Connect with us

ಲೈಫ್ ಸ್ಟೈಲ್

ನೀಲಿ ನಾಲಿಗೆ ರೋಗ ಮತ್ತು ಚಿಕಿತ್ಸಾ ವಿಧಾನ

Published

on

ಸುದ್ದಿದಿನ ಡೆಸ್ಕ್ : ಕರ್ನಾಟಕದಲ್ಲಿ ನೀಲಿ ನಾಲಿಗೆ ರೋಗಕ್ಕೆ ಸಾವಿರಾರು ಆಡು, ಕುರಿಗಳು ಬಲಿಯಾಗುತ್ತಿದ್ದು, ವರ್ಷವೊಂದಕ್ಕೆ ಸುಮಾರು 18,600 ಆಡು, ಕುರಿಗಳು ಈ ಮಾರಣಾಂತಿಕ ಖಾಯಿಲೆಗೆ ತುತ್ತಾಗಿ ಸಾವನ್ನಪುತ್ತಿವೆ.

ಕುದುರೆನೊಣ ಮತ್ತು ಉಣ್ಣೆಹುಳ ಆಡು, ಕುರಿಗಳಿಗೆ ಕಚ್ಚುವುದರಿಂದ ನೀಲಿ ನಾಲಿಗೆ ರೋಗ ಹಬ್ಬುತ್ತದೆ. ನೀಲಿ ರೋಗದ ವೈರಾಣುವಿನಲ್ಲಿ 24 ಪ್ರಬೇಧಗಳಿದ್ದು, ನಮ್ಮ ರಾಜ್ಯದಲ್ಲಿ 6 ಪ್ರಬೇಧಗಳು ಈಗಾಗಲೇ ಪರಿಚಲನೆಯಲ್ಲಿವೆ.

ಆಡು, ಕುರಿಗಳನ್ನು ಕೊಲ್ಲುವ ಈ ನೀಲಿ ನಾಲಿಗೆ ರೋಗ 1904 ರಲ್ಲಿ ಮೊದಲು ಆಫ್ರಿಕಾದಲ್ಲಿ ಪತ್ತೆಯಾಯಿತು. ಭಾರತದಲ್ಲಿ ಇಷ್ಟೊಂದು ವ್ಯಾಪಕವಾಗಿ ಹರಡಿದ್ದು, ಕರ್ನಾಟಕದಲ್ಲಿ 15 ವರ್ಷಗಳಲ್ಲಿ ಸಾವಿರಾರು ಆಡು, ಕುರಿಗಳು ಸಾವನ್ನಪ್ಪಿವೆ.

ಸಾಮಾನ್ಯವಾಗಿ ಆಗಸ್ಟ್‍ನಿಂದ ಫೆಬ್ರವರಿವರೆಗೆ ವ್ಯಾಪಕವಾಗಿ ಕಂಡುಬರುವ ಈ ನೀಲಿ ನಾಲಿಗೆ ರೋಗ ಮಳೆ ನಿಂತ ಎರಡು ಮೂರು ವಾರಗಳ ನಂತರ ವ್ಯಾಪಕವಾಗಿ ಹರಡಲು ಶುರುಮಾಡುತ್ತದೆ. ಕುದುರೆನೊಣ ಮತ್ತು ಉಣ್ಣೆಹುಳ ಆಡು, ಕುರಿಗಳಿಗೆ ಕಚ್ಚುವುದರಿಂದ ನೀಲಿ ನಾಲಿಗೆ ರೋಗ ಹಬ್ಬುತ್ತದೆ. ತಗ್ಗು ಪ್ರದೇಶ, ನಿಂತ ನೀರು ಮತ್ತು ಜಾಗು ಪ್ರದೇಶಗಳು ಈ ಕುದುರೆ ನೊಣಗಳ ಆವಾಸ ಸ್ಥಾನ. ಮಳೆಗಾಲ ಮತ್ತು ಚಳಿಗಾಲಗಳಲ್ಲಿ ಇವುಗಳು ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆ ಇಡುವ ಮೂಲಕ ಸಂತಾನೋತ್ಪತ್ತಿ ವೃದ್ದಿಸಿಕೊಳ್ಳುತ್ತದೆ. ಇಂಥ ಸ್ಥಳಗಳಲ್ಲಿ ಕುರಿ ಮೇಯಿಸುವುದು ನೀಲಿ ನಾಲಿಗೆ ರೋಗಕ್ಕೆ ಆಹ್ವಾನ ನೀಡಿದಂತಾಗುತ್ತದೆ.

ನೀಲಿ ರೋಗದ ಲಕ್ಷಣಗಳು

ಕುರಿ ಇಲ್ಲವೇ ಮೇಕೆಗಳಿಗೆ ಮೊದಲು ತೀವ್ರವಾದ ಜ್ವರ ಬರುವುದು. ನಂತರ ಬಾಯಿಯಲ್ಲಿ ಜೊಲ್ಲು ಸುರಿಯುವುದು ಹಾಗೂ ಮೂಗಿನಲ್ಲಿ ಹಳದಿ ಮಿಶ್ರಿತ ಗೊಣ್ಣೆ ಕಾಣಿಸಿಕೊಳ್ಳುವುದು. ಕೆಲವೊಮ್ಮೆ ನಾಲಗೆಯು ಹಳದಿ ಬಣ್ಣಕ್ಕೆ ತಿರುಗುವುದು. ಬಾಯಿ, ಮೂಗು, ಮುಖ ಮತ್ತು ತಲೆಗಳಲ್ಲಿ ಬಾವು ಕಂಡುಬರುತ್ತದೆ. ಮೂಗಿನ ಒಳಪದರಗಳೆಲ್ಲಾ ಕೆಂಪಾಗಿ ತುಟಿ, ಒಸಡು ಮತ್ತು ನಾಲಿಗೆಯು ಊದಿಕೊಂಡಿರುತ್ತದೆ. ಒಸಡಿನ ಮೇಲ್ಬಾಗದಲ್ಲಿ ಹುಣ್ಣು ಕಾಣಿಸಿಕೊಳ್ಳುವುದು ಈ ರೋಗದ ಲಕ್ಷಣವಾಗಿರುತ್ತದೆ.

ಈ ಕಾರಣಗಳಿಂದಾಗಿ ಆಡು, ಕುರಿಗಳು ಮೇವು ತಿನ್ನಲಾಗದೆ ನಿಶಕ್ತಿಗೆ ಒಳಗಾಗುತ್ತವೆ. ನಂತರದ ದಿನಗಳಲ್ಲಿ ಕುಂಟಲು ಪ್ರಾರಂಭಿಸುತ್ತವೆ. ಕಾಲಿನ ಚರ್ಮ, ಗೊರಸು ಮತ್ತು ಸಂಧುಗಳಲ್ಲಿ ನೀಲಿ ಬಣ್ಣದ ಪಟ್ಟಿ ಕಾಣಿಸುತ್ತದೆ. ಕೆಲವು ಆಡು ಕುರಿಗಳು ಭೇಧಿ ಕಾಣಿಸಿಕೊಂಡು ನಿತ್ರಾಣಗೊಂಡು ಕತ್ತನ್ನು ಪಕ್ಕಕ್ಕೆ ವಾಲಿಸುತ್ತವೆ. ಸೂಕ್ತ ಸಮಯದಲ್ಲಿ ಆರೈಕೆ, ಆಹಾರ ಮತ್ತು ಚಿಕಿತ್ಸೆ ಸಿಗದಿದ್ದರೆ ಬಳಲಿಕೆಯಿಂದಾಗಿ ಸಾವನ್ನಪ್ಪಬಹುದು.

ನೀಲಿ ರೋಗ ಕಂಡುಬಂದಾಗ ಚಿಕಿತ್ಸೆ ಮಾಡುವ ವಿಧಾನ

ವೈರಾಣುವಿನಿಂದ ಹರಡುವ ಈ ಖಾಯಿಲೆಗೆ ಚಿಕಿತ್ಸೆ ನೀಡುವ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ. ಆದಾಗ್ಯೂ ಜ್ವರ, ನೋವು, ನಂಜು ನಿವಾರಣೆಗಾಗಿ ಚಿಕಿತ್ಸೆಯನ್ನು ನೀಡಬಹುದು. ರೋಗ ಹರಡುವ ಮುನ್ನವೇ ಲಸಿಕೆ ಹಾಕಿಸುವುದು ಅಗತ್ಯ.

ಮೂಗು ಒಸಡು ಮತ್ತು ಬಾಯಿಯನ್ನು ನಂಜು ನಿರೋಧಕ ದ್ರಾವಣ/ಅಡುಗೆ ಸೋಡಾದಿಂದ ಶುಚಿಗೊಳಿಸಬೇಕು. ಬಾಯಿಗೆ ಜೇನುತುಪ್ಪ ಸವರುವುದರಿಂದ ರೋಗ ಉಲ್ಬಣವಾಗುವುದನ್ನು ತಡೆಯಬಹುದು. ರಾಗಿ, ಜೋಳದ ಗಂಜಿ ಮತ್ತು ಹೆಸರು ಬೇಳೆ ಹೂರಣವನ್ನು ಕೊಟ್ಟು ಶಕ್ತಿಯನ್ನು ಹೆಚ್ಚಿಸುವ ಆರೈಕೆ ಮಾಡಿದರೆ ರೋಗಪೀಡಿತ ಕುರಿ/ಮೆಕೆಗಳನ್ನು ಬದುಕಿಸಿಕೊಳ್ಳಬಹುದು.

ನಿಯಂತ್ರಣ ಕ್ರಮಗಳು

ಬೆಳಿಗ್ಗೆ ಮತ್ತು ಸಂಜೆ ಕುರಿಹಟ್ಟಿ ಸುತ್ತ ಬೇವಿನ ಸೊಪ್ಪಿನ ಹೊಗೆಯನ್ನು ಹಾಕಬೇಕು. ಸುತ್ತಮುತ್ತ ಕೀಟನಾಶಕ ದ್ರಾವಣ ಸಿಂಪಡಿಸಿ ನೀರು ನಿಲ್ಲದಂತೆ ಎಚ್ಚರ ವಹಿಸಿ ಸೊಳ್ಳೆಗಳು ವೃದ್ದಿಯಾಗದಂತೆ ನೋಡಿಕೊಳ್ಳಬೇಕು. ರೋಗಗ್ರಸ್ಥ ಕುರಿಯನ್ನು ಹೊರಗೆ ಮೇಯಿಸಲು ಕರೆದೊಯ್ಯದೇ ಹಟ್ಟಿಯಲ್ಲಿಯೇ ಮೆತ್ತನೆಯ ಆಹಾರ ಕೊಡಬೇಕು. ಒಣ ಹುಲ್ಲನ್ನು ಆಹಾರವಾಗಿ ನೀಡುವುದು ಸೂಕ್ತವಲ್ಲ. ಈ ಸಂದರ್ಭದಲ್ಲಿ ಕುರಿಗಳ ಉಣ್ಣೆಯನ್ನು ಕತ್ತರಿಸಬಾರದು ಉಣ್ಣೆ ಇರುವುದರಿಂದ ಸೊಳ್ಳೆ ಕಡಿತ ತಪ್ಪಿಸಬಹುದು. ಸಾಧ್ಯವಾದರೆ ಸೊಳ್ಳೆಪರದೆ ಉಪಯೋಗಿಸಬಹುದು.

ಕುರುಡು ನೊಣಗಳು ಬೆಳಿಗ್ಗೆ ಸೂರ್ಯ ಹುಟ್ಟಿದ ನಂತರದ ಒಂದು ಗಂಟೆ ಮತ್ತೆ ಸಂಜೆ ಸೂರ್ಯ ಮುಳುಗುವ ಒಂದು ಗಂಟೆ ಮುಂಚೆ ಬಹಳ ಚುರುಕಾಗಿರುತ್ತವೆ. ಹಾಗಾಗಿ 9 ಗಂಟೆ ನಂತರ ಹೊರಗಡೆ ಮೇಯಲು ಬಿಡಬಹುದು. ಹಾಗೂ 5 ಗಂಟೆಯ ಒಳಗೆ ಹಟ್ಟಿಗೆ ತರುವುದು ಸೂಕ್ತ. ತಗ್ಗು ಮತ್ತು ಜೌಗು ಪ್ರದೇಶಗಳಿಗಿಂತ ಎತ್ತರದ ಒಣ ಭೂಮಿಯಲ್ಲಿ ಮೇಯಿಸುವುದು ಸೂಕ್ತ.

ರೋಗ ಕಂಡ ಕೂಡಲೇ ಕುರಿಗಳಿಗೆ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸುವುದು ಹಾಗೂ ಸೂಕ್ತ ಸಲಹೆ ಪಡೆಯುವುದು ಸೂಕ್ತ. ನಾಟಿ ಔಷಧ ಅಥವಾ ಪಶುವೈದ್ಯರ ಸಲಹೆ ಇಲ್ಲದೆ ನೇರವಾಗಿ ಔಷಧಿ ಅಂಗಡಿಗಳಿಂದ ಔಷಧಿಗಳನ್ನು ಪಡೆದು ಚಿಕಿತ್ಸೆ ನೀಡುವುದು ಕುರಿ/ಮೇಕೆಗಳ ಪ್ರಾಣಕ್ಕೆ ಕುತ್ತಾಗಬಹುದು. ಮತ್ತು ರೈತರಿಗೆ ಆರ್ಥಿಕ ನಷ್ಟವುಂಟಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

Photo Gallery | ಚನ್ನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ-2025

Published

on

Photo Gallery: ಚನ್ನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ-2025'

ಚನ್ನಗಿರಿ:ಪಟ್ಟಣದ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ (ಮಾರ್ಚ್-22) ‘ಜಾನಪದ ಉತ್ಸವ – 2025″ ಅದ್ದೂರಿಯಾಗಿ ನಡೆಯಿತು.

ಜಾನಪದ ತಜ್ಞ, ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ, ಅವರು ಉತ್ಸವಕ್ಕೆ ಚಾಲನೆ ನೀಡಿದರು.

ಎತ್ತಿನ ಬಂಡಿಯಲ್ಲಿ ಅಧ್ಯಾಪಕರು, ಅತಿಥಿಗಳ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ನೀರು ತುಂಬಿದ ಪೂರ್ಣ ಕುಂಭಗಳನ್ನು ಹೊತ್ತು ಅತಿಥಿಗಳನ್ನು ಸ್ವಾಗತಿಸಿದರು.
 

ಅಂದು ಕಾಲೇಜಿನಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ವರ್ಷದಲ್ಲಿ ಬರುವ ಯುಗಾದಿ, ಸಂಕ್ರಾಂತಿ, ಶಿವರಾತ್ರಿ, ಕ್ರಿಸ್ ಮಸ್, ರಂಜಾನ್, ದಸರಾ, ಭೂಮಿ ಹುಣ್ಣಿಮೆ, ರಾಶಿ ಪೂಜೆ ಸೇರಿದಂತೆ, ಬಳೆಗಾರ, ಕಣಿಹೇಳುವ, ಚೌಕಾಬಾರಾ, ಗುರುಕುಲ, ಆಯುರ್ವೇದ, ಗೋ ಪೂಜೆ ಎಲ್ಲವೂ ಜಾನಪದ ಸಂಸ್ಕೃತಿಯನ್ನು ಪುನರ್ ನಿರ್ಮಾಣಮಾಡಿದ್ದವು.

ಉತ್ಸವದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು, ಪಂಚೆ, ಅಂಗಿ, ಕುರ್ತಾ, ಲಂಗಾದಾವಣಿ, ಸೀರೆ ಉಟ್ಟು ,ಬುರ್ಕಾ, ತೊಟ್ಟು ಸಡಗರ ಸಂಭ್ರಮದಿಂದ ಕುಣಿದಾಡಿದರು.

ರಾಮನವಮಿಯ ಬೆಲ್ಲದ ಪಾನಕ – ಕೋಸಂಬರಿ, ಕ್ರಿಸ್ಮಸ್ ನ ಕೇಕ್, ರಂಜಾನ್ ಹಬ್ಬದ ಇಪ್ತಾರ್ ಕೂಟದ ಫಲಾಹಾರ, ಗಣಪತಿ ಹಬ್ಬದ ಕಡುಬು, ಯುಗಾದಿಯ ಹೋಳಿಗೆ, ಭೂಮಿ‌ಪೂಜೆಯ ಪಾಯಸ ಹೀಗೆ ವಿವಿಧ ಬಗೆಯ ತಿಂಡಿತಿನಿಸುಗಳು 30 ಜಿಲ್ಲೆಗಳ ವಿಶೇಷ ಖಾಧ್ಯಗಳು ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಿದವು.

 

ವಸ್ತು ಪ್ರದರ್ಶನ

 

ಸುಮಾರು ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಬೀಸು ಕಲ್ಲು, ಒನಕೆ, ಸೌದೆ ಒಲೆ, ಕೊಡಲಿ, ಮಚ್ಚು, ಬರ್ಜಿ, ಚನ್ನೆಮಣೆ, ಕೀಲುಗೊಂಬೆ, ಪಾರಂಪರಿಕ ಔಷಧಿ, ಕುಡುಗೋಲು, ಬಂಡಿ,ನಾಣ್ಯಗಳು,ಸೇರು, ಒಳಕಲ್ಲು, ಶಹನಾಯಿ,ಮಜ್ಜಿಗೆಯ ಕಡೆಗೋಲು, ತಾಳ, ಹಾರ್ಮೊನಿಯಂ, ಗಂಡುಕೊಡಲಿ,ಶಾವಿಗೆ ಒತ್ತು,ಹುತ್ತದ ಮಾದರಿ,ವಿಭಿನ್ನ ಬಗೆಯ ರಂಗವಲ್ಲಿ, ವಿವಿಧ ಧಾನ್ಯದ ರಾಶಿ,ಕಳಸ, ದಸರಾ ಗೊಂಬೆಗಳು, ನವರಾತ್ರಿಯ ಮಾತೃದೇವತೆ, ಕುರಾನ್ ಪ್ರತಿ, ಜಾನಮಾಜ್,ಕ್ರಿಸ್ತನ ಜನನದ ಗೋದರಿ, ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಮಾದರಿ ಚಿತ್ರಗಳು ವಸ್ತುಪ್ರದರ್ಶನದಲ್ಲಿದ್ದವು.

 

ದೇಸೀ ಆಟಗಳು

 

ದೇಸೀ ಆಟಗಳಾದ ಹಗ್ಗ ಜಗ್ಗಾಟ, ಲಗೋರಿ, ಬುಗುರಿ, ಕುಂಟೋಬಿಲ್ಲೆ ಹಾಗೂ ಜನಪದ ನೃತ್ಯ-ಹಾಡು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸಂತಸದಿಂದ ಭಾಗವಹಿಸಿದರು.

ಉತ್ಸವದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಬಿ.ಜಿ.ಅಮೃತೇಶ್ವರ ಅವರು ವಹಿಸಿಕೊಂಡಿದ್ದರು. ಹಾಗೂ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಪಕ ಹಾಗೂ ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಷ್ಮುಖಪ್ಪ ಕೆ.ಹೆಚ್, ಐಕ್ಯುಎಸಿ ಸಂಚಾಲಕ ಪ್ರೊ.ವಿಜಯ್ ಕುಮಾರ್, ಉತ್ಸವದ ಕ್ರೀಡೆಗಳ ಆಯೋಜಕ ಹಾಗೂ ದೈಹಿಕ ನಿರ್ದೇಶಕರಾದ ಕಲ್ಲೇಶಪ್ಪ ಎಸ್.ಜಿ ಹಾಗೂ ಕಾಲೇಜಿನ ಎಲ್ಲಾ ಅಧ್ಯಾಪಕರು ಹಾಗೂ ಬೋಧಕೇತರ ಸಿಬಂದಿಗಳು ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಭಾಗವಹಿಸಿದ್ದರು.

Janapada Utsava Channagiri Govt collage (24)
Continue Reading

ದಿನದ ಸುದ್ದಿ

ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್

Published

on

ಸುದ್ದಿದಿನ,ಚಿತ್ರದುರ್ಗ: ಜಗತ್ತಿನಲ್ಲಿ ಭೂಮಿಯ ಮೇಲೆ ಸಕಲ ಜೀವರಾಶಿಗಳು ಬದುಕಲು ಅವಕಾಶವಿದ್ದು ಪರಿಸರ ಸಂರಕ್ಷಣೆ ಮಾಡುವುದರ ಮೂಲಕ ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.

ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಪೂರೈಕೆ ಮಾಡುವ ಮೂಲಕ ಪಕ್ಷಿಗಳ ಬಗ್ಗೆ ಕಾಳಜಿಯೊಂದಿಗೆ ಸಂರಕ್ಷಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ನಮ್ಮ ಮನೆಗಳ ಮೇಲ್ಚಾವಣಿಯಲ್ಲಿ ನೀರು, ಆಹಾರ ವ್ಯವಸ್ಥೆ ಮಾಡುವುದರಿಂದ ಪಕ್ಷಿಗಳನ್ನು ಸಂರಕ್ಷಿಸಲು ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಉಪನ್ಯಾಸಕ ಆರ್.ನಾಗರಾಜು ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.

ಫೋಟೋ: ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ಮತ್ತಿನ ಕುಣಿಕೆ

Published

on

  • ಗುರು ಸುಳ್ಯ

ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ

ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ

ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…

ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ

ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ

ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)

ಕವಿ : ಗುರು ಸುಳ್ಯ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending