂಪರೆಯನ್ನು ನರೇಂದ್ರ ಮೋದಿ ಸರ್ಕಾರ ಅನುಸರಿಸುತ್ತಿದೆ. ಯುಎಪಿಎ ಎನ್ನುವ ಕರಾಳ ಶಾಸನ, ಎನ್‍ಐಎ ಎನ್ನುವ ಒಂದು ದಮನಕಾರಿ ಸಂಸ್ಥೆಯ ಮೂಲಕ ಪ್ರಜಾತಂತ್ರದ ದನಿಗಳನ್ನು ವ್ಯವಸ್ಥಿತವಾಗಿ ದಮನಿಸುವ ಒಂದು ಪರಂಪರೆಗೂ ಸುಭದ್ರ ಬುನಾದಿ ಹಾಕಲಾಗಿದೆ.

ದೆಹಲಿಯಲ್ಲಿ ನೂತನ ಸಂಸತ್ ಭವನದ ಶಂಕುಸ್ಥಾಪನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ, ಇದು ಭವಿಷ್ಯ ಭಾರತದ, ಆತ್ಮನಿರ್ಭರ ಭಾರತದ ನಿರ್ಮಾಣಕ್ಕೆ ಸಾಕ್ಷೀಭೂತವಾಗುವ ಒಂದು ಸ್ಥಾವರ ಎಂದು ಹೇಳಿರುವುದು ಆಕರ್ಷಣೀಯವಾಗಿ ಕಾಣುತ್ತದೆ.

ಆದರೆ ಈ ಆತ್ಮನಿರ್ಭರ ಭಾರತದಲ್ಲಿ ಈ ದೇಶದ ಬಹುಮುಖಿ ಸಂಸ್ಕøತಿ, ಬಹುತ್ವದ ನೆಲೆಗಳು, ಪ್ರಜಾತಂತ್ರದ ಮೌಲ್ಯಗಳು ಮತ್ತು ಸಾಂವಿಧಾನಿಕ ತತ್ವಗಳು ಸಮಾಧಿಯಾಗುತ್ತಿರುವುದನ್ನು ಗಮನಿಸಿದಾಗ, ನೂತನ ಸಂಸತ್ ಭವನದಲ್ಲಿ ಪ್ರಜಾತಂತ್ರದ ಛಾಯೆ ಸುಳಿಯಲು ಸಾಧ್ಯವೇ ಎಂದು ಅನುಮಾನವಾಗುತ್ತದೆ. ಬಹುಶಃ ಸ್ವತಂತ್ರ ಭಾರತದ ಇತಿಹಾಸದಲ್ಲಿ , ತುರ್ತುಪರಿಸ್ಥಿತಿಯ ಸಂದರ್ಭದಲ್ಲೂ ಸಹ, ಭಾರತದ ಆಳುವ ವರ್ಗ ಈ ಮಟ್ಟಿಗೆ ಕ್ರೌರ್ಯ ಪ್ರದರ್ಶಿಸಿರಲಿಲ್ಲ.

ಈ ಕ್ರೌರ್ಯಕ್ಕೆ ಬಲಿಯಾಗುತ್ತಿರುವುದು ಕೇವಲ ಸಾಂವಿಧಾನಿಕ ಪ್ರಜಾತಂತ್ರ ಮೌಲ್ಯಗಳನ್ನು ಎತ್ತಿಹಿಡಿಯುವ ವಿವೇಕಯುತ ದನಿಗಳು ಮಾತ್ರವೇ ಅಲ್ಲ. ಭಾರತದ ನ್ಯಾಯಿಕ ವ್ಯವಸ್ಥೆಯೇ ಬಲಿಯಾಗುತ್ತಿದೆ. ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಿರುವ ಸಾರ್ವಭೌಮ ಪ್ರಜೆಗಳ ದನಿಗಳು ಆಡಳಿತ ವ್ಯವಸ್ಥೆಯ ಕ್ರೌರ್ಯದ ನಡುವೆ ಕಳೆದುಹೋಗುತ್ತಿವೆ.

ಬಹುತ್ವ ಮತ್ತು ಪ್ರಜಾತಂತ್ರ ಈ ದೇಶದ ಅಂತರಾತ್ಮ. ಈ ಅಂತರಾತ್ಮವನ್ನೇ ಹೊಸಕಿಹಾಕುತ್ತಿರುವ ಸಂದರ್ಭದಲ್ಲಿ ಭಾರತದ ಪ್ರಜೆಗಳು ತಮ್ಮ ಆತ್ಮನಿರ್ಭರತೆಯನ್ನು ಗುರುತಿಸಲು ಹೆಣಗಾಡುತ್ತಿದ್ದಾರೆ. ಇದರ ಒಂದು ಪ್ರಾತ್ಯಕ್ಷಿಕೆಯನ್ನು ರೈತ ಕಾರ್ಮಿಕರ ಹೋರಾಟದ ದನಿಗಳಲ್ಲಿ ಗುರುತಿಸಬಹುದು.

ಸರ್ಕಾರಗಳು ಗೋ ಹತ್ಯೆಯನ್ನು, ಅಂತರ್ಧರ್ಮೀಯ ವಿವಾಹಗಳನ್ನು ನಿಷೇಧಿಸಲು ಸಜ್ಜಾಗುತ್ತಿವೆ. ಸಂವಿಧಾನದ ತತ್ವಗಳಲ್ಲಿ, ಮೌಲ್ಯಗಳಲ್ಲಿ ವಿಶ್ವಾಸ ಇರುವ ಸ್ವತಂತ್ರ ಭಾರತದ ಸಾರ್ವಭೌಮ ಪ್ರಜೆಗಳು ಪ್ರಜಾತಂತ್ರ ಮೌಲ್ಯಗಳ ಹತ್ಯೆಯನ್ನು ನಿಷೇಧಿಸಲು ಸಜ್ಜಾಗಬೇಕಿದೆ. ಇಂದು ಎದ್ದು ನಿಲ್ಲದಿದ್ದರೆ ಬಹುಶಃ ಎಂದಿಗೂ ಎದ್ದು ನಿಲ್ಲಲಾಗುವುದಿಲ್ಲ ಈ ಪ್ರಜ್ಞೆ ಭಾರತದ ನಾಗರಿಕ ಪ್ರಜೆಗಳಲ್ಲಿದ್ದರೆ ಬಹುಶಃ ಪ್ರಜಾತಂತ್ರ ಉಳಿಯುತ್ತದೆ. ನೂತನ ಸಂಸತ್ ಭವನದಲ್ಲಿ ಪ್ರಜಾತಂತ್ರದ ಸುಳಿವು ಕಾಣಲು ಸಾಧ್ಯವಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಅಲ್ಪಸಂಖ್ಯಾತರ ಇಲಾಖೆ ನಿರ್ದೇಶಕ ಜಿಲಾನಿ ಎಚ್. ಮೊಕಾಶಿ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ:ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಇಲಾಖೆಯ ನಿಯಮಾನುಸಾರ ಬಯೋಟ್ರಿಕ್ ಹಾಜರಾತಿ ಅಳವಡಿಸಿಕೊಳ್ಳದೆ ಸರ್ಕಾರಕ್ಕೆ ವಂಚಿಸಿರುವ ಬಗ್ಗೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರಾದ ಜಿಲಾನಿ ಎಚ್. ಮೊಕಾಶಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರತಿದಿನದ ಹಾಜರಾತಿಯನ್ನು ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯ ಮೂಲಕ ಕಡ್ಡಾಯವಾಗಿ ನಿರ್ವಹಿಸಲು ದಿನಾಂಕ: 12-07-2022 ರಂದು ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ, ಬೆಂಗಳೂರು ಇವರು ಸುತ್ತೋಲೆ ಹೊರಡಿಸಿದ್ದಾರೆ.

ಸದರಿ ಸುತ್ತೋಲೆಯಲ್ಲಿ ‘ಎಲ್ಲಾ ನಿಲಯಪಾಲಕರು/ ಮೇಲ್ವಿಚಾರಕರು ಬೆಲಗ್ಗೆ ತಿಂಡಿ ಸಮಯದಲ್ಲಿ ಹಾಗೂ ರಾತ್ರಿ ಊಟದ ಸಮಯದಲ್ಲಿ ವಸತಿ ಶಾಲೆ/ಕಾಲೇಜು ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಕಡ್ಡಾಯವಾಗಿ ಹಾಜರಿದ್ದು, ವಿದ್ಯಾರ್ಥಿಗಳ ಬಯೋಮೆಟ್ರಿಕ್ ಹಾಜರಾತಿಯನ್ನು ಪಡೆಯತಕ್ಕದ್ದು’ ಎಂಬುದಾಗಿ ಸೂಚಿಸಲಾಗಿದೆ.

‘ಬಯೋಮೆಟ್ರಿಕ್ ಹಾಜರಾತಿ ಪಡೆಯದೆ ಆಹಾರ ವೆಚ್ಚ ಭರಿಸಿದ್ದಲ್ಲಿ ಸಂಬAಧಪಟ್ಟ ನಿಲಯಪಾಲಕರು, ಅಲ್ಪಸಂಖ್ಯಾತರ ತಾಲ್ಲೂಕು ವಿಸ್ತರಣಾಧಿಕಾರಿಗಳು/ ಪ್ರಾಂಶುಪಾಲರು, ಜಿಲ್ಲಾ ಅಧಿಕಾರಿಗಳನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಿ ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸಲಾಗುವುದು’ ಎಂಬುದಾಗಿ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿರುತ್ತದೆ.

ಆದರೆ ದಾವಣಗೆರೆ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳದೆ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವ ಮಾಹಿತಿ ಆಧಾರದಲ್ಲಿ ದಿನಾಂಕ: 28-11-2025 ರಂದು ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಾವಣಗೆರೆ ಇವರಿಗೆ ದಿನಾಂಕ: 28-11-2025 ರಂದು ದೂರು ನೀಡಿ ‘ದಾವಣಗೆರೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಅಳವಡಿಸಿರುವ ಬಯೋಮೆಟ್ರಿಕ್ ಹಾಜರಾತಿ ನಿರ್ವಹಣೆಯನ್ನು ತನಿಖೆಗೆ ಒಳಪಡಿಸುವಂತೆ’ ಕೋರಲಾಗಿತ್ತು.

ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಾವಣಗೆರೆ ಇವರು ನೀಡಿದ ಹಿಂಬರಹದಲ್ಲಿ ‘ಈ ಸಂಬAಧ ಜಿಲ್ಲೆಯ ಕೆಲವು ವಸತಿ ನಿಲಯಗಳಲ್ಲಿ ಬಯೋಮೆಟ್ರಿಕ್ ಯಂತ್ರದಲ್ಲಿನ ತಾಂತ್ರಿಕ ದೋಷದಿಂದ ವಿದ್ಯಾರ್ಥಿಗಳ ಹಾಜರಾತಿಯನ್ನು ದಾಖಲಿಸಲು ಸಾಧ್ಯವಾಗಿರುವುದಿಲ್ಲವೆಂದು ಹಾಗೂ ಮತ್ತೆ ಕೆಲವು ವಸತಿ ಶಾಲೆ ಮತ್ತು ವಸತಿ ನಿಲಯಗಳಿಗೆ ಹೊಸ ಬಯೋಮೆಟ್ರಿಕ್ ಯಂತ್ರವನ್ನು ಪೂರೈಕೆ ಮಾಡುವಂತೆ ಪ್ರಾಂಶುಪಾಲರುಗಳು ಮತ್ತು ತಾಲ್ಲೂಕು ವಿಸ್ತರಣಾಧಿಕಾರಿಗಳು ಕೋರಿರುವ ಪತ್ರವನ್ನು ಲಗತ್ತಿಸಿ’ ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶಕರು, ಬೆಂಗಳೂರು ಇವರಿಗೆ ಪತ್ರ ಬರೆಯಲಾಗಿದೆ ಎಂಬುದಾಗಿ ತಿಳಿಸಿರುತ್ತಾರೆ.

ಆದ ಕಾರಣ ದಿನಾಂಕ: 17-02-2026 ರಂದು ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ, ಬೆಂಗಳೂರು ಇವರಿಗೆ ದೂರು ನೀಡಿ ದಾವಣಗೆರೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಇಲಾಖೆಯ ನಿಯಮಾನುಸಾರ ಬಯೋಟ್ರಿಕ್ ಹಾಜರಾತಿ ಅಳವಡಿಸಿಕೊಳ್ಳದೆ ಸರ್ಕಾರಕ್ಕೆ ವಂಚಿಸಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ವರದಿಯನ್ನು ಒಂದು ತಿಂಗಳ ಒಳಗಾಗಿ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಕೋರಲಾಗಿತ್ತು. ಆದರೆ ದೂರು ನೀಡಿ 3 ತಿಂಗಳು ಕಳೆದರೂ ಅಲ್ಪಸಂಖ್ಯಾತರ ನಿರ್ದೇಶನಾಲಯ ನಿರ್ದೇಶಕರಾದ ಜಿಲಾನಿ ಎಚ್. ಮೊಕಾಶಿ ಇವರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಳ್ಳಾರಿ ಗಾಂಧಿನಗರ ಠಾಣೆಯ ವ್ಯಾಪ್ತಿ ಜೂಜಾಟ | ಠಾಣೆಯ ಅಧಿಕಾರಿಗಳು ಮೌನ ; ಕ್ರಮ ಕೈಗೊಳ್ತಾರಾ ಎಸ್ ಪಿ..?

Published

on

ಗಿರೀಶ್ ಬಳ್ಳಾರಿ

ಸುದ್ದಿದಿನ,ಬಳ್ಳಾರಿ:ನಗರದ ಗಾಂಧಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ರಾತ್ರಿ 10 ಗಂಟೆಯ ನಂತರ ಕೊಂಡಯ್ಯ ಫ್ಯಾಕ್ಟರಿಯ ಹುಸೇನ್ ನಗರದ ಜಾಲಿ ಬೇಲಿಯ ಒಳಭಾಗದಲ್ಲಿ ಅಕ್ರಮವಾಗಿ ಇಸ್ಪೀಟ್ ಆಡುತ್ತಿದ್ದಾರೆ ಜೊತೆಗೆ ಆ ಪ್ರದೇಶಕ್ಕೆ ಹೋಗುವ ಈ ಜೂಜಾಟ ಆಡುವವರು ಬೈಕ್ ಗಳ ಶಬ್ದ ಮಾಡಿಕೊಂಡು, ಮನೆಗಳಲ್ಲಿ ಇರುವ ಮಹಿಳೆಯರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ ಎನ್ನುವ ಆರೋಪ ಸ್ಥಳೀಯ ನಿವಾಸಿಗಳಿಂದ ಕೇಳಿ ಬಂದಿದೆ.

ಇನ್ನು ಈ ಇಸ್ಪೀಟ್ ಜೂಜಾಟ ಆಡಿಸುತ್ತಿರುವ ವ್ಯಕ್ತಿಗಳು ದುಬ್ಬ ರಾಜು, ದಾದು ಮತ್ತು ಜಾನಿ, ರಘು ಎಂದು ತಿಳಿದು ಬಂದಿದೆ. ಇನ್ನು ಗಾಂಧಿನಗರ ಠಾಣೆಯ ಸಿಪಿಐ ಮತ್ತು ಪಿ.ಎಸ್.ಐ ಮತ್ತು ಕ್ರೈಂ ಸಿಬ್ಬಂದಿಗಳಿಗೆ ಮಾಹಿತಿ ಇದ್ದರು ಅವರಿಂದ ಹಣ ಪಡೆದುಕೊಂಡು ಈ ಜೂಜಾಟ ಆಡಿಸುತ್ತಿರುವ ಮಾಹಿತಿ ಸಹ ಲಭ್ಯವಾಗಿದೆ.

ಸಾಧಿಕ್ ಪೊಲೀಸರಿಗೆ ಸಾಥ್

ಇನ್ನು ಸಾಧಿಕ್ ಎನ್ನುವ ವ್ಯಕ್ತಿ ಗಾಂಧಿನಗರ ಠಾಣೆಯ ಅನೇಕ ಪೊಲೀಸರಿಗೆ ಪರಿಚಯ ಇದ್ದಾನೆ ಅಂತ ಹೇಳಿ ಜನ ಸಾಮಾನ್ಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮಾಡಿ ಅವರ ವಿರುದ್ಧ ಠಾಣೆಯಲ್ಲಿ ಕೇಸ್ ಹಾಕಿಸುತ್ತೇನೆ ಎಂದು ಹಣ ವಸೂಲಿ ಸಹ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.

ಇನ್ನು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ನ ಪನ್ನಿಕರ್ ಪೊಲೀಸ್ ಠಾಣೆಯ ಸಿಪಿಐ ಮತ್ತು ಪಿಎಸ್ಐ ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ. ಇನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಕರೆಯನ್ನು ಸ್ವೀಕರಿಸಿಲಿಲ್ಲ.

“ಇನ್ನು ಗಾಂಧಿನಗರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವಿಚಂದ್ರ ಅವರಿಗೆ ದೂರವಾಣಿ ಮೂಲಕ ಮಾತನಾಡಿಸಿದಾಗ ನಮ್ಮ ಗಮನಕ್ಕೆ ಇಲ್ಲ, ಗೋತ್ತಾದ್ರೆ ರೈಡ್ ಮಾಡುತ್ತೇವೆ ಎಂದರು.”

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪಂಚಪಾಡಿ ಪದ್ಧತಿಯಲ್ಲಿ ವಿದ್ಯಾಭ್ಯಾಸ | ತ್ಯಾವಣಿಗೆಯ ಮಂದಾರ ಶಾಲೆಯಲ್ಲಿ ಪ್ರವೇಶ ಪ್ರಾರಂಭ

Published

on

~ವಿದ್ಯಾನಾಯ್ಕ್ ಅರೇಹಳ್ಳಿ

ಸುದ್ದಿದಿನ,ದಾವಣಗೆರೆ:ಚನ್ನಗಿರಿ ತಾಲೂಕು ವ್ಯಾಪ್ತಿಯ ತ್ಯಾವಣಿಗೆ ಗ್ರಾಮದಲ್ಲಿ ಪಂಚಪಾಡಿ ಮತ್ತು ಆಧುನಿಕ ಪದ್ಧತಿಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಒಂದು ವಿನೂತನ ಕಾರ್ಯಕ್ಕೆ ಮುಂದಡಿ ಇಟ್ಟಿದ್ದಾರೆ. ಪಂಚಪಾಡಿ ಕಲಿಕೆ ಎನ್ನುವುದು ಶಿಕ್ಷಣ ಕ್ಷೇತ್ರದಲ್ಲಿ ಬಳಸಲಾಗುವ ಒಂದು ವ್ಯವಸ್ಥಿತ ಮತ್ತು ಪ್ರಭಾವಶಾಲಿ ಬೋಧನಾ ವಿಧಾನವಾಗಿದ್ದು, ವಿಶೇಷವಾಗಿ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ – NEP ಯಲ್ಲೂ ಇದರ ಪ್ರಸ್ತಾಪವಿದೆ ಎನ್ನಲಾಗಿದೆ.

ಪಂಚಪಾಡಿ ಎಂದರೇನು?

ಪಂಚಪಾಡಿ ಎಂದರೆ ಮಗುವಿನ ಸಮಗ್ರ ವಿಕಾಸಕ್ಕಾಗಿ ಐದು ಹಂತಗಳ ಕಲಿಕಾ ಪ್ರಕ್ರಿಯೆಯನ್ನು ಬಳಸಲಾಗುತ್ತದೆ.
​ಅಂದರೆ ಜ್ಞಾನರ್ಜನೆಗೆ ಐದು ಹೆಜ್ಜೆಗಳು ಅಥವಾ ಐದು ಹಂತಗಳು ಎಂದರ್ಥ.

ಜ್ಞಾನವನ್ನು ಕೇವಲ ನೆನಪಿನಲ್ಲಿಟ್ಟುಕೊಳ್ಳುವುದರ ಬದಲಾಗಿ, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಈ ವಿಧಾನ ಸಹಾಯ ಮಾಡುತ್ತದೆ.

ಪಂಚಪಾಡಿ ಕಲಿಕೆಯ 5 ಹಂತಗಳು

ಅದಿತಿ ( ಪರಿಚಯ / ಗ್ರಹಿಕೆ): ​ಈ ಪದ್ಧತಿಯ ಮೊದಲ ಹಂತವೇ ಅದಿತಿ. ಇಲ್ಲಿ ವಿದ್ಯಾರ್ಥಿಗೆ ಹೊಸ ವಿಷಯವನ್ನು ಪರಿಚಯಿಸಲಾಗುತ್ತದೆ. ಶಿಕ್ಷಕರು ಕಥೆ,ಚಿತ್ರ ಉದಾಹರಣೆ ಅಥವಾ ಚಟುವಟಿಕೆಗಳ ಮೂಲಕ ಹೊಸ ವಿಷಯವನ್ನು ಮಗುವಿನ ಮುಂದೆ ಪ್ರಸ್ತುತಪಡಿಸುತ್ತಾರೆ. ಮಗು ವಿಷಯವನ್ನು ಕೇಳಿ, ನೋಡಿ ಗ್ರಹಿಸಲು ಆರಂಭಿಸುತ್ತದೆ.

ಬೋಧ : (ತಿಳುವಳಿಕೆ / ಅರ್ಥೈಸಿಕೊಳ್ಳುವಿಕೆ): ಪರಿಚಯಿಸಿಕೊಂಡ ವಿಷಯವನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಹಂತವಿದು. ಮಗು ವಿಷಯದ ಹಿಂದಿರುವ ಪರಿಕಲ್ಪನೆ ಮತ್ತು ಕಾರಣಗಳನ್ನು ಅರ್ಥಮಾಡಿಕೊಳ್ಳುತ್ತದೆ. ಪ್ರಶ್ನೆಗಳನ್ನು ಕೇಳುವ ಮೂಲಕ ಮತ್ತು ಚರ್ಚೆಗಳಲ್ಲಿ ಭಾಗವಹಿಸುವ ಮೂಲಕ ತನ್ನ ಗೊಂದಲಗಳನ್ನು ನಿವಾರಿಸಿಕೊಳ್ಳುತ್ತದೆ.

ಅಭ್ಯಾಸ : (ರೂಢಿಸಿಕೊಳ್ಳುವುದು / ತರಬೇತಿ): ಕಲಿತ ವಿಷಯ ಮನಸ್ಸಿನಲ್ಲಿ ಗಟ್ಟಿಯಾಗಲು ನಿರಂತರ ಸ್ಮರಣೆ ಅಥವಾ ಅಭ್ಯಾಸದ ಅಗತ್ಯವಿದೆ. ಮಕ್ಕಳು ಕಲಿತ ವಿಷಯವನ್ನು ಬರವಣಿಗೆ, ಗಣಿತದ ಲೆಕ್ಕಗಳು, ಪ್ರಯೋಗಗಳು ಅಥವಾ ಪುನರಾವರ್ತನೆ (Revision) ಮೂಲಕ ಅಭ್ಯಾಸ ಮಾಡುತ್ತಾರೆ. ಇದು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಕೇವಲ ಪುಸ್ತಕದಲ್ಲಿ ಕಲಿತದ್ದನ್ನು ನಿಜ ಜೀವನದಲ್ಲಿ ಅಥವಾ ಹೊಸ ಸಂದರ್ಭಗಳಲ್ಲಿ ಬಳಸಿ ನೋಡುವುದೇ ಪ್ರಯೋಗ.

​ಉದಾಹರಣೆಗೆ, ಗಣಿತದಲ್ಲಿ ‘ಲಾಭ-ನಷ್ಟ’ ಕಲಿತ ನಂತರ ಮಗು ಮಾರುಕಟ್ಟೆಗೆ ಹೋಗಿ ವ್ಯವಹಾರ ಮಾಡುವುದು, ಅಥವಾ ವಿಜ್ಞಾನದ ತತ್ವವನ್ನು ಪ್ರಾಜೆಕ್ಟ್ ಮೂಲಕ ಮಾಡಿ ನೋಡುವುದು.

ಪ್ರಸಾರ : (ಹಂಚಿಕೊಳ್ಳುವುದು) ​ಕಲಿಕೆಯ ಅತ್ಯುನ್ನತ ಹಂತವೆಂದರೆ ತಾನು ಕಲಿತ ಜ್ಞಾನವನ್ನು ಇತರರಿಗೆ ಮನವರಿಕೆ ಮಾಡಿಕೊಡುವುದು. ​ವಿದ್ಯಾರ್ಥಿ ತನಗೆ ತಿಳಿದ ವಿಷಯವನ್ನು ತನ್ನ ಸಹಪಾಠಿಗಳಿಗೆ ವಿವರಿಸುವುದು, ಭಾಷಣ ಮಾಡುವುದು ಅಥವಾ ಗುಂಪು ಚರ್ಚೆಯಲ್ಲಿ ಹಂಚಿಕೊಳ್ಳುವುದು. “ಕಲಿಸುವುದರಿಂದ ಕಲಿಕೆ ಪೂರ್ಣವಾಗುತ್ತದೆ” ಎಂಬ ತತ್ವ ಇದರ ಹಿಂದಿದೆ.

ಪಂಚಪಾಡಿ ಕಲಿಕೆಯ ಮಹತ್ವ

​”ಶುಷ್ಕ ಜ್ಞಾನಕ್ಕಿಂತ ಪ್ರಾಯೋಗಿಕ ಜ್ಞಾನವೇ ಮೇಲು.”
​ಇದು ಮಕ್ಕಳಲ್ಲಿ ಸ್ವಯಂ ಕಲಿಕೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ.

​ಕಂಠಪಾಠ ಮಾಡುವ ಪದ್ಧತಿಯನ್ನು ತಪ್ಪಿಸಿ, ವಿಷಯದ ಆಳವಾದ ತಿಳುವಳಿಕೆಗೆ ನೆರವಾಗುತ್ತದೆ.
​ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ್ಯವನ್ನು ಬೆಳೆಸುತ್ತದೆ.

ಶಾಲೆಯ ವೈಶಿಷ್ಟ

ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಸ್ಕಾರವನ್ನು ಕಲಿಸಬೇಕೆಂಬ ಮಹಾದಾಸೆಯಿಂದ ಶಾಲೆ ಪ್ರಾರಂಭ ಮಾಡಿರುವ ವೀಣಾ ಮಂಜುನಾಥ್ ಅವರು ಈ ಶಾಲೆಯಲ್ಲಿ ಸ್ಮಾರ್ಟ್ ತರಗತಿ, ಪ್ರೊಜೆಕ್ಟರ್ ಬಳಕೆ, 5ರಿಂದ 10ನೇ ತರಗತಿ ಮಕ್ಕಳಿಗೆ ವಿಶೇಷ ಬೋಧನೆ, ಚಟುವಟಿಕೆ ಆಧಾರಿತ ಕಲಿಕೆ, ಕರಾಟೆ, ಯೋಗ ಹೀಗೆ ವಿಭಿನ್ನ ರೀತಿಯ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಪ್ರಸ್ತುತ ಪೂರ್ವ ಪ್ರಾಥಮಿಕದಿಂದ 10ನೇ ತರಗತಿಯವರೆಗೆ ಮಕ್ಕಳಿಗೆ ಶಿಕ್ಷಣ ನೀಡುತ್ತಾ ಬಂದಿರುತ್ತದೆ. ಸಂಸ್ಥೆಯು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗಾಗಿ ಶಾಲೆಯಲ್ಲಿ ಪೀಠೋಪಕರಣಗಳು, ಪಾಠೋಪಕರಣಗಳು ,ಗ್ರಂಥಾಲಯ, ಆಟೋಪಕರಣಗಳು, ಕಂಪ್ಯೂಟರ್ ಮುಂತಾದ ಸೌಕರ್ಯಗಳನ್ನು ಹೊಂದಿರುತ್ತದೆ.

ಕಳೆದ ಕೆಲವು ವರ್ಷಗಳಿಂದ ಕರಾಟೆ ಮತ್ತು ಸ್ಪೋಕನ್ ಇಂಗ್ಲಿಷ್ ಶಿಕ್ಷಣವನ್ನು ನಮ್ಮ ಶಾಲೆಯಲ್ಲಿ ಪರಿಚಯಿಸಿದ್ದು ಎಲ್ ಕೆ ಜಿ ತರಗತಿಯಿಂದ ಹತ್ತನೇ ತರಗತಿಯವರೆಗೆ ಕರಾಟೆ ಮತ್ತು ಸ್ಪೋಕನ್ ಇಂಗ್ಲಿಷ್ ಶಿಕ್ಷಣವನ್ನು ಅಳವಡಿಸಲಾಗಿದೆ.

ಸಾಂಸ್ಕೃತಿಕ ವಾತಾವರಣವನ್ನು ಶಾಲೆಯಲ್ಲಿ ನಿರ್ಮಿಸಲು ಸಂಗೀತ , ಭರತನಾಟ್ಯ , ಯೋಗ , ಚಿತ್ರಕಲೆ , ಮುಂತಾದ ಚಟುವಟಿಕೆಗಳನ್ನು ಪರಿಚಯಿಸಲಾಗುವುದು. ಇಂಗ್ಲಿಷ್ , ಹಿಂದಿ ಭಾಷೆಗಳ ಕಲಿಕೆಗೆ ಮಕ್ಕಳಲ್ಲಿ ವಿಶೇಷ ಆಸಕ್ತಿಯನ್ನು ಬೆಳೆಸುವುದು.

ಒಟ್ಟಾರೆ ಸಂಸ್ಥೆಯು ವಿದ್ಯಾರ್ಥಿಗಳನ್ನು ಸರ್ವತೋಮುಖ ಅಭಿವೃದ್ಧಿಪಡಿಸಲು ಹಾಗೂ ದೇಶದ ಜವಾಬ್ದಾರಿಯುತ ಪ್ರಜೆಯನ್ನಾಗಿ ರೂಪಿಸುವ ಉದಾತ್ತ ಧ್ಯೇಯವನ್ನು ಇಟ್ಟುಕೊಂಡಿದ್ದೇವೆ ಎನ್ನುತ್ತಾರೆ ಶಾಲೆ ಮುಖ್ಯಸ್ಥರಾದ ವೀಣಾ ಮಂಜುನಾಥ್..

ಜೂನ್ 2ಕ್ಕೆ ಶಾಲಾ ಪ್ರವೇಶಕ್ಕೆ ಕೊನೆದಿನ

2010-11ನೇ ಸಾಲಿನಲ್ಲಿ ರಿಜಿಸ್ಟರ್ ಆದ ಈ ಶಾಲೆಯಲ್ಲಿ ಪ್ರಥಮವಾಗಿ 2012-13ರಲ್ಲಿ ಎಲ್ ಕೆಜಿ, ಯುಕೆಜಿ, 2014-15ನೇ ಸಾಲಿನಲ್ಲಿ 1ನೇ ತರಗತಿ, 2019-20ರಲ್ಲಿ 6ರಿಂದ 8ನೇ ತರಗತಿ, 2024-25ರಲ್ಲಿ 9ರಿಂದ 10ನೇ ತರಗತಿ ಹಂತ ಹಂತವಾಗಿ ಪ್ರಾರಂಭ ಮಾಡಲಾಗಿದೆ.

ಶಾಲೆಯ ವೈಶಿಷ್ಟ

ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಸ್ಕಾರವನ್ನು ಕಲಿಸಬೇಕೆಂಬ ಮಹಾದಾಸೆಯಿಂದ ಶಾಲೆ ಪ್ರಾರಂಭ ಮಾಡಿರುವ ವೀಣಾ ಮಂಜುನಾಥ್ ಅವರು ಈ ಶಾಲೆಯಲ್ಲಿ ಸ್ಮಾರ್ಟ್ ತರಗತಿ, ಪ್ರೊಜೆಕ್ಟರ್ ಬಳಕೆ, 5ರಿಂದ 10ನೇ ತರಗತಿ ಮಕ್ಕಳಿಗೆ ವಿಶೇಷ ಬೋಧನೆ, ಚಟುವಟಿಕೆ ಆಧಾರಿತ ಕಲಿಕೆ, ಕರಾಟೆ, ಯೋಗ ಹೀಗೆ ವಿಭಿನ್ನ ರೀತಿಯ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಪ್ರಸ್ತುತ ಪೂರ್ವ ಪ್ರಾಥಮಿಕದಿಂದ 10ನೇ ತರಗತಿಯವರೆಗೆ ಮಕ್ಕಳಿಗೆ ಶಿಕ್ಷಣ ನೀಡುತ್ತಾ ಬಂದಿರುತ್ತದೆ. ಸಂಸ್ಥೆಯು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗಾಗಿ ಶಾಲೆಯಲ್ಲಿ ಪೀಠೋಪಕರಣಗಳು, ಪಾಠೋಪಕರಣಗಳು ,ಗ್ರಂಥಾಲಯ, ಆಟೋಪಕರಣಗಳು, ಕಂಪ್ಯೂಟರ್ ಮುಂತಾದ ಸೌಕರ್ಯಗಳನ್ನು ಹೊಂದಿರುತ್ತದೆ.

ಕಳೆದ ಕೆಲವು ವರ್ಷಗಳಿಂದ ಕರಾಟೆ ಮತ್ತು ಸ್ಪೋಕನ್ ಇಂಗ್ಲಿಷ್ ಶಿಕ್ಷಣವನ್ನು ನಮ್ಮ ಶಾಲೆಯಲ್ಲಿ ಪರಿಚಯಿಸಿದ್ದು ಎಲ್ ಕೆ ಜಿ ತರಗತಿಯಿಂದ ಹತ್ತನೇ ತರಗತಿಯವರೆಗೆ ಕರಾಟೆ ಮತ್ತು ಸ್ಪೋಕನ್ ಇಂಗ್ಲಿಷ್ ಶಿಕ್ಷಣವನ್ನು ಅಳವಡಿಸಲಾಗಿದೆ.

ಸಾಂಸ್ಕೃತಿಕ ವಾತಾವರಣವನ್ನು ಶಾಲೆಯಲ್ಲಿ ನಿರ್ಮಿಸಲು ಸಂಗೀತ , ಭರತನಾಟ್ಯ , ಯೋಗ , ಚಿತ್ರಕಲೆ , ಮುಂತಾದ ಚಟುವಟಿಕೆಗಳನ್ನು ಪರಿಚಯಿಸಲಾಗುವುದು. ಇಂಗ್ಲಿಷ್ , ಹಿಂದಿ ಭಾಷೆಗಳ ಕಲಿಕೆಗೆ ಮಕ್ಕಳಲ್ಲಿ ವಿಶೇಷ ಆಸಕ್ತಿಯನ್ನು ಬೆಳೆಸುವುದು.

ಒಟ್ಟಾರೆ ಸಂಸ್ಥೆಯು ವಿದ್ಯಾರ್ಥಿಗಳನ್ನು ಸರ್ವತೋಮುಖ ಅಭಿವೃದ್ಧಿಪಡಿಸಲು ಹಾಗೂ ದೇಶದ ಜವಾಬ್ದಾರಿಯುತ ಪ್ರಜೆಯನ್ನಾಗಿ ರೂಪಿಸುವ ಉದಾತ್ತ ಧ್ಯೇಯವನ್ನು ಇಟ್ಟುಕೊಂಡಿದ್ದೇವೆ ಎನ್ನುತ್ತಾರೆ ಶಾಲೆ ಮುಖ್ಯಸ್ಥರಾದ ವೀಣಾ ಮಂಜುನಾಥ್..

2010-11ನೇ ಸಾಲಿನಲ್ಲಿ ರಿಜಿಸ್ಟರ್ ಆದ ಈ ಶಾಲೆಯಲ್ಲಿ ಪ್ರಥಮವಾಗಿ 2012-13ರಲ್ಲಿ ಎಲ್ ಕೆಜಿ, ಯುಕೆಜಿ, 2014-15ನೇ ಸಾಲಿನಲ್ಲಿ 1ನೇ ತರಗತಿ, 2019-20ರಲ್ಲಿ 6ರಿಂದ 8ನೇ ತರಗತಿ, 2024-25ರಲ್ಲಿ 9ರಿಂದ 10ನೇ ತರಗತಿ ಹಂತ ಹಂತವಾಗಿ ಪ್ರಾರಂಭ ಮಾಡಲಾಗಿದೆ. ಕೇವಲ ಪುಸ್ತಕ ಆಧಾರಿತ ಆಧುನಿಕ ಪದ್ಧತಿಯ ಕಲಿಕೆ ಮಾತ್ರವಲ್ಲದೆ ಹಿಂದಿನ ಗುರುಕುಲ ಮತ್ತು ಪ್ರಾಯೋಗಿಕ ಕಲಿಕೆಗೆ ಮಹತ್ವ ನೀಡಿ ಮಕ್ಕಳಿಗೆ ಉತ್ತಮ ರೀತಿಯ ವಿದ್ಯಾಭ್ಯಾಸ ನೀಡುವ ಮಹಾದಾಸೆ ಇದೆ.”

|  ವೀಣಾ ಮಂಜುನಾಥ್ ಮುಖ್ಯಸ್ಥರು

ಪ್ರವೇಶ ಪ್ರಾರಂಭ : ಸದರಿ ಶಾಲೆಯಲ್ಲಿ 2026-27ನೇ ಸಾಲಿನ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದೆ. ಮೇ 17ರಿಂದ ಆರಂಭವಾದ ಪ್ರವೇಶ ಪ್ರಕ್ರಿಯೆ ಜೂನ್ 2ಕ್ಕೆ ಕೊನೆಗೂಳ್ಳುತ್ತದೆ. ಸಂಪರ್ಕಿಸಿ : Mandara School Tyavanige 919148141665

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending